Wednesday, January 28, 2015

ನಾನು-ನೀನು-ಪ್ರೀತಿ (ಗಝಲ್)

ನಾನು ಪ್ರೇಮದ ದೋಣಿ ನೀನೇ ಹಾಯಿ
ನಾನು ಉಲಿಯುವ ಸ್ವರ ನೀನೇ ಬಾಯಿ ||

ನಾನು ಹರಿಯುವ ನದಿ ನೀನೇ ಕಡಲು
ದುಮ್ಮಿಕ್ಕಿ, ಓಡೋಡಿ ಸೇರುವೆ ಒಡಲು ||

ನಾನು ಕಪ್ಪೆಯ ಚಿಪ್ಪು ನೀನು ಮುತ್ತು
ನೀನಿಲ್ಲದಿರೆ ಮಾತ್ರ ಬದುಕಿಗೆ ಕುತ್ತು ||

ನಾನು ಬಣ್ಣ ನೀನು ನೀರಿನ ತಿಳಿ
ಆಡೋಣ ಎಂದೆಂದೂ ಬಣ್ಣದೋಕುಳಿ ||

ನಾನು ಬಿರು ಭೂಮಿ ನೀನು ಹನಿಮಳೆ
ಬಾನಿಂದ ನೀನಿಳಿಯೆ ಹಸಿಯಾಗಲಿ ಇಳೆ ||


***

(ಸುಮ್ಮನೆ ಬರೆಯುತ್ತ ಸಾಗಿದ ಎರಡೆರಡು ಸಾಲುಗಳು.. ಗಝಲ್ ವ್ಯಾಪ್ತಿಗೆ ಬರುತ್ತದೋ ನಾನರಿಯೆ.. ಸುಮ್ಮನೆ ಒಂದು ಪ್ರಯತ್ನ ಮಾಡಿದ್ದೇನೆ ಅಷ್ಟೇ )
(ಕವಿತೆ ಬರೆದಿದ್ದು 28-1-2015ರಂದು ಶಿರಸಿಯಲ್ಲಿ)


Tuesday, January 27, 2015

ಅಘನಾಶಿನಿ ಕಣಿವೆಯಲ್ಲಿ-10

(ಸೀತಾದಂಡೆ.)
            ವಾಪಸ್ಸಾಗುವ ದಾರಿಯನ್ನು ಹಿಡಿದು ಎಲ್ಲರೂ ಬರುತ್ತಿದ್ದರು. ಸ್ವಲ್ಪ ದೂರ ಬಂದಿರಬಹುದಷ್ಟೇ, ಆಗ ಅಲ್ಲಿ ಒಬ್ಬ ವ್ಯಕ್ತಿ ನೆಲದ ಮೇಲೆ ಬಿದ್ದು ಹೊರಳಾಡುತ್ತಿರುವುದು, ಒದ್ದಾಡುತ್ತಿರುವುದು ಕಾಣಿಸಿತು. ಆ ವ್ಯಕ್ತಿಯ ಬಾಯಲ್ಲಿ ಬಿಳಿ ನೊರೆ ಬರುತ್ತಿತ್ತು. ಹತ್ತಿರ ಹೋಗಿ ನೋಡಿದಾಗ ಅಲ್ಲಿ ಬಿದ್ದಾತ ಆಗಷ್ಟೇ ಜಲತಾತದಿಂದ ಓಡಿ ಕಣ್ಮರೆಯಾದ, ಎಲ್ಲೆಂದರಲ್ಲಿ ಹಿಂಬಾಲಿಸಿ ಕಾಟಕೊಟ್ಟು ಕಾಡುತ್ತಿದ್ದ ಅಪರಿಚಿತನೇ ಎಂಬುದು ತಿಳಿಯಿತು. ಎಲ್ಲರೂ ಗಡಬಡಿಸಿ ಕೇಳಿದಾಗ ಆತ `ಹಾವು.. ಹಾವು..' ಎಂದು ಅಸ್ಪಷ್ಟವಾಗಿ ತೊದಲಿದ. ಎಲ್ಲರೂ ನೋಡಲಾಗಿ ಕಾಲಿನ ಪಾದದ ಬಳಿ ಹಾವು ಕಚ್ಚಿದ ಗುರುತು ಕಾಣಿಸಿತು. ವಿಕ್ರಮ ತಕ್ಷಣ ಪ್ರಥಮ ಚಿಕಿತ್ಸೆಗೆಂಬಂತೆ ಒಂದು ದಾರ ಹಾಗೂ ಬ್ಲೇಡನ್ನು ತೆಗೆದುಕೊಂಡ. ತಕ್ಷಣವೇ ಪ್ರದೀಪ `ಏ ವಿಕ್ರಂ.. ನಿನಗೆ ತಲೆ ಕೆಟ್ಟಿದೆಯಾ.. ಎಲ್ಲೆಂದರಲ್ಲಿ ಆತ ನಿನ್ನನ್ನು ಫಾಲೋ ಮಾಡಿ, ಕಾಟಕೊಟ್ಟವನು ಇವನು.. ಇಂತವನಿಗೆ ಪ್ರಥಮ ಚಿಕಿತ್ಸೆ ಯಾಕೆ ಮಾರಾಯಾ? ನಿನ್ನ ಫಾಲೋ ಮಾಡಿದವನ ಜೀವ ಉಳಿಸಲಿಕ್ಕೆ ನೋಡ್ತೀಯಲ್ಲೋ..' ಎಂದ.
             `ಏ ಸುಮ್ನಿರೋ.. ಪಾಪ ಆತ ಸಾಯ್ತಿದ್ದಾನೆ. ಸೇಡಿದ್ದರೆ ಅದು ಕೊನೆಗಿರಲಿ. ಈಗ ಆತನನ್ನು ಉಳಿಸೋದು ಮುಖ್ಯ. ಬದುಕಿ ಉಳಿದರೆ ಯಾಕೆ ನಮ್ಮನ್ನು ಆತ ಹಿಂಬಾಲಿಸುತ್ತಿದ್ದ ಎಂಬುದನ್ನು ಕೇಳಿದರಾಯ್ತು..' ಎಂದ ವಿಕ್ರಂ. ಜೊತೆಗೆ ಪ್ರದೀಪನ ಮಾತನ್ನು ನಿರ್ಲಕ್ಷಿಸಿ ಆಗಂತುಕನಿಗೆ ಪ್ರಥಮ ಚಿಕಿತ್ಸೆ ನೀಡಿದ.
              ಸ್ವಲ್ಪ ಹೊತ್ತಿನ ನಂತರ ಆ ಅಪರಿಚಿತ ವ್ಯಕ್ತಿ ಚೇತರಿಸಿಕೊಂಡ. ತಕ್ಷಣ ವಿಕ್ರಂ `ಈಗ ಹೇಳು.. ಯಾರು ನೀನು..?' ಎಂದ.
            `ಅದನ್ನೆಲ್ಲಾ ಆಮೇಲೆ ಹೇಳ್ತೀನಿ.. ಮೊದಲು ನಿಮ್ಮ ಮನೆಗೆ ಹೋಗೋಣ ನಡೀರಿ..' ಎಂದ ಆಗಂತುಕ.
            `ನಮ್ಮ ಮನೆಗಾ..? ಅದೆಲ್ಲಾ ಆಗೋದಿಲ್ಲ..'
            `ಮೊದ್ಲು ಹೋಗೋಣ.. ಆ ನಂತ್ರ ನಾನ್ಯಾರು ಎನ್ನುವುದನ್ನೆಲ್ಲಾ ಹೇಳ್ತೀನಿ.. ಪ್ಲೀಸ್ ನಾನು ಹೇಳೋದನ್ನು ಕೇಳಿ..' ಅಂಗಲಾಚಿದ ಆಗಂತುಕ.
             `ಓಕೆ.. ಸರಿ..' ಎಂದ್ಹೇಳಿ ಆತನನ್ನು ಕರೆದೊಯ್ಯಲು ಹೊರಟ ವಿಕ್ರಮನನ್ನು ಪ್ರದೀಪ ಮತ್ತೆ ವಿರೋಧಿಸಿದ. ಈಗಲೂ ಪ್ರದೀಪನ ಮಾತನ್ನು ತೆಗೆದುಹಾಕಲಾಯ್ತು. ಅಂತೂ ಸಂಜೆಯ ವೇಳೆಗೆ ಆ ಆಗಂತುಕನೊಡಗೂಡಿ ಅವರ ತಂಡ `ಕಣ್ಣೀರು ಮನೆ'ಗೆ ವಾಪಸಾಯಿತು.
              ಹಾಗಾದರೆ ಇದೇ ಕಥೆಗೆ ದೊಡ್ಡ ತಿರುವೇ? ಆ ಆಗಂತುಕ ಯಾರಿರಬಹುದು? ಆತ ಒಳ್ಳೆಯವನೇ? ಕೆಟ್ಟವನೇ? ಎಲ್ಲವುಗಳಿಗೂ ಕಾಲವೇ ಉತ್ತರ ಹೇಳಬೇಕು.

*****9*****

            ಅತ್ತ ಬೇಣದಗದ್ದೆಯ ಶಿವರಾಮನ ಮನೆಯಲ್ಲಿ, ಅಲ್ಲಿಗೆ ಬಂದಿದ್ದ ಸುಬ್ರಮಣ್ಯ ಅಲಿಯಾಸ್ ಸುಬ್ಬಣ್ಣ ಯಾವುದೋ ವಿಷಯಕ್ಕಾಗಿ ಶತಪಥ ತಿರುಗುತ್ತಿದ್ದ. ಆತನಿಗೆ ಬರಬೇಕಿದ್ದ ವಸ್ತುಗಳಿಗೋ, ಬರಬೇಕಿದ್ದ ವ್ಯಕ್ತಿಗಳಿಗೋ ಕಾಯುತ್ತಿರುವುದು ಸ್ಪಷ್ಟವಾಗಿತ್ತು. ಅದಲ್ಲದೇ ಈಗ್ಗೆರಡು ದಿನಗಳಿಂದ ತನ್ನ ಅಣ್ಣ ಬೇಣದಗದ್ದೆಯ ಶಿವರಾಮನಲ್ಲಿಯೂ ಏನೋ ಒಂದು ಬದಲಾವಣೆ ಆಗಿತ್ತು. ಮೊದಲಿನ ಹಾಗೇ ಇಲ್ಲದ ಆತನಿಗೆ ತಾನು ಮಾಡುತ್ತಿರುವ ಕೆಲಸದ ಬಗ್ಗೆ ಅನುಮಾನ ಬಂದಿದೆಯಾ ಎಂದೂ ಸುಬ್ರಹ್ಮಣ್ಯ ಯೋಚನೆ ಮಾಡುತ್ತಿದ್ದ. `ಹಾಗಾಗದಿದ್ದರೆ ಸಾಕು..' ಎಂದುಕೊಳ್ಳುತ್ತಿದ್ದ.
             ಹಾಗಾದರೆ ಆತ ಮಾಡುತ್ತಿದ್ದ ಕೆಲಸ ಏನು? ಮುಂದೆ ಶಿವರಾಮ್ ಹಾಗೂ ಸುಬ್ಬಣ್ಣ ಏನಾಗುತ್ತಾರೆ? ಎಲ್ಲವೂ ಗೋಜಲು ಗೋಜಲಾಗಲು ಆರಂಭಿಸಿತ್ತು.

*****

                `ಅದಕ್ಕುತ್ತ ಆನು ಹೇಳ್ತಿ.. ತಡಿ...' ಎಂದು ಧ್ವನಿ ಬಂದಾಗ ಎಲ್ಲರಿಗೆ ಅಚ್ಚರಿ. ತಿರುಗಿ ನೋಡಿದರೆ ರಾಜಾರಾಮ ಭಟ್ಟರು.
                  ಆ ಆಗಂತುಕನನ್ನು ಕಣ್ಣೀರು ಮನೆಗೆ ಕರೆತಂದ ನಂತರ ಆತನನ್ನು ವಿಚಾರಿಸಲಾಗಿ ರಾಜಾರಾಮ ಭಟ್ಟರು ಹೀಗೆಂದಿದ್ದರು.
               `ವಾಟ್.. ಇಂವನ ಬಗ್ಗೆ ನಿಂಗೊತ್ತಿದ್ದನಾ ಅಪ್ಪಯ್ಯಾ..' ಎಂದು ಕಕ್ಕಾಬಿಕ್ಕಿಯಾಗಿ ಕೇಳಿದ್ದ ವಿಕ್ರಮ. `ಹುಂ.. ಹೌದಾ.. ಪ್ವಾರಾ.. ಯಂಗೊತ್ತಿದ್ದು.. ಅದು ದೊಡ್ಡ ಕಥೆ.. ಇಂವ ಇದ್ನಲಾ.. ಇಂವ ಬೇರೆ ಯಾರೂ ಅಲ್ದಾ.. ಯಂಗಳ ರಾಂಕೃಷ್ಣ ಗಾಂವ್ಕಾರರ ಮನೆ ಪ್ವಾರನಾ.. ವಿಷ್ಣು..' ಎಂದು ಹೇಳಿದರು ಭಟ್ಟರು.
                `ಆ..? ಹೌದಾ..? ಹಂಗಾದ್ರೆ ಅಂವ ಯನ್ನ ಫಾಲೋ ಮಾಡಿದ್ದೆಂತಕ್ಕೆ? ಎಲ್ಲೋದ್ರೂ ಹಿಂದಿಂದೇ ಬರ್ತಿದ್ದಿದ್ದು, ಹುಡುಕ್ತಿದ್ದು, ಮಾತು ಕೇಳಲು ಪ್ರಯತ್ನ ಮಾಡ್ತಿದ್ದಿದ್ದು ಯಂತಕ್ಕೆ..?' ಕೇಳಿದ ವಿಕ್ರಮ.
                `ಹೇಳ್ತಿ ತಡಿ.. ಇಂವ ಸಣ್ಣಕ್ಕಿದ್ದಾಗ ಮನೆ ಬಿಟ್ಟು ಓಡಿ ಹೋಯಿದ್ನಡಾ ಹೇಳಿ ಹೇಳ್ತಿಪ್ವಿಲ್ಯಾ.. ಅದಾದ ಮೇಲೆ ಒಂದ್ ಸಲ ಯಂಗ ಯಾವ್ದೋ ಊರಲ್ಲಿ ಸಿಕ್ಕಿದ್ದ ಬಿಲ್ಯ.. ಅಲ್ಲಿ ಇವ್ನ ಪರಿಸ್ಥಿತಿ ಭಾಳ ತೊಂದ್ರೇಲಿ ಇತ್ತು.. ಆಗ ಇಂವನ್ನ ಾನೇ ಕಾಪಾಡಿದ್ದು..'
              `ಅದೇನೋ ಸರಿ.. ಆದ್ರೆ ಅಂವ ಯನ್ನ ಹಿಂದಿಂದೇ ಬರ್ತಿದ್ದಿದ್ದು ಯಂತಕ್ಕೆ? ವಿಷ್ಣೂನೇ ಹೇಳಿ ಯಂಗೆಂತಕ್ಕೆ ತಿಳೀದಿಲ್ಲೆ? ನಿ ಯಂತಕ್ಕೆ ಹೇಳಿದ್ಲೆ?'' ಎಂದು ನಡುವೆ ಬಾಯಿ ಹಾಕಿ ಕೇಳಿದ ವಿಕ್ರಮ.
               ``ಅಂವನ್ನ ನಿಂಗೆ ಸಹಾಯ ಮಾಡ ಹೇಳಿ ಆನೆ ಕಳಿಸಿದ್ದಿದ್ದಿ ಬಿಲ್ಯ. ನಿಂಗೆ ಯಾರೇ ತೊಂದ್ರೆ ಕೊಟ್ಟರೂ ಅಂವ ನಿನ್ನ ಉಳಿಸ್ತಿದ್ದ. ಹಂಗಾಗಿ ನಿನ್ನ ಜೊತೆಗೆ ಅಂವ ಬರ್ತಿದ್ದ. ಅಂವ ಆವಾಗಾವಾಗ ತನ್ನ ವೇಷ ಬದಲಾಯಿಸ್ತಿದ್ದ. ಅದಕ್ಕಾಗಿ ನಿಂಗೆ ಗೊತ್ತಾಯ್ದಿಲ್ಲೆ.. ಮತ್ತೆ ಅದನ್ನ ನಿಂಗೆ ತಿಳಿಸದು ಯಂಗೆ ಸಡಿ ಕಂಡಿದ್ಲೆ. ಜೊತಿಗೆ ನೀನು ಯಂತದ್ದನ್ನೇ ಮಾಡಿದ್ರೂ ಮಾಡ್ತಿದ್ರೂ ಅದನ್ನ ಯಂಗೆ ತಿಳಿಸ್ತಿದ್ದ. ನೀನು ಕುಂಗ್ ಫು ಶಾಲೆ ಬಿಟ್ಟು ಪೇಪರ್ರಿಗೆ ಸೇರಿದ್ದನ್ನೆಲ್ಲಾ ಯಂಗೆ ಇವನೇ ಹೇಳಿ ಬಿಟ್ಟಿಕಿದ.' ಎಂದರು ಭಟ್ಟರು.
            `ಅಯ್ಯಪ್ಪಾ.. ಎಲ್ಲಿಂದ ಎಲ್ಲೀವರೆಗೆ ಲಿಂಕ್ ಉಂಟಪ್ಪಾ..' ಎಂದು ಗೊಣಗಿದ ಪ್ರದೀಪ. ವಿಕ್ರಮ ಕಕ್ಕಾಬಿಕ್ಕಿಯಾಗಿದ್ದ.
            `ಇಷ್ಟೇ ಅಲ್ಲ ತಡಿ.. ನಿನ್ನ ಆ ಕುಂಗ್ ಫೂ ಶಾಲೆ ಯಂಗೆ ಇಷ್ಟ ಆಯ್ದಿಲ್ಲೆ.. ನಿಂಗೂ ಅದು ಗೊತ್ತಿದ್ದು.. ಅದಕ್ಕಾಗೇ ನೀನಾಗೇ ಆ ಶಾಲೆ ಬಾಗಿಲು ಹಾಕ್ಲಿ ಹೇಳಿ ನಾನು ಮಾಡಿದ್ದಿ.. ಕೊನೆಗೆ ಆ ಮಂಗ್ಳೂರಿನ ಪೇಪರ್ರಿನಲ್ಲಿ ಕೆಲ್ಸ ಸೊಗೋ ಹಂಗೆ ಮಾಡಿ, ನಿನ್ನ ಕೆಲಸ ಬದ್ಲು ಮಾಡದಿ.. ಇಷ್ಟೇ ಅಲ್ದಾ.. ಇನ್ನೂ ಒಂದು ಮುಖ್ಯ ಸಂಗ್ತಿ ಹೇಳ್ತಿ ಕೇಳು.. ಈ ವಿಜೇತಾ ಇದ್ದಲಾ.. ಇದು ಯಂಗೆ ಮೊದಲಿಂದ್ಲೂ ಗೊತ್ತಿತ್ತಿದ್ದೇಯಾ.. ಯನ್ನ ಷಡ್ಕ ಅಂದ್ರೆ ನಿನ್ನ ಆಯಿಯ ಕೌಟುಂಬಿಕ ಸಂಬಂಧಿಕರಡ. ಹಂಗಾಗಿ ಅವ್ಳೂ ಇದರಲ್ಲಿ ಮುಖ್ಯ ಪಾತ್ರ ವಹಿಸಿದ್ದ..' ಎಂದರು ಭಟ್ರು.
             ವಿಕ್ರಮನಿಗೆ ಮತ್ತೆ ದಿಘ್ಬ್ರಾಂತಿ. ತಾನು ನಂಬಿದ್ದ ವಿಜೇತಾ ಹೀಗಿರಲು ಸಾಧ್ಯ ಎಂದುಕೊಂಡಿರದ ವಿಕ್ರಮನಿಗೆ ಶಾಕ್ ಮೇಲೆ ಶಾಕ್. ತಾನು ನಂಬಿಕೊಂಡಿದ್ದೆಲ್ಲವೂ ಸುಳ್ಳಾದಂತೆ, ಜಗತ್ತಿನಲ್ಲಿ ತನ್ನ ವಿರುದ್ಧದಲ್ಲಿ ಗೂಢಚಾರಿಕೆ ಮಾಡಿದಂತೆ ಅನ್ನಿಸಿತು. ತಾನಂದುಕೊಂಡಿದ್ದೆಲ್ಲವೂ ನಿಜವಲ್ಲ. ತಾನೊಬ್ಬನೆ ಒಂದು ಕಡೆ.. ಉಳಿದವರೆಲ್ಲ ತನ್ನ ವಿರುದ್ಧ ಇರುವವರೇ.  ತನ್ನ ಅಸ್ತಿತ್ವವೇ ಸುಳ್ಳಾ.. ಇವರೆಲ್ಲರ ಆಟದ ಕಾಯಿಯಾಗಿ ತಾನು ಬಳಕೆಯಾದೆನಾ ಎಂದುಕೊಂಡ ವಿಕ್ರಮ. `ವಾಟ್.. ಇದನ್ನೆಲ್ಲಾ ನಂಬೂಲೆ ಆವ್ತ್ಲೆ.. ಹೌದಾ ವಿಜೇತಾ..?' ಎಂದ ವಿಕ್ರಮ.
               `ಯಸ್.. ಇದೆಲ್ಲಾ ನಂಗೂ ಗೊತ್ತಿತ್ತು.. ನನ್ನ ಹೆಲ್ಪ್ ಕೂಡ ಇತ್ತು. ಏನೋ ಲೈಫ್ ನಲ್ಲಿ ಒಂದು ಟ್ವಿಸ್ಟ್ ಇರಲಿ ಅಂತ ಹೀಗೆ ಮಾಡಿದೆ. ಆದರೆ ಈ ಊರನ್ನು ನಾನು ನೋಡಿರಲಿಲ್ಲ. ಯಾರ್ಯಾರದ್ದೋ ಮೂಲಕ ಭಟ್ರ ಬಗ್ಗೆ, ನಿನ್ನ ಬಗ್ಗೆ ನನಗೆ ತಿಳೀತು. ಏನೋ ಹೀಗೆ ಮಾಡಿದೆ. ಆದರೆ ಈ ವಿಷ್ಣುವಿನ ಬಗ್ಗೆ ನನಗೆ ಗೊತ್ತಿರಲಿಲ್ಲ. ಇನ್ನು ನಿನ್ನ ಬಗ್ಗೆ ಹೇಳಬೇಕಂದ್ರೆ ನಿನ್ನ ಚಿಕ್ಕಂದಿನಿಂದ್ಲೂ ನೋಡ್ತಿದ್ದೆ. ಆದರೆ ನಾನು ಬೆಳೆಯುತ್ತಿದ್ದಂತೆ ನನ್ನ ಮಮ್ಮಿ ಡ್ಯಾಡಿ ಮಂಗಳೂರಿಗೆ ಬಂದರು. ಹಾಗಾಗಿ ನೀನು ಏನಾದೆ ಎನ್ನುವುದು ಗೊತ್ತಾಗಿರಲಿಲ್ಲ. ಆ ನಂತರ ನಿನ್ನನ್ನು ನೋಡಿದ್ದು ಮಂಗಳೂರಿನಲ್ಲಿ ಕುಂಗ್ ಫೂ ಸಂದರ್ಶನದಲ್ಲಿ. ನಂತರ ಭಟ್ರು ಪರಿಚಯವಾದರು. ಕೊನೆಗೆ ನೀನು ಗೊತ್ತಿದ್ರೂ ಗೊತ್ತಿಲ್ಲದ ಹಾಗೆ ನಡೆದುಕೊಂಡೆ. ನಿಂಗೊತ್ತಿರಬಹುದು, ಒಂದಿನ ನೀನು ನಮ್ಮನೆಗೆ ಬಂದಿದ್ದಾಗ ನನ್ನ ಡ್ಯಾಡಿ ಶಿರಸಿ ಏರಿಯಾದಲ್ಲಿ ಎಲ್ಲಾ ಗೊತ್ತಿದೆ ಎಂದಿದ್ದರು. ಹೀಗೆ.. ಮೂಲತಃ ಅವರೂ ಇಲ್ಲಿಯ ಏರಿಯಾದವರೇ. ಜೊತೆಗೆ ನನಗೂ ಕೂಡ ಈ ಏರಿಯಾ ನೋಡೋಣ ಎನ್ನಿಸ್ತು ನಿಂಜೊತೆ ಬಂದು ಬಿಟ್ಟೆ..' ಎಂದಳು ವಿಜೇತಾ..
                ಉಫ್... ಒಂದು ಹೊಡೆತದ ಮೇಲೆ ಇನ್ನೊಂದು ಹೊಡೆತ.. ಒಂದನ್ನು ನಂಬಬೇಕೋ ಬೇಡ್ವೋ ಎನ್ನುವುದರೊಳಗೆ ಇನ್ನೊಂದು... ಯಾವ ಯಾವ ರೀತಿಯ ತಿರುವುಗಳು.. ಎಷ್ಟೆಲ್ಲಾ ಚೇಂಜು.. ಇದೆಲ್ಲ ಹೌದಾ.. ಆದರೆ ಯಾಕಾಗಿ ಇವೆಲ್ಲಾ? ನಿಮ್ಮೆಲ್ಲರ ಪಾಲಿಗೆ ನಾನು ಆಟದ ವಸ್ತು ಆದೆನಾ? ನಿಮ್ಮೆಲ್ಲರಿಗೂ ಎಲ್ಲವೂ ಗೊತ್ತಿದೆ. ಆದರೆ ನಾನು ಮಾತ್ರ ಏನೂ ಗೊತ್ತಿಲ್ಲದ ಹಾಗೆ ಬಫೂನ್ ಆಗಿಬಿಟ್ಟೆ.. ಪ್ರದೀಪ, ವಿನಾಯಕ.. ನೀವೂ ಈ ಸುರುಳಿಯ ಒಂದು ಭಾಗ ಆಗಿದ್ದರೆ ಹೇಳಿ ಬಿಡ್ರಪ್ಪಾ.. ಶಾಕುಗಳ ಸರಮಾಲೇ ಈಗಲೇ ಮುಗಿದು ಹೋಗಲಿ..' ದೀನನಾಗಿದ್ದ ವಿಕ್ರಮ
            ಪ್ರದೀಪ ಹಾಗೂ ವಿನಾಯಕರು ತಮಗೂ ಇದಕ್ಕೂ ಯಾವುದೇ ಸಂಬಂಧಿವಿಲ್ಲ. ತಮಗೇನೂ ಗೊತ್ತಿಲ್ಲ ಎಂದರು.
            `ತಂದೆಯಾದವಂಗೆ ಮಗನ್ನ ಸರಿಯಾದ ಹಾದಿಯಲ್ಲಿ ಹೋಗೂಲೆ ಹೇಳೋ ಹೊಣೆ ಇರ್ತು. ನೀನೂ ಕೂಡ ಒಳ್ಳೆಯ ದಾರಿಯಲ್ಲಿ ಹೋಗೂದು ನಂಗೆ ಬೇಕಿತ್ತು ಅದಕ್ಕಾಗಿ ಹಿಂಗೆ ಮಾಡಿದೆ..' ಎಂದರು ಭಟ್ಟರು.
              `ಹಂಗಾರೆ ಕುಂಗ್ ಫೂ ಕಲ್ಸೂದು ಒಳ್ಳೆ ದಾರಿ ಅಲ್ದಾ..?'
              `ಒಳ್ಳೇದೋ ಕೆಟ್ಟದ್ದೋ.. ನಮಗ್ಯಾಕೆ ಬೇಕು ಆ ಹೊಡೆದಾಟದ ವೃತ್ತಿ? ನಿನ್ನ ಆ ಹೊಲ್ಸು ಉಸಾಬರಿ ನಮಗೆ ಬೇಕಾದ ಹಣ ಕೊಡ್ತ್ಲೆ. ಅದು ಜೊತೆಗೆ ಸುಖಾ ಸುಮ್ನೆ ಮೈ ಮುರಿಯೋ ಹಂಗೆ ಒದ್ದಾಡೂದು. ಇನ್ನು ನಾವು ಹವ್ಯಕರು. ನಮಗೆಲ್ಲಾ ಇದು ಅವ್ತ್ಲೆ.. ನಾವು ಯಂತಿದ್ರೂ ಸಸ್ಯಾಹಾರಿಗಳು. ಅಂತಾದ್ದೆಲ್ಲಾ ಆ ನಾಯ್ಕರಿಗೋ, ಗೌಡ್ರಿಗೋ, ಕುಣಬಿ ಮರಾಟ್ಯಕ್ಕಗೋ, ಸಿದ್ದಿಗಳಿಗೋ ಲಾಯಕ್ಕು.. ಅದ್ಕೆ ಹಿಂಗ್ಮಾಡಿದಿ ಬಿಲ್ಯ. ಇನ್ನು ನೀನು ಪತ್ರಿಕೆಗೆ ಸೇರಿದ್ದು ನಾನು ಒಪ್ದಿ. ಯಂತಕ್ಕಂದ್ರೆ ಅದರಲ್ಲಿ ನಿಂಗೆ ಹೆಸರು ಬತ್ತು. ನಾಕು ಜನ ನಿನ್ನ ಬಗ್ಗೆ ಹೆಮ್ಮೆಯಿಂದ ಮಾತಾಡದ್ನ ನೋಡಲಾವುತು,, ಹಂಗಾಗಿ ಹಿಂಗ್ ಮಾಡದಿ..'
              ಭಟ್ಟರ ಈ ಮಾತಿಗೆ ವಿಕ್ರಮ ಏನೂ ಮಾತಾಡಲಿಲ್ಲ. ಅವನ ತಲೆಯ ತುಂಬಾ ದಿಗ್ಬ್ರಾಂತಿ, ವಿಶಿಷ್ಟತೆ, ಅಚ್ಚರಿ, ನಿಘೂಡತೆಗಳಲ್ಲೇ ತುಂಬಿ ಹೋಗಿತ್ತು. ಅಷ್ಟು ಹೊತ್ತಿಗೆ ಸಾಕಷ್ಟು ಕತ್ತಲೂ ಆವರಿಸಿದ್ದರಿಂದ ಎಲ್ಲರೂ ಮುಂದಿನ ಕಾರ್ಯಗಳತ್ತ ಮುಖಮಾಡಿದರು. ವಿಕ್ರಮ ಯೋಚಿಸಡೊಗಿದ್ದ.
               ಅಷ್ಟರಲ್ಲೇ ಊಟಕ್ಕೆ ಬುಲಾವ್ ಬಂದಿತ್ತು. ಊಟ ಮುಗಿದ ನಂತರ ವಿನಾಯಕ, ಪ್ರದೀಪ, ವಿಜೇತಾ ಇವರೆಲ್ಲ ವಿಷ್ಣುವಿನ ಬಳಿ ಮಾತನಾಡತೊಡಗಿದ್ದರು. ಆದರೆ ವಿಕ್ರಂ ಅವರ ಜೊತೆಗೆ ಸೇರಲಿಲ್ಲ. ಮನೆಯ ಹೊರಗೆ ಅಂಗಳದಲ್ಲಿ ಒಮದು ಕಡೆ ಕುಳಿತು ಆಲೋಚಿಸತೊಡಗಿದ್ದ.

(ಮುಂದುವರಿಯುತ್ತದೆ..)

Friday, January 23, 2015

ಬಂಡಲದ ಬವಣೆ

ಬಂಡಲ ಬವಣೆ
ಭಾಗ-1

***

(ಇದು ದೈನಂದಿನ ಪರಿಸ್ಥಿತಿ)
ಶಿರಸಿ ತಾಲೂಕಿನ ಬಂಡಲ ಗ್ರಾಮ ಪಂಚಾಯತ ವ್ಯಾಪ್ತಿಯ ಹೆಬ್ರೆ ಗ್ರಾಮದ 7 ಹಳ್ಳಿಗಳ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ. ರಸ್ತೆ, ವಿದ್ಯುತ್ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳಿಂದ ಈ ಹಳ್ಳಿಗಳು ವಂಚಿತವಾಗಿದೆ. ಗ್ರಾಮಸ್ಥರು ಮೂಲಭೂತ ಸೌಕರ್ಯಕ್ಕಾಗಿ ಜನಪ್ರತಿನಿಧಿಗಳಿಗೆ ಮನವಿ ಅರ್ಪಿಸಿ ಹೈರಾಣಾಗಿದ್ದಾರೆ.
ಬಂಡಲ ಪಂಚಾಯತದ ಹೆಬ್ರೆ ಗ್ರಾಮ ಶಿರಸಿ ತಾಲೂಕಿನ ಅತಿ ದೊಡ್ಡ ಗ್ರಾಮ ಎನ್ನುವ ಖ್ಯಾತಿಯನ್ನು ಗಳಿಸಿದೆ. ಈ ಗ್ರಾಮದಲ್ಲಿರುವ ಗಾಡನಗದ್ದೆ, ಸಂಪೆಗದ್ದೆ, ಹೊಡಹಾಡನಗದ್ದೆ, ಬಿಳಿಜಡ್ಡಿ, ಯಡ್ಲಮನೆ, ದೇವಕಣಿ, ಹಡನಗದ್ದೆ ಈ ಮುಂತಾದ ಗ್ರಾಮಗಳು ನಾಗರಿಕ ಜಗತ್ತಿನ ಹಲವಾರು ಸೌಲಭ್ಯಗಳಿಂದ ವಂಚಿತವಾಗಿದೆ. ರಾಗಿಹೊಸಳ್ಳಿಯಿಂದ ಜಲಗದ್ದೆ-ಸಂಪೆಗದ್ದೆ ಮೂಲಕ ಬೆಣಗಾಂವ್ ಊರಿಗೆ ತೆರಳುವ ಮಾರ್ಗ ಮಧ್ಯದಲ್ಲಿರುವ ಈ ಗ್ರಾಮಗಳನ್ನು ತಲುಪಲು ಸಾಹಸ ಪಡಬೇಕಾದಂತಹ ಪರಿಸ್ಥಿತಿಯಿದೆ. ಈ ಹಳ್ಳಿಗಳಲ್ಲಿ ಕನಿಷ್ಟ 150 ಮನೆಗಳಿವೆ. 800-1000ಕ್ಕೂ ಅಧಿಕ ಜನರಿದ್ದಾರೆ. ಬಂಡಲ ಗ್ರಾಮ ಪಂಚಾಯತದಿಂದ 8 ಕಿ.ಮಿ, ರಾಗಿಹೊಸಳ್ಳಿಯಿಂದ 4 ಕಿ.ಮಿ ಹಾಗೂ ದೇವನಳ್ಳಿಯಿಂದ 13 ಕಿ.ಮಿ ದೂರದಲ್ಲಿ ಈ ಗ್ರಾಮಗಳಿವೆ. ಮರಾಠಿಗರು, ಗೌಡರು ಹಾಗೂ ಬ್ರಾಹ್ಮಣರು ಈ ಊರುಗಳಲ್ಲಿ ವಾಸ ಮಾಡುತ್ತಿದ್ದಾರೆ.
ದಟ್ಟ ಕಾನನ ಹಾಗೂ ಬೆಣ್ಣೆಹೊಳೆಯ ಸನಿಹದಲ್ಲೇ ಇರುವ ಈ ಹಳ್ಳಿಗಳಿಗೆ ತೆರಳಲು ಸರಿಯಾದ ರಸ್ತೆಯಿಲ್ಲ. ಕಚ್ಚಾರಸ್ತೆಯೊಂದಿದ್ದರೂ ಒದ್ದಾಡುತ್ತ ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ. ಮೂರು ಕಡೆಗಳಲ್ಲಿ ಹಳ್ಳಗಳನ್ನು ದಾಟಬೇಕು. ಯಾವುದೇ ಹಳ್ಳಕ್ಕೆ ಸೇತುವೆಯಿಲ್ಲ. ಮಳೆಗಾಲದಲ್ಲಂತೂ ಈ ಹಳ್ಳಗಳು ಉಕ್ಕೇರಿ ಹರಿಯುತ್ತವೆ. ಇದರಿಂದಾಗಿ ಮಳೆಗಾಲದ ಆರು ತಿಂಗಳುಗಳ ಕಾಲ ಈ ಎಲ್ಲ ಊರುಗಳು ಹೊರ ಜಗತ್ತಿನ ಸಂಪರ್ಕವನ್ನು ಕಳೆದುಕೊಳ್ಳುತ್ತವೆ. ಅನಿವಾರ್ಯ ಕಾರಣಗಳಿಗೆ ಹೊರ ಪ್ರದೇಶಗಳಿಗೆ ತೆರಳಬೇಕೆಂದರೂ ಉಕ್ಕಿ ಹರಿಯುವ ಹಳ್ಳದಲ್ಲಿ ನೀರು ಕಡಿಮೆಯಾಗುವುದನ್ನು ಕಾಯಬೇಕಾಗುತ್ತದೆ. ಅಂದರೆ ಬೇಸಿಗೆ ಬರುವ ವರೆಗೆ ಸಂಪರ್ಕವನ್ನೇ ಕಡಿದುಕೊಳ್ಳುವಂತಾಗಿದೆ. ಮಳೆಗಾಲ ಪ್ರಾರಂಭವಾಯಿತೆಂದರೆ ಈ ಊರುಗಳು ದ್ವೀಪವಾಗುತ್ತವೆ. ಹಳ್ಳಗಳಿಗೆ ಸೇತುವೆಯಿಲ್ಲ. ಕಚ್ಚಾರಸ್ತೆಯಲ್ಲಿ ಓಡಾಡುವಂತಿಲ್ಲ. ಹಾಗಾದರೆ ದಿನವಹಿ ಇಲ್ಲಿರುವ ಸಾವಿರಾರು ಜನರು ಜೀವನ ಸಾಗಿಸುವುದಾದರೂ ಹೇಗೆ ಎನ್ನುವ ಪ್ರಶ್ನೆಗೆ ಜನಪ್ರತಿನಿಧಿಗಳಿಂದಲೂ ಉತ್ತರ ಸಿಗುತ್ತಿಲ್ಲ.
(ಹಳ್ಳದಲ್ಲಿ ಸರ್ಕಸ್ ಅನಿವಾರ್ಯ)
ಈ ಗ್ರಾಮಗಳಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಮುಖ್ಯವಾಗಿ ಜಲಗದ್ದೆ ಹಳ್ಳ, ಸಂಪೆಗದ್ದೆ ಹಳ್ಳ ಹಾಗೂ ಬೆಣ್ಣೆಹೊಳೆಗಳು ಸಿಗುತ್ತವೆ. ಈ ಮೂರು ಹೊಳೆಗಳಿಗೂ ಸೇತುವೆ ನಿರ್ಮಾಣ ಅತ್ಯಾವಶ್ಯಕವಾಗಿದೆ. ಜಲಗದ್ದೆ ಹಳ್ಳಕ್ಕೆ 20 ಅಡಿ ಉದ್ದದ, 12 ಅಡಿ ಅಗಲದ ಸೇತುವೆ, ಸಂಪೆಗದ್ದೆ ಹಳ್ಳಕ್ಕೆ 20 ಅಡಿ ಉದ್ದದ, 12 ಅಡಿ ಅಗಲದ ಸೇತುವೆಯ ಅಗತ್ಯವಿದೆ. ಬೆಣ್ಣೆಹೊಳೆಗೆ 60 ಮೀಟರ್ ಉದ್ದದ ಸೇತುವೆ ನಿರ್ಮಾಣವಾಗಬೇಕಿದೆ. ಬಿಳಿಜಡ್ಡಿಯಲ್ಲಿ ಈಶ್ವರ ದೇವಸ್ಥಾನವಿದೆ. ಈ ಊರಿಗೆ ತೆರಳುವ ಮಾರ್ಗದಲ್ಲಿಯೂ ಹಳ್ಳವೊಂದಿದ್ದು ಅದಕ್ಕೂ ಮೋರಿ ನಿರ್ಮಾಣ ಆಗಬೇಕಾಗಿದೆ. ಜಲಗದ್ದೆ ಹಳ್ಳದಿಂದ ಬೆಣಗಾಂವ ಕೂಡು ರಸ್ತೆಯವರೆಗೆ 4 ಕಿ.ಮಿ ಅಂತರವಿದ್ದು ರಸ್ತೆ ಸುಧಾರಣೆಯನ್ನು ಮಾಡಬೇಕಾದ ಅಗತ್ಯವಿದೆ. ಸ್ಥಳೀಯರು ಮಳೆಗಾಲದಲ್ಲಿ ಜಲಗದ್ದೆ ಹಳ್ಳದ ವರೆಗೆ ಪ್ರಯಾಸಪಟ್ಟು ವಾಹನ ಚಾಲನೆ ಮಾಡಿಕೊಂಡು ಬರುತ್ತಾರೆ. ಮಳೆಗಾಲ ಸೇರಿದಂತೆ 6 ತಿಂಗಳುಗಳ ಕಾಲ ಅಗತ್ಯವಾದ ವಸ್ತುಗಳನ್ನು ಬೇಸಿಗೆಯಲ್ಲಿಯೇ ಸಂಗ್ರಹಿಸಿ ಇಟ್ಟುಕೊಳ್ಳುವುದೂ ಈ ಗ್ರಾಮಸ್ಥರ ಕೆಲಸವಾಗಿದೆ. ಮಳೆಗಾಲದ ಮಧ್ಯದಲ್ಲಿಯೇ ಯಾವುದಾದರೂ ವಸ್ತುಗಳು ಖಾಲಿಯಾದರೆ ಗ್ರಾ
ಪ್ರತಿ ವರ್ಷ ಸ್ಥಳೀಯರು 80ಕ್ಕೂ ಅಧಿಕ ಆಳು ಖರ್ಚು ಮಾಡಿ ರಸ್ತೆಯನ್ನು ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ. ಪ್ರತಿವರ್ಷ ರಸ್ತೆ ದುರಸ್ತಿಗಾಗಿಯೇ 10 ಸಾವಿರ ರು.ಗೂ ಅಧಿಕ ಖರ್ಚು ತಗುಲುತ್ತಿದೆ. ರಸ್ತೆ ದುರಸ್ತಿ ಮಾಡಬೇಕಾಗಿದ್ದ ಗ್ರಾಮ ಪಂಚಾಯತ, ಸ್ಥಳೀಯ ಸಂಸ್ಥೆಗಳು ಈ ಕುರಿತು ಗಮನ ಹರಿಸುತ್ತಿಲ್ಲ. ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ. ಇದರಿಂದಾಗಿ ಜನಸಾಮಾನ್ಯರು ಹೈರಾಣಾಗಿ ಹೋಗಿದ್ದಾರೆ. ಹಳ್ಳಗಳಿಗೆ ಮೋರಿ ನಿರ್ಮಾಣ ಮಾಡಬೇಕು, ತಸ್ತೆ ದುರಸ್ತಿ ಮಾಡಿಸಿ ರಸ್ತೆಯ ಇಕ್ಕೆಲಗಳಲ್ಲಿಯೂ ಕಾಲುವೆಯನ್ನು ಮಾಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ. ಆದರೆ ಸ್ಥಳೀಯರ ಆಗ್ರಹಕ್ಕೆ ಮಾತ್ರ ಯಾವುದೇ ಕಿಮ್ಮತ್ತು ಸಿಗುತ್ತಿಲ್ಲ. ಮೂಲಭೂತ ಸೌಕರ್ಯ ಒದಗಿಸುವವರು ನಿದ್ರಿಸುತ್ತ ಕಾಲತಳ್ಳುತ್ತಿದ್ದಾರೆ.

***

(ತಮಾಷೆನೇ ಅಲ್ಲಾ..)
ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಿಕೊಡಬೇಕು ಎಂದು ಎರಡು ದಶಕಗಳಿಂದ ಆಗ್ರಹಿಸುತ್ತ ಬಂದಿದ್ದೇವೆ. ಒಮ್ಮೆ ಈ ಸೇತುವೆ ನಿರ್ಮಾಣಕ್ಕೆ ರೂಪುರೇಷೆ ನಡೆದು ಪೈಪುಗಳನ್ನೂ ಹಾಕಲಾಗಿತ್ತು. ಆದರೆ ಅಸಮರ್ಪಕ ನಿರ್ವಹಣೆಯಿಂದಾಗಿ ಮಳೆಗಾಲದಲ್ಲಿ ಪೈಪುಗಳು ಕೊಚ್ಚಿಕೊಂಡು ಹೋಗಿದ್ದವು. ನಂತರ ಹಾಕಲಾಗಿದ್ದ ಪೈಪನ್ನೂ ತೆಗೆಯಲಾಗಿದೆ. ಇದೀಗ ಹಳ್ಳದ ಮೂಲಕ ಸಂಚಾರ ಮಾಡುವುದು ಅಸಾಧ್ಯ ಎನ್ನುವಂತಾಗಿದೆ. ಕೂಡಲೇ ಸಂಬಂಧಪಟ್ಟವರು ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.
ಆನಂದು ಮರಾಠಿ
ದೇವಕಣಿ

**

ರಸ್ತೆ ಮಧ್ಯ ಸಿಗುವ ಯಾವ ಹಳ್ಳಗಳಿಗೂ ಸೇತುವೆಯಿಲ್ಲ. ಮಳೆಗಾಲದಲ್ಲಿ ಹಳ್ಳಗಳು ಉಕ್ಕೇರಿ ಹರಿಯುತ್ತವೆ. ಮಳೆಗಾಲದಲ್ಲಿ ಕನಿಷ್ಟ ಆರು ತಿಂಗಳುಗಳ ಕಾಲ ಈ ಎಲ್ಲ ಗ್ರಾಮಗಳು ಹೊರ ಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತವೆ. ಈ ಭಾಗದ ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ. ಮನವಿಗಳ ಮೇಲೆ ಮನವಿ ಸಲ್ಲಿಸಿ ಸಾಕಾಗಿದೆ. ನಮ್ಮ ಸಹನೆಯೂ ಬತ್ತಿಹೋಗಿದೆ. ಕೂಡಲೇ ಸಂಚಾರ ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಉಗ್ರ ಹೋರಾಟವನ್ನೂ ಮಾಡಲಾಗುತ್ತದೆ.
ಗಜಾನನ ಭಟ್ಟ
ಸಂಪೆಗದ್ದೆ


****

ಬಂಡಲ ಬವಣೆ
ಭಾಗ-2

(ಮುರಿದಿದೆ ವಿದ್ಯುತ್ ಕಂಬ)
ಬಂಡಲ ಪಂಚಾಯತ ವ್ಯಾಪ್ತಿಯ ಊರುಗಳ ಮೂಲ ಸೌಲಭ್ಯಗಳ ಕುರಿತಂತೆ ಜನಪ್ರತಿನಿಧಿಗಳು ಈವರೆಗೂ ಬಂಡಲ್ ಬಿಟ್ಟಿದ್ದೇ ಹೆಚ್ಚು. ಸಂಪೆಗದ್ದೆ-ಬೆಣಗಾಂವ್ ರಸ್ತೆಯ ದುಸ್ಥಿತಿ ಉಂಟುಮಾಡುತ್ತಿರುವ ಸಮಸ್ಯೆ ಒಂದೆರಡಲ್ಲ. ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡದ ಕಾರಣ ಹೆಬ್ರೆ ಗ್ರಾಮದ 7 ಹಳ್ಳಿಗಳ ಜನರು ನಿತ್ಯ ನರಕವನ್ನು ಅನುಭವಿಸುತ್ತಿದ್ದಾರೆ.
ಗಾಡನಗದ್ದೆ, ಸಂಪೆಗದ್ದೆ, ಹೊಸಹಾಡನಗದ್ದೆ, ಬಿಳಿಜಡ್ಡಿ, ದೇವಕಣಿ, ಯಡ್ಲಮನೆ, ಹಡನಗದ್ದೆ ಈ ಊರುಗಳ ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ರಾಗಿಹೊಸಳ್ಳಿಯನ್ನು ಅವಲಂಬಿಸಿದ್ದಾರೆ. 4-6 ಕಿ.ಮಿ ದೂರದಲ್ಲಿರುವ ರಾಗಿಹೊಸಳ್ಳಿಗೆ ಬರಬೇಕೆಂದರೆ ಕನಿಷ್ಟ 2 ಹಳ್ಳಗಳನ್ನು ದಾಟುವುದು ಅನಿವಾರ್ಯ. ಪ್ರಾಥಮಿಕ ಸಹಕಾರಿ ಸಂಘದ ಕೆಲಸಕ್ಕೆ, ಪಡಿತರ ಪಡೆಯಲು, ದವಸಧಾನ್ಯ ಕೊಳ್ಳಲು, ಬ್ಯಾಂಕ್ ವ್ಯವಹಾರ ಸೇರಿದಂತೆ ಅಗತ್ಯ ಕೆಲಸಗಳಿಗೆ ರಾಗಿಹೊಸಳ್ಳಿಗೆ ಬರಬೇಕು. ಈ ಊರುಗಳ ಮಕ್ಕಳು ಶಾಲೆಗೆ ಬರಬೇಕೆಂದರೂ ರಾಗಿಹೊಸಳ್ಳಿಗೇ ಆಗಮಿಸಬೇಕು. ಮಳೆಗಾಲದಲ್ಲಿ ಹಳ್ಳಗಳಲ್ಲಿ ನೀರು ಉಕ್ಕುವ ಕಾರಣ ಆರು ತಿಂಗಳುಗಳ ಕಾಲ ಈ ಗ್ರಾಮಗಳು ರಾಗಿಹೊಸಳ್ಳಿ ಹಾಗೂ ಹೊರ ಜಗತ್ತಿನ ಸಂಪರ್ಕದಿಂದ ವಂಚಿತವಾಗುತ್ತಿವೆ.
ವಿದ್ಯುತ್ ಸಮಸ್ಯೆ ಈ ಊರಿನ ಜ್ವಲಂತ ಸಮಸ್ಯೆಗಳಲ್ಲೊಂದು. ಮನಸ್ಸುಬಂದಾಗ ವಿದ್ಯುತ್ ಆಗಮಿಸುತ್ತದೆ. ಒಮ್ಮೆ ಹೋದ ವಿದ್ಯುತ್ ನಾಲ್ಕು-ಐದಿ ದಿನಗಳವರೆಗೆ ನಾಪತ್ತೆಯಾಗುತ್ತದೆ. ಮಳೆಗಾಲದಲ್ಲಂತೂ ವಿದ್ಯುತ್ ಸಮಸ್ಯೆಗೆ ಮುಕ್ತಿಯೇ ಇಲ್ಲ ಎನ್ನಬಹುದು. ದಟ್ಟ ಕಾಡಿನಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗದ ಮೇಲೆ ಮಳೆಗಾಲದಲ್ಲಿ ಮರ ಮುರಿದು ಬೀಳುವುದು, ಕೊಂಬೆಗಳು ತುಂಡಾಗಿ ವಿದ್ಯುತ್ ತಂತಿಯ ಮೇಲೆ ಬೀಳುವುದರಿಂದಾಗಿ ಕಗ್ಗತ್ತಲೆ ಎನ್ನುವುದು ಸರ್ವೇಸಾಮಾನ್ಯ ಎನ್ನುವಂತಾಗಿದೆ. ಮಳೆಗಾಲದಲ್ಲಿ ಗಾಳಿ, ಮಳೆಯ ರಭಸಕ್ಕೆ ವಿದ್ಯುತ್ ಕಂಬಗಳು ಸಾಲು ಸಾಲಾಗಿ ಮುರಿದು ಬೀಳುತ್ತವೆ. ಮಳೆಗಾಲದ ಆರಂಭದಲ್ಲಿ ಈ ಕಾರಣದಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾದರೆ ಮಳೆಗಾಲ ಕಳೆದು ಗ್ರಾಮಗಳಿಗೆ ತೆರಳುವ ಹಳ್ಳಗಳಲ್ಲಿ ಪ್ರವಾಹ ಕಡಿಮೆಯಾಗುವ ವರೆಗೂ ಈ ಕಂಬಗಳನ್ನು ಬದಲಾಯಿಸಲು, ತುಂಡಾದ ವಿದ್ಯುತ್ ತಂತಿಯನ್ನು ಸರಿಪಡಿಸಲು ಯಾರೂ ಆಗಮಿಸುವುದಿಲ್ಲ.
ಮುರಿದು ಬಿದ್ದ ವಿದ್ಯುತ್ ಕಂಬಗಳನ್ನು ಬದಲಾಯಿಸಲು ಹೆಸ್ಕಾಂ ಇಲಾಖೆಗೆ ಮನವಿ ಮಾಡಿಕೊಂಡರೂ ಬೆಲೆ ಸಿಗುತ್ತಿಲ್ಲ. ಊರಿಗೆ ತೆರಳುವ ಮಾರ್ಗ ಮಧ್ಯದ ಜಲಗದ್ದೆ ಹಳ್ಳ ಉಕ್ಕಿ ಹರಿಯುವ ಕಾರಣ  ಹೆಸ್ಕಾಂ ಇಲಾಖೆ ಹೊಸ ಕಂಬಗಳನ್ನು ಕಳಿಸಿದರೂ ವಾಹನವನ್ನು ಹಳ್ಳ ದಾಟಿಸಲಾಗದೇ ಕೈಚೆಲ್ಲುತ್ತಾರೆ. ಇದು ಕಳೆದ ನಾಲ್ಕೈದು ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ಮರುಕಳಿಸುತ್ತಿರುವ ಸಮಸ್ಯೆಯಾಗಿದೆ. ಬೇಸಿಗೆಯಲ್ಲೂ ವಿದ್ಯುತ್ ವೋಲ್ಟೇಜ್ ಸಮಸ್ಯೆ ತೀವ್ರವಾಗಿದೆ. ಸಿಂಗಲ್ ಫೇಸ್ ಗಿಂತ ಹೆಚ್ಚಿನ ವಿದ್ಯುತ್ ಬಂದಿದ್ದೇ ಇಲ್ಲ. ಇದರಿಂದಾಗಿ ರೈತಾಪಿ ವರ್ಗ ಹೈರಾಣಾಗಿದೆ. ತಮ್ಮ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಮನೆಯಲ್ಲಿ ಮಿಕ್ಸರ್‌ಗಳಿದ್ದರೂ ಅವುಗಳ ಬಳಕೆಗೆ ಸಿಂಗಲ್ ಫೇಸ್ ವಿದ್ಯುತ್ ಸಾಕಾಗುವುದಿಲ್ಲ. ಹೆಸ್ಕಾಂ ಇಲಾಖೆಗೆ ಹಾಗೂ ರಸ್ತೆ ಸರಿಪಡಿಸದ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕಿ ಸುಸ್ತಾಗಿದ್ದಾರೆ.
(ತಲೆ ಹೊರೆಯೇ ಅನಿವಾರ್ಯ)
ಈ ಗ್ರಾಮಗಳ ವ್ಯಾಪ್ತಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆಯೊಂದಿತ್ತು. ಆದರೆ ರಸ್ತೆ ದುರವಸ್ಥೆಯ ಕಾರಣ ಈ ಶಾಲೆಗೆ ಶಿಕ್ಷಕರು ಆಗಮಿಸುವುದು ದುಸ್ತರವಾಗುತ್ತಿತ್ತು. ಮಕ್ಕಳ ಸಂಖ್ಯೆಯೂ ಕಡಿಮೆಯಿದ್ದ ಕಾರಣ ಕಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲಾಗಿದೆ. ಇದೀಗ ಅನಿವಾರ್ಯವಾಗಿ 6 ಕಿ.ಮಿ ದೂರದ ರಾಗಿಹೊಸಳ್ಳಿ ಶಾಲೆಯನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ 6 ಕಿ.ಮಿ ದೂರದ ಬೆಣಗಾಂವ್ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಬೇಕು. ಪ್ರೌಢಶಾಲೆಗೆ ಹೋಗಬೇಕೆಂದರೆ ಕನಿಷ್ಟ 8 ಕಿ.ಮಿ ಸಾಗಲೇಬೇಕು. 8 ಕಿ.ಮಿ ದೂರದಲ್ಲಿರುವ ಬಂಡಲದ ಪ್ರೌಢಶಾಲೆ ಅಥವಾ 13 ಕಿ.ಮಿ ದೂರದಲ್ಲಿರುವ ದೇವನಳ್ಳಿಯ ಪ್ರೌಢಶಾಲೆಗೆ ತೆರಳಬೇಕಾದ ದುಸ್ಥಿತಿ ಈ ಗ್ರಾಮಗಳ ಮಕ್ಕಳದ್ದಾಗಿದೆ. ಮಳೆಗಾಲದಲ್ಲಿ ಉಕ್ಕೇರುವ ಹಳ್ಳ ದಾಟಲು ಯತ್ನಿಸಿ ಮಕ್ಕಳು ನೀರುಪಾಲಾಗುವ ಸಾಧ್ಯತೆಗೂ ತೀವ್ರವಾಗಿದೆ. ಈ ಬವಣೆಯನ್ನು ತಪ್ಪಿಸಬೇಕು, ಮಕ್ಕಳಿವೆ ವಿದ್ಯಾಭ್ಯಾಸ ನೀಡಬೇಕೆನ್ನುವ ಕಾರಣಕ್ಕಾಗಿ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು, ಸಂಬಂಧಿಕರ ಮನೆಗಳಲ್ಲಿಯೋ, ಪರಿಚಯಸ್ತರ ಮನೆಯಲ್ಲಿಯೋ ಮಕ್ಕಳನ್ನು ಬಿಟ್ಟು ಶಾಲೆ, ಪ್ರೌಢಶಾಲೆಗಳೀಗೆ ಕಳಿಸುತ್ತಿದ್ದಾರೆ.
ರಾಗಿಹೊಸಳ್ಳಿಯಲ್ಲಿ ಪೋಸ್ಟ್ ಇದೆ. ಇಲ್ಲಿ ಕೆಲಸ ಮಾಡುವ ಪೋಸ್ಟ್ ಮನ್ ಒಳ್ಳೆಯವರು. ಹೇಗಾದರೂ ಮಾಡಿ ಪತ್ರಗಳನ್ನು ಸಂಬಂಧಪಟ್ಟವರಿಗೆ ತಲುಪಿಸಬೇಕೆಂದು ಪ್ರಯತ್ನಿಸುತ್ತಾರೆ. ಆದರೆ ಅಸಮರ್ಪಕ ರಸ್ತೆ, ಮಳೆಗಾಲದಲ್ಲಿ ಉಕ್ಕೇರುವ ಹಳ್ಳ ಪೋಸ್ಟ್‌ಮನ್ ಗಳಿಗೂ ಸಮಸ್ಯೆಯನ್ನು ಒಡ್ಡುತ್ತಿದೆ. ಮಾಸಾಶನ, ಪತ್ರಗಳು ಸೇರಿದಂತೆ ತ್ವರಿತವಾಗಿ ವಿಲೇವಾರಿ ಮಾಡಬೇಕಾದ ಪತ್ರಗಳನ್ನು ನಿಗದಿತ ಸ್ಥಳಕ್ಕೆ ತಲುಪಿಬೇಕೆಂದರೆ ಈ ಊರಿನ ರಸ್ತೆಗಳು ಹಾಳಾಗಿರುತ್ತವೆ. ಇಲ್ಲವೇ ರಸ್ತೆ ಮಧ್ಯದಲ್ಲಿ ಮರಗಳು ಉರುಳಿ ಬಿದ್ದಿರುತ್ತವೆ. ಮಳೆಗಾಲದಲ್ಲಿ ಹಳ್ಳದಾಟುವುದು ಅಸಾಧ್ಯ ಎನ್ನುವಂತಾಗಿದೆ. ಹೀಗಾಗಿ ಅನಿವಾರ್ಯ ಸಂದರ್ಭಗಳಲ್ಲಿ ಪತ್ರಗಳು ನಿಗದಿತ ಸ್ಥಳ ತಲುಪಲು ವಿಳಂಬವಾಗಿದ್ದೂ ಇದೆ.
(ಸ್ಥಳೀಯರೇ ಮಾಡಿಕೊಂಡ ಕಾಲುಸಂಕ)
ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವಾಗಿರುವ ರಸ್ತೆಯನ್ನು ಸರಿಪಡಿಸಬೇಕು. 7 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಬೇಕು. ತನ್ಮೂಲಕ ಈಗ ಉಂಟಾಗುತ್ತಿರುವ ಶಿಕ್ಷಣ, ವಿದ್ಯುತ್, ಪಡಿತರ, ಬ್ಯಾಂಕ್, ಪೋಸ್ಟ್ ಈ ಮುಂತಾದ ಎಲ್ಲ ಸಮಸ್ಯೆಗಳಿಗೂ ಪೂರ್ಣವಿರಾಮ ಹಾಕಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ. ಜನಪ್ರತಿನಿಧಿಗಳು ಈ ಸಮಸ್ಯೆಗೆ ಸ್ಪಂದಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗುತ್ತದೆ.

***

ರಸ್ತೆ ಸಮಸ್ಯೆಯ ಕಾರಣ ಕೆಲವೊಮ್ಮೆ 50ಕೆ.ಜಿ.ಗೂ ಅಧಿಕ ಭಾರದ ವಸ್ತುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಬರಬೇಕಾಗುತ್ತದೆ. 5-6 ಕಿ.ಮಿ ನಡೆದು ಹಳ್ಳಗಳನ್ನು ದಾಟಿ, ಕಾಡಿನ ದಾರಿಯಲ್ಲಿ ಬರಬೇಕೆಂದರೆ ಹರಸಾಹಸವನ್ನೇ ಮಾಡಬೇಕು. ಸುತ್ತಮುತ್ತಲ ಊರುಗಳಿಗೆ ಅಗತ್ಯ ವಸ್ತುಗಳು ಲಭ್ಯವಾಗುವ ರಾಗಿಹೊಸಳ್ಳಿಗೆ ಮಳೆಗಾಲದಲ್ಲಿ ಹೋಗುವುದು ಬಹು ಕಷ್ಟದ ಕೆಲಸ
ಗಣಪತಿ ಮರಾಠಿ
ಯಡ್ಲಮನೆ

***

(ಇಂತಹ ರಸ್ತೆಗಳು ಇನ್ನೂ ಇದೆ..)
ಬೇಸಿಗೆಯಲ್ಲೂ ನಮ್ಮೂರಿನಲ್ಲಿ ವಿದ್ಯುತ್ ಸಮಸ್ಯೆ ಪರಿಹಾರವಾಗುವುದಿಲ್ಲ. ಯಾವಾಗಲೂ ಸಿಂಗಲ್ ಫೇಸ್ ವಿದ್ಯುತ್ ಇರುತ್ತದೆ. ಮಿಕ್ಸರ್ ಕೂಡ ಕೆಲಸ ಮಾಡುವುದಿಲ್ಲ. ಮಳೆಗಾಲದಲ್ಲಿ ಆರು ತಿಂಗಳುಗಳ ಕಾಲ ವಿದ್ಯುತ್ ನಾಪತ್ತೆ ಎನ್ನುವಂತಹ ಪರಿಸ್ಥಿತಿಯಿದೆ. ಕೂಡಲೇ ಈ ಸಮಸ್ಯೆಗಳನ್ನು ಪರಿಹಾರ ಮಾಡಬೇಕಾದ ಅಗತ್ಯವಿದೆ.
ಮಂಜುನಾಥ ಹೆಗಡೆ
ಗಾಡನಗದ್ದೆ

***

ಬಂಡಲ ಬವಣೆ
ಭಾಗ-3

ತಾಲೂಕಿನ ಬಂಡಲ ಪಂಚಾಯತದ ಹೆಬ್ರೆ ಗ್ರಾಮದ ಜಲಗದ್ದೆ ಮಜರೆಯಲ್ಲಿ ಆರೋಗ್ಯ ಸಮಸ್ಯೆ ತೀವ್ರವಾಗಿದೆ. ಇಲ್ಲಿನ ಜನಸಾಮಾನ್ಯರು ಖಾಯಿಲೆ ಬಿದ್ದರೆ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಹರಸಾಹಸ ಪಡಬೇಕಾದಂತಹ ಸ್ಥಿತಿಯಿದೆ.
ಹೆಬ್ರೆ ಗ್ರಾಮದ ವ್ಯಾಪ್ತಿಯ ಸಂಪೆಗದ್ದೆ, ಗಾಡನಗದ್ದೆ, ಹೊಸಹಾಡನಗದ್ದೆ, ಯಡ್ಲಮನೆ, ದೇವಕಣಿ, ಬಿಳಿಜಡ್ಡಿ, ಹಡನಗದ್ದೆ ಈ ಎಲ್ಲ ಹಳ್ಳಿಗಳಲ್ಲಿ ವೃದ್ಧರು, ಖಾಯಿಲೆ ಪೀಡಿತರಿದ್ದಾರೆ. 40-50 ವೃದ್ಧರು ಹಾಗೂ 15-20ರಷ್ಟು ಕಾಯಿಲೆ ಪೀಡಿತರು ಇದ್ದಾರೆ. ಅಂಧರು, ಪಾರ್ಕಿನ್‌ಸನ್ ಖಾಯಿಲೆ ಪೀಡಿತರು, ಅಸ್ತಮಾ, ಸೇರಿದಂತೆ ಹಲವಾರು ಖಾಯಿಲೆಗಳಿಂದ ಬಳಲುತ್ತಿರುವವರೂ ಇದ್ದಾರೆ. ವಯೋಸಹಜ ಖಾಯಿಲೆಗಳನ್ನು ಅನುಭವಿಸುತ್ತಿರುವವರೂ ಹಲವು ಜನ. ಆದರೆ ಇವರನ್ನು ಆಸ್ಪತ್ರೆಗೆ ಕೊಂಡೊಯ್ಯುವುದೆಂದರೆ ಸಾಹಸ ಮಾಡಿದಂತೆಯೇ.
ಈ ಎಲ್ಲ ಊರುಗಳಿಗೆ ಹತ್ತಿರದ ಆಸ್ಪತ್ರೆಯೆಂದರೆ ಜಾನ್ಮನೆಯ ಪ್ರಾಥಮಿಕ ಆರೋಗ್ಯ ಕೇಂದ್ರ. ಜಾನ್ಮನೆಗೆ 20 ಕಿ.ಮಿ ಪ್ರಯಾಣ ಮಾಡಬೇಕು. ಇನ್ನುಳಿದಂತೆ ಹೆಗಡೇಕಟ್ಟಾ ಅಥವಾ ಕತಗಾಲಕ್ಕೆ ಪ್ರಯಾಣ ಮಾಡಬೇಕು. ಕತಗಾಲಕ್ಕೆ ಹಾಗೂ ಹೆಗಡೇಕಟ್ಟಾದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಬೇಕೆಂದರೆ ಕನಿಷ್ಟ 25 ಕಿ.ಮಿ ಪ್ರಯಾಣ ಮಾಡುವುದು ಅನಿವಾರ್ಯ. ತೀವ್ರ ಪ್ರಮಾಣದ ಖಾಯಿಲೆಗಳಾಗಿದ್ದರೆ 40 ಕಿ.ಮಿ ದೂರದಲ್ಲಿರುವ ಶಿರಸಿ ಅಥವಾ ಕುಮಟಾಕ್ಕೆ ಹೋಗಿ ಬರಲೇಬೇಕಾದ ಅನಿವಾರ್ಯತೆಯಿದೆ. ಇದರಿಂದಾಗಿ ಸ್ಥಳೀಯರು ಹೈರಾಣಾಗಿದ್ದಾರೆ.
(ಬರೀ ಕಾಡಿನ ದಾರಿ)
ಮಳೆಗಾಲ ಬಂತೆಂದರೆ ಈ ಊರುಗಳ ಜನಸಾಮಾನ್ಯರು, ವೃದ್ಧರು, ಖಾಯಿಲೆ ಪೀಡಿತರು ಜೀವಭಯದಿಂದ ಬದುಕಬೇಕಾಗುತ್ತದೆ. ಮಳೆಗಾಲದಲ್ಲಿ ಕಾಡುವ ಜ್ವರ ಮುಂತಾದ ಖಾಯಿಲೆಗಳಿಗೆ ಔಷಧಿ ಪಡೆಯಬೇಕೆಂದರೆ ಜಾನ್ಮನೆಗೋ, ಹೆಗಡೇಕಟ್ಟಾಕ್ಕೋ, ಶಿರಸಿಗೋ ಹೋಗಿ ಬರಬೇಕು. ಅಸಮರ್ಪಕ ರಸ್ತೆ ಸೌಕರ್ಯದ ಕಾರಣ ಮಳೆಗಾಲದಲ್ಲಿ ಈ ಊರುಗಳಿಗೆ ಯಾವುದೇ ವಾಹನಗಳೂ ಆಗಮಿಸುವುದಿಲ್ಲ. ಜಲಗದ್ದೆ ಹಳ್ಳ ಉಕ್ಕಿ ಹರಿಯುವ ಕಾರಣ ಊರಿಗೂ ಹೊರ ಜಗತ್ತಿಗೂ ಸಂಪರ್ಕ ಕಡಿದುಹೋಗುತ್ತದೆ. ಅಲ್ಲದೇ ದಟ್ಟಡವಿಯಲ್ಲಿ ರಸ್ತೆಗೆ ಅಡ್ಡಲಾಗಿ ಮರಗಳು ಉರುಳಿಬಿಳುತ್ತಿರುತ್ತದೆ. ಖಾಯಿಲೆ ಪೀಡಿತರನ್ನು ಇಂತಹ ಸಂದರ್ಭದಲ್ಲಿ ಕಂಬಳಿಯಲ್ಲಿ ಹೊತ್ತುಕೊಂಡು 4-5 ಕಿ.ಮಿ ನಡೆದು ಮುಖ್ಯ ರಸ್ತೆಗೆ ಬಂದು ಅಲ್ಲಿ ವಾಹನಗಳಿಗೆ ಕಾದು ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದಂತಹ ದುಸ್ಥಿತಿ ಈ ಗ್ರಾಮಗಳಲ್ಲಿ ಇದೆ. ಬೇಸಿಗೆಯಲ್ಲಿಯೂ ಈ ಗ್ರಾಮಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ.
ಯಡ್ಲಮನೆ ಎಂಬಲ್ಲಿ ಒಂದೇ ಮನೆಯಲ್ಲಿ ಮೂವರು ಅಂಧರಿದ್ದಾರೆ. ತಂದೆ ಹಾಗೂ ಇಬ್ಬರು ಹೆಣ್ಣುಮಕ್ಕಳಿಗೆ ಕಣ್ಣು ಕಾಣಿಸುವುದಿಲ್ಲ. ಸರ್ಕಾರ ಇವರಿಗೆ ಅಂಗವಿಕಲರ ಮಾಸಾಶನವನ್ನು ನೀಡುತ್ತಿದೆ. ಆದರೆ ಇದನ್ನು ತೆಗೆದುಕೊಂಡು ಬರುವುದೇ ಪ್ರಾಯಾಸದ ಕೆಲಸವಾಗಿದೆ. ಮಾಸಾಶನ ಪಡೆಯಲು ಕನಿಷ್ಟ 4-5 ಕಿ.ಮಿ ನಡೆದುಕೊಂಡು ಹೋಗುವುದು ಅನಿವಾರ್ಯ. ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತ, ರಸ್ತೆಯಲ್ಲಿ ಏಳುತ್ತ-ಬೀಳುತ್ತ ಮಾಸಾಶವನ್ನು ತೆಗೆದುಕೊಂಡು ಬರುತ್ತಿದ್ದಾರೆ.
ಈ ಗ್ರಾಮಗಳಲ್ಲಿನ ವೃದ್ಧರು ಹಾಗೂ ಖಾಯಿಲೆಪೀಡಿತರ ಕಡೆಗೆ ಜನಪ್ರತಿನಿಧಿಗಳು, ಆಳರಸರು ಕನಿಕರ ತೋರುತ್ತಿಲ್ಲ ಎನ್ನುವ ಆರೋಪ ವ್ಯಾಪಕವಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ರಸ್ತೆ ಸುಧಾರಣೆಗೆ ಮುಂದಾಗುತ್ತಿಲ್ಲ, ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡುತ್ತಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಸರ್ಕಾರ ಆರೋಗ್ಯ ಭಾಗ್ಯವನ್ನು ಘೋಷಣೆ ಮಾಡಿದೆ. ಆದರೆ ಈ ಗ್ರಾಮಸ್ಥರ ಪಾಲಿಗೆ ಈ ಭಾಗ್ಯ ಸಿಗುತ್ತಿಲ್ಲ. ಮುಂದುವರಿದ ಕ್ಷೇತ್ರದ ಹಿಂದುಳಿದ ಪ್ರದೇಶದಲ್ಲಿ ಈ ಜನರಿದ್ದಾರೆ. ಸರ್ಕಾರ ಈ ಕುರಿತು ತ್ವರಿತವಾಗಿ ಕ್ರಮಕೈಗೊಳ್ಳಬೇಕಾಗಿದೆ.
(ವಾಹನ ರಿಪೇರಿ ಸ್ಥಳೀಯರದ್ದೇ..)
ಈ ಭಾಗದಲ್ಲಿ ಬೆಣ್ಣೆಹೊಳೆ ಹಾದು ಹೋಗಿದೆ. ಬೆಣ್ಣೆಹೊಳೆಯನ್ನು ದಾಟಲು ಸ್ಥಳೀಯರು ಕಾಲು ಸಂಕವನ್ನು ಮಾಡಿಕೊಂಡ್ಡಿದ್ದಾರೆ. ಮರ, ಬಿದಿರು, ಕಾಡುಬಳ್ಳಿಗಳಿಂದ ನಿರ್ಮಾಣ ಮಾಡಿರುವ ಕಾಲುಸಂಕ ಒಂದು ವರ್ಷದ ಅವಧಿಯಲ್ಲಿ ಹಾಳಾಗಿ ಹೋಗುತ್ತಿದೆ. ಪ್ರತಿ ಸಾರಿ ಮಳೆಗಾಲ ಆರಂಭವಾಗುವ ಮೊದಲು ಮತ್ತೆ ಕಾಲುಸಂಕ ನಿರ್ಮಾಣ ಮಾಡಿಕೊಳ್ಳುತ್ತಾರೆ. ಉಕ್ಕೇರಿ ಹರಿಯುತ್ತಿರುವ ಬೆಣ್ಣೆಹೊಳೆಯ ಸೇತುವೆಯನ್ನು ಈ ಕಾಲುಸಂಕದ ಸಹಾಯದಿಂದ ದಾಟುತ್ತಿದ್ದರೆ ಜೀವ ಕೈಗೆ ಬರುತ್ತದೆ. ಖಾಯಿಲೆ ಪೀಡಿತರನ್ನೂ ಈ ಕಾಲುಸಂಕದ ಮೇಲೆ ಕಂಬಳಿಯಲ್ಲೇ ಹೊತ್ತುಕೊಂಡು ಸಾಗುತ್ತಾರೆ. ಈ ಭಾಗದಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳು ಇವರ ಸಹಾಯಕ್ಕೆ ಬರುತ್ತುಲ್ಲ. ಇದು ಆಡಳಿತ ಯಂತ್ರ ಜಡ್ಡುಗಟ್ಟಿರುವುದಕ್ಕೆ ಸ್ಪಷ್ಟ ನಿದರ್ಶನ ಎನ್ನಬಹುದಾಗಿದೆ.

***

ನಮ್ಮ ಭಾಗದಲ್ಲಿ ವೃದ್ಧರು ಹಾಗೂ ಖಾಯಿಲೆ ಪೀಡಿತರ ಸಂಖ್ಯೆ ಸಾಕಷ್ಟಿದೆ. ಮಳೆಗಾಲ ಬಂತೆಂದರೆ ಭಯವಾಗುತ್ತದೆ. ಮಳೆಗಾಲದಲ್ಲಿ ಖಾಯಿಲೆಯಿಂದ ಹಾಸಿಗೆ ಹಿಡಿದರೆ ಔಷಧಿ ಮಾಡಿಸೋಣ, ಆಸ್ಪತ್ರೆಗೆ ಹೋಗೋಣ ಎಂದರೂ ಸಾಧ್ಯವಾಗುವುದಿಲ್ಲ. ರಸ್ತೆ ಸರಿಯಿಲ್ಲ. ಜಲಗದ್ದೆ, ಬಿಳಿಜಡ್ಡಿ ಹಳ್ಳಗಳಿಗೆ ಸೇತುವೆಯೇ ಇಲ್ಲ. ಉಕ್ಕೇರಿ ಹರಿಯುವ ಹಳ್ಳಗಳನ್ನು ದಾಟಲು ಸಾಧ್ಯವಾಗದೇ ಅಸಹಾಯಕರಾದ ಸನ್ನಿವೇಶ ಎಷ್ಟೋ ಸಾರಿ ಎದುರಾಗಿದೆ. ಕೂಡಲೇ ಸರ್ಕಾರ ಈ ಸಮಸ್ಯೆ ಪರಿಹಾರ ಮಾಡಬೇಕಿದೆ.
ಮಾಬ್ಲೇಶ್ವರ ಹೆಗಡೆ
ಬಿಳಿಜಡ್ಡಿ

***
(ರಸ್ತೆ ಮಧ್ಯ ಮರ ಬೀಳುವುದು ಇಲ್ಲಿ ಕಾಮನ್ನು)

ನಮ್ಮ ಭಾಗದ ಜನಪ್ರತಿನಿಧಿಗಳು ಚುನಾವಣೆ ಬಂತೆಂದರೆ ಸಾಕು ನಮ್ಮೂರಿನ ಕಡೆಗೆ ಮುಖ ಮಾಡುತ್ತಾರೆ. ಉಳಿದ ಸಮಯದಲ್ಲಿ ನಮ್ಮ ಸಮಸ್ಯೆಗಳು ಅವರ ಕಣ್ಣಿಕೆ ಕಾಣಿಸುವುದೇ ಇಲ್ಲ. ಸ್ಥಳೀಯರಿಂದ ಹಿಡಿದು ಎಲ್ಲ ಹಂತದ ಜನಪ್ರತಿನಿಧಿಗಳಿಗೆ ನಾವು ಮನವಿಗಳ ಮೇಲೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಪ್ರತಿಯೊಬ್ಬರೂ ಭರವಸೆ ನೀಡುತ್ತಲೇ ಇದ್ದಾರೆ. ನಮ್ಮ ಭಾಗದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.
ರತ್ನಾಕರ
ಯಡ್ಲಮನೆ

****

ಬಂಡಲ ಬವಣೆ
ಭಾಗ-4

ತಾಲೂಕಿನ ಬಂಡಲ ಪಂಚಾಯತದ ಜಲಗದ್ದೆಯ ಸುತ್ತಮುತ್ತಲ ಪ್ರದೇಶಗಳ ಸಮಸ್ಯೆಗಳು ಬಗೆದಷ್ಟೂ ಹೊರಬೀಳುತ್ತಿವೆ. ದೂರವಾಣಿ ಸಮಸ್ಯೆಯೂ ಈ ಗ್ರಾಮಗಳನ್ನು ಜ್ವಲಂತವಾಗಿ ಕಾಡುತ್ತಿದೆ. ಸಮಸ್ಯೆ ಪರಿಹಾರಕ್ಕಾಗಿ ಮನವಿಗಳ ಮೇಲೆ ಮನವಿ ಸಲ್ಲಿಸಿ ಸಾಕಾಗಿದೆ.
ಜಲಗದ್ದೆ ಗ್ರಾಮದ ಸುತ್ತಮುತ್ತಲ 7 ಗ್ರಾಮಗಳಲ್ಲಿ ಒಂದೋ ಎರಡೋ ಮನೆಗೆ ದೂರವಾಣಿ ಸಂಪರ್ಕ ಕಲ್ಪಿಸಲಾಗಿದೆ. ಉಳಿದ ಹಲವಾರು ಮನೆಗಳವರು ದೂರವಾಣಿ ಸಂಪರ್ಕ ಕಲ್ಪಿಸಬೇಕೆಂದು ಮನವಿ ಸಲ್ಲಿಸಿ ಸುಸ್ತಾಗಿದ್ದಾರೆ. ಆದರೆ ಈ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಬಂಡಲದಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಇದೆ. ಆದರೆ ಮೊಬೈಲ್ ಸಿಗ್ನಲ್ ಈ ಊರುಗಳಲ್ಲಿ ಸಿಗುವುದಿಲ್ಲ. ಕೆಲವು ಕಡೆಗಳಲ್ಲಿ ಮರದ ಮೇಲೆ ಏರಿ ನಿಂತರೆ ಸಿಗ್ನಲ್ ಸಿಗುತ್ತದೆ. ಒಂದಿಬ್ಬರು ಮರವನ್ನೇರಿ ಮೊಬೈಲಿನಲ್ಲಿ ಮಾತನಾಡುವ ಸಾಹಸವನ್ನೂ ಮಾಡಿದ್ದಾರೆ. ಈ ಭಾಗದ ದೂರವಾಣಿ ಸಮಸ್ಯೆ ಪರಿಹಾರ ಮಾಡಬೇಕು, ಮನವಿ ಸಲ್ಲಿಸಿದವರಿಗೆ ಸ್ಥಿರ ದೂರವಾಣಿ ಸಂಪರ್ಕ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
(ಬದುಕ ಕದಡಿದೆ ಬೆಣ್ಣೆಹೊಳೆ)
ಸಂಪೆಗದ್ದೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನ ಕೆಟ್ಟು ನಿಂತರೆ ಅದನ್ನು ಸರಿಪಡಿಸಲು ಯಾರೂ ಆಗಮಿಸುವುದಿಲ್ಲ. ಬೈಕ್ ಹಾಳಾದರೆ, ಪಂಚರ್ ಆದರೆ 6-7 ಕಿ.ಮಿ ದೂರದಿಂದ ವಾಹನ ಸರಿಪಡಿಸುವವರನ್ನು ಕರೆದುಕೊಂಡು ಬರಬೇಕು. ಸಮಯಕ್ಕೆ ಸರಿಯಾಗಿ ಅವರು ಸಿಗುವುದೂ ಇಲ್ಲ. ಇದರಿಂದಾಗಿ ಸ್ಥಳೀಯರೇ ವಾಹನಗಳನ್ನು ಕಷ್ಟಪಟ್ಟು ಸರಿಪಡಿಸಿಕೊಳ್ಳಲು ಆರಂಭಿಸಿದ್ದಾರೆ. ವಾಹನಗಳು ಹಾಳಾದಾಗ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವುದು ಸರ್ವೇಸಾಮಾನ್ಯ ಎನ್ನುವಂತಾಗಿದೆ.
ತಾಲೂಕಿನ ಬಂಡಲ ಪಂಚಾಯತ ವ್ಯಾಪ್ತಿಯ ಹೆಬ್ರೆ ಗ್ರಾಮಕ್ಕೆ 1995-96ರಿಂದ 16,11,300 ರು. ವೆಚ್ಚದಲ್ಲಿ 56 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ ಜಲಗದ್ದೆ ಮಜರೆಯ 7 ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿಲ್ಲ. ಜಲಗದ್ದೆ ಮಜರೆಗೆ ಸಂಬಂಧಿಸಿದಂತೆ 2002-03ರಲ್ಲಿ ಜಲಗದ್ದೆ ಮೇಲಿನಕೇರಿ ರಸ್ತೆ ಸುಧಾರಣೆಗೆ ಸಂಬಂಧಿಸಿದಂತೆ 6250 ರು., 2011-12ರಲ್ಲಿ ಜಲಗದ್ದೆಯಲ್ಲಿ ಜಲಗದ್ದೆ ಕೇರಿ ಪಾದಚಾರಿ ರಸ್ತೆ ನಿರ್ಮಾಣಕ್ಕೆ 30,000 ರು., 2011-12ರಲ್ಲಿ ಜಲಗದ್ದೆ ಕೇರಿ ಪಾದಚಾರಿ ರಸ್ತೆ ನಿರ್ಮಾಣಕ್ಕೆ ಹೆಚ್ಚುವರಿ 40,000 ರು., 2012-13ರಲ್ಲಿ ಜಲಗದ್ದೆ ಕೇರಿ ರಸ್ತೆ ನಿರ್ಮಾಣಕ್ಕೆ 30,000 ರು., 2013-14ರಲ್ಲಿ ಜಲಗದ್ದೆ ರಸ್ತೆ ಸುಧಾರಣೆಗೆ ಮುಂದುವರದಿದ ಕಾಮಗಾರಿಯ ಹೆಸರಿನಲ್ಲಿ 10,000 ರು. ಮಂಜೂರು ಮಾಡಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಜಲಗದ್ದೆ ಮಜರೆಯ ಅಡಿಯಲ್ಲಿ ಜಲಗದ್ದೆಯನ್ನು ಹೊರತುಪಡಿಸಿ ಸಂಪೆಗದ್ದೆ, ಹಡನಗದ್ದೆ, ಬಿಳಿಜಡ್ಡಿ, ದೇವಕಣಿ, ಗಾಡನಗದ್ದೆ, ಯಡ್ಲಮನೆ ಈ ಊರುಗಳು ಬರುತ್ತವೆ. ಆದರೆ ಈ ಊರುಗಳಿಗೆ ತೆರಳುವ ರಸ್ತೆಗಳಿಗೆ ಒಂದೇ ಒಂದು ರು. ಖರ್ಚು ಮಾಡಲಾಗಿಲ್ಲ ಎನ್ನುವುದನ್ನು ಬಂಡಲ ಗ್ರಾಮ ಪಂಚಾಯತದ ದಾಖಲೆಗಳೇ ಮಾಹಿತಿ ನೀಡುತ್ತವೆ.
ಅಲ್ಲದೇ ಪಂಚಾಯತ ವ್ಯಾಪ್ತಿಯ ಯಟಗಾರ ಹಾಗೂ ಮುಂಡಗಾರಗಳಲ್ಲಿ ಜಿಲ್ಲಾ ಪಂಚಾಯತ ಹಾಗೂ ತಾಲೂಕಾ ಪಂಚಾಯತ ಅನುದಾನದ ಅಡಿಯಲ್ಲಿ ಕಾಲುಸಂಕ, ಕುಡಿಯುವ ನೀರು, ಝರಿ ನೀರು ಯೋಜನೆ, ರಸ್ತೆ ಸುಧಾರಣೆ, ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವುದೂ ಸೇರಿದಂತೆ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಆದರೆ ಸಂಪೆಗದ್ದೆ ಹಾಗೂ ಸುತ್ತಮುತ್ತಲ ಊರುಗಳಿಗೆ ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳದೇ ಇರುವುದನ್ನು ಗಮನಿಸಿದರೆ ಈ ಭಾಗದ ಜನಪ್ರತಿನಿಧಿಗಳು ಉದ್ದೇಶಪೂರ್ವಕವಾಗಿ ತಾರತಮ್ಯ ಮಾಡುತ್ತಿರುವುದು ಸ್ಪಷ್ಟವಾಗಿದೆ. ಈ ಗ್ರಾಮಗಳಲ್ಲಿನ ಸಮಸ್ಯೆಗಳ ಕುರಿತು ಸರಣಿ ಲೇಖನ ಪ್ರಕಟಿಸಲು ಆರಂಭಿಸಿದ ತಕ್ಷಣ ಎಚ್ಚೆತ್ತುಕೊಂಡಂತೆ ನಟನೆ ಮಾಡುತ್ತಿರುವ ಜನಪ್ರತಿನಿಧಿಗಳು ಇದೀಗ ಹಣ ಬಿಡುಗಡೆಯಾಗಿದೆ ಎಂದು ಹೇಳುತ್ತಿದ್ದಾರೆ.
(ಸ್ಥಳೀಯರ ನಿವಾಸ)
ಇದೀಗ ಪಂಚಾಯತ ವ್ಯಾಪ್ತಿಯ ಸಂಪೆಗದ್ದೆಯ ರಸ್ತೆ ಸುಧಾರಣೆಗೆ 40 ಸಾವಿರ ರು. ಮಂಜೂರಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಇಂಜಿನಿಯರ್ ಸ್ಥಳ ಪರಿಶೀಲನೆ ಮಾಡಿಕೊಂಡು ಬಂದಿದ್ದಾರೆ. ಶೀಘ್ರದಲ್ಲಿಯೇ ರಸ್ತೆ ಸುಧಾರಣೆ ಕಾಮಗಾರಿ ಆರಂಭಿಸಲಾಗುತ್ತದೆ ಎಂದೂ ಭರವಸೆ ನೀಡಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಜಲಗದ್ದೆ ಹಳ್ಳದಿಂದ ಸಂಪೆಗದ್ದೆ ರಸ್ತೆ ಸುಧಾರಣೆಗಾಗಿ ಹಣ ಬಿಡುಗಡೆಯಾಗಿತ್ತು. ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳಿಗೂ ಅನುದಾನ ಬಂದಿತ್ತು. ಆ ಸಂದರ್ಭದಲ್ಲಿ ಸ್ಥಳೀಯ ತಾ.ಪಂ ಸದಸ್ಯರೋರ್ವರು ಸ್ಥಳೀಯರನ್ನು ಎತ್ತಿಕಟ್ಟುವ ಮೂಲಕ ಕಾಮಗಾರಿ ಕೈಗೊಳ್ಳಲು ಅಡ್ಡಗಾಲು ಹಾಕಿದರು. ಪರಿಣಾಮವಾಗಿ ರಸ್ತೆ ಸುಧಾರಣೆಗೆ ಮಂಜೂರಾಗಿದ್ದ ಹಣ ಬೇರೆ ಕಡೆಗೆ ವರ್ಗಾವಣೆಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಈ ಸಾರಿ ಬಿಡುಗಡೆಯಾದ ಹಣವನ್ನೂ ಬೇರೆ ಕಡೆಗೆ ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿದೆ ಎಂದು ದಾಖಲೆಯಲ್ಲಿ ತೋರಿಸುವ ಮೊತ್ತ ಊರಿನ ಅಭಿವೃದ್ಧಿಗೆ ಅರೆಕಾಸು ಎಂಬಂತಾಗಿದೆ.
ಜನಪ್ರತಿನಿಧಿಗಳಾದವರು ತಮ್ಮ ಹೊಣೆಗಾರಿಕೆ ಮರೆತು, ಗ್ರಾಮ ಗ್ರಾಮಗಳ ನಡುವೆ ಜನರನ್ನು ಎತ್ತಿಕಟ್ಟಿ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವುದು ಶೋಭೆ ತರುವಂತಹ ಕೆಲಸವಲ್ಲ. ಮಾಡಿದ ತಪ್ಪನ್ನು ಮುಚ್ಚಿಕೊಳ್ಳಲು ಜನರನ್ನು ಕರೆಸಿ ಪ್ರತಿಭಟನೆಯನ್ನು ಮಾಡಿಸುವ ಇಂತಹ ಜನಪ್ರತಿನಿಧಿಗಳು ಇನ್ನುಮುಂದಾದರೂ ಎಚ್ಚೆತ್ತುಕೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

***

(ದುರ್ಬಲ ಕಾಲುಸಂಕದಲ್ಲಿ ದುರ್ಭರ ಪಯಣ)
ಮೂರ್ನಾಲ್ಕು ಸಾರಿ ಜಲಗದ್ದೆ ಹಳ್ಳದಿಂದ ರಸ್ತೆ ಸುಧಾರಣೆಗೆ ಜಿ.ಪಂ ಹಾಗೂ ತಾ.ಪಂ ಅಡಿಯಲ್ಲಿ ಅನುದಾನ ಮಂಜೂರಾಗಿತ್ತು. ಆದರೆ ನಮ್ಮ ಭಾಗದ ಜನಪ್ರತಿನಿಧಿಗಳು ಆ ಅನುದಾನಕ್ಕೆ ಅಡ್ಡಗಾಲು ಹಾಕಿದರು. ಅಭಿವೃದ್ಧಿ ಮಾಡಿದ ಸ್ಥಳದಲ್ಲಿಯೇ ಮತ್ತೆ ಮತ್ತೆ ಅಭಿವೃದ್ಧಿ ಮಾಡುತ್ತ ಕಾಲತಳ್ಳುವ ಜನಪ್ರತಿನಿಧಿಗಳಿ ನಮ್ಮ ಬವಣೆ ಗೊತ್ತಿದ್ದರೂ ಜಾಣಕುರುಡರಂತೆ ವರ್ತನೆ ಮಾಡುತ್ತಿದ್ದಾರೆ.
ಮಂಜುನಾಥ ಭಟ್ಟ



***

ಬಂಡಲ ಬವಣೆ
ಭಾಗ-5


ಬಂಡಲ ಗ್ರಾಮ ಪಂಚಾಯತ ಅಭಿವೃದ್ಧಿ ಕೆಲಸದಲ್ಲಿ ಸಾಕಷ್ಟು ಹಿನ್ನಡೆಯಲ್ಲಿದೆ ಎನ್ನುವುದು ಅಲ್ಲಿಯ ಹಳ್ಳಿಗಳನ್ನು ಗಮನಿಸಿದಾಗ ಗೋಚರಿಸುತ್ತದೆ. ಈ ಪಂಚಾಯತಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳ ಬದ್ಧತೆಯೂ ಪ್ರಶ್ನಾರ್ಹವಾಗಿದೆ.
ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯಲ್ಲಿರುವ ಬಂಡಲದ ಒಳ ಹೊಕ್ಕರೆ ಜನಪ್ರತಿನಿಧಿಗಳ ಬಂಢಾರವೇ ಬಯಲಾಗುತ್ತದೆ. ಇಲ್ಲಿಯ ಜನರ ನಿತ್ಯದ ಗೋಳನ್ನು ಆಲಿಸುವವರೇ ಇಲ್ಲ. ಪ್ರತಿಯೊಂದಕ್ಕೂ ಗೋಳಾಡುತ್ತಿರುವ ಜನರ ಬದುಕೇ ಮೂರಾಬಟ್ಟೆಯಾಗಿದೆ. ಪ್ರಾಥಮಿಕ ಸೌಕರ್ಯ ಕಲ್ಪಿಸಲು ಮೀನ-ಮೇಷ ಎಣಿಸುತ್ತಿರುವ ಜನಪ್ರತಿನಿಧಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೇನೋ ಅನ್ನಿಸಿದರೆ ತಪ್ಪಲ್ಲ. ರಾಜಕೀಯ ಧೋರಣೆಯಿಂದಾಗಿಯೇ ಸಾರ್ವಜನಿಕರು ತಮ್ಮ ಹಕ್ಕಾಗಿರುವ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪಕ್ಷ ರಾಜಕಾರಣ ಮುಖಕ್ಕೆ ರಾಚುತ್ತದೆ. ಇನ್ನಾದರೂ ಜನಪ್ರತಿನಿಧಿಗಳು ಓಟಿಗಾಗಿ ಕೆಲಸಮಾಡುವ ಪರಿಪಾಠವನ್ನು ಬಿಡಬೇಕಾಗಿದೆ. ಬದಲಾಗಿ ಸಾರ್ವಜನಿಕರ ಹಿತರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ.
ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಚುನಾವಣೆಯ ನಂತರ ಅಭಿವೃದ್ಧಿಯೇ ತಮ್ಮ ಮೂಲಮಂತ್ರ ಎಂದು ಪ್ರತಿಯೊಂದು ಪಕ್ಷದ ಧುರೀಣರೂ ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಅದು ಕೇವಲ ಕಣ್ಣೊರೆಸುವ ಹೇಳಿಕೆ ಎನ್ನುವುದಕ್ಕೆ ಪ್ರತಿನಿತ್ಯವೂ ನಿದರ್ಶನ ಸಿಗುತ್ತಲೇ ಇರುತ್ತದೆ. ಇದಕ್ಕೆ ಬಂಡಲ ಪಂಚಾಯತವೊಂದೇ ನಿದರ್ಶನವಲ್ಲ. ಒಬ್ಬ ಪಂಚಾಯತ ಸದಸ್ಯನಿಂದ ಶಾಸಕ, ಸಂಸದ, ಸಚಿವರವರೆಗೂ ಇದೇ ರೀತಿಯ ರಾಜಕೀಯ ಲಾಭ-ಲೆಕ್ಖಾಚಾರದ ಪ್ರಚಾರವನ್ನು ಅಳೆದು ತೂಗಿಯೇ ಆಯಾ ಪ್ರದೇಶದ ಅನುದಾನವನ್ನು ಬಿಡುಗಡೆ ಮಾಡುತ್ತಿರುವುದು ಸಂಪ್ರದಾಯವಾಗಿದೆ. ಅದಕ್ಕೆ ಇನ್ನಾದರೂ ಕಡಿವಾಣ ಹಾಕಬೇಕು. ಈಗ ಬೇಕಾಗಿರುವುದು ಬಂಡಲ ಪಂಚಾಯತಕ್ಕೆ ದೊಡ್ಡ ಮೊತ್ತದ ಅನುದಾನವಾಗಿದೆ. ಸಾವಿರ ರು.ಗಳ ಅನುದಾನ ಯಾವುದಕ್ಕೂ ಸಾಕಾಗದು. ಸೇತುವೆ ನಿರ್ಮಾಣ, ರಸ್ತೆ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಹೀಗೆ ಸಾಕಷ್ಟು ಕೆಲಸ, ಕಾರ್ಯಗಳು ಆಗಬೇಕಾಗಿದೆ.
(ಬಂಡಲ ಗ್ರಾ.ಪಂ ಕಟ್ಟಡ)
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಂಡಲ ಪಂಚಾಯತದ ಹೆಬ್ರೆ ಹಾಗೂ ಸುತ್ತಮುತ್ತಲ ಪ್ರದೇಶ ಈ ಮೊದಲು ಅಂಕೋಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಅಂಕೋಲಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದಾಗ ಕನಿಷ್ಟ ಮೂರು ಅವಧಿಯವರೆಗೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಚುನಾಯಿತರಾಗಿದ್ದರು. ಈಗ ಶಿರಸಿ-ಸಿದ್ದಾಪುರ ಕ್ಷೇತ್ರದ ವ್ಯಾಪ್ತಿಗೆ ಬಂದ ಮೇಲೆ ಕಾಗೇರಿಯವರು ಎರಡು ಸಾರಿ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿಯೂ ಆಡಳಿತ ನಡೆಸಿದ್ದಾರೆ. ಇದೀಗ ಕಾಗೇರಿಯವರು ಶಾಸಕರಾಗಿ ಹತ್ತಿರ ಹತ್ತಿರ 22 ವರ್ಷಗಳಾಗುತ್ತಿದೆ. ಸಂಪೆಗದ್ದೆ ಹಾಗೂ ಸುತ್ತಮುತ್ತಲ 7 ಗ್ರಾಮಗಳ ಗ್ರಾಮಸ್ಥರು ಕಳೆದ 22 ವರ್ಷಗಳಿಂದಲೂ ರಸ್ತೆ, ಸೇತುವೆಗಾಗಿ ಕಾಗೇರಿಯವರಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಶಾಸಕರಾಗಿ 2 ದಶಕಗಳಾಗುತ್ತ ಬಂದ ಸಂದರ್ಭದಲ್ಲಿ ಅದರ ಸವಿ ನೆನಪಿಗಾಗಿ ಸೇತುವೆ ನಿರ್ಮಾಣ ಮಾಡಿಕೊಡಿ ಎಂದೂ ಕೋರಿದ್ದಾರೆ. ಕಾಗೇರಿಯವರು ಈ ಕುರಿತು ಕಳೆದ 22 ವರ್ಷಗಳಿಂದ ರಸ್ತೆ ಸುಧಾರಣೆ ಮಾಡುವ ಭರವಸೆಯನ್ನು ನೀಡುತ್ತಲೇ ಇದ್ದಾರೆ. ಆದರೆ ಇದುವರೆಗೂ ಅವರ ಭರವಸೆ ಈಡೇರಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಆರ್. ವಿ. ದೇಶಪಾಂಡೆಯವರು ಕಳೆದ ನಾಲ್ಕು ದಶಕಗಳಿಂದ ಈ ಜಿಲ್ಲೆಯನ್ನು ಆಳುತ್ತಿದ್ದಾರೆ. ಇದೀಗ ರಾಜ್ಯದ ಪ್ರವಾಸೋದ್ಯಮ ಹಾಗೂ ಉನ್ನತ ಶಿಕ್ಷಣ ಸಚಿವರಾಗಿದ್ದಾರೆ. ಜಿಲ್ಲಾ ಉಸ್ತುವಾರಿಯ ಹೊಣೆಯನ್ನೂ ಹೊತ್ತಿದ್ದಾರೆ. ಹಿರಿಯ ರಾಜಕಾರಣಿ ದೇಶಪಾಂಡೆಯವರು ಬಂಡಲ ಗ್ರಾಮ ಪಂಚಾಯತಿಯ ಹೆಬ್ರೆ ಗ್ರಾಮದ ಸಂಪೆಗದ್ದೆ ಹಾಗೂ ಸುತ್ತಮುತ್ತಲ ಗ್ರಾಮಗಳ ಕತ್ತಲೆಯನ್ನು ಕಳೆಯಬೇಕಾಗಿದೆ.
(ಸ್ಥಳೀಯರ ಬವಣೆ)
ಸಂಸದ ಅನಂತಕುಮಾರ ಹೆಗಡೆಯವರೂ ಸಂಸದರಾಗಿ ಕನಿಷ್ಟ 20 ವರ್ಷಗಳಾಗುತ್ತಿದೆ. ಸಂಸದ ಅನಂತಕುಮಾರ ಹೆಗಡೆಯವರಿಗೂ ಸ್ಥಳೀಯರು ಮನವಿಯನ್ನು ಸಲ್ಲಿಸಿದ್ದಾರೆ. ಆದರೆ ಗ್ರಾಮ ಪಂಚಾಯತಿ ಮಟ್ಟದ ರಸ್ತೆ ಅಭಿವೃದ್ಧಿ ಕಾಮಗಾರಿಗಳೆಲ್ಲ ನನ್ನ ವ್ಯಾಪ್ತಿಗೆ ಬರುವುದಿಲ್ಲ. ದೊಡ್ಡ ದೊಡ್ಡ ಕಾರ್ಯಗಳಿದ್ದರೆ ಹೇಳಿ ಅದನ್ನು ಮಾಡಿಸೋಣ. ಚಿಕ್ಕಪುಟ್ಟ ಕೆಲಸಗಳು ಬೇಡ ಎಂದು ಹೇಳಿ ತಮ್ಮನ್ನು ಸಾಗಹಾಕಿದ್ದಾರೆ ಎಂದು ಸಂಪೆಗದ್ದೆ ಹಾಗೂ ಸುತ್ತಮುತ್ತಲ 6 ಗ್ರಾಮಗಳ ಗ್ರಾಮಸ್ಥರು ಹೇಳುತ್ತಾರೆ.
ನಾಲ್ಕೈದು ಗ್ರಾಮಗಳ ಜನರು ಬೈದರೂ ತಪ್ಪಿಲ್ಲ. ಹತ್ತೆಂಟು ಗ್ರಾಮಗಳ ಜನರು ಬೈಯುವುದನ್ನು ತಪ್ಪಿಸಿಕೊಳ್ಳುವಂತಹ ಕೆಲಸಗಳನ್ನು ತಾವು ಮಾಡುತ್ತಿದ್ದೇವೆ. ಅಭಿವೃದ್ಧಿ ಕಾರ್ಯಗಳು ಸದಾ ಚಾಲ್ತಿಯಲ್ಲಿದೆ ಎನ್ನುವುದನ್ನು ತೋರಿಸಲು ಗುದ್ದಲಿಪೂಜೆಗಳನ್ನು ನಡೆಸುತ್ತಲೇ ಇದ್ದೇವೆ. ಯಾವ ಸ್ಥಳದಲ್ಲಿ ಯಾವ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎನ್ನುವುದನ್ನು ಹಿರಿಯ ಜನಪ್ರತಿನಿಧಿಗಳು ತಮಗೆ ಕಲಿಸಿಕೊಟ್ಟಿದ್ದಾರೆ ಎಂದು ಹೇಳಿಕೊಂಡು ಓಡಾಡುವ ಜನಪ್ರತಿನಿಧಿಗಳೂ ಇದ್ದಾರೆ. ಇಂತವರಿಂದಲೇ ಬಂಡಲ ಪಂಚಾಯತದ ಬವಣೆ ಇನ್ನಷ್ಟು ಹೆಚ್ಚಾಗಿದೆ. ಬಾಯಿ ಮಾತಿನಲ್ಲಿ ಅಭಿವೃದ್ಧಿಯ ಬಗ್ಗೆ ಹೇಳುವುದನ್ನು ಬಿಟ್ಟು ಯೋಜನೆಗಳನ್ನು ಅನುಷ್ಟಾನ ಮಾಡಿ ಜನರ ವಿಶ್ವಾಸ ಗಳಿಸುವುದು ಅತ್ಯಾವಶ್ಯಕವಾಗಿದೆ.
ಬಂಡಲ ಪಂಚಾಯತ ವ್ಯಾಪ್ತಿಯ ಹೆಬ್ರೆ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ರಸ್ತೆ ಸುಧಾರಣೆ, ಸೇತುವೆ ನಿರ್ಮಾಣಕ್ಕಾಗಿ ಜಿ.ಪಂ ಅಡಿಯಲ್ಲಿ ಅನುದಾನ ಮಂಜೂರಾಗಿದೆ. ಯಾವ ಪ್ರದೇಶಕ್ಕೆ ಹಣ ಹಾಕಿದರೆ ಸೂಕ್ತ ಎನ್ನುವುದನ್ನು ಪರಿಶೀಲನೆ ಮಾಡಲಾಗುತ್ತದೆ. ಸ್ಥಳ ಪರಿಶೀಲನೆಯ ನಂತರ ಅನುದಾನದ ಅಡಿಯಲ್ಲಿ ಯೋಜನೆ ಅನುಷ್ಟಾನವನ್ನು ಮಾಡಲಾಗುತ್ತದೆ ಎಂದು ಈ ಭಾಗದ ಜಿ.ಪಂ ಸದಸ್ಯ ಆರ್. ಡಿ. ಹೆಗಡೆ ಜಾನ್ಮನೆ ತಿಳಿಸಿದ್ದಾರೆ.
ಸಂಪೆಗದ್ದೆ ರಸ್ತೆ ಸುಧಾರಣೆ ಹಾಗೂ ಜಲಗದ್ದೆ ಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ರಸ್ತೆ ಸುಧಾರಣೆ ನನ್ನ ಗಮನದಲ್ಲಿದೆ. ಈ ಕುರಿತು ಯಾವುದೇ ಹಣ ವರ್ಗಾವಣೆಯಾಗಿಲ್ಲ. ಸ್ಥಳೀಯರ ಬಳಿ ಚರ್ಚೆ ಮಾಡಿ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಥಳೀಯ ತಾ.ಪಂ ಸದಸ್ಯ ಸಂತೋಷ ಗೌಡರ್ ಹೇಳಿದ್ದಾರೆ.

***

(ಈ ಎಲ್ಲ ಐದು ಭಾಗಗಳೂ ಕನ್ನಡಪ್ರಭದ ಉತ್ತರ ಕನ್ನಡದ ಪುರವಣಿಯಲ್ಲಿ ಅಭಿವೃದ್ಧಿಯೇ ಬಂಡಲ್ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಪ್ರಕಟಗೊಂಡಿದೆ.)

Wednesday, January 21, 2015

ಅಘನಾಶಿನಿ ಕಣಿವೆಯಲ್ಲಿ-9

                 ಮನೆಯಲ್ಲಾಗಲೇ ಇಬ್ಬರು ವಿಶೇಷ ವ್ಯಕ್ತಿಗಳ ಆಗಮನವಾಗಿತ್ತು. ಒಬ್ಬರು ವಿಕ್ರಮನ ಅಜ್ಜಿ ಮಹಾಲಕ್ಷ್ಮಿ. ಎರಡು ದಿನಗಳ ಹಿಂದೆ ಇವರು ತನ್ನ ತಮ್ಮ ಚಂದ್ರಶೇಖರನ ಮನೆಗೆ ಹೋಗಿದ್ದರು ಯಾವುದೋ ಕಾರ್ಯದ ನಿಮಿತ್ತ. ಮನೆಗೆ ಬಂದು ನಿಲ್ಲುತ್ತಿದ್ದಂತೆಯೇ ಮೊಮ್ಮಗನ ಆಗಮನ ಸುದ್ದಿ ಕೇಳಿ ಮುಖ ಊರಗಲವಾಗಿತ್ತು. ಮನೆಗೆ ಬಂದಿದ್ದ ಇನ್ನೊಬ್ಬ ವ್ಯಕ್ತಿ ವಿಕ್ರಮನ ಭಾವ ವಿನಾಯಕ. ವಿಕ್ರಮ ತಾನು ಬರುತ್ತಿದ್ದ ವಿಷಯವನ್ನು ಪೋನ್ ಮಾಡಿ ತಿಳಿಸಿದ್ದರಿಂದ ಸಕಾಲಕ್ಕೆ ಆಗಮಿಸಿದ್ದ.
                ವಿಕ್ರಮ ತನ್ನ ಅಜ್ಜಿಯನ್ನು ಪರಿಚಯಿಸುತ್ತಾ `ಇವರ ಜೊತೆ ಮಾತನಾಡುವುದೆಂದರೆ ಹಳೆಯ ಕಾಲದ ಾಚಾರ, ವಿಚಾರ, ನೆನಪು, ಬದುಕು, ತಲೆಮಾರುಗಳ ಲೋಕಕ್ಕೆ ಹೋದಂತೆ..' ಎಂದ. ನಂತರ ವಿಕ್ರಂ ವಿನಾಯಕನನ್ನು ಪರಿಚಯ ಮಾಡಿಸುತ್ತಾ `ಈತ ಒಬ್ಬ ಕವಿ. ಒಳ್ಳೆಯ ನಟ. ಜೊತೆಗೆ ಮಿಮಿಕ್ರಿ ಮಾಡಬಲ್ಲ. ಒಳ್ಳೆ ಕ್ರೀಡಾಪಟು ಕೂಡ ಹೌದು. ಜೊತೆಗೆ ಇವನಿಗೆ ಗ್ರಾಫಾಲಜಿ ಬರ್ತದೆ. ಓದೋ ಹುಚ್ಚು ಸ್ವಲ್ಪ ಹೆಚ್ಚು. ಜೊತೆಗೆ ಯಾರೇ ಒಳ್ಳೆಯ ವ್ಯಕ್ತಿಗಳಿರಲಿ ಅವರನ್ನು ಮಾತನಾಡಿಸಿ, ಗೆಳೆತನ ಮಾಡಿಕೊಳ್ಳುವುದು ಈತನ ಪ್ರಮುಖ ಕೆಲಸ. ಒಂದು ರೀತಿಯಲ್ಲಿ ಆಲ್ ರೌಂಡರ್ ಎಂದರೆ ತಪ್ಪಾಗಲಿಕ್ಕಿಲ್ಲ ನೋಡಿ..' ಎಂದ.
               `ಯೇ ವಿಕ್ರಮಾ.. ಎಂತೆಂತಾದ್ರೂ ಹೇಳಡದಾ.. ಇಲ್ದೋದ್ದು, ಅಲ್ದೋದ್ದು ಎಲ್ಲಾ ಎಂತಕ್ಕೆ ಹೇಳ್ತ್ಯಾ?.. ಥೋ..' ಎಂದು ವಿನಾಯಕ ವಿಕ್ರಮನ ವಿವರಣೆಯನ್ನು ಕೊಂಚ ವಿರೋಧಿಸಿದ. ಅಷ್ಟರಲ್ಲಿ ಮಧಗಯ ಬಾಯಿ ಹಾಕಿದ ಪ್ರದೀಪ `ನಿಮ್ ಗೆ ಗ್ರಾಫಾಲಜಿ ಗೊತ್ತಿದೆಯಾ? ಓಹ್.. ನಾನು ಸ್ವಲ್ಪ ಹುಷಾರಾಗಿರಬೇಕು...' ಎಂದ.
               `ಯಾಕಪ್ಪಾ..' ಎಂದು ಕೇಳಿದ ವಿಕ್ರಮನಿಗೆ `ಈತ ನನ್ನ ತರಲೆಗಳನ್ನೆಲ್ಲಾ ಕಂಡು ಹಿಡಿದುಬಿಟ್ಟರೆ?' ಎಂದಾಗ ಎಲ್ಲರೂ ಒಮ್ಮೆ ನಕ್ಕರು.
               ಆ ದಿನ ಹಾಗೇ ಮಾತನಾಡುತ್ತಾ ಮರುದಿನ ಯಾವುದಾದರೂ ಪ್ರದೇಶಗಳ ವೀಕ್ಷಣೆಗೆ ಹೋಗೋಣ ಎಂದುಕೊಂಡರು. ಸುತ್ತಮುತ್ತ ಏನಿದೆ ಎಂದುಕೊಂಡಾಗ `ಲಾಲಗುಳಿ ಜಲಪಾತ' ಹಾಗೂ `ಗಿರ ಗಿರ ಪತ್ಥರ್..' ಇದೆ ಎನ್ನುವುದು ತಿಳಿಯಿತು. ಅದನ್ನು ನೋಡಿ ಬನ್ನಿ ಎನ್ನುವ ಮಾತುಗಳನ್ನು ಮನೆಯ ಹಿರಿಯರು ಹೇಳಿದರು. ಸರಿಯೆಂದರು ಎಲ್ಲರೂ. ಮರುದಿನ ಹೋಗುವುದಕ್ಕೆ ತಯಾರಿ ಮಾಡಿಕೊಂಡು ಎಲ್ಲರೂ ಮಲಗಿದರು.

*****8*****

               ಮರುದಿನ ಎಪ್ರಿಲ್ 11. ಎಲ್ಲರೂ ನಸುಕಿನಲ್ಲೆದ್ದು ಹೊರಡಲು ಅನುವಾದರು. ಅಷ್ಟರಲ್ಲಾಗಲೇ ವಿಕ್ರಮನ ತಾಯಿ ಲಕ್ಷ್ಮಿ ಹಲಸಿನಕಾಯಿಯ ತೆಳ್ಳೇವನ್ನೂ ಮದ್ಯಾಹ್ನದ ಊಟಕ್ಕೆ ಸಾಕಷ್ಟು ತಿಂಡಿಗಳನ್ನೂ, ಪುಳಿಯೋಗರೆ, ಹಲಸಿನಕಾಯಿಯ ಪಲ್ಯ, ಪುಳಿಯೋಗರೆ, ಫಲಾವ್ ಗಳನ್ನೆಲ್ಲಾ ಮಾಡಿಕೊಟ್ಟರು. ಎಲ್ಲವನ್ನೂ ಕಾರಿಗೆ ತುಂಬಿಕೊಂಡರು. ಕಿರಿಯರ ನಡುವೆ ಹಿರಿಯರೇಕೆ ಎಂದು ಭಟ್ಟರು, ಲಕ್ಷ್ಮೀಬಾಯಿ ಹಾಗೂ ಮಹಾಲಕ್ಷ್ಮಮ್ಮ ತಾವು ಜಲಪಾತ ನೋಡಲು ಬರುವುದಿಲ್ಲ ಎಂದರು. ಅದೂ ಅಲ್ಲದೇ ತಮ್ಮದೇ ಮನೆಯ ಬಳಿ ಇರುವ ಈ ಸ್ಥಳಗಳನ್ನು ಅನೇಕ ಬಾರಿ ನೋಡಿದ್ದರಿಂದ ಮತ್ತೇಕೆ ಎಂದುಕೊಂಡರು.
             ಒಟ್ಟಿನಲ್ಲಿ ಅಲ್ಲಿಗೆ ಹೊರಟವರು ವಿಕ್ರಮ್, ವಿನಾಯಕ, ಪ್ರದೀಪ, ವಿಜೇತಾ ಹಾಗೂ ರಮ್ಯ. ಅಲ್ಲಿಗೆ ಹೊರಟಿದ್ದೇನೋ ಕಾರಿನಲ್ಲಿ. ಆದರೆ ವಿಕ್ರಮನಿಗೂ ಆ ಪ್ರದೇಶ ಹೊಸತೇ. ತಮ್ಮೂರಾದರೂ ತಾನು ಅಲ್ಲಿ ಅಡ್ಡಾಡಿದ್ದು ಅಷ್ಟರಲ್ಲೇ ಇದೆ. ಚಿಕ್ಕಂದಿನಲ್ಲಿ ಒಮದೆರಡು ಸಾರಿ ಹೋಗಿದ್ದನಾದರೂ ಈಗಲೂ ಮಾರ್ಗಗಲೆಲ್ಲ ಅಸ್ಪಷ್ಟವಾಗಿದೆ. ಈ ಕಾರಣಕ್ಕಾಗಿ ಆ ಪ್ರದೇಶದ ಒಳಹೊರಗನ್ನು ಬಲ್ಲ ಸ್ಥಳೀಯ ಸಿದ್ದಿ ವ್ಯಕ್ತಿಯೊಬ್ಬನನ್ನು ಕರೆದೊಯ್ದರು. ಅಂತಹ ದಟ್ಟ ಕಾಡಿನ ಮಧ್ಯದಲ್ಲಿ ಸಿದ್ಧಿಗಳು ಎಲ್ಲಿಂದ ಬಂದರೋ. ಶತ ಶತಮಾನಗಳಿಂದ ಅವರು ಇಲ್ಲಿಯೇ ಇರಬೇಕು. ಬಹುಶಃ ಬ್ರಿಟೀಷರೋ., ಮತ್ತಿನ್ಯಾರೋ ಕರೆತಂದಿದ್ದಾರೇನೋ..
             ಇವರ ಜೊತೆಗೆ ಮಾರ್ಗದರ್ಶಿಯಾಗಿ ಬಂದ ಸಿದ್ಧಿಯ ಹೆಸರು ರಾಬರ್ಟ ಸಿದ್ದಿ. ಆಗಾಗ  ಭಟ್ಟರ ಮನೆಗೆ ಕೆಲಸಕ್ಕೆ ಬರುತ್ತಿದ್ದವನು. ಇವರ ಜೊತೆಗೆ ಹೊರಡುವ ಮೊದಲು  ವಿಕ್ರಮನನ್ನು ನೋಡಿ `ಓಹ್... ನೀ ಯಾವತ್ತು ಬಂದ್ಯೋ..?' ಎಂದು ಕೇಳಿದವನಿಗೆ ವಿಕ್ರಮ ಎಲ್ಲವನ್ನೂ ಸವಿವರವಾಗಿ ಹೇಳಿದ್ದ. ಗಿರಗಿರ ಪಥ್ಥರ್ ಹಾಗೂ ಲಾಲಗುಳಿ ಜಲಪಾತ ತೋರಿಸಲು ಹೇಳಿದ್ದ.
`ಗಿರ್ ಗಿರ್ ಪತ್ಥರ್ ಗೆ ಹೋಗದೇನೋ ಸರಿ.. ಅಲ್ಲೋ ಬಟಾ.. ಲಾಲಗುಳಿಗ್ ಯಂತಕ್ ಹೊಂಟ್ಯೋ..? ಅಲ್ಲೆಂತ ಐತೆ ಬದ್ನೆಕಾಯಿ? ನೀರಿಲ್ಲ ಎಂತ ಇಲ್ಲ..' ಎಂದನಾದರೂ ಬರಲು ಒಪ್ಪಿಕೊಂಡಿದ್ದ.
             ದಾರಿಯಲ್ಲಿ ಸಿದ್ಧಿಗಳದ್ದೇ ಒಮದೆರಡು ಕಾಲೋನಿಗಳನ್ನು ಹಾದು ಹೋಗಿ, ಒಂದೆರಡು ದಾರಿಯನ್ನು ಬದಲಾಯಿಸಿದವರು ಕೊನೆಗೆ ನಾಲ್ಕೈದು ಕಿಲೋಮೀಟರ್ ಪ್ರಯಾಣಿಸಿದ ನಂತರ ವಾಹನ ನಿಲ್ಲಿಸಿದರು. ಅಲ್ಲಿಂದ ಕಾಲ್ನಡಿಗೆಯಲ್ಲಿ ತೆರಳಬೇಕಿತ್ತು. `ಇಲ್ಲಿಂದ ಗಿರ್ ಗಿರ್ ಪತ್ಥರ್ ಗೆ ಐದು ಕಿಲೋಮೀಟರ್.. ಎಲ್ಲ ನಡ್ಕೊಂಡೇ ಹೋಗಬೇಕು. ಗಾಡಿ ಹೋಗಾದಿಲ್ಲ..' ಎಂದ ರಾಬರ್ಟ ಸಿದ್ದಿ. ಎಲ್ಲ ಕಾರಿನಿಂದ ಇಳಿದರು. ರಾಬರ್ಟ ಮುಂದೆ ಹೆಜ್ಜೆ ಹಾಕಿದರೆ ಎಲ್ಲರೂ ಹಿಂಬಾಲಿಸಿದರು. ಹೋಗುತ್ತಿದ್ದ ಮಾರ್ಗವಂತೂ ಸೂರ್ಯನ ರಶ್ಮಿಗಳು ಭೂಮಿಗೆ ಬೀಳದಂತಿದ್ದ ದಟ್ಟಕಾನನ. ಗವ್ವ ಎನ್ನುವ ಅರಣ್ಯ. ಅಲ್ಲಲ್ಲಿ ಸಾಗುವಾನಿ ಪ್ಲಾಂಟೇಶನ್ನುಗಳು. ಸಿದ್ದಿ ವೇಗವಾಗಿ ಹೋಗುತ್ತಿದ್ದ. ಅವನ ವೇಗಕ್ಕೆ ವಿನಾಯಕನನ್ನು ಹೊರತು ಪಡಿಸಿ ಉಳಿದವರು ಸಾಗಲು ಕಷ್ಟಪಡಬೇಕಾಯಿತು.
              ದಾರಿ ಸಾಗಲೆಂದು ರಾಬರ್ಟನೊಡನೆ ಎಲ್ಲರೂ ಮಾತಿಗಿಳಿದರು. ಅಪರಿಚಿತರ ಬಳಿ ರಾಬರ್ಟ ಮೊದ ಮೊದಲಿಗೆ ಮಾತನಾಡಲು ಹಿಂಜರಿದನಾದರೂ ನಂತರ ಸರಾಗವಾಗಿ ಮಾತನಾಡತೊಡಗಿದ. ವಿಜೇತಾ ರಾಬರ್ಟನ ಬಳಿ `ನೀವೆಲ್ಲರೂ ಕ್ರಿಶ್ಚಿಯನ್ನರಾ..?' ಎಂದು ಕೇಳಿದಳು. ಅದಕ್ಕೆ ಪ್ರತಿಯಾಗಿ ರಾಬರ್ಟ `ಇಲ್ಲ.. ನಮ್ಮಲ್ಲಿ ಕೆಲವರು ಮುಸ್ಲಿಂರೂ, ಹಿಂದೂಗಳೂ ಇದ್ದಾರೆ..' ಎಂದ.
              `ನಾಗರೀಕತೆಯಿಂದ ಅದೆಷ್ಟೇ ದೂರದಲ್ಲಿದ್ದರೂ ಇಲ್ಲೂ ಕೂಡ ಧರ್ಮಗಳಿದೆಯಲ್ಲ ಮಾರಾಯಾ...' ಎಂದ ಪ್ರದೀಪನಿಗೆ ವಿಕ್ರಮ್ ವಿವರಣಾತ್ಮಕವಾಗಿ `ಅದು ಹಾಗಿರೋದಿಲ್ಲ ಪ್ರದೀಪ್.. ಮೂಲತಃ ಇವರು ಯಾವುದೇ ಜಾತಿಯನ್ನು ಅನುಸಿರಿಸದವರಲ್ಲ. ಯಾರೋ ಒಂದಿಷ್ಟು ಮಿಷನರಿಗಳು ಬಂದು ಹಣ ಕೊಡ್ತಾರೆ. ಹಲವರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳುತ್ತಾರೆ. ಮದರಸಾಗಳೂ, ಹಿಂದೂ ಸಂಘಟನೆಗಳೂ ಇಲ್ಲಿ ಹಿಂದೆ ಬಿದ್ದಲ್ಲ. ಹಾಗಾಗಿ ಇಲ್ಲಿ ಹೀಗಾಗಿದೆ...' ಎಂದ.
              `ಛೇ.. ಛೇ ಇದೆಂತಹ ವ್ಯವಸ್ಥೆನಪ್ಪಾ.. ಕಾಡಿನ ನಡುವೆ ಬದುಕುತ್ತಿರುವವರನ್ನು ಅವರ ಪಾಡಿಗೆ ಬಿಡುವುದೂ ಇಲ್ಲವಲ್ಲಾ..' ಎಂದು ತಲೆಕೊಡವಿದ ಪ್ರದೀಪ.
              `ನಿಮ್ಮ ಸ್ಥಿತಿಗತಿ ಈಗ ಹೇಗಿದೆ..?' ಎಂದು ಕೇಳಿದಳು ವಿಜೇತಾ.
              `ಅದೆಂತಾ ಹೇಳದೋ.. ಯಾರೋ ಒಂದು ಪಕ್ಷದವರು ಬಂದು ಮನೆ ಕಟ್ಟಿಕೊಟ್ಟರು. ಮೊದಲು ನಾವಿದ್ದ ಊರು ಅದೇನೋ ಹೆಸರಿತ್ತು. ಪಕ್ಷದವರು ಬಂದು ಮನೆ ಕಟ್ಟಿಸಿದ್ದಕ್ಕೆ ಆ ಪಕ್ಷದ ನಾಯಕನ ಹೆಸರನ್ನೇ ನಮ್ಮೂರಿಗೆ ಇಟ್ಟರು. ಈಗ ಅವರು ಕಟ್ಟಿಕೊಟ್ಟ ಮನೆ  ಹಾಗೂ ಊರಿಗೆ ಇಟ್ಟ ಹೆಸರು. ಇವೆರಡೇ ಇದ್ದಿದ್ದು. ಮತ್ತೆಂತದ್ದೂ ಇಲ್ವೋ. ದುಡಿಯೋದಿಕ್ಕೆ ಜಮೀನು ಇಲ್ಲ. ಕಾಡಂತೂ ಮುಟ್ಟಾಂಗಿಲ್ಲ. ಬಹಳ ತೊಂದರೆಲಿದ್ದಿದ್ದು..' ಎಂದು ಹಲುಬಿಕೊಂಡ ಸಿದ್ದಿ.
          ಅಷ್ಟರಲ್ಲಾಗಲೇ ಗಿರ ಗಿರ ಪತ್ಥರ್ ಬಂದಿತ್ತು. ಮಲೆನಾಡಿನ ದಟ್ಟ ಕಾಡಿನಲ್ಲಿ ಹಾದು ಬರುತ್ತಿದ್ದವರಿಗೆ ಇದ್ದಕ್ಕಿದ್ದಂತೆ ಮುಂದಿನ ಭಾಗವನ್ನು ಯಾರೋ ಕತ್ತರಿಸಿ ಇಟ್ಟಿದ್ದಾರೆಂಬಂತಹ ಭೂರಚನೆ. ಇದ್ದಕ್ಕಿದ್ದಂತೆ ಎದುರಿನ ಭೂಭಾಗವೇ ಇಲ್ಲ ಎನ್ನಿಸಿತ್ತು. ಗುಡ್ಡದ ತುದಿಗೆ ನಿಂತವರಿಗೆ ಕೆಳಗೆ ಹಸಿರು ಅರಣ್ಯಗಳು ಕಾಣಿಸಿದವು. ದೂರದಲ್ಲಿ ಕಪ್ಪಗೆ ಹರಿಯುತ್ತಿದ್ದ ಕಾಳಿ ನದಿ ಕಾಣಿಸಿತು. ಸುಂಯ್.. ಎನ್ನುವ ಶಬ್ದದೊಂದಿಗೆ ಬೀಸಿ ಬರುತ್ತಿದ್ದ ಗಾಳಿ.
             `ಇಲ್ಲಿ ಕಲ್ ಒಗಿಯೋ ಬಟಾ..' ಎಂದ ಸಿದ್ದಿ. `ಎಲ್ಲರೂ ಚಿಕ್ಕ ಚಿಕ್ಕ ಕಲ್ಲನ್ನು ಒಗೆದರು. ಆ ಕಲ್ಲು ನೇರವಾಗಿ ಕೆಳಕ್ಕೆ ಬೀಳಲಿಲ್ಲ. ಒಗೆದ ಕಲ್ಲು ಕ್ಷಣಕಾಲ ಗಾಳಿಯಲ್ಲಿ ಗಿರ ಗಿರನೆ ತಿರುಗಿ ನಿಧಾನವಾಗಿ ಕೆಳಕ್ಕಿಳಿಯತೊಡಗಿತು. ಆಗ ರಾಬರ್ಟ ಸಿದ್ದಿಯೆಂದ `ನೋಡಿ.. ಇಲ್ಲಿ ಕಲ್ಲು ಒಗೆದರೂ ಬೇಗ ಕೆಳಕ್ಕೆ ಹೋಗಾದಿಲ್ಲ. ನಿಧಾನಕ್ಕೆ ಗಿರ ಗಿರ ತಿರುಗ್ತಾ ತಿರುಗ್ತಾ ಕೆಳಕ್ಕೆ ಬೀಳ್ತದೆ.. ಗಾಳಿಯ ಒತ್ತಡಕ್ಕೆ ಹಿಂಗಾಗ್ತದೆ ಅಂತ ಯಾರೋ ಒಬ್ಬರು ಹೇಳಿದ್ದರು. ಇದೇ ಕಾರಣಕ್ಕೆ ಈ ಪ್ರದೇಶಕ್ಕೆ ಗಿರ ಗಿರ ಪತ್ಥರ್ ಅನ್ನುವ ಹೆಸರು ಬಂದಿದೆ..' ಎಂದ.
              ಹೆಸರಿಗೆ ತಕ್ಕ ಪ್ರದೇಶ ಎಂದುಕೊಂಡವರು ಸಾಕಷ್ಟು ಪೋಟೋಗಳನ್ನು ಹೊಡೆದುಕೊಂಡರು. ರಾಬರ್ಟ ಅಲ್ಲಿಯೇ `ನಂದೋಂದ್ ತಕಾಳಿ..' ಎಂದ. ಆತನ ಪೋಟೋವನ್ನೂ ತೆಗೆದುಕೊಂಡರು ಎಲ್ಲರೂ. ಅಷ್ಟರಲ್ಲಿ ಹಿಂದೆ ಪೊದೆಯಲ್ಲಿ ಏನೋ ಸದ್ದಾಯಿತು. ಪ್ರದೀಪ ಒಮ್ಮೆಲೆ ಎಚ್ಚರಿಕೆಯಿಂದ ನಡೆಯತೊಡಗಿದೆ. ಯಾರೋ ಇದ್ದಾರೆ. ಯಾರೋ ನಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎನ್ನಿಸತೊಡಗಿತು ಆತನಿಗೆ. ರಾಬರ್ಟ ಸಿದ್ದಿ ಮಾತ್ರ `ಹಂದಿ.. ಹಂದಿ ಬಂದಿರಬೇಕು.. ಅದ್ಕೆ ಅಲ್ಲಿ ಸದ್ದಾಗ್ತದೆ..' ಎಂದ. ಎಲ್ಲರೂ ಸುಮ್ಮನಾದರು. ಪ್ರದೀಪ ಮಾತ್ರ ಸುಮ್ಮನಾಗಲಿಲ್ಲ. ಸದ್ದು ಬಂದ ಕಡೆಗೆ ಗಮನವನ್ನು ಇರಿಸಿದ್ದ.
              ಒಂದು ತಾಸಿನ ನಂತರ ಗಿರ ಗಿರ ಪತ್ಥರ್ ನಿಂದ ಎಲ್ಲರೂ ವಾಪಾಸಾದರು. ಮರಳಿ ಸಾಗಿ ಕವಲೊಡೆದ ಮಾರ್ಗದಲ್ಲಿ ಚಲಿಸಿ ಲಾಲಗುಳಿ ಜಲಪಾತದ ಕಡೆಗೆ ತೆರಳಿದರು. ಜಲಪಾತಕ್ಕಿಂತ ಒಂದೆರಡು ಕಿ.ಮಿ ದೂರದಲ್ಲೇ ಕಾರು ನಿಲ್ಲಿಸಿದರು. ಅಲ್ಲಿಂದ ನಡೆದು ಸಾಗಬೇಕಿತ್ತು. ಕೊಂಚ ದಾರಿ ಮಾಡಿಕೊಂಡು ಕೆಳಗಿಳಿದವರಿಗೆ ಹಾಲ್ನೊರೆಯಂತಹ ಜಲರಾಶಿ ಕಾಣಿಸಿತು. ಜಲಪಾತ ಅಷ್ಟೇನೂ ಎತ್ತರವಿರಲಿಲ್ಲ. ಜೋಗದಂತೆ, ಉಂಚಳ್ಳಿಯಂತೆ ಎತ್ತರದಿಂದ ಭೋರೆಂದು ಧುಮ್ಮಿಕ್ಕುವ ಜಲಪಾತ ಅದಾಗಿರಲಿಲ್ಲ. ಬದಲಾಗಿ ಬಂಡೆಯಿಂದ ಬಂಡೆಗೆ ಕೆಳಕ್ಕೆ ಜಿಗಿಯುತ್ತ ಸಾಗುತ್ತಿದ್ದ ಚಿಕ್ಕ ಚಿಕ್ಕ ಜಲಧಾರೆಗಳ ಸಂಗಮ ಅದಾಗಿತ್ತು. ಕಪ್ಪು ಕಾಳಿ ನದಿಯ ನೀರು ಕೆಳಕ್ಕೆ ಇಳಿಯುವ ಸಂದರ್ಭದಲ್ಲಿ ನೀರು ನೀರು ಮಥಿಸಿ ಬೆಳ್ಳಗೆ ಫಳಫಳಿಸುತ್ತಿದ್ದುದು ವಿಸ್ಮಯಕಾರಿಯಾಗಿತ್ತು.
                `ನೀರಿಗೆ ಇಳಿಬ್ಯಾಡ್ರೋ...' ಎಂದು ಎಚ್ಚರಿಕೆ ನೀಡಿದ ರಾಬರ್ಟ ಸಿದ್ದಿ. `ಯಾಕೆ..?' ಎಂದು ಕೇಳಿದರು ಎಲ್ಲರೂ. `ನೀರಿನಲ್ಲಿ ಸೆಳವು ಉಂಟು.. ಮತ್ತೆ ಈ ನೀರು ಚೊಲೋ ಇಲ್ರಾ.. ದಾಂಡೇಲಿ ಕಾಗದ ಕಾರ್ಖಾನೆ ನೀರು ಇದಕ್ಕೆ ಸೇರ್ತದೋ.. ಹಂಗಾಗಿ ನೀರು ಹಾಳಾಗದೆ.. ನೀವು ನೀರಿಗೆ ಇಳಿದರೆ ಮತ್ತೆಂತಾದ್ರೂ ರೋಗ ಬಂದರೆ.. ಅದಕ್ಕೆ ಹೇಳಿದ್ದು..' ಎಂದ ರಾಬರ್ಟ ಸಿದ್ದಿ. ಆದರೂ ಆ ಪರಿಸರ ಸುಂದರವಾಗಿತ್ತು.ಸಮುದ್ರದ ಕರೆಗೆ ಓಗೊಟ್ಟು ಓಡುವ ನದಿ ಕಮರಿಯನ್ನು ಲೆಕ್ಖಿಸದೇ ಇಳಿಯುವ, ಆಳಕ್ಕೆ ಬೀಳುವ ಪರಿ ಬಹು ಬೆರಗಿಗೆ ಕಾರಣವಾಗುತ್ತಿತ್ತು.
              ವಿಜೇತಾ, ವಿಕ್ರಮನ ಬಿಂಬಗ್ರಾಹಿಗಳು ಒಂದೆ ಸಮನೆ ಚಲಿಸತೊಡಗಿದ್ದವು. ರಮ್ಯ ಬಂಡೆಯಿಂದ ಬಂಡೆಗೆ ಜಿಗಿಯುವ ಚಿನ್ನಾಟಕ್ಕೆ ತೊಡಗಿಕೊಂಡಿದ್ದಳು. ಪ್ರದೀಪ `ಇಳಿದು ಬಾ ತಾಯೇ.. ಇಳಿದು ಬಾ..' ಎಂದು ಹಾಡುತ್ತಿದ್ದ. ಬಾವುಕ ಜೀವಿಯಾದ ವಿನಾಯಕನ ಕವಿಮನಸ್ಸು ಕವಿತೆಯ ಕಡೆಗೆ ತುಡಿಯುತ್ತಿತ್ತು. ಹೊಸದೊಂದು ಕವಿತೆಯನ್ನು ಕಟ್ಟಲು ಹಾತೊರೆಯುತ್ತಿತ್ತು. ತಕ್ಷಣವೇ ವಿನಾಯಕ ತಡಮಾಡದೇ
`ಹೊನ್ನ ಹೊಂಜೊನ್ನ ಧಾರೆ
ಇಳಿಯ ಮೇಲಣ ಸ್ವರ್ಗ ನೀರೆ,
ಇಳಿವ ನೀರೆಲ್ಲ ಅಮೃತಧಾರೆ
ಲಾಲಗುಳಿ.. ನೀನೇ ಮಿನುಗುತಾರೆ...'
ಎಂದು ದೊಡ್ಡದಾಗಿ ಹೇಳಿಬಿಟ್ಟ. ಒಮ್ಮೆಲೆ ಇದನ್ನು ಕೇಳಿದ ಎಲ್ಲರೂ ವಿನಾಯಕನ ಆಶುಕವಿತ್ವಕ್ಕೆ ತಲೆದೂಗಿದರು. ವಾಹ್.. ವಿನಾಯಕನ ಬೆನ್ನು ತಟ್ಟಿದರು.
            ನಂತರ ವಿನಾಯಕ, ವಿಕ್ರಮ ಹಾಗೂ ರಾಬರ್ಟ ನದಿಯಲ್ಲಿ ಈಜಲು ನೀರಿಗೆ ಇಳಿದರು. ಪ್ರದೀಪ ನೀರಿಗೆ ಇಳಿಯಲು ಹಿಂಜರಿದ. ನಂಗೆ ಈಜು ಬರೋದಿಲ್ಲ ಎಂದ. ಆದರೂ ಪಟ್ಟು ಬಿಡದ ಉಳಿದವರು ಪ್ರದೀಪನನ್ನು ನೀರಿಗೆ ಎಳೆದೇ ಬಿಟ್ಟರು. ಆದರೆ ನೀರಿಗಿಳದ ನಂತರ ಪ್ರದೀಪ ಈಜು ಬರದವರಂತೆ ಹೆದರಲಿಲ್ಲ. ಮುಳುಗಲಿಲ್ಲ. ಈಜಾಡಲಾರಂಭಿಸಿದ. ಕಾಳಿ ನದಿಗೆ ಸೆಳವು ಜಾಸ್ತಿ. ಒಮ್ಮೆಯಂತೂ ಸೆಳವಿದ್ದಲ್ಲಿಯೂ ಹೋಗಿ ಬಂದ. ಎಲ್ಲರ ಎಧೆ ಝಲ್ಲೆನ್ನುತ್ತಿದ್ದರೆ ಪ್ರದೀಪ ಆರಾಮಾಗಿ ಈಸುಬಿದ್ದು ಬಂದ. ಆಗ ಮಾತ್ರ ಎಲ್ಲರಿಗೂ ಅಚ್ಚರಿ. ಕೊನೆಗೆ ವಿಚಾರಿಸಿದಾಗ ಪ್ರದೀಪ ತನಗೆ ಈಜು ಗೊತ್ತಿದೆಯೆಂದೂ ಸಾಗರದ ಕೆಳದಿ ಕೆರೆಯಲ್ಲಿ ಈಜು ಕಲಿತವನೆಂದೂ ತಿಳಿಯಿತು. ಮೊದಲೇ ಎಲ್ಲರ ಮನಸ್ಸಿನಲ್ಲಿ ನಿಗೂಢತೆಯ ಛಾಯೆಯನ್ನು ಹುಟ್ಟಿಸಿದ್ದ ಪ್ರದೀಪ ಮತ್ತೊಮ್ಮೆ ನಿಘೂಢನಾದ. ಎಲ್ಲವನ್ನೂ ತಿಳಿದಿದ್ದರೂ ಏನೂ ಗೊತ್ತಿಲ್ಲ ಎನ್ನುವ ನಾಟಕವಾಡಿದ ಪ್ರದೀಪನ ಬಗ್ಗೆ ಪ್ರತಿಯೊಬ್ಬರೂ ಸಂಶಯಿಸುವಂತಾದ.
               ಸುಮಾರು ಹೊತ್ತಿನ ತನಕ ಈಜಾಡಿದವರಿಗೆ ಕೊನೆಗೊಮ್ಮೆ ಮನದಣಿಯಿತು. ನೀರಿನಿಂದೆದ್ದು ಕೊಂಡೊಯ್ದಿದ್ದ ಬುತ್ತಿಯನ್ನು ಬಿಚ್ಚಿ, ಹೊಟ್ಟೆ ತುಂಬ ತಿಂದು ನೀರು ಕುಡಿದು ವಿರಮಿಸಿದರು. ವಿಜೇತಾಳ ಕ್ಯಾಮರ ಕೆಲಸ ಮಾಡುತ್ತಲೇ ಇತ್ತು. ಜಲಪಾತದ ವಿವಿಧ ಕೋನಗಳು, ಅಲ್ಲಿನ ನಿಸರ್ಗದ ರಮ್ಯ ಚಿತ್ತಾರವನ್ನೆಲ್ಲ ಆಕೆ ಸೆರೆ ಹಿಡಿಯುತ್ತಿದ್ದಳು. ಕಾಳಿ ನದಿ ಸೃಷ್ಟಿ ಮಾಡಿದ್ದ ಬಗೆ ಬಗೆಯ ಕಲ್ಲಿನ ಚಿತ್ತಾರಗಳು ವಿಜೇತಾಳ ಕ್ಯಾಮರಾದಲ್ಲಿ ಬಂಧಿಯಾದವು. ಎಷ್ಟು ಚಿತ್ರಗಳನ್ನು ಕ್ಲಿಕ್ಕಿಸಿದರೂ ವಿಜೇತಾಳ ಕ್ಯಾಮರಾಕ್ಕೆ ದಣಿವಾಗಲಿಲ್ಲ ಬಿಡಿ.
               ಈ ಮಧ್ಯ ಪ್ರದೇಪ ತನ್ನ ವಿಚಿತ್ರ ಧ್ವನಿಯಲ್ಲಿ `ಇಳಿದು ಬಾ ತಾಯಿ ಇಳಿದು ಬಾ..' ಎಂದು ಗುನುಗುತ್ತಲೇ ಇದ್ದ. ರಾಬರ್ಟ ಸಿದ್ದಿ ಬಿದಿರಿನ ಗಳಗಳನ್ನು, ಬೇಟೆಗೆ ಜೀವಿಗಳನ್ನೂ ಹುಡುಕತೊಡಗಿದ್ದರೆ ರಮ್ಯ ನೀರಿನಲ್ಲಿ ಆಟವಾಡತೊಡಗಿದ್ದಳು. ವಿಕ್ರಮ ಒಂದೆಡೆ ಕುಳಿತು ತಾನು ಮಾಡಬೇಕಿದ್ದ ಕೆಲಸದ ಬಗ್ಗೆ ಆಲೋಚನೆ ಮಾಡುತ್ತಿದ್ದ. ವಿನಾಯಕನ ಕವಿಮನಸ್ಸು ಕವನದ ಜನ್ಮಕ್ಕೆ ಹಾತಿರೆಯುತ್ತಿತ್ತಾದರೂ ರಮ್ಯಳ ನೀರಾಟ ಅದಕ್ಕೆ ಭಂಗ ತಂದಿತು. ರಮ್ಯ ನೀರಾಡುತ್ತ ಆಡುತ್ತ ವಿನಾಯಕನಿ ನೀರು ಸೋಕಿದ್ದಳು. ವಿನಾಯಕನೂ ನೀರಾಟಕ್ಕೆ ಇಳಿದು ಬಿಟ್ಟಿದ್ದ.
              ಅಷ್ಟರಲ್ಲಿಯೇ ರಾಬರ್ಟ `ಹೋಯ್... ಯಾರೋ ಅದು.. ಹಂಗ್ ಓಡ್ತಿಯಲ್ಲೋ.. ನಿಲ್ಲೋ...' ಎಂದು ಕೂಗಿದ.
              ಎಲ್ಲರೂ ಗಡಬಡಿಸಿ ಎದ್ದು ಬಂದು ನೋಡುವಷ್ಟರಲ್ಲಿ ಒಬ್ಬಾತ ಓಡಿ ಹೋಗಿದ್ದ. ಕೊನೆಗೆ ಯೋಚಿಸಿದಾಗ ಮೊದಲು ಕಾಟ ಕೊಡುತ್ತಿದ್ದ ವ್ಯಕ್ತಿಯೇ ಈತ ಎನ್ನುವುದೂ ತಿಳಿಯಿತು. `ಆತ ಇಲ್ಲಿಗೂ ಬಂದನಾ..?' ಎಂದು ಗೊಣಗಿದ ವಿಕ್ರಮ್. `ಯಾರು..? ಏನು? ಯಾರಾತ..?' ವಿನಾಯಕನ ಪ್ರಶ್ನೆ. `ಯಾರಿಲ್ಲ ಬಿಡು.. ಇನ್ನೊಮ್ಮೆ ಹೇಳ್ತೀನಿ..' ಎಂದ ವಿಕ್ರಮ್.
               ಅಷ್ಟು ಹೊತ್ತಿಗೆ ಸಾಕಷ್ಟು ಸಮಯವೂ ಆಗಿದ್ದರಿಂದ ವಾಪಸ್ಸಾಗಲು ಮುಂದಾದರು. ವಾಪಸ್ಸಾಗುವ ಮುನ್ನ ಲಾಲಗುಳಿ ಜಲಪಾತಕ್ಕೊಂದು ಗುಡ್ ಬೈ ಹೇಳಿ ಕಣ್ಣೀರು ಮನೆಯ ಕಡೆಗೆ ಹಾದಿ ಹಿಡಿದರು.

(ಮುಂದುವರಿಯುತ್ತದೆ)             

Monday, January 19, 2015

ಹಕ್ಕಿಗಳೇ ಹಾರಿಬಿಡಿ

ಹಕ್ಕಿಗಳೇ ಹಾರಿಬಿಡಿ ಬಾನಂಗಳಕೆ
ರೆಕ್ಕೆ ಬಲಿತಿದೆ, ಪುಕ್ಕ ಬೆಳೆದಿದೆ ಹಾರಿಬಿಡಿ |

ಇನ್ನೇಸು ದಿನ ತಂದೆ ತಾಯ್ಗಳ ಹಂಗು?
ಕಾಯುತಿದೆ ಮುಂದೊಂದು ಗಮ್ಯ ಬಿಂದು.
ಜೊತೆಯೆಲ್ಲೋ ಉಂಟು ಸಂಗಾತಿ ಹಕ್ಕಿ
ಹಾರಿದರೇ ನವಪುಳಕ, ನೀ ಚುಕ್ಕಿ |

ತಂದೆ ರೆಕ್ಕೆ ದುರ್ಬಲ, ತಾಯ್ಗಣ್ಣು ಮಂಜು
ತಂದು ಹಾಕುವರಿಲ್ಲ, ನೋವೇ ನಂಜು.
ಹಕ್ಕಿಗಳೇ ಹಾರಿಬಿಡಿ, ಬೇಟೆ ಹಿಡಿ.
ಹಾದಿಯೊಳಗಣ ಕಷ್ಟ  ಮರೆತುಬಿಡಿ |

ಕಲಿವಾಗೊಮ್ಮೆ ಬಿದ್ದಿರಬಹುದು ಈಗ ಜಟ್ಟಿ
ಸರ್ವಾತ್ಮ ಜೀವದೊಳು ನೀನೇ ಜಟ್ಟಿ
ಹಕ್ಕಿ ಹದ್ದನು ನೀನು ಗೆಲ್ಲಬಲ್ಲೆ
ಗಮ್ಯತೆಯ ರಮ್ಯತೆಯ ಪಡೆಯಬಲ್ಲೆ |

***
(ಈ ಕವಿತೆಯನ್ನು 3-06-2006ರಂದು ದಂಟಕಲ್ ನಲ್ಲಿ ಬರೆಯಲಾಗಿದೆ)

(ಆಕಾಶವಾಣಿ ಕಾರವಾರದಲ್ಲಿ ವಾಚನ ಮಾಡಿದ್ದೇನೆ)

Friday, January 16, 2015

ಅಘನಾಶಿನಿ ಕಣಿವೆಯುಲ್ಲಿ-8

               `ಅಮಾ... ಆನು ವಿಕ್ರಮ.' ಎಂದು ಹೇಳಿದಾಗ ಆಕೆಯ ಮುಖವರಳಿತು. ಖುಷಿಯಿಂದ `ಏನೋ.. ನಂಬಲೆ ಆಯ್ದಿಲ್ಲೆ ನೋಡು.. ಇಷ್ಟು ಉದಯಪ್ಪಾಗ ಎಲ್ಲಿಂದ ಬಂದೆ? ಯಂಗ ಒಂದ್ ಸಾರಿ ಗೊತ್ತೇ ಆಯ್ಲೆ.. ಅರೇ.. ಕಾರು ತಯಿಂದೆ. ಯಾರದ್ದು? ಅರೇ ಕಾರಲ್ಲಿ ಯಾರಿದ್ದ?  ಬಾ ವಳಗ ಹೋಪನ. ಬಿಸಿ ಬಿಸಿ ದ್ವಾಸೆ ಮಾಡಿದ್ದೆ ಬಿಲ್ಯ. ಕಾರಲ್ಲಿದ್ದವರನ್ನೂ ಕರಿ. ನಿನ್ನಂತೂ ಕಾಂಬುಲೇ ಔತ್ಲ್ಯಲೇ..' ಎಂದು ಗ್ರಾಮ್ಯ ಭಾಷೆಯಲ್ಲಿ ವಿಕ್ರಮನಿಗೆ ಹೇಳಿದಳು ಆತನ ತಾಯಿ ಲಕ್ಷ್ಮೀಬಾಯಿ.
              `ಅಮಾ.. ಆನು ಈಗಷ್ಟೆ ಬೈಂದೆ. ಕಾರು ಯನ್ನ ಮ್ಯಾಲಿನ ಆಫೀಸರದ್ದು. ಕಾರಲ್ಲಿದ್ದವರು ಯನ್ನ ಪ್ರೆಂಡ್ಸು..' ಎಂದು ಹೇಳಿ ವಿಕ್ರಂ ಕಾರಿನ ಬಳಿ ತಾಯಿಯನ್ನು ಕರೆದೊಯ್ದ. ಕಾರಿನಲ್ಲಿದ್ದವರನ್ನು ಪರಿಚಯಿಸಿದ. ಎಲ್ಲರೂ ಕೈಯಲ್ಲಿದ್ದ ಮಣಭಾರದ ಲಗೇಜುಗಳನ್ನು ಹೊತ್ತು ಒಳಗೆ ಹೋದರು.
              ವಿಕ್ರಮನದು ಭವ್ಯ ಮನೆ. ಇಡಿ ಮನೆ ಮರದಿಂದಲೇ ಮಾಡಿದ್ದು. ಹಳೆಯ ಕಾಲದ ಮನೆ ಎಂದು ನೋಡಿದೊಡನೆ ಹೇಳಬಹುದಿತ್ತು. ಯಾವ ಶತಮಾನದಲ್ಲಿ ಮನೆಯನ್ನು ಕಟ್ಟಲಾಗಿತ್ತೋ. ಬೀಟೆ, ತೇಗಗಳ ಮರಗಳಿಂದಲೇ ಮಾಡಿದ್ದು ಸ್ಪಷ್ಟವಾಗಿತ್ತು. ಎಲ್ಲರೂ ಒಳಗೆ ಹೋಗುವ ವೇಳೆಗೆ ವಿಕ್ರಮನ ತಂಗಿ ರಮ್ಯ ಎದುರಾದಳು. ಆಕೆಯನ್ನು ಎಲ್ಲರಿಗೂ, ಎಲ್ಲರನ್ನೂ ಆಕೆಗೂ ಪರಿಚಯಿಸಿದ ವಿಕ್ರಂ. ಅಷ್ಟರಲ್ಲಿ ತಿಂಡಿ ತಯಾರಿದೆಯೆಂಬ ಅಮ್ಮನ ಬುಲಾವ್ `ಆಸ್ರಿಗೆ ಕುಡಿಯಲಾತು..' ಕೇಳಿಸತೊಡಗಿತು. ಎಲ್ಲರೂ ಮುಖ, ಕೂಕಾಲುಗಳನ್ನು ತೊಳೆದು ತಿಂಡಿ ತಿನ್ನಲು ಕುಳಿತರು. ಅವರಿಗೆ ಭರ್ಜರಿಯಾಗಿ ದೋಸೆಗಳ ಮೇಲೆ ದೋಸೆಯನ್ನು ಹಾಕಿದರು. ದೋಸೆಯ ರುಚಿ ಆಹ್...! ಜೊತೆಗೆ ಕಾಯಿ ಚಟ್ನಿ.. ಅದೆಷ್ಟು ದೋಸೆಗಳು ಉದರವನ್ನು ಸೇರಿದವೋ.
             ಅಂತೂ ತಿಂಡಿ ಮುಗಿಸುವ ವೇಳೆಗಾಗಲೇ ಬೆಳಗಿನ ಎಲ್ಲಾ ಸ್ನಾನ, ಸಂಧ್ಯಾವಂದನೆ, ದೇವರಪೂಜೆ ಇತ್ಯಾದಿ ಕೆಲಸ ಮುಗಿಸಿ ಯಾರದ್ದೋ ಮನೆಗೆ ಯಾವುದೋ ಕೆಲಸಕ್ಕೆ ಹೋಗಿದ್ದ ವಿಕ್ರಮನ ತಂದೆ ರಾಜಾರಾಮ ಭಟ್ಟರು ಮನೆಗೆ ಬಂದರು. ಬಂದವರು ವಿಕ್ರಮನನ್ನು ನೋಡಿ `ಮಾಣಿ.. ಈಗ ಬೈಂದ್ಯ..' ಎಂದವರಿಗೆ ವಿಕ್ರಮ್ ತಲೆಯಲ್ಲಾಡಿಸಿ ಏನನ್ನೋ ಹೇಳಲು ಬಾಯಿ ತೆರೆಯುವಷ್ಟರಲ್ಲಿ `ಓ ವಿಜೇತಾ.. ಓ ಪ್ರದೀಪ್.. ಅರಾಮಿದ್ರಾ? ಆಸ್ರಿಗೆ ಕುಡದಾತಾ?' ಎಂದೆಲ್ಲಾ ಕೇಳಿದಾಗ ವಿಕ್ರಮನಿಗೆ ಒಮ್ಮೆಗೇ ಆಶ್ಚರ್ಯ ಹಾಗೂ ದಿಗ್ಭ್ರಾಂತಿ. `ನಾನು ಸರ್ಪ್ರೈಸ್ ಕೊಡಬೇಕು ಎಂದು ಇವರ ಬಗ್ಗೆ ಹೇಳ್ದೇ ಇದ್ರೂ ಅಪ್ಪಯ್ಯನಿಗೆ ಹೇಗೆ ತಿಳಿಯಿತು?' ಎಂದು ಆಲೋಚಿಸುತ್ತಾ `ಅರೇ.. ಅಪ್ಪಯ್ಯಾ.. ಇವಿಬ್ರೂ ಇದೇ ಮೊದ್ಲು ನಿಂಗೆ ಸಿಕ್ತಾ ಇದ್ದ. ಆದ್ರೂ ನಿಂಗೆ ಹ್ಯಾಂಗೆ ಇವ್ರ ಬಗ್ಗೆ ಗೊತ್ತಾತು?' ಎಂದು ವಿಕ್ರಮ ಕೇಳಿದಾಗ ತಬ್ಬಿಬ್ಬಾಗುವ ಸರದಿ ಭಟ್ಟರದ್ದಾಯಿತು.
            ಆದರೂ ತಕ್ಷಣ ಸಾವರಿಸಿಕೊಂಡು `ಅಲ್ದಾ ನೀನು ಪತ್ರ ಬರೆದಿದ್ಯಲ.. ಅದ್ರಲ್ಲಿ ತಿಳಿಸಿದ್ದೆ. ಅದಕ್ಕಾಗಿ ಗೊತ್ತಾತು ಬಿಲ್ಯಾ..' ಎಂದರು. ಆದರೆ ವಿಕ್ರಂ `ನಾನು ಬರೆದ ಲೆಟರಿನಲ್ಲಿ ಈ ಬಗ್ಗೆ ತಿಳಿಸಿಯೇ ಇರಲಿಲ್ಲ. ಆದರೂ ಹೇಗೆ ತಿಳಿಯಿತು? ಇದರಲ್ಲೇನೋ ವಿಶೇಷತೆ, ನಿಘೂಡತೆ ಇದೆ..' ಅಂದುಕೊಂಡ. ನಂತರ ದೂರದ ಪಯಣಿಗರೆಲ್ಲ ರಾತ್ರಿ ನಿದ್ದೆಗೆಟ್ಟ ಆಯಾಸ ಪರಿಹಾರಕ್ಕಾಗಿ ಹಾಸಿಗೆಗೆ ತೆರಳಿದರು. ಅಲ್ಲಿಗೆ ಕಥೆಗೆ ಒಂದು ದೊಡ್ಡ ತಿರುವು ಸಿಕ್ಕಂತಾಗಿತ್ತು.
             ಹಾಗಾದರೆ ರಾಜಾರಾಮ ಭಟ್ಟರಿಗೆ ವಿಜೇತಾ, ಪ್ರದೀಪರ ಬಗ್ಗೆ ಹೇಗೆ ತಿಳಿಯಿತು? ಇವರಿಗೆ ಮೊದಲೇ ಈರ್ವರ ಪರಿಚಯ ಇತ್ತೇ? ಅಥವಾ ಬೇರೆ ಯಾರಾದರೂ ತಿಳಿಸಿದ್ದರೇ? ಇದು ಮಾತ್ರ ನಿಗೂಢವಾಗಿತ್ತು. ಜೊತೆಗೆ ವಿಕ್ರಮನನ್ನು ಹಿಂಬಾಲಿಸುತ್ತಿದ್ದ ನಿಗೂಢ ವ್ಯಕ್ತಿ ಇಲ್ಲಿಗೂ ಬಂದಿದ್ದ. ಆತ ಹೀಗೆ ವಿಕ್ರಮನ ಹಿಂಬಾಲಿಸಲು ಕಾರಣ ಏನು? ಇಷ್ಟೆಲ್ಲ ನಡೆದಿದ್ದಿ ಎಪ್ರಿಲ್ 10ರಂದು.

****

          ಮದ್ಯಾಹ್ನದ ವರೆಗಿನ ಗುಟುಕು ನಿದ್ದೆಗೆ ಎಲ್ಲರೂ ಕ್ರಿಯಾಶೀಲರಾದರು. ಊರಿನ ಪರಿಸರವನ್ನು ಆಸ್ವಾದಿಸಲು ಹೊರಗೆ ಹೊರಟರು. ವಿಕ್ರಂ, ವಿಜೇತಾ, ರಮ್ಯ, ಪ್ರದೀಪರು ಹೊರಟರೆಂದರೆ ಊರಿಗೆ ಊರೇ ಮತ್ತೆ ಮತ್ತೆ ನೋಡಲಾರಂಭಿಸಿತ್ತು. ಆದರೆ ಗುಸು ಗುಸು ಸುದ್ದಿ ಮಾತನಾಡುವಷ್ಟು ಮನೆಗಳು ಹತ್ತಿರದಲ್ಲಿ ಇಲ್ಲವಾದ ಕಾರಣ ಇವರು ಎಲ್ಲರ ಬಾಯಿಗೆ ಆಹಾರವಾಗುವುದು ತಪ್ಪಿತು. ಇದರ ಪರಿವಿಲ್ಲದ ಇವರು ಊರು, ಊರಿನ ಪರಿಸರ, ಊರ ತುದಿಯಲ್ಲಿರುವ ಕಾಳಿ ನದಿಯ ಉಪನದಿ ಇಲ್ಲೆಲ್ಲ ತಿರುಗಾಡಿದರು.
           ಮುಖ್ಯ ಸಂಗತಿಗಳನ್ನು ಬರೆದಿಟ್ಟುಕೊಳ್ಳುತ್ತಿದ್ದ ವಿಜೇತಾ ಆಗಾಗ ಸುಂದರ ಪೋಟೋಗಳನ್ನು ಕ್ಲಿಕ್ಕಿಸುತ್ತಿದ್ದಳು. ಪ್ರದೀಪನಿಗೆ ಇವುಗಳಲ್ಲಿ ಆಸಕ್ತಿ ಇಲ್ಲದ ಕಾರಣ ಆತ ಈ ಯಾವ ಕೆಲಸಗಳನ್ನೂ ನಡೆಸಲಿಲ್ಲ. ಆದರೂ ಎಲ್ಲಾ ಕಡೆ ಏನನ್ನೋ ಹುಡುಕುವಿಕೆಯ, ಕಳ್ಳದೃಷ್ಟಿಯ ಬೀರುತ್ತಿದ್ದ. ಆಗಾಗ ಬಾಯಲ್ಲಂತೂ `ರಮ್ಯ ಜೀವನ.. ಸಂಪೂರ್ಣ ವಿಧಿಯ ಕಲಾವಿಧಾನ...' ಎಂತಲೋ ಮತ್ಯಾವುದೋ ಸುಂದರ ಹಾಡುಗಳನ್ನು ಹಾಡುತ್ತ ಸಾಗುತ್ತಿದ್ದ. ವಿಕ್ರಮ ಎಲ್ಲವುಗಳಿಗೆ ವಿವರಣೆ ನೀಡುತ್ತಿದ್ದರೆ, ವಾಚಾಳಿ ರಮ್ಯ ಪ್ರತಿಯೊಂದರ ಬಗೆಗೂ ಸಾಕಷ್ಟು ಹರಟುತ್ತಿದ್ದಳು. ಕಾಡಿನ ನಡು ನಡುವಿನ ಗದ್ದೆಗಳು, ತೋಟ, ತೋಟದ ಮಧ್ಯ ಮಧ್ಯದಲ್ಲಿ ತೆಂಗಿನಮರಗಳು, ಮಾವು, ಹಲಸು ಮರಗಳು ಆ ಊರಿನ ಸೊಬಗಿಗೆ ತಾವೇನನ್ನೋ ಕೊಟ್ಟಿದ್ದೇವೆ ಎನ್ನುವಂತಿದ್ದವು. ಇವರು ಮುಖ್ಯವಾಗಿ ಒಂದು ದಾರಿಯನ್ನು ಹಿಡಿದು ಹೋಗಿದ್ದರು. ಕೊನೆಗೆ ಅಲ್ಲೊಂದು ಪುಟ್ಟ ಕಟ್ಟಡ ಕಂಡು ಬಂದಿತು. ಅದನ್ನು ತೋರಿಸಿದ ವಿಕ್ರಮ್ `ಇದೇ ನಾನು ಕಲಿತ ಪ್ರೈಮರಿ ಶಾಲೆ..' ಎಂದ.
             ಆ ಶಾಲೆ ಹಳ್ಳಿಗಾಡಿನ ನ್ಯೂನತೆಗಳನ್ನೇ ಮೈವೆತ್ತಿಕೊಂಡಂತಿತ್ತು. ಎಂದೋ ಹಾಕಲಾಗಿದ್ದ ಸಿಮೆಂಟು ಅಲ್ಲಲ್ಲಿ ಕಿತ್ತು ಹೋಗಿತ್ತು. ಅಲ್ಲಲ್ಲಿ ಹಂಚುಗಳು ಒಡೆದಿದ್ದವು. ಈ ಶಾಲೆ ಸರ್ಕಾರದ ದಿವ್ಯ ನಿರ್ಲಕ್ಷ್ಯದ ಕನ್ನಡಿಯಂತೆ ಕಂಡಿತು. ಇವರು ಹೋದ ದಿನ ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳಿದ್ದರು. ಅದರೊಳಗೆ ದೊಡ್ಡದಾಗಿ ಓದಿ ಹೇಳುತ್ತಿದ್ದ ಮಾಸ್ತರರ ಧ್ವನಿ `ಬಾರ ಬಾರ ಆತೀ ಹೈ ಮುಝಕೋ.. ಮಧುರ ಯಾದ ಬಚಪನ ತೇರಿ...' ಎಂಬ ಸಾಲುಗಳೂ ಜೊತೆಗೆ ಹತ್ತೆಂಟು ಮಕ್ಕಳು ಇದೇ ಸಾಲನ್ನು ಪುನಃ ಉಚ್ಛಾರ ಮಾಡಿದ್ದೂ ಕೇಳುತ್ತಿತ್ತು.
             `ಈ ಶಾಲೆ ಹಲವು ವಿಶೇಷತೆಗಳಿವೆ. ಪ್ರತಿ ಮಳೆಗಾಲದಲ್ಲಿ ಶಾಲೆಗೆ ಅನಿರ್ದಿಷ್ಟಾವಧಿ ರಜಾ ಸಿಗುತ್ತದೆ. ಉಕ್ಕೇರಿ ಹಳ್ಳ-ಕೊಳ್ಳಗಳು ಊರಿಗೂ ಹೊರಜಗತ್ತಿಗೂ ಸಂಪರ್ಕವನ್ನು ಕಲ್ಪಿಸುತ್ತವೆ. ಯಲ್ಲಾಪುರದಿಂದ ನಮ್ಮೂರ ಶಾಲೆಗೆ ಪ್ರತಿದಿನ ಮಾಸ್ತರ್ರು ಬಂದು ಕಲಿಸಿ ಹೋಗುತ್ತಾರೆ. ತಮ್ಮದೊಂದು ಬೈಕ್ ತರುತ್ತಾರೆ. ಆದರೆ ಮಳೆಗಾಲದಲ್ಲಿ ಮಾತ್ರ ಅವರು ಶಾಲೆಗೆ ಬರುವುದು ತಪ್ಪುತ್ತದೆ. ಹಳ್ಳ-ಕೊಳ್ಳದ ನೀರಿನ ಸೆಳವು ಇಳಿದ ನಂತರವೇ ಮಾಸ್ತರ್ರು ಶಾಲೆಗೆ ಮರಳುವುದು. ಅಲ್ಲಿಯವರೆಗೂ ಮಕ್ಕಳಿಗೆ ಶಾಲೆ ನಡೆಯುವುದಿಲ್ಲ. ಸ್ಥಳೀಯವಾಗಿ ಪಿಯುಸಿ ಮುಗಿಸಿದವರಿದ್ದರೆ ಅವರು ಶಾಲೆಗೆ ಬಂದು ಮಕ್ಕಳಿಗೆ ಪಾಠ ಹೇಳುವ ಕೆಲಸವನ್ನು ಮಾಡುತ್ತಾರೆ.. ಇದು ಈ ಶಾಲೆಯ ವಿಶೇಷತೆಗಳು..' ಎಂದ ವಿಕ್ರಮ.
             ಮಧ್ಯದಲ್ಲಿ ಬಾಯಿ ಹಾಕಿದ ರಮ್ಯ. `ನಾವು ಶಾಲೆಗೆ ಹೋಗುತ್ತಿದ್ದ ದಿನಗಳು ಬಹಳ ಬೊಂಬಾಟ್.. ಅಣ್ಣ ಏಳನೇ ಕ್ಲಾಸಲ್ಲಿ ಓದುತ್ತಿದ್ದ. ನಾನು ಒಂದನೇ ಕ್ಲಾಸು.. ಸತೀಶ ಮಾಸ್ತರ್ರು ನಮ್ಮ ಮೊದಲ ಮಾಸ್ತರ್ರು.. ಆಮೇಜೆ ಜಿ. ಎಸ್. ಭಟ್ಟರು, ಅದಾದ ಮೇಲೆ ತಾರಕ್ಕೋರು, ಗಂಗಕ್ಕೋರು, ಗಡ್ಕರ್ ಮಾಸ್ತರ್ರು, ಹರೀಶ ಮಾಸ್ತರ್ರು ಎಲ್ಲಾ ನಮಗೆ ಕಲಿಸ್ತಿದ್ರು.. ಅವರೆಲ್ಲ ಎಷ್ಟು ಸ್ಟ್ರಿಕ್ಟ್ ಆಗಿದ್ದರು ಎಂದರೆ ನಾವೆಲ್ಲಾ ಗಡಗಡ.. ಸತೀಶ ಮಾಸ್ತರ್ರು, ಜಿ. ಎಸ್. ಭಟ್ಟರು ದೊಡ್ಡ ದೊಡ್ಡ ಬೆತ್ತಗಳಿಂದ ನಮಗೆ ಹೊಡೆಯುತ್ತಿದ್ದರೆ ನಮ್ಮ ಕೈ, ಬೆನ್ನ ಮೇಲೆ ಬಾಸುಂಡೆಗಳು ಬರುತ್ತಿದ್ದವು. ಇದ್ದವರ ಪೈಕಿ ಗಡ್ಕರ್ ಮಾಸ್ತರ್ರು ಪಾಪದವರು. ಯಾವಾಗಲೂ ನಗಿಸುತ್ತಿದ್ದರು. ಆದರೆ ಅಣ್ಣನಿಗೆ ಮಾತ್ರ ಅವರು ಅಂದರೆ ಕನಸಲ್ಲೂ ಕಾಡುತ್ತಾರೆ. ನಮಗೆಲ್ಲ ಮದ್ಯಾಹ್ನ ಆಟಕ್ಕೆ ಬಿಟ್ಟಿದ್ದಾಗ ಅಣ್ಣನಿಗೆ ಬುಲಾವ್ ನೀಡುತ್ತಿದ್ದ ಗಡ್ಕರ್ ಮಾಸ್ತರ್ರು ತಮ್ಮೊಡನೆ ಚೆಸ್ ಆಡಲು ಕೂರಿಸಿಕೊಳ್ಳುತ್ತಿದ್ದರು. ನಾವೆಲ್ಲ ಬಯಲಲ್ಲಿ ಆಡುತ್ತಿದ್ದರೆ ಪಾ..ಪ ಅಣ್ಣ ಆಸೆಗಣ್ಣಿನಿಂದ ನೋಡುತ್ತಿದ್ದ.. ಇನ್ನೊಂದ್ ಮಜಾ ಅಂದ್ರೆ  ಗಡ್ಕರ್ ಮಾಸ್ತರ್ರಿಗೆ ದೃಷ್ಟಿ ದೋಷ ಇತ್ತು. ಯಾವಾಗಲೂ ಚೆಸ್ಸಿನಲ್ಲಿ ಕಪ್ಪು ಕಾಯಿ ಅವರದ್ದೇ ಆಗಬೇಕಿತ್ತು. ಅಣ್ಣನದ್ದು ಬಿಳಿಯ ಕಾಯಿ. ಅಣ್ಣ ಕಡ್ಡಾಯವಾಗಿ ಸೋಲಲೇಬೇಕು. ಪಾ..ಪ ಅಣ್ಣನ ಪಚೀತಿ ಮಜವಾಗಿತ್ತು..' ಎಂದಾಗ ಎಲ್ಲರೂ ನಕ್ಕರು.
             ಹೀಗೆ ಮಾತುಗಳು ಸಾಗುತ್ತಿದ್ದಾಗ ಎಲ್ಲರೂ ತಮ್ಮ ತಮ್ಮ ಮರೆತ ಬಾಲ್ಯದ ನೆನಹುಗಳ ಕಡೆಗೆ ಸಾಗಿದಾಗ ಪ್ರದೀಪ ಒಮ್ಮೆಲೆ ನಸುನಕ್ಕ. `ಯಾಕಪ್ಪಾ..' ಎಂದು ಕೇಳಿದಾಗ ಪ್ರದೀಪ `ಅಯ್ಯೋ ನಮ್ ಹುಡ್ಗುಗೆ ನಾನು ಹೈಸ್ಕೂಲ್ನಲ್ ಇದ್ದಾಗ ಮೊಟ್ಟ ಮೊದಲ ಬಾರಿಗೆ ಲವ್ ಲೆಟರ್ ಬರೆದಿದ್ನಪ್ಪಾ.. ಅಯ್ಯೋ ಅದೊಂದು ಗೋಳಿನ ಕಥೆ ಬಿಡಿ...' ಎಂದು ತನ್ನ ಕಥೆಯನ್ನೆಲ್ಲ ಹೇಳಿದ. ಎಲ್ಲರೂ ನಕ್ಕರು.
         ಒಂದಷ್ಟು ಪ್ರದೇಶಗಳನ್ನು ವೀಕ್ಷಿಸುವ ವೇಳೆಗೆ ಆಗಲೇ ಸಕಲ ಜೀವನ ಚೈತನ್ಯಕ್ಕೆ ಕಾರಣಕರ್ತನಾದ ನೇಸರ ಪಶ್ಚಿಮದೆಡೆಗೆ ಹೊರಟಿದ್ದ. ಎಲ್ಲರೂ ಮರಳಿ ಮನೆಯತ್ತ ನಿಧಾನವಾಗಿ ಹೆಜ್ಜೆ ಹಾಕಿದರು. ಇವರೂ ಮನೆಯ ಕಡೆಗೆ ಮರಳಲು ಮುಂದಾದರು. ಹೆಜ್ಜೆ ಹಾಕಿದರು.
         ಅವರು ಸ್ವಲ್ಪ ದೂರ ಬಂದಿರಬಹುದು. ಅಷ್ಟರಲ್ಲೊಬ್ಬರು ವಯಸ್ಸಾದ ವ್ಯಕ್ತಿ ಆ ದಾರಿಯಲ್ಲಿ ಬಂದರು. ಸಾಕಷ್ಟಿದ್ದ ಕೆಂಪಡರಿದ್ದ ಅವರ ಪಂಚೆ ಇಳಿಸಂಜೆಯ ಕೆಂಬಣ್ಣಕ್ಕೆ ಮತ್ತಷ್ಟು ಕೆಂಪಡರಿತ್ತು. ಬಾಯ್ತುಂಬ ಬಡವರ ಅಮೃತವಾದ ಕವಳವನ್ನು ಮೆಲ್ಲುತ್ತಾ ಆಗಾಗ ತುಪ್ಪುತ್ತಾ, ಏನನ್ನೋ ಹುಡುಕುವ ರೀತಿಯಲ್ಲಿ ಆಗಾಗ ಸೂರ್ಯನ ಕಿರಣಗಳ ಮರೆಮಾಡಿ ಕಣ್ಣು ಕೀಲಿಸುತ್ತಾ ಬರುತ್ತಿದ್ದರು.
        ದೂರದಿಂದಲೇ ಆತನನ್ನು ಗುರುತಿಸಿದ ರಮ್ಯ `ನೋಡಿ ಅಲ್ಲಿ ಬರ್ತಾ ಇದ್ವಲಿ ಅವರೇ ರಾಮಕೃಷ್ಣ ಗಾಂವ್ಕಾರರು. ನಮ್ಮೂರಿನವರೇ.. ಇಲ್ಲೇ ಸ್ವಲ್ಪ ದೂರದಲ್ಲಿ ಅವರ ಮನೆಯಿದೆ...' ಎಂದು ಹೇಳುವ ವೇಳೆಗೆ ಅವರು ಹತ್ತಿರ ಬಂದು `ನೀವ್ಯಾರು? ನಿಂಗವ್ಕೆ ಯಲ್ಲಾತು? ಗುರ್ತು ಸಿಕ್ಕಿದ್ಲ್ಯಲೇ ಯಂಗ..' ಎಂದು ಕೇಳಿದಾಗ ವಿಕ್ರಮ್ `ನಾನು ಗಾಂವ್ಕಾರಜ್ಜ ವಿಕ್ರಮ. ರಾಜಾರಾಮ ಭಟ್ರ ಮಗ. ಇವೆಲ್ಲ ಯನ್ನ ಪ್ರೆಂಡ್ಸು..' ಎಂದ.
           ಅದಕ್ಕೆ ಗಾಂವ್ಕಾರರು `ಯೇ ನೀ ಮಂಗ್ಲೂರಲ್ಲಿದ್ಯಡ.. ಯಂತಾ ಮಾಡ್ತಾ ಅಲ್ಲಿ? ಯಲ್ಲಾ ಸುಡುಗಾಡು ನೌಕರಿ ಹೇಳ್ತ.. ಯಂತಾ ಮಾಡ್ತ್ವ ಏನ..' ಎಂದು ಹೇಳಿದಾಗ ವಿಕ್ರಮ್ ಒಂದೆರಡು ದೀರ್ಘ ವಾಕ್ಯಗಳ ಉತ್ತರ ಕೊಟ್ಟ.
            `ಈ ನಿನ್ನ ಗೆಳೆಯಂದಿಕ್ಕಳ್ನ ನೀ ಹೋಪೂದ್ರೊಳಗ ಯಮ್ಮನೆಗೆ ತೆಕಂಡು ಬಾ ಬಿಲ್ಯ..'ಎಂದು ಹೇಳಿ ತಮ್ಮ ಮನೆಗೆ ಆಮಂತ್ರಣವನ್ನು ನೀಡಿ ಹೊರಟು ಹೋದರು ಗಾಂವ್ಕಾರರು.
            ಗಾಂವ್ಕಾರರು ಹೋದ ನಂತರ ಅವರ ಬಗ್ಗೆ ವಿಕ್ರಮ್, ರಮ್ಯ ಇಬ್ಬರೂ ಹೆಚ್ಚಿನ ವಿವರಣೆ ನೀಡಿದರು. ಇವರ ಮಾತಿನಿಂದ `ಗಾಂವ್ಕಾರರದ್ದು ಚಿಕ್ಕ, ಸುಂದರ ಕುಟುಂಬವಾಗಿತ್ತು. ಸುಖ, ಶಾಂತಿ, ಸಂಪತ್ತು ತುಳುಕುತ್ತಿದ್ದ ಕಾಲದಲ್ಲಿ ಇದ್ದೊಬ್ಬ ಮಗ ಇದ್ದಕ್ಕಿದ್ದಂತೆ ಕಾಣೆಯಾದ. ಇನ್ನೂತನಕ ಆತನ ಸುಳಿವು ತಿಳಿಯದ ಕಾರಣ ಅದೇ ಚಿಂತೆಯಲ್ಲಿ ಕೊರಗುತ್ತಿದ್ದ ಗಾಂವ್ಕಾರರು ಪ್ರತಿಯೊಬ್ಬ ಯುವಕನಲ್ಲೂ ತನ್ನ ಕಳೆದುಹೋದ ಮಗನನ್ನು ಹುಡುಕುತ್ತಿದ್ದಾರೆ' ಎನ್ನುವ ವಿಷಯ ತಿಳಿದುಬಂದಿತು.
           ವಿಕ್ರಮ್ `ಗಾಂವ್ಕಾರರ ಮಗ ಒಳ್ಳೆಯ ಪ್ರತಿಭಾವಂತನಾಗಿದ್ದ. ಹಾಡು, ಚಿತ್ರಕಲೆ, ರಂಗೋಲಿ ಹಾಕುವುದು, ಮಿಮಿಕ್ರಿ ಇವುಗಳಲ್ಲೆಲ್ಲ ಎತ್ತಿದ ಕೈ ಆಗಿತ್ತು. ನನಗಿಂತ ಎರಡು ವರ್ಷ ಸೀನಿಯರ್. ಪಾಪ ಈಗ ಎಲ್ಲಿದ್ದಾನೋ..? ಹೇಗಿದ್ದಾನೋ..? ಅಥವಾ ಬದುಕಿದ್ದಾನೋ ಗೊತ್ತಿಲ್ಲ. ಪಾಪ.. ಈ ವೃದ್ಧ ತಂದೆ ತಾಯ್ಗಳ ದುಃಖ ಹೇಳತೀರದು..' ಎಂದ.
            ಈ ಬಗ್ಗೆ ಕೊಂಚ ಮರುಗುವಿಕೆ ಕೊರಗುವಿಕೆಯೆಲ್ಲ ನಡೆಯುವ ವೇಳೆಗೆ ಕತ್ತಲೆಯ ರಥ ಬೆಳಕ ಗಾಡಿಯನ್ನಟ್ಟಿ ಆಗಿತ್ತು. ಆ ಸಂದರ್ಭದಲ್ಲಿಯೇ ಇವರೆಲ್ಲ ಮನೆಯನ್ನು ತಲುಪಿದ್ದರು.

 (ಮುಂದುವರಿಯುತ್ತದೆ..)

Tuesday, January 13, 2015

ಶೇರು ಹನಿಗಳು

ಮುಖ್ಯಸ್ಥ

ಸಾಮಾಜಿಕ ಜಾಲತಾಣಗಳಲ್ಲಿ
ಕಂಡ ಕಂಡದ್ದನ್ನೆಲ್ಲ
ಶೇರ್ ಮಾಡುವವನನ್ನು
ಶೇರೂಗಾರ ಎನ್ನಬಹುದೆ?

ತೋಫಾ..

ಹಿಂದುಸ್ಥಾನದ ಬಗ್ಗೆ
ಪ್ರತಿಯೊಂದನ್ನೂ ಶೇರ್
ಮಾಡುವವನನಿಗೆ
ಶೇರ್-ಎ-ಹಿಂದುಸ್ಥಾನ್
ಬಿರುದನ್ನು ಕೊಡಬಹುದು |

ಹೀಗೂ ಉಂಟೇ

ಸಾಮಾಜಿಕ ಜಾಲತಾಣದಲ್ಲಿ
ಅತಿ ಹೆಚ್ಚು ಶೇರ್
ಮಾಡುವ ಅಪ್ಪಂದಿರಿಗೆ
ಶೇರ್ಪಾ ಎನ್ನಬಹುದು |

ಪ್ರತಿದಾಳಿ

ಶೇರ್ ಮಾಡುವ ವ್ಯಕ್ತಿ
ಶೇರ್ ಮಾಡುವ ಇನ್ನೊಬ್ಬ
ವ್ಯಕ್ತಿಯ ಜೊತೆ ಸ್ಪರ್ಧೆಗಿಳಿದು
ದಾಳಿ-ಪ್ರತಿದಾಳಿ
ನಡೆಸಿದರೆ
ಶೇರ್ ಗೆ ಸವ್ವಾ ಶೇರ್
ಎನ್ನಬಹುದು |

Sunday, January 11, 2015

ರಾಜು ನಾಯಿಯ ನೆನಪು

           ನನಗೀಗಲೂ ನೆನಪಿದೆ. ನಾನು ಮನೆಯಲ್ಲಿ ಮೊಟ್ಟಮೊದಲು ಸಾಕಿದ್ದು ಒಂದು ನಾಯಿ. ಚಿಕ್ಕವನಿದ್ದಾಗ. ಅಂದರೆ ಪ್ರೈಮರಿ ವಯಸ್ಸು. 1 ರಿಂದ 4 ಕ್ಲಾಸಿನ ಒಳಗೆ. ಆ ನಾಯಿಗೆ ರಾಜೂ ಅಂತ ಹೆಸರಿಟ್ಟಿದ್ದೆ. ಸಾಮಾನ್ಯವಾಗಿ ನಾಯಿಗೆ ರಾಜೂ, ರಾಮೂ, ಟಿಪ್ಪು ಇತ್ಯಾದಿ ಹೆಸರು ಇಡುವುದು ಕಾಮನ್ನು. ಆ ದಿನಗಳಲ್ಲಿ ನಾನು ಚಿಕ್ಕವನಿದ್ದ ಕಾರಣ ಹೆಸರಿಗೆ ವಿಶೇಷ ಸರ್ಕಸ್ ಮಾಡಲಿಲ್ಲ. ರಾಜೂ ಎಂಬ ಸಾಮಾನ್ಯ ಹೆಸರನ್ನಿಟ್ಟಿದ್ದೆ.
(ಥೇಟ್ ಹಿಂಗೇ ಇತ್ತು ರಾಜು... )
               ಆ ರಾಜೂ ನಾಯಿಗೆ ನಾನೆಂದರೆ ಬಹಳ ಅಚ್ಚುಮೆಚ್ಚಾಗಿಬಿಟ್ಟಿತ್ತು ನೋಡಿ. ಪ್ರೈಮರಿ ಸಮಯದಲ್ಲಿ ಅತ್ಯಂತ ಹೆಚ್ಚಿನ ಕಿಲಾಡಿಯವನಾಗಿದ್ದ ನಾನು ಪರೀಕ್ಷೆಯಲ್ಲಿ ತೆಗೆದುಕೊಳ್ಳುವ ಮಾರ್ಕ್ಸುಗಳು ಅಷ್ಟಕ್ಕಷ್ಟೇ ಆಗಿತ್ತು. ನಾನು ಕಡಿಮೆ ಮಾರ್ಕು ತೆಗೆದುಕೊಂಡಾಗಲೆಲ್ಲ ಅಪ್ಪ-ಅಮ್ಮ ಜೋರಾಗಿ ಬೈದು, ಬಡಿದು ಮಾರ್ಕ್ಸ್ ವಾದಿ ಎನ್ನಿಸಿಕೊಳ್ಳುತ್ತಿದ್ದರು. ನಾನು ಬೆದರಿದ ಇಲಿಮರಿಯಂತೆ  ಸುಮ್ಮನಿದ್ದಾಗ ನನ್ನ ಪರ ವಹಿಸಿ ಧ್ವನಿ ಎತ್ತುತ್ತಿದ್ದವರೆಂದರೆ ಇಬ್ಬರೇ. ಒಬ್ಬರು ನನ್ನಜ್ಜ ಇಗ್ಗಜ್ಜ. ಇನ್ನೊಬ್ಬರು ರಾಜು ನಾಯಿ.
            ಅಜ್ಜ ನನ್ನನ್ನು ವಹಿಸಿಕೊಂಡು ಬರುವುದು ಸಾಮಾನ್ಯ ಸಂಗತಿ ಬಿಡಿ. ಆದರೆ ರಾಜು ನಾಯಿ.. ಮಜಾ ಅನ್ನಿಸಿದ್ದೇ ಆವಾಗ. ಬೀದಿ ಬದಿಯಲ್ಲೆಲ್ಲೋ ಬಿದ್ದುಕೊಂಡಿದ್ದ ನಾಯಿಯನ್ನು ಮನೆಗೆ ತಂದು, ಅವಿಭಕ್ತ ಕುಟುಂಬದ ನನ್ನ ಚಿಕ್ಕಪ್ಪಂದಿರ ವಿರೋಧದ ನಡುವೆಯೂ ಸಾಕಿದ ನನ್ನ ಮೇಲೆ ರಾಜುವಿಗೆ ಅದೇನೋ ವಿಶೇಷ ಪ್ರೀತಿ ಬೆಳೆದು ಬಿಟ್ಟಿತ್ತು. ಶಾಲೆಯಿಂದ ಸಂಜೆ ಮನೆಗೆ ಬಂದವನೇ ನಾನು ದೋಸೆಯನ್ನು ತಿನ್ನುವುದು ಪ್ರತಿಧಿನ ರೂಢಿ. ದೋಸೆಯನ್ನು ನಾನು ತಿನ್ನುವ ಮುನ್ನ ರಾಜುವಿಗೂ ಹಾಕಲೇಬೇಕು. ಇಲ್ಲವಾದರೆ ರಾಜುವಿನಿಂದ `ಅಯ್ಯೋ...' ಎನ್ನುವ ಊಳಾಟ ಗ್ಯಾರಂಟಿ. ನನ್ನನ್ನು ಯಾರಾದರೂ ಬಯ್ಯಲಿ, ಹೊಡೆಯಲು ಕೈಯೆತ್ತಿಕೊಂಡು ಬರಲಿ ಅಂತವರನ್ನು ಬೆನ್ನಟ್ಟಿ ಹೋಗುತ್ತಿತ್ತು ರಾಜು. ಅನೇಕರು ಇದನ್ನು ಪರೀಕ್ಷೆ ಮಾಡುವ ಸಲುವಾಗಿಯೇ ನನ್ನನ್ನು ಬೈದು, ಹೊಡೆದಿದ್ದೂ ಇದೆ ಎನ್ನಿ.
             ಭಾನುವಾರ ಬಂತೆಂದರೆ ನನಗೂ ರಾಜು ವಿಗೂ ಅದೇನೋ ಅಡಗರ. ಇಬ್ಬರೂ ಮನೆಯಿಂದ ಒಂದೋ ಒಂದೂವರೆಯೂ ಕಿ.ಮಿ ದೂರದಲ್ಲಿದ್ದ ಕುಚಗುಂಡಿ ಗದ್ದೆಯತ್ತ ಹೊರಟುಬಿಡುತ್ತಿದ್ದೆವು. ಅಲ್ಲೇ ಇರುವ ಕಾಕಾಲ ಗದ್ದೆಯಲ್ಲಿ ವಿಶಾಲವಾಗಿ ಹರಿಯುವ ಅಘನಾಶಿನಿ ನದಿಯನ್ನು ದಾಟಿ ನಾನು ಆಚೆ ದಡದಲ್ಲಿ ನಿಂತು `ರಾಜೂ ಕುರೂಯ್...' ಎಂದು ಕರೆದರೆ ಒಂದೆರಡು ಸಾರಿ ನೀರನ್ನು ಕಂಡು ಚಡಪಡಿಸುವ ರಾಜು ಏಕಾ ಏಕಿ ನೀರಿಗೆ ಧುಮುಕಿ ಲಬಕ್ ಲಬಕ್ ಎಂದು ಮುಳುಗುತ್ತ, ಯಡ್ರಾ ಬಡ್ರಾ ಈಸುತ್ತ ನಾನಿದ್ದ ದಡಕ್ಕೆ ಬಂದಾಗ ನನ್ನಲ್ಲಿ ನಗುವಿರುತ್ತಿತ್ತು. ಇತ್ಲಾ ದಡಕ್ಕೆ ಬಂದ ನಾಯಿ ನದಿ ದಾಟಿದ್ದ ಕಾರಣಕ್ಕೆ ತನ್ನ ವದ್ದೆಯಾದ ಮೈಯನ್ನು ಪಟ್ಟಾ ಪಟ್ಟಾ ಎಂದು ನನ್ನತ್ತ ಕುಡುವುತ್ತಿತ್ತು.. `ಹಚ್ಯಾ ಹೊಲಸು ಕುನ್ನಿ..' ಎಂದು ನಾನು ಬಯ್ಯುತ್ತಿದ್ದೆನಾದರೂ ಅಕ್ಕರೆಯ ಪ್ರಿತಿಗೆ ಎನ್ನುವುದು ಸುಳ್ಳಲ್ಲ ನೋಡಿ.
          ಒಂದು ಭಾನುವಾರ ನಾನು ರಾಜು ಜೊತೆಗೆ ಗದ್ದೆಗೆ ಹೋಗಿದ್ದೆ. ಯಾವಾಗಲೂ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಚಿಕ್ಕಪ್ಪಂದಿರಾದ ನಾಗೇಂದ್ರ ಹಾಗೂ ಮಹೇಶರು ಆವತ್ತು ಯಾವ ಕಾರಣಕ್ಕೋ ಅಲ್ಲಿರಲಿಲ್ಲ. ನಾನು ಹೋದವನಿಗೆ ಹೊತ್ತು ಹೋಗಬೇಕಲ್ಲ. ಮದ್ಯಾಹ್ನದ ಹೊತ್ತು ಬೇರೆ. ಮನೆಯಲ್ಲಿದ್ದರೆ ಊಟಕ್ಕೆ ಬಾ ಎಂಬ ಬುಲಾವೂ ಬರುತ್ತಿತ್ತು. ಹೋದವನು ಗದ್ದೆಯಲ್ಲೆಲ್ಲ ಸುತ್ತಾಡಿದೆ. ಅಲ್ಲೊಂದು ಕಡೆ ಗದ್ದೆಯ ಹಾಳಿಯ ಮೇಲೆ ನಾಲ್ಕೈದು ಬಿಳಿಯ ಮೊಟ್ಟೆಗಳು ಕಾಣಿಸಿತು. ಕುತೂಹಲದಿಂದ ನೋಡುತ್ತಿದ್ದಂತೆ ರಾಜು ಒಂದು ಮೊಟ್ಟೆಯನ್ನು ಕಚ್ಚಿಯೇ ಬಿಟ್ಟಿತು. ಪಾ...ಪ  ಆ ಮೊಟ್ಟೆಯಲ್ಲಿ ಇನ್ನೊಂದು ವಾರ ಕಳೆದಿದ್ರೆ ಹಕ್ಕಿಯಾಗಿ ಹಾರಿ ಹೊರ ಹೋಗಲು ಬಯಸಿದ್ದ ಬೆಳ್ಳಕ್ಕಿ ಮರಿಯೊಂದು ಜೀವ ತಳೆಯುತ್ತಿತ್ತು. ರಾಜು ಮೊಟ್ಟೆಯೊಡೆದದ್ದೇ ಒಡೆದದ್ದು ಒಂದೆರಡು ಸಾರಿ ವಿಲಿ ವಿಲಿ ಒದ್ದಾಡಿದ ಆ ಹಕ್ಕಿಯ ಜೀವ ಚಟ್ಟನೆ ಹಾರಿ ಹೋಯಿತು. ನಾನು ಸಿಟ್ಟಿನಿಂದ ರಾಜುವಿನ ಬೆನ್ನಿಗೆ ಗನಾಕಿ ಬಡಿದೆ. ಕಂಯ್ಕ್ ಎಂದು ಓಡಿದ ನಾಯಿ ಸುಮಾರು ಹೊತ್ತಿನ ವರೆಗೂ ನನ್ನಿಂದ ಸುರಕ್ಷಿತ ಅಂತರವನ್ನೇ ಕಾಪಾಡಿಕೊಂಡಿತ್ತು.
          ಹಕ್ಕಿಯ ಮೊಟ್ಟೆ ಒಡೆಯಿತಲ್ಲ ಛೇ,. ಎಂದುಕೊಂಡು ಮುಂದಕ್ಕೆ ಬರುತ್ತಿದ್ದಂತೆ ಅಲ್ಲೊಂದು ಕಡೆ ಕುಚಗುಂಡಿಯ ಒಬ್ಬಾತ ದನಗಳನ್ನು ಮೇಯಿಸುತ್ತಿದ್ದ. ಹೆಸರು ಸರಿಯಾಗಿ ನೆನಪಾಗುತ್ತಿಲ್ಲ. ಕುಚಗುಂಡಿಯ ಮಂಜ ಎನ್ನುವವನ ಮಗ ಎಂಬುದು ಅಸ್ಪಷ್ಟವಾಗಿ ನೆನಪಿದೆ. ಅವನ ಬಳಿ ಹೋದವನೇ ಅದೂ ಇದೂ ಮಾತಿಗೆ ನಿಂತೆ. ಆತ ಸುಮಾರು ಹೊತ್ತು ಹಲುಬಿದ. ಅಷ್ಟರಲ್ಲಿ ಅಲ್ಲೆಲ್ಲೋ ಅಡ್ಡಾಡಿದ ರಾಜು ಹತ್ತಿರ ಬಂದಿತು. ದನ ಮೇಯಿಸುತ್ತಿದ್ದವನ ಕಣ್ಣಿಗೆ ರಾಜು ಬಿದ್ದಿತು. ಅಲ್ಲಿ ಹುಲ್ಲು ಮೇಯುತ್ತಿದ್ದ ದನಗಳ ಕಣ್ಣಿಗೆ ರಾಜು ಬಿದ್ದ ಪರಿಣಾಮ ಒಂದೆರಡು ದನಗಳು ಬುಸ್ಸೆನ್ನುತ್ತ ರಾಜುವನ್ನು ಬೆನ್ನಟ್ಟಿ ಬಂದವು. ಅವುಗಳ ಭಯಕ್ಕೆ ಹೆದರಿ ನನ್ನ ಕಾಲ ಬುಡದಲ್ಲಿ ಬಂದು ಮಲಗಿತು ರಾಜು. ರಾಜುವನ್ನು ಕಂಡಾತ `ನಂಗೆ ಕೊಡ್ರಾ ಈ ಕುನ್ನಿಯಾ..' ಎಂದ ದನಕಾಯುವವ. ನಾನು ಆಗೋದಿಲ್ಲ ಎಂದೆ. ಮತ್ತೊಂದೆರಡು ಸಾರಿ ಕೇಳಿದ. ನಾನು ಮತ್ತೆ ನಕಾರಾತ್ಮಕ ಉತ್ತರ ನೀಡಿದೆ. ಆತ ಸುಮ್ಮನಾದ.
            ಅಲ್ಲೇ ಒಂದು ಮಾಳ ಇತ್ತು. ನಾನು ಸೀದಾ ಮಾಳ ಹತ್ತಿದೆ. ಕೆಳಗೆ ನಿಂತಿದ್ದ ರಾಜು ಮತ್ತೆ ಚಡಪಡಿಸಲಾರಂಭಿಸಿತು. ನನ್ನ ಹಾಗೂ ರಾಜುವನ್ನು ನೋಡುತ್ತಿದ್ದ ಆ ದನಕಾಯುವ ವ್ಯಕ್ತಿ, `ಹೋಯ್.. ಆ ನಾಯಿಯನ್ನು ಹೊತ್ಕಂಡು ಹೋಗ.. ಮಾಳದ ಮೇಲೆ ಹತ್ಸಾ...' ಎಂದ. ನಾನು ತುಂಟ ಎಂದು ಆಗಲೇ ಹೇಳಿದ್ದೆನಲ್ಲಾ.. ಆತ ಹೇಳಿದಂತೆ ಮಾಡಿದೆ. ಮಾಳದ ಮೇಲೆ ಹತ್ತಿಸಿದೆ. ಮೊದ ಮೊದಲು ಹೆದರಿದಂತೆ ಇದ್ದ ರಾಜು ಕೊನೆಗೆ ಮಾಳದಲ್ಲೇ ಕುಣಿಯಲಾರಂಭಿಸಿತು. ಸುಮಾರು ಹೊತ್ತು ಕಳೆದ ಮೇಲೆ ನನಗೆ ಹಸಿವಾಗಲಾರಂಭಿಸಿತು. ನಾನು ಸೀದಾ ಮಾಳದಿಂದ ಇಳಿದೆ. ಹಾಗೆ ಇಳಿಯುವವನು ರಾಜುವನ್ನು ಹಿಡಿದು ಇಳಿಯಲಾರಂಭಿಸಿದೆ. ಕೊನೆಗೆ ಅದೇ ದನಕಾಯುವವನು `ರಾಜುವನ್ನು ಅಲ್ಲೇ ಬಿಟ್ಟು ಇಳಿಯಾ.. ಎಂತಾ ಮಾಡ್ತೈತಿ ನೋಡ್ವಾ...' ಎಂಬ ಐಡೀರಿಯಾ ಕೊಟ್ಟ.
            ನನಗೆ ಸರಿಯೆನ್ನಿಸಿ ನಾಯಿಯನ್ನು ಮಾಳದ ಮೇಲೆಯೇ ಬಿಟ್ಟು ಕೆಳಕ್ಕಿಳಿದೆ. ಇಳಿದು ಮನೆಗೆ ಹೊರಟವನಂತೆ ನಟಿಸಿದೆ. ರಾಜು ಒಂದೆರಡು ಸಾರಿ ನೋಡಿತು. ಚಡಪಡಿಸಿತು. ಮಾಳವೆಂದರೆ ಸಾಮಾನ್ಯವಾಗಿ ನೆಲದಿಂದ 6-7 ಅಡಿ ಎತ್ತರದಲ್ಲಿರುತ್ತದೆ. ಚಡಪಡಿಸಿದ ನಾಯಿ ಸೀದಾ ಜಿಗಿದೇ ಬಿಟ್ಟಿತು. ಜಿಗಿದ ನಾಯಿ ಮತ್ತೆ ಮೇಲೇಳುವಾಗ ಕಂಯೋ ಕಂಯೋ ಎಂದು ಕೂಗುತ್ತಲೇ ಇತ್ತು. ನಾನು ಏನೋ ಭಾನಗಡಿ ಆಗಿದೆ ಎಂದು ಹೆದರಿದೆ. ನಾಯಿಯನ್ನು ಹೊತ್ತುಕೊಂಡು ಓಡಿದೆ. ಗದ್ದೆಯಲ್ಲಿಯೇ ಇದ್ದ ಮನೆಯಲ್ಲಿ ನಾಯಿಯನ್ನು ಬಿಟ್ಟವನೇ ಮನೆಯ ಕಡೆಗೆ ಕಾಲ್ಕಿತ್ತೆ.
           ವಾಸ್ತವದಲ್ಲಿ ಆಗಿದ್ದೇನೆಂದರೆ ಮಾಳದಿಂದ ಕೆಳಕ್ಕೆ ನಾಯಿ ಜಿಗಿದಿದ್ದೇನೋ ಖರೆ. ಮಾಳಕ್ಕೆ ಹತ್ತಲು ಬಿದಿರಿನಿಂದ ಏಣಿಯೊಂದನ್ನು ಮಾಡಿದ್ದರು. ಆ ಏಣಿಯಿಂದ ಚಿಕ್ಕ ಚೂಪಾದ ಚೂರೊಂದು ಮುಂದಕ್ಕೆ ಚಾಚಿಕೊಂಡಿತ್ತು. ನಾಯಿ ಜಿಗಿದಿದ್ದೇ ಈ ಚೂರಿಗೆ ತಾಗಿತು. ಕಾಲೆಜ್ಜೆ ಸಿಕ್ಕಿಬಿದ್ದು ತಲೆಕೆಳಗಾಗಿ ನಾಗಿ ಬಿದ್ದಿತ್ತು. ಆ ರಭಸಕ್ಕೆ ನಾಯಿಯ ಕಾಲೊಂದು ಮುರಿದು ಬಿಟ್ಟಿತ್ತು. ನಾನು ಗದ್ದೆಯಲ್ಲಿ ಬಿಟ್ಟವನೇ ಮನೆಗೆ ಓಡಿ ಮನೆಯಲ್ಲಿಯೇ ನಿಂತಿದ್ದು.
          ನಾನು ಉಸಿರು ಬಿಡುತ್ತ ಓಡಿ ಬಂದಿದ್ದನ್ನು ನೋಡಿದ ಮನೆಯವರಿಗೆ ನಾನೇನೋ ಭಾನಗಡಿ ಮಾಡಿರುವುದು ಪಕ್ಕಾ ಆಯಿತು. ಆದರೆ ಏನು ಭಾನಗಡಿ ಮಾಡಿದ್ದೇನೆ ಎನ್ನುವುದು ತಿಳಿಯಲಿಲ್ಲ. ಪೊಲೀಸ್ ಸ್ಟೇಷನ್ನುಗಳಲ್ಲಿ ನಡೆಯುವುದಕ್ಕಿಂತ ಹೆಚ್ಚಿಗೆ ತನಿಖೆ ನಡೆಯಿತು. ನಾನು ಏನನ್ನೂ ಬಾಯಿ ಬಿಡಲಿಲ್ಲ. ಆ ಸಮಯದಲ್ಲೇ ಮನೆಯವರ್ಯಾರೋ ರಾಜು ನಾಯಿ ಇಲ್ಲದ್ದನ್ನು ಗಮನಿಸಿದರು. ಅದಕ್ಕೆ ತಕ್ಕಂತೆ ಮತ್ಯಾರೋ ರಾಜು ನಾಯಿ ನನ್ನ ಜೊತೆಗೆ ಹೋಗಿದ್ದನ್ನೂ ಕಂಡಿದ್ದರು. ಅವರು ಹೇಳಿದ್ದೇನೆಂದರೆ ನಾನು ರಾಜುವಿಗೆ ಏನೋ ಮಾಡಿಬಿಟ್ಟಿದ್ದೇನೆ. ಹಾಗಾಗಿ ರಾಜು ಕಾಣಿಸುತ್ತಿಲ್ಲ ಎನ್ನುವುದು.
           ಆಗ ಶುರುವಾಯ್ತು ನೋಡಿ ಅಪ್ಪನ ಹೊಡೆತ... ಅಬಾಬಾಬಾ... ಕೊನೆಗೆ ನಾನು ಬಾಯಿಬಿಟ್ಟಿದ್ದೆ. ಆ ಮದ್ಯಾಹ್ನ ೂಟ ಮುಗಿಸಿ ಮದ್ಯಾಹ್ನದ ಗುಕ್ಕು ನಿದ್ದೆ ಮುಗಿಸಿ ಸಂಜೆ ಆಗಬೇಕು ಎನ್ನುವಷ್ಟರಲ್ಲಿ ಗದ್ದೆಯ ಕಡೆಗಿಂದ ನಿಧಾನವಾಗಿ ಕಾಲನ್ನು ಎಳೆಯುತ್ತ ಬರುತ್ತಿತ್ತು ನೋಡಿ ರಾಜು ಕುನ್ನಿ.. ಸಧ್ಯ ಏನೂ ಆಗಿಲ್ಲವಲ್ಲ ಎನ್ನುವ ನಿಟ್ಟುಸಿರು ನನ್ನಲ್ಲಿ. ಆದರೆ ಆ ಘಟನೆಯ ನಂತರ ರಾಜು ಮಾತ್ರ ನನ್ನ ಪರವಾಗಿ ನಿಲ್ಲುವುದನ್ನು ನಿಲ್ಲಿಸಿತ್ತು. ಯಾರಾದರೂ ನನಗೆ ಬೈಯಲಿ, ಹೊಡೆಯಲಿ ಅದು ಗುರ್ರೆಂದು ಅವರನ್ನು ಅಟ್ಟಿಸಿಕೊಂಡು ಹೋಗುವುದನ್ನು ನಿಲ್ಲಿಸಿಬಿಟ್ಟಿತ್ತು. ಪಾ..ಪ ಅದೇನೋ ಆಘಾತವಾಗಿತ್ತು ಅದಕ್ಕೆ.
            ಇಂತಹ ರಾಜು ನನ್ನನ್ನು ಶಾಲೆಗೆ ಕಳಿಸಿಕೊಡಲು ಬರುತ್ತಿತ್ತು. ನಮ್ಮೂರಿನಿಂದ ನಾನು ಹೋಗುತ್ತಿದ್ದ ಅಡ್ಕಳ್ಳಿ-ಕೋಡ್ಸಿಂಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2.5 ಕಿ.ಮಿ ದೂರವಾಗುತ್ತದೆ. ಎಷ್ಟೇ ವೇಗವಾಗಿ ನಡೆದರೂ 30 ನಿಮಿಷ ಬೇಕೇ ಬೇಕು. ನಾನು, ನನ್ನ ಜೊತೆಗೆ ಬಾಳಗಾರ್ ಗಪ್ಪತಿ, ಹಂಚಳ್ಳಿಯ ಶ್ರೀಪಾದ, ಶ್ರೀಪಾದನ ತಂಗಿ ನಾಗರತ್ನಾ, ಸಂತೋಷಣ್ಣ, ಮೇಲಿನಮನೆಯ ರಂಜು ಇಷ್ಟು ಜನ ಶಾಲೆಗೆ ಹೋಗುವವರು. ದಾರಿಯಲ್ಲಿ ದೊಡ್ಡದೊಂದು ಗುಡ್ಡ, ಗವ್ವೆನ್ನುವ ಕಾಡು, ಹೆಣ ಸುಡುವ ಸ್ಮಷಾನ ಇಷ್ಟ ಸಿಕ್ಕೇ ಸಿಗುತ್ತಿತ್ತು. ನಮ್ಮ ಧೈರ್ಯಕ್ಕೆ ರಾಜು ಬರುತ್ತಿದ್ದ. ರಾಜುವಿನ ಧೈರ್ಯಕ್ಕೆ ನಾವಿರುತ್ತಿದ್ದೆವು.
           ಶಾಲೆಗೆ ಹೊರಟ ನಮ್ಮ ಹಿಂದೋ, ಮುಂದೋ ಬಾಲ ಅಲ್ಲಾಡಿಸುತ್ತ ಬರುತ್ತಿದ್ದ ರಾಜುವನ್ನು ದಾರಿ ಮಧ್ಯ ಅನೇಕ ಸಾರಿ `ರಾಜು.. ಮನೆಗೆ ನಡಿಯಾ...' ಎಂದು ನಾನು ಬಯ್ಯುತ್ತಿದ್ದರೂ ಆತ ಜೊತೆಗೆ ಬರುತ್ತಿದ್ದ. ಮುಂದೋ, ಹಿಂದೋ ಎಸ್ಕಾರ್ಟ್ ಮಾಡುತ್ತಿದ್ದ. ಅಂತವನ ಬೆನ್ನ ಮೇಲೆ ಒಂದೆರಡು ಸಾರಿ ನಾನು ನನ್ನ ಪಾಟಿಚೀಲವನ್ನು ಹಾಕಿ ಕಟ್ಟಿ ಕಳಿಸಿದ್ದೂ ಇದೆ. ದಾರಿ ಮಧ್ಯದಲ್ಲಿ ಅವನ್ನು ಬೀಳಿಸಿ, ಬಾಲ ಅಲ್ಲಾಡಿಸುತ್ತಾ  ನಿಂತಿದ್ದ ರಾಜು ನನ್ನ ಕಣ್ಣೆದುರಿಗೆ ಇನ್ನೂ ಸ್ಪಷ್ಟವಾಗಿದೆ. ನಮ್ಮ ಜೊತೆಗೆ ಶಾಲೆಯ ಬಳಿ ಬರುವ ರಾಜು ಶಾಲೆಯ ಆಟದ ಬಯಲಿನಲ್ಲಿ ನಿಂತು ಎದುರು ಒಮ್ಮೆ ನೋಡುತ್ತಿದ್ದ. ಬಯಲಿನಲ್ಲಿ ಯಾವುದಾದರೂ ಬೇರೆಯ ನಾಯಿಗಳಿದ್ದರೆ ಸದ್ದಿಲ್ಲದೇ ಮನೆಗೆ ವಾಪಾಸಾಗುತ್ತಿದ್ದ ರಾಜು, ಯಾರೂ ಇಲ್ಲ ಎಂದಾದರೆ ಮೈದಾನದಲ್ಲೇ ಸುತ್ತಾಡುತ್ತಿದ್ದ. ನಾನು ಕಲ್ಲು ಹೊಡೆದು ಓಡಿಸಿದ ಮೇಲೆಯೇ ಮನೆಗೆ ವಾಪಾಸಾಗುತ್ತಿದ್ದ. ಅನೇಕ ಸಾರಿ ಈ ಮೈದಾನದಲ್ಲಿಯೇ ರಾಜು ಬೇರೆಯ ನಾಯಿಗಳೊಂದಿಗೆ ಜಿದ್ದಾ ಜಿದ್ದಿನ ಕಾಳಗ ಮಾಡಿದ್ದನ್ನು ನಾನು ನೋಡಿದ್ದೇನೆ. ಗಾಯ ಮಾಡಿಕೊಂಡು ಬರುತ್ತಿದ್ದ ನಾಯಿಗೆ ಬೂದಿಯನ್ನು ಹಚ್ಚಿ ಸಮಾಧಾನ ಪಡಿಸಿದ್ದೇನೆ.
             ರಾಜು ಇದ್ದ ಸಮಯದಲ್ಲಿಯೇ ಬೆಳ್ಳ ಎನ್ನುವ ಇನ್ನೊಂದು ನಾಯಿ ನಮ್ಮ ಮನೆಯಲ್ಲಿತ್ತು. ಎಲ್ಲಿಂದಲೋ ಬಂದು ನಮ್ಮನೆಯಲ್ಲಿ ಉಳಿದಿದ್ದ ನಾಯಿ ಅದು. ಚಿಕ್ಕಪ್ಪಂದಿರು ಈ ನಾಯಿಯನ್ನು ಅಕ್ಕರೆಯಿಂದ ಸಾಕಿದ್ದರು. ಬೆಳ್ಳ ಹಾಗೂ ರಾಜು ಅಣ್ಣ ತಮ್ಮಂದಿರಂತಿದ್ದರು. ನಮ್ಮ ಮನೆಯಲ್ಲಿಯೇ ಅವರು ಜಾಗವನ್ನೂ ಪಾಲು ಮಾಡಿಕೊಂಡಿದ್ದರು. ಬೆಳ್ಳ ಹೆಬ್ಬಾಗಿಲ ಬಳಿ ತನ್ನ ಕಾರ್ಯಸ್ಥಾನ ಮಾಡಿಕೊಂಡಿದ್ದರೆ ರಾಜು ಹಿತ್ಲಾಕಡಿಗೆ ಉಳಿದಿದ್ದ. ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಅಡಿಕೆ ಬೇಯಿಸಲು ಹೆಬ್ಬಾಗಿಲ ಬಳಿ ಹಾಕುತ್ತಿದ್ದ ದೊಡ್ಡ ಒಲೆ ಬೆಳ್ಳನ ವಾಸಸ್ತಾನವಾಗಿದ್ದರೆ ಹಿತ್ಲಾಕಡಿಗೆ ಬಚ್ಚಲಮನೆಯ ಒಲೆ ರಾಜುವಿನ ಅಂತಪುರವಾಗಿತ್ತು. ಇಬ್ಬರಿಗೂ ಭಯಂಕರ ದೋಸ್ತಿಯಿದ್ದರೂ ದೋಸೆ ಹಾಕುವಾಗ ಅಥವಾ ಅನ್ನ ಹಾಕುವಾಗ ಮಾತ್ರ ಪಕ್ಕಾ ಶತ್ರುಗಳ ತರ. ಪರಸ್ಪರ ಹಲ್ಲು ತೋರಿಸುವುದು, ಗುರ್ರೆನ್ನುವುದು, ಕಾಲು ಕೆರೆಯುವುದು ನಡೆದೇ ಇತ್ತು. ಹೀಗೆ ಜಗಳ ಆರಂಭವಾದ ಸಂದರ್ಭದಲ್ಲಿ ಇವೆರಡರ ಪೈಕಿ ಸ್ವಲ್ಪ ಸಣ್ಣದಾಗಿದ್ದ ರಾಜುವೇ ಸೋಲೊಪ್ಪಿಕೊಳ್ಳುತ್ತಿತ್ತು ಬಿಡಿ. ಆಮೇಲೆ ನಾನು ಬೆಳ್ಳನನ್ನು ಸರಪಳಿಯಿಂದ ಕಟ್ಟಿಹಾಕಿದ ನಂತರ ರಾಜುವಿಗೆ ಪ್ರತ್ಯೇಕವಾಗಿ ಅನ್ನ ಹಾಕುತ್ತಿದ್ದೆ. ಅನ್ನ ಹಾಕಿದವನು ಅಲ್ಲೇ ನಿಂತಿದ್ದರೆ ರಾಜು ನನಗೂ ಗುರ್ರೆನ್ನುತ್ತಿತ್ತು. ಆಗ ಮಾತ್ರ ನಾಯಿಯ ಬೆನ್ನು ಮುರಿದು ಬಿಡಬೇಕು ಎನ್ನುವಷ್ಟು ಸಿಟ್ಟು ಬರುತ್ತಿತ್ತು.
             ನಾನು ರಾಜುವನ್ನು ಸಾಕಿರುವುದು ನನ್ನ ಚಿಕ್ಕಪ್ಪಂದಿರಿಗೆ ಇಷ್ಟವಿರಲಿಲ್ಲ. ಮೊದ ಮೊದಲು ಅದನ್ನು ಸಾಕಿದ್ದು ಇಷ್ಟ ಪಟ್ಟವರಂತೆ ನಟಿಸಿದ್ದರು. ಆದರೆ ಕೊನೆ ಕೊನೆಗೆ ಅವರು ಮಾತು ಮಾತಿಗೂ ಬಯ್ಯತೊಡಗಿದ್ದರು. ನಾನು ಚಿಕ್ಕವನಾಗಿದ್ದ ಕಾರಣ ನಾನೇನೇ ಹೇಳಿದರೂ ಅದಕ್ಕೆ ಬೆಲೆಯೇ ಇರುತ್ತಿರಲಿಲ್ಲ. ಅಪ್ಪಯ್ಯ ಮನೆ ಯಜಮಾನನಾಗಿದ್ದ ಕಾರಣ ತಮ್ಮಂದಿರ ಬೇಜಾರನ್ನು ಶಮನ ಮಾಡುವ ಕಾಯಕದಲ್ಲಿ ನಿರತನಾಗುತ್ತಿದ್ದ. ಈಗಿನ ರಾಜಕಾರಣಿಗಳು ಹೇಗೆ ಅಲ್ಪ ಸಂಖ್ಯಾತರನ್ನು ಓಲೈಸುತ್ತಾರೋ ಹಾಗೆ.
           ನಾನು ಅಥವಾ ನನ್ನಮನೆಯಲ್ಲಿ ಏನೇ ಒಳ್ಳೆಯದನ್ನು ಸಾಕಿದರೂ, ವಸ್ತುಗಳನ್ನು ಸಾಕಿದರೂ ಅದನ್ನು ನನಗೆ ಕೊಡಿ ಎಂದು ಕೇಳುವವರು ಆಗಲೂ ಇದ್ದರು ಈಗಲೂ ಇದ್ದಾರೆ. ಹೀಗಿದ್ದಾಗ ಚಾರೆಕೋಣೆಯ ಒಬ್ಬರು ನಮ್ಮೂರಿಗೆ ಬಂದಿದ್ದರು. ನಮ್ಮ ಮನೆಯ ಪಕ್ಕದ ಮನೆಗೆ ಚಾರೇಕೋಣೆಯ ಸಂಬಂಧವೂ ಇದೆ ಎನ್ನಿ. ಬಂದವರೇ ಅವರ ಮನೆ ಕಾಯಲು ನಾಯಿಯೊಂದು ಬೇಕು. ರಾಜುವನ್ನು ಕೊಡುತ್ತೀರಾ ಎಂದು ಕೇಳಿದರು. ನಾನು ಇಲ್ಲ ಎಂದೆ. ಆದರೆ ಅಪ್ಪ ತಮ್ಮಂದಿರನ್ನು ಓಲೈಸುವ ಸಲುವಾಗಿ ರಾಜುವನ್ನು ಕೊಟ್ಟುಬಿಡಲು ನಿರ್ಧಾರ ಮಾಡಿದ್ದರು. ನಾನು ಶಾಲೆಗೆ ಹೋಗಿದ್ದ ಸುಸಂದರ್ಭವನ್ನೇ ನೋಡಿ ರಾಜುವನ್ನು ಕೊಟ್ಟು ಹಾಕಿದ್ದರು. ಮನೆಗೆ ಬಂದವನು ನಾನು ಆ ದಿನ ಮಾಡಿದ ರಂಪಾಟ ಅಷ್ಟಿಷ್ಟಲ್ಲ ಬಿಡಿ. ಆ ದಿನ ನನಗೆ ಮನೆಯಲ್ಲಿನ ಎಲ್ಲ ಸದಸ್ಯರೂ ಯಥಾನುಶಕ್ತಿ ಹೊಡೆದು ಬಿಟ್ಟಿದ್ದರು. ನಾನು ಸುಮ್ಮನಾಗಿರಲಿಲ್ಲ.
            ಅತ್ತ ಚಾರೆಕೋಣೆಗೆ ಹೋದ ರಾಜು ಸುಮ್ಮನಿರುತ್ತದೆಯೇ? ಅಲ್ಲಿ ತಾನೂ ಪ್ರತಿಭಟನೆ ಶುರುಮಾಡತೊಡಗಿತ್ತು. ಮೊದಲೆರಡು ದಿನ ಊಟ ಮಾಡಲಿಲ್ಲ. ಏನೋ ರೋಗ ಬಂದವರಂತೆ ನಟಿಸಿತು. ಕೊನೆಗೆ ಹಸಿವು ಸಿಕ್ಕಾಪಟ್ಟೆ ಹೆಚ್ಚಿದಾಗ ಹಾಲು ಕುಡಿದು ಅನ್ನ ಊಟ ಮಾಡಿತಂತೆ. ನಾಲ್ಕು ದಿನಕ್ಕೆಲ್ಲಾ ನಾಯಿ ಅವರ ಮನೆಯವರಂತೆ ಆಯಿತು. ನಾಯಿಗೆ ಹಳೆಯದೆಲ್ಲ ಮರೆತಿದೆ. ಇನ್ನು ತೊಂದರೆಯಿಲ್ಲ ಎಂದು ಕಟ್ಟಿದ್ದ ಸರಪಳಿ ಬಿಚ್ಚಿ ಬಿಟ್ಟರು. ಆಗ ನಾಯಿಯ ಅಸಲಿ ಬಣ್ಣ ಬಯಲಾಯಿತು ನೋಡಿ. ಸೀದಾ ಅಲ್ಲಿಂದ ಓಡಿದ ರಾಜು  ನಾಲ್ಕು ಸಾರಿ ಅಘನಾಶಿನಿ ನದಿಯನ್ನು ದಾಟಿ, ಒಂದು ಒಪ್ಪತ್ತಿನೊಳಗೆಲ್ಲ ನಮ್ಮ ಮನೆಗೆ ಹಾಜರಾಗಿಬಿಟ್ಟಿತ್ತು.
            ಧರಿದ್ರ ನಾಯಿ ಮತ್ತೆ ಬಂತಾ..? ಎಂದು ಚಿಕ್ಕಪ್ಪ ಬಯ್ಯುತ್ತಿದ್ದರೆ `ತಮಾ.. ನೋಡಾ... ನಾಯಿ ಬಂತಲಾ... ಉಂಚಳ್ಳಿ ಜಲಪಾತದ ಹತ್ತಿರದಿಂದ ನಡೆದುಕೊಂಡು ಬಂತಲಾ.. ಅದಕ್ಕೊಂದು ದೋಸೆ ಹಾಕಾ...' ಎಂದು ಅಮ್ಮ ಖುಷಿಯಿಂದ ಹೇಳಿದ್ದು ಇನ್ನೂ ನೆನಪಿನಲ್ಲಿದೆ. ಆ ದಿನದಿಂದ ಮತ್ತೆ ರಾಜು ಹಾಗೂ ನಾನೂ ಒಂದೇ ದೋಣಿಯ ಕಳ್ಳರಾಗಿಬಿಟ್ಟಿದ್ದೆವು.
             ಇದಾಗಿ ಆರೆಂಟು ತಿಂಗಳಾಗಿತ್ತು. ನಮ್ಮ ಮನೆಯಲ್ಲಿ ಕೊನೆಕೊಯ್ಲಿನ ಹಂಗಾಮು. ಮನೆಯಲ್ಲಿ ಕೊನೆ ಕೊಯ್ದಿದ್ದರು. ಸಿಕ್ಕಾಪಟ್ಟೆ ಚಳಿ ಬೇರೆ. ಜನವರಿಯೇನೋ. ಅಂಗಳದಲ್ಲಿ ಅಡಿಕೆ ಬೇಯಿಸಲು ಬೆಂಕಿ ಹಾಕಿದ್ದರು. ಆ ಬೆಂಕಿಯ ಮುಂದೆ ರಾಜು ಮಲಗಿದ್ದ. ಯಾವತ್ತೂ ಆ ಒಲೆಯ ಎದುರು ಮಲಗುತ್ತಿದ್ದ ಬೆಳ್ಳ ಆವತ್ತು ಮಾತ್ರ ಸದ್ದಿರದೇ ಮನೆಯ ಒಳಗೆ ಬಂದು ರಬ್ಬಿಕೊಂಡು ಮಲಗಿದ್ದ. ರಾತ್ರಿ ಯಾವುದೋ ಜಾಗದಲ್ಲಿ  ನಾಯಿ ದೊಡ್ಡದಾಗಿ ಕೂಗಿದ ಸದ್ದು. ಆ ನಂತರ ನಾಯಿ ಕಂಯೋ.. ಎಂದು ಕೂಗಿದ್ದೂ ಕೇಳಿಸಿತು. ತಕ್ಷಣ ಚಿಕ್ಕಪ್ಪಂದಿರು ದೊಡ್ಡ ಬಡಿಗೆಯನ್ನು ಹಿಡಿದು ಮನೆಯಿಂದ ಹೊರಕ್ಕೆ ಬಂದಿದ್ದರು. ಆದರೆ ಅಷ್ಟರಲ್ಲಿ ಗುರ್ಕೆ (ಹುಲಿಯ ಜಾತಿಗೆ ಸೇರಿದ್ದು, ಮರಿ ಚಿರತೆ ಎನ್ನಬಹುದು) ರಾಜುವನ್ನು ಕಚ್ಚಿ ಹೊಡಿದುಕೊಂಡು ಹೋಗಿತ್ತು.
         ಬೆಳಗ್ಗೆ ಎದ್ದ ನಾನು ರಾಜುಗಾಗಿ ಹುಡುಕಿದರೆ ಎಲ್ಲಿದೆ ನಾಯಿ? `ತಮಾ ಇಲ್ನೋಡು.. ರಾಜುವನ್ನು ಎಳೆದೊಯ್ದ ಗುರುತು.. ನೋಡು ನೆಲ ಹೆಂಗೆ ಉಗುರಿನಲ್ಲಿ ಗಟ್ಟಿಯಾಗಿ ಗೀರಿದ್ದು.. ಗುರ್ಕೆ ಹಿಡಿದಾಗ ತಪ್ಪಿಸಕ್ಕಂಬಲೆ ಭಾರಿ ಪ್ರಯತ್ನ ಮಾಡಿತ್ತು ಕಾಣ್ತು ನೋಡು..' ಎಂದರು ಅಮ್ಮ. ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ಬಂದ ಬೆಳ್ಳ ರಾಜುವನ್ನು ಗುರ್ಕೆ ಹಿಡಿದ ಜಾಗವನ್ನು ಮೂಸಿ ನೋಡಿದ. ಹೂಕ್ಷ್.. ಎಂದು ಒಮ್ಮೆ ಸೀನಿದ. ರಾತ್ರಿ ಗುರಕೆ ಬಂದಿರುವುದನ್ನು ಅರಿತ ಬೆಳ್ಳ ಮನೆಯೊಳಕ್ಕೆ ಹೊಕ್ಕಿದ್ದನೇನೋ. ರಾಜುವಿಗೆ ಅದು ಗೊತ್ತಾಗಿರಲಿಲ್ಲ. ಚಳಿ, ಒಳ್ಳೆ ಬೆಂಕಿ ಹಾಕಿದ್ದಾರೆ. ಬೆಳ್ಳನೂ ಇಲ್ಲ. ಆರಾಮಾಗಿ ಮಲಗೋಣ ಎಂದು ನಿದ್ರೆಗೆ ಜಾರಿದ್ದ ರಾಜು ಗುರ್ಕೆ ಬಾಯಿಗೆ ಬಲಿಯಾಗಿದ್ದ. ಬೆಳ್ಳ ಸೀನಿದ್ದು ಮಾತ್ರ ನನಗೆ ನಿಟ್ಟುಸಿರಿನ ಹಾಗೇ ಅನ್ನಿಸಿತು.
             ಈ ಘಟನೆ ಜರುಗಿ ಕನಿಷ್ಟ 20 ವರ್ಷಗಳೇ ಸರಿದಿವೆ. ಅದಾದ ಮೇಲೆ ಕನಿಷ್ಟ 10ಕ್ಕೂ ಹೆಚ್ಚು ನಾಯಿಗಳನ್ನೂ, 15ಕ್ಕೂ ಹೆಚ್ಚು ಬೆಕ್ಕುಗಳನ್ನೂ ನಾನು ತಂದು ಸಾಕಿದ್ದೇನೆ. ನಾಯಿಗಳಿಗೆ ನಿಖಿತಾ, ಬಿಂಬಿ, ಭೀಮಣ್ಣ ಖಂಡ್ರೆ ಹೀಗೆ ತರಹೇವಾರಿ ಹೆಸರುಗಳನ್ನೂ, ಸೋನು, ಮೋನು, ಸಾಂಬ, ರಂಗೀಲಾ ಈ ಮುಂತಾದ ಬೆಕ್ಕಿಗೂ ಇಟ್ಟು ಖುಷಿ ಪಟ್ಟಿದ್ದೇನೆ. ಆದರೆ ಮೊದಲು ಸಾಕಿದ ನಾಯಿ ರಾಜು ಮಾತ್ರ ಇನ್ನೂ ನೆನಪಿನಲ್ಲಿದೆ. ಪ್ರತಿ ಚಳಿಗಾಲದಲ್ಲಿ ರಾಜುವಿನ ನೆನಪು ಕಾಡುತ್ತಿರುತ್ತದೆ. ಎಷ್ಟೇ ನಾಯಿಗಳನ್ನು ತಂದರೂ ಮನದ ಮೂಲೆಯಲ್ಲಿದ್ದ ರಾಜು ಮತ್ತೊಮ್ಮೆ ಕಣ್ಣೆದುರು ಬಂದಂತಾಗುತ್ತದೆ. ರಾಜೂ ಕುರೂಯ್.. ಎಂದು ಕರೆಯೋಣ ಅನ್ನಿಸುತ್ತಿದೆ. ನಾಯಿಯೊಂದು ಅಚ್ಚಳಿಯದೇ ಉಳಿದಿದ್ದು ಹೀಗೆ.

Friday, January 9, 2015

ಅಘನಾಶಿನಿ ಕಣಿವೆಯಲ್ಲಿ-7

`ಹಲೋ... ಮಂಗಳೂರು ಮೇಲ್ ಪತ್ರಿಕೆನಾ..?'
`ಹೌದು.. ನೀವ್ಯಾರು? ಹೇಳಿ ಏನು ವಿಷಯ?'
`ನಾನು ವಿನಾಯಕ ಅಂತ.. ನಿಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುವ ವಿಕ್ರಂ ಅವರ ಬಳಿ ಮಾತನಾಡಬೇಕಿತ್ತು..'
`ಒಂದ್ನಿಮಿಷ ಇರಿ.. ಹೇಳ್ತೀನಿ...'
ವಿಕ್ರಂ ಪೋನೆತ್ತಿಕೊಂಡ. `ಹಲೋ..' ಎಂದ. `ಏನಪ್ಪಾ...ದೊರೆ... ನೀನು ಮಂಗಳೂರಿಗೆ ಹೋಗಿ ನಮ್ಮನ್ನೆಲ್ಲ ಮರೆತೇಬಿಟ್ಯಾ?' ಎಂದ ವಿನಾಯಕ.
ಇದನ್ನು ಕೇಳಿದ್ದೇ ತಡ ವಿಕ್ರಂ ಅತ್ಯಾಶ್ಚರ್ಯದಿಂದ `ಅರೇ ವಿನಾಯ್ಕಾ.. ಎಂತದೋ ಮಾರಾಯಾ.. ಏನ್ ಶಾಕ್ ಕೊಟ್ಟು ಬಿಟ್ಯಾ? ಮತ್ತೆ..? ಎಲ್ಲಿಂದ ಮಾತಾಡ್ತಾ ಇದ್ದೆ? ಏನ್ ವಿಶೇಷ? ಹೇಂಗಿದ್ದೆ? ಮನೆಲ್ಲಿ ಎಲ್ಲಾ ಅರಾಮಿದ್ವಾ?' ಎಂದ ವಿಕ್ರಂ.
`ಎಲ್ಲಾ ಅರಾಮಿದ್ದ ಮಾರಾಯಾ.. ನೀನು ಹೆಂಗಿದ್ದೆ ಹೇಳು.. ಆನು ಯನ್ ಮೊಬೈಲಿಂದನೇ ಪೋನ್ ಮಾಡ್ತಾ ಇದ್ನಾ.. ನಿನ್ ಹತ್ರ ಮಾತಾಡನಾ ಹೇಳಿ ಸುಮಾರ್ ಟ್ರೈ ಮಾಡಿ.. ನಿಮ್ಮನಿಗೆ ಪೋನ್ ಮಾಡಿ ನಿನ್ ನಂಬರ್ ಇಸ್ಕಂಡು ಪೋನ್ ಮಾಡ್ತಾ ಇದ್ದಿ ನೋಡಿ.. ಏನೋ ದೊಡ್ ಮನ್ಷಾ.. ಪೇಪರ್ ಕೆಲಸಕ್ಕೆ ಸೇರಿದ್ದು ಎಲ್ಲಾ ಪೋನ್ ಮಾಡಿ ಹೇಳಲೆ ಆಕ್ತಿಲ್ಯನಾ..? ನಂಗವ್ವೇ ಪೋನ್ ಮಾಡಿ ಹೇಳವನಾ ನಿಂಗೆ..?' ಹುಸಿಮುನಿಸಿನಿಂದ ದಬಾಯಿಸಿದ ವಿನಾಯಕ.
`ಥೋ.. ಅದೆಂತಾ ಹೇಳವು ಮಾರಾಯಾ... ಏನೇನೋ ಆಗ್ತು.. ಲೈಫಲ್ಲಿ ಸಿಕ್ಕಾಪಟ್ಟೆ ತಿರುವು ಸಿಕ್ಕಿ ಈಗ ಪತ್ರಿಕೋದ್ಯಮಿಯೂ ಆಗ ಪ್ರಸಂಗ ಬಂತು ನೋಡು.. ಅದೆಲ್ಲಾ ನೀ ಎದುರಿಗೆ ಸಿಕ್ಕಾಗ ಹೇಳ್ತಿ.. ದೊಡ್ ಕಥೆ ಮಾರಾಯಾ...' ಎಂದ ವಿಕ್ರಂ
`ಅಡ್ಡಿಲ್ಯಾ.. ನಾನು ಹಿಂಗೆ ಸುಮ್ನೆ ಪೋನ್ ಮಾಡಿದ್ನಾ.. ನನ್ನ ಮೊಬೈಲ್ ನಂಬರ್ ಕೊಟ್ಟಾಂಗೂ ಆತು.. ನಿನ್ ಕೈಲಿ ಮಾತಾಡದಾಂಗೂ ಆತು.. ಸುಮಾರ್ ದಿನಾ ಆಗಿತ್ತಲಾ.. ಭಾವ ನೆಂಟ ಹೇಳದ್ನೇ ಮರೆತು ಹೋಗಿದ್ವನೋ ಅನ್ನೋವಷ್ಟ್ ಟೈಮಾಗಿತ್ತಲಾ...' ಎಂದ ವಿನಾಯಕ. `ಹುಂ' ಎಂದ ವಿಕ್ರಂ.. ಪೋನ್ ಇಡಲು ಹವಣಿಸುತ್ತಿದ್ದಂತೆ ವಿನಾಯಕನ ಮೊಬೈಲ್ ನಂಬರ್ ಬರೆದಿಟ್ಟುಕೊಂಡ. `ಹೇಯ್ ವಿನೂ.. ನಾನು ನಿನ್ ಹತ್ರ ಮಾತಾಡವಾ.. ಸಂಜೆ ಮಾತಾಡ್ತಿ.. ಬಹಳ ಇಂಟರೆಸ್ಟಿಂಗ್ ಆದ ಒಂದು ವಿಷ್ಯ ಇದ್ದು.. ಅದಕ್ಕೆ ನಿನ್ನ ಸಹಕಾರ, ಸಹಾಯ ಎಲ್ಲಾ ಬೇಕು.. ಸಂಜೆ ಮಾತಾಡ್ತಿ...' ಎಂದವನೇ ಪೋನ್ ಇಟ್ಟ.
ಅಚ್ಚರಿಯಲ್ಲಿಯೇ ವಿನಾಯಕನೂ ಪೋನ್ ಇಟ್ಟಿದ್ದ.

*****

           ವಿನಾಯಕ ವಿಕ್ರಮನ ಮಾವನ ಮಗ. ಒಂದೇ ವಾರಗೆಯವರು. ವಿನಾಯಕನ ಊರು ಶಿರಸಿ-ಸಿದ್ದಾಪುರ ಮಾರ್ಗ ಮದ್ಯದ ಕಾನಸೂರು ಬಳಿಯ ದಂಟಕಲ್ ಎಂಬ ಚಿಕ್ಕ ಹಳ್ಳಿ. ವಿಕ್ರಂ ಹಾಗೂ ವಿನಾಯಕ ಇಬ್ಬರಿಗೂ ಪರಸ್ಪರ ಅಜ್ಜನಮನೆ ಸಂಬಂಧ. ಅಂದರೆ ವಿನಾಯಕನ ತಂದೆಯ ತಂಗಿ ವಿಕ್ರಮನ ತಾಯಿ. ಅದೇ ರೀತಿ ವಿಕ್ರಮನ ತಂದೆಯ ತಂಗಿ ವಿನಾಯಕನ ತಾಯಿ. ಯಾವ ಸಾಲಿನಿಂದ ನೋಡಿದರೂ ಇಬ್ಬರಿಗೂ ಪರಸ್ಪರ ಅಜ್ಜನಮನೆ ನೆಂಟಸ್ತನ. ಬಾಲ್ಯದಿಂದ ಇಬ್ಬರೂ ಆಪ್ತರು.
            ಹೇಳಿದಂತೆಯೇ ಸಂಜೆಯ ವೇಳೆಗೆ ವಿಕ್ರಮ, ವಿನಾಯಕನಿಗೆ ಪೋನ್ ಮಾಡಿದ. ವಿಕ್ರಮನಿಂದ ಪೋನ್ ಬರುತ್ತದೆ ಎನ್ನುವ ಕಾರಣಕ್ಕಾಗಿ ಸಿಗ್ನಲ್ ಸಿಗದ ತನ್ನೂರಿನಿಂದ ಮೊಬೈಲ್ ಸಿಗ್ನಲ್ ಇರುವ ಸ್ಥಳಕ್ಕೆ ಬಂದು ಕಾಯುತ್ತಿದ್ದ ವಿನಾಯಕ. ಆರಂಭದಲ್ಲಿ ಉಭಯಕುಶಲೋಪರಿಯನ್ನೆಲ್ಲ ತಿಳಿಸಿದ ಮೇಲೆ ವಿಕ್ರಂ `ಶಿರಸಿಯಲ್ಲಿ ಸಧ್ಯದಲ್ಲಿ ಯಾವುದಾದರೂ ಕೊಲೆ, ದರೋಡೆ, ಹೊಡೆದಾಟ ಇತ್ಯಾದಿ ಏನಾದರೂ ಗಲಾಟೆ ನಡೆದಿತ್ತಾ?' ಎಂದ.
           `ಸಧ್ಯ ಇಲ್ಲ.. ಈಗೊಂದು ತಿಂಗಳ ಹಿಂದೆ ಜಾತ್ರೆ  ಟೈಮ್ನಲ್ಲಿ ಏನೇನೋ ನಡೆದಿತ್ತು.. ದರೋಡೆ ಆಗಿತ್ತು.. ಗಲಾಟೆನೂ ಸುಮಾರು ಆಗಿತ್ತು.. ಆಮೇಲೆ ಈಗೊಂದು 15 ದಿನದ ಹಿಂದೆ ಸ್ಮಗ್ಲಿಂಗ್ ವಿಚಾರದಲ್ಲಿ ಇಬ್ಬರು ಕಾಲೇಜು ಹುಡುಗರನ್ನು ಪೊಲೀಸರು ಅರೆಸ್ಟ್ ಮಾಡಿದ್ರು..' ಎಂದ ವಿನಾಯಕ.
           `ಹೌದಾ..? ಎಂತಾ ಸ್ಮಗ್ಲಿಂಗ್ ಅದು?'
           `ಹುಲಿಯುಗುರು ಸ್ಮಗ್ಲಿಂಗ್ ಮಾಡ್ತಾ ಇದ್ದಿದ್ದ.. ಕಾಲೇಜು ಹುಡುಗ್ರು.. ಗಂಧದ ತುಂಡೂ ಇತ್ತು.. ಪೊಲೀಸರು ಅರೆಸ್ಟ್ ಮಾಡಿದ್ದು ಗೊತ್ತಿತ್ತು.. ಒಂದೆರಡ್ ದಿನಾ ಭಯಂಕರ ಗಲಾಟೆ ಆಗಿತ್ತು.. ಆಮೇಲ ಇದ್ದಕ್ಕಿದ್ದಾಂಗೆ ತಂಡ್ ಆಜು.. ಇದ್ ಬಿಟ್ರೆ ಮತ್ತೆಂತದ್ದೂ ಆದಾಂಗಿಲ್ಲೆ ನೋಡು..' ಎಂದ ವಿನಾಯಕ
          `ಹೌದಾ... ಆಮೇಲೆ ಎಂತಾದ್ರೂ ಆಜಾ..?' ವಿಕ್ರಂ ಕೇಳಿದ
          `ಮತ್ತೆಂತದ್ದೂ ಇಲ್ಲೆ... ಎಲ್ಲಾ ಸರಿ.. ನೀ ಎಂತಕ್ಕೆ ಇದನ್ನೆಲ್ಲಾ ಕೇಳ್ತಾ ಇದ್ದೆ? ಶಿರಸಿಯಲ್ಲಿ ನಡೆದ ದರೋಡೆ, ಸ್ಮಗ್ಲಿಂಗ್ ಬಗ್ಗೆ ನಿಂಗೆಂತಕ್ಕೋ ಅಷ್ಟೆಲ್ಲ ಆಸಕ್ತಿ?' ಎಂದು ಪ್ರಶ್ನಿಸಿದ್ದ ವಿನಾಯಕ.
           `ಎಂತಕ್ಕೂ ಅಲ್ಲಾ ಮಾರಾಯಾ.. ನಮ್ ಆಪೀಸಿಗೆ ಒಂದು ಸುದ್ದಿ ಬಂದಿತ್ತು.. ಶಿರಸಿ ರಿಪೋರ್ಟರ್ರೋ ಅಥವಾ ಮತ್ಯಾರೋ ವರದಿ ಮಾಡಿದ್ದು.. ಅದು ನಿಜಾನೋ ಸುಳ್ಳೋ.. ಹೇಳಿ ಕನ್ಫರ್ಮ್ ಮಾಡ್ಕಂಬಲೆ ಕೇಳಿದ್ನಾ..' ಎಂಬ ಸುಳ್ಳನ್ನು ಹೇಳಿ ಪೋನ್ ಇಟ್ಟ. ವಿಕ್ರಮನಿಗೆ ಎಲ್ಲೋ ಏನೋ ಹೊಳೆದಂತಾಯಿತು. ತಾನು ಮಾಡುತ್ತಿದ್ದ ತನಿಖಾ ವರದಿಗೂ ವಿನಾಯಕ ಹೇಳಿದ್ದ ಅಂಶಕ್ಕೂ ಸಾಕಷ್ಟು ಸಂಬಂಧವಿದೆಯೇನೋ ಅನ್ನಿಸಿತು.
          ಹಾಗಾದರೆ ಶಿರಸಿಯೇ ಎಸ್ ಗುಂಪಿನ ಕಾರ್ಯಸ್ಥಾನವೇ? ತಾನು ಯಾವುದಕ್ಕೂ ಒಮ್ಮೆ ಶಿರಸಿಗೆ ಹೋಗಿಬರಬೇಕು ಎಂದು ಕೊಂಡ ವಿಕ್ರಮ. ಶಿರಸಿಯಲ್ಲಿ ಯಾರನ್ನು ಬಂಧಿಸಿದ್ದರೋ ಅವರನ್ನು ಮಾತನಾಡಿಸಿದರೆ ಏನಾದರೂ ಸಿಗಬಹುದು. ಅಂದರೆ ನಾನು ಶಿರಸಿಗೆ ಸಾಧ್ಯವಾದಷ್ಟು ಬೇಗನೆ ಹೋಗಲೇಬೇಕು ಎಂದುಕೊಂಡವನು ರೂಮಿನಲ್ಲಿದ್ದ ಟಿವಿಯನ್ನು ಹಾಕಿದ. ಟಿವಿಯಲ್ಲಿ ಶಿರಸಿಯಲ್ಲೊಂದು ಕೊಲೆಯಾಗಿದೆಯೆಂದೂ, ಕೊಲೆಯಾದ ವ್ಯಕ್ತಿ ಶಿರಸಿಯಲ್ಲಿ ಕೆಲ ದಿನಗಳ ಹಿಂದೆ ಸ್ಮಗ್ಲಿಂಗ್ ವ್ಯವಹಾರದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದನೆಂದೂ, ಕೊಲೆ ಮಾಡಿದವರು ತಲೆ ತಪ್ಪಿಸಿಕೊಂಡಿದ್ದಾರೆಂದೂ ತಿಳಿಯಿತು. ಆಗಲೇ ವಿಕ್ರಮನಿಗೆ ತನ್ನ ತನಿಖೆ ಒಂದು ಹಂತಕ್ಕೆ ಬಂತು ಎಂದುಕೊಳ್ಳುತ್ತಿದ್ದಂತೆ ಮತ್ತೆಲ್ಲೋ ಹಾದಿ ತಪ್ಪುತ್ತಿದೆ ಎಂದು ಅರ್ಥವಾಯಿತು. ಆದರೂ ಶಿರಸಿಗೆ ಹೋಗಿ ಪ್ರಯತ್ನಿಸುವುದು ಒಳಿತು ಎಂದುಕೊಂಡ. ಬದುಕಿರುವ ಇನ್ನೊಬ್ಬ ಕಾಲೇಜು ವಿದ್ಯಾರ್ಥಿಯನ್ನಾದರೂ ಮಾತನಾಡಿಸೋಣ ಎಂದುಕೊಂಡ.
              ಮರುದಿನವೇ ಆತ ನವೀನಚಂದ್ರರ ಛೇಂಬರಿಗೆ ಹೋದ. ನವೀನಚಂದ್ರರು ಆಗಲೇ ಅಲ್ಲಿ ಕುಳಿತಿದ್ದರು. ಒಳಬಂದ ವಿಕ್ರಮನನ್ನು ನೋಡಿ `ವಿಕ್ರಂ... ನಂಗ್ಯಾಕೋ ನೀವು ಈ ತನಿಖೆಯನ್ನು ಕೈ ಬಿಡುವುದೇ ಒಳ್ಳೆಯದು ಎನ್ಸುತ್ತೆ. ಇದರಿಂದ ಉಪಯೋಗ ಇಲ್ಲ. ಜೊತೆಗೆ ಅಪಾಯವೇ ಹೆಚ್ಚು. ಏನಂತೀಯಾ?' ಎಂದರು.
             `ಆದ್ರೆ ಸರ್.. ಈಗ ನಾನು ಒಂದು ಹಂತದೆಡೆಗಿನ ಹುಡುಕಾಟವನ್ನು ಮುಗಿಸಿದ್ದೇನೆ. ಇಲ್ಲಿ ಮುಖ್ಯ ಪಾತ್ರ ವಹಿಸುವುದು ಎಸ್ ಲಾಕೇಟಿನ ಒಂದು ಗುಂಪು. ಆ ಗುಂಪಿನ ಕಾರ್ಯಸ್ಥಳವೋ ಅಥವಾ ಪ್ರಮುಖ ಪ್ರದೇಶವೋ ಗೊತ್ತಿಲ್ಲ. ಅದು ಶಿರಸಿ ಎನ್ನುವುದು ತಿಳಿದಿದೆ. ಇಂತಹ ಸಮಯದಲ್ಲಿ ನನ್ನ ಹುಡುಕಾಟವನ್ನು ನಿಲ್ಲಿಸಲಾರೆ ಸರ್..' ಎಂದ ವಿಕ್ರಂ.
           `ಹಾಗಲ್ಲಪ್ಪಾ... ಈ ನಿನ್ನ ತನಿಖೆ ಬಹಳ ಡೇಂಜರ್ರು. ಇಲ್ಲಿ ಹಲವು ರೀತಿಯ ತೊಂದರೆ ಬರಬಹುದು. ಅದೂ ಅಲ್ದೆ ಆ ಗುಂಪು ಕೊಲ್ಲೋದಕ್ಕೂ ಹೇಸೋದಿಲ್ಲ ಎನ್ನುವುದು ಅರಿವಾಗಿದೆ. ಮಂಗಳೂರು ಹಾಗೂ ಶಿರಸಿಗಳಲ್ಲಿ ನಡೆದಿರೋ ಕೊಲೆಗಳೇ ಇದಕ್ಕೆ ಸಾಕ್ಷಿ. ಸುಮ್ನೆ ಅಪಾಯವನ್ನು ಮೈಮೇಲೆಳೆದುಕೊಳ್ಳುವಂತದ್ದು ಏನಿದೆ? ಅಂತಹ ಕೆಲಸವನ್ನು ನಾವ್ಯಾಕೆ ಮಾಡ್ಬೇಕು ಹೇಳಿ. ' ಎಂದರು ನವೀನಚಂದ್ರ.
           `ಸರ್.. ನಾನು ಮೊದಲು ಇಲ್ಲಿ ಸೇರೋವಾಗ ನಿಮಗೆ ಹೇಳಿದ್ದೆ. ಅದರ ಜೊತೆಗೆ ನಾನು ಮಾಡ್ತಿರೋ ವೃತ್ತಿಯೇ ಅಂತದ್ದಾಗಿದೆ. ಹರಿತವಾದ ಕತ್ತಿಯ ಮೇಲೆ ನಡೆದುಕೊಂಡು ಓಡಾಡುವಂತದ್ದು. ಅದರಲ್ಲಿ ತಿರುಗಿ ಬರುವ ಪ್ರಶ್ನೆಯೇ ಇಲ್ಲ ಸಾರ್.. ನೀವ್ ಹೆದರಬೇಡಿ... ಎಂತದ್ದೇ ಸಮಸ್ಯೆ ಬಂದರೂ ನಾನು ಹಿಂದಕ್ಕೆ ತಿರುಗೋದಿಲ್ಲ..'
           `ಆದ್ರೂ... ಒಂದ್ ಸಾರಿ ಆಲೋಚನೆ ಮಾಡಿ..'
           `ಇಲ್ಲ ಸಾರ್.. ನಾನು ಈ ಹುಡುಕಾಟ ನಿಲ್ಲಿಸೋದಿಲ್ಲ. ಏನೇ ಕಷ್ಟ ಬಂದರೂ.. ಸಾವೇ ಎದುರಿಗೆ ಬಂದರೂ ಅದನ್ನು ಎದುರಿಸಿ ನಿಲ್ಲುತ್ತೇನೆ...'
(ಮಲೆನಾಡಿನಲ್ಲಿ ಮಂಜಿನ ಮುಂಜಾವು)
           `ಹಹ್ಹಹ್ಹ..! ವೆಲ್ ಡನ್..ಗುಡ್ ವಿಕ್ರಂ. ನಾನು ಮಾಡಿದ ಪರೀಕ್ಷೆಯಲ್ಲಿ ನೀನು ಗೆಲುವು ಸಾಧಿಸಿದೆ. ನಾನು ನಿನ್ನನ್ನು ಪರೀಕ್ಷೆ ಮಾಡಲಿಕ್ಕಾಗಿ ಕೇಳಿದ್ದೆ. ಆದರೆ ನೀನು ಅದಕ್ಕೆ ಹೆದರಲಲ್ಲಿಲ್ಲ ನೋಡು. ಕೇಸಿನ ಬಗ್ಗೆ ನಿನ್ನ ನಿಷ್ಟೆ ಯಾವ ರೀತಿ ಇರಬಹುದು ಎಂದುಕೊಂಡೆ. ಪರವಾಗಿಲ್ಲ.. ಒಳ್ಳೆ ಕೆಲಸ ಹಾಕ್ಕೊಂಡಿದ್ದೀಯಾ.. ಗುಡ್..' ಎಂದರು ನವೀನಚಂದ್ರ.
          `ಓಹ್... ನಾನು ಇದೇನಿದು ಅಂದ್ಕೊಂಡೆ.. ಯಾಕೆ ಹೀಗೆ ಅವರು ಹೇಳ್ತಾ ಇದ್ದಾರೆ ಎಂದೂ ಆಲೋಚನೆ ಮಾಡಿದ್ದೆ ನೋಡಿ..'
         `ನೋಡು.. ಒಂದು ಮುಖ್ಯ ಸುದ್ದಿ ಹೇಳ್ಬೇಕು. ನಿಮ್ಮೂರು ಇರೋದು ಉತ್ತರ ಕನ್ನಡದಲ್ಲಿ ಅಲ್ವಾ? ಅಲ್ಲಿಯೇ ಈ ಗುಂಪಿನ ಕಾರ್ಯಸ್ಥಾನ ಇರೋದು ಅಂತ ಹೇಳಿದ್ರಿ ನೀವು. ನೀವ್ಯಾಕೆ ಅಲ್ಲಿಗೆ ಹೋಗಿ ನಿಮ್ಮ ತನಿಖೆ ಮುಂದುವರಿಸಬಾರದು? ಈ ಕುರಿತು ಒಂದೆರಡು ದಿನ ತಡವಾದರೂ ತೊಂದರೆಯಿಲ್ಲ. ಆದರೆ ನಿಜವಾದ ಆರೋಪಿ, ಈ ಎಲ್ಲದ್ದಕ್ಕೂ ಕಾರಣವಾಗಿರುವ ತಂಡ ಸಿಕ್ಕಿಬಿಟ್ಟರೆ ಅಷ್ಟೇ ಸಾಕು. ನಿನಗೆ ಎಷ್ಟು ದಿನದ ರಜೆ ಬೇಕಾದರೂ, ಜೊತೆಗೆ ಯಾವುದೇ ರೀತಿಯ ಸಹಾಯ ಬೇಕಾದರೂ ನನ್ನಿಂದ ಹಾಗೂ ನಮ್ಮ ಆಫೀಸಿನಿಂದ  ಸಿಗುತ್ತದೆ...' ಎಂದರು ನವೀನಚಂದ್ರ.
           `ನಾನೂ ಅದನ್ನೇ ತಿಳಿಸೋಕೆ ಬಂದೆ ಸಾರ್.. ನಾನು ಇವತ್ತು ಸಂಜೆ ಊರಿಗೆ ಹೊರಡೋಣ ಎಂದುಕೊಂಡಿದ್ದೇನೆ. ನಿಮ್ಮ ಸಹಾಯಕ್ಕೆ ಥ್ಯಾಂಕ್ಸ್. ಸರ್.. ನನಗೆ ಕನಿಷ್ಟ 2 ವಾರದ ರಜೆ ಬೇಕು. ನಾನು ಅಲ್ಲಿನ ಹುಡುಕಾಟಾನ ಕಾಲಕಾಲಕ್ಕೆ ತಕ್ಕಂತೆ ನಡೆಯುವ ವಿದ್ಯಮಾನಗಳನ್ನು ವರದಿ ಮಾಡ್ತೀನಿ ಸರ್. ಆದರೆ ನನ್ನ ತನಿಖೆ ಪೂರ್ತಿ ಆಗುವ ವರೆಗೂ ಆ ವರದಿ ಪತ್ರಿಕೆಯಲ್ಲಿ ಬರಬಾರದು..' ಎಂದ ವಿಕ್ರಮ.
           ಸರಿ. ಆದ್ರೆ ಒಂದು ಮುಖ್ಯವಾದ ವಿಷಯ. ನೀನು ಅಲ್ಲಿಗೆ ಹೋದಾಗ ಪೇಪರ್ರಿನವನು ಅಂತ ಹೇಳಬೇಡ. ಯಾವುದಾದರೂ ರಿಸರ್ಚ್ ಕೆಲಸಕ್ಕೆ ಬಂದಿದ್ದೇನೆ ಎಂದು ಹೇಳಿ. ಜೊತೆಗೆ ನನ್ನ ಕಾರನ್ನೂ ತೆಗೆದುಕೊಂಡು ಹೋಗು. ಸಹಾಯಕ್ಕೆ ಬರುತ್ತೆ. ' ಎಂದು ಹೇಳಿದರು. ಇದಾದ ನಂತರವೂ ಹಲವು ವಿಷಯಗಳು ವಿನಿಮಯವಾದವು. ನಂತರ ವಿಕ್ರಂ ತನ್ನ ರೂಮಿಗೆ ಮರಳಿದ.

************7**************

              ಸರಿ. ಹೊರಡುವ ವಿಷಯವನ್ನು ವಿಜೇತಾಳಿಗೆ ತಿಳಿಸಿದ. ವಿಷಯವನ್ನು ಕೇಳಿದವಳೇ ತಾನೂ ಬರುವುದಾಗಿ ಹಟ ಹಿಡಿದಳು. ಕೊನೆಗೆ ನವೀನಚಂದ್ರನ ಒಪ್ಪಿಗೆ ಮೇರೆಗೆ  ಆಕೆಯೂ ಹೊರಟಳು. ವಿಕ್ರಂ ಹಾಗೂ ವಿಜೇತಾ ತಮ್ಮೆಲ್ಲ ಲಗೇಜುಗಳನ್ನು ಕಾರಿನಲ್ಲಿ ತುಂಬಿ ಹೊರಡಲು ಅನುವಾಗುತ್ತಿದ್ದಂತೆ ಪ್ರದೀಪ ಪ್ರತ್ಯಕ್ಷನಾದ. ಅದ್ಯಾರು ಹೇಳಿದ್ದರೋ, ಹೇಗೆ ಗೊತ್ತಾಯಿತೋ.. ಪ್ರದೀಪ ತನ್ನೆಲ್ಲಾ ಲಗೇಜುಗಳ ಸಮೇತ ತಯಾರಾಗಿ ಬಂದಿದ್ದ. ತಾನೂ ವಿಕ್ರಮನ ಜೊತೆಗೆ ಬರುತ್ತೇನೆ ಎಂದು ಹೇಳಿದವನೇ ವಿಕ್ರಮನ ಮಾತಿಗೂ ಕಾಯದೇ ಕಾರನ್ನೇರಿಬಿಟ್ಟ. ವಿಕ್ರಮ ಬೇಡ ಬೇ ಎನ್ನುತ್ತಿದ್ದರೂ ಅದನ್ನು ಪ್ರದೀಪ ಕೇಳದಂತಿದ್ದ. ವಿಧಿಯಿಲ್ಲದೇ ವಿಕ್ರಮ ಗಾಡಿ ಚಾಲೂ ಮಾಡಿದ.! ಕತೆ ಇಲ್ಲಿಂದ ಸಂಪೂರ್ಣ ಬದಲಾವಣೆಯ ಮಾರ್ಗ ಹಿಡಿದಿತ್ತು. ಮಲೆನಾಡು ಕರೆದಿತ್ತು.
             ಎಷ್ಟು ಬೇಡವೆಂದರೂ ನವೀನಚಂದ್ರರು ತಮ್ಮ ಕಾರನ್ನು ವಿಕ್ರಮನಿಗಾಗಿ ನೀಡಿದ್ದರು. ಅಂತೂ ರಾತ್ರಿಯ ಹೊತ್ತಿಗೆ ವಿಕ್ರಮ, ವಿಜೇತಾ ಹಾಗೂ ಪ್ರದೀಪ ನಿಘೂಡಗಳ ತವರು ಉತ್ತರ ಕನ್ನಡದ ಕಡೆಗೆ ಹೊರಟರು. ವಿಕ್ರಮನಿಗೆ ಮತ್ತೆ ತನ್ನ ಮನೆಗೆ ಮರಳುವ ತವಕ. ಹಿಡಿದ ಕೆಲಸವನ್ನು ಬೇಗನೇ ಮುಗಿಸುವ ತುಡಿತ ಇದ್ದರೆ ಅರಿಯದ ಸುಂದರ ಜಿಲ್ಲೆಯ ಕಡೆಗೆ ಸಾಗುತ್ತಿರುವ ಬಗ್ಗೆ ವಿಜೇತಾ ಹಾಗೂ ಪ್ರದೀಪರಲ್ಲಿ ಕುತೂಹಲವಿತ್ತು. ಇಲ್ಲಿ ವಿಕ್ರಮನ ಮನಸ್ಸು ಪ್ರದೀಪನೆಡೆಗೆ ಮಾತ್ರ ಚಿಕ್ಕದೊಂದು ಅನುಮಾನದ ಎಳೆಯನ್ನು ಹರಿಯಬಿಟ್ಟಿತ್ತು. ಆದರೂ ಪ್ರದೀಪನ ಜೊತೆಗೆ ಮೊದಲಿನಂತೆ ವರ್ತನೆ ಮಾಡುತ್ತಿದ್ದ.
              ವೇಗವಾಗಿ ಚಲಿಸುತ್ತಿದ್ದ ಕಾರಿಗಿಂತ, ಕಾರಿನಲ್ಲಿ ಕುಳಿತಿದ್ದ ಮೂವರ ಮನಸ್ಸುಗಳು ಮತ್ತಷ್ಟು ವೇಗವಾಗಿ ಎತ್ತೆತ್ತಲೋ ಓಡುತ್ತಿದ್ದವು. ವಿಕ್ರಮ ಮತ್ತೆ ಮತ್ತೆ ತನ್ನ ಹುಡುಕಾಟದ ಬಗ್ಗೆ ಆಲೋಚಿಸುತ್ತಿದ್ದರೆ, ವಿಜೇತಾ ತಾನು ಇಲ್ಲಿಗೆ ಹೊರಡಲು ಮನೆಯಲ್ಲಿ ಒಪ್ಪಿಗೆ ಕೇಳಿದಾಗ ಮನೆಯವರು ಏನೋ ಹೇಳಲು ಹೊರಟವರು ಹಾಗೇ ತಡೆದು ಒಪ್ಪಿಗೆ ನೀಡಿದ ತಂದೆ ತಾಯಿಯರ ನಡೆಯ ಬಗ್ಗೆ ಆಲೋಚಿಸುತ್ತಿದ್ದಳು.
           ಪ್ರದೀಪ ಮಾತ್ರ ಆಗಾಗ `ಭೀಗಿ ಭೀಗಿ ರಾತೋ ಮೆ....' ಅಂತಲೋ.. `ಯಾರು ಯಾರು ನೀ ಯಾರು..?' ಅಂತಲೋ ಸಂಬಂಧವೇ ಇಲ್ಲದ ಯಾವು ಯಾವುದೋ ಹಾಡುಗಳನ್ನು ಹಾಡುತ್ತಿದ್ದ. ಜೊತೆಗೆ ತನ್ನ ಕುಟುಂಬದ ಬಗ್ಗೆ ಆಲೋಚನೆ ಮಾಡುತ್ತಿದ್ದ. ಈ ಮೂವರ ನಡುವೆ ಕಾರಿನಲ್ಲಿದ್ದ ಟೇಪ್ ರೆಕಾರ್ಡರ್ ಮಾತ್ರ ಮುಖೇಶನ ಹಾಡುಗಳನ್ನು ಒಂದರ ಹಿಂದೊಂದರಂತೆ ಹಾಡುತ್ತಿದ್ದವು. ಈ ಎಲ್ಲ ಕಾರಣಗಳಿಂದ ಕಾರಿನಲ್ಲಿ ಮೌನ ಇರಲಿಲ್ಲ. ಮಂದ್ರ ದನಿಯಲ್ಲಿ ಹಾಡು ಕೇಳಿಸುತ್ತ ಮನಸ್ಸು ತಣ್ಣಗೆ ಹರಿಯತೊಡಗಿತ್ತು.
            ಅಜಮಾಸು 300 ಕಿ.ಮಿ ಸಾಗಿದ ನಂತರ ಅಂಕೋಲಾ ಸಿಕ್ಕಿತು. ಅಲ್ಲೊಂದು ಕಡೆ ಕಾರನ್ನು ನಿಲ್ಲಿಸಿದ ವಿಕ್ರಮ. ಅಲ್ಲಿ  ಚಹಾ ಕುಡಿದು ಮುಖಕ್ಕೆ ನೀರನ್ನು ರಪ್ಪನೆ ಚಿಮುಕಿಸಿ, ಆಗೀಗ ಸುಳಿದು ಬರುತ್ತಿದ್ದ ನಿದ್ದೆಗೆ ಗುಡ್ ಬೈ ಹೇಳಿದ ವಿಕ್ರಮ. ವಿಜೇತಾ ಆಗೀಗ ವಿಕ್ರಮನ ಕುಟುಂಬದ ಬಗ್ಗೆ ವಿಚಾರಿಸುತ್ತಿದ್ದಳು. ಅದಕ್ಕೆಲ್ಲ ದೀರ್ಘವಾಗಿ ಉತ್ತರಿಸುತ್ತಿದ್ದ. ಆಗಾಗ ಪ್ರದೀಪನ ಹಾಸ್ಯ ರಸಾಯನದ ತುಣುಕುಗಳೂ ಚೆಲ್ಲುತ್ತಿದ್ದವು. ಬಾಳೆಗುಳಿ ಕ್ರಾಸಿನಲ್ಲಿ ಬಲಕ್ಕೆ ತಿರುಗಿಸಿ ಕಾರನ್ನು ಹುಬ್ಬಳ್ಳಿ ರಸ್ತೆಯ ಕಡೆಗೆ ಚಾಲನೆ ಮಾಡಿದರು. ಮಧ್ಯರಾತ್ರಿಯ ಸಮಯ ಮೀರಿ ಬೆಳಗಿನ ಮುಂಜಾವು ದೂರದ ಭೀಮನವಾರೆ ಗುಡ್ಡದಲ್ಲಿ ಇಣುಕಲು ಪ್ರಯತ್ನಿಸುತ್ತಿತ್ತು. ಅಲ್ಲೆಲ್ಲೋ ಆಗಾಗ ಸಿಗುತ್ತಿದ್ದ ಲೈಟುಗಳು., ಎದುರಿನಿಂದ  ಬರುತ್ತಿದ್ದ ವಾಹನಗಳ ಭರ್ರೆನ್ನುವ ಸದ್ದು, ಕಾಡಿನ ನಡುವಣ ಒಂಟಿ ಪಯಣ.. ಏನೋ ಒಂಥರಾ ಎನ್ನಿಸಿತು. ಸ್ವಲ್ಪ ಸಮಯದಲ್ಲಿ ಅರಬೈಲ್ ಘಟ್ಟದ ಅಂಕುಡೊಂಕು ಸಿಕ್ಕಿತು. ವೇಗವಾಗಿ ಹತ್ತಿ ಯಲ್ಲಾಪುರವನ್ನು ತಲುಪುವ ವೇಳಗೆ ಸೂರ್ಯ ಬಾನಂಚಿನಲ್ಲಿ ಮತ್ತಷ್ಟು ಏರಿ ಬಂದಿದ್ದ.
          ಮುಂಜಾನೆಯ ಚುಮು ಚುಮು ಬೆಳಕಿನಲೆಯ ಆಗಮನದ ಜೊತೆ ಜೊತೆಯಲ್ಲಿಯೇ ಕಾರು ಒಂದೆರಡು ರಸ್ತೆಯನ್ನು ಹಾದು, ಕೊನೆಗೊಂದು ಕಚ್ಚಾ ರಸ್ತೆಯಲ್ಲಿ ನಿಧಾನವಾಗಿ ಸಾಗಿತು. ಮೊದಲ ಸೂರ್ಯನ ಕಿರಣ ಧರೆಯನ್ನು ಮುತ್ತಿಕ್ಕುವ ವೇಳೆಗೆ ಮನೆಯೊಂದರ ಅಂಗಳದಲ್ಲಿ ಕಾರು ಬಂದು ನಿಂತಿತು.  ಆಗಲೇ ವಿಜೇತಾ ಹಾಗೂ ಪ್ರದೀಪರು ನಿದ್ರೆಗೆ ಜಾರಿದ್ದರು. ಮನೆಯಂಗಳದಲ್ಲಾಗಲೇ ಸುಂದರ ರಂಗೋಲಿ ಮಿನುಗುತ್ತಿತ್ತು. ವಿಕ್ರಮ ಒಮ್ಮೆ ಕಾರಿನ ಹಾರನ್ ಮಾಡಿದ. ಮನೆಯೊಳಗಿನಿಂದ ಹೊರ ಬಂದ ಒಬ್ಬಾಕೆ ಯಾರು ಬಂದಿರಬಹುದು ಬೆಳ್ಳಂಬೆಳಿಗ್ಗೆ ಎಂದು ಕುತೂಹಲ, ಗಾಭರಿಯಿಂದ ನೋಡಲು ಆರಂಭಿಸಿದಳು.

(ಮುಂದುವರಿಯುತ್ತದೆ) 

Thursday, January 8, 2015

ಖಾಲಿಯಿದೆ ಬಾಳಪುಟ

ಖಾಲಿಯಿದೆ ಬಾಳಪುಟ
ಯಾರ ಚಿತ್ರವೂ ಇಲ್ಲ
ಪ್ರೀತಿಯನು ಬಯಸುತಿದೆ
ಜೊತೆಗೆ ಯಾರೂ ಇಲ್ಲ |

ಬೆರೆತಿದೆ ನೂರು ನೋವು
ಜೊತೆಗೆ ಕಷ್ಟದ ಸೊಲ್ಲು
ಒಂಟಿತನ ಓಡಿಸಲು
ಜೊತೆಯ ಬಯಸಿದೆಯಲ್ಲ |

ಎದೆಯ ಗುಂಡಿಗೆಯೊಳಗೆ
ಯಾರ ರೇಖೆಯೂ ಇಲ್ಲ
ಮನದ ಒಬ್ಬಂಟಿತನ
ಕಳೆಯಬಯಸಿದೆಯಲ್ಲ |

ಎದುರಲಿದೆ ಕಲ್ಪನೆಯು
ಮನದ ಬದಲಾವಣೆಯು
ನೂರು ಬಯಕೆಯ ಸುತ್ತ
ಮನವು ಸುತ್ತಿದೆಯಲ್ಲ |

ಖಾಲಿಯಿದೆ ಬಾಳಪುಟ
ಪ್ರಿತಿ ದೊರೆಯುವ ವರೆಗೆ
ಮುತ್ತಿಕೊಂಡಿದೆ ಮುಸುಕು
ತೆರೆಯ ಸರಿಯುವ ವರೆಗೆ |

***
(ಈ ಕವಿತೆಯನ್ನು ಬರೆದಿರುವುದು 16-10-2006ರಂದು ದಂಟಕಲ್ಲಿನಲ್ಲಿ)

Sunday, January 4, 2015

ಅಘನಾಶಿನಿ ಕಣಿವೆಯಲ್ಲಿ-6

           ನಂತರ ಅವರು ಇನ್ನೇನು ವಾಪಾಸು ಹೊರಡಬೇಕು ಎನ್ನುವಷ್ಟರಲ್ಲಿ ವಿಕ್ರಮನಿಗೆ ಪ್ರದೀಪ ಬರುತ್ತಿರುವುದು ಕಾಣಿಸಿತು. ಹತ್ತಿರ ಬಂದ ಕುಡಲೇ `ಹಲೋ... ಏನಪ್ಪಾ ಇಲ್ಲಿ. ಏನ್ಮಾಡ್ತಾ ಇದ್ದೀಯಾ?' ಎಂದು ಕೇಳಿ ವಿಜೇತಾಳನ್ನು ಪ್ರದೀಪನಿಗೂ ಪ್ರದೀಪನನ್ನು ವಿಜೇತಾಳಿಗೂ ಪರಿಚಯಿಸಿದ.
           ಇದು ಯಾರು ಬರೆದ ಕಥೆಯೋ... ನನಗಾಗಿ ಬಂದ ವ್ಯಥೆಯೋ...
ಎಂದು ಹಾಡುತ್ತಾ ಬರುತ್ತಿದ್ದ ಪ್ರದೀಪ ಇವರನ್ನು ನೋಡಿ ಒಮ್ಮೆಲೆ ಅವಕ್ಕಾದರೂ ಬೇಗನೆ ಸಾವರಿಸಿಕೊಂಡು `ನಮಸ್ಕಾರ, ನಮಸ್ತೆ.. ಹಲೋ.. ಹಾಯ್...' ಎಂದು ಹಲ್ಲುಕಿರಿಯತೊಡಗಿದ.
          `ವಿಜೇತಾ.. ಈತ ಭರ್ಜರಿ ಹಾಡುಗಾರ. ಒಳ್ಳೆಯ ಅಡುಗೆಯಾತ.. ಬಹಳ ಕೊರೆಯುವ ವ್ಯಕ್ತಿ.. ಮೂರ್ನಾಲ್ಕು ವರ್ಷ ನನ್ನ ರೂಮ್ ಮೇಟು.. ಈದೀಗ ಬೇರೆ ಕಡೆ ರೂಮು ಮಾಡಿದ್ದಾನೆ. ಆದರೆ ಈತನ ದುರ್ಗುಣ ಎಂದರೆ ಇದ್ದಕ್ಕಿದ್ದಂತೆ ಕಾಣೆಯಾಗಿ ಬಿಡುವುದು. ನಿಘೂಡ ವ್ಯಕ್ತಿ ಎಂದರೆ ತಪ್ಪಾಗಲಿಕ್ಕಿಲ್ಲ ನೋಡು.. ' ಎಂದು ತಮಾಷೆ ಮಾಡಿದ ವಿಕ್ರಮ.
         `ಹೇ ಸುಮ್ನಿರೋ.. ಸುಮ್ನಿರೋ..' ಎಂದು ತಿವಿಯುತ್ತಾ ಹೇಳಿದ ಪ್ರದೀಪ. ಒಮ್ಮೆಲೆ ಎಲ್ಲರಲ್ಲೂ ನಗು ಉಕ್ಕಿತ್ತು. ನಂತರ ಮಾತು ಮುಂದುವರಿಸುತ್ತಾ `ನಾನು ಇಲ್ಲೇ ರೂಮು ಮಾಡಿದ್ದೀನಿ. ಬನ್ನಿ.. ಎಲ್ಲ ಅಲ್ಲಿಗೆ ಹೋಗೋಣ.. ಅಲ್ಲಿ ಆರಾಮಾಗಿ ಮಾತಾಡೋಣ..' ಎಂದು ಹೇಳಿ ಅವರಿಬ್ಬರನ್ನೂ ಕರೆದೊಯ್ದ.. `ನಡಿಯಪ್ಪಾ...ನಡಿ... ನಿನ್ನ ನಳಪಾಕದ ಪರಿಚಯ ವಿಜೇತಾಗೂ ಆಗಿ ಹೋಗಲಿ...' ಎಂದು ಮತ್ತೊಮ್ಮೆ ತಮಾಷೆ ಮಾಡಿದ ವಿಕ್ರಮ. ಎಲ್ಲರೂ ನಗುತ್ತ ಪ್ರದೀಪನ ರೂಮಿನ ಕಡೆಗೆ ಪಾದ ಬೆಳೆಸಿದರು.
           ಅವನದು ಮಹಡಿ ಮೇಲಿನ ದೊಡ್ಡ ರೂಮು. ಅಲ್ಲಿ ತರಹ ತರಹದ ವಸ್ತುಗಳಿದ್ದವು.ಗೋಡೆಯ ಮೇಲಂತೂ ಭಾರತ, ವಿಶ್ವ, ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಸೇರಿದಂತೆ ವಿವಿಧ ನಕಾಶೆಗಳು ತೂಗಾಡುತ್ತಿದ್ದವು. ಆ ರೂಮಿನ ಒಳಕ್ಕೆ ಕಾಲಿಡುತ್ತಿದ್ದಂತೆ `ನೀವು ಒಳ್ಳೆಯ ಸಲಹೆ ನೀಡಿದ್ರಿ.. ನೀವುಕೊಟ್ಟ ಸಲಹೆಯಿಂದಲೇ ವಿಕ್ರಂ ಅವರು ದೊಡ್ಡ ಸಾಧನೆ ಮಾಡಲು ಸಾಧ್ಯವಾಯಿತು ನೋಡಿ.. ಅದಕ್ಕೆ ನೀವು ಧನ್ಯವಾದಕ್ಕೂ, ಗೌರವಕ್ಕೂ ಅರ್ಹರು..' ಎಂದಳು ವಿಜೇತಾ.
          `ಓಹ್... ಅದರಲ್ಲಿ ನಂದೇನಿದೆ? ಅವ್ನು ನನ್ನ ಗುಡ್ ಪ್ರೆಂಡೂ.. ಬೇಜಾರ್ನಲ್ಲಿದ್ದ.. ಅದಕ್ಕೆ ಒಂದೆರಡು ಸಲಹೆ ಕೊಟ್ಟೆ ಅಷ್ಟೇ. ಆದರೆ ಪ್ರಯತ್ನ ಪಟ್ಟು ಗೆದ್ದಿದ್ದು ವಿಕ್ರಂ ಹಾಗೂ ಆತನ ಬಳಿ ಕಲಿತವರು.. ನಾನು ನಿಮಿತ್ತ ಮಾತ್ರ...' ಎಂದ ಪ್ರದೀಪ.
         `ಆದ್ರೂ ಸೋಲಲು ಆರಂಭವಾದಾಗ ನಿಮ್ಮಂಥವರ ಆಶಾವಾದದ ನುಡಿಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.  ಗೆಲುವಿನ ಕಡೆಗೆ ಮುಖ ಮಾಡಿಸುತ್ತದೆ...'
         `ಅದೂ ಹೌದೆನ್ನಿ.. ಒಂದ್ನಿಮಿಷ.. ಟೀ ಮಾಡ್ಕೊಂಡು ಬರ್ತೀನಿ...' ಎಂದು ಪ್ರದೀಪ ಹೇಳುತ್ತಿದ್ದಂತೆ.. `ಮೊದ್ಲು ಆ ಕೆಲಸ ಮಾಡಪ್ಪಾ... ಬಾಯೆಲ್ಲಾ ಉಪ್ಪುಪ್ಪಾಗಿದೆ...' ಎಂದ ವಿಕ್ರಂ. ಕೆಲವೇ ಸಮಯದಲ್ಲಿ ಟೀ ಮಾಡಿಕೊಂಡು ಬಂದ. ವಿಕ್ರಂ, ವಿಜೇತಾ ಕುಳಿತು ಮಾತನಾಡುತ್ತಿದ್ದರೆ ಪ್ರದೀಪ ಕಿಟಕಿ ಬಳಿ ಹೋಗಿ ಮಾತನಾಡುತ್ತ ನಿಂತಿದ್ದ. ಕೆಲವು ನಗು, ತಮಾಷೆ,ಗಳೆಲ್ಲ ಆ ಸಂದರ್ಭದಲ್ಲಿ ಹಾದು ಹೋದವು.
           ಹೀಗೆ ಮಾತನಾಡುತ್ತಿದ್ದಂತೆ ಪ್ರದೀಪದ ದೃಷ್ಟಿ ಕಿಟಕಿಯಿಂದ ಹೊರಕ್ಕೆ ಹಾಯಿತು. ತಕ್ಷಣ ವಿಕ್ರಮನನ್ನು ಕರೆದು `ಶ್.. ಅಲ್ಲಿನೋಡು ನಾನು ಆ ದಿನ ಹೇಳಿದ್ನಲ್ಲಾ.. ಅದೇ ಫಾಲೋ ಮಾಡುವ ವ್ಯಕ್ತಿ. ಕಾಂಪೌಂಡ್ ಹತ್ತಿರ ಇಣುಕುತ್ತಿದ್ದಾನೆ ನೋಡು.. ' ಎಂದು ಹೇಳಿ ಬಾಯಿ ಮುಚ್ಚುವುದರೊಳಗಾಗಿ `ಒಂದೈದ್ ನಿಮಿಷ ನೀವಿಬ್ರೂ ಇಲ್ಲೇ ಇರಿ..' ಎಂದು ಹೇಳುತ್ತಾ ವಿಕ್ರಂ ಹೊರಗೋಡಿದ. ವಿಕ್ರಂ ಒಳ್ಳೆಯ ರನ್ನರ್ ಎನ್ನುವುದನ್ನು ಅರಿತಿದ್ದ ಪ್ರದೀಪ ಖಂಡಿತವಾಗಿಯೂ ಆ ಇಣುಕು ವ್ಯಕ್ತಿಯನ್ನು ಹಿಡಿದೇ ತರುತ್ತಾನೆ ಎನ್ನುವುದು ಖಾತ್ರಿಯಾಗಿತ್ತು.
          ಮತ್ತೈದು ನಿಮಿಷದಲ್ಲಿ ವಿಕ್ರಂ ಏದುಸಿರು ಬಿಡುತ್ತಾ ತಿರುಗಿ ಬಂದ. ತಕ್ಷಣ ಪ್ರದೀಪ `ಸಿಕ್ಕಿದ್ನಾ ಆತ..?' ಎಂದ.
          `ಬೆನ್ನಟ್ಟಿಕೊಂಡು ಹೋದೆ.. ಸಿಟಿ ಏರಿಯಾ ನೋಡಿ.. ತಪ್ಪಿಸಿಕೊಂಡು ಬಿಟ್ಟ.. ಬಡ್ಡೀಮಗ.. ನಾನೇ ಸ್ಪೀಡು ಅಂದ್ರೆ ನನಗಿಂತ ಸ್ಪೀಡಾಗಿ ಓಡ್ತಾನೆ...' ಎಂದ ವಿಕ್ರಂ. ಕೆಲ ಸಮಯದ ವರೆಗೆ ಈ ವಿಷಯದ ಕುರಿತು ಚರ್ಚೆ ನಡೆಯಿತು. ನಂತರ ವಿಜೇತಾ ಪ್ರದೀಪನಲ್ಲಿ `ನೀವು ಏನು ಕೆಲಸ ಮಾಡ್ತಾ ಇದ್ದೀರಿ?' ಎಂದು ಕೇಳಿದಾಗ ಪ್ರದೀಪ ಅದೇನೋ ಹಾರಿಕೆಯ ಉತ್ತರ ನೀಡಿದ. ಮತ್ತರೆಘಳಿಗೆಯಲ್ಲಿ ವಿಜೇತಾ ಹಾಗೂ ವಿಕ್ರಂ ಆಫೀಸಿನ ಕಡೆಗೆ ಹೊರಟರು.
          ದಾರಿಯಲ್ಲಿ ವಿಜೇತಾ `ಅದ್ಯಾರೋ ನಿನ್ನ ಫಾಲೋ ಮಾಡ್ತಾರೆ ಅಂದನಲ್ಲಾ.. ಅದೇನು ಮಾರಾಯಾ.? ವಿಚಿತ್ರವಾಗಿದೆಯಲ್ಲ...' ಎಂದಳು.. `ನನಗೂ ಗೊತ್ತಿಲ್ಲ... ಆದರೂ ಆಶ್ಚರ್ಯವಾಗ್ತಾ ಇದೆ...' ಎಂದ ವಿಕ್ರಂ.
         `ಈ ಪ್ರದೀಪ ಬಹಳ ವಿಚಿತ್ರ ಅನ್ನಿಸ್ತಿದೆ ಕಣೋ.. ಏನೋ ನಿಗೂಢ.. ನೀ ಹೇಳಿದ್ದು ಸತ್ಯ.. ಅರ್ಥವಾಗುತ್ತಿಲ್ಲ.. ಕೇಳಿದ್ದಕ್ಕೊಂದಕ್ಕೂ ಸರಿಯುತ್ತರ ಕೊಡೋದಿಲ್ಲ.. ಎಲ್ಲದ್ದಕ್ಕೂ ಹಾರಿಕೆ ಉತ್ತರ.. ಮಾತು ತಪ್ಪಿಸುತ್ತಾನೆ.. ಕಣ್ಣಲ್ಲಿ ಅದೇನೋ ಅನುಮಾನದ ಸೆಳಕು.. ಚಂಚಲತೆ... ಆತ ಅದೇನು ಕೆಲಸ ಮಾಡ್ತಿದ್ದಾನೆ?' ಎಂದಳು ವಿಜೇತಾ.
          `ಹೌದು.. ಆತನ ಬಗ್ಗೆ ನನಗೆ ಗೊತ್ತಿದದ್ದು ಶೆ.10ರಷ್ಟು ಮಾತ್ರ. ಇನ್ನೂ ಶೆ.90ರಷ್ಟು ನನಗೆ ಅರ್ಥವೇ ಆಗಿಲ್ಲ. ಮೂರು ವರ್ಷ ನನ್ನ ರೂಂ ಮೇಟ್ ಆಗಿದ್ದ ಅಷ್ಟೇ.. ಆದರೆ ಎಲ್ಲೂ ತನ್ನ ವಿಷಯವನ್ನು ನನಗೆ ಹೇಳಿಯೇ ಇಲ್ಲ. ನಾನೂ ಕೇಳಲಿಲ್ಲ ಬಿಡು.. ನಿಜಕ್ಕೂ ಆತ ಅದೇನು ಕೆಲಸ ಮಾಡ್ತಾನೆ.. ಹೇಗೆ ಜೀವನ ನಡೆಸ್ತಿದ್ದಾನೆ ಒಂದೂ ನನಗೆ ಗೊತ್ತಿಲ್ಲ.. ನನ್ನ ಹಾಗೂ ಅವನ ಕಷ್ಟದ ದಿನಗಳಲ್ಲಿ ಇಬ್ಬರೂ ಒಟ್ಟಿದ್ದೆವು ಎನ್ನುವುದಷ್ಟೇ ಸತ್ಯ ನೋಡು..' ಎಂದ ವಿಕ್ರಂ.
          `ಹೋಗ್ಲಿ ಬಿಡು...' ಎಂದಳು ವಿಜೇತಾ.. ಅಷ್ಟರಲ್ಲಿ ಪತ್ರಿಕಾಲಯ ಬಂದಿತ್ತು. ಇಬ್ಬರೂ ಹೋಗಿ ವರದಿಯನ್ನು ತಯಾರಿಸಿದರು.
         ಸ್ವಲ್ಪ ಹೊತ್ತಿನಲ್ಲಿಯೇ ನವೀನಚಂದ್ರನಿಂದ ಚಿಕ್ರಮನಿಗೆ ಕರೆ ಬಂದಿತು. `ಯಾಕೆ ಕರೆದಿರಬಹುದು..?' ಎಂಬ ಆಲೋಚನೆಯಲ್ಲಿಯೇ ವಿಕ್ರಂ ನವೀನಚಂದ್ರರ ಕೋಣೆಯೊಳಕ್ಕೆ ಹೋದ. ಅಲ್ಲಿ ನವೀನಚಂದ್ರ ವಿಕ್ರಮನನ್ನು ಕುಳಿತುಕೊಳ್ಳಲು ಹೇಳಿದ. ಕೊಲೆಯ ವಿಷಯದ ಕುರಿತು ಮಾತನಾಡತೊಡಗಿದರು. `ನೋಡಿ ವಿಕ್ರಂ. ಈ ಕೊಲೆಯ ಬಗ್ಗೆ ನನಗ್ಯಾಕೋ ಅಪಾರ ಕುತೂಹಲ. ಈ ಮೊದಲು ನಾನು ಕ್ರೈಂ ರಿಪೋರ್ಟರ್ ಆಗಿದ್ದಕ್ಕೋ ಅಥವಾ ಬೇರಿನ್ಯಾವುದಕ್ಕೋ ಗೊತ್ತಿಲ್ಲ. ಕೊಲೆಗಳ ಬೆನ್ನತ್ತಿ ಹೋಗುವುದು ಅಂದರೆ ನನಗೆ ವಿಶೇಷ ಆಸಕ್ತಿ. ಯಾರು ಕೊಲೆ ಮಾಡಿರಬಹುದು, ಯಾಕೆ ಮಾಡಿರಬಹುದು? ಇತ್ಯಾದಿಗಳನ್ನೆಲ್ಲ ನಾನು ಅನೇಕ ಸಾರಿ ಹುಡುಕಿಕೊಂಡು ಹೋಗಿದ್ದಿದೆ. ಕೊಲೆ ಆರೋಪಿಗಳನ್ನು ಪೊಲೀಸರು ಹುಡುಕುವ ವಿಧಾನ, ಇತ್ಯಾದಿಗಳನ್ನೆಲ್ಲ ನಾನು ಅನೇಕ ಸಾರಿ ಮಾಡಿದ್ದೇನೆ. ಪೊಲೀಸರು ಎಡವುವುದು, ಒತ್ತಡಕ್ಕೆ ಮಣಿದು ಕೊಲೆಗಾರನನ್ನು ತಪ್ಪಿಸುವುದು ಇತ್ಯಾದಿಗಳೂ ನಡೆದಿದ್ದಿದೆ. ಅನೇಕ ಸಾರಿ ನಾನು ಇಂತಹ ತನಿಖಾ ವರದಿ ನಡೆಸಿದ ಕಾರಣ ನಿಜವಾದ ಆರೋಪಿ ಸಿಕ್ಕಿಬಿದ್ದಿದ್ದೂ ಇದೆ. ಆತ ತಪ್ಪಿಸಿಕೊಳ್ಳುವುದಕ್ಕೆ ಆಸ್ಪದವೇ ಇಲ್ಲದಂತೆ ಆಗಿದ್ದೂ ಇದೆ. ಬಹುಶಃ ಈ ಕಾರಣಕ್ಕೇ ನಮ್ಮ ಪತ್ರಿಕೆ ಹಿಂದಿನಿಂದಲೂ ಹೆಸರುವಾಸಿಯಾಗಿದೆ. ಇಂತಹ ಅನೇಕ ತನಿಖಾ ವರದಿಗಳನ್ನು ಮಾಡಿ ಸತ್ಯವನ್ನು ಬೇಧಿಸಿದೆ. ಈಗಲೂ ನಾವ್ಯಾಕೆ ಇವತ್ತು ನಡೆದಿರುವ ಕೊಲೆ ಕೇಸನ್ನು ಬೆನ್ನತ್ತಬಾರದು?' ಎಂದರು.
         ವಿಕ್ರಮನಿಗೆ ಸ್ಪಷ್ಟವಾದಗೇ ಸುಮ್ಮನೇ ಕುಳಿತಿದ್ದ.. `ನಾವು ಒಂದು ಕೆಲಸ ಮಾಡೋಣ. ಇವತ್ತು ನಡೆದ ಕೊಲೆಯ ಕೇಸಿನ ಬೆನ್ನತ್ತೋಣ. ನಾವು ಅಂದರೆ ನೀನು ಈ ಕೊಲೆಯ ಬಗ್ಗೆ ತನಿಖೆ ಮಾಡಬೇಕು. ಆದರೆ ನಾವು ಪೊಲೀಸರ ಕಾನೂನನ್ನು ಕೈಗೊಳ್ಳುವುದಿಲ್ಲ. ಬದಲಾಗಿ ಅಪರಾಧಿಗಳ ಜಾಡನ್ನು ಹುಡುಕುತ್ತ ಹೋಗೋಣ. ಪೊಲೀಸರು ಎಲ್ಲಾದರೂ ದಾರಿ ತಪ್ಪಿದರೆ ಅವರಿಗೆ ಇದರಿಂದ ಅನುಕೂಲವಾಗುತ್ತದೆ. ಸುದ್ದಿ ಮಾಡಿದ ನಮಗೂ ಹೆಸರು ಬರುತ್ತದೆ. ಸಾಕಷ್ಟು ರಿಸ್ಕ್ ಕೂಡ ಇದೆ. ಆಗುತ್ತೆ ಅಂತಾದರೆ ಹೇಳು.. ನಮ್ಮಿಂದ ನಿನಗೆ ಸಂಪೂರ್ಣ ಬೆಂಬಲ ಇರುತ್ತದೆ.  ಅದೆಷ್ಟೇ ಒತ್ತಡ ಬಂದರೂ ನಾವು ನೋಡಿಕೊಳ್ಳುತ್ತೇನೆ.. ಏನಂತೀಯಾ?' ಎಂದು ನವೀನಚಂದ್ರ.
             `ಸರ್.. ನಾನೂ ಅದನ್ನೇ ಆಲೋಚನೆ ಮಾಡ್ತಾ ಇದ್ದೆ. ಇದೂ ನನಗೆ ಹೊಸ ಅನುಭವ. ಆದರೆ ನಾನು ಇದನ್ನು ಮಾಡಲು ತಯಾರಾಗಿದ್ದೇನೆ. ಪೊಲೀಸರು ಆರೋಪಿಯನ್ನು ಪತ್ತೆ ಮಾಡುವ ಮುನ್ನ ನಾವು ಮಾಡಿದರೆ ಮಜವಾಗಿರುತ್ತದೆ. ಮೈಮನಗಳಲ್ಲಿ ನನಗೆ ಈಗ ರೋಮಾಂಚನ ಆಗ್ತಾ ಇದೆ.. ಖಂಡಿತ ನಾನು ಇದನ್ನು ಮಾಡೇ ಮಾಡ್ತೀನಿ ಸರ್..' ಎಂದ ವಿಕ್ರಂ.
            `ಗುಡ್... ನಿನಗೆ ಈ ಕುರಿತು ನಮ್ಮಿಂದ ಸಂಪೂರ್ಣ ಬೆಂಬಲ ಇದ್ದೇ ಇದೆ. ನೀನು ಎಲ್ಲಿಯೇ ಓಡಾಡು, ಎಷ್ಟು ದಿನ ಬೇಕಾದರೂ ತೆಗೆದುಕೊ.. ದುಡ್ಡು ಖರ್ಚಾಗಲಿ.. ಅದಕ್ಕೆ ಚಿಂತೆ ಬೇಡ.. ನಿನಗೆ ಕಾರ್ ಡ್ರೈವಿಂಗ್ ಬರುತ್ತೆ ಅಂತಾದರೆ ನನ್ನ ಕಾರನ್ನು ಒಯ್ಯಬಹುದು. ಆದರೆ ಹುಷಾರಾಗಿರಬೇಕು. ಈ ವಿಷಯ ಯಾರಿಗೂ ಗೊತ್ತಗಬಾರದು. ನಿನ್ನ ಎಚ್ಚರಿಕೆಯಲ್ಲಿ ನೀನಿರಬೇಕು..' ಎಂದರು ನವೀನಚಂದ್ರ.
           `ಖಂಡಿತ ಸರ್.. ಏನಾದರೂ ಅಗತ್ಯಬಿದ್ದರೆ ಹೇಳ್ತೀನಿ ಸರ್.. ' ಎಂದು ಹೇಳಿ ಹೊರಬಂದವನಿಗೆ ಆ ದಿನವಿಡೀ ಮೌಂಟ್ ಎವರೆಸ್ಟ್ ಏರಿದ ಪರ್ವತಾರೋಹಿಗಳಿಗೆ ಆದಂತಹ ಖುಷಿ ಮನೆಮಾಡಿತ್ತು. ಆತ ರಾತ್ರಿ ತನ್ನ ರೂಮಿಗೆ ಬಂದು ಆ ದಿನದ ಘಟನೆಗಳೆಲ್ಲವನ್ನೂ ಮೆಲುಕು ಹಾಕತೊಡಗಿದ. ಕೊಲೆ, ವಿಜೇತಾಳ ಸಂ ಗಡ ಹೋಗಿ ಅದನ್ನು ವರದಿ ಮಾಡಿದ್ದು. ಪ್ರದೀಪನ ಅನಿರೀಕ್ಷಿತ ಭೇಟಿ, ಅಪರಿಚಿತನ ಬೆನ್ನಟ್ಟಿದ್ದು, ನವೀನಚಂದ್ರ ಹೇಳಿದ ಮಾತುಗಳೆಲ್ಲವೂ ಪದೇ ಪದೆ ನೆನಪಾದವು. ಜೊತೆಗೆ ಎಸ್. ಮಾರ್ಕಿನ ಲಾಕೆಟ್ ಕೂಟ ನೆನಪಾಯಿತು. ಯಾಕೋ ಈ ದಿನ ನಡೆದ ಎಲ್ಲ ಘಟನೆಗಳೂ ತನ್ನ ಬದುಕಿನಲ್ಲಿ ಮುಖ್ಯವಾಗಲಿದೆ. ಪದೆ ಪದೇ ಮನಸ್ಸಿಗೆ ನಾಟಲಿದೆ ಎನ್ನಿಸತೊಡಗಿತ್ತು ವಿಕ್ರಮನಿಗೆ. ಆ ದಿನ ಮಾರ್ಚ್ 28.

***********6************

           ಹೊಸ ಲ್ಯಾಪ್ ಟಾಪ್ ಹಾಗೂ ಮೊಬೈಲನ್ನು ನವೀನಚಂದ್ರ ನಂತರದ ದಿನಗಳಲ್ಲಿ ವಿಕ್ರಮನಿಗೆ ಕೊಡುಗೆಯಾಗಿ ನೀಡಿದ್ದ. ವಿಕ್ರಮ ಅವಾಕ್ಕಾಗಿದ್ದ. ಕೊನೆಗೊಂದು ದಿನ ಈ ಕುರಿತು ವಿಜೇತಾಳಲ್ಲಿ ವಿಚಾರಿಸಿದಾಗ ನವೀನಚಂದ್ರ ಆಗರ್ಭ ಶ್ರೀಮಂತರೆಂದೂ ಪತ್ರಿಕೆ ನಡೆಸುವುದು ಅವರ ಹವ್ಯಾಸವೆಂದೂ ದೊಡ್ಡ ದೊಡ್ಡ ಬಿಸಿನೆಸ್ಸುಗಳ ಒಡೆಯನೆಂದೂ ಹೇಳಿದಳು. ಬಿಡುವಿದ್ದಾಗ ಬಿಸಿನೆಸ್ ಕೆಲಸ ಮಾಡಿ ಟೈಮಿದ್ದಾಗ ಪತ್ರಿಕಾ ಕಚೇರಿಗೆ ಬರುವುದು ಅವರ ಪ್ರಮುಖ ಕಾರ್ಯ. ತಾನು ಕಷ್ಟದಲ್ಲಿದ್ದಾಗ ಪತ್ರಿಕೆ ತನಗೆ ಅನ್ನ ನೀಡಿದೆ. ಆ ಕಾರಣಕ್ಕಾಗಿ ಪತ್ರಿಕೆಯ ಋಣ ತಿರಿಸಬೇಕು ಎನ್ನುವುದು ಅವರ ಮನಸ್ಥಿತಿ. ಹೀಗಾಗಿ ಅವರು ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ತನಗೆ ಯಾರೇ ಇಷ್ಟವಾದರೂ, ಅವರ ಕಾರ್ಯವೈಖರಿ ಮೆಚ್ಚುಗೆಯಾದರೂ ಅವರಿಗೆ ಕೊಡುಗೆ ಕೊಡುತ್ತಾರೆ. ನಿನ್ನ ಕಾರ್ಯವೈಖರಿ ನವೀನಚಂದ್ರರಿಗೆ ಇಷ್ಟವಾಗಿದೆ. ಆ ಕಾರಣಕ್ಕಾಗಿಯೇ ಲ್ಯಾಪ್ಟಾಪ್ ಹಾಗೂ ಮೊಬೈಲ್ ಕೊಡುಗೆ ಕೊಟ್ಟಿದ್ದಾರೆ. ನಿನ್ನ ಕೆಲಸಕ್ಕೆ ಅನುಕೂಲವಾಗಲಿ ಅಂತ..' ಎಂದಳು ವಿಜೇತಾ.
        ಅದಾಗಿ ಮತ್ತೆರಡು ದಿನಗಳು ಕಳೆಯುವಷ್ಟರಲ್ಲಿ ಪತ್ರಿಕಾ ಕಚೇರಿಗೆ ಹೊಸ ಹೊಸ ವರದಿಗಾರರನ್ನು, ಉಪ ಸಂಪಾದಕರನ್ನೂ ನೇಮಕ ಮಾಡಲಾಗಿತ್ತು. ಪತ್ರಿಕೆಯನ್ನು ಮಂಗಳೂರಿನಿಂದಾಚೆ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಸೇರಿದಂತೆ ಹಲವಾರು ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗಿತ್ತು. ವಿಕ್ರಮನಿಗೂ ಜವಾಬ್ದಾರಿ ಹೆಚ್ಚಿತ್ತು. ಜೊತೆ ಜೊತೆಯಲ್ಲಿ ಕೊಲೆಯ ಜಾಡನ್ನು ಹಿಡಿಯತೊಡಗಿದ್ದ. ಪತ್ರಿಕಾಲಯದಲ್ಲಿ ಸಾಕಷ್ಟು ಹೊಸಬರನ್ನು ಸೇರಿಸಿದ್ದ ಕಾರಣ ವಿಕ್ರಮ ಹಾಗೂ ವಿಜೇತಾಳ ಮೇಲಿದ್ದ ಒತ್ತಡ ಕಡಿಮೆಯಾಗಿತ್ತು. ಅಲ್ಲದೇ ಅವರು ಉತ್ತಮ ವರದಿಗಳನ್ನು ಮಾಡಲು ಎಲ್ಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿತ್ತು.

****

        ಸುಮಾರು ಒಂದು ವಾರ ಕಳೆದರೂ ಕೊಲೆಯ ಬಗ್ಗೆ ತನಿಖೆ ಮಾಡುತ್ತಿದ್ದ ಪೊಲೀಸರಿಗೆ ಆರೋಪಿಯ ಸುಳಿವು ಸಿಕ್ಕಲಿಲ್ಲ. ಯಾವ ದಿಕ್ಕಿನಲ್ಲಿ ಸಾಗಿದರೂ ಕೊಲೆಯ ವಿವರ ತಿಳಿಯಲಿಲ್ಲ. ಕೊಲೆಗೆ ಬಳಕೆ ಮಾಡಿದ ಆಯುಧದ ಬಗ್ಗೆಯೂ ತಿಳಿಯಲಿಲ್ಲ. ಇದರಿಂದ ಜನಸಾಮಾನ್ಯರು ಬೇಸರಗೊಂಡಿದ್ದರು. ಖಾಸಗಿ ಪತ್ತೆದಾರರೂ, ಗುಪ್ತಚರರು ತಾವೂ ಒಂದು ಕೈ ನೋಡುವ ಎಂದು ಕೆಲಸ ಶುರುಮಾಡಿದ್ದರು. ವಿಕ್ರಮನಿಗೆ ಸಿಕ್ಕಿದ್ದ ಎಸ್ ಲಾಕೆಟ್ ಆರೋಪಿಯ ಲಾಕೆಟ್ ಎಂದೂ ಆತನ ಹಿಂದೆ ದೊಡ್ಡ ಗುಂಪಿನ ಕರಾಮತ್ತಿದೆಯೆಂದೂ ಅನ್ನಿಸತೊಡಗಿತ್ತು. ಆ ಗುಂಪು ದರೋಡೆ, ಕಳ್ಳ ಸಾಗಾಣಿಕೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದೆ ಎನ್ನುವುದೂ ತಿಳಿದುಬಂದಿತು. ಅದನ್ನು ನವೀನಚಂದ್ರನಿಗೆ ತಿಳಿಸಿಯೂ ಆಗಿತ್ತು.
             ಆ ದಿನ ಬಹುಶಃ ಎಪ್ರಿಲ್ 4. ವಿಕ್ರಂ ಕೊಲೆ ನಡೆದ ಸ್ಥಳಕ್ಕೆ ಹೋಗಿದ್ದವನು ಪ್ರದೀಪನನ್ನು ಮಾತನಾಡಿಸಿ ಹೋಗೋಣ ಎಂದು ಆತನ ರೂಮಿನ ಕಡೆಗೆ ಹೆಜ್ಜೆ ಹಾಕಿದ. ಪ್ರದೀಪ ಇದ್ದಾನೋ ಇಲ್ಲವೋ ಎಂಬ ಗೊಂದಲದಲ್ಲಿಯೇ ರೂಮಿನ ಬಾಗಿಲು ತಟ್ಟಿದ. ಅಚ್ಚರಿಯೆಂಬಂತೆ ರೂಮಿನಲ್ಲಿದ್ದ ಪ್ರದೀಪ ಬಾಗಿಲು ತೆಗೆದ. ವಿಕ್ರಮನನ್ನು ಕಂಡ ಪ್ರದೀಪ ಒಮ್ಮೆ ಗಲಿಬಿಲಿಪಟ್ಟುಕೊಂಡ. ಯಾವುದೋ ಒಂದು ವಸ್ತುವನ್ನು ಲಗುಬಗೆಯಿಂದ ಮುಚ್ಚಿಟ್ಟ. ವಿಕ್ರಮನ ಕಣ್ಣು ಇದನ್ನು ಗಮನಿಸಿಬಿಟ್ಟಿತ್ತು. ನಂತರ ಪ್ರದೀಪ ಟೀ ಮಾಡಲು ಹೋದಾಗ ವಿಕ್ರಂ ಆ ವಸ್ತುವನ್ನು ಎತ್ತಿಟ್ಟುಕೊಂಡ. ಅದೊಂದು ಮ್ಯಾಪ್. ಅದನ್ನು ವಿಕ್ರಂ ಎತ್ತಿಟ್ಟುಕೊಂಡಿದ್ದು ಪ್ರದೀಪನಿಗೆ ಆ ದಿನ ತಿಳಿಯಲೇ ಇಲ್ಲ. ಅದೂ ಇದೂ ಮಾತನಾಡಿದ ವಿಕ್ರಂ ಸೀದಾ ತನ್ನ ರೂಮಿಗೆ ಮರಳಿದ.
            ರೂಮಿಗೆ ಬಂದು ನಿಧಾನವಾಗಿ ಕುಳಿತು ಆ ಮ್ಯಾಪನ್ನು ಬಿಚ್ಚಿ ನೋಡಿದ. ಅದು ಸಾಮಾನ್ಯವಾಗಿ ಮಿಲಿಟರಿಯವರು ಬಳಸುವಂತಹ ಮ್ಯಾಪ್. ಅದರಲ್ಲಿ ದೇಶದ ಪ್ರತಿಯೊಂದು ಪ್ರದೇಶದ ಸಮಗ್ರ ಚಿತ್ರಣ, ಆರ್ಥಿಕ ವ್ಯವಸ್ಥೆ, ಅರಣ್ಯ, ಖನಿಜ ಸಂಪತ್ತು ಇತ್ಯಾದಿ ಎಲ್ಲ ವಿವರಗಳೂ ಇರುತ್ತವೆ. ಇದೂ ಹಾಗೆಯೇ ಇತ್ತು. ವಿಕ್ರಂ ಮುಖ್ಯವಾಗಿ ಗಮನಿಸಿದ ಅಂಶವೆಂದರೆ ಮ್ಯಾಪಿನ ಕೆಲವೊಂದು ಕಡೆಗಳಲ್ಲಿ ಎಸ್ ಮಾರ್ಕುಗಳಿದ್ದವು. ಆ ಚಿನ್ಹೆ ಕರ್ನಾಟಕದ ಕೆಲವು ಕಡೆಗಳಲ್ಲಿ ಮಾತ್ರ ಇತ್ತು. ಆತ ಎಲ್ಲ ಊರುಗಳನ್ನೂ ಬರೆದಿಟ್ಟುಕೊಂಡ. ಮಂಗಳೂರು, ಬೆಂಗಳೂರು, ಬೀದರ್, ತುಮಕೂರು, ವಿಜಯಪುರದ ಜೊತೆಗೆ ಶಿರಸಿಯ ಬಳಿ ಎಸ್. ಮಾರ್ಕನ್ನು ಪೆನ್ನಿನ ಮೂಲಕ ಬರೆಯಲಾಗಿತ್ತು. ವಿಕ್ರಮನಿಗೆ ಸಿಕ್ಕಾಪಟ್ಟೆ ತಲೆ ಹನ್ನೆರಡಾಣೆ ಆಗತೊಡಗಿತು. ಶಿರಸಿಗೂ ಎಸ್. ಮಾರ್ಕಿಗೂ ಎಂತಾ ಸಂಬಂಧ.? ಶಿರಸಿಯನ್ನು ಎಸ್. ಎಂದು ಸಂಬೋಧನೆ ಮಾಡಿದ್ದಾರಾ? ಹಾಗಾದರೆ ಮಂಗಳೂರನ್ನು ಎಂ. ಎಂದೂ ಬೀದರನ್ನು ಬಿ. ಎಂದೂ ತುಮಕೂರನ್ನು ಟಿ. ಎಂದೂ ಯಾಕೆ ಮಾರ್ಕ್ ಮಾಡಿಲ್ಲ? ಏನಿದು ಎಸ್? ಈ ಎಸ್.ಗೂ ತನ್ನ ಬಳಿ ಇರುವ ಎಸ್. ಲಾಕೆಟಿಗೂ ಏನಾದರೂ ಸಂಬಂಧ ಇದೆಯಾ? ಈ ಎಸ್. ಮ್ಯಾಪಿನಿಂದ ಏನಾದರೂ ತನಗೆ ಲಾಭವಾಗಬಹುದಾ ಎಂದರೆಲ್ಲ ಆಲೋಚನೆ ಮಾಡತೊಡಗಿದ ವಿಕ್ರಂ. ಆಲೋಚಿಸಿದಂತೆಲ್ಲ ಗೊಂದಲವೇ ಹೆಚ್ಚಾಯಿತು. ಪರಿಹಾರ ಮಾತ್ರ ಸಿಗಲಿಲ್ಲ.
           ವಿಕ್ರಮ ಹೀಗೆ ಆಲೋಚನೆ ಮಾಡಿದಂತೆಲ್ಲ ಪ್ರದೀಪನ ಬಗ್ಗೆ ಅನುಮಾನಗಳು ಹೆಚ್ಚತೊಡಗಿದವು. ಇಂತಹ ಮ್ಯಾಪ್ ಪ್ರದೀಪನಿಂದ ಸಿಗುತ್ತದೆ ಎಂದು ಆಲೋಚಿಸಿದರ ವಿಕ್ರಂ ಪ್ರದೀಪನೂ ಒಬ್ಬ ಆರೋಪಿಯಾ ಅಥವಾ ತನ್ನಂತೆ ತನಿಖೆಗೆ ಕೈ ಹಾಕಿದವನಾ? ಎಂದು ಆಲೋಚಿಸಿದನಾದರೂ ಈ ಎರಡನ್ನೂ ನಂಬಲು ಮನಸ್ಸು ನಿರಾಕರಿಸಿತು. ಆತನ ಮನಸ್ಸಿನಲ್ಲಿ ಎಸ್. ಮಾರ್ಕಿನ ಲಾಕೆಟ್ ಆರೋಪಿಯದೇ, ಅಥವಾ ಯಾವುದಾದರೂ ಒಂದು ಕಂಪನಿಯದ್ದೇ ಎಂದೂ ಆಲೋಚನೆ ಮೂಡಿತು. ಹೀಗಿದ್ದಾಗಲೇ ಅಲ್ಲಿಗೆ ಪ್ರದೀಪ ಹಾಜರಾಗಿದ್ದ.
           ರೂಮಿನೊಳಕ್ಕೆ ಬಂದವನೇ ವಿಕ್ರಮನ ಬಳಿ `ಹೇಯ್.. ನೀನು ಮೊದಲು ಆ ಮ್ಯಾಪನ್ನು ನನಗೆ ಕೊಡು.. ಅದು ನನಗೆ ಬಹಳ ಅಗತ್ಯ..' ಎಂದು ಹೇಳಿದವನೇ ತಕ್ಷಣ ಏನೋ ಹೊಳೆದಂತೆ `ನೀನು ಆರೋಪಿನ ಹುಡುಕ್ತಾ ಇದ್ದೀಯಾ ಅಲ್ವಾ.. ಹೇಗೋ ಈ ವಿಷಯ ಗೊತ್ತಾಯಿತು. ನಿನಗೆ ಅನುಕೂಲವಾಗಲಿ ಅಂತಲೇ ಈ ಮ್ಯಾಪನ್ನು ನಾನು ಸಂಪಾದನೆ ಮಾಡಿ ತಂದಿದ್ದು..' ಎಂದು ಹೇಳಿದ.
          ವಿಕ್ರಮನಿಗೆ ಇದರಲ್ಲೇನೋ ನಿಘೂಡತೆಯಿದೆ ಎನ್ನಿಸಿತು. ಮ್ಯಾಪಿನಲ್ಲಿದ್ದದ್ದನ್ನೆಲ್ಲ ತಾನು ಬರೆದಿಟ್ಟುಕೊಂಡಿದ್ದೇನೆ. ಮನಸ್ಸಿನಲ್ಲಿ ಅದು ಅಚ್ಚಾಗಿದೆ. ತನಗೆ ಇನ್ನು ಅದರ ಅಗತ್ಯವಿಲ್ಲ ಎಂದುಕೊಂಡ ವಿಕ್ರಂ ಮ್ಯಾಪನ್ನು ಪ್ರದೀಪನಿಗೆ ವಾಪಾಸ್ ನೀಡಿದ. ಮ್ಯಾಪ್ ಸಿಕ್ಕ ತಕ್ಷಣವೇ ಪ್ರದೀಪ ಅಲ್ಲಿಂದ ಜಾಗ ಖಾಲಿ ಮಾಡಿದ.
         ಈ ಘಟನೆಯಿಂದ ಪ್ರದೀಪನ ಬಗ್ಗೆ ವಿಕ್ರಮನಲ್ಲಿದ್ದ ಅನುಮಾನಗಳು ಜಾಸ್ತಿಯಾದವು. ಪ್ರದೀಪ ಯಾರು? ಕಳ್ಳನಾ? ಪೊಲೀಸನಾ? ಮಿತ್ರನಾ? ಕೊಲೆಗಾರನಾ? ಇಷ್ಟಕ್ಕೂ ಈ ಮ್ಯಾಪನ್ನು ಇಟ್ಟುಕೊಂಡು ಪ್ರದೀಪ ಮಾಡುವುದೇನಿದೆ? ಈ ಕೊಲೆಗೂ ಪ್ರದೀಪನಿಗೂ ಏನಾದರೂ ಸಂಬಂಧ ಇದೆಯಾ? ಕೊಲೆಯಲ್ಲಿ ಪ್ರದೀಪನ ಪಾತ್ರ ಏನಿದೆ? ಎಂದೆಲ್ಲ ಆಲೋಚಿಸಿದ ವಿಕ್ರಮ. ಆಲೋಚನೆ ಮಾಡಿದಂತೆಲ್ಲ ಪ್ರದೀಪ ಮತ್ತಷ್ಟು ನಿಘೂಡ ವ್ಯಕ್ತಿಯಾಗುತ್ತ ಹೋದ.

***
(ಮುಂದುವರಿಯುತ್ತದೆ..)