Friday, July 25, 2014

ಸಾಲ್ಕಣಿಯ ಪೋರನಿಗೆ ಸಹಾಯ ಮಾಡಿ

(ರವಿಕೀರ್ತಿ ಹೆಗಡೆ)
ಅರವಿಂದ ವಿಶ್ವನಾಥ ಹೆಗಡೆ ಮತ್ತು ಭಾಗ್ಯಲಕ್ಷ್ಮಿ ಹೆಗಡೆಯವರ ಏಕೈಕ ಪುತ್ರ ರವಿಕೀರ್ತಿ ಹೆಗಡೆ. ಹಾಲುಗಲ್ಲದ ಹಸುಳೆಯ(2.5 ವರ್ಷ) ಬೋನ್ ಮಾರೋ ಎನ್ನುವ ಕಾಯಿಲೆ ಜೀವ ಹಿಂಡುತ್ತಿದೆ. ಪ್ರತಿ ಹನ್ನೆರಡು ದಿನಕ್ಕೊಮ್ಮೆ ಈ ಪೋರನಿಗೆ ಕೆಂಪು ಮತ್ತು ಬಿಳಿ ರಕ್ತ ನೀಡಬೇಕಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಾಲ್ಕಣಿ ಬೇಣದಮನೆ ನಿವಾಸಿತರಾಗಿರುವ ಅರವಿಂದ ಹೆಗಡೆ ಮಗನ ಅನಾರೋಗ್ಯಕ್ಕಾಗಿ ಈಗಾಗಲೇ ಎರಡೂವರೆ ಲಕ್ಷ ರು. ಖರ್ಚು ಮಾಡಿದ್ದಾರೆ. ಹನ್ನೊಂದು ತಿಂಗಳಿನಿಂದ ಬಾಧಿಸುತ್ತಿರುವ ಕಾಯಿಲೆ ಯಾವುದು ಎಂದು ಅರಿಯುವುದಕ್ಕಾಗಿ ಶಿರಸಿಯಿಂದ ಹುಬ್ಬಳ್ಳಿ, ಹುಬ್ಬಳ್ಳಿಯಿಂದ ಮಂಗಳೂರು, ಮಂಗಳೂರಿನಿಂದ ಈಗ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ತಿಂಗಳಿಗೆ ಮೂರು ಸಾರಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಬೋನ್ ಮಾರೋ ತಜ್ಞ ಡಾ.ಆಶಿಶ್ ದೀಕ್ಷಿತ ಅವರು ರೋಗ ಪತ್ತೆ ಮಾಡಿದ್ದಾರೆ. ಈ ಕುರಿತಂತೆ ಪ್ರಮಾಣಪತ್ರವನ್ನು ನೀಡಲಾಗಿದ್ದು ಇದರಲ್ಲಿ ಬೋನ್ ಮಾರೋ ಫೇಲ್ಯೂರ್ ಸಿಂಡ್ರೋಮ್ ಎಂದು ಗುರುತಿಸಲಾಗಿದೆ. ಈತನಿಗೆ ನಿರಂತರ ರಕ್ತವನ್ನು ಕೊಡಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಅರವಿಂದ ಹೆಗಡೆಯವರು ಕೃಷಿಕರಾಗಿದ್ದಾರೆ. ಸಣ್ಣ ಹಿಡುವಳಿದಾರರಾಗಿರುವ ಇವರು ಮಗನ ಔಷಧೋಪಚಾರಕ್ಕಾಗಿ ಸಾಲ-ಸೋಲ ಮಾಡಿ ಹಣ ಒದಗಿಸುತ್ತಿದ್ದಾರೆ. ಎರಡು ತಿಂಗಳ ವರೆಗೆ ರಕ್ತ ವರ್ಗಾವಣೆ ಪ್ರಕ್ರಿಯೆ ನಿರಂತರವಾಗಿರಬೇಕು. ಆಗಲೂ ಚಿಕಿತ್ಸೆ ಫಲಕಾರಿಯಾಗದಿದ್ದರೆ ಈ ಮಗುವಿನ ರಕ್ತಸಂಬಂದಿ ವ್ಯಕ್ತಿಗಳ ಅಸ್ತಿಮಜ್ಜೆಯನ್ನು ಕಸಿ ಮಾಡಬೇಕಾಗುತ್ತದೆ. ಹೀಗೆ ಕಸಿ ಮಾಡಲು ಅಂದಾಜು 20 ಲಕ್ಷ ರು. ಖರ್ಚು ತಗುಲಬಹುದೆನ್ನುವ ಮಾಹಿತಿಯನ್ನು ತಜ್ಞ ವೈದ್ಯರು ನೀಡಿದ್ದಾರೆ. ಈಗಾಗಲೇ ನೀಡುವ ಚುಚ್ಚುಮದ್ದೊಂದಕ್ಕೆ 70 ಸಾವಿರ ರು.ವರೆಗೂ ವೆಚ್ಚ ತಗುಲಿದೆ. ಅರವಿಂದ ಹೆಗಡೆ ದಂಪತಿಯವರಿಗೆ ಮತ್ತೊಂದು ಮಗು ಜನಿಸಿತ್ತಾದರೂ ಅದು ಆಗಲೇ ತೀರಿಕೊಂಡಿದೆ.
ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಸಾಲ್ಕಣಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಡಾರ ಚುಚ್ಚುಮದ್ದನ್ನು ಮಗುವಿಗೆ ಕೊಟ್ಟ ನಂತರ ಇದ್ದಕ್ಕಿದ್ದಂತೆ ಮೈಮೇಲೆ ನೀಲಿ ಕಲೆ ಕಾಣಿಸಿಕೊಳ್ಳಲು ಆರಂಭವಾಯಿತು. ಇದ್ದಕ್ಕಿದ್ದಂತೆ ಸುಸ್ತು ಹಾಗೂ ಮೈ ಬಿಳುಚಿಕೊಳ್ಳಲಾರಂಭಿಸಿತು. ಆಸ್ಪತ್ರೆಯ ಸಿಬ್ಬಂದಿಗಳನ್ನು ವಿಚಾರಿಸಿದಾಗ ಹಾರಿಕೆಯ ಉತ್ತರ ನೀಡಿದರು. ನಂತರ ಚಿಕಿತ್ಸೆಗಾಗಿ ಶಿರಸಿಯ ಮಕ್ಕಳ ತಜ್ಞರಾದ ಡಾ. ನೀರಲಗಿ ಮತ್ತು ಡಾ. ದಿನೇಶ ಹೆಗಡೆ ಅವರಲ್ಲಿ ತಪಾಸಣೆಗಾಗಿ ಕರೆದೊಯ್ದಾಗ ಪ್ರಾಥಮಿಕ ಚಿಕಿತ್ಸೆ ನೀಡಿದರು. ಆದರೆ ಪುನಃ ಪುನಃ ಮೈ ಬಿಳುಚಿಕೊಳ್ಳುವುದು, ಸುಸ್ತಾಗುವುದು, ನೀಲಿ ಕಲೆ ಕಾಣಿಸಿಕೊಳ್ಳುವುದು ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳತೊಡಗಿದಾಗ ರಕ್ತವನ್ನೂ ನೀಡಲಾಗಿತ್ತು. ಕೊನೆಗೆ ಹೆಚ್ಚಿನ ತಪಾಸಣೆಗೆ ಹುಬ್ಬಳ್ಳಿಯ ಎಸ್ಡಿಎಂ ಗೆ ಕೊಂಡೊಯ್ಯಲಾಯಿತು. ಅಲ್ಲಿಂದ ಮಂಗಳೂರಿನ ನಿಟೆಯ ಕೆ. ಎಸ್. ಹೆಗಡೆ ಆಸ್ಪತ್ರೆಗೆ ಕರೆದೊಯ್ದು ಒಮ್ಮೆ ಬೋನ್ ಮಾರೋ ತಪಾಸಣೆ ಮಾಡಲಾಯಿತು. ಸಂಬಂಧಪಟ್ಟಂತೆ ಚಿಕಿತ್ಸೆಯನ್ನೂ ನೀಡಲಾಯಿತು. ಆದರೆ ಅದು ಫಲಕಾರಿಯಾಗದ ಕಾರಣ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದಾಗ ರೋಗ ಪತ್ತೆಯಾಗಿದ್ದು ಈಗ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ.
ಮಗುವಿಗೆ ಈಗಾಗಲೇ 45ಕ್ಕೂ ಹೆಚ್ಚಿನ ಸಾರಿ ರಕ್ತ ನೀಡಲಾಗಿದೆ. ವರ್ಗಾವಣೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ ಮೂರು ಬಾರಿ ಬೋನ್ ಮಾರೋ ತಪಾಸಣೆ ಮಾಡಿ ಚಿಕಿತ್ಸೆ ನಿಡಲಾಗಿದೆ. ಒಂದೊಂದು ತಪಾಸಣೆ ಹಾಗೂ ಚುಚ್ಚುಮದ್ದಿಗೂ 10 ರಿಂದ 12 ಸಾವಿರ ರು. ಖರ್ಚು ತಗುಲುತ್ತಿದೆ. ಈ ಪುಟಾಣಿಯ ರೋಗದ ಕುರಿತಂತೆ ಗ್ರಾ.ಪಂ ಅಧ್ಯಕ್ಷರು, ಜಿ.ಪಂ ಸದಸ್ಯರು ಪ್ರಮಾಣ ಪತ್ರ ನೀಡಿದ್ದಲ್ಲದೇ ಆರ್ಥಿಕ ಸಹಾಯಕ್ಕಾಗಿ ಶಿಫಾರಸು ಮಾಡಿದ್ದಾರೆ. ಅರವಿಂದ ಹೆಗಡೆಯವರ ದೂರವಾಣಿ ಸಂಖ್ಯೆ 08283-260319 ಮೊಬೈಲ್ ಸಂಖ್ಯೆ 9448965394 ಆಗಿದ್ದು ಇವರಿಗೆ, ಅಂದರೆ ಮಗುವಿನ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ನೀಡಬಯಸುವವರು ಶಿರಸಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆ ಸಂಖ್ಯೆ 20115676399 (ಐಎಫೆಸ್ಸಿ ಕೋಡ್ 917) ಅಲ್ಲಿಗೆ ಜಮಾ ಮಾಡಬಹುದಾಗಿದೆ.

No comments:

Post a Comment