Friday, October 24, 2014

ಬೆಂಗಾಲಿ ಸುಂದರಿ-35

(ಬೋಗ್ರಾದ ಖಾಲಿ ಖಾಲಿ ಬೀದಿ)
            ಕಾಣೆಯಾಗಿರುವವನು ವಿನಯಚಂದ್ರನಾದರೂ ಆತನ ಪರಮಾಪ್ತ ಗೆಳೆಯನಾಗಿ ಬದಲಾಗಿದ್ದ ಸೂರ್ಯನ್ ಪಟ್ಟ ಪಾಡು ಅಷ್ಟಿಷ್ಟಲ್ಲ. ತನ್ನದೇ ಸಾಮರ್ಥ್ಯ ಬಳಕೆ ಮಾಡಿ ವಿನಯಚಂದ್ರನನ್ನು ಹೇಗೆ ಹುಡುಕಲು ಸಾಧ್ಯ ಎನ್ನುವುದನ್ನೆಲ್ಲ ಪ್ರಯತ್ನಿಸಿದ್ದ. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಒಟ್ಟಾಗಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಸೂರ್ಯನ್ ಗೆ ಬಲವಾಗಿ ಅನ್ನಿಸುತ್ತಿತ್ತು. ತಾನೇ ಬಾಂಗ್ಲಾಕ್ಕೆ ಹೋಗಿ ಬಿಡಲಾ ಎಂದೂ ಆಲೋಚಿಸಿದ್ದ. ಆದರೆ ಬಾಂಗ್ಲಾ ನಾಡಿನಲ್ಲಿ ವಿಮಾನ, ರೈಲು, ರಸ್ತೆ, ದೂರವಾಣಿ ಇವೆಲ್ಲ ಹಿಂಸಾಚಾರದಿಂದ ಕಲಸುಮೇಲೋಗರವಾಗಿರುತ್ತವೆ. ಅಸ್ತವ್ಯಸ್ತವಾಗಿರುತ್ತವೆ ಎಂದುಕೊಂಡು ಸುಮ್ಮನಾಗಿದ್ದ. ತಮಿಳುನಾಡಿನ ಸರ್ಕಾರದಲ್ಲಿದ್ದ ರಾಜಕಾರಣಿಗಳು ಸಹಾಯ ಮಾಡುವ ಭರವಸೆಯನ್ನು ನೀಡಿದ್ದರು. ವಿನಯಚಂದ್ರ ಖಂಡಿತವಾಗಿಯೂ ಭಾರತಕ್ಕೆ ಮರಳುತ್ತಾನೆ ಎನ್ನುವ ವಿಶ್ವಾಸ ಸೂರ್ಯನದ್ದಾಗಿತ್ತು.
              ವಿನಯಚಂದ್ರ ಭಾರತಕ್ಕೆ ಮರಳುವಲ್ಲಿ ಏನೋ ಸಮಸ್ಯೆಯಾಗಿದೆ. ಆದರೆ ಏನೆಂಬುದು ಗೊತ್ತಾಗುತ್ತಿಲ್ಲ ಎಂದುಕೊಂಡ. ಯಾವುದಕ್ಕೂ ಇರಲಿ ಎಂದುಕೊಂಡ ಸೂರ್ಯನ್ ಮಧುಮಿತಾ ಭಾರತದಲ್ಲಿ, ಭಾರತದ ನಿವಾಸಿಯಾಗಿ ಉಳಿಯಲು ಬೇಕಾದ ದಾಖಲೆಪತ್ರಗಳನ್ನು ತಯಾರು ಮಾಡಲು ಹೊರಟಿದ್ದ. ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿದ್ದಾಳೆ ಎನ್ನುವುದನ್ನು ತಪ್ಪಿಸಿ, ಮಧುಮಿತಾ ಭಾರತದ ನಿವಾಸಿ ಎಂದು ತೋರಿಸಲು ಅನುವಾಗುವಂತೆ ಅಗತ್ಯ ಕ್ರಮಗಳನ್ನು ಸೂರ್ಯನ್ ಕೈಗೊಳ್ಳಲು ಆರಂಭಿಸಿದ್ದ. ಏನೇ ಸಮಸ್ಯೆ ಬಂದರೂ ಅಗತ್ಯದ ದಾಖಲಾತಿ ಪತ್ರಗಳು ಸಹಾಯ ನೀಡಬೇಕು ಎಂಬುದು ಆತನ ಉದ್ದೇಶವಾಗಿತ್ತು. ತಮಿಳುನಾಡು ಸರ್ಕಾರದ ಸಚಿವರು ಈ ನಿಟ್ಟಿನಲ್ಲಿ ಸೂರ್ಯನ್ ಸಹಾಯಕ್ಕೆ ಸಂಪೂರ್ಣವಾಗಿ ನಿಂತುಬಿಟ್ಟಿದ್ದರು. ಆದ್ದರಿಂದ ಸೂರ್ಯನ್ ಗೆ ಎಲ್ಲ ರೀತಿಯ ಅನುಕೂಲವೂ ಆಯಿತು.

***

          ರಾತ್ರಿಯಲ್ಲೆಲ್ಲೋ ಎಚ್ಚರಾಯಿತು ಮಧುಮಿತಾಳಿಗೆ. ಚಳಿಯಾಗದಂತೆ ಬೆಚ್ಚಗೆ ಹಿಡಿದಿಡಲು ವಿನಯಚಂದ್ರ ಪ್ರಯತ್ನ ನಡೆಸುತ್ತಿದ್ದ. ಕೊನೆಗೆ ಆಕೆಯನ್ನು ಬೆಚ್ಚಗೆ ತಬ್ಬಿ ಹಿಡಿದು ಕುಳಿತಿದ್ದ. ವಿನಯಚಂದ್ರನ ಮೇಲೆ ಮತ್ತಷ್ಟು ಗೌರವ ಮೂಡಿತು ಮಧುಮಿತಾಳಿಗೆ. ವಿನಯಚಂದ್ರನಿಗೆ ನಿದ್ದೆ ಮಾಡಲು ಹೇಳಿದ ಮಧುಮಿತಾ ತಾನು ಎಚ್ಚರಿರುವುದಾಗಿ ಹೇಳಿದಳು. ಅದಕ್ಕೆ ಪ್ರಾರಂಭದಲ್ಲಿ ವಿನಯಚಂದ್ರ ಒಪ್ಪಲಿಲ್ಲ. ಕೊನೆಗೊಮ್ಮೆ ಹಿತವಾಗಿ ಮುತ್ತು ನೀಡಿ ವಿನಯಚಂದ್ರನನ್ನು ಒಪ್ಪಿಸಿದಳು. ಅಲ್ಲೇ ಮಧುಮಿತಾಳ ಭುಜಕ್ಕೆ ಒರಗಿ ನಿದ್ರಿಸಲು ಆರಂಭಿಸಿದ ವಿನಯಚಂದ್ರ.
         ಮಧುಮಿತಾಳ ಮನಸ್ಸಿನ ತುಂಬ ಕಳೆದೊಂದು ತಿಂಗಳ ಅವಧಿಯಲ್ಲಿ ನಡೆದಿದ್ದ ಘಟನೆಗಳು ಸುಳಿದುಬರಲು ಆರಂಭಿಸಿದ್ದವು. ಭಾರತದ ಯಾವುದೋ ಮೂಲೆಯ ಹುಡುಗನ ಪರಿಚಯವಾಗಿ ಆತನನ್ನು ತಾನು ಪ್ರೀತಿಸುತ್ತೇನೆ ಎಂದು ಕನಸಿನಲ್ಲಿಯೂ ಮಧುಮಿತಾ ಅಂದುಕೊಂಡಿರಲಿಲ್ಲ. ವಿನಯಚಂದ್ರನ ಪರಿಚಯವಾಗಿದ್ದು, ಪರಿಚಯ ಸ್ನೇಹಕ್ಕೆ ತಿರುಗಿದ್ದು, ಬಂದ ಬೆಳೆದಿದ್ದು, ನಾಚಿಕೊಂಡು ನಾಚಿಕೊಂಡು ಆತನೇ ಪ್ರೇಮನಿವೇದನೆ ಮಾಡಿದ್ದು, ಇದಕ್ಕೇ ಕಾಯುತ್ತಿದ್ದೆನೋ ಎಂಬಂತೆ ಒಪ್ಪಿಕೊಂಡಿದ್ದು ಎಲ್ಲವೂ ಕಣ್ಣೆದುರು ಸುಳಿಯಿತು. ಅಲ್ಲಿಯವರೆಗೆ ಹಿತವಾಗಿದ್ದ ಬದುಕು ಆ ನಂತರದ ದಿನಗಳಲ್ಲಿ ಏನೆಲ್ಲ ತಿರುವುಗಳನ್ನು ಪಡೆದುಕೊಂಡು ಬಿಟ್ಟಿತಲ್ಲ ಎನ್ನುವುದು ನೆನಪಾಗಿ ಬೆದರಿದಳು ಮಧುಮಿತಾ.
          ಬಾಂಗ್ಲಾ ದೇಶದಲ್ಲಿ ಭುಗಿಲೆದ್ದ ಹಿಂಸಾಚಾರ, ಹಿಂದೂಗಳನ್ನೇ ಗುರಿಯಾಗಿಟ್ಟುಕೊಂಡು ನಡೆಸಿದ ದಾಳಿಗಳು, ಅದಕ್ಕೆ ಬಲಿಯಾದ ತನ್ನ ಕುಟುಂಬ, ಸಲೀಂ ಚಾಚಾನ ಆತಿಥ್ಯ, ಆತನ ಮುಂದಾಳತ್ವದಲ್ಲೇ ಭಾರತ ತಲುಪಲು ಹೊರಟಿದ್ದು, ಸಲೀಂ ಚಾಚಾನ ನಿಧನ ನಂತರದ ತಮ್ಮ ಬದುಕು ಎಲ್ಲವೂ ನೆನಪಾಗಿ ಕಣ್ಣೀರಿನ ರೂಪದಲ್ಲಿ ಧರೆಗಿಳಿಯಲು ಪ್ರಯತ್ನಿಸಿತು. ತಾನು ಅಳಲಾರಂಭಿಸಿದರೆ ವಿನಯಚಂದ್ರನ ನಿದ್ದೆಗೆಲ್ಲಿ ಭಂಗ ಬರುತ್ತದೆಯೊ ಎಂದುಕೊಂಡ ಮಧುಮಿತಾ ಕಣ್ಣೀರನ್ನು ಒರೆಸಿಕೊಂಡಳು.
(ಬೋಗ್ರಾದಲ್ಲಿರುವ ಒಂದು ಬೌದ್ಧ ಧಾಮ)
          ಇಬ್ಬನಿ ನಿಧಾನವಾಗಿ ಇಳಿಯಲು ಆರಂಭಿಸಿತ್ತು. ಬೆಳಗಿನ ಜಾವವಿರಬೇಕು ಎಂದುಕೊಂಡಳು ಮಧುಮಿತಾ. ಮೂರ್ನಾಲ್ಕು ತಾಸಿನ ಚುಟುಕು ನಿದ್ದೆ ಮಾಡಿದ ವಿನಯಚಂದ್ರ ಎದ್ದ. ಕಣ್ಣು ಮುಚ್ಚಿಕೊಂಡೇ ಮೆಲು ದನಿಯಲ್ಲಿ `ಮಧು..' ಎಂದ.
         `ಹೂಂ..'ಅಂದಳು. `ಹೀಗೆ ಇದ್ದು ಬಿಡೋಣವಾ..?' ಎಂದ. ಮಾತಾಡಲಿಲ್ಲ ಮಧುಮಿತಾ. `ನಿನ್ನ ಭುಜ ಎಷ್ಟೆಲ್ಲ ಮೆತ್ತಗಿದೆ. ಸದಾ ನಿನ್ನ ಭುಜ ಹೀಗೆ ಇರುತ್ತದೆ. ನನ್ನ ತಲೆಗೆ ದಿಂಬಿನಂತೆ.. ಅಂತಾದರೆ ಎಷ್ಟು ಶತಮಾನಗಳಾದರೂ ಹೀಗೆ ಇದ್ದು ಬಿಡೋಣ..' ಎಂದು ತುಂಟತನದಿಂದ ಕೇಳಿದ್ದ. `ಥೂ.. ಹೋಗೋ..ಯಾವಾಗಲೂ ನಿನಗೆ ಇಷ್ಟೇ' ಎಂದಿದ್ದಳು ಅವಳು.
           ಮೂಡಣದಲ್ಲಿ ನೇಸರ ನಿಧಾನವಾಗಿ ಏರಿ ಬರುತ್ತಿದ್ದ. ಬಾನಿನ್ನೂ ಕಿತ್ತಳೆ ವರ್ಣದಿಂದ ರಂಗು ರಂಗಾಗಿ ಕಾಣಲು ಆರಂಭಿಸುತ್ತಿದ್ದಾಗಲೇ ರಾತ್ರಿ ಯಾವ ರೀತಿ ಕಂಪೌಂಡ್ ಗೋಡೆ ಹಾರಿದ್ದರೋ ಅದೇ ದಾರಿಯಲ್ಲಿ ಮರಳಿ ಹೊರಟರು. ರಾತ್ರಿ ಎತ್ತರ ಗೊತ್ತಾಗಿರಲಿಲ್ಲವಾದರೂ ಬೆಳಗಿನ ವೇಳೆಗೆ ಯಾಕೋ ತುಂಬ ಎತ್ತರವಿದೆ ಎನ್ನಿಸಿತು. ಕಂಪೌಂಡ್ ಏರಿದ ವಿನಯಚಂದ್ರ ಮಧುಮಿತಾಳನ್ನು ಹತ್ತಿಸಿಕೊಳ್ಳಲು ಕೈಚಾಚಿದ. ಆಕೆಯ ಭಾರ ತೀವ್ರವಾಗಿ ದಬಾರನೆ ಕೆಳಕ್ಕೆ ಬಿದ್ದ. ಕೊಂಚ ನೋವಾಯಿತು. ಎರಡನೇ ಸಾರಿ ತಾನು ಕಂಪೌಂಡ್ ಏರುವ ಬದಲು ಆಕೆಯನ್ನು ಹಿಡಿದು ಹತ್ತಿಸಿದ. ನಿಧಾನವಾಗಿ ಕಂಪೌಂಡ್ ದಾಟಿಕೊಂಡರು.
        ಬೋಗ್ರಾ ನಗರಿ ಆಗ ತಾನೇ ಮುಂಜಾವಿನ ಸುಖನಿದ್ದೆಯಿಂದ ಎಚ್ಚರವಾಗುತ್ತಿತ್ತು. ಬೀದಿ ಬೀದಿಗಳು ಖಾಲಿ ಖಾಲಿಯಾಗಿದ್ದವು. ಇವರು ಮುಂದಕ್ಕೆ ಹೊರಡಲೇ ಬೇಕಾಗಿತ್ತು. ಭಾರತದ ಗಡಿಗೆ ಹತ್ತಿರದಲ್ಲಿರುವ ರಂಗಪುರಕ್ಕೆ ಎಷ್ಟು ಸಾಧ್ಯವೋ ಅಷ್ಟು ಬೇಗ ಹೋಗಬೇಕಾಗಿತ್ತು. ಬಸ್ಸಿನ ಮೂಲಕ ಸಾಗಲು ಕನಿಷ್ಟ ಆರೆಂಟು ಗಂಟೆಗಳ ಕಾಲ ಪ್ರಯಾಣ ಮಾಡಲೇಬೇಕಾಗಿತ್ತು. ನಡೆಯಲಿಕ್ಕೆ ಹೊರಟರೆ ಮೂರು ದಿನಗಳಾದರೂ ಸಾಗಬೇಕಾಗಿತ್ತು. ವಿನಯಚಂದ್ರ ಮಧುಮಿತಾಳ ಬಳಿ ಈ ವಿಷಯದ ಕುರಿತು ಚರ್ಚೆ ಮಾಡಿದ. ಕಿಸೆಯೊಳಗಿನ ಹಣವನ್ನು ಎಣಿಸಿಕೊಂಡ. ರಂಗಪುರವನ್ನು ತಲುಪಲು ಸಾಕಾಗುವಷ್ಟು ಹಣವಿರಲಿಲ್ಲ. ಮುಂದೇನು ಮಾಡುವುದು ಎನ್ನುವ ಆಲೋಚನೆ ಇಬ್ಬರಲ್ಲೂ ಕಾಡಿತು. ಕೊನೆಗೆ ಮಧುಮಿತಾಳೇ `ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಹೋಗೋಣ.. ಬಸ್ಸಿನಲ್ಲೇ ಆದರೆ ಕಂಡಕ್ಟರನ ಬಳಿ ಕಾಡಿ ಬೇಡಿ ಪ್ರಯಾಣ ಮಾಡೋಣ. ಆತ ನಮ್ಮನ್ನು ಕರೆದೊಯ್ದರೆ ಸರಿ. ಇಲ್ಲವಾದರೆ ಅಲ್ಲೆ ಎಲ್ಲಾದರೂ ಇಳಿದು ನಡೆದು ಹೊರಡೋಣ.. ಏನಂತೀಯಾ..?' ಎಂದಳು. ವಿನಯಚಂದ್ರ ಒಪ್ಪಿಕೊಂಡಿದ್ದ.
         ಬೋಗ್ರಾದ ಬಸ್ಸು ನಿಲ್ದಾಣದ ಕಡೆಗೆ ತೆರಳಿದರು. ಮುಂಜಾವಿನಲ್ಲಿ ಖಾಲಿ ಖಾಲಿಯಾಗಿದ್ದ ಬೋಗ್ರಾದಲ್ಲಿ ನಡೆಯುವುದೆಂದರೆ ವಿಚಿತ್ರ ಖುಷಿಯನ್ನು ನೀಡುತ್ತಿತ್ತು. ಎಲ್ಲಿ ನೋಡಿದರೂ ಜನರಿರಲಿಲ್ಲ. ಆಗೊಮ್ಮೆ ಈಗೊಮ್ಮೆ ವಾಹನಗಳು ಭರ್ರೆಂದು ಸಾಗುತ್ತಿದ್ದವು. ಸೈಕಲ್ ರಿಕ್ಷಾಗಳ ಟ್ರಿಣ್ ಟ್ರೀಣ್ ಸದ್ದು ಕೇಳಿಸುತ್ತಿತ್ತು. ಕೆಲ ಹೊತ್ತಿನಲ್ಲಿಯೇ ಬೋಗ್ರಾ ಬಸ್ಸು ನಿಲ್ದಾಣ ಸಿಕ್ಕಿತು. ಅಲ್ಲಿಗೇ ಹೋಗಿ ಕೆಲ ಹೊತ್ತು ಕಾದರೂ ಬಸ್ಸು ಸಿಗಲಿಲ್ಲ. ಒಂದು ತಾಸಿನ ನಂತರ ಲಡಕಾಸಿ ಬಸ್ಸೊಂದು ನಿಧಾನವಾಗಿ ಬಂದಿತು. ವಿನಯಚಂದ್ರ ಬೇಗನೇ ಬಸ್ಸನ್ನೇರಲು ಹೊರಟವನು ಬಸ್ಸನ್ನು ನೋಡಿ ಕೆಲ ಕಾಲ ಹಿಂದೇಟು ಹಾಕಿದ. ಈ ಬಸ್ಸು ರಂಗಪುರವನ್ನು ತಲುಪಬಲ್ಲದೇ ಎಂದೂ ಆಲೋಚಿಸಿದ. ವಿನಯಚಂದ್ರನ ಮನದಾಳವನ್ನು ಅರಿತಂತೇ ಮಾತನಾಡಿದ ಮಧುಮಿತಾ `ಬಾಂಗ್ಲಾದಲ್ಲಿ ಇದಕ್ಕಿಂತ ಲಡಕಾಸಿ ಬಸ್ಸುಗಳಿವೆ. ದೂರ ದೂರಿಗೆ ಇವುಗಳ ಮೂಲಕವೇ ಪ್ರಯಾಣ ಕೈಗೊಳ್ಳೋದು. ಏನೂ ಚಿಂತೆ ಮಾಡಬೇಡ. ಇದರಲ್ಲೇ ಹೋಗೋಣ..' ಎಂದು ಖಂಡತುಂಡವಾಗಿ ಹೇಳಿದ್ದಳು. ವಿನಯಚಂದ್ರ ಬಸ್ಸನ್ನೇರಿದ್ದ.
       ಖಾಲಿಯಿದ್ದ ಬಸ್ಸು ಹೊರಡುವ ಮುನ್ನ ಬಸ್ಸಿನಲ್ಲಿ ಒಬ್ಬಾತ ಬಾಳೆ ಹಣ್ಣನ್ನು ಮಾರಲು ತಂದಿದ್ದ. ಹೊಟ್ಟೆಗೆ ಸಾಕಾಗುವಷ್ಟು ಹಣ್ಣನ್ನು ತಿಂದರು. ವಿನಯಚಂದ್ರ ಮತ್ತೊಮ್ಮೆ ಜೇಬಿನಲ್ಲಿದ್ದ ಹಣವನ್ನು ಎಣಿಸಿಕೊಂಡ. ಅಷ್ಟರಲ್ಲಿ ಬಸ್ಸಿನ ಕಂಡಕ್ಟರ್ ಬಂದಿದ್ದ. ಕೊನೆಗೆ ಕಂಡಕ್ಟರ್ ಬಳಿ ತನ್ನಲ್ಲಿ ಇರುವ ಹಣದ ಬಗ್ಗೆ ತಿಳಿಸಿ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯ ತನಕ ಕರೆದೊಯ್ಯಿರಿ ಎಂದ. ಹಣವನ್ನು ಎಣಿಸಿದ ಕಂಡಕ್ಟರ್ `ಪೀರ್ ಗಂಜ್ ವರೆಗೆ ಪ್ರಯಾಣ ಮಾಡಬಹುದು..' ಎಂದು ಹೇಳಿ ಟಿಕೇಟ್ ನೀಡಿದ. `ಪೀರ್ ಗಂಜಿನಿಂದ ರಂಗಪುರ ಎಷ್ಟು ದೂರ..?' ಎಂದು ಕೇಳಿದ ವಿನಯಚಂದ್ರ. `ಬಸ್ಸಿನಲ್ಲಾದರೆ ಎರಡು ತಾಸುಗಳ ಪಯಣ ತಾಸುಗಳ ಪ್ರಯಾಣ..' ಎಂದು ಕಂಡಕ್ಟರ್ ಮುಂದಕ್ಕೆ ತೆರಳಿದ್ದ.
         ಇವರಂದುಕೊಂಡದ್ದಕ್ಕಿಂತ ನಿಧಾನವಾಗಿ ಬಸ್ಸು ತೆರಳಲು ಆರಂಭಿಸಿತು. ಬೋಗ್ರಾದ ಬಸ್ ನಿಲ್ದಾಣದಿಂದ ಬಸ್ಸು ಮುಂದಕ್ಕೆ ಹೊರಡುವ ವೇಳೆಗೆ ಸೂರ್ಯ ಆಗಲೇ ಬಾನಿನ ಮೇಲಕ್ಕೆ ಬರಲು ಆರಂಭಿಸಿದ್ದ. `ಬಾಳೆಹಣ್ಣು ತಿಂದಿದ್ದು ಒಳ್ಳೇದೇ ಆಯ್ತು.. ಇಲ್ಲವಾಗಿದ್ದರೆ ಉಪವಾಸವಿರಬೇಕಿತ್ತು.. ಈ ಬಸ್ಸು ಯಾಕೋ ಬಹಳ ನಿಧಾನ ಹೋಗ್ತಾ ಇದೆ ಕಣೆ ಮಧು..' ಎಂದ ವಿನಯಚಂದ್ರ. `ಹೂಂ..' ಅಂದ ಮಧುಮಿತಾ ಸುಮ್ಮನಾದಳು. ಬಸ್ಸು ಆಮೆಗತಿಯಲ್ಲಿಯೇ ಮುಂದುವರಿಯುತ್ತಿತ್ತು. ಬೋಗ್ರಾದಲ್ಲಿ ನಿಧಾನಕ್ಕೆ ಜನಸಂದಣಿಯೂ ಹೆಚ್ಚಾಗುತ್ತಿತ್ತು. ಮೂರ್ನಾಲ್ಕು ತಿರುವುಗಳನ್ನು ದಾಟಿ ರಂಗಪುರದ ಕಡೆಗೆ ಆಗಮಿಸುವ ಮುಖ್ಯ ರಸ್ತೆಗೆ ಬರುವಷ್ಟರಲ್ಲಿ ಬಹಳಷ್ಟು ಹೊತ್ತು ಸರಿದಿದ್ದವು.

(ಮುಂದುವರಿಯುತ್ತದೆ)

No comments:

Post a Comment