Thursday, October 30, 2014

ಒಪ್ಪಿಬಿಡು ಮನವೇ

(ಚಿತ್ರ : ವಿನಾಯಕ ಹೆಗಡೆ)
ಒಪ್ಪಿಬಿಡು ಮನವೇ ನೀ
ನನ್ನೊಡಲ ಪ್ರೀತಿಯಾ
ತೊರೆಯದಿರು ಜೊತೆ ನೀನು
ನನ್ನೊಡಲ ಬುತ್ತಿಯಾ |

ನೀನಿರುವೆ ನನ ಪ್ರಾಣ
ಸಕಲ ಜೀವವೂ ನೀನು
ನನ್ನ ಬಾಳೆಲೆಯ ನವ
ಚೈತ್ರದುಸಿರು ನೀನು |

ನಾನು ನಿನ್ನಯ ಪ್ರೇಮಿ
ಜೊತೆ ಬಾಳ್ವೆ, ನಿನ್ನ ಹಿತ
ಬಾಳು ಕರಗುವ ಮುನ್ನ
ಒಮ್ಮೆ ಒಪ್ಪಿಬಿಡು ಮನವೇ |

ಕಳೆದಿರಲಿ ಹಳೆ ದುಃಖ
ಮೂಡಿ ಬರಲೀ ಪ್ರೀತಿ
ನನ್ನ ನೀನೊಪ್ಪಿದೊಡೆ
ಬಾಳ್ವೆ ಪೂರಾ ಸ್ವಾತಿ ||

***
(ಈ ಕವಿತೆಯನ್ನು ಬರೆದಿರುವುದು 01-11-2006ರಂದು ದಂಟಕಲ್ಲಿನಲ್ಲಿ)

Monday, October 27, 2014

ಮುರೇಗಾರ್ ಸಮಸ್ಯೆಗೆ ಮುಕ್ತಿ ಎಂದು?

(ಮುರೇಗಾರ್ ಜಲಪಾತ)

          ಶಿರಸಿ ತಾಲೂಕಿನ ಸಾಲ್ಕಣಿ ಗ್ರಾ.ಪಂ ವ್ಯಾಪ್ತಿಯ ಮುರೇಗಾರ್ ಹಾಗೂ ಸುತ್ತಮುತ್ತಲ ಪ್ರದೇಶಗಳು ಹಲವಾರು ಸಮಸ್ಯೆಗಳಿಂದ ಬಳಲುತ್ತಿವೆ. ಅಸಮರ್ಪಕ ರಸ್ತೆ, ವಿದ್ಯುತ್ ಸಮಸ್ಯೆ ಈ ಊರುಗಳನ್ನು ಬಾಧಿಸುತ್ತಿದೆ.
ಶಿರಸಿಯನ್ನು ಜಿಲ್ಲೆಯಲ್ಲಿ ಮುಂದುವರಿದ ತಾಲೂಕು ಎಂದು ಕರೆಯಲಾಗುತ್ತದೆ. ಈ ತಾಲೂಕಿನ ಸಾಲ್ಕಣ ಪಂಚಾಯತ ವ್ಯಾಪ್ತಿಯಲ್ಲಿರುವ ಮುರೇಗಾರ್ ಹಾಗೂ ಸುತ್ತಮುತ್ತಲ ಪ್ರದೇಶಗಳು ಸಮರ್ಪಕ ರಸ್ತೆ ಸಂಚಾರದಿಂದ ಬವಣೆ ಎದುರಿಸುವಂತಾಗಿದೆ. ಮುರೇಗಾರ್, ಹುಡ್ಲೇಜಡ್ಡಿ, ದುಗ್ಗುಮನೆ, ಶಿರ್ಲಬೈಲ್, ಮಳ್ಳಿಕೈ ಈ ಮುಂತಾದ ಊರುಗಳಿಗೆ ತೆರಳುವ ರಸ್ತೆ ತೀವ್ರವಾಗಿ ಹಾಳಾಗಿದ್ದು ಸಂಚಾರ ಅಸಾಧ್ಯ ಎನ್ನುವಂತಾಗಿದೆ.
ಶಿರಸಿಯಿಂದ ಸಾಲ್ಕಣಿಗೆ ತೆರಳುವ ಮುಖ್ಯ ರಸ್ತೆಯಿಂದ 5 ಕಿ.ಮಿ ಅಂತರದಲ್ಲಿ ಈ ಎಲ್ಲ ಊರುಗಳಿವೆ. ಈ ಊರಿಗೆ ತೆರಳಲು ಡಾಂಬರು ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ನಿರ್ವಹಣೆಯ ಕೊರತೆಯಿಂದಾಗಿ ಡಾಂಬರು ರಸ್ತೆ ಈಗಾಗಲೇ ಕಿತ್ತು ಹೋಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಉಂಟಾಗಿದ್ದು ಮಾರ್ಗದಲ್ಲಿ ಸಂಚಾರ ಮಾಡುವವರು ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ. ಈ ಮಾರ್ಗದಲ್ಲಿ ಸಿಗುವ ಘಟ್ಟ ಪ್ರದೇಶದಲ್ಲಂತೂ ಡಾಂಬರು ರಸ್ತೆಯನ್ನು ಹುಡುಕಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಸವಾರರಂತೂ ರಸ್ತೆಯಲ್ಲಿ ಎದ್ದಿರುವ ಕಲ್ಲುಗಳು ಯಾವ ಕ್ಷಣದಲ್ಲಿ ವಾಹನವನ್ನು ಪಂಚರ್ ಮಾಡುತ್ತದೆಯೋ ಎನ್ನುವ ಭಯದಿಂದಲೇ ಸಾಗಬೇಕಾಗಿದೆ. ದೊಡ್ಡ ದೊಡ್ಡ ಹೊಂಡಗಳಲ್ಲಿ ನೀರು ತುಂಬಿಕೊಂಡಿದ್ದು ಸಂಪೂರ್ಣ ರಸ್ತೆಯನ್ನು ಆವರಿಸಿಕೊಂಡಿದೆ. ಹೊಂಡದ ಆಳವನ್ನರಿಯೇ ಮುಂದೆ ಸಾಗುವವರು ಬಿದ್ದ ಉದಾಹರಣೆಗಳೂ ಇದೆ.
ಈ ರಸ್ತೆಯನ್ನು 2004ರಿಂದ 2006ರ ಅವಧಿಯಲ್ಲಿ ಡಾಂಬರೀಕರಣ ಮಾಡಲಾಗಿದೆ. ಆದರೆ ರಸ್ತೆ ನಿರ್ಮಾಣ ಮಾಡಿದ ದಶಕಗಳು ಕಳೆಯುವಲ್ಲಿಯೇ ಸಂಪೂರ್ಣ ಹಾಳಾಗಿರುವುದು ಕಾಮಗಾರಿಯ ಗುಣಮಟ್ಟವನ್ನು ತೋರಿಸುತ್ತದೆ. ಈ ವರ್ಷ ಈ ರಸ್ತೆ ಮರುಡಾಂಬರೀಕರಣಕ್ಕಾಗಿ 1.5 ಲಕ್ಷ ರು. ಬಿಡುಗಡೆಯಾಗಿತ್ತು. ಆದರೆ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿಲ್ಲ. ಇದರಿಂದಾಗಿ 200ಕ್ಕೂ ಅಧಿಕ ಮನೆಗಳ 3000ಕ್ಕೂ ಹೆಚ್ಚಿನ ಜನರು ಹಾಳಾದ ರಸ್ತೆಯಲ್ಲಿ ಪ್ರಯಾಸದಿಂದ ಸಾಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಮುರೇಗಾರ್ ಜಲಪಾತಕ್ಕೆ ತೆರಳುವ ರಸ್ತೆಯನ್ನು ಕಳೆದ ವರ್ಷ ಅಗಲೀಕರಣ ಮಾಡಲಾಗಿತ್ತು. ಇದಕ್ಕಾಗಿ 1.20 ಲಕ್ಷ ರು. ವೆಚ್ಚದಲ್ಲಿ ಅಲ್ಲಲ್ಲಿ ಅಗಲೀಕರಣವನ್ನೂ ಕೈಗೊಳ್ಳಲಾಗಿತ್ತು. ಆದರೆ ಈ ವರ್ಷದ ಮಳೆಗೆ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಕೆಲವು ಕಡೆಗಳಲ್ಲಂತೂ ರಸ್ತೆಯ ಮಧ್ಯದಲ್ಲಿಯೇ ದೊಡ್ಡ ದೊಡ್ಡ ಕಾಲುವೆಗಳು ಉಂಟಾಗಿವೆ. ದುಗ್ಗುಮನೆ ಸನಿಹದಲ್ಲಿ ಮೋರಿಯೊಂದರ ಪಾಶ್ರ್ವ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದೆ. ಮುರೇಗಾರ್ ಜಲಪಾತವನ್ನು ವೀಕ್ಷಣೆ ಮಾಡಲು ಆಗಮಿಸುವ ಪ್ರವಾಸಿಗರು ಈ ಮಾರ್ಗದಲ್ಲಿ ಕಷ್ಟಪಟ್ಟು, ರಸ್ತೆಯನ್ನು ಹಳಿಯುತ್ತ ಪ್ರಯಾಣ ಮಾಡುತ್ತಿದ್ದಾರೆ. ಹೊಂಡಮಯ ರಸ್ತೆಯಿಂದಾಗಿ ಹೈರಾಣಾಗುತ್ತಿದ್ದಾರೆ.
(ಹಾಳು ರಸ್ತೆ)
ಸಾಲ್ಕಣಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಯೂ ತೀವ್ರವಾಗಿದೆ. ಮುರೇಗಾರ್ ಹಾಗೂ ಸುತ್ತಮುತ್ತಲ ಊರುಗಳಿಗೆ ಸಾಲ್ಕಣಿ ಸಮೀಪದ ಟಿ.ಸಿ.ಯಿಂದಲೇ ವಿದ್ಯುತ್ ಸರಬರಾಜು ಆಗುತ್ತದೆ. ಆದರೆ ಅಸಮರ್ಪಕ ವಿದ್ಯುತ್ ಸರಬರಾಜಿನ ಕಾರಣ ಕತ್ತಲೆಯಲ್ಲಿಯೇ ಕಾಲಕಳೆಯುವ ಪರಿಸ್ಥಿತಿ ಈ ಭಾಗದ ಜನರದ್ದಾಗಿದೆ. ಪದೇ ಪದೆ ಟಿ.ಸಿ. ಹಾಳಾಗುತ್ತದೆ. ವಿದ್ಯುತ್ ಮಾರ್ಗದಲ್ಲಿ ದೋಷ ಸಂಭವಿಸುತ್ತದೆ. ವಿದ್ಯುತ್ ತಂತಿಗಳ ಮೇಲೆ ಮರದ ರೆಂಬೆಗಳು ಮುರಿದು ಬೀಳುತ್ತಿರುತ್ತದೆ. ಆದರೆ ಹೆಸ್ಕಾಂ ಈ ಭಾಗದ ಕಡೆಗೆ ಗಮನ ಹರಿಸುತ್ತಿಲ್ಲ. ಹುಲೇಕಲ್, ಸಾಲ್ಕಣಿ ಭಾಗದಲ್ಲಿರುವ ಲೈನ್ಮನ್ ಮುರೇಗಾರ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಉಂಟಾದರೆ ಆ ಕಡೆಗೆ ಆಗಮಿಸುವುದೇ ಇಲ್ಲ. ಕಳೆದ ಎರಡು-ಮೂರು ವರ್ಷಗಳಲ್ಲಿ ಒಮ್ಮೆಯೂ ಈ ಗ್ರಾಮಗಳಿಗೆ ಬಂದಿಲ್ಲ ಎಂದು ಸ್ಥಳೀಯರು ಕಿಡಿಕಾರುತ್ತಾರೆ. ಈ ಕುರಿತು ಇಲಾಖೆಯ ಅಧಿಕಾರಿಗಳಲ್ಲಿ ಕೇಳಿದರೆ ಗ್ರಾಮಸ್ಥರೆ ಸರಿಪಡಿಸಿಕೊಳ್ಳಿ ಎಂದು ಉತ್ತರ ನೀಡಿದ್ದಾರೆ. ಇದರಿಂದಾಗಿ ಮುರೇಗಾರ್, ದುಗ್ಗುಮನೆ, ಶಿರ್ಲಬೈಲ್, ಹುಡ್ಲೆಜಡ್ಡಿ, ಮಳ್ಳಿಕೈ ಈ ಮುಂತಾದ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾದರೇ ಸ್ಥಳೀಯರೇ ಸರಿಪಡಿಸಿಕೊಳ್ಳುತ್ತಿದ್ದಾರೆ.
ಶಿರಸಿಯಿಂದ ಕೇವಲ 22 ಕಿ.ಮಿ ದೂರದಲ್ಲಿರುವ ಈ ಗ್ರಾಮಗಳಲ್ಲಿ ಸಮಸ್ಯೆಗಳು ಜ್ವಲಂತವಾಗಿದೆ. ಅಗತ್ಯ ವಸ್ತುಗಳನ್ನು ಕೊಳ್ಳಲು ಸಾಲ್ಕಣಿ, ಹುಲೇಕಲ್ ಅಥವಾ ಶಿರಸಿಗೆ ಆಗಮಿಸುವ ಅನಿವಾರ್ಯತೆಯಿದೆ. ಆದರೆ ರಸ್ತೆ ಸಮರ್ಪಕವಾಗಿಲ್ಲ. ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಕಳೆದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ಈ ಕುರಿತು ಗಮನ ಹರಿಸಿಲ್ಲ ಎನ್ನುವ ಆಕ್ರೋಶ ಗ್ರಾಮಸ್ಥರಲ್ಲಿದೆ. ಈಗಲೂ ಯಾವುದೇ ಜನಪ್ರತಿನಿಧಿಗಳು ತಮ್ಮ ಗೋಳನ್ನು ಕೇಳುತ್ತಿಲ್ಲ. ಪ್ರವಾಸಿ ತಾಣವಾದ ಮುರೇಗಾರ್ ಜಲಪಾತಕ್ಕೆ ತೆರಳುವ ರಸ್ತೆಯನ್ನೂ ಸರಿಪಡಿಸಲು ಮುಂದಾಗಿಲ್ಲ. ಆ ನೆಪದಲ್ಲಾದರೂ ಈ ಊರುಗಳಿಗೆ ಸರ್ವಋತು ರಸ್ತೆಯಾಗುತ್ತದೆ ಎನ್ನುವ ಕನಸು ಕನಸಾಗಿಯೇ ಉಳಿದಿದೆ. ಜಿಲ್ಲೆಯವರೇ ಆದ ಪ್ರವಾಸೋದ್ಯಮ ಸಚಿವರು, ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಿದೆ. ರಸ್ತೆ ಹಾಗೂ ವಿದ್ಯುತ್ ಸಮಸ್ಯೆಗೆ ಪೂರ್ಣವಿರಾಮ ಹಾಕಬೇಕಾದ ಅಗತ್ಯವಿದೆ.

***
ರಸ್ತೆ ಹಾಗೂ ವಿದ್ಯುತ್ ಸಮಸ್ಯೆ ನಮ್ಮ ಭಾಗದಲ್ಲಿ ತೀವ್ರವಾಗಿದೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿದ್ದು ಸಂಚರಿಸುವುದು ಅಸಾಧ್ಯ ಎನ್ನುವಂತಾಗಿದೆ. ರಸ್ತೆ ದುರಸ್ತಿ ಮಾಡಿಸಿಕೊಡಿ ಎಂದು ಹಲವಾರು ಸಾರಿ ಅರ್ಜಿ ಅದಕ್ಕೆ ಮನ್ನಣೆ ದೊರಕಿಲ್ಲ. ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಲೈನ್ಮನ್ ಈ ಭಾಗಕ್ಕೆ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲು ಆಗಮಿಸುವುದೇ ಇಲ್ಲ. ಸ್ಥಳೀಯರೇ ದುರಸ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಕೂಡಲೇ ಈ ಸಮಸ್ಯೆಗಳನ್ನು ಸಂಬಂಧಪಟ್ಟವರು ಸರಿಪಡಿಸಬೇಕಾಗಿದೆ.
ರಾಘವೇಂದ್ರ ಎನ್ ನಾಯ್ಕ, ಇಲೆಕ್ಟ್ರಿಕ್ ಕೆಲಸಗಾರ, ಶಿರ್ಲಬೈಲ್


***
(ಇದು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ)

Sunday, October 26, 2014

ಬದಲು ಬಯಕೆ

ಇರುಳು ಹಾಯುವ ಹಾದಿಯಲ್ಲಿ
ಒಮ್ಮೆ ಮಾತನು ಆಡುವಾ |
ಸಾವು ಸುಳಿಯುವ ಬದುಕಿನಲ್ಲಿ
ಹಳೆಯ ಸೇಡನು ಮರೆಯುವಾ ||

ಬದುಕಿನಾ ಈ ರೇಖೆಯೊಳಗೆ
ಸೇಡು ಉನ್ನತಿ ಮೆರೆಯುತ್ತಿತ್ತು |
ಎದೆಯ ಆಳದ ಹುಮ್ಮಸ್ಸೆಲ್ಲ
ದ್ವೇಷವಾಗಿಯೇ ಸುರಿಯುತ್ತಿತ್ತು ||

ಈಗ ಹಾದಿಯು ಮಂಜು-ಮಂಜು
ಸ್ವಷ್ಟ ಚಿತ್ರಣ ಇಲ್ಲವೇ |
ನಿನ್ನೆ ಮಾಡಿದ ಕರ್ಮವೆಲ್ಲವೂ
ಮನದ ನೆನಪಲಿ ಉಳಿದಿವೆ ||

ಇನ್ನು ದ್ವೇಷವ ಮರೆತು ನಾವು
ಹೊಸತು ಲೋಕವ ಕಟ್ಟುವಾ |
ದ್ವೇಷ-ಸೇಡಿಗೆ ಅರ್ಥವಿಲ್ಲ
ಎಂದು ಲೋಕಕೆ ಸಾರುವಾ ||

**
(ಈ ಕವಿತೆಯನ್ನು ದಂಟಕಲ್ಲಿನಲ್ಲಿ ಬರೆದಿದ್ದು, 11-12-2006ರಂದು)

Saturday, October 25, 2014

ದೀಪಾವಳಿ ಆಚಾರ-ವಿಚಾರ

ದೀಪವಾಳಿ ತಯಾರಿ
(ಬಲಿವೇಂದ್ರನನ್ನು ಕೂರಿಸುತ್ತಿರುವುದು)

ದೀಪಾವಳಿ ಹಬ್ಬದ ಸಡಗರ ಮೇರೆ ಮೀರಿದೆ. ದೀಪಗಳ ಹಬ್ಬಕ್ಕೆ ಜನಸಾಮಾನ್ಯರು ಸಂಭ್ರಮದಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಲಿವೇಂದ್ರನ ಪೂಜೆಗಾಗಿ ಮನೆ ಮನೆಯಲ್ಲಿ ವಿಶೇಷ ತಯಾರಿ ಮಾಡಿಕೊಂಡಿದ್ದಾರೆ.
ಬೆಳಕಿನ ಹಬ್ಬವಾದ ದೀಪಾವಳಿಯನ್ನು ದೊಡ್ಡಹಬ್ಬ ಎಂದೇ ಕರೆಯುತ್ತಾರೆ. ಎಲ್ಲ ಹಬ್ಬಗಳಿಗೂ ಕಿರೀಟವಿಟ್ಟಂತಹ ಹಬ್ಬ ಇದು. ನಗರ ಹಾಗೂ ಗ್ರಾಮೀಣ ಪ್ರದೇಶದ ಜನಸಾಮಾನ್ಯರು ತಮ್ಮನ್ನು ತಾವು ಮರೆತು ಆನಂದಿಸುವಂತಹ ಹಬ್ಬ. ಇಂತಹ ದೀಪಾವಳಿಯ ಸಂಭ್ರಮ ಬುಧವಾರದಿಂದ ಆರಂಭವಾಯಿತು. ಮನೆ ಮನೆಗಳಲ್ಲಿ ಬೂರೆ ಹಬ್ಬ ಎಂದು ಕರೆಯುವ ಈ ದಿನದಂದು ಬೂರೆ ನೀರನ್ನು ಮನೆಯೊಳಕ್ಕೆ ತರುವ ಮೂಲಕ ಹಬ್ಬ ಆರಂಭವಾಗುತ್ತದೆ. ಬೂರೆ ನೀರು ತಂದ ನಂತರ ಬಲಿವೇಂದ್ರನ ಹೋಲಿಕೆಯ ಮೂರ್ತಿಯನ್ನು ಕೂರಿಸಲಾಗುತ್ತದೆ. ಮಣೆಯ ಮೇಲೆ ಮಣ್ಣಿನ ಚಿತ್ತಾರ ಬಿಡಿಸಿ ಅದರ ಮೇಲೆ ತಾಮ್ರದ ಬಿಂದಿಗೆಯಲ್ಲಿ ನೀರನ್ನು ಹಾಕಿ, ಅದರ ಬಾಯಿಗೆ ಅಗಲವಾದ ಬಟ್ಟಲನ್ನು ಇಟ್ಟು ಅದರ ಮೇಲೆ ಅಕ್ಕಿಯನ್ನು ಹರವಿ, ತೆಂಗಿನ ಕಾಯಿ ಇಡಲಾಗುತ್ತದೆ. ತೆಂಗಿನಕಾಯಿಯ ಮೇಲೆ ಜೋಡು ಕೋಡನ್ನು ಹೊಂದಿರುವ ಅಡಿಕೆ ಸಿಂಗಾರದಿಂದ ಬಲೀಂದ್ರ ಮೂರ್ತಿಯನ್ನು ಕೂರಿಸಲಾಗುತ್ತದೆ. ಮೂರ್ತಿಯ ಅಕ್ಕಪಕ್ಕ ಬಲಿತ ಸೌತೆಕಾಯಿ ಹಾಗೂ ಮೊಗೆ ಕಾಯಿಗಳನ್ನು ಇಡಲಾಗುತ್ತದೆ.
(ಗೋಪೂಜೆ)
ಮೂರು ದಿನಗಳ ಕಾಲ ಬಲೀಂದ್ರ ಮೂತರ್ಿಯನ್ನು ಪೂಜೆ ಮಾಡಲಾಗುತ್ತದೆ. ಹಬ್ಬದ ಸರಣಿಯ ಎರಡನೇ ದಿನವಾದ ಗುರುವಾರ ವಾಹನ ಪೂಜೆ ಹಾಗೂ ಲಕ್ಷ್ಮೀ ಪೂಜೆ ನಡೆಯುತ್ತದೆ. ತಮ್ಮ ತಮ್ಮ ಮನೆಯ ವಾಹನಗಳು, ಆಭರಣಗಳನ್ನು ಇಂದು ಪೂಜೆ ಮಾಡಲಾಯಿತು. ವಾಹನಗಳಿಗೆ ಸಿಂಗರಿಸಿ ಸಭ್ರಮಿಸಿದರು. ಮೂರನೇ ದಿನವಾದ ಶುಕ್ರವಾರ ಗೋಪೂಜೆ ನಡೆಯಲಿದೆ. ಶುಕ್ರವಾರದಂದು ಗೋವನ್ನು ಸಿಂಗರಿಸಿ, ಗೋವಿನ ಪೂಜೆ ಮಾಡಿ ಸಂಭ್ರಮಿಸುತ್ತಾರೆ.
ಹಬ್ಬದ ತಯಾರಿಗಾಗಿ ಕಳೆದ ಮೂನರ್ಾಲ್ಕು ದಿನಗಳಿಂದ ಜನರು ಮಾರುಕಟ್ಟೆಗಳತ್ತ ಮುಖಮಾಡಿದ್ದರು. ಅಗತ್ಯದ ವಸ್ತುಗಳನ್ನು ಕೊಳ್ಳಲು ಮುಗಿಬಿದ್ದಿದ್ದರು. ತರಕಾರಿಗಳು, ಗೋವೆಕಾಯಿ, ಕಬ್ಬು, ಅಡಿಕೆ ಸಿಂಗಾರ, ಪುಂಡಿ ನಾರಿನ ಹಗ್ಗ, ಗೋವುಗಳ ಕುತ್ತಿಗೆಗೆ ಕಟ್ಟುವ ಗಂಟೆ, ಆಕಾಶಬುಟ್ಟಿ, ಹೂವುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕೊಳ್ಳಲು ಜನಸಾಮಾನ್ಯರು ಮಾರುಕಟ್ಟೆಯ ಕಡೆಗೆ ಮುಖ ಮಾಡಿದ್ದು ಸಾಮಾನ್ಯವಾಗಿತ್ತು. ಮಾರುಕಟ್ಟೆಗಳಲ್ಲಿಯೂ ಕೂಡ ದೀಪಾವಳಿಯ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿತ್ತು. ತರಕಾರಿ ದರದಲ್ಲಿ ಸಾಮಾನ್ಯ ದಿನಕ್ಕಿಂದ 10-20 ರು. ಏರಿಕೆಯಾಗಿದ್ದರೆ, ದವಸ ಧಾನ್ಯಗಳಲ್ಲಿಯೂ ಕೂಡ 5-10 ರು. ಹೆಚ್ಚಳವಾಗಿತ್ತು. ಪುಂಡಿ ನಾರಿನ ಹಗ್ಗಕ್ಕೆ ಜೋಡಿಗೆ 20, 30, 40 ರು. ದರ ನಿಗದಿಯಾಗಿದ್ದರೆ ಹೂವುಗಳ ಬೆಲೆ ಮೊಳಕ್ಕೆ 30 ರಿಂದ 50 ರು. ಮುಟ್ಟಿತ್ತು. ಇದರಿಂದ ಜನಸಾಮಾನ್ಯರು ಅಗತ್ಯ ವಸ್ತುಗಳನ್ನು ಕೊಳ್ಳಲು ಹಿಂದೇಟು ಹಾಕಿದರು.
(ಎತ್ತ ನೋಡಿದರತ್ತ ಹಣತೆಗಳು)
ಪಟಾಕಿ ಸದ್ದು ಕೂಡ ಹಬ್ಬದ ಸಡಗರವನ್ನು ಹೆಚ್ಚಿಸಿದೆ. ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸಲು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದ್ದರೂ ಕೂಡ ಪಟಾಕಿ ಸಿಡಿಸುವ ಸಂತಸಕ್ಕೆ ತಡೆಯುಂಟಾಗಿಲ್ಲ. ಮಕ್ಕಳಾದಿಯಾಗಿ ಪಟಾಗಿ ಸಿಡಿಸಿ ಸಂತಸಪಟ್ಟರು. ಪಟಾಕಿ ಸಿಡಿಸುವ ಸಂಭ್ರಮವನ್ನು ಹೆಚ್ಚಿಸುವ ಸಲುವಾಗಿ ತರಹೇವಾರಿ ಪಟಾಕಿಗಳು ಅಂಗಡಿಗಳಲ್ಲಿ ಗಮನ ಸೆಳೆಯುತ್ತಿದ್ದವು. ಗ್ರಾಮೀಣ ಭಾಗದಲ್ಲಿಯೂ ಪಟಾಕಿ ಅಬ್ಬರ ಜೋರಾಗಿದೆ. ದೀಪಾವಳಿಯ ಹಬ್ಬ ಧಾಮರ್ಿಕವಾಗಿ ಮಾತ್ರ ಮಹತ್ವವನ್ನು ಪಡೆದುಕೊಂಡಿಲ್ಲ. ಬದಲಾಗಿ ಪರಿಸರ ಸ್ನೇಹಿ ಹಬ್ಬವಾಗಿದೆ. ಪ್ರಕೃತಿ ಮಾತೆಯನ್ನು ಪೂಜಿಸಲಾಗುತ್ತದೆ, ಆರಾಧಿಸಲಾಗುತ್ತದೆ. ಪ್ರಾಣಿ ಪಕ್ಷಿಗಳಿಗೂ ಈ ಹಬ್ಬದಲ್ಲಿ ಊಟೋಪಚಾರ ಮಾಡಿಸಲಾಗುತ್ತದೆ. ಪ್ರಾಣಿಗಳಲ್ಲಿ ದೇವರನ್ನು ಕಾಣಲಾಗುತ್ತದೆ.
ಬೆಳಕಿನ ಹಬ್ಬವೆಂದರೆ ಜೀವನದಲ್ಲಿ ಬೆಳಕನ್ನು ಹೊತ್ತಿಸುವಂತದ್ದು ಎನ್ನುವ ಭಾವನೆ ಹಲವು ಪ್ರದೇಶದಲ್ಲಿದೆ. ಯಾವುದೇ ಮಂಗಲಕಾರ್ಯ ಮಾಡುವುದಿದ್ದರೂ ದೀಪಾವಳಿಯ ನಂತರ ಎನ್ನುವ ನಂಬಿಕೆ ಬಹುತೇಕ ಕಡೆಗಳಲ್ಲಿದೆ. ಹಬ್ಬ ಆರಂಭವಾಗುತ್ತಿದ್ದಂತೆಯೇ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚುತ್ತಾರೆ. ಅದರಲ್ಲೂ ಶೇಂಗಾ ಎಣ್ಣೆ ದೀಪ ಶ್ರೇಷ್ಟವಾದದ್ದು ಎನ್ನಲಾಗುತ್ತದೆ. ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಹಣತೆಯ ದೀಪ ರಾರಾಜಿಸುತ್ತಿದ್ದರೆ ಪಟ್ಟಣಗಳಲ್ಲಿ ವಿದ್ಯುತ್ ದೀಪಗಳ ಆಕಾಶ ಬುಟ್ಟಿಗಳು ತೂಗಾಡುತ್ತವೆ. ವಿದ್ಯುತ್ ದೀಪಗಳ ಅಲಂಕಾರವನ್ನು ಪಟ್ಟಣದ ಮನೆ, ಅಂಗಡಿಗಳಲ್ಲಿ ಕಾಣಬಹುದಾಗಿದೆ.
(ಗೋವುಗಳನ್ನು ಓಡಸುತ್ತಿರುವುದು)
       ಹಬ್ಬ ಆರಂಭವಾಗುತ್ತಿದ್ದಂತೆಯೇ ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಯ ಆರಾಧನೆ ನಡೆಯುತ್ತದೆ. ಗೋವುಗಳಿಗೆ ಸಿಹಿ ಕಡುಬನ್ನು ಮಾಡಿ ತಿನ್ನಿಸಲಾಗುತ್ತದೆ. ಅದೇ ರೀತಿ ಗಂಟೆ, ವಿವಿಧ ನಮೂನೆಯ ದಂಡೆಗಳನ್ನು ಕಟ್ಟುವ ಮೂಲಕ ಗೋವುಗಳ ಶೃಂಗಾರ ಆರಂಭಗೊಳ್ಳುತ್ತದೆ. ಗೋಪೂಜೆ ದಿನವಾದ ಶುಕ್ರವಾರ ಗೋವುಗಳ ಪೂಜೆಯ ಜೊತೆ ವಿಶೇಷವಾದ ಭಕ್ಷ್ಯಗಳನ್ನು ನೀಡಲಾಗುತ್ತದೆ. ಇನ್ನಷ್ಟು ಅಲಂಕರಿಸಲಾಗುತ್ತದೆ. ಸಾಮೂಹಿಕವಾಗಿ ಗೋವುಗಳ ಶೃಂಗಾರ, ಪೂಜೆ, ಓಟ ಇತ್ಯಾದಿಗಳು ನಡೆಯುತ್ತವೆ. ಅಂದು ಸಂಜೆ ಬಲಿವೇಂದ್ರನನ್ನು ಕಳಿಸುವ ಮೂಲಕ ಹಬ್ಬದ ಸಂಭ್ರಮಕ್ಕೆ ತೆರೆ ಬೀಳುತ್ತದೆಯಾದರೂ ಬಿದಿಗೆಯ ದಿನ ವಸ್ತ್ರ ಉಡಿಕೆಯ ದಿನ ಅಥವಾ ವಸ್ತೊಳಿಕೆಯ ದಿನ ಎಂದು ಕರೆದು, ಹೊಸ ವಸ್ತ್ರವನ್ನು ತೊಟ್ಟು ಸಂಭ್ರಮಿಸುತ್ತಾರೆ. ಅಲ್ಲಿಗೆ ಹಬ್ಬ ಸಂಪೂರ್ಣಗೊಳ್ಳುತ್ತದೆ.

****
ಆಚರಣೆ'
(ಎತ್ತುಗಳ ಸಿಂಗಾರ)

ಬೆಳಕಿನ ಹಬ್ಬ ದೀಪಾವಳಿಯ ಮೂರನೇ ದಿನದ ಸಂಭ್ರಮ ಸಡಗರದಿಂದ ನಡೆಯಿತು. ಮನೆ ಮನೆಗಳಲ್ಲಿ ಗೋವಿನ ಪೂಜೆಯನ್ನು ಮಾಡುವ ಮೂಲಕ ಶಾಸ್ತ್ರ-ಸಂಪ್ರದಾಯ ಸಹಿತವಾಗಿ ಆಚರಿಸಲಾಯಿತು.
ಮುಂಜಾನೆ ಗೋವುಗಳನ್ನು ಸ್ನಾನ ಮಾಡಿಸುವುದರಿಂದ ಆರಂಭಗೊಳ್ಳುವ ಬಲಿಪಾಡ್ಯಮಿಯ ಸಡಗರ ನಿಧಾನವಾಗಿ ರಂಗೇರಿತು. ಅಡಿಕೆ, ಪಚೋಲಿ, ಪುಂಡಿ ನಾರು  ಸೇರಿದಂತೆ ಹಳ್ಳಿಗರೇ ತಯಾರಿಸಿದ ವಿಶಿಷ್ಟ ಬಗೆಯ ಹಾರದಿಂದ ಗೋವುಗಳನ್ನು ಅಲಂಕರಿಸುವುದು ವಾಡಿಕೆಯಾಗಿದೆ. ಶೇಡಿ ಹಾಗೂ ಕೆಮ್ಮಣ್ಣಿನಿಂದ ಗೋವುಗಳ ಮೈಮೇಲೆ ಚಿತ್ತಾರ ಬರೆಯುವ ಮೂಲಕ ಮತ್ತು ಗೋವುಗಳ ಕೋಡುಗಳಿಗೆ ಕೆಮ್ಮಣ್ಣು-ಶೇಡಿಯ ಬಣ್ಣ ಬಳಿದು ಸಿಂಗರಿಸಲಾಯಿತು. ಗೋ ಮಾತೆಯ ಪೂಜೆಯಲ್ಲಿ ಧನ್ಯತಾ ಭಾವ ಕಂಡುಕೊಂಡ ಆಸ್ತಿಕರು ಮನೆ ಮನೆಗಳಲ್ಲಿ ತಯಾರು ಮಾಡುವ ಹೋಳಿಗೆ, ಕಡುಬು ಸೇರಿದಂತೆ ವಿಶಿಷ್ಟ ತಿನಿಸುಗಳನ್ನೆಲ್ಲ ಗೋವುಗಳಿಗೆ ತಿನ್ನಿಸಿ ಸಂಭ್ರಮಿಸಿದರು. ಗೋವಿನ ರಕ್ಷಣೆಗಾಗಿ ಪಾರಂಪರಿಕವಾಗಿ ಆಚರಿಸುತ್ತ ಬಂದ ಹುಲಿಯಪ್ಪನ ಪೂಜೆಯನ್ನು ಸಾರ್ವತ್ರಿಕವಾಗಿ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಮನೆಯ ಆಧಾರ ಸ್ಥಂಭವೆಂದೇ ಪರಿಗಣಿಸಲ್ಪಡುವ ಪ್ರಧಾನ ಕಂಬಕ್ಕೂ ಪೂಜೆ ಮಾಡುವ ಸಂಪ್ರದಾಯ ಮಲೆನಾಡಿನ ವಿಶೇಷತೆಗಳಲ್ಲೊಂದಾಗಿದೆ. ತಮ್ಮ ಜಮೀನು ಮನೆಗಳನ್ನು ರಕ್ಷಿಸುವ ಗಣಗಳಿಗೆ ತೆಂಗಿನ ಕಾಯಿ ಒಡೆಯುವ ಮೂಲಕ ಪೂಜೆ ಸಲ್ಲಿಸುವುದೂ ಸಹ ಈ ಪ್ರದೇಶದ ವೈಶಿಷ್ಟ್ಯತೆಯಾಗಿದೆ. ಈ ಎಲ್ಲ ಪೂಜೆ ಗಳು ಮುಗಿದ ನಂತರವೇ ಮನೆ ಮನೆಗಳ ಗೋವುಗಳನ್ನು ಬಯಲಿಗೆ ಬಿಡಲಾಗುತ್ತದೆ.
(ಭೂತಪ್ಪನಿಗೆ ಪೂಜೆ)
ಗೋವಿನ ಬಯಲಿನಲ್ಲಿ ಎಲ್ಲರ ಮನೆಗಳಿಂದ ಆಗಮಿಸಿದ ಹಸುಗಳು ಒಂದೆಡೆ ಸೇರುತ್ತವೆ. ಈ ಬಯಲಿನಲ್ಲಿ ಎತ್ತುಗಳನ್ನು ಸಿಂಗರಿಸಿ ಓಡಿಸಲಾಯಿತು. ಓಡುವ ಎತ್ತು, ಹೋರಿಗಳ ಜೊತೆಗೆ ಅವುಗಳ ಮಾಲೀಕರೂ ಓಡಿ ಸಂಭ್ರಮಿಸಿದರು. ನಂತರ ಊರ ಸುತ್ತಮುತ್ತಲೂ ಇರುವ ಚೌಡಿ, ಬೀರಲು, ಜಟಕ, ನಾಗರು ಸೇರಿದಂತೆ ಸಮಸ್ತ ಊರು ರಕ್ಷಣೆ ಮಾಡುವ ದೇವಗಣಗಳನ್ನು ಪೂಜಿಸಲಾಯಿತು. ಮನೆ ಮನೆಗಳಲ್ಲಿ ಆಯುಧಗಳು, ಯಂತ್ರಗಳು, ಹೊಸ್ತಿಲು, ತುಳಸಿ ಕಟ್ಟೆ, ಕೊಟ್ಟಿಗೆ ಈ ಮುಂತಾದವುಗಳಿಗೆಲ್ಲ ಪೂಜೆ ನಿಡುವ ಮೂಲಕ ದೀಪಾವಳಿ ಪ್ರಕೃತಿಯ ಆರಾಧಿಸುವ ಹಬ್ಬ ಎನ್ನುವ ವಿಶೇಷಣಕ್ಕೆ ಪುಷ್ಟಿ ಸಿಕ್ಕಂತಾಯಿತು.
ಸಂಜೆ ತುಳಸಿ ಪೂಜೆಯ ನಂತರ ಬಲಿವೇಂದ್ರನನ್ನು ಕಳಿಸುವ ಸಂಪ್ರದಾಯ ನಡೆಯಿತು. ಈ ಸಂದರ್ಭದಲ್ಲಿ ಬಹುತೇಕ ಜನರು ಮನೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಜೊಂಜನ್ನು ಹಚ್ಚಿಡುತ್ತಾರೆ. ಮನೆಯಂಗಳದ ವರೆಗೂ ಶಿಂಡ್ಲೇ ಕಾಯಿಯ ಜೊಂಜನ್ನು ಉರಿಸಲಾಗುತ್ತದೆ. ತನ್ಮೂಲಕ ಬೆಳಕಿನ ಹಬ್ಬ ತೆರೆಯೆಳೆಯುತ್ತಿದ್ದಂತೆಯೇ ಬಲಿವೇಂದ್ರನನ್ನು ಮುಂದಿನ ವರ್ಷಕ್ಕಾಗಿಯೂ ಕರೆಯಲಾಯಿತು.
(ಭಾರ ಎತ್ತುವ ಸ್ಪರ್ಧೆ)
             ಹೊಸ ಬಟ್ಟೆಗಳನ್ನು ಧರಿಸುವ ಎಲ್ಲ ವಯೋಮಾನದವರು ಈ ಹಬ್ಬವನ್ನು ಹೊಸ ವರ್ಷವೆನ್ನುವ ನಂಬುಗೆಯಿಂದಲೂ, ಶೃದ್ಧೆಯಿಂದ ಆಚರಿಸುವುದು ವಿಶೇಷವಾಗಿದೆ. ಹಬ್ಬದ ದಿನ ಸಾರ್ವಜನಿಕ ಸ್ಥಳದಲ್ಲಿ ತೆಂಗಿನ ಕಾಯಿ ಒಡೆಯುವ ಜೂಜಾಟ ಸೇರಿದಂತೆ ಹಲವಾರು ವಿಧದ ಸಾಹಸವನ್ನು ಪ್ರದರ್ಶಿಸಬಲ್ಲ ಕ್ರೀಡೆಗಳನ್ನು ಪಣಕ್ಕಿಟ್ಟು ಆಡಲಾಗುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ರಾತ್ರಿಯಿಂದ ಬೆಳಗಿನ ತನಕವೂ ಜೂಜಾಟಗಳು ನಡೆಯುತ್ತವೆ. ಇಂದಿನ ಜೂಜಾಟಕ್ಕೆ ಬಹುತೇಕ ಯಾರೂ ಅಡ್ಡಿಪಡಿಸುವುದಿಲ್ಲ. ಇಲ್ಲಿ ಮನರಂಜನೆಯು ಪ್ರಾಮುಖ್ಯತೆ ಪಡೆಯುತ್ತದೆ.
ಸಿದ್ದಾಪುರ ತಾಲೂಕಿನ ಕಾನಸೂರು ಪಂಚಾಯತ ವ್ಯಾಪ್ತಿಯ ಅಡ್ಕಳ್ಳಿಯಲ್ಲಿ ಬಾರ ಎತ್ತುವ ಸ್ಫಧರ್ೆಯಗಳನ್ನು ಹಮ್ಮಿಕೊಳ್ಳುವ ಮೂಲಕ ವಿಶಿಷ್ಟವಾದಿ ದೀಪಾವಳಿಯನ್ನು ಆಚರಿಸಲಾಯಿತು. ಸುತ್ತಮುತ್ತಲ ಕಾನಸೂರು, ಕಲ್ಮಟ್ಟಿಹಳ್ಳಿ, ಮಲೆನಳ್ಳಿ, ಕಲ್ಮನೆ, ಅಡ್ಕಳ್ಳಿ, ಸೊಂಡ್ಲಬೈಲ್, ಮುತ್ತಮುರ್ಡ, ಕೋಡಸಿಂಗೆ, ಹಿತ್ಲಕೈ, ಬಾಳಗಾರ್, ದಂಟಕಲ್ ಈ ಮುಂತಾದ ಊರುಗಳ ಯುವಕರು 60 ಕೆ.ಜಿ.ಗೂ ಅಧಿಕ ಭಾರದ ಕಲ್ಲನ್ನು ಎತ್ತಲು ಪ್ರಯತ್ನಿಸಿದರು. ಹಲವು ಈ ಭಾರದ ಕಲ್ಲನ್ನು ಎತ್ತದೇ ಬಸವಳಿದರೆ ಕೆಲವು ಯುವಕರು ಅದನ್ನು ಎತ್ತಲು ಸಫಲರಾದರು. ಭಾರದ ಕಲ್ಲನ್ನು ಎತ್ತಿದ ಯುವಕರು ಕಲ್ಲನ್ನು ಹೊತ್ತುಕೊಂಡೇ ಸ್ಥಳೀಯ ಭೂತಪ್ಪನ ಕಟ್ಟೆಯನ್ನು ಮೂರು ಸಾರಿ ಪ್ರದಕ್ಷಿಣೆ ಹಾಕುವುದು ವಾಡಿಕೆ. ಹೀಗೆ ಮಾಡಿದ ಯುವಕರಿಗೆ ವಿಶೇಷ ಬಹುಮಾನಗಳನ್ನೂ ನೀಡಲಾಗುತ್ತದೆ. ಪ್ರತಿ ವರ್ಷ ನಿಗದಿತ ಸಂಖ್ಯೆಯಲ್ಲಿ ಭಾಗವಹಿಸುವ ಯುವಕರು ಕಲ್ಲನ್ನು ಎತ್ತಲು ವಿಫಲರಾದರೆ ಬಹುಮಾನವನ್ನು ಬರುವ ವರ್ಷಕ್ಕಾಗಿ ಕಾಯ್ದಿರಿಸಲಾಗುತ್ತದೆ. ಹೀಗೆ ಒಂದೊಂದು ಊರಿನಲ್ಲಿ ಒಂದೊಂದು ವೈವಿಧ್ಯತೆಯೊಂದಿಗೆ ಆಟಗಳಲ್ನಡೆದು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

**
(ಈ ಎರಡೂ ಲೇಖನಗಳು ಕನ್ನಡಪ್ರಭದಲ್ಲಿ ಪ್ರಕಟವಾಗಿದೆ )

Friday, October 24, 2014

ಬೆಂಗಾಲಿ ಸುಂದರಿ-35

(ಬೋಗ್ರಾದ ಖಾಲಿ ಖಾಲಿ ಬೀದಿ)
            ಕಾಣೆಯಾಗಿರುವವನು ವಿನಯಚಂದ್ರನಾದರೂ ಆತನ ಪರಮಾಪ್ತ ಗೆಳೆಯನಾಗಿ ಬದಲಾಗಿದ್ದ ಸೂರ್ಯನ್ ಪಟ್ಟ ಪಾಡು ಅಷ್ಟಿಷ್ಟಲ್ಲ. ತನ್ನದೇ ಸಾಮರ್ಥ್ಯ ಬಳಕೆ ಮಾಡಿ ವಿನಯಚಂದ್ರನನ್ನು ಹೇಗೆ ಹುಡುಕಲು ಸಾಧ್ಯ ಎನ್ನುವುದನ್ನೆಲ್ಲ ಪ್ರಯತ್ನಿಸಿದ್ದ. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಒಟ್ಟಾಗಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಸೂರ್ಯನ್ ಗೆ ಬಲವಾಗಿ ಅನ್ನಿಸುತ್ತಿತ್ತು. ತಾನೇ ಬಾಂಗ್ಲಾಕ್ಕೆ ಹೋಗಿ ಬಿಡಲಾ ಎಂದೂ ಆಲೋಚಿಸಿದ್ದ. ಆದರೆ ಬಾಂಗ್ಲಾ ನಾಡಿನಲ್ಲಿ ವಿಮಾನ, ರೈಲು, ರಸ್ತೆ, ದೂರವಾಣಿ ಇವೆಲ್ಲ ಹಿಂಸಾಚಾರದಿಂದ ಕಲಸುಮೇಲೋಗರವಾಗಿರುತ್ತವೆ. ಅಸ್ತವ್ಯಸ್ತವಾಗಿರುತ್ತವೆ ಎಂದುಕೊಂಡು ಸುಮ್ಮನಾಗಿದ್ದ. ತಮಿಳುನಾಡಿನ ಸರ್ಕಾರದಲ್ಲಿದ್ದ ರಾಜಕಾರಣಿಗಳು ಸಹಾಯ ಮಾಡುವ ಭರವಸೆಯನ್ನು ನೀಡಿದ್ದರು. ವಿನಯಚಂದ್ರ ಖಂಡಿತವಾಗಿಯೂ ಭಾರತಕ್ಕೆ ಮರಳುತ್ತಾನೆ ಎನ್ನುವ ವಿಶ್ವಾಸ ಸೂರ್ಯನದ್ದಾಗಿತ್ತು.
              ವಿನಯಚಂದ್ರ ಭಾರತಕ್ಕೆ ಮರಳುವಲ್ಲಿ ಏನೋ ಸಮಸ್ಯೆಯಾಗಿದೆ. ಆದರೆ ಏನೆಂಬುದು ಗೊತ್ತಾಗುತ್ತಿಲ್ಲ ಎಂದುಕೊಂಡ. ಯಾವುದಕ್ಕೂ ಇರಲಿ ಎಂದುಕೊಂಡ ಸೂರ್ಯನ್ ಮಧುಮಿತಾ ಭಾರತದಲ್ಲಿ, ಭಾರತದ ನಿವಾಸಿಯಾಗಿ ಉಳಿಯಲು ಬೇಕಾದ ದಾಖಲೆಪತ್ರಗಳನ್ನು ತಯಾರು ಮಾಡಲು ಹೊರಟಿದ್ದ. ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿದ್ದಾಳೆ ಎನ್ನುವುದನ್ನು ತಪ್ಪಿಸಿ, ಮಧುಮಿತಾ ಭಾರತದ ನಿವಾಸಿ ಎಂದು ತೋರಿಸಲು ಅನುವಾಗುವಂತೆ ಅಗತ್ಯ ಕ್ರಮಗಳನ್ನು ಸೂರ್ಯನ್ ಕೈಗೊಳ್ಳಲು ಆರಂಭಿಸಿದ್ದ. ಏನೇ ಸಮಸ್ಯೆ ಬಂದರೂ ಅಗತ್ಯದ ದಾಖಲಾತಿ ಪತ್ರಗಳು ಸಹಾಯ ನೀಡಬೇಕು ಎಂಬುದು ಆತನ ಉದ್ದೇಶವಾಗಿತ್ತು. ತಮಿಳುನಾಡು ಸರ್ಕಾರದ ಸಚಿವರು ಈ ನಿಟ್ಟಿನಲ್ಲಿ ಸೂರ್ಯನ್ ಸಹಾಯಕ್ಕೆ ಸಂಪೂರ್ಣವಾಗಿ ನಿಂತುಬಿಟ್ಟಿದ್ದರು. ಆದ್ದರಿಂದ ಸೂರ್ಯನ್ ಗೆ ಎಲ್ಲ ರೀತಿಯ ಅನುಕೂಲವೂ ಆಯಿತು.

***

          ರಾತ್ರಿಯಲ್ಲೆಲ್ಲೋ ಎಚ್ಚರಾಯಿತು ಮಧುಮಿತಾಳಿಗೆ. ಚಳಿಯಾಗದಂತೆ ಬೆಚ್ಚಗೆ ಹಿಡಿದಿಡಲು ವಿನಯಚಂದ್ರ ಪ್ರಯತ್ನ ನಡೆಸುತ್ತಿದ್ದ. ಕೊನೆಗೆ ಆಕೆಯನ್ನು ಬೆಚ್ಚಗೆ ತಬ್ಬಿ ಹಿಡಿದು ಕುಳಿತಿದ್ದ. ವಿನಯಚಂದ್ರನ ಮೇಲೆ ಮತ್ತಷ್ಟು ಗೌರವ ಮೂಡಿತು ಮಧುಮಿತಾಳಿಗೆ. ವಿನಯಚಂದ್ರನಿಗೆ ನಿದ್ದೆ ಮಾಡಲು ಹೇಳಿದ ಮಧುಮಿತಾ ತಾನು ಎಚ್ಚರಿರುವುದಾಗಿ ಹೇಳಿದಳು. ಅದಕ್ಕೆ ಪ್ರಾರಂಭದಲ್ಲಿ ವಿನಯಚಂದ್ರ ಒಪ್ಪಲಿಲ್ಲ. ಕೊನೆಗೊಮ್ಮೆ ಹಿತವಾಗಿ ಮುತ್ತು ನೀಡಿ ವಿನಯಚಂದ್ರನನ್ನು ಒಪ್ಪಿಸಿದಳು. ಅಲ್ಲೇ ಮಧುಮಿತಾಳ ಭುಜಕ್ಕೆ ಒರಗಿ ನಿದ್ರಿಸಲು ಆರಂಭಿಸಿದ ವಿನಯಚಂದ್ರ.
         ಮಧುಮಿತಾಳ ಮನಸ್ಸಿನ ತುಂಬ ಕಳೆದೊಂದು ತಿಂಗಳ ಅವಧಿಯಲ್ಲಿ ನಡೆದಿದ್ದ ಘಟನೆಗಳು ಸುಳಿದುಬರಲು ಆರಂಭಿಸಿದ್ದವು. ಭಾರತದ ಯಾವುದೋ ಮೂಲೆಯ ಹುಡುಗನ ಪರಿಚಯವಾಗಿ ಆತನನ್ನು ತಾನು ಪ್ರೀತಿಸುತ್ತೇನೆ ಎಂದು ಕನಸಿನಲ್ಲಿಯೂ ಮಧುಮಿತಾ ಅಂದುಕೊಂಡಿರಲಿಲ್ಲ. ವಿನಯಚಂದ್ರನ ಪರಿಚಯವಾಗಿದ್ದು, ಪರಿಚಯ ಸ್ನೇಹಕ್ಕೆ ತಿರುಗಿದ್ದು, ಬಂದ ಬೆಳೆದಿದ್ದು, ನಾಚಿಕೊಂಡು ನಾಚಿಕೊಂಡು ಆತನೇ ಪ್ರೇಮನಿವೇದನೆ ಮಾಡಿದ್ದು, ಇದಕ್ಕೇ ಕಾಯುತ್ತಿದ್ದೆನೋ ಎಂಬಂತೆ ಒಪ್ಪಿಕೊಂಡಿದ್ದು ಎಲ್ಲವೂ ಕಣ್ಣೆದುರು ಸುಳಿಯಿತು. ಅಲ್ಲಿಯವರೆಗೆ ಹಿತವಾಗಿದ್ದ ಬದುಕು ಆ ನಂತರದ ದಿನಗಳಲ್ಲಿ ಏನೆಲ್ಲ ತಿರುವುಗಳನ್ನು ಪಡೆದುಕೊಂಡು ಬಿಟ್ಟಿತಲ್ಲ ಎನ್ನುವುದು ನೆನಪಾಗಿ ಬೆದರಿದಳು ಮಧುಮಿತಾ.
          ಬಾಂಗ್ಲಾ ದೇಶದಲ್ಲಿ ಭುಗಿಲೆದ್ದ ಹಿಂಸಾಚಾರ, ಹಿಂದೂಗಳನ್ನೇ ಗುರಿಯಾಗಿಟ್ಟುಕೊಂಡು ನಡೆಸಿದ ದಾಳಿಗಳು, ಅದಕ್ಕೆ ಬಲಿಯಾದ ತನ್ನ ಕುಟುಂಬ, ಸಲೀಂ ಚಾಚಾನ ಆತಿಥ್ಯ, ಆತನ ಮುಂದಾಳತ್ವದಲ್ಲೇ ಭಾರತ ತಲುಪಲು ಹೊರಟಿದ್ದು, ಸಲೀಂ ಚಾಚಾನ ನಿಧನ ನಂತರದ ತಮ್ಮ ಬದುಕು ಎಲ್ಲವೂ ನೆನಪಾಗಿ ಕಣ್ಣೀರಿನ ರೂಪದಲ್ಲಿ ಧರೆಗಿಳಿಯಲು ಪ್ರಯತ್ನಿಸಿತು. ತಾನು ಅಳಲಾರಂಭಿಸಿದರೆ ವಿನಯಚಂದ್ರನ ನಿದ್ದೆಗೆಲ್ಲಿ ಭಂಗ ಬರುತ್ತದೆಯೊ ಎಂದುಕೊಂಡ ಮಧುಮಿತಾ ಕಣ್ಣೀರನ್ನು ಒರೆಸಿಕೊಂಡಳು.
(ಬೋಗ್ರಾದಲ್ಲಿರುವ ಒಂದು ಬೌದ್ಧ ಧಾಮ)
          ಇಬ್ಬನಿ ನಿಧಾನವಾಗಿ ಇಳಿಯಲು ಆರಂಭಿಸಿತ್ತು. ಬೆಳಗಿನ ಜಾವವಿರಬೇಕು ಎಂದುಕೊಂಡಳು ಮಧುಮಿತಾ. ಮೂರ್ನಾಲ್ಕು ತಾಸಿನ ಚುಟುಕು ನಿದ್ದೆ ಮಾಡಿದ ವಿನಯಚಂದ್ರ ಎದ್ದ. ಕಣ್ಣು ಮುಚ್ಚಿಕೊಂಡೇ ಮೆಲು ದನಿಯಲ್ಲಿ `ಮಧು..' ಎಂದ.
         `ಹೂಂ..'ಅಂದಳು. `ಹೀಗೆ ಇದ್ದು ಬಿಡೋಣವಾ..?' ಎಂದ. ಮಾತಾಡಲಿಲ್ಲ ಮಧುಮಿತಾ. `ನಿನ್ನ ಭುಜ ಎಷ್ಟೆಲ್ಲ ಮೆತ್ತಗಿದೆ. ಸದಾ ನಿನ್ನ ಭುಜ ಹೀಗೆ ಇರುತ್ತದೆ. ನನ್ನ ತಲೆಗೆ ದಿಂಬಿನಂತೆ.. ಅಂತಾದರೆ ಎಷ್ಟು ಶತಮಾನಗಳಾದರೂ ಹೀಗೆ ಇದ್ದು ಬಿಡೋಣ..' ಎಂದು ತುಂಟತನದಿಂದ ಕೇಳಿದ್ದ. `ಥೂ.. ಹೋಗೋ..ಯಾವಾಗಲೂ ನಿನಗೆ ಇಷ್ಟೇ' ಎಂದಿದ್ದಳು ಅವಳು.
           ಮೂಡಣದಲ್ಲಿ ನೇಸರ ನಿಧಾನವಾಗಿ ಏರಿ ಬರುತ್ತಿದ್ದ. ಬಾನಿನ್ನೂ ಕಿತ್ತಳೆ ವರ್ಣದಿಂದ ರಂಗು ರಂಗಾಗಿ ಕಾಣಲು ಆರಂಭಿಸುತ್ತಿದ್ದಾಗಲೇ ರಾತ್ರಿ ಯಾವ ರೀತಿ ಕಂಪೌಂಡ್ ಗೋಡೆ ಹಾರಿದ್ದರೋ ಅದೇ ದಾರಿಯಲ್ಲಿ ಮರಳಿ ಹೊರಟರು. ರಾತ್ರಿ ಎತ್ತರ ಗೊತ್ತಾಗಿರಲಿಲ್ಲವಾದರೂ ಬೆಳಗಿನ ವೇಳೆಗೆ ಯಾಕೋ ತುಂಬ ಎತ್ತರವಿದೆ ಎನ್ನಿಸಿತು. ಕಂಪೌಂಡ್ ಏರಿದ ವಿನಯಚಂದ್ರ ಮಧುಮಿತಾಳನ್ನು ಹತ್ತಿಸಿಕೊಳ್ಳಲು ಕೈಚಾಚಿದ. ಆಕೆಯ ಭಾರ ತೀವ್ರವಾಗಿ ದಬಾರನೆ ಕೆಳಕ್ಕೆ ಬಿದ್ದ. ಕೊಂಚ ನೋವಾಯಿತು. ಎರಡನೇ ಸಾರಿ ತಾನು ಕಂಪೌಂಡ್ ಏರುವ ಬದಲು ಆಕೆಯನ್ನು ಹಿಡಿದು ಹತ್ತಿಸಿದ. ನಿಧಾನವಾಗಿ ಕಂಪೌಂಡ್ ದಾಟಿಕೊಂಡರು.
        ಬೋಗ್ರಾ ನಗರಿ ಆಗ ತಾನೇ ಮುಂಜಾವಿನ ಸುಖನಿದ್ದೆಯಿಂದ ಎಚ್ಚರವಾಗುತ್ತಿತ್ತು. ಬೀದಿ ಬೀದಿಗಳು ಖಾಲಿ ಖಾಲಿಯಾಗಿದ್ದವು. ಇವರು ಮುಂದಕ್ಕೆ ಹೊರಡಲೇ ಬೇಕಾಗಿತ್ತು. ಭಾರತದ ಗಡಿಗೆ ಹತ್ತಿರದಲ್ಲಿರುವ ರಂಗಪುರಕ್ಕೆ ಎಷ್ಟು ಸಾಧ್ಯವೋ ಅಷ್ಟು ಬೇಗ ಹೋಗಬೇಕಾಗಿತ್ತು. ಬಸ್ಸಿನ ಮೂಲಕ ಸಾಗಲು ಕನಿಷ್ಟ ಆರೆಂಟು ಗಂಟೆಗಳ ಕಾಲ ಪ್ರಯಾಣ ಮಾಡಲೇಬೇಕಾಗಿತ್ತು. ನಡೆಯಲಿಕ್ಕೆ ಹೊರಟರೆ ಮೂರು ದಿನಗಳಾದರೂ ಸಾಗಬೇಕಾಗಿತ್ತು. ವಿನಯಚಂದ್ರ ಮಧುಮಿತಾಳ ಬಳಿ ಈ ವಿಷಯದ ಕುರಿತು ಚರ್ಚೆ ಮಾಡಿದ. ಕಿಸೆಯೊಳಗಿನ ಹಣವನ್ನು ಎಣಿಸಿಕೊಂಡ. ರಂಗಪುರವನ್ನು ತಲುಪಲು ಸಾಕಾಗುವಷ್ಟು ಹಣವಿರಲಿಲ್ಲ. ಮುಂದೇನು ಮಾಡುವುದು ಎನ್ನುವ ಆಲೋಚನೆ ಇಬ್ಬರಲ್ಲೂ ಕಾಡಿತು. ಕೊನೆಗೆ ಮಧುಮಿತಾಳೇ `ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಹೋಗೋಣ.. ಬಸ್ಸಿನಲ್ಲೇ ಆದರೆ ಕಂಡಕ್ಟರನ ಬಳಿ ಕಾಡಿ ಬೇಡಿ ಪ್ರಯಾಣ ಮಾಡೋಣ. ಆತ ನಮ್ಮನ್ನು ಕರೆದೊಯ್ದರೆ ಸರಿ. ಇಲ್ಲವಾದರೆ ಅಲ್ಲೆ ಎಲ್ಲಾದರೂ ಇಳಿದು ನಡೆದು ಹೊರಡೋಣ.. ಏನಂತೀಯಾ..?' ಎಂದಳು. ವಿನಯಚಂದ್ರ ಒಪ್ಪಿಕೊಂಡಿದ್ದ.
         ಬೋಗ್ರಾದ ಬಸ್ಸು ನಿಲ್ದಾಣದ ಕಡೆಗೆ ತೆರಳಿದರು. ಮುಂಜಾವಿನಲ್ಲಿ ಖಾಲಿ ಖಾಲಿಯಾಗಿದ್ದ ಬೋಗ್ರಾದಲ್ಲಿ ನಡೆಯುವುದೆಂದರೆ ವಿಚಿತ್ರ ಖುಷಿಯನ್ನು ನೀಡುತ್ತಿತ್ತು. ಎಲ್ಲಿ ನೋಡಿದರೂ ಜನರಿರಲಿಲ್ಲ. ಆಗೊಮ್ಮೆ ಈಗೊಮ್ಮೆ ವಾಹನಗಳು ಭರ್ರೆಂದು ಸಾಗುತ್ತಿದ್ದವು. ಸೈಕಲ್ ರಿಕ್ಷಾಗಳ ಟ್ರಿಣ್ ಟ್ರೀಣ್ ಸದ್ದು ಕೇಳಿಸುತ್ತಿತ್ತು. ಕೆಲ ಹೊತ್ತಿನಲ್ಲಿಯೇ ಬೋಗ್ರಾ ಬಸ್ಸು ನಿಲ್ದಾಣ ಸಿಕ್ಕಿತು. ಅಲ್ಲಿಗೇ ಹೋಗಿ ಕೆಲ ಹೊತ್ತು ಕಾದರೂ ಬಸ್ಸು ಸಿಗಲಿಲ್ಲ. ಒಂದು ತಾಸಿನ ನಂತರ ಲಡಕಾಸಿ ಬಸ್ಸೊಂದು ನಿಧಾನವಾಗಿ ಬಂದಿತು. ವಿನಯಚಂದ್ರ ಬೇಗನೇ ಬಸ್ಸನ್ನೇರಲು ಹೊರಟವನು ಬಸ್ಸನ್ನು ನೋಡಿ ಕೆಲ ಕಾಲ ಹಿಂದೇಟು ಹಾಕಿದ. ಈ ಬಸ್ಸು ರಂಗಪುರವನ್ನು ತಲುಪಬಲ್ಲದೇ ಎಂದೂ ಆಲೋಚಿಸಿದ. ವಿನಯಚಂದ್ರನ ಮನದಾಳವನ್ನು ಅರಿತಂತೇ ಮಾತನಾಡಿದ ಮಧುಮಿತಾ `ಬಾಂಗ್ಲಾದಲ್ಲಿ ಇದಕ್ಕಿಂತ ಲಡಕಾಸಿ ಬಸ್ಸುಗಳಿವೆ. ದೂರ ದೂರಿಗೆ ಇವುಗಳ ಮೂಲಕವೇ ಪ್ರಯಾಣ ಕೈಗೊಳ್ಳೋದು. ಏನೂ ಚಿಂತೆ ಮಾಡಬೇಡ. ಇದರಲ್ಲೇ ಹೋಗೋಣ..' ಎಂದು ಖಂಡತುಂಡವಾಗಿ ಹೇಳಿದ್ದಳು. ವಿನಯಚಂದ್ರ ಬಸ್ಸನ್ನೇರಿದ್ದ.
       ಖಾಲಿಯಿದ್ದ ಬಸ್ಸು ಹೊರಡುವ ಮುನ್ನ ಬಸ್ಸಿನಲ್ಲಿ ಒಬ್ಬಾತ ಬಾಳೆ ಹಣ್ಣನ್ನು ಮಾರಲು ತಂದಿದ್ದ. ಹೊಟ್ಟೆಗೆ ಸಾಕಾಗುವಷ್ಟು ಹಣ್ಣನ್ನು ತಿಂದರು. ವಿನಯಚಂದ್ರ ಮತ್ತೊಮ್ಮೆ ಜೇಬಿನಲ್ಲಿದ್ದ ಹಣವನ್ನು ಎಣಿಸಿಕೊಂಡ. ಅಷ್ಟರಲ್ಲಿ ಬಸ್ಸಿನ ಕಂಡಕ್ಟರ್ ಬಂದಿದ್ದ. ಕೊನೆಗೆ ಕಂಡಕ್ಟರ್ ಬಳಿ ತನ್ನಲ್ಲಿ ಇರುವ ಹಣದ ಬಗ್ಗೆ ತಿಳಿಸಿ ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯ ತನಕ ಕರೆದೊಯ್ಯಿರಿ ಎಂದ. ಹಣವನ್ನು ಎಣಿಸಿದ ಕಂಡಕ್ಟರ್ `ಪೀರ್ ಗಂಜ್ ವರೆಗೆ ಪ್ರಯಾಣ ಮಾಡಬಹುದು..' ಎಂದು ಹೇಳಿ ಟಿಕೇಟ್ ನೀಡಿದ. `ಪೀರ್ ಗಂಜಿನಿಂದ ರಂಗಪುರ ಎಷ್ಟು ದೂರ..?' ಎಂದು ಕೇಳಿದ ವಿನಯಚಂದ್ರ. `ಬಸ್ಸಿನಲ್ಲಾದರೆ ಎರಡು ತಾಸುಗಳ ಪಯಣ ತಾಸುಗಳ ಪ್ರಯಾಣ..' ಎಂದು ಕಂಡಕ್ಟರ್ ಮುಂದಕ್ಕೆ ತೆರಳಿದ್ದ.
         ಇವರಂದುಕೊಂಡದ್ದಕ್ಕಿಂತ ನಿಧಾನವಾಗಿ ಬಸ್ಸು ತೆರಳಲು ಆರಂಭಿಸಿತು. ಬೋಗ್ರಾದ ಬಸ್ ನಿಲ್ದಾಣದಿಂದ ಬಸ್ಸು ಮುಂದಕ್ಕೆ ಹೊರಡುವ ವೇಳೆಗೆ ಸೂರ್ಯ ಆಗಲೇ ಬಾನಿನ ಮೇಲಕ್ಕೆ ಬರಲು ಆರಂಭಿಸಿದ್ದ. `ಬಾಳೆಹಣ್ಣು ತಿಂದಿದ್ದು ಒಳ್ಳೇದೇ ಆಯ್ತು.. ಇಲ್ಲವಾಗಿದ್ದರೆ ಉಪವಾಸವಿರಬೇಕಿತ್ತು.. ಈ ಬಸ್ಸು ಯಾಕೋ ಬಹಳ ನಿಧಾನ ಹೋಗ್ತಾ ಇದೆ ಕಣೆ ಮಧು..' ಎಂದ ವಿನಯಚಂದ್ರ. `ಹೂಂ..' ಅಂದ ಮಧುಮಿತಾ ಸುಮ್ಮನಾದಳು. ಬಸ್ಸು ಆಮೆಗತಿಯಲ್ಲಿಯೇ ಮುಂದುವರಿಯುತ್ತಿತ್ತು. ಬೋಗ್ರಾದಲ್ಲಿ ನಿಧಾನಕ್ಕೆ ಜನಸಂದಣಿಯೂ ಹೆಚ್ಚಾಗುತ್ತಿತ್ತು. ಮೂರ್ನಾಲ್ಕು ತಿರುವುಗಳನ್ನು ದಾಟಿ ರಂಗಪುರದ ಕಡೆಗೆ ಆಗಮಿಸುವ ಮುಖ್ಯ ರಸ್ತೆಗೆ ಬರುವಷ್ಟರಲ್ಲಿ ಬಹಳಷ್ಟು ಹೊತ್ತು ಸರಿದಿದ್ದವು.

(ಮುಂದುವರಿಯುತ್ತದೆ)

Tuesday, October 21, 2014

ದೀಪ ಬೆಳಗೋಣ

ಬನ್ನಿ ದೀಪವ ಬೆಳಗೋಣ
ಕತ್ತಲೆಯನೋಡಿಸೋಣ |

ನೂರು ಕಾಲದ ಜಡವ
ದೂರಕೆ ತಳ್ಳೋಣ
ಹೊಸ ಚೈತನ್ಯದ ಬತ್ತಿಯ
ದೀಪ ಬೆಳಗೋಣ |

ಗಾಡಾಂಧಕಾರವನು
ತೊಡೆದು ಹಾಕೋಣ
ಹೊಸ ಮಾನವತೆಯ ತತ್ವ
ಬೆಳಗಿ ಬೆಳಗೋಣ |

ಪ್ರೀತಿಯ ಹೊಸ
ತೇರನೆಳೆಯೋಣ
ಕಾರುಣ್ಯದ ಹೊಸ
ಬೀಜ ಬಿತ್ತೋಣ |

ನಮ್ಮೊಳಗಣ ತಮವ
ದಮನ ಮಾಡೋಣ
ಹೊಸ ಸತ್ವ ನವ ಚೈತ್ರ
ಎತ್ತಿ ಹಿಡಿಯೋಣ |

ದೀಪ ಬೆಳಗೋಣ
ಬನ್ನಿ ದೀಪವಾಗೋಣ
ಕತ್ತಲೆಯ ಬದುಕಿಗೆ
ಬೆಳಕ ತುಂಬೋಣ |

Monday, October 20, 2014

ಬೆಂಗಾಲಿ ಸುಂದರಿ-34

(ಬೋಗ್ರಾದ ಕಾಲುಸಂಕ)
              ಬೋಗ್ರಾದಲ್ಲಿ ಕಾಲಿಡುವ ವೇಳೆಗೆ ಸಾಕಷ್ಟು ಕತ್ತಲಾಗಿತ್ತು. ಬೋಗ್ರಾದಿಂದ ಮುಂದಕ್ಕೆ ಸಾಗುವ ಬಗ್ಗೆ ವಿನಯಚಂದ್ರ ಹಾಗೂ ಮಧುಮಿತಾ ಯಾವುದೇ ಆಲೋಚನೆ ನಡೆಸಿರಲಿಲ್ಲ. ಬೋಗ್ರಾದಲ್ಲೇ ಉಳಿಯಬೇಕೆ, ಅಥವಾ ತಕ್ಷಣವೇ ಮುಂದಕ್ಕೆ ಸಾಗಬೇಕೆ ಎನ್ನುವುದೂ ಸ್ಪಷ್ಟವಾಗಿರಲಿಲ್ಲ. ಇಬ್ಬರಿಗೂ ಸಾಕಷ್ಟು ಆಯಾಸವಾಗಿತ್ತು. ಹೆಜ್ಜೆ ಕಿತ್ತಿಡಲೂ ಆಗದಷ್ಟು ನಿತ್ರಾಣರಾಗಿದ್ದರು. ಮುಂದಕ್ಕೆ ಪ್ರಯಾಣ ಮಾಡುವ ಮನಸ್ಸು ಇಬ್ಬರಲ್ಲೂ ಇರಲಿಲ್ಲ. ಹಾಗೆಂದು ಅಲ್ಲೇ ಉಳಿಯೋಣವೆಂದರೆ ಕೈಯಲ್ಲಿನ ದುಡ್ಡು ಕೂಡ ಬಹಳ ಕಡಿಮೆ ಪ್ರಮಾಣದಲ್ಲಿತ್ತು. ಬೋಗ್ರಾದಲ್ಲಿ ರೂಮು ಮಾಡಿ ಉಳಿದರೆ ಮುಂದಿನ ಪ್ರಯಾಣಕ್ಕೆ ತೊಂದರೆಯಾಗುವ ಸಾಧ್ಯತೆಗಳು ಅಧಿಕವಾಗಿದ್ದವು. ಮಧುಮಿತಾಳ ಬಳಿ ವಿನಯಚಂದ್ರ ಕೇಳುವ ಮೊದಲೆ ಆಕೆಯೇ ಇಲ್ಲಿಯೇ ಉಳಿದುಬಿಡೋಣ ಎಂದಳು. ವಿನಯಚಂದ್ರ ಹೂಂ ಅಂದಿದ್ದ.
             ಬೋಗ್ರಾ ಪಟ್ಟಣದಲ್ಲಿ ರೂಮುಗಳ ದರ ಸಾಕಷ್ಟು ಹೆಚ್ಚಾಗಿದ್ದ ಕಾರಣ ಉಳಿಯಲು ಒಂದೆರಡು ಕಡೆಗೆ ಜಾಗ ಹುಡುಕಾಟ ನಡೆಸಿದರು. ಆದರೆ ಎಲ್ಲೂ ಇವರಿಗೆ ಅಗತ್ಯವಾದ ಸ್ಥಳ ದೊರಕಲಿಲ್ಲ. ಕೊನೆಗೆ ಅನಿವಾರ್ಯವಾಗಿ ಬೋಗ್ರಾದ ಪಾರ್ಕೊಂದರಲ್ಲಿ ರಾತ್ರಿ ಕಳೆಯುವ ನಿರ್ಧಾರಕ್ಕೆ ಬಂದರು. ಸನಿಹದ ಹೊಟೆಲೊಂದರಲ್ಲಿ ಊಟದ ಶಾಸ್ತ್ರ ಮುಗಿಸಿ ಉದ್ಯಾನದ ಬಳಿ ಬಂದರೆ ಬಾಗಿಲು ಹಾಕಿತ್ತು. ಒಬ್ಬ ಕಾವಲುಗಾರ ಪಾರ್ಕನ್ನು ಕಾಯುತ್ತ ನಿಂತಿದ್ದ. ಉದ್ಯಾನದೊಳಗೆ ಬಿಡಲು ಆತ ಖಂಡಿತ ಒಪ್ಪಲಿಕ್ಕಿಲ್ಲ ಎಂದುಕೊಂಡರು. ಕೊನೆಗೆ ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಆತನ ಕಣ್ಣು ತಪ್ಪಿಸಿ ಪಕ್ಕದಲ್ಲೆಲ್ಲೋ ಹಾದು ಬಂದು ಉದ್ಯಾನದ ಗೋಡೆಯನ್ನು ಹಾರಿ ಒಳಹೊಕ್ಕರು. ಅಲ್ಲೊಂದು ಕಡೆಗೆ ಮರದ ಅಡಿಯಲ್ಲಿ ಕುಳಿತರು. ಆ ರಾತ್ರಿ ಅಲ್ಲೇ ಉಳಿದು ಮರುದಿನ ಮುಂದಿನ ಪ್ರಯಾಣ ನಡೆಸಬೇಕಿತ್ತು.
             ಮರದ ಅಡಿಯಲ್ಲಿ ಕುಳಿತ ವಿನಯಚಂದ್ರನ ಕಾಲಿನ ಮೇಲೆ ಮಧುಮಿತಾ ಮಲಗಿದಳು. ತಿಳಿ ಬೆಳದಿಂಗಳು ಹಿತವಾಗಿತ್ತು. ಮರದ ಎಲೆಗಳ ನಡುವೆ ಆಗೀಗ ಇಣುಕುತ್ತಿದ್ದ ಬೆಳದಿಂಗಳ ಕಿರಣಗಳು ಇಬ್ಬರ ಮುಖದ ಮೇಲೆ ಕಣ್ಣಾಮುಚ್ಚಾಲೆ ಆಡುತ್ತಿದ್ದವು. ತುಸುವೇ ಬೀಸುತ್ತಿದ್ದ ತಂಗಾಳಿ ಮನಸ್ಸಿನಲ್ಲಿ ಉಲ್ಲಾಸವನ್ನು ಉಂಟುಮಾಡುತ್ತಿತ್ತು. ದೂರದಿಂದ ನೋಡಿದರೆ ಸ್ವರ್ಗದ ದೇವದಂಪತಿಗಳು ಬಂದು ಉದ್ಯಾನದಲ್ಲಿ ಕುಳಿತು ರಸನಿಮಿಷಗಳನ್ನು ಕಳೆಯುತ್ತಿದ್ದಾರೇನೋ ಎನ್ನಿಸುವಂತಿತ್ತು. ಮಧುಮಿತಾ ಖುಷಿಯಲ್ಲಿದ್ದಳು. ವಿನಯಚಂದ್ರ ಕೀಟಲೆಯ ಮೂಡಿನಲ್ಲಿದ್ದ.
            `ಈ ರಾತ್ರಿ ದೀರ್ಘವಾಗಲಿ ಅನ್ನಿಸುತ್ತಿದೆ ವಿನೂ..' ಎಂದಳು ಮಧುಮಿತಾ.
            `ಹೌದು.. ನನಗೂ ಹಾಗೇ ಅನ್ನಿಸುತ್ತಿದೆ.. ನೀನು ಜೊತೆಗೆ ಇದ್ದರೆ ಹಿತವೆನ್ನಿಸುತ್ತಿದೆ.. ಈ ರಾತ್ರಿ ಹೀಗೇ ಇರಲಿ ದೇವರೆ.. ಅಂದುಕೊಳ್ಳುತ್ತಿದ್ದೇನೆ ಕಣೇ..' ಅಂದ ವಿನಯಚಂದ್ರ.
            `ಮತ್ತೆ ಭಾರತ ತಲುಪೋದು ಕ್ಯಾನ್ಸಲ್ಲಾ..?' ಎಂದು ತಮಾಷೆ ಮಾಡಿದಳು ಮಧುಮಿತಾ.
            ವಿನಯಚಂದ್ರ `ಓಹೋ..  ನನಗೇ ಕಾಲೆಳೆಯೋದಾ?' ಎಂದ. ಕಾಲ ಮೇಲೆ ಮಲಗಿದ್ದ ಮಧುಮಿತಾಳನ್ನು ತನ್ನೆರಡೂ ಕೈಗಳಿಂದ ಬಾಚಿ ತಬ್ಬಿ ಹಿಡಿದು ತುಟಿಗಳ ಮೇಲೆ ತುಟಿಯನ್ನೊತ್ತಿ ಹಿತವಾಗಿ ಮುತ್ತು ಕೊಟ್ಟ. `ಥೂ... ಬಿಡು ಮಾರಾಯಾ..' ಎಂದಳಾದಳೂ ಮಧುಮಿತಾ ವಿನಯಚಂದ್ರನ ತಬ್ಬುಗೆಯನ್ನು ಹಿತವಾಗಿ ಅನುಭವಿಸಿದಳು. ಹಾಗೇ ಮತ್ತೊಮ್ಮೆ ಮುತ್ತನ್ನು ಕೊಟ್ಟ ವಿನಯಚಂದ್ರ. ಮಧುಮಿತಾ ಹಿತವಾಗಿ ನಾಚಿದಳು.
             ಹೀಗೇ ಅದೆಷ್ಟು ಹೊತ್ತು ಜೊತೆಯಲ್ಲಿದ್ದರೋ. ರಾತ್ರಿಯ ಬೀದಿ ನಾಯಿಗಳ ವಿಕಾರವಾದ ಕೂಗಿಗೆ ಬೆಚ್ಚಿ ಎಚ್ಚೆತ್ತರು. ವಿನಯಚಂದ್ರ ಒಮ್ಮೆ ಸರಿದು ಕುಳಿತ. ಕೊನೆಗೆ ವಿನಯಚಂದ್ರ ಮಧುಮಿತಾಳ ಬಳಿ `ಈಗ ನೀನು ಮಲಗಿ ನಿದ್ರಿಸು. ನಾನು ಕಾವಲು ಕಾಯುತ್ತಿರುತ್ತೇನೆ. ನಂತರ ನಾನು ಮಲಗುತ್ತೇನೆ..' ಎಂದ. ಮಧುಮಿತಾ ಮಲಗಿ ನಿದ್ರಿಸಿದಳು. ಕಣ್ಣಮುಚ್ಚಿದಾಗ ಹೊಸದೊಂದು ಕನಸಿನ ಲೋಕ ತೆರೆದುಕೊಳ್ಳತೊಡಗಿತು. ಅವಳನ್ನು ಹಾಗೆಯೇ ನೋಡುತ್ತ ಕುಳಿತುಬಿಟ್ಟ. ಅದೇಕೋ ಅವನಿಗೆ ಗೊತ್ತಿಲ್ಲದಂತೆ ಕಣ್ಣಿನಿಂದ ನೀರು ಬರಲು ಆರಂಭವಾಗಿತ್ತು. ತನಗೆ ಇಂತಹ ಬಂಗಾರದ ಹುಡುಗಿ ಸಿಕ್ಕಳು ಎನ್ನುವ ಆನಂದಕ್ಕಾ ಅಥವಾ ಇಂತಹ ಹುಡುಗಿ ಇಷ್ಟೆಲ್ಲ ಪಾಡು ಪಡಬೇಕಾಯಿತಲ್ಲ ಎನ್ನುವ ದುಃಖಕ್ಕಾ ಒಂದೂ ಗೊತ್ತಾಗಲಿಲ್ಲ.

**

        `ಅಲ್ಲಾ.. ವಿಶ್ವಕಪ್ ಮುಗಿದು ಇಷ್ಟು ವರ್ಷ ಆಗೋತು. ಇನ್ನೂ ವಿನಯಚಂದ್ರ ಮನೆಗೆ ಬಂಜ್ನಿಲ್ಲೆ. ಎತ್ಲಾಗಿ ಹೋದ. ಎಂತಾದ್ರೂ ಗೊತ್ತಾಜಾ? ಒಂಚೂರು ವಿಚಾರ ಮಾಡಕಾಗಿತ್ತು. ನೀವು ನೋಡಿದ್ರೆ ತನಗೆ ಸಂಬಂಧವೇ ಇಲ್ಲ ಅನ್ನೋ ಹಂಗೆ ಇದ್ರಲಿ ಥೋ.. ' ಎಂದು ವಿನಯಚಂದ್ರನ ಅಮ್ಮ ಸುಶೀಲಮ್ಮ ತಮ್ಮ ಯಜಮಾನರ ಬಳಿ ಸಿಡಿಮಿಡಿಗುಡಲು ಆರಂಭಿಸಿದ್ದಳು.
         ಶಿವರಾಮ ಹೆಗಡೆಯವರೂ ಹಲವು ಸಾರಿ ಮಗನ ಬಗ್ಗೆ ವಿಚಾರಿಸಿದ್ದರು. ತಮಗೆ ತಿಳಿದವರೆಂದರೆ ಚಿದಂಬರ ಮಾತ್ರ ಆಗಿದ್ದರು. ಅವರ ಬಳಿ ವಿನಯಚಂದ್ರನ ಬಗ್ಗೆ ಕೇಳಿದಾಗ `ವಿನಯಚಂದ್ರ ವಿಶ್ವಕಪ್ ಮುಗಿದ ತಕ್ಷಣ ಭಾರತಕ್ಕೆ ಹಿಂದಿರುಗಿದ ಭಾರತ ತಂಡದ ಜೊತೆಗೆ ವಾಪಾಸು ಬಂದಿಲ್ಲ. ಬಾಂಗ್ಲಾದಲ್ಲಿ ಯಾವುದೋ ಹುಡುಗಿಯನ್ನು ಪ್ರೀತಿಸಿದ್ದು, ಅವಳಿಗೆ ಏನೋ ಸಮಸ್ಯೆಯಾಗಿದ್ದು, ಅವಳನ್ನು ಭಾರತಕ್ಕೆ ಕರೆದುಕೊಂಡು ಬರುವುದಾಗಿ ಹೇಳಿ ಹೋಗಿದ್ದಾನೆ..' ಎಂದು ತಿಳಿಸಿದ್ದರು.
                  `ಈ ಮಾಣಿ ಯಾವಾಗ್ಲೂ ಹಿಂಗೆಯಾ.. ಥೋ.. ಯಾವ ಹುಡುಗಿ ಹುಡುಕಿ ಲವ್ ಮಾಡಿದ್ನೋ.. ಅದು ಯಾವ ರೀತಿಯ ಹುಡುಗೀನೋ.. ಅವಳ ಹಿಂದೆ ಇಂವ ಹೋಜಾ.. ಇವನ ಬುದ್ದಿಗೆ ಎಂತಾ ಆಗಿಕ್ಕು ಹೇಳಿ..' ಎಂದು ಬೈದುಕೊಂಡಿದ್ದರು ಶಿವರಾಮ ಹೆಗಡೆಯವರು. ಪತ್ರಕರ್ತನಾಗಿದ್ದ ಸಂಜಯನ ನೆನಪಾಗಿ ಆತನ ಬಳಿ ಮಾತನಾಡೋಣ ಎಂದುಕೊಂಡರಾದರೂ ಸಂಜಯನ ಮೊಬೈಲ್ ನಂಬರ್ ಸಕಾಲಕ್ಕೆ ಸಿಗದೇ ಸುಮ್ಮನಾದರು.
         ಮಗ ವಾಪಾಸು ಬಂದಿಲ್ಲ ಎನ್ನುವುದಕ್ಕಿಂತಲೂ ಯಾವುದೋ ಹುಡುಗಿಯನ್ನು ಪ್ರೀತಿಸಿ ಅವಳಿಗಾಗಿ ಭಾರತ ತಂಡವನ್ನೂ ಬಿಟ್ಟು ಬಾಂಗ್ಲಾದಲ್ಲೇ ಉಳಿದಿದ್ದಾನಲ್ಲ ಎನ್ನುವುದು ಮನದಾಳದಲ್ಲಿ ಅಸಮಧಾನಕ್ಕೆ ಕಾರಣವಾಗಿತ್ತು, ಆದರೆ ಬಾಂಗ್ಲಾ ನಾಡಿನಲ್ಲಿ ಹಿಂಸಾಚಾರ ತೀವ್ರವಾಗಿದೆ ಎನ್ನುವುದು ಕೇಳಿದಾಗ ಮಾತ್ರ ಮನಸ್ಸಿನಲ್ಲಿ ಕಳವಳ ಉಂಟಾಗಿತ್ತು. ಯಾವುದೋ ಕೂಪಕ್ಕೆ ಬಿದ್ದನೆ ಮಗರಾಯ ಎಂದೂ ಆಲೋಚಿಸಿದರು. ಬಾಂಗ್ಲಾ ನಾಡಿನಿಂದ ಅದೊಂದು ದಿನ ಮಗ ಪೋನ್ ಮಾಡಿದಾಗ ಕೊಂಚ ನಿರಾಳರಾಗಿದ್ದರು ಹೆಗಡೆಯವರು. ಪೋನ್ ಮಾಡಿದಾಗಲೇ ಬೈದುಬಿಡಬೇಕು ಎಂದುಕೊಂಡಿದ್ದರಾದರೂ ಮಗ ಯಾವ ಸಮಸ್ಯೆಯಲ್ಲಿ ಸಿಲುಕಿದ್ದಾನೋ ಎಂದುಕೊಂಡು ಸುಮ್ಮನಾಗಿದ್ದರು. ಇದೀಗ ಮಡದಿ ಸುಶೀಲಾ ಕುಂತಲ್ಲಿ, ನಿಂತಲ್ಲಿ ಸಿಡಿಮಿಡಿ ಮಾಡಲು ಆರಂಭಿಸಿದಾಗ ಮಾತ್ರ ಮಗನ ಬಗ್ಗೆ ಮಾಹಿತಿ ಪಡೆದು ಬರಲೇ ಬೇಕು ಎಂದು ತಮ್ಮ ಜೀಪನ್ನು ಹೊರತೆಗೆದಿದ್ದರು.
         ನಗರಕ್ಕೆ ಬಂದವರೇ ಸೀದಾ ಚಿದಂಬರ ಅವರನ್ನು ಭೇಟಿಯಾದ ಹೆಗಡೆಯವರು ಮಗನ ಬಗ್ಗೆ ಮತ್ತೆ ಕೇಳಿದ್ದರು. ಅದಕ್ಕೆ ಪ್ರತಿಯಾಗಿ ಚಿದಂಬರ ಅವರು `ವಿನಯಚಂದ್ರನ ಬಗ್ಗೆ ಭಾರತ ಕಬ್ಬಡ್ಡಿ ತಂಡದ ಮುಖ್ಯ ಕೋಚ್ ಜಾಧವ್ ಅವರು ಬಹಳ ತಲೆಕೆಡಿಸಿಕೊಂಡಿದ್ದಾರೆ. ತಂಡ ಬಿಟ್ಟು ಬಾಂಗ್ಲಾದಲ್ಲೇ ಉಳಿದ ಆತನ ಬಗ್ಗೆ ಸಿಟ್ಟಾಗಿದ್ದ ಅವರು ಬಹಳ ಕೂಗಾಡಿದರು. ನನ್ನ ಬಳಿಯೂ ಆತನ ವಿರುದ್ಧ ಕೂಗಾಡಿದ್ದರು. ನಾನು ಅವರ ಬಳಿ ಏನೋ ಹೇಳಲು ಹೋಗಿದ್ದೆ. ಆದರೆ ನನ್ನ ಮಾತನ್ನು ಕೇಳಿರಲಿಲ್ಲ. ಇದೀಗ ಸ್ವಲ್ಪ ಸಮಾಧಾನಗೊಂಡಿರುವ ಅವರು ಬಾಂಗ್ಲಾ ನಾಡಿನಲ್ಲಿ ವಿನಯಚಂದ್ರನನ್ನು ಹುಡುಕಲು ಭಾರತ ಸರ್ಕಾರಕ್ಕೆ ಹೇಳಿ ಕ್ರಮ ಕೈಗೊಂಡಿದ್ದಾರೆ. ಬಾಂಗ್ಲಾ ನಾಡಿನಲ್ಲಿ ಟಿವಿ ಜಾಹಿರಾತು ನೀಡಲಾಗಿದೆ. ಅಲ್ಲಿನ ಸರ್ಕಾರಕ್ಕೂ ತಿಳಿಸಲಾಗಿದೆ.. ಆದರೆ ಇದುವರೆಗೂ ವಿನಯಚಂದ್ರ ಎಲ್ಲಿದ್ದಾನೆ ಎನ್ನುವುದು ಪತ್ತೆಯಾಗಿಲ್ಲವಂತೆ..' ಎಂದರು.
          `ಅಲ್ಲಾ.. ಅಂವ ಸಿಕ್ಕಿದ್ನಿಲ್ಲೆ ಹೇಳ್ತಾ ಇದ್ದಿರಿ ನೀವು.. ಮುಂದೆಂತದು ಕಥೆ.? ಮಗ ಕೈಬಿಟ್ಟು ಹೋಗ್ತ್ನಿಲ್ಲೆ ಅಲ್ದಾ? ಅಲ್ಲಾ ಆ ಬಾಂಗ್ಲಾದೇಶದಲ್ಲಿ ಬೇರೆ ಹಿಂಸಾಚಾರ ಸಿಕ್ಕಾಪಟ್ಟೆ ಆಗೋಜಡಾ. ಏನಾದರೂ ಭಾನಗಡಿ ಆದರೆ ಎಂತಾ ಮಾಡವು ಹೇಳಿ' ಎಂದು ಆತಂಕದಿಂದ ಕೇಳಿದ್ದರು ಶಿವರಾಮ ಹೆಗಡೆಯವರು.
          `ಹಂಗೇನೂ ಆಗೋದಿಲ್ಲ ಬಿಡಿ ಹೆಗಡೇರೆ. ಏನೂ ಆಗಿರಲಿಕ್ಕಿಲ್ಲ. ನಿಮ್ಮ ಮಗನ ಬಗ್ಗೆ ನಿಮಗೆ ನಂಬಿಕೆಯಿಲ್ಲವಾ? ನನಗಂತೂ ಆತನ ನಂಬಿಕೆಯಿದೆ. ಆತ ಏನು ಮಾಡುವುದಿದ್ದರೂ ಒಳ್ಳೆಯದಕ್ಕಾಗಿ ಅನ್ನೋದು ನಿಮಗೆ ಗೊತ್ತಿಲ್ಲವಾ? ಈಗಲೂ ಆತ ಏನೋ ಒಳ್ಳೆಯ ಕಾರಣಕ್ಕೇ ಬಾಂಗ್ಲಾದಲ್ಲಿ ಉಳಿದುಕೊಂಡಿದ್ದಾನೆ. ಅಲ್ಲಿದ್ದಾಗಲೇ ಹಿಂಸಾಚಾರ ತೀವ್ರವಾಗಿದೆ. ವಾಪಾಸು ಬರಲು ಏನೋ ಸಮಸ್ಯೆಯಾಗಿದೆ. ತೊಂದರೆ ಪಡಬೇಡಿ. ಆತನೇ ಹೇಗಾದರೂ ಮಾಡಿ ವಾಪಾಸು ಬರುತ್ತಾನೆ. ನಮ್ಮ ಸರ್ಕಾರವೂ ಪ್ರಯತ್ನ ಮಾಡುತ್ತಿದೆ.. ಅವನಿಗೆ ಏನೂ ಆಗಿರುವುದಿಲ್ಲ' ಎಂದರು ಚಿದಂಬರ.
          ಈಗ ಸ್ವಲ್ಪ ಸಮಾಧಾನ ಪಟ್ಟುಕೊಂಡ ಶಿವರಾಮ ಹೆಗಡೆಯವರು `ಹಂಗಂಬ್ರಾ.. ಹಂಗಾದ್ರೆ ಸರಿ. ಆನು ತಲೆಬಿಸಿ ಮಾಡ್ಕ್ಯತ್ನಿಲ್ಲೆ.. ಆದ್ರೂ ನೀವು ಒಂಚೂರು ಏನಾದ್ರೂ ಮಾಡಲೆ ಆಗ್ತಾ ನೋಡಿ..ನಿಮ್ಮನ್ನು ಬಿಟ್ಟರೆ ಮತ್ತೆ ಯಾರತ್ರ ಹೇಳಕಳವು ಹೇಳಿ ಗೊತ್ತಾಜಿಲ್ಲೆ ನೋಡಿ. ಯಮ್ಮನೆದು ನಾಲ್ಕೈದು ದಿನ ಆತು ಮಗನ ಬಗ್ಗೆ ವಿಚಾರ ಮಾಡಿ ವಿಚಾರ ಮಾಡಿ ಹೇಳಿ. ಬರೀ ಕೊಟಗುಡಿತಾ ಇದ್ದು. ಅದ್ಕಾಗಿ ಓಡಿ ಬಂದಿ ನೋಡಿ' ಎಂದರು. `ಖಂಡಿತ' ಎಂದ ಚಿದಂಬರ್ ಹೆಗಡೇರಿಂದ ಬೀಳ್ಕೊಟ್ಟರು. ಹೆಗಡೇರು ಅಡಿಕೆಯ ವಕಾರಿಗೆ ಬರುವಷ್ಟರಲ್ಲಿ ಪರಿಚಯಸ್ಥರೊಬ್ಬರು ಸಿಕ್ಕಿದವರೇ `ಹ್ವಾಯ್.. ಶಿವರಾಮಣ್ಣ.. ನಿಮ್ ಮಗ ಅದೆಂತದ್ದೋ ವಿಶ್ವಕಪ್ ಗೆದ್ನಡಾ.. ಅದ್ಯಾವುದೋ ದೇಶಕ್ಕೆ ಹೋಗಿದ್ನಲಿ.. ಬಂದ್ನನ್ರೋ..?' ಎಂದು ಕೇಳಿಬಿಟ್ಟರು.
         `ಕಬ್ಬಡ್ಡಿ ವಿಶ್ವಕಪ್ಪು ಅದು. ವಿಶ್ವಕಪ್ ಗೆದ್ದಿದ್ದು. ಬಾಂಗ್ಲಾ ದೇಶಕ್ಕೆ ಹೋಜಾ.. ಅಲ್ಲೆಂತದ್ದೋ ಸಮಸ್ಯೆ ಆಜು.. ಸಧ್ಯದಲ್ಲೇ ಬರ್ತಾ..ಒಂದೆರಡು ಮೂರ್ ದಿನಾ ಆಗಲಕ್ಕು ಬಪ್ಪಲೆ' ಎಂದರು ಹೆಗಡೆಯವರು.
           `ಬಾಂಗ್ಲಾ ದೇಶಕ್ಕನ್ರಾ.. ಅಲ್ಲಿಗೆ ಎಂತಕ್ಕೆ ಹೋಜಾ ಹೇಳಿ.. ಅಲ್ಲಿ ಸಿಕ್ಕಾಪಟ್ಟೆ ಗಲಾಟೆನಡಾ.. ಹಿಂಸಾಚಾರ ಭುಗಿಲೆಜ್ಜಡಾ.. ಹಿಂದೂಗಳನ್ನಂತೂ ಕಂಡಕಂಡಲ್ಲಿ ಕೊಂದು ಹಾಕ್ತಾ ಇದ್ವಡಾ.. ಥೋ ಮಾರಾಯ್ರಾ.. ಎಂತಾ ನಮನಿ ಮಾಡ್ಕಂಡು ಬಿಟ್ನರಾ ಅಂವಾ..ಮಗ ಪೋನ್ ಗೀನ್ ಮಾಡಿದಿದ್ನಾ?' ಎಂದುಬಿಟ್ಟರು ಅವರು.
                ಚಿದಂಬರ ಅವರನ್ನು ಭೇಟಿ ಮಾಡಿ ಮಾತನಾಡಿದ ನಂತರ ಹೆಗಡೆಯವರ ಮನಸ್ಸಿನಲ್ಲಿ ತಣ್ಣಗಾಗಿದ್ದ ದುಗುಡ ಮತ್ತೆ ಹೆಚ್ಚಾಯಿತು. ತಕ್ಷಣವೇ ಅವರು ವಕಾರಿಯಲ್ಲಿ ಅಗತ್ಯದ ಕೆಲಸವನ್ನು ಬಿಟ್ಟು ಅದೇ ನಗರಕ್ಕೆ ಆ ದಿನವಷ್ಟೇ ಆಗಮಿಸಿದ್ದ ಸ್ಥಳೀಯ ಶಾಸಕರು ಹಾಗೂ ಸಂಸದರನ್ನು ಭೇಟಿ ಮಾಡಲು ಹೊರಟರು.
            ಶಾಸಕರ ಭೇಟಿಯಾಗಿ ಅವರು ವಿನಯಚಂದ್ರನನ್ನು ಹುಡುಕುವ ಭರವಸೆಯನ್ನು ನೀಡಿದ್ದು ಆಯಿತು. ಸಂಸದರನ್ನು ಭೇಟಿ ಮಾಡಲು ತೆರಳಿದ ಹೆಗಡೆಯವರಿಗೆ ಒಂದು ತಾಸಿನ ಕಾಯುವಿಕೆಯ ನಂತರ ಸಂಸದರ ದರ್ಶನವಾಯಿತು. ಶಿವರಾಮ ಹೆಗಡೆಯವರು ತಮ್ಮ ಮಗನ ಪ್ರವರವನ್ನು ಹೇಳಿದ ತಕ್ಷಣ ಸಂಸದರು `ಓಹೋ.. ಅಂವ ನಿಮ್ಮ ಮಗನಾ? ಕಪ್ಪು ಗೆದ್ದ ವಿಷಯ ತಿಳಿದಿದ್ದೆ. ನಮ್ಮ ಕ್ಷೇತ್ರದವನೇ ಅಂತ ಗೊತ್ತಿತ್ತು. ಕೊನೆಗೆ ಕಾಣೆಯಾಗಿರುವ ಬಗ್ಗೆ ಮಾಹಿತಿಯೂ ಬಂದಿತ್ತು. ನೀವೇನೂ ತಲೆಬಿಸಿ ಮಾಡ್ಕೋಬೇಡ್ರಿ ಹೆಗಡೇರೆ. ನಾವು ನಿಮ್ಮ ಮಗನನ್ನು ಹುಡುಕುತ್ತೇವೆ. ನಮ್ಮ ಸರ್ಕಾರ ಅದರ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳುತ್ತಲೂ ಇದೆ. ಬಾಂಗ್ಲಾ ನಾಡಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ.. ನೀವು ಆರಾಮಾಗಿರಿ. ನಿಮ್ ಜೊತಿಗೆ ನಾವ್ ಇದೆವೆ' ಎಂದರು. ಸಮಾಧಾನ ಪಟ್ಟುಕೊಂಡ ಶಿವರಾಮ ಹೆಗಡೆರು ಮನೆಯತ್ತ ಮುಖ ಮಾಡಿದರು.
          ಮನೆಗೆ ಬರುವ ವೇಳೆಗೆ ಇವರ ದಾರಿಯನ್ನೇ ಕಾಯುತ್ತಿದ್ದರೋ ಎಂಬಂತೆ ಸುಶೀಲಮ್ಮ ಎದುರು ಬಂದರು. ಯಜಮಾನರಿಗೆ ಮಜ್ಜಿಗೆಯನ್ನು ಕುಡಿಯಲು ಕೊಟ್ಟವರೇ `ಎಂತಾ ಆತಡಾ..? ವಿನಯಚಂದ್ರ ಯಾವಾಗ ಬತ್ನಡಾ?' ಎಂದು ಕೇಳಿದರು.  ಶಿವರಾಮ ಹೆಗಡೆಯವರು ತಕ್ಷಣ ರೇಗಿದವರೇ `ಮಗ ಬತ್ನೇ... ಅವಂಗೆ ಎಂತದ್ದೂ ಆಗ್ತಿಲ್ಲೆ.. ತಲೆ ತಿನ್ನಡಾ ಮಾರಾಯ್ತಿ.. ಅರಾಮ್ ಇದ್ನಡಾ. ಎಲ್ಲರೂ ಅವನ ಹುಡುಕಾಟದಲ್ಲೇ ಇದ್ವಡಾ ಮಾರಾಯ್ತಿ' ಎಂದವರೇ ಎದ್ದು ತೋಟದ ಕಡೆಗೆ ಸಾಗಿದರು. ಮಗ ಬರುತ್ತಾನೋ ಇಲ್ಲವೋ ಎನ್ನುವುದು ಸ್ಪಷ್ಟವಾಗದ ಕಾರಣ ಗೊಂದಲದಲ್ಲಿಯೇ ಮನೆಯೊಳಗೆ ತೆರಳಿದರು ಸುಶೀಲಮ್ಮ.

***

          ವಿನಯಚಂದ್ರ ರಾತ್ರಿ ಯಾರಿಗೂ ಹೇಳದಂತೆ ಹೊಟೆಲನ್ನು ಬಿಟ್ಟು ಹೋಗಿದ್ದಾನೆ ಎನ್ನುವುದನ್ನು ತಿಳಿದವರೇ ಜಾಧವ್ ಅವರು ಎಲ್ಲರ ಮೇಲೂ ಬೈದಾಡಿಬಿಟ್ಟಿದ್ದರು. ಎದುರಿಗೆ ಸಿಕ್ಕವರ ಮೇಲೆಲ್ಲ ರೇಗಾಡಿದ್ದ ಜಾಧವ್ ಅವರು ವಿನಯಚಂದ್ರನ ಪರಮಾಪ್ತನಾಗಿದ್ದ ಸೂರ್ಯನ್ ಗೆ ಏಟು ಹಾಕುವುದೊಂದು ಬಾಕಿ. ತಕ್ಷಣವೇ ಸುತ್ತಮುತ್ತಲೆಲ್ಲ ಹುಡುಕಾಡಲು ಯತ್ನಿಸಿದ್ದರಾದರೂ ವಿನಯಚಂದ್ರನ ಪತ್ರವನ್ನು ಓದಿದ ನಂತರ ಕೊಂಚ ತಣ್ಣಗಾಗಿದ್ದರು. ಮನಸ್ಸಿನಲ್ಲಿ ಸಿಟ್ಟು ಸಾಕಷ್ಟಿತ್ತು. ಆದರೆ ಅನಿವಾರ್ಯವಾಗಿದ್ದ ಕಾರಣ ಭಾರತ ತಂಡವನ್ನು ಕರೆದುಕೊಂಡು ವಾಪಾಸಾಗಿದ್ದರು. ಭಾರತಕ್ಕೆ ಬಂದಾಗಿನಿಂದಲೂ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ವಿನಯಚಂದ್ರ ಕಾಣೆಯಾಗಿರುವುದು ತಂಡದ ಹಿರಿಯರಿಗೆ, ಅಮೆಚೂರ್ ಕಬ್ಬಡ್ಡಿ ಅಧಿಕಾರಿಗಳಿಗೆ ತಿಳಿದಿತ್ತು. ಅವರೂ ಜಾಧವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿನಯಚಂದ್ರ ಕಾಣೆಯಾಗಿರುವುದು ಜಾಧವ್ ಅವರ ಹೊಣೆಗೇಡಿತನ ಎಂದು ಗೂಬೆ ಕೂರಿಸುವ ಯತ್ನವನ್ನೂ ಮಾಡಿದ್ದರು. ಕೆಲವರು ಜಾಧವ್ ಕಾಲೆಳೆಯಲು ಶುರುಮಾಡಿದ್ದರು. ಅವನ್ನೆಲ್ಲ ಸಹಿಸಿಕೊಂಡಿದ್ದ ಜಾಧವ್ ಸದ್ದಿಲ್ಲದೇ ವಿನಯಚಂದ್ರನ್ನನು ಹುಡುಕಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು.
          ಭಾರತದ ಸರ್ಕಾರದ ರಾಜಕಾರಣಿಗಳನ್ನು ಭೇಟಿಯಾಗಿ ವಿನಯಚಂದ್ರನನ್ನು ಹುಡುಕಿಸುವ ಪ್ರಯತ್ನ ಕೈಗೊಂಡಿದ್ದರು. ಭಾರತದ ಪ್ರಧಾನಮಂತ್ರಿ ಸಚಿವಾಲಯವೂ ತಕ್ಷಣವೇ ಸ್ಪಂದಿಸಿ ಬಾಂಗ್ಲಾ ದೇಶದಾದ್ಯಂತ ವಿನಯಚಂದ್ರನನ್ನು ಹುಡುಕುವ ಪ್ರಯತ್ನ ಕೈಗೊಂಡಿತ್ತು. ಆದರೆ ಬಾಂಗ್ಲಾದೇಶದಲ್ಲಿ ಹಿಂಸಾಚಾರ ತೀವ್ರವಾಗಿರುವ ಕಾರಣ ವಿನಯಚಂದ್ರ ಪತ್ತೆಯಾಗಿರಲಿಲ್ಲ. ವಿನಯಚಂದ್ರನ ಸುದ್ದಿ ಇರದ ಕಾರಣ ಆತ ಬದುಕಿದ್ದಾನೋ ಇಲ್ಲವೋ ಎನ್ನುವ ಅನುಮಾನ ಕೂಡ ವ್ಯಕ್ತವಾಗುತ್ತಿತ್ತು. ಆದರೆ ಜಾಧವ್ ಅವರು ಮಾತ್ರ ವಿನಯಚಂದ್ರ ಬದುಕಿದ್ದಾರೆ. ಎಲ್ಲೋ ಇದ್ದಾನೆ. ಭಾರತಕ್ಕೆ ಬರುತ್ತಾನೆ ಎನ್ನುವ ನಂಬಿಕೆಯಲ್ಲಿದ್ದರು. ಆದರೆ ಆತನ ಬಗ್ಗೆ ಮಾಹಿತಿ ಸಿಗದಿದ್ದ ಕಾರಣ ಮನಸ್ಸಿನಲ್ಲಿ ಕಳವಳವನ್ನು ಹೊಂದಿದ್ದರು.
         ಕಬ್ಬಡ್ಡಿ ಪಂದ್ಯಾವಳಿಯಲ್ಲಿ ದೋಸ್ತನಾಗಿದ್ದ ಸೂರ್ಯನ್ ಪಾಡು ಜಾಧವ್ ಅವರಿಗಿಂತ ಹೊರತಾಗಿರಲಿಲ್ಲ. ಭಾರತಕ್ಕೆ ಬಂದವನೇ ತನ್ನ ತಮಿಳುನಾಡು ರಾಜ್ಯದಲ್ಲಿ ತನ್ನ ಸಂಬಂಧಿಕರೊಬ್ಬರು ರಾಜಕಾರಣಿಯಾಗಿರುವ ಕಾರಣ ಅವರ ಮೂಲಕ ವಿನಯಚಂದ್ರನನ್ನು ಹುಡುಕುವ ಪ್ರಯತ್ನ ನಡೆಸಿದ್ದ, ವಿನಯಚಂದ್ರನ ಜೊತೆಗೆ ಮಧುಮಿತಾಳೂ ಇದ್ದಾಳೆ ಎನ್ನುವುದು ಆತನಿಗೆ ಗೊತ್ತಿತ್ತಾದ್ದರಿಂದ ಅವಳ ಕುಟುಂಬವನ್ನಾದರೂ ಸಂಪರ್ಕಿಸುವ ಪ್ರಯತ್ನ ನಡೆಸಿದ್ದ. ಕೊನೆಗೊಮ್ಮೆ ಹಿಂಸಾಚಾರಕ್ಕೆ ಮಧುಮಿತಾಳ ತಂದೆ ತಾಯಿಗಳು, ಬಂದುಬಳಗ ಸಾವನ್ನಪ್ಪಿದೆ ಎಂಬುದು ತಿಳಿದಾಗ ಮಾತ್ರ ತೀವ್ರ ದುಃಖಕ್ಕೀಡಾಗಿದ್ದ. ಮಧುಮಿತಾ ಹಾಗೂ ವಿನಯಚಂದ್ರ ಏನಾದರೂ ಎನ್ನುವುದು ಸೂರ್ಯನ್ ಗೆ ತಿಳಿಯದೇ ಕಳವಳ ಹೊಂದಿದ್ದ. ಕೊನೆಗೊಮ್ಮೆ ವಿನಯಚಂದ್ರ ಪೋನ್ ಮಾಡಿದ್ದಾಗ ಮಾತ್ರ ಕೊಂಚ ನಿರಾಳನಾಗಿದ್ದ. ಆತ ಬದುಕಿದ್ದಾನಲ್ಲ ಎಂಬ ಸಮಾಧಾನವಿತ್ತು. ಆದರೆ ಭಾರತಕ್ಕೆ ಅವರನ್ನು ಕರೆತರುವುದು ಹೇಗೆ ಎನ್ನುವ ಚಿಂತೆ ಮನದಲ್ಲಿ ಮನೆಮಾಡಿತ್ತು.

(ಮುಂದುವರಿಯುತ್ತದೆ..)

ಬಾನ ಬಾಂದಳದಲ್ಲಿ

ಬಾನ ಬಾಂದಳದಲ್ಲಿ ಚುಕ್ಕಿಗಳ ನಗುವಿಲ್ಲ
ಅಕ್ಕರದ ಬದುಕಿನಲಿ ತಿಳಿಬೆಳಕೇ ಇಲ್ಲ |

ಬುಡ ಬಯಲಿನ ಕೊನೆ ತುಂಬ
ಕರಿ ಮೋಡವೇ ಉಂಟು
ಹುಡುಕಿ ಹುಡುಕಿದರೇನು
ಬೆಳಕೇ ಇಲ್ಲ. ಜೊತೆಗೆ ಬದುಕೇ ಇಲ್ಲ |

ಬಾಳ ಬದುಕಿನ ತುಂಬ
ಕನಸಿಲ್ಲ-ನನಸಿಲ್ಲ
ಹಾಲು ಹಾದಿಯ ತುಂಬ
ಅಳುವೆ ಎಲ್ಲ, ಜೊತೆಗೆ ನಗುವೆ ಇಲ್ಲ |

ಎಷ್ಟು ಹುಡುಕಿದರೇನು
ನೋವೊಂದೆ ಜೊತೆಗುಂಟು
ನಗುವ ನೀಡಲು ಚುಕ್ಕಿ ಹಿಂಡೇ ಇಲ್ಲ
ಚುಕ್ಕಿಯಿಲ್ಲ ಜೊತೆಗೆ ಶಶಿಯೂ ಇಲ್ಲ ||

***
(ಈ ಕವಿತೆಯನ್ನು ಬರೆದಿರುವುದು 09-05-2007ರಂದು ದಂಟಕಲ್)

Sunday, October 19, 2014

ಮಂಕಾಳಕ್ಕನ ಕವಿತೆ-2

ಮಂಕಾಳಕ್ಕ ಮುದಿ ಮುದಿ ಜೀವ
ಬದುಕಿನ ಮೇಲೆ ಆಸೆ
ಮನೆ ತುಂಬ ಆಳು ಕಾಳು
ಆಗೋದಿಲ್ಲ ಹಿರಿಸೊಸೆ |

ಕಿರಿಮಗ ಅಂದ್ರೆ ಮಂಕಾಳಕ್ಕಂಗೆ
ಬಹಳ ಪ್ರಾಣ ಪ್ರಾಣ
ಉಳಿದ ಮಕ್ಕಳು ಹೆಂಗೇ ಇದ್ದರೂ
ಹೆಗ್ಗಣ ಮಗನೇ ಜಾಣ |

ಮಂಕಾಳಕ್ಕನ ಕನ್ನಡಕದ ದಾರ
ಕಪ್ಪಗಿರಲೇ ಬೇಕು
ಹೊಟ್ಟಿಗಿಲ್ಲ, ಬಟ್ಟೆಗಿಲ್ಲ ಬಂಗಾರ
ಒಪ್ಪಗಿರಲೇ ಬೇಕು |

ಮಂಕಾಳಕ್ಕನ ಅವತಾರ ಕಂಡು
ಗಂಡ ತಂಡಾಗಿದ್ದ
ಮಂಕಾಳಕ್ಕನ ಬಾಯಿಗೆ ಹೆದರಿ
ಮಾತು ಮರ್ತೋಗಿದ್ದ |

ಪಂಕ್ತಿಬೇಧ ಅವಳಿಗಿಷ್ಟ
ಎಲ್ಲರ ಮೇಲೆ ದರ್ಬಾರು
ಮನೆ ತುಂಬ ಓಡಾಡ್ತಾ
ನಡೆಸ್ತಾ ಇತ್ತು ಕಾರ್ಬಾರು |

ಮಂಕಾಳಕ್ಕನ ಕಸಲೆಯಂತೂ
ತಡೆಯಲೆ ಸಾಧ್ಯವೇ ಇಲ್ಲೆ
ಅವಳ ಅವತಾರ ಜೋರಿತ್ತು
ತಡೆಯಲೆ ಆಗ್ತಿತ್ತಿಲ್ಲೆ. |

ಮಂಕಾಳಕ್ಕ ಸತ್ತಿದ್ಮೇಲೆ
ಊರ ತುಂಬ ಸಡಗರ
ಕರಿ ಮೋಡ ಕದಗೋದಾಂಗೆ
ಖುಷಿಯಾಗಿತ್ತು ಅಬ್ಬರ |

**
(ಮಂಕಾಳಕ್ಕ ಎಂಬ ನಾನು ಕಂಡ ಅಪರೂಪದ ವ್ಯಕ್ತಿಯ, ವ್ಯಕ್ತಿಯ ಗುಣಗಾನ, ವ್ಯಕ್ತಿ ಚಿತ್ರಣ.. ನಾಕಂಡಂತೆ ಅವಳಿದ್ದ ಪರಿ ಈ ಕವಿತೆ.. ಮೊದಲೊಂದು ಭಾಗ ಬರೆದಿದ್ದೆ.. ಬಾಕಿ ಉಳಿದ ಭಾಗ ಇಲ್ಲಿದೆ.)
(ಈ ಕವಿತೆ ಬರೆದಿದ್ದು 19-10-2014ರಂದು ಶಿರಸಿಯಲ್ಲಿ)

Friday, October 17, 2014

ಸುಖ

(ಚಿತ್ರ ಕೃಪೆ : ಅವಧಿ ಮ್ಯಾಗಝಿನ್)
ನೋಡಿದ
ಅವ
ಎದೆ ಝಲ್ಲೆಂದಿತು |

ಕಾಡಿದ
ಅವ
ಮನಸು ತಲ್ಲಣಿಸಿತು |

ಮುಟ್ಟಿದ
ಅವ
ಹೃದಯ ಹೂವಾಯಿತು |

ತಟ್ಟಿದ
ಅವ
ಕನಸು ನೂರಾಯಿತು |

ಮುತ್ತಿದ
ಅವ
ಅಂಕೆ ತಪ್ಪಿತು |

ತಬ್ಬಿದ
ಅವ
ಮನ ಹಬ್ಬಿತು |

ಆಡಿದ
ಅವ
ದೇಹ ನಲಿಯಿತು |

ಓಡಿದ
ಅವ
ನೆನಪು ನರಳಿತು |

ಮರೆಯಾದ
ಅವ
ದುಃಖ ಹೊಳೆಯಾಯಿತು |

ಅಡಗಿದ
ಅವ
ಕನಸು ಕಣ್ಣಲ್ಲಿ ಚೀರಿತು |

ಮರಳಿದ
ಅವ
ಮತ್ತೆ ಜೀವ ಬಂದಿತು ||


**
(ಈ ಕವಿತೆ ಬರೆದಿದ್ದು 17-10-2014ರಂದು ಶಿರಸಿಯಲ್ಲಿ)

ಬೆಂಗಾಲಿ ಸುಂದರಿ-33

(ಶೇರ್ ಪುರದಲ್ಲಿರುವ ಕೋಟೆಯೊಂದರ ಅವಶೇಷ)
             ಅದೇ ಸಮಯದಲ್ಲಿ ಬಾಗಿಲನ್ನು ಯಾರೋ ತಟ್ಟಿದಂತಾಯಿತು. ಎಲ್ಲರೂ ಮೌನವಹಿಸಿದರು. ಮುಷ್ಫೀಕರನ ಹೆಂಡತಿ ಹೋಗಿ ಬಾಗಿಲು ತೆರೆದಳು. ಬಂದಿದ್ದವನು ಮುಷ್ಪಿಕರನ ಬಂಟ. ಮಧುಮಿತಾಳನ್ನು ಮುಷ್ಫಿಕರನ ಬಳಿ ಕರೆದೊಯ್ಯಲು ಬಂದಿದ್ದ. ಕೊನೆಗೆ ಮುಷ್ಫಿಕರನ ಹೆಂಡತಿಯೇ ಕೆಲ ಸಮಯದ ನಂತರ ಮಧುಮಿತಾ ಬರುತ್ತಾಳೆ ಎಂದು ಹೇಳಿ ಆತನನ್ನು ಕಳಿಸಿದಳು. ಆತ ಹೋದ ತಕ್ಷಣ ಇತ್ತ ಇವರು ಕಾರ್ಯಪ್ರವೃತ್ತರಾದರು. ಕತ್ತಲೆಯಲ್ಲಿ ಮುಷ್ಫಿಕರನ ಹೆಂಡತಿ ಯಾವ ರೀತಿ ಇದ್ದಾಳೆ ಎನ್ನುವುದು ವಿನಯಚಂದ್ರ ಹಾಗೂ ಮಧುಮಿತಾಳಿಗೆ ಗೊತ್ತಾಗಲಿಲ್ಲ. ಬಹುತೇಕ ಮಧುಮಿತಾಳಂತೆ ಇರಬಹುದೇನೋ ಅನ್ನಿಸಿತು.
             ಮುಷ್ಫಿಕರನ ಹೆಂಡತಿ ಮಧುಮಿತಾಳಂತೆ ಬಟ್ಟೆ ಧರಿಸಿಕೊಂಡಳು. ತನ್ನ ಚಹರೆಯನ್ನು ಬದಲಿಸಿಕೊಂಡಳು. ಮುಷ್ಫೀಕರನೇನೂ ಮಧುಮಿತಾಳನ್ನು ನೋಡಿರಲಿಲ್ಲವಾದ್ದರಿಂದ ಅನುಮಾನ ಬರುವ ಸಾಧ್ಯತೆಗಳಿರಲಿಲ್ಲ. ವಿನಯಚಂದ್ರ ದೊಡ್ಡದೊಂದು ದೊಣ್ಣೆಯನ್ನು ಅಡಗಿಸಿ ಇಟ್ಟುಕೊಂಡ. ಮುಷ್ಫೀಕರನ ಹೆಂಡತಿಯೇ ಮುಂದಕ್ಕೆ ಸಾಗಿದಳು. ಅವಳ ಜೊತೆಯಲ್ಲಿ ವಿನಯಚಂದ್ರ ಹೋದ. ಮಧುಮಿತಾ ಮುಷ್ಫಿಕರನ ಹೆಂಡತಿಯ ಅಣತಿಯಂತೆ ಆ ಕೋಟೆಯಂತಹ ಮನೆಯ ಇನ್ನೊಂದು ದಿಕ್ಕಿನಲ್ಲಿದ್ದ ಕಳ್ಳ ದಾರಿಯತ್ತ ಸಾಗಿದಳು. ಮುಷ್ಫಿಕರನ ಹೆಂಡತಿ ಮುಷ್ಫೀಕರನ ಶಯನಕೋಣೆಗೆ ಸಾಗುತ್ತಿದ್ದಂತೆಯೇ ವಿನಯಚಂದ್ರ ಹೊರಗಡೆಯೇ ನಿಂತ. ಬಾಗಿಲು ತೆರೆದುಕೊಂಡೇ ಇತ್ತು. ಹೊರಗಿನಿಂದ ನೋಡುತ್ತಿದ್ದ ವಿನಯಚಂದ್ರನಿಗೆ ಮುಷ್ಫೀಕರನ ಆಕಾರ, ಚಹರೆ ಕಣ್ಣಿಗೆ ಕಾಣುತ್ತಿತ್ತು.
         ಕೋಟೆಯಂತಹ ಮನೆಯಲ್ಲಿ, ಕೈಗೆ ಕಾಲಿಗೆ ಆಳುಗಳನ್ನು ಇಟ್ಟುಕೊಂಡಿದ್ದ, ಗೂಂಡಾಗಳ ಪಡೆಯನ್ನೇ ನಿರ್ಮಾಣ ಮಾಡಿಕೊಂಡು ದಿನಕ್ಕೊಂದು ಹೆಣ್ಣಿನ ಬದುಕು ಹಾಳುಮಾಡುತ್ತಿದ್ದ ಮುಷ್ಫೀಕರ ನೋಡಲಿಕ್ಕೆ ದೈತ್ಯ ದೇಹಿಯೇನೂ ಅಲ್ಲ. ಸಾಧಾರಣ ಎತ್ತರ. ಆದರೆ ಗಟ್ಟುಮುಟ್ಟಾಗಿದ್ದ. ಬೆಂಗಾಲಿ ಮುಖ. ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿದ್ದವನು ಸೂರ್ಯನನ್ನೇ ಕಾಣಲಿಲ್ಲವೇನೋ ಎಂಬಂತೆ ಬಿಳುಚಿಕೊಂಡಿದ್ದ. ಮೈಕೈತುಂಬ ಆಭರಣಗಳ ಸರಮಾಲೆಯಿತ್ತು. ಅಬ್ಬಾ ಖಯಾಲಿ ಮನುಷ್ಯನೇ ಎಂದುಕೊಂಡ ವಿನಯಚಂದ್ರ. ನಿನಗೆ ಬುದ್ಧಿ ಕಲಿಸುತ್ತೇನೆ ಇರು ಎಂದುಕೊಂಡ ಮನಸ್ಸಿನಲ್ಲಿಯೇ. ಮುಷ್ಫಿಕರನ ಹೆಂಡತಿ ಆ ಕೋಣೆಯೊಳಕ್ಕೆ ಹೋಗಿ ಬಾಗಿಲು ಹಾಕಿಕೊಂಡಳಾದರೂ ಚಿಲಕ ಹಾಕಲಿಲ್ಲ.
          ಒಳಹೋದವಳೇ ಮುಷ್ಫೀಕರನನ್ನು ರಮಿಸತೊಡಗಿದಳು. ಮುಷ್ಫಿಕರನಿಗೆ ಒಮ್ಮೆ ಆಶ್ಚರ್ಯ. ಈ ಕೋಣೆಗೆ ಬರುವವರೆಲ್ಲ ಗಲಾಟೆ ಮಾಡುತ್ತಾರೆ, ಅಳುತ್ತಾರೆ, ಬೆದರುತ್ತಾರೆ. ದೈನ್ಯದಿಂದ ಬೇಡಿಕೊಳ್ಳುತ್ತಾರೆ. ಕೂಗತ್ತಾರೆ. ಕಬ್ಬರಿಯುತ್ತಾರೆ. ಆದರೆ ಈಕೆ ಮಾತ್ರ ತನ್ನನ್ನು ರಮಿಸುತ್ತಿದ್ದಾಳಲ್ಲ ಎಂದು ಕ್ಷಣಕಾಲ ಆಲೋಚಿಸಿದ. ಆದರೆ ಮನಸ್ಸು ಆ ಕಡೆಗೆ ಹೆಚ್ಚಿನ ಸಮಯ ಹೋಗಲಿಲ್ಲ. ರಮಿಸತೊಡಗಿದ್ದವಳನ್ನು ತಾನೂ ಮುದ್ದಿಸತೊಡಗಿದ್ದ. ತನ್ನ ತೆಕ್ಕೆಗೆ ಬಿದ್ದಿದ್ದವಳ ತುಟಿಗೆ ತುಟಿಯೊತ್ತಲು ಸಜ್ಜಾಗುತ್ತಿದ್ದ. ಹೀಗಿದ್ದಾಗಲೇ ವಿನಯಚಂದ್ರ ಕೋಣೆಯೊಳಕ್ಕೆ ಬಂದಿದ್ದ. ಮುಷ್ಫಿಕರನಿಗೆ ಇದು ಕೊಂಚವೂ ಅರಿವಿಗೆ ಬಾರಲಿಲ್ಲ. ಬಂದವನೇ ಸರಿಯಾದ ಸಮಯಕ್ಕೆ ಕಾಯುತ್ತ ನಿಂತ. ಹೀಗಿದ್ದಾಗಲೇ ವಿನಯಚಂದ್ರನಿಗೆ ಮುಷ್ಫಿಕರನ ಹೆಂಡತಿ ಸನ್ನೆ ಮಾಡಿದ್ದಳು. ತಕ್ಷಣವೇ ವಿನಯಚಂದ್ರ ಅಡಗಿಸಿ ಇಟ್ಟಿದ್ದ ದೊಣ್ಣೆಯನ್ನು ಬೀಸಿದ್ದ. ಮುಷ್ಫಿಕರನ ಹೆಂಡತಿ ತಪ್ಪಿಸಿಕೊಂಡರೆ ಏಟು ಸರಿಯಾಗಿ ಮುಷ್ಫಿಕರನ ಹಣೆಗೆ ಬಿದ್ದಿತ್ತು. ಏಟಿನ ಬಲ ಯಾವ ರೀತಿ ಇತ್ತೆಂದರೆ ಒಮ್ಮೆಲೆ ಕೂಗಿಕೊಂಡ ಮುಷ್ಫಿಕರ ತಲೆಯೊಡೆದು ಬಿದ್ದಿದ್ದ. ಎಚ್ಚರ ತಪ್ಪಿತ್ತು. ಒಡೆದ ಹಣೆಯಿಂದ ರಕ್ತ ಧಾರೆ ಧಾರೆಯಾಗಿ ಹರಿಯತೊಡಗಿತ್ತು. ವಿನಯಚಂದ್ರ ಹೊಡೆದು ಬಿಟ್ಟಿದ್ದನಾದರೂ ಆದ ಗಾಯದಿಂದ ಅವಾಕ್ಕಾಗಿ ನಿಂತಿದ್ದ. ಮುಷ್ಫಿಕರನ ಹೆಂಡತಿ ಒಮ್ಮೆ ವಿನಯಚಂದ್ರನನ್ನು ನೋಡಿದವಳೇ ಆತನ ಕೈಯಲ್ಲಿದ್ದ ದೊಣ್ಣೆಯನ್ನು ತೆಗೆದುಕೊಂದು ಎಚ್ಚರತಪ್ಪಿದ್ದ ಮುಷ್ಪಿಕರನ ದೇಹದ ಮೇಲೆಲ್ಲ ಹೊಡೆತಗಳನ್ನು ಬಾರಿಸತೊಡಗಿದ್ದಳು. ತಲೆಗೆ ಬಿದ್ದ ಹೊಡೆತದಿಂದ ಮುಷ್ಫಿಕರ ಎಚ್ಚರ ತಪ್ಪಿದ್ದು ಸ್ಪಷ್ಟವಾಗಿತ್ತು. ಮುಂದಿನ ಹೊಡೆತವೆಲ್ಲ ಆತನ ಹೆಂಡತಿ ತನ್ನ ಭಾವನೆಗಳನ್ನು ಹೊರಹಾಕಲು ಬಳಕೆ ಮಾಡಿಕೊಂಡಿದ್ದಳು. ಮನ ದಣಿಯೆ ಹೊಡೆದ ನಂತರವೇ ಅವಳ ಆವೇಶ ಇಳಿದಿದ್ದು.
            ಇಷ್ಟೆಲ್ಲ ಆಗಿದ್ದರೂ ಆತನ ಬಂಟರಿಗೆ ಏನೋ ತಿಳಿದಿರಲಿಲ್ಲ. ಇದು ಅಚ್ಚರಿಗೂ ಕಾರಣವಾಗಿತ್ತು. ತಕ್ಷಣ ಜಾಗೃತಳಾದ ಮುಷ್ಫಿಕರನ ಹೆಂಡತಿ ವಿನಯಚಂದ್ರನನ್ನು ಹಿಡಿದು ಎಳೆದುಕೊಂಡು ಹೊರಟಳು. ಮಧುಮಿತಾ ಸಾಗಿದ್ದ ಕಳ್ಳ ದಾರಿಯಲ್ಲೇ ಮುಂದಕ್ಕೆ ಸಾಗಿದಳು. ಅಲ್ಲೆಲ್ಲೋ ಒಂದು ಕಡೆ ಸಾಗುವ ದಾರಿಯಲ್ಲಿ ಮಧುಮಿತಾ ನಿಂತುಕೊಂಡಿದ್ದಳು. ಅವಳನ್ನೂ ಕರೆದುಕೊಂಡು ತಾನೇ ಮುಂದಾಳುವಾಗಿ ಹೊರಟಳು ಮುಷ್ಫಿಕರನ ಮಡದಿ. ದಾರಿಯ ಕೊನೆಯಲ್ಲೊಬ್ಬ ಬಂಟ ನಿಂತುಕೊಂಡಿದ್ದ. ಆತನ ಬಳಿ ಅದೇನು ಹೇಳಿದಳೋ ತಕ್ಷಣ ಅವನು ಎತ್ತಲೋ ಹೊರಟುಹೋದ. ನಂತರ ವಿನಯಚಂದ್ರ ಹಾಗೂ ಮಧುಮಿತಾಳನ್ನು ಕರೆದುಕೊಂಡು ಹೊರಬಂದ ಆಕೆ  ಎಲ್ಲೆಲ್ಲೋ ಸುತ್ತಿಸಿ ಯಾವು ಯಾವುದೋ ದಾರಿಯಲ್ಲಿ ಮುಂದಕ್ಕೆ ಕರೆದೊಯ್ದಳು. ಆ ಕೋಟೆಯಂತ ಮನೆಯಲ್ಲಿದ್ದ ಬಂಟರ ಕಣ್ಣಿಗೆ ಕಾಣದಂತೆ ಬಹುದೂರ ಕರೆದೊಯ್ದ ನಂತರ ಸುರಕ್ಷಿತ ಎನ್ನುವಂತಾದ ಮೇಲೆ ವಿನಯಚಂದ್ರ ಹಾಗೂ ಮಧುಮಿತಾ ಹೊರಡುವ ಮಾರ್ಗವನ್ನು ತಿಳಿಸಿ ತಾನು ಮರಳಲು ಅನುವಾದಳು.
        ವಿನಯಚಂದ್ರ ಆಕೆಗೆ ಧನ್ಯವಾದ ಹೇಳಿದ. ಮಧುಮಿತಾ ಕಣ್ತುಂಬಿಕೊಂಡು ಕಾಲಿಗೆ ನಮಸ್ಕರಿಸಲು ಮುಂದಾದಳು. ಆಗ ಮಾತನಾಡಿದ ಮುಷ್ಫಿಕರನ ಹೆಂಡತಿ `ಬೇಡ.. ನಾನೂ ಆತನಿಗೆ ಬುದ್ಧಿ ಕಲಿಸಬೇಕು ಎಂದುಕೊಂಡಿದ್ದೆ. ಅದೇ ಸಮಯಕ್ಕೆ ನೀವು ಸಿಕ್ಕಿರಿ. ಆತನಿಗೆ ಈಗ ಏಟು ಬಿದ್ದಿದೆ. ಸತ್ತಿದ್ದಾನೋ? ಬದುಕಿದ್ದಾನೋ ಗೊತ್ತಿಲ್ಲ. ಬದುಕಿದ್ದರೆ ಮುಂದೆ ಇಂತಹ ಕಾರ್ಯಕ್ಕೆ ಕೈ ಹಾಕುವುದಿಲ್ಲ ಎಂದುಕೊಂಡಿದ್ದೇನೆ. ನೋಡೋಣ ಏನಾಗುತ್ತದೆ ಅಂತ.. ನೀವು ಮುಂದಕ್ಕೆ ಸಾಗಿ. ಇನ್ನು ಐದಾರು ಕಿಮಿ ಸಾಗಿದ ನಂತರ ಹೆದ್ದಾರಿ ಸಿಗುತ್ತದೆ. ಅಲ್ಲಿಯವರೆಗೂ ಓಡುತ್ತಲೇ ಇರಿ. ಯಾವ ಕ್ಷಣದಲ್ಲಿ ಮುಷ್ಫಿಕರನ ಬಂಟರು ನಿಮ್ಮನ್ನು ಹುಡುಕಿ ಬರುತ್ತಾರೆ ಹೇಳುವುದು ಅಸಾಧ್ಯ. ಸಾಧ್ಯವಾದರೆ ಈ ರಸ್ತೆಗೆ ಸಮಾನಾಂತರವಾಗಿ ಮರಗಳ ಮರೆಯಲ್ಲಿ ಸಾಗಿ. ಹೆದ್ದಾರಿಗೆ ಹೋಗುವವರೆಗೆ ಈ ದಾರಿಯನ್ನು, ನಾನು ಹೇಳಿದಂತೆ ಬಳಕೆ ಮಾಡಿ. ಆಮೇಲೆ ಸಮಸ್ಯೆಗಳು ಅಷ್ಟಾಗಿ ಇರುವುದಿಲ್ಲ.. ನಿಮಗೆ ಒಳ್ಳೆಯದಾಗಲಿ.. ಅಲ್ಲಾ ನಿಮ್ಮನ್ನು ಕಾಪಾಡಲಿ .. ' ಎಂದು ಹೇಳಿದವಳೇ ಒಂದೇ ಒಂದು ಮಾತಿಗೆ ಕಾಯದೇ ವಾಪಾಸಾದಳು.
                   ಮಧುಮಿತಾ ಹಾಗೂ ವಿನಯಚಂದ್ರ ಓಡಲು ಆರಂಭಿಸಿದರು. ಮುಷ್ಫಿಕರನ ಹೆಂಡತಿ ಹೇಳಿದ್ದೆಲ್ಲವನೂ ಚಾಚೂತಪ್ಪದೇ ಪಾಲಿಸುತ್ತ ಮುನ್ನಡೆದರು. ಇದರಿಂದಾಗಿ ಅರ್ಧಗಂಟೆಯೊಳಗೆ ಹೆದ್ದಾರಿ ಸಿಕ್ಕಿತು. ಹೆದ್ದಾರಿಯಲ್ಲಿ ವಾಹನ ಸಂಚಾರವೂ ಆರಂಭವಾಗಿತ್ತು.
            ವಿನಯಚಂದ್ರ ಯಾವುದೋ ಒಂದು ವಾಹನಕ್ಕೆ ಕೈ ಮಾಡಿದ. ನಿಂತ ವಾಹನದಲ್ಲಿ ಇಬ್ಬರೂ ತೂರಿಕೊಂಡರು. ಆ ವಾಹನ ಹೆದ್ದಾರಿಗುಂಟ ಸಾಗಿ ಬೋಗ್ರಾಕ್ಕೆ ಕವಲೊಡೆಯುವಲ್ಲಿ ಇವರನ್ನಿಳಿಸಿ ತೆರಳಿತು. ಅಲ್ಲೊಂದಷ್ಟು ಹೊಟೆಲುಗಳು, ಅಂಗಡಿಗಳು ಇದ್ದವು. ಅಲ್ಲೊಂದು ಅಂಗಡಿಯಲ್ಲಿ ಬಾಳೆಯ ಹಣ್ಣು, ಬ್ರೆಡ್ಡುಗಳನ್ನು ತಿಂದು ಹಸಿವನ್ನು ಕಡಿಮೆ ಮಾಡಿಕೊಂಡರು. ನಂತರ ಬಸ್ಸಿಗಾಗಿ ಕಾಯುತ್ತ ನಿಂತರು. ಕೆಲವೇ ಕ್ಷಣದಲ್ಲಿ ಇವರಿಗಾಗಿಯೇ ಬಂತೇನೋ ಎನ್ನುವಂತೆ ಬಸ್ಸೊಂದು ಆಗಮಿಸಿತು. ಖಾಲಿ ಖಾಲಿಯಾಗಿತ್ತು. ತಕ್ಷಣವೇ ಬಸ್ಸಿನ್ನು ಏರಿ ಕುಳಿತವರಿಗೆ ಒಮ್ಮೆ ನಿರಾಳ ಬಾವನೆ.
              `ಮಧು.. ಇಷ್ಟೊತ್ತಿಗೆ ಮುಷ್ಫಿಕರನ ಮನೆಯಲ್ಲಿ ಹುಯ್ಯಲೆದ್ದಿರುತ್ತದೆ ಅಲ್ಲವಾ?'
              `ಹುಂ.. ಖಂಡಿತ.. ಬಹುಶಃ ಅವನ ಬಂಟರು ನಮ್ಮನ್ನು ಹುಡುಕಲು ಆರಂಭಿಸಿರಲೂ ಸಾಕು.. ಇಲ್ಲಿಗೂ ಬಂದು ಬಿಡುತ್ತಾರಾ?'
              `ಏನೋ ಗೊತ್ತಿಲ್ಲ ಮಧು.. ಮುಷ್ಫಿಕರನ ಹೆಂಡತಿ ನಮ್ಮನ್ನು ಕಾಪಾಡಿದಳಲ್ಲ. ಅವಳೇ ಏನಾದರೂ ಮಾಡುತ್ತಾಳೆ ಎನ್ನುವ ವಿಶ್ವಾಸ ನನ್ನದು. ಖಂಡಿತ ಅವಳನ್ನು ನಾವು ನೆನೆಯ ಬೇಕು ಅಲ್ಲವಾ?'
              `ಹೌದು ವಿನು.. ಅವಳಿರಲಿಲ್ಲ ಎಂದರೆ ನೆನಪು ಮಾಡಿಕೋ.. ನಮ್ಮ ಬದುಕು ಇಷ್ಟೊತ್ತಿಗೆ ಚಿಂದಿಯಾಗಿಬಿಡುತ್ತಿತ್ತು. ಯಾವ ಗದ್ದೆಯಲ್ಲಿ ನಾವು ಮಣ್ಣಾಗಿರುತ್ತಿದ್ದೆವೋ.. ಅಲ್ಲವಾ?'
               `ಹುಂ.. ಅವಳನ್ನು ಎಷ್ಟು ನೆನಪು ಮಾಡಿಕೊಂಡರೂ ಸಾಲದು ನೋಡು.. ನಮ್ಮ ಈ ಪಯಣದಲ್ಲಿ ಸಲೀಂ ಚಾಚಾ ಎಷ್ಟು ಮುಖ್ಯಪಾತ್ರವಾಗುತ್ತಾನೋ ಅಷ್ಟೇ ಕೂಡ ಅವಳೂ.. ನಾವು ಅವರನ್ನು ದಿನನಿತ್ಯ ನೆನೆಯಲೇಬೇಕು..'
            ಮಾತು ಹೀಗೆ ಸಾಗಿತ್ತು. ಬಸ್ಸು ಮುಂದಕ್ಕೆ ಸಾಗಿದಂತೆಲ್ಲ ಮನಸ್ಸಿನ ತುಂಬೆಲ್ಲ ನೂರಾರು ಆಲೋಚನೆಗಳು. ದೊಡ್ಡ ಗಂಡಾಂತರದಿಂದ ಪಾರಾದ ಸಂತಸ. ಮಧುಮಿತಾ ಈಗೀಗ ಒಂದೊಂದು ಕನ್ನಡ ಶಬ್ದವನ್ನು ಆಡಲು ಶುರುಮಾಡಿದ್ದಳು. ವಿನಯಚಂದ್ರನೇ ಆಗೀಗ ಆಕೆಗೆ ಹೇಳಿಕೊಟ್ಟಿದ್ದ. ಅದೇ ರೀತಿ ವಿನಯಚಂದ್ರನೂ ಕೂಡ ಬೆಂಗಾಲಿಯಲ್ಲಿ ಮಾತನಾಡತೊಡಗಿದ್ದ. ನಮಸ್ಕಾರಕ್ಕೆ ನಮೋಷ್ಕಾರ್ ಎನ್ನುವುದು, `ವ' ಅಕ್ಷರವಿದ್ದಲ್ಲಿ `ಬ' ಅಕ್ಷರವನ್ನು ಬಳಕೆ ಮಾಡುವುದು ಮಾಡುತ್ತಿದ್ದ.
                `ಮಧು.. ಬೆಂಗಾಲಿಯಲ್ಲಿ ನನ್ನ ಹೆಸರು ಬಿನೋಯ್ಚಂದ್ರ ಆಗುತ್ತಲ್ಲ..' ಎಂದು ಕೇಳಿದ್ದ.  `ಹುಂ ಹೌದು..' ಎಂದು ಅವಳು ಕನ್ನಡದಲ್ಲಿಯೇ ಉತ್ತರಿಸಿದ್ದಳು.
               ಹತಿಕುಮುರುಲ್ ದಾಟಿ ಮುಂದಕ್ಕೆ ಸಾಗಿದಂತೆ ಚಿಕ್ಕದೊಂದು ನದಿ ಸಿಕ್ಕಿತು. `ವಿನು ಅದೋ ನೋಡು ಆ ನದಿಯೆ ಬೆಂಗಾಲಿ ನದಿ.. ನದಿ ಚಿಕ್ಕದು. ಆದರೆ ಹೆಸರು ಇಡೀ ದೇಶದ್ದೇ..' ಎಂದಳು.
                `ಭಾರತದಲ್ಲಿ ಮಾತ್ರ ಭಾರತ ಎಂಬ ನದಿಯಿಲ್ಲ. ಹಿಂದೂಸ್ಥಾನಕ್ಕೆ ಕಾರಣವಾದ ಸಿಂದೂ ಇದೆ. ಆದರೆ ಬಾಂಗ್ಲಾದೇಶದಲ್ಲಿ ಬೆಂಗಾಲಿ ನದಿ ಇದೆ.. ವಾವ್..' ಎಂದ ವಿನಯಚಂದ್ರ.
            ನದಿಯ ದಡದಲ್ಲೆಲ್ಲ ಗದ್ದೆಗಳು, ಮನೆಗಳು ಸಾಕಷ್ಟಿದ್ದವು. ಅಲ್ಲೊಮ್ಮೆ ಇಲ್ಲೊಮ್ಮೆ ಅಡಿಕೆಯ ತೋಟಗಳೂ ಕಾಣಿಸಿದ್ದವು. ವಿನಯಚಂದ್ರ ಅಚ್ಚರಿಯಿಂದ ನೋಡಿದ್ದ. ಕೊನೆಗೆ ತನ್ನ ಮನೆಯಲ್ಲಿ ಯಾವಾಗಲೋ ಒಮ್ಮೆ ಅಡಿಕೆ ದರ ಕುಸಿತದ ವಿಷಯ ಬಂದಾಗ ಅಪ್ಪ `ಬಾಂಗ್ಲಾದಿಂದ ಅಡಿಕೆ ಕಳ್ಳಮಾಲಿನ ರೂಪದಲ್ಲಿ ಭಾರತಕ್ಕೆ ಬರ್ತಾ ಇದೆಯಂತೆ.. ಆ ಕಾರಣಕ್ಕೆ ನಮ್ಮಲ್ಲಿ ಅಡಿಕೆ ದರ ಕುಸಿತವಾಗಿದೆ..' ಎಂದಿದ್ದು ನೆನಪಾಯಿತು. ಅಡಿಕೆ ತೋಟದಲ್ಲಿ ಫಸಲೂ ಕೂಡ ಸಾಕಷ್ಟಿತ್ತು. ಭಾರತದ ಅಡಿಕೆ ಮಾರುಕಟ್ಟೆಯಲ್ಲಿ ದರವನ್ನು ಏರಿಳಿತ ಮಾಡುವಷ್ಟು ಸಾಮರ್ಥ್ಯ ಈ ಅಡಿಕೆ ತೋಟಗಳಿಗಿದೆಯಲ್ಲ ಎಂದುಕೊಂಡ ಆತ.
              ಮತ್ತೊಂದು ಅರ್ಧಗಂಟೆಯ ಪ್ರಯಾಣ ಬಳಿಕ ಭುಯಿಯಾಘಟಿ ಎನ್ನುವ ಗ್ರಾಮ ಸಿಕ್ಕಿತು. ಅಲ್ಲಿಗೆ ಬರುವ ವೇಳೆಗೆ ಬಸ್ಸು ಸಂಪೂರ್ಣ ಭರ್ತಿಯಾಗಿ ಕಾಲಿಡಲು ಜಾಗವಿಲ್ಲ ಎಂಬಂತಾಗಿತ್ತು. ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರಿಗೂ ಮೊದಲೇ ಸೀಟು ಸಿಕ್ಕಿತ್ತಾದ್ದರಿಂದ ಜನಜಂಗುಳಿಯಲ್ಲಿ ಒದ್ದಾಡುವ ಪ್ರಸಂಗ ಎದುರಾಗಲಿಲ್ಲ. ಬಸ್ಸಿನಲ್ಲಿ ಜನಜಂಗುಳಿ ಎಷ್ಟೊತ್ತಪ್ಪಾ ಎಂದರೆ ಒಂದಿಬ್ಬರು ವಿನಯಚಂದ್ರನ ಮೈಮೇಲೆ ಒರಗಿಕೊಂಡೇ ನಿಂತಿದ್ದರು. ವೇಗವಾಗಿ ಸಾಗುತ್ತಿದ್ದ ಬಸ್ಸು ಗಾಳಿಯನ್ನು ಸೀಳುತ್ತಿದ್ದರೂ ಒಳಗಿದ್ದವರು ಮಾತ್ರ ಬೆವರಿ ನೀರಾಗಿದ್ದರು.
              ಧನಕುಂಡಿ ಎನ್ನುವ ಊರನ್ನು ತಲುಪುವ ವೇಳೆಗೆ ಬಸ್ಸು ಅಸಹನೀಯ ಎನ್ನಿಸತೊಡಗಿತ್ತು. ಬಸ್ಸಿನ ಟಾಪಿನ ಮೇಲೆಲ್ಲ ಜನರು ಕುಳಿತಿದ್ದರು. ಈಗಾಗಲೇ ಒಂದೂವರೆ ತಾಸು ಬಸ್ಸು ಪ್ರಯಾಣ ಮಾಡಿದ್ದವರು ಇನ್ನೂ ಎರಡು ತಾಸಿಗಿಂತ ಅಧಿಕ ಪ್ರಯಾಣ ಕೈಗೊಳ್ಳಬೇಕಿತ್ತು. ಪ್ರಮುಖ ಪಟ್ಟಣವಾದ ಶೇರ್ ಪುರವನ್ನು ತಲುಪುವ ವೇಳೆಗೆ ಆಗಸವಾಗಲೇ ಕೆಂಪಡರಿತ್ತು. ಮೂರು ತಾಸುಗಳ ಪಯಣ ಮೈಮನಸ್ಸುಗಳನ್ನು ಕದಡಿಬಿಟ್ಟಿತ್ತು. ಇಬ್ಬರಿಗೂ ಸಾಕಷ್ಟು ಆಯಾಸವಾಗಿತ್ತು. ಆದರೂ ಬೋಗ್ರಾವನ್ನು ತಲುಪುವುದು ಅನಿವಾರ್ಯವಾದ ಕಾರಣ ಇಬ್ಬರೂ ಸಹಿಸಿಕೊಂಡಿದ್ದರು. ಶೇರ್ ಪುರ ಸಾಕಷ್ಟು ದೊಡ್ಡದಾದ ನಗರಿಯೇ. 20-25 ಕಿ.ಮಿ ವಿಸ್ತಾರವಾಗಿರುವ ನಗರ ಎಂದರೂ ತಪ್ಪಿಲ್ಲ. ಪಕ್ಕದ ಹಾಜಿಪುರವನ್ನೂ ತನ್ನೊಳಗೆ ನುಂಗಿಕೊಂಡು ಬೆಳೆಯುತ್ತಿದೆ ಶೇರ್ ಪುರ. ಒಂದರ್ಧ ಗಂಟೆಯ ವಿರಾಮದ ನಂತರ ಬಸ್ಸು ಮುಂದಕ್ಕೆ ಹೊರಟಿತು.
             `ವಿನೂ.. ಇಲ್ಲೊಂದು ಊರಿದೆ ನೋಡು.. 9.ಮೈಲ್.. ಅಂತ.. ಎಂತ ಮಜವಾಗಿದೆಯಲ್ಲ..' ಎಂದು ಕೇಳಿದಳು ಮಧುಮಿತಾ. ತಕ್ಷಣ ವಿನಯಚಂದ್ರನಿಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಫುರ ತಾಲೂಕಿನಲ್ಲಿ `16ನೇ ಮೈಲ್' ಎಂಬ ಊರು ಇರುವುದು ನೆನಪಿಗೆ ಬಂದಿತು. ಮಧುಮಿತಾನ ಬಳಿ ಹೇಳಿದ. `ಆ ಹೆಸರು ಬಂದಿದ್ದೇಕೆ..?' ಕೇಳಿದ್ದಳು.
           `ನನಗೂ ಸರಿಯಾಗಿ ಗೊತ್ತಿಲ್ಲ.. ಬಹುಶಃ ಆ ಊರಿನಿಂದ ಶಿರಸಿಗೆ 16 ಮೈಲು ದೂರವಾಗುತ್ತದೆ ಎಂಬ ಲೆಕ್ಖವಿರಬೇಕು.. ಮುಂಚೆ ಘಟ್ಟದ ಕೆಳಗೆ ಅಂದರೆ ಕರಾವಳಿಯಿಂದ ಕಾಲ್ನಡಿಗೆಯಲ್ಲಿ ಬಂದವರು ಆ ಊರಿನ ಬಳಿ ಬರುತ್ತಿದ್ದರಂತೆ. ಅಲ್ಲಿ ಉಳಿಯುವ ವ್ಯವಸ್ಥೆ ಕೈಗೊಳ್ಳಲಾಗುತ್ತಿತ್ತಂತೆ. ಅಲ್ಲಿ ವಿಶ್ರಾಂತಿ ಪಡೆದು ನಂತರ ಪ್ರಯಾಣ ಮಾಡುತ್ತಿದ್ದರಂತೆ. ಆ ಕಾರಣಕ್ಕೆ ಆ ಹೆಸರನ್ನು ಇಟ್ಟಿರಬಹುದು. ಇದು ಬ್ರಿಟೀಷರ ಕಾಲದ್ದು..' ಎಂದ ವಿನಯಚಂದ್ರ. ಮಧುಮಿತಾಳಿಗೆ ಎಷ್ಟು ಅರ್ಥವಾಯಿತೋ ಗೊತ್ತಾಗಲಿಲ್ಲ.
           `ಹೇಯ್.. ನೀ ಹೇಳಿದ್ದು ನಿಜವೇ ಇರಬೇಕು.. ನೋಡು ಶೇರ್ ಪುರದಿಂದ 9ನೇ ಮೇಲ್ ಗೆ 9 ಮೈಲು ದೂರವಿದೆ.. ಈ ಊರಿಗೂ ಅದೇ ಕಾರಣಕ್ಕೆ ಹೀಗೆ ಹೆಸರು ಇಟ್ಟಿರಬೇಕು..' ಎಂದಳು ಮಧುಮಿತಾ. ವಿನಯಚಂದ್ರ ನಕ್ಕ. ಮತ್ತೊಂದು ಅರ್ಧತಾಸಿನ ಪ್ರಯಾಣದ ನಂತರ ಸುಲ್ತಾನ್ ಗಂಜ್ ಎಂಬ ಪ್ರದೇಶ ಸಿಕ್ಕಿತು. ಮತ್ತೊಂದು ತಾಸಿನ ನಂತರ ಬೋಗ್ರಾ ಸಿಕ್ಕಿತು. ಅಲ್ಲಿಗೆ ತೆರಳುವ ವೇಳೆಗೆ ವಿನಯಚಂದ್ರ ಹಾಗೂ ಮಧುಮಿತಾ ಇಬ್ಬರೂ ಸಾಕಷ್ಟು ಹಣ್ಣಾಗಿದ್ದರು.

(ಮುಂದುವರಿಯುತ್ತದೆ.)

Thursday, October 16, 2014

ನಾನೊಬ್ಬ ಕಥೆಗಾರ


ನಾನೊಬ್ಬ ಕಥೆಗಾರ
ಪಾತ್ರಗಳ ಆಡಿಸುವೆ |
ನನ್ನೆಯಾ ಭಾವನೆಗೆ
ಬಣ್ಣಗಳ ನೀಡುವೆ ||

ಅಳುವ ಕಣ್ಣಲಿ ನಾನು
ನಗೆಯ ಮೂಡಿಸಬಲ್ಲೆ |
ನಗುವಾತ ವ್ಯಕ್ತಿಯನು
ನಾ ಅಳಿಸಬಲ್ಲೆ ||

ಅರೆಘಳಿಗೆ ಸಮಯದಲಿ
ಪಾತ್ರಗಳ ಬದಲಿಸುವೆ |
ಕಲ್ಪನೆಯು ಮೆರೆಯುವಿಕೆಯ
ನೋಡಿ ನಲಿವೆ ||

ಕಥೆಯೆನ್ನ ಜೀವನವು
ಇದುವೆ ಸಂಗಾತಿ |
ಕಥೆಗಾಗಿ ಬದುಕಿರುವೆ
ಇದುವೆನ್ನ ಪ್ರೀತಿ ||

ಓದುಗನೆ ನೀನೆನ್ನ
ಕಥೆಯ ಜೀವಾಳ |
ನನ್ನ ಕಥೆ ಮೆರೆವುದಕೆ
ನೀನೇ ದಾಳ ||

***
(ಈ ಕವಿತೆಯನ್ನು ಬರೆದಿರುವುದು 19-10-2006ರಂದು ದಂಟಕಲ್ಲಿನಲ್ಲಿ)

Wednesday, October 15, 2014

ತೆರೆ

ಬದುಕ ತೆರೆ
ತೆರೆದು ಬತ್ತಲಾದಾಗ
ಕಣ್ಣೆದುರು ರಾಚಿದ್ದು
ನೋವುಗಳ ಮುಲುಕು |

ಎಲ್ಲ ಬಿಟ್ಟು, ಶರಧಿಯ
ಮಡಿಲೊಳು ತಲೆಯಿಟ್ಟು
ನೋವಿಗೊಂದು ಸಮಾಧಾನ
ವೆಂಬಂತೆ ಬಿಕ್ಕಿ ಅತ್ತು
ಹಗುರಾಗುವಾ ಎಂದರೆ
ಅಲ್ಲಿ ಮತ್ತದೇ ತೆರೆ-ತೆರೆಯ
ಬಿಂಬ-ಪ್ರತಿಬಿಂಬ |

ತೆರೆ, ಬಾಗಿಲು ತೆರೆ
ಹೊರ ಕವಚದೊಳು
ನಗುವಿನ ತೆರೆ, ಒಳಗೆಲ್ಲಾ
ಕಣ್ಣಹನಿ, ಹೃದಯ
ಹಿಂಡುವ ನೋವು.
ಒಳಗೊಂದು-ಹೊರಗೊಂದು
ಅರಿವಾಗದ ರೂಪ |

ತೆರೆ, ನೋವಿನ ಅಲೆ.
ತುಂತುಂಬಿ ಬಂದಷ್ಟೂ
ಬತ್ತದ ಸೆಲೆ |

ತೆರೆ, ತೆರೆಯ ತೆರೆ
ತೆರೆ-ತೆರೆ-ತೆರೆ-ತೆರೆ
ಮೀರದ ತೆರೆ |

ಕೊನೆಯೊಳೊಮ್ಮೆ ಆ ನೋವ
ತೆರೆಯ-ತೆರೆ.
ತೆರೆ ತೆರೆದ ನಂತರ
ಪಸೆ ಆರಿದ ಆಳದಲ್ಲೂ
ಮತ್ತೆಲ್ಲೋ ಒಂದು ನಲಿವ
ಸೆಲೆ, ಬರೆಯಲು
ಮರೆಯಲು ಬಯಸಿದೆ |

ತೆರೆ. ಮೀರದ ಸೆರೆ
ಕೊನೆಯ ತೆರೆ
ಕೊಟ್ಟ ಕೊನೆಯ ತೆರೆ ||

***
(ಈ ಕವಿತೆಯನ್ನು ಬರೆದಿರುವುದು 10-02-2007ರಂದು ಕಾರವಾರದಲ್ಲಿ)

Tuesday, October 14, 2014

ಅಪರಾಧಿ ನಾನಲ್ಲ (ಕಥೆ)

           ಅಂದಿನ ಕೆಲಸ ಮುಗಿಸಿ ಮನೆಗೆ ಬಂದು ಊಟ ಮಾಡಿ ಟಿವಿ ಹಚ್ಚಿದ ತಕ್ಷಣ ನಿರೂಪಕಿ ಯಾವುದೋ ಸುದ್ದಿಯನ್ನು ಪದೇ ಪದೆ ಹೇಳತೊಡಗಿದ್ದಳು. `ಉಡುಪಿಯಲ್ಲಿ ನಕ್ಸಲ್ ನಿಗ್ರಹ ಪಡೆಯಿಂದ ಕೋಂಬಿಂಗ್. ನಕ್ಸಲರ ಜೊತೆಗೆ ಗುಂಡಿನ ಕಾಳಗ. ಇಬ್ಬರ ಹತ್ಯೆ..' ಎಂದು ಹೇಳುತ್ತಿದ್ದಳು.
           ಹೇಳಿದ್ದನ್ನೇ ತಾನು ನಾಲ್ಕು ಸಾರಿ ಹೇಳಿ, ಸ್ಥಳೀಯ ವರದಿಗಾರರಿಂದ ಎರಡು ಸಾರಿ ಹೇಳಿಸಿ, ಟಿವಿ ಪರದೆಯ ಮೇಲೆ ಮೂರು ಸಾರಿ ಅದೇ ಸಾಲುಗಳನ್ನು ಮರುಪ್ರಕಟಿಸಿ, ಮತ್ತೆ ತಾನು ಎರಡು ಸಾರಿ ಹೇಳುವಲ್ಲಿಗೆ ಹೇಳಿದ್ದೇ ವಿಷಯವನ್ನು ಹತ್ತುನಿಮಿಷಕ್ಕೆ ಎಳೆದಿದ್ದಳು. ನಾನು ಮತ್ತಿನ್ನೇನಾದರೂ ಹೊಸ ಸುದ್ದಿ ಹೇಳುತ್ತಾಳೋ ಎಂದು ಕಾದೆ. ಆಕೆ ಹೇಳಲಿಲ್ಲ. ಇವರ ಹಣೆಬರಹವೇ ಇಷ್ಟು ಎಂದುಕೊಂಡು ಚಾನಲ್ ಬದಲಾಯಿಸಿದೆ.
           ಆದರೆ ಮನಸ್ಸಿನ ತುಂಬ ನಕ್ಸಲರು, ನಕ್ಸಲ್ ಪೀಡಿತ ಪ್ರದೇಶದ ಬಗ್ಗೆ ಆಲೋಚನೆ ಶುರುವಾಯಿತು. ಬಹು ದಿನಗಳಿಂದ ನನ್ನ ಮನಸ್ಸಿನಲ್ಲಿ ನಕ್ಸಲ್ ಪೀಡಿತ ಪ್ರದೇಶಕ್ಕೆ ಹೋಗಿ ಬರಬೇಕು. ಅಲ್ಲಿನ ಜನಜೀವನ ಹೇಗಿರುತ್ತದೆ ಎನ್ನುವುದನ್ನು ವೀಕ್ಷಿಸಬೇಕು. ನಕ್ಸಲ್ ನಿಗ್ರಹ ಪಡೆಯ ಕೋಂಬಿಂಗ್ ನೋಡಬೇಕು. ಜನಸಾಮಾನ್ಯರ ದೈನಂದಿನ ಜೀವನವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಬೇಕು. ಸಾಧ್ಯವಾದರೆ ಅಲ್ಲಿ ಉಳಿದುಕೊಳ್ಳಲು ಪ್ರಯತ್ನ ಮಾಡಬೇಕು ಎಂಬ ಆಸೆ ಕಾಡುತ್ತಿತ್ತು. ಇದೀಗ ಉಡುಪಿ ಜಿಲ್ಲೆಯಲ್ಲಿ ನಕ್ಸಲ್ ಎನ್ ಕೌಂಟರ್ ನಡೆದಿದೆಯಲ್ಲ. ಅಲ್ಲಿಗೆ ಹೋಗಿಬರೋಣ ಎಂದುಕೊಂಡೆ. ಹೆಚ್ಚಿನ ಮಾಹಿತಿಗಾಗಿ ಮತ್ತದೇ ಸುದ್ದಿ ವಾಹಿಸಿಯ ಮೊರೆ ಹೊಕ್ಕೆ.
            `ಕುದುರೆಮುಖ ರಾಷ್ಟ್ರೀಯ ಉದ್ಯಾನದ  ಬಳಿ ಇರುವ ಗ್ರಾಮವೊಂದರಲ್ಲಿ ನಕ್ಸಲ್ ನಿಗ್ರಹ ಪಡೆಯು ನಕ್ಸಲರ ಜೊತೆಗೆ ಗುಂಡಿನ ಕಾಳಗ ನಡೆಸಿದೆ. ಗುಂಡಿನ ಕಾಳಗಕ್ಕೆ ಇಬ್ಬರು ನಕ್ಸಲರು ಬಲಿಯಾಗಿದ್ದಾರೆ. ಇಬ್ಬರು ಪೊಲೀಸರಿಗೂ ಗಾಯವಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸ್ ಕಾವಲು ಬಿಗಿಯಾಗಿದೆ.' ಎಂದು ಹೇಳುತ್ತಿದ್ದರು. ಮರುದಿನ ಅಲ್ಲಿಗೆ ಹೋಗಲೇಬೇಕು ಎಂದುಕೊಂಡು ತಕ್ಷಣವೇ ಕಾರ್ಯಪ್ರವೃತ್ತನಾದೆ. ನಕ್ಸಲ್ ಪೀಡಿತ ಪ್ರದೇಶಕ್ಕೆ ಹೋಗಬೇಕಾದರೆ ಮಾಡಿಕೊಳ್ಳಬೇಕಾದ ಪೂರ್ವತಯಾರಿಯಲ್ಲಿ ತೊಡಗಿದೆ. ಹೊಸದಾಗಿ ಕೊಂಡಿದ್ದ ಡಿಎಸ್ಎಲ್ಆರ್ ಕ್ಯಾಮರಾವನ್ನು ತಯಾರು ಮಾಡಿಟ್ಟುಕೊಂಡೆ.
            ಮರುದಿನವೇ ಗಾಡಿಯನ್ನು ತೆಗೆದುಕೊಂಡು ನಕ್ಸಲ್ ಪೀಡಿತ ಪ್ರದೇಶಕ್ಕೆ ಹೊರಟೆ. ನನ್ನ ಊರಿನಿಂದ ನಿರಂತರ ಮೂರು ತಾಸುಗಳ ಪಯಣದ ನಂತರ ಉಡುಪಿ ಜಿಲ್ಲೆಯಿಂದ ಕಾರ್ಕಳಕ್ಕೆ ಬಂದು ಅಲ್ಲಿಂದ ಟಿವಿಯಲ್ಲಿ ಬಿತ್ತರಿಸಿದ್ದ ನಕ್ಸಲ್ ಪೀಡಿತ ಗ್ರಾಮದ ಕಡೆಗೆ ಹೊರಟೆ. ಕೆಲ ಕಿಲೋಮೀಟರುಗಳ ದೂರದ ನಂತರ ಕುದುರೇಮುಖ ರಾಷ್ಟ್ರೀಯ ಉದ್ಯಾನದ ತಪಾಸಣಾ ಕೇಂದ್ರ ಸಿಕ್ಕಿತು. ಅಲ್ಲಿ ನನ್ನನ್ನು ಪೊಲೀಸರು ತಡೆದರು. ನನ್ನಂತೆ ಇನ್ನೂ ಅನೇಕ ವಾಹನಗಳನ್ನೂ ಅವರು ತಡೆದಿದ್ದರು ಎನ್ನಿ. ನಾನು ನನ್ನ ಬೈಕನ್ನು ಪಕ್ಕಕ್ಕೆ ನಿಲ್ಲಿಸಿ ನನ್ನ ಸರದಿಗಾಗಿ ಕಾಯುತ್ತ ನಿಂತೆ. ಆದರೆ ಪೊಲೀಸರು ಅಲ್ಲಿದ್ದವರಲ್ಲಿ ಯಾರನ್ನೂ ಮುಂದಕ್ಕೆ ಬಿಡುವ ಹಾಗೆ ಕಾಣಲಿಲ್ಲ. ನಾನು ಸೀದಾ ಅಲ್ಲಿದ್ದ ಪೊಲೀಸನೊಬ್ಬನ ಬಳಿ `ತುರ್ತಾಗಿ ಹೋಗಬೇಕಾಗಿದೆ.. ನನ್ನನ್ನು ಬಿಡಿ..' ಎಂದೆ. ಆತ ಒಪ್ಪಲೇ ಇಲ್ಲ. ನಾನು ಪರಿಪರಿಯಾಗಿ ಕೇಳಿಕೊಂಡೆ. ಕೊನೆಗೆ ನನ್ನ ಮನೆಯಲ್ಲಿ ಹಿರಿಯರ ಆರೋಗ್ಯ ಸಮಸ್ಯೆ ಉಂಟಾಗಿದೆ. ಸೀರಿಯಸ್ ತೊಂದರೆಯಿದೆ. ಬೇಗನೇ ಹೋಗಬೇಕಿತ್ತು. ಎಂದೆ. ನನ್ನ ಮಾತನ್ನು ನಂಬಿದನಿರಬೇಕು. ಹಲವಾರು ಪತ್ರಗಳಲ್ಲಿ ಸಹಿ ಪಡೆದುಕೊಂಡು, ನಾನು ಹೊರಟ ಸಮಯವನ್ನು ನಮೂದು ಮಾಡಿಕೊಂಡು ಮುಂದಕ್ಕೆ ಹೋಗಲು ಬಿಟ್ಟ.
           ನಾನು ಕುದುರೆಮುಖ ರಾಷ್ಟ್ರೀಯ ಅರಣ್ಯ ಪ್ರದೇಶಕ್ಕೆ ಹೋಗುವವನು ನಕ್ಸಲ್ ಪೀಡಿತ ಪ್ರದೇಶ ಬಂದ ತಕ್ಷಣ ಸೀದಾ ನನ್ನ ಗಾಡಿಯನ್ನು ಅತ್ತ ತಿರುಗಿಸಿದೆ. ನಾನು ಹೊರಡುವ ಮುನ್ನ ಸಂಪೂರ್ಣ ಮಾಹಿತಿ ಕಲೆಹಾಕಿ ಬಂದಿದ್ದರಿಂದ ನನಗೆ ಸಮಸ್ಯೆಯಾಗಲಿಲ್ಲ. ಮುಖ್ಯ ರಸ್ತೆಯಿಂದ ಮೂರ್ನಾಲ್ಕು ಕಿಲೋಮೀಟರ್ ದೂರ ಹೋದ ನಂತರ ಕಾಡು ಮತ್ತಷ್ಟು ದಟ್ಟವಾಯಿತು. ನನಗೆ ಅಚ್ಚರಿಯಾಗಿದ್ದೆಂದರೆ ಅಂತಹ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆಯ ಒಬ್ಬೇ ಒಬ್ಬ ಸಿಬ್ಬಂದಿಯೂ ತಪಾಸಣೆ ಮಾಡುತ್ತಿಲ್ಲ ಎನ್ನುವುದು. ಒಂಟಿ ದಾರಿಯಲ್ಲಿ ನಾನೊಬ್ಬನೇ ಒಬ್ಬಂಟಿಯಾಗಿ ಮುಂದಕ್ಕೆ ಸಾಗುತ್ತಿದ್ದೆ. ಮತ್ತೊಂದು ಮೂರ್ನಾಲ್ಕು ಕಿಲೋಮೀಟರ್ ದೂರಕ್ಕೆ ಸಾಗಿದರೂ ಕೂಡ ಯಾರೊಬ್ಬರೂ ನನಗೆ ಕಾಣಿಸಲಿಲ್ಲ. ಹೀಗೆ ಸಾಗುತ್ತಿದ್ದಾಗ ಅಲ್ಲೊಂದು ಕಡೆ ಒಂದಷ್ಟು ಜನರು ನನ್ನನ್ನು ಅಡ್ಡಗಟ್ಟಿದರು. ಅವರ ಕೈಯಲ್ಲೆಲ್ಲ ಕತ್ತಿಗಳಿದ್ದವು, ಗುದ್ದಲಿ, ಪಿಕಾಸಿ ಮುಂತಾದ ಆಯುಧಗಳಿದ್ದವು. ನಾನು ಎದುರಿಗೆ ಕಂಡಿದ್ದೇ ತಡ ನನ್ನನ್ನು ಬೆನ್ನಟ್ಟಿ ಬಂದರು. ನನಗೆ ಒಮ್ಮೆಲೆ ಜೀವ ಕೈಗೆ ಬಂದಿತು. ಯಾರು ಇವರು, ನನ್ನ ಮೇಲೆ ಯಾವ ಕಾರಣಕ್ಕೆ ದಾಳಿ ಮಾಡುತ್ತಿದ್ದಾರೆ. ನಾನು ಏನಾದರೂ ತಪ್ಪು ಮಾಡಿದ್ದೇನಾ? ಅಥವಾ ನಕ್ಸಲರೇ ಈ ವೇಶ ತೊಟ್ಟುಕೊಂಡು ಬಂದಿದ್ದಾರಾ ಎಂದೆಲ್ಲ ಆಲೋಚಿಸಿದೆ.
           ನಾನು ಆ ಹಳ್ಳಿಯ ಹಾಳು ರಸ್ತೆಯಲ್ಲಿ ಅದೆಷ್ಟು ವೇಗವಾಗಿ ಗಾಡಿ ಓಡಿಸಿದ್ದೆ ಎಂದರೆ ಕೆಲವೇ ಕ್ಷಣಗಳಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆದ ಊರು ಸಿಕ್ಕಿತು. ಒಂದಿಬ್ಬರು ಹಿರಿಯರು ಅಲ್ಲಿನ ಮನೆಗಳ ಮುಮದೆ ಕುಳತಿದ್ದರು. ನಾನು ಅವರ ಬಳಿ ಹೋಗಿ ನನ್ನ ವಿಚಾರವನ್ನು ತಿಳಿಸಿದೆ. ನಾನು ಬಂದ ಕಾರಣವನ್ನೂ, ನನ್ನ ವಿವರವನ್ನೂ ಹೇಳಿದೆ. ಆ ಮನೆಗಳ ಮುಂದೆ ಕುಳಿತಿದ್ದ ಹಿರಿಯರು ನನ್ನ ಬಗ್ಗೆ ಮೊದಲಿಗೆ ಅನುಮಾನ ವ್ಯಕ್ತಪಡಿಸಿದರಾದರೂ ಕೊನೆಗೆ ನನ್ನನ್ನು ನಂಬಲು ಆರಂಭಿಸಿದರು. ಅಷ್ಟರಲ್ಲಿ ದಾರಿ ಮಧ್ಯದಲ್ಲಿ ನನಗೆ ಸಿಕ್ಕು, ನನ್ನನ್ನು ಅಡ್ಡಗಟ್ಟಿದ್ದ ಗುಂಪು ಅಲ್ಲಿಗೆ ಬಂದಿತು. ಬಂದವರೇ ಏಕಾಏಕಿ ನನ್ನ ಮೇಲೆ ಏರಿಬಂದರು. ಒಂದಿಬ್ಬರು ನಾಲ್ಕೇಟುಗಳನ್ನು ಬಿಗಿದೂ ಬಿಟ್ಟರು. ಹೊಡೆತ ತಿಂದ ನನಗೆ ಒಂದೆರಡು ಕಡೆ ಚಿಕ್ಕ ಗಾಯಗಳಾಗಿ ರಕ್ತವೂ ಒಸರಿತು. ಅಷ್ಟರಲ್ಲಿ ಅಲ್ಲೇ ಇದ್ದ ಒಬ್ಬ ಹಿರಿಯ ನನ್ನನ್ನು ರಕ್ಷಣೆ ಮಾಡಿದ. ಕೊನೆಗೆ ನಾನು ಹೇಳಿದ್ದ ನನ್ನ ವಿಷಯವನ್ನೇ ಆ ಗುಂಪಿನ ಮುಂದಕ್ಕೆ ತಿಳಿಸಿದ. ನಂತರವೇ ಅವರೆಲ್ಲ ನನ್ನ ಜೊತೆಗೆ ಸಮಾಧಾನದಿಂದ ಮಾತನಾಡಿದ್ದು.
           ನಾನು ಕೆಲವು ಪತ್ರಿಕೆಗಳಿಗೆ ಹವ್ಯಾಸಿಯಾಗಿ ಬರೆಯುತ್ತಿರುತ್ತೇನೆ. ಆ ವಿಷಯವನ್ನು ಅವರಿಗೆ ತಿಳಿಸಿದೆ. ಇದನ್ನು ಕೇಳಿದ್ದೇ ತಡ ನನ್ನ ಮೇಲೆ ಹಲ್ಲೆ ಮಾಡಿದ ಜನರು ಕಂಗಾಲಾಗಿಬಿಟ್ಟರು. ಏನೋ ಬಹುದೊಡ್ಡ ತಪ್ಪು ಮಾಡಿದ್ದೇವೆನ್ನುವಂತೆ ದಮ್ಮಯ್ಯ ಗುಡ್ಡೆ ಹಾಕಿದರು. ಅವರಲ್ಲೇ ಒಬ್ಬಾತ `ಅಲ್ಲಾ ಮಾರಾಯ್ರೆ.. ನೀವು ಪೇಪರ್ರಿನವರು ಅಂತ ಹೇಳುತ್ತೀರಿ.. ಅದೆಂತ ಆ ಪೊಲೀಸರ ಥರ ಬಟ್ಟೆ ಹಾಕಿಕೊಂಡು ಬರುವುದು..? ನಿಮ್ಮನ್ನು ಪೊಲೀಸರು ಅಂದುಕೊಂಡೆವಲ್ಲ ಮಾರಾಯ್ರೆ...' ಎಂದ. ನನಗೆ ಒಮ್ಮೆ ಗೊಂದಲ ಮೂಡಿತು. ಅರೇ ಒಂದು ವೇಳೆ ನಾನು ಪೊಲೀಸನೇ ಆಗಿದ್ದರೆ ನನಗೆ ಹೊಡೆಯುತ್ತಿದ್ದರೇ? ಕೇವಲ ಪೊಲೀಸರು ತೊಡುವ ಬಟ್ಟೆಯ ತರಹದ್ದೇ ಬಟ್ಟೆ ನಾನು ತೊಟ್ಟು ಬಂದಿದ್ದಕ್ಕೆ ಹೊಡೆಯುತ್ತಾರೆಂದರೆ ಏನೋ ಸಮಸ್ಯೆ ಇದೆ ಎನ್ನುವುದು ಗೊತ್ತಾಯಿತು.
           ನನಗೆ ಆಗ ಸಂಪೂರ್ಣ ಅರಿವಾಗಿದ್ದೆಂದರೆ ಖಯಾಲಿಗೆ ಬಿದ್ದು ಮಿಲಿಟರಿಯವರು ಹಾಕಿಕೊಳ್ಳುತ್ತಾರಲ್ಲ ಅದೇ ರೀತಿಯ ಒಂದು ಜರ್ಕೀನ್ ಹಾಕಿಕೊಂಡು ಬಂದಿದ್ದೆ. ಅದನ್ನು ನೋಡಿ ನಾನು ನಕ್ಸಲ್ ನಿಗ್ರಹ ಪಡೆಯ ಅಧಿಕಾರಿ ಎಂದುಕೊಂಡು ಹಲ್ಲೆ ಮಾಡಿದ್ದರು. ಆದರೆ ನನಗೆ ಅರಿವಾಗದೇ ಇದ್ದಿದ್ದು ಎಂದರೆ ಪೊಲೀಸರ ಮೇಲೆ ಇವರು ಯಾಕೆ ಹಲ್ಲೆ ಮಾಡಲು ಹೋಗಿದ್ದರು ಎನ್ನುವುದು. ಓಹೋ ಇದೇ ಕಾರಣಕ್ಕೆ ನಾನು ಬರುವ ದಾರಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಒಬ್ಬನೇ ಒಬ್ಬ ಸಿಬ್ಬಂದಿಯೂ ಕಾಣಿಸಲಿಲ್ಲ ಎಂದುಕೊಂಡೆ.
            ನನ್ನ ಮೇಲೆ ಹಲ್ಲೆ ಮಾಡಿದವರಲ್ಲೇ ಒಂದಿಬ್ಬರು ತಮ್ಮನ್ನು ಕ್ಷಮಿಸಿ ಎಂದು ಹೇಳಿದ್ದಷ್ಟೇ ಅಲ್ಲದೇ ನನ್ನ ಆದರಾತಿಥ್ಯಕ್ಕೆ ನಿಂತರು. ಹೊಡೆತ ತಿಂದಿದ್ದ ನೋವು ಮರೆಯುವಷ್ಟು ಪ್ರೀತಿಯಿಂದ ಮಾತನಾಡಿಸಿದರು. ಕೊನೆಗೆ ನಾನು ಎಲ್ಲರ ಬಳಿ ಮಾಹಿತಿ ಪಡೆಯಲು ಮುಂದಾದೆ. ಕಾಡು ತಿರುಗಿಸಿ ಎಂದೆ. ಗುಂಡಿನ ಕಾಳಗ ನಡೆದ ಸ್ಥಳವನ್ನು ನೋಡಬೇಕಲ್ಲ ಎಂದೂ ಹೇಳಿದೆ. ಎಲ್ಲರೂ ಮೌನವಹಿಸಿದರು. ಕೊನೆಗೆ ನಾನು ಸಾಕಷ್ಟು ಒತ್ತಾಯ ಮಾಡಿದ ನಂತರ ಒಂದಿಬ್ಬರು ಮಾತಿಗೆ ನಿಂತರು. ನಾನು ಚಕ್ಕನೆ ಅವರ ಪೋಟೋ ತೆಗೆದುಕೊಂಡೆ. ಅವರಲ್ಲೊಬ್ಬ `ಹೋಯ್.. ಇಲ್ಲಿ ಬನ್ನಿ ಮಾರಾಯ್ರೆ.. ನಾವು ಆ ಗುಂಡಿನ ಕಾಳಗ ನಡೆದ ಸ್ಥಳಕ್ಕೆ ಹೋಗಿ ಬರುವಾ.. ಆಮೇಲೆ ಎಲ್ಲ ಮಾಹಿತಿ ತಗೆದುಕೊಂಡರೆ ಆಯಿತು..' ಎಂದ. ನಾನು ಆತನನನ್ನು ಹಿಂಬಾಲಿಸಿದೆ.
            ದೊಡ್ಡದೊಂದು ಕಲ್ಲುಗುಡ್ಡ, ದೈತ್ಯ ಕಾನನಗಳು, ಗವ್ವೆನ್ನುವ ಕಾಡು, ಕಾಡುವ ವನ್ಯ ಜೀವಿಗಳು, ಎದೆಯೆತ್ತರದ ದರೆಗಳು.. ಬಹುಶಃ ಗುಂಡಿನ ಚಕಮಕಿ ನಡೆದ ಸ್ಥಳದ ಚಹರೆ ಹೀಗೆಯೇ ಇರಬೇಕೇನೋ ಎಂದುಕೊಂಡು ನಾನು ಆತನ ಹಿಂದಕ್ಕೆ ಹೆಜ್ಜೆ ಹಾಕುತ್ತಿದ್ದೆ. ಮಾತಿನ ನಡುವೆ ನನ್ನನ್ನು ಸ್ಥಳ ವೀಕ್ಷಣೆಗೆ ಕರೆದೊಯ್ಯುತ್ತಿದ್ದವರ ಬಳಿ `ಯಜಮಾನ್ರೆ.. ನಿಮ್ಮ ಹೆಸರೆಂತದ್ದು..?' ಎಂದು ಕೇಳಿದ್ದೆ.
            ತಕ್ಷಣವೇ ಆತ `ಹೋಯ್.. ನಿಮ್ಮದು ಶಿರಸಿಯಾ?' ಎಂದು ಕೇಳಿದವನೇ ತನ್ನ ಹೆಸರು ಕೃಷ್ಣ ಶೆಟ್ಟಿ ಎಂದೂ ತಿಳಿಸಿದ. ಊರಿನಲ್ಲಿ 25 ಮನೆಗಳಿವೆ. ಒಂದು ಶಾಲೆಯಿದೆ. ಎಂದೆಲ್ಲ ಹೇಳಿದವನು ಊರಿನ ಮಾಹಿತಿಯನ್ನು ಕೊಡುತ್ತ ಹೋದ. ಆತನ ಮಾತಿನ ಪ್ರಕಾರವೇ ಆ ಊರು ನಿಸರ್ಗದ ನಡುವೆಯಿದ್ದರೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ನಾಗರಿಕ ಜಗತ್ತಿನ ಯಾವುದೇ ಸೌಲಭ್ಯಗಳು ಉರಿಗೆ ಸಿಗುತ್ತಿಲ್ಲ. ವಿದ್ಯುತ್, ರಸ್ತೆ, ದೂರವಾಣಿಗಳಿಂದ ಊರು ದೂರವಾಗಿದೆ. ಈ ಪ್ರದೇಶದಲ್ಲಿ ಹೇರಳ ನೀರಿದ್ದರೂ ಸದ್ಬಳಕೆ ಸಾಧ್ಯವಾಗುತ್ತಿಲ್ಲ. ಕಾಡಿನ ಕಾರಣ ವನ್ಯ ಮೃಗಗಳ ಹಾವಳಿ ಹೆಚ್ಚಿದೆ ಎನ್ನುವುದು ತಿಳಿಯಿತು.
            ಇಂತಹ ಊರಿನ ಸಮಸ್ಯೆ ಮುಂದಿಟ್ಟುಕೊಂಡು ನ್ಯಾಯ ಕೊಡಿಸುವ ಮಾತುಗಳನ್ನಾಡುತ್ತಲೇ ನಕ್ಸಲರು ಕಾಲಿಟ್ಟರು.  ಊರಿನಲ್ಲಿ ಒಂದೆರಡು ಜನ ಓದಿಕೊಂಡವರು ಅವರಿಗೆ ಸಹಾಯವನ್ನೂ ಮಾಡಿದರು. ಒಂದೆರಡು ಮೂರು ಸಾರಿ ಊರಿನಲ್ಲಿಯೇ ನಕ್ಸಲರ ಸಭೆಗಳೂ ನಡೆದವು ಎನ್ನುವ ಮಾಹಿತಿಯನ್ನೂ ಕೃಷ್ಣಯ್ಯ ಶಟ್ಟರು ನೀಡಿದರು. ಹೀಗೆಂದವರೇ `ಈ ನಕ್ಸಲರು ಬಂದಿದ್ದರಿಂದಲೇ ನಮ್ಮೂರಿನ ಶಾಂತಿ-ನೆಮ್ಮದಿಗಳು ಕಳೆದು ಹೋದವು. ಅವರ ಹಿಂದೆ ನಕ್ಸಲ್ ನಿಗ್ರಹ ಪಡೆಯವರೂ ಬಂದವು. ಬೆನ್ನು ಬೆನ್ನಿಗೆ ಗುಂಡಿನ ಕಾಳಗಗಳೂ ನಡೆಯಲು ಆರಂಭಿಸಿದವು. ಇವರು ಅವರನ್ನು ಬೆನ್ನಟ್ಟುವುದು, ಅವರು ಇವರನ್ನು ಅಟ್ಟಿಸಿಕೊಂಡು ಹೋಗುವುದು ನಡೆಯಿತು. ಹೀಗಿದ್ದಾಗಲೇ ಒಂದು ಸಾರಿ ನಕ್ಸಲರು ನಮ್ಮೂರಲ್ಲೇ ಪಕ್ಕದ ಮನೆಯ ಒಬ್ಬರನ್ನು ಕೈ ಕತ್ತರಿಸಿದ್ದರು. ಕಾರಣ ಕೇಳಿದಾಗ ನಕ್ಸಲ್ ನಿಗ್ರಹ ಪಡೆಗೆ ಮಾಹಿತಿ ರವಾನೆ ಮಾಡುತ್ತಿದ್ದರು ಎಂದು ಹೇಳಿದರು. ನೆಮ್ಮದಿಯಿಂದ ನಮ್ಮೂರು ಭಯ-ಭೀತಿಯಿಂದ ಬಸವಳಿದಿದ್ದೇ ಆವಾಗ.. ಈ ಊರು ನಮಗೀಗ ಸಾಕೆನ್ನಿಸಿಬಿಟ್ಟಿದೆ.. ನೋಡಿ..' ಎಂದಿದ್ದರು. ನಾನು ಮೌನದಿಂದ ಅವರ ಮಾತನ್ನು ಆಲಿಸತೊಡಗಿದ್ದೆ.
           `ಕಳೆದೊಂದು ವರ್ಷದಿಂದ ಇದೇ ಆಗಿಬಿಟ್ಟಿದೆ ನೋಡಿ. ಇದ್ದೊಂದು ಶಾಲೆಯೂ ಮುಚ್ಚಿ ಹೋಗಿದೆ. ಶಾಲೆ ಕಲಿಸಲು ಬರುತ್ತಿದ್ದ ಶಿಕ್ಷಕರು ಹೆದರಿಕೊಂಡು ಈ ಊರಿನಿಂದಲೇ ವರ್ಗ ಮಾಡಿಸಿಕೊಂಡು ಹೋಗಿದ್ದಾರೆ. ಕಾಡಿನ ಮಧ್ಯ ಆರಾಮಾಗಿ ಬದುಕುತ್ತಿದ್ದವರು ರಾತ್ರಿ ಹಗಲು ಎನ್ನದೇ ಗುಂಡಿನ ಸದ್ದನ್ನು ಕೇಳುವಂತಾಗಿದೆ ನೋಡಿ.. ಯಾಕಾದರೂ ಹೀಗಾಗುತ್ತದೆಯೋ ಎಂದುಕೊಂಡರೆ ಅದೋ ನಿನ್ನೆ ಬೇರೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಎರಡು ಪ್ರದೇಶಗಳಲ್ಲಿ ಗುಂಡಿನ ಕಾಳಗ ನಡೆದಿದೆ. ಪೊಲೀಸರಿಗೂ ಗುಮಡು ತಾಗಿದೆ...' ಎಂದು ಹೇಳುವಷ್ಟರಲ್ಲಿ ಚಿಕ್ಕದೊಂದು ಗದ್ದೆ ಬಯಲು ಸಿಕ್ಕಿತು. ಶೆಟ್ಟರು ಅಲ್ಲಿಯೇ ಒಂದು ಕಡೆ ಕರೆದೊಯ್ದು ನಿಲ್ಲಿಸಿ `ಇದೇ ಜಾಗ ನೋಡಿ..' ಎಂದರು.
            `ನಾನು ಸುತ್ತಮುತ್ತ ಹುಡುಕಾಡಿದೆ. ಗುಂಡಿನ ಕಾಳಗ ನಡೆಯುವ ಸ್ಥಳ ಹಾಗಿರುತ್ತದಂತೆ ಹೀಗಿರುತ್ತದಂತೆ ಎಂದೆಲ್ಲ ಕೇಳಿದವನನ್ನು ಗದ್ದೆ ಬಯಲಿನಲ್ಲಿ ನಿಲ್ಲಿಸಿ ಇಗೋ ಇಲ್ಲಿದೆ ನೋಡಿ ಎಂದು ತೋರಿಸುತ್ತಿದ್ದರೆ ಜಾಗವನ್ನು ನೋಡಿದ ನನಗೆ ಭ್ರಮನಿರಸನವಾಗಿತ್ತು. `ಎಲ್ಲಿ..?' ಎಂದೆ.. ಕೆಳಗೆ ತೋರಿಸಿ `ಇದೇ ನೋಡಿ ಇಲ್ಲೇ ಒಬ್ಬನು ಸತ್ತಿದ್ದು, ನಕ್ಸಲ್ ನಿಗ್ರಹ ಪಡೆಯ ಗುಂಡಿಗೆ ಬಲಿಯಾಗಿದ್ದು..' ಎಂದ. ಅಲ್ಲೊಂದಷ್ಟು ಹೊಂಡಗಳು ಬಿದ್ದಿದ್ದವು. ರಕ್ತ ಕೂಡ ಬಿದ್ದಿತ್ತು. ಮಹಜರು ಮಾಡಿದಂತಹ ಗುರುತುಗಳಿದ್ದವು. ನಾನು ನೋಡಿ ಚಕಚಕನೆ ಪೋಟೋ ಕ್ಲಿಕ್ಕಿಸತೊಡಗಿದೆ. ಶೆಟ್ಟರು ಜಾಗ ತೋರಿಸುತ್ತ ನಿಂತಿದ್ದರು. `ಅದು ಸರಿ  ಶೆಟ್ಟರೆ.. ಈ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ..' ಎಂದವನೇ `ನನಗೆ ಇನ್ನೂ ಅರ್ಥ ಆಗದೇ ಇದ್ದಿದ್ದು ಅಂದರೆ ನೀವೆಲ್ಲ ಯಾಕೆ ನನ್ನನ್ನು ಹಲ್ಲೆ ಮಾಡಲು ಯತ್ನಿಸಿದ್ದು? ಕೊನೆಗೆ ಕೇಳಿದಾಗ ಪೊಲೀಸರು ಎನ್ನುವ ಗುಮಾನಿ ಮೇಲೆ ಹಲ್ಲೆಗೆ ಯತ್ನಿಸಿದೆ ಎಂದರಲ್ಲ? ಅಂತದ್ದೆಂತಹ ಕಾರಣ ಇದೆ? ಪೊಲೀಸರು ಏನಾದರೂ ಮಾಡಿದ್ದಾರಾ ನಿಮಗೆ..? ಏನೋ ಗೊಂದಲವಾಗುತ್ತಿದೆಯಲ್ಲ..? ಏನದು ಹೇಳಿ... ಬಿಡಿಸಿ ಹೇಳಿ..' ಎಂದೆ.
          ಕೃಷ್ಣ ಶೆಟ್ಟರು ನಿಧಾನವಾಗಿ ಹೇಳುತ್ತ ಹೋದರು. ಕೇಳುತ್ತಿದ್ದ ನಾನು ಮೈತುಂಬ ಬೆವರುತ್ತ ನಿಂತೆ. ಮನಸ್ಸಿನಲ್ಲಿ ಏನೋ ತಳಮಳ ಶುರುವಾಯಿತು.

***
         ಅಪ್ಪು ಶೆಟ್ಟರು ನಮ್ಮೂರಿನವರೇ. ಮೂಲ ಕುಂದಾಪುರ. ಇಲ್ಲಿಗೆ ಬಂದು ಉಳಿದಿದ್ದಾರೆ. ಇಲ್ಲಿಗೆ ಬಂದ ಮೇಲೆ ಅವರ ಅದೃಷ್ಟ ಖುಲಾಯಿಸಿ ಒಂದೆಕರೆ ಜಮೀನು ಮಾಡಿಕೊಂಡಿದ್ದಾರೆ. ಜಮೀನಿನಲ್ಲಿ ತೆಂಗು, ಅಡಿಕೆ ಮರಗಳಿವೆ. ಒಳ್ಳೆಯ ಫಸಲು ಕೂಡ ಬರುತ್ತಿದೆ. ಹಾಗೆ ನೋಡಿದರೆ ನಮ್ಮೂರಲ್ಲಿ ಅಪ್ಪು ಶೆಟ್ಟರೇ ಎಲ್ಲರಿಗಿಂತ ಸ್ವಲ್ಪ ಅನುಕೂಲಸ್ಥರು ಎನ್ನಬಹುದು. ಇವರ ಒಬ್ಬನೇ ಮಗ ನಿರಂಜನ. ಈ ನಿರಂಜನ ಇದ್ದಾನಲ್ಲ ಅವನೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಊರಿನವರಿಗೆ ಪ್ರೀತಿ ಪಾತ್ರನಾಗಿ ಬದುಕಿದವನು ನಿರಂಜನ. ನಮ್ಮೂರಿನಲ್ಲಿ ಮೊಟ್ಟ ಮೊದಲು ಕಾಲೇಜು ಮೆಟ್ಟಿಲು ಹತ್ತಿದವನೆಂದರೆ ಇದೇ ನಿರಂಜನನೇ. ನಮ್ಮೂರಿನಿಂದಲೇ ಪ್ರತಿದಿನ ಕಷ್ಟಪಟ್ಟು ಕಾಲೇಜಿಗೆ ಹೋಗಿ ಬಂದು ಮಾಡುತ್ತಿದ್ದ. ಇದು ಮೂರ್ನಾಲ್ಕು ವರ್ಷದ ಹಿಂದಿನ ಮಾತು. ಆಮೇಲೆ ಕಾಲೇಜು ಮುಗಿಯಿತು. ಅಪ್ಪು ಶೆಟ್ಟರ ಅಣತಿಯಂತೆ ಕಾಲೇಜು ಮುಗಿದ ಮೇಲೆ ಮನೆಯಲ್ಲೇ ಉಳಿದು ಜಮೀನು ನೋಡಿಕೊಳ್ಳುವ ಕಾಯಕದಲ್ಲಿ ನಿರತನಾಗಿದ್ದ.
           ಹೀಗಿದ್ದಾಗಲೇ ನಮ್ಮೂರಿಗೆ ನಕ್ಸಲರು ಮೊದಲು ಕಾಲಿರಿಸಿದರು. ಯಾವು ಯಾವುದೋ ಸಮಸ್ಯೆಗಳು, ಕಾರಣಗಳನ್ನು ಮುಂದಿಟ್ಟುಕೊಂಡು ನಮ್ಮೂರಿನ ಸುತ್ತಮುತ್ತ ಒಡಾಡತೊಡಗಿದವರು ನಕ್ಸಲರು. ಇವರನ್ನು ಮೊಟ್ಟ ಮೊದಲ ಬಾರಿಗೆ ವಿರೋಧಿಸಿದವನೇ ನಮ್ಮ ನಿರಂಜನ. ನಮ್ಮೂರಿನಲ್ಲಿ ನಿರಂಜನ ಕಾಲೇಜು ಮೆಟ್ಟಿಲು ಹತ್ತಿದ ನಂತರ ನಾಲ್ಕಾರು ಜನ ಹುಡುಗರು ಕಾಲೇಜಿನಲ್ಲಿ ಓದಿದ್ದಾರೆ. ಆದರೆ ಅವರೆಲ್ಲ ನಕ್ಸಲರ ಮರುಳು ಮಾತಿಗೆ ಬಲಿಯಾಗಿ ಅವರ ಜೊತೆಗೆ ಹೊರಟು ನಿಂತಿದ್ದಾಗ ನಿರಂಜನನೇ ತಡೆದಿದ್ದ. ಒಂದೆರಡು ಸಾರಿ ನಿರಂಜನನಿಗೂ ಹಾಗೂ ನಕ್ಸಲರ ಗುಂಪಿನ ನಡುವೆಯೂ ಘರ್ಷಣೆಗಳಾಗಿದ್ದವು. ನಕ್ಸಲರು ಬಂದು ಒಂದೆರಡು ಸಾರಿ ನಿರಂಜನನನ್ನು ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕಿ ಹೋಗಿದ್ದರು. ಆದರೆ ನಿರಂಜನ ಅದಕ್ಕೆ ಸೊಪ್ಪು ಹಾಕಿರಲಿಲ್ಲ.
           ನಮ್ಮೂರಲ್ಲಿ ಇರುವ ಏಕೈಕ ಶಾಲೆಗೆ ಶಿಕ್ಷಕರ ಕೊರತೆ ಮೊದಲಿನಿಂದಲೂ ಇದೆ. ಕಾಡಿನ ನಡುವೆ ಇರುವ ಈ ಶಾಲೆಗೆ ಶಿಕ್ಷಕರು ವರ್ಗವಾಗಿ ಬಂದರೂ ಮೂರು ತಿಂಗಳಿಗಿಂತ ಹೆಚ್ಚಿನ ಕಾಲ ಇರುವುದೇ ಇಲ್ಲ. ಕಾಡು ಹಾಗೂ ಕೊಂಪೆಯ ಕಾರಣ ಶಿಕ್ಷಕರು ಇಲ್ಲಿಂದ ಕಾಲ್ಕಿತ್ತಿದ್ದೇ ಹೆಚ್ಚು. ಹೊರ ಜಗತ್ತಿನ ಸಂಪರ್ಕವಿಲ್ಲ. ಆಧುನಿಕ ಯಂತ್ರಗಳಿಲ್ಲ. ದೂರವಾಣಿಯಿಲ್ಲ. ವಿದ್ಯುತ್ ಕೂಡ ಕಂಬ, ತಂತಿಗಳಿವೆ. ಆದರೆ ಆಗೀಗ ವಿದ್ಯುತ್ ಬಂದರೆ ಬಂದೀತು ಅಷ್ಟೆ ಎನ್ನುವಂತಹ ವಾತಾವರಣ.ಇಂತಹ ಊರಿನಲ್ಲಿ ಯಾವ ಮಾಸ್ತರ್ರು ಉಳಿಯುತ್ತಾರೆ ಹೇಳಿ. ಮಾಸ್ತರ್ ಊರು ಬಿಟ್ಟರೆ ನಿರಂಜನನಿಗೆ ಶಾಲೆಯ ಕೆಲಸ. ಆತನೇ ಮಕ್ಕಳನ್ನು ಕೂರಿಸಕೊಂಡು ವಿದ್ಯೆ ಕಲಿಸುವ ಕಾರ್ಯ ಮಾಡುತ್ತಿದ್ದ.
            ಹೀಗಿದ್ದಾಗ ನಕ್ಸಲರ ಕಾರುಬಾರು ನಮ್ಮೂರಲ್ಲಿ ಜೋರಾಯಿತು. ನಮ್ಮೂರಿನ ಒಂದೆರಡು ಮನೆಗಳವರು ಆಂತರಿಕವಾಗಿ ನಕ್ಸಲರಿಗೆ ಬೆಂಬಲವನ್ನೂ ನೀಡಲು ಆರಂಭಿಸಿದರು. ಹೀಗಿದ್ದಾಗ ಒಂದು ಸಾರಿ ನಕ್ಸಲರು ನಮ್ಮೂರಿನ ಶಾಲೆಯ ಆವರಣದಲ್ಲಿಯೇ ಸಭೆಯೊಂದನ್ನು ನಡೆಸಿದ್ದರು. ಇದರಿಂದ ಸಿಟ್ಟಾಗಿದ್ದ ನಿರಂಜನ ನಕ್ಸಲರನ್ನು ಊರಿಗೆ ಬರದಂತೆ ಮಾಡಲು ಚಿಂತಿಸಿ ನಕ್ಸಲ್ ನಿಗ್ರಹ ಪಡೆಗೆ ಮಾಹಿತಿ ನೀಡಿದ್ದ. ಬಹುಶಃ ನಿರಂಜನ ಹೇಳಿದ ನಂತರವೇ ಇರಬೇಕು ನಮ್ಮೂರಿಗೆ ನಕ್ಸಲ್ ನಿಗ್ರಹ ಪಡೆ ಕಾಲಿರಿಸಿದ್ದು. ಆನಂತರದ ದಿನಗಳಲ್ಲಿ ನಮ್ಮೂರು ದಿನವಹಿ ಗುಂಡಿನ ಕಾಳಗದ ಸದ್ದು ಕೇಳುವಂತಾಗಿದ್ದು.
          ನಕ್ಸಲ್ ನಿಗ್ರಹ ಪಡೆಯೇನೋ ಬಂದಿತು. ಅವರ ಹಿಂದೆ ಸಾಲು ಸಾಲು ಅಧಿಕಾರಿಗಳು ಬಂದರು. ಅಧಿಕಾರಿಗಳ ಎದುರು ನಿರಂಜನ ನಮ್ಮೂರಿನ ಸಮಸ್ಯೆಗಳ ಕುರಿತು ತಿಳಿಸುತ್ತಲೇ ಹೋದ. ಅರ್ಜಿಗಳ ಮೇಲೆ ಅರ್ಜಿ ಕೊಡುತ್ತಲೇ ಹೋದ. ಆದರೆ ಆ ಅರ್ಜಿಗಳಿಗೆ ಯಾವುದೇ ಪುರಸ್ಕಾರ ಸಿಗಲಿಲ್ಲ. ಅವೆಲ್ಲಿ ಹೋದವೋ ಅರ್ಥವಾಗಲಿಲ್ಲ. ಒಂದು ಹಂತದಲ್ಲಿ ನಿರಂಜನ ರೋಸಿ ಹೋಗಿದ್ದಂತೂ ಹೌದು. ಹೀಗಿದ್ದಾಗಲೇ ನಿರಂಜನನ ಕಣ್ಣಿಗೆ ಒಂದು ದೊಡ್ಡ ಅಪರಾಧ ಜಗತ್ತು ಕಣ್ಣುಬಿಟ್ಟಿತ್ತು.
          ಊರಿಗೆ ಬಂದಿದ್ದ ನಕ್ಸಲ್ ನಿಗ್ರಹ ಪಡೆ ಕೇವಲ ನಕ್ಸಲರನ್ನು ಹೆಡೆಮುರಿ ಕಟ್ಟುವ ಕಾರ್ಯ ಮಾತ್ರ ಮಾಡುತ್ತಿರಲಿಲ್ಲ. ಬದಲಾಗಿ ಊರಿನಲ್ಲಿ ಇಲ್ಲ ಸಲ್ಲದ ಕಾರ್ಯಗಳಲ್ಲಿ ಅದು ತೊಡಗಿಕೊಳ್ಳಲಾರಂಭಿಸಿತು. ಹಲವಾರು ಅಪರಾಧಿ ಕಾರ್ಯಗಳನ್ನು ನಡೆಸಲು ಶುರುಮಾಡಿತು. ಅದೊಂದು ದಿನ ನಿರಂಜನ ಕಣ್ಣಿಗೆ ಈ ಚಟುವಟಿಕೆಗಳು ಬಿದ್ದವು.
         ನಮ್ಮೂರಿನ ಫಾಸಲೆಯಲ್ಲಿ ಆಯುರ್ವೇದ ಗಿಡಮೂಲಿಕೆಗಳು ಹೇರಳವಾಗಿದೆ. ನಿರಂಜನನೇ ಹೇಳಿದಂತೆ ಜಗತ್ತಿನ ಯಾವ ಮೂಲೆಯಲ್ಲೂ ದೊರಕದಂತಹ ಅಪರೂಪದ ವನಸ್ಪತಿಗಳು ಇಲ್ಲಿ ಸಿಗುತ್ತವಂತೆ. ಆತ ಹೇಳಿ ಖುಷಿಪಟ್ಟಿದ್ದ. ನಾವೂ ಒಂದು ರೀತಿಯಲ್ಲಿ ಹೆಮ್ಮೆ ಪಟ್ಟುಕೊಂಡಿದ್ದೆವು. ನಕ್ಸಲ್ ನಿಗ್ರಹ ಪಡೆ ಇಲ್ಲಿಗೆ ಬಂದಿತ್ತಲ್ಲ. ಬಂದ ಒಂದೆರಡು ತಿಂಗಳ ಕಾಲ ಸುಮ್ಮನಿತ್ತು. ಕೇವಲ ನಕ್ಸಲ್ ನಿಗ್ರಹದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿತ್ತು. ಆದರೆ ಕಾಲಕ್ರಮೇಣ ಈ ಪಡೆಯ ಬೇರೆ ಕೆಲಸಗಳೂ ಆರಂಭಗೊಂಡವು. ಪಡೆಯಲ್ಲಿದ್ದ ಒಂದೆರಡು ಅಧಿಕಾರಿಗಳು ನಿಧಾನವಾಗಿ ನಮ್ಮೂರಿನಲ್ಲಿ ಸಿಗುತ್ತಿದ್ದ ಆಯುರ್ವೇದ ಔಷಧಿಗಳನ್ನು ಕದ್ದು ಮಾರತೊಡಗಿದರು. ಮೊದ ಮೊದಲಿಗೆ ಒಂದೊಂದೇ ಗಿಡ ಕಿತ್ತು ಒಯ್ಯಲು ಆರಂಭಿಸಿದ ಅವರು ನಂತರ ತಮ್ಮ ಜೀಪು ಹೊರಟಾಗಲೆಲ್ಲ ರಾಶಿ ರಾಶಿಗಟ್ಟಲೆ ಔಷಧಿಗಳನ್ನು ಒಯ್ಯ ತೊಡಗಿದ್ದರು. ನಿರಂಜನನ ಕಣ್ಣಿಗೆ ಇದು ಬಿದ್ದಿದ್ದು ಅದೊಂದು ದಿನ.
           ವಿಷಯ ಗೊತ್ತಾದ ನಂತರ ನಿರಂಜನ ನಕ್ಸಲ್ ನಿಗ್ರಹ ಪಡೆಯ ಈ ಕಾರ್ಯವನ್ನು ವಿರೋಧಿಸಿದ. ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳ ಬಳಿ ಮಾತನಾಡಿದ. ಅವರು ಮಾಡುತ್ತಿದ್ದ ಈ ಕಾರ್ಯದ ವಿರುದ್ಧ ಸೂಕ್ಷ್ಮವಾಗಿ ಎಚ್ಚರಿಕೆಯನ್ನೂ ನೀಡಿದ. ಪರಿಣಾಮವಾಗಿ ಆಯುರ್ವೇದ ಔಷಧಿ ಕದ್ದು ಮಾರಾಟ ಮಾಡುವುದು ನಿಲ್ಲುವುದಕ್ಕಿಂತ ಹೆಚ್ಚಾಗಿ ನಿರಂಜನನ ವಿರುದ್ಧ ಅಧಿಕಾರಿಗಳು ಸಿಟ್ಟಾದರೆ ಎಂದೇ ಹೇಳಬಹುದು. ಆಯುರ್ವೇದ ಔಷಧಿಗಳನ್ನು ಅಧಿಕಾರಿಗಳು ಕದ್ದೊಯ್ಯುತ್ತಿದ್ದ ಸಂದರ್ಭದಲ್ಲಿ ಒಂದೆರಡು ಬಾರಿ ಅವರನ್ನು ಅಡ್ಡಗಟ್ಟಿ ಹಿಡಿದ. ಆ ನಂತರವಂತೂ ಆ ಅಧಿಕಾರಿಗಳ ಸಿಟ್ಟು ತಾರಕಕ್ಕೆ ಏರಿತು ಎಂದೇ ಹೇಳಬಹುದು.
             ಹೀಗಿದ್ದಾಗ ಈಗೊಂದು ನಾಲ್ಕು ದಿನಗಳ ಹಿಂದೆ ನಮ್ಮೂರ ಫಾಸಲೆಯಲ್ಲಿ ನಕ್ಸಲರು ಕಾಣಿಸಿಕೊಂಡರು. ಆ ವಿಷಯ ನಕ್ಸಲ್ ನಿಗ್ರಹ ಪಡೆಗೆ ತಿಳಿಯಿತು. ಅವರು ಬಂದು ಇಲ್ಲಿ ಕೂಂಬಿಂಗ್ ಮಾಡತೊಡಗಿದರು. ಬಂದವರು ತಮಗೆ ಬೇಕಾದ ಆಯುರ್ವೇದ ಔಷಧಿಗಳನ್ನು ಸಂಗ್ರಹ ಮಾಡಲು ಆರಂಭಿಸಿದರು. ನಿರಂಜನನಿಗೂ ಇದು ತಿಳಿಯಿತು. ಆತ ಅವರನ್ನು ತಡೆಯಲು ಇದೇ ಗದ್ದೆ ಬಯಲಿಗೆ ಬಂದಿದ್ದ. ಹೀಗಿದ್ದಾಗಲೇ ನಿಗ್ರಹ ಪಡೆಯ ಕಣ್ಣಿಗೆ ನಕ್ಸಲರು ಕಾಣಿಸಿಕೊಂಡಿದ್ದರು. ಅದೋ ನೋಡಿ ಎಂದು ಕೃಷ್ಣ ಶೆಟ್ಟರು ನನಗೆ ತೋರಿಸಿದರು. ಒಂದಷ್ಟು ಮರಗಳಿದ್ದ ಜಾಗ ಕಾಣಿಸಿತು. ಅಲ್ಲೇ ನಕ್ಸಲರು ಕಣ್ಣಿಗೆ ಬಿದ್ದಿದ್ದು. ಅದೇ ಸಂದರ್ಭದಲ್ಲಿ ಫೈರಿಂಗ್ ಕೂಡ ಶುರುವಾಯಿತು. ಇತ್ತಂಡಗಳೂ ಗುಂಡಿನ ಚಕಮಕಿ ನಡೆದೇ ಬಿಟ್ಟವು.
           ಹೀಗಿದ್ದಾಗಲೇ ಅದ್ಯಾವನೋ ಒಬ್ಬ ಅಧಿಕಾರಿಗೆ ನಿರಂಜನನ ವಿರುದ್ಧ ಭಾರಿ ಸಿಟ್ಟಿತ್ತು. ತಾವು ಆಯುರ್ವೇದ ಔಷಧಿ ಮಾರುವುದನ್ನು ತಡೆಯುತ್ತಾನಲ್ಲ. ಈತನಿಗೊಂದು ಗತಿ ಕಾಣಿಸಬೇಕು. ಮೇಲಧಿಕಾರಿಗಳಿಗೆ ಕಂಪ್ಲೇಂಟ್ ಮಾಡುವ ಇವನನ್ನು ಮಟ್ಟ ಹಾಕಬೇಕು ಎಂದುಕೊಂಡ ಆತ ಏಕಾ ಏಕಿ ನಿರಂಜನನ ಮೇಲೆ ಗುಂಡು ಹಾರಿಸಿಬಿಟ್ಟ.. ಒಂದೇ ಗುಂಡು ನಿಂರಜನನ ಪ್ರಾಣ ಪಕ್ಷಿ ಹಾರಿಹೋಗಿತ್ತು.. ಎಂದವರೇ ಕೃಷ್ಣ ಶೆಟ್ಟರು ಕಣ್ಣೀರುಗರೆಯಲು ಆರಂಭಿಸಿದರು.
         ನನಗೆ ಆಘಾತವಾಗಿತ್ತು. ಟಿವಿ ಚಾನಲ್ ಬಿತ್ತರಿಸಿದ ವರದಿಯಲ್ಲಿ ಇಬ್ಬರು ನಕ್ಸಲರು ಸತ್ತಿದ್ದಾರೆ ಎಂದಿತ್ತು. ಆದರೆ ಇಲ್ಲಿ ಸತ್ತ ಇಬ್ಬರ ಪೈಕಿ ಒಬ್ಬ ನಿರಪರಾಧಿ. ನಕ್ಸಲನೇ ಅಲ್ಲ. ಒಬ್ಬ ನಕ್ಸಲನನ್ನು ಪೊಲೀಸರು ಕೊಂದಿದ್ದು ಖರೆಯಾಗಿದ್ದರೂ ಇನ್ನೊಬ್ಬನನ್ನು ಬೇಕಂತಲೇ ಹತ್ಯೆ ಮಾಡಿದ್ದರು. ಛೇ ಹೊರ ಜಗತ್ತಿನಲ್ಲಿ ಸುಳ್ಳು ಸುದ್ದಿ ಬಿತ್ತರವಾಗುತ್ತಿದೆಯಲ್ಲ.. ಎಂದುಕೊಂಡು ಚಡಪಡಿಸಿದೆ.
         ಸಾವರಿಸಿಕೊಂಡ ಕೃಷ್ಣ ಶೆಟ್ಟರು ಮಾತು ಮುಂದುವರಿಸಿದರು. ನಕ್ಸಲ್ ನಿಗ್ರಹ ಪಡೆಯವರೇ ನಿರಂಜನನ್ನು ಹತ್ಯೆ ಮಾಡಿದರು ಎನ್ನುವ ಸುದ್ದಿ ಊರಿನ ತುಂಬ ಕಾಡ್ಗಿಚ್ಚಿನಂತೆ ಹಬ್ಬಿತು. ನಾವೆಲ್ಲ ಬಂದು ಸೇರುವ ಹೊತ್ತಿಗೆ ಪಡೆಯವರು `ನಕ್ಸಲರೇ ಈತನನ್ನು ಹತ್ಯೆ ಮಾಡಿದ್ದಾರೆ..' ಎಂದು ಹಬ್ಬಿಸಲು ನೋಡಿದರು. ಆದರೆ ನಾವು ನಂಬಲಿಲ್ಲ. ನಮ್ಮೂರಿಗರು ನಕ್ಸಲ್ ನಿಗ್ರಹ ಪಡೆಯ ವಿರುದ್ಧ ಸಿಟ್ಟಿಗೆದ್ದರು. ತಕ್ಷಣವೇ ಮನೆ ಮನೆಯ ಜನರೆಲ್ಲ ಸಿಡಿದೆದ್ದರು. ಕೈಗೆ ಸಿಕ್ಕ ಆಯುಧಗಳನ್ನು ತಂದು ನಕ್ಸಲ್ ನಿಗ್ರಹ ಪಡೆಯ ಮೇಲೆ ಎರಗಿ ಬಿದ್ದರು. ಒಂದಿಬ್ಬರು ನಮ್ಮ ಕೈಲಿ ಏಟನ್ನೂ ತಿಂದರು. ನಾವು ಯಾವಾಗ ತಿರುಗಿಬಿದ್ದೆವೋ ಆಗ ನಮ್ಮೂರನ್ನು ಬಿಟ್ಟ ಹೋದವರು ಇದುವರೆಗೂ ಮರಳಿಲ್ಲ ನೋಡಿ. ಅದಕ್ಕೇ ನೀವು ಬಂದಿದ್ದನ್ನು ನೋಡಿ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳೇ ಮತ್ತೆ ಬಂದರೇನೋ ಎಂದು ನಾವು ಹಲ್ಲೆಗೆ ಮುಂದಾಗಿದ್ದು ಎಂದರು ಕೃಷ್ಣ ಶೆಟ್ಟರು.
          ನಾನು ಮೌನವಾಗಿ ನಿಂತಿದ್ದೆ. ನಮ್ಮೂರಿನ ಎಲ್ಲರ ಕನಸಿನಂತೆ ಬತ್ತದ ಚಿಲುಮೆಯಂತೆ ಇದ್ದ ನಿರಂಜನ. ಅಪ್ಪು ಶೆಟ್ಟರ ಏಕೈಕ ಮಗ. ಪಾ..ಪ ಅವರು ಈಗ ಹಾಸಿಗೆ ಹಿಡಿದು ಕುಳಿತಿದ್ದಾರೆ. ನಾಲ್ಕು ದಿನದ ಹಿಂದೆ ನಡೆದ ಈ ಘಟನೆ ನನಗೆ ಇನ್ನೂ ಕಣ್ಣ ಮುಂದೆ ಇದೆ. ಇನ್ನೂ ಇಪ್ಪತ್ತೈದು ಮೀರಿರಲಿಲ್ಲ. ಮದುವೆ ಮಕ್ಕಳನ್ನು ಕಾಣಬೇಕಿದ್ದ ಆತ. ಅನ್ಯಾಯ ತಡೆಯಲು ಹೋಗಿ ತಾನೇ ಅನ್ಯಾಯವಾಗಿ ಹತ್ಯೆಯಾಗಿದ್ದ. ನಕ್ಸಲರನ್ನು ನಿಗ್ರಹಿಸಬೇಕಿದ್ದವರು ನಿರಂಜನನ್ನು ಹತ್ಯೆ ಮಾಡಿದ್ದರು. ಆ ದಿನ ನಾವು ಗಲಾಟೆ ಮಾಡಿದ ನಂತರದಿಂದ ಇದುವರೆಗೂ ನಿಮ್ಮನ್ನು ಹೊರತು ಪಡಿಸಿದರೆ ಬೇರೆ ಯಾರೊಬ್ಬರೂ ಬರಲಿಲ್ಲ. ನಕ್ಸಲ್ ನಿಗ್ರಹ ಪಡೆಯವರು ಹಾಗಿರಲಿ ಆವತ್ತು ಓಡಿ ಹೋದ ನಕ್ಸಲರು ಇಂದಿನವರೆಗೆ ಈ ಕಡೆಗೆ ಬಂದಿಲ್ಲ ನೋಡಿ. ಬಂದರೆ ಅವರಿಗೂ ಗತಿ ಕಾಣಿಸುತ್ತೇವೆ.. ಎಂದರು ಕೃಷ್ಣ ಶೆಟ್ಟರು.
           ನಿಧಾನವಾಗಿ ಮರಳಿದ ನಾವು ಅಪ್ಪು ಶೆಟ್ಟರನ್ನು ನೋಡಿದೆ. ಹಾಸಿಗೆಯಲ್ಲಿ ಈಗಲೋ ಆಗಲೋ ಎನ್ನುವಂತೆ ಮಲಗಿದ್ದರು. ಮಗನನ್ನು ಕಳೆದುಕೊಂಡಿದ್ದ ದುಃಖ ಅವರನ್ನು ಬಾಧಿಸುತ್ತಿತ್ತು. ನಾನು ನಿಧಾನವಾಗಿ ಅವರ ಬಳಿ ಹೋದೆ ಸಮಾಧಾನ ಮಾಡಲು ಯತ್ನಿಸಿದೆ. ಆದರೆ ನಾನು ಸಮಾಧಾನ ಮಾಡಲು ಯತ್ನಿಸಿದಂತೆಲ್ಲ ಅವರು ಮತ್ತಷ್ಟು ದುಃಖಿತರಾಗುತ್ತಿದ್ದಂತೆ ಅನ್ನಿಸಿತು. ನಾನು ಎದ್ದು ಅಸಮಧಾನದಿಂದ ಅತ್ತಿತ್ತ ತಿರುಗಾಡಲು ಯತ್ನಿಸಿದೆ. ಅಷ್ಟರಲ್ಲಿ ನನ್ನ ಬಳಿಗೆ ಕೃಷ್ಣ ಶೆಟ್ಟರು ಬಂದರು. `ಈ ಘಟನೆ ನಡೆದಿದ್ದು ಯಾವಾಗ ಅಂದಿರಿ..?' ನಾನು ಕೇಳಿದೆ.
            `ನಾಲ್ಕು ದಿನಗಳ ಹಿಂದೆ..' ಎಂದರು ಕೃಷ್ಣ ಶೆಟ್ಟರು. `ಹೌದಾ... ಆದರೆ ಈ ಘಟನೆ ನಿನ್ನೆ ನಡೆದಿದೆ ಅಂತ ಟಿವಿಯಲ್ಲಿ ಬಂತಲ್ಲ.. ಅದನ್ನು ನೋಡಿದವನೇ ನಾನು ಇಲ್ಲಿಗೆ ಬಂದೆ..' ಎಂದೆ.
              `ಇಲ್ಲ.. ಇದು ನಾಲ್ಕು ದಿನದ ಹಿಂದೆ ನಡೆದಿದ್ದು.. ಅವರು ಘಟನೆ ಮುಚ್ಚಿ ಹಾಕಲು ಹೀಗೆ ಹೇಳಿರಬೇಕು ನೋಡಿ..' ಎಂದರು ಶೆಟ್ಟರು.
               `ಅವರು ನಿನ್ನೆ ಘಟನೆ ನಡೆದಿದ್ದು ಎಂದರು. ಜೊತೆಗೆ ನಕ್ಸಲ್ ನಿಗ್ರಹ ಪಡೆಯವರು ಇಬ್ಬರು ನಕ್ಸಲರನ್ನು ಹತ್ಯೆ ಮಾಡಿದ್ದಾರೆ ಎಂದೂ ಟಿವಿಯಲ್ಲಿ ಬರುತ್ತಿದೆ. ಎಂತಹ ಸುಳ್ಳಿ ಹೇಳಿದರಲ್ಲ. ಮೋಸಗಾರರು... ನಿರಪರಾಧಿ, ಅಮಾಯಕ ನಿರಂಜನನ್ನು ಹತ್ಯೆ ಮಾಡಿದ್ದಲ್ಲದೇ ಆತನಿಗೂ ನಕ್ಸಲ್ ಪಟ್ಟ ಕಟ್ಟಿದರಲ್ಲ.. ತಮ್ಮ ತಪ್ಪು ಮುಚ್ಚಿಕೊಳ್ಳುವುದಕ್ಕಾಗಿ ಹೇಗೆಲ್ಲ ಹೇಳಿದರಲ್ಲ.. ಛೇ..' ಎಂದೆ.
             ನನ್ನ ಮಾತನ್ನು ಕೇಳಿದ ಅಪ್ಪು ಶೆಟ್ಟರು ತಕ್ಷಣ ಹಾಸಿಗೆಯಿಂದ ಎದ್ದರು. ಮಗನ ಸಾವಿನಿಂದ ಕಂಗೆಟ್ಟಿದ್ದ ಅವರು ಈಗಲೋ ಆಗಲೋ ಎನ್ನುತ್ತಿದ್ದವರು ಥಟ್ಟನೆ ಎದ್ದು ನಿಂತರು. `ಹೋಯ್.. ನಿಮ್ ಹೆಸರೆಂತದು.. ಅದೆಂತದಾರೂ ಇರಲಿ.. ಇಲ್ನೋಡಿ.. ನನ್ನ ಮಗ ನಕ್ಸಲನಲ್ಲ.. ನನ್ನ ಮಗ ಯಾವ ಅಪರಾಧವನ್ನೂ ಮಾಡಿಲ್ಲ. ನನ್ನ ಮಗನನ್ನು ಕೊಂದವರು ನಕ್ಸಲ್ ನಿಗ್ರಹ ಪಡೆಯವರು.. ಅವರು ಮೋಸಗಾರರು. ಹೊರ ಜಗತ್ತಿನಲ್ಲಿ ನನ್ನ ಮಗ ನಕ್ಸಲ. ಆತನನ್ನು ಹತ್ಯೆ ಮಾಡಿದ್ದೇವೆ ಎಂದು ಹೇಳಿದ್ದಾರಾ..' ಎಂದು ಕಟಕಟನೆ ಹಲ್ಲು ಕಡಿದರು. ಅಲ್ಲಿಯವರೆಗೂ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದ ಅವರಲ್ಲಿ ಇದ್ದಕ್ಕಿದ್ದಂತೆ ದೈತ್ಯ ಶಕ್ತಿ ಬಂದಿತ್ತು. ನನ್ನನ್ನು ಬಂದು ಭುಜವನ್ನು ಹಿಡಿದು.. `ನನಗೊಂದು ಸಹಾಯ ಮಾಡಿ.. ನೀವು ಈ ಕೂಡಲೇ ಹೊರಡಿ. ನಿಮ್ಮ ಜೊತೆಗೆ ನಾನೂ ಬರುತ್ತೇನೆ. ಅದ್ಯಾರ ಬಳಿ ಹೇಳುತ್ತೀರೋ.. ಏನು ಮಾಡುತ್ತೀರೋ ಗೊತ್ತಿಲ್ಲ. ನನ್ನ ಮಗ ನಕ್ಸಲನಲ್ಲ. ನನ್ನ ಮಗ ಅಪರಾಧಿಯಲ್ಲ ಎಂದು ಸಾಬೀತು ಮಾಡಬೇಕಿದೆ. ಜಗತ್ತಿಗೆ ಸಾರಿ ಹೇಳಬೇಕಿದೆ. ನನ್ನ ಮಗನನ್ನು ನಕ್ಸಲ್ ನಿಗ್ರಹ ಪಡೆ ವಿನಾಕಾರಣ, ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಹತ್ಯೆ ಮಾಡಿತು ಎಂದು ಹೇಳಬೇಕಿದೆ. ನನ್ನನ್ನು ಕರೆದುಕೊಂಡು ಹೋಗಿ. ನಿಮ್ಮ ಕಾಲಿಗೆ ಬೀಳುತ್ತೇನೆ ಮಾರಾಯ್ರೆ.. ನನಗೆ ಇದೊಂದು ಸಹಾಯ ಮಾಡಿ..' ಎಂದು ದೀನನಾಗಿ ಹೇಳಿದರು.
           ನಾನು ತಕ್ಷಣ ಅಲ್ಲಿಂದ ಹೊರಡಲು ಅನುವಾದೆ. ನನ್ನ ಗಾಡಿಯನ್ನು ಮತ್ತೆ ಚಾಲೂ ಮಾಡಿದೆ. ಇಡೀ ಊರು ನನ್ನನ್ನು ತದೇಕಚಿತ್ತದಿಂದ ನೋಡುತ್ತಿದ್ದರೆ ಉಟ್ಟ ಬಟ್ಟೆಯಲ್ಲಿಯೇ ಅಪ್ಪು ಶೆಟ್ಟರು ವೇಗವಾಗಿ ಬಂದು ನನ್ನ ಗಾಡಿಯ ಹಿಂದಿನ ಸೀಟಿನಲ್ಲಿ ಕುಳಿತುಕೊಂಡರು. ನಾನು ಮತ್ತೆ ನಗರದ ಕಡೆಗೆ ಹೊರಟಿದ್ದೆ.

**
(ಈ ಕತೆಯನ್ನು ಬರೆದಿದ್ದು ಅ.14 ಹಾಗೂ 15ರಂದು ಶಿರಸಿಯಲ್ಲಿ)

ಹನಿ ಪಟಾಕಿಗಳು

ಮಿಕ

ಅಮೆರಿಕವೆಂಬುದೊಂದು
ಕುತಂತ್ರಿ ತೋಳ |
ಅದಕ್ಕೆ ಬಲಿ ಬೀಳುವುದು
ಭಾರತದಂತಹ ಮಿಕ ||

ಆವಾಜ್

ನವೆಂಬರ್ ಬಂತೆಂದರೆ
ಕನ್ನಡದೆಡೆಗೆ
ಕೇಳುತ್ತದೆ ಅವಾಜ್
ಹಾಕುವವರು ಮಾತ್ರ
ವಾಟಾಳ್ ನಾಗರಾಜ್ ||

ನಾಕ-ನರಕ

ನಾಕ, ನಾಕ ಎನ್ನುತ್ತಿದ್ದ
ಜನರಿಗೆ ಅರ್ಥವಾಗಲಿಲ್ಲ,
ಜಗತ್ತಿನ ಅತಿದೊಡ್ಡ ನರಕವೆಂದರೆ
ಅದು ಅಮೆರಿಕ ||

ಬಿರುದು

ಅವನು ಪಡೆಯಬೇಕೆಂದಿದ್ದ
ಬಿರುದು ಗಾಯನ ಲೋಕದಲ್ಲಿ
ಗಾನ ಗಂಧರ್ವ |
ಆತನ ಹಾಡು ಕೇಳಿದ ಜನ
ಕೊಟ್ಟರು ಅವನಿಗೆ ಬಿರುದು
ಗಾನ ಗಾರ್ಧಭ ||

ವಾಸ್ತವ

ದೂರದ ಗುಡ್ಡ
ಕಣ್ಣಿಗೆ ನುಣುಪು |
ಗೆಳತೀ ಹಾಗೇ ನಿನ್ನ
ಮುಖವೂ ಕೂಡ |
ದೂರವಿದ್ದಷ್ಟೇ
ಕಾಣುವುದು ನುಣುಪು ||

Monday, October 13, 2014

ಭಾವಾಶಯ

ಒಂದು ಕವನದ ಜೊತೆಗೆ
ಭಾವದೊಡಲು ಬೇಕು |
ಮನವ ತಣಿಸಲು ಬೇಕು
ಒಂದು ಹಾರಯಿಕೆ |

ಕವನ ಗೆಲ್ಲಲು ಬೇಕು
ಪ್ರೀತಿಸುವ ಮನವೊಂದು |
ಅರ್ಥವಾಗಲು ಬೇಕು
ಹೊಸತು ಪರಿಭಾಷೆ |

ಕವನ ಹುಟ್ಟಲು ಬೇಕು
ನವ ಉಸಿರು, ಹಸಿ ಮನಸು |
ಬಾಳು ಬದುಕಲು ಬೇಕು
ಗಮ್ಯತೆಯ ಬಿಂದು |

ಮನಸು ಅರಳಲು ಬೇಕು
ನಲಿವೊಂದು ಸ್ಪೂರ್ತಿ |
ಜೊತೆ ಬೇಕು ಆದರ್ಶ
ಮನಕೊಂದು ಮೂರ್ತಿ |

**
(ಈ ಕವಿತೆಯನ್ನು ಬರೆದಿರುವುದು 26-10-2006ರಂದು ದಂಟಕಲ್ಲಿನಲ್ಲಿ)

Sunday, October 12, 2014

ಬೆಂಗಾಲಿ ಸುಂದರಿ-32

(ಬಾಂಗ್ಲಾದೇಶದ ಗ್ರಾಮೀಣ ಪ್ರದೇಶ)
          ಮುಂದಕ್ಕೆ ಸಾಗುವುದು ಅನಿವಾರ್ಯವೂ ಅತ್ಯಗತ್ಯವೂ ಆಗಿತ್ತು. ಕೆಲಕಾಲ ವಿಶ್ರಮಿಸಿಕೊಂಡ ಬಳಿಕ ಮತ್ತೆ ಮುಂದಕ್ಕೆ ಹೆಜ್ಜೆಹಾಕಿದರು ಮಧುಮಿತಾ ಹಾಗೂ ವಿನಯಚಂದ್ರ. ಆಗಲೇ ಸಾಕಷ್ಟು ಕತ್ತಲೆ ಕವಿದಿತ್ತು. ಹೆದ್ದಾರಿಯ ಪಕ್ಕದಲ್ಲಿಯೇ ರೈಲ್ವೆ ಹಳಿ ಹಾದು ಹೋಗಿತ್ತು. ನಡೆಯುತ್ತಿದ್ದವರಿಗೆ ಬಾಂಗ್ಲಾದ ಅಪ್ಪಟ ಗ್ರಾಮೀಣ ಭಾಗಗಳ ಪರಿಚಯವಾಗತೊಡಗಿತ್ತು. ಮನೆಗಳು ನಿಧಾನವಾಗಿ ಕಡಿಮೆಯಾಗಿ ಅಲ್ಲಲ್ಲಿ ಕುರುಚಲು ಕಾಡುಗಳು, ನಡು ನಡುವೆ ಗದ್ದೆಗಳು, ಬಯಲುಗಳು ಕಾಣಿಸತೊಡಗಿದ್ದವು. ನದಿಯಾಚೆಗೆ ಹಿಂಸಾಚಾರ ತೀವ್ರವಾಗಿದ್ದರೂ ನದಿಯ ಇನ್ನೊಂದು ಭಾಗದಲ್ಲಿ ಹಿಂಸಾಚಾರವಿದ್ದಂತೆ ಕಾಣಿಸಲಿಲ್ಲ. ಅಲ್ಲೊಂದು ಇಲ್ಲೊಂದು ವಾಹನಗಳು ಸಂಚಾರ ಮಾಡುತ್ತಿದ್ದವು. ವಿನಯಚಂದ್ರ ಕೆಲವು ವಾಹನಗಳನ್ನು ನಿಲ್ಲಿಸಲು ಪ್ರಯತ್ನಪಟ್ಟನಾದರೂ ಯಾರೂ ಕೂಡ ಇವರ ಬಳಿ ನಿಲ್ಲಿಸಲಿಲ್ಲ.
                    `ಕಾಲ್ನಡಿಯೆಯೇ ಹಣೆಯಲ್ಲಿ ಬರೆದುಕೊಂಡಿದ್ದರೆ ಏನುಮಾಡಲಿಕ್ಕೆ ಬರುತ್ತದೆ ಹೇಳು..' ಎಂದಳು ಮಧುಮಿತಾ..
                     `ಹುಂ.. ಹೌದು ಕಣೆ.. ಬಾ ನಡೆಯೋಣ..ನಮ್ಮಲ್ಲಿ ಕಸುವು ಸಾಕಷ್ಟಿದೆ ಅಲ್ಲವಾ' ಎಂದು ಮತ್ತಷ್ಟು ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದರು. ಅಲ್ಲೆಲ್ಲೋ ಒಂದು ಕಡೆಯಲ್ಲಿ ರಾತ್ರಿಯ ಊಟವನ್ನೂ ಮಾಡಿದರು.
                      `ವಿನು ನೀನು ನನಗೆ ಸಿಗದೇ ಇದ್ದರೆ ನನ್ನ ಗತಿ ಏನಾಗುತ್ತಿತ್ತೋ ಅಲ್ಲವಾ?.' ಎಂದಳು ಮಧುಮಿತಾ
                      `ಗೊತ್ತಿಲ್ಲ ಮಧು. ನೀನು ನನಗೆ ಸಿಕ್ಕಿದ್ದು ಮಾತ್ರ ನನ್ನ ಅದೃಷ್ಟ ಎಂದೇ ಹೇಳಬೇಕು ನೋಡು. ಕಾಲೇಜಿನ ದಿನಗಳಲ್ಲಿ ಒಂದಿಬ್ಬರು ಹುಡುಗಿಯರು ನನ್ನಲ್ಲಿ ಆಸಕ್ತಿಯನ್ನು ಮೂಡಿಸಿದ್ದರಾದರೂ ತೀರಾ ಇಷ್ಟಪಡುವಷ್ಟು ಹತ್ತಿರವಾಗಿರಲಿಲ್ಲ. ಆದರೆ ನೀನು ಮಾತ್ರ ಮೊದಲ ನೋಟದಲ್ಲೇ ನನಗಿಷ್ಟವಾಗಿಬಿಟ್ಟೆ. ನನ್ನ ಮನಸ್ಸನ್ನು ಆವರಿಸಿಕೊಂಡು ಬಿಟ್ಟಿದ್ದೆ. ನಿಜ ಹೇಳುತ್ತೇನೆ ಮಧು. ಆ ದಿನ ನಾವು ಕಾಂತಾಜಿ ದೇವಾಲಯಕ್ಕೆ ಹೋಗಿದ್ದೆವಲ್ಲ. ಆ ದಿನ ನನಗೆ ಹುಷಾರಿರಲಿಲ್ಲ ಎಂದು ಸೂರ್ಯನ್ ಹೇಳಿದ್ದ ನೆನಪಿದೆಯಾ? ಅದು ನಿಜವಲ್ಲ. ನಿನ್ನ ಜೊತೆ ಮಾತನಾಡಬೇಕು, ನಿನ್ನ ಸನಿಹ ಇರಬೇಕು ಎನ್ನುವ ಕಾರಣಕ್ಕಾಗಿ ಸೂರ್ಯನ್ ಮಾಡಿದ ಪ್ಲಾನ್ ಅದಾಗಿತ್ತು' ಎಂದ ವಿನಯಚಂದ್ರ.
                      `ನಂಗೊತ್ತಿತ್ತು. ಆ ದಿನ ನಿನಗೆ ಏನೂ ಆಗಿರಲಿಲ್ಲ ಎನ್ನುವುದು ನನಗೆ ತಿಳಿದಿತ್ತು. ನೀನು ನಾಟಕ ಮಾಡುತ್ತಿದ್ದುದೂ ನನಗೆ ತಿಳಿದಿತ್ತು ವಿನು. ಆದರೂ ನಾನು ನಿನ್ನ ಜೊತೆ ಮಾತನಾಡಿದೆ. ಬೆರೆತೆ. ಯಾಕೆ ಗೊತ್ತಾ, ಮೊದಲ ನೋಟದಲ್ಲಿಯೇ ನೀನೂ ನನಗೆ ಇಷ್ಟವಾಗಿಬಿಟ್ಟಿದೆ' ಎಂದು ಮಧುಮಿತಾ ಹೇಳಿದಾಗ ವಿನಯಚಂದ್ರ ಬೆರಗಾಗಿದ್ದ. ಯಲಾ ಇವಳಾ ಎಂದುಕೊಳ್ಳುತ್ತಿದ್ದಾಗಲೇ ಮಾತು ಮುಂದುವರಿಸಿದ ಮಧುಮಿತಾ `ನಾನು ಢಾಕಾ ಯುನಿವರ್ಸಿಟಿಯಲ್ಲಿ ಎಂಎಯನ್ನೂ ಮುಗಿಸಿದ್ದೇನೆ. ನನ್ನ ಕಾಲೇಜು ಬದುಕಿನಲ್ಲಿ ಅದೆಷ್ಟೋ ಜನರು ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಎಲ್ಲರೂ ಮುಸಲ್ಮಾನರು. ಯಾರೊಬ್ಬರನ್ನೂ ನಾನು ಇಷ್ಟ ಪಡಲಿಲ್ಲ ನೋಡು. ಒಂದಿಬ್ಬರಂತೂ ಅತ್ಯಾಚಾರ ಮಾಡಿಬಿಡುತ್ತೇನೆ ಎಂದೂ ಬೆದರಿಕೆ ಹಾಕಿದ್ದರು. ಮುಖಕ್ಕೆ ಆಸಿಡ್ ಎರಚುತ್ತೇನೆ ಎಂದೂ ಹೆದರಿಸಿದ್ದರು. ಆದರೆ ನಾನು ಮಾತ್ರ ಅವರ ಬೆದರಿಕೆಗೆ ಜಗ್ಗಿರಲಿಲ್ಲ, ಕುಗ್ಗಿರಲಿಲ್ಲ ನೋಡು. ಆದರೆ ಆ ದಿನ ಹೊಟೆಲಿನಲ್ಲಿ ಯಾವಾಗ ನಿನ್ನನ್ನು ಕಂಡೆನೋ ಆ ಕ್ಷಣವೇ ಇಷ್ಟವಾಗಿಬಿಟ್ಟೆ ವಿನು. ಬಾಗಿಲು ತೆಗೆದಾಕ್ಷಣ ನೀನು ನನ್ನನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದುದು ನನ್ನ ಅರಿವಿಗೆ ಬಂದಿತ್ತು. ನಾನೂ ಕೂಡ ಅಷ್ಟೇ ಅಚ್ಚರಿ, ಪ್ರೀತಿಯಿಂದ ನಿನ್ನನ್ನು ನೋಡಲು ಆರಂಭಿಸಿದ್ದೆ..' ಎಂದು ಮಧುಮಿತಾ ಹೇಳಿದಾಗ ಮಾತ್ರ ವಿನಯಚಂದ್ರ ಮತ್ತಷ್ಟು ಅಚ್ಚರಿ ಹಾಗೂ ಹೆಮ್ಮೆಯಿಂದ ವಿನಯಚಂದ್ರ ನೋಡಿದ್ದ.
               `ಮಧು ನಾವು ಭಾರತವನ್ನು ತಲುಪುತ್ತೀವೋ ಇಲ್ಲವೋ ಗೊತ್ತಿಲ್ಲ. ಇಲ್ಲಿಯವರೆಗೆ ಒಟ್ಟಾಗಿದ್ದೇವೆ. ಪ್ರೇಮದ ರಸಾನುಭೂತಿಯನ್ನು ಅನುಭವಿಸಿದ್ದೇವೆ. ನಮ್ಮ ಮುಂದಿನ ಭವಿಷ್ಯ ಖಂಡಿತವಾಗಿಯೂ ನನಗೆ ಗೊತ್ತಿಲ್ಲ. ನಿನಗೂ ಗೊತ್ತಿಲ್ಲ. ಬದುಕಿದರೆ ಒಟ್ಟಿಗೆ ಒಬ್ಬರನ್ನೊಬ್ಬರು ಸದಾಕಾಲ ಪ್ರೀತಿಸುತ್ತಾ ಜೀವನ ನಡೆಸೋಣ. ಶ್ರೀಮಂತಿಕೆ ಬಂದರೆ ಬರಲಿ, ಬಡತನ ಇದ್ದರೆ ಇರಲಿ ನಮ್ಮ ಪ್ರೀತಿ ಮುಕ್ಕಾಗಬಾರದು. ಸದಾಕಾಲ ನಾವು ಪ್ರೀತಿಸುತ್ತ ಬದುಕಬೇಕು. ಸಾವು ಬರುತ್ತದೆ ಎಂದರೆ ಅದಕ್ಕೂ ಹೆದರಬಾರದು. ಒಂದೇ ಏಟಿಗೆ ಸತ್ತು ಹೋಗೋಣ.. ಅಲ್ಲವಾ' ಎಂದ ವಿನಯಚಂದ್ರ.
               `ಗೆಲ್ಲುತ್ತೇವೆ ವಿನು ನಾವು. ಸಾವಿನ ಮಾತು ಯಾಕೆ ಈ ಸಂದರ್ಭದಲ್ಲಿ ಹೇಳು. ನಾವು ಗೆಲ್ಲೋಣ. ಭಾರತವನ್ನು ತಲುಪೋಣ. ಭಯ ಬೇಡ..' ಎಂದಿದ್ದಳು ಮಧುಮಿತಾ. ಇಬ್ಬರಲ್ಲೂ ಭಯದ ನಾಡಿನಲ್ಲಿಯೂ ಭರವಸೆಯ ಬೆಳಕು ಮೂಡಿತ್ತು.
                 ಚೀಲದಲ್ಲಿ ಊಟ, ತಿಂಡಿ ಕಡಿಮೆಯಾಗುತ್ತಿತ್ತು. ಹೆಚ್ಚೆಂದರೆ ಇನ್ನೊಂದು ದಿನಕ್ಕೆ ಸಾಕಾಗುವಷ್ಟು ಮಾತ್ರ ಬಾಕಿ ಉಳಿದಿತ್ತು. ಜೇಬಿನಲ್ಲಿ ದುಡ್ಡೂ ಕೂಡ ಅಗತ್ಯ ಪ್ರಮಾಣದಲ್ಲಿ ಇರಲಿಲ್ಲ. ಭಾರತವನ್ನು ತಲುಪಿದರೂ ಭಾರತದಲ್ಲಿ ಹೊಟ್ಟೆಗೇನು ಮಾಡುವುದು ಎನ್ನುವ ಸಮಸ್ಯೆ ಇವರ ತಲೆಯಲ್ಲಿ ಕೊರೆಯಲಾರಂಭಿಸಿತ್ತು. ಈಗ ಖರ್ಚು ಮಾಡುತ್ತಿರುವುದೇ ಕನಿಷ್ಟ ಪ್ರಮಾಣದ್ದು. ಆ ನಡುವೆಯೂ ದುಡ್ಡಿನ ಖರ್ಚನ್ನು ಇನ್ನಷ್ಟು ಕಡಿಮೆ ಮಾಡಲು ಚಿಂತಿಸಿದರು. ನೇರವಾದ ರಸ್ತೆ ಎಷ್ಟು ನಡೆದರೂ ಮುಗಿಯುವುದೇ ಇಲ್ಲವೇ ಎಂದುಕೊಂಡರು ಇಬ್ಬರೂ. ಅಷ್ಟರಲ್ಲಿ ಒಂದು ಜೀಪು ಅದೇ ಮಾರ್ಗದಲ್ಲಿ ಸಾಗಿ ಬಂದಿತು. ವಿನಯಚಂದ್ರ ಕೈ ಮಾಡುವ ಮೊದಲೇ ಜೀಪು ನಿಂತಿತು. ಜೀಪಿನಲ್ಲಿ ನಾಲ್ಕೈದು ಜನರಿದ್ದುದು ಕಂಡುಬರುತ್ತಿತ್ತು. ಜೀಪಿನ ಡ್ರೈವರ್ `ಬರ್ತೀರಾ ಸಾಬ್..' ಎಂದು ಕೇಳಿದ್ದ. ವಿನಯಚಂದ್ರನಿಗೆ ಹೋಗುವ ಮನಸ್ಸಿತ್ತು. ಮಧುಮಿತಾ ಯಾಕೋ ಹಿಂದೇಟು ಹಾಕಿದಳು. ವಿನಯಚಂದ್ರನನ್ನು ಕೈ ಹಿಡಿದು ಜಗ್ಗಿ ನಿಲ್ಲಿಸಿದಳು. ಮಧುಮಿತಾಳಿಗೆ ಯಾಕೋ ಅನುಮಾನ ಬಂದಂತಾಗಿತ್ತು. ಅಷ್ಟರಲ್ಲಿ ಜೀಪಿನಲ್ಲಿದ್ದವರೇ ಮೂರ್ನಾಲ್ಕು ಜನರು ಜೀಪಿನಿಂದ ಇಳಿದು ಬಂದು ಏಕಾಏಕಿ ವಿನಯಚಂದ್ರ ಹಾಗೂ ಮಧುಮಿತಾರನ್ನು ಹಿಡಿದು ಗಾಡಿಯೊಳಕ್ಕೆ ತುಂಬಿಕೊಂಡುಬಿಟ್ಟರು.
           ಜೀಪಿನ್ನು ಏರುವಾಗ ವಿನಯಚಂದ್ರ ಹಾಗೂ ಮಧುಮಿತಾ ಸಾಕಷ್ಟು ಪ್ರತಿರೋಧ ಒಡ್ಡಿದರಾದರೂ ಅದು ಸಾಕಾಗಲಿಲ್ಲ. ಕೂಗಿದರು, ಗಲಾಟೆ ಮಾಡಿದರು. ಕೊಸರಾಡಿದರು. ಜೀಪಿನಲ್ಲಿದ್ದವರು ಅವ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಬಯಲಿನಲ್ಲಿ ನಡೆದು ಬರುತ್ತಿದ್ದ ಕಾರಣ ಇವರು ಕೂಗಿದ್ದು ಮತ್ಯಾರಿಗೂ ಕೇಳಿಸಲೇ ಇಲ್ಲ. ಯಾರವರು, ಯಾಕೆ ಇವರನ್ನು ಗಾಡಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ ಒಂದೂ ಅರ್ಥವಾಗಲಿಲ್ಲ. ವಿನಯಚಂದ್ರ ಜಬರದಸ್ತಿಗೆ ಇಳಿದ. ಜೀಪಿನಲ್ಲಿದ್ದವರು ವಿನಯಚಂದ್ರನ ಮುಖ ಮೂತಿ ನೋಡದೆ ನಾಲ್ಕೇಟು ಬಿಗಿದರು. ವಿನಯಚಂದ್ರ ಆ ಏಟಿಗೆ ತತ್ತರಿಸಿದ. ಪ್ರಜ್ಞೆತಪ್ಪಿ ಬಿದ್ದ.
           ಹತ್ತು ಹದಿನೈದು ಕಿಲೋಮೀಟರ್ ದೂರ ಚಲಿಸಿದ ಜೀಪು ನಂತರ ಅಲ್ಲೇ ಒಂದು ಕಡೆ ಊರಿನೊಳಕ್ಕೆ ತಿರುಗಿತು. ವಿನಯಚಂದ್ರನಿಗೆ ಯಾವುದೋ ಲೋಕದಲ್ಲಿ ಸಾಗುತ್ತಿದ್ದಂತೆ ಅನ್ನಿಸುತ್ತಿತ್ತು. ಜೀಪು ಸಾಗುತ್ತಿರುವುದು ಗೊತ್ತಾಗುತ್ತಿತ್ತಾದರೂ ಕೈಕಾಲು ಆಡುತ್ತಿರಲಿಲ್ಲ. ಮಾತಾಡೋಣ ಎಂದರೆ ನಾಲಿಗೆಯೇ ಬಿದ್ದು ಹೋಗಿದೆಯೇನೋ ಎಂಬಂತಾಗಿತ್ತು. ಅಲ್ಲೊಂದು ಮನೆಯ ಎದುರು ಜೀಪು ನಿಂತಿತ್ತು. ಮನೆಯೆಂದರೆ ಮನೆಯಲ್ಲ ಅದು. ದೊಡ್ಡ ಜಮೀನ್ದಾರನ ಬಂಗಲೆ ಎನ್ನಬಹುದು. ಹುಬ್ಬಳ್ಳಿ ಕಡೆಯಲ್ಲಿ ವಾಡೆಗಳಿರುತ್ತಾವಲ್ಲ. ಆ ರೀತಿಯದ್ದು. ದೊಡ್ಡ ಕೋಟೆಯಂತಹ ರಚನೆ. ವಿನಯಚಂದ್ರನಿಗೆ ಅದು ಅಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಯಾರೋ ಇಬ್ಬರು ಮಧುಮಿತಾಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದರೆ ಮತ್ತಿಬ್ಬರು ವಿನಯಚಂದ್ರನ್ನು ದರದರನೆ ಎಳೆದುಕೊಂಡು ಹೋಗುತ್ತಿದ್ದರು. ಆ ಮನೆಯ ಒಳಗೆ ಸುತ್ತಿ ಬಳಸಿ ಸಾಗುತ್ತಿರುವುದು ತಿಳಿಯುತ್ತಿತ್ತು. ಕೊನೆಗೆ ಅದೊಂದು ಕತ್ತಲೆಯ ಕೋಣೆಗೆ ಒಯ್ದು ಮಧುಮಿತಾ ಹಾಗೂ ವಿನಯಚಂದ್ರನನ್ನು ಹಾಕಿ ಕೋಣೆಯ ಬಾಗಿಲನ್ನು ಹಾಕಿಬಿಟ್ಟರು.
           ವಿನಯಚಂದ್ರನಿಗಿನ್ನೂ ಸ್ಪಷ್ಟವಾಗಿ ಎಚ್ಚರಾಗಿರಲಿಲ್ಲ. ಮಧುಮಿತಾ ಮಾತ್ರ ಭಯದಿಂದ ಮಾತೇ ಬಾರದಂತೆ ಕುಳಿತಿದ್ದಳು. ಯಾರು, ಯಾಕೆ ಇಲ್ಲಿಗೆ ಕರೆತಂದಿದ್ದಾರೆ ಒಂದೂ ಬಗೆಹರಿಯಲಿಲ್ಲ. ಮಧುಮಿತಾ ಮಾತ್ರ ಪಕ್ಕದಲ್ಲೇ ಕವುಚಿ ಬಿದ್ದುಕೊಂಡಿದ್ದ ವಿನಯಚಂದ್ರನನ್ನು ಬಡಿದು ಎಬ್ಬಿಸಲು ಪ್ರಯತ್ನಿಸಿದಳು. ನಾಲ್ಕೈದು ಸಾರಿ ಪ್ರಯತ್ನಿಸಿದ ನಂತರ ನಿಧಾನವಾಗಿ ವಿನಯಚಂದ್ರ ಕಣ್ಣುಬಿಟ್ಟ. ಕಣ್ಣುತೆರೆದವನಿಗೆ ಒಮ್ಮೆ ತಾನೆಲ್ಲಿದ್ದೇನೆ, ಏನಾಗುತ್ತಿದೆ ಒಂದೂ ತಿಳಿಯಲಿಲ್ಲ.
          `ಮಧು.. ಏನಿದು..? ನಾವೆಲ್ಲಿದ್ದೇವೆ? ಏನಾಗುತ್ತಿದೆ..?' ಅರ್ಥವಾಗದವನಂತೆ ಕೇಳಿದ.
          `ನನಗೂ ಗೊತ್ತಿಲ್ಲ ವಿನೂ.. ಯಾರೋ ಎಳೆದುಕೊಂಡು ಬಂದರು. ಗಾಡಿಯಲ್ಲಿ ನಿನಗೆ ಹೊಡೆದರು. ನೀನು ಎಚ್ಚರ ತಪ್ಪಿದೆ. ನಂತರ ನಮ್ಮಿಬ್ಬರನ್ನೂ ಎಲ್ಲೋ ಕರೆದುಕೊಂಡು ಬಂದು ಮನೆಯೊಂದರಲ್ಲಿ ಕೂಡಿಹಾಕಿದ್ದಾರೆ. ಅದಷ್ಟೇ ಗೊತ್ತಿದೆ.. ಆದರೆ ಯಾಕೆ ಹೀಗೆ, ನಾವೇನು ತಪ್ಪು ಮಾಡಿದ್ದೇವೆ.. ಒಂದೂ ಗೊತ್ತಿಲ್ಲ.. ಅಬ್ಬಾ.. ಗಾಡಿಯಲ್ಲಿದ್ದವರು ಕುಡಿದಿದ್ದರು. ಅದೆಷ್ಟು ತೊಂದರೆ ಕೊಟ್ಟರು ಅಂದರೆ ಛೀ...' ಎಂದಳು ಮಧುಮಿತಾ..
         `ಛೇ... ಕ್ರೂರಿಗಳು..' ಎಂದ ವಿನಯಚಂದ್ರ.. `ಮುಂದೇನು ಮಾಡುವುದು? ಎಲ್ಲೋ ಹೋಗುವವರು ಎಲ್ಲಿಗೆ ಬಂದೆವಪ್ಪಾ? ಇಲ್ಲಿಂದ ತಪ್ಪಿಸಿಕೊಂಡು ಹೋಗುವುದು ಹೇಗೆ? ಅದು ಸಾಧ್ಯವಾ? ಅಸಾಧ್ಯವಾ? ನಮಗೇಕೆ ಇಷ್ಟೆಲ್ಲ ಕಷ್ಟಗಳು ಎದುರಾಗುತ್ತಿವೆ..' ಎಂದ ಅಸಹನೆಯಿಂದ.
           ಕೆಲ ಹೊತ್ತಿನ ಬಳಿಕ ಯಾರೋ ಆ ಕೋಣೆಯ ಬಾಗಿಲು ತೆರೆಯುತ್ತಿರುವ ಸದ್ದಾಯಿತು. ವಿನಯಚಂದ್ರ ಕೂಡಲೇ ಜಾಗೃತನಾದ. ಕೋಣೆಯ ತುಂಬ ಕತ್ತಲಾವರಿಸಿದ್ದರೂ ಕಣ್ಣು ಆ ಕತ್ತಲೆಗೆ ಹೊಂದಿಕೊಂಡಿತ್ತು. ಮಬ್ಬಾದ ದೀಪದ ಬೆಳಕಿನಲ್ಲಿ ಆ ಕೋಣೆಯನ್ನೆಲ್ಲ ಸರಸರನೆ ಹುಡುಕಾಡಿದ ವಿನಯಚಂದ್ರ ಆತ್ಮರಕ್ಷಣೆಗೆ ಏನಾದರೂ ಆಯುಧ ಸಿಗಬಲ್ಲದೇ ಎಂದು ಹುಡುಕತೊಡಗಿದ. ಅಲ್ಲೆಲ್ಲೋ ಮೂಲೆಯಲ್ಲಿ ಮಂಚದ ಕಾಲಿನ ಮುರಿದ ರಚನೆಯಂತದ್ದಿತ್ತು. ಅದನ್ನೇ ತೆಗೆದು ಜಾಗೃತೆಯಿಂದ ಅಡಗಿಸಿ ಇಟ್ಟುಕೊಂಡ. ಬಾಗಿಲು ತೆಗೆದು ಒಳಬಂದಿತೊಂದು ಆಕೃತಿ. ಮೊದಲಿಗೆ ಸರಿಯಾಗಿ ಗೊತ್ತಾಗಲಿಲ್ಲ. ತೀರಾ ಹತ್ತಿರಕ್ಕೆ ಬಂದ ನಂತರ ಒಳಬಂದಿದ್ದೊಬ್ಬಳು ಹೆಂಗಸು ಎನ್ನುವುದು ಅರಿವಾಯಿತು. ಒಳಬಂದವಳೇ ಕೈಯ್ಯಲ್ಲಿ ತಿಂಡಿಯನ್ನು ಹಿಡಿದುಕೊಂಡು ಬಂದಿದ್ದಳು.
         ಮಧುಮಿತಾಳ ಬಳಿ ಬಂದ ಆಕೆ ಕೈಯಲ್ಲಿದ್ದುದ್ದನ್ನು ಕೊಟ್ಟು ತಿನ್ನು ಎಂದಳು. ಮಧುಮಿತಾ ಒಮ್ಮೆ ಆ ಹೆಂಗಸನ್ನು ನೋಡಿದವಳೇ ಆಕೆ ಕೊಟ್ಟಿದ್ದನ್ನು ತಿನ್ನಲು ನಿರಾಕರಿಸಿದಳು. `ನಮ್ಮನ್ಯಾಕೆ ಇಲ್ಲಿ ಕೂಡಿ ಹಾಕಿದ್ದಾರೆ.. ಯಾರು ನೀವು..? ಏನು ಇದೆಲ್ಲ..?' ಎಂದು ಸಿಟ್ಟಿನಿಂದ ಕೇಳಿದಳು ಮಧುಮಿತಾ.
          ಯವ್ವನವನ್ನು ಆಗಷ್ಟೇ ದಾಟುತ್ತಿದ್ದ ಆ ಹೆಂಗಸು ಮಧುಮಿತಾಳ ಕೈಯನ್ನು ಹಿಡಿದುಕೊಂಡು `ಅದೊಂದು ದೊಡ್ಡ ಕಥೆ.. ಏನಂತ ಹೇಳುವುದು..' ಎಂದಳು.. ಅದಕ್ಕುತ್ತರವಾಗಿ `ಈ ರೀತಿಯ ಸುತ್ತುಬಳಸಿನ ಮಾತುಗಳು ಬೇಡ.. ನಿಜ ಹೇಳಿ.. ನೀವ್ಯಾರು? ನಮ್ಮನ್ಯಾಕೆ ಇಲ್ಲಿ ಕೂಡಿ ಹಾಕಿದ್ದೀರಿ?' ಎಂದು ಚೀರಿದಳು.
          `ಇಲ್ಲ.. ನಾನು ಈ ಕೆಲಸ ಮಾಡಿಲ್ಲ. ಈ ಕೆಲಸ ಮಾಡಿದವನು ಮುಷ್ಪಿಕರ್. ಆತ ಈ ಸುತ್ತಮುತ್ತಲ ಭಾಗದ ಬಹುದೊಡ್ಡ ಜಮೀನ್ದಾರ. ಯಾರೇ ಹೊಸ ಹುಡುಗಿಯರು, ಹೆಂಗಸರು ಕಾಣಲಿ ಅವರನ್ನು ಎಳೆದುಕೊಂಡು ಬಂದು ಅವರ ಮೇಲೆ ಅತ್ಯಾಚಾರ ಮಾಡುವುದು ಆತನ ಕೆಲಸ. ಅದಕ್ಕಾಗಿಯೇ ತನ್ನದೊಂದು ಪಡೆಯನ್ನೇ ನೇಮಿಸಿಕೊಂಡಿದ್ದಾರೆ. ಆತನ ಕಣ್ಣಿಗೆ ನೀನು ಕಾಣಿಸಿದ್ದೀಯಾ.. ಅದೇ ಕಾರಣಕ್ಕೆ ನಿನ್ನನ್ನು ಎಳೆದುಕೊಂಡು ಬಂದಿದ್ದಾರೆ..' ಎಂದು ಹೇಳಿದಳು ಆ ಹೆಂಗಸು.
         ಮಾತು ಕೇಳಿ ಬೆಚ್ಚಿ ಬಿದ್ದರು ವಿನಯಚಂದ್ರ ಹಾಗೂ ಮಧುಮಿತಾ. ಮುಂದೇನು ಮಾಡುವುದು ಎಂದು ಆಲೋಚನೆ ಮಾಡುತ್ತಿದ್ದಾಗಲೇ ತಿಂಡಿಯನ್ನು ತಂದಾಕೆಯೇ ಮಾತು ಮುಂದುವರಿಸಿದಳು. `ಪ್ರತಿ ದಿನ ಇದೇ ರೀತಿ ಆಗಿದೆ. ಇವರು ಯಾರು ಯಾರನ್ನೋ ಎಳೆದುಕೊಂಡು ಬರುತ್ತಾರೆ. ಅವರ ಮೇಲೆ ಅತ್ಯಾಚಾರ ನಡೆಯುತ್ತದೆ. ಬೆಳಗಾಗುವ ವೇಳೆಗೆ ಕೆಲವರು ಸತ್ತಿರುತ್ತಾರೆ. ಅರೆ ಜೀವ ಆಗಿರುವವರನ್ನು ಅದೇ ಗುಂಪು ಎಲ್ಲೋ ಹೋಗಿ ಒಗೆದು ಬರುತ್ತಾರೆ...' ಎಂದು ನಿಟ್ಟುಸಿರು ಬಿಟ್ಟವಳು `ನನ್ನನ್ನು ಮದುವೆಯಾದಾಗಿನಿಂದ ಇದನ್ನು ನೋಡಿ ರೋಸಿ ಹೋಗಿದ್ದೇನೆ. ನಾನು ಮದುವೆಯಾದ ನಂತರ ಅದೆಷ್ಟೋ ಸಹಸ್ರ ಹೆಂಗಳೆಯರು ತಮ್ಮ ಬದುಕನ್ನು ಇಲ್ಲಿ ಕಳೆದುಕೊಂಡಿದ್ದಾರೆ. ಅನೇಕ ಸಾರಿ ಇವನ್ನು ಪ್ರತಿಭಟಿಸಿದ್ದೇನೆ. ಆದರೆ ಪ್ರತಿಭಟನೆ ಮಾಡಿದಾಗಲೆಲ್ಲ ಮೈಸುಲಿಯುವಂತಹ ಹೊಡೆತಗಳು ಬಿದ್ದಿವೆ..' ಎಂದಳು.
          `ನೀನು ಇದನ್ನು ಹೇಳಲು ನಮ್ಮೆದುರು ಬಂದೆಯಾ?' ಎಂದು ಕೇಳಿದ ಮಧುಮಿತಾ ಮತ್ತೇನೋ ಹೊಳೆದಂತೆ `ನಿನ್ನ ಯಜಮಾನ ಎಳೆದುಕೊಂಡು ಬರುವ ಪ್ರತಿಯೊಬ್ಬ ಹೆಂಗಸರ ಬಳಿಯೂ ನೀನು ಇದೇ ಕಥೆಯನ್ನು ಹೇಳುತ್ತೀಯಾ? ಅವರಿಗೆ ನೀನು ಈ ಕಥೆ ಹೇಳುವುದನ್ನು ಬಿಟ್ಟು ಬೇರೆ ಸಹಾಯ ಮಾಡುವುದೇ ಇಲ್ಲವೇ? ನಿನ್ನದೂ ಒಂದು ಬದುಕಾ. ಥೂ..' ಎಂದಳು ಮಧುಮಿತಾ.
           `ಬಯ್ಯಬೇಡಿ. ಅವರಲ್ಲಿ ಶಕ್ತಿಯಿದೆ. ನಾನು ಅಸಹಾಯಕಿ. ನಾನು ಈ ಕೆಲಸವನ್ನಲ್ಲದೇ ಇನ್ನೇನು ಮಾಡಬಲ್ಲೆ ಹೇಳಿ? ನಾನು ಏನು ಮಾಡಲು ಹೋದರೂ ನನ್ನನ್ನು ಹೊಡೆಯುತ್ತಾರೆ. ಬಡಿಯುತ್ತಾರೆ. ಕೊಲ್ಲಲಿಕ್ಕೂ ಹೇಸುವುದಿಲ್ಲ ಕ್ರೂರಿಗಳು' ಎಂದು ಹೇಳಿದಾಕೆ ಅಳುವುದೊಂದೇ ಬಾಕಿ.
         `ಅಸಹಾಯಕಿ.. ಎಂತಹ ನೆಪವನ್ನು ಹೇಳ್ತೀಯಾ ನೀನು. ನೆಪ ಅಷ್ಟೆ. ನಿನಗೆ ಮನಸ್ಸಿಲ್ಲ ಅಷ್ಟೇ. ಯಾರು ಯಾರದ್ದೋ ಬದುಕು ಹಾಳಾದರೆ ನಿನಗೇನು. ನೀನು ಮಾತ್ರ ಆರಾಮಾಗಿರ್ತೀಯಾ. ಕೈಯಲ್ಲಿ ಆಗೋದಿಲ್ಲ ಅಂತೀಯಲ್ಲ.. ನಾವು ತಪ್ಪಿಸಿಕೊಳ್ಳಬೇಕು. ಸಹಾಯ ಮಾಡ್ತೀಯಾ?' ಎಂದು ಕೇಳಿಬಿಟ್ಟಳು ಮಧುಮಿತಾ.
            ಬೆರಗು ಗಣ್ಣಿನಿಂದ ನೋಡಿದ ಆ ಹೆಂಗಸು ಕೆಲಕಾಲ ಮೌನವಾದಳು. ಅಷ್ಟರಲ್ಲಿ ವಿನಯಚಂದ್ರ ಅಲ್ಲಿಯೇ ಇರುವುದು ಗಮನಕ್ಕೆ ಬಂದಿತ್ತು. ಆತನ ಕಡೆಗೆ ದೃಷ್ಟಿ ಹಾಯಿಸಿ `ಇವರ್ಯಾರು?' ಎಂದಳು. ಮುಷ್ಪೀಕರ್ ನ ಬಂಟರೇ ಯಾರೋ ಇಲ್ಲಿದ್ದಾರೆ. ತನ್ನ ಮಾತನ್ನು ಅವರು ಕೇಳಿಬಿಟ್ಟಿದ್ದಾರೆ ಎನ್ನುವ ಭಯ ಆಕೆಯಲ್ಲಿ ಒಮ್ಮೆ ಕಾಡಿತು. ಕೊನೆಗೆ ಮಾತಿಗೆ ನಿಂತ ಮಧುಮಿತಾಳೆ ತಾವು ಯಾವ ಕಾರಣಕ್ಕೆ ಬಂದಿದ್ದೇವೆ. ಯಾರು? ಎತ್ತ ಸಾಗುತ್ತಿದ್ದೇವೆ ಎನ್ನುವುದನ್ನು ತಿಳಿಸಿದಳು. ಎಲ್ಲ ಹೇಳಿದ ನಂತರ ಮಧುಮಿತಾ ಹಾಗೂ ವಿನಯಚಂದ್ರ ತಪ್ಪಿಸಿಕೊಳ್ಳಲು ಸಹಾಯ ಮಾಡುವುದಾಗಿ ಭರವಸೆ ನೀಡಿದಳು.
         ತಪ್ಪಿಸಿಕೊಳ್ಳುವ ಕಾರ್ಯ ಬಹುಬೇಗನೆ ಆಗಬೇಕಾಗಿತ್ತು. ಯಾವ ಕ್ಷಣದಲ್ಲಿ ಮುಷ್ಪೀಕರ್ ಮಧುಮಿತಾಳನ್ನು ತನ್ನ ಮಂಚಕ್ಕೆ ಬರುವಂತೆ ಬುಲಾವ್ ನೀಡುತ್ತಾನೋ ಗೊತ್ತಿರಲಿಲ್ಲ. ತಪ್ಪಿಸಿಕೊಳ್ಳುವುದೇನೋ ಸರಿ. ಆದರೆ ಮುಷ್ಪೀಕರ್ ನಿಗೆ ಯಾಕೆ ಬುದ್ಧಿ ಕಲಿಸಿ ಹೋಗಬಾರದು ಎನ್ನುವ ಆಲೋಚನೆ ವಿನಯಚಂದ್ರನ ಮನಸ್ಸಿನಲ್ಲಿ ಮೂಡಿತು. ತಕ್ಷಣವೇ ಮಧುಮಿತಾಳ ಕಿವಿಯಲ್ಲಿ ಈ ವಿಷಯವನ್ನು ತಿಳಿಸಿದ. ಮಧುಮಿತಾ ಕೂಡ ಆ ವಿಷಯಕ್ಕೆ ಒಪ್ಪಿಗೆ ಸೂಚಿಸಿದಳು. ಅಲ್ಲೇ ಎದುರಿಗಿದ್ದ ಮುಷ್ಪೀಕರನ ಹೆಂಡತಿಯ ಬಳಿ ಈ ವಿಷಯವನ್ನು ತಿಳಿಸಿದಳು. ಹೀಗೊಂದು ಸಾಧ್ಯತೆಯನ್ನು ಯಾವತ್ತೂ ಯೋಚಿಸಿರಲಿಲ್ಲವೋ ಎಂಬಂತೆ  `ಯಾ ಅಲ್ಲಾ..' ಎಂದವಳೇ `ತಾನೂ ಇದಕ್ಕೆ ಕೈ ಜೋಡಿಸುತ್ತೀನಿ.. ಒಳ್ಳೆಯ ಸಾಧ್ಯತೆ. ಆದರೆ ನೀವು ಯಾವ ರೀತಿ ಬುದ್ಧಿ ಕಲಿಸುತ್ತೀರಿ ಹಾಗೂ ಇದರಿಂದ ಅಪಾಯವೇನೂ ಆಗುವುದಿಲ್ಲ ಅಲ್ಲವಾ?' ಎಂದು ಕೇಳಿದಳು.
          ಪ್ರತಿಯಾಗಿ ವಿನಯಚಂದ್ರ `ಯಾವ ರೀತಿ ಬುದ್ಧಿ ಕಲಿಸಬೇಕು ಎನ್ನುವುದು ಇನ್ನೂ ಗೊತ್ತಿಲ್ಲ. ಇನ್ನು ಮುಂದೆ ಹೆಂಗಸರ ಬದುಕನ್ನು ಹಾಳುಮಾಡಬಾರದು. ಆ ರೀತಿಯಲ್ಲಿ ಏನಾದರೂ ಮಾಡಬೇಕು. ನಿಮ್ಮ ಸಹಾಯ ಸಹಕಾರ ಇಲ್ಲದೇ ಈ ಕೆಲಸ ಅಸಾಧ್ಯ. ಈ ಕೆಲಸ ಅಪಾಯಕರವಂತೂ ಹೌದು. ಆದರೆ ಎಷ್ಟು ದೊಡ್ಡ ಪ್ರಮಾಣದ್ದೆಂಬುದು ನಮಗೂ ಗೊತ್ತಿಲ್ಲ. ನಮ್ಮಿಂದ ಆಗದಿದ್ದರೆ ನೀವಾದರೂ ಈ ಕೆಲಸ ಮಾಡಲೇಬೇಕು. ನಂತರ ನಮಗೆ ಬೋಗ್ರಾವನ್ನು ತಲುಪುವ ಮಾರ್ಗವನ್ನೂ ನೀವೇ ತಿಳಿಸಬೇಕು. ಹೇಳಿ ನಿಮ್ಮಿಂದ ಇದು ಸಾಧ್ಯವಾ? ಆಗೋದಿಲ್ಲ ಅಂತಾದರೆ ಹೇಳಿಬಿಡಿ.. ನಾವೇ ಈ ಕೆಲಸವನ್ನು ಹೇಗಾದರೂ ಮಾಡುತ್ತೇವೆ. ಆದರೆ ದಯವಿಟ್ಟು ಯಾರ ಬಳಿಯೂ ಈ ಬಗ್ಗೆ ಬಾಯಿ ಬಿಡಬೇಡಿ..' ಎಂದ.
            `ಖಂಡಿತ ಯಾರ ಬಳಿಯೂ ಹೇಳೋದಿಲ್ಲ..' ಎಂದವಳೇ ಒಮ್ಮೆ ಎದ್ದು ಹೋಗಿ ಕೋಣೆಯ ಕದವನ್ನು ಗಟ್ಟಿಯಾಗಿ ಹಾಕಲಾಗಿದೆಯೋ ಇಲ್ಲವೋ ಎಂದು ನೋಡಿಕೊಂಡು ಬಂದಳು. `ಆ ಹರಾಮಖೋರನನ್ನು ನನ್ನ ಗಂಡ ಎನ್ನಲು ನಾಚಿಕೆಯಾಗುತ್ತಿದೆ. ಸಮಯ ಸಿಕ್ಕಾಗ ಆತನಿಗೆ ಬುದ್ಧಿ ಕಲಿಸಬೇಕು ಎಂದು ನಾನು ಅನೇಕ ಸಾರಿ ಆಲೋಚನೆ ಮಾಡಿದ್ದೇ. ಆದರೆ ಆ ಕೆಲಸ ನನ್ನೊಬ್ಬನಿಂದ ಸಾಧ್ಯವಾಗುವುದಿಲ್ಲ ಎಂದು ಸುಮ್ಮನಾಗಿದ್ದೆ. ಆದರೆ ನೀವು ಇವತ್ತು ದೇವರಂತೆ ಬಂದಿದ್ದೀರಿ. ಅಲ್ಲಾಹುವೇ ನಿಮ್ಮನ್ನು ಕಳಿಸಿದ್ದಾನೆ ಎಂದುಕೊಳ್ಳುತ್ತೇನೆ. ಇಲ್ಲಿಯವರೆಗೆ ಆತ ಅವರಿವರ ಬದುಕನ್ನು ಹಾಳುಮಾಡಿದ್ದೇ ಸಾಕು. ಇನ್ನು ಮುಂದಾದರೂ ಉಪಕಾರಿಯಾಗಿ ಬಾಳಲಿ..' ಎಂದು ಹೇಳಿದ ಆಕೆಯ ಬಾಯಲ್ಲಿ ಎಷ್ಟೋ ದಿನಗಳ ಅಸಹನೆ, ನೋವು ತುಂಬಿರುವುದು ಸ್ಪಷ್ಟವಿತ್ತು. ತಕ್ಷಣವೇ ಮನಸ್ಸಿನಲ್ಲಿ ಏನೋ ಆಲೋಚನೆ ಮಾಡಿದ ವಿನಯಚಂದ್ರ ಕೂಡಲೇ ಇಬ್ಬರ ಬಳಿಯೂ ಮಾಡಬೇಕಾದ ಕಾರ್ಯಗಳನ್ನು ವಿವರಿಸಿದ. ಆ ಪ್ರಕಾರವಾಗಿ ಕಾರ್ಯಪ್ರವೃತ್ತರಾದರು.

(ಮುಂದುವರಿಯುತ್ತದೆ)