Thursday, August 14, 2014

ಗೋಲಾರಿ ವಯ್ಯಾರಿ

ಗುಡ್ಡದ ತುದಿಯಿಂದ ಹಾಲ್ನೊರೆಯುಕ್ಕಿದಂತೆ ಕಣಿವೆಯಾಳಕ್ಕೆ ಧುಮ್ಮುಕ್ಕುವ ಸೊಬಗು, ಅಕ್ಕ ಪಕ್ಕದ ಕಾನನದ ನಡುವಿನಿಂದ ಕಿವಿಯನ್ನು ಇಂಪಾಗಿ ತಟ್ಟುವ ಹಕ್ಕಿಗಳ ದನಿ, ಜೊತೆ ಜೊತೆಯಲ್ಲಿಯೇ ಜಲಪಾತ ವೀಕ್ಷಣೆಗೆ ಬಂದ ಪ್ರವಾಸಿಗರ ಹರ್ಷದ ಕೇಕೆ. ಈ ಎಲ್ಲವುಗಳೂ ಮಿಳಿತವಾಗಿರುವುದು ಕಾರವಾರ ತಾಲೂಕಿನ ತೊಡೂರು ಗ್ರಾಮದ ಅರಣ್ಯ ಮಧ್ಯವಿರುವ ಗೋಲಾರಿ ಜಲಪಾತದಲ್ಲಿ.
ಒಂದೆಡೆ ತಲೆಯೆತ್ತಿ ನೋಡಿದರೂ ಕಾಣಿಸದ ಹಸಿರಿನಿಂದಾವೃತವಾದ ಕಡಿದಾದ ಗುಡ್ಡ. ಇನ್ನೊಂದೆಡೆ ಅರಣ್ಯ. ನಡುವೆ ಧೋ ಎಂದು ಅಬ್ಬರಿಸುತ್ತ ಸೊಬಗನ್ನು ಕಟ್ಟಿಕೊಡುವ ಗೋಲಾರಿ ಜಲಪಾತವನ್ನು ನೋಡುತ್ತಿದ್ದರೆ ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತ್ತದೆ. ಜಲಪಾತದ ಸುಂದರ ಚಿತ್ರಣವನ್ನು ಕಣ್ಣಲ್ಲಿ ಹಿಡಿದು ತುಂಬಿಕೊಳ್ಳಲು ಯತ್ನಿಸಿದಷ್ಟೂ ಎಲ್ಲಿ ಕಳೆದುಕೊಂಡು ಬಿಡುತ್ತೇವೆಯೋ ಎನ್ನುವ ದುಗುಡ ನೋಡುಗನನ್ನು ಆವರಿಸುತ್ತದೆ.
ಗೋಲಾರಿ ಜಲಪಾತ ವೀಕ್ಷಣೆಗೆ ಯಾವುದೇ ಸಮಯದ ತೊಂದರೆಯಿಲ್ಲ. ಬೇಸಿಗೆಯಿರಲಿ, ಮಳೆಗಾಲವಿರಲಿ ಅಥವಾ ಕೊರೆಯುವ ಚಳಿಗಾಲವಿರಲಿ ವರ್ಷದ ಎಲ್ಲ ಕಾಲದಲ್ಲಿಯೂ ದರ್ಶನ ಸಾಧ್ಯ. ಕಡು ಬೇಸಿಗೆಯಲ್ಲೂ ಜಲಪಾತದಲ್ಲಿ ಸಾಕಷ್ಟು ನೀರಿರುವ ಕಾರಣ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಮಳೆಗಾಲದಲ್ಲಂತೂ ಜಲಪಾತದ ಸೌಂದರ್ಯ ಇಮ್ಮಡಿಸುತ್ತದೆ. ಬೆಟ್ಟದ ತುದಿಯಿಂದ ಸುಮಾರು 65 ಅಡಿ ಎತ್ತರದಿಂದ ಧುಮ್ಮಿಕ್ಕುವ ಗೋಲಾರಿ ಜಲಪಾತದ ಸದಾ ಕಾಲ ಜನಜಾತ್ರೆ ಸೇರಿರುತ್ತದೆ. ಚಾರಣ ಮಾಡುವರಿಗೆ, ವಾರದ ತುಂಬ ಬಿಡುವಿಲ್ಲದೇ ದುಡಿದು ವಾರಾಂತ್ಯದಲ್ಲಿ ಬದಲಾವಣೆ ಬಯಸುವವರಿಗೆ ಈ ಜಲಪಾತ ಹೇಳಿಮಾಡಿಸಿದ ತಾಣ.
ಜಲಪಾತಗಳ ಜಿಲ್ಲೆ ಎಂದು ಖ್ಯಾತಿಯನ್ನು ಗಳಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ನೂರಾರು ಜಲಪಾತಗಳಿವೆ. ಅವುಗಳಲ್ಲಿ ಹಲವು ಜಲಪಾತಗಳಿನ್ನೂ ಬೆಳಕಿಗೆ ಬಂದಿಲ್ಲ. ಗೋಲಾರಿ ಜಲಪಾತವನ್ನು ನೋಡಬೇಕೆಂದರೂ ಕೂಡ ಸ್ವಲ್ಪ ಮೈಕೈ ನೋಯಿಸಿಕೊಳ್ಳಲೇ ಬೇಕು. ತೊಡೂರ ಬಳಿಯ ಕಾನನದ ಮಧ್ಯದಿಂದ ಕಲ್ಲು ಬಂಡೆಗಳನ್ನು ಹತ್ತಿ, ಹಳ್ಳಗಳನ್ನು ಜಿಗಿಯುತ್ತಾ, ಗಿಡ ಗಂಟಿಗಳ ಮುಳ್ಳುಗಳ ನಡುವೆ ನುಸುಳುತ್ತ ಸಾಗಿದರೆ ದರ್ಶನ ಕೊಡುತ್ತಾಳೆ ಗೋಲಾರಿ. ಕೊಂಚ ಚಾರಣ ಮಾಡಿ ಆಗುವ ಆಯಾಸ ಜಲಪಾತ ವೀಕ್ಷಣೆಯಿಂದ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.
ಮೈಮನಗಳಲ್ಲಿ ರೋಮಾಂಚನವನ್ನು ಹುಟ್ಟು ಹಾಕುವ ಗೋಲಾರಿ ಜಲಪಾತದ ಒಡಲಿನಲ್ಲಿ ಪ್ರವಾಸಿಗರು ಸ್ನಾನದ ಸುಖವನ್ನು ಅನುಭವಿಸುವ ದೃಶ್ಯ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಮಳೆಗಾಲದ ವೇಳೆಯಲ್ಲಿ ಅರಣ್ಯಪ್ರದೇಶದಲ್ಲಿ ಸುರಿಯುವ ಮಳೆ ಹಳ್ಳದ ಮೂಲಕ ಸಾಗಿ, ಭೀಮನಬುಗುರಿ ಹಾಗೂ ಸಾವನಾಳ ಎನ್ನುವ ಪ್ರದೇಶದಿಂದ ಹರಿದು ಬಂದು ಗೋಲಾರಿಯಲ್ಲಿ ಜಲಪಾತವಾಗಿ ಧುಮ್ಮಿಕ್ಕುತ್ತಾಳೆ. ಹಳ್ಳ ಸಮುದ್ರ ಸೇರುವ ತವಕ ಜಲಪಾತದ ರೂಪದಲ್ಲಿ ಎದ್ದು ಕಾಣುತ್ತದೆ.
ಗೋಲಾರಿ ಜಲಪಾತ ಉತ್ತಮ ಪಿಕ್ನಿಕ್ ಸ್ಪಾಟ್. ಚಾರಣ ಪ್ರಿಯರಿಗಂತೂ ಹೇಳಿಮಾಡಿಸಿದಂತಹ ತಾಣ. ಈ ಕಾರಣದಿಂದಲೇ ಉತ್ತರ ಕನ್ನಡ ಜಿಲ್ಲೆಯಿಂದಲ್ಲದೇ ನೆರೆಯ ಗೋವಾ ರಾಜ್ಯ, ಉಡುಪಿ ಜಿಲ್ಲೆಯಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ವಾರಾಂತ್ಯದಲ್ಲಿ ಮೈಮನಸ್ಸುಗಳಿಗೆ ಜಲಪಾತದ ನೀರನ್ನು ಒಡ್ಡಿಕೊಳ್ಳುವ ಮೂಲಕ ಖುಷಿಯನ್ನು ತುಂಬಿಕೊಂಡು ಕ್ರಿಯಾಶೀಲರಾಗಿ ಮರಳುತ್ತಾರೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಕೆಲವು ಕಟ್ಟುನಿಟ್ಟಿನ ಕೆಲಸಗಳೂ ಇವೆ. ಜಲಪಾತದ ಫಾಸಲೆಯಲ್ಲಿ ಪ್ಲಾಸ್ಟಿಕ್ ಎಸೆಯುವಂತಿಲ್ಲ. ಗಾಜಿನ ಬಾಟಲಿಗಳನ್ನು ಎಸೆಯುವುದೂ ನಿಶಿದ್ಧ. ಪ್ರಕೃತಿಯ ನಡುವೆ ಇರುವ ಜಲಪಾತದ ಸೌಂದರ್ಯವನ್ನು ತ್ಯಾಜ್ಯವನ್ನೆಸೆಯುವ ಮೂಲಕ ಹಾಳು ಮಾಡಬಾರದೆಂದು ಸ್ಥಳೀಯರು ಆಗ್ರಹಿಸುತ್ತಾರೆ. ಜಲಪಾತಕ್ಕೆ ತೆರಳುವವರು ಕುಡಿಯುವ ನೀರು, ಆಹಾರಗಳನ್ನು ಒಯ್ಯುವುದು ಕಡ್ಡಾಯ. ಮತ್ಯಾಕೆ ತಡ? ಒಮ್ಮೆ ಬಂದು ಜಲಪಾತದ ಸೌಂದರ್ಯವನ್ನು ಸವಿದು ಹೋಗಿ.
ಜಲಪಾತಕ್ಕೆ ಹೋಗುವ ಬಗೆ : ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ 17 ಕಿಮೀ ಅಂತರದಲ್ಲಿರುವ ತೋಡೂರು ಗ್ರಾಮಕ್ಕೆ ಸಾಗಬೇಕು. ಅಲ್ಲಿಂದ ಸುಮಾರು 4 ಕಿಮೀನಷ್ಟು ಕಚ್ಚಾ ರಸ್ತೆಯಲ್ಲಿ ಸಾಗಿದರೆ ಅರಣ್ಯ ಪ್ರದೇಶ ಸಿಗುತ್ತದೆ. ಇಲ್ಲಿಯವರೆಗೆ ವಾಹನಗಳು ತೆರಳುತ್ತವೆ. ಅವನ್ನು ಇಲ್ಲಿಯೇ ನಿಲ್ಲಿಸಿ ಸುಮಾರು 2-3 ಕಿಮೀ ಅರಣ್ಯ ಪ್ರದೇಶದಲ್ಲಿ ಕಲ್ಲು ಬಂಡೆಗಳನ್ನು ಹತ್ತಿಳಿಯುತ್ತಾ ಮಧ್ಯದಲ್ಲಿ ಹರಿಯುವ ಹಳ್ಳಗಳನ್ನು ದಾಟುತ್ತಾ ಚಾರಣದ ಮೂಲಕ ಸಾಗಿದರೆ ಅಲ್ಲೇ ಸಿಗುತ್ತದೆ ಗೋಲಾರಿ ಫಾಲ್ಸ್ ದರ್ಶನ ಸಾಧ್ಯ. ಬೆಂಗಳೂರಿನಿಂದ ಆಗಮಿಸುವವರು ಶಿವಮೊಗ್ಗ-ಶಿರಸಿ ಮೂಲಕ ಅಥವಾ ಹುಬ್ಬಳ್ಳಿ-ಅಂಕೋಲಾ ಮೂಲಕ ತೊಡೂರಿಗೆ ಆಗಮಿಸಿ ಅಲ್ಲಿಂದ ಬರಬಹುದಾಗಿದೆ.

**
(ಈ ಲೇಖನ ಆ.14, 2014ರ ಕನ್ನಡಪ್ರಭದ ಬೈ2ಕಾಫಿಯ ಟೂರುಕೇರಿಯಲ್ಲಿ ಪ್ರಕಟಗೊಂಡಿದೆ)
(ಈ ಲೇಖನಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿಗಳನ್ನು ನೀಡಿದ ಅಚ್ಯುತಕುಮಾರ ಯಲ್ಲಾಪುರ ಅವರಿಗೂ ಧನ್ಯವಾದಗಳು)

No comments:

Post a Comment