Thursday, December 17, 2015

ಮಾಸ್ತರ್ ಮಂದಿ-9

                 ಹೈಸ್ಕೂಲಿನಲ್ಲಿ ಇನ್ನೂ ಕೆಲವು ಶಿಕ್ಷಕರು ಕಲಿಸಿದ್ದಾರೆ. ಅವರ ಪೈಕಿ ಪ್ರಮುಖ ಎನ್ನಿಸುವ ಗ್ರೇಸ್ ಪ್ರೇಮಕುಮಾರಿ ಹಾಗೂ ದೈಹಿಕ ಶಿಕ್ಷಕರಾದ ಸಿ. ಆರ್. ಲಿಂಗರಾಜು ಅವರ ಬಗ್ಗೆ ಬರೆಯದಿದ್ದರೆ ಏನೋ ಕಳೆದುಕೊಂಡಂತೆ ಬಿಡಿ. ಜಿಪಿಕೆ ಎನ್ನುವ ಶಾರ್ಟ್ ಫಾರ್ಮಿನ ಪ್ರೇಮಕುಮಾರಿ ಮೇಡಂ ಕಾನಲೆ ಹೈಸ್ಕೂಲಿನ ಹೆಡ್ ಮಿಸ್ ಆಗಿದ್ದರು. ಲಿಂಗರಾಜು ಅವರು ಸಿ.ಆರ್.ಎಲ್. ಎಂಬ ಶಾರ್ಟ್ ಫಾರ್ಮನ್ನು ಪಡೆದುಕೊಂಡಿದ್ದರು. ಇವರ ಬಗ್ಗೆ ಹೇಳದೇ ಇದ್ದರೆ ಹೈಸ್ಕೂಲು ಬದುಕು ಅಪೂರ್ಣ ಎನ್ನಿಸಿಬಿಡುತ್ತದೆ.

ಗ್ರೇಸ್ ಪ್ರೇಮ್ ಕುಮಾರಿ :
ನಾನು ಎಂಟನೇ ಕ್ಲಾಸಿನಲ್ಲಿದ್ದಾಗ ಒಂದು ದಿನ ಇಂಗ್ಲೀಷ್ ಶಿಕ್ಷಕರಾದ ಬಿ. ಆರ್. ಎಲ್. ಅವರು ನಮ್ಮ ಹೈಸ್ಕೂಲಿನ ಹೆಡ್ ಮಾಸ್ತರ್ ಯಾರು ಎಂದು ಕೇಳಿದ್ದರು. ನಾವೆಲ್ಲ ಆಗ ಇನ್ ಛಾರ್ಜ್ ಕೆಲಸ ಮಾಡುತ್ತಿದ್ದ ಪರಶುರಾಮಪ್ಪ ಅವರ ಹೆಸರನ್ನು ಹೇಳಿದ್ದೆವು. ಕೂಡಲೇ ಹೇಳಿದ್ದ ಬಿಆರ್.ಎಲ್ ಪರಶುರಾಮಪ್ಪ ಖಾಯಂ ಹೆಡ್ ಮಾಸ್ತರ್ ಅಲ್ಲ. ನಮ್ಮ ಶಾಲೆಯ ಹೆಡ್ ಮಾಸ್ತರ್ ಹೆಸರು ಗ್ರೇಸ್ ಪ್ರೇಮ್ ಕುಮಾರಿ. ಅವರು ಬೇರೊಂದು ಶಾಲೆಗೆ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನಾರು ತಿಂಗಳಿನಲ್ಲಿ ಬರುತ್ತಾರೆ ಎಂದಿದ್ದರು. ಆದರೆ ಆರು ತಿಂಗಳು ಹೋಗಲಿ, ಗ್ರೇಸ್ ಪ್ರೇಮಕುಮಾರಿ ಮೇಡಂ ಶಾಲೆಗೆ ಬಂದಿದ್ದು ನಾನು ಒಂಭತ್ತನೇ ಕ್ಲಾಸಿನದ್ದಾಗ. ಗ್ರೇಸ್ ಪ್ರೇಮಕುಮಾರಿ ಮೇಡಮ್ ಕ್ರಿಶ್ಚಿಯನ್ನರಾಗಿದ್ದರು ಎನ್ನುವುದೇ ನಮಗೆಲ್ಲ ವಿಶೇಷ ಸಂಗತಿ. ಆದರೆ ಅವರು ಅದೆಷ್ಟು ಸುಂದರವಾಗಿ ಕನ್ನಡ ಅಕ್ಷರಗಳನ್ನು ಬರೆಯುತ್ತಿದ್ದರು ಎಂದರೆ ಆಹಾ. ಅವರು ಬೋರ್ಡಿನ ಮೇಲೆ ಬರೆಯುವುದೇ ಬಹಳ ಚೆಂದ. ಅಷ್ಟೇ ಚನ್ನಾಗಿ ಕನ್ನಡ ಮಾತನಾಡುತ್ತಿದ್ದರು. ಜಿಪಿಕೆ ಎಂಬ ಕಿರುನಾಮದಿಂದ ನಾವು ಅವರನ್ನು ಕರೆಯಬೇಕಿತ್ತು. ನಮಗೆ ಭಾರತಿ ಮೇಡಂ ಕನ್ನಡ ಕಲಿಸುವ ಅಧಿಕೃತ ಶಿಕ್ಷಕಿಯಾಗಿದ್ದರೂ ಗ್ರೇಸ್ ಪ್ರೇಮಕುಮಾರಿ ಮೇಡಂ ಕೂಡ ಕಲಿಸಲು ಬರುತ್ತಿದ್ದರು ಎನ್ನುವುದು ವಿಶೇಷವಾಗಿತ್ತು.
ಹೈಸ್ಕೂಲಿನಲ್ಲಿ ನಾನು ಕನ್ನಡ ಅಕ್ಷರವನ್ನು ಬಹಳ ಚನ್ನಾಗಿ ಬರೆಯುತ್ತಿದೆ. ಆ ಕಾರಣದಿಂದಲೇ ಪ್ರೇಮಕುಮಾರಿ ಮೇಡಮ್ ರಿಗೆ ನಾನು ಅಂದರೆ ವಿಶೇಷ ಅಕ್ಕರೆ. ಎಲ್ಲಾ ವಿಷಯಗಳಲ್ಲಿಯೂ ಕಾಲು-ಬಾಲ ಸೇರಿಸಿ ಉದ್ದಕ್ಕೆ ಬರೆಯುತ್ತಿದ್ದ ನಾನು ಕನ್ನಡದಲ್ಲಿ ಮಾತ್ರ ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಬಹಳ ಸುಂದರವಾಗಿ ಬರೆಯುತ್ತಿದ್ದೆ. ಪರಿಣಾಮವಾಗಿ ಒಳ್ಳೆಯ ಅಂಕಗಳು ಬೀಳುತ್ತಿದ್ದವು. ಬರೆದರೆ ವಿನಯನ ಹಾಗೆ ಬರೆಯಬೇಕು ಎಂದು ಕ್ಲಾಸಿನಲ್ಲಿ ಹೇಳುತ್ತಿದ್ದುದು ಕೆಲವರ ಹೊಟ್ಟೆಯ ಕಿಚ್ಚಿಗೂ ಕಾರಣವಾಗಿತ್ತು. ಎಸ್.ಎಸ್.ಎಲ್.ಸಿಯಲ್ಲಿ ಇದ್ದಾಗ ನಾನು ಅನೇಕ ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೆ. ಆ ಸಂದರ್ಭದಲ್ಲಂತೂ ನನ್ನನ್ನು ವಿಶೇಷವಾಗಿ ಕೊಂಡಾಡಿದ್ದರು.
ಒಂದು ದಿನ ಶಾಲೆಗೆ ಬಂದ ಗ್ರೇಸ್ ಪ್ರೇಮಕುಮಾರಿ ಮೇಡಂ ತಮ್ಮ ಕೊಠಡಿಗೆ ನನ್ನನ್ನು ಕರೆಸಿಕೊಂಡರು. ಕರೆಸಿದವರೇ `ನೋಡು ವಿನಯ್ ನಿನ್ನ ತಂದೆಯವರು ನನಗೆ ಸಿಕ್ಕಿದ್ದರು..' ಎಂದರು. ನನಗೆ ಒಮ್ಮೆ ಆಶ್ಚರ್ಯವಾಗಿತ್ತು. ನನ್ನ ಅಪ್ಪ ಅದ್ಯಾವ ಮಾಯೆಯಲ್ಲಿ ಇವರನ್ನು ಬೇಟಿಯಾಗಿ ಹೋಗಿದ್ದಾರೋ ಎಂಬ ಕುತೂಹಲ ಕಾಡಿತ್ತು.
`ನೋಡು ನೀನು ನಾಟಕ ಸೇರಿದಂತೆ ಎಲ್ಲ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಂತೆ. ತಿಳೀತಾ?' ಎಂದರು. ನಾನು `ಭಾಗವಹಿಸ್ತಾ ಇದ್ದೇನೆ ಮೇಡಂ..' ಅಂದೆ. `ನೋಡು ನಿನ್ನ ತಂದೆಯವರು ಇನ್ನೊಂದು ಮಾತನ್ನು ಹೇಳಿದ್ದಾರೆ. ನನ್ನ ಮಗನಿಗೆ ಎಷ್ಟ್ ಬೇಕಾದರೂ ಹೊಡೆಯಿರಿ. ತೊಂದರೆಯಿಲ್ಲ. ಆತನಿಗೆ ಹೊಡೆತಕ್ಕೆ ಏನೂ ಕಡಿಮೆ ಮಾಡಬೇಡಿ. ಆದರೆ ಚನ್ನಾಗಿ ಕಲಿಸಿ.. ಎಂದಿದ್ದಾರೆ. ಯಾಕ್ ಹಿಂಗಂದ್ರು? ನೀನಂತೂ ಚನ್ನಾಗಿ ಓದ್ತಾ ಇದ್ದೀಯಲ್ಲ..' ಎಂದರು ಪ್ರೇಮಕುಮಾರಿ ಮೇಡಂ.
ನನಗೆ ಅಪ್ಪನ ಗುಣ ಗೊತ್ತಿತ್ತಾದ್ದರಿಂದ ಸ್ವಲ್ಪ ಪೆಚ್ಚಾಗಿದ್ದರೂ ಏನೂ ಆಗಿಲ್ಲ ಎಂಬಂತೆ ಸುಮ್ಮನೇ ಇದ್ದೆ. ಮಗನಿಗೆ ಸಿಕ್ಕಾಪಟ್ಟೆ ಹೊಡೆದರೆ ಮಗ ಬುದ್ಧಿವಂತನಾಗುತ್ತಾನೆ ಎಂದುಕೊಂಡಿದ್ದ ಅಪ್ಪ ಪ್ರಾಥಮಿಕ ಶಾಲಾ ಶಿಕ್ಷಕರ ಬಳಿಯಲ್ಲೂ ಹೀಗೆಯೇ ಹೇಳಿದ್ದ. ಈಗಲೂ ಅದೇ ರೀತಿ ಹೇಳಿದ್ದ. ಆದರೆ ಒಬ್ಬ ತಂದೆ ತನ್ನ ಮಗನಿಗೆ ಹೊಡೆಯಿರಿ ಎಂದು ಹೇಳಿದ್ದು ಪ್ರೇಮಕುಮಾರಿ ಮೇಡಂ ಅವರಿಗೆ ಬಹಳ ಅಚ್ಚರಿಯನ್ನು ಹುಟ್ಟುಹಾಕಿತ್ತು. ಅವರಿಗೆ ಇದರಿಂದ ಬೇಜಾರೂ ಆಗಿತ್ತಂತೆ. ಕಾನಲೆ ಹೈಸ್ಕೂಲಿನಿಂದ ಬೀಳ್ಕೊಟ್ಟು ಹೋಗುವಾಗ ಮಾತಿನ ಮದ್ಯದಲ್ಲಿ ಹೇಳಿದ್ದರು. ನಂತರದ ದಿನಗಳಲ್ಲಿ ಅವರು ಯಾವ ಶಾಲೆಗೆ ಹೋದರೋ ಗೊತ್ತಿಲ್ಲ.
ಕನ್ನಡ ವಿಷಯದಲ್ಲಿ ಒಂದು ಶಬ್ದವನ್ನು ಕೊಟ್ಟು ನಿಮ್ಮ ವಾಕ್ಯದಲ್ಲಿ ಬರೆಯಿರಿ ಎಂದು ಹೇಳುತ್ತಾರೆ. ನಾನು ಆ ವಾಕ್ಯಗಳಿಗೆಲ್ಲ ನನ್ನದೇ ಶೈಲಿಯಲ್ಲಿ ಪಂಚ್ ವಾಕ್ಯಗಳನ್ನು ಬರೆದುಬಿಡುತ್ತಿದ್ದೆ. ಇದರಿಂದ ಪ್ರೇಮಕುಮಾರಿ ಮೇಡಂ ಬಹಳ ಸಂತೋಷಗೊಂಡು ವಿಶೇಷವಾಗಿ ಹೊಗಳಿದ್ದೂ ಇದೆ. ಹೀಗಿದ್ದಾಗ ಮೇಡಂ ಶಾಲೆಯಿಮದ ಬೀಳ್ಕೊಡುವ ದಿನ ಬಂದಿತ್ತು. ಉಳಿದ ಶಿಕ್ಷಕರು ಬಂದು ನನ್ನ ಬಳಿ ಮೇಡಂ ಬೀಳ್ಕೊಡುತ್ತಿದ್ದಾರೆ ಅವರ ಬಗ್ಗೆ ಮಾತನಾಡು ಎಂದರು. ನಾನು ಆಗೋದಿಲ್ಲ ಎಂದೆ. ಯಾಕೆ ಎಂದು ಬಹಳ ಸಾರಿ ಕೇಳಿದ್ದರೂ ಆಗೋದಿಲ್ಲ ಅಂದಿದ್ದೆ. ಉಳಿದವರು ಭಾವನಾತ್ಮಕವಾಗಿ ಮಾತನಾಡುವುದಿಲ್ಲ ಎಂದುಕೊಂಡರೋ ಏನೋ. ಆದರೆ ನಾನು ಮಾತ್ರ ಸ್ಟೇಜ್ ಫೀಯರ್ ಇದ್ದ ಕಾರಣ ಮಾತನಾಡಲೇ ಇಲ್ಲ ಬಿಡಿ. ಬೀಳ್ಕೊಡುಗೆ ಸಂದರ್ಭದಲ್ಲಿ ನನ್ನನ್ನೂ ಮಾತಿನ ಮಧ್ಯದಲ್ಲಿ ಉಲ್ಲೇಖ ಮಾಡಿದರು ಎನ್ನುವುದು ಇಂದಿಗೂ ನೆನಪಾಗುತ್ತಲೇ ಇದೆ.

ಸಿ. ಆರ್. ಲಿಂಗರಾಜು :
ಬುಲೆಟ್ ಬಸ್ಯಾ ಎಂಬ ಅಡ್ಡ ಹೆಸರನ್ನು ನಾವೇ ಲಿಂಗರಾಜ ಮಾಸ್ತರ್ರಿಗೆ ಇಟ್ಟಿದ್ದೆವು. ಸಿಆರ್.ಎಲ್ ಎಂಬ ಕಿರು ನಾಮಧೇಯದ ಲಿಂಗರಾಜ ಮಾಸ್ತರ್ರು ಭರ್ಜರಿ 6 ಅಡಿಯ ದೈತ್ಯಜೀವಿ. ಪ್ರತಿದಿನ ಶಾಲೆಗೆ ಬುಲೆಟ್ ತರುತ್ತಿದ್ದ ಅವರನ್ನು ನಾವು ಈ ಕಾರಣಕ್ಕಾಗಿಯೇ ಬುಲೆಟ್ ಬಸ್ಯಾ ಎಂದು ಕರೆಯುತ್ತಿದ್ದೆವು. ಶೀಘ್ರ ಕೋಪಿ ಹಾಗೂ ಉಗ್ರಕೋಪಿ ಮಾಸ್ತರ್ರು ಅವರು. ಮಾತೆತ್ತಿದರೆ `ಏನೋ ಬಡ್ಡೀ ಮಗನೇ..' ಎಂದೇ ಬಯ್ಯಲು ಶುರು ಮಡುತ್ತಿದ್ದ ಅವರ ಬಳಿ ಹೊಡೆತ ತಿನ್ನದೇ ಉಳಿದವರು ಕಡಿಮೆಯೇ. ನಾನು ಸುಮಾರು ಹೊಡೆತ ತಿಂದಿದ್ದೇನೆ. ಆದರೆ ಉಳಿದ ಹುಡುಗರಿಗಿಂತ ಸ್ವಲ್ಪ ಕಡಿಮೆಯೇ ಬಿಡಿ.
ನನ್ನ ದೋಸ್ತ ಪ್ರದೀಪನ ಬಗ್ಗೆ ಈಗಾಗಲೇ ಹೇಳಿದ್ದೇನೆ. ಸಿ.ಆರ್.ಎಲ್. ಅವರಿಂದ ಪ್ರದೀಪ ಹೊಡೆತ ತಿಂದಿದ್ದು ಜಾಸ್ತಿ. ಪ್ರತಿ ದಿನ ಪ್ರದೀಪನ ಬಳಿ ಲಿಂಗರಾಜಪ್ಪ ಮಾಸ್ತರ್ `ಲೇ ಭಟಾ.. ಗಾಳಿ ಶೆಳಕೆ ತಗಂಡ್ ಬಾರಲೇ..' ಅನ್ನುತ್ತಿದ್ದರು. ಪ್ರದೀಪ ಮೂರ್ನಾಲ್ಕು ಗಾಳಿ ಕೋಲುಗಳನ್ನು ತರುತ್ತಿದ್ದ. ತಂದ ತಪ್ಪಿಗೆ ಮೊದಲ ಹೊಡೆತ ಪ್ರದೀಪನಿಗೇ ಬೀಳುತ್ತಿತ್ತು. ಇನ್ನೊಬ್ಬ  ಗೆಳೆಯ ಪ್ರಶಾಂತನೂ ಇದಕ್ಕಿಂತ ಹೊರತಾಗಿರಲಿಲ್ಲ ಬಿಡಿ.
ಲಿಂಗರಾಜ ಮಾಸ್ತರ್ರು ನಮಗೆ ಕ್ರೀಡೆಗಳ ಬಗ್ಗೆ ಕಲಿಸಿದ್ದು ಕಡಿಮೆಯೇ ಬಿಡಿ. ಆದರೆ ಸಾಕಷ್ಟು ಮಣ್ಣು ಹೊರಿಸಿದ್ದು ಮಾತ್ರ ನಿಜ. ಡೆಂಬಲ್ಸ್ ಹಾಗೂ ಬೇರೆ ಬೇರೆ ದೈಹಿಕ ವ್ಯಾಯಾಮಗಳನ್ನು ನಾವು ಮಾಡಿದ್ದು ಕಡಿಮಯೇ ಬಿಡಿ. ಆದರೆ ನಾನು ಹೈಸ್ಕೂಲಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹೈಸ್ಕೂಲಿಗೆ ಸಮರ್ಪಕ ರಸ್ತೆ ಇರಲಿಲ್ಲ. ನಮ್ಮ ಕೈಯಲ್ಲಿ ಮಣ್ಣು ಹೊರೆಸಿ ರಸ್ತೆಯನ್ನು ಮಾಡಿಸಿದರು ಲಿಂಗರಾಜ ಮಾಸ್ತರ್ರು.
ಅದ್ಯಾವಾಗ ಪಾಠ ಮಾಡುತ್ತಿದ್ದರೋ ನಮಗಂತೂ ನೆನಪಿಲ್ಲ ಬಿಡಿ. ಆದರೆ ದೈಹಿಕ ಶಿಕ್ಷಣ ವಿಷಯದ ಪರೀಕ್ಷೆಯಲ್ಲಿ ಮಾತ್ರ ವಿವಿಧ ಕ್ರೀಡೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಕಬ್ಬಡ್ಡಿ ಅಂಕಣದ ಅಳತೆ ಎಷ್ಟಿರಬೇಕು? ಕೋಕೋ ಅಂಕಣದ ಅಳತೆ ತಿಳಿಸಿ ಇತ್ಯಾದಿ. ನಿಜಕ್ಕೂ ಇವು ನಮಗೆ ಕಠಿಣ ಪ್ರಶ್ನೆಗಳೇ ಹೌದು. ಮೊದಲ ಪರೀಕ್ಷೆಯಲ್ಲಿ ನಾನು ಸುಳ್ಳೇ ಪಿಳ್ಳೆ ಉತ್ತರ ಬರೆದಿದ್ದೆ. ಆದರೆ ಅದರಲ್ಲಿ ಕೆಲವು ಸರಿಯಾಗಿದ್ದವು. 25ಕ್ಕೆ 9 ಅಂಕಗಳನ್ನು ಪಡೆದ ನಾನು ಪರೀಕ್ಷೆಯಲ್ಲಿ ಟಾಪರ್ ಆಗಿದ್ದೆ. ಆದರೆ ಆ ನಂತರ ಎಲ್ಲ ಕ್ರೀಡೆಗಳ ಅಂಕಣಗಳ ಅಳತೆಯನ್ನು ಸಮರ್ಪಕವಾಗಿ ತಿಳಿದುಕೊಂಡಿದ್ದೆ. ನಂತರದ ದಿನಗಳಲ್ಲಿ ತೀರಾ 9ರಷ್ಟು ಕಡಿಮೆ ಅಂಕಗಳು ಬೀಳಲಿಲ್ಲ ಬಿಡಿ. 16ಕ್ಕಿಂತ ಜಾಸ್ತಿಯಾಗಿದ್ದವು ಎನ್ನುವುದು ಸಮಾಧಾನ. ಇನ್ನೊಂದು ಮಜಾ ಸಂಗತಿ ಹೇಳಲೇಬೇಕು. ನನ್ನ ಪಕ್ಕದಲ್ಲಿ ದೋಸ್ತ ಪ್ರದೀಪ (ಭಟ್ಟ) ಹಾಗೂ ಇನ್ನೊಬ್ಬ ದೋಸ್ತ ಸುರೇಂದ್ರರು ಎಕ್ಸಾಂಗಳಲ್ಲಿ ಕೂರುತ್ತಿದ್ದರು. ಅಲ್ಪ ಸ್ವಲ್ಪ ಹೇಳಿಕೊಡುತ್ತಿದ್ದೆ. ನನಗಿಂತ ಒಂದೆರಡು ಅಂಕ ಕಡಿಮೆ ಬಿದ್ದು ಅವರು ಪರೀಕ್ಷೆಯಲ್ಲಿ ಪಾಸಾಗುತ್ತಿದ್ದರು. ಮೊದ ಮೊದಲು ನನ್ನ ಜೊತೆಗೆ ಲಿಂಗರಾಜ ಮಾಸ್ತರ್ರು ಅವರಿಬ್ಬರನ್ನೂ ಹೊಗಳುತ್ತಿದ್ದರು. ಆದರೆ ಕೊನೆ ಕೊನೆಗೆ ಮಾತ್ರ ಲಿಂಗರಾಜ ಮಾಸ್ತರ್ರಿಗೆ ನಮ್ಮ ಹಕೀಕತ್ತಿನ ವಾಸನೆ ಬಂದು ಪರೀಕ್ಷೆ ಮಾಡಿದ್ದರು. ದೋಸ್ತರಿಬ್ಬರೂ ಸಿಕ್ಕಿಬಿದ್ದು ಹೊಡೆತ ತಿಂದಿದ್ದರು. ನನಗೂ ಒಂದೆರಡು ಹೊಡೆತ ಬಿದ್ದಿತ್ತೆನ್ನಿ.
ಲಿಂಗರಾಜ ಮಾಸ್ತರ್ರೆಂದ ಕೂಡಲೇ ಮುಖ್ಯವಾಗಿ ನೆನಪಾಗುವುದು ಅವರು ಇತರ ಶಿಕ್ಷಕರೊಂದಿಗೆ ಮಾಡುತ್ತಿದ್ದ ಜಗಳ. ವನಮಾಲಾ ಮೇಡಂ, ವಿನೋದಾ ಮೇಡಂ, ಭಾರತಿ ಮೇಡಂ ಹೀಗೆ ಬೇರೆ ಬೇರೆ ಶಿಕ್ಷಕಿಯರ ಜೊತೆಗೆ ಸೊಕಾ ಸುಮ್ಮನೆ ಜಗಳ ಮಾಡುತ್ತಿದ್ದರು. ಆ ಮೇಡಮ್ಮುಗಳ ಕ್ಲಾಸಿನಲ್ಲಿ ಇವರು ಮಣ್ಣು ಹೊರಿಸುವ ಕೆಲಸ ಮಾಡಿದರೆ, ದೈಹಿಕ ಶಿಕ್ಷಣದ ಸಮಯದಲ್ಲಿ ಆ ಮೇಡಮ್ಮುಗಳು ತಮ್ಮ ತಮ್ಮ ಕ್ಲಾಸುಗಳನ್ನು ತೆಗೆದುಕೊಂಡು ಮುಯ್ಯಿ ತೀರಿಸಿಕೊಳ್ಳುತ್ತಿದ್ದ ನಿದರ್ಶನಗಳು ಅಚ್ಚಳಿಯದೇ ಮನಸ್ಸಿನಲ್ಲಿ ಉಳಿದಿವೆ.
ಆರು ಅಡಿಯ ಲಿಂಗರಾಜ ಮಾಸ್ತರ್ರರ ಗತ್ತು ಬಹಳ ಚನ್ನಾಗಿತ್ತು. ಎದೆಯುಬ್ಬಿಸಿ ನಡೆದು ಬರುತ್ತಿದ್ದ ಅವರು ತಮ್ಮ ನಿಲುವಿನಿಂದಲೇ ಎಲ್ಲರನ್ನೂ ಹೆದರಿಸುತ್ತಿದ್ದರು. ಬುಲೆಟ್ ಸದ್ದಂತೂ ನಮ್ಮ ಎದೆಯಲ್ಲಿ ನಡುಕವನ್ನು ತರುತ್ತಿತ್ತು. ಕ್ರೀಡಾಕೂಟಗಳು, ಪ್ರತಿಭಾ ಕಾರಂಜಿ ಇಂತಹ ಸಂದರ್ಭಗಳಲ್ಲೆಲ್ಲ ನಮ್ಮನ್ನು ಮುನ್ನಡೆಸಿ ಕರೆದೊಯ್ಯುತ್ತಿದ್ದ ಲಿಂಗರಾಜ ಮಾಸ್ತರ್ ನಮ್ಮನ್ನು ಎಷ್ಟು ಸುರಕ್ಷಿತವಾಗಿ ಕರೆದುಕೊಂಡು ಬರುತ್ತಿದ್ದರೆಂದರೆ ಬಹಳ ಗೌರವವನ್ನು ಮೂಡಿಸುತ್ತಿದ್ದರು.
ನಾನು SSLC ಯಲ್ಲಿದ್ದಾಗ ಮೊಟ್ಟ ಮೊದಲ ಬಾರಿಗೆ ಪ್ರತಿಭಾ ಕಾರಂಜಿ ನಡೆಯಿತು. ತಾಳಗುಪ್ಪದಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ನಮ್ಮ ಹೈಸ್ಕೂಲು ಸಮಗ್ರ ವೀರಾಗ್ರಣಿ ಗಳಿಸಿಕೊಂಡಿತು. ಕ್ವಿಜ್ ಹಾಗೂ ಚಿತ್ರಕಲೆಯಲ್ಲಿ ಮೊದಲ ಬಹುಮಾನ ಪಡೆದಿದ್ದ ನಾನು ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದೆ. ಸಿಕ್ಕಾಪಟ್ಟೆ ಖುಷಿಯಾಗಿದ್ದ ನಾನು ವಾಪಾಸು ಹೈಸ್ಕೂಲಿಗೆ ಬಂದರೆ ಲಿಂಗರಾಜ ಮಾಸ್ತರ್ರು ಸೀದಾ ಸ್ಟಾಫ್ ರೂಮಿಗೆ ಕಡೆದು ಚನ್ನಾಗಿ ನಾಲ್ಕೇಟು ಬಾರಿಸಿದರು. ಅರೇ ನಾನೇನು ಮಾಡಿದೆ ಎಂದು ಆಲೋಚಿಸುತ್ತಿದ್ದಾಗ ರಸಪ್ರಶ್ನೆಯ ವಿಷಯವನ್ನು ತೆಗೆದುಕೊಂಡರು. ನಾನು ಏನೇನು ತಪ್ಪು ಹೇಳಿದ್ದೇನೆ ಎನ್ನುವುದನ್ನೆಲ್ಲ ಎತ್ತಿ ಎತ್ತಿ ಹೇಳಿದರು. ಒಂದೊಂದು ತಪ್ಪು ಉತ್ತರಕ್ಕೂ ಒಂದೊಂದು ಹೊಡೆತ ಕೊಟ್ಟು ಇನ್ನು ಮುಂದೆ ಹೀಗೆ ತಪ್ಪು ಉತ್ತರ ಕೊಟ್ಟರೆ ನೋಡು ಸಿಗಿದು ಹಾಕಿ ಬಿಡ್ತೀನಿ ಹುಷಾರ್ ಎಂದು ಅಬ್ಬರಿಸಿದ್ದರು.
SSLCಯ ಕೊನೆಯ ದಿನಗಳಲ್ಲಿ ಲಿಂಗರಾಜ ಮಾಸ್ತರ್ರು ಬೇರೆ ಶಾಲೆಗೆ ವರ್ಗವಾಗಿದ್ದರು. ವಾರಕ್ಕೆ ಮೂರು ದಿನ ಕಾನಲೆ ಹೈಸ್ಕೂಲಿಗೆ ಬರುತ್ತಿದ್ದರು. ವಾರಕ್ಕೆ ಮೂರು ದಿನ ಬೇರೆ ಯಾವುದೋ ಹೈಸ್ಕೂಲಿಗೆ ಹೋಗಿ ಬರುತ್ತಿದ್ದರು. ಆ ಸಂದರ್ಭದಲ್ಲಿಯೇ ಇರಬೇಕು ನಾವು ಅವರನ್ನು ಮಿಸ್ ಮಾಡಿಕೊಳ್ಳಲು ಆರಂಭಿಸಿದ್ದು. ಪ್ರತಿದಿನ ಹೈಸ್ಕೂಲು ಆರಂಭದ ಸಂದರ್ಭದಲ್ಲಿ ಬುಲೆಟ್ ಸದ್ದಾಗದಿದ್ದರೆ ನಮಗೆ ಏನನ್ನೋ ಕಳೆದುಕೊಂಡ ಅನುಭವ ಆಗುತ್ತಿತ್ತು. ಇಂತಹ ನಿಲುವಿನ ಲಿಂಗರಾಜ ಮಾಸ್ತರ್ ಈಗ ಯಾವ ಶಾಲೆಯಲ್ಲಿದ್ದಾರೋ ಗೊತ್ತಿಲ್ಲ ಬಿಡಿ.

(ಮುಂದುವರಿಯುತ್ತದೆ..)              

Tuesday, December 15, 2015

ಬೇಗನೆ ಬಾರೋ ಕೊನೆಗೌಡಾ

ಬೇಗನೆ ಬಾರೋ ಕೊನೆಗೌಡಾ
ಆಳ್ ಹಿಡ್ಕಂಡ್ ಬಾರೋ ನಿಂನ್ ಸಂಗಡಾ ||

ಕೊನೆಯೆಲ್ಲ ಬೆಳೆದೋತು
ಹಣ್ಣಡಿಕೆ ಆಗೋತು
ಗೋಟಾಗಿ ಉದುರಿ ಹೋತು
ಬೇಗನೆ ಬಾರೋ ಕೊನೆಗೌಡಾ ||

ಯಂದಂತೂ ತುಂಡ್ ತ್ವಾಟ
ಜೊತೆಗಿದ್ದು ಮಂಗನ ಕಾಟ
ದಿನವಿಡಿ ತ್ವಾಟಕ್ಕೆ ಓಡಾಟ
ಬೇಗನೆ ಬಾರೋ ಕೊನೆಗೌಡಾ ||

ಕೇಳಿದಷ್ಟು ದುಡ್ ಕೊಡ್ತಿ
ಮಜ್ಜಿಗೆ ತಂಬ್ಳಿ ಮಾಡ್ಕೊಡ್ತಿ
ಕೈಖರ್ಚು ಹಾಕ್ಕೊಡ್ತಿ
ಬೇಗನೆ ಬಾರೋ ಕೊನೆಗೌಡ ||

ತೆರಿಯಡಿಕೆ ಮಾಡಡಾ
ಕೊನೆ ಉಗಿದು ಹಾಕಡಾ
ಅರ್ಧಕ್ಕೆ ಹೋಗಡಾ
ಬೇಗನೆ ಬಾರೋ ಕೊನೆಗೌಡಾ ||

ಮುರಿಯಾಳೂ ಬತ್ವಿಲ್ಲೆ
ಕೆಲಸಕ್ಕೆ ಸಿಕ್ತ್ವಿಲ್ಲೆ
ಆಳ್ ಲೆಕ್ಕದವ್ ಕಾಣ್ತ್ವಿಲ್ಲೆ
ಬೇಗನೆ ಬಾರೋ ಕೊನೆಗೌಡಾ ||

ಕೊನೆ ಕೊಯ್ದು ಮುಗಿದೋದ್ರೆ
ದೊಡ್ ತೊಂದ್ರೆ ತಪ್ಪಿ ಹೋಗ್ತು
ತಲೆ ಭಾರ ಇಳಿದೋಗ್ತು
ಬೇಗನೆ ಬಾರೋ ಕೊನೆಗೌಡಾ ||

ಅಡಿಕೆಗೆ ರೇಟ್ ಬಂಜಡಾ
ರೇಟ್ ಇದ್ದಾಗಲೇ ಕೊಟ್ಕಳವಡಾ
ಚಾಲಿ ಸುಲಿಯಲ್ ಆಳ್ ಬಂಜ್ವಡಾ
ಬೇಗನೆ ಬಾರೋ ಕೊನೆಗೌಡ ||

ಆಳನ್ನೂ ಕರ್ಕಂಡ್ ಬಾ
ಸರಿ ಸಮಯ ನೋಡ್ಕ್ಯಂಡ್ ಬಾ
ಬೇಗನೆ ಬಾರೋ ಕೊನೆಗೌಡಾ
ಆಳ್ ಹಿಡ್ಕಂಡ್ ಬಾರೋ ನಿನ್ ಸಂಗಡಾ ||

-ವಿನಯ ದಂಟಕಲ್

****
(ಇದು ಕೊನೆ ಕೊಯ್ಲಿನ ಸೀಸನ್ನು. ತೋಟದಲ್ಲಿ ಕೊನೆ ಹಣ್ಣಾಗಿದೆ. ಹಣ್ಣಡಿಕೆ ಉದುರಿ ಹೋಗ್ತಾ ಇದೆ. ಜೊತೆಗೆ ಮಂಗನ ಕಾಟ ಬೇರೆ. ಕೊನೆಗೌಡನನ್ನು ಹುಡುಕಿ ಹುಡುಕಿ ಅಡಿಕೆ ಬೆಳೆಗಾರರು ಸೋಲುತ್ತಿದ್ದಾರೆ. ಕೊನೆಗೌಡರ ದಿನದ ಪಗಾರು 800 ರು. ದಾಟಿದೆ. ಅಡಿಕೆಗೆ ರೇಟು ಬಂದಿದೆ ಎನ್ನುವ ಸುದ್ದಿ ಬೇರೆ ಕಿವಿಗೆ ಬಿದ್ದಿದೆ. ಹೀಗಿರುವಾಗ ಅಡಿಕೆ ಬೆಳೆಗಾರರು ಕೊನೆಗೌಡನ ಬಳಿ ಬೇಗ ಬಾ ಎಂದು ಪರಿ ಪರಿಯಾಗಿ ಕೇಳಿಕೊಳ್ಳುವ ಬಗೆಯೇ ಈ ಟಪ್ಪಾಂಗುಚ್ಚಿ ಕವಿತೆ. ನಿಮಗಿಷ್ಟವಾದರೆ ಅಭಿಪ್ರಾಯ ತಿಳಿಸಿ)

(ಈ ಕವಿತೆ ಬರೆದಿದ್ದು 15-12-2012ರಂದು ಶಿರಸಿಯಲ್ಲಿ)

ನನ್ನ ಪ್ರೀತಿಯ ಹಾಡು

ನನ್ನ ಪ್ರೀತಿಯ ಹಾಡು
ಕೇಳಲು ಬಲು ಸುಲಭ
ತಿಳಿದು ಪಡೆಯಲು ಅದುವೆ
ನಷ್ಟ ನೋಡು..||

ನನ್ನ ಪ್ರೀತಿಯ ಹಾಡು
ಇಂಪು ವಾದ್ಯದ ಬೀಡು
ಅರಿತು ನುಡಿಸಲು ಅದುವೆ
ಕಷ್ಟ ನೋಡು ||

ನನ್ನ ಪ್ರೀತಿಯ ಹಾಡು
ಬಹು ಅರ್ಥ, ಹಲ ಸೊಗಡು
ಬಲಿಯುವ ಮೊದಲೇ
ಬಿತ್ತು ನೋಡು ||

ನನ್ನ ಪ್ರೀತಿಯ ಹಾಡು
ಬಹಳ ಪ್ರೀತಿಯ ಗೂಡು
ಕಳೆದು ಹೋದೀತು ಅದುವೆ
ನಿತ್ಯ ನೋಡು ||

ನನ್ನ ಪ್ರೀತಿಯ ಹಾಡು
ಹಲವು ನೆನಪಿನ ಮಾಡು
ಮಾಡು ಮುರಿದೊಡೆ ಅದುವೆ
ಮಣ್ಣು ನೋಡು ||

****

(ಈ ಕವಿತೆಯನ್ನು ಬರೆದಿರುವುದು 05-04-2006ರಂದು ದಂಟಕಲ್ಲಿನಲ್ಲಿ)

Monday, December 14, 2015

ಅಘನಾಶಿನಿ ಕಣಿವೆಯಲ್ಲಿ-31

ಪ್ರದೀಪ ತಕ್ಷಣ ಸಾವರಿಸಿಕೊಂಡಿದ್ದ. `ಯಾಕೆ ಸುಮ್ಮ ಸುಮ್ಮನೇ ನನ್ನ ಮೇಲೆ ಅನುಮಾನ ಪಡುತ್ತೀರಿ? ನಾನು ಈ ಮೊದಲೇ ಹೇಳಿದ್ದೇನಲ್ಲ. ನಾನು ಪ್ರೈವೆಟ್ ಡಿಟೆಕ್ಟಿವ್ ಅಂತ. ಹೌದು. ಸುಮ್ಮನೇ ಇಂತಹ ಕೆಲಸಗಳನ್ನೆಲ್ಲ ಮಾಡುತ್ತಿರುತ್ತೇನೆ. ಈಗ ನಾನು ಪೋನ್ ಮಾಡಿದ್ದೂ ಕೂಡ ಪೊಲೀಸ್ ಸ್ಟೇಷನ್ನಿಗೆ. ಇಲ್ಲಿ ಮಾತನಾಡಿದರಲ್ಲ ಕಳ್ಳರು ಬಂದಿದ್ದಾರೆ ಅಂತ. ಆ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮಾತನಾಡಿ ಚರ್ಚೆ ಮಾಡಿದ್ದಷ್ಟೇ..' ಎಂದ.
`ಹೌದಾ? ಹಾಗಾದರೆ ಅದನ್ನು ಮುಚ್ಚಿಡುವುದೇಕೆ? ಏನಂದರು ಪೊಲೀಸರು? ಯಾಕೆ ನಮ್ಮ ಬಳಿ ಈ ವಿಷಯವನ್ನು ಮುಚ್ಚಿಡಬೇಕು ಅಂತ ಮಾಡ್ತೀಯಾ?' ವಿಕ್ರಮ ಕೇಳಿದ್ದ.
`ಯಾರು ಮುಚ್ಚಿಡಲು ನೋಡಿದ್ದು ಮಾರಾಯಾ? ನಾನು ಹೇಳುವ ಮೊದಲೇ ನೀನೇ ಕೇಳ್ತಾ ಇದ್ದೆ. ನೋಡು ಕಳ್ಳರು ಬಂದಿರುವುದು ಸುಳ್ಳು ಸುದ್ದಿ ಅಂತೆ. ನೇಪಾಳಿಗಳು ಬಂದಿದ್ದಾರೆ ಎನ್ನುವುದೂ ಸುಳ್ಳು ಸುದ್ದಿ. ವೈಜಯಂತಿಪುರದಲ್ಲಿ ನೇಪಾಳಿಗಳನ್ನು ಹಿಡಿದು ಪೋಲಿಸರಿಗೆ ಒಪ್ಪಿಸಲಾಗಿದೆ ಎನ್ನುವ ಸುದ್ದಿ ನಿಜ. ಆದರೆ ಕೂಲಿ ಕೆಲಸಕ್ಕೆ ಬಂದಿದ್ದ ನೇಪಾಳಿ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಹೆಡೆಮುರಿಕಟ್ಟಿ ಪೊಲೀಸರಿಗೆ ಕೊಟ್ಟಿದ್ದಾರೆ. ಪಾಪ ಆ ನೇಪಾಳಿಗೆ ಮಾತು ಬರುವುದಿಲ್ಲ, ಕಿವಿ ಕೇಳುವುದಿಲ್ಲವಂತೆ. ಉಳಿದಂತೆ ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ ಭಾಗದಲ್ಲಿ ಕಳ್ಳರು ಬಂದಿದ್ದಾರೆ ಎನ್ನುವುದು ಮಾತ್ರ ಸುಳ್ಳು ಸುದ್ದಿಯೇ ಹೌದು. ಮರಗಳ್ಳರು ಈ ರೀತಿ ಹಬ್ಬಿಸಿರಬಹುದು ಎಂಬುದು ಪೊಲೀಸರ ಗುಮಾನಿ..' ಎಂದ ಪ್ರದೀಪ.
ಸ್ವಲ್ಪ ನಿರಾಳನಾದ ವಿಕ್ರಮ. ಆದರೂ ಪ್ರದೀಪನ ಮೇಲಿದ್ದ ಸಂದೇಹ ಮಾತ್ರ ಕಡಿಮೆಯಾಗಿರಲಿಲ್ಲ. `ನಿನ್ನ ಮಾತನ್ನು ನಂಬಬಹುದಾ?' ತೀಕ್ಷ್ಣವಾಗಿ ಕೇಳಿದ್ದ.
`ನಂಬಿದರೆ ನಂಬಿ, ಬಿಟ್ಟರೆ ಬಿಡಿ. ನಾನು ಹೇಳಿದ್ದು ನಿಜ. ನಾನು ಹೇಳಿದ ಮಾತ್ರಕ್ಕೆ ನೀವು ನಂಬಲೇಬೇಕು ಎನ್ನುವುದೇನೂ ಇಲ್ಲ. ನಂಬುವುದು ಅಥವಾ ಬಿಡುವುದು ನಿಮಗೆ ಬಿಟ್ಟಿದ್ದು. ನಾನು ಜಾಸ್ತಿ ಏನೂ ಹೇಳಲಾರೆ..' ಪ್ರದೀಪ ಅಷ್ಟೇ ಒರಟಾಗಿ ಉತ್ತರ ನೀಡಿದ್ದ.
ಅಷ್ಟರಲ್ಲಿ ನಡುವೆ ಬಾಯಿ ಹಾಕಿದ ವಿನಾಯಕ `ಸುಮ್ಮನೆ ಯಾಕೆ ಅನುಮಾನ ಎಲ್ಲ. ನಾವು ವಾದ ಮಾಡಿ ಪ್ರಯೋಜನ ಇಲ್ಲ. ಸುಮ್ಮನೇ ಕಾಲಕ್ಷೇಪ ಮಾಡೋದಷ್ಟೇ ಆಗ್ತು. ಮುಂದೇನು ಮಾಡೋದು ಅನ್ನೊದನ್ನ ಮೊದಲು ಹೇಳಿ..' ಎಂದ.
`ಸುಮ್ಮನೇ ಇರಲಿಕ್ಕಂತೂ ಬರುವುದಿಲ್ಲ. ಈಗಾಗಲೇ ಇಷ್ಟು ದೂರ ಬಂದಾಗಿದೆ. ಮುಂದೆ ಏನಾದರೂ ಮಾಡಲೇಬೇಕು..' ವಿಕ್ರಮ ಕೂಡ ಹೇಳಿದ್ದ.
`ಮೊದಲು ಬಾಬುವನ್ನು ಹುಡುಕೋಣ. ಆತನನ್ನು ಮಾತನಾಡಿಸೋಣ. ನಿಧಾನವಾಗಿ ಕೇಳೋಣ. ಇಲ್ಲವಾದಲ್ಲಿ ನಮ್ಮ ವರಸೆಯಲ್ಲಿ ಆತನ ಬಾಯಿ ಬಿಡಿಸೋಣ. ಆದಷ್ಟು ಬೇಗ ಈ ಕೆಲಸ ಆಗಬೇಕು. ಸೂರ್ಯ ಶಿಖಾರಿ ಗುಂಪಿನ ಬಗ್ಗೆ ಆತನಲ್ಲಿ ಮಾಹಿತಿ ಸಿಕ್ಕರೂ ಸಿಗಬಹುದು. ಅಥವಾ ಇನ್ನೊಬ್ಬನನ್ನೂ ಮಾತನಾಡಿಸಬಹುದು. ಸಾಧ್ಯವಾದರೆ ಈಗಲೇ ಹೊರಡೋಣ ಬನ್ನಿ..' ಎಂದವನೇ ಪ್ರದೀಪ ಅವಸರಿಸಿದ. ವಿಕ್ರಮ, ವಿನಾಯಕ ಹಾಗೂ ವಿಜೇತಾರೂ ಪ್ರದೀಪನ ಜಾಡು ಹಿಡಿದರು.

****

`ಇಷ್ಟು ದಿನಗಳಾದರೂ ನಿಮ್ಮ ಕೈಯಲ್ಲಿ ಏನೂ ಆಗಲಿಲ್ಲ ಎಂದರೆ ಏನರ್ಥ.? ದಂಟಕಲ್ಲಿಗೆ ಬಂದಿರುವವರನ್ನು ಹೊಡೆದು ಹಾಕಿ, ಇಲ್ಲವೇ ಬೆದರಿಸಿ ವಾಪಾಸ್ ಕಳಿಸಿ. ಅದಾಗದಿದ್ದಲ್ಲಿ ಅವರನ್ನು ಕೊಂದು ಹಾಕಿ ಎಂದು ಹೇಳಿದ್ದೆ. ಯಾಕೆ ಈ ಕೆಲಸ ಮುಂದುವರಿದಿಲ್ಲ?' ತಂಡದ ನಾಯಕ ಅಬ್ಬರಿಸುತ್ತಿದ್ದರೆ ಎದುರಿದ್ದವರು ಬೆದರಿ ತೊಪ್ಪೆಯಾಗುತ್ತಿದ್ದರು.
`ನಾವು ಮಾಡದ ಕೆಲಸವಿಲ್ಲ ಬಾಸ್. ನಕ್ಸಲರ ಪಟ್ಟ ಕಟ್ಟಿ ಪೊಲೀಸ್ ಠಾಣೆಗೆ ಹಾಕಿದ್ದರೂ ಅವರು ಹೇಗೋ ತಪ್ಪಿಸಿಕೊಂಡು ಬಂದಿದ್ದಾರೆ ನೋಡಿ. ಬಹುಶಃ ಬಂದವರಿಗೆ ದೊಡ್ಡ ದೊಡ್ಡವರ ಕೈ ಇರಬೇಕು ಅನ್ನಿಸುತ್ತದೆ..' ಎಂದ ಬಂಟನೊಬ್ಬ.
`ವಾಟ್. ಪೊಲೀಸ್ ಸ್ಟೇಷನ್ನಿಗೆ ಕಳಿಸಿದ್ದರೂ ಏನೂ ಆಗಲಿಲ್ಲವಾ? ಹಾಗಾದರೆ ಅವರು ಸಾಮಾನ್ಯರಲ್ಲ ಅನ್ನಿಸುತ್ತದೆ. ಬಾಸು ಗೌಡನ ತಂಡದ ಮೇಲೆ ದಾಳಿ ನಡೆಸಿದಾಗಲೇ ಅಂದುಕೊಂಡಿದ್ದೆ. ಅದು ನಿಜವಾಗುತ್ತಿದೆ. ಈ ಭಾಗದವರ್ಯಾರೂ ಮರಕಡಿಯುವವರ ವಿರುದ್ಧ ತಿರುಗಿ ಬೀಳುವುದಿಲ್ಲ. ನಮ್ಮವರ ಮೇಲೆ ತಿರುಗಿ ಬಿದ್ದಿದ್ದಾರೆ ಎಂದರೆ ಇವರ್ಯಾರೋ ಭಲೆ ಆಸಾಮಿಗಳೇ ಇರಬೇಕು ಎಂದುಕೊಂಡೆ. ಅದು ನಿಜವಾಗುತ್ತಿದೆ..' ಸ್ವಗತದಲ್ಲಿ ಹೇಳಿಕೊಂಡಂತೆ ಹೇಳಿದ ಗುಂಪಿನ ನಾಯಕ.
`ಹೌದು ಬಾಸ್. ಅವರು ಮನೆ ಮನೆಗೆ ಹೋಗಿ ನಮ್ಮವರನ್ನು ಹುಡುಕುತ್ತಿದ್ದಾರಂತೆ. ಮೊನ್ನೆ ಬಾಸು ಗೌಡನ ಮನೆಯ ಬಳಿಗೂ ಹೋಗಿದ್ದರಂತೆ. ಬಾಸು ಗೌಡನ ಮನೆಯವರು ಏನೇನೋ ಸಬೂಬು ಹೇಳಿ ತಪ್ಪಿಸಿಕೊಂಡಿದ್ದಾರಂತೆ. ಈಗಾಗಲೇ ಸತ್ತು ಹೋಗಿದುವ ನಮ್ಮ ತಂಡದ ವ್ಯಕ್ತಿಯ ಮನೆಗೂ ಹೋಗಿ ಬಂದಿದ್ದಾರಂತೆ. ಆತ ಸಹಜವಾಗಿ ಸತ್ತಿದ್ದಾನಾ ಅಥವಾ ಅಸಹಜವಾಗಿ ಸಾವನ್ನಪ್ಪಿದ್ದಾನಾ ಎಂದೆಲ್ಲ ಹುಡುಕಿದ್ದಾರಂತೆ. ಮತ್ತೆ ಇನ್ಯಾರ ಬಳಿ ಮಾಹಿತಿಗೆ ಹೋಗುತ್ತಾರೋ ಗೊತ್ತಿಲ್ಲ. ಬಹುಶಃ ಸರ್ಕಾರ ನಮ್ಮ ವಿರುದ್ಧ ಯಾರಾದರೂ ವಿಶೇಷ ಅಧಿಕಾರಿಗಳನ್ನು ಇವರ ರೂಪದಲ್ಲಿ ಕಳುಹಿಸಿರಬಹುದು..' ಜೊತೆಯಲ್ಲಿದ್ದವನು ಹಲುಬಿಕೊಂಡಿದ್ದ.
`ಓಹೋ ಇಷ್ಟೆಲ್ಲ ನಡೆದಿದೆಯಾ? ಇದನ್ನೆಲ್ಲ ಮೊದಲೇ ತಿಳಿಸಲು ನಿಮಗೇನು ಆಗಿತ್ತು. ಇಷ್ಟು ದಿನ ಸುಮ್ಮನೇ ಇದ್ರಲ್ಲ. ತಲೆ ಹಾಳಾಗಿತ್ತಾ ನಿಮಗೆ. ಇದಕ್ಕೆ ಏನಾದರೂ ಮಾಡಲೇಬೇಕು. ಇಲ್ಲವಾದಲ್ಲಿ ನಮಗೆ ಉಳಿಗಾಲ ಇಲ್ಲ. ನಮ್ಮ ಬೆಂಡೆತ್ತಿ ಬಿಡುತ್ತಾರೆ..' ಎಂದು ಆಲೋಚಿಸಿದ ಆ ಗುಂಪಿನ ನಾಯಕ ಕೂಡಲೇ ಹೇಳಿದ `ನೋಡಿ ಇನ್ನು ನಾವು ಸುಮ್ಮನಿದ್ದರೆ ಆಗುವುದಿಲ್ಲ. ಕೂಡಲೇ ಆ ತಂಡದ ಮೇಲೆ ದಾಳಿ ಮಾಡಿ. ಪದೇ ಪದೆ ದಾಳಿ ಮಾಡಿ. ಸಧ್ಯಕ್ಕೆ ಅವರನ್ನು ಕೊಲ್ಲುವುದು ಬೇಡ. ಆದರೆ ಒಬ್ಬಿಬ್ಬರ ಕೈಕಾಲು ಮುರಿದು ಹಾಕಿ. ಹೆದರಿ ವಾಪಾಸು ಹೋಗುವಂತೆ ಮಾಡಿ. ಇದೆಲ್ಲವನ್ನು ಎಷ್ಟು ಅಚ್ಚುಕಟ್ಟಾಗಿ ಮಾಡುತ್ತೀರಿ ಎನ್ನುವುದು ನಿಮಗೆ ಬಿಟ್ಟಿದ್ದು. ತಿಳೀತಾ?' ಕಟ್ಟಾಜ್ಞೆ ಮಾಡಿದ್ದ. ಉಳಿದವರು ತಲೆಯಲ್ಲಾಡಿಸಿ ಹೊರಟಿದ್ದರು.
ಮುಂದಿನ ದಿನಗಳು ಇನ್ನಷ್ಟು ತೀಕ್ಷ್ಣವಾಗಲಿದ್ದವು. ಅವರ ಮೇಲೆ ಇವರು, ಇವರ ಮೇಲೆ ಅವರು ದಾಳಿ ಮಾಡಲು ಸಜ್ಜಾಗಿದ್ದರು. ಈ ದಾಳಿಯಲ್ಲಿ ಒಂದೆರಡು ನಡೆಯಬಾರದಂತಹ ಘಟನೆಗಳೂ ನಡೆಯಲಿದ್ದವು. ಅದೇನಿರಬಹುದು?

****

ಬಾಬುವಿನ ಮನೆಗೆ ಹೋಗುವ ವೇಳೆಗೆ ಬಾಬು ಮನೆಯಲ್ಲಿ ಮಲಗಿದ್ದ. ಹಗಲು ಹೊತ್ತಿನಲ್ಲಿ ಇವನ್ಯಾಕೆ ನಿದ್ದೆ ಮಾಡುತ್ತಿದ್ದಾನೆ ಎನ್ನುವ ಅನುಮಾನ ಪ್ರತಿಯೊಬ್ಬರಲ್ಲಿಯೂ ಕಾಡಲು ಆರಂಭಿಸಿದ್ದರೂ ಅರೆಘಳಿಗೆಯಲ್ಲಿಯೇ `ರಾತ್ರಿ ಮರಗಳ್ಳತನ ಮಾಡಲು ಹೋಗುವ ಕಾರಣ ಹಗಲಿನಲ್ಲಿ ನಿದ್ದೆ ಮಾಡುತ್ತಾನೆ. ನೈಟ್ ಡ್ಯೂಟಿ ಮನುಷ್ಯ..' ಎಂದುಕೊಂಡರು ಎಲ್ಲರೂ.
`ಯಾರೋ ಬಂದಿದ್ದಾರೆ. ಅರ್ಜೆಂಟು ಮಾತನಾಡಬೇಕಂತೆ..' ಎಂಬ ಹೆಂಡತಿಯ ಮಾತಿಗೆ ದಿಗ್ಗನೆ ಎದ್ದು ಕುಳಿತಿದ್ದ ಬಾಬು. `ಯಾರು ಬಂದಾರೆ? ಎಂತದಂತೆ ಅವರದ್ದು..? ನಾ ಮನೆಯಾಗೆ ಇಲ್ಲ ಅಂತ ಹೇಳಬೇಕಿತ್ತು..' ಹೆಂಡತಿ ಬಳಿ ಗದರಿದ ಬಾಬು.
`ಅಯ್ಯೋ ನಾ ಹೇಳಿದ್ದು ಕೇಳಿಸ್ಕಣಲಿಲ್ಲ. ಪೋಲೀಸರು ಅಂದರಪ್ಪಾ.. ನಾಲ್ಕೈದ್ ಜನ ಐದಾರೆ. ಅವ್ರೇ ಮನೆಯೊಳಿಕೆ ಬರ್ತೆ ಅಂತ ಹೇಳ್ತಿದ್ರು. ನಾನೇ ಬ್ಯಾಡ ಅಂತೇಳಿ ಬಂದೆ. ಎಂತಾ ಭಾನಗಡಿ ಮಾಡೀರಿ..?' ಹೆಂಡತಿ ಕೇಳಿದ್ದಳು.
ಪೊಲೀಸರು ಬಂದಿದ್ದಾರಂತೆ ಎನ್ನುವ ಮಾತು ಕೇಳಿ ಬಾಬು ಬೆಚ್ಚಿ ಬಿದ್ದಿದ್ದ. ಪೊಲೀಸರು ಯಾಕ್ ಬಂದ್ರಪ್ಪಾ.? ಎಂದುಕೊಂಡವನು ಹೊರಕ್ಕೆ ಹೋಗಿ ಮಾತನಾಡಲಾ ಎಂದುಕೊಂಡ. ಆದರೆ ಧೈರ್ಯ ಸಾಲಲಿಲ್ಲ. ಮಾತನಾಡುವ ಬದಲು ಓಡಿ ಹೋಗುವುದೇ ಒಳ್ಳೆಯದು ಎಂದುಕೊಂಡ. ತಕ್ಷಣವೇ ಮನೆಯ ಹಿತ್ತಲಕಡೆಯ ಬಾಗಿಲಿನ ಬಳಿ ಹೋದ. ಬಾಗಿಲು ತೆಗೆದು ಓಡಲಾರಂಭಿಸಿದ. ಆಗ ಇದ್ದಕ್ಕಿದ್ದಂತೆ ಒಬ್ಬಾತ ಅಡ್ಡ ಬಂದು ಬಾಬುವಿನ ಕಾಲಿಗೆ ತನ್ನ ಕಾಲನ್ನು ಅಡ್ಡ ಹಾಕಿಬಿಟ್ಟಿದ್ದ. ಕಾಲು ಎಡವಿ ಬಾಬು ದಭಾರನೆ ಬಿದ್ದಿದ್ದ. ಕಾಲು ಎಡವಿದ ವ್ಯಕ್ತಿ ಯಾರೆಂದು ನೋಡಿದರೆ ಅವನೇ ಪ್ರದೀಪ.
ಹಿಂಬಾಗಿಲಿನಿಂದ ಓಡಿ ಹೋಗಬಹುದು ಎನ್ನುವ ಅನುಮಾನ ಬಂದಿದ್ದರಿಂದ ಪ್ರದೀಪ ಅದಕ್ಕೆ ಸಜ್ಜಾಗಿದ್ದ. ಹಿಂಬಾಗಿಲಿನ ಬಳಿ ಹೋಗಿ ನಿಂತುಕೊಂಡಿದ್ದ. ವಿಕ್ರಮ ಹಾಗೂ ವಿನಾಯಕರಿಗೆ ಈ ಬಗ್ಗೆ ಸ್ಪಷ್ಟ ನಿರ್ದೇಶನವನ್ನೂ ನೀಡಿದ್ದ. ಪ್ರದೀಪ ಆಲೋಚಿಸಿದಂತೆಯೇ ಆಗಿತ್ತು. ಬಾಬು ದಬಾರನೆ ಬಿದ್ದಿದ್ದ. `ಅಯ್ಯಪ್ಪೋ.. ನಾ ಸತ್ತೆ..' ಎಂದು ಬಾಬು ಒರಲಿದ್ದ.
ಬಿದ್ದವನನ್ನು ಹಿಡಿದು ಪ್ರದೀಪ ಹೆಡೆಮುರಿ ಕಟ್ಟಿದ. ಇದನ್ನು ನೋಡಿದ ಬಾಬುವಿನ ಹೆಂಡತಿ ರೋಧಿಸಲು ಆರಂಭಿಸಿದ್ದಳು. ಗಂಡ ಏನೋ ಭಾನಗಡಿ ಮಾಡಿಕೊಂಡಿದ್ದಾನೆ ಎಂಬುದು ಹೆಂಡತಿಗೆ ಖಾತ್ರಿಯಾಗಿತ್ತು. ಅದಕ್ಕೆ ದೊಡ್ಡದಾಗಿ ಅಳಲು ಶುರುವಿಟ್ಟುಕೊಂಡಿದ್ದಳು.
ಮೊದಲಿನಿಂದಲೂ ಗಂಡನ ಬಗ್ಗೆ ಅನುಮಾನವಿತ್ತು ಬಾಬುವಿನ ಮಡದಿಗೆ. ಮೂರು ವರ್ಷ ಬಾಂಬೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಮನೆ ಬಿಟ್ಟು ಹೋಗಿದ್ದ ಬಾಬು ದಿಲ್ ದಾರ್ ಆಗಿ ವಾಪಾಸ್ ಬಂದಿದ್ದ. ವಾಪಾಸು ಬಂದವನ ಕೈಯಲ್ಲಿ ಬಾಂಬೆಯಲ್ಲಿ ಎಂತಾ ಕೆಲಸ ಮಾಡ್ತಿದ್ರಿ ಎಂದು ಮಡದಿ ಕೇಳಿದ್ದಳು. ಅದಕ್ಕವನನು ಹೊಟೆಲ್ ಉದ್ಯಮ ಎಂದು ಹೇಳಿದ್ದ. ಗಂಡನ ಉದ್ಯಮದ ಬಗ್ಗೆ ಊರು ತುಂಬಾ ಹೇಳಿಕೊಂಡು ಬಂದಿದ್ದ ಮಡದಿಗೆ ಒಂದಿಬ್ಬರು `ಅದೆಂಗೆ ನಿನ್ ಗಂಡ ಮೂರು ವರ್ಷದಾಗೆ ಅಷ್ಟೆಲ್ಲ ದುಡ್ ಮಾಡ್ಕಂಡ್ ಬಂದಾನೆ? ದಿಟವಾಗಿಯೂ ನಿನ್ ಗಂಡ ಹೊಟೆಲ್ ಮಾಡ್ತಿದ್ನಾ ಅಥವಾ ಬೇರೆ ಇನ್ನೇನಾದರೂ ದಂಧೆ ಮಾಡ್ ತಿದ್ನಾ..?' ಎಂದು ಕೇಳಿದಾಗಲೇ ಅನುಮಾನದ ಕಿಡಿ ಹೊತ್ತುಕೊಂಡಿತ್ತು. ನಂತದರ ದಿನಗಳಲ್ಲಿ ಬಾಂಬೆಯಿಂದ ಬಂದರು, ಕೇರಳದಿಂದ ಬಂದರು, ಬೆಂಗಳೂರಿನವರು ಎಂದು ಹೇಳಿಕೊಂಡು ಬಹಳಷ್ಟು ಜನರು ಅಪರಿಚಿತರು ಮನೆಗೆ ಬಂದು ಹೋಗಿ ಮಾಡುತ್ತಿದ್ದರು. ತನಗೆ ಅರ್ಥವಾಗದ ಭಾಷೆಯಲ್ಲಿ ಅವರು ಮಾತನಾಡುತ್ತಿದ್ದರು. ಅವರು ಬಂದು ಹೋದ ಮರುದಿನ ಬಾಬು ಮನೆಗೆ ಬೇಕಾದಂತಹ ದುಬಾರಿ ವಸ್ತುಗಳನ್ನೆಲ್ಲ ತಂದು ಗುಡ್ಡೆ ಹಾಕುತ್ತಿದ್ದ. ದೊಡ್ಡದೊಂದು ಟಿವಿ, ಪ್ರಿಜ್, ಗ್ರೈಂಡರ್, ಮಿಕ್ಸರ್ ಹೀಗೆ ದೊಡ್ಡ ದೊಡ್ಡ ಎಲೆಕ್ಟ್ರಾನಿಕ್ ವಸ್ತುಗಳನ್ನು ತಂದು ಹಾಕುತ್ತಿದ್ದರೆ ಮೊದ ಮೊದಲು ಖುಷಿ ಪಟ್ಟಿದ್ದಳು. ಆದರೆ ನಂತರ ಮಾತ್ರ ಆಕೆಗೆ ಭಯವಾಗತೊಡಗಿತ್ತು.
ದಿನ ಕಳೆದಂತೆ ಬಾಬುವಿನ ದಿನಚರಿಯೂ ಬದಲಾಗತೊಡಗಿತ್ತು. ಮೊದಮೊದಲು ಗಂಡ ಪ್ರತಿದಿನ ರಾತ್ರಿ ಮನೆಯಲ್ಲಿ ಉಳಿದು ನಿದ್ದೆ ಮಾಡುತ್ತಿದ್ದ. ಆಮೇಲಾಮೇಲೆ ವಾರದಲ್ಲಿ ಒಂದು ದಿನ ರಾತ್ರಿ ಅದೇನೋ ಕೆಲಸವಿದೆ ಎಂದು ಹೋಗುತ್ತಿದ್ದ. ಬೆಳಿಗ್ಗೆ ಬಂದು ಮನೆಯಲ್ಲಿ ಮಲಗಿ ನಿದ್ದೆ ಮಾಡುತ್ತಿದ್ದ. ಆಮೇಲಾಮೇಲೆ ಬಾಬು ವಾರಕ್ಕೆರಡು ದಿನ, ನಂತರದ ದಿನಗಳಲ್ಲಿ ಮಾರಕ್ಕೆ ನಾಲ್ಕು ದಿನ ರಾತ್ರಿ ಹೊರಕ್ಕೆ ಹೋಗುವ ಚಾಳಿ ಶುರುವಾಗಿತ್ತು. ಗಂಡನನ್ನು ಒಂದೆರಡು ಸಾರಿ ದಬಾಯಿಸಿ ಕೇಳಿಯೂ ಬಿಟ್ಟಿದ್ದಳು ಆಕೆ. ಅದಕ್ಕವನು ಶಿರಸಿಯಲ್ಲಿ ಕೆಲಸ ಸಿಕ್ಕಿದೆ. ರಾತ್ರಿ ಪಾಳಿಯ ಕೆಲಸ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದೆನೆ. ದೊಡ್ಡದೊಂದು ಬ್ಯಾಂಕಿನ ಎಟಿಎಂ ಮಿಷಿನ್ ಕಾಯುವ ಕೆಲಸ ಎಂದು ಹೇಳಿದ್ದ. ಆದರೆ ಹೆಂಡತಿ ನಂಬಿರಲಿಲ್ಲ. ಬಾಬು ಸುಳ್ಳು ಹೇಳುತ್ತಿರಬಹುದು ಎನ್ನುವುದು ಆಕೆಯ ಮನಸ್ಸಿನಲ್ಲಿ ಹಾಸುಹೊಕ್ಕಾಗಿತ್ತು. ಇದೀಗ ಮನೆಯ ಬಾಗಿಲಿಗೆ ಪೊಲೀಸರು ಬಂದಿದ್ದಾರೆ ಎನ್ನುವುದು ಕೇಳಿದಾಗ ಮಾತ್ರ ಗಂಡ ಏನೋ ದೊಡ್ಡ ಭಾನಗಡಿ ಮಾಡಿಕೊಂಡಿದ್ದಾನೆ ಎನ್ನುವುದು ಖಾತ್ರಿಯಾಗಿತ್ತು. ಪ್ರದೀಪ ಬಾಬುವಿನ ಹೆಂಡತಿಯ ಬಳಿ ನಾವು ಪೊಲೀಸರು ಎಂದು ಹೇಳಿದ್ದು ಸರಿಯಾದ ಪರಿಣಾಮವನ್ನೇ ಬೀರಿತ್ತು.

(ಮುಂದುವರಿಯುತ್ತದೆ..)

Monday, December 7, 2015

ಅಘನಾಶಿನಿ ಕಣಿವೆಯಲ್ಲಿ-30

`ನಮ್ ಬದಿಗೆ ಕಳ್ಳರು ಬಂಜವಡಾ? 30-40ರಷ್ಟು ಜನ ಉತ್ತರ ಭಾರತದ ಬಂದಿದ ಬಂಜ ಹೇಳ್ತಾ ಇದ್ದ. ಬಂದವ್ವು ಮನುಷ್ಯರದ್ದು ಕಿಡ್ನಿ, ಕಣ್ಣು ಎಲ್ಲಾ ಕೀಳ್ತವಡಾ..' ಎಂದು ಮರುದಿನ ಶಾಲೆಯಿಂದ ಬಂದ ರಾಜೀವ ಮನೆಯಲ್ಲಿ ದೊಡ್ಡದಾಗಿ ಹೇಳಿದಾಗ ಎಲ್ಲರ ಕಿವಿ ನೆಟ್ಟಗಾಗಿದ್ದವು.
`ಸುಳ್ ಸುಳ್ ಸುದ್ದಿ ಹೇಳಡಾ ಮಾರಾಯಾ..' ಎಂದು ಮನೆಯ ಹಿರಿಯರು ಗದರುತ್ತಿದ್ದಂತೆ ರಾಜೀವ ಪಟ್ಟು ಬಿಡದೇ ಮತ್ತದೇ ವಿಷಯವನ್ನು ಹೇಳಿದ.
`ಶಾಲೆಯಲ್ಲಿ ದೋಸ್ತರೆಲ್ಲ ಮಾತನಾಡ್ತಾ ಇದ್ದಿದ್ದ. ಈ ವಿಷಯ ಹೇಳಿದ್ದ ನೋಡು. ನೇಪಾಳದ ಬದಿಯವ್ವು ಬಂಜವಡಾ ಹೇಳಿ ಹೇಳ್ತಾ ಇದ್ದ. ಗಂಡಸ್ರು, ಹೆಂಗಸ್ರು ಎಲ್ಲ ಬಂಜವಡಾ ಹೇಳಿ ಹೇಳಕತ್ತಾ ಇದ್ದಿದ್ದ..' ರಾಜೀವ ಮಂಕಾಗಿದ್ದರೂ ಸ್ಫುಟವಾಗಿ ಹೇಳಿದ್ದ.
ರಾಜೀವನ ಮಾತನ್ನು ಕೇಳಿ ಅಕ್ಕ ಪಕ್ಕದ ಮನೆಯವರೆಲ್ಲ ಅಲ್ಲಿಗೆ ಬಂದು ನೆರೆದರು. `ಹೌದು ನಾನೂ ಕೇಳಿದ್ದೆ. ಸಾಗರ ತಾಲೂಕಲ್ಲಿ ಮೊದಲು ಬಂದಿದ್ವಡಾ. ಈಗ ಸಿದ್ದಾಪುರ ಹಾಗೂ ಶಿರಸಿ ಬದಿಗೂ ಬಂಜ್ವಡಾ. ನನ್ ಕಿವಿಗೂ ಬಿಜ್ಜು ಈ ವಿಷ್ಯ. ಯಾರಾದ್ರೂ ಒಬ್ಬೊಬ್ರೇ ಹೋಗ್ತಾ ಇದ್ರೆ ಅವರನ್ನ ತಡೆದು ಅಡ್ಡ ಹಾಕಿ ಕೈಯಲ್ಲಿದ್ದಿದ್ದಿದ್ದು ಕಿತ್ತುಕೊಂಡು ಹೋಗ್ತವಡಾ..' ಪಕ್ಕದಲ್ಲಿದ್ದವರ್ಯಾರೋ ದನಿ ಸೇರಿಸಿದ್ದರು.
`ಹೌದು ಈ ವಿಷಯ ನನ್ನ ಕಿವಿಗೂ ಬಂಜು. ಕಳ್ಳರು ಬಂದಿದ್ದು ನಿಜ. ಅವ್ರು ಕಳ್ಳರೋ, ದರೋಡೆಕೋರರೋ ಅಥವಾ ಮಾನವನ ಅಂಗಾಂಗಗಳನ್ನು ಕದ್ದು ಮಾರಾಟ ಮಾಡುವವರೋ ಗೊತ್ತಿಲ್ಲ ನೋಡಿ.. ಎರಡೋ ಮೂರೋ ಜನರನ್ನು ಅಡ್ಡಗಟ್ಟಿದ್ದು ನನ್ನ ಕಿವಿಗೂ ಬಿಜ್ಜು. ಬೇಣದಗದ್ದೆ ಬಾಬೂನ್ನ ಮೊನ್ನೆ ಸಂಜೆ ಅಡ್ಡಗಟ್ಟಿದಿದ್ವಡಾ ನೋಡಿ. ಹಸುಮನೆಯ ರಾಮಣ್ಣನ್ನೂ ಅಡ್ಡ ಹಾಕಿದಿದ್ದ ಹೇಳಿ ಸುದ್ದಿ ಸಿಕ್ಕಿದ್ದು. ಯಾವುದೋ ಪೇಪರ್ರಲ್ಲೂ ಬಂಜಪಾ..' ಎಂದರು ಇನ್ನೊಬ್ಬರು ಹಿರಿಯರು.
`ಹೌದಾ.. ಆನೂ ಪೇಪರ್ ಓದಿದ್ದಿ. ಅದರಲ್ಲಿ ಗಾಳಿ ಸುದ್ದಿ ಹೇಳೂ ಕೊಟ್ಟಿದ್ವಲಾ..' ಅವರಲ್ಲೇ ಶುರುವಾಗಿತ್ತು ವಾದ.
`ಸುಳ್ಳು ಸುದ್ದಿ ಹೇಳಾಗಿದ್ದರೆ ಬಾಬೂ ಹಾಗೂ ರಾಮಣ್ಣನ ಅಡ್ಡ ಹಾಕಿದವ್ವು ಯಾರು?' ಮತ್ತೊಬ್ಬಾತ ಬಾಯಿ ಹಾಕಿದ್ದ.
ಈ ವಿಷಯವನ್ನು ಮೌನವಾಗಿ ಕೇಳುತ್ತಿದ್ದ ವಿಕ್ರಮ ಹಾಗೂ ವಿನಾಯಕ ದೋರದಲ್ಲಿದ್ದ ಪ್ರದೀಪ, ವಿಜೇತಾರನ್ನು ಕರೆದರು. ಪ್ರದೀಪ ಹಾಗೂ ವಿಜೇತಾರಿಗೆ ಈ ವಿಷಯ ಬಹಳ ಆಸಕ್ತಿಕರ ಎನ್ನಿಸಿತು.
ಅಷ್ಟರಲ್ಲಿ ಮನೆಯ ಮಹಿಳೆಯರೊಬ್ಬರು ಬಂದು `ಕಳ್ಳರು ಆಗಿದ್ರೂ ಆಗಿರಲಕ್ಕು. ನಾವು ಸಣ್ಣಕಿದ್ದಾಗ ಇರಾಣಿ ಮಂದಿ ಅಂತ ಬರ್ತಿದ್ದ. ನೂರು ಜನರ ಇರಾಣಿ ಜನರ ಗುಂಪು ಊರಿಗೆ ಬರುವ ಮೊದಲೇ ಊರ ಮುಖಂಡನ ಬಳಿ ಪರವಾನಗಿ ಪತ್ರವನ್ನು ಪಡೆದುಕೊಳ್ತಾ ಇತ್ತು. ಆ ಪರವಾನಗಿ ಪತ್ರವನ್ನು ಇರಾಣಿ ಮಂದಿಗಳ ಖದರಿಗೆ ಹೆದರಿ ಪಟೇಲ ಬರಕೊಡ್ತಿದ್ದ. ಅಂವ ಬರೆದು ಕೊಡಲೆ ಒಪ್ಪದೇ ಇದ್ದರೆ ಕೈಕಾಲು ತೆಗೆದು ಬರೆದಿಕೊಳ್ತಿದ್ದ. ಮನೆ ಮನೆಗೆ ಬರುತ್ತಿದ್ದ ಇರಾಣಿ ಮಂದಿಗಳಿಗೆ ಅವರು ಕೇಳಿದ್ದನ್ನು ಕೊಡಲೇಬೇಕಿತ್ತು. ಇಲ್ಲೆ ಹೇಳಾಗಿದ್ದರೆ ಮನೆಯಲ್ಲಿನ ಹೆಣ್ಣು ಮಕ್ಕಳನ್ನೂ ಎಳೆದುಕೊಂಡು ಹೋಗ್ತಿದ್ದರು.. ಈಗ ಬಂದಿರುವ ಕಳ್ಳರೂ ಹಂಗೇ ಇದ್ದಿಕ್ಕು..' ಎಂದಾಗ ಮಾತ್ರ ಒಬ್ಬಿಬ್ಬರು ದಿಘಿಲಾದರು. ಪ್ರದೀಪನ ಕಣ್ಣು ಈಗ ಮಾತ್ರ ಬಹಳ ಗಂಭೀರವಾಯಿತು. ಕಳ್ಳರ ಬಂದಿದ್ದು ಹೌದಾ? ಇದರ ಹಿಂದಿನ ಮರ್ಮ ಏನೋ ಇದೆ ಎನ್ನಿಸುತ್ತದೆ ಎಂದು ಆಲೋಚಿಸಿದ.
ಅಷ್ಟರಲ್ಲಿ ಅಲ್ಲಿಗೆ ಬಂದ ಗಣಪಜ್ಜ `ಹೋಯ್.. ಎಂತದ್ರೋ ಅದು..' ಎಂದ. ಪ್ರತಿಯೊಬ್ಬರೂ ತಮಗೆ ತಿಳಿದಿದ್ದ ವಿಷಯವನ್ನು ಮತ್ತೊಮ್ಮೆ ಸಾದ್ಯಂತವಾಗಿ ವಿವರಿಸಿದರು.
`ಇರಾಣಿ ಮಂದಿಗ ಬರ್ತಿದ್ದ ಅನ್ನೊಂದು ನಂಗೂ ಗೊತ್ತಿದ್ದು. ನಾನೂ ನೋಡಿದ್ದಿ ಅವರನ್ನಾ. ಇರಾನ್ ಹಾಗೂ ಇರಾಕ್ ನಡುವೆ ಕೊಲ್ಲಿ ಯುದ್ಧ ನಡೆದಿದ್ದ ಸಂದರ್ಭದಲ್ಲಿ ಇರಾನ್ ನಲ್ಲಿ ನಿರಾಶ್ರಿತರಾದವರು ಹೀಗೆ ಬಂದಿದ್ದರು ಎನ್ನುವುದನ್ನು ನಾನು ಕೇಳಿದ್ದೇನೆ. ಇರಾಕ್ ಸೊಕಾ ಸುಮ್ಮನೆ ಇರಾನ್ ಮೇಲೆ ಯುದ್ಧ ಮಾಡಿತ್ತಲ್ಲ. ಆಗ ಭಾರತ ನಿರಾಶ್ರಿತರಿಗೆ ಎಲ್ಲ ಸೌಲಬ್ಯವನ್ನು ನೀಡುವ ಭರವಸೆ ನೀಡಿತ್ತಲ್ಲ. ಆ ಭರವಸೆಯ ಲಾಭವನ್ನು ಪಡೆದುಕೊಂಡು ಇರಾನಿ ಮಂದಿ ಹೀಗೆ ಮಾಡುತ್ತಿದ್ದರು. ಆದರೆ ಯಾವಾಗ ಇರಾಣಿ ಮಂದಿಗಳು ಮಾಡುತ್ತಿದ್ದ ಹಾವಳಿಯ ವಿವರ ಭಾರತ ಸರ್ಕಾರಕ್ಕೆ ಗೊತ್ತಾಯಿತೋ ಆ ನಂತರದ ದಿನಗಳಲ್ಲಿ ಇರಾಣಿ ಮಂದಿಗಳ ಹಾವಳಿಗೆ ಸರ್ಕಾರ ಕಡಿವಾಣ ಹಾಕಿತು. ಕಟ್ಟು ನಿಟ್ಟಾಗಿ ಇರಾಣಿ ಮಂದಿಗಳ ಮೇಲೆ ಕಣ್ಣಿಟ್ಟು ಅವರನ್ನು ತಂಡು ಮಾಡಿತು. ಆದರೆ ಈಗ ಕಳ್ಳರು ಬಂದಿದ್ದಾರೆ, ಅವರು ಮನುಷ್ಯರ ಅಂಗಾಂಗಗಳನ್ನು ಕಳ್ಳತನ ಮಾಡುತ್ತಾರೆ ಎನ್ನುವುದರ ಬಗ್ಗೆ ನನಗೆ ಅನುಮಾನಗಳಿವೆ. ಈಗೊಂದು ದಶಕದ ಹಿಂದೆ ಇಂಥದ್ದೇ ಸುದ್ದಿಯಾಗಿತ್ತು ನೋಡಿ..'ಎಂದರು ಗಣಪಜ್ಜ.
ಎಲ್ಲರೂ ತದೇಕಚಿತ್ತರಾಗಿ ಕೇಳುತ್ತಿದ್ದಂತೆಯೇ ಮಾತು ಮುಂದುವರಿಸಿದ ಗಣಪಜ್ಜ `ಈಗ್ಗೆ ಒಂದು ದಶಕಗಳ ಹಿಂದೆಯೂ ಇದೇ ರೀತಿ ಕಳ್ಳರು ಬಂದಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇದೇ ಸುದ್ದಿ ನಂತದಲ್ಲಿ ಯಾವುದೋ ಮೋಹಿನಿ ದಾರಿ ಹೋಕರನ್ನು ಕಾಡುತ್ತಾಳೆ ಎನ್ನುವ ರೀತಿಯೂ ಬದಲಾಗಿತ್ತು. ಜನರು ಗಾಳಿ ಸುದ್ದಿಯ ಜಾಡಿಗೆ ಬಲಿಯಾಗಿದ್ದರು. ಆ ದಿನಗಳಲ್ಲಿ ಪ್ರತಿಯೊಬ್ಬರೂ ತಲೆಗೊಂದರಂತೆ ಮಾತನಾಡಿದ್ದರು. ಆದರೆ ವಾಸ್ತವದಲ್ಲಿ ಅಂತಹ ಗಾಳಿ ಸುದ್ದಿಯ ಹಿಂದಿನ ಅಸಲಿಯತ್ತು ಬೇರೆ ಇತ್ತು ನೋಡಿ..' ಎಂದರು ಅಜ್ಜ.
`ಅಂದರೆ ಕಳ್ಳರು ಬಂದಿದ್ದಾರೆ ಅನ್ನೋದು ಸುಳ್ಳಾ..?' ನಡುವೆ ಬಾಯಿ ಹಾಕಿದ್ದ ಒಬ್ಬರು ಸುಮ್ಮನಿರಲಾರದೇ ಕೇಳಿಯೂ ಬಿಟ್ಟರು.
`ಹೌದು. ಬಹುಶಃ ಕಳ್ಳರು ಬಂದಿದ್ದಾರೆ ಎನ್ನುವುದು ಗಾಳಿ ಸುದ್ದಿಯೇ ಹೌದು. ಇದು ಮರಗಳ್ಳರು, ಕಳ್ಳನಾಟಾ ಮಾಡುವವರು ಹರಿಬಿಡುವ ಗಾಳಿ ಸುದ್ದಿ. ದಶಕದ ಹಿಂದೆ ಇದೇ ಗಾಳಿ ಸುದ್ದಿ ಹಬ್ಬಿದ್ದಾಗಲೂ ಕಳ್ಳ ನಾಟಾ ಹೊಡೆಯುವವರಿಂದಲೇ ಹೀಗಾಗಿದೆ ಎಂಬುದು ಗೊತ್ತಾಗಿತ್ತು. ಈಗಲೂ ಹಾಗೇ ಆಗಿರಬೇಕು..' ಎಂದರು ಗಣಪಜ್ಜ.
`ಹಾಗಾದರೆ ವೈಜಯಂತಿ ಪುರದಲ್ಲಿ ನೇಪಾಳಿ ವ್ಯಕ್ತಿಯೊಬ್ಬನನ್ನು ಊರವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನುವ ಸುದ್ದಿ ಪೇಪರಿನಲ್ಲಿ ಬಂದಿತ್ತಲ್ಲ.. ಅದೇನು..' ಒಬ್ಬಾತ ಕೇಳಿಯೇಬಿಟ್ಟಿದ್ದ.
`ಅದು ನನಗೆ ಗೊತ್ತಿಲ್ಲ. ಆದರೆ ಕಳ್ಳರು ಬಂದಿದ್ದಾರೆ, ಅವರು ಅಡ್ಡಗಟ್ಟಿದ್ದಾರೆ ಎನ್ನುವ ಸುದ್ದಿ ಮಾತ್ರ ಶುದ್ಧ ಸುಳ್ಳು. ಇದು ಕಳ್ಳ ನಾಟಾ ಹೊಡೆಯುವವರು ಹಬ್ಬಿಸಿದ ಸುದ್ದಿಯೇ ಹೌದು..' ಅಜ್ಜ ಖಂಡತುಂಡವಾಗಿ ಹೇಳಿದ್ದರು.
`ಹಾಗಾದರೆ ಬಾಬೂ ಹಾಗೂ ರಾಮಣ್ಣನನ್ನ ಅಡ್ಡಗಟ್ಟಿದ್ದಾರೆ ಎಂದರಲ್ಲ. ಅದೂ ಸುಳ್ಳಾ?..' ಇನ್ನೊಬ್ಬಾತ ವಾದಿಸಿದ್ದ.
`ಅವರನ್ನು ಅಡ್ಡಗಟ್ಟಿದ್ದಾರೆ ಅಂತ ಅವರೇ ಬಂದು ಹೇಳಿದರಾ? ಇಲ್ಲವಲ್ಲ. ಯಾರೋ ಹೇಳಿದ್ದು ತಾನೆ? ಇಷ್ಟಕ್ಕೂ ಈ ಬಾಬೂ ಹಾಗೂ ರಾಮಣ್ಣ ಏನು ಸುಭಗರಲ್ಲವಲ್ಲ.. ನಮ್ಮ ಭಾಗದಲ್ಲಿ ಕಳ್ಳ ನಾಟಾ ಮಾಡುವುದರಲ್ಲಿ ಎತ್ತಿದ ಕೈ ಎಂದು ಹೆಸರಾದವರಲ್ಲವೇ? ಯಾರಾದರೂ ಸಾಮಾನ್ಯ ವ್ಯಕ್ತಿಯನ್ನು ಕಳ್ಳರು ಅಡ್ಡಗಟ್ಟಿದ್ದಾರೆ ಎನ್ನುವ ಸುದ್ದಿ ಹಬ್ಬಿದೆಯಾ ಹೇಳಿ? ಇಲ್ಲ ತಾನೇ? ಕಳ್ಳ ನಾಟಾ ಮಾಡುವ ವ್ಯಕ್ತಿಗಳನ್ನೇ ಕಳ್ಳರು ಅಡ್ಡಗಟ್ಟುತ್ತಾರೆ ಎಂದರೆ ಇದರ ಹಿಂದೆ ಬೇರೆ ಏನೋ ಹುನ್ನಾರವಿದೆ ಎನ್ನಿಸುವುದಿಲ್ಲವೇ?' ಗಣಪಜ್ಜ ಹೇಳಿದ್ದ. ಆತನ ಮಾತು ಕೇಳಿದವರಿಗೆಲ್ಲ ಏನೋ ಹೊಳೆದಂತಾಯಿತು.
`ಇದು ನಿಸ್ಸಂಶಯವಾಗಿ ಕಳ್ಳನಾಟಾ ಹೊಡೆಯುವುರದ್ದೇ ಕೆಲಸ. ತಮ್ಮ ಕೆಲಸ ಮಾಡಿಕೊಳ್ಳಲು ನೇಪಾಳಿ ಕಳ್ಳರ ಹೆಸರನ್ನು ಹೇಳಿ ಬಿಟ್ಟಿದ್ದಾರೆ ಅಷ್ಟೇ. ಬೇಕಾದರೆ ಪರೀಕ್ಷೆ ಮಾಡಿಕೊಳ್ಳಿ..' ಎಂದು ಹೇಳಿದವರೇ ಹೆಗಲ ಮೇಲಿದ್ದ ಬಿಳಿಯ ಟರ್ಕೀಸ್ ಟವೇಲನ್ನು ಒಮ್ಮೆ ಝಾಡಿಸಿ `ಇದೇ ಫರ್ಮಾನು..' ಎಂಬಂತೆ ಎದ್ದು ಹೋದರು ಗಣಪಜ್ಜ. ಒಮ್ಮೆ ಅಲ್ಲಿ ದೀರ್ಘ ಮೌನ ಆವರಿಸಿತು. ಆ ನಂತರ ಪ್ರತಿಯೊಬ್ಬರೂ ಒಬ್ಬರ ಹಿಂದೆ ಒಬ್ಬರಂತೆ ನಿಧಾನವಾಗಿ ಜಾಗ ಖಾಲಿ ಮಾಡಿದರು. ಆದರೆ ಪ್ರದೀಪ ಹಾಗೂ ಆತನ ಬಳಗಕ್ಕೆ ಮಾತ್ರ ಹೊಸತೇನೋ ಮಾರ್ಗ ಸಿಕ್ಕಂತಾಗಿತ್ತು. ತಕ್ಷಣ ಪ್ರದೀಪ ಅಲ್ಲಿಯೇ ಇದ್ದ ಪೋನ್ ಬಳಿ ತೆರಳಿ ಚಕಚಕನೆ ನಂಬರ್ ಡಯಲ್ ಮಾಡಿದ. ಅರೆಘಳಿಗೆಯಲ್ಲಿ ಯಾರಿಗೋ ಪೋನ್ ಮಾಡಿ ವಿಷಯವನ್ನು ತಿಳಿಸಿದ. ಮತ್ತೆ ಅರೆ ಘಳಿಗೆಯಲ್ಲಿ ಪ್ರದೀಪ ಪೋನ್ ಮಾಡಿದ್ದ ವ್ಯಕ್ತಿ ಏನೋ ಹೇಳಿದಂತಾಯಿತು. ಪ್ರದೀಪ ಪೋನ್ ಇರಿಸಿ ಉಳಿದವರ ಬಳಿ ಬಂದ.
ವಿಕ್ರಮ ಅಸಹನೆಯಿಂದ `ಯಾರಿಗೆ ಪೋನ್ ಮಾಡಿದ್ದು? ಯಾಕೆ ಮಾಡಿದ್ದು? ಮಾರಾಯಾ ಮೊದಲಿನಿಂದಲೂ ನೀನು ಏನೋ ಒಂದು ರೀತಿ ನಿಘೂಢ ಕೆಲಸ ಮಾಡ್ತಾ ಇದ್ದೀಯಾ? ಹೇಳ್ಕೊಂಡು ಮಾಡು. ಅದೇನು ಅಂತ. ನಿನ್ನ ಮೇಲೆ ಬಹಳ ಅನುಮಾನ ಬರ್ತಾ ಇದೆ. ಇಷ್ಟಕ್ಕೂ ನೀನು ಯಾರು ಅಂತ. ಕೇಳಿದರೆ ಏನೋ ಸುಳ್ಳು ಹೇಳ್ತೀಯಲ್ಲಾ.. ಈಗ ನೀನು ನಿಜ ಹೇಳಲೇಬೇಕು..' ಎಂದ. ವಿನಾಯಕ, ವಿಜೇತಾರು ವಿಕ್ರಮನ ಜೊತೆಗೂಡಿದ್ದರು. ಪ್ರದೀಪ ಒಮ್ಮೆ ಕಕ್ಕಾಬಿಕ್ಕಿಯಾಗಿದ್ದ.

(ಮುಂದುವರಿಯುತ್ತದೆ..)

Wednesday, December 2, 2015

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ -4

(ಶಿವಾಜಿ ಕಟ್ಟಿಸಿದ ಸಜ್ಜನಘಡದ ಮಹಾದ್ವಾರ)
            ನಮ್ಮ ಪಾಲಿಗೆ ನಿಲೇಶ ಮಂತ್ರಿ ಆಟೋ ಚಾಲಕ ಅಷ್ಟೇ ಆಗಿರಲಿಲ್ಲ. ಗೈಡ್ ಕೂಡ ಆಗಿದ್ದ. ಸಜ್ಜನಘಡದ ಅಂಕುಡೊಂಕಿನ ದಾರಿಯಲ್ಲಿ ನಮ್ಮನ್ನು ಕರೆದೊಯ್ಯುತ್ತಿದ್ದ ಮಂತ್ರಿ ಅಲ್ಲೊಂದು ಕಡೆ 50 ಅಡಿ ಎತ್ತರದ ಹನುಮಂತನ ಪ್ರತಿಮೆ ತೋರಿಸಿದ. `ಮುಂಬಯಿ ಕಡೆಯ ಒಂದಿಬ್ಬರು ರಿಚ್ ಪಾರ್ಟಿ ಬಂದು ಈ ಪ್ರದೇಶದಲ್ಲಿ ಜಮೀನನ್ನು ಕೊಂಡು ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುತ್ತಿದ್ದಾರೆ. ಇದೋ ನೋಡಿ, ಈ ಹನುಮಂತನ ಪ್ರತಿಮ ನಿರ್ಮಾಣ ಮಾಡಿದವರೂ ಅಂತವರೇ..' ಎಂದ.
            ನಿಧಾನವಾಗಿ ಬೆಳಗಾಗಿತ್ತು. ನಿಮಗೆ ನನ್ನ ಕಡೆಯಿಂದ ತೋಫಾ ಇದೆ ಎಂದಿದ್ದೆನಲ್ಲ. ತೋರಿಸುತ್ತೇನೆ ಬನ್ನಿ ಎಂದವರೇ ಸಜ್ಜನಘಡಕ್ಕೆ ಬಲಕ್ಕೆ ತಿರುಗುವ ಕ್ರಾಸಿನಿಂದ ಸೀದಾ ಮುಂದಕ್ಕೆ ಆಟೋ ಚಾಲನೆ ಮಾಡಿದರು. ಮಾಡಿದವರೇ ಅಲ್ಲೊಂದು ಕಡೆ ಗುಡ್ಡದ ಮರುಕಲಿನಲ್ಲಿ ಆಟೋ ನಿಲ್ಲಿ ಇಳೀರಿ ಎಂದರು. ನಾವೆಲ್ಲ ಇಳಿದೆವು. ಇಳಿದಂತೆ ರಸ್ತೆಯನ್ನು ದಾಟಿ ಗುಡ್ಡವನ್ನು ಹತ್ತಿಸಿದರು ನಿಲೇಶ ಮಂತ್ರಿ. ಅಲ್ಲೊಂದು ಕಡೆ ನಮಗೆ ನಮ್ಮಷ್ಟೇ ದೊಡ್ಡ ಗಾತ್ರದ ಪೈಪ್ ಒಂದು ಕಾಣಿಸಿತು. ಪಕ್ಕದಲ್ಲಿದ್ದ ದೈತ್ಯ ಗುಡ್ಡವೊಂದರಿಂದ ಬಂದಿದ್ದ ಪೈಪ್ ಅದು. ಸೀದಾ ಸಜ್ಜನಘಡದ ಗುಡ್ಡದ ಮೇಲಕ್ಕೆ ಹಾಕಲಾಗಿತ್ತು. ನಾವೆಲ್ಲ ವಿಸ್ಮಯದಿಂದ ನೋಡುತ್ತಿದ್ದಂತೆ ಸಜ್ಜನಘಡಕ್ಕೆ ಪಕ್ಕದ ಗುಡ್ಡದಿಂದ ನೀರನ್ನು ಹರಿಸಲಾಗುತ್ತದೆ. ಅದಕ್ಕೆ ಈ ಪೈಪ್ ಹಾಕಲಾಗಿದೆ ಎಂದರು ನಿಲೇಶ ಮಂತ್ರಿ. ನಾವು ಒಮ್ಮೆ ಬೆರಗಾದೆವು. ಗುರುತ್ವಾಕರ್ಷಣ ಶಕ್ತಿಯನ್ನು ಬಳಕೆ ಮಾಡಿಕೊಂಡು ನೀರಿನ ಪೈಪ್ ಹಾಕಿರುವುದು ಖುಷಿಯನ್ನೂ ತಂದಿತು.
             ಗುಡ್ಡದ ಮರುಕಲನ್ನು ದಾಟಿ ನೋಡಿದ ನಮಗೆ ದೂರದ ಕಣಿವೆಯಲ್ಲೊಂದು ಅಣೆಕಟ್ಟು ಕಾಣಿಸಿತು. ಕೃಷ್ಣಾ ನದಿಯ ಉಪನದಿಗೆ ಅಣೆಕಟ್ಟನ್ನು ನಿರ್ಮಾಣ ಮಾಡಲಾಗಿತ್ತು. ಸಾಗರೋಪಾದಿಯಲ್ಲಿ ಕಾಣುತ್ತಿತ್ತು. ಮಂಜು ಬೀಳುತ್ತಿದ್ದ ಕಾರಣ ಸ್ವರ್ಗದ ಸಿರಿ ಭುವಿಗೆ ಇಳಿದು ಬಂದಿದೆಯೇನೋ ಎಂಬಂತೆ ಕಾಣಿಸಿತು. ನೋಡಿ ಈ ಅಣೆಕಟ್ಟನ್ನು ನಾಲ್ಕು ಮೀಟರ್ ಏರಿಸುತ್ತಾರಂತೆ ಎಂದು ಅಲ್ಲಿಯೇ ಮಾಹಿತಿ ನೀಡಿದರು ಮಂತ್ರಿ. ಕೆಲಕಾಲ ಅಲ್ಲಿ ನಿಂತು ಸಾಕಷ್ಟು ಪೋಟೋಗಳನ್ನು ಕ್ಲಿಕ್ಕಿಸಿಕೊಂಡೆವು.
            ವಾಪಾಸು ಬಂದು ಮತ್ತೆ ಆಟೋವನ್ನು ಏರಿದೆವು. ತಿರುಗಿಸಿದ ಆಟೋವನ್ನು ಸೀದಾ ಸಜ್ಜನಘಡದ ಕಡೆಗೆ ಚಲಾಯಿಸಿದ. ಮತ್ತೊಂದೆರಡು ಅಂಕುಡೊಂಕನ್ನು ಹಾದು ಹೋದ ಆಟೋ ಒಂದು ಕಿಲೋಮೀಟರ್ ನಂತರ ಸಜ್ಜನಘಡವನ್ನು ತಲುಪಿತು. ಸಜ್ಜನಘಡದ ಪ್ರಮುಖ ದ್ವಾರದಿಂದ ಬಹುದೂರದಲ್ಲಿಯೇ ಆಟೋ ನಿಲ್ಲಿಸಿದ ಮಂತ್ರಿ. ಸಾಕಷ್ಟು ವಾಹನಗಳು ಆಗಲೇ ಸಜ್ಜನಘಡಕ್ಕೆ ಬಂದಿದ್ದವು. ಆಟೋ ಇಳಿದವರೇ ನಿಲೇಶ ಮಂತ್ರಿಯ ಜೊತೆ ನಾನು, ಪ್ರಶಾಂತ ಹಾಗೂ ಸಂಜಯ ನಿಂತುಕೊಂಡು ಪೋಟೋ ತೆಗೆಸಿಕೊಂಡೆವು. ಹೋಗುವ ಮುನ್ನ ಬಾಯಿತುಂಬಾ ನಮ್ಮನ್ನು ಹರಸಿ ಹೋದ ನಿಲೇಶ ಮಂತ್ರಿ. ಈ ಗಡಬಡೆಯಲ್ಲಿ ನಿಲೇಶ ಮಂತ್ರಿಯ ಮೊಬೈಲ್ ನಂಬರ್ ತೆಗೆದುಕೊಳ್ಳುವುದನ್ನು ನಾವು ಮರೆತೇ ಬಿಟ್ಟಿದ್ದೆವು ಬಿಡಿ.
           ಮೂವರೂ ಸಜ್ಜನಘಡವನ್ನು ಏರಲು ಹೊರಟ ಸಂದರ್ಭದಲ್ಲಿ ಚುಮು ಚುಮು ಮಳೆ. 17ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದ ಕಲ್ಲಿನ ದಾಡಿ. ದೈತ್ಯ ಕೋಟೆ. ನಡೆದು ಸಾಗಿದೆವು. ಅಲ್ಲೊಂದು ಕಡೆ ಶಿವಾಜಿ ಮಹಾರಾಜ ನಿರ್ಮಾಣ ಮಾಡಿದ್ದ ಬೃಹತ್ ದ್ವಾರವೊಂದು ನಮ್ಮನ್ನು ಸ್ವಾಗತಿಸಿತು. ಈ ದ್ವಾರದ ಬಳಿ ನಾವೆಲ್ಲ ಮತ್ತೆ ಪೋಟೋ ತೆಗೆಸಿಕೊಂಡೆವು. ದೈತ್ಯ ದ್ವಾರಕಮಾನನ್ನು ಕಲ್ಲಿನಿಂದ ಮಾಡಿದ್ದರೆ ಅದಕ್ಕೆ ಮಾಡಲಾಗಿದ್ದ ಬಾಗಿಲು ಮರ ಹಾಗೂ ಕಬ್ಬಿಣದ್ದಾಗಿತ್ತು. ಸೀದಾ ಒಳನಡೆದ ನಮಗೆ ಅಲ್ಲೊಂದು ಮ್ಯಾಪ್ ಕಾಣಿಸಿತು. ಮುನ್ನಡೆದೆವು.
            ಮೂರ್ನಾಲ್ಕು ಕಟ್ಟಡಗಳನ್ನು ದಾಟಿ ಮುಂದಕ್ಕೆ ಸಾಗಿದ ನಮಗೆ ಸ್ಥಳಿಯರ್ಯಾರೋ ಸ್ನಾನ ಮಾಡುವ ಸ್ಥಳ ತೋರಿಸಿದರು. ಬಿಸಿನೀರು ಕೂಡ ಬರ್ತದೆ. ಸ್ನಾನ ಮಾಡಬಹುದು ಎಂದರು. ಪ್ರಶಾಂತ ಭಾವ ಮೊದಲು ಸ್ನಾನಕ್ಕೆ ಹೋದ. ಆತನ ನಂತರ ನಾನು, ನನ್ನ ನಂತರ ಸಂಜಯ ಸ್ನಾನ ಮುಗಿಸಿದ. ಸ್ನಾನ ಮುಗಿಸಿ ಶುಭ್ರ ಬಿಳಿ ಬಣ್ಣದ ಲುಂಗಿ ಹಾಗೂ ಉತ್ತರೀಯವನ್ನು ಹೊದ್ದು ಮುನ್ನಡೆದೆವು. ನಮ್ಮ ಧಿರಿಸು ಎಂತವರನ್ನೂ ಮೋಡಿ ಮಾಡುವಂತಿತ್ತು. ವಾಪಾಸು ಬಂದು ಛತ್ರವೊಂದರಲ್ಲಿ ನಮ್ಮ ಲಗೇಜನ್ನು ಇರಿಸಲು ಅನುವಾದೆವು. ನಮ್ಮ ದಿರಿಸನ್ನು ನೋಡಿ ಬೆರಗಾದ ಆ ಛದ್ರದ ಉಸ್ತುವಾರಿ ನೋಡಿಕೊಂಡವರು ನಮಗೆ ಪ್ರತ್ಯೇಕ ಕೋಣೆಯೊಂದನ್ನು ನೀಡಿದರು. ಈ ಕೋಣೆಯಲ್ಲಿ ನಮ್ಮ ಲಗೇಜನ್ನು ಇರಿಸಿ ಸಮರ್ಥ ರಾಮದಾಸರ ಆರಾಧ್ಯ ದೈವವನ್ನು ನೋಡಲು ಮುನ್ನಡೆದೆವು.
            ಆರಂಭದಲ್ಲಿಯೇ ಸದ್ಗರು ಶ್ರೀಧರಸ್ವಾಮಿಗಳು ತಪಸ್ಸನ್ನಾಚರಿಸಿದ ಶ್ರೀಧರ ಕುಟಿ ನಮ್ಮ ಸೆಳೆಯಿತು. ಸೀದಾ ಒಳಗೆ ಹೊರಟೆವು. ಶ್ರೀಧರ ಸ್ವಾಮಿಗಳ ಭವ್ಯ ಮೂರ್ತಿಯೊಂದು ಕೋಣೆಯೊಳಗೆ ಬೆಳಗುತ್ತಿತ್ತು. ಅದರ ಹೊರಭಾಗದಲ್ಲಿ ಕೆಲಕಾಲ ನಿಂತ ನಾವು ನಂತರ ಧ್ಯಾನಕ್ಕೆ ಕುಳಿತೆವು. ಕೆಲಕಾಲ ಮೈಮರೆತು ಧ್ಯಾನ ಮಾಡುತ್ತಿದ್ದಂತೆಯೇ ಕುಟಿಯ ಒಳಭಾಗದಿಂದ ವೃದ್ಧರೊಬ್ಬರು ಬಂದರು. `ನಿಮಗೆ ಎಲ್ಲಾಯಿತು?' ಎಂದು ಕೇಳಿದರು. ನಮಗೆ ಒಮ್ಮೆ ತಬ್ಬಿಬ್ಬು. ಅಚ್ಚ ಮರಾಠಿಯ ಮಧ್ಯದಲ್ಲಿರುವ ಸ್ಥಳದಲ್ಲಿ ಕನ್ನಡ ಭಾಷೆಯಲ್ಲಿ ನಮ್ಮನ್ನು ಮಾತನಾಡಿಸಿದ್ದರು. ಅಷ್ಟೇ ಅಲ್ಲ ಹವ್ಯಕ ಕನ್ನಡದಲ್ಲಿ ಮಾತನಾಡುತ್ತಿದ್ದರು. ನಾವು ಬೆರಗಿನಿಂದ ಕರ್ನಾಟಕ ಎಂದೆವು. `ಅದು ಗೊತ್ತಾತು. ಕರ್ನಾಟಕದಲ್ಲಿ ಎಲ್ಲಿ?' ಎಂದರು. ನಾನು ಹಾಗೂ ಸಂಜಯ ಸಿರಸಿ ಎಂದರೆ ಪ್ರಶಾಂತ ಯಲ್ಲಾಪುರ ಎಂದ.
           `ಬೇಗ.. ನಿಮ್ಮ ಧ್ಯಾನ ಮುಗಿಸಿ ಬನ್ನಿ. ಒಳಗೆ ಪ್ರಸಾದ ಕೊಡುತ್ತೇನೆ..' ಎಂದರು ವೃದ್ಧರು. `ನಿಮಗೆ ಎಲ್ಲಾಯಿತು? ನಮ್ಮನ್ನು ಹೇಗೆ ಗುರುತಿಸಿದಿರಿ..' ಎಂದು ಸಂಜಯ ಕೇಳಿಯೇಬಿಟ್ಟ. `ನನಗೆ ಕುಮಟಾ ಆಯಿತು. ನಿಮ್ಮ ಬಟ್ಟೆ ಹಾಗೂ ನಿಮ್ಮ ಸಂಸ್ಕೃತಿಯೇ ನನಗೆ ಎಲ್ಲವನ್ನು ಹೇಳಿತು. ಬನ್ನಿ ಒಳಗೆ..' ಎಂದವರೇ ನಮ್ಮನ್ನು ಒಳಕ್ಕೆ ಕರೆದೊಯ್ದರು. ಆ ಕುಟಿಯ ಒಳಗೆ ಸಾಮಾನ್ಯರಿಗೆ ಯಾರಿಗೂ ಪ್ರವೇಶವಿರಲಿಲ್ಲ. ಆದರೆ ಆ ವೃದ್ಧರು ನಮ್ಮನ್ನು ಒಳಕ್ಕೆ ಕರೆದೊಯ್ದಿದ್ದರು. ಒಳಕ್ಕೆ ಹೋದವರೇ ಎರಡೂ ಬೊಗಸೆಯನ್ನು ಹಿಡಿಯಿರಿ ಎಂದರು. ಕೈಯಲ್ಲಿ ದೊಡ್ಡದೊಂದು ಬುತ್ತಿಯನ್ನು ನೀಡಿದರು. ತಿನ್ನಿ ಎಂದರು. ಆಹ್. ಎಂತಾ ಮಧುರವಾಗಿತ್ತು ಅದು ಅಂತೀರಿ. ಸಕ್ಕರೆ, ಬೆಣ್ಣೆಯ ಮಿಶ್ರಣವಾದ ಅಂತಹ ಆಹಾರವನ್ನು ಯತಿವರೇಣ್ಯರು ಸೇವಿಸುತ್ತಾರಂತೆ. ತಿಂದು ಮುಗಿಸುತ್ತಿದ್ದಂತೆಯೇ ಬಾಳೆಯ ಹಣ್ಣಿನ ಪಾಯಸವನ್ನು ಬೊಗಸೆ ತುಂಬಾ ನೀಡಿದರು. ಕುಡಿದೆವು. ನಾವು ಬೆಳಿಗ್ಗೆ ಏನನ್ನೂ ತಿಂದಿರಲಿಲ್ಲ. ಆದರೆ ಆ ವೃದ್ಧರು ನೀಡಿದ ಆ ಪ್ರಸಾದವಿದೆಯಲ್ಲ ಅದು ನಮಗೆ ಹಸಿವನ್ನು ಮರೆಸಿತು. ಜೀವನದಲ್ಲಿ ಇಷ್ಟು ರುಚಿಕರವಾದದ್ದನ್ನು ತಿಂದಿಲ್ಲವೇನೋ ಎನ್ನಿಸಿತು. ಸಜ್ಜನಘಡದಲ್ಲಿ ಎಲ್ಲವನ್ನೂ ನೋಡಿಕೊಂಡು ಬನ್ನಿ. ಒಂದು ವೇಳೆ ಇಲ್ಲಿಯೇ ಉಳಿಯುತ್ತೀರಿ ಎಂದಾದರೆ ಈ ಕುಟೀರಕ್ಕೆ ಬನ್ನಿ ಎನ್ನುವ ವೃದ್ಧರು ಹೇಳುತ್ತಿದ್ದಂತೆಯೇ ನಾವು ಶ್ರೀಧರ ಕುಟೀರದಿಂದ ಹೊರಕ್ಕೆ ಬಂದಿದ್ದೆವು.

(ಮುಂದುವರಿಯುತ್ತದೆ)

Friday, November 27, 2015

ಅಘನಾಶಿನಿ ಕಣಿವೆಯಲ್ಲಿ -29

`ಯಾರು ನೀನು?' ಹುಚ್ಚನ ಮಾತಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದ ಪ್ರದೀಪ.
`ನಾನು ಯಾರು ಬೇಕಾದರೂ ಆಗಿರಲಿ. ಅದು ಮುಖ್ಯವಲ್ಲ. ನಿಮ್ಮ ಕೆಲಸ ಏನಿದೆಯೋ ಅದರ ಕಡೆಗೆ ಗಮನ ಹರಿಸಿಕೊಳ್ಳಿ.. ನಾನು ಹುಚ್ಚ ಎಂದಷ್ಟೇ ನಿಮ್ಮ ಗಮನದಲ್ಲಿರಲಿ. ಅದು ಸಾಕು ಬಿಡಿ..' ಎಂದ ಆ ಹುಚ್ಚ.
`ಇದು ಯಾಕೋ ಸರಿ ಕಾಣುತ್ತಿಲ್ಲ. ನೀನು ಯಾರು? ನಮ್ಮ ಕೆಲಸದ ಬಗ್ಗೆ ನೀನೇಕೆ ಹೇಳುತ್ತಿದ್ದೀಯಾ?' ಈ ಸಾರಿ ಉತ್ತರ ನೀಡುವ ಸರದಿ ವಿಕ್ರಮನದ್ದಾಗಿತ್ತು.
`ಆಗಲೇ ಹೇಳಿದೆನಲ್ಲ. ನಾನು ಹುಚ್ಚ. ನೀವೇ ನನ್ನನ್ನು ಉಂಚಳ್ಳಿ ಜಲಪಾತದ ಒಡಲಿನಿಂದ ಕಾಪಾಡಿಕೊಂಡು ಬಂದಿದ್ದೀರಲ್ಲ. ನೋಡಿ ನಾನು ಯಾರು ಬೇಕಾದರೂ ಆಗಿರಲಿ. ನಿಮಗೆ ತೊಂದರೆ ಕೊಡುವವನು ನಾನಲ್ಲ. ನಿಮಗೆ ಸಹಾಯ ಮಾಡುವುದು ನನ್ನ ಮುಖ್ಯ ಕೆಲಸ. ನನ್ನಿಂದ ನಿಮಗೆ ಯಾವ ರೀತಿಯ ಸಹಾಯ ಬೇಕು ಎನ್ನುವುದನ್ನು ನೀವು ಹೇಳಿ. ಹೇಳದಿದ್ದರೂ ತೊಂದರೆಯೇನಿಲ್ಲ ಬಿಡಿ..' ಎಂದ ಹುಚ್ಚ.
ಎಲ್ಲರಿಗೂ ಒಮ್ಮೆ ಅಚ್ಚರಿ. ಈತ ನಿಜವಾಗಿಯೂ ಹುಚ್ಚನೇ? ಅಥವಾ ಹುಚ್ಚನ ವೇಷದಲ್ಲಿರುವ ಯಾವುದಾದರೂ ವ್ಯಕ್ತಿಯೋ? ನಮ್ಮ ಮೇಲೆ ನಿಗಾ ವಹಿಸುವ ಸಲುವಾಗಿ ಯಾರಾದರೂ ಬೆನ್ನು ಬಿದ್ದಿದ್ದಾರೋ ಹೇಗೆ ಎನ್ನುವ ಆಲೋಚನೆಗಳೆಲ್ಲ ಮನಸ್ಸಿನಲ್ಲಿ ಮೂಡಿದವು. ಅಷ್ಟರಲ್ಲಿಯೇ ಇನ್ನೊಂದು ಘಟನೆ ನಡೆದು ಹೋಗಿತ್ತು. `ನೋಡಿ ನಿಮ್ಮೆದುರು ಇರುವ ಸವಾಲು ಸಣ್ಣದಲ್ಲ. ಹುಷಾರಾಗಿರಿ. ನೀವು ಈಗಾಗಲೇ ಸಿಂಹದ ಬಾಯಿಗೆ ಕೈ ಹಾಕಿದ್ದೀರಿ. ಈಗಾಗಲೇ ಒಬ್ಬನ ಸಾವಿಗೆ ಕಾರಣರಾಗಿದ್ದೀರಿ. ಶತ್ರು ಸುಮ್ಮನೇ ಇರುವುದಿಲ್ಲ. ನಿಮ್ಮೆದುರು ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾನೆ. ಪ್ರತಿಯೊಬ್ಬರೂ ಎಚ್ಚರದಿಂದ ಇರಿ. ಭಯ ಬೇಡ. ನಿಮ್ಮ ಚಲನವಲನಗಳನ್ನು ನಾನು ಸಾಧ್ಯವಾದಷ್ಟೂ ಗಮನಿಸುತ್ತಲೇ ಇರುತ್ತೇನೆ.' ಎಂದು ಹೇಳಿದ ಹುಚ್ಚ ಇದ್ದಕ್ಕಿದ್ದಂತೆ ಗಾಡಿಯಿಂದ ಕೆಳಗೆ ಜಿಗಿದೇ ಬಿಟ್ಟ.
ಹುಚ್ಚ ಗಾಡಿಯಿಂದ ಕೆಳಗೆ ಜಿಗಿಯಬಹುದು ಎನ್ನುವುದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ವಾಹನ ಚಾಲನೆ ಮಾಡುತ್ತಿದ್ದ ವಿನಾಯಕ ಹಟಾತ್ತನೆ ಗಾಡಿ ಬ್ರೇಕ್ ಹಾಕಿದ. ಗಾಡಿಯಲ್ಲಿ ಕುಳಿತಿದ್ದವರೆಲ್ಲ ಒಮ್ಮೆ ಮುಗ್ಗರಿಸಿಬಿದ್ದರು. ಪ್ರದೀಪ ಕೂಡ ಹುಚ್ಚನ ಹಿಂದೆ ಅವನಷ್ಟೇ ವೇಗವಾಗಿ ಗಾಡಿಯಿಂದ ಜಿಗಿದಿದ್ದ. ಅವನ ಹಿಂದೆ ವಿಕ್ರಮ ಕೂಡ ಇಳಿದಿದ್ದ. ಹುಚ್ಚನ ಬಗ್ಗೆ ಬಹಳ ಅಚ್ಚರಿಯಾಗಿತ್ತು. ಆತನನ್ನು ಹಿಡಿಯುವುದು ವಿಕ್ರಮ ಹಾಗೂ ಪ್ರದೀಪನ ಉದ್ದೇಶವಾಗಿತ್ತು. ಆದರೆ ವಾಹನದಿಂದ ಜಿಗಿದಿದ್ದ ಹುಚ್ಚ ಪಕ್ಕದ ಕಾಡೊಳಕ್ಕೆ ನುಗ್ಗಿ ಮರೆಯಾಗಿ ಬಿಟ್ಟಿದ್ದ. ಪ್ರದೀಪ ಹಾಗೂ ವಿಕ್ರಮ ಕೂಡ ಹುಚ್ಚನಷ್ಟೇ ವೇಗವಾಗಿ ಕಾಡೊಳಗೆ ನುಗ್ಗಿದ್ದರೂ ಅರೆಘಳಿಗೆಯಲ್ಲಿ ಆತ ತಪ್ಪಿಸಿಕೊಂಡು ಬಿಟ್ಟಿದ್ದ. `ಛೇ.. ಸ್ವಲ್ಪದರಲ್ಲಿ ತಪ್ಪಿಸಿಕೊಂಡ..' ಎಂದು ಗೊಣಗಿದ ಪ್ರದೀಪ.
`ಇಂವ ಯಾರು ಮಾರಾಯಾ. ನಮ್ಮ ಕೆಲಸದ ಬಗ್ಗೆ ಅಷ್ಟು ನಿಖರವಾಗಿ ಹೇಳ್ತಾ ಇದ್ದ. ಇಂವ ಹುಚ್ಚ ಅಂತೂ ಅಲ್ಲ. ಕಾಡುಗಳ್ಳರ ಬಗ್ಗೆ ಸರ್ಕಾರ ಏನಾದರೂ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿದೆಯಾ? ಅವನು ಇವನೇನಾ? ನಮ್ಮ ಕಾರ್ಯದ ಬಗ್ಗೆ ಎಷ್ಟು ಸಲೀಸಾಗಿ ಹೇಳ್ತಾ ಇದ್ದ. ಒಂದ್ ಸಾರಿ ಎಷ್ಟ್ ಆಶ್ಚರ್ಯ ಆಗಿತ್ತು ಮಾರಾಯಾ..' ಎಂದ ವಿಕ್ರಮ.
`ಹುಂ. ನಂಗೂ ಹಂಗೆ ಅನ್ನಿಸ್ತಾ ಇದ್ದು. ಖಂಡಿತ ಇಂವ ಹುಚ್ಚನಂತೂ ಅಲ್ಲ. ನೋಡು ಏನೇ ಆಗಲಿ, ಇಂವ ಯಾರೇ ಆಗಿರಲಿ, ಇನ್ನುಮುಂದೆ ನಾವು ಬಹಳ ಹುಷಾರಾಗಿ ಇರಬೇಕು. ಅಷ್ಟೇ ಅಲ್ಲ, ನಮ್ಮ ಕೆಲಸವನ್ನು ಇನ್ನಷ್ಟು ತ್ವರಿತವಾಗಿ ಮಾಡಿ ಮುಗಿಸಬೇಕು. ಇಲ್ಲ ಅಂದರೆ ಸಲ್ಲದ ಸಮಸ್ಯೆಯನ್ನು ತಲೆಯ ಮೇಲೆ ಎಳೆದುಕೊಂಡಂತೆ ಆಗುತ್ತದೆ..' ಎಂದ ಪ್ರದೀಪ.
`ಹೌದು. ನನಗೂ ಹಾಗೆಯೇ ಅನ್ನಿಸುತ್ತಿದೆ. ಅಷ್ಟೇ ಅಲ್ಲ ಈ ಕೆಲಸವನ್ನು ಯಾಕಾದರೂ ಶುರು ಹಚ್ಚಿಕೊಂಡೆನೋ ಎಂದೂ ಅನ್ನಿಸಲು ಆರಂಭಿಸಿದೆ ನೋಡು. ಒಂದು ಸಾರಿ ಕೆಲಸ ಮುಗಿದರೆ ಸಾಕು. ಅಷ್ಟಾಗಿಬಿಟ್ಟಿದೆ...' ವಿಕ್ರಮ ನಿಟ್ಟುಸಿರಿನಿಂದ ಹೇಳಿದ್ದ.
`ಮುಗಿಸೋಣ. ಬೇಗನೇ ಮುಗಿಸಿಬಿಡೋಣ. ಏನ್ ಬೇಕಾದರೂ ಆಗಲಿ..' ಎಂದ ವಿಕ್ರಮ.
ವಾಪಾಸು ಕಾರಿನ ಬಳಿ ಬಂದಕೂಡಲೇ ವಿನಾಯಕ `ಏನಾಯ್ತು? ಸಿಕ್ಕಿದ್ನಾ ಅವ?' ಎಂದು ಕೇಳಿದ. ಇಬ್ಬರೂ ಇಲ್ಲ ಎಂದು ತಲೆಯಲ್ಲಾಡಿಸಿದರು. ಅಷ್ಟರಲ್ಲಿ ಮಧ್ಯದಲ್ಲಿ ಬಾಯಿ ಹಾಕಿದ ರಮ್ಯ `ಅಂವ ಯಾರು? ನಿಮ್ಮ ಕೆಲಸದ ಬಗ್ಗೆ ಏನೋ ಹೇಳಿದನಲ್ಲ. ನಿಜ ಹೇಳಿ. ನೀವು ಯಾವ ಉದ್ದೇಶದಿಂದ ಈ ಕಡೆಗೆ ಬಂದಿದ್ದೀರಿ? ನಿಮಗೆ ಶತ್ರುಗಳು ಇರಲು ಸಾಧ್ಯವಾ? ಆ ಹುಚ್ಚ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದನಲ್ಲ. ಅದರ ಅರ್ಥ ಏನು? ಏನೋ ಮುಚ್ಚಿಡುತ್ತಿದ್ದೀರಿ.. ಹೇಳೀ..' ಎಂದಳು.
`ಏನು ಇಲ್ಲ ಮಾರಾಯ್ತಿ. ಈ ಮರಗಳ್ಳರ ಬಗ್ಗೆ ಹೇಳಿದ್ದು ಆತ. ದಂಟಕಲ್ಲಿನಲ್ಲಿ ಮರ ಕಡಿಯುತ್ತಿದ್ದ ಒಬ್ಬಾತನ ಸಾವಿಗೆ ನಾವು ಕಾರಣರಾದೆವಲ್ಲ. ಅದಕ್ಕೆ ನಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಮರಗಳ್ಳರು ಸಜ್ಜಾಗಿದ್ದಾರಂತೆ. ಇದನ್ನೇ ಅವನು ಹೇಳಿದ್ದು..' ವಿಕ್ರಮ ಸಮಜಾಯಿಶಿ ನೀಡಿದ.
`ಅವ ಹುಚ್ಚ. ನಿಮ್ಮ ಬಗ್ಗೆ ಅವನಿಗೆ ಗೊತ್ತಿಲ್ಲ. ಅವ ಯಾಕೆ ನಿಮ್ಮ ಬಳಿ ಬಂದು ಹೇಳಬೇಕು? ಅವನಿಗೆ ನಿಮ್ಮ ಬಳಿ ಹೇಳುವುದರಿಂದ ಆಗುವ ಲಾಭ ಏನು?..?' ರಮ್ಯ ಪಟ್ಟು ಬಿಡದೇ ಕೇಳಿದ್ದಳು.
ನಡುವೆ ಬಾಯಿ ಹಾಕಿದ ವಿನಾಯಕ `ನಿಂಗ್ ಗೊತ್ತಾಗ್ತಿಲ್ಲೆ ಸುಮ್ಮಂಗ್ ಕುತ್ಕ ನೋಡನ. ಅಂವ ಹುಚ್ಚ ಇದ್ದಿಕ್ಕು ಅಥವಾ ಹುಚ್ಚ ಅಲ್ಲದೇ ಇದ್ದಿಕ್ಕು. ಮರಗಳ್ಳರ ಪತ್ತೆಗೆ ಸರ್ಕಾರ ಯಾರನ್ನಾದರೂ ನೇಮಕ ಮಾಡಿಕ್ಕು. ಆ ಅಧಿಕಾರಿಯೇ ಈ ರೀತಿ ಮಾರು ವೇಷದಲ್ಲಿ ಓಡಾಟ ನಡೆಸುತ್ತಿರಬಹುದು. ಆತನಿಗೆ ನಮ್ಮೂರಿನಲ್ಲಿ ಮರಗಳ್ಳರ ಮೇಲೆ ಹಲ್ಲೆ ನಡೆದು, ಒಬ್ಬ ಕಳ್ಳ ನಾಟಾ ಸಾಗಣೆದಾರ ಸತ್ತಿರುವ ಬಗ್ಗೆ ಗೊತ್ತಾಗಿರಲಕ್ಕು. ನಮ್ಮ ಬಗ್ಗೆ ಮಾಹಿತಿ ಕಲೆ ಹಾಕಿರಲಕ್ಕು. ಅದಕ್ಕೆಂತಕ್ ಈ ಥರ ತಲೆಕೆಡಿಸ್ಕಳ್ತೆ?' ಎಂದು ದಬಾಯಿಸಿದ. ರಮ್ಯ ಏನೋ ಹೇಳಲು ಮುಂದಾದವಳು ಹಾಗೆಯೇ ಸುಮ್ಮನಾದಳು.
ಪ್ರತಿಯೊಬ್ಬರಲ್ಲೂ ಹಲವಾರು ಪ್ರಶ್ನೆಗಳಿದ್ದವು. ಯಾವುದನ್ನೂ ಕೇಳಿದರೂ ಸ್ಪಷ್ಟ ಉತ್ತರ ಸಿಗುತ್ತದೆ ಎನ್ನುವ ನಿಂಬಿಕೆ ಇಲ್ಲವಾದ್ದರಿಂದ ಪ್ರತಿಯೊಬ್ಬರ ಪ್ರಶ್ನೆಗಳೂ ಬಾಯಿಂದ ಹೊರಗೆ ಬರಲೇ ಇಲ್ಲ. ಪ್ರತಿಯೊಬ್ಬರೂ ಮೌನವಾಗಿಯೇ ಕಾರಿನಲ್ಲಿ ಕುಳಿತಿದ್ದರು. ವಿನಾಯಕ ಮುಂದಕ್ಕೆ ಕಾರನ್ನು ಚಾಲನೆ ಮಾಡಿದ.
ದಾರಿ ಮಧ್ಯದಲ್ಲಿ ಕೆಲ ದಿನಗಳ ಹಿಂದೆ ಮರಗಳ್ಳರಿಗೂ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ ಜಟಾಪಟಿ ನಡೆದ ಸ್ಥಳ ಬಂದಿತು. ಅಲ್ಲೊಂದು ಕಡೆ ನಿರ್ಮಾಣ ಮಾಡಲಾಗಿದ್ದ ಚೆಕ್ ಪೋಸ್ಟ್ ಕಿತ್ತು ಹೋಗಿತ್ತು. ಅದನ್ನು ನೋಡಿಕೊಂಡು ಮುಂದಕ್ಕೆ ನಡೆದರು. ಒಂದಿಬ್ಬರು ಅರಣ್ಯ ಇಲಾಖೆಯ ಕಾವಲುಗಾರರು ಮಿಕಿ ಮಿಕಿ ನೋಡುತ್ತ ನಿಂತಿದ್ದರಷ್ಟೇ. ಮರಳಿ ದಂಟಕಲ್ಲನ್ನು ತಲುಪುವ ವೇಳೆಗೆ ಸೂರ್ಯ ಆಗಲೇ ಬಾನಂಚಿಗೆ ಜಾರಿದ್ದ.

(ಮುಂದುವರಿಯುತ್ತದೆ)

Monday, November 2, 2015

ಅಘನಾಶಿನಿ ಕಣಿವೆಯಲ್ಲಿ -28

              ವಿಕ್ರಮ ಸಧ್ಯದಲ್ಲಿಯೇ ಪ್ರಪೋಸ್ ಮಾಡಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಹೀಗೆ ಉಂಚಳ್ಳಿ ಜಲಪಾತದಲ್ಲಿ ಪ್ರಪೋಸ್ ಮಾಡುತ್ತಾನೆ ಎನ್ನುವುದನ್ನು ವಿಜೇತಾ ನಿರೀಕ್ಷಿಸಿರಲಿಲ್ಲ. ತಕ್ಷಣವೇ ಒಪ್ಪಿಕೊಂಡು ಬಿಡಲಾ ಎಂದು ಆಲೋಚಿಸಿದಳು ವಿಜೇತಾ. ಆದರೆ ವಿಕ್ರಮನನ್ನು ಸ್ವಲ್ಪ ಆಟ ಆಡಿಸೋಣ, ತಕ್ಷಣಕ್ಕೆ ಒಪ್ಪಿಕೊಳ್ಳಬಾರದು ಎಂದುಕೊಂಡಳು. `ನೀನು ನನ್ನ ಲವ್ ಮಾಡ್ತಾ ಇದ್ಯಾ? ಜೋಕ್ ಮಾಡ್ತಾ ಇದ್ದೀಯಾ ಅಥವಾ ತಮಾಷೆಯಾ?' ಎಂದು ಕೇಳಿದಳು ವಿಜೇತಾ.
            `ತಮಾಷೆಯಲ್ಲ. ಇದು ನಿಜ. ಬೇಗ ಹೇಳು ಪ್ಲೀಸ್. ಏನೇ ಇರಲಿ, ನಿನ್ನ ನಿರ್ಧಾರ ತಕ್ಷಣ ತಿಳಿಸು..' ವಿಕ್ರಮ ಗೋಗರೆಯುವ ರೀತಿಯಲ್ಲಿ ಹೇಳಿದ.
             `ನಿಜವಾಗಿಯೂ ನನಗೆ ಆಶ್ಚರ್ಯ ಆಗ್ತಾ ಇದ್ದು ನೋಡು. ಖಂಡಿತ ನೀನು ಈ ರೀತಿ ಆಲೋಚನೆ ಮಾಡ್ತೀಯಾ ಅಂತ ಅಂದ್ಕೊಂಡಿರ್ಲಿಲ್ಲ..'
             `ಅಂದರೆ.. ನಿಂಗೆ ಇಷ್ಟ ಇಲ್ಲವಾ..?' ಎಂದು ಕೇಳಿದ ವಿಕ್ರಮ ಧ್ವನಿಯಲ್ಲಿ ನಿರಾಸೆಯ ಪದರವಿತ್ತು.
            `ಉಹೂಂ. ಇಷ್ಟವಿಲ್ಲ ಅಂತ ಹೇಳಲಾರೆ. ಹಾಗಂತ ಹೂ ಅನ್ನೋದಕ್ಕೂ ಆಗ್ತಾ ಇಲ್ಲ. ಸ್ವಲ್ಪ ಗೊಂದಲ. ನನಗೆ ಆಲೋಚನೆ ಮಾಡೋಕೆ ಸ್ವಲ್ಪ ಟೈಂ ಬೇಕು. ಇನ್ನೊಂದೆರಡು, ಮೂರು ದಿನಗಳಲ್ಲಿ ಹೇಳಲಾ?' ಕೇಳಿದಳು ವಿಜೇತಾ.
           `ಹೂಂ. ಆದರೆ ಬೇಗ ಹೇಳು ಪ್ಲೀಸ್. ಕಾಯುವಿಕೆ ಕಷ್ಟ..' ಎಂದವನು ಪೂರ್ತಿಯಾಗಿ ಶರಣಾದನೋ ಎಂಬಂತಿದ್ದ.
            ಅಷ್ಟರಲ್ಲಿ ಜಲಪಾತದ ಬುಡದ ಗುಂಡಿಯಲ್ಲಿ ಈಸು ಬಿದ್ದಿದ್ದ ವಿನಾಯಕ ಮೇಲಕ್ಕೆ ಬಂದು ವಿಕ್ರಮನ ಬಳಿ `ಏನಪ್ಪಾ.. ಏನ್ ವಿಷ್ಯ. ಹೇಳಿದ್ಯಾ? ಹಣ್ಣೋ.. ಕಾಯೋ..' ಎಂದ.
             ವಿಜೇತಾಳಿಗೆ ಒಮ್ಮೆಲೆ ಅಚ್ಚರಿ. ಅರೇ ಈ ವಿಷ್ಯ ಎಲ್ಲರಿಗೂ ಗೊತ್ತಿದೆಯಲ್ಲ. ನನಗೆ ಮಾತ್ರ ಗೊತ್ತಿರಲಿಲ್ಲ. ಅನುಮಾನ ಇತ್ತಾದರೂ ಎಲ್ಲರಿಗೂ ಗೊತ್ತಾಗಿರಬಹುದು ಎಂದುಕೊಂಡಿರಲಿಲ್ಲವಲ್ಲ ಎಂದುಕೊಂಡಳು. `ಯಾಕಪ್ಪಾ.. ಏನಾಯ್ತು.. ಸಪ್ಪಗಿದ್ದೀಯಾ..' ವಿನಾಯಕ ವಿಕ್ರಮನನ್ನು ಛೇಡಿಸಿದ.
            `ನಾನು ಹೇಳೋದನ್ನೆಲ್ಲ ಹೇಳಿದ್ದಿ ನೋಡಿ ವಿನು. ಸ್ವಲ್ಪ ಟೈಂ ಬೇಕು ಅಂತ ಹೇಳಿದ್ದು. ಇಷ್ಟು ದಿನ ಕಾದು ಕುಳಿತಿದ್ದಿ. ಇನ್ನೊಂದೆರಡು ದಿನ ಕಾಯೋದು ಕಷ್ಟವಾ?..' ವಿಕ್ರಮ ಹೇಳಿದ. ನಾಚಿದ ವಿಜೇತಾ ದೂರದಲ್ಲಿ ನೀರಾಟವಾಡುತ್ತಿದ್ದ ರಮ್ಯಳ ಬಳಿ ಹೋಗಿ ಕುಳಿತುಕೊಂಡಳು.
            ಪ್ರದೀಪ, ವಿಷ್ಣು ಕೂಡ ಈಸು ಬಿದ್ದವರು ಮೇಲೆದ್ದು ಬಂದು ಬಿಸಿಲಿಗೆ ಮೈಯೊಡ್ಡಿ ನಿಂತರು. ವಿಕ್ರಮ ಹಾಗೂ ವಿನಾಯಕ ಇಬ್ಬರೂ ಮಾತನಾಡುತ್ತಲೇ ಉಂಚಳ್ಳಿ ಜಲಪಾತದ ಛಾಯಾಚಿತ್ರಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಆರಂಭಿಸಿದರು.
ಜಲಪಾತದ ಇತಿಹಾಸವೂ ವಿಶಿಷ್ಟವಾಗಿದೆ. ಜಲಪಾತವನ್ನು ಬ್ರಿಟೀಷ್ ಅಧಿಕಾರಿ ಜಾರ್ಜ್ ಲೂಷಿಂಗ್ ಟನ್ ಎಂಬಾತ ಪತ್ತೆ ಹಚ್ಚಿದ ಕಾರಣಕ್ಕಾಗಿ ಲೂಷಿಂಗ್ ಟನ್ ಜಲಪಾತ ಎನ್ನುವ ಹೆಸರನ್ನೂ ಪಡೆದುಕೊಂಡಿದೆ. ಪಶ್ಚಿಮ ಘಟ್ಟದ ತುದಿಯಿಂದ ಕರಾವಳಿಯತ್ತ ಓಡುವ ನದಿ ಭೊರ್ಗರೆಯುತ್ತ ಇಳಿಯುವುದನ್ನು ನೋಡುವುದೇ ಚಂದ. ಈ ಸಂದರ್ಭದಲ್ಲಿ ಉಂಟಾಗುವ ಸಪ್ಪಳಕ್ಕೆ ಕಿವಿ ಕಿವುಡಾಗುವಂತಾಗುತ್ತದೆ. ಈ ಕಾರಣದಿಂದಲೇ ಇದನ್ನು ಕೆಪ್ಪ ಜೋಗ ಎಂದೂ ಕರೆಯಲಾಗುತ್ತದೆ. ಪ್ರತಿ ವರ್ಷ ಮಳೆಗಾಲದಲ್ಲಿ ಜಲಪಾತ ಚೈತನ್ಯದಿಂದ ಮನಸೆಳೆಯುತ್ತದೆ.
               ಬೋರ್ಘರೆಯುವ ನದಿ ಮಾಡುವ ಸಪ್ಪಳ ಮೂರ್ನಾಲ್ಕು ಕಿ.ಮಿ ದೂರದ ವರೆಗೂ ಕೇಳುತ್ತದೆ. ಗೋಕರ್ಣದ ಆತ್ಮಲಿಂಗದ ಆಕಾರದಲ್ಲಿ ಕಣಿವೆಯಾಳಕ್ಕಿಳಿಯುವ ಜಲಪಾತದ ಚಿತ್ರಣ ಮೈಮನಸ್ಸನ್ನು ಆವರಿಸುತ್ತದೆ. ಜಲಪಾತದ ಎರಡೂ ಕಡೆಗಳಲ್ಲಿರುವ ದೈತ್ಯ ಘಟ್ಟಗಳು, ಬಾನೆತ್ತರಕ್ಕೆ ಚಾಚಿ ನಿಂತ ಮರಗಳು ಜಲಪಾತಕ್ಕೆ ಶೋಭೆಯನ್ನು ನೀಡುತ್ತವೆ. ದಟ್ಟಕಾನನದ ನಡುವೆ ಸೌಂದರ್ಯದ ಖನಿಯಾಗಿ ಬೆಡಗು ಮೂಡಿಸುತ್ತಿರುವ ಜಲಪಾತಕ್ಕೆ ಪ್ರವಾಸಿಗರು ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬೆಂಗಳೂರು, ಮಂಡ್ಯ, ಹಾಸನ, ಕೋಲಾರ, ಮೈಸೂರು, ಚಿಕ್ಕಮಗಳೂರು, ಬಿಜಾಪುರ, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಮಹಾರಾಷ್ಟ್ರದ ರತ್ನಗಿರಿ, ಕೊಲ್ಲಾಪುರ, ಪೂಣಾ ಹೀಗೆ ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು ಜಲಪಾತದ ವೀಕ್ಷಣೆಗೆ ಆಗಮಿಸುತ್ತಾರೆ. ವಿಕ್ರಮ ಹಾಗೂ ಗೆಳೆಯರು ಜಲಪಾತ ನೋಡಲು ಹೋಗಿದ್ದಾಗ ಮಾತ್ರ ಸಾಕಷ್ಟು ಜನರಿರಲಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಇದ್ದರು ಅಷ್ಟೇ.
              `ಹಸಿವಾಗ್ತಾ ಇದೆ. ಕಟ್ಟಿಸಿಕೊಂಡು ಬಂದಿರುವ ಫಲಾವ್ ನ ಎಲ್ಲಾ ತೆಗಿರಿ..' ಎಂದು ರಮ್ಯ ಕೂಗಿದವಳೇ ದೊಡ್ಡದೊಂದು ಬಂಡೆಯ ಮೇಲೆ ಏರಿ ತಿಂಡಿ ತಿನ್ನಲು ತಯಾರಾಗಿಬಿಟ್ಟಳು. ಉಳಿದವರಿಗೂ ಅದೇ ಸರಿ ಎನ್ನಿಸಿ ರಮ್ಯಳನ್ನು ಹಿಂಬಾಲಿಸಿದರು. ಮದ್ಯಾಹ್ನದ ವೇಳೆಗೆಲ್ಲಾ ಉಂಚಳ್ಳಿ ಜಲಪಾತವನ್ನು ವೀಕ್ಷಣೆ ಮಾಡಿ, ಆ ಭಾಗದಲ್ಲಿ ಸಂಚಾರ ಮಾಡಿದವರು ಮದ್ಯಾಹ್ನದ ನಂತರ ಜಲಪಾತದ ಬುಡದಿಂದ ಮೇಲಕ್ಕೆ ಬಂದರು. ಅಷ್ಟರಲ್ಲಿ ಜಲಪಾತದ ವೀಕ್ಷಣಾ ಗೋಪುರದಲ್ಲಿ ಚಿಕ್ಕದೊಂದು ಗಲಾಟೆಯೆ ನಡೆದಿತ್ತು.
              ಮಾನಸಿಕ ಅಸ್ವಸ್ತ ವ್ಯಕ್ತಿಯೊಬ್ಬ ಆ ಭಾಗದಲ್ಲಿ ಕೆಲ ದಿವಸಗಳಿಂದ ಓಡಾಡುತ್ತಿದ್ದ. ಉಂಚಳ್ಳಿ ಜಲಪಾತದ ಭಾಗದಲ್ಲಿ ಓಡಾಟ ಮಾಡುತ್ತಿದ್ದ ವ್ಯಕ್ತಿ ಅಲ್ಲಿಗೆ ಆಗಮಿಸುವ ಪ್ರವಾಸಿಗರ ಬಳಿ ಊಟ, ತಿಂಡಿಯನ್ನು ಪಡೆದುಕೊಂಡಿದ್ದ. ಕೆಲ ದಿನಗಳ ಕಾಲ ಸುಮ್ಮನೆ ಇದ್ದ ಆ ವ್ಯಕ್ತಿ ನಂತರದ ದಿನಗಳಲ್ಲಿ ಅಲ್ಲಿಗೆ ಆಗಮಿಸುವ ಪ್ರವಾಸಿಗರನ್ನು ಕೆಕ್ಕರಿಸಿ ನೋಡುವುದು, ತೊಂದರೆ ಕೊಡುವುದು ಈ ಮುಂತಾದ ಕೆಲಸಗಳನ್ನು ಮಾಡಲು ಆರಂಭಿಸಿದ. ಇದರಿಂದ ಪ್ರವಾಸಿಗರು ಬೇಸತ್ತಿದ್ದರು. ಸ್ಥಳೀಯರಿಗೆ ಈ ಕುರಿತು ಹೇಳಲಾಗಿ ಒಂದೆರಡು ಸಾರಿ ಮಾನಸಿಕ ಅಸ್ವಸ್ತ ವ್ಯಕ್ತಿಯನ್ನು ಪಕ್ಕದೂರಿಗೆ ಗಡಿಪಾರು ಮಾಡಿ ಬಂದಿದ್ದರು. ಆದರೆ ಹೀಗೆ ಗಡಿಪಾರು ಮಾಡಿ ಬಂದ ಒಂದೆರಡು ದಿನಗಳ ಒಳಗಾಗಿ ಆ ವ್ಯಕ್ತಿ ಮತ್ತೆ ಅಲ್ಲಿ ಪ್ರತ್ಯಕ್ಷನಾಗುತ್ತಿದ್ದ.
          ಮೂರ್ನಾಲ್ಕು ಸಾರಿ ಈ ರೀತಿ ನಡೆದ ನಂತರ ಆ ವ್ಯಕ್ತಿ ಜಲಪಾತ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರೊಬ್ಬರ ಜೊತೆ ಅಸಹ್ಯವಾಗಿ ವರ್ತನೆ ಮಾಡಿದ್ದ. ಇದರಿಂದ ಸಿಟ್ಟಿಗೆದ್ದ ಪ್ರವಾಸಿಗರು ಆತನ ಮೇಲೆ ಹಲ್ಲೆ ಮಾಡಿದ್ದರು. ಪರಿಣಾಮವಾಗಿ ಗಲಾಟೆ ನಡೆದಿತ್ತು. ಮಾನಸಿಕ ಅಸ್ವಸ್ತ ವ್ಯಕ್ತಿ ಹೊಡೆತ ತಾಳಲಾಗದೇ ಕೂಗಾಡುತ್ತಿದ್ದ. ಜೊತೆ ಜೊತೆಯಲ್ಲಿಯೇ ಅವಾಚ್ಯ ಶಬ್ದಗಳಿಂದ ನಿಂದನೆಯನ್ನೂ ಮಾಡುತ್ತಿದ್ದ. ಇದನ್ನು ನೋಡಿದ ಪ್ರದೀಪ ಗಲಾಟೆಯನ್ನು ಬಿಡಿಸಲು ಮುಂದಾದ. ಸಿಟ್ಟಿಗೆದ್ದವರನ್ನು ಸಮಾಧಾನ ಮಾಡಿದ. ಅಷ್ಟೇ ಅಲ್ಲದೇ ಹುಚ್ಚನನ್ನು ಹಿಡಿದುಕೊಂಡು ಬಂದ. ಬಂದವನೇ ಅವನನ್ನು ವಿಕ್ರಮನ ಕಾರಿನಲ್ಲಿ ಕೂರಿಸಿದ.
           ವಿಕ್ರಮನಿಗೆ ಇದು ಅಸಹ್ಯ ಎನ್ನಿಸಿತು. ಯಾರೋ ಹುಚ್ಚನನ್ನು ತಂದು ಗಾಡಿಯಲ್ಲಿ ಕೂರಿಸಿದನಲ್ಲ ಎನ್ನಿಸಿತು. ಸಿಟ್ಟಿನಿಂದ ಪ್ರದೀಪನ ಬಳಿ ಕೂಗಾಡಲು ಆರಂಭಿಸಿದ. `ಇದೆಂತ ಹುಚ್ಚಾಟ ನಿಂದು? ಅವನನ್ನು ಗಾಡಿಯಲ್ಲಿ ಹತ್ತಿಸಿದ್ದು. ಛೇ. ಮೊದ್ಲು ಇಳಿಸು..' ಎಂದ.
            `ಇಲ್ಲ ಮಾರಾಯಾ.. ಅವನನ್ನು ಬೇರೆ ಎಲ್ಲಾದರೂ ಕರೆದುಕೊಂಡು ಹೋಗಿ ಬಿಡೋಣ. ಅಥವಾ ಯಾವುದಾದರೂ ಮಾನಸಿಕ ತಜ್ಞರ ಬಳಿ ಕರೆದುಕೊಂಡು ಹೋಗಿ ಬಿಡೋಣ. ಇಲ್ಲಿದ್ದರೆ ಅವನನ್ನು ಹೊಡೆದು ಕೊಂದೇ ಬಿಡುತ್ತಾರೆ. ಸರಿಯಲ್ಲ ಅದು. ಮಾನವೀಯತೆಯೂ ಅಲ್ಲ. ಮೊದಲು ಬೇರೆ ಎಲ್ಲಾದರೂ ಬಿಡೋಣ.. ನಡಿ. ಗಾಡಿ ಚಾಲೂ ಮಾಡು..' ಎಂದ.
              ಅಸಮಧಾನದಿಂದಲೇ ವಿಕ್ರಮ ಗಾಡಿಯನ್ನು ಚಾಲೂ ಮಾಡಿದ. ಗೊಣಗುತ್ತಲೇ ಉಳಿದವರೂ ಹತ್ತಿಕೊಂಡರು. ಉಂಚಳ್ಳಿ ಜಲಪಾತದಿಂದ ಅಂಕುಡೊಂಕಿನ ಹಾದಿಯಲ್ಲಿ ಮರಳಲು ಆರಂಭಿಸಿದರು. `ಏ.. ಏನ್ರೋ.. ನಿಮಗೆ ಮಾಡಲಿಕ್ಕೆ ಬೇರೆ ಕೆಲ್ಸಾ ಇಲ್ಲವಾ? ಹೋಗಿ ಹೋಗಿ ಈ ಕಾಡಿಗೆ ಬಂದು ಕಳ್ಳರನ್ನು ಹುಡುಕಲು ಹೊರಟಿದ್ದೀರಾ? ತಲೆ ಸರಿ ಉಂಟಾ? ಎಚ್ಚರ ತಪ್ಪಿದರೆ ಮರಗಳ್ಳರ ಗುಂಪು ನಿಮ್ಮನ್ನು ಕಡಿದು ಹಾಕಿ ಬಿಡಬಹುದು. ಹುಷಾರು..' ಎಂದು ಇದ್ದಕ್ಕಿದ್ದಂತೆ ಆ ಹುಚ್ಚ ಮಾತನಾಡಿದಾಗ ಒಮ್ಮೆಗೆ ಕಾರಲ್ಲಿದ್ದವರು ಬೆಚ್ಚಿ ಬಿದ್ದರು.

(ಮುಂದುವರಿಯುತ್ತದೆ..)

Thursday, October 29, 2015

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ -3

           ಆಟೋದಲ್ಲಿ ಲಗೆಜ್ ಹೇರುವ ಜಾಗದಲ್ಲಿ ನಾನು ಕುಳಿತಿದ್ದೆ. ಉಸಿರು ಕಟ್ಟುತ್ತಿತ್ತು. ಆಟೋ ಓಡಿಸುತ್ತಿದ್ದ ಚಾಲಕನ ಬಳಿ ಸಂಜಯ ಮಾತಿಗೆ ನಿಂತಿದ್ದ. ಸಜ್ಜನಘಡಕ್ಕೆ ಹೋಗುವುದು ಹೇಗೆ ಎಂಬ ವಿವರಗಳನ್ನು ಕೇಳಲು ಆರಂಭಿಸಿದ್ದ. ಸಜ್ಜನಘಡಕ್ಕೆ ಬಸ್ ವ್ಯವಸ್ಥೆ ಬಹಳ ಕಡಿಮೆ ಇದೆಯೆಂದೂ, ಯಾವುದಾದರೂ ಖಾಸಗಿ ವಾಹನಗಳನ್ನು ಮಾಡಿಕೊಂಡು ಹೋಗಬಹುದೆಂದೂ ಆಟೋ ಚಾಲಕ ತಿಳಿಸಿದ. ಮಾತಿಗಿಳಿದಿದ್ದ ಸಂಜಯ ಆತನ ಹೆಸರು ನೀಲೇಶ ಮಂತ್ರಿ ಎಂಬುದನ್ನು ಕೇಳಿ ತಿಳಿದುಕೊಂಡ. ಸಂಜಯ ಆಟೋವನ್ನು ಮಾಡಿಸಿಕೊಂಡು ಹೋದರೆ ಹೇಗೆ ಎನ್ನುವ ಬಗ್ಗೆ ಪ್ರಶಾಂತ ಭಾವನ ಬಳಿ ಕೇಳಿದ. ರೇಟು ಎಷ್ಟಾಗಬಹುದು ಎನ್ನುವ ಚರ್ಚೆ ನಡೆಯಲಾಗಿ ಕೊನೆಗೊಮ್ಮೆ ಆಟೋ ಮಾಡಿಸಿಕೊಂಡು ಹೋಗೋಣ ಎಂದು ಎಲ್ಲರೂ ಒಪ್ಪಿಕೊಂಡರು. 600 ರು. ಗೆ ಮಾತಾಯಿತು.
          ಸತಾರಾ ನಗರಕ್ಕೆ ಬಂದು ಆಟೋ ನಿಲ್ಲಿಸಿ, ಆಟೋದಲ್ಲಿದ್ದ ಎಲ್ಲರನ್ನೂ ಇಳಿಸಿದ ಆಟೋ ದ್ರೈವರ್ ನಮ್ಮನ್ನು ಕೂರಿಸಿಕೊಂಡು ಪೆಟ್ರೂಲ್ ಬಂಕಿನತ್ತ ಸಾಗಿದ. ಬಂಕಿನಲ್ಲಿ ಪೆಟ್ರೂಲ್ ತುಂಬಿಸಿಕೊಂಡವನೇ ನಮ್ಮ ಬಳಿ ದುಡ್ಡು ಕೇಳಿದಾಗ ಒಮ್ಮೆಲೆ ನಮಗೆ ಪಿಗ್ಗಿ ಬಿದ್ದೆವೇನೋ ಅನ್ನುವ ಅನುಮಾನ. ಆದರೆ ಆತನ ಆಟೋವನ್ನು ನಾವು ಇಳಿಯುವ ಕೆಲಸ ಮಾತ್ರ ಮಾಡಲಿಲ್ಲ. ಹಾಗಾಗಿ ಎಲ್ಲೋಗ್ತಾನೆ ನೋಡೋಣ ಎನ್ನುವ ಧೈರ್ಯ ನಮ್ಮಲ್ಲಿ ಮೂಡಿತು.
           ಬೆಳಗಿನ ಜಾವ 5 ಗಂಟೆ ಆಗಿದ್ದ ಕಾರಣ ಸತಾರಾದಲ್ಲಿ ಯಾವುದೇ ಪೆಟ್ರೋಲ್ ಬಂಕುಗಳು ಬಾಗಿಲು ತೆರೆದಿರಲಿಲ್ಲ. ಸತಾರಾ ನಗರಿಯಲ್ಲಿ ಒಂದೆರಡು ಕಡೆಗಳಲ್ಲಿ ಸುತ್ತಾಡಿಸಿದ ಆಟೋ ಡ್ರೈವರ್. ಆಮೇಲೆ ಮಾತು ಶುರು ಮಾಡಿದ ನೋಡಿ. ಇನ್ನು ಸಜ್ಜನಘಡಕ್ಕೆ ಹೋಗುವ ವರೆಗೆ ಅವನ ಬಾಯಲ್ಲಿನ ವಿಷಯವನ್ನೇ ಹೇಳುತ್ತೇನೆ.
          `ಇದು ನೋಡಿ ಸತಾರಾದ ಕ್ರಿಕೆಟ್ ಸ್ಟೇಡಿಯಂ. ಇಲ್ಲಿ ರಣಜಿ ಪಂದ್ಯಗಳು ಜಾಸ್ತಿ ನಡೆಯುತ್ತವೆ.'
          `ಈ ಸತಾರಾ ಇದೆಯಲ್ಲ, ಮಹಾರಾಷ್ಟ್ರದ ದೊಡ್ಡ ಜಿಲ್ಲೆಗಳಲ್ಲಿ ಇದೂ ಒಂದು. ಎಲ್ಲ ಸೌಲಭ್ಯಗಳೂ ಇಲ್ಲಿದೆ. ಸತಾರಾದ ಸುತ್ತಮುತ್ತ ಒಟ್ಟೂ ಏಳು ದೊಡ್ಡ ದೊಡ್ಡ ಬೆಟ್ಟಗಳಿವೆ. ಇವನ್ನು ತಾರಾ ಎಂದು ಕರೆಯುತ್ತಾರೆ. ಏಳು ನಕ್ಷತ್ರಗಳಿರುವ ಈ ಊರಗೆ ಒಂದಾನೊಂದು ಕಾಲದಲ್ಲಿ ಸಾತ್ ತಾರಾ ಎಂದು ಕರೆಯುತ್ತಿದ್ದರಂತೆ. ಇದೇ ಈಗ ಸತಾರಾ ಆಗಿದೆ. ಇದೋ ನೋಡಿ, ಈಗ ಸರಿಯಾಗಿ ಕಾಣುವುದಿಲ್ಲ. ಪೂರ್ತಿ ಬೆಳಕಾಗಲಿ. ಇಲ್ಲೊಂದು ದೈತ್ಯ ಗುಡ್ಡವಿದೆ. ಗುಡ್ಡದ ಮೇಲೊಂದು ಕೋಟೆ. ಅದನ್ನು ಅಜಿಂಕ್ಯತಾರಾ ಎಂದು ಕರೆಯಲಾಗುತ್ತದೆ. ಈ ಸುತ್ತಮುತ್ತಲ ಪ್ರದೇಶಗಳೆಲ್ಲ ಹಿಂದೂ ಸಾಮ್ರಾಟ ಶಿವಾಜಿ ಓಡಾಡಿದ ನಾಡು. ಇಲ್ಲೆಲ್ಲ ಶಿವಾಜಿಯ ಖುರಪುಟದ ಸದ್ದುಗಳಿವೆ..' ಎಂದು ಆಟೋ ಡ್ರೈವರ್ ಹಿಂದಿ ಹಾಗೂ ಮರಾಠಿ ಮಿಶ್ರಿತ ಭಾಷೆಯಲ್ಲಿ ಹೇಳುತ್ತಲೇ ಇದ್ದ. ನಾವು ಮೌನವಾಗಿ ಕೇಳುತ್ತಿದ್ದರೂ ಮಧ್ಯಮದ್ಯದಲ್ಲಿ, ಗೊಂದಲ ಬಗೆಹರಿಸಿಕೊಳ್ಳುತ್ತಿದ್ದೆವು.
            ಸತಾರಾದ ಬಾನಿನಲ್ಲೀ ಸೂರ್ಯ ಇನ್ನೂ ಹುಟ್ಟಿರಲಿಲ್ಲ. ಮೋಡಗಳು ಸಾಕಷ್ಟು ದಟ್ಟೈಸಿದ್ದರೂ ಮಳೆ ಸುರಿಯುವ ಲಕ್ಷಣಗಳಿರಲಿಲ್ಲ. ಗುಡ್ಡ ಹತ್ತಿ, ಇಳಿದು ಆಟೋ ಸಾಗುತ್ತಲೇ ಇತ್ತು. ಇದ್ದಕ್ಕಿದ್ದಂತೆ ಸುರಂಗವೊಂದು ನಮ್ಮೆದುರು ಕಾಣಿಸಿತು. ಹಾದು ಹೋಗುತ್ತಿದ್ದಂತೆಯೇ ಆಟೋ ಡ್ರೈವರ್ ಬೆಳ್ಳಂಬೆಳಿಗ್ಗೆ ನನಗೆ ಸಮರ್ಥ ರಾಮದಾಸರನ್ನು ದರ್ಶನ ಮಾಡುವ ಭಾಗ್ಯವನ್ನು ನೀವು ಕರುಣಿಸಿದ್ದೀರಿ. ಪ್ರತಿದಿನ 4 ಗಂಟೆಗೆ ಎದ್ದು ನಾನು ಬಾಡಿಗೆ ಹೊಡೆಯಲು ಆರಂಭಿಸುತ್ತೇನೆ. ಆದರೆ ಅಪರೂಪಕ್ಕೆ ಮಾತ್ರ ಇಂತಹ ಅವಕಾಶ ನಮಗೆ ಲಭ್ಯವಾಗುತ್ತದೆ. ನಾನು ಇವತ್ತು ಧನ್ಯನಾಗಿದ್ದೇನೆ. ನಿಮ್ಮಬಳಿ ತಲಾ 50 ರು. ನಂತೆ ಜಾಸ್ತಿ ಪಡೆದುಕೊಂಡಿದ್ದೆನೆ ಎನ್ನುವುದು ನನಗೆ ಗೊತ್ತಿದೆ. ಆದರೆ ಇದು ಅನಿವಾರ್ಯ. ನಾನು ಈ ಕಾರಣದಿಂದಾಗಿ ನಿಮಗೆ ಒಂದು ತೋಫಾ ಕೊಡಲು ಇಷ್ಟ ಪಡುತ್ತೇನೆ..' ಎಂದ ಆಟೋ ಡ್ರೈವರ್.
            ಸೀದಾ ಚಹಾ ಅಂಗಡಿಯೊಂದರ ಬಳಿ ನಿಲ್ಲಿಸಿದ ಆತ. ನಿಲ್ಲಿಸಿದವನೇ ಪ್ರತಿಯೊಬ್ಬರಿಗೂ ಬಿಸ್ಸಿ ಬಿಸಿ ಚಹಾ ಆರ್ಡರ್ ಮಾಡಿದ. ಬೆಲ್ಲದ ಚಹ ಬಹಳ ಹಿತವಾಗಿತ್ತು. ಆಟೋದಿಂದ ಆಳಿಸಿದವನೇ ಒಮ್ಮೆ ಹಿಂತಿರುಗಿ ನೋಡಿ ಎಂದ. ನೋಡಿದೆವು. ಆಹ್, ಎಂತ ಸುಂದರ ದೃಶ್ಯ ಅದು. ದೊಡ್ಡದೊಂದು ಸುರಂಗ. ಸುರಂಗದ ನಡುವೆ ಕಾಣುತ್ತಿದ್ದ ಸತಾರಾದ ಮನೆ ಮನೆಗಳು. ಮನೆಮನೆಗಳಲ್ಲಿ ಬೆಳಗಿಸಿದ್ದ ವಿದ್ಯುತ್ ದೀಪಗಳು. ಅದೆಂತಹ ಆಕರ್ಷಕ. ಅದೆಂತಹ ಸೊಬಗು. ನಾವೆಲ್ಲ ಅದೆಷ್ಟು ಪೋಟೋಗಳನ್ನು ತೆಗೆಸಿಕೊಂಡೆವೋ. ಚಹಾ ಕುಡಿದಾದ ನಂತರ ಮತ್ತೆ ನಮ್ಮ ಪಯಣ ಸಾಗಿತು.
            `ನಮ್ಮವರೂ ಇದ್ದಾರೆ ಅದೆಲ್ಲೋ ದೂರ ದೂರದ ಸ್ಥಳಗಳಂತೆ, ಅಲ್ಲೆಲ್ಲಿಗೋ ಹೋಗುತ್ತಾರಂತೆ. ಆದರೆ ನೀವು ನೋಡಿ ದೂರದ ಕರ್ನಾಟಕದಿಂದ ನಮ್ಮ ಪ್ರದೇಶ ಅದರಲ್ಲೂ  ಮುಖ್ಯವಾಗಿ ಸ್ವಾಮಿ ಸಮರ್ಥರು ನಡೆದಾಡಿದ ಸ್ಥಳವನ್ನು ನೋಡಲು ಬಂದಿದ್ದೀರಿ. ನಮ್ಮವರಿಗೆ ಇದು ಗೊತ್ತೇ ಇಲ್ಲ. ಸ್ವಾಮಿ ಸಮರ್ಥರಾಮದಾಸರ ಸ್ಥಳದ ಬಗ್ಗೆ ಯಾರೂ ಗಮನ ಕೊಡುವುದೇ ಇಲ್ಲ. ನಮ್ಮವರಿಗೆ ನಮ್ಮದರ ಬಗ್ಗೆ ಅಸಡ್ಡೆ. ಆದರೆ ನಿಮ್ಮನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತಿದೆ. ನಿಜಕ್ಕೂ ನೀವು ಪುಣ್ಯಪುರುಷರು. ನಿಮಗೆ ನಮಸ್ಕಾರಗಳನ್ನು ತಿಳಿಸಲೇಬೇಕು. ನೀವು ಅಲ್ಲಿಂದ ಬಂದಿದ್ದೀರಿ. ಬೆಳ್ಳಂಬೆಳಿಗ್ಗೆ ದೇಗುಲ ದರ್ಶನಕ್ಕೆ ಕಾರಣರಾಗುತ್ತಿದ್ದೀರಿ. ನಿಮಗೆ ನಾನೊಂದು ವ್ಯೂ ಪಾಯಿಂಟನ್ನು ತೋರಿಸುತ್ತೇನೆ. ಇದು ನನ್ನ ಇನ್ನೊಂದು ತೋಫಾ..' ಎಂದು ಆಟೋ ಡ್ರೈವರ್ ಮಾತನಾಡುತ್ತಲೇ ಇದ್ದ.
            ನಾವು ಅಷ್ಟರಲ್ಲಿ ಮಹಾಭಲೇಶ್ವರ, ರಾಯಘಡದ ಬಗ್ಗೆ ಕೇಳಿದೆವು. `ಮಹಾಭಲೇಶ್ವರದಲ್ಲೇನಿದೆ ಮಣ್ಣು. ನಿಜ. ಅಲ್ಲಿ ನೋಡುವಂತದ್ದು ಸಾಕಷ್ಟಿದೆ. ಆದರೆ ಎಲ್ಲವೂ ದುಬಾರಿ. ಆದರೆ ಸತಾರಾದಲ್ಲಿ ಹಾಗಲ್ಲ. ಸಜ್ಜನಘಡದಲ್ಲಂತೂ ಎಲ್ಲವೂ ಫ್ರಿ. ಊಟ, ವಸತಿ ಎಲ್ಲವೂ ಕೊಡುತ್ತಾರೆ. ಮಹಾಭಲೇಶ್ವರ ನೋಡುವುದು ಬೇಡ. ಸುಮ್ಮನೆ ನಿಮಗೆ ದುಡ್ಡು ಜಾಸ್ತಿಯಾಗಿದ್ದರೆ ಹೋಗಿ ಬನ್ನಿ ಅಷ್ಟೆ. ರಾಯಘಡವನ್ನು ನೋಡಬಹುದು. ಶಿವಾಜಿ ಮಹಾರಾಜರ ರಾಜಧಾನಿ ಅದು. ಚನ್ನಾಗಿದೆ ಎಂದು ಆತ ಉತ್ತರಿಸಿದ್ದ. ಆತನ ಉತ್ತರ ಕೇಳಿದ ನಾವು ರಾಯಘಡ ಹಾಗೂ ಮಹಾಭಲೇಶ್ವರವನ್ನು ನೋಡಿ ಬರುವ ಆಲೋಚನೆಯನ್ನು ಕೈಬಿಟ್ಟೆವು.
           ಶಿವಾಜಿ ಮಹಾರಾಜರು ಆರಂಭದಲ್ಲಿ ರಾಯಘಡವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರಂತೆ. ಆ ನಂತರ ಅವರಿಗೆ ಸಜ್ಜನಘಡದಲ್ಲಿ ಸ್ವಾಮಿ ಸಮರ್ಥ ರಾಮದಾಸರು ಇರುವ ಬಗ್ಗೆ ಮಾಹಿತಿ ಸಿಕ್ಕಿತಂತೆ. ರಾಮದಾಸರನ್ನು ಭೇಟಿಯಾಗಬೇಕು ಎಂದು ಶಿವಾಜಿ ಮಹಾರಾಜ್ ಕುದುರೆಯನ್ನೇರಿ ಬಂದರಂತೆ. ಸಿಟ್ಟು ಹಾಗೂ ಅಹಂಕಾರದಿಂದ ಸಜ್ಜನಘಡವನ್ನು ಏರಿ ಬಂದ ಸಂದರ್ಭದಲ್ಲಿ ಸಮರ್ಥ ರಾಮದಾಸರು ಧ್ಯಾನ ಹಾಗೂ ಪೂಜೆಯಲ್ಲಿ ನಿರತರಾಗಿದ್ದರಂತೆ. ಶಿವಾಜಿ ಬಂದು ಸಮರ್ಥ ರಾಮದಾಸರ ಎದುರು ಗತ್ತಿನಿಂದ ಕುಳಿತರಂತೆ. ಆದರೆ ರಾಮದಾಸರು ಅದನ್ನು ಗಮನಿಸಿಯೂ ಗಮನಿಸದಂತೆ ಉಳಿದರಂತೆ. ಕೊನೆಗೆ ಶಿವಾಜಿ ನಮಸ್ಕಾರ ಮಾಡಿ ಆಶಿರ್ವಾದ ಬೇಡಿದರಂತೆ. ಕೊನೆಗೆ ಸಮರ್ಥ ರಾಮದಾಸರು ಅತ್ಯಂತ ಮಿದುವಾದ ಕಲ್ಲನ್ನು ಹೊತ್ತುಕೊಂಡು ಬಾ. ಹುಡುಕಿ ತಾ. ಆಗ ಆಶಿರ್ವಾದ ಮಾಡುತ್ತೇನೆ. ಹಿಂದೂ ಸಾಮ್ರಾಟನಾಗುತ್ತೀಯಾ ಎಂದರಂತೆ. ಕೊನೆಗೆ ಶಿವಾಜಿ ಮಹಾರಾಜರು ಬಹಳ ಹುಡುಕಿ ಕೊನೆಗೊಂದು ಮೃದು ಕಲ್ಲನ್ನು ಹೊತ್ತು ತಂದರಂತೆ. ಆ ಕಲ್ಲನ್ನು ನೋಡಿದ ರಾಮದಾಸರು ಕೈಯಲ್ಲಿ ಮುಟ್ಟಿ `ಇದು ಗಟ್ಟಿಯಾಗಿದೆ. ಇನ್ನೂ ಮಿದುವಾದ ಕಲ್ಲನ್ನು ತನ್ನಿ..' ಎಂದರಂತೆ. ಕೊನೆಗೆ ಹುಡುಕಿ ತಂದಾಗ ಮತ್ತೆ ಇದೇ ಘಟನೆ ಪುನರಾವರ್ತನೆ ಆಯಿತಂತೆ. ಕೊನಗೊಮ್ಮೆ ಶಿವಾಜಿ ಮಹಾರಾಜರು ದಿಕ್ಕೆಟ್ಟು ಸೋತಂತಾಗಿ ಸಜ್ಜನಘಡಕ್ಕೆ ತೆರಳಿ ಸ್ವಾಮಿ ರಾಮದಾಸರ ಚರಣದಲ್ಲಿ ಶರಣಾದರಂತೆ. ಆಗ ಸಮರ್ಥ ರಾಮದಾಸರು ಹೇಳಿದ್ದೆಂದರೆ `ಮೃದುವಾದ ಕಲ್ಲು ಎಂದರೆ ಏನೆಂದುಕೊಂಡೆ ಮಹಾರಾಜಾ. ನೀನೇ ಮೃದುವಾದ ಕಲ್ಲು. ನೀನು ಕಲ್ಲಿನಷ್ಟು ಕಠಿಣ. ಆದರೆ ಸಿಟ್ಟು ಹಾಗೂ ಅಹಂಕಾರವನ್ನು ಬಿಟ್ಟು ಮೃದುವಾಗಿ ಬಾ ಎಂದು ಹೇಳಿದ್ದೆನಷ್ಟೇ ಎಂದು ಹೇಳಿದಾಗ ಶಿವಾಜಿ ಮಹಾರಾಜರ ಕಣ್ಣಿನಲ್ಲಿ ಆಶ್ರುಧಾರೆ ಸುರಿಯಲಾರಂಭಿಸಿತಂತೆ. ಆ ಕ್ಷಣದಲ್ಲಿ ಸಮರ್ಥ ರಾಮದಾಸರು ಶಿವಾಜಿ ಮಹಾರಾಜರ ತಲೆಯ ಮೇಲೆ ಕೈ ಇಟ್ಟು ಹಿಂದೂ ಸಾಮ್ರಾಟನಾಗಿ ಲೋಕವಿಖ್ಯಾತನಾಗಿ. ವಿಜಯೀಭವ ಎಂದು ಹರಸಿದರಂತೆ. ನಂತರದ ದಿನಗಳಲ್ಲಿ ಶಿವಾಜಿ ಮಹಾರಾಜ ಯಾವರೀತಿ ವಿಖ್ಯಾತಿ ಗಳಿಸಿದ ಎನ್ನುವುದು ಇತಿಹಾಸ ಎಂದು ಆಟೋ ಡ್ರೈವರ್ ದೀರ್ಘವಾಗಿ ಹೇಳಿದಾಗ ನಮಗೆ ಒಮ್ಮೆಲೆ ಮೈಯೆಲ್ಲ ಪುಳಕವಾಯಿತು. ನಾವು ಆಟೋ ಡ್ರೈವರ್ ಜೊತೆ ಬಂದಿದ್ದೇವೋ ಅಥವಾ ಸತಾರಾದ ಸಮಗ್ರ ಮಾಹಿತಿಯನ್ನು ತಿಳಿದುಕೊಂಡು ಬಂದಿರುವ ಗೈಡ್ ಜೊತೆ ಬಂದಿದ್ದೇವೋ ಎನ್ನುವ ಅನುಮಾನವೂ ನಮ್ಮನ್ನು ಕಾಡಿತು. 600 ರು. ಕೊಟ್ಟಿದ್ದಕ್ಕೂ ಅನ್ಯಾಯವಾಗಲಿಲ್ಲ ಎಂದುಕೊಂಡೆವು.
          `ಶಿವಾಜಿ ಮಹಾರಾಜರು ನಂತರದ ದಿನಗಳಲ್ಲಿ ಸಜ್ಜನಘಡಕ್ಕೆ ದೊಡ್ಡದೊಂದು ದ್ವಾರವನ್ನು ಕಟ್ಟಿಸಿದರು. ಕೋಟೆಯೊಂದನ್ನು ನಿರ್ಮಾಣ ಮಾಡಿದರು. ಅಷ್ಟೇ ಅಲ್ಲ. ಅಲ್ಲಿ ಒಂದೆರಡು ದೇಗುಲಗಳ ಕಟ್ಟಡವನ್ನೂ ಕಟ್ಟಿಸಿದರು. ಇದೇ ಸಜ್ಜನಘಡದಲ್ಲಿಯೇ ಮಾಫಳಾ ಯುವಕರ ಜೊತೆ ಸೇರಿ ರಕ್ತ ತರ್ಪಣ ನೀಡಿ ಹಿಂದೂ ರಕ್ಷಣೆಗೆ ಶಿವಾಜಿ ಪಣ ತೊಟ್ಟಿದ್ದು. ಒಮ್ಮೆ ನೀವು ಈ ನಾಡಿನಲ್ಲಿ ಶಿವಾಜಿ ಮಹಾರಾಜ ಕುದುರೆಯ ಮೇಲೆ ಹೋಗುತ್ತಿದ್ದುದನ್ನು ಕಲ್ಪನೆ ಮಾಡಿಕೊಳ್ಳಿ ಎಂದ. ನಮಗೆ ಮೈಯೆಲ್ಲ ಒಮ್ಮೆಗೆ ರೋಮಾಂಚನ.
           ನಿಧಾನವಾಗಿ ಬೆಳಗಾಗುತ್ತಿತ್ತು. ಆಕಾಶದೆತ್ತರದ ದೂರದಲ್ಲೊಂದು ಬೆಳಕಿನ ಬಿಂಬವನ್ನು ತೋರಿಸಿದ ಆಟೋ ಡ್ರೈವರ್ ಅದೋ ನೋಡಿ ಅಲ್ಲಿಯೇ ಸಜ್ಜನ ಘಡ ಇದೆ. ನಾವು ಅದನ್ನು ಏರಬೇಕು ಎಂದ. ಕತ್ತನ್ನು ಎತ್ತಿ ನೋಡಿ ಹಿತವಾಗಿ ನೋವು ಮಾಡಿಕೊಂಡೆವು. ಸತಾರಾದಿಂದ 17 ಕಿ.ಮಿ ದೂರದಲ್ಲಿರುವ ಸಜ್ಜನಘಡಕ್ಕೆ ಹೋಗುವ ಸಲುವಾಗಿ ಆಟೋ ಏರಿದ್ದ ನಾವು ಅಂಕುಡೊಂಕಿನ ದಾರಿಯಲ್ಲಿ ಸಾಗುತ್ತಲೇ ಇದ್ದೆವು. ಬೆಳಗಿನ ಮುಂಜಾವು ನಮ್ಮನ್ನು ಹಿತವಾಗಿ ಚುಂಬಿಸುತ್ತಿತ್ತು. ಮಂಜಿನ ಹನಿಗಳು ಮುತ್ತಿಕ್ಕುತ್ತಿದ್ದವು. ಅಲ್ಲಿಯೇ ಇದ್ದ ಮಿಲಿಟರಿ ಕ್ಯಾಂಪನ್ನು ನೀಲೇಶ ಮಂತ್ರಿ ತೋರಿಸಿದ. ಮರಾಠಾ ಪ್ಲಟೂನ್ ಇಲ್ಲಿಯೇ ತಯಾರಾಗುತ್ತದೆ. ಇಲ್ಲಿ ತರಬೇತಿ ಪಡೆದವರು ಪ್ರತಿಯೊಬ್ಬರೂ ಸೈನ್ಯಕ್ಕೆ ಆಯ್ಕೆಯಾಗುತ್ತಾರೆ ಎಂದು ಹೆಮ್ಮೆಯಿಂದ ಹೇಳಿದ. ನಮಗೂ ಹೆಮ್ಮೆ ಎನ್ನಿಸಿ ಎದೆಯುಬ್ಬಿತು.

(ಮುಂದುವರಿಯುತ್ತದೆ)

Wednesday, October 21, 2015

ಸಜ್ಜನರೊಡನೆ.. ಸಜ್ಜನಘಡದ ಕಡೆಗೆ - 2

          ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬಂದಿದ್ದರೂ ರೈಲು ವೇಗವಾಗಿ ಸಾಗುತ್ತಿರಲಿಲ್ಲ. ಲೋಂಡಾ, ಅಳ್ನಾವರ, ಖಾನಾಪುರ ಮೂಲಕ ಬೆಳಗಾವಿಗೆ ಹೋಗುತ್ತಿತ್ತು ರೈಲು. ಖಾಲಿ ಖಾಲಿ ರೈಲು. ನಾನು, ಸಂಜಯ ಹಾಗೂ ಪ್ರಶಾಂತ (ನಿರಂತರ ಚಲನೆಯಲ್ಲಿರುವ ಖ್ಯಾತಿಯ) ಸಾಕಷ್ಟು ಹಲುಬಿಕೊಳ್ಳುತ್ತ ಸಾಗಿದೆವು. ನಮ್ಮ ಪಕ್ಕದಲ್ಲಿ ಒಂಟಿ ಸೀಟಿನಲ್ಲಿ ಒಬ್ಬಾತ ಗಡವನಂತನು ಬಂದು ಕುಳೀತುಕೊಂಡಿದ್ದ. ಆತನಿಗೆ ಆಗಲೇ ನಿದ್ದೆ. ಬಾಯಿಂದಂತೂ ಸಪ್ತಸ್ವರಗಳೂ ಸಮ್ಮಿಳಿತವಾಗಿ ಗೊರ್.. ಎನ್ನುತ್ತ ಬರುತ್ತಿದ್ದವು.
           ಧಾರವಾಡ ಕಳೆದ ನಂತರ ನಿಧಾನವಾಗಿ ವಾತಾವರಣ ಬದಲಾಗತೊಡಗಿತು. ಪ್ರಶಾಂತ ಭಾವ ತನ್ನ ಮೊಬೈಲಿನಲ್ಲಿದ್ದ ಹಲವು ಆಪ್ ಗಳನ್ನು ನನ್ನ ಮೊಬೈಲಿಗೆ ರವಾನೆ ಮಾಡತೊಡಗಿದ. ಜಿಪಿಎಸ್, ಅದು, ಇದು ಎಂಬಂತೆ ಬಹಳಷ್ಟು ಆಪುಗಳು ನನ್ನ ಮೊಬೈಲಿಗೆ ಬಂದವು. ರೈಲಿಗೆ ವೇಗವಿನ್ನೂ ಸಿಕ್ಕಿರಲಿಲ್ಲ. ಬರಬರುತ್ತ ಹಸಿರು ಹೆಚ್ಚಾಯಿತು. ಅಳ್ನಾವರ ಬರುವ ಮುನ್ನ ನಾಲ್ಕೈದು ಕಿಲೋಮೀಟರ್ ದೂರ ಉತ್ತರ ಕನ್ನಡ ಜಿಲ್ಲೆಯಲ್ಲಿ ರೈಲು ಮಾರ್ಗ ಹಾದು ಹೋಗಿದೆ. ನಾನು ಪ್ರಶಾಂತ ಹಾಗೂ ಸಂಜಯನ ಬಳಿ ಈ ವಿಷಯವನ್ನು ಹೇಳಿ ವಾದಿಸಿದೆ. ಅವರು ಸಾಧ್ಯವೇ ಇಲ್ಲ ಎಂದು ಹೇಳಿದರೆ ನಾನು ಇದೆ ಎಂದು ಹೇಳುತ್ತಿದೆ. ನನ್ನ ಬಳಿ ಸೂಕ್ತ ಸಾಕ್ಷ್ಯ ಹಾಗೂ ದಾಖಲೆಗಳಿರದಿದ್ದ ಕಾರಣ ಸುಮ್ಮನಾದೆ.
           ಎಲ್ಲೋ ಮಳೆ ಬಿದ್ದಿರಬೇಕು. ನಾವು ಹೋರಟಿದ್ದು ಮಳೆಗಾಲವಾದರೂ ಹಾಗನ್ನಿಸುತ್ತಿರಲಿಲ್ಲ. ರಭಸದಿಂದ ಸುರಿಯಬೇಕಿದ್ದ ಮಳೆ ನಾಪತ್ತೆಯಾಗಿತ್ತು. ಆಗೊಮ್ಮೆ ಈಗೊಮ್ಮೆ ತುಂತುರು ಮಳೆ ಮಾಲೆ ಮಾಲೆಯಾಗಿ ಇಳಿಯುತ್ತಿತ್ತು. ದಾರಿಯಲ್ಲಿ ಕಾಣುವ ನದಿ, ಹಳ್ಳ, ತೊರೆಗಳಲ್ಲೆಲ್ಲ ನೀರಿದೆಯೇ ಎಂದು ಇಣುಕುತ್ತಿದ್ದೆವು. ಯಾವುದೋ ಒಂದೆರಡು ಹೊಳೆ ಹಳ್ಳಗಳು ತುಂಬಿ ಹರಿಯುತ್ತಿದ್ದವು. ಅಜಮಾಸು 5 ಅಥವಾ ಇನ್ನೂ ಜಾಸ್ತಿ ಗಂಟೆಯೇನೋ, ಅಳ್ನಾವರ ಹಾಗೂ ಲೋಂಡಾಗಳನ್ನು ದಾಟಿದ ನಮ್ಮ ಚುಕುಬುಕು ರೈಲು ಖಾನಾಪುರಕ್ಕೂ ಬಂದಿತು. 15 ನಿಮಿಷಕ್ಕೊಮ್ಮೆಯೋ ಅಥವಾ 30 ನಿಮಿಷಕ್ಕೆ ಒಮ್ಮೆ ಎಂಬಂತೆಯೋ ನಿಂತು ನಿಂತು ಸಾಗುತ್ತಿದ್ದ ರೈಲು ನಿಧಾನಕ್ಕೆ ರಶ್ಶಾಗತೊಡಗಿತು.
           ಸಂಜಯ ತನ ಡಿಎಸ್.ಎಲ್.ಆರ್ ಕ್ಯಾಮರಾಕ್ಕೆ ಆಗಲೇ ಕೆಲಸ ಕೊಟ್ಟಿದ್ದ. ನಾನು ಹಾಗೂ ಪ್ರಶಾಂತ ಭಾವ ಸಾಧ್ಯವಾದಷ್ಟು ಪೋಟೋಗಳನ್ನು ಮೊಬೈಲಿನಲ್ಲಿಯೇ ಕ್ಲಿಕ್ಕಿಸಿಕೊಂಡೆವು. ಬಾಯಲ್ಲಿ ಬಾ ಮಳೆಯೇ ಬಾ.. ಎಂಬ ಹಾಡೂ ಗುನುಗುತ್ತಿತ್ತು. ದಾರಿಯಲ್ಲಿ ಎಲ್ಲೋ ಒಂದೆರಡು ಕಡೆಗಳಲ್ಲಿ ರೈಲುಗಳು ಅಡ್ಡಾದವು. ವೇಗದ ರೈಲುಗಳು ದಡದಡನೆ ಸಾಗುತ್ತಿದ್ದರೆ ಪಕ್ಕದಲ್ಲಿಯೇ ನಿಂತ ನಾವು ಪೋಟೋ ಕ್ಲಿಕ್ಕಿಸಿ ಹಿತವಾಗಿ ಬೆಚ್ಚಿದ್ದೆವು.
            ಈ ನಡುವೆ ಇನ್ನೊಂದು ವಿಷಯ ಹೇಳಲೇಬೇಕು ನೋಡಿ. ಧಾರವಾಡ ದಾಟಿ ರೈಲು ಮುಂದೆ ಹೋಗುತ್ತಿದ್ದಂತೆ ಟಿಸಿ ಬಂದು ತಪಾಸಣೆಗೆ ಇಳಿದ. ನಾನು ಹಾಗೂ ಸಂಜಯ ಟಿಕೆಟ್ ಕೊಟ್ಟು ನಮ್ಮ ಗುರುತಿನ ಚೀಟಿಯನ್ನು ನೀಡಿದೆವು. ಪ್ರಶಾಂತ ಭಾವನ ಬಳಿ ಗುರುತಿನ ಚೀಟಿ ತೋರಿಸು ಎಂದರೆ ಚೀಟಿ ಎಲ್ಲಿದೆ? ವೋಟಿಂಗ್ ಕಾರ್ಡ್, ರೇಶನ್ ಕಾರ್ಡ್, ಆಧಾರ್ ಕಾರ್ಡುಗಳ ಝೆರಾಕ್ಸ್ ತಂದಿದ್ದ. ಟಿಸಿ ವರಾತ ಶುರುಮಾಡಿದ. ಒರಿಜಿನಲ್ ದಾಖಲೆಗಳನ್ನು ತೋರಿಸಿ, ಝೆರಾಕ್ಸ್ ಬೇಡ ಎಂದ. ಎಷ್ಟು ಹುಡುಕಿದರೂ ಒರಿಜಿನಲ್ ಸಿಗಲಿಲ್ಲ.
           ಕೊನೆಗೆ 500 ರು. ದಂಡ ಕಟ್ಟಬೇಕಾಗುತ್ತದೆ ಎನ್ನಲು ಆರಂಭಿಸಿದ. ಸಂಜಯ ಟಿಸಿ ಬಳಿ ಮಾತಿಗೆ ನಿಂತ. ರೈಲ್ವೆ ರೂಲ್ಸು, ರೆಗ್ಯುಲೇಶನ್ನುಗಳನ್ನೆಲ್ಲ ಪಟಪಟನೆ ಮಾತನಾಡಿದ. ಹೀಗಿದ್ದಾಗಲೇ ಟಿಸಿ ಪ್ರಶಾಂತ ಭಾವನ ಬಳಿ ನೀವೇನು ಕೆಲಸ ಮಾಡುತ್ತಿದ್ದೀರಿ ಎಂದ. ಭಾವ ಕೃಷಿ ಎಂದು ಉತ್ತರಿಸಿದ. ಸಂಜಯನೂ ಕೃಷಿ ಮಾಡುತ್ತಿದ್ದೇನೆ ಎಂದ. ನನ್ನ ಬಳಿಯೂ ಕೇಳಿದ. ಕೊನೆಗೆ ನಾನು ಪತ್ರಕರ್ತ ಎಂದೆ. ಎಲ್ಲಿ ನಿನ್ನ ಕಾರ್ಡ್ ತೋರಿಸು ನೋಡೋಣ ಎಂದ. ಕಾರ್ಡ್ ನೋಡಿದವನೇ ಸ್ವಲ್ಪ ಅನುಮಾನ ಮಾಡಿದ. ಮೊದಲೇ ಹೇಳಿದ್ದರೆ ಆಗುತ್ತಿರಲಿಲ್ಲವಾ ಎಂದ. ನಾನು ಮಿಕಿ ಮಿಕಿ ನೋಡಿದೆ. ಇನ್ನೊಮ್ಮೆ ಬರುವಾಗ ಝೆರಾಕ್ಸ್ ಅಲ್ಲ. ಎಲ್ಲ ಒರಿಜಿನಲ್ ದಾಖಲೆಗಳನ್ನೇ ತನ್ನಿ ಎಂದು ಹೇಳಿ ಹೊರಟುಹೋದ.
           `ಮಾರಾಯಾ.. ನೀನು ಪತ್ರಕರ್ತ ಹೇಳಕಾಗಿತ್ತಿಲ್ಲೆ. ಟಿಸಿ ಎಂತಾ ಮಾಡ್ತ ನೋಡ್ಲಾಗಿತ್ತು..' ಎಂದು ಸಂಜಯ ಹೇಳಿದ. `ಸುಮ್ನೆ ಎಂತಾ 500 ರು. ಕೊಡ್ತಿದ್ರಾ ಮಾರಾಯಾ..' ಎಂದೆ. ಹೌದೆನ್ನಿಸಿರಬೇಕು ಸುಮ್ಮನಾದರು.
              ರೈಲಿನಲ್ಲಿ ಹೋಗುತ್ತಿದ್ದ ನಮಗೆ ಇದ್ದಕ್ಕಿದ್ದಂತೆ ಆಲೋಚನೆಯೊಂದು ಮೂಡಿತು. ಯಾವಾಗಲೂ ನಾವು ಜೊತೆಗೂಡಿದರೆ ಎಲ್ಲಾದರೂ ಹೋಗಬೇಕು ಎನ್ನಿಸಿದರೆ ತಕ್ಷಣಕ್ಕೆ ಹೊರಟುಬಿಡುತ್ತೇವೆ. ಸಜ್ಜನಘಡಕ್ಕೂ ಹೀಗೆಯೇ. ದಿಢೀರ್ ನಿರ್ಧಾರ ಮಾಡಿ ಹೊರಟಿದ್ದೇ. ರೈಲಿನಲ್ಲಿ ಹೋಗುವಾಗ ಪ್ರಶಾಂತ ಭಾವ ಇದ್ದಕ್ಕಿದ್ದಂತೆ `ಹೋಯ್.. ಉತ್ತರ ಭಾರತಕ್ಕೆ ಹೊರಟು ಬಿಡೋಣ್ವಾ..?' ಎಂದ. ನಾನು ಹಾಗೂ ಸಂಜಯ ಇಬ್ಬರೂ ಇಂತದ್ದೇ ಮನೋಭಾವದವರು. ಹೋ.. ಹೋಗೋಣ ಎಂದು ತಯಾರಾದೆವು. `ನೋಡೋಣ. ಮೊದಲು ಸಜ್ಜನಘಡಕ್ಕೆ ಹೋಗಿ ಆ ನಂತರ ಆಲೋಚನೆ ಮಾಡೋಣ..' ಎಂದ ಪ್ರಶಾಂತ ಭಾವ. ನಾವು ತಲೆಯಲ್ಲಾಡಿಸಿದೆವು.
                   ಬೆಳಗಾವಿ ತಲುಪುವ ವೇಳೆಗೆ ಸೂರ್ಯನೂ ಬಾನಂಚಿನಲ್ಲಿ ರಥವನ್ನು ಹೋಡಿ ಹೋಗಿದ್ದ. ಬೆಳಗಾವಿ ತಲುಪುವ ವೇಳೆ ರೈಲಿನಲ್ಲಿ ಸುಮಾರು ಜನವೋ ಜನ. ಅಲ್ಲಿಂದ ಮುಂದಕ್ಕೆ ರೈಲು ಚಲಿಸಿದಂತೆಲ್ಲ ನಿಧಾನವಾಗಿ ಕತ್ತಲು ಆವರಿಸಿತು. ಗೋಕಾಕ ರೋಡ್, ಘಟಪ್ರಭಾ, ಚಿಕ್ಕೋಡಿ ಕ್ರಾಸ್ ಈ ಮುಂತಾದ ಪ್ರದೇಶಗಳನ್ನು ದಾಟಿದ ರೈಲು ಕೊನೆಗೊಮ್ಮೆ ಮಹಾರಾಷ್ಟ್ರಕ್ಕೆ ಕಾಲಿಟ್ಟಿತು. ಮಹಾರಾಷ್ಟ್ರಕ್ಕೆ ಬಂದಿದ್ದೇವೆ ಎನ್ನುವುದರ ಕುರಹಾಗಿ ನಮ್ಮ ಮೊಬೈಲ್ ರೋಮಿಂಗ್ ಏರಿಯಾದಲ್ಲಿದೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿತ್ತು.
             ಅದೇ ಸಂದರ್ಭದಲ್ಲಿ ರಾತ್ರಿಯ ಊಟ ಮಾಡಬೇಕಿತ್ತು. ಪ್ರಶಾಂತ ಭಾವ ಇಡ್ಲಿಯನ್ನು ಕಟ್ಟಿಸಿಕೊಂಡು ಬಂದ. ಗಡದ್ದಾಗಿ ತಿಂದೆವು. ಮಲಗಿ ನಿದ್ರಿಸೋಣವೇ? ಎಂದುಕೊಂಡರೆ ನಿದ್ದೆ ಬರಲೊಲ್ಲದು. ಮರುದಿನ ಮುಂಬಯಿಯಲ್ಲಿ ಎಫ್.ಡಿ.ಎ ಎಕ್ಸಾಂ ಇದ್ದ ಕಾರಣ ಒಂದಷ್ಟು ಯುವಕರು ನಾವಿದ್ದಲ್ಲಿ ಬಂದು ಕುಳಿತರು. ಬಂದವರೇ ಹರಟೆಗೆ ಕುಳಿತರು.
                 ನಿಧಾನಕ್ಕೆ ನಮ್ಮನ್ನು ನಿದ್ದೆ ಆವರಿಸುತ್ತಿತ್ತು. ಆ ಹುಡುಗರೂ ಮರಾಠಿ ಹಾಗೂ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಅವರಲ್ಲೊಬ್ಬನಿಗೆ ಅಲ್ಪ ಸ್ವಲ್ಪ ಕನ್ನಡ ಬರುತ್ತಿತ್ತು. ಅವರೊಂದಿಗೆ ಸಾಕಷ್ಟು ಸಮಯ ಹರಟೆ ಹೊಡೆದೆವು. ಕೊನೆಗೊಮ್ಮೆ ಸಾಂಗ್ಲಿ ಹಾಗೂ ಮಿರಜನ್ನು ದಾಟಿದ ರೈಲು ಮುಂದಕ್ಕೆ ಸಾಗಿತು. ರಾತ್ರಿಯಾಗಿ ಬಹಳ ಹೊತ್ತು ಸಂದಿತ್ತು. ಕೊನೆಗೂ ಒಮ್ಮೆ ನಮ್ಮ ನಿಗದಿತ ಗಮ್ಯ ಸಿಕ್ಕಿತು. ಮಧ್ಯರಾತ್ರಿ 12.10ರ ವೇಳೆಗೆ ನಾವು ಇಳಿಯಬೇಕಿದ್ದ ಸತಾರಾ ಹತ್ತಿರ ಬಂದಿತು. ಲಗುಬಗೆಯಿಂದ ಇಳಿದೆವು.
            ಇಳಿದವರು ಹೋಗುವುದೆಲ್ಲಿ? ಸತಾರಾ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಅಥವಾ ಮುಖ್ಯ ಪೇಟೆಗೆ ಅಜಮಾಸು 8-10 ಕಿಮಿ ದೂರವಿದೆ. ರಾತ್ರಿ ಯಾವುದೇ ವಾಹನ ಸಂಚಾರ ಇರುವುದಿಲ್ಲ. ಯಾವುದಾದರೂ ಹೊಟೆಲಿಗೋ, ಲಾಡ್ಜಿಗೋ ಹೋಗಿ ಉಳಿಯೋಣ ಎಂದರೆ ಅದು ಸಾಧ್ಯವಿಲ್ಲದ ಮಾತು ಬಿಡಿ. ಕೊನೆಗೊಮ್ಮೆ ಅಲ್ಲಿಯೇ ಬಿಸ್ಸಿ ಬಿಸಿ ಕಾಫಿ ಕುಡಿದೆವು. ರೈಲ್ವೆ ನಿಲ್ದಾಣದಲ್ಲಿಯೇ ಮಲಗಿ ನಿದ್ರಿಸೋಣ ಎಂದುಕೊಂಡೆವು. ಪ್ರಶಾಂತ ಭಾವ ನಿಲ್ದಾಣದಲ್ಲಿಯೇ ಇದ್ದ ಪೊಲೀಸರ ಬಳಿ ಮಾತನಾಡಲು ಆರಂಭಿಸಿದ. ಪೊಲೀಸರು ಹೇಳಿದ ಪ್ರಕಾರ ಸಜ್ಜನಘಡ ಸತಾರಾದಿಂದ 18 ಕಿಮಿ ದೂರದಲ್ಲಿತ್ತು. ದಿನಕ್ಕೆ 3 ಬಸ್ಸುಗಳು ಹೋಗುತ್ತಿದ್ದವು. ಯಾವುದಾದರೂ ವಾಹನ ಮಾಡಿಕೊಂಡು ಹೋಗಬೇಕಿತ್ತು. ಅಲ್ಲದೇ ಸತಾರಾ ರೈಲ್ವೆ ನಿಲ್ದಾಣದಿಂದ ಸತಾರಾ ನಗರಕ್ಕೆ ಹೋಗಲು ಬೆಳಗಿನವರೆಗೆ ಯಾವುದೇ ವಾಹನ ಸೌಲಭ್ಯ ಇಲ್ಲ ಹಾಗೂ ರಾತ್ರಿ ಜಪ್ಪಯ್ಯ ಅಂದರೂ ಯಾವುದೇ ಹೊಟೆಲಿನವರು ಉಳಿಯಲು ರೂಮು ಕೊಡುವುದಿಲ್ಲ. ಆದ್ದರಿಂದ ರೈಲ್ವೆ ನಿಲ್ದಾಣದಲ್ಲಿಯೇ ಮಲಗಿಕೊಳ್ಳಿ ಎಂದರು.
          ನಿಲ್ದಾಣದಲ್ಲಿದ್ದ ಎರಡು ಸೀಟಿನ ಮೇಲೆ ನಾನು, ಸಂಜಯ ಹಾಗೂ ಪ್ರಶಾಂತ ಭಾವ ಅಡ್ಡಾದೆವು. ಪಕ್ಕದಲ್ಲಿಯೇ ದೊಡ್ಡದೊಂದು ಮರವಿತ್ತು. ಅದರ ತುಂಬಾ ಹಕ್ಕಿಗಳಿದ್ದವು. ರಪ್ಪನೆ, ಪಿಚ್ಚನೆ ಹಿಕ್ಕೆಯನ್ನು ಹಾಕುತ್ತಿದ್ದವು. ಅದು ನಮ್ಮ ಮುಖ ಹಾಗೂ ಮೈಮೇಲೆ ಬೀಳುತ್ತಿತ್ತು. ಅದನ್ನು ತಪ್ಪಿಸಿಕೊಳ್ಳಬೇಕು ಎಂದು ಮುಖಕ್ಕೆ ಟವೆಲ್ ಹೊದ್ದುಕೊಂಡು ಮಲಗಿದೆವು. ಸ್ವಲ್ಪ ಸಮಯದಲ್ಲಿ ಅಲ್ಲಿಯೇ ಇದ್ದ ಪೊಲೀಸರು ಮತ್ತೆ ನಮ್ಮನ್ನು ಎಬ್ಬಿಸಿದರು. ಎಬ್ಬಿಸಿದವರೇ ಪಕ್ಕದಲ್ಲಿದ್ದ ಪ್ರವಾಸಿ ಬಂಗಲೆ ತೋರಿಸಿ ಅಲ್ಲಿ ಹೋಗಿ ಮಲಗಿಕೊಳ್ಳಿ, ಯಾವುದೇ ತೊಂದರೆ ಇಲ್ಲ ಎಂದರು.
            ಪ್ರವಾಸಿ ಬಂಗಲೆಯೆಂದರೆ ಮಲಗಲಿಕ್ಕೆ ಬಹಳ ಅವಕಾಶ ಇರುತ್ತದಲ್ಲ ಎಂದುಕೊಂಡು ಖುಷಿಯಿಂದ ಹೋದವರಿಗೆ ನಿರಾಸೆ ಕಾದಿತ್ತು. ಅಲ್ಲೇನಿದೆ ಮಣ್ಣು. ದೊಡ್ಡದೊಂದು ರೂಮು ಬಿಟ್ಟರೆ ಇನ್ನೇನೋ ಇಲ್ಲ. ಪಕ್ಕದಲ್ಲಿ ಎರಡು ಬಾಂಕುಗಳಿದ್ದವು. ಬಾಂಕಿನ ಮೇಲಿನ ಭಾಗದಲ್ಲಿ ಪ್ರಶಾಂತ, ಮಧ್ಯ ಭಾಗದಲ್ಲಿ ಸಂಜಯ ಹಾಗೂ ಕೆಳಭಾಗದಲ್ಲಿ ನಾನು ಮಲಗುವುದೆಂದು ತೀರ್ಮಾನವಾಯಿತು. ಆಗಲೇ 1.30 ದಾಟಿ 2 ಗಂಟೆಯತ್ತ ಗಡಿಯಾರ ಚಲಿಸುತ್ತಿತ್ತು. ಸೊಳ್ಳೆ ಕಾಟ ಬೇರೆ. ಬಾಂಕಿನ ಮೇಲೆ ಬಿದ್ದುಕೊಂಡೆವು. ಪ್ರಶಾಂತ ಭಾವ ಹಾಗೂ ಸಂಜಯನಿಗೆ ನಿದ್ದೆ ಬಂದಿತ್ತೇನೋ. ನನಗೆ ಮಾತ್ರ ಏನು ಮಾಡಿದರೂ ನಿದ್ದೆ ಹತ್ತಿರ ಸುಳಿಯುತ್ತಿಲ್ಲ. ಬಾಂಕಿನ ಮೇಲೆ ಹೊರಳಾಡಿದೆ. ಸೊಳ್ಳೆಗಳು ಕೂಡ ಮೈಮೇಲೆ ದಾಳಿ ಮಾಡುತ್ತಿದ್ದೆವು.ಸ್ವಲ್ಪ ನಿದ್ದೆ ಜೊಂಪು ಬಂದಂತಾಗಿತ್ತು. ಪ್ರಶಾಂತಭಾವ ಎಬ್ಬಿಸಿದ್ದ. 4.30 ಆಗುತ್ತಿತ್ತು. ಮುಖ ತೊಳೆದ ಶಾಸ್ತ್ರ ಮಾಡಿದವರೇ ಸತಾರಾ ಬಸ್ ನಿಲ್ದಾಣಕ್ಕೆ ಹೋಗಬೇಕು ಎಂದುಕೊಂಡೆವು.
          5 ಗಂಟೆಯಿಂದ ವಾಹನ ಓಡಾಡಲು ಆರಂಭವಾಗುತ್ತದೆ ಎಂದು ಪೊಲೀಸ ಹೇಳಿದ್ದ ನೆನಪು. ರೈಲ್ವೆ ನಿಲ್ದಾಣದಿಂದ ಹೊರಗೆ ಬಂದು ನೋಡಿದರೆ ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವುದರ ಕುರಿತು ಅಂತ-ಪಾರವೇ ಹರಿಯುತ್ತಿಲ್ಲ. ಕತ್ತಲೆಯಲ್ಲಿ ಒಂದು ದಾರಿಯಲ್ಲಿ ಹೋದೆವು. ಯಾಕೋ ಆ ದಾರಿ ಸರಿಯಲ್ಲ ಎನ್ನಿಸಿತು. ಮತ್ತೊಂದು ದಾರಿಯನ್ನು ಹಿಡಿದೆವು. ಆ ದಾರಿಯೂ ತಪ್ಪು ಎಂದೆನ್ನಿಸಿ ವಾಪಾಸು ಬಂದೆವು. ಕೊನೆಗೊಮ್ಮೆ ನಾನು ಮತ್ತೆ ಜಿಪಿಎಸ್ ಹಾಕಿ ನೋಡಿ ನಾವು ಹೋಗಬೇಕಿದ್ದ ದಾರಿಯನ್ನು ಹುಡುಕಿದೆ. ಮೂರ್ನಾಲ್ಕು ದಾರಿ ಕಾಣಿಸಿತು. ಮತ್ತೆ ಗೊಂದಲ. ಕೊನೆಗೆ ಯಾವುದೋ ಒಂದು ದಾರಿ ಕಾಣಿಸಿ, ಏನಾದರಾಗಲಿ ಇದರಲ್ಲಿಯೇ ಹೋಗೋಣ ಎಂದುಕೊಂಡು ಹೊರಟೆವು.
           1 ಕಿಮಿ ನಡೆದ ನಂತರ ನಮಗೆ ಸತಾರಾ-ಫಂಡರಾಪುರ ಹೈವೆ ಸಿಕ್ಕಿತು. ಎಲ್ಲಾದರೂ ಬಸ್ ನಿಲ್ದಾಣವನ್ನು ಹುಡುಕೋಣ ಎಂದುಕೊಂಡವರಿಗೆ ಪಕ್ಕದಲ್ಲಿಯೇ ಇದ್ದ ಬಸ್ ನಿಲ್ದಾಣ ಕಾಣಿಸಿತು. ಅಲ್ಲಿಗೆ ಹೋದರೆ ಆರೆಂಟು ಜನ ಆಗಲೇ ಸೇರಿದ್ದರು. ಒಂದೆರಡು ಆಟೋಗಳು ಹಾದು ಹೋದವು. ನಿಲ್ಲಿಸಲಿಲ್ಲ. ಕೊನೆಗೊಂದು ಆಟೋ ಬಂದಿತು. ಬರುವಾಗಲೇ ಅರ್ಧ ತುಂಬಿದ್ದ ಆಟೋದ ಬಳಿ ನಾವು ಹೋದೆವು. ನಿಲ್ಲಿಸಿದ ಪುಣ್ಯಾತ್ಮ, ನಾವು ಮೂವರು ಬರುತ್ತೇವೆ ಎಂದೆವು. ಜಾಗ ಸಾಲುತ್ತಿಲ್ಲ ಎನ್ನಿಸಿತು. ಕೊನೆಗೆ ಹೇಗು ಹೇಗೋ ಗುದ್ಯಾಡಿ ಆಟೋ ಹತ್ತಿದ್ದಾಯಿತು. ಓಲಾಡುತ್ತ ಸತಾರಾ ನಗರಿಯತ್ತ ಆಟೋ ಸಾಗಿತು.

(ಮುಂದುವರಿಯುತ್ತದೆ)

ನಾವು ಹವ್ಯಕರು-4

ನಾವು ಹವ್ಯಕರು ನಾವು ಹವ್ಯಕರು
ಪ್ರೀತಿಯ ಕರು..||
ಆಕಳು ಸಾಕಿ, ಅಡಿಕೆಯ ಬೆಳೆದು
ದುಡಿಯುವವರು ನಾವು ಹವ್ಯಕರು ||

ಯಾಲಕ್ಕಿ, ವೆನಿಲ್ಲಾ, ಕಾಳುಮೆಣಸು ಎಲ್ಲಾ
ಬಾಳೆಯ ಜೊತೆಗೆ ತೆಂಗಿನ ಬೆಳೆ
ಅಡಿಕೆ, ಕೊಕ್ಕೋ, ಭತ್ತದ ಗದ್ದೆಯ
ನಾವು ಹವ್ಯಕರು ||

ಉತ್ತರಕ್ಕೆ ಸ್ವರ್ಣವಲ್ಲಿ,
ದಕ್ಷಿಣಕ್ಕೆ ರಾಮಚಂದ್ರಾಪುರ
ಮಧ್ಯದಲ್ಲೊಂದು ನೆಲೆಮಾವು
ನಾವು ಹವ್ಯಕರು ||

ಹಬ್ಬ ಹರಿದಿನಗಳಲ್ಲಿ ನಗು
ಸೊಸೈಟಿ ಸಾಲದಲ್ಲಿ ಬಿಗು
ದಿನಂಪ್ರತಿ ನಗ್ತಾ ಇರುವ
ನಾವು ಹವ್ಯಕರು ||

ಓದಿನಲ್ಲಿ ಜೋರು, ಭಟ್ಟತನಿಕೆಯಲ್ಲಿ ಮುಂದು
ಸಾಪ್ಟ್ ವೇರ್ ಉದ್ಯೋಗದ ಜೊತೆ ಅರ್ಚಕರು
ಎಲ್ಲೆಲ್ಲು ಹವ್ಯಕರು
ನಾವು ಪ್ರೀತಿಯ ಕರು ||

-----

(ಈ ಹವಿಗವಿತೆ ಬರೆದಿದ್ದು 21-10-2015ರಂದು ಶಿರಸಿಯಲ್ಲಿ)
(ನಾವು ಹವ್ಯಕರು ಸರಣಿಯ 4ನೇ ಕವಿತೆ ಇದು. ಈ ಹಿಂದೆ ಬರೆದಿದ್ದ ಮೂರು ಕವಿತೆಗಳೂ ಬಹಳ ಚನ್ನಾಗಿದೆ ಎಂದು ಪ್ರತಿಯೊಬ್ಬರೂ ಹೇಳಿ, ಆದರಿಸಿದ್ದರಿಂದ ಖುಷಿಯಾಗಿ ನಾಲ್ಕನೆ ಕವಿತೆ ಬರೆದಿದ್ದೇನೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದೂ ಕೂಡ ಟಪ್ಪಾಂಗುಚ್ಚಿ. ಸುಮ್ನೆ ತಮಾಷೆಗೆ ಬರೆದಿದ್ದಾದರೂ ಹೇಳಿರುವ ವಿಷಯ ಕಟು ವಾಸ್ತವ. ಓದಿ, ಖುಷಿಪಡಿ)

Tuesday, October 20, 2015

ಸಜ್ಜನರೊಡನೆ... ಸಜ್ಜನಗಡದ ಕಡೆಗೆ - 1

ಮೊದಲೇ ಒಂದೆರಡು ಮಾತು :
ಪ್ರವಾಸ ಕಥನ ಬರೆಯುವುದು ಅಂದರೆ ನನಗೆ ಬಹಳ ಅಚ್ಚುಮೆಚ್ಚು. ಬಹಳ ದಿನಗಳ ಹಿಂದೆ ಹಲವು ಪ್ರವಾಸ ಕಥನಗಳನ್ನು ಬರೆದಿದ್ದೆ. ಆಮೇಲೆ ಅದೆಷ್ಟೋ ನೂರಾರು ಪಯಣಗಳು, ಟ್ರೆಕ್ಕಿಂಗುಗಳನ್ನು ಮಾಡಿದ್ದರೂ ಬರೆಯಲು ಸಾಧ್ಯವಾಗಿರಲಿಲ್ಲ. ಕೆಲವು ತಿಂಗಳುಗಳ ಹಿಂದೆ ಮಿತ್ರರ ಜೊತೆ ಸಜ್ಜನಘಡಕ್ಕೆ ಹೋಗಿದ್ದೆ. ಬಹಳ ದಿನಗಳ ಆಸೆ. ಅವುಗಳ ಬಗ್ಗೆ ಇಲ್ಲಿ ಬರೆದಿದ್ದೇನೆ. 

****

            ಸಜ್ಜನಘಡಕ್ಕೆ ಒಂದ್ ಸಾರಿ ಹೋಗ್ ಬರವು.. ಇಂತದ್ದೊಂದು ಆಲೋಚನೆ ನನ್ನಲ್ಲಿ ಮೂಡಲು ಪ್ರಮುಖ ಕಾರಣ ಎಂದರೆ ದೊಡ್ಡಮ್ಮನ ಮಗ ಗಿರೀಶ ಕಲ್ಲಾರೆ. ಮೂರ್ನಾಲ್ಕು ವರ್ಷಗಳ ಹಿಂದೆ ಅಕ್ಟೋಬರ್ ರಜೆಯ ಸಂದರ್ಭದಲ್ಲಿ ಆತ ನನ್ನ ಬಳಿ ಸಜ್ಜನಘಡಕ್ಕೆ ಹೋಗಿ ಬರೋಣ್ವಾ ಎಂದು ಕೇಳಿದ್ದ. ಆದರೆ ಅದೇನು ಕಾರಣವೋ, ನಮಗೆ ಅದು ಸಾಧ್ಯವಾಗಿರಲಿಲ್ಲ. ಪಾಪ ಗಿರೀಶಣ್ಣ ನನ್ನ ಬಳಿ ಪ್ರತಿ ವರ್ಷ ಹೋಗೋಣ್ವಾ ಎಂದು ಕೇಳುತ್ತಲೇ ಇದ್ದ. ನಾನೂ ಒಪ್ಪಿಕೊಳ್ಳುತ್ತಿದ್ದೆ. ಆದರೆ ತದನಂತರ ಅದೇನು ನೆಪವೋ ನಮಗೆ ಹೋಗಲಾಗುತ್ತಿರಲಿಲ್ಲ.
          ಈ ಸಜ್ಜನಘಡದ ವಿಷಯವನ್ನು ಮಾವನ ಮಗ ಪ್ರಶಾಂತನ ಬಳಿ ಗಿರೀಶ ಹೇಳಿದ್ದ. ನಂತರದ ದಿನಗಳಲ್ಲಿ ನಾನೂ ಅಲ್ಲಿಗೆ ಹೋಗಿ ಬರೋಣ ಎಂದು ಮಾತನಾಡಿದ್ದೆ. ಆತನೂ ಒಪ್ಪಿಕೊಂಡಿದ್ದ. ಇದೂ ಕೂಡ ಒಂದೆರಡು ವರ್ಷಗಳ ಹಿಂದಿನ ಮಾತು. ಆಮೇಲೆ ನಮಗೆ ಸಜ್ಜನಘಡಕ್ಕೆ ಹೋಗಿ ಬರಬೇಕೆಂಬ ಬಯಕೆ ಪದೇ ಪದೆ ಮನಸ್ಸಿನಲ್ಲಿ ಮೂಡುತ್ತಲೇ ಇತ್ತು. ಹೋಗಿದ್ದಾಗ ಕಳೆದ ಒಂದೂವರೆ ತಿಂಗಳಿನ ಹಿಂದೆ ಪ್ರಶಾಂತ ಭಾವ ಇದ್ದಕ್ಕಿದ್ದಂತೆ ಪೋನ್ ಮಾಡಿ, `ವಿನಯಾ.. ಸಜ್ಜನಘಡಕ್ಕೆ ಹೋಗಿ ಬಪ್ಪನಾ. ಬತ್ಯನಾ?' ಎಂದ. ನಾನು ಹೂ ಅಂದೆ. 
          ಮನಸ್ಸಿನಲ್ಲಿ ಈ ಸಾರಿಯೂ ಅಲ್ಲಿಗೆ ಹೋಗುವುದರ ಬಗ್ಗೆ ಸಂದೇಹಗಳಿದ್ದವು. ಆದರೆ ಪ್ರಶಾಂತ ಭಾವನ ಜೊತೆ ನಾನು ಹೊರಟರೆ ಏನಾದರೂ ಮಾಡಿ ಬಿಡುತ್ತೇವೆ ಎನ್ನುವ ಆಲೋಚನೆಯೂ ಬಂದಿತು. ಈ ಹಿಂದೊಮ್ಮೆ ತಿರುಪತಿಗೆ ನಾವಿಬ್ಬರೇ ಹೋಗಿದ್ದೆವು. ಮದ್ಯಾಹ್ನ ಹುಬ್ಬಳ್ಳಿಗೆ ಹೋಗಿ, ಹರಿಪ್ರಿಯಾ ಎಕ್ಸ್ ಪ್ರೆಸ್ ಹತ್ತಿ, ಮರುದಿನ 11 ಗಂಟೆಯ ವೇಳೆಗೆ 45 ರು. ವೆಚ್ಚದಲ್ಲಿ ತಿರುಪತಿ ಮುಟ್ಟಿದ್ದ ನಾವು ಸಂಜೆಯ ಒಳಗೆ ತಿರುಪತಿ ದೇವರ ದರ್ಶನ ಮಾಡಿದ್ದೆವು. ನಂತರ ಸಂಜೆ ತಿರುಪತಿ-ಮೈಸೂರು ರೈಲು ಹತ್ತಿ, ಬೆಂಗಳೂರಿಗೆ ಮರುದಿನ ಬೆಳಿಗ್ಗೆ ವೇಳೆಗೆ ಬಂದಿಳಿದಿದ್ದೆವು. ಅಲ್ಲಿಂದ ಯಲ್ಲಾಪುರ ಬಸ್ಸನ್ನು ಹತ್ತಿ  ಎರಡು ದಿನಗಳ ಒಳಗಾಗಿ ವಾಪಸಾಗಿದ್ದೆವು.
               ವಿಚಿತ್ರವೆಂದರೆ 2008ರ ಸಂದರ್ಭ ಅದು, ನನಗಿನ್ನೂ ಉದ್ಯೋಗ ಸಿಕ್ಕಿರಲಿಲ್ಲ. ನನ್ನ ಬಳಿ ನಯಾಪೈಸೆ ದುಡ್ಡಿರಲಿಲ್ಲ. ಮನೆಯಲ್ಲಿಯೂ ಬಹಳ ಕಷ್ಟದ ದಿನಗಳು ಅವು. ಅಮ್ಮನ ಬಳಿ ತಿರುಪತಿ ಟ್ರಿಪ್ಪಿನ ವಿಷಯ ಹೇಳಿದಾಗ ಅಲ್ಲಿ ಇಲ್ಲಿ ಹುಡುಕಿ 150 ರು. ಕೊಟ್ಟಿದ್ದರು. ಅದರಲ್ಲಿ ಹುಬ್ಬಳ್ಳಿ ಬಸ್ಸಿನಲ್ಲಿ ಟಿಕೆಟ್ ಕೊಂಡು ಹೋಗಿದ್ದಾಗ ಟಿಕೆಟ್ ಕಳೆದು ಹೋಗಿ ಗಲಾಟೆ ಆಗಿತ್ತು. ಕೊನೆಗೆ ದಮ್ಮಯ್ಯ ದಾತಾರಾ ಎಂದು ಹೇಳಿ ಹುಬ್ಬಳ್ಳಿ ತಲುಪಿದ್ದೆ. ನಂತರ ಪ್ರಶಾಂತ ಭಾವನೇ ನನ್ನೆಲ್ಲ ಖರ್ಚುಗಳನ್ನು ಹಾಕಿಕೊಂಡು ತಿರುಪತಿ ದರ್ಶನ ಮಾಡಿಸಿದ್ದ.
              ಸಜ್ಜನಘಡಕ್ಕೆ ಹೋಗೋಣ ಎಂದು ಹೇಳಿದಾಗಲೂ ನನ್ನ ಪರಿಸ್ತಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹೆಸರಿಗೆ ನಾನು ಕನ್ನಡಪ್ರಭದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಆದರೆ ಕಳೆದ 6 ತಿಂಗಳಿನಿಂದ ಸಂಬಳ ಕೊಟ್ಟಿರಲಿಲ್ಲ. ಕೇಳಿದರೆ ಇವತ್ತು, ನಾಳೆ ಎಂದು ಸಬೂಬು ಹೇಳುತ್ತಿದ್ದರು. ಕನ್ನಡಪ್ರಭಕ್ಕೆ, ಅದರ ಮ್ಯಾನೇಜ್ ಮೆಂಟಿಗೆ ಪ್ರತಿದಿನ ಹಿಡಿಶಾಪ ಹಾಕುತ್ತಿದ್ದೆ. ಆ ಸಂದರ್ಭದಲ್ಲಿ ಪ್ರಶಾಂತ ಭಾವ ಪೋನ್ ಮಾಡಿ ಸಜ್ಜನಘಡಕ್ಕೆ ಹೋಗುವ ಬಗ್ಗೆ ತಿಳಿಸಿದ್ದ. ನಾನು ಒಪ್ಪಿಕೊಂಡ ಮೇಲೆ ಆತನ ಬಳಿ ಕನ್ನಡಪ್ರಭದವರು ದುಡ್ಡು ಕೊಟ್ಟಿಲ್ಲ. ನನ್ನ ಖರ್ಚನ್ನು ನೀನೇ ನೋಡಿಕೊಳ್ಳಬೇಕು ಎಂದು ಹೇಳಿದ್ದೆ. ಆತ ಒಪ್ಪಿಕೊಂಡಿದ್ದ.
             `ನಮ್ ಜೊತೆ ಇನ್ಯಾರಾದರೂ ಬರ್ತಿ ಅಂದ್ರೆ ಅವ್ಕೆಲ್ಲಾ ಹೇಳಲಕ್ಕನೋ..' ಎಂದು ಪ್ರಶಾಂತ ಭಾವನ ಬಳಿ ಕೇಳಿದ್ದೆ. `ಹೇಳು ಮಾರಾಯಾ.. ತೊಂದರೆ ಇಲ್ಲ..' ಎಂದಿದ್ದ. ನಾನು ನನ್ನ ತಂಗಿ ಸುಪರ್ಣ ಹಾಗೂ ಭಾವ ನಾಗರಾಜನ ಬಳಿ ಹೇಳಿದ್ದೆ. ಮೊದ ಮೊದಲು ಅವರು ಒಪ್ಪಿಕೊಂಡಿದ್ದರು. ಆದರೆ ಅವರಿಗೂ ಕನ್ನಡಪ್ರಭದ ಸಂಬಳ ಬಂದಿರಲಿಲ್ಲ. ಹಾಗಾಗಿ ಕೊನೆಯ ಕ್ಷಣದಲ್ಲಿ ಪ್ರವಾಸ ರದ್ದು ಮಾಡಿದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ದೋಸ್ತ ನಾಗರಾಜ ವೈದ್ಯನ ಬಳಿ  ಪ್ರಶಾಂತ ಭಾವ ಕೇಳಿದ್ದನಂತೆ. ಆತನೂ ಬರಲಿಕ್ಕಾಗುವುದಿಲ್ಲ ಎಂದಿದ್ದ. ಕೊನೆಗೆ ದೊಡ್ಡಮ್ಮನ ಮಗ ಗುರುವಿನ ಬಳಿ ಹೇಳಲಾಯಿತು. ಮೊದ ಮೊದಲು ಬರಲು ಒಪ್ಪಿದ್ದ ಗುರು ನಂತರದ ದಿನಗಳಲ್ಲಿ ಬರಲಿಕ್ಕಾಗುವುದಿಲ್ಲ ಎಂದ. ಗಿರೀಶನೂ ಆಗುವುದಿಲ್ಲ ಎಂದ. ಕೊನೆಗೆ ಮಿತ್ರ ಸಂಜಯ ಭಟ್ಟ ಬೆಣ್ಣೆ ನೆನಪಾದ. ಆತನಿಗೆ ಹೊರಡಲು ಎರಡು ದಿನ ಇದ್ದಾಗ ಪೋನ್ ಮಾಡಿದೆ. `ದೋಸ್ತಾ, ತಿರುಗಾಟ ಎಲ್ಲೇ ಇರ್ಲಿ. ಹೇಳಾ ನೀನು. ಆನು ಬತ್ತಿ..' ಎಂದವನೇ ತಯಾರಾಗಿದ್ದ.
           ನಂತರದ ದಿನಗಳಲ್ಲಿ ಹೋಗುವ ತಯಾರಿ ಸ್ವಲ್ಪ ಭರದಿಂದ ನಡೆಯಿತು. ಜುಲೈ 11 ಹಾಗೂ 12ರಂದು ಸಜ್ಜನಘಡಕ್ಕೆ ಹೋಗುವುದು ನಿಕ್ಕಿಯಾಗಿತ್ತು. ಹೋಗುವ ಮೊದಲು ನಾನು ಹಾಗೂ ಪ್ರಶಾಂತ ಭಾವ ಹೆಗೆ ಹೋಗೋದು ಎನ್ನುವ ಬಗ್ಗೆ ಬಹಳ ಮಾತನಾಡಿಕೊಂಡಿದ್ದೆವು. ನಾನೂ ನನ್ನ ಮೊಬೈಲಿನಲ್ಲಿ ರೂಟ್ ಮ್ಯಾಪ್ ನೋಡಿಕೊಂಡಿದ್ದೆ. ರೈಲಿನಲ್ಲಿ ಹೋಗುವುದು ಚೀಪ್ ಎಂಡ್ ಬೆಸ್ಟ್ ಎಂಬ ನಿರ್ಧಾರಕ್ಕೆ ಬಂದಿದ್ದೆವು. ಶಿರಸಿಯಿಂದ ಸಜಮಾಸು 500 ಕಿಮಿ ದೂರದಲ್ಲಿರುವ ಸಜ್ಜನ ಘಡಕ್ಕೆ ಹೋಗುವ ಮೊದಲು ಸತಾರಾ ವರೆಗೆ ಹುಬ್ಬಳ್ಳಿಯಿಂದ ರೈಲಿನಲ್ಲಿ ಹೋಗುವುದು ಎನ್ನುವ ತೀರ್ಮಾನಕ್ಕೆ ನಾವು ಬಂದೆವು. ಆದರೆ ನಮಗೆ ರೈಲು ಟಿಕೆಟ್ ಸಿಕಬೇಕಲ್ಲ ಮಾರಾಯ್ರೆ. ಹುಬ್ಬಳ್ಳಿಯಲ್ಲಿ ಮದ್ಯಾಹ್ನ 3.30ಕ್ಕೆ ಹೊರಡುವ ರೈಲು ಮಧ್ಯರಾತ್ರಿ 12 ಗಂಟೆಗೆ ಸತಾರಾಕ್ಕೆ ತಲುಪುತ್ತದೆ. ಅಲ್ಲಿಂದ ಸಜ್ಜನಘಡಕ್ಕೆ ಹೋಗುವುದೆಂದರೆ ರಾತ್ರಿಯ ವೇಳೆ ಅಸಾಧ್ಯದ ಮಾತು. ಮೊದಲು ಸತಾರಾ ತನಕ ಹೋಗೋಣ ಆಮೇಲೆ ಮುಂದಿನದ್ದನ್ನು ನೋಡೋಣ ಎಂದುಕೊಂಡೆವು.
          ನಾನು ಯಾವುದಕ್ಕೂ ಇರಲಿ ಎಂದು ನನ್ನ ಸೀನಿಯರ್ ಆಗಿ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ಮಹಾದೇವ ಸರ್ ಅವರ ಬಳಿ ಸಜ್ಜನಘಡದ ವಿಷಯವನ್ನು ಹೇಳಿದ್ದೆ.  `ನೀವ್ ಯಾಕ್ರೀ ತಲೆ ಕೆಡಿಸ್ಕಳ್ತೀರಿ. ಬರ್ರೀ ಸುಮ್ನೆ. ಟಿಕೆಟ್ ವಿಷ್ಯ ನಂಗ್ ಬಿಡ್ರಿ..' ಎಂದು ಹೇಳಿದ್ದರು. `ಬರುವಾಗ ನಿಮ್ಮ ಐಡೆಂಟಿಟಿ ಕಾರ್ಡ್ ತರೋದನ್ನ ಮರೀಬ್ಯಾಡ್ರೀ..' ಎಂದೂ ತಿಳಿಸಿದ್ದರು. ನಾನು `ಬೇಡ ಬಿಡ್ರೀ...' ಎಂದು ಹೇಳುತ್ತಿದ್ದರೂ ಅವರು ಪೋನ್ ಇಟ್ಟಿದ್ದರು.
           ಜುಲೈ 11ರಂದು ಮುಂಜಾನೆ ನನಗೆ ಅನೇಕ ಕೆಲಸಗಳಿದ್ದವು. ಮದ್ಯಾಹ್ನ 2 ಗಂಟೆ ಒಳಗೆ ಹುಬ್ಬಳ್ಳಿಯನ್ನು ತಲುಪಿ ಅಲ್ಲಿ ಊಟ ಮುಗಿಸಿ ರೈಲು ಹತ್ತಬೇಕಿತ್ತು. ಮುಂಜಾನೆಯೇ ಸ್ನಾನ ಮುಗಿಸಿ ತಯಾರಾಗಿದ್ದೆ. ಅಷ್ಟರಲ್ಲಿ ಸಂಜಯ ಪೋನ್ ಮಾಡಿ `ಆನು ಬರ್ತಾ ಇದ್ದಿ.. ಬೈಕ್ ಎಲ್ಲಿಡವೋ..' ಎಂದಿದ್ದ. ಆತನನ್ನು ಶಿರಸಿಯ ತಂಗಿಯ ಮನೆಗೆ ಕರೆಸಿಕೊಂಡು ಆತನ ಬೈಕ್ ಇರಿಸಿ, ತಿಂಡಿ ತಿನ್ನುವ ಶಾಸ್ತ್ರ ಮುಗಿಸಿ ಶಿರಸಿ ಬಸ್ ನಿಲ್ದಾಣದ ಕಡೆ ಹೊರಡುವ ವೇಳೆಗೆ 12 ಗಂಟೆಯಾಗುತ್ತಿತ್ತು. ಅದೇನೋ ಮರೆತೆವು ಎಂದು ಮತ್ತೆ ರೂಮಿಗೆ ವಾಪಾಸಾಗಿ ಮರಳಿ ಬಸ್ ಹತ್ತುವ ವೇಳೆಗೆ ಆಗಲೇ 12.15.
            ಬೆಳಿಗ್ಗೆಯೇ ಹೆಗ್ಗಾರಿನಿಮದ ಹೊರಟಿದ್ದ ಪ್ರಶಾಂತ ಭಾವ ಹುಬ್ಬಳ್ಳಿಯನ್ನು ತಲುಪಿ ಪೋನ್ ಮೇಲೆ ಪೋನ್ ಮಾಡುತ್ತಿದ್ದ. `ಥೋ.. ಇನ್ನೂ ಬಂಜ್ರಿಲ್ಯನಾ ಮಾರಾಯಾ.. ಟೈಮ್ ಆಗೋತು. ಬಡಾ ಬಡಾ ಬನ್ನಿ ನೋಡ್ವಾ.. ರೈಲು ತಪ್ಪಿ ಹೋದ್ರೆ ನಮ್ ಕಥೆ ಅಷ್ಟೇಯಾ..' ಎಂದು ಹೇಳುತ್ತಿದ್ದ. ಅವನಿಗೆ ಏನೇನೋ ಸಬೂಬು ಹೇಳಿದ್ದಾಯಿತು.
           ನಾವು ಹತ್ತಿದ್ದ ಬಸ್ ವೇಗವಾಗಿಯಾದರೂ ಸಾಗುತ್ತದೆಯೇ ಇಲ್ಲ. ಕುಯ್ಯೋ.. ಮರ್ರೋ.. ಎಂದು ನಿಧಾನವಾಗಿ ಸಾಗುತ್ತಿತ್ತು. ನಾವು ದಾರಿಯನ್ನು ಸವೆಸಬೇಕಾದರೆ ಬೇಸರ ಆಗದಿರಲಿ ಎಂದು ಸುದ್ದಿ ಹೇಳಿದೆವು. ಮುಂಡಗೋಡಿನಲ್ಲಿ ಜೋಳವನ್ನು ತಿಂದು ಹುಬ್ಬಳ್ಳಿಯನ್ನು ತಲುಪುವ ವೇಳೆಗೆ ಆಗಲೇ 2.45 ಆಗಿತ್ತು. ಟೈಮಿಲ್ಲ ಮಾರಾಯ್ರೇ ಎಂದುಕೊಂಡವರಿಗೆ ಮಾದೇವ ಸರ್ ಸಿಕ್ಕಿರಲಿಲ್ಲ. ಅವರು ಟಿಕೆಟ್ ಕೊಡುತ್ತೇನೆ ಸಿಗ್ರಿ ಎಂದು ಹೇಳಿದ್ದರು. ನಮಗೆ ಊಟವೂ ಆಗಿರಲಿಲ್ಲ. ಮಾದೇವ ಸರ್ ಪೋನ್ ಮಾಡಿ `ನೀವು ಊಟ ಮುಗಿಸಿ. ಅಷ್ಟರಲ್ಲಿ ನಾನು ನಿಮಗೆ ಸಿಗ್ತೀನಿ. ಟಿಕೆಟ್ ಕೊಡ್ತೀನಿ..' ಎಂದಿದ್ದರು. ಆಗಲೇ ಗಡಿಯಾರದಲ್ಲಿ ಮೂರು ಗಂಟೆ ತೋರಿಸುತ್ತಿತ್ತು. ಟೈಂ ಆಗ್ತಾ ಇದೆ ಬನ್ರೋ ಬೇಗ ಎಂದು ಪ್ರಶಾಂತ ಭಾವ ಊಟ ಮಾಡಲಿಕ್ಕೂ ಬಿಡದಂತೆ ನಿಮಿಷಕ್ಕೊಂದು ಪೋನ್ ಮಾಡುತ್ತಿದ್ದ.
          ಅಯೋಧ್ಯಾ ಹೊಟೆಲಿನಲ್ಲಿ ಊಟ ಮುಗಿಸುವ ವೇಳೆಗೆ ಸರಿಯಾಗಿ ಮಾದೇವ ಸರ್ ಬಂದಿದ್ದರು. ಟಿಕೆಟ್ ಕೊಟ್ಟರು. 3 ಬರ್ತ್ ಸೀಟುಗಳನ್ನು ಬುಕ್ಕಿಂಗ್ ಮಾಡಿಸಿದ್ದರು. 250*3 ರಂತೆ 750 ರು. ಆಗಿತ್ತು. ನಾವು ಟಿಕೆಟ್ ದುಡ್ಡು ಕೊಡಲು ನೋಡಿದರೆ ಮಾದೇವ ಸರ್ ಇಸ್ಕೊಳ್ಳಲಿಲ್ಲ. ಎಷ್ಟು ಒತ್ತಾಯ ಮಾಡಿದರೂ ಕೊನೆಗೂ ಇಸ್ಕೊಳ್ಳಲೇ ಇಲ್ಲ ಬಿಡಿ. ಆಗಲೇ 3.15 ಆಗಿತ್ತು. ಮತ್ತೊಮ್ಮೆ ಪೋನ್ ಮಾಡಿದ ಪ್ರಶಾಂತ ಭಾವ `ಯಾವ್ದೋ ರೈಲು ಹೊರಡ್ತಾ ಇದ್ದು. ಬೇಗ ಬರ್ರೋ..' ಎಂದು ಮತ್ತೊಮ್ಮೆ ಪೋನ್ ಮಾಡಿದ್ದ. ತಡಿಯಾ ಬತ್ತಾ ಇದ್ಯ ಎಂದು ಹೇಳಿ ಆಟೋವೊಂದನ್ನು ಹತ್ತಿ ರೈಲ್ವೆ ನಿಲ್ದಾಣದ ಬಳಿ ಬಳಿ ಬರುವಾಗಲೇ 3.25. ಇನ್ನೈದು ನಿಮಿಷದಲ್ಲಿ ನಿಲ್ದಾಣದ ಒಳಗೆ ಹೋಗಿ, ಪ್ರಶಾಂತ ಭಾವನನ್ನು ಹುಡುಕಿ, ಟ್ರೈನನ್ನು ಹಿಡಿಯಲು ಇನ್ನು ಕನಿಷ್ಟ 10 ನಿಮಿಷ ಬೇಕಾಗುತ್ತದೆ. ರೈಲು ತಪ್ಪೋದು ಗ್ಯಾರಂಟಿ ಎಂದುಕೊಂಡೆವು. ಓಡೋಡುತ್ತ ನಿಲ್ದಾಣದ ಒಳಗೆ ಹೋದರೆ ಪ್ರಶಾಂತ ಭಾವ ನಮಗಾಗಿ ಕಾಯುತ್ತ ನಿಂತಿದ್ದ.
           `ಬೇಗ್ನೆ ಬನ್ನಿ ಹೇಳಿದ್ದಿ. ನಿಂಗವ್ ಬಂಜ್ರಿಲ್ಲೆ. ಆನು ಬಂದು ಆಗ್ಲೆ 2-3 ತಾಸು ಆತು ನೋಡಿ..' ಎಂದ. ನಾನು ರೈಲು ಟಿಕೆಟ್ ತೋರಿಸಿದೆ. 3.45ಕ್ಕೆ ರೈಲಿನ ಸಮಯ ನಿಗದಿಯಾಗಿತ್ತು. ಒಮ್ಮೆ ನಿರಾಳರಾಗಿ ಪ್ಲಾಟ್ ಫಾರ್ಮನ್ನು ಹತ್ತಿ ರೈಲಿನ ಬಳಿಗೆ ಹೋದೆವು. ಸತಾರಾ, ಪುಣಾ ಮಾರ್ಗವಾಗಿ ಹೋಗಲು 3.30ಕ್ಕೆ ಒಂದು ಹಾಗೂ 3.45ಕ್ಕೆ ಇನ್ನೊಂದು ರೈಲುಗಳಿದ್ದವು. ಪ್ರಶಾಂತ ಭಾವ ನಾವು ಹೋಗಬೇಕಿದ್ದುದು 3.30ರ ರೈಲು ಇರಬೇಕು ಎಂದುಕೊಂಡು ಬಹಳ ಗಡಬಡೆ ಮಾಡಿದ್ದ. ನಾವು ಎದ್ದೋಬಿದ್ದೋ ಬಂದಿದ್ದೆವು. ಆದರೆ ನಾವು ಹೋಗಬೇಕಿದ್ದ 3.45ರ ಲೋಕಮಾನ್ಯ ತಿಲಕ್ ಎಕ್ಸ್ ಪ್ರೆಸ್ ನಮಗಾಗಿಯೇ ಕಾಯುತ್ತಿತ್ತು.
           ನಮಗೆ ಬುಕ್ ಆಗಿದ್ದ ಟಿಕೆಟಿನಲ್ಲಿ ನನಗೆ ಹಾಗೂ ಸಂಜಯನಿಗೆ 1 ಬೋಗಿಯಲ್ಲಿ 2 ಸೀಟ್ ಸಿಕ್ಕಿದ್ದರೆ ಪ್ರಶಾಂತ ಭಾವನಿಗೆ ಮಾತ್ರ ಇನ್ನೊಂದು ಬೋಗಿಯಲ್ಲಿ ಸೀಟ್ ಸಿಕ್ಕಿತ್ತು. ಟಿಸಿ ಬಂದು ಕೇಳಿದರೆ ಏನಾದರೂ ಸಬೂಬು ಹೇಳೋಣ ಎಂದುಕೊಂಡ ಕುಳಿತೆವು. ಅಷ್ಟರಲ್ಲಿ ಒಂದಿಷ್ಟು ತಿಂಡಿ ಸೇವನೆಯೂ ನಡೆಯಿತು. ರೈಲು ನಿಧಾನವಾಗಿ ಹೊರಡಲು ಅನುವಾಯಿತು. ಒಂದೆರಡು ಸಾರಿ ಕೂಗಿಕೊಂಡ ರೈಲು ನಿಧಾನವಾಗಿ ಮುನ್ನಡೆಯಿತು. ನಾಳೆ ಬೆಳಗಾದರೆ ಸಜ್ಜನಘಡ ಎಂಬ ಕನಸಿನೊಂದಿಗೆ ನಾವು ಹಿಗ್ಗಿದೆವು. ಟ್ರೈನಿನಲ್ಲಿ ಜನರೇ ಇರಲಿಲ್ಲ. ಮತ್ತೊಂದು 10 ನಿಮಿಷಕ್ಕೆ ಧಾರವಾಡ ರೈಲು ನಿಲ್ದಾಣ ಬಂದಿತು. ನಮ್ಮ ಕೈಗೆ ಮೊಬೈಲುಗಳು ಬಂದಿದ್ದವು. ಒಂದೆರಡು ಸೆಲ್ಫಿಗಳನ್ನು ಕ್ಲಿಕ್ಕಿಸಿಯೂ ಆಗಿತ್ತು. ಆಗಲೇ ಫೇಸ್ ಬುಕ್ಕಿಗೆ ಏರಿಸಿ ನಾಲ್ಕೈದು ಲೈಕುಗಳೂ ಬಂದಿದ್ದವು. ಖಾಲಿಯಿದ್ದ ರೈಲಿನಲ್ಲಿ, ನಿಂತು, ಕುಳಿತು, ಮಲಗಿ, ಬಾಗಿಲಿನಲ್ಲಿ ನಿಂತು ಈ ಮುಂತಾದ ಬಗೆಯಲ್ಲೆಲ್ಲ ಪೋಟೋಗಳನ್ನು ಕ್ಲಿಕ್ಕಿಸಿದ್ದಾಯಿತು. ಈ ನಡುವೆ ಎಂದೋ ಪರಿಚಯವಾಗಿ ಮರೆತು ಹೋಗವಂತಾಗಿದ್ದ ಪ್ರಶಾಂತ ಹಾಗೂ ಸಂಜಯರನ್ನು ಮತ್ತೊಮ್ಮೆ ಪರಿಚಯ ಮಾಡಿಕೊಟ್ಟು  ಮಾತಾಡ್ಕಳ್ಳಿ ಎಂದು ನಾನು ಸುಮ್ಮನಾಗಿದ್ದೆ. ಅಂತೂ ಇಂತೂ ಮೂವರೂ ಸಜ್ಜನಘಡದ ಕಡೆಗೆ ಹೊರಟಿದ್ದೆವು. ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿದ್ದ ಸಮರ್ಥರಾಮದಾಸರ ಭೂಮಿ, ಶಿವಾಜಿಗೆ ಮಾರ್ಗ ತೋರಿದ ನಾಡು, ಸದ್ಗುರು ಶ್ರೀಧರ ಸ್ವಾಮೀಜಿಗಳು ತಪಸ್ಸನ್ನಾಚರಿಸಿದ ಮಹಿಮಾ ಸ್ಥಳದ ಕಡೆಗೆ ನಾವು ಹೊರಟಿದ್ದೆವು. ಸೂರ್ಯ ಪಶ್ಚಿಮದ ಕಡೆಗೆ ಮುಖ ಮಾಡಿದ್ದನಾದರೂ ತೇಜಸ್ಸು ಕಡಿಮೆಯಾಗಿರಲಿಲ್ಲ.

(ಮುಂದುವರಿಯುತ್ತದೆ)

Friday, October 9, 2015

ಮಾಸ್ತರ್ ಮಂದಿ-8

           ಕಾನ್ಲೆ ಹೈಸ್ಕೂಲಿನಲ್ಲಿ ಕಲಿಸಿದ ವಿನೋದಾ ನಾಯ್ಕ್ ಹಾಗೂ ಸುಜಾತಾ ಮೇಡಮ್ ಬಗ್ಗೆ ಬರೆಯಲೇಬೇಕು. ಇಬ್ಬರೂ ಅಷ್ಟೇನೂ ಸ್ಟ್ರಿಕ್ಟ್ ಇರಲಿಲ್ಲ ಬಿಡಿ. ಆದರೆ ಅವರ ವಿಶಿಷ್ಟ ಹಾವ ಭಾವದಿಂದಾಗಿ ನಮ್ಮಲ್ಲಿ ಅಚ್ಚಳಿಯದೇ ಉಳಿದು ಹೋಗಿದ್ದಾರೆ. ಸುಜಾತಾ ಮೇಡಮ್ ಹಿಂದಿ ಕಲಿಸುತ್ತಿದ್ದರು. ವಿನೋದಾ ನಾಯ್ಕ್ ಮೇಡಮ್ ಹೊಲಿಗೆ ಕಲಿಸಲು ಬರುತ್ತಿದ್ದರು. ಅವರ ಕ್ಲಾಸಿನಲ್ಲಿ ಕೂರುವುದು ಅಂದರೆ ಮಜವೇ ಮಜಾ ಬಿಡಿ

ವಿನೋದಾ ನಾಯ್ಕ್ :
            ವಿ.ಎಸ್.ಎನ್  ಎಂಬ ಶಾರ್ಟ್ ಫಾರ್ಮಿನಿಂದ ಕರೆಸಿಕೊಳ್ಳುತ್ತಿದ್ದ ವಿನೋದಾ ನಾಯ್ಕ ಮೇಡಮ್ ನಾನು ಎಂಟನೇ ಕ್ಲಾಸಿನಲ್ಲಿದ್ದಾಗ ಕೊನೆ ಕೊನೆಯಲ್ಲಿ ಶಾಲೆಗೆ ವರ್ಗವಾಗಿ ಬಂದಿದ್ದರು. ಮೂಲತಃ ಉತ್ತರ ಕನ್ನಡದವರಾಗಿದ್ದ ವಿನೋದಾ ನಾಯ್ಕ ಅವರ ಯಜಮಾನರೂ ಹೈಸ್ಕೂಲು ಶಿಕ್ಷಕರಾಗಿದ್ದರು. ಹೊಲಿಗೆ ಶಿಕ್ಷಕಿಯಾಗಿ ಬಂದಿದ್ದ ಮೇಡಂ ಏನು ಕಲಿಸಿದರೋ. ನಾವೇನು ಕಲಿತೆವೋ ಗೊತ್ತಿಲ್ಲ ನೋಡಿ. ನಾಲ್ಕೈದು ದಿನ ಕಾನಲೆಯ ನನ್ನ ದೊಡ್ಡಪ್ಪನ ಮನೆಯಿಂದ ದೊಡ್ಡಮ್ಮನಿಗೆ ಭಾಗಿನಕ್ಕೆಂದು ಬಂದಿದ್ದ ಒಂದೆರಡು ವಾರುಗಳನ್ನು, ಶರ್ಟ್ ಫೀಸುಗಳನ್ನು ಹೈಸ್ಕೂಲಿಗೆ ಒಯ್ದಿದ್ದೆ. ದಾರದುಂಡೆ, ಸೂಜಿಗಳನ್ನು ಹಿಡಿದು ಹೋಗುತ್ತಿದ್ದೆವು. ತೋಳಿಲ್ಲದ ಝಬಲಾ, ಚೈನ್ ಹೊಲಿಗೆ ಈ ಮುಂತಾದ ಕೆಲವು ಹೊಲಿಗೆ ಪದ್ಧತಿಗಳನ್ನು ನಮಗೆ ಕಲಿಸಿದ್ದು ನೆನಪಿನಲ್ಲಿದೆ. ಆದರೆ ಹೊಲಿಗೆಗೆ ಸಂಬಂಧಿಸಿದಂತೆ ಯಾವುದೇ ಪರೀಕ್ಷೆಗಳನ್ನು ವಿನೋದಾ ಮೇಡಂ ನಡೆಸಲಿಲ್ಲ.
            ಒಂಭತ್ತನೇ ಕ್ಲಾಸಿನಲ್ಲಿ ನಾನು ಓದುತ್ತಿದ್ದಾಗ ವಿನೋದಾ ಮೇಡಂ ಕೆಲ ಕಾಲ ಇಂಗ್ಲೀಷ್ ಹಾಗೂ ಮತ್ತೆ ಕೆಲ ಕಾಲ ಸಮಾಜ ವಿಜ್ಞಾನಗಳನ್ನು ಕಲಿಸಲು ಬರುತ್ತಿದ್ದರು. ಇಂಗ್ಲೀಷ್ ಶಿಕ್ಷಕರಾಗಿದ್ದ ಬಿ. ಆರ್. ಲಕ್ಷ್ಮೀನಾರಾಯಣ ಹಾಗೂ ಸಮಾಜ ವಿಜ್ಞಾನ ಶಿಕ್ಷಕರಾಗಿದ್ದ ವನಮಾಲಾ ಮೇಡಂ ದೀರ್ಘಕಾಲದ ರಜೆ ಹಾಕಿದಾಗ ವಿನೋದಾ ಮೇಡಂ ಇವೆರಡೂ ವಿಷಯಗಳನ್ನು ಕಲಿಸಲು ಬರುತ್ತಿದ್ದರು. ಒಂದು ದಿನ ವಿದ್ಯಾರ್ಥಿಗಳೆಲ್ಲ ಸೇರಿ ಗ್ಲೋಬ್ ನೋಡುತ್ತಿದ್ದೆವು. ವಿನೋದಾ ಮೇಡಂ ಸಮಾಜ ವಿಜ್ಞಾನ ಕಲಿಸುತ್ತಿದ್ದವರು ಸಖತ್ ಜೋಶ್ ನಲ್ಲಿದ್ದರು. ಆ ದಿನಗಳಲ್ಲಿ ನಾನು ಕ್ಲಾಸಿಗೆ ಅತ್ಯಂತ ಇಂಟಲಿಜೆಂಟ್ ವಿದ್ಯಾರ್ಥಿ. ವಿನೋದಾ ಮೇಡಂ ಗ್ಲೋಬಿನಲ್ಲಿ ವಿವಿಧ ದೇಶಗಳನ್ನು ತೋರಿಸುತ್ತಿದ್ದರು. ನಾನು ಪ್ರೈಮರಿ ಶಾಲೆಯಲ್ಲಿದ್ದಾಗಲೇ ಗ್ಲೋಬ್ ಗಳನ್ನು ನೋಡಿ ದೇಶಗಳನ್ನು ಹುಡುಕಿ, ಅವುಗಳ ರಾಜಧಾನಿಗಳ ಹೆಸರನ್ನು ಬಾಯಲ್ಲಿ ಉರುಹೊಡೆದುಕೊಳ್ಳುತ್ತಿದ್ದೆ. ಅಮೇರಿಕಾ, ಕೆನಡಾ, ಬ್ರಿಟನ್ ಸೇರಿದಂತೆ ಹಲವಾರು ಖ್ಯಾತನಾಮ ದೇಶಗಳನ್ನು ವಿನೋದಾ ಮೇಡಂ ಹುಡುಕಲು ಕೇಳಿದರು. ನಮ್ಮದೇ ಕ್ಲಾಸಿನ ಹಲವು ವಿದ್ಯಾರ್ಥಿಗಳು ಅವುಗಳನ್ನು ತೋರಿಸಿದರು. ಆಮೇಲೆ ದಕ್ಷಿಣ ಕೋರಿಯಾ ಹಾಗೂ ಉತ್ತರ ಕೋರಿಯಾ ಯಾವ ಖಂಡದಲ್ಲಿ ಬರುತ್ತದೆ. ಅದನ್ನು ತೋರಿಸಿ ಎಂದರು. ಯಾರೊಬ್ಬರೂ ಇದಕ್ಕೆ ಮುಂದಾಗಲೇ ಇಲ್ಲ. ಕೊನೆಗೆ ನಾನು ಎದ್ದು ನಿಂತು `ಈ ಎರಡೂ ದೇಶಗಳು ಏಷ್ಯಾ ಖಂಡದಲ್ಲಿ ಬರುತ್ತದೆ. ಜಪಾನ್ ಪಕ್ಕಕ್ಕಿವೆ' ಎಂದೆ. `ನಿನ್ ತಲೆ.. ನೀ ಜೋರಿದ್ದೆ ಅನ್ನೊದು ನಂಗೊತ್ತು. ಹಾಗಂತ ಬಾಯಿಗೆ ಬಂದ ಹಾಗೆ ಹೇಳಬೇಡ. ಇವೆರಡೂ ದೇಶಗಳು ಅಮೆರಿಕಾ ಖಂಡದಲ್ಲಿವೆ..' ಎಂದರು.
            ನಾನು ಎದ್ದು ನಿಂತವನೇ `ಗ್ಲೋಬ್ ಕೊಡಿ.. ತೋರಿಸುತ್ತೇನೆ..' ಎಂದೆ. ಅವರು ಕೊಡಲು ಒಪ್ಪಲಿಲ್ಲ. ಗ್ಲೋಬ್ ಕಿತ್ತುಕೊಂಡು ಸೀದಾ ಚೀನಾದ ಪಕ್ಕಕ್ಕಿದ್ದ ಆ ಎರಡು ದೇಶಗಳನ್ನು ಹುಡುಕಿ ತೋರಿಸಿದೆ. ಮೇಡಂ ಮುಖ ಸಪ್ಪಗಾಗಿತ್ತು. ನಮ್ಮ ಕ್ಲಾಸಿನ ಹುಡುಗರು ಒಮ್ಮೆ ಹೋ ಎಂದಿದ್ದರು. ಏನೋ ಖುಷಿ ನನ್ನ ಮನಸ್ಸಿನಲ್ಲಿ ಮೂಡಿತ್ತು. ಆಮೇಲಿಂದ ನನ್ನ ಮೇಲೆ ಮೇಡಮ್ಮಿಗೆ ಎಲ್ಲಿಲ್ಲದ ದ್ವೇಷ ಬೆಳೆದಿತ್ತು ನೋಡಿ. ನಂತರದ ದಿನಗಳಲ್ಲಿ ಮೇಡಂ ಯಾವುದಾದರೂ ಕ್ಲಾಸನ್ನು ಕಲಿಸಲು ಬಂದರೆ ಸುಮ್ಮ ಸುಮ್ಮನೆ ಬೈಯುವುದು, ಪರೀಕ್ಷೆಗಳಲ್ಲಿ ಅಂಕಗಳನ್ನು ಕತ್ತರಿಸುವುದು ಇತ್ಯಾದಿ ಮಾಡುತ್ತಿದ್ದರು. ಒಂಭತ್ತನೇ ಕ್ಲಾಸು ಮುಗಿಯುವ ವೇಳೆಗೆ ಅವರಿಗೆ ಇದ್ದಕ್ಕಿದ್ದಂತೆ ದ್ವೇಷವೂ ಕಡಿಮೆಯಾಗಿತ್ತು ಬಿಡಿ.
           ವಿನೋದಾ ಮೇಡಂ ಅವರ ಗಂಡ ಪ್ರತಿದಿನ ಹೈಸ್ಕೂಲು ಬಿಡುವ ಸಮಯಕ್ಕೆ ಬಂದು ಮೇಡಂ ಅವರನ್ನು ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಹೀರೋಹೊಂಡಾ ಸ್ಪ್ಲೆಂಡರ್ ಬೈಕ್ ಅವರದ್ದು. ಆದರೆ ಅವರು ಎಷ್ಟು ಕುಳ್ಳಗಿದ್ದರು ಎಂದರೆ  ಬೈಕಿನ ಮೇಲೆ ಅವರು ಕುಳಿತರೆ ಕಾಲು ನೆಲಕ್ಕೆ ಮುಟ್ಟುತ್ತಿರಲಿಲ್ಲ. ನಾವು ಹುಡುಗರೆಲ್ಲ ಸೇರಿ ಕುಳ್ಳ-ಕುಳ್ಳಿ ಸವಾರಿ ಹೊರಟಿದೆ ನೋಡ್ರೋ ಎಂದು ತಮಾಷೆ ಮಾಡಿದ್ದೂ ಇದೆ. ಒಂಭತ್ತನೇ ತರಗತಿ ಕೊನೆ ಕೊನೆಯಲ್ಲಿ ವಿನೋದಾ ನಾಯ್ಕ್ ಅವರು ಹೈಸ್ಕೂಲಿಗೆ ಕಲಿಸಲು ಬರುತ್ತಿರಲಿಲ್ಲ. ಅವರು ಗರ್ಭಿಣಿಯಾಗಿದ್ದರು. ಹತ್ತನೇ ಕ್ಲಾಸಿನಲ್ಲಿ ನಾವು ಇದ್ದ ಸಂದರ್ಭದಲ್ಲಿ ವಿನೋದಾ ಮೇಡಮ್ಮಿಗೆ ಗಂಡು ಮಗುವಾಗಿದೆ ಎನ್ನುವ ವಿಷಯವೂ ತಿಳಿಯಿತು. ನಂತರ ಕೆಲವು ತಿಂಗಳುಗಳ ನಂತರ ಹೈಸ್ಕೂಲಿಗೆ ಬಂದು ಸ್ವೀಟ್ ಕೊಟ್ಟಿದ್ದರು. ಮಜಾ ಎಂದರೆ ನಮ್ಮ ದೈಹಿಕ ಶಿಕ್ಷಕರಾಗಿದ್ದ ಸಿ. ಆರ್. ಲಿಂಗರಾಜು ಅವರು ವಿನೋದಾ ಮೇಡಂ ಜೊತೆಗೂ ಸಿಕ್ಕಾಪಟ್ಟೆ ಜಗಳ ಮಾಡಿದ್ದರು. ಹೈಸ್ಕೂಲಿನ ಗ್ರೌಂಡಿನಲ್ಲಿ ಒಮ್ಮೆ ಸಿಕ್ಕಾಪಟ್ಟೆ ಕೂಗಾಡಿಕೊಂಡಿದ್ದರು. ಆಮೇಲೆ ಆ ಮೇಡಮ್ಮಿಗೆ ವರ್ಗವಾಯಿತೋ ಅಥವಾ ದೀರ್ಘಕಾಲದ ರಜಾ ತೆಗೆದುಕೊಂಡರೋ ಗೊತ್ತಿಲ್ಲ ನೋಡಿ. ನಾನು ಎಸ್ ಎಸ್ ಎಲ್ ಸಿ ಮುಗಿಯುವ ವೇಲೆಗೆ ಅವರು ಇರಲಿಲ್ಲ.

ಸುಜಾತಾ ಮೇಡಂ :
                 `ಏನೋ.. ಧನವೇ... ಗೊತ್ತಾಗದಿಲ್ಲೇನೋ ನಿಂಗೆ..' `ಏನೇನೂ ಇಲ್ಲ.. ಈ ಸಾರಿ ನಮ್ ಹುಡುಗ್ರು ಏನೇನೂ ಇಲ್ಲ..' ಎಂದು ರಾಗವಾಗಿ ಹೇಳುತ್ತಿದ್ದ ಸುಜಾತಾ ಮೇಡಂ ಹೈಸ್ಕೈಲಿನಲ್ಲೆಲ್ಲ ಹೆಚ್.ಎಸ್.ಎಸ್. ಎಂದೇ ಖ್ಯಾತಿ ಪಡೆದಿದ್ದವರು. ಹಿಂದಿ ವಿಷಯವನ್ನು ಕಲಿಸುತ್ತಿದ್ದ ಸುಜಾತಾ ಮೇಡಂ ಅದೆಷ್ಟು ಎತ್ತರ ಇದ್ದರು ಅಂದರೆ ಆರು ಅಡಿಗಿಂತ ಜಾಸ್ತಿ ಇರಬೇಕು. ಮೇಡಂ ಮುಂದಿನ ನಾಲ್ಕು ಹಲ್ಲುಗಳು ಸಿಕ್ಕಾಪಟ್ಟೆ ಹೊರಕ್ಕೆ ಬಂದಿದ್ದವು. ಪಾಪ ಮೇಡಂ ನಮಗೆ ಪಾಠ ಮಾಡುವಾಗ ಒಂದು ಕೈಯಲ್ಲಿ ಬಾಯಿ ಮುಚ್ಚಿಕೊಂಡು ಪಾಟ ಮಾಡುತ್ತಿದ್ದರು. ನಾವೆಲ್ಲ ನಗುತ್ತಿದ್ದೆವು.
              ಆ ದಿನಗಳಲ್ಲಿ ನಾನು ಹೋಂ ವರ್ಕ್ ಮಾಡದೇ ಕಳ್ಳ ಬೀಳುತ್ತಿದ್ದೆ. ಒಂದು ದಿನ ಹೋಂ ವರ್ಕ ಮಾಡದೇ ಇರುವ ಕಾರಣ ಹಲವು ವಿದ್ಯಾರ್ಥಿಗಳನ್ನು ಕ್ಲಾಸಿನಿಂದ ಹೊರಕ್ಕೆ ಹಾಕಿದ್ದರು. ನಾನೂ ಕೂಡ ಹೊರಕ್ಕೆ ಹೋಗಿದ್ದೆ. ಆ ದಿನಗಳಲ್ಲಿ ನನಗೆ ಹಿಂದಿ ಗೆ 25 ಕ್ಕೆ 24 ಮಾರ್ಕ್ಸುಗಳು ಬೀಳುವಷ್ಟು ಬುದ್ಧಿವಂತ. ನನ್ನನ್ನು ಹೊರಕ್ಕೆ ಕಳಿಸಿದ್ದ ಮೇಡಂ `ವಿನಯನ ಹೊರಕ್ಕೆ ಕಳಿಸಿದ್ನಾ ನಾನು.. ಏ ವಿನಯಾ.. ಬಾ ಒಳಕ್ಕೆ..' ಅಂದರು. ನಾನು ಹೋದೆ. `ನೀನು ಹೋಂ ವರ್ಕ್ ಮಾಡಿದ್ದೆ ಅಲ್ಲವಾ..?' ಎಂದರು. ನಾನು `ಇಲ್ಲ ಅಂದೆ...' `ಏನೋ.. ಧನವೇ... ಏನೋ ಅಂದಕಂಡಿದ್ದೆ ನಿನ್ನಾ.. ಹೋಗು.. ಹೋಗು ಹೊರಗೆ.. ನೆಡಿ..' ಎಂದು ಮತ್ತೆ ಬೆನ್ನಟ್ಟಿದ್ದರು.
            ಈ ಮೇಡಂ ಹೊಡೆಯುತ್ತಿದ್ದರು. ಆ ಹೊಡೆತ ಮಾತ್ರ ಯಾರಿಗೂ ತಾಗುತ್ತಲೇ ಇರಲಿಲ್ಲ. ಅವರು ಹೊಡೆಯುತ್ತಿದ್ದಾಗ ಮಾತ್ರ ನಾವು ನೋವಾದಂತೆ ನಟಿಸಬೇಕಿತ್ತು. ನಾವು ಹಾಗೆ ನಟಿಸುತ್ತಿದ್ದೆವು ಕೂಡ. ಆದರೆ ಒಳಗೊಳಗೆ ನಗು. ಇಂತಹ ಮೇಡಂ ಹಿಂದಿ ಕಲಿಸಿದ ಪರಿಣಾಮ ಎಸ್.ಎಸ್.ಎಲ್.ಸಿ ಪ್ರಿಪ್ರೆಟರಿ ಪರೀಕ್ಷೆಯಲ್ಲಿ ನನಗೆ 100ಕ್ಕೆ 97 ಅಂಕಗಳು ಬಂದಿದ್ದವು. ಪಬ್ಲಿಕ್ ಪರೀಕ್ಷೆಯಲ್ಲಿ 88 ಅಂಕಗಳು ಬಂದಿದ್ದವು ಬಿಡಿ. ಪ್ರತಿ ವರ್ಷ ಹೈಸ್ಕೂಲಿನಲ್ಲಿ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದವು. ಅದರಲ್ಲಿ ಕಂಠಪಾಠ ಸ್ಪರ್ಧೆಯೂ ಒಂದು. ನಾನು 8, 9 ಹಾಗೂ 10 ಈ ಮೂರೂ ವರ್ಷ ಕಂಠಪಾಠ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿಕೊಂಡಿದ್ದೆ. ನನಗಿಂತ ಚಂದ ಮಾಡಿ ಹಿಂದಿ ಹಾಡುಗಳನ್ನು ಹಾಡುವವರು ನನ್ನ ಕ್ಲಾಸಿನಲ್ಲಿದ್ದರು. ರಾಗವಾಗಿ ಹಾಡುವವರೂ ಇದ್ದರು. ಆದರೆ ಯಾರೊಬ್ಬರೂ ಪೂರ್ತಿ ಹೇಳುತ್ತಿರಲಿಲ್ಲ. ಅಲ್ಲದೇ ಹಾಡಿನ ಮಧ್ಯ ಸುಮ್ಮ ಸುಮ್ಮನೆ ನಗುವುದು, ಮರೆತು ಹೋಗಿ ನಿಲ್ಲುವುದು ಇವನ್ನೆಲ್ಲ ಮಾಡುತ್ತಿದ್ದರು. ನಾನು ಉರು ಹೊಡೆದುಕೊಳ್ಳುತ್ತಿದ್ದ ಹಿಂದಿ ಕವಿತೆಯನ್ನು ಸ್ಫುಟವಾಗಿ ಹೇಳುತ್ತಿದ್ದೆ. ಹೀಗಾಗಿ ನನಗೆ ಮೊದಲ ಸ್ಥಾನ ಬರುತ್ತಿತ್ತು.
         ಇಂತಹ ಸುಜಾತಾ ಮೇಡಮ್ಮಿಗೆ ನನ್ನದೇ ಕ್ಲಾಸಿನ ಹುಡುಗರು ಕೊಕ್ಕರೆ ಎನ್ನುವ ಹೆಸರನ್ನೂ ಇಟ್ಟಿದ್ದರು. ಉದ್ದವಿದ್ದ ಅವರಿಗೆ ಈ ಹೆಸರನ್ನು ಇಟ್ಟಿದ್ದಾರೆ ಎನ್ನುವುದು ನಂತರದ ದಿನಗಳಲ್ಲಿ ನನಗೆ ತಿಳಿದಿತ್ತು. ನನಗೆ ಈಗ ಸ್ವಲ್ಪವಾದರೂ ಹಿಂದಿ ಓದಲು, ಮಾತನಾಡಲು ಬರುತ್ತದೆ ಎಂದರೆ ಅದಕ್ಕೆ ಸುಜಾತಾ ಮೇಡಂ ಕಾರಣ. ಅವರಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು ಬಿಡಿ. ಬಹುಶಃ ಸುಜಾತಾ ಮೇಡಂ ಈಗ ನಿವೃತ್ತಿಯಾಗಿರಬೇಕು ಎನ್ನಿಸುತ್ತದೆ. ಎಲ್ಲಿದ್ದಾರೋ ಗೊತ್ತಿಲ್ಲ. ಅವರು ಚನ್ನಾಗಿರಲಿ.

(ಮುಂದುವರಿಯುತ್ತದೆ)

Wednesday, October 7, 2015

ಅಘನಾಶಿನಿ ಕಣಿವೆಯಲ್ಲಿ-27

             ಉಂಚಳ್ಳಿ ಜಲಪಾತವನ್ನು ನೋಡುವುದೇ ಒಂದು ಸೊಬಗು. ಥಟ್ಟನೆ ನೋಡಿದರೆ ಗೋಕರ್ಣದ ಆತ್ಮಲಿಂಗದ ಆಕಾರದಲ್ಲಿ ಕಾಣುವ ಜಲಪಾತದ ಚೆಲುವಿಗೆ ಸಾಟಿಯಿಲ್ಲ ಬಿಡಿ. ದೂರದಿಂದಲೇ ಭೋರೆಂದು ಸದ್ದು ಮಾಡುವ ಜಲಪಾತಕ್ಕೆ ಸರ್ವ ಕಾಲದಲ್ಲಿಯೂ ಪ್ರವಾಸಿಗರು ದಂಡು ದಂಡಾಗಿ ಆಗಮಿಸುತ್ತಾರೆ. ವಿಕ್ರಮ ಹಾಗೂ ತಂಡಕ್ಕೆ ಜಲಪಾತದ ಬುಡಕ್ಕೆ ತಲುಪುವ ತವಕ ಮತ್ತಷ್ಟು ಹೆಚ್ಚಿತು. ಜಲಪಾತ ವೀಕ್ಷಣೆಗೆ ಹಾಕಲಾಗಿದ್ದ ಸಿಮೆಂಟ್ ಮೆಟ್ಟಿಲುಗಳನ್ನು ಇಳಿದು ಪಕ್ಕದಲ್ಲಿಯೇ ಜರುಗಿ ಜಲಪಾತದ ಬುಡಕ್ಕೆ ಇಳಿಯಲಾರಂಭಿಸಿದರು. ಎಪ್ರಿಲ್ ತಿಂಗಳಾದ್ದ ಕಾರಣ ಜಲಪಾತದಲ್ಲಿ ಸಾಕಷ್ಟು ನೀರು ಇರಲಿಲ್ಲ. ಸೀದಾ ಜಲಪಾತ ಬೀಳುವ ಪ್ರದೇಶಕ್ಕೆ ತೆರಳಿ, ಜಲಪಾತದ ನೀರಿಗೆ ತಲೆಕೊಟ್ಟು ನಿಲ್ಲಬಹುದಾಗಿತ್ತು.
         ಅರ್ಧಗಂಟೆಯ ಸಮಯದಲ್ಲಿ ಜಲಪಾತದ ಬುಡಕ್ಕೆ ತಲುಪಿದ್ದರು. ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ದಾಟಿ ನೀರು ಬೀಳುತ್ತಿದ್ದ ಪ್ರದೇಶಕ್ಕೆ ಹೋದವರಿಗೆ ಆಸೆ ತಡೆಯಲಿಲ್ಲ. ಸೀದಾ ತೊಟ್ಟಿದ್ದ ಬಟ್ಟೆ ಯನ್ನು ಲೆಕ್ಕಿಸದೇ ಜಲಪಾತದ ನೀರಿಗೆ ತಲೆ ಕೊಟ್ಟರು. ದೊಡ್ಡದೊಂದು ನೀರಿನ ಗುಂಡಿಯನ್ನು ಈಜಲು ವಿನಾಯಕ ಮುಂದಾದ. ವಿಷ್ಣು ಹಾಗೂ ಪ್ರದೀಪ ಕೂಡ ವಿನಾಯಕನನ್ನು ಹಿಂಬಾಲಿಸಿದರು. ವಿಜೇತಾಳನ್ನು ಹೊರತುಪಡಿಸಿ ಉಳಿದೆಲ್ಲ ಹೆಂಗಳೆಯರು ಜಲಪಾತ ಬೀಳುತ್ತಿದ್ದ ಜಾಗಕ್ಕೆ ಸುತ್ತು ಬಳಸಿನ ಹಾದಿಯಲ್ಲಿ ಸಾಗಿ ತಲೆಕೊಟ್ಟು ನಿಂತರು. ಕ್ಷಣ ಕ್ಷಣಕ್ಕೂ ರೋಮಾಂಚನ ಅನುಭವಿಸಿದ ಇವರೆಲ್ಲರ ಬಾಯಿಂದ ಹಾ... ಹೋ... ಎನ್ನುವ ಕೂಗು ಉಂಚಳ್ಳಿ ಜಲಪಾತದ ಕಣಿವೆಯಿಂದ ಅಲೆ ಅಲೆಯಾಗಿ ಕೇಳುತ್ತಿತ್ತು. ಜಲಪಾತದ ಸದ್ದಿಗೆ ಪೈಪೋಟಿ ನೀಡುವಂತಿತ್ತು ಇವರ ಕೂಗು.
         ವಿಕ್ರಮ ಹಾಗೂ ವಿಜೇತಾ ಇಬ್ಬರೇ ದೂರದಲ್ಲಿ ಕಲ್ಲು ಬಂಡೆಯ ಮೇಲೆ ಕುಳಿತು ನೀರಿಗೆ ತಲೆ ಕೊಟ್ಟವರ ಹಾಗೂ ಜಲಪಾತದ ಗುಂಡಿಯಲ್ಲಿ ಈಸು ಬಿದ್ದಿದ್ದವರನ್ನು ನೋಡುತ್ತಿದ್ದರು. ವಿನಾಯಕ ಇದ್ದಕ್ಕಿದ್ದಂತೆ ವಿಜೇತಾಳ ಬಳಿ `ನಾನು ಒಂದು ವಿಷಯ ಕೇಳಲಾ..?' ಎಂದ.
          `ಹುಂ.. ಕೇಳು.. ನೀನು ಏನನ್ನಾದರೂ ಕೇಳಲು ನನ್ನ ಪರ್ಮಿಷನ್ ಬೇಕಾ? ಇವತ್ತೇನು ಹೊಸ ರೀತಿ ಕೇಳ್ತಾ ಇದ್ದೀ..?' ಎಂದಳು ವಿಜೇತಾ.
          `ಇದು ಸಾಮಾನ್ಯ ವಿಷಯ ಅಲ್ಲ. ಸ್ವಲ್ಪ ಬೇರೆಯ ವಿಷಯ. ಕೇಳಲೋ.. ಬೇಡವೋ ಅಂತ..' ಎಂದ ವಿಕ್ರಮ.
          `ಇದೊಳ್ಳೆ ಕಥೆ ನಿಂದು. ನನ್ನ ಹತ್ರ ಕೇಳೋಕೆ ಮುಜುಗರವಾ? ನಿಂದೊಳ್ಳೆ ಕಥೆ ಮಾರಾಯಾ.. ಸುಮ್ನೆ ಕೇಳು..'
           `ಹೆಂಗ್ ಕೇಳೋದು ಅಂತ ಗೊತ್ತಾಗ್ತಾ ಇಲ್ಲ.. ಯಾಕೋ ಸ್ವಲ್ಪ ನರ್ವಸ್ ಆಗಿದ್ದೇನೆ ನೋಡು..'
           `ಹೆಂಗೆ ಅಂದ್ರೆ..? ಬಾಯಲ್ಲಿ ಕೇಳು ಮಾರಾಯಾ.. ನೀನು ನರ್ವಸ್ ಆಗೋದಾ? ದಿ ಗ್ರೇಟ್ ಕರಾಟೆ ಚಾಂಪಿಯನ್ ನರ್ವಸ್ ಆಗೋದು ಅಂದ್ರೆ ಏನ್ ತಮಾಷೆನಾ? ಅಂತದ್ದೇನಪ್ಪಾ ವಿಷಯ..' ತಮಾಷೆ ಮಾಡಿದಳು ವಿಜೇತಾ.
            `ತಮಾಷೆ ಮಾಡ್ಬೇಡ ಪ್ಲೀಸ್.. ಹೆಂಗ್ ಕೇಳೋದು ಅಂತ ನಂಗೆ ಗೊತ್ತಾಗ್ತಿಲ್ಲ. ಮತ್ತೆ.. ನೀನು ಯಾರನ್ನಾದರೂ ಲವ್ ಮಾಡಿದ್ಯಾ?'
             ಇದ್ದಕ್ಕಿದ್ದಂತೆ ಸ್ವಲ್ಪ ಗಂಭೀರವಾದ ವಿಜೇತಾ ಒಮ್ಮೆ ವಿಕ್ರಮನನ್ನು ತೀಕ್ಷ್ಣವಾಗಿ ನೋಡಿದಳು. ನಂತರ ಇದು ತಮಾಷೆಯಿರಬೇಕು ಎಂದುಕೊಂಡು `ಹು.. ಮಾರಾಯಾ.. ಪಿಯುಸಿಯಲ್ಲಿ ಇರಬೇಕಾದರೆ ಒಬ್ಬ ಹುಡುಗ ಪ್ರಪೋಸ್ ಮಾಡಿದ್ದ ನೋಡು. ಒಳ್ಳೆಯ ಹುಡುಗ. ಆದರೆ ಹೇಳಿಕೊಳ್ಳಲು ಸಂಕೋಚ ಪಟ್ಟುಕೊಂಡಿದ್ದ. ಆತ ಹೆದರಿ ಹೆದರಿ ಹೇಳಿಕೊಂಡಿದ್ದ. ನಾನು ಸಿಟ್ಟಿನಿಂದಲೇ ಆತನಿಗೆ ಉತ್ತರ ಕೊಟ್ಟಿದ್ದೆ. ಆ ನಂತರ ಯಾಕೋ ಇಷ್ಟವಾಗಿದ್ದ ಆತ. ಆತನ ಪ್ರಪೋಸಲ್ ಗೆ ಒಪ್ಪಿಗೆ ಸೂಚಿಸಬೇಕು ಅಂತ ನಾನು ಅವನನ್ನು ಹುಡುಕಿ ಹೊರಟಿದ್ದೆ. ಆದರೆ ಆ ನಂತರ ಅಂವ ಏನಾದನೋ ಗೊತ್ತಿಲ್ಲ ನೋಡು.. ನಾಪತ್ತೆಯಾಗಿದ್ದ. ಆಮೇಲಿ ಡಿಗ್ರಿ ಓದುವಾಗ ಒಂದಿಬ್ಬರು ಲವ್ ಮಾಡ್ತೀಯಾ ಅಂತ ಕೇಳಿದ್ದರು. ನನಗೆ ಇಷ್ಟವಾಗಿರಲಿಲ್ಲ.. ರಿಜೆಕ್ಟ್ ಮಾಡಿದ್ದೆ.. ಹೌದು.. ಈಗ ಈ ಪ್ರಶ್ನೆ ಯಾಕೆ ಕೇಳಿದ್ದು..?'
            `ಹಿಂಗೆ ಸುಮ್ನೆ ಕೇಳಿದ್ದು ನೋಡು.. ಯಾಕೋ ನೀನು ಯಾರನ್ನಾದರೂ ಲವ್ ಮಾಡ್ತಿರಬಹುದಾ ಎಂಬ ಕುತೂಹಲ ಕಾಡಿತು. ಅದ್ಕೆ ಕೇಳಿದೆ ಅಷ್ಟೆ..' ವಿಕ್ರಮ ಉತ್ತರಿಸಿದ್ದ.
             `ಸುಮ್ನೆ ಎಲ್ಲಾ ಕೇಳೊ ವ್ಯಕ್ತಿಯಲ್ಲವಲ್ಲ ನೀನು.. ಏನೋ ಕಾರಣ ಇರಬೇಕು ನೋಡು. ಯಾವುದಾದರೂ ಪ್ರಪೋಸಲ್ ಬಂದಿದೆಯಾ? ಅಥವಾ ಜಾತಕ ಗೀತಕ ಬಂದಿದೆಯಾ.. ಹೇಳು ಮಾರಾಯಾ... ತಲೆಯಲ್ಲಿ ಹುಳ ಬಿಡಬೇಡ..' ವಿಜೇತಾ ಹೇಳಿದ್ದಳು.
             `ಏ ಏನಿಲ್ಲ. ಸುಮ್ನೆ ಕೇಳಿದೆ..'
             `ಹೇಳೋ ಮಾರಾಯಾ.. ನನ್ನನ್ನು ಯಾರಾದರೂ ಲವ್ ಮಾಡ್ತಾರಾ.. ನಾನು ಸಧ್ಯಕ್ಕೆ ಖಾಲಿ ಇದ್ದೇನೆ ನೋಡು.. ಯಾರಾದರೂ ನಿನ್ನ ಬಳಿ ಕೇಳಿದ್ದರೆ ಡೈರೆಕ್ಟಾಗಿ ಬಂದು ಕೇಳೋಕೆ ಹೇಳು.. ಇಷ್ಟ ಆದರೆ ಥಟ್ಟನೆ ಒಪ್ಪಿಕೊಂಡು ಬಿಡ್ತೀನಿ ನೋಡು..' ಮತ್ತೆ ತಮಾಷೆಯಾಗಿ ಹೇಳಿದ್ದಳು ವಿಜೇತಾ.
             `ಅಯ್ಯಯ್ಯೋ.. ಯಾರೂ ಹೇಳಿಲ್ಲ ನನ್ನ ಹತ್ರ. ನಾನೇ ಸುಮ್ಮನೆ ಕೇಳಿದೆ ನೋಡು..' ವಿಕ್ರಮ ತೊದಲಿದ.
             `ಇಲ್ಲ ಇದರಲ್ಲಿ ಏನೋ ಇದೆ. ನೀನು ಸುಮ್ಮನೆ ಕೇಳಿಲ್ಲ ಬಿಡು. ಯಾರಪ್ಪಾ ಅದು ನನ್ನ ಬಗ್ಗೆ ವಿಚಾರಿಸಿದ್ದು? ಯಾರಾದರೂ ನನ್ನ ಲವ್ ಮಾಡ್ತಾ ಇದ್ದಾರಾ ಹೇಗೆ? ನೀನೇನಾದ್ರೂ ಲವ್ ಮಾಡ್ತಾ ಇದ್ದೀಯಾ ಹೇಗೆ? ಹಂಗೇನಾದ್ರೂ ಇದ್ರೆ ಡೈರೆಕ್ಟ್ ಆಗಿ ಹೇಳ್ ಬಿಡು ಮಾರಾಯಾ.. ಮತ್ತಿನ್ಯಾರಾದ್ರೂ ಮನಸ್ಸಿನೊಳಗೆ ತೂರಿಕೊಳ್ಳುವ ಮೊದಲು ನಿಂಗೆ ಒಕೆ ಅಂತ ಹೇಳಿ ಬಿಡ್ತೀನಿ..' ಡೈರೆಕ್ಟ್ ಶೂಟ್ ಮಾಡಿದ್ದಳು ವಿಜೇತಾ. ಅವಳ ಮಾತಿನಲ್ಲಿ ತಮಾಷೆಯ ಸೆಳಕಿದ್ದರೂ ಸೀರಿಯಸ್ ಅಂಶಗಳು ಸಾಕಷ್ಟಿದ್ದವು.
            ವಿಕ್ರಮ ಬೆವೆತು ಹೋಗಿದ್ದ. ಏನು ಹೇಳಬೇಕು ಎನ್ನುವುದು ಆತನಿಗೆ ಗೊತ್ತಾಗಲಿಲ್ಲ. ಪರಿಚಯವಾದ ದಿನದಿಂದಲೇ ವಿಕ್ರಮನಿಗೆ ಮಾಡಿದರೆ ಇಂತಹ ಹುಡುಗಿಯನ್ನು ಲವ್ ಮಾಡಬೇಕು ಎನ್ನಿಸಿದ್ದು ಸುಳ್ಳಲ್ಲ. ಯಾಕೋ ಮೊದಲ ಸಂದರ್ಶನದ ದಿನದಂದೆ ವಿಜೇತಾ ವಿಕ್ರಮನಿಗೆ ಇಷ್ಟವಾಗಿ ಬಿಟ್ಟಿದ್ದಳು.ನಂತರದ ದಿನಗಳಲ್ಲಿ ವಿಕ್ರಮನಿಗೆ ಆಕೆ ಮತ್ತಷ್ಟು ಹತ್ತಿರವಾಗಿದ್ದಳು. ಹತ್ತಿರವಾದಂತೆಲ್ಲ ಪ್ರೀತಿಯ ಸಸಿ ಮೊಳಕೆಯೊಡೆದು ಹೆಮ್ಮರವಾಗಿತ್ತು. ವಿಕ್ರಮ ಕೂಡ ಆ ಸಸಿಗೆ ಪೋಷಣೆ ನೀಡಿ ಎದೆಯಲ್ಲಿ ಬೆಚ್ಚಗೆ ಕಾಪಾಡಿಕೊಂಡಿದ್ದ.
            ಕೆಲವು ದಿನಗಳಿಂದ ತನ್ನ ಮನದ ಅಭಿಲಾಷೆಯನ್ನು ಹೇಳಬೇಕು ಎಂದುಕೊಳ್ಳುತ್ತಿದ್ದ ವಿಕ್ರಮ. ಅದಕ್ಕೆ ಸರಿಯಾದ ಸಮಯ ಹಾಗೂ ಸಂದರ್ಭ ಒದಗಿ ಬಂದಿರಲಿಲ್ಲ. ತಾನು ಹೇಳಿಕೊಳ್ಳಬೇಕು ಅಂದಾಗಲೆಲ್ಲ ಜೊತೆಯಲ್ಲಿ ಮತ್ಯಾರೋ ಇರುತ್ತಿದ್ದರು. ಹೇಗಾದರೂ ಮಾಡಿ ಹೇಳಿಕೊಳ್ಳಬೇಕು ಎಂದುಕೊಂಡವನಿಗೆ ನೆನಪಾದದ್ದು ಉಂಚಳ್ಳಿ ಜಲಪಾತ. ಅಲ್ಲಿಗೆ ಹೋದಾಗ ತನ್ನ ಮನಸ್ಸಿನ ಭಾವನೆಯನ್ನು ವಿಜೇತಾಳಿಗೆ ಹೇಳಬೇಕು ಎಂದುಕೊಂಡಿದ್ದ ವಿಕ್ರಮ. ಎಲ್ಲರನ್ನೂ ಎಲ್ಲಾದರೂ ಸಾಗಹಾಕಿ ಅವಳೆದು ತನ್ನ ಅಂತರಂಗವನ್ನು ತೋಡಿಕೊಳ್ಳಬೇಕು ಎಂದುಕೊಂಡವನಿಗೆ ಇದುವರೆಗೆ ತಾನು ಬಯಸಿದಂತೆಯೇ ಎಲ್ಲವೂ ಆಗಿತ್ತು. ಜಲಪಾತಕ್ಕೆ ಬಂದಿದ್ದವರೆಲ್ಲಿ ಉಳಿದವರು ಅವರವರ ಲೋಕದಲ್ಲಿದ್ದರು. ವಿಜೇತಾ ಹಾಗೂ ವಿಕ್ರಮ ಇಬ್ಬರೆ ಜೊತೆಯಲ್ಲಿ ಕುಳಿತು ಮಾತನಾಡುತ್ತಿದ್ದರು. ಆದರೆ ವಿಕ್ರಮನಿಗೆ ಮಾತ್ರ ಮನದಾಳದ ಭಾವನೆಗಳನ್ನು ಏನೂ ಮಾಡಿದರೂ ಹೇಳಿಕೊಳ್ಳಲು ಆಗುತ್ತಿಲ್ಲ. ಇದು ಆತನಿಗೆ ಅಚ್ಚರಿಯನ್ನು ತಂದಿತ್ತು.
          ವಿಜೇತಾಳೇ ನೇರವಾಗಿ ಕೇಳುತ್ತಿದ್ದಾಳೆ. ಆದರೆ ತನಗೆ ಮಾತ್ರ ಹೇಳಿಕೊಳ್ಳಲು ಆಗುತ್ತಿಲ್ಲ. ಯಾಕೆ ಈ ಥರಾ? ಎಂದುಕೊಂಡ ವಿಕ್ರಮ. ಅವಳೇ ಕೇಳುತ್ತಿದ್ದಾಗ ತನಗೆ ಹೌದು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಲು ಆಗುತ್ತಿಲ್ಲವಲ್ಲ. ಯಾಕೋ ಈ ಪ್ರೇಮ ಎನ್ನುವುದು ಸುಲಭವಲ್ಲ ಅನ್ನಿಸಿತು ಅವನಿಗೆ. ಕರಾಟೆಯಲ್ಲಿ ತನ್ನೆದುರು ಹತ್ತಾರು ಜನರು ಏಕಕಾಲಕ್ಕೆ ಮುಗಿ ಬೀಳಲಿ ಅವರನ್ನು ಮಣ್ಣುಮುಕ್ಕಿಸುತ್ತೇನೆ. ಆದರೆ ಇವಳಿಗೆ ಪ್ರೇಮದ ವಿಷಯ ತಿಳಿಸುವುದು ಹೇಗೆ? ಎಂದ.
           `ಹೇಯ್.. ಎಂತಾ ಆಲೋಚನೆ ಮಾಡ್ತಾ ಇರೋದು.. ಯಾರು ಕೇಳಿದ್ದು ಹೇಳು ಮಾರಾಯಾ..' ಎಂದು ವಿಜೇತಾ ತಿವಿದಾಗಲೇ ವಿಕ್ರಮ ವಾಸ್ತವಕ್ಕೆ ಮರಳಿದ್ದು.
            `ಏನ್ ಹೇಳೋದು ಅಂತ ಗೊತ್ತಾಗ್ತಾ ಇಲ್ಲೆ. ನಿನ್ ಬಗ್ಗೆ ವಿಷಯ ಗೊತ್ತಾಗಬೇಕಿತ್ತು, ನೀನು ಯಾರನ್ನಾದರೂ ಪ್ರೀತಿಸ್ತಾ ಇದ್ಯಾ ಅನ್ನೋದು ತಿಳಿದುಕೊಳ್ಳಬೇಕು ಅನ್ನೋದು ನಿಜ. ಆದರೆ...' ನಿಲ್ಲಿಸಿದ ವಿಕ್ರಮ
             `ಎಂತ ಆದರೆ.. ಒಗಟಾಗಿ ಮಾತನಾಡಬೇಡ. ಸ್ವಲ್ಪ ಬಿಡಿಸಿ ಹೇಳು ಮಾರಾಯಾ..'
              `ನಂಗೇ ಬೇಕಾಗಿತ್ತು...ಅದ್ಕೆ ಕೇಳಿದ್ದು..' ತೊದಲಿದ ವಿಕ್ರಮ.
               `ಅಂದರೆ ಎಂತ? ಸ್ವಲ್ಪ ಬಿಡಿಸಿ ಹೇಳೋ ಮಾರಾಯಾ.. ನಿಂಗೆಂತಾ ಬೇಕಾಗಿದ್ದು. ನಿಂಗ್ ನನ್ನ ವಿಷ್ಯ ಗೊತ್ತಿದ್ದಿದ್ದೇ. ಆದರೆ ಮತ್ತೆಂತಕ್ ಕೇಳ್ತಾ ಇದ್ದಿದ್ದು..?' ಕಾಡಿಸಿದಳು ವಿಜೇತಾ. ಅವಳಿಗೆ ಸ್ವಲ್ಪ ಅನುಮಾನ ಬರಲು ಆರಂಭವಾಗಿತ್ತು. ವಿಕ್ರಮನೇ ತನ್ನನ್ನು ಲವ್ ಮಾಡುತ್ತಿರಬಹುದಾ? ಕೆಲ ದಿನಗಳಿಂದ ಮನಸ್ಸಿನಲ್ಲಿ ಮೂಡಿದ್ದ ಅನುಮಾನದ ಸೆಲೆಯೊಂದು ದೊಡ್ಡದಾದಂತೆ ಭಾಸವಾಯಿತು.
              `ಹುಂ.. ನಾನು ನಿನ್ನ ಪ್ರೀತಿಸ್ತಾ ಇದ್ದೆ. ಆದರೆ ಹೇಳ್ಕಳೋದು ಹೆಂಗೆ ಅಂತ ಒದ್ದಾಡ್ತಿದ್ದೆ ನೋಡು. ಹೇಳೋಕೂ ಆಗದೇ, ನನ್ನಲ್ಲೇ ಇಟ್ಟುಕೊಳ್ಳೋದಕ್ಕೂ ಆಗದೇ ಪರಿತಪಿಸುತ್ತಿದ್ದೆ. ನಾನು ನಿನ್ನ ಪ್ರೀತಿಸ್ತಾ ಇದ್ದೇನೆ. ನೀನು ನನ್ನ ಪ್ರೀತಿಸ್ತೀಯಾ? ನಿನ್ನ ಮನಸ್ಸಿನಲ್ಲಿ ನನಗೆ ಸ್ವಲ್ಪ ಜಾಗ ಕೊಡ್ತೀಯಾ..?' ಹೇಗೋ ಧೈರ್ಯ ಮಾಡಿಕೊಂಡು ವಿಕ್ರಮ ಕೇಳಿಯೇ ಬಿಟ್ಟಿದ್ದ.
               ವಿಜೇತಾ ಅವಾಕ್ಕಾಗಿದ್ದಳು. ವಿಜೇತಾಳ ಮನಸ್ಸಿನಲ್ಲಿ ಚಿಕ್ಕದೊಂದು ಅನುಮಾನದ ಸೆಲೆಯಿತ್ತಾದರೂ ವಿಕ್ರಮ ಇಷ್ಟು ನೇರಾ ನೇರ ಕೇಳುತ್ತಾನೆ ಎಂದುಕೊಂಡಿರಲಿಲ್ಲ. ಇನ್ನಷ್ಟು ದಿನಗಳ ನಂತರ ಕೇಳಬಹುದು ಎಂದುಕೊಂಡಿದ್ದಳೇನೋ. ವಿಕ್ರಮ ಕೇಳಿದರೆ ಏನು ಹೇಳಬೇಕು ಎನ್ನುವುದು ವಿಜೇತಾಳಿಗೆ ಗೊತ್ತಿರಲಿಲ್ಲ. ಸುಮ್ಮನೆ ಕಾಡಿಸುತ್ತಿದ್ದಳಾದರೂ ಆಕೆಯಲ್ಲಿಯೇ ಸ್ಪಷ್ಟ ಭಾವನೆ ಇನ್ನೂ ಇರಲಿಲ್ಲ. ಆಲೋಚಿಸತೊಡಗಿದಳು ವಿಜೆತಾ.

(ಮುಂದುವರಿಯುತ್ತದೆ)

Saturday, October 3, 2015

ಅಘನಾಶಿನಿ ಕಣಿವೆಯಲ್ಲಿ-26

             ಉಂಚಳ್ಳಿ ಜಲಪಾತದ ಮಾರ್ಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೂ, ಮರಗಳ್ಳರಿಗೂ ನಡೆದಿದ್ದ ಕಣ್ಣಾಮುಚ್ಚಾಲೆಯ ಘಟನೆಗೂ, ದಂಟಕಲ್ಲಿನಲ್ಲಿ ನಡೆದಿದ್ದ ಮರಗಳ್ಳರ ಮೇಲಿನ ದಾಳಿಯ ನಡುವೆಯೂ ಏನೋ ಸಂಬಂಧ ಇರಬೇಕು ಎಂದು ತರ್ಕಿಸುತ್ತಿದ್ದ ಪ್ರದೀಪ. ಮರಗಳ್ಳರು ಹಲವು ಕಡೆಗಳಲ್ಲಿದ್ದರೂ ಸಾಮಾನ್ಯವಾಗಿ ಯಾರಾದರೂ ಮರಗಳ್ಳತನ ಮಾಡುತ್ತಿದ್ದ ಸಂದರ್ಭದಲ್ಲಿ ಕಣ್ಣಿಗೆ ಕಾಣಿಸಿದರೆ ಓಡಿ ಹೋಗುತ್ತಾರೆ. ಆದರೆ ಈ ಎರಡೂ ಘಟನೆಗಳಲ್ಲಿ ಮರಗಳ್ಳರು ಮೈಮೇಲೆ ಏರಿ ಬಂದಿದ್ದರು. ಜನಸಾಮಾನ್ಯರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಧಾಳಿ ನಡೆಸಲು ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ದಾಳಿಗೆ ಮುಂದಾದ ಮರಗಳ್ಳರು ಖಂಡಿತ ಒಂದೇ ಗುಂಪಿಗೆ ಸೇರಿರಬೇಕು. ಖಂಡಿತ ಈ ಮರಗಳ್ಳರನ್ನು ಯಾವುದೋ ವ್ಯಕ್ತಿ ಅಥವಾ ಯಾವುದೋ ತಂಡ ನಿರ್ವಹಣೆ ಮಾಡುತ್ತಿರಬೇಕು. ಮರಗಳ್ಳರಿಗೆ ಎಲ್ಲೋ ಖಂಡಿತ ತರಬೇತಿಯೂ ಸಿಗುತ್ತಿರಬೇಕು ಎಂದು ಪ್ರದೀಪ ಆಲೋಚಿಸಿದ್ದ. ಮುಂದಿನ ದಿನಗಳಲ್ಲಿ ಪ್ರದೀಪನ ಆಲೋಚನೆಗೆ ಪೂರಕವಾಗಿ ಘಟನೆಗಳು ನಡೆಯಲಿದ್ದವು.
             ಉಂಚಳ್ಳಿ ಜಲಪಾತಕ್ಕೆ ಹೋಗಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದವರು ಅನಿರೀಕ್ಷಿತವಾಗಿ ನಡೆದ ಮರಗಳ್ಳರ ಮೇಲಿನ ಹಲ್ಲೆಯ ಘಟನೆಯಿಂದ ತಮ್ಮ ಯೋಜನೆಯನ್ನು ಬದಲಾಯಿಸಿಕೊಳ್ಳಬೇಕಾಯಿತು. ಮರಗಳ್ಳರು ಹಗೆಯನ್ನು ಸಾಧಿಸಬಹುದು ಎಂದು ಆಲೋಚನೆ ಮಾಡಿಕೊಂಡಿದ್ದ ಇವರು ಕಾಲಕಾಲಕ್ಕೆ ತಮ್ಮ ಯೋಜನೆಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ ಎನ್ನುವುದನ್ನೂ ಮನಗಂಡಿದ್ದರು. ಅದು ಅನಿವಾರ್ಯವೂ ಆಗಿತ್ತು.
                ಮರುದಿನದಿಂದಲೇ ರಾಮುವಿನ ಧಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿಯನ್ನು ಹುಡುಕುವ ಕೆಲಸ ಆರಂಭವಾಯಿತು. ಆರೋಗ್ಯ ಗಣತಿಯ ನೆಪವನ್ನು ಮಾಡಿಕೊಂಡು ವಿಕ್ರಮ, ಪ್ರದೀಪ, ವಿನಾಯಕ, ವಿಜೇತಾ, ವಿಷ್ಣು ಇವರೆಲ್ಲ ತಲಾ ಎರಡೆರಡು ತಂಡಗಳಂತೆ ಒಂದೊಂದು ಊರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಆರಂಭಿಸಿದರು. ದಂಟಕಲ್ಲಿನ ಸುತ್ತಮುತ್ತ ಇರುವ ಊರುಗಳಿಗೆಲ್ಲ ಹೋಗಲಾಯಿತು. ಕೊನೆಗೊಮ್ಮೆ ಬೇಣದಗದ್ದೆಯ ಆಚೆಗೆ ಇರುವ ಹೊಸಗದ್ದೆ ಎಂಬಲ್ಲಿ ಬಾಸು ಗೌಡ ಎಂಬಾತನ ಮನೆಯಲ್ಲಿ ಬಾಸು ಗೌಡನ ಕಾಲಿಗೆ ಗಾಯವಾಗಿರುವ ವಿಷಯ ಪತ್ತೆಯಾಯಿತು. ಮನೆಯ ಮಾಡಿನ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಜಾರಿಬಿದ್ದು ಹಗರು ದಬ್ಬೆ ಬಡಿದು ಗಾಯವಾಗಿದೆ ಎಂದು ಬಾಸು ಗೌಡನ ಮನೆಯಲ್ಲಿ ಸಬೂಬನ್ನು ಹೇಳಿದರು. ಬಾಸು ಗೌಡನೂ ಸ್ಥಳದಲ್ಲಿದ್ದ. ಆತನ ಕಾಲಿಗೆ ಗಾಯವಾಗಿತ್ತು. ಗಾಯಕ್ಕೆ ಬ್ಯಾಂಡೇಜ್ ಸುತ್ತಲಾಗಿತ್ತು. ಮುಂಜಾನೆಯೇ ಎದ್ದು ಯಾವುದೋ ಆಸ್ಪತ್ರೆಗೆ ಹೋಗಿ ಬಂದಿರಬೇಕು ಎಂದುಕೊಂಡರು.
            ಬಾಸು ಗೌಡನ ಮನೆಯನ್ನು ಸೂಕ್ಷ್ಮವಾಗಿ ಪರೀಕ್ಷೆ ಮಾಡಿದಾಗ ಎಲ್ಲಿಯೂ ಮಾಡು ನಿರ್ಮಾಣ ಮಾಡಿದಂತಹ ಕುರುಹು ಸಿಗಲಿಲ್ಲ. ಆತ ಸುಳ್ಳು ಹೇಳಿದ್ದು ಸ್ಪಷ್ಟವಾಗಿತ್ತು. ಮರುದಿನದಿಂದಲೇ ಆತನ ಮೇಲೆ ಕಣ್ಣಿಡಬೇಕು ಎಂದುಕೊಂಡರು ಎಲ್ಲರೂ. ಆತ ಎಲ್ಲೆಲ್ಲಿ ಹೋಗುತ್ತಾನೆ? ಏನು ಮಾಡುತ್ತಾನೆ ಎನ್ನುವುದನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳಬೇಕು ಎಂದುಕೊಂಡರು.
               ಬಾಸು ಗೌಡ ಮರಗಳ್ಳತನ ಮಾಡುತ್ತಿದ್ದಾನೆ ಎನ್ನುವುದು ಸ್ಪಷ್ಟವಾದ ಮೇಲೆ ಆತನ ಹಿನ್ನೆಲೆಯನ್ನು ತಿಳಿದುಕೊಳ್ಳಲು ವಿಕ್ರಮನ ತಂಡ ಪ್ರಯತ್ನಿಸಿತು. ಬಹಳ ಕಡೆಗಳಲ್ಲಿ ವಿಚಾರಿಸಿದಾಗ ಬಾಸು ಗೌಡ ಮೂಲತಃ ಈ ಕಡೆಯವನಲ್ಲವೆಂದೂ ತೀರ್ಥಹಳ್ಳಿಯಿಂದ ಬಂದವನೆಂದೂ ತಿಳಿಯಿತು. ಬಂದ ಹೊಸತರಲ್ಲಿ ಅವರಿವರ ಮನೆಯಲ್ಲಿ ಕೆಲಸ ಮಾಡುತ್ತಿದ್ದನೆಂಬುದೂ ತಿಳಿಯಿತು. ನಂತರ ಇದ್ದಕ್ಕಿದ್ದಂತೆ 407 ವಾಹನವನ್ನು ಕೊಂಡಾಗ ಮಾತ್ರ ಪ್ರತಿಯೊಬ್ಬರೂ ಬಾಸು ಗೌಡನ ಬಗ್ಗೆ ಹುಬ್ಬೇರಿಸಿದ್ದರು. ಆತ 407 ವಾಹನವನ್ನು ಕೊಂಡುಕೊಂಡ ಮೂರು ದಿನಗಳಲ್ಲಿಯೇ ಪೊಲೀಸರು ಬಾಸು ಗೌಡನನ್ನು ಬಂಧಿಸಿದಾಗ ಮಾತ್ರ ಬಾಸು ಗೌಡನ ಅಸಲೀ ಮುಖ ಹೊರಬಂದಿತ್ತು. ಸುತ್ತಮುತ್ತಲ ಊರುಗಳಲ್ಲಿ ಬಾಸುಗೌಡ ವೆನಿಲ್ಲಾ ಕಳ್ಳತನ ಮಾಡುತ್ತಿದ್ದ ಎನ್ನುವುದು ಪೊಲೀಸರ ಬಂಧನದ ನಂತರವೇ ಜಗಜ್ಜಾಹೀರಾಗಿತ್ತು. ವೆನಿಲ್ಲಾ ಕದ್ದು ಕದ್ದು ಸಾಕಷ್ಟು ಹಣ ಮಾಡಿಕೊಂಡು ಕೊನೆಗೊಮ್ಮೆ 407 ವಾಹನವನ್ನು ಕೊಂಡಿದ್ದ. ಬಾಸುಗೌಡನ ಪೋಟೋ ಇಂದಿಗೂ ಪೊಲೀಸ್ ಠಾಣೆಯಲ್ಲಿ ಇದೆ ಎಂದು ಒಂದಿಬ್ಬರು ಮಾಹಿತಿ ನೀಡಿದ್ದರು. ಇಂತಹ ಬಾಸುಗೌಡನನ್ನು `ಪಾಪ..' ಹೋಗಲಿ ಬಿಡಿ ಎಂದುಕೊಂಡು ಬೇಣದಗದ್ದೆಯ ಸುಬ್ರಹ್ಮಣ್ಯ ಹೆಗಡೆ ಬೇಲು ಕೊಡಿಸಿ ಬಿಡುಗಡೆ ಮಾಡಿಸಿದ್ದರಂತೆ.
             ಬಿಡುಗಡೆಯಾದ ಮೇಲೆ ಸಾಚಾತನ ತೋರಿಸಿದ ಬಾಸು ಗೌಡ ತನ್ನ 407 ವಾಹನದಲ್ಲಿ ಅವರಿವರಿಗೆ ಮನೆ ಕಟ್ಟುವ ಕೆಂಪು ಕಲ್ಲುಗಳನ್ನು, ಜಲ್ಲಿ, ಮರಳುಗಳನ್ನು ತಂದುಕೊಡುವ ಕೆಲಸ ಮಾಡತೊಡಗಿದ. ಮೂರ್ನಾಲ್ಕು ವರ್ಷ ಕಳೆದ ಮೇಲೆ ಸಣ್ಣ ಪ್ರಮಾಣದ ರೌಡಿಯಿಸಂ ಕೆಲಸಕ್ಕೂ ಬಾಸು ಗೌಡ ಇಳಿದಿದ್ದ. ಜನರಿಂದ ಮುಂಗಡ ಹಣ ಪಡೆದುಕೊಳ್ಳುವುದು, ಅದಕ್ಕೆ ಪ್ರತಿಯಾಗಿ ಸೆಕೆಂಡ್ ಗುಣಮಟ್ಟದ ಕಲ್ಲುಗಳನ್ನು ಸರಬರಾಜು ಮಾಡುವ ಕಾರ್ಯ ಮಾಡುತ್ತಿದ್ದ. ಇದಕ್ಕೆ ಪ್ರತಿಯಾಗಿ ಜನಸಾಮಾನ್ಯರು ಗಲಾಟೆ ಮಾಡಿದರೆ ತಂದು ಹಾಕಿದ್ದ ಕಲ್ಲನ್ನು ಬಲಾತ್ಕಾರವಾಗಿ ಎತ್ತಿಕೊಂಡು ಬರುವ ಕೆಲಸವನ್ನೂ ಮಾಡುತ್ತಿದ್ದ. ಈ ಕುರಿತಂತೆ ಒಂದೆರಡು ಸಾರಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೆ ಹಣದ ಪ್ರಭಾವ ಹಾಗೂ ರೌಡಿಯಿಸಮ್ಮಿನ ಕಾರಣದಿಂದ ಅಂತಹ ಪ್ರಕರಣ ಮುಚ್ಚಿಹಾಕುವ ಕಾರ್ಯದಲ್ಲಿ ಬಾಸು ಗೌಡ ಯಶಸ್ವಿಯಾಗುತ್ತಿದ್ದ. ಇಂತಹ ಬಾಸುಗೌಡ ಮರಗಳ್ಳತನ ಮಾಡುತ್ತಿದ್ದ ಎನ್ನುವುದು ಈಗ ಆಗಿರುವ ಗಾಯದಿಂದ ಗೊತ್ತಾದಂತಾಗಿತ್ತು. ರಾಮು ಮಾಡಿದ ದಾಳಿಯಿಂದಾಗಿ ಬಾಸು ಗೌಡನ ಇನ್ನೊಂದು ಮುಖ ಜಗತ್ತಿಗೆ ತಿಳಿದಂತಾಗಿತ್ತು. ಪ್ರದೀಪ ಈ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಆಲೋಚನೆಯಲ್ಲಿ ಬಿದ್ದಿದ್ದ.
             ಮರಗಳ್ಳತನ ಮಾಡಿ ಗಾಯಗೊಂಡಿರುವವನು ಬಾಸು ಗೌಡನಾದರೆ ತನ್ನ ಕೈಯಲ್ಲಿ ಹೊಡೆತ ತಿಂದು ಸಾವನ್ನಪ್ಪಿದವನು ಯಾರು ಎನ್ನುವುದು ಪ್ರದೀಪನ ತಲೆಯಲ್ಲಿ ಕೊರೆಯಲಾರಂಭಿಸಿತ್ತು. ಬಾಸುಗೌಡ ಪಕ್ಕದ ಊರಿನವನೇ ಆಗಿದ್ದರೂ ಸತ್ತವನು ಎಲ್ಲಿಯವನು? ಪಕ್ಕದ ಊರಿನವನಾಗಿದ್ದರೆ ಗೊತ್ತಾಗಬೇಕಿತ್ತಲ್ಲ. ಯಾರೂ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದಿಲ್ಲ. ಬೇರೆ ಕಡೆಯಿಂದ ಬಂದವನೇ ಎಂದು ಆಲೋಚಿಸಿದ. ಸುತ್ತಮುತ್ತ ಮಾಹಿತಿ ಸಂಗ್ರಹಿಸಿದಾಗ ಇಬ್ಬರಿಗೆ ಹಾರ್ಟ್ ಎಟ್ಯಾಕ್ ಆಗಿ ಆಸ್ಪತ್ರೆಯಲ್ಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು. ಒಬ್ಬರಿಗೆ ಬ್ರೈನ್ ಟ್ಯೂಮರ್ ಆಗಿ ಮಂಗಳೂರಿನ ಆಸ್ಪತ್ರೆಗೆ ಎರಡು ದಿನಗಳ ಹಿಂದೆ ಕರೆದೊಯ್ಯಲಾಗಿದೆ ಎನ್ನುವ ಮಾಹಿತಿಯೂ ಸಿಕ್ಕಿತ್ತು. ಇವರ್ಯಾರೂ ಅಲ್ಲ. ಬೇರೆ ಇನ್ಯಾರು ಸತ್ತಿರಬಹುದು ಎಂದು ಪ್ರದೀಪ ಆಲೋಚನೆ ಮಾಡಲಾರಂಭಿಸಿದ್ದ.

***

              ಒಂದೆರಡು ದಿನಗಳಲ್ಲಿ ಏನೆಲ್ಲ ನಡೆದು ಹೋದವಲ್ಲ ಎಂದುಕೊಂಡ ವಿಕ್ರಮ. ಪ್ರದೀಪನಿಂದ ಸುಮ್ಮ ಸುಮ್ಮನೇ ಯಾವುದೋ ಸಮಸ್ಯೆ ಉದ್ಭವವಾಗಿರಬಹುದೇ ಎಂದೂ ಆತನ ಮನದಲ್ಲಿ ಮೂಡಿತು. ಪ್ರದೀಪ ಖಂಡಿತವಾಗಿಯೂ ಸಾಮಾನ್ಯನಲ್ಲ. ಈತ ಬೇರೇನೋ ಇರಬೇಕು ಎನ್ನುವ ಶಂಕೆ ಮತ್ತಷ್ಟು ಬಲವಾಯಿತು. ಅಷ್ಟರಲ್ಲಿ ಅವನ ಬಳಿಗೆ ಬಂದ ವಿಜೇತಾ `ವಿಕ್ಕಿ.. ಉಂಚಳ್ಳಿ ಜಲಪಾತಕ್ಕೆ ಹೋಗಿ ಬರೋಣವಾ? ಯಾಕೋ ಮನಸ್ಸೆಲ್ಲ ಒಂಥರಾ ಆಗಿದೆ. ಸ್ವಲ್ಪ ಮನಸ್ಸಿಗೆ ರಿಲ್ಯಾಕ್ಸ್ ಸಿಗುತ್ತೇನೋ ಅಂತ..' ಎಂದಳು.
             `ಖಂಡಿತ. ನಾನೂ ಅದನ್ನೇ ಹೇಳೋಣ ಅಂದುಕೊಂಡಿದ್ದೆ. ನೀನು ಹೇಳಿದ್ದು ಚೆನ್ನಾಯಿತು ನೋಡು. ಎಲ್ಲರಿಗೂ ಹೇಳುತ್ತೇನೆ. ಇವತ್ತೇ ಹೋಗಿ ಬರೋಣ..' ಎಂದು ತಯಾರಾಗಲು ಅನುವಾದ ವಿಕ್ರಮ.
              `ಬೇಗ.. ' ಅವಸರಿಸಿದಳು ವಿಜೇತಾ.
               ಕೆಲವೇ ಸಮಯದಲ್ಲಿ ಎಲ್ಲರಿಗೂ ಸುದ್ದಿ ತಿಳಿದು ಪ್ರತಿಯೊಬ್ಬರೂ ತಯಾರಾದರು. ವಿಕ್ರಮ ಕಾರನ್ನು ತೆಗೆದಿದ್ದ. ವಿನಾಯಕ, ವಿಷ್ಣು, ಪ್ರದೀಪ, ವಿಜೇತಾ, ವಿಕ್ರಮ ಹಾಗೂ ವಿನಾಯಕನ ತಂಗಿಯರು ತಯಾರಾಗಿ ಕಾರನ್ನೇರಿದ್ದರು. ದಂಟಕಲ್ಲಿನಿಂದ ಒಂದು ತಾಸಿನ ಅಂತರದಲ್ಲಿ ಯಲುಗಾರ, ಹೊಸಗದ್ದೆ, ಹೇರೂರು, ಹೆಗ್ಗರಣೆ ಈ ಮುಂತಾದ ಊರುಗಳನ್ನು ದಾಟಿ ಉಂಚಳ್ಳಿ ಜಲಪಾತದ ಬಳಿ ತೆರಳಿದರು.
              ಅಘನಾಶಿನಿ ನದಿಯಿಂದ ಸೃಷ್ಟಿಯಾಗುವ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಶಿರಸಿಯಿಂದ 30 ಕಿಲೋಮೀಟರ್ ಅಂತರದಲ್ಲಿರುವ ಈ ಜಲಪಾತದ ಎತ್ತರ 116 ಮೀಟರ್. 1845ರಲ್ಲಿ ಉತ್ತರ ಕನ್ನಡದಲ್ಲಿ ಸರ್ವೇ ಕಾರ್ಯ ನಿರ್ವಹಿಸುತ್ತಿದ್ದ ಬ್ರಿಟೀಷ್ ಅಧಿಕಾರಿ ಜೆ. ಡಿ. ಲೂಷಿಂಗ್ಟನ್ ಈ ಜಲಪಾತವನ್ನು ಕಂಡುಹಿಡಿದ ಎಂಬ ಮಾಹಿತಿಯಿದೆ. ಆದ್ದರಿಂದ ಈ ಜಲಪಾತವನ್ನು ಲೂಷಿಂಗ್ಟನ್ ಜಲಪಾತ ಎಂದು ಕರೆಯುತ್ತಾರೆ. ಈ ಜಲಪಾತದ ನೀರು ಬೀಳುವಾಗ ಭಾರಿ ದೊಡ್ಡ ಶಬ್ದ ಉಂಟುಮಾಡುತ್ತದೆ. ಆ ಕಾರಣದಿಂದ ಸ್ಥಳೀಯರು ಈ ಜಲಪಾತವನ್ನು `ಕೆಪ್ಪ ಜೋಗ' ಎಂದು ಕರೆಯುತ್ತಾರೆ. ವರ್ಷದ ಎಲ್ಲ ಕಾಲದಲ್ಲಿಯೂ ಈ ಜಲಪಾತದ ದರ್ಶನ ಲಭ್ಯ. ಮಳೆಗಾಲದಲ್ಲಂತೂ ಇದು ರುದ್ರರಮಣೀಯ.
              ಬೇಸಿಗೆಯಾದ್ದರಿಂದ ಜಲಪಾತದಲ್ಲಿ ನೀರು ಅಷ್ಟಾಗಿ ಇರಲಿಲ್ಲ. ಆದರೆ ಜಲಪಾತ ಬಹಳ ಸುಂದರವಾಗಿ ಕಾಣುತ್ತಿತ್ತು. ಕಾರಿನಿಂದ ಇಳಿದವರು ಓಡಿದಂತೆ ಸಾಗಿದರು. ವೀಕ್ಷಣಾ ಗೋಪುರದ ಬಳಿ ನಿಂತು ಜಲಪಾತ ನೋಡಿದವರಿಗೆ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ. ಜಲಪಾತಕ್ಕೆ ಮಳೆಗಾಲದ ಅಬ್ಬರ ಇರಲಿಲ್ಲ. ಕಲಕಲಕಿಸುತ್ತ ಇಳಿದು ಬರುತ್ತಿದ್ಧಳು ಅಘನಾಶಿನಿ. ಮಳೆಗಾಲದಲ್ಲಿ ಅಬ್ಬರದಿಂದ ಸದ್ದು ಮಾಡುತ್ತಿದ್ದವಳು ಇವಳೇ ಹೌದಾ ಎನ್ನುವಷ್ಟು ಸೌಮ್ಯ. ಒಂದೇ ನೋಟಕ್ಕೆ ಎಲ್ಲರ ಮನಸ್ಸನ್ನು ಕದ್ದು ಬಿಟ್ಟಿದ್ದಳು.
           'ಕೆಳಗೆ ಹೋಗಬಹುದಾ?' ಕೇಳಿದ್ದಳು ವಿಜೇತಾ.

(ಮುಂದುವರಿಯುತ್ತದೆ)

Friday, October 2, 2015

ಅಂ-ಕಣ-7

ನಿಶ್ಚಿಂತೆ

ತಲೆ ಮೇಲೆ
ಹತ್ತಿ ಕೂರುವವರು
ತಲೆ ದೊಡ್ಡದೋ, ಸಣ್ಣದೋ
ಎಂದು
ತಲೆ ಕೆಡಿಸಿಕೊಳ್ಳುವುದಿಲ್ಲ ||


ಹೊಸಮನೆ ಹೆಸರು

ಸಿನಿಮಾ ನಿರ್ದೇಶಕ
ಮಠ ಗುರುಪ್ರಸಾದ್
ಹೊಸ ಮನೆ ಕಟ್ಟಿಸಿದರೆ
ಇಡಬಹುದಾದ
ಹೊಸ ಹೆಸರು
ಗುರು-ವಿಲ್ಲಾ|
ಗುರುವಿಲ್ಲಾ||


ದಪ್ಪ

ದಪ್ಪ ಇರುವವರನ್ನು
ನೋಡಿದಾಗಲೆಲ್ಲಾ
HOWದಪ್ಪ ಎನ್ನಿಸುತ್ತದೆ ||

Tuesday, September 22, 2015

ಮಾಸ್ತರ್ ಮಂದಿ-7

             ಇಲ್ಲಿಯ ತನಕ ಪ್ರಾಥಮಿಕ ಶಾಲೆಯಲ್ಲಿ ಕಲಿಸುತ್ತಿದ್ದ ಶಿಕ್ಷಕರ ಬಗ್ಗೆ ಬರೆದಿದ್ದೇನೆ. ನಂತರ ಹೈಸ್ಕೂಲಿನಲ್ಲಿ ಕಲಿಸಿದವರ ಬಗ್ಗೆ ಬರೆಯಲೇ ಬೇಕು. ಪ್ರತಿಯೊಬ್ಬರ ಬದುಕಿನಲ್ಲಿಯೂ ಹೈಸ್ಕೂಲು ಎನ್ನುವುದು ಬದಲಾವಣೆಯ ಪ್ರಮುಖ ಘಟ್ಟ. ಬಾಲ್ಯದ ಬದುಕನ್ನು ಕಳೆದು ಟೀನೇಜ ಬದುಕಿಗೆ ಕಾಲಿಡುವ ಘಳಿಗೆ ಇದು. ಯಾವು ಯಾವುದೋ ಆಕರ್ಷಣೆ, ಹುಚ್ಚು ಬಯಕೆಗಳಿಗೆ ಬಿದ್ದುಬಿಡುವ ಸಮಯವೂ ಇದೆ. ಇಂತಹ ಸಂದರ್ಭದಲ್ಲಿ ಕಲಿಸುವ ಶಿಕ್ಷಕರು ಬಹಳ ಪ್ರಭಾವ ಬೀರುತ್ತಾರೆ ಎನ್ನುವುದು ಸುಳ್ಳಲ್ಲ ನೋಡಿ. ಅಂದಹಾಗೆಯೇ ನಾನು ಹೈಸ್ಕೂಲನ್ನು ಓದಲು ಹೋಗಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಕಾನಲೆಯಲ್ಲಿ. ಆ ದಿನಗಳಲ್ಲಿ ನಮ್ಮ ಮನೆಯಲ್ಲಿ ಜಸ್ಟ್ ಹಿಸೆ ಆಗಿತ್ತು. ಅಪ್ಪನ ಕೈಯಲ್ಲಿ ನಯಾಪೈಸೆ ದುಡ್ಡಿರಲಿಲ್ಲ. ಹೆಂಗಪ್ಪಾ ಓದಿಸೋದು ಎಂದು ಹೇಳುತ್ತಿದ್ದ ಹಾಗೆಯೇ ನಾನು ಕಾನಲೆಯಲ್ಲಿ ಓದುತ್ತೇನೆ ಎಂದು ಹೇಳಿಬಿಟ್ಟಿದ್ದೆ. ನನಗೆ ಗುರಣ್ಣ ಹಾಗೂ ಗಿರೀಶಣ್ಣ ಇರುತ್ತಾರೆ ಎನ್ನುವ ಕಾರಣವೂ ಮುಖ್ಯವಾಗಿತ್ತು. ಕಾನಲೆಯಲ್ಲಿ ದೊಡ್ಡಪ್ಪನ ಮನೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದಾಗ ಓಕೆ ಎಂದಿದ್ದರು. ಅರ್ಧ ಭಯದಿಂದ, ಅರ್ಧ ಕುತೂಹಲದಿಂದ ನನ್ನ ಹಡಪ ಕಟ್ಟಿಕೊಂಡು ಹೈಸ್ಕೂಲಿಗೆ ಕಾಲಿಟ್ಟಿದ್ದೆ.
                ಕಾನಲೆ ಹೈಸ್ಕೂಲಿನ ಬಗ್ಗೆ ಕೆಲವು ಮಾತುಗಳನ್ನು ಹೇಳಿದ ನಂತರವೇ ನನಗೆ ಕಲಿಸಿದ ಶಿಕ್ಷಕರ ಬಗ್ಗೆ ವಿವರಗಳನ್ನು ನೀಡುತ್ತೇನೆ. ಕಾನಲೆಯಲ್ಲಿ ಮುಖ್ಯವಾಗಿ ಮೂರು ಕೇರಿಗಳಿವೆ. ಬ್ರಾಹ್ಮಣರ ಕೇರಿ, ಅಚ್ಚೆಕೇರಿ ಹಾಗೂ ಇನ್ನೊಂದು ಕೇರಿ. ಸಾಗರ ಹಾಗೂ ಸಿದ್ದಾಪುರಕ್ಕೆ ಖಾಸಗಿ ಬಸ್ಸುಗಳು ಹೆಚ್ಚಾಗಿ ಓಡಾಡುವ ಮೇನ್ ರೋಡಿನಲ್ಲಿ ಬ್ರಾಹ್ಮಣರ ಕೇರಿಯಿದ್ದರೆ ಆ ಕೇರಿಯ ಕೊಟ್ಟ ಕೊನೆಯಲ್ಲಿ ಗುಡ್ಡದ ಮೇಲೆ ಕಾನಲೆ ಹೈಸ್ಕೂಲಿತ್ತು. 5 ಎಕರೆಯ ಕಂಪೌಂಡಿನಲ್ಲಿದ್ದ ಹೈಸ್ಕೂಲಿಗೆ ನಾನು ಬರುವ ವೇಳೆಗೆ ಹೊಸ ಕಟ್ಟಡ ನಿರ್ಮಾಣವಾಗಿ ಮೂರೋ ನಾಲ್ಕೋ ವರ್ಷಗಳು ಕಳೆದಿದ್ದವು. ಇಂಗ್ಲೀಷಿನ L ಆಕಾರದಲ್ಲಿ ಕೈಸ್ಕೂಲಿ ನಿರ್ಮಾಣವಾಗಿದ್ದರೆ ಅದಕ್ಕೆ ತಾಗಿಕೊಂಡಂತೆ ದೊಡ್ಡ ಮೈದಾನವಿತ್ತು. ಗೊಚ್ಚುಮಣ್ಣಿನ ಮೈದಾನದಲ್ಲಿ ಉರುಳಿಬಿದ್ದರೆ ಮೈ ಕೈ ತರಚಿ ಹೋಗುತ್ತಿತ್ತು ಬಿಡಿ. ಹೈಸ್ಕೂಲಿಗೆ ಹೋಗುವ ರಸ್ತೆಯ ಕುರಿತಂತೆ ಗಲಾಟೆ ನಡೆಯುತ್ತಿತ್ತು.
            ಕಾನಲೆಯ ಹೈಸ್ಕೂಲು ಐದು ಎಕರೆ ಕಂಪೌಂಡು ಎಂದು ಆಗಲೇ ಹೇಳಿದ್ದೆನಲ್ಲ. ಈ ಐದು ಎಕರೆ ಜಮೀನು ಕಾನಲೆಯ ಬ್ರಾಹ್ಮಣರ ಕೇರಿಗೆ ಸರ್ಕಾರಿ ಗೋಮಾಳ ಎನ್ನುವ ಹೆಸರಿನಲ್ಲಿತ್ತು. ಆದರೆ ಊರಿಗೆ ಹೈಸ್ಕೂಲು ಬಂದರೆ ಒಳ್ಳೆಯದಲ್ಲವೇ ಎನ್ನುವ ಕಾರಣಕ್ಕಾಗಿ ಊರ ಬ್ರಾಹ್ಮಣರ ಮುಖಂಡರುಗಳು ಸೇರಿಕೊಂಡು ಜಾಗ ಬಿಟ್ಟುಕೊಟ್ಟಿದ್ದರು. ಆದರೆ ಈ ಹೈಸ್ಕೂಲಿಗೆ ಬರಲು ರಸ್ತೆಯೇ ಸರಿ ಇರಲಿಲ್ಲ. ಗಡೇಮನೆ ಹಾಗೂ ಕಾನಲೆಗೆ ಸೇರಿದ ಗುಡ್ಡದ ಹಿಂಭಾಗದಲ್ಲಿ ಹೈಸ್ಕೂಲಿಗೆ ಬರಲು ಗುಡ್ಡವನ್ನು ಹತ್ತಬೇಕು. ಹೈಸ್ಕೂಲಿಗೆ ಬರಲು ರಸ್ತೆಗೆ ಜಾಗವನ್ನು ನೀಡಲು ಯಾರೂ ತಯಾರಿರಲಿಲ್ಲ. ಈ ಕಾರಣದಿಂದ ಒಂದಿಷ್ಟು ದಿನ ಕಾಲುಹಾದಿಯೇ ಹೈಸ್ಕೂಲಿಗೆ ಗತಿಯಾಗಿತ್ತು. ನಂತರದ ದಿನಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತಿಗೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದ ಸೊಸೈಟಿ ರಾಮಪ್ಪ ಎನ್ನುವವನ ಮನೆಯ ಪಕ್ಕದಲ್ಲಿ ರಸ್ತೆಯಾಯಿತು. ನಂತರ ಪುಟ್ಟಜ್ಜನ ಮನೆ ಪಕ್ಕದಲ್ಲಿ ರಸ್ತೆಯಾಯಿತು.
           ಪುಟ್ಟಜ್ಜನ ಮನೆಯ ಪಕ್ಕದಲ್ಲಿ ಪುಟ್ಟಜ್ಜನ ಮನೆ ಜಾಗದಲ್ಲಿಯೇ ರಸ್ತೆ ಮಾಡಿದ್ದು ಹಲವಾರು ದಿನಗಳ ಕಾಲ ಗಲಾಟೆಗೂ ಕಾರಣವಾಗಿತ್ತು. ಪುಟ್ಟಜ್ಜ ಮೂರು ಮೂರು ಇಂಜೆಕ್ಷನ್ ಅರ್ಜಿಗಳನ್ನೂ ಹಾಕಿದ್ದರು. ಆದರೆ ಆ ನಂತರದ ದಿನಗಳಲ್ಲಿ ಕಾನಲೆಯ ಶೇಷಗಿರಿಯಣ್ಣ ಹಾಗೂ ಇತರರು ಜಾಗವನ್ನು ಬಿಟ್ಟುಕೊಡುವ ಮೂಲಕ ದೊಡ್ಡತನ ಮೆರೆದಿದ್ದರು. ಪದೆ ಪದೆ ನಡೆಯುತ್ತಿದ್ದ ಗಲಾಟೆಗೆ ಪುಲ್ ಸ್ಟಾಪ್ ಹಾಕಿದ್ದರು. ಇಂತಹ ಕಾನಲೆಯ ಹೈಸ್ಕೂಲಿನಲ್ಲಿ ನಾನು ಓದುತ್ತಿದ್ದ ಸಂದರ್ಬದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಅವರಲ್ಲಿ ನನ್ನ ಕ್ಲಾಸಿನಲ್ಲಿ ನಾವು ನಾಲ್ಕು ಜನ ಹಾಗೂ ಮೇಲಿನ ಕ್ಲಾಸಿನಲ್ಲಿ ನಾಲ್ಕು ಜನ ಸೇರಿ ಒಟ್ಟೂ ಎಂಟು ಜನ ಬ್ರಾಹ್ಮಣರ ಹುಡುಗರಿದ್ದರು. ಉಳಿದವರೆಲ್ಲ ದೀವರು, ಗೌಡರು, ಒಕ್ಕಲಿಗರು, ಶೆಟ್ಟರು ಈ ಮುಂತಾದವರೇ ಆಗಿದ್ದರು. ಹೈಸ್ಕೂಲಿನ ಶಿಕ್ಷಕರ ವಿಷಯ ಸಾಕಷ್ಟು ಹೇಳಲೇಬೇಕು ಬಿಡಿ. ಬಿಆರ್.ಎಲ್, ಸಿ.ಆರ್.ಎಲ್, ಪಿಬಿಎನ್, ವನಮಾಲಾ ಟೀಚರ್, ವಿನೋದಾ ನಾಯ್ಕ, ಕೆಬಿಎನ್, ಲಕ್ಷಪ್ಪ ಸರ್, ಭಾರತೀ ಹೆಗಡೆ, ಎಚ್.ಎಸ್.ಎಸ್., ಗ್ರೇಸ್ ಪ್ರೇಮಕುಮಾರಿ ಇವರ ಬಗ್ಗೆ ಹೇಳುವುದು ಸಾಕಷ್ಟಿದೆ ಎನ್ನಿ.

ವನಮಾಲಾ ಮೇಡಮ್ :
ಸಾಗರದಿಂದ ಕಾನಲೆಗೆ ಡೈಲಿ ಬಂದು ಹೋಗಿ ಮಾಡುತ್ತಿದ್ದ ವನಮಾಲಾ ಮೇಡಮ್ ಆ ದಿನಗಳಲ್ಲಿ ನನ್ನ ಕ್ಲಾಸಿನ ಅನೇಕ ಹುಡುಗರ ಮನಸ್ಸನ್ನು ಕದ್ದವರು ಬಿಡಿ. ನೋಡಲು ಸುಂದರವಾಗಿದ್ದರು. ನಕ್ಕರೆ ಗುಳಿಕೆನ್ನೆ ಎದ್ದು ಕಾಣುತ್ತಿತ್ತು. ಅಪರೂಪಕ್ಕೆ ಬಯ್ಯುತ್ತಿದ್ದರು. ಸಿಟ್ಟು ಕಡಿಮೆ. ಧ್ವನಿ ಕೂಡ ಬಹಳ ಕಡಿಮೆ. ನಿಧಾನವಾಗಿ ಪಾಠ ಮಾಡುತ್ತಿದ್ದ ವನಮಾಲಾ ಮೇಡಮ್ಮಿಗೆ ಬಹುಶಃ 25-26ರ ಆಜೂಬಾಜಿನಲ್ಲಿ ವಯಸ್ಸಾಗಿತ್ತೇನೋ ಬಿಡಿ. ಇನ್ನೂ ಮದುವೆಯಾಗಿರಲಿಲ್ಲ. ವಿ.ಎನ್.ಆರ್. ಎಂದು ಶಾರ್ಟ್ ಫಾರ್ಮಿನಲ್ಲಿ ಕರೆಯುತ್ತಿದ್ದೆವು. ಸಮಾಜ ವಿಜ್ಞಾನವನ್ನು ಕಲಿಸಲು ಬರುತ್ತಿದ್ದರು. ಎಂಟನೇ ಕ್ಲಾಸಿನಲ್ಲಿ ನಾನು ಓದುತ್ತಿದ್ದಾಗ ಇವರ ಮೊದಲ ತರಗತಿಗೆ ನಾನು ಅಟೆಂಡ್ ಆಗಿದ್ದೆ. ಶಿವಮೊಗ್ಗ ಜಿಲ್ಲೆಯಲ್ಲಿದ್ದ ಹೈಸ್ಕೂಲಿನಲ್ಲಿ ಉತ್ತರ ಕನ್ನಡದಿಂದ ಬಂದಿದ್ದ ಏಕೈಕ ಹುಡುಗ ನಾನಾಗಿದ್ದೆ ಬಿಡಿ. ಶಿವಮೊಗ್ಗ ಸೀಮೆಯಲ್ಲಿ ಪ್ರತಿಯೊಬ್ಬರ ಹೆಸರನ್ನೂ ಇನ್ ಶಿಯಲ್ ಮೂಲಕ ಕರೆಯುತ್ತಿದ್ದರೆ ನಮ್ಮಲ್ಲಿ ಮಾತ್ರ ಉದ್ದುದ್ದಕ್ಕೆ ಕರೆಯುತ್ತಿದ್ದರು. ಹೆಸರಿನ ಮುಂದೆ ಅಪ್ಪನ ಹೆಸರು ಹಾಗೂ ಊರಿನ ಹೆಸರನ್ನು ಶಿವಮೊಗ್ಗ ಸೀಮೆಯಲ್ಲಿ ಮೊದಲ ಅಕ್ಷರದ ಜೊತೆಗೆ ಕರೆಯುತ್ತಿದ್ದರು. ಆದರೆ ನನಗೆ ಹಾಗಲ್ಲ ನೋಡಿ. ನಾನು ವಿನಯ ಸುಬ್ರಾಯ ಹೆಗಡೆ ಎಂದೇ ಕರೆಸಿಕೊಳ್ಳಬೇಕಿತ್ತು. ಒಮ್ಮೆ ವನಮಾಲಾ ಮೇಡಮ್ ಈ ಹೆಸರನ್ನು ಕೇಳಿ ತಮಾಷೆಯೂ ಮಾಡಿದ್ದರು.
ಎಂಟನೇ ಕ್ಲಾಸಿನಲ್ಲಿ ನಾನು ಹೈಸ್ಕೂಲಿಗೆ ಬುದ್ಧಿವಂತ ಹುಡುಗ ಎನ್ನುವ ಬಿರುದು ಬಾವಲಿಯನ್ನು ಗಳಿಸಿಕೊಂಡಿದ್ದೆ. ಅಕ್ಷರವೂ ಸಾಕಷ್ಟು ಸುಂದರವಾಗಿ ಮೂಡುತ್ತಿತ್ತು. ಆ ಕಾರಣದಿಂದ ನಾನು ಮಾಡಿಕೊಳ್ಳುತ್ತಿದ್ದ ನೋಟ್ಸಿಗೆ ಸಾಕಷ್ಟು ಬೇಡಿಕೆ ಬರುತ್ತಿತ್ತು. ಹೈಸ್ಕೂಲಿನ ಹುಡುಗಿಯರ ವಲಯದಲ್ಲಿ ನನ್ನ ನೋಟ್ ಪುಸ್ತಕ ಯಾವಾಗಲೂ ಓಡಾಡುತ್ತಿತ್ತು. ವನಮಾಲಾ ಮೇಡಮ್ ಕೂಡ ಪರೀಕ್ಷೆಯ ದಿನಗಳಲ್ಲಿ ನನ್ನ ನೋಟ್ಸನ್ನು ಪಡೆದುಕೊಂಡು ಹೋಗಿ ಅದರಲ್ಲಿನ ವಿಷಯಗಳನ್ನು ಪ್ರಶ್ನೆ ರೂಪದಲ್ಲಿ ಕೇಳುತ್ತಿದ್ದರು.
ಒಂಭತ್ತನೇ ಕ್ಲಾಸಿನಲ್ಲಿದ್ದಾಗ ಒಂದು ಘಟನೆ ಜರುಗಿತ್ತು. ವನಮಾಲಾ ಮೇಡಂ ಅವರಿಗೆ ಸಿಕ್ಕಾಪಟ್ಟೆ ಜ್ವರ. ಮೂರ್ನಾಲ್ಕು ದಿನ ಹೈಸ್ಕೂಲಿಗೆ ಬಂದಿರಲಿಲ್ಲ. ಆ ಸಂದರ್ಭದಲ್ಲಿಯೇ ಎಕ್ಸಾಂ ಕೂಡ ಬಂದಿತ್ತು. ಯಥಾಪ್ರಕಾರ ನನ್ನ ನೋಟ್ಸನ್ನು ತೆಗೆದುಕೊಂಡು ಹೋದ ವನಮಾಲಾ ಮೇಡಮ್ ಅದರ ಮೇಲೆ ಪ್ರಶ್ನೆ ಪತ್ರಿಕೆ ತಯಾರು ಮಾಡಿದ್ದರು. ಬರೆಯಲು ಅಸಾಧ್ಯ ಎನ್ನುವಂತಾಗಿದ್ದರಿಂದ ಎಂಟನೇ ತರಗತಿಯಲ್ಲಿ ಓದುತ್ತಿದ್ದ ಒಬ್ಬ ವಿದ್ಯಾರ್ಥಿನಿಯಿಂದ ಪ್ರಶ್ನೆಗಳನ್ನು ಬರೆಸಿದ್ದರು. ಆ ದಿನಗಳಲ್ಲಿ ಪರೀಕ್ಷೆಗಳಲ್ಲಿ ನನಗೆ 25ಕ್ಕೆ 20ರ ಮೇಲೆ ಅಂಕಗಳು ಬೀಳುತ್ತಿತ್ತು ಎಂದೆನಲ್ಲ. ನನಗೆ ಪ್ರತಿಸ್ಪರ್ಧಿಗಳೂ, ಆಗದೇ ಇದ್ದವರೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ಅವರು ಈ ಸಾರಿ ಮಾತ್ರ ನನ್ನಿಂದ ವನಮಾಲಾ ಮೇಡಂ ನೋಟ್ಸನ್ನು ಪಡೆದು ಪ್ರಶ್ನೆ ಪತ್ರಿಕೆ ರೂಪಿಸಿದ್ದಾರೆ ಎನ್ನುವುದನ್ನು ತಿಳಿದು ಸುಳ್ಳು ಸುಳ್ಳೇ ಗಾಳಿ ಸುದ್ದಿಯನ್ನು ಹಬ್ಬಿಸಿಬಿಟ್ಟರು. ವಿನಯನ ನೋಟ್ ಬುಕ್ಕಿನ ಮೇಲೆ ವನಮಾಲಾ ಮೇಡಂ ಯಾವ ಯಾವ ಪ್ರಶ್ನೆ ತೆಗೆದಿದ್ದೇನೆ ಎಂದು ಟಿಕ್ ಮಾಡಿದ್ದಾರೆ. ಇದರಿಂದ ವಿನಯನಿಗೆ ಜಾಸ್ತಿ ಅಂಕಗಳು ಬೀಳುತ್ತವೆ. ಎಂಟನೇ ತರಗತಿ ವಿದ್ಯಾರ್ಥಿನಿಯಿಂದ ಬರೆಸಿದ್ದಾರೆ ಎಂದೂ ಹಬ್ಬಿಸಿದರು. ಅಷ್ಟೇ ಅಲ್ಲದೇ ಈ ವಿಷಯವನ್ನು ಇಂಗ್ಲೀಷ್ ಕಲಿಸಲು ಬರುತ್ತಿದ್ದ ಬಿ.ಆರ್.ಎಲ್. ಅವರ ಬಳಿ ಹೇಳಿಬಿಟ್ಟಿದ್ದರು. ಅವರೋ ಶಾಲೆಯಲ್ಲಿ ಗಲಾಟೆಯನ್ನೂ ಮಾಡಿದರು ಎನ್ನಿ. ಈ ಸಂದರ್ಭದಲ್ಲಿ ಜ್ವರ ಕಡಿಮೆಯಾದ ಮೇಲೆ ಶಾಲೆಗೆ ವಾಪಾಸು ಬಂದ ವನಮಾಲಾ ಮೇಡಂ ಮೊಟ್ಟ ಮೊದಲ ಬಾರಿಗೆ ಬಂದು ಜಗಳ ಮಾಡಿದ್ದು ನೋಡಬೇಕಿತ್ತು. ಚೆಂದದ ಮೇಡಮ್ ಇಷ್ಟು ಸಿಟ್ಟು ಮಾಡಿಕೊಳ್ಳಲು ಸಾಧ್ಯವೇ ಎಂದು ಬೆರಗಿನಿಂದ ನೋಡಿದ್ದೆ.
ನನ್ನ ನೋಟ್ ಬುಕ್ಕಿನ ತಪಾಸಣೆಯೂ ಆಗಿತ್ತು. ಅದರ ಮೇಲೆ ಯಾವುದೇ ಟಿಕ್ಕುಗಳಿರಲಿಲ್ಲ. ಎಂಟನೇ ಕ್ಲಾಸಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಪ್ರಶ್ನೆ ಪತ್ರಿಕೆಯನ್ನು ತನ್ನ ಕೈಯಲ್ಲಿ ಮೇಡಮ್ ಬರೆಸಿರುವುದಾಗಿ ಒಪ್ಪಿಕೊಂಡಳು. ಕೊನೆಗೆ ಗಲಾಟೆ ಹೆಚ್ಚಾಗಿ ಮರು ಪರೀಕ್ಷೆ ಮಾಡಲಾಯಿತು. ವಿಚಿತ್ರ ಎಂದರೆ ಮೊದಲು ಮಾಡಿದ್ದ ಪರೀಕ್ಷೆಯಲ್ಲಿ ನನಗೆ 25ಕ್ಕೆ 21 ಅಂಕಗಳು ಬಿದ್ದಿದ್ದವು. ಆದರೆ 2ನೇ ಸಾರಿ ಮಾಡಿದ ಪರೀಕ್ಷೆಯಲ್ಲಿ ನನಗೆ 25ಕ್ಕೆ 24 ಅಂಕಗಳು ಬೀಳುವ ಮೂಲಕ ನನ್ನ ಮೇಲೆ ಬರುತ್ತಿದ್ದ ಆಪಾದನೆಯನ್ನೂ ತಪ್ಪಿಸಿಕೊಂಡಿದ್ದೆ ಬಿಡಿ.
ನಮಗೆ ದೈಹಿಕ ಶಿಕ್ಷಕರಾಗಿ ಸಿ.ಆರ್. ಲಿಂಗರಾಜು ಎನ್ನುವವರಿದ್ದರು. ಅದೇನು ಕಾರಣವೋ ಗೊತ್ತಿಲ್ಲ. ವನಮಾಲಾ ಮೇಡಮ್ಮಿಗೂ ಲಿಂಗರಾಜ ಸರ್ ಗೂ ಬಹಳ ಗಲಾಟೆ ನಡೆಯುತ್ತಿತ್ತು. ಕ್ಲಾಸಿನ ನಡುವೆಯೇ ಒಂದೆರಡು ಸಾರಿ ಈ ಇಬ್ಬರೂ ಜಗಳ ಮಾಡಿಕೊಂಡಿದ್ದನ್ನು ನಾವಿಬ್ಬರೂ ಕಂಡಿದ್ದೇವೆ. ಸಮಾಜ ವಿಜ್ಞಾನದ ತರಗತಿ ಸಂದರ್ಭದಲ್ಲಿ ಲಿಂಗರಾಜು ಸರ್ ಕ್ಲಾಸ್ ತೆಗೆದುಕೊಂಡು ಬಿಡುತ್ತಿದ್ದರು. ಲಿಂಗರಾಜು ಸರ್ ಕ್ಲಾಸ್ ಸಂದರ್ಭದಲ್ಲಿ ವನಮಾಲಾ ಮೇಡಂ ಸ್ಪೆಷಲ್ ಕ್ಲಾಸ್ ತೆಗೆದುಕೊಂಡು ಬಿಡುತ್ತಿದ್ದರು. ಇದರಿಂದ ಇಬ್ಬರ ನಡುವೆ ಗಲಾಟೆ ಬಹಳ ಆಗಿತ್ತೆನ್ನಿ. ಗಲಾಟೆ ನಮಗೆ ಮಜಾ ಅನ್ನಿಸಿತ್ತು. ಆ ಸಂದರ್ಭದಲ್ಲಿ ನಾವು ವಿದ್ಯಾರ್ಥಿಗಳೆಲ್ಲ ವನಮಾಲಾ ಮೇಡಂ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೆವು. ನಮಗೆಲ್ಲ ಸಿಕ್ಕಾಪಟ್ಟೆ ಹೊಡೆಯುತ್ತಿದ್ದ ಲಿಂಗರಾಜ ಮಾಸ್ಟರ್ರಿಗೆ ಶರಂಪರ ಬಯ್ಯುತ್ತಿದ್ದೆವು ಬಿಡಿ. ಇತ್ತೀಚೆಗೆ ಕಾನಲೆ ಹೈಸ್ಕೂಲಿಗೆ ಭೇಟಿ ಕೊಟ್ಟಿದ್ದೆ. ಅಲ್ಲಿ ವನಮಾಲಾ ಮೇಡಮ್ ಇರಲಿಲ್ಲ. ಯಾವುದೋ ಹೈಸ್ಕೂಲಿಗೆ ವರ್ಗವಾಗಿದೆ ಎನ್ನುವ ಮಾಹಿತಿ ಬಂತು. ತಕ್ಷಣವೇ ಈ ಘಟನೆಗಳೆಲ್ಲ ನೆನಪಾಯಿತು.

(ಮುಂದುವರಿಯುತ್ತದೆ)

ಅಂ-ಕಣ-6

ಸಲಿಗೆ(ಸಲುಗೆ)

ಕೆಲವರನ್ನು 
ಹತ್ತಿರ ಬಿಟ್ಟುಕೊಂಡರೆ 
ತಲೆಯ ಮೇಲೆ 
ಹತ್ತಿ ಕುಳಿತುಕೊಳ್ಳುತ್ತಾರೆ..!!!

ಗೊಂದಲ

ಆಕೆ ತಿರುಗಿ 
ನೋಡುತ್ತಾಳೆ ಎಂದುಕೊಂಡೆ
ಕನ್ನಡಿಯಲ್ಲಿ ಇಣುಕಿದಳು ||

ಆರ್ತನಾದ

ಭಗವಾನರಿಗೆ 
ಪ್ರಶಸ್ತಿ ಕೊಟ್ಟ 
ಸಾಹಿತ್ಯ ಅಕಾಡೆಮಿ 
ಪ್ರತಿಭಟನೆಗೆ ಪ್ರತಿಯಾಗಿ 
ಹೀಗೆ ಹೇಳಬಹುದೇ?
`ಹೇ ಭಗವಾನ್....!!!'

ಬದಲಾವಣೆ

ನನ್ನನ್ನು ಬದಲಿಸಿದಳು
ಅವಳು ಬದಲಾದಳು ||

ಅಯ್ಯೋ ಪಾಪ:

ಹಿಂದೆ  ಭಗವಾನ್ ಅಂತ ಕನ್ನಡ ಸಿನೆಮಾ ಒಂದು ಬಂದಿತ್ತು. ದರ್ಶನ್ ಹಾಗೂ ಸಾಯಿಕುಮಾರ್ ಹೀರೋ ಆಗಿದ್ದರು. ಸಿನೆಮಾದಲ್ಲಿ ಹಲವಾರು ಭರ್ಜರಿ ಡೈಲಾಗುಗಳಿದ್ದವು. ಸಾಯಿಕುಮಾರ್ ಬ್ರಾಂಡಿನ ಹೇಯ್... ನಿನ್ನ..ನ್.. ಅನ್ನುವ ಡೈಲಾಗುಗಳಿಗೂ ಕೊರತೆಯಿರಲಿಲ್ಲ. ಇದೀಗ ಭಗವಾನ್ ಹೇಳಿಕೆಗಳು ಅದೇ ರೀತಿ ಇದೆ. ಒಟ್ನಲ್ಲಿ ಅಯ್ಯೋ ಪಾ...ಪ..

ವೈರುಧ್ಯ :

ಭಗವಂತ ಅಂದರೆ
ಗೌರವ
ಭಗವಾನ್ ಎಂದರೆ
ರೌರವ ||

ಕಾಣೆ

ಆಕೆ
ಕನ್ನಡಿಯಲ್ಲಿ ಕಂಡೂ
ಕಾಣೆಯಾದಳು ||