Saturday, October 25, 2014

ದೀಪಾವಳಿ ಆಚಾರ-ವಿಚಾರ

ದೀಪವಾಳಿ ತಯಾರಿ
(ಬಲಿವೇಂದ್ರನನ್ನು ಕೂರಿಸುತ್ತಿರುವುದು)

ದೀಪಾವಳಿ ಹಬ್ಬದ ಸಡಗರ ಮೇರೆ ಮೀರಿದೆ. ದೀಪಗಳ ಹಬ್ಬಕ್ಕೆ ಜನಸಾಮಾನ್ಯರು ಸಂಭ್ರಮದಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಲಿವೇಂದ್ರನ ಪೂಜೆಗಾಗಿ ಮನೆ ಮನೆಯಲ್ಲಿ ವಿಶೇಷ ತಯಾರಿ ಮಾಡಿಕೊಂಡಿದ್ದಾರೆ.
ಬೆಳಕಿನ ಹಬ್ಬವಾದ ದೀಪಾವಳಿಯನ್ನು ದೊಡ್ಡಹಬ್ಬ ಎಂದೇ ಕರೆಯುತ್ತಾರೆ. ಎಲ್ಲ ಹಬ್ಬಗಳಿಗೂ ಕಿರೀಟವಿಟ್ಟಂತಹ ಹಬ್ಬ ಇದು. ನಗರ ಹಾಗೂ ಗ್ರಾಮೀಣ ಪ್ರದೇಶದ ಜನಸಾಮಾನ್ಯರು ತಮ್ಮನ್ನು ತಾವು ಮರೆತು ಆನಂದಿಸುವಂತಹ ಹಬ್ಬ. ಇಂತಹ ದೀಪಾವಳಿಯ ಸಂಭ್ರಮ ಬುಧವಾರದಿಂದ ಆರಂಭವಾಯಿತು. ಮನೆ ಮನೆಗಳಲ್ಲಿ ಬೂರೆ ಹಬ್ಬ ಎಂದು ಕರೆಯುವ ಈ ದಿನದಂದು ಬೂರೆ ನೀರನ್ನು ಮನೆಯೊಳಕ್ಕೆ ತರುವ ಮೂಲಕ ಹಬ್ಬ ಆರಂಭವಾಗುತ್ತದೆ. ಬೂರೆ ನೀರು ತಂದ ನಂತರ ಬಲಿವೇಂದ್ರನ ಹೋಲಿಕೆಯ ಮೂರ್ತಿಯನ್ನು ಕೂರಿಸಲಾಗುತ್ತದೆ. ಮಣೆಯ ಮೇಲೆ ಮಣ್ಣಿನ ಚಿತ್ತಾರ ಬಿಡಿಸಿ ಅದರ ಮೇಲೆ ತಾಮ್ರದ ಬಿಂದಿಗೆಯಲ್ಲಿ ನೀರನ್ನು ಹಾಕಿ, ಅದರ ಬಾಯಿಗೆ ಅಗಲವಾದ ಬಟ್ಟಲನ್ನು ಇಟ್ಟು ಅದರ ಮೇಲೆ ಅಕ್ಕಿಯನ್ನು ಹರವಿ, ತೆಂಗಿನ ಕಾಯಿ ಇಡಲಾಗುತ್ತದೆ. ತೆಂಗಿನಕಾಯಿಯ ಮೇಲೆ ಜೋಡು ಕೋಡನ್ನು ಹೊಂದಿರುವ ಅಡಿಕೆ ಸಿಂಗಾರದಿಂದ ಬಲೀಂದ್ರ ಮೂರ್ತಿಯನ್ನು ಕೂರಿಸಲಾಗುತ್ತದೆ. ಮೂರ್ತಿಯ ಅಕ್ಕಪಕ್ಕ ಬಲಿತ ಸೌತೆಕಾಯಿ ಹಾಗೂ ಮೊಗೆ ಕಾಯಿಗಳನ್ನು ಇಡಲಾಗುತ್ತದೆ.
(ಗೋಪೂಜೆ)
ಮೂರು ದಿನಗಳ ಕಾಲ ಬಲೀಂದ್ರ ಮೂತರ್ಿಯನ್ನು ಪೂಜೆ ಮಾಡಲಾಗುತ್ತದೆ. ಹಬ್ಬದ ಸರಣಿಯ ಎರಡನೇ ದಿನವಾದ ಗುರುವಾರ ವಾಹನ ಪೂಜೆ ಹಾಗೂ ಲಕ್ಷ್ಮೀ ಪೂಜೆ ನಡೆಯುತ್ತದೆ. ತಮ್ಮ ತಮ್ಮ ಮನೆಯ ವಾಹನಗಳು, ಆಭರಣಗಳನ್ನು ಇಂದು ಪೂಜೆ ಮಾಡಲಾಯಿತು. ವಾಹನಗಳಿಗೆ ಸಿಂಗರಿಸಿ ಸಭ್ರಮಿಸಿದರು. ಮೂರನೇ ದಿನವಾದ ಶುಕ್ರವಾರ ಗೋಪೂಜೆ ನಡೆಯಲಿದೆ. ಶುಕ್ರವಾರದಂದು ಗೋವನ್ನು ಸಿಂಗರಿಸಿ, ಗೋವಿನ ಪೂಜೆ ಮಾಡಿ ಸಂಭ್ರಮಿಸುತ್ತಾರೆ.
ಹಬ್ಬದ ತಯಾರಿಗಾಗಿ ಕಳೆದ ಮೂನರ್ಾಲ್ಕು ದಿನಗಳಿಂದ ಜನರು ಮಾರುಕಟ್ಟೆಗಳತ್ತ ಮುಖಮಾಡಿದ್ದರು. ಅಗತ್ಯದ ವಸ್ತುಗಳನ್ನು ಕೊಳ್ಳಲು ಮುಗಿಬಿದ್ದಿದ್ದರು. ತರಕಾರಿಗಳು, ಗೋವೆಕಾಯಿ, ಕಬ್ಬು, ಅಡಿಕೆ ಸಿಂಗಾರ, ಪುಂಡಿ ನಾರಿನ ಹಗ್ಗ, ಗೋವುಗಳ ಕುತ್ತಿಗೆಗೆ ಕಟ್ಟುವ ಗಂಟೆ, ಆಕಾಶಬುಟ್ಟಿ, ಹೂವುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕೊಳ್ಳಲು ಜನಸಾಮಾನ್ಯರು ಮಾರುಕಟ್ಟೆಯ ಕಡೆಗೆ ಮುಖ ಮಾಡಿದ್ದು ಸಾಮಾನ್ಯವಾಗಿತ್ತು. ಮಾರುಕಟ್ಟೆಗಳಲ್ಲಿಯೂ ಕೂಡ ದೀಪಾವಳಿಯ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿತ್ತು. ತರಕಾರಿ ದರದಲ್ಲಿ ಸಾಮಾನ್ಯ ದಿನಕ್ಕಿಂದ 10-20 ರು. ಏರಿಕೆಯಾಗಿದ್ದರೆ, ದವಸ ಧಾನ್ಯಗಳಲ್ಲಿಯೂ ಕೂಡ 5-10 ರು. ಹೆಚ್ಚಳವಾಗಿತ್ತು. ಪುಂಡಿ ನಾರಿನ ಹಗ್ಗಕ್ಕೆ ಜೋಡಿಗೆ 20, 30, 40 ರು. ದರ ನಿಗದಿಯಾಗಿದ್ದರೆ ಹೂವುಗಳ ಬೆಲೆ ಮೊಳಕ್ಕೆ 30 ರಿಂದ 50 ರು. ಮುಟ್ಟಿತ್ತು. ಇದರಿಂದ ಜನಸಾಮಾನ್ಯರು ಅಗತ್ಯ ವಸ್ತುಗಳನ್ನು ಕೊಳ್ಳಲು ಹಿಂದೇಟು ಹಾಕಿದರು.
(ಎತ್ತ ನೋಡಿದರತ್ತ ಹಣತೆಗಳು)
ಪಟಾಕಿ ಸದ್ದು ಕೂಡ ಹಬ್ಬದ ಸಡಗರವನ್ನು ಹೆಚ್ಚಿಸಿದೆ. ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಲು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದ್ದರೂ ಕೂಡ ಪಟಾಕಿ ಸಿಡಿಸುವ ಸಂತಸಕ್ಕೆ ತಡೆಯುಂಟಾಗಿಲ್ಲ. ಮಕ್ಕಳಾದಿಯಾಗಿ ಪಟಾಗಿ ಸಿಡಿಸಿ ಸಂತಸಪಟ್ಟರು. ಪಟಾಕಿ ಸಿಡಿಸುವ ಸಂಭ್ರಮವನ್ನು ಹೆಚ್ಚಿಸುವ ಸಲುವಾಗಿ ತರಹೇವಾರಿ ಪಟಾಕಿಗಳು ಅಂಗಡಿಗಳಲ್ಲಿ ಗಮನ ಸೆಳೆಯುತ್ತಿದ್ದವು. ಗ್ರಾಮೀಣ ಭಾಗದಲ್ಲಿಯೂ ಪಟಾಕಿ ಅಬ್ಬರ ಜೋರಾಗಿದೆ. ದೀಪಾವಳಿಯ ಹಬ್ಬ ಧಾಮರ್ಿಕವಾಗಿ ಮಾತ್ರ ಮಹತ್ವವನ್ನು ಪಡೆದುಕೊಂಡಿಲ್ಲ. ಬದಲಾಗಿ ಪರಿಸರ ಸ್ನೇಹಿ ಹಬ್ಬವಾಗಿದೆ. ಪ್ರಕೃತಿ ಮಾತೆಯನ್ನು ಪೂಜಿಸಲಾಗುತ್ತದೆ, ಆರಾಧಿಸಲಾಗುತ್ತದೆ. ಪ್ರಾಣಿ ಪಕ್ಷಿಗಳಿಗೂ ಈ ಹಬ್ಬದಲ್ಲಿ ಊಟೋಪಚಾರ ಮಾಡಿಸಲಾಗುತ್ತದೆ. ಪ್ರಾಣಿಗಳಲ್ಲಿ ದೇವರನ್ನು ಕಾಣಲಾಗುತ್ತದೆ.
ಬೆಳಕಿನ ಹಬ್ಬವೆಂದರೆ ಜೀವನದಲ್ಲಿ ಬೆಳಕನ್ನು ಹೊತ್ತಿಸುವಂತದ್ದು ಎನ್ನುವ ಭಾವನೆ ಹಲವು ಪ್ರದೇಶದಲ್ಲಿದೆ. ಯಾವುದೇ ಮಂಗಲಕಾರ್ಯ ಮಾಡುವುದಿದ್ದರೂ ದೀಪಾವಳಿಯ ನಂತರ ಎನ್ನುವ ನಂಬಿಕೆ ಬಹುತೇಕ ಕಡೆಗಳಲ್ಲಿದೆ. ಹಬ್ಬ ಆರಂಭವಾಗುತ್ತಿದ್ದಂತೆಯೇ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುತ್ತಾರೆ. ಅದರಲ್ಲೂ ಶೇಂಗಾ ಎಣ್ಣೆ ದೀಪ ಶ್ರೇಷ್ಟವಾದದ್ದು ಎನ್ನಲಾಗುತ್ತದೆ. ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಹಣತೆಯ ದೀಪ ರಾರಾಜಿಸುತ್ತಿದ್ದರೆ ಪಟ್ಟಣಗಳಲ್ಲಿ ವಿದ್ಯುತ್ ದೀಪಗಳ ಆಕಾಶ ಬುಟ್ಟಿಗಳು ತೂಗಾಡುತ್ತವೆ. ವಿದ್ಯುತ್ ದೀಪಗಳ ಅಲಂಕಾರವನ್ನು ಪಟ್ಟಣದ ಮನೆ, ಅಂಗಡಿಗಳಲ್ಲಿ ಕಾಣಬಹುದಾಗಿದೆ.
(ಗೋವುಗಳನ್ನು ಓಡಸುತ್ತಿರುವುದು)
       ಹಬ್ಬ ಆರಂಭವಾಗುತ್ತಿದ್ದಂತೆಯೇ ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಯ ಆರಾಧನೆ ನಡೆಯುತ್ತದೆ. ಗೋವುಗಳಿಗೆ ಸಿಹಿ ಕಡುಬನ್ನು ಮಾಡಿ ತಿನ್ನಿಸಲಾಗುತ್ತದೆ. ಅದೇ ರೀತಿ ಗಂಟೆ, ವಿವಿಧ ನಮೂನೆಯ ದಂಡೆಗಳನ್ನು ಕಟ್ಟುವ ಮೂಲಕ ಗೋವುಗಳ ಶೃಂಗಾರ ಆರಂಭಗೊಳ್ಳುತ್ತದೆ. ಗೋಪೂಜೆ ದಿನವಾದ ಶುಕ್ರವಾರ ಗೋವುಗಳ ಪೂಜೆಯ ಜೊತೆ ವಿಶೇಷವಾದ ಭಕ್ಷ್ಯಗಳನ್ನು ನೀಡಲಾಗುತ್ತದೆ. ಇನ್ನಷ್ಟು ಅಲಂಕರಿಸಲಾಗುತ್ತದೆ. ಸಾಮೂಹಿಕವಾಗಿ ಗೋವುಗಳ ಶೃಂಗಾರ, ಪೂಜೆ, ಓಟ ಇತ್ಯಾದಿಗಳು ನಡೆಯುತ್ತವೆ. ಅಂದು ಸಂಜೆ ಬಲಿವೇಂದ್ರನನ್ನು ಕಳಿಸುವ ಮೂಲಕ ಹಬ್ಬದ ಸಂಭ್ರಮಕ್ಕೆ ತೆರೆ ಬೀಳುತ್ತದೆಯಾದರೂ ಬಿದಿಗೆಯ ದಿನ ವಸ್ತ್ರ ಉಡಿಕೆಯ ದಿನ ಅಥವಾ ವಸ್ತೊಳಿಕೆಯ ದಿನ ಎಂದು ಕರೆದು, ಹೊಸ ವಸ್ತ್ರವನ್ನು ತೊಟ್ಟು ಸಂಭ್ರಮಿಸುತ್ತಾರೆ. ಅಲ್ಲಿಗೆ ಹಬ್ಬ ಸಂಪೂರ್ಣಗೊಳ್ಳುತ್ತದೆ.

****
ಆಚರಣೆ'
(ಎತ್ತುಗಳ ಸಿಂಗಾರ)

ಬೆಳಕಿನ ಹಬ್ಬ ದೀಪಾವಳಿಯ ಮೂರನೇ ದಿನದ ಸಂಭ್ರಮ ಸಡಗರದಿಂದ ನಡೆಯಿತು. ಮನೆ ಮನೆಗಳಲ್ಲಿ ಗೋವಿನ ಪೂಜೆಯನ್ನು ಮಾಡುವ ಮೂಲಕ ಶಾಸ್ತ್ರ-ಸಂಪ್ರದಾಯ ಸಹಿತವಾಗಿ ಆಚರಿಸಲಾಯಿತು.
ಮುಂಜಾನೆ ಗೋವುಗಳನ್ನು ಸ್ನಾನ ಮಾಡಿಸುವುದರಿಂದ ಆರಂಭಗೊಳ್ಳುವ ಬಲಿಪಾಡ್ಯಮಿಯ ಸಡಗರ ನಿಧಾನವಾಗಿ ರಂಗೇರಿತು. ಅಡಿಕೆ, ಪಚೋಲಿ, ಪುಂಡಿ ನಾರು  ಸೇರಿದಂತೆ ಹಳ್ಳಿಗರೇ ತಯಾರಿಸಿದ ವಿಶಿಷ್ಟ ಬಗೆಯ ಹಾರದಿಂದ ಗೋವುಗಳನ್ನು ಅಲಂಕರಿಸುವುದು ವಾಡಿಕೆಯಾಗಿದೆ. ಶೇಡಿ ಹಾಗೂ ಕೆಮ್ಮಣ್ಣಿನಿಂದ ಗೋವುಗಳ ಮೈಮೇಲೆ ಚಿತ್ತಾರ ಬರೆಯುವ ಮೂಲಕ ಮತ್ತು ಗೋವುಗಳ ಕೋಡುಗಳಿಗೆ ಕೆಮ್ಮಣ್ಣು-ಶೇಡಿಯ ಬಣ್ಣ ಬಳಿದು ಸಿಂಗರಿಸಲಾಯಿತು. ಗೋ ಮಾತೆಯ ಪೂಜೆಯಲ್ಲಿ ಧನ್ಯತಾ ಭಾವ ಕಂಡುಕೊಂಡ ಆಸ್ತಿಕರು ಮನೆ ಮನೆಗಳಲ್ಲಿ ತಯಾರು ಮಾಡುವ ಹೋಳಿಗೆ, ಕಡುಬು ಸೇರಿದಂತೆ ವಿಶಿಷ್ಟ ತಿನಿಸುಗಳನ್ನೆಲ್ಲ ಗೋವುಗಳಿಗೆ ತಿನ್ನಿಸಿ ಸಂಭ್ರಮಿಸಿದರು. ಗೋವಿನ ರಕ್ಷಣೆಗಾಗಿ ಪಾರಂಪರಿಕವಾಗಿ ಆಚರಿಸುತ್ತ ಬಂದ ಹುಲಿಯಪ್ಪನ ಪೂಜೆಯನ್ನು ಸಾರ್ವತ್ರಿಕವಾಗಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಮನೆಯ ಆಧಾರ ಸ್ಥಂಭವೆಂದೇ ಪರಿಗಣಿಸಲ್ಪಡುವ ಪ್ರಧಾನ ಕಂಬಕ್ಕೂ ಪೂಜೆ ಮಾಡುವ ಸಂಪ್ರದಾಯ ಮಲೆನಾಡಿನ ವಿಶೇಷತೆಗಳಲ್ಲೊಂದಾಗಿದೆ. ತಮ್ಮ ಜಮೀನು ಮನೆಗಳನ್ನು ರಕ್ಷಿಸುವ ಗಣಗಳಿಗೆ ತೆಂಗಿನ ಕಾಯಿ ಒಡೆಯುವ ಮೂಲಕ ಪೂಜೆ ಸಲ್ಲಿಸುವುದೂ ಸಹ ಈ ಪ್ರದೇಶದ ವೈಶಿಷ್ಟ್ಯತೆಯಾಗಿದೆ. ಈ ಎಲ್ಲ ಪೂಜೆ ಗಳು ಮುಗಿದ ನಂತರವೇ ಮನೆ ಮನೆಗಳ ಗೋವುಗಳನ್ನು ಬಯಲಿಗೆ ಬಿಡಲಾಗುತ್ತದೆ.
(ಭೂತಪ್ಪನಿಗೆ ಪೂಜೆ)
ಗೋವಿನ ಬಯಲಿನಲ್ಲಿ ಎಲ್ಲರ ಮನೆಗಳಿಂದ ಆಗಮಿಸಿದ ಹಸುಗಳು ಒಂದೆಡೆ ಸೇರುತ್ತವೆ. ಈ ಬಯಲಿನಲ್ಲಿ ಎತ್ತುಗಳನ್ನು ಸಿಂಗರಿಸಿ ಓಡಿಸಲಾಯಿತು. ಓಡುವ ಎತ್ತು, ಹೋರಿಗಳ ಜೊತೆಗೆ ಅವುಗಳ ಮಾಲೀಕರೂ ಓಡಿ ಸಂಭ್ರಮಿಸಿದರು. ನಂತರ ಊರ ಸುತ್ತಮುತ್ತಲೂ ಇರುವ ಚೌಡಿ, ಬೀರಲು, ಜಟಕ, ನಾಗರು ಸೇರಿದಂತೆ ಸಮಸ್ತ ಊರು ರಕ್ಷಣೆ ಮಾಡುವ ದೇವಗಣಗಳನ್ನು ಪೂಜಿಸಲಾಯಿತು. ಮನೆ ಮನೆಗಳಲ್ಲಿ ಆಯುಧಗಳು, ಯಂತ್ರಗಳು, ಹೊಸ್ತಿಲು, ತುಳಸಿ ಕಟ್ಟೆ, ಕೊಟ್ಟಿಗೆ ಈ ಮುಂತಾದವುಗಳಿಗೆಲ್ಲ ಪೂಜೆ ನಿಡುವ ಮೂಲಕ ದೀಪಾವಳಿ ಪ್ರಕೃತಿಯ ಆರಾಧಿಸುವ ಹಬ್ಬ ಎನ್ನುವ ವಿಶೇಷಣಕ್ಕೆ ಪುಷ್ಟಿ ಸಿಕ್ಕಂತಾಯಿತು.
ಸಂಜೆ ತುಳಸಿ ಪೂಜೆಯ ನಂತರ ಬಲಿವೇಂದ್ರನನ್ನು ಕಳಿಸುವ ಸಂಪ್ರದಾಯ ನಡೆಯಿತು. ಈ ಸಂದರ್ಭದಲ್ಲಿ ಬಹುತೇಕ ಜನರು ಮನೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಜೊಂಜನ್ನು ಹಚ್ಚಿಡುತ್ತಾರೆ. ಮನೆಯಂಗಳದ ವರೆಗೂ ಶಿಂಡ್ಲೇ ಕಾಯಿಯ ಜೊಂಜನ್ನು ಉರಿಸಲಾಗುತ್ತದೆ. ತನ್ಮೂಲಕ ಬೆಳಕಿನ ಹಬ್ಬ ತೆರೆಯೆಳೆಯುತ್ತಿದ್ದಂತೆಯೇ ಬಲಿವೇಂದ್ರನನ್ನು ಮುಂದಿನ ವರ್ಷಕ್ಕಾಗಿಯೂ ಕರೆಯಲಾಯಿತು.
(ಭಾರ ಎತ್ತುವ ಸ್ಪರ್ಧೆ)
             ಹೊಸ ಬಟ್ಟೆಗಳನ್ನು ಧರಿಸುವ ಎಲ್ಲ ವಯೋಮಾನದವರು ಈ ಹಬ್ಬವನ್ನು ಹೊಸ ವರ್ಷವೆನ್ನುವ ನಂಬುಗೆಯಿಂದಲೂ, ಶೃದ್ಧೆಯಿಂದ ಆಚರಿಸುವುದು ವಿಶೇಷವಾಗಿದೆ. ಹಬ್ಬದ ದಿನ ಸಾರ್ವಜನಿಕ ಸ್ಥಳದಲ್ಲಿ ತೆಂಗಿನ ಕಾಯಿ ಒಡೆಯುವ ಜೂಜಾಟ ಸೇರಿದಂತೆ ಹಲವಾರು ವಿಧದ ಸಾಹಸವನ್ನು ಪ್ರದರ್ಶಿಸಬಲ್ಲ ಕ್ರೀಡೆಗಳನ್ನು ಪಣಕ್ಕಿಟ್ಟು ಆಡಲಾಗುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ರಾತ್ರಿಯಿಂದ ಬೆಳಗಿನ ತನಕವೂ ಜೂಜಾಟಗಳು ನಡೆಯುತ್ತವೆ. ಇಂದಿನ ಜೂಜಾಟಕ್ಕೆ ಬಹುತೇಕ ಯಾರೂ ಅಡ್ಡಿಪಡಿಸುವುದಿಲ್ಲ. ಇಲ್ಲಿ ಮನರಂಜನೆಯು ಪ್ರಾಮುಖ್ಯತೆ ಪಡೆಯುತ್ತದೆ.
ಸಿದ್ದಾಪುರ ತಾಲೂಕಿನ ಕಾನಸೂರು ಪಂಚಾಯತ ವ್ಯಾಪ್ತಿಯ ಅಡ್ಕಳ್ಳಿಯಲ್ಲಿ ಬಾರ ಎತ್ತುವ ಸ್ಫಧರ್ೆಯಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶಿಷ್ಟವಾದಿ ದೀಪಾವಳಿಯನ್ನು ಆಚರಿಸಲಾಯಿತು. ಸುತ್ತಮುತ್ತಲ ಕಾನಸೂರು, ಕಲ್ಮಟ್ಟಿಹಳ್ಳಿ, ಮಲೆನಳ್ಳಿ, ಕಲ್ಮನೆ, ಅಡ್ಕಳ್ಳಿ, ಸೊಂಡ್ಲಬೈಲ್, ಮುತ್ತಮುರ್ಡ, ಕೋಡಸಿಂಗೆ, ಹಿತ್ಲಕೈ, ಬಾಳಗಾರ್, ದಂಟಕಲ್ ಈ ಮುಂತಾದ ಊರುಗಳ ಯುವಕರು 60 ಕೆ.ಜಿ.ಗೂ ಅಧಿಕ ಭಾರದ ಕಲ್ಲನ್ನು ಎತ್ತಲು ಪ್ರಯತ್ನಿಸಿದರು. ಹಲವು ಈ ಭಾರದ ಕಲ್ಲನ್ನು ಎತ್ತದೇ ಬಸವಳಿದರೆ ಕೆಲವು ಯುವಕರು ಅದನ್ನು ಎತ್ತಲು ಸಫಲರಾದರು. ಭಾರದ ಕಲ್ಲನ್ನು ಎತ್ತಿದ ಯುವಕರು ಕಲ್ಲನ್ನು ಹೊತ್ತುಕೊಂಡೇ ಸ್ಥಳೀಯ ಭೂತಪ್ಪನ ಕಟ್ಟೆಯನ್ನು ಮೂರು ಸಾರಿ ಪ್ರದಕ್ಷಿಣೆ ಹಾಕುವುದು ವಾಡಿಕೆ. ಹೀಗೆ ಮಾಡಿದ ಯುವಕರಿಗೆ ವಿಶೇಷ ಬಹುಮಾನಗಳನ್ನೂ ನೀಡಲಾಗುತ್ತದೆ. ಪ್ರತಿ ವರ್ಷ ನಿಗದಿತ ಸಂಖ್ಯೆಯಲ್ಲಿ ಭಾಗವಹಿಸುವ ಯುವಕರು ಕಲ್ಲನ್ನು ಎತ್ತಲು ವಿಫಲರಾದರೆ ಬಹುಮಾನವನ್ನು ಬರುವ ವರ್ಷಕ್ಕಾಗಿ ಕಾಯ್ದಿರಿಸಲಾಗುತ್ತದೆ. ಹೀಗೆ ಒಂದೊಂದು ಊರಿನಲ್ಲಿ ಒಂದೊಂದು ವೈವಿಧ್ಯತೆಯೊಂದಿಗೆ ಆಟಗಳಲ್ನಡೆದು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

**
(ಈ ಎರಡೂ ಲೇಖನಗಳು ಕನ್ನಡಪ್ರಭದಲ್ಲಿ ಪ್ರಕಟವಾಗಿದೆ )

No comments:

Post a Comment