Monday, October 6, 2014

ಬೆಂಗಾಲಿ ಸುಂದರಿ-28

(ತಾಂಗೈಲ್ ನ ಬೀದಿ, ಸೈಕಲ್ ರಿಕ್ಷಾಗಳನ್ನು ಗಮನಿಸಿ)
         ತಾಂಗೈಲ್ ನಗರಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಸ್ಪಷ್ಟವಾಗಿತ್ತು. ಮಧುಮಿತಾಳ ಕಾಲಮೇಲೆ ಹಾಯಾಗಿ ಮಲಗಿದ್ದ ವಿನಯಚಂದ್ರನಿಗೆ ಕಣ್ಣುಬಿಟ್ಟಾಗ ಒಮ್ಮೆ ಅಲ್ಲೋಲ ಕಲ್ಲೋಲ. ಸಲೀಂ ಚಾಚಾ ಬೆಂಗಾಲಿ ಹಾಗೂ ಉರ್ದುವಿನಲ್ಲಿ ಕೂಗುತ್ತಿದ್ದ. ಭಯದಿಂದ ಮಧುಮಿತಾ ಕೂಡ ಥರ ಥರನೆ ನಡುಗುತ್ತಿದ್ದಳು. ಸೈಕಲ್ ರಿಕ್ಷಾ ತುಳಿದಿದ್ದ ಸುಸ್ತಿನಲ್ಲಿ ಅದೆಷ್ಟು ಹೊತ್ತು ಮಲಗಿದ್ದನೋ ವಿನಯಚಂದ್ರ. ಮಧುಮಿತಾ ವಿನಯಚಂದ್ರನನ್ನು ಎಬ್ಬಿಸಲು ನಾಲ್ಕೈದು ಸಾರಿ ಕರೆದಿದ್ದಳು. ಗಾಢ ನಿದ್ರೆಯ ಕಾರಣ ವಿನಯಚಂದ್ರನಿಗೆ ಎಚ್ಚರವೇ ಆಗಿರಲಿಲ್ಲ. ಮೈಚೆಲ್ಲಿ ಮಲಗಿದ್ದೆನೆಂದುಕೊಂಡ ವಿನಯಚಂದ್ರ ತನ್ನನ್ನು ತಾನೇ ಒಮ್ಮೆ ಬೈದುಕೊಂಡ.
            ತಾಂಗೈಲ್ ನಗರದ ಕಡೆಯಿಂದ ಗುಂಪು ಗುಂಪಾಗಿ ಜನ ನುಗ್ಗಿ ಬರುತ್ತಿದದ್ದರು. ಜನಸಾಮಾನ್ಯರು ಓಡಿ ಬರುತ್ತಿದ್ದರೆ ಯುವ ಪುಂಡರ ಗುಂಪು ಕೈಯಲ್ಲಿ ತರಹೇವಾರಿ ಆಯುಧಗಳನ್ನು ಹಿಡಿದುಕೊಂಡು ರಣಕೇಕೆ ಹಾಕುತ್ತ ನುಗ್ಗಿ ಬರುತ್ತಿತ್ತು. ಎತ್ತ ನೋಡಿದರೂ ಪೊಲೀಸರ ಸುಳಿವೇ ಇರಲಿಲ್ಲ. ಕೆಲವು ಜನರ ಕೈಯಲ್ಲಿ ರಕ್ತ ಸಿಕ್ತ ಉದ್ದನೆಯ ತಲವಾರ್ ಕಾಣುತ್ತಿತ್ತು. ಅದರಿಂದ ತೊಟ್ಟಿಕ್ಕುತ್ತಿದ್ದ ರಕ್ತ ನೋಡಿದ ತಕ್ಷಣ ಈಗಷ್ಟೇ ಯಾರದ್ದೋ ಬಲಿ ಹಾಕಿ ಬಂದಿದೆ ಎಂದು ಅಂದಾಜು ಮಾಡಬಹುದಿತ್ತು.
            ವಿನಯಚಂದ್ರ ಮತ್ತೊಮ್ಮೆ ತಲೆ ಕೊಡವಿಕೊಂಡು `ಇಲ್ಲೂ ಹಿಂಸಾಚಾರವೇ..? ನಾವೆಲ್ಲೇ ಹೋದರೂ ಹಿಂಸಾಚಾರ ನಮ್ಮನ್ನು ಬೆನ್ನು ಬಿಡುತ್ತಿಲ್ಲವಲ್ಲ.. ಇದ್ಯಾಕೋ ಒಳ್ಳೆಯದೆನ್ನಿಸುತ್ತಿಲ್ಲ.. ಛೇ..' ಎಂದುಕೊಂಡ.
            ಸಲೀಂ ಚಾಚಾ ರಸ್ತೆಯ ಪಕ್ಕಕ್ಕೆ ಸೈಕಲ್ ರಿಕ್ಷಾ ಹಾಕಿದ್ದ. ನಿಲ್ಲಿಸಿದವನೇ ವಿನಯಚಂದ್ರ ಹಾಗೂ ಮಧುಮಿತಾಳ ಬಳಿ `ತಕ್ಷಣ ಅಡಗಿಕೊಳ್ಳಿ..' ಎಂದ. ಅರೇ ಯಾಕೆ ಅಡಗಿಕೊಳ್ಳಬೇಕು? ಯಾರಿಂದ ತಪ್ಪಿಸಿಕೊಳ್ಳಬೇಕು? ಏನೊಂದೂ ಬಗೆಹರಿಯಲಿಲ್ಲ. ಗಾಡಿಯಿಂದ ಜಿಗಿದವರೇ ಅಲ್ಲೆಲ್ಲೋ ಚಿಕ್ಕದೊಂದು ಪೊದೆಯನ್ನು ಹೊಕ್ಕರು. ಎಷ್ಟು ವೇಗವಾಗಿ ಪೊದೆಯೊಳಗೆ ನುಗ್ಗಿದ್ದರೆಂದರೆ ಮೊದಲು ಹೋದ ಸಲೀಂ ಚಾಚಾನ ಮೇಲೆ ವಿನಯಚಂದ್ರ ಹಾಗೂ ಮಧುಮಿತಾ ಬಿದ್ದುಬಿಟ್ಟಿದ್ದರು. ಅಡಿಗೆ ಸಿಲುಕಿದ ಮುದಿ ಜೀವ ಸಲೀಂ ಚಾಚಾ ಒಮ್ಮೆಲೆ ಇಬ್ಬರ ಭಾರಕ್ಕೆ ನಲುಗಿ ಹೋಗಿ `ಯಾ ಅಲ್ಲಾ..' ಎಂದಿದ್ದ.
           ಅಷ್ಟರಲ್ಲಿ ಗುಂಪೊಂದು ಓಡಿಬಂದು ಇವರು ನಿಲ್ಲಿಸಿದ್ದ ಸೈಕಲ್ ರಿಕ್ಷಾವನ್ನು ಸುತ್ತುವರಿಯಿತು. ಕಂಡದ್ದನ್ನೆಲ್ಲ ಹಾಳುಮಾಡುವ ಹುಚ್ಚಿನಲ್ಲಿದ್ದ ಆ ಗುಂಪು ಸೈಕಲ್ ರಿಕ್ಷಾವನ್ನು ಒದ್ದು, ಕಾಲಿಂದ ತುಳಿದು, ಮುರಿದು ಹಾಕಿತು. ಅಷ್ಟಕ್ಕೆ ಸುಮ್ಮನಾಗದ ಗುಂಪು ಸೈಕಲ್ ರಿಕ್ಷಾದ ಹಿಂಬದಿಯ ಇಬ್ಬರು ಕುಳಿತುಕೊಳ್ಳಬಹುದಾದ ಸುಖಾಸೀನ ಸೀಟಿನ ಮೇಲೆ ಬಿಸಿಲು ಬೀಳಬಾರದೆಂದು ಹಾಕಿದ್ದ ತಾಡಪತ್ರಿಯನ್ನು ಹರಿದುಹಾಕಿತು. ಮತ್ತೊಬ್ಬ ಓಡಿಬಂದವನೇ ಸೈಕಲ್ ರಿಕ್ಷಾಕ್ಕೆ ಬೆಂಕಿ ಹಚ್ಚಿಯೇ ಬಿಟ್ಟಿದ್ದ. ಪೊದೆಯೊಳಗೆ ಅವಿತಿದ್ದ ಸಲೀಂ ಚಾಚಾ ಒಮ್ಮೆಲೆ ಕನಲಿಹೋಗಿದ್ದ. ವಿನಯಚಂದ್ರನ ಮನಸ್ಸಿನಲ್ಲಿ ಸಿಟ್ಟು ಉಕ್ಕಿ ತಕ್ಷಣವೇ ಎದ್ದು ಹೋಗಿ ಆ ಗುಂಪನ್ನು ಬಡಿದುಬಿಡಲೇ ಎನ್ನಿಸಿ ಚಡಪಡಿಸಿದ. ಸಲೀಂ ಚಾಚಾ ಗಟ್ಟಿಯಾಗಿ ಆತನ ಕೈ ಹಿಡಿಯದಿದ್ದರೆ ಎದ್ದು ಹೋಗಿ ಬಿಡುತ್ತಿದ್ದನೇನೋ. ಹಿಂಸಾಚಾರದ ಹಸಿವೆಯಲ್ಲಿದ್ದವರಿಗೆ ವಿನಯಚಂದ್ರ ಸಿಕ್ಕಿಬಿದ್ದು ಬಲಿಯಾಗಿಬಿಡುತ್ತಿದ್ದ. ಹತ್ತು ಹದಿನೈದು ನಿಮಿಷದ ಆಟಾಟೋಪದ ನಂತರ ಆ ಗುಂಪು ಮುಂದೆ ಮತ್ತೇನಾದರೂ ಸಿಗಬಹುದೋ ಎಂದು ಎಲ್ಲಿಂದ ಹೊರಟಿತು. ಸಲೀಂ ಚಾಚಾ, ಮಧುಮಿತಾ ಹಾಗೂ ವಿನಯಚಂದ್ರ ಒಮ್ಮೆ ನಿಟ್ಟುಸಿರುಬಿಟ್ಟರು.
            ಅಡಗಿ ಕುಳಿತಿದ್ದ ಪೊದೆ ಅಸಹನೀಯ ಎನ್ನಿಸಿತ್ತು. ಕ್ಷಣ ಕ್ಷಣವೂ ಅದೆಷ್ಟೋ ತಾಸುಗಳಾಯಿತೋ ಎನ್ನುವಂತಾಗಿತ್ತು. ಪೊದೆಯೊಂದ ಹೊರಬರಲು ಯಾರಿಗೂ ಧೈರ್ಯ ಸಾಲುತ್ತಿಲ್ಲ. ಯಾವ ಕ್ಷಣದಲ್ಲಿ ಆ ಗುಂಪು ಮತ್ತೆ ಬಂದು ಅಟಕಾಯಿಸಿಕೊಳ್ಳುತ್ತದೆಯೋ, ಏನು ಮಾಡುತ್ತಾರೋ ಎನ್ನುವ ದುಗುಡ. ಮಧುಮಿತಾ ವಿನಯಚಂದ್ರನ ಭುಜಕ್ಕೆ ಒರಗಿ ಕುಳಿತಿದ್ದಳು. ಮೈಗೆ ಮೈ ಒತ್ತಿ ಕುಳಿತಿದ್ದರಿಂದ ಆಕೆಯ ಉಸಿರಾಟವೂ ವಿನಯಚಂದ್ರನ ಅರಿವಿಗೆ ಬರುತ್ತಿತ್ತು. ಕೈಯಿಂದ ವಿನಯಚಂದ್ರನ ಅಂಗಿಯನ್ನು ಬಿಗಿಯಾಗಿ ಹಿಡಿದು ಕುಳಿತಿದ್ದಳು. ವಿನಯಚಂದ್ರ ಒಂದೆರಡು ಸಾರಿ ಆಕೆಯ ಕೈಯನ್ನು ಹಿತವಾಗಿ ಅದುಮಿ ಸಮಾಧಾನ ಹೇಳಲಿ ಯತ್ನಿಸಿದನಾದರೂ ಆಕೆಯೊಳಗಿನ ಭಯ ಕಡಿಮೆಯಾಗಲಿಲ್ಲ.
              ಒಂದು ತಾಸೋ ಅಥವಾ ಇನ್ನೂ ಹೆಚ್ಚೋ.. ವಾತಾವರಣ ಸ್ವಲ್ಪ ಶಾಂತವಾದಂತೆನ್ನಿಸಿ ಸಲೀಂ ಚಾಚಾ ನಿಧಾನವಾಗಿ ಪೊದೆಯಿಂದ ಹೊರಕ್ಕೆ ಬಂದ. ಆತನ ಪ್ರೀತಿಯ ಸೈಕಲ್ ರಿಕ್ಷಾ ಉರಿದು ಹೋಗಿತ್ತು. ನಿಧಾನವಾಗಿ ನಡೆದು ಸೈಕಲ್ ರಿಕ್ಷಾ ಬಳಿ ಹೋಗಿ ನಿಂತವನ ಕಣ್ಣಿನಿಂದ ಧಾರಾಕಾರ ನೀರು ಸುರಿಯಲಾರಂಭಿಸಿತ್ತು. ಅದೆಷ್ಟು ಕಾಲ ಆತನ ಜೀವನವನ್ನು ಸೈಕಲ್ ರಿಕ್ಷಾ ಕಟ್ಟಿಕೊಟ್ಟಿತ್ತೋ. ಏಕಾಏಕಿ ಸುಟ್ಟು ಭಸ್ಮವಾಗಿದ್ದ ಸೈಕಲ್ ರಿಕ್ಷಾವನ್ನು ನೋಡಿ ಸಲೀಂ ಚಾಚಾ ರೋಧಿಸತೊಡಗಿದ್ದ. ಆತನನ್ನು ಸಮಾಧಾನ ಪಡಿಸುವ ಧೈರ್ಯ ವಿನಯಚಂದ್ರನಲ್ಲೂ ಇರಲಿಲ್ಲ. ಆಪ್ತವಾಗಿದ್ದ ಮಧುಮಿತಾಳಲ್ಲೂ ಇರಲಿಲ್ಲ. ಅದೊಮ್ಮೆ ಸಿಟ್ಟಿನಿಂದ ಬೆಂಗಾಲಿಯಲ್ಲಿ-ಉರ್ದುವಿನಲ್ಲಿ ಅದೇನನ್ನೋ ಬೈದು ಹಿಂಸಾಚಾರಿಗಳ ಗುಂಪು ಹೋಗಿದ್ದ ದಿಕ್ಕಿನತ್ತ ಮಣ್ಣು ತೂರಿದ. ನಂತರ ಒಮ್ಮೆಲೆ ವಿನಯಚಂದ್ರ ಹಾಗೂ ಮಧುಮಿತಾಳ ಬಳಿ `ಹೊರಡೋಣ ನಡೀರಿ..' ಎಂದ. ವಿನಯಚಂದ್ರ ಸುಮ್ಮನೆ ಸಲೀಂ ಚಾಚಾನನ್ನು ದಿಟ್ಟಿಸಿದ ಹಾಲುಬಿಳುಪಿನ ಗಡ್ಡ ಧೂಳು ಧೂಳಾಗಿತ್ತು. ಕಣ್ಣು ಕೆಂಪಗಾಗಿತ್ತು. ಧರಿಸಿದ್ದ ಉದ್ದನೆಯ ನಿಲುವಂಗಿ ಮಣ್ಣಾಗಿತ್ತು. `ಚಾಚಾ.. ನಮ್ಮನ್ನು ಕ್ಷಮಿಸಿ ಬಿಡು. ಇದೆಲ್ಲಕ್ಕೂ ನಾವೇ ಕಾರಣ..' ಎಂದ.
            `ಅದ್ಯಾಕೆ ಹಂಗಂತೀದಿ ಬೇಟಾ... ನೀನೂ ಅಲ್ಲ ಅಥವಾ ನಾನೂ ಅಲ್ಲ. ಹೀಗೆ ಆಗಬೇಕೆಂಬುದು ಅಲ್ಲಾನ ಆಜ್ಞೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ಚಲ್ ಬೇಟಾ ' ಎಂದ ಚಾಚಾ
            `ನಮ್ಮನ್ನು ಭಾರತಕ್ಕೆ ಮುಟ್ಟಿಸಬೇಕು ಎನ್ನುವ ಕಾರಣಕ್ಕೆ ನೀನು ಎಲ್ಲವನ್ನೂ ಬಿಟ್ಟು ಬಂದೆ. ಆದರೆ ನಮಗಾಗಿ ಬಂದ ನಿನ್ನ ಜೀವನಾಧಾರವಾಗಿದ್ದ, ಅದೆಷ್ಟೋ ದಶಕಗಳ ಕಾಲ ಬದುಕು ಕಟ್ಟಿಕೊಟ್ಟಿದ್ದ ಸೈಕಲ್ ರಿಕ್ಷಾ ಸುಟ್ಟು ಹೋಯಿತಲ್ಲ. ..' ಎಂದ.
             `ಸುಮ್ಮನಿರು ಬೇಟಾ.. ಅದಕ್ಕೆ ಯಾಕೆ ಹಂಗಂದುಕೊಳ್ಳುತ್ತೀಯಾ. ಬದುಕಿನಲ್ಲಿ ಇಂತದ್ದು ಆಗ್ತದೆ ಹೋಗ್ತದೆ.. ಬಿಟ್ಹಾಕು. ಇನ್ನೊಂದು ಎರಡೋ ಮೂರೋ ವರ್ಷ. ನಾನು ಅದನ್ನು ಮೂಲೆಗೆ ತಳ್ಳುತ್ತಿದ್ದೆನೇನೋ. ನನಗೂ ವಯಸ್ಸಾಗಿತ್ತಲ್ಲ. ಆಗೀಗ ಈ ಕೆಲಸ ಬಿಟ್ಟು ಬಿಡಬೇಕು ಎಂದುಕೊಳ್ಳುತ್ತಿದ್ದೆ. ಈ ಮೂಲಕವಾದರೂ ನನ್ನ ಕೆಲಸಕ್ಕೆ ನಿವೃತ್ತಿ ಸಿಗುತ್ತೆ. ಸಾಕು ತಗೋ...' ಎಂದ ಸಲೀಂ ಚಾಚಾ.
            `ಆದರೂ...' ಎಂದು ಮುಂದೇನೋ ಹೇಳ ಹೊರಟಿದ್ದ ವಿನಯಚಂದ್ರನನ್ನು ನಡುವೆಯೇ ತಡೆದ ಸಲೀಂ ಚಾಚಾ      `ನನಗೆ ನಿಜಕ್ಕೂ ಬೇಜಾರಾಗುತ್ತಿರುವುದು ನಿಮ್ಮನ್ನು ಭಾರತದ ಗಡಿಯವರೆಗೆ ಸೈಕಲ್ ರಿಕ್ಷಾ ಮೂಲಕ ಕಳಿಸಬೇಕು ಎಂದುಕೊಂಡಿದ್ದೆ. ಆದರೆ ಸಾಧ್ಯವಾಗಲಿಲ್ಲ. ಈಗಲೇ ಕಷ್ಟ ಪಟ್ಟು ಸಾಗಬೇಕಿದ್ದ ನಮ್ಮ ಪಯಣ ಇನ್ನು ಮುಂದೆ ಮತ್ತಷ್ಟು  ಕಠಿಣವಾಗುತ್ತದೆ.. ಆದರೂ ಸಾಗೋಣ.  ನನಗಂತೂ ಬದುಕಿನ ಆಶಾವಾದ, ನಂಬಿಕೆ ಕಳೆದುಹೋಗಿಲ್ಲ. ಸಾಗೋಣ. ಹೇಗೆ ಸಾಧ್ಯವೋ ಹಾಗೆ ಮುಂದಕ್ಕೆ ಸಾಗೋಣ. ಏನಂತೀಯಾ..?' ಎಂದ.
              `ಹುಂ.. ಆದರೆ ಅದೇ ಹೇಗೆ ಅಂತ..' ವಿನಯಚಂದ್ರ ಕೇಳಿದ್ದ.
              `ಏನಾದರೂ ಸಿಗುತ್ತೋ ನೋಡೋಣ. ವಾಹನಗಳು, ಬಸ್ಸುಗಳು, ಇಂತದ್ದೇ ಸೈಕಲ್ ರಿಕ್ಷಾಗಳು.. ಸಿಕ್ಕಿದ್ದರಲ್ಲಿ ಪ್ರಯಾಣ ಮಾಡೋಣ. ಕಾಡಿ ಬೇಡಿಯಾದರೂ ಹೋಗೋಣ. ಸಿಕ್ಕಿಲ್ಲವಾ ಇದ್ದೇ ಇದೆಯಲ್ಲ ಕಾಲ್ನಡಿದೆ..' ಎಂದ ಸಲೀಂ ಚಾಚಾ..
              `ಹುಂ..' ಎಂದ ವಿನಯಚಂದ್ರನ ಮನಸ್ಸಿನಲ್ಲಿ ಸ್ಲಾವೋಮಿರ್ ರಾವಿಸ್ ನ ಮಹಾಪಲಾಯನ ಥಟ್ಟನೆ ನೆನಪಾಯಿತು. ಸ್ಲಾವೋಮಿರ್ ರಾವೀಸ್ ಹಾಗೂ ಆತನ ಏಳು ಜನಸ ಹಚರರ ತಂಡ ರಷ್ಯಾದ ಕಪ್ಪು ಜೈಲು ಜಗತ್ತಿನಿಂದ ತಪ್ಪಿಸಿಕೊಂಡು ನಿಂತಲ್ಲಿ ನಿಲ್ಲದೇ ಎರಡೋ ಮೂರೋ ತಿಂಗಳುಗಳ: ಕಾಲ ಹಿಮ, ಮರುಭೂಮಿ, ಕಾಡು, ನದಿ, ತೊರೆ ಎನ್ನದೇ ದೇಶ ದೇಶಗಳನ್ನು ದಾಟಿ ಕೊನೆಗೊಮ್ಮೆ 8000 ಕಿ.ಮಿ ದೂರದ ಭಾರತವನ್ನು ತಲುಪಿದ್ದರಲ್ಲ. ನಡೆಯುವ ದಾರಿಯಲ್ಲಿ ಮೂರೋ ನಾಲ್ಕೋ ಜನರು ಸಾವನ್ನಪ್ಪಿದ್ದರಲ್ಲ. ಆಹ್ ಆ ಪಯಣ ಹೇಗಿರಬಹುದು. ಯಾಕೋ ನಮ್ಮ ಬದುಕೂ ಕೂಡ ಹಾಗೇ ಆಗುತ್ತಿದೆಯಾ? ನಮ್ಮ ಪಯಣದಲ್ಲಿ ಬಹುದೂರ ಕಾಲ್ನಡಿಗೆ ಮಾಡಿ ಸಾಗಬೇಕಾದದ್ದೂ ಇದೆಯೇ ಎಂದುಕೊಂಡ.
                 ಸಲೀಂ ಚಾಚಾ  `ನಡೀರಿ..' ಎಂದ. ಮುಂದಕ್ಕೆ ಹೆಜ್ಜೆ ಹಾಕಿದರು. ಬಿಸಿಲ ಝಳ ನಿಧಾನಕ್ಕೆ ಏರುತ್ತಿತ್ತು. ಹಿಂಸಾಪೀಡಿತ ಪ್ರದೇಶದಲ್ಲಿ ಬಿಸಿಲು ತೀಕ್ಷ್ಣವೇನೋ ಅನ್ನಿಸುತ್ತದೆ. ಧಾರಾಕಾರವಾಗಿ ಮೈಯಿಂದ ಬೆವರು ಸುರಿಯಲಾರಂಭಿಸಿತ್ತು. ಒರೆಸಿಕೊಳ್ಳುತ್ತ ಮುಂದಕ್ಕೆ ಹೆಜ್ಜೆ ಹಾಕಿದರು. ಯುವ ಜೋಡಿಗಳಾದ ವಿನಯಚಂದ್ರ ಹಾಗೂ ಮಧುಮಿತಾಳ ಸಮಕ್ಕೆ ಸಲೀಂ ಚಾಚಾ ನಡೆಯುತ್ತಿದ್ದ. ಆರೆಂಟು ದಶಕಗಳ ಕಾಲ ಸೈಕಲ್ ತುಳಿದಿದ್ದ ಜೀವ ಭಾರಿ ಗಟ್ಟಿಯಿತ್ತು. ತಾಂಗೈಲ್ ನಗರದ ಒಳಹೊಕ್ಕರೆ ಇನ್ನೇನಾದರೂ ಅಪಾಯ ಸಂಭವಿಸಬಹುದು ಎನ್ನುವ ಕಾರಣಕ್ಕೆ ಹೊರ ವರ್ತುಲ ರಸ್ತೆಯಲ್ಲಿಯೇ ಸಾಗಿದರು. ಹೊರ ಭಾಗದಲ್ಲಿಯೇ ಹಿಂಸಾಚಾರದ ಪ್ರತಿಫಲನ ಕಣ್ಣಿಗೆ ಕಾಣುತ್ತಿತ್ತು. ಈ ನಗರದ ಒಳಭಾಗದಲ್ಲಿ ಇನ್ಯಾವ ರೀತಿ ಹಿಂಸಾಚಾರ ಸಂಭವಿಸಿರಬಹುದು ಎಂದುಕೊಂಡರು ಎಲ್ಲರೂ.
            `ಚಾಚಾ.. ಇಲ್ಲೂ ಹಿಂದುಗಳ ಮೇಲಿನ ಹಿಂಸಾಚಾರವಾ..?' ಎಂದು ಕೇಳಿದ ವಿನಯಚಂದ್ರ.
            `ಅಲ್ಲ.. ಬಾಂಗ್ಲಾದಲ್ಲಿ ಎಲ್ಲ ಹಿಂಸಾಚಾರವೂ ಹಿಂದೂಗಳ ಮೇಲೆ ಮಾತ್ರ ನಡೆಯುತ್ತದೆ ಎಂದುಕೊಂಡೆಯಾ..?' ಸಲೀಂ ಚಾಚಾನ ಮಾತು ನೇರವಾಗಿ ಬಂದು ಬಡಿದಿತ್ತು..
             `ಹಾಗಲ್ಲ.. ಹಿಂಸಾಚಾರಕ್ಕೊಂದು ಕಾರಣ ಬೇಡವಾ..?'
             `ಊಹೂಂ ಬೇಡವೇ ಬೇಡ. ಅಭದ್ರ ಪ್ರದೇಶದಲ್ಲಿ ಪ್ರಭಲರು ತಮ್ಮ ಸಾಮರ್ಥ್ಯ ತೋರಿಸಲಿಕ್ಕೆ ಹಿಂಸಾಚಾರದ ಮಾರ್ಗ ಹಿಡಿಯುತ್ತಾರೆ. ಯಾರು ದುರ್ಬಲರು ಸಿಗುತ್ತಾರೋ ಅವರ ಮೇಲೆ ತಮ್ಮ ಪೌರುಷ ಪ್ರದರ್ಶನ ಮಾಡುತ್ತಾರೆ. ಸಿಕ್ಕ ಸಿಕ್ಕವರನ್ನು ಕೊಚ್ಚುತ್ತಾರೆ. ಇಲ್ಲಿ ನಡೆದಿದ್ದು ಹಿಂದೂಗಳ ಮೇಲಿನ ದೌರ್ಜನ್ಯವಲ್ಲ. ಮುಸಲ್ಮಾನ-ಮುಸಲ್ಮಾನರ ನಡುವೆ ನಡೆದ ಹಿಮಸಾಚಾರ. ಬಹುಶಃ ಈ ಗಲಾಟೆಯ ಹಿಂದೆ ರಾಜಕೀಯ ಕಾರಣಗಳಿರಬೇಕು. ಬಿಡು.. ಇಂತಹ ಗಲಾಟೆಗಳು ರಾಜಕಾರಣವಿಲ್ಲದೇ ನಡೆಯುವುದೇ ಇಲ್ಲ. ಪರಿಸ್ಥಿತಿ ನೋಡಿದರೆ ಕನಿಷ್ಟ 25-30 ಜನರಾದರೂ ಹತ್ಯೆಯಾಗಿದ್ದಾರೆ. ಮಕ್ಕಳು, ಹೆಂಗಸರು ಇದರಲ್ಲಿ ಸೇರಿರಬಹುದು. ನನಗೆ ಗೊತ್ತಿಲ್ಲ. ನಾನು ಅಂದಾಜು ಮಾಡಿದ್ದಷ್ಟೇ..' ಎಂದ ಚಾಚಾ.
              `ಬಡಪಾಯಿಗಳ ಜೀವಕ್ಕೆ ಬೆಲೆಯೇ ಇಲ್ಲವೇ..? ಇದೆಂತ ನಾಡು..?'  ವಿನಯಚಂದ್ರ ಎಂದುಕೊಂಡನಾದರೂ ಅದು ಪಕ್ಕದಲ್ಲಿದ್ದವರಿಗೆ ಕೇಳಿಸಿತು.
(ತಾಂಗೈಲ್ ನ ಶತಮಾನಗಳಷ್ಟು ಹಳೆಯದಾದ ಮಸೀದಿ)
              `ನಾಡು ಯಾವತ್ತೂ ಕೆಟ್ಟದಾಗಿರುವುದಿಲ್ಲ ಬೇಟಾ. ಅಲ್ಲಿನ ಜನರು ಕೆಟ್ಟವರಾಗಿರುತ್ತಾರೆ. ಇಲ್ಲೂ ಅಷ್ಟೇ ನಾಡು ಕೆಟ್ಟದ್ದಲ್ಲ. ಜನರು ಕೆಟ್ಟವರು. ಅದರಲ್ಲೂ ರಾಜಕಾರಣಿಗಳು ಬಲು ಕೆಟ್ಟವರು. ಎಂತಹ ಜನ್ನತ್ ಆಗಿದ್ದರೂ ಅವರು ಅದನ್ನು ಅರೆಘಳಿಗೆಯಲ್ಲಿ ಕುಲಗೆಡಿಸಿಬಿಡುತ್ತಾರೆ..' ಎಂದ ಸಲೀಂ ಚಾಚಾ. ವಿನಯಚಂದ್ರ ತಲೆಯಾಡಿಸಿದ.
            ಬಿಸಿಲು ಮತ್ತಷ್ಟು ಪ್ರಖರವಾಯಿತು. ಹೆದ್ದಾರಿ ಸುಡುತ್ತಿತ್ತು. ನಡೆಯುತ್ತಿದ್ದವರು ಬಸವಳಿಯತೊಡಗಿದ್ದರು. ರಸ್ತೆಯಲ್ಲಿ ಮಾತ್ರ ಯಾವುದೇ ವಾಹನವೂ ಸುಳಿದಾಡುತ್ತಿರಲಿಲ್ಲ. ಬೇಕೆಂದರೆ ಒಂದೇ ಒಂದು ಮರವೂ ದಾರಿ ಪಕ್ಕದಲ್ಲಿ ಇರಲಿಲ್ಲ. ನೆರಳೆನ್ನುವುದು ದುಸ್ತರವಾಯಿತು. ಇಕ್ಕೆಲದಲ್ಲಿ ಗದ್ದೆ ಬಯಲಿದ್ದರೂ ಗಾಳಿ ಮಾತ್ರ ಸುಳಿದಾಡುತ್ತಿರಲಿಲ್ಲ. ಗಾಳಿಗೂ ಹಿಂಸಾಚಾರದ ಭೀತಿ ತಟ್ಟಿರಬೇಕೇನೋ. ಸುಮ್ಮನಿತ್ತು. ಬಾಯಾರಿಕೆಗೆ ಚೀಲದಲ್ಲಿದ್ದ ನೀರಿನ ಬಾಟಲಿಗಳು ಆಗಲೇ ಖಾಲಿಯಾಗಿದ್ದವು. ಸೈಕಲ್ ರಿಕ್ಷಾ ತುಳಿಯುವುದಾದರೂ ಬೇಕು. ಹೀಗೆ ನಡೆಯುವುದು ಬೇಡ ಎಂದುಕೊಂಡ ವಿನಯಚಂದ್ರ.
          `ಬೇಟಾ.. ಇದೇ ರಸ್ತೆಯಲ್ಲಿ ನಾವು ಸಾಗಿದರೆ ಎಲೆಂಗಾ ಎನ್ನುವ ಊರು ಬರುತ್ತದೆ. ಏಲೆಂಗಾದಿಂದ ನಾವು ಮಾರ್ಗ ಬದಲಾಯಿಸಬೇಕು. ಬ್ರಹ್ಮಪುತ್ರಾ ನದಿಯನ್ನು ದಾಟಬೇಕು. ದಾಟಿದ ನಂತರ ನಮ್ಮ ಮಾರ್ಗ ಮತ್ತೆ ಬದಲಾಗುತ್ತದೆ. ಅಲ್ಲಿದಂ ಸೀದಾ ಅಸ್ಸಾಂ ಗಡಿಯತ್ತ ಸಾಗಬೇಕು. ಹೆಚ್ಚೂ ಕಡಿಮೆ ನಾವಿನ್ನೂ ಮುನ್ನೂರಕ್ಕೂ ಅಧಿಕ ಕಿಲೋಮೀಟರ್ ಸಾಗಬೇಕಾಗಿದೆ. ನೆನಪಿಟ್ಟುಕೋ..' ಸಲೀಂ ಚಾಚಾ ನಿರ್ದೇಶನ ನೀಡಿದ್ದ.
           `ಆ ಗಡಿಯಲ್ಲಿ ಏಜೆಂಟ ಸಿಗುತ್ತಾನೆ. ಆತನ ಅಣತಿಯಂತೆ ನಡೆದುಕೊಳ್ಳಬೇಕು. ಆತ ಭಾರತಕ್ಕೆ ದಾಟಿಸುವ ಕೆಲಸ ಮಾಡುತ್ತಾನೆ. ಒಂದು ವೇಳೆ ಆತ ಸಿಗಲಿಲ್ಲ ಎಂದಿಟ್ಟುಕೊಳ್ಳಿ ಗಡಿಯಿಂದ ಅನತಿ ದೂರದಲ್ಲಿ ಕನಿಷ್ಟ ಎರಡು ದಿನ ಗಮನವಿಟ್ಟು ಕಾದು ನೋಡಿದರೆ ಹೇಗೆ ದಾಟಬೇಕು ಎನ್ನುವುದು ಗೊತ್ತಾಗುತ್ತದೆ. ಸಮಯ ಸಿಕ್ಕಾಗ ದಾಟಿಕೊಳ್ಳಿ. ಇದು ನಮ್ಮ ಎರಡನೇ ಮಾರ್ಗ..' ಎಂದ ಸಲೀಂ ಚಾಚಾ.
           `ಹುಂ..'  ಎಂದ ವಿನಯಚಂದ್ರ `ಈ ಏಜೆಂಟನನ್ನು ನಂಬಬಹುದಾ..?' ಎಂದು ಕೇಳಿದ.
            `ನಂಬುವುದು ಕಷ್ಟ. ಅರ್ಧಕ್ಕರ್ಧ ನಂಬೋಣ. ನಂಬಿಕೆ ಉಳಿಸಿಕೊಂಡರೆ ಸುಲಭ. ಇಲ್ಲವಾದರೆ ನಮ್ಮದೇ ಮಾರ್ಗವಿದೆಯಲ್ಲ. ಅದೃಷ್ಟವಿದ್ದರೆ ಭಾರತಕ್ಕೆ ದಾಟಿಕೊಳ್ಳಬಹುದು. ಇಲ್ಲವೇ ಈನೆಲದ ರಕ್ತದ ದಾಹಕ್ಕೆ ಇನ್ನೊಂದಷ್ಟು ಹನಿಗಳು ಬಿತ್ತು ಎಂದುಕೊಳ್ಳುವುದು' ಎಂದ ಸಲೀಂ ಚಾಚಾ `ಬಾಂಗ್ಲಾದಲ್ಲಿ ಈ ಏಜೆಂಟರಿದ್ದಾರಲ್ಲ ಅವರನ್ನು ಪೂರ್ತಿಯಾಗಿ ನಂಬಲೇಬಾರದು. ಅವರು ಏನೋ ಮಾರ್ಗ ಹೇಳುತ್ತಾರೆ ಎಂದುಕೊಂಡರೆ ನಾವು ಇನ್ನೊಂದನ್ನು ಸದಾ ತಯಾರಿಸಿ ಇಟ್ಟುಕೊಂಡಿರಲೇ ಬೇಕು. ನಾನು ಅದೇ ಕಾರಣಕ್ಕೆ ಇನ್ನೊಂದು ಮಾರ್ಗವನ್ನು ಹೇಳಿದ್ದು...' ಎಂದ.
           ಅಷ್ಟರಲ್ಲಿ ದೂರದಲ್ಲಿ ಯಾವುದೋ ವಾಹನ ಬರುತ್ತಿರುವ ಸದ್ದು. ಅಸ್ಪಷ್ಟವಾಗಿ ಕಾಣಿಸುತ್ತಿತ್ತು. ಬಿಸಿಲಿನ ಝಳದಿಂದ ಮರೀಚಿಕೆಯ ರಥ ಸುಳಿಯುತ್ತಿದ್ದರೂ ಸದ್ದಿನ ಕಾರಣದಿಂದ ಯಾವುದೋ ವಾಹನ ಎನ್ನುವುದು ಸ್ಪಷ್ಟವಾಯಿತು. ಹತ್ತಿರ ಹತ್ತಿರ ಬಂದಂತೆಲ್ಲ ಅದೊಂದು ಪೊಲೀಸ್ ವಾಹನ ಎನ್ನುವುದೂ ತಿಳಿಯಿತು. ಭಾರಿ ಸದ್ದಿನೊಂದಿಗೆ ಬರುತ್ತಿದ್ದ ವಾಹನ ಕಂಡ ತಕ್ಷಣ ಸಲೀಂ ಚಾಚಾನಿಗೆ ಅದೇನನ್ನಿಸಿತೂ `ಓಡಿ..' ಎಂದು ಕಿರುಚಿದ. ವಿನಯಚಂದ್ರ ಹಾಗೂ ಮಧುಮಿತಾ ಸುತ್ತ ಮುತ್ತ ನೋಡಿದರೆ. ದೂರ ದೂರದವರೆಗೂ ಬರೀ ಗದ್ದೆ ಬಯಲು. ಬೆಳೆ ಬೆಳೆದು ನಿಂತಿತ್ತು. ಆದರೆ ಮರಗಳಿಲ್ಲ. ಪೊದೆಯೂ ಇಲ್ಲ. ಎಲ್ಲಿಗೆ ಅಂತ ಓಡುವುದು? ಆದರೂ ಗದ್ದೆಯ ಹತ್ತಿರ ಓಡಿ ಹೋಗಿ ಬೆಳೆದು ನಿಂತ ಪೈರಿನೊಳಕ್ಕೆ ನುಗ್ಗಿಯೇ ಬಿಟ್ಟರು. ಆಳೆತ್ತರಕ್ಕೆ ಬೆಳೆದಿದ್ದ ಗದ್ದೆಯಲ್ಲಿ ಅಡಗಿ ಕುಳಿತರು. ಹಿಂದಿನಿಂದ ಢಮ್ಮೆನ್ನುವ ಸದ್ದು ಕೇಳಿಸಿತು. ಸದ್ದು ಕೇಳಿದ ತಕ್ಷಣವೇ ಮಧುಮಿತಾಳಿಗೆ ಅರೇ ಸಲೀಂ ಚಾಚಾ ನಮ್ಮೊಂದಿಗೆ ಬಂದಿಲ್ಲವಲ್ಲ. ಅವರೆಲ್ಲಿ ಓಡಿಹೋದರು ಎನ್ನುವ ಪ್ರಶ್ನೆ ಮೂಡಿತು. ದೇವರೇ ಪೊಲೀಸರು ಗುಂಡು ಹೊಡೆದಿದ್ದು ಸಲೀಂ ಚಾಚಾನಿಗೆ ತಾಗದಿರಲಿ. ಆತ ತಪ್ಪಿಸಿಕೊಳ್ಳಲಿ ಎಂದುಕೊಂಡಳು.
          ತಮ್ಮೊಂದಿಗೆ ಓಡಿ ಬಂದಿರದ ಸಲೀಂ ಚಾಚಾನಿಗೆ ಗುಂಡು ತಾಗಿದೆಯಾ ಎನ್ನುವ ಬಾವನೆ ಕಾಡಿತಾದರೂ ಮನಸ್ಸು ಅಂತಹ ಶಂಕೆಯನ್ನು ಮಾಡಲು ಒಮ್ಮೆ ಹಿಂದೇಟು ಹಾಕಿತು. ಹಾಳಾದ ಪೊಲೀಸರು ಇಲ್ಯಾಕೆ ಬಂದರೂ ಇವರ ಮನೆ ಹಾಳಾಗ ಎಂದು ಬೈದುಕೊಂಡಳು ಮಧುಮಿತಾ. ತಾವು ಅಡಗಿದ್ದ ಗದ್ದೆಯ ಇನ್ನೊಂದು ಕಡೆಗೋ, ರಸ್ತೆಯ ಮತ್ತೊಂದು ಪಾರ್ಶ್ವದ ಗದ್ದೆ ಬಯಲಿನಲ್ಲಿಯೋ ಸಲೀಂ ಚಾಚಾ ಅಡಗಿ ಕುಳಿತಿದ್ದಾನೆ. ತಮ್ಮನ್ನು ಬೆದರಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ ಎಂದುಕೊಂಡಳು. ಕೆಲ ಹೊತ್ತು ವಾಹನದ ಸದ್ದು ಗುರುಗುಡುತ್ತಲೇ ಇತ್ತು. ವಿನಯಚಂದ್ರ ಹಾಗೂ ಮಧುಮಿತಾ ಉಸಿರನ್ನೇ ಆಡುತ್ತಿಲ್ಲವೇನೋ ಎನ್ನುವಷ್ಟು ತಣ್ಣಗೆ ಗದ್ದೆ ಬಯಲಿನ ಮಧ್ಯ ಅಡಗಿಕುಳಿತಿದ್ದರು. ಮನದ ತುಂಬೆಲ್ಲ ಸಲೀಂ ಚಾಚಾನದ್ದೇ ಆಲೋಚನೆ. ಏನೂ ಕೇಡಾಗರಿದಲಿ ಎನ್ನುವ ಪ್ರಾರ್ಥನೆ ಮಾಡಲಾರಂಭಿಸಿದ್ದರು.

(ಮುಂದುವರಿಯುತ್ತದೆ..)

No comments:

Post a Comment