Tuesday, July 1, 2014

ಕೈಗಾ ತಂದ ಕಣ್ಣೀರು

(ಕೈಗಾ ಅಣುಸ್ಥಾವರ)
                ಕೈಗಾ ಅಣುಸ್ಥಾವರದ ವಿಕಿರಣ ಬಗೆದಷ್ಟು ಹೂರಣ ಹೊರಬರುತ್ತಿದೆ. ಯಲ್ಲಾಪುರ, ಜೋಯಿಡಾ, ಕಾರವಾರ ಹಾಗೂ ಅಂಕೋಲಾ ತಾಲೂಕಿನ ಗಡಿ ಪ್ರದೇಶಗಳಲ್ಲಿ ದಿನಂಪ್ರತಿ ಹೊಸ ರೋಗಗಳು ಪತ್ತೆಯಾದರೆ ಮರಣ ಹೊಂದಿದವರ ಮಾಹಿತಿ ಬೆಳಕಿಗೆ ಬರುತ್ತಲಿದೆ.
                ರಾಜ್ಯ ಸರಕಾರದ ಆರೋಗ್ಯ ಇಲಾಖೆಯ ನಿರ್ಲಕ್ಷಿತ ಧೋರಣೆಯಿಂದಾಗಿ ಜನ ಕಂಗಾಲಾಗಿದ್ದಾರೆ. ಜನರ ಜೊತೆ ಚಲ್ಲಾಟವಾಡುತ್ತಿರುವ ಆರೋಗ್ಯ ಇಲಾಖೆ ಅಣು ವಿಕಿರಣಕ್ಕೆ ಯಾವುದೇ ಬಾಲಕ ಬಲಿಯಾಗಿಲ್ಲ ಎನ್ನುವ ಸ್ಪಷ್ಟೀಕರಣ ನೀಡುತ್ತದೆ.
                ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ ದೂರವಾಣಿ ಮೂಲಕ ಸಂಪರ್ಕಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇಷ್ಟಕ್ಕೂ ನಮ್ಮ ಮನೆಗಳಿಗೆ ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ವೈದ್ಯರಾಗಲಿ ಅಥವಾ ಶುಶ್ರೂಷಕಿಯರಾಗಲಿ ಬಂದಿಲ್ಲ. ತಮ್ಮ ಜವಾಬ್ದಾರಿಯಿಂದ ನುಣುಚುಕೊಳ್ಳುವ ಸಲುವಾಗಿ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
                ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಚಂದ್ರಶೇಖರ ರಾಮಚಂದ್ರ ಕಾರಂತ ಅವರ ಮಗಳು ಭೂಮಿಕಾ 2011 ಜುಲೈ 13 ರಂದು ಮೃತ ಪಟ್ಟಿದ್ದಾಳೆ. ಆರೋಗ್ಯವಾಗಿದ್ದ ಭೂಮಿಕಾ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆಯಿಂದ ನರಳಲಾರಂಭಿಸಿದಳು. ಇವಳನ್ನು ಯಲ್ಲಾಪುರದ ವೈದ್ಯರಾದ ಡಾ. ಜಿ.ಎನ್. ಹೆಗಡೆಯವರಲ್ಲಿ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಕೆಮ್ಮು ಮತ್ತು ನೆಗಡಿಗೆ ಔಷಧ ನೀಡಿದರು. ಮಾರನೇದಿನ ಬೆಳಗಾಗುವಷ್ಟೊತ್ತಿಗೆ ನಮ್ಮ ಮಗಳು ಇಹ ಲೋಕ ತ್ಯಜಿಸಿಯಾಗಿತ್ತು. ಇದ್ದಕ್ಕಿದ್ದಂತೆ ಮಗಳ ನಿಧನದ ಕುರಿತು ವೈದ್ಯರಲ್ಲಿ ಕೇಳಿದಾಗ ನಿಮ್ಮ ಮಗಳು ಹೃದಯಾಘಾತದಿಂದ ನಿಧನ ಹೊಂದಿರಬೇಕು ಎಂದು ತಿಳಿಸಿದರು. ಹೀಗೆ ತಮ್ಮ ಮಗಳ ಮರಣದ ಕುರಿತು ವಿವರಣೆ ನೀಡಿದವರು ಚಂದ್ರಶೇಖರ ಕಾರಂತರು.
                  ಯಲ್ಲಾಪುರ ತಾಲೂಕಿನ ಬಾಗಿನಕಟ್ಟಾದ ಸುಬ್ರಹ್ಮಣ್ಯ ಅನಂತ ಗಾಂವ್ಕರ್ ತಮ್ಮ ಮಗನ ಸಾವಿನ ವಿವರ ನೀಡಿದ್ದು ಹೀಗೆ, ತಮ್ಮ ಮಗನ ಜನನ ಸಹಜವಾಗಿತ್ತು. ಯಾವುದೇ  ಸಮಸ್ಯೆ ಇರಲಿಲ್ಲ. ಒಂದು ವರ್ಷದ ಹಿಂದೆ ಮಗ ದಿನೇಶನಿಗೆ ಒಮ್ಮೆಲೆ ವಾಂತಿ ಪ್ರಾರಂಭವಾಯಿತು. ಶಿರಸಿಯ ಮಹಾಲಕ್ಷ್ಮೀ ಮೆಮೋರಿಯಲ್ ಆಸ್ಪತ್ರೆಗೆ ಸೇರಿಸಲಾಯಿತು. ಯಾವುದೇ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮಗ ಸಾವನ್ನಪ್ಪಿದ. ವೈದ್ಯರಲ್ಲಿ ಕೇಳಿದಾಗ ಹೃದಯ ಸಂಬಂಧಿ ಖಾಯಿಲೆಯಿಂದ ಸಾವು ಸಂಭವಿಸಿದೆ ಎಂದು ತಿಳಿಸಿದರು.
                    ವಜ್ರಳ್ಳಿಯ ಗಿಡಿಗಾರಿ ಮನೆಯ ಕಾಮೇಶ ತಮ್ಮಣ್ಣ ಭಟ್ಟರಿಗೆ ಒಂದು ತಿಂಗಳ ಹಿಂದೆ ಮಗುವೊಂದು ಜನಿಸಿತು. ಹದಿನೈದು ದಿನಗಳ ನಂತರ ಮಗು ಆಹಾರ ಸೇವಿಸುವುದನ್ನು ನಿಲ್ಲಿಸಿತು. ಆಗ ಶಿರಸಿ ಮಹಾಲಕ್ಷ್ಮೀ ಮೆಮೋರಿಯಲ್ ಆಸ್ಪತ್ರೆಯ ವೈದ್ಯರು ಅನ್ನನಾಳದ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಮಗು ಈಗಲೂ ವೈದ್ಯರ ಆರೈಕೆಯಲ್ಲಿದೆ ಎಂದು ಪಾಲಕರು ಹೇಳಿದರು.
(ಅಣುವಿಕಿರಣದ ಪರಿಣಾಮ)
                    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಸಿಸುಳ್ಳುಗಳನ್ನು ಹೇಳುತ್ತಿದ್ದಾರೆೆ ಎನ್ನುವುದಕ್ಕೆ ತಾಜಾ ಉದಾಹರಣೆ ಎಂದರೆ ಬಾಗಿನ ಕಟ್ಟಾದ ಗಣಪತಿ ಶಂಕರ ಭಾಗವತ ಅನ್ನನಾಳದ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿರುವುದು ಅವರ ಕಾರ್ಯ ವೈಖರಿಗೆ ನಿದರ್ಶನವಾಗುತ್ತದೆ. ಗಣಪತಿ ಶಂಕರ ಭಾಗವತರು ಮಣಿಪಾಲದಲ್ಲಿ ತಮ್ಮ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆದು ಹಾಲಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಚೈತ್ರ ಲಕ್ಷ್ಮಣ ಕುಣುಬಿ ಧಾರವಾಡದ ಎಸ್.ಡಿ.ಎಂ ಆಸ್ಪತ್ರೆಗೆ ತಪಾಸಣೆಗೆ ಹೋಗಿದ್ದಳೇ ಹೊರತು ಅಲ್ಲಿ ಚಿಕಿತ್ಸೆ ಪಡೆದಿರಲಿಲ್ಲ.
                   ಕೈಗಾ ಅಣುಸ್ಥಾವರದ ವಿಕಿರಣದಿಂದಲೇ ಭಯಾನಕ ರೋಗಗಳು ಕಾನೀಸಿಕೊಳ್ಳುತ್ತಿವೆ ಎನ್ನಲಾದ ಪ್ರದೇಶದ ಜನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮತ್ತು ವೈದ್ಯರ ಕಾರ್ಯ ಶೈಲಿಗೆ ಅಸಮದಾನಗೊಂಡಿದ್ದಾರೆ. ವಾಸ್ತವಿಕತೆಯನ್ನು ತಿರುಚಲು ಪ್ರಯತ್ನಿಸುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿ ಕೊಟ್ಟಿದೆ. ಅಣುಸ್ಥಾವರ ಅಧಿಕಾರಿಗಳ ಆಮಿಷಕ್ಕೆ ಕಟ್ಟುಬಿದ್ದು ವಸ್ತು ಸ್ಥಿತಿ ಮರೆಮಾಚುತ್ತಿದ್ದ್ದಾರೆ ಎಂದು ಕಿಡಿಕಾರಿದ್ದಾರೆ.
ಯಲ್ಲಾಪುರದ ತಾಲೂಕಾ ವೈದ್ಯಾಧಿಕಾರಿ ಡಾ. ಅನ್ನಪೂರ್ಣಾ ವಸ್ತ್ರದ್ ಅವರು ಸೋಮವಾರ ನಮ್ಮ ಊರಿಗೆ ಬಂದು ಒಂದೆಡೆ ಕುಳಿತು ಅಲ್ಲಿಗೆ ಊರವರನ್ನು ಕರೆಸಿ ನಮ್ಮ ಮನೆಯ ಯಾರಿಗೂ ಯಾವುದೇ ರೋಗ ಬಂದಿಲ್ಲ, ರೋಗ ಬಂದು ನಿಧನ ಹೊಂದಿಲ್ಲ ಎಂದು ಭಲಾತ್ಕಾರವಾಗಿ ಬರೆಸಿಕೊಂಡು ಹೋಗಿದ್ದಾರೆ ಎನ್ನುವ ಸಂಗತಿಯನ್ನು ವಜ್ರಳ್ಳಿ ಪ್ರದೇಶದ ಜನ ತಿಳಿಸಿದ್ದಾರೆ.

-ವಿಶ್ವಾಮಿತ್ರ ಹೆಗಡೆ

(ಉತ್ತರ ಕನ್ನಡಕ್ಕೆ ಶಾಶ್ವತವಾಗಿ ಸಿಕ್ಕ ಶಾಪ ಕೈಗಾ ಅಣುಸ್ಥಾವರ. ಅಣುಸ್ಥಾವರದಿಂದ ಬಿಡುಗಡೆಯಾಗುವ ಅಣುವಿಕಿರಣದ ದುಷ್ಪರಿಣಾಮಗಳ ಕುರಿತು ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಅವರು ಕನ್ನಡಪ್ರಭ ಪತ್ರಿಕೆಯಲ್ಲಿ ಸರಣಿ ಲೇಖನ ಬರೆದಿದ್ದರು. ಆ ಲೇಖನ ಸರಮಾಲೆಯಲ್ಲಿನ ಒಂದು ಲೇಖನ ಈ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇನೆ)

2 comments:

  1. ಅಬ್ಬಾ!! ಎಂಥ ದುರಂತ ಇದು? ಜನರ ಜೀವಕ್ಕಿಲ್ಲಿ ಬೆಲೆಯೆ ಇಲ್ಲವೆ? ಇದಕ್ಕೆ ಪರಿಹಾರವೆ ಇಲ್ಲವೆ?

    ReplyDelete
  2. ಪರಿಹಾರ ನೀಡಬೇಕಾದವರು ಸಂಬಂಧವೇ ಇಲ್ಲ ಎನ್ನುವಂತೆ ಇದ್ದಾರೆ. ಪರಿಹಾರ ಅತ್ಲಾಗಿರಲಿ ಕೈಗಾ ಭಾಗಕ್ಕೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡಿ ಅಂದರೂ ಕೇಳಿಸುತ್ತಿಲ್ಲ.. ಏನು ಮಾಡೋದು ಹೇಳಿ...

    ReplyDelete