Friday, January 16, 2015

ಅಘನಾಶಿನಿ ಕಣಿವೆಯುಲ್ಲಿ-8

               `ಅಮಾ... ಆನು ವಿಕ್ರಮ.' ಎಂದು ಹೇಳಿದಾಗ ಆಕೆಯ ಮುಖವರಳಿತು. ಖುಷಿಯಿಂದ `ಏನೋ.. ನಂಬಲೆ ಆಯ್ದಿಲ್ಲೆ ನೋಡು.. ಇಷ್ಟು ಉದಯಪ್ಪಾಗ ಎಲ್ಲಿಂದ ಬಂದೆ? ಯಂಗ ಒಂದ್ ಸಾರಿ ಗೊತ್ತೇ ಆಯ್ಲೆ.. ಅರೇ.. ಕಾರು ತಯಿಂದೆ. ಯಾರದ್ದು? ಅರೇ ಕಾರಲ್ಲಿ ಯಾರಿದ್ದ?  ಬಾ ವಳಗ ಹೋಪನ. ಬಿಸಿ ಬಿಸಿ ದ್ವಾಸೆ ಮಾಡಿದ್ದೆ ಬಿಲ್ಯ. ಕಾರಲ್ಲಿದ್ದವರನ್ನೂ ಕರಿ. ನಿನ್ನಂತೂ ಕಾಂಬುಲೇ ಔತ್ಲ್ಯಲೇ..' ಎಂದು ಗ್ರಾಮ್ಯ ಭಾಷೆಯಲ್ಲಿ ವಿಕ್ರಮನಿಗೆ ಹೇಳಿದಳು ಆತನ ತಾಯಿ ಲಕ್ಷ್ಮೀಬಾಯಿ.
              `ಅಮಾ.. ಆನು ಈಗಷ್ಟೆ ಬೈಂದೆ. ಕಾರು ಯನ್ನ ಮ್ಯಾಲಿನ ಆಫೀಸರದ್ದು. ಕಾರಲ್ಲಿದ್ದವರು ಯನ್ನ ಪ್ರೆಂಡ್ಸು..' ಎಂದು ಹೇಳಿ ವಿಕ್ರಂ ಕಾರಿನ ಬಳಿ ತಾಯಿಯನ್ನು ಕರೆದೊಯ್ದ. ಕಾರಿನಲ್ಲಿದ್ದವರನ್ನು ಪರಿಚಯಿಸಿದ. ಎಲ್ಲರೂ ಕೈಯಲ್ಲಿದ್ದ ಮಣಭಾರದ ಲಗೇಜುಗಳನ್ನು ಹೊತ್ತು ಒಳಗೆ ಹೋದರು.
              ವಿಕ್ರಮನದು ಭವ್ಯ ಮನೆ. ಇಡಿ ಮನೆ ಮರದಿಂದಲೇ ಮಾಡಿದ್ದು. ಹಳೆಯ ಕಾಲದ ಮನೆ ಎಂದು ನೋಡಿದೊಡನೆ ಹೇಳಬಹುದಿತ್ತು. ಯಾವ ಶತಮಾನದಲ್ಲಿ ಮನೆಯನ್ನು ಕಟ್ಟಲಾಗಿತ್ತೋ. ಬೀಟೆ, ತೇಗಗಳ ಮರಗಳಿಂದಲೇ ಮಾಡಿದ್ದು ಸ್ಪಷ್ಟವಾಗಿತ್ತು. ಎಲ್ಲರೂ ಒಳಗೆ ಹೋಗುವ ವೇಳೆಗೆ ವಿಕ್ರಮನ ತಂಗಿ ರಮ್ಯ ಎದುರಾದಳು. ಆಕೆಯನ್ನು ಎಲ್ಲರಿಗೂ, ಎಲ್ಲರನ್ನೂ ಆಕೆಗೂ ಪರಿಚಯಿಸಿದ ವಿಕ್ರಂ. ಅಷ್ಟರಲ್ಲಿ ತಿಂಡಿ ತಯಾರಿದೆಯೆಂಬ ಅಮ್ಮನ ಬುಲಾವ್ `ಆಸ್ರಿಗೆ ಕುಡಿಯಲಾತು..' ಕೇಳಿಸತೊಡಗಿತು. ಎಲ್ಲರೂ ಮುಖ, ಕೂಕಾಲುಗಳನ್ನು ತೊಳೆದು ತಿಂಡಿ ತಿನ್ನಲು ಕುಳಿತರು. ಅವರಿಗೆ ಭರ್ಜರಿಯಾಗಿ ದೋಸೆಗಳ ಮೇಲೆ ದೋಸೆಯನ್ನು ಹಾಕಿದರು. ದೋಸೆಯ ರುಚಿ ಆಹ್...! ಜೊತೆಗೆ ಕಾಯಿ ಚಟ್ನಿ.. ಅದೆಷ್ಟು ದೋಸೆಗಳು ಉದರವನ್ನು ಸೇರಿದವೋ.
             ಅಂತೂ ತಿಂಡಿ ಮುಗಿಸುವ ವೇಳೆಗಾಗಲೇ ಬೆಳಗಿನ ಎಲ್ಲಾ ಸ್ನಾನ, ಸಂಧ್ಯಾವಂದನೆ, ದೇವರಪೂಜೆ ಇತ್ಯಾದಿ ಕೆಲಸ ಮುಗಿಸಿ ಯಾರದ್ದೋ ಮನೆಗೆ ಯಾವುದೋ ಕೆಲಸಕ್ಕೆ ಹೋಗಿದ್ದ ವಿಕ್ರಮನ ತಂದೆ ರಾಜಾರಾಮ ಭಟ್ಟರು ಮನೆಗೆ ಬಂದರು. ಬಂದವರು ವಿಕ್ರಮನನ್ನು ನೋಡಿ `ಮಾಣಿ.. ಈಗ ಬೈಂದ್ಯ..' ಎಂದವರಿಗೆ ವಿಕ್ರಮ್ ತಲೆಯಲ್ಲಾಡಿಸಿ ಏನನ್ನೋ ಹೇಳಲು ಬಾಯಿ ತೆರೆಯುವಷ್ಟರಲ್ಲಿ `ಓ ವಿಜೇತಾ.. ಓ ಪ್ರದೀಪ್.. ಅರಾಮಿದ್ರಾ? ಆಸ್ರಿಗೆ ಕುಡದಾತಾ?' ಎಂದೆಲ್ಲಾ ಕೇಳಿದಾಗ ವಿಕ್ರಮನಿಗೆ ಒಮ್ಮೆಗೇ ಆಶ್ಚರ್ಯ ಹಾಗೂ ದಿಗ್ಭ್ರಾಂತಿ. `ನಾನು ಸರ್ಪ್ರೈಸ್ ಕೊಡಬೇಕು ಎಂದು ಇವರ ಬಗ್ಗೆ ಹೇಳ್ದೇ ಇದ್ರೂ ಅಪ್ಪಯ್ಯನಿಗೆ ಹೇಗೆ ತಿಳಿಯಿತು?' ಎಂದು ಆಲೋಚಿಸುತ್ತಾ `ಅರೇ.. ಅಪ್ಪಯ್ಯಾ.. ಇವಿಬ್ರೂ ಇದೇ ಮೊದ್ಲು ನಿಂಗೆ ಸಿಕ್ತಾ ಇದ್ದ. ಆದ್ರೂ ನಿಂಗೆ ಹ್ಯಾಂಗೆ ಇವ್ರ ಬಗ್ಗೆ ಗೊತ್ತಾತು?' ಎಂದು ವಿಕ್ರಮ ಕೇಳಿದಾಗ ತಬ್ಬಿಬ್ಬಾಗುವ ಸರದಿ ಭಟ್ಟರದ್ದಾಯಿತು.
            ಆದರೂ ತಕ್ಷಣ ಸಾವರಿಸಿಕೊಂಡು `ಅಲ್ದಾ ನೀನು ಪತ್ರ ಬರೆದಿದ್ಯಲ.. ಅದ್ರಲ್ಲಿ ತಿಳಿಸಿದ್ದೆ. ಅದಕ್ಕಾಗಿ ಗೊತ್ತಾತು ಬಿಲ್ಯಾ..' ಎಂದರು. ಆದರೆ ವಿಕ್ರಂ `ನಾನು ಬರೆದ ಲೆಟರಿನಲ್ಲಿ ಈ ಬಗ್ಗೆ ತಿಳಿಸಿಯೇ ಇರಲಿಲ್ಲ. ಆದರೂ ಹೇಗೆ ತಿಳಿಯಿತು? ಇದರಲ್ಲೇನೋ ವಿಶೇಷತೆ, ನಿಘೂಡತೆ ಇದೆ..' ಅಂದುಕೊಂಡ. ನಂತರ ದೂರದ ಪಯಣಿಗರೆಲ್ಲ ರಾತ್ರಿ ನಿದ್ದೆಗೆಟ್ಟ ಆಯಾಸ ಪರಿಹಾರಕ್ಕಾಗಿ ಹಾಸಿಗೆಗೆ ತೆರಳಿದರು. ಅಲ್ಲಿಗೆ ಕಥೆಗೆ ಒಂದು ದೊಡ್ಡ ತಿರುವು ಸಿಕ್ಕಂತಾಗಿತ್ತು.
             ಹಾಗಾದರೆ ರಾಜಾರಾಮ ಭಟ್ಟರಿಗೆ ವಿಜೇತಾ, ಪ್ರದೀಪರ ಬಗ್ಗೆ ಹೇಗೆ ತಿಳಿಯಿತು? ಇವರಿಗೆ ಮೊದಲೇ ಈರ್ವರ ಪರಿಚಯ ಇತ್ತೇ? ಅಥವಾ ಬೇರೆ ಯಾರಾದರೂ ತಿಳಿಸಿದ್ದರೇ? ಇದು ಮಾತ್ರ ನಿಗೂಢವಾಗಿತ್ತು. ಜೊತೆಗೆ ವಿಕ್ರಮನನ್ನು ಹಿಂಬಾಲಿಸುತ್ತಿದ್ದ ನಿಗೂಢ ವ್ಯಕ್ತಿ ಇಲ್ಲಿಗೂ ಬಂದಿದ್ದ. ಆತ ಹೀಗೆ ವಿಕ್ರಮನ ಹಿಂಬಾಲಿಸಲು ಕಾರಣ ಏನು? ಇಷ್ಟೆಲ್ಲ ನಡೆದಿದ್ದಿ ಎಪ್ರಿಲ್ 10ರಂದು.

****

          ಮದ್ಯಾಹ್ನದ ವರೆಗಿನ ಗುಟುಕು ನಿದ್ದೆಗೆ ಎಲ್ಲರೂ ಕ್ರಿಯಾಶೀಲರಾದರು. ಊರಿನ ಪರಿಸರವನ್ನು ಆಸ್ವಾದಿಸಲು ಹೊರಗೆ ಹೊರಟರು. ವಿಕ್ರಂ, ವಿಜೇತಾ, ರಮ್ಯ, ಪ್ರದೀಪರು ಹೊರಟರೆಂದರೆ ಊರಿಗೆ ಊರೇ ಮತ್ತೆ ಮತ್ತೆ ನೋಡಲಾರಂಭಿಸಿತ್ತು. ಆದರೆ ಗುಸು ಗುಸು ಸುದ್ದಿ ಮಾತನಾಡುವಷ್ಟು ಮನೆಗಳು ಹತ್ತಿರದಲ್ಲಿ ಇಲ್ಲವಾದ ಕಾರಣ ಇವರು ಎಲ್ಲರ ಬಾಯಿಗೆ ಆಹಾರವಾಗುವುದು ತಪ್ಪಿತು. ಇದರ ಪರಿವಿಲ್ಲದ ಇವರು ಊರು, ಊರಿನ ಪರಿಸರ, ಊರ ತುದಿಯಲ್ಲಿರುವ ಕಾಳಿ ನದಿಯ ಉಪನದಿ ಇಲ್ಲೆಲ್ಲ ತಿರುಗಾಡಿದರು.
           ಮುಖ್ಯ ಸಂಗತಿಗಳನ್ನು ಬರೆದಿಟ್ಟುಕೊಳ್ಳುತ್ತಿದ್ದ ವಿಜೇತಾ ಆಗಾಗ ಸುಂದರ ಪೋಟೋಗಳನ್ನು ಕ್ಲಿಕ್ಕಿಸುತ್ತಿದ್ದಳು. ಪ್ರದೀಪನಿಗೆ ಇವುಗಳಲ್ಲಿ ಆಸಕ್ತಿ ಇಲ್ಲದ ಕಾರಣ ಆತ ಈ ಯಾವ ಕೆಲಸಗಳನ್ನೂ ನಡೆಸಲಿಲ್ಲ. ಆದರೂ ಎಲ್ಲಾ ಕಡೆ ಏನನ್ನೋ ಹುಡುಕುವಿಕೆಯ, ಕಳ್ಳದೃಷ್ಟಿಯ ಬೀರುತ್ತಿದ್ದ. ಆಗಾಗ ಬಾಯಲ್ಲಂತೂ `ರಮ್ಯ ಜೀವನ.. ಸಂಪೂರ್ಣ ವಿಧಿಯ ಕಲಾವಿಧಾನ...' ಎಂತಲೋ ಮತ್ಯಾವುದೋ ಸುಂದರ ಹಾಡುಗಳನ್ನು ಹಾಡುತ್ತ ಸಾಗುತ್ತಿದ್ದ. ವಿಕ್ರಮ ಎಲ್ಲವುಗಳಿಗೆ ವಿವರಣೆ ನೀಡುತ್ತಿದ್ದರೆ, ವಾಚಾಳಿ ರಮ್ಯ ಪ್ರತಿಯೊಂದರ ಬಗೆಗೂ ಸಾಕಷ್ಟು ಹರಟುತ್ತಿದ್ದಳು. ಕಾಡಿನ ನಡು ನಡುವಿನ ಗದ್ದೆಗಳು, ತೋಟ, ತೋಟದ ಮಧ್ಯ ಮಧ್ಯದಲ್ಲಿ ತೆಂಗಿನಮರಗಳು, ಮಾವು, ಹಲಸು ಮರಗಳು ಆ ಊರಿನ ಸೊಬಗಿಗೆ ತಾವೇನನ್ನೋ ಕೊಟ್ಟಿದ್ದೇವೆ ಎನ್ನುವಂತಿದ್ದವು. ಇವರು ಮುಖ್ಯವಾಗಿ ಒಂದು ದಾರಿಯನ್ನು ಹಿಡಿದು ಹೋಗಿದ್ದರು. ಕೊನೆಗೆ ಅಲ್ಲೊಂದು ಪುಟ್ಟ ಕಟ್ಟಡ ಕಂಡು ಬಂದಿತು. ಅದನ್ನು ತೋರಿಸಿದ ವಿಕ್ರಮ್ `ಇದೇ ನಾನು ಕಲಿತ ಪ್ರೈಮರಿ ಶಾಲೆ..' ಎಂದ.
             ಆ ಶಾಲೆ ಹಳ್ಳಿಗಾಡಿನ ನ್ಯೂನತೆಗಳನ್ನೇ ಮೈವೆತ್ತಿಕೊಂಡಂತಿತ್ತು. ಎಂದೋ ಹಾಕಲಾಗಿದ್ದ ಸಿಮೆಂಟು ಅಲ್ಲಲ್ಲಿ ಕಿತ್ತು ಹೋಗಿತ್ತು. ಅಲ್ಲಲ್ಲಿ ಹಂಚುಗಳು ಒಡೆದಿದ್ದವು. ಈ ಶಾಲೆ ಸರ್ಕಾರದ ದಿವ್ಯ ನಿರ್ಲಕ್ಷ್ಯದ ಕನ್ನಡಿಯಂತೆ ಕಂಡಿತು. ಇವರು ಹೋದ ದಿನ ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳಿದ್ದರು. ಅದರೊಳಗೆ ದೊಡ್ಡದಾಗಿ ಓದಿ ಹೇಳುತ್ತಿದ್ದ ಮಾಸ್ತರರ ಧ್ವನಿ `ಬಾರ ಬಾರ ಆತೀ ಹೈ ಮುಝಕೋ.. ಮಧುರ ಯಾದ ಬಚಪನ ತೇರಿ...' ಎಂಬ ಸಾಲುಗಳೂ ಜೊತೆಗೆ ಹತ್ತೆಂಟು ಮಕ್ಕಳು ಇದೇ ಸಾಲನ್ನು ಪುನಃ ಉಚ್ಛಾರ ಮಾಡಿದ್ದೂ ಕೇಳುತ್ತಿತ್ತು.
             `ಈ ಶಾಲೆ ಹಲವು ವಿಶೇಷತೆಗಳಿವೆ. ಪ್ರತಿ ಮಳೆಗಾಲದಲ್ಲಿ ಶಾಲೆಗೆ ಅನಿರ್ದಿಷ್ಟಾವಧಿ ರಜಾ ಸಿಗುತ್ತದೆ. ಉಕ್ಕೇರಿ ಹಳ್ಳ-ಕೊಳ್ಳಗಳು ಊರಿಗೂ ಹೊರಜಗತ್ತಿಗೂ ಸಂಪರ್ಕವನ್ನು ಕಲ್ಪಿಸುತ್ತವೆ. ಯಲ್ಲಾಪುರದಿಂದ ನಮ್ಮೂರ ಶಾಲೆಗೆ ಪ್ರತಿದಿನ ಮಾಸ್ತರ್ರು ಬಂದು ಕಲಿಸಿ ಹೋಗುತ್ತಾರೆ. ತಮ್ಮದೊಂದು ಬೈಕ್ ತರುತ್ತಾರೆ. ಆದರೆ ಮಳೆಗಾಲದಲ್ಲಿ ಮಾತ್ರ ಅವರು ಶಾಲೆಗೆ ಬರುವುದು ತಪ್ಪುತ್ತದೆ. ಹಳ್ಳ-ಕೊಳ್ಳದ ನೀರಿನ ಸೆಳವು ಇಳಿದ ನಂತರವೇ ಮಾಸ್ತರ್ರು ಶಾಲೆಗೆ ಮರಳುವುದು. ಅಲ್ಲಿಯವರೆಗೂ ಮಕ್ಕಳಿಗೆ ಶಾಲೆ ನಡೆಯುವುದಿಲ್ಲ. ಸ್ಥಳೀಯವಾಗಿ ಪಿಯುಸಿ ಮುಗಿಸಿದವರಿದ್ದರೆ ಅವರು ಶಾಲೆಗೆ ಬಂದು ಮಕ್ಕಳಿಗೆ ಪಾಠ ಹೇಳುವ ಕೆಲಸವನ್ನು ಮಾಡುತ್ತಾರೆ.. ಇದು ಈ ಶಾಲೆಯ ವಿಶೇಷತೆಗಳು..' ಎಂದ ವಿಕ್ರಮ.
             ಮಧ್ಯದಲ್ಲಿ ಬಾಯಿ ಹಾಕಿದ ರಮ್ಯ. `ನಾವು ಶಾಲೆಗೆ ಹೋಗುತ್ತಿದ್ದ ದಿನಗಳು ಬಹಳ ಬೊಂಬಾಟ್.. ಅಣ್ಣ ಏಳನೇ ಕ್ಲಾಸಲ್ಲಿ ಓದುತ್ತಿದ್ದ. ನಾನು ಒಂದನೇ ಕ್ಲಾಸು.. ಸತೀಶ ಮಾಸ್ತರ್ರು ನಮ್ಮ ಮೊದಲ ಮಾಸ್ತರ್ರು.. ಆಮೇಜೆ ಜಿ. ಎಸ್. ಭಟ್ಟರು, ಅದಾದ ಮೇಲೆ ತಾರಕ್ಕೋರು, ಗಂಗಕ್ಕೋರು, ಗಡ್ಕರ್ ಮಾಸ್ತರ್ರು, ಹರೀಶ ಮಾಸ್ತರ್ರು ಎಲ್ಲಾ ನಮಗೆ ಕಲಿಸ್ತಿದ್ರು.. ಅವರೆಲ್ಲ ಎಷ್ಟು ಸ್ಟ್ರಿಕ್ಟ್ ಆಗಿದ್ದರು ಎಂದರೆ ನಾವೆಲ್ಲಾ ಗಡಗಡ.. ಸತೀಶ ಮಾಸ್ತರ್ರು, ಜಿ. ಎಸ್. ಭಟ್ಟರು ದೊಡ್ಡ ದೊಡ್ಡ ಬೆತ್ತಗಳಿಂದ ನಮಗೆ ಹೊಡೆಯುತ್ತಿದ್ದರೆ ನಮ್ಮ ಕೈ, ಬೆನ್ನ ಮೇಲೆ ಬಾಸುಂಡೆಗಳು ಬರುತ್ತಿದ್ದವು. ಇದ್ದವರ ಪೈಕಿ ಗಡ್ಕರ್ ಮಾಸ್ತರ್ರು ಪಾಪದವರು. ಯಾವಾಗಲೂ ನಗಿಸುತ್ತಿದ್ದರು. ಆದರೆ ಅಣ್ಣನಿಗೆ ಮಾತ್ರ ಅವರು ಅಂದರೆ ಕನಸಲ್ಲೂ ಕಾಡುತ್ತಾರೆ. ನಮಗೆಲ್ಲ ಮದ್ಯಾಹ್ನ ಆಟಕ್ಕೆ ಬಿಟ್ಟಿದ್ದಾಗ ಅಣ್ಣನಿಗೆ ಬುಲಾವ್ ನೀಡುತ್ತಿದ್ದ ಗಡ್ಕರ್ ಮಾಸ್ತರ್ರು ತಮ್ಮೊಡನೆ ಚೆಸ್ ಆಡಲು ಕೂರಿಸಿಕೊಳ್ಳುತ್ತಿದ್ದರು. ನಾವೆಲ್ಲ ಬಯಲಲ್ಲಿ ಆಡುತ್ತಿದ್ದರೆ ಪಾ..ಪ ಅಣ್ಣ ಆಸೆಗಣ್ಣಿನಿಂದ ನೋಡುತ್ತಿದ್ದ.. ಇನ್ನೊಂದ್ ಮಜಾ ಅಂದ್ರೆ  ಗಡ್ಕರ್ ಮಾಸ್ತರ್ರಿಗೆ ದೃಷ್ಟಿ ದೋಷ ಇತ್ತು. ಯಾವಾಗಲೂ ಚೆಸ್ಸಿನಲ್ಲಿ ಕಪ್ಪು ಕಾಯಿ ಅವರದ್ದೇ ಆಗಬೇಕಿತ್ತು. ಅಣ್ಣನದ್ದು ಬಿಳಿಯ ಕಾಯಿ. ಅಣ್ಣ ಕಡ್ಡಾಯವಾಗಿ ಸೋಲಲೇಬೇಕು. ಪಾ..ಪ ಅಣ್ಣನ ಪಚೀತಿ ಮಜವಾಗಿತ್ತು..' ಎಂದಾಗ ಎಲ್ಲರೂ ನಕ್ಕರು.
             ಹೀಗೆ ಮಾತುಗಳು ಸಾಗುತ್ತಿದ್ದಾಗ ಎಲ್ಲರೂ ತಮ್ಮ ತಮ್ಮ ಮರೆತ ಬಾಲ್ಯದ ನೆನಹುಗಳ ಕಡೆಗೆ ಸಾಗಿದಾಗ ಪ್ರದೀಪ ಒಮ್ಮೆಲೆ ನಸುನಕ್ಕ. `ಯಾಕಪ್ಪಾ..' ಎಂದು ಕೇಳಿದಾಗ ಪ್ರದೀಪ `ಅಯ್ಯೋ ನಮ್ ಹುಡ್ಗುಗೆ ನಾನು ಹೈಸ್ಕೂಲ್ನಲ್ ಇದ್ದಾಗ ಮೊಟ್ಟ ಮೊದಲ ಬಾರಿಗೆ ಲವ್ ಲೆಟರ್ ಬರೆದಿದ್ನಪ್ಪಾ.. ಅಯ್ಯೋ ಅದೊಂದು ಗೋಳಿನ ಕಥೆ ಬಿಡಿ...' ಎಂದು ತನ್ನ ಕಥೆಯನ್ನೆಲ್ಲ ಹೇಳಿದ. ಎಲ್ಲರೂ ನಕ್ಕರು.
         ಒಂದಷ್ಟು ಪ್ರದೇಶಗಳನ್ನು ವೀಕ್ಷಿಸುವ ವೇಳೆಗೆ ಆಗಲೇ ಸಕಲ ಜೀವನ ಚೈತನ್ಯಕ್ಕೆ ಕಾರಣಕರ್ತನಾದ ನೇಸರ ಪಶ್ಚಿಮದೆಡೆಗೆ ಹೊರಟಿದ್ದ. ಎಲ್ಲರೂ ಮರಳಿ ಮನೆಯತ್ತ ನಿಧಾನವಾಗಿ ಹೆಜ್ಜೆ ಹಾಕಿದರು. ಇವರೂ ಮನೆಯ ಕಡೆಗೆ ಮರಳಲು ಮುಂದಾದರು. ಹೆಜ್ಜೆ ಹಾಕಿದರು.
         ಅವರು ಸ್ವಲ್ಪ ದೂರ ಬಂದಿರಬಹುದು. ಅಷ್ಟರಲ್ಲೊಬ್ಬರು ವಯಸ್ಸಾದ ವ್ಯಕ್ತಿ ಆ ದಾರಿಯಲ್ಲಿ ಬಂದರು. ಸಾಕಷ್ಟಿದ್ದ ಕೆಂಪಡರಿದ್ದ ಅವರ ಪಂಚೆ ಇಳಿಸಂಜೆಯ ಕೆಂಬಣ್ಣಕ್ಕೆ ಮತ್ತಷ್ಟು ಕೆಂಪಡರಿತ್ತು. ಬಾಯ್ತುಂಬ ಬಡವರ ಅಮೃತವಾದ ಕವಳವನ್ನು ಮೆಲ್ಲುತ್ತಾ ಆಗಾಗ ತುಪ್ಪುತ್ತಾ, ಏನನ್ನೋ ಹುಡುಕುವ ರೀತಿಯಲ್ಲಿ ಆಗಾಗ ಸೂರ್ಯನ ಕಿರಣಗಳ ಮರೆಮಾಡಿ ಕಣ್ಣು ಕೀಲಿಸುತ್ತಾ ಬರುತ್ತಿದ್ದರು.
        ದೂರದಿಂದಲೇ ಆತನನ್ನು ಗುರುತಿಸಿದ ರಮ್ಯ `ನೋಡಿ ಅಲ್ಲಿ ಬರ್ತಾ ಇದ್ವಲಿ ಅವರೇ ರಾಮಕೃಷ್ಣ ಗಾಂವ್ಕಾರರು. ನಮ್ಮೂರಿನವರೇ.. ಇಲ್ಲೇ ಸ್ವಲ್ಪ ದೂರದಲ್ಲಿ ಅವರ ಮನೆಯಿದೆ...' ಎಂದು ಹೇಳುವ ವೇಳೆಗೆ ಅವರು ಹತ್ತಿರ ಬಂದು `ನೀವ್ಯಾರು? ನಿಂಗವ್ಕೆ ಯಲ್ಲಾತು? ಗುರ್ತು ಸಿಕ್ಕಿದ್ಲ್ಯಲೇ ಯಂಗ..' ಎಂದು ಕೇಳಿದಾಗ ವಿಕ್ರಮ್ `ನಾನು ಗಾಂವ್ಕಾರಜ್ಜ ವಿಕ್ರಮ. ರಾಜಾರಾಮ ಭಟ್ರ ಮಗ. ಇವೆಲ್ಲ ಯನ್ನ ಪ್ರೆಂಡ್ಸು..' ಎಂದ.
           ಅದಕ್ಕೆ ಗಾಂವ್ಕಾರರು `ಯೇ ನೀ ಮಂಗ್ಲೂರಲ್ಲಿದ್ಯಡ.. ಯಂತಾ ಮಾಡ್ತಾ ಅಲ್ಲಿ? ಯಲ್ಲಾ ಸುಡುಗಾಡು ನೌಕರಿ ಹೇಳ್ತ.. ಯಂತಾ ಮಾಡ್ತ್ವ ಏನ..' ಎಂದು ಹೇಳಿದಾಗ ವಿಕ್ರಮ್ ಒಂದೆರಡು ದೀರ್ಘ ವಾಕ್ಯಗಳ ಉತ್ತರ ಕೊಟ್ಟ.
            `ಈ ನಿನ್ನ ಗೆಳೆಯಂದಿಕ್ಕಳ್ನ ನೀ ಹೋಪೂದ್ರೊಳಗ ಯಮ್ಮನೆಗೆ ತೆಕಂಡು ಬಾ ಬಿಲ್ಯ..'ಎಂದು ಹೇಳಿ ತಮ್ಮ ಮನೆಗೆ ಆಮಂತ್ರಣವನ್ನು ನೀಡಿ ಹೊರಟು ಹೋದರು ಗಾಂವ್ಕಾರರು.
            ಗಾಂವ್ಕಾರರು ಹೋದ ನಂತರ ಅವರ ಬಗ್ಗೆ ವಿಕ್ರಮ್, ರಮ್ಯ ಇಬ್ಬರೂ ಹೆಚ್ಚಿನ ವಿವರಣೆ ನೀಡಿದರು. ಇವರ ಮಾತಿನಿಂದ `ಗಾಂವ್ಕಾರರದ್ದು ಚಿಕ್ಕ, ಸುಂದರ ಕುಟುಂಬವಾಗಿತ್ತು. ಸುಖ, ಶಾಂತಿ, ಸಂಪತ್ತು ತುಳುಕುತ್ತಿದ್ದ ಕಾಲದಲ್ಲಿ ಇದ್ದೊಬ್ಬ ಮಗ ಇದ್ದಕ್ಕಿದ್ದಂತೆ ಕಾಣೆಯಾದ. ಇನ್ನೂತನಕ ಆತನ ಸುಳಿವು ತಿಳಿಯದ ಕಾರಣ ಅದೇ ಚಿಂತೆಯಲ್ಲಿ ಕೊರಗುತ್ತಿದ್ದ ಗಾಂವ್ಕಾರರು ಪ್ರತಿಯೊಬ್ಬ ಯುವಕನಲ್ಲೂ ತನ್ನ ಕಳೆದುಹೋದ ಮಗನನ್ನು ಹುಡುಕುತ್ತಿದ್ದಾರೆ' ಎನ್ನುವ ವಿಷಯ ತಿಳಿದುಬಂದಿತು.
           ವಿಕ್ರಮ್ `ಗಾಂವ್ಕಾರರ ಮಗ ಒಳ್ಳೆಯ ಪ್ರತಿಭಾವಂತನಾಗಿದ್ದ. ಹಾಡು, ಚಿತ್ರಕಲೆ, ರಂಗೋಲಿ ಹಾಕುವುದು, ಮಿಮಿಕ್ರಿ ಇವುಗಳಲ್ಲೆಲ್ಲ ಎತ್ತಿದ ಕೈ ಆಗಿತ್ತು. ನನಗಿಂತ ಎರಡು ವರ್ಷ ಸೀನಿಯರ್. ಪಾಪ ಈಗ ಎಲ್ಲಿದ್ದಾನೋ..? ಹೇಗಿದ್ದಾನೋ..? ಅಥವಾ ಬದುಕಿದ್ದಾನೋ ಗೊತ್ತಿಲ್ಲ. ಪಾಪ.. ಈ ವೃದ್ಧ ತಂದೆ ತಾಯ್ಗಳ ದುಃಖ ಹೇಳತೀರದು..' ಎಂದ.
            ಈ ಬಗ್ಗೆ ಕೊಂಚ ಮರುಗುವಿಕೆ ಕೊರಗುವಿಕೆಯೆಲ್ಲ ನಡೆಯುವ ವೇಳೆಗೆ ಕತ್ತಲೆಯ ರಥ ಬೆಳಕ ಗಾಡಿಯನ್ನಟ್ಟಿ ಆಗಿತ್ತು. ಆ ಸಂದರ್ಭದಲ್ಲಿಯೇ ಇವರೆಲ್ಲ ಮನೆಯನ್ನು ತಲುಪಿದ್ದರು.

 (ಮುಂದುವರಿಯುತ್ತದೆ..)

No comments:

Post a Comment