Wednesday, July 2, 2014

ಪ್ಯಾರಾ ಮಂಜಿಲ್ (ಕಥೆ) ಭಾಗ-2

              ಬಹುಶಃ ನನಗೆ ನೆನಪಿದ್ದಂತೆ ಈ ಘಟನೆ ನಡೆದು ಹತ್ತಿರ ಹತ್ತಿರ ಅರವತ್ತೈದು ವರ್ಷಗಳಂತೂ ಆಗಿದ್ದಾವೆ ಬೇಟಾ. ಮತ್ತೂ ಜಾಸ್ತಿ ವರ್ಷಗಳೇ ಆಗಿರಬೇಕು. ಆಗ ಈ ಅಶ್ವಿನಿ ವೃತ್ತದ ಮನೆಯಿರುವ ಜಾಗವೆಲ್ಲ ಹಸಿರು, ಕಾಡಿನಿಂದ ಕೂಡಿತ್ತು. ಶಿರಸಿ ನಗರಿಯೂ ಇಷ್ಟು ದೊಡ್ಡ ಬೆಳೆದಿರಲಿಲ್ಲ.  ಅಲ್ಲೊಂದು ಇಲ್ಲೊಂದು ಮನೆಗಳಿದ್ದವು. ನನ್ನ ವಾರಗೆಯವಳೇ ಹುಡುಗಿ ರಜಿಯಾ. ಅವಳಿಗೆ ಸೇರಿದ ಮನೆಯೇ ನೀನು ಹೇಳಿದ್ದು. ಆಕೆಯ ಅವಳಿಗಾಗಿ, ಅವಳ ಮೇಲಿನ ಪ್ರೀತಿಗಾಗಿ ಕಟ್ಟಿಸಿಕೊಟ್ಟಿದ್ದು. ನಿನಗೆ ಈಗ ಈ ಮನೆ ಬಹಳ ಹಳೆಯದು, ಚಿಕ್ಕದು ಅನ್ನಿಸಬಹುದು. ಆದರೆ ನಮ್ಮ ಕಾಲದಲ್ಲಿ ಇದೊಂದು ಬಂಗಲೆ. ಇಷ್ಟು ದೊಡ್ಡ ಮನೆ ಕಟ್ಟಿಸಿದವರು ಯಾರೂ ಇರಲಿಲ್ಲ.
              ರಜಿಯಾ ಆಕೆಯ ಅಪ್ಪನಿಗೆ ಒಬ್ಬಳೇ ಮಗಳು. ಅದ್ಯಾವ ಆದರ್ಶವೋ ಏನೋ ಗೊತ್ತಿಲ್ಲ.  ಎಲ್ಲ ಮುಸಲ್ಮಾನರೂ ಐದಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಂಡಿದ್ದರೂ, ತನಗೆ ಅವಕಾಶವಿದ್ದರೂ ಮಕ್ಕಳನ್ನು ಮಾಡಿಕೊಳ್ಳಲಿಲ್ಲ. ರಜಿಯಾ ಒಬ್ಬಳೆ ತನಗೆ ಸಾಕು ಎಂದು ಕೊಂಡು ಆಕೆಯನ್ನು ಮುದ್ದಿನಿಂದ ಬೆಳೆಸಿದ್ದರವರು. ಸಲೀಮುಲ್ಲಾ ಅಂತ ಅವರ ಹೆಸರು. ವ್ಯಾಪಾರ ಮಾಡುತ್ತಿದ್ದರು. ವ್ಯಾಪಾರ-ವ್ಯವಹಾರ ಜೋರಾಗಿದ್ದ ಕಾರಣ ಆದಾಯವೂ ಜಾಸ್ತಿಯಿತ್ತು. ಮಗಳಿಗೆ ಏನೂ ಕೊರತೆಯಾಗಬಾರದು ಎನ್ನುವಂತೆ ಬೆಳೆಸಿದರು. ಆ ಕಾಲಕ್ಕೆ ಮಗಳನ್ನು ಶಾಲೆಗೆ ಕಳಿಸಿದ್ದು ಬಹುದೊಡ್ಡ ಘಟನೆಯೇ ಹೌದು. ಅಶ್ವಿನಿ ಸರ್ಕಲ್ಲಿನಲ್ಲಿ ಕಟ್ಟಿಸಿದ್ದ ಹೊಸ ಮನೆಯಲ್ಲಿ ರಜಿಯಾ ಉಳಿದುಕೊಳ್ಳುವ ಸಲುವಾಗಿ ಎಲ್ಲ ವ್ಯವಸ್ಥೆಯನ್ನೂ ಕೈಗೊಂಡಿದ್ದ.
             ರಜಿಯಾ ನೋಡಲಿಕ್ಕೆ ಚೆಂದವೂ ಇದ್ದಳು. ಆಕೆ ಬೆಳೆಯುತ್ತಿದ್ದಂತೆಯೇ ಅನೇಕರು ತಮಗೆ ನಿಖಾ ಮಾಡಿಕೊಡಿ ಎಂದೂ ಕೇಳಿಕೊಂಡಿದ್ದರು. ಆದರೆ ಸಲೀಮುಲ್ಲಾ ಅದಕ್ಕೆ ಒಪ್ಪಿಕೊಂಡಿರಲಿಲ್ಲ. ಗಾಂಧಿ-ನೆಹರು, ಸ್ವಾತಂತ್ರ್ಯ ಹೋರಾಟ, ಆದರ್ಶ ಅದೂ ಇದೂ ಎನ್ನುತ್ತಿದ್ದ ಅವರು ಮಗಳನ್ನು ಕೇಳಿ ಬರುತ್ತಿದ್ದವರಿಗೆಲ್ಲ ಇನ್ನೂ ಚಿಕ್ಕ ವಯಸ್ಸು ಸ್ವಲ್ಪ ದಿನ ಹೋಗಲಿ ಎಂದೋ, ಇನ್ನೂ ಒಂದೆರಡು ವರ್ಷ ನಿಖಾ ಮಾಡುವುದಿಲ್ಲ ಎಂದೋ ಹೇಳಿ ಕಳುಹಿಸುತ್ತಿದ್ದರು. ಮಗಳಿಗೆ ಹೀಗಿದ್ದಾಗಲೇ ಹದಿನಾರೋ ಹದಿನೆಂಟೋ ತುಂಬಿತು.
             ಸಲೀಮುಲ್ಲಾ ಅವರ ದುಕಾನ್ ಗೆ ವ್ಯಾಪಾರಕ್ಕೆಂದು ಬರುತ್ತಿದ್ದವನು ವಿಶ್ವನಾಥ. ಶಿರಸಿ ಬಳಿಯ ಹಳ್ಳಿಯವನೇ. ಪ್ಲೇಗೋ ಇನ್ಯಾವುದೋ ಮಾರಿಯೋ ಆತನ ತಂದೆ ತೀರಿಕೊಂಡಿದ್ದರು. ತಂದೆ ತೀರಿಕೊಳ್ಳುವಾಗ ವಿಶ್ವನಾಥನಿಗೆ ಇನ್ನೂ ಹತ್ತೋ ಹನ್ನೆರಡೋ ವಯಸ್ಸು. ಎಳವೆಯಲ್ಲಿಯೇ ಮನೆಯ ಜವಾಬ್ದಾರಿ ಹೊರುವಂತಹ ಅನಿವಾರ್ಯತೆ ಒದಗಿತ್ತು. ಮನೆಯಲ್ಲಿ ತಾಯಿ, ಇಬ್ಬರು ತಮ್ಮಂದಿರು ಇದ್ದರು. ಸಲೀಮುಲ್ಲಾನ ದುಕಾನಿಗೆ ವ್ಯಾಪಾರಕ್ಕಾಗಿಯೋ ಅಥವಾ ಇನ್ನಿತರೆ ಕೆಲಸಕ್ಕಾಗಿ ಬರುವ ವೇಳೆಗೆ ವಿಶ್ವನಾಥನಿಗೆ ಇಪ್ಪತ್ತು ವರ್ಷ ವಯಸ್ಸು. ಮನೆಯ ಸದಸ್ಯರನ್ನು ಸಾಕುವ ಕಾರ್ಯ ಆತನ ಪಾಲಿಗಿದ್ದರಿಂದ ವಯಸ್ಸು ಇಪ್ಪತ್ತಾಗಿದ್ದರೂ ಮನಸ್ಸು ಮಾಗಿತ್ತು. ಅಡಿಕೆ ಮಾರಿ ಬಂದ ಹಣವೋ ಅಥವಾ ಇನ್ಯಾವುದೋ ಅಂತೂ ವಾರಕ್ಕೊಮ್ಮೆಯಾದರೂ ಸಲೀಮುಲ್ಲಾನ ದುಕಾನಿಗೆ ವಿಶ್ವನಾಥ ಬಂದು ಹೋಗುತ್ತಿದ್ದ. ಆಗತಾನೆ ಬೆಳೆದು ನಿಂತಿದ್ದ ರಜಿಯಾಳ ಕಣ್ಣಿಗೆ ಒಂದು ದಿನ ವಿಶ್ವನಾಥ ಬಿದ್ದಿದ್ದ.
              ಈಗೀಗ ಪ್ಯಾರ್ ಅಂದ್ರೆ ಬೆಲೆನೇ ಇಲ್ಲ ಬಿಡು ಬೇಟಾ. ಆದರೆ ಆಗ ಪ್ಯಾರ್ ಅಂದರೆ ಅದೆಷ್ಟು ಪವಿತ್ರವಾಗಿತ್ತು ಅಂತೀಯಾ. ರಜೀಯಾಳಿಗೆ ಮೊದಲ ನೋಟದಲ್ಲಿಯೇ ವಿಶ್ವನಾಥನ ಮೇಲೆ ಪ್ಯಾರ್ ಗೆ ಆಗ್ಬುಟ್ಟಿತ್ತು. ವ್ಯಾಪಾರಕ್ಕೆಂದು ಬರುತ್ತಿದ್ದ ವಿಶ್ವನಾಥ ರಜಿಯಾಳ ಮನಸ್ಸಿನಲ್ಲಿ ಸೆರೆಯಾಗಿಬಿಟ್ಟಿದ್ದ. ವಾರಕ್ಕೊಮ್ಮೆಯೋ ಅತವಾ ಎರಡು ಬಾರಿಯೋ ಬಂದು ಹೋಗುತ್ತಿದ್ದ ವಿಶ್ವನಾಥ ಮತ್ತಿನ್ಯಾವಾಗ ಬರುತ್ತಾನೋ ಎಂದು ಸದಾ ಕಾಯುತ್ತಿದ್ದಳು ರಜಿಯಾ. ದುಕಾನಿಗೆ ಬಂದಾಗಲೆಲ್ಲ ಆತನನ್ನು  ಸೆಳೆಯುವ ಪ್ರಯತ್ನವನ್ನೂ ಮಾಡಿದ್ದಳು. ಆದರೆ ತನ್ನದೇ ಆದ ಜವಾಬ್ದಾರಿಯ ಬದುಕಿನಲ್ಲಿ ಓಡುತ್ತಿದ್ದ ವಿಶ್ವನಾಥ ಆರಂಭದಲ್ಲಿ ಆಕೆಯನ್ನು ಗಮನಿಸಿರಲಿಲ್ಲ. ಆತ ಆಕೆಯನ್ನು ಗಮನಿಸುವ ವೇಳೆಗೆ ರಜಿಯಾಳ ಮನಸ್ಸಿನಲ್ಲಿ ವಿಶ್ವನಾಥನೆಂಬ ತೆರೆ ಸುನಾಮಿಯಂತಾಗಿ ಅಪ್ಪಳಿಸಿ, ಭೋರ್ಘರೆಯುತ್ತಿತ್ತು.
            ಹಲವು ದಿನಗಳ ನಂತರ ರಜಿಯಾ ವಿಶ್ವನಾಥನಲ್ಲಿ ಪ್ರೇಮ ನಿವೇದನೆ ಮಾಡಿದ್ದಳು. ವಿಶ್ವನಾಥ ಅವಾಕ್ಕಾಗಿದ್ದ. ಮನಸ್ಸಿನಲ್ಲಿ ಇಂತಹ ಕಲ್ಪನೆಗೂ ಆಸ್ಪದವಿಲ್ಲದಂತಹ ಸಮಯದಲ್ಲಿ ಆಕೆ ಕೇಳಿದ್ದಳು. ವಿಶ್ವನಾಥ ಗರಬಡಿದಂತಾಗಿ ಬಂದುಬಿಟ್ಟಿದ್ದ. ಅಷ್ಟೇ ಅಲ್ಲದೇ ಕೆಲವು ದಿನಗಳ ಕಾಲ ದುಕಾನ್ ಕಡೆಗೆ ಹೋಗುವುದನ್ನೂ ನಿಲ್ಲಿಸಿಬಿಟ್ಟಿದ್ದ. ಪ್ರೀತಿಯ ಸೆಳೆತವೇ ಬೇರೆ ರೀತಿಯದ್ದು. ಅದನ್ನು ಎಷ್ಟೇ ದೂರವಿಟ್ಟರೂ ಬಂದು ಕಾಡುತ್ತದೆ. ವಿಶ್ವನಾಥನೂ ಅದೊಂದು ದಿನ ರಜಿಯಾಳ ಪ್ರೀತಿಗೆ ಕರಗಿದ್ದ. ಆಕೆಯ ನಿವೇದನೆಯನ್ನು ಒಪ್ಪಿಕೊಂಡಿದ್ದ.
            ಪ್ರತಿವಾರ ದುಕಾನಿಗೆ ಬಂದಾಗಲೆಲ್ಲ ರಜಿಯಾ-ವಿಶ್ವನಾಥರ ಪ್ರೀತಿ ಹಸಿರಾಗುತ್ತಿತ್ತು. ಹೆಮ್ಮರವಾಗುತ್ತಿತ್ತು. ಅದ್ಹೇಗೋ ಗೊತ್ತಿಲ್ಲ. ರಜಿಯಾ-ವಿಶ್ವನಾಥರ ಪ್ರೀತಿ ಅವರಿಬ್ಬರನ್ನು ಬಿಟ್ಟರೆ ಇನ್ನೊಬ್ಬರಿಗೆ ಮಾತ್ರ ಗೊತ್ತಿತ್ತು. ಅದು ನಾನು. ಅವರ ಪ್ರೀತಿಗೆ ನಾನು ಅನೇಕ ಸಾರಿ ಮೆಟ್ಟಿಲಾಗಿದ್ದೆ. ಸೇತುವೆಯಾಗಿದ್ದೆ. ರಕ್ಷಕನೂ ಆಗಿದ್ದೆ. ಯಾರಿಗೂ ಗೊತ್ತಾಗದಂತೆ ಕಾಪಾಡುತ್ತಿದ್ದೆ. ಇವರಿಬ್ಬರ ಪ್ರೇಮ ಹೆಮ್ಮರವಾಗಿತ್ತು. ರಜಿಯಾ ವಿಶ್ವನಾಥನನ್ನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಳು. ಅದೊಂದು ದಿನ ರಜಿಯಾ ವಿಶ್ವನಾಥನನ್ನು ಮದುವೆಯಾಗಿ ಅಶ್ವಿನಿ ಸರ್ಕಲ್ಲಿನ ಆ ಮನೆಗೆ ಕರೆದುಕೊಂಡೂ ಬಂದು ಬಿಟ್ಟಳು. ವಿಚಿತ್ರ ಅಂದರೆ ಈ ಮದುವೆಯ ಕುರಿತು ಸಲೀಮುಲ್ಲಾ ಯಾವುದೇ ವಿರೋಧವನ್ನೂ ವ್ಯಕ್ತಪಡಿಸಲಿಲ್ಲ. ಸಿಟ್ಟೂ ಆಗಲಿಲ್ಲ. ಮಗಳು ವಿಶ್ವನಾಥನನ್ನು ಅದರಲ್ಲೂ ಹಿಂದುವೊಬ್ಬನನ್ನು ಮದುವೆಯಾಗಿ ಬಂದಳು ಎನ್ನುವುದನ್ನು ಕೇಳಿ ಮೌನಿಯಾಗಿ ಉಳಿದುಬಿಟ್ಟರು. `ಮಗಳೇ ಹೇಗೇಕೆ ಮಾಡಿದೆ..' ಎಂದೂ ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ.
            ಕೆಲ ದಿನಗಳು ಕಳೆದವು. ಆ ಕೆಲದಿನಗಳಲ್ಲಿ ರಜಿಯಾ ಹಾಗೂ ವಿಶ್ವನಾಥರು ಅಶ್ವಿನಿ ಸರ್ಕಲ್ಲಿನ ಮನೆಯಲ್ಲಿ ಆರಾಮಾಗಿಯೇ ಇದ್ದರು ಎನ್ನಬಹುದು. ಆದರೆ ಈ ಸುದ್ದಿ ದಿನದಿಂದ ದಿನಕ್ಕೆ ಎಲ್ಲೆಡೆ ಹರಡಿತು. ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಹುಡುಗನನ್ನು ಮದುವೆಯಾದಳು ಎನ್ನುವ ವಿಷಯ ಎಲ್ಲ ಕಡೆ ಹಬ್ಬಿತು. ಹಲವು ಮುಸ್ಲಿಂ ನಾಯಕರುಗಳು, ಮೌಲ್ವಿಗಳು ಬಂದು ಸಲೀಮುಲ್ಲಾನ ಬಳಿ ಈ ಕುರಿತು ಮಾತನಾಡಿದ್ದೂ ಆಯಿತು. ರಜಿಯಾ ಮಾಡಿದ್ದು ಸರಿಯಲ್ಲ. ಹಾಗೆ ಹೀಗೆ ಎಂದೂ ಹೇಳತೊಡಗಿದರು. ಆದರೆ ಸಲೀಮುಲ್ಲಾ ಮಾತ್ರ ರಜಿಯಾಳ ಪರ ನಿಂತುಬಿಟ್ಟಿದ್ದರು. ಈ ಕುರಿತು ಮನೆಗೆ ಬಂದು ತನಗೆ ಬುದ್ಧಿ ಹೇಳಲು ಯತ್ನಿಸಿದವರನ್ನೇ ಬೈದು ಕಳಿಸುವ ಪ್ರಯತ್ನವನ್ನೂ ಮಾಡಿದರು. ಆದರೆ ಮೌಲ್ವಿಗಳು ಸುಮ್ಮನಿರಬೇಕಲ್ಲ. ಇದು ತಮ್ಮ ಧರ್ಮಕ್ಕೆ ಅವಮಾನಕರ ವಿಷಯ ಎಂದೇ ಭಾವಿಸಿದರು.
            ಕೊನೆಗೊಂದು ದಿನ ಅಶ್ವಿನಿ ಸರ್ಕಲ್ಲಿನ ಮನೆಗೆ ಬಂದ ಮುಸ್ಲಿಂ ನಾಯಕರು ರಜಿಯಾಳ ಬಳಿ ಮಾತಿಗೆ ನಿಂತರು. ಸಲೀಮುಲ್ಲಾ ವಿಷಯವನ್ನು ಕೇಳಿ ಓಡಿಬಂದಿದ್ದ. ರಜಿಯಾಳ ಬಳಿ ಈ ಮದುವೆಯನ್ನು ಮುರಿದುಕೊಳ್ಳು ಎಂದರು. ಆದರೆ ಆಕೆ ಒಪ್ಪಲಿಲ್ಲ. ಕೊನೆಗೆ ವಿಶ್ವನಾಥನನ್ನು ಮುಸ್ಲಿಂ ಧರ್ಮಕ್ಕೆ ಧರ್ಮಾಂತರ ಮಾಡಿಸು ಎಂದೂ ಹೇಳಿದರು. ಆದರೆ ರಜಿಯಾ ಮಾತ್ರ ಖಂಡತುಂಡವಾಗಿ ಇದನ್ನು ವಿರೋಧಿಸಿದ್ದಳು. ನಾಯಕರುಗಳ ಪದೇ ಪದೆ ಒತ್ತಡವನ್ನು ಹೇರಲಾರಂಭಿಸಿದರು. ಹಲವಾರು ಬಗೆಯಿಂದ, ಹತ್ತೆಂಟು ಮಾರ್ಗಗಳಿಂದ ರಜಿಯಾ ಹಾಗೂ ವಿಶ್ವನಾಥನ ವಿರುದ್ಧ ಹಲವು ರೀತಿಯಿಂದ ಕಾರ್ಯಗಳನ್ನು ಕೈಗೊಂಡರು. ಭಹಿಷ್ಕಾರವನ್ನೂ ಹೇರಲಾಯಿತು.
            ರಜಿಯಾ ಹಾಗೂ ವಿಶ್ವನಾಥರ ಪಾಲಿಗೆ ಆ ಮನೆ ಪ್ಯಾರಾ ಮಂಜಿಲ್ ಆಗಿತ್ತು. ಮನೆಯೇ ಸರ್ವಸ್ವ. ಸಕಲ ಸಂತೋಷವನ್ನೂ ನೀಡುವ ಅವರ ಪಾಲಿನ ಭಾಗ್ಯದ ಬಾಗಿಲಾಗಿತ್ತು. ತಮ್ಮ ಸಂತೋಷಕ್ಕೆ ಯಾರೇ ಅಡ್ಡಗಾಲು ಹಾಕಿದ್ದರೂ ಆ ಮನೆಯಲ್ಲಿ ಅದೇನೋ ನೆಮ್ಮದಿ ಸಿಗುತ್ತಿದ್ದ ಕಾರಣ ಖುಷಿಯಿಂದಲೇ ಜೀವನ ನಡೆಸುತ್ತಿದ್ದರು. ಆರು ಕೋಣೆಗಳನ್ನು ಹೊಂದಿದ್ದ ಆ ಮನೆ, ಪಕ್ಕದೊಂದು ಬಾವಿ, ಮೇಲಿನ ಮಹಡಿ ಸೇರಿದಂತೆ ಸಾಕಷ್ಟು ವಿಶಾಲವಾಗಿಯೇ ಇತ್ತು. ಆದರೆ ಇಬ್ಬರೇ ಬದುಕಬೇಕಿತ್ತು. ಯಾರೂ ಆ ಮನೆಗೆ ಬರುವಂತಿಲ್ಲ. ಹೋಗುವಂತಿಲ್ಲ. ಭಹಿಷ್ಕಾರ ಹೇರಿದ್ದ ಕಾರಣ ಸುತ್ತಲ ಜಗತ್ತಿನ ಕೊಂಡಿಯನ್ನು ಕಳೆದುಕೊಂಡಿತ್ತು. ಆದರೆ ನಾನು ಹಾಗೂ ಸಲೀಮುಲ್ಲಾ ಮಾತ್ರ ಯಾರಿಗೂ ತಿಳಿಯದಂತೆ ಆ ಮನೆಗೆ ಹೋಗಿ ಬಂದು ಮಾಡುತ್ತಿದ್ದೆವು. ರಜಿಯಾ-ವಿಶ್ವನಾಥರಿಗೆ ಅಗತ್ಯವಾದ ವಸ್ತುಗಳನ್ನು ತಲುಪಿಸಿ ಬರುತ್ತಿದ್ದೆವು.
           ಮೊದ ಮೊದಲು ಸಲೀಮುಲ್ಲಾ ಮಗಳ ಪರವಾಗಿದ್ದ. ಆದರೆ ಮುಸ್ಲೀಂ ನಾಯಕರುಗಳ ಒತ್ತಡವನ್ನು ಆತ ಅದೆಷ್ಟು ದಿನ ತಾಳಿಕೊಳ್ಳಬಲ್ಲ? ಕೊನೆಗೊಮ್ಮೆ ಆತನೂ ಮಗಳ ಬಳಿ ಒತ್ತಾಯ ಮಾಡಲು ಆರಂಭಿಸಿದ. ಕೊನೆಗೊಮ್ಮೆ ರಜಿಯಾ ಆತನ ವಿರುದ್ಧವೂ ಸಿಟ್ಟಾದಳು. ಕೊನೆಗೊಂದು ದಿನ ಸಲೀಮುಲ್ಲಾನ ಬಳಿ ಹೋಗಿ ಜಗಳ ಮಾಡಿದ ರಜಿಯಾ ಅಶ್ವಿನಿ ಸರ್ಕಲ್ಲಿನ ಮನೆಯೊಳಗೆ ತೆರಳು ದಢಾರನೆ ಬಾಗಿಲು ಹಾಕಿದಳು. ಎಲ್ಲರೂ ಅವಾಕ್ಕಾಗಿದ್ದರು.
           ಆಗ ಹಾಕಿದ ಬಾಗಿಲು ಮೂರು ದಿನಗಳಾದರೂ ತೆರೆಯದೇ ಇದ್ದಾಗ ಸಲೀಮುಲ್ಲಾ ಅನುಮಾನ ಬಂದು ಮನೆಯ ಬಾಗಿಲನ್ನು ಒಡೆಸಿ ನೋಡಿದ. ಮನೆಯೊಳಗಿನ ಕತ್ತಲೆಯ ಕೋಣೆಯೊಂದರಲ್ಲಿ ರಜಿಯಾ ಹಾಗೂ ವಿಶ್ವನಾಥ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಷ್ಕಲ್ಮಷ ಪ್ರೇಮವೊಂದು ಸಾವಿನಲ್ಲಿ ಪರ್ಯವಸಾನಗೊಂಡಿತ್ತು. ಸಲೀಮುಲ್ಲಾ ಮೌನವಾಗಿ ರೋಧಿಸುತ್ತಿದ್ದ. ಉಳಿದವರು ಮಾತನಾಡದೇ ಮೌನವಾಗಿ ಕಾಲ್ಕಿತ್ತಿದ್ದರು. ಆ ನಂತರವೇ ಮನೆಯಲ್ಲಿ ಚಿತ್ರ ವಿಚಿತ್ರ ಘಟನೆಗಳು ಜರುಗಲಾರಂಭಿಸಿದ್ದು. ನೀವು ಮನೆಯಲ್ಲಿ ಉಳಿದುಕೊಳ್ಳಲು ಬರುವ ವೇಳೆಗೆ ಇನ್ನೂ ನಾಲ್ಕೈದು ಜನರು ಉಳಿದುಕೊಂಡಿದ್ದರು. ಅಲ್ಲಿ ಒಂದೆರಡು ಅಸಹಜ ಸಾವುಗಳೂ ಸಂಭವಿಸಿದ್ದವು. ನೀವು ಎಲ್ಲಿ ಈ ಮನೆಯಲ್ಲಿ ಬಾಡಿಗೆಗೆ ಇರುವುದಿಲ್ಲವೋ ಎಂದು ಹೆದರಿ ಭಯದಿಂದ ನಿಮ್ಮ ಬಳಿ ಈ ವಿಷಯವನ್ನು ಮುಚ್ಚಿಟ್ಟಿದ್ದರು. ಆದರೆ ಬೇಟಾ ನೀನು ಮಾತ್ರ ಈ ಮನೆಯ ವಿಷಯವನ್ನು ಹಿಂದೂ ಬಿಡದೆ ಮುಂದೂ ಬಿಡದೇ ಕೇಳಿ ತಿಳಿದುಕೊಂಡುಬಿಟ್ಟೆ ನೋಡು.. ಎಂದರು ಫಾತಿಮಾ. ನಾನು ಮೌನದಿಂದ ನಿಟ್ಟುಸಿರನ್ನು ಬಿಟ್ಟುಬಿಟ್ಟಿದ್ದೆ.
            ಅಲ್ಲಿಂದ ನಾನು ಬರುವಾಗ ನನ್ನ ಮನದಲ್ಲಿಯೇ ನೂರಾರು ಆಲೋಚನೆಗಳು. ಅದೇನೋ ಲೆಕ್ಕಾಚಾರ. ರಾಘವನಿಗೆ ಅದ್ಯಾವ ಪ್ರೇರಣೆಯೋ ನಾಗವಲ್ಲಿ ಕೋಣೆ ಎಂದಿದ್ದ. ಅದೇ ಕೋಣೆಯಲ್ಲಿ ವಿಶ್ವನಾಥ-ರಜಿಯಾರು ಆತ್ಮಹತ್ಯೆ ಮಾಡಿಕೊಂಡಿದ್ದರು. ಯಾವ ಪ್ರೇರಣೆಯಿಂದ ಹೀಗೆ ಹೇಳಿದ್ದನೋ ಎಂದುಕೊಂಡೆ. ಮದ್ಯರಾತ್ರಿಯಲ್ಲೆದ್ದು ಕಥೆ-ಕವಿತೆಗಳನ್ನು ಬರೆಯಲು ಕುಳಿತು ಬಿಡುತ್ತಿದ್ದ ನಾಗರಾಜನ ಕನವರಿಕೆಗಳಿಗೂ ಇದೇ ಕಾರಣವೇ ಎಂದುಕೊಂಡೆ. ಮನಸ್ಸಿನ ತುಂಬೆಲ್ಲ ರಜಿಯಾ-ವಿಶ್ವನಾಥರ ನಿಷ್ಕಲ್ಮಷ ಪ್ರೇಮ ತುಂಬಿಕೊಂಡಿತ್ತು. ಧರ್ಮಗಳನ್ನು ಮೀರಿದ ರಜಿಯಾ ಯಾಕೋ ಮನಸ್ಸಿನಲ್ಲಿ ನಿಂತಿದ್ದಳು. ನಾನು ಈ ಕತೆಯನ್ನು ಪೂರ್ತಿ ನಂಬಿರಲಿಲ್ಲ. ಕೊನೆಗೆ ನಮ್ಮೂರ ಭಾಗದಲ್ಲಿ ಇದ್ದ ಹಳೆಯ ವ್ಯಕ್ತಿಗಳನ್ನು ಕೇಳಿದಾಗ ಅವರೂ ಇಂತದ್ದೊಂದು ಘಟನೆ ನಡೆದಿದ್ದನ್ನು ನೆನಪು ಮಾಡಿಕೊಂಡರು. ಒಂದಿಬ್ಬರು ಮಾತ್ರ ವಿಶ್ವನಾಥನ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಹೆಂಗಸರನ್ನು ಯಾರಾದರೂ ಇಟ್ಟುಕೊಂಡರೆ `ಇಟ್ಟುಕೊಂಡವಳು' ಎನ್ನಲಾಗುತ್ತದೆ. ಅದೇ ರೀತಿ ವಿಸ್ವನಾಥ ನನ್ನು `ಇಟ್ಟುಕೊಂಡವನು..' ಎಂಬ ಅರ್ಥ ಬರುವ ರೀತಿಯಲ್ಲಿ ಮಾತನಾಡಿದರು. ನಾನು ಮನಸ್ಸನ್ನು ಇನ್ನಷ್ಟು ಗೋಜಲಾಗಿಸಿಕೊಂಡು ಬಂದಿದ್ದೆ.

**
            ರಜಿಯಾ-ವಿಶ್ವನಾಥರ ಕಥೆಯನ್ನು ಕೇಳಿದ ನಂತರವೂ ಮತ್ತಾರು ತಿಂಗಳು ನಾವು ಅದೇ ಮನೆಯಲ್ಲಿ ಉಳಿದುಕೊಂಡಿದ್ದವು. ನಾಗರಾಜ ಅದ್ಯಾವುದೋ ಕಾರಣದಿಂದ ಆ ಮನೆಯನ್ನು ಬಿಟ್ಟು ಹೋಗಿದ್ದ. ರಾಘವನೂ ಕೆಲ ದಿನಗಳ ನಂತರ ಮನೆಯನ್ನು ತೊರೆದಿದ್ದ. ಏನಾಗೋದಿಲ್ಲ ಎನ್ನುವ ಹುಮ್ಮಸ್ಸಿನಲ್ಲಿ ಬದುಕುತ್ತಿದ್ದ ನಾನು ಜಾಂಡೀಸಿಗೆ ಸಿಲುಕಿ ಆ ಮನೆಯನ್ನು ಬಿಡಬೇಕಾಗಿ ಬಂದಿತ್ತು. ಪ್ರಶಾಂತ ಮಾತ್ರ ತನ್ನ ಬಿಸಿನೆಸ್ಸಿನಲ್ಲಿ ಅಪಾರ ನಷ್ಟಕ್ಕೆ ಸಿಲುಕಿ ಮನೆಯನ್ನು ಬಿಡುವ ಪ್ರಸಂಗ ಬಂದಿತ್ತು.
          ಅಂದ ಹಾಗೆ ಇತ್ತೀಚೆಗೊಮ್ಮೆ ಆ ಮನೆಯ ಬಳಿ ಹೋಗಿದ್ದೆ. ಮನೆಯಲ್ಲಿ ಕಲರವ. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಅದ್ಯಾರೋ ರಾಜಸ್ತಾನಿ ದಂಪತಿಗಳು ಮನೆಯಲ್ಲಿ ಬಂದು ಉಳಿದಿದ್ದಾರೆ. ಆರು ತಿಂಗಳಾಗಿವೆ. ಮನೆಯ ಮುಂದಿನ ಭಾಗದಲ್ಲಿ ದೊಡ್ಡದೊಂದು ಅಂಗಡಿಯನ್ನು ತೆರೆದಿದ್ದಾರೆ. ಹಿಂಭಾಗದಲ್ಲಿ ವಾಸ ಮಾಡುತ್ತಾರೆ. ಆ ದಂಪತಿಗೆ ಇಬ್ಬರು ಮಕ್ಕಳು. ಅವಳಿ-ಜವಳಿ. ಆರಾಮಾಗಿದ್ದಾರೆ ಎಂದರು. ನನ್ನ ಮನಸ್ಸಿನಲ್ಲಿ ಅದೇನೋ ಬೆರಗು ಮೂಡಿತ್ತು.

(ಮುಗಿಯಿತು.)

No comments:

Post a Comment