Thursday, September 4, 2014

ತುಂಬರದ ಅಬ್ಬರ

ತುಂಬರಗೋಡ ಜಲಪಾತದ ಅಬ್ಬರ
ಕಣ್ತುಂಬಿಕೊಳ್ಳಲು ಬಾ ಹತ್ತಿರ
ಮಳೆಗಾಲದ ಅಬ್ಬರಕ್ಕೆ ಹಲವಾರು ಜಲಪಾತಗಳು ಜೀವಕಳೆಯನ್ನು ಪಡೆದುಕೊಂಡಿದೆ. ಬೇಸಿಗೆಯ ಬೇಗೆಗೆ ಜೀವಕಳೆದುಕೊಂಡಂತೆ ಕಾಣುತ್ತಿದ್ದ ಜಲಪಾತಗಳೆಲ್ಲ ಮೈದುಂಬಿಕೊಂಡು ಅಬ್ಬರಿಸುತ್ತಿವೆ. ನೋಡುಗರನ್ನು ಕೈಬೀಸಿ ಕರೆಯುತ್ತಿವೆ. ಅಂತಹ ಜಲಪಾತಗಳಲ್ಲೊಂದು ತುಂಬರಗೋಡ ಜಲಪಾತ.
ದೊಡ್ಡ ಗುಡ್ಡದಿಂದ ಮುತ್ತಿನ ಹನಿಗಳಂತೆ ಭುವಿಗಿಳಿದು ಬರುವ ತುಂಬರಗೋಡ ಜಲಪಾತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿದೆ. ಅಜಮಾಸು 30 ಅಡಿಗಳ ಎತ್ತರದಿಂದ ಬೀಳುವ ಈ ಜಲಪಾತದ ಸೌಂದರ್ಯವನ್ನು ವೀಕ್ಷಿಸಲು ಕಣ್ಣು ಸಾಲದು. ಶಿರಸಿ-ಸಿದ್ದಾಪುರ ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ಇರುವ ಈ ಜಲಪಾತವನ್ನು ವೀಕ್ಷಣೆ ಮಾಡಲು ಕಷ್ಟಪಡಬೇಕಾಗಿಲ್ಲ. ರಸ್ತೆಯ ಪಕ್ಕದಲ್ಲಿಯೇ ಇರುವ ಈ ಜಲಪಾತ ಪ್ರೇಕ್ಷಕರನ್ನು ವಿಶೇಷವಾಗಿ ಸೆಳೆಯಬಲ್ಲದು. ಮಳೆಗಾಲದ ಕಾರಣ ಜಲಪಾತದಲ್ಲಿ ನೀರಿನ ಪ್ರಮಾಣ ತೀವ್ರವಾಗಿರುತ್ತದೆ. ಧೋ ಎನ್ನುವ ಸದ್ದು ಕಿವಿಗೆ ತಟ್ಟುತ್ತದೆ. ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರನ್ನು ಕಟ್ಟಿಹಾಕುತ್ತದೆ.
ವಿಶ್ವದಾದ್ಯಂತ ಇರುವ ಜಲಪಾತಗಳೆಲ್ಲ ನೈಸರ್ಗಿಕ ಜಲಪಾತಗಳು. ಎಲ್ಲೋ ಒಂದೆರಡು ಜಲಪಾತಗಳು ಮಾನವ ನಿರ್ಮಿತವಾದವುಗಳು. ತುಂಬರಗೋಡ ಜಲಪಾತ ಸಹ ಮಾನವ ನಿರ್ಮಿತ ಜಲಪಾತ. ಅಚ್ಚರಿಯಾಗುತ್ತಿರಬಹುದು. ಆದರೆ ಇದು ಸತ್ಯ. ಕಳೆದೊಂದು ದಶಕಕ್ಕೂ ಮುನ್ನ ತುಂಬರಗೋಡ ಪ್ರದೇಶದಲ್ಲಿ ಕಲ್ಲಿನ ಗಣಿಗಳಿದ್ದವು. ದೊಡ್ಡದೊಂದು ಗುಡ್ಡವೇ ಕಲ್ಲಿನಿಂದ ಆವೃತವಾಗಿದ್ದವು. ಆದರೆ ಆ ಕಲ್ಲಿನ ಗುಡ್ಡವನ್ನು ಗಣಿಗಾರಿಕೆಗೆ ಕಡಿದ ನಂತರ ಕಡಿದಾದ ಪ್ರದೇಶ ನಿರ್ಮಾಣವಾಯಿತು. ಈ ಪ್ರದೇಶದಲ್ಲಿ ಹರಿಯುತ್ತಿದ್ದ ತುಂಬರಗೋಡ ಹಳ್ಳ ಜಲಪಾತವಾಗಿ ಧುಮ್ಮಿಕ್ಕಲಾರಂಭಿಸಿತು. ಗುಡ್ಡದಿಂದ ಕಲ್ಲುಗಣಿಯ ಆಳಕ್ಕೆ ಬೀಳುವ ಜಲಪಾತವನ್ನು ನೋಡುವುದೇ ಸುಂದರ. ಜಲಪಾತ ನೀಡುವ ಖುಷಿಯೇ ಬೇರೆ.
ಮಾನವ ನಿರ್ಮಿತ ಜಲಪಾತ ಎಂದೇ ಕರೆಸಿಕೊಳ್ಳುವ ಈ ಜಲಪಾತವನ್ನು ಜೂನ್ ತಿಂಗಳಿನಿಂದ ಡಿಸೆಂಬರ್ ವರೆಗೆ ವೀಕ್ಷಣೆ ಮಾಡಬಹುದು. ಈ ಸಮಯದಲ್ಲಿ ಜಲಪಾತದ ಅಬ್ಬರ ಜೋರಾಗಿರುತ್ತದೆ. ಉಳಿದ ಸಮಯದಲ್ಲಿ ತುಂಬರಗೋಡ ಹಳ್ಳದಲ್ಲಿ ನೀರಿನ ಹರವು ಕಡಿಮೆಯಾಗುವ ಕಾರಣ ಜಲಪಾತ ಕಳೆಗುಂದುತ್ತದೆ. ಮಳೆಗಾಲದಲ್ಲಂತೂ ಮೈದುಂಬಿಕೊಳ್ಳುವ ತುಂಬರಗೋಡ ಜಲಪಾತ ಕಣ್ತುಂಬಿಕೊಂಡರೆ ಬಹಳ ಖುಷಿ ನೀಡುತ್ತದೆ.
ರಸ್ತೆಯ ಪಕ್ಕದಲ್ಲಿಯೇ ಇರುವ ಈ ಜಲಪಾತವನ್ನು ನೋಡಲು ಉಳಿದ ಜಲಪಾತಗಳಂತೆ ಚಾರಣವನ್ನು ಮಾಡಬೇಕಾಗಿಲ್ಲ. ಗುಡ್ಡವನ್ನು ಏರಬೇಕಿಲ್ಲ. ಮುಖ್ಯ ರಸ್ತೆಯಿಂದ 500 ಮೀಟರ್ ದೂರದಲ್ಲಿಯೇ ಈ ಜಲಪಾತವಿದೆ. ಜಲಪಾತ ಕಾಣುವವರೆಗೂ ಕಚ್ಚಾ ರಸ್ತೆಯಿದೆ. ವಾಹನಗಳನ್ನು ಒಯ್ಯಬಹುದು. ಮಳೆಗಾಲದಲ್ಲಂತೂ ದೊಡ್ಡ ಜಲಪಾತದ ಜೊತೆಗೆ ಅಕ್ಕಪಕ್ಕದಲ್ಲಿ ನಾಲ್ಕೈದು ಕವಲುಗಳನ್ನು ನೋಡಬಹುದಾಗಿದೆ. ಮಳೆಗಾಲದಲ್ಲಂತೂ ಜಲಪಾತದ ಸೌಂದರ್ಯ ಇಮ್ಮಡಿಸುತ್ತದೆ. ಜಲಪಾತ ಇರುವ ಸ್ಥಳ ಒಂದಾನೊಂದು ಕಾಲದಲ್ಲಿ ಕಲ್ಲು ಗಣಿಯಾಗಿದ್ದ ಕಾರಣ ಜಲಪಾತದ ನೀರು ಬೀಳುವ ಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಹಳ ಆಳವಿದೆ. ಅಲ್ಲದೇ ಚೂಪಾದ ಕಲ್ಲುಗಳೂ ಇಲ್ಲಿದೆ. ಇಲ್ಲಿ ಈಜುವುದು ಅಪಾಯಕರ. ವಾರಾಂತ್ಯದಲ್ಲಿ ಪಿಕ್ ನಿಕ್ ಮಾಡಲು ಹೇಳಿ ಮಾಡಿದಂತಹ ಸ್ಥಳ ಇದಾಗಿದೆ. ಉತ್ತರ ಕನ್ನಡ ಜಿಲ್ಲೆಯ ಇತರ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಈ ಜಲಪಾತವನ್ನು ಬಹು ಸುಲಭದಲ್ಲಿ ನೋಡಬಹುದಾಗಿದೆ. ಹುಬ್ಬಳ್ಳಿ ಭಾಗದಿಂದ ಆಗಮಿಸುವ ಪ್ರವಾಸಿಗರಂತೂ ಮಾರ್ಗಮದ್ಯದಲ್ಲಿ ಸಿಗುವ ಈ ಜಲಪಾತವನ್ನು ಅರೆಘಳೊಗೆಯಲ್ಲಿ ಕಣ್ತುಂಬಿಕೊಂಡು ಹೋಗಬಹುದಾಗಿದೆ.
ಜಲಪಾತವಿರುವ ಪ್ರದೇಶ ಇದುವರೆಗೂ ಸ್ವಚ್ಛತೆಯಿಂದ ಕೂಡಿದೆ. ಜಲಪಾತದ ಕೆಳಭಾಗದಲ್ಲಿ ಗದ್ದೆಗಳಿವೆ. ಈ ಜಲಪಾತದ ಪ್ರದೇಶದಲ್ಲಿ ತ್ಯಾಜ್ಯಗಳನ್ನು ಎಸೆಯುವುದು ನಿಷಿದ್ಧ. ಪ್ರಕೃತಿ ಸೌಂದರ್ಯವನ್ನು ಹಾಳು ಮಾಡುವ ಎಲ್ಲ ಕೆಲಸಗಳಿಗೂ ಇಲ್ಲಿ ಕಡ್ಡಾಯ ಕಡಿವಾಣವಿದೆ. ಪ್ರವಾಸಿಗರು ಈ ಕುರಿತು ಎಚ್ಚರಿಕೆ ವಹಿಸಿ, ಜಲಪಾತ ವೀಕ್ಷಣೆ ಮಾಡಿಕೊಂಡು ಹೋಗಬೇಕಾಗಿದೆ.
ಜಲಪಾತಕ್ಕೆ ಹೋಗುವ ಬಗೆ :
ಶಿರಸಿ ಸಿದ್ದಾಪುರ ರಸ್ತೆಯಲ್ಲಿ ಶಿರಸಿಯಿಂದ 25 ಕಿ.ಮಿ ಹಾಗೂ ಸಿದ್ದಾಪುರದಿಂದ 14 ಕಿ.ಮಿ ದೂರದಲ್ಲಿ 16ನೇ ಮೈಲ್ ಎನ್ನುವ ಊರಿದೆ. ಈ ಊರಿನಿಂದ 2 ಕಿ.ಮಿ ಅಂತರದಲ್ಲಿ ತುಂಬರಗೋಡ ಎನ್ನುವ ಊರಿಗೆ ತೆರಳುವ ಮಾಹಿತಿ ಫಲಕ ಕಾಣುತ್ತಿದೆ. ಇಲ್ಲಿಯೇ ರಸ್ತೆ ಪಕ್ಕದಲ್ಲಿ ಜಲಪಾತವಿದೆ. ಸ್ಥಳೀಯರ ಬಳಿ ಜಲಪಾತದ ಬಗ್ಗೆ ಕೇಳಿದರೆ ಮಾಹಿತಿ ನೀಡುತ್ತಾರೆ. ಜಲಪಾತಕ್ಕೆ ತೆರಳುವ ರಸ್ತೆಗೆ ಹೊರಳಿದ ತಕ್ಷಣ ಜಲಪಾತ ಧುಮ್ಮಿಕ್ಕುವ ಸದ್ದು ಕೇಳುತ್ತದೆ. ಸುಲಭವಾಗಿ ಜಲಪಾತ ವೀಕ್ಷಣೆ ಮಾಡಿ ತೆರಳಬಹುದು.

***
(ಈ ಲೇಖನವು ಸಪ್ಟೆಂಬರ್ 4, 2014ರ ಕನ್ನಡಪ್ರಭದ ಬೈ2ಕಾಫಿಯ ಟೂರೂಕೇರಿಯಲ್ಲಿ ಪ್ರಕಟಗೊಂಡಿದೆ)

No comments:

Post a Comment