Saturday, February 28, 2015

ಮಲೆನಾಡಿನಲ್ಲೊಂದು ಅಪರೂಪದ ಕೆಂಡ ಹಾಯುವ ಕಾರ್ಯಕ್ರಮ

ಕೆಂಡದ ಮೇಲೆ ನಡೆಯುವುದು ಬಯಲು ಸೀಮೆಯಲ್ಲಿ ಸರ್ವೇ ಸಾಮಾನ್ಯ. ಜಾತ್ರೆಗಳಲ್ಲಿ ಕೆಂದ ಮೇಲೆ ನಡೆಯುವ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಮಲೆನಾಡಿನಲ್ಲಿ ಇದು ಅಪರೂಪ. ಇಂತಹ ಅಪರೂಪದ ಕಾರ್ಯಕ್ರಮ ಸಿದ್ದಾಪುರ ತಾಲೂಕಿನ ಸರಕುಳಿಯಲ್ಲಿ ನಡೆಯಿತು.
ಮೇಲಿನ ಸರಕುಳಿ ಗ್ರಾಮದಲ್ಲಿ ಪ್ರತಿ ವರ್ಷ ಗ್ರಾಮದೇವಿಯ ಸನ್ನಿಧಾನದಲ್ಲಿ ಪರಿವಾರ ದೇವತೆಗಳಿಗೆ ವಾರ್ಷಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮುಂಜಾನೆ ಪರಿವಾರ ದೇವತೆಗಳ ಪೂಜೆಯಿಂದ ನಡೆದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಇಡೀ ದಿನ ಮುಂದುವರಿದವು. ಮೇಲಿನ ಸರಕುಳಿಯಲ್ಲದೇ ತಟ್ಟೀಕೈ, ಕೆರೆಗದ್ದೆ, ಕಂಚೀಮನೆ, ತ್ಯಾರಗಲ್, ಗೋಳಿಕಟ್ಟಾ, ಮುಚುಗುಳಿ ಸೇರಿದಂತೆ ಸುತ್ತಮುತ್ತಲ ಗ್ರಾಮದ ಗ್ರಾಮಸ್ಥರು ಪಾಲ್ಗೊಂಡಿದ್ದರು.
                    ಕಳೆದ ಐದು ವರ್ಷಗಳಿಂದ ತಟ್ಟಿಕೈ ಬಳಿಯ ಮೇಲಿನ ಸರಕುಳಿ ಗ್ರಾಮದಲ್ಲಿ ಗ್ರಾಮದೇವಿಯ ವಾರ್ಷಿಕೋತ್ಸವದ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಕೆಂಡ ಹಾಯುವುದು ನಿಯಮಿತವಾಗಿ ನಡೆಯುತ್ತ ಬಂದಿದೆ. ಮಲೆನಾಡಿನಲ್ಲಿ ಅಪರೂಪ ಎನ್ನಿಸುವ ಕೆಂಡ ಹಾಯುವ ಕಾರ್ಯಕ್ರಮವನ್ನು ನೋಡುವ ಸಲುವಾಗಿಯೇ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ಧಗ ಧಗನೆ ಉರಿಯುವ ಕೆಂಡದ ಮೇಲೆ ಯುವಕರು ನಡೆದುಕೊಂಡು ಹೋಗುತ್ತಿದ್ದರೆ ಸೇರಿದ್ದ ಜನರೆಲ್ಲ ದೇವರನ್ನು ಪ್ರಾರ್ಥಿಸುತ್ತ ನಿಲ್ಲುತ್ತಾರೆ. ದೇವರಿಗೆ ನಮಿಸಿ ತಮ್ಮನ್ನು ಕಷ್ಟಗಳಿಂದ ಪಾರುಮಾಡುವಂತೆ ಬೇಡಿಕೊಳ್ಳುತ್ತಾರೆ.
  ಪುರೋಹಿತರ ಸಾನ್ನಿಧ್ಯದಲ್ಲಿ ಚಂಡಿಕಾ ಪಾರಾಯಣ ನಡೆದ ನಂತರ ಮೇಲಿನ ಸರಕುಳಿ ಗ್ರಾಮದಲ್ಲಿಯೇ ಇರುವ 16 ದೇವ ಗಣಗಳನ್ನು ಊರಿನ ತುಂಬೆಲ್ಲ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು. ಸ್ಥಳೀಯ ಸುಬ್ರಹ್ಮಣ್ಯ ಕಟ್ಟೆಯ ಮೇಲೆ ದೇವರನ್ನು ಕೂರಿಸಿ ಹಲವಾರು ಧಾರ್ಮಿಕ ವಿಧಿ ವಿಧಾನಗಳನ್ನು ಕೈಗೊಳ್ಳಲಾಯಿತು. ನಂತರ ಕೆಂಡ ಹಾಯುವ ಸಲುವಾಗಿ ದೊಡ್ಡ ಕಟ್ಟಿಗೆಯ ರಾಶಿಗೆ ಅಗ್ನಿಸ್ಪರ್ಷ ಮಾಡಲಾಯಿತು. ಬೆಂಕಿಯ ಜ್ವಾಲೆ ಬಾನೆತ್ತರಕ್ಕೆ ಚಾಚುತ್ತಿರುವ ಸಂದರ್ಭದಲ್ಲಿಯೇ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮಗಳೂ ನಡೆದವು.
ಅನ್ನ ಸಂತರ್ಪಣೆಯ ನಂತರ ಕೆಂಡ ಹಾಯುವ ಕಾರ್ಯಕ್ರಮ ನಡೆಯಿತು. ಮೆರವಣಿಗೆಯ ಸಂದರ್ಭದಲ್ಲಿ ದೇವರ ಗಣಗಳ ಮೂರ್ತಿಯನ್ನು ತಲೆಯ ಮೇಲೆ ಹೊತ್ತುಕೊಂಡು ಬಂದಿದ್ದ 16 ಜನ ಯುವಕರೂ ಸೇರಿದಂತೆ 20ಕ್ಕೂ ಅಧಿಕ ಜನರು ಉರಿಯುವ ಕೆಂಡದ ಮೇಲೆ ನಡೆದರು. ಉರಿವ ಕೆಂಡದ ಮೇಲೆ ನಡೆಯುವುದನ್ನು ಅದೆಷ್ಟೋ ಭಕ್ತರು ಕಣ್ತುಂಬಿಕೊಂಡರು. ಸ್ಥಳೀಯ ಗ್ರಾಮದೇವಿಯ ಮಹಿಮೆಯನ್ನು ಕೊಂಡಾಡಿದರು. ನಂತರ ಭಕ್ತರ ಶ್ರೇಯೋಭಿವೃದ್ಧಿಗಾಗಿ ಆಶ್ಲೇಷಾ ಬಲಿ ಹಾಗೂ ನಾಗಾರಾಧನೆ ಕಾರ್ಯಕ್ರಮಗಳು ನಡೆದವು. ನಡುರಾತ್ರಿ 2 ಗಂಟೆಯವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಮೇಲಿನ ಸರಕುಳಿಯಲ್ಲಿ ಕೆಂಡ ಹಾಯುವ ಕಾರ್ಯಕ್ರಮಕ್ಕೆ ಶತಮಾನಗಳ ಇತಿಹಾಸವಿದೆ. ಸ್ಥಳೀಯರ ಪ್ರಕಾರ ಹಿಂದೆ ಇದೇ ಊರಿನಲ್ಲಿ ಅದ್ಧೂರಿಯಾಗಿ ಕೆಂಡ ಹಾಯುವ ಕಾರ್ಯಕ್ರಗಳು ನಡೆಯುತ್ತಿದ್ದವಂತೆ.
                 ಗ್ರಾಮದೇವಿಗೆ ಭವ್ಯವಾದ ದೇವಸ್ಥಾನವಿದ್ದು ಮೂರ್ನಾಲ್ಕು ದಿನಗಳ ಕಾಲ ಅದ್ಧೂರಿ ಉತ್ಸವ ನಡೆಯುತ್ತಿತ್ತಂತೆ. ಆದರೆ ಕಾಲಾನಂತರದಲ್ಲಿ ದೇವಸ್ಥಾನ ಜೀರ್ಣವಾಯಿತು. ಕ್ರಮೇಣ ಗ್ರಾಮದಲ್ಲಿ ನಡೆಯುತ್ತಿದ್ದ ಉತ್ಸವಗಳೂ ನಿಂತು ಹೋದವು. ಆ ನಂತರ ಊರಿನಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭಿಸಿದವು. ಸಮಸ್ಯೆಗಳ ಪರಿಹಾರಾರ್ಥವಾಗಿ ಐದು ವರ್ಷಗಳ ಹಿಂದೆ ದೇವಸ್ಥಾನವನ್ನು ಮತ್ತೆ ಜೀರ್ಣೋದ್ಧಾರ ಮಾಡಲಾಗಿದೆ. ನಂತರ ನಿಯಮಿತವಾಗಿ ಕೆಂಡ ಹಾಯುವ ಕಾರ್ಯಕ್ರಮಗಳನ್ನೂ ನಡೆಸಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಅದ್ಧೂರಿಯಾಗಿ ಉತ್ಸವ ನಡೆಸಲಾಗುತ್ತದೆ. ಎರಡು ದಿನಕ್ಕೂ ಹೆಚ್ಚಿನ ಕಾಲ ಕಾರ್ಯಕ್ರಮಗಳನ್ನು ಏರ್ಪಡಿಸುವ ಆಲೋಚನೆ ಇಟ್ಟುಕೊಳ್ಳಲಾಗಿದೆ ಎಂದು ಹೇಳುತ್ತಾರೆ.
ಕಷ್ಟಗಳ ಪರಿಹಾರಕ್ಕೆ, ಸಮಸ್ಯೆಗಳಿಂದ ಬಿಡುಗಡೆ ಪಡೆಯುವ ಸಲುವಾಗಿ ನಡೆಯುವ ಕೆಂಡ ಹಾಯುವ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರ್ನಾಲ್ಕು ಕಡೆಗಳಲ್ಲಷ್ಟೇ ನಡೆಯುತ್ತದೆ. ಕೆಂಡ ಹಾಯ್ದರೆ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಈ ಆಚರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೆಂಡ ಹಾಯುವವರು ವಿಶೇಷ ಆವೆಶಕ್ಕೂ ಒಳಗಾಗುತ್ತಾರೆ. ವಿಚಿತ್ರ ಅಭಿನಯ ಮಾಡುತ್ತ, ಸ್ವರಗಳನ್ನು ಹೊರಡಿಸುತ್ತಾ ಕೆಂಡವನ್ನು ಹಾಯುತ್ತಾರೆ. ಇಂತಹ ಅನೇಕ ಸಂಗತಿಗಳಿಗೆ ಸರಕುಳಿಯಲ್ಲಿ ನಡೆದ ಕಾರ್ಯಕ್ರಮ ಸಾಕ್ಷಿಯಾಯಿತು.

***

ನಮ್ಮ ಊರಿನಲ್ಲಿ ನಡೆಯುವ ಕೆಂಡ ಹಾಯುವ ಕಾರ್ಯಕ್ರಮ ಬಹು ವಿಶಿಷ್ಟವಾದುದು. ಇಲ್ಲಿ ಯುವಕರು ಮಾತ್ರ ಕೆಂಡ ಹಾಯುತ್ತಾರೆ. ಕೆಂಡ ಹಾಯುವವರಿಗೆ ವಿಶಿಷ್ಟವಾದ ನಿಯಮಗಳಿವೆ. ಯಾರು ಕೆಂಡ ಹಾಯುತ್ತಾರೋ ಅಂತಹ ವ್ಯಕ್ತಿಗಳು ಕನಿಷ್ಟ ಒಂದು ವಾರದಿಂದ ಮಾಂಸ ಹಾಗೂ ಮದ್ಯದಿಂದ ದೂರವಿರಬೇಕು. ಶುದ್ಧ ಸಸ್ಯಾಹಾರ ಸೇವನೆ ಮಾಡಬೇಕು. ತಣ್ಣೀರಿನ ಸ್ನಾನ ಕೈಗೊಳ್ಳಬೇಕು. ಧಾರ್ಮಿಕ ಪೂಜೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಯಾರು ಈ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವುದಿಲ್ಲವೋ ಅವರಿಗೆ ಶಿಕ್ಷೆಯಾಗುತ್ತದೆ ಎನ್ನುವ ನಂಬಿಕೆ ಇದೆ. ನಿಮಯ ಪಾಲನೆ ಮಾಡದಿರುವವರಿಗೆ ಕೆಂಡ ಹಾಯಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೇ ಕೆಂಡ ಹಾಯುವ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ.
ವೆಂಕಟ್ರಮಣ ಅನಂತ ಗೌಡ
ಮೇಲಿನ ಸರಕುಳಿ

No comments:

Post a Comment