Thursday, October 9, 2014

ಬೆಂಗಾಲಿ ಸುಂದರಿ-30

(ಏಲೆಂಗಾದ ರೆಸಾರ್ಟ್)
             ಎಲ್ಲವೂ ಕೆಲವೇ ತಾಸುಗಳ ಅವಧಿಯಲ್ಲಿ ನಡೆದುಹೋಗಿದ್ದವು. ತಾಸುಗಳ ಹಿಂದಷ್ಟೇ ಜೊತೆಯಲ್ಲಿದ್ದ ಸಲೀಂ ಚಾಚಾ ಸಾವನ್ನಪ್ಪಿದ್ದ. ಅಷ್ಟೇ ಅಲ್ಲದೇ ಅಗ್ನಿಯಲ್ಲಿ ಲೀನವಾಗಿದ್ದ. ಮಧುಮಿತಾ ಹಾಗೂ ವಿನಯಚಂದ್ರರಿಗೆ ಇದು ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಮೌನವಾಗಿ ಮುಂದ ಮುಂದಕ್ಕೆ ನಡೆಯುತ್ತಲೇ ಇದ್ದರು. ಹೀಗೆ ನಡೆಯುತ್ತಿದ್ದಾಗಲೇ ಯಾವಾಗಲೂ ಕತ್ತಲಾವರಿಸಿತ್ತು. ಅದೂ ಕೂಡ ಅವರ ಗಮನಕ್ಕೆ ಬಂದಿರಲಿಲ್ಲ. ಸಲೀಂ ಚಾಚಾನ ಸಾವು ಇಬ್ಬರ ಮನದಲ್ಲಿ ತರಂಗಗಳನ್ನು ಎಬ್ಬಿಸಿದ್ದವು. ಯಾಕೋ ಅವರಿಗೆ ತಮ್ಮ ಜೀವನವೇ ಬೇಡ ಎನ್ನಿಸತೊಗಿತ್ತು. ಆದರೂ ಮುಂದಕ್ಕೆ ಸಾಗುತ್ತಲೇ ಇದ್ದರು.
             ಅಲ್ಲಿದೆ ನಮ್ಮನೆ... ಎಂಬಂತೆ ನಡೆಯುತ್ತಿದ್ದವರಿಗೆ ನಿಧಾನವಾಗಿ ತಾಂಗೈಲ್ ನಗರಿ ಹಿಂದಕ್ಕೆ ಸಾಗಿತು. ತಾಸು ತಾಸುಗಳ ಕಾಲ ನಡೆದರೂ ಸಲೀಂ ಚಾಚಾ ನೆನಪಿನಲ್ಲಿ ಆದ್ದರಿಂದ ಹಸಿವಾಗಲಿಲ್ಲ. ನೀರಡಿಕೆ ಕೂಡ ಆಗಲಿಲ್ಲ. ಹೆದ್ದಾರಿಯಲ್ಲಿ ವಾಹನಗಳೂ ಇರಲಿಲ್ಲ. ಕತ್ತಲೆ ಗವ್ವೆನ್ನುತ್ತಿತ್ತು. ಕತ್ತಲೆಯಲ್ಲಿ ಇವರಿಬ್ಬರೇ ನಡೆದುಕೊಂಡು ಹೋಗುತ್ತಿದ್ದರು. ಸಲೀಂ ಚಾಚಾನ ಶಕ್ತಿ ಇವರಿಬ್ಬರಲ್ಲಿ ಆಹ್ವಾನಗೊಂಡಿದೆಯೋ ಎಂಬಂತೆ ನಡೆಯುತ್ತಲೇ ಇದ್ದರು. ಹಗಲಿನಲ್ಲಿ ಕಾದಿದ್ದ ಟಾರು ರಸ್ತೆಯಿಂದ ಧಗೆ ಹೊರ ಸೂಸುತ್ತಿದ್ದುದು ಇಬ್ಬರ ಮೈಗೂ ಅನುಭವಕ್ಕೆ ಬರುತ್ತಿತ್ತು. ಅಕ್ಕಪಕ್ಕದ ಗದ್ದೆ ಬಯಲಿನ ತಂಗಾಳಿ ಇವರ ಮನಸ್ಸನ್ನು, ಮೈಯನ್ನು ತಂಪುಮಾಡಲು ಯತ್ನಿಸಿತಾದರೂ ವಿಫಲವಾಯಿತು ಎನ್ನಬಹುದು.
              ಕೆಲ ಹೊತ್ತಿನ ನಂತರ ತಾಂಗೈಲ್ ನಿಂದ ಹಾದು ಬಂದ ಮುಖ್ಯ ರಸ್ತೆಯೊಂದು ಸಿಕ್ಕಿತು. ಅದನ್ನು ಹಾದು ಮುಂದಕ್ಕೆ ಸಾಗಿದರು. ಹಿಂತಿರುಗಿ ನೀಡಿದರೆ ಬಾನಿನ ತುಂಬ ತಾಂಗೈಲ್ ನಗರದ ಬೆಳಕು ಪ್ರತಿಫಲನವಾಗುತ್ತಿತ್ತು. ಮಧುಮಿತಾ ಕಣ್ಣೊರೆಸಿಕೊಂಡಳು. ವಿನಯಚಂದ್ರ ಮೌನಿಯಾಗಿದ್ದವನು ಇದ್ದಕ್ಕಿದ್ದಂತೆ `ಮಧು..' ಎಂದ. ಆಕೆ ಹೂಂ ಅಂದಳು.
             `ಸಲೀಂ ಚಾಚಾನನ್ನು ಸೊಕಾಸುಮ್ಮನೆ ಅನುಮಾನಿಸಿಬಿಟ್ಟೆ. ಛೇ.. ನಮಗಾಗಿ, ನಮ್ಮ ಪ್ರೀತಿಗಾಗಿ, ನಾವು ಭಾರತವನ್ನು ತಲುಪಬೇಕು ಎನ್ನುವ ಕಾರಣಕ್ಕಾಗಿ ಆತ ಏನೆಲ್ಲ ಮಾಡಿದ. ಆದರೆ ನಾನು ಅವೆಲ್ಲವನ್ನೂ ಅನುಮಾನದಿಂದಲೇ ನೋಡಿದೆ. ನಮಗಾಗಿ ಮಾಡುತ್ತಿದ್ದ ಕಾರ್ಯದಲ್ಲೆಲ್ಲ ನಾನು ಆತನ ಸ್ವಾರ್ಥವಿದೆಯೇನೋ ಎಂದುಕೊಂಡೆ. ನನ್ನನ್ನು ಧರ್ಮಾಂತರ ಮಾಡುತ್ತಾನಾ ಎಂದೆಲ್ಲ ಅಂದುಕೊಂಡೆ. ಛೇ.. ನನಗೀಗ ನಾಚಿಕೆಯಾಗುತ್ತಿದೆ.. ಎಂತಹ ಮನುಷ್ಯನನ್ನು ಕಳೆದುಕೊಂಡುಬಿಟ್ಟೆವಲ್ಲ..' ಎಂದ. ಮಧುಮಿತಾ ಮಾತಾಡಲಿಲ್ಲ.
            `ಆತ ನಮಗಾಗಿ ಎಂತೆಂತಹ ಕಾರ್ಯವನ್ನು ಮಾಡಿದ್ದ. ತನ್ನ ಮನೆ-ಮಠವನ್ನು ಬಿಟ್ಟು ಬಂದಿದ್ದ. ನಮ್ಮನ್ನು ಭಾರತಕ್ಕೆ ತಲುಪಿಸುವುದೇ ಆತನ ಪರಮಗುರಿ ಎನ್ನುವಂತೆ ಕೆಲಸ ಮಾಡಿದ್ದ. ಆತನಿಗೆ ಯಾಕಾದರೂ ನಮ್ಮ ಮೇಲೆ ಇಷ್ಟೆಲ್ಲ ಪ್ರೀತಿಯೋ. ನಮಗಾಗಿಯೇ ಎಲ್ಲವನ್ನೂ ಮಾಡಿದ. ಕೊನೆಗೆ ಪ್ರಾಣವನ್ನೂ ತ್ಯಾಗ ಮಾಡಿದನಲ್ಲ. ನಾವ್ಯಾರು ಅಂತ ಆತ ಹೀಗೆ ಮಾಡಿದ? ಮನಸ್ಸು ತಲ್ಲಣಿಸಿದೆ ಮಧು. ಏನು ಹೇಳಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ...' ಎಂದ ವಿನಯಚಂದ್ರ. ಮಧುಮಿತಾ ಸುಮ್ಮನೇ ಇದ್ದಳು.
           `ಮಾತಾಡು ಮಧು.. ನನಗೆ ಈ ಮೌನ, ಚಾಚಾನ ಸಾವು ಯಾಕೋ ಭಯವನ್ನು ತರುತ್ತಿದೆ. ಮನಸ್ಸಿನಲ್ಲಿ ಹೇಳಿಕೊಳ್ಳಲಾಗದ ಯಾತನೆ..' ಎಂದ ವಿನಯಚಂದ್ರ.
            `ಏನು ಮಾತಾಡಲಿ ವಿನೂ.. ಸಲೀಂ ಚಾಚಾ ಸತ್ತಿದ್ದನ್ನೇ ಮತ್ತೆ ಮತ್ತೆ ಹೇಳಿ ಮತ್ತಷ್ಟು ದುಃಖವನ್ನು ಉಂಟುಮಾಡುವುದಾ? ಛೇ.. ಆತ ಸಾಯಬಾರದಿತ್ತು ಅಂದುಕೊಳ್ಳುವುದಾ? ಏನು ಹೇಳಬೇಕು ಅಂತ ಅರ್ಥವೇ ಆಗುತ್ತಿಲ್ಲ. ಸಲೀಂ ಚಾಚಾನನ್ನು ಕಳೆದುಕೊಂಡು ನೀನು ಇಷ್ಟು ದುಃಖಿಸುತ್ತಿದ್ದೀಯಾ.. ಆದರೆ ನಾನು ಕಳೆದ 15 ದಿನಗಳ ಅಂತರದಲ್ಲಿ ಅಪ್ಪ-ಅಮ್ಮ-ಬಂಧು-ಬಳಗ ಕಳೆದುಕೊಂಡೆ. ಕೊನೆಗೆ ಆಪ್ತವಾಗಿದ್ದ ಸಲೀಂ ಚಾಚಾನನ್ನೂ ಕಳೆದುಕೊಂಡೆ. ನಾನು ಏನುಮಾಡಬೇಕು ಅಂತಲೇ ತಿಳಿಯುತ್ತಿಲ್ಲ ವಿನೂ.. ನನಗೆ ಆಪ್ತರಾದವರೆಲ್ಲ ಸಾಯುತ್ತಾರಾ ಅನ್ನುವ ಭಯ ಮೂಡತೊಡಗಿದೆ. ನೀನು ಆಪ್ತವಾಗಿದ್ದೀಯಾ.. ನಿನಗೂ ಏನಾದರೂ ಆಗುತ್ತದೆಯಾ ಎನ್ನುವ ಬಾವನೆ ನನ್ನ ಮನಸ್ಸಿನಲ್ಲಿ ಕಾಡುತ್ತಿದೆ. ಎಲ್ಲರೂ ದೂರಾಗಿದ್ದಾರೆ. ನೀನು ದೂರಾಗುವುದಿಲ್ಲ ತಾನೆ..' ಎಂದವಳೇ ಮಧುಮಿತಾ ನಡೆಯುತ್ತಿದ್ದವಳು ವಿನಯಚಂದ್ರನ ಸನಿಹಕ್ಕೆ ಬಂದು ಕೈ ಹಿಡಿದುಕೊಂಡಳು. ಬಾಂಗ್ಲಾದ ಬಾನಿನಲ್ಲಿ ಯಾವಾಗಲೋ ಮೂಡಿದ್ದ ಕರಿ ಮೋಡ ಇನ್ನೊಂದು ಮೋಡಕ್ಕೆ ಢಿಕ್ಕಿ ಹೊಡೆದು ದೊಡ್ಡದೊಂದು ಮಿಂಚಿನೊಂದಿಗೆ ದಢಾರ್ ಎಂಬ ಶಬ್ದವನ್ನು ಮಾಡಿತು. ಮಳೆ ಬರುತ್ತದೆಯಾ ಎಂದುಕೊಂಡರು. ದೂರದಲ್ಲೆಲ್ಲೋ ಮಳೆ ಬಂದಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಆಗೀಗ ಸುಳಿದು ಬರುತ್ತಿದ್ದ ಗಾಳಿ ಮಣ್ಣಿನ ವಾಸನೆಯನ್ನು ಹೊತ್ತು ತರುತ್ತಿತ್ತು.
           ಗಕ್ಕನೆ ನಿಂತ ವಿನಯಚಂದ್ರ ತನ್ನ ಕೈಯಿಂದ ಅವಳನ್ನು ಭದ್ರವಾಗಿ ಹಿಡಿದು `ಏನೂ ಆಗುವುದಿಲ್ಲ ಬಿಡು ಮಧು. ಏನೇ ಆದರೂ ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ. ಕೈಬಿಡುವುದಿಲ್ಲ. ನಿನ್ನ ಜೊತೆಗೆ ಬದುಕುತ್ತೇನೆ. ನಿನಗಾಗಿಯೇ ಬದುಕುತ್ತೇನೆ. ಯಾರೇ ಎದುರಾದರೂ ಹೋರಾಡುತ್ತೇನೆ. ನೀನು ಭಯ ಪಡಬೇಡ ಮಧು. ಸಮಾಧಾನ ಮಾಡಿಕೋ. ದೂರವಾದವರನ್ನು ಕಷ್ಟಪಟ್ಟಾದರೂ ಮರೆಯಲೇಬೇಕು. ಇವತ್ತಿದ್ದವರು ನಾಳೆ ಇರುತ್ತಾರೆ ಅಂತ ಹೇಳಿಲಿಕ್ಕೆ ಬರುವುದೇ ಇಲ್ಲ. ಈಗಿದ್ದವರು ಇನ್ನರೆಘಳಿಗೆಯಲ್ಲಿ ಇರ್ತಾರೆ ಅಂತನ್ನೋಕೂ ಆಗೋದಿಲ್ಲ. ಚಾಚಾನೇ ಇದಕ್ಕೆ ನಿದರ್ಶನ. ನಾವು ಜಗ್ಗದೇ ಕುಗ್ಗದೇ ಸಾಗೋಣ.. ಸಲೀಂ ಚಾಚಾ ಭಾರತವನ್ನು ಸುರಳೀತವಾಗಿ ತಲುಪುವಂತೆ ತಿಳಿಸಿದ್ದಾನೆ. ನಾವು ಮಾತುಕೊಟ್ಟಿದ್ದೇವೆ. ಆತನ ಕೊನೆಯ ಆಸೆಯೂ ಅದೇ. ಅದನ್ನು ಪೂರೈಸೋಣ. ಗುರಿ ತಲುಪುವ ವರೆಗೆ ಸಾಗೋಣ.. ಗೆಲ್ಲೋಣ..' ಎಂದ. ಮಧುಮಿತಾಳಲ್ಲಿ ಹೊಸಭರವಸೆಯ ಕಿರಣ ಮೂಡಿದಂತಾಯಿತು.
          ಮತ್ತೆ ನಡೆಯಲು ಆರಂಭಿಸಿದರು. ಒಂದೆರಡು ತಾಸು ನಡೆದ ನಂತರ ನಿಧಾನವಾಗಿ ಆಯಾಸವಾಗತೊಡಗಿತು. ಹೊಟ್ಟೆಯಲ್ಲಿನ ಹಸಿವು ಗಮನಕ್ಕೆ ಬಂದಿತು. ಸಂಜೆ ಏನೂ ತಿಂದಿಲ್ಲ ಎನ್ನುವುದು ಅರಿವಾಯಿತು. ಅಲ್ಲೇ ರಸ್ತೆಯ ಪಕ್ಕಕ್ಕೆ ಸಾಗಿ ಗದ್ದೆಯ ಬದುವಿನ ಮೇಲೆ ಕುಳಿತರು ಇಬ್ಬರೂ. ಚೀಲದಲ್ಲಿದ್ದ ರೊಟ್ಟಿಯನ್ನೂ ತಿಂದು ನೀರು ಕುಡಿದರು. ಹೊಟ್ಟೆಗೆ ತಿಂಡಿ ಬಿದ್ದ ಮೇಲೆ ಚಳಿಯ ಅರಿವಾಯಿತು. ದೇಹಕ್ಕೆ ಸುಸ್ತಾಗಿತ್ತು. ಮನಸಿಗೆ ನೋವಾಗಿತ್ತು. ಆ ರಾತ್ರಿ ಅಲ್ಲಿಯೇ ಮಲಗಿ ವಿಶ್ರಾಂತಿ ಪಡೆಯಲು ಇಬ್ಬರೂ ನಿರ್ಧಾರ ಮಾಡಿದರು. ವಿನಯಚಂದ್ರ ಬೆಳೆದಿದ್ದ ಗದ್ದೆಯಲ್ಲೇ ಉತ್ತಮ ಜಾಗವೊಂದನ್ನು ಹುಡುಕಿದ. ಅಲ್ಲಿ ತಾವು ತಂದಿದ್ದ ಚೀಲವನ್ನೇ ತಲೆದಿಂಬಿನಂತೆ ಹಾಕಿ ಮಧುಮಿತಾಳಿಗೆ ಮಲಗಲು ಜಾಗ ಮಾಡಿಕೊಟ್ಟ. ಪಕ್ಕದಲ್ಲೇ ತಾನೂ ಮಲಗಿದ.
          ಮಲಗಿದವರಿಗೆ ನಿದ್ದೆ ಹತ್ತಿರ ಸುಳಿಯಲಿಲ್ಲ. ಮೋಡಕಟ್ಟಿದ ಆಕಾಶ ಯಾವಾಗಲೋ ತಿಳಿಯಾಗಿತ್ತು. ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿದ್ದವು. ಕೆಲವು ಹಸಿರು ಬಣ್ಣವನ್ನು ಮಿಣುಕು ಮಿಣುಕಿಸುತ್ತಿದ್ದರೆ ಮತ್ತೆ ಕೆಲವು ಕೆಂಪು ಬಣ್ಣವನ್ನು ಸೂಸುತ್ತಿದ್ದವು. ಸಲೀಂ ಚಾಚಾನ ಸಾವನ್ನು ಮರೆಸಲು ಯತ್ನಿಸಿದ ವಿನಯಚಂದ್ರ ನಕ್ಷತ್ರವನ್ನು ನೋಡುತ್ತ ಮಧುಮಿತಾಳ ಬಳಿ `ನೋಡು ಅದು ಸೀರಿಯಸ್ ನಕ್ಷತ್ರ. ಎಷ್ಟು ಹಸಿರಾಗಿ ಹೊಳೆಯುತ್ತಿದೆ ಅಲ್ಲವಾ?.. ಅಗೋ ಅಲ್ಲಿ ನೋಡು.. ಆ 8 ನಕ್ಷತ್ರಗಳನ್ನೇ ಗಮನವಿಟ್ಟು ನೋಡು. ಚಿಟ್ಟೆಯ ಆಕಾರ ಹೊಂದಿದೆ. ಎಷ್ಟು ಚನ್ನಾಗಿ ಕಾಣುತ್ತದೆ ಅಲ್ಲವಾ..' ಎಂದ. ಆಕೆಯೂ ಹೂಂ ಅಂದಳು. ಅಂಗಾತವಾಗಿ ಮಲಗಿ ನಕ್ಷತ್ರ ನೋಡುವುದರಲ್ಲಿ ಎಂತಾ ಖುಷಿಯಿದೆ ಎನ್ನಿಸಿತು. ಬಾಲ್ಯದಲ್ಲಿ ಹೀಗೆ ಮಾಡುತ್ತಿದ್ದೆವಲ್ಲವಾ ಎಂದೂ ವಿನಯಚಂದ್ರನ ಮನಸ್ಸಿನಲ್ಲಿ ಅನ್ನಿಸಿತು. ಯಾವ ಕ್ಷಣದಲ್ಲಿ ನಿದ್ರೆಯೆಂಬ ಮಾಯಾಂಗನೆ ಆವರಿಸಿದ್ದಳೋ ಇಬ್ಬರಿಗೂ ಅರಿವಾಗಿರಲಿಲ್ಲ.

**
 
(ಏಲೆಂಗಾದ ಬಸ್ ನಿಲ್ದಾಣ)
      ಕಣ್ಣು ಬಿಟ್ಟೊಡನೆ ಆಗಲೇ ಸೂರ್ಯ ಬಾನಿನಲ್ಲಿ ಏರಿ ಬಂದಿದ್ದ. ವಿನಯಚಂದ್ರ ಬೇಗನೆ ಎದ್ದು ಗದ್ದೆಯ ಬಳಿ ನೀರಿದೆಯಾ ಎಂದು ಹುಡುಕಿ ಹೋಗಿದ್ದ. ಮಧುಮಿತಾ ಮಲಗಿದ್ದವಳು ಧಡಕ್ಕನೆ ಎದ್ದಳು. ಒಮ್ಮೆ ಹಿತವಾಗಿ ಮೈಮುರಿದವಳಿಗೆ ಮೈಮೇಲೆ ಜರ್ಕಿನ್ ಇರುವುದು ಗೊತ್ತಾಯಿತು. ರಾತ್ರಿ ಯಾವುದೋ ಜಾವದಲ್ಲಿ ಚಳಿಯಾಗಿದ್ದಾಗ ವಿನಯಚಂದ್ರ ತನ್ನ ಜರ್ಕಿನ್ ತೆಗೆದು ಹೊದೆಸಿರಬೇಕು ಎಂದುಕೊಂಡಳು. ಅದೇ ಕ್ಷಣದಲ್ಲಿ ಈತನಿಗೆ ತಾನೆಂದರೆ ಎಷ್ಟು ಅಕ್ಕರೆಯಲ್ಲವಾ ಎನ್ನಿಸಿತು. ಮನಸ್ಸಿನಲ್ಲಿ ವಿನಯಚಂದ್ರನ ಕಡೆಗೆ ಸಂತಸ, ಸಂಭ್ರಮ ಎರಡೂ ಮೂಡಿತು. ತಾನು ಈತನನ್ನು ಪ್ರೀತಿಸಿ, ತನ್ನ ಊರು, ನೆಲ, ದೇಶವನ್ನೇ ಬಿಟ್ಟು ಹೋಗುತ್ತಿರುವುದಕ್ಕೆ ಹೆಮ್ಮೆಯೂ ಆಯಿತು.
          ಕೆಲ ಕ್ಷಣದಲ್ಲಿ ವಿನಯಚಂದ್ರ ಮರಳಿ ಬಂದಿದ್ದ. ಖಾಲಿಯಾಗಿದ್ದ ನೀರಿನ ಬಾಟಲಿ ತುಂಬ ನೀರನ್ನು ತಂದಿದ್ದ. ಬ್ರಹ್ಮಪುತ್ರಾ ನದಿಯನ್ನು ಸೇರುವ ಯಾವುದೋ ಉಪನದಿಯ ನೀರು ಬಹಳ ಹಿತವಾಗಿತ್ತು. ಮನದಣಿಯೆ ಇಬ್ಬರೂ ಕುಡಿದು, ಪ್ರಾತರ್ವಿಧಿಗಳನ್ನು ಮುಗಿಸಿ, ತಂದಿದ್ದ ತಿಂಡಿಯನ್ನು ತಿಂದು ಮತ್ತೆ ಹೆಜ್ಜೆ ಹಾಕಲು ಅನುವಾದರು. ತಾವು ತಂದಿದ್ದ ತಿಂಡಿ ಇನ್ನೆರಡು ದಿನಕ್ಕೆ ಸಾಕು ಎನ್ನುವುದನ್ನು ವಿನಯಚಂದ್ರ ಗಮನಿಸಿದ್ದ. ಮುಂದೆ ಯಾವುದಾದರೂ ಪಟ್ಟಣ ಸಿಕ್ಕಾಗ ಅಲ್ಲಿ ತಿಂಡಿಗೆ ವ್ಯವಸ್ಥೆಯನ್ನು ಮಾಡಿಕೊಂಡು ಪ್ರಯಾಣ ಮಾಡಬೇಕು ಎಂದುಕೊಂಡ. ಮುಂಜಾವಿನ ತಿಳಿಬಿಸಿಲಿನ ಜೊತೆಯಲ್ಲಿ ಮತ್ತೆ ಪ್ರಯಾಣ ಶುರುವಾಯಿತು.
            ಮೂರ್ನಾಲ್ಕು ತಾಸು ಬಿಡುವಿಲ್ಲದೇ ನಡೆದರು. ಈ ಅವಧಿಯಲ್ಲಿ ಒಂದೇ ಒಂದು ವಾಹನ ಅವರಿಗೆ ಸಿಗಲಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಗದ್ದೆಯ ಬಯಲಿನಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದರು. ಅವರನ್ನು ನೋಡಿದ ವಿನಯಚಂದ್ರ `ಅಬ್ಬಾ.. ಅಂತೂ ಇಲ್ಲಿ ಜನರಿದ್ದಾರಲ್ಲ ಥ್ಯಾಂಕ್ ಗಾಡ್..' ಅಂದುಕೊಂಡ. ಬಿಸಿಲೇರುವವರೆಗೆ 15 ಕಿ.ಮಿ ಪ್ರಯಾಣ ಮಾಡಿದ್ದರು. ನಡೆದು ರೂಢಿ ತಪ್ಪಿದ್ದವರು ಮತ್ತೊಮ್ಮೆ ಕಾಲ್ನಡಿಗೆ ಮಾಡಲು ಆರಂಭಿಸಿದ್ದರಿಂದ ಕಾಲು ವಿಪರೀತ ನೋಯಲಾರಂಭಿಸಿತ್ತು. ಇಬ್ಬರಿಗೂ ಇನ್ನು ನಡೆಯಲಾರೆ ಎನ್ನಿಸತೊಡಗಿತ್ತು. ಆದರೂ ಹೆಜ್ಜೆಹಾಕುತ್ತಲೇ ಇದ್ದರು. ಅಲ್ಲೊಂದು ಕಡೆಗೆ ಬಸ್ ತಂಗುದಾಣ ಸಿಕ್ಕಿತು. ಅಲ್ಲಿ ಕೊಂಚ ಹೊತ್ತು ಕುಳಿತರು.
            ಕುಳಿತಿದ್ದವರಿಗೆ ಇದ್ದಕ್ಕಿದ್ದಂತೆ ಯಾವುದೋ ವಾಹನ ಬರುತ್ತಿರುವ ಸದ್ದು ಕೇಳಿಸಿತು. ಇಬ್ಬರ ಮನಸ್ಸಿನಲ್ಲೂ ಗೊಂದಲ. ಯಾವ ವಾಹನ ಬಂದಿರಬಹುದು? ನಿನ್ನೆ ನಡೆದಂತೆ ಪುಂಡರು, ಹಿಂಸಾಚಾರಿಗಳು ವಾಹನದಲ್ಲಿ ಬಂದರೆ ಏನು ಮಾಡುವುದು? ಅವರದಲ್ಲದಿದ್ದರೆ ಏನು ಮಾಡುವುದು ಎಂದುಕೊಂಡರು. ಇಬ್ಬರೂ ಒಂದುಕ್ಷಣ ಓಡಿ ತಪ್ಪಿಸಕೊಳ್ಳಬೇಕಾ ಅಥವಾ ವಾಹನ ನಿಲ್ಲಿಸಿ ಅವರಲ್ಲಿ ಮುಂದಿನ ಊರಿಗೆ ಕರೆದುಕೊಂಡು ಹೋಗುವಂತೆ ಕೇಳಬೇಕಾ ಎಂಬುದು ಸ್ಪಷ್ಟವಾಗಲಿಲ್ಲ. ಮಧುಮಿತಾಳನ್ನು ಮರೆಯಲ್ಲಿ ನಿಲ್ಲುವಂತೆ ಹೇಳಿದ ವಿನಯಚಂದ್ರ ರಸ್ತೆ ಪಕ್ಕದಲ್ಲಿ ವಾಹನಕ್ಕಾಗಿ ಕಾಯುತ್ತ ನಿಂತ. ವಾಹನ ಹತ್ತಿರ ಬಂದಾಗ ಅದೊಂದು ಕಾರು ಎನ್ನುವುದು ಸ್ಪಷ್ಟವಾಯಿತು.
           ಏನಾದರಾಗಲಿ ಎಂದುಕೊಂಡು ಕಾರಿಗೆ ಕೈಮಾಡಿಯೇ ಬಿಟ್ಟ ವಿನಯಚಂದ್ರ. ಇವರ ಅದೃಷ್ಟಕ್ಕೆ ಕಾರಿನವನು ನಿಲ್ಲಿಸಯೇಬಿಟ್ಟ. ನಿಲ್ಲಿಸಿದವನು `ಏನು..' ಎಂಬಂತೆ ಸನ್ನೆ ಮಾಡಿದ. ಹರಕುಮುರುಕು ಹಿಂದಿಯಲ್ಲಿ `ಏಲೆಂಗಾಕ್ಕೆ ಲಿಫ್ಟ್ ಬೇಕಿತ್ತು..' ಅಂದ. ಕಾರಿನವನು ಒಪ್ಪಿದ. ತಕ್ಷಣವೇ ಮಧುಮಿತಾಳನ್ನೂ ಕರೆದು ಕಾರಿನಲ್ಲಿ ಕೂರಿಸಿ ತಾನೂ ಕುಳಿತುಕೊಂಡ. ಕಾರು ಮುಂದಕ್ಕೆ ಸಾಗಿತು.
          ಸಾಗಿದಂತೆಲ್ಲ ಮಾತಿಗೆ ನಿಂತ ಕಾರಿನವನು `ಎಲ್ಲಿಗೆ, ಯಾಕೆ ಹೋಗುತ್ತಿದ್ದೀರಿ..' ಎಂದೆಲ್ಲ ವಿಚಾರಿಸಿದ. ಅದಕ್ಕೆ ಪ್ರತಿಯಾಗಿ ವಿನಯಚಂದ್ರ ತಾವು ಹೊಸದಾಗಿ ಮದುವೆಯಾಗಿರುವವರೆಂದೂ ಏಲೆಂಗಾದಿಂದ ಮುಂದಕ್ಕೆ ಜಮುನಾ ನದಿಯನ್ನು ದಾಟಿಸಿ ಅವಳನ್ನು ನದಿಯಾಚೆಗಿನ ಪ್ರದೇಶವನ್ನು ತೋರಿಸುವ ಸಲುವಾಗಿ ಹೊರಟಿದ್ದೆಂದೂ ತಿಳಿಸಿದ. ಅದನ್ನು ಒಪ್ಪಿದಂತೆ ಕಂಡ ಕಾರಿನ ಚಾಲಕ ತಾನು ಏಲೆಂಗಾದಿಂದ ಮುಂದೆ ಶೋಲಾಕುರಾಕ್ಕೆ ಹೊರಟಿದ್ದೇನೆ. ನಿಮ್ಮನ್ನು ಏಲೆಂಗಾದಲ್ಲಿ ಬಿಡುತ್ತೇನೆ. ಅಲ್ಲಿ ಯಾವುದಾದರೂ ವಾಹನ ಸಿಗಬಲ್ಲದು ಎಂದ. ಜೊತೆಯಲ್ಲಿಯೇ ಈಗ ಬಾಂಗ್ಲಾದೇಶದ ಪರಿಸ್ಥಿತಿ ಸರಿಯಿಲ್ಲ ಎನ್ನುವುದು ಮತ್ತೆ ಹೇಳಬೇಕಿಲ್ಲವಲ್ಲ. ನಿನ್ನೆ ತಾನೇ ತಾಂಗೈಲ್ ನಗರಿಯಲ್ಲಿ 25ಕ್ಕೂ ಅಧಿಕ ಕೊಲೆಗಳು ಸಂಭವಿಸಿದೆ. ಹುಷಾರಾಗಿ ಹೋಗಿ ಎಂದು ಹೇಳುವುದನ್ನೂ ಮರೆಯಲಿಲ್ಲ. ಅರ್ಧಗಂಟೆಯವ ಅವಧಿಯಲ್ಲಿ ಏಲೆಂಗಾಕ್ಕೆ ಅವರು ತಲುಪಿದರು. ಏಲೆಂಗಾ ಬಸ್ ನಿಲ್ದಾಣದ ಬಳಿ ಇವರನ್ನು ಬಿಟ್ಟು ಕಾರಿನವನು ಮುಂದಕ್ಕೆ ಸಾಗಿದ. ವಿನಯಚಂದ್ರ ಕಾರಿನವನಿಗೆ ಹಣ ನೀಡಲು ಹೋದ. ಆದರೆ ಹಣ ಪಡೆಯದೇ ಇರುವುದು ವಿನಯಚಂದ್ರನ ಮನಸ್ಸಿನಲ್ಲಿ ಅಚ್ಚರಿಯನ್ನು ಮೂಡಿಸಿತು. ಬಸ್ ನಿಲ್ದಾಣದಲ್ಲಿ ಬಸ್ಸು ಬರುತ್ತದೆಯಾ ಎಂದು ಇವರಿಬ್ಬರೂ ಕಾಯುತ್ತ ಕುಳಿತರು. ಏಲೆಂಗಾ ಪಟ್ಟಣವೂ ನಿರ್ಮಾನುಷವಾಗಿತ್ತು. ಯಾವುದೇ ವಾಹನಗಳ ಸುಳಿವಿರಲಿಲ್ಲ. ಮಧುಮಿತಾ ಅಲ್ಲೇ ಒಂದು ಕಡೆ ಯಾರೋ ಒಬ್ಬರ ಬಳಿ ಮಾತಿಗೆ ನಿಂತಳು.
         ನಂತರ ವಿನಯಚಂದ್ರನ ಬಳಿ ಬಂದ ಮಧುಮಿತಾ `ಹಿಂಸಾಚಾರದ ಕಾರಣ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆಯಂತೆ. ಯಾವುದಾದರೂ ಖಾಸಗಿ ವಾಹನಗಳಿದ್ದರೆ ಅದರಲ್ಲಿ ಪ್ರಯಾಣ ಮಾಡುವುದು ಒಳ್ಳೆಯದು ಎಂದು ತಿಳಿಸಿದರು..' ಎಂದಳು. ವಿನಯಚಂದ್ರ ಖಾಸಗಿ ವಾಹನ ಹುಡುಕಲು ತೊಡಗಿದ. ಯಾವುದೇ ವಾಹನಗಳೂ ಕಾಣಿಸಲಿಲ್ಲ. ಬಸ್ ನಿಲ್ದಾಣದಿಂದ ಹೊರಕ್ಕೆ ಬಂದರು. ಹೆದ್ದಾರಿಗುಂಟ ಸಾಗುವುದೇ ಸಮಂಜಸ ಎಂದೆನ್ನಿಸಿ ಮುಂದಕ್ಕೆ ಹೊರಟರು. ಸೂರ್ಯ ನಿಧಾನವಾಗಿ ಪಶ್ಚಿಮದ ಕಡೆಗೆ ಮುಖಮಾಡಿದ್ದ. ಹೆದ್ದಾರಿಗುಂಟ ಮತ್ತೆ ನಡೆಯಲು ಆರಂಭಿಸಿದ ಇವರಿಗೆ ಯಾವುದೇ ವಾಹನಗಳು ಸಿಗುವ ಲಕ್ಷಣಗಳು ಕಾಣಲಿಲ್ಲ.

(ಮುಂದುವರಿಯುತ್ತದೆ)

No comments:

Post a Comment