Wednesday, July 23, 2014

ಗಣಪಜ್ಜಿಯ ಹಾಡುಗಳು-4

                 ಹಳ್ಳಿಹಾಡುಗಳ ಸರದಾರಿಣಿ ದಿ.ಗಣಪಜ್ಜಿಯ ಬಗ್ಗೆ ಈಗಾಗಲೇ ಬಹುತೇಕ ಮಾಹಿತಿಗಳನ್ನು ನೀಡಿದ್ದೇನೆ. ಆಕೆಯ ಕುರಿತು ಹೇಳಿದ ಮಾಹಿತಿಗಳಷ್ಟೇ ಹೇಳುವ ಮಾಹಿತಿಗಳೂ ಇವೆ. ತನಗೆ ವಯಸ್ಸಾಗಿದ್ದರೂ ಕೂಡ ಎದುರಿಗೆ ಹರೆಯದ ಹುಡುಗರಿದ್ದರೆ ಅವರ ವಯಸ್ಸಿಗೆ ಏನು ಬೇಕೋ ಅದನ್ನೇ ಹೇಳುವಂತಹವಳು ಗಣಪಜ್ಜಿ. ಸ್ಥೂಲಕಾಯದ ಗಣಪಜ್ಜಿಯ ಹಸಿರು ಕಾಟನ್ ಸೀರೆ ಇನ್ನೂ ನನ್ನ ಕಣ್ಣಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ. ಅಂದಹಾಗೆ ಆಕೆ ಹೇಳಿದ ಮಜವಾದ ಹಾಡೊಂದನ್ನು ನಾನು ಇಲ್ಲಿ ಬರೆಯಲೇ ಬೇಕು. ಇಲ್ಲವಾದರೆ ಎಲ್ಲವನ್ನೂ ಹೇಳಿ ಬಹು ಅಮೂಲ್ಯವಾದುದನ್ನು ಮುಚ್ಚಿಟ್ಟಂತೆ ಆಗುತ್ತದೆ. ತಂಟೆ ಮಾಡುವ ಬಾಲಕನ ಗುಣಗಾನ ಮಾಡಿ ಆತನನ್ನು ವಾಪಾಸ್ ಕರೆತರುವ ತಾಯಿ, ಅಜ್ಜಿಯ ಹಾಡು ಇದೆ.

ಸಾರಿಸಿದೊಳವಿಕೆ ಸುಣ್ಣವ ಚೆಲ್ಲಿದ
ಧೂಳ್ ತಂದು ಪಸರಿಸಿದ |
ಕಾರುಣ್ಯ ರಂಗವಲ್ಯವ ಹಾಸ್ಯೋದೆ/ಆಗ್ಯೋದೆ
ನೋಡು ಬಾ ಎಂದ |

ಔಷೇಕಕೆ ಜಲವ ತಂದಿಟ್ಟರೆ
ಆಧ್ವಾನವ ಮಾಡಿದ |
ಪ್ರೀತಿಯಿಂದಲೆ ಗಂಧಾಕ್ಷತವಿಟ್ಟು
ಹೂ ತೊಳಸಿ ಮುಡಿದ |

ಹೂಗಿ ಮಿಡಿ ಬಿಡಿದಾ ಹಾಗಲು ತೊಂಡೆ
ಬೆರಳೊಳು ಕಿತ್ತ |
ದೂರ ಮಾಡುತ ಬಂದರೆ ನಾನಲ್ಲ
ಮತ್ಯಾರ ಮಗನೋ ಎಂದ |

ಹಪ್ಪಳ ಸಂಡಿಗೆ ಹರಗುವ ದಿನದಲಿ
ತಪ್ಪದೆ ತಾ ಬಂದ |
ಉಪ್ಪು ಸಾಕೋ, ಸಾಲದೋ ಎಂದು
ತಪ್ಪದೆ ತೆಗ ತಿಂದ |

ಇಂತ ಅಷ್ಟಾವಸ್ಥೆಯ ಮಾಡುವ ಬಾಲನ
ಅತ್ತ ಕರೆಯೆ ಗೋಪಿ |
-ಆಹ್... ಸರಳ ವಾಕ್ಯದಲ್ಲಿ ನಡೆದ ಘಟನೆಗಳನ್ನು ಹೇಳುವ ಪರಿಯನ್ನು ಗಮನಿಸಿ. ಗೊಂದಲವಿಲ್ಲದೇ ನೇರಾ ನೇರ, ಸುಲಭದಲ್ಲಿ ಹೇಳುವ ಹಳೆಯ ಹಾಡಿನ ಅಜ್ಜಿ ಕುತೂಹಲದ ಮೂಟೆ ಎಂದರೂ ತಪ್ಪಿಲ್ಲ ನೋಡಿ..
ಅಜ್ಜಿ ಮುಂದುವರಿದು ಹೇಳುತ್ತಾಳೆ-

ಮೆತ್ತಿಯ ಕ್ವಾಣೆಯ ಹುಗಶಿಡ ಮಕ್ಕಳ
ಒತ್ತಿ ಬೀಗವ ಹಾಕಿದ |
ಕೃಷ್ಣ ಕೃಷ್ಣ ತೆಗೆಯೋ ಎಂದರೆ
ನಿಮ್ ಗಂಡನ ಹೆಸರೇಳೆಂದ.. |

ಮೆತ್ತಿಯ ಮೇಲೆ ಹರಗಿದ ವಸ್ತ್ರವ
ಬತ್ತಿ ಎನುತ ಸಿಗಿದ..|
ಕೃಷ್ಣ ಕೃಷ್ಣ ಯಾರ ಎಂದರೆ
ಬೆಕ್ಕೇನ ಎಂದ |

ಇಂತ ಅಷ್ಟಾವಸ್ಥೆಯ ಮಾಡುವ ಬಾಲನ
ಅತ್ತ ಕರೆಯೆ ಗೋಪಿ |
-ಅಷ್ಟೆಲ್ಲ ಕಿಲಾಡಿ, ತಂಟೆ ಮಾಡುವ ಬಾಲಕನನ್ನು ಕೃಷ್ಣ ಎಂದು ಮುದ್ದಿನಿಂದ ಕರೆಯುವ ಪರಿಯನ್ನು ಗಮನಿಸಿ. ಮಗುವನ್ನು ದೇವರಿಗೆ ಹೋಲಿಸುತ್ತ, ಹುಸಿ ಮುನಿಸಿನಿಂದ ಹಾಡನ್ನು ಹಾಡುವ ಪರಿ ಬೆರಗನ್ನು ಮೂಡಿಸುತ್ತದೆ.
ಹಾಡು ಇನ್ನೂ ಮುಂದುವರಿಯುತ್ತದೆ..

ಆಡುವ ಮಕ್ಕಳ ಅಳಿಸಬೇಡೆಂದರೆ
ಬಾಯಿಂದೇಡಿಸಿದ | (ಏಡಿಸುವುದು (ಛೇಡಿಸುವುದು) ಎನ್ನುವ ಶಬ್ದ ನೆನಪು ಮಾಡಿಕೊಳ್ಳಿ)
ಒರಗಿದ ಮಕ್ಕಳ ಎಬಸಬೇಡೆಂದರೆ
ಬಟ್ಟಲ ಬಾರಿಸಿದ |

ಇಂತ ಅಷ್ಟಾವಸ್ಥೆಯ ಮಾಡುವ ಬಾಲನ
ಅತ್ತ ಕರೆಯೆ ಗೋಪಿ |

ತಮಾಷೆಯ ಈ ಹಾಡು ಇನ್ನೂ ಮುಂದೆ ಇದೆಯೋ ಇಲ್ಲವೋ ಗೊತ್ತಿಲ್ಲ. ಅಜ್ಜಿ ಹೇಳಿದ್ದಿಷ್ಟು. ಹವ್ಯಕರ ಆಡುಮಾತಿನ ಈ ಹಾಡು ಸೆಳೆಯುತ್ತದೆ. ಗಣಪಜ್ಜಿ ಇನ್ನೊಂದು ಹಾಡನ್ನು ಹೇಳಿದ್ದಾಳೆ. ಪೌರಾಣಿಕ, ಗಂಭೀರ ಹಾಡು ಕೂಡ ಸೆಳೆಯುತ್ತದೆ. ಮಣಿಕರ್ಣಿಕೆಯ ಜನ್ಮವೃತ್ತಾಂತ ಇಲ್ಲಿದೆ.

ಅತಿಭಕ್ತಿಯಿಂದಲೇ ಲೋಪಾಮುದ್ರೆಯು ತನ್ನ
ಪತಿಗೆ ವಂದಿಸಿ ಕಾಶೀ ಕಾಂಡದೊಳು ಉನ್ನತದ ಫಲ
ಯಾವುದದು ತನಗದು ಅರುಹಬೇಕೆನುತ,
ನಸು ನಗುತ ಮನದೊಳಗೆ ಅಗಸ್ತ್ಯರು
ಸತಿಯ ನೀಕೇಳಕ ಚಿತ್ತದಿ, ಪ್ರಥ್ವಿಯಲಿ
ಮಣಿಕರ್ಣಿಕುದಿಸಿದ ಕಥೆಯ ನಿಶ್ಚರಿಪೆ |

ಜಗದೇಕ ಬ್ರಹ್ಮ ಪ್ರಳಯದೊಳು ತಾನ್
ಒಡಗೂಡಿಕೊಂಡಿರಲು ಶಕ್ತಿಯೊಳು
ತ್ರಿಜಗಾಕ್ಷ ಅವ್ಯಾಕ್ಷ ಮಹಾ ತತ್ವದೊಳು
ಪುಟ್ಟಿದವು ತ್ರಿಜಗ ವ್ಯಾಪಕ ಮಾಯದಿಂದಲಿ
ಒಲುಶಿ ವಿಶ್ವೇಶ್ವರನ, ಶ್ರೀ ಜ್ಞಾನ ಶಕ್ತಿಯೊಳ್
ಹರಿಹರ ಬ್ರಹ್ಮೇಂದ್ರ ರೂಪಿನೊಳು
ಒಲಿದು ತೋರುವನ |

ವಿಷ್ಣು ನಾಮದಲಿಹ ಜಗವನು
ಉತ್ಪತ್ಯವನು ಮಾಡೆಂದರೆ, ಸತ್ಯವೆಂಬುದು
ಮುಕ್ತಿ ಕ್ಷೇತ್ರದಿ, ಸ್ವಾಮಿ ನಡೆತರಲು,
ಛತ್ರಕೋಪವ ಧರಿಸಿ ಅಂಗದೊಳು
ವಶ್ಚರಿಸಿ ಬಹುಜಲವು ತುಂಬೇ
ಬಹು ನಿಷ್ಟೆಯಲಿ ಜಪ ತಪವ ಮಾಡಿದ
ಯೋಗ ಮಾರ್ಗದಲಿ |

ಅರಸಗೆ ಅರವತ್ತು ಸಾವಿರ
ವರುಷ ಶ್ರೀಹರಿ ತಪವ ಚರಿಸಲು
ಪರಸಿವನು ನಡೆತಂದು ಸುಳಿಯಲು
ಮೌನದಿಂದಿಳಿಯೆ, ನಗುತ ನಾಮತ್ಸಕವ
ಚರಿಸಿಯೇ ಸ್ಮರಿಸುತಲೇ ಮೂರ್ತಿಯದು
ಸೆಳೆಯಲು ಮನಸು ಚಂಚಲವಾಗೆ
ಮಾಧವರರಿತು ಪೇಳಿದರು |

ಅಖಂಡ ವಿಪ್ರಶಾಂತ ಕರೆಯಲಿ
ಅಖಂಡ ಬ್ರಹ್ಮಾಂಡವನು ವಿವರದಿ
ಇಂಬಿಟ್ಟ ಬಹು ವಿಶ್ವರೂಪಿರಿ ವಿಶ್ವ ಪ್ರಕಾಶದಿ
ಚಂದ್ರಶೇಖರರೊಲಿದು ನಿಂತಿರೆ
ಇಂದಿನಾ ತಪ ಕೈಗೂಡಿತೆನುತಲಿ
ಕೊಂಡಾಡಿ ಹರಿ ನೋಡಿದನು
ಮನದಿಷ್ಟ ತಣಿದಂತೆ |

ಮಣಿಕರ್ಣಿಕೆ ಎಂಬ ವಿಧಾನವು
ಈ ಸ್ಥಳದೊಳಗುದ್ಭವವಾಗಲೆಂದರು
ಹರನಗುತ ಮಾಧವರೊಳರುಹಿದರು
ಮಧುರ ವಾಕ್ಯವು ಚಿನ್ಮಯನೆ 
ನೀನಾಡಿದ ವಾಕ್ಯವು ಸನ್ಮತವಾಯ್ತು 
ಯನ್ನ ಮನುಸಿಗೆ ಯನ್ನ ನಿನ್ನೆಯ
ಗಂಗೆ ಗೌರಿಯ ಬೇಧದಲ್ಲಿ
ತನ್ನ ಮನಸಿಗೆ ತಾರದ ಹರುಷದಲಿ
ಒಮ್ಮೆಯಲಿ ಸದ್ಭಕ್ತ ಜನರಲಿ
ಬ್ರಹ್ಮ ಪದವಿಯಲಿ ವಾಸವಾಗಿಹ
ಎಂದ ಮಾಧವನು |

ಆಶೀವರ್ಣೆಯಲಿ ಪಂಚ ಗಂಗೆಯು
ಎಡ ಎಡೆಗೆ ಮುನ್ನೂರಮೂರು ಕೋಟಿ ತೀರ್ಥವು
ಈ ಸ್ಥಳದೊಳಗೆ ಉದ್ಭವವಾಗಲೆಂದರು
ಹರ ನಗುತ ಮಾಧವನೊಳರುಹಿದರು
ಮಧುರ ವಾಕ್ಯದಲಿ |

ವಾರಣಾಸಿಗೆ ಬಂದ ಜನರಿಗೆ
ಬೇಡಿದಾ ಇಷ್ಢಾರ್ಥ ಈವಳು
ಭಾವಿಸುತಾ ಬಂದವರಿಗೆ
ಕುಲಕೋಟಿಗಳು ಪಾವನವೇ
ಸ್ನಾನ ಪಾನವ ಮಾಡಿದವರಿಗೆ
ಸಾಯುಜ್ಯ ಮುಕ್ತಿಯ ಈವಳು
ಸೋಮಶೇಖರ ವರವ ಪಾಲಿಸ
ರೆಂದ ಮಾಧವನು |
- ಎಂದು ಹಾಡು ಮುಗಿಯುತ್ತದೆ. ಈ ಹಾಡಿನಲ್ಲಿ ಮಧುರ ವಾಕ್ಯದಲಿ ಎನ್ನುವ ಸಾಲಿನಿಂದ ಈ ಮೊದಲೆ ಬರೆದಿದ್ದೆ. ಹಳೆಯ ಕಡತಗಳನ್ನು ತಿರುವಿ ಹಾಕುತ್ತಿದ್ದಾಗ ಹಾಡು ಪೂರ್ತಿಯಾಗಿ ಸಿಕ್ಕಿತು. ಅದನ್ನಿಲ್ಲಿ ಇಟ್ಟಿದ್ದೇನೆ. ಓದಿ ಸಂತಸಪಡಿ. ಗಣಪಜ್ಜಿಯ ಹಾಡಿನ ಒಂದು ಕಂತು ಇದು. ಇನ್ನುಳಿದ ಕಂತುಗಳು ಮಿತ್ರ ಸಂಜಯನ ಬಳಿ ಇದೆ. ಅವನ್ನು ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲ ನಿಮ್ಮ ಮುಂದಿಡಲಾಗುತ್ತದೆ.

1 comment:

  1. ನನ್ನ ಅಮ್ಮನ ಹತ್ತಿರ ಸ್ವರಚನೆ ಹಾಡಿನ ಭಂಡಾರ ಇದ್ದು, ತಂಗಿಯ ಮನೆಯಲ್ಲಿ ಆಯಿ ಇರ್ತು. ತಂಗಿಯ ಫೋನ್ ನಂಬರ 9481953100

    ReplyDelete