Friday, July 25, 2014

ಬೆಂಗಾಲಿ ಸುಂದರಿ-19


(ಢಾಕಾದ ಜನಭರಿತ ಬೀದಿ)
           ಸಲೀಂ ಚಾಚಾ ತನ್ನ ಸೈಕಲ್ ರಿಕ್ಷಾವನ್ನು ಸಾಕಷ್ಟು ವೇಗವಾಗಿ ತುಳಿಯುತ್ತಿದ್ದ. ಆದರೆ ಗಾಡಿಯಲ್ಲಿ ಕುಳಿತ ಮಧುಮಿತಾ ಹಾಗೂ ವಿನಚಂದ್ರರಿಗೆ ಕ್ಷಣ ಕ್ಷಣವೂ ಗಂಟೆ ಗಂಟೆಯಾಗಿ ಭಾಸವಾಗುತ್ತಿತ್ತು. ಸಲಿಂ ಚಾಚಾನ ಸೈಕಲ್ ವೇಗ ಪಡೆದುಕೊಳ್ಳುತ್ತಿದ್ದಂತೆಯೇ ವಿನಯಚಂದ್ರ ಹಾಗೂ ಮಧುಮಿತಾರ ಎದೆಬಡಿತದ ವೇಗವೂ ಜಾಸ್ತಿಯಾಗುತ್ತಿತ್ತು. ಸಲೀಂ ಚಾಚಾ ಆಗೀಗ ರಸ್ತೆಯನ್ನು ಕೂಲಂಕಷವಾಗಿ ನೋಡುತ್ತ ಸೈಕಲ್ ತುಳಿಯುತ್ತಿದ್ದನಾದರೂ ಯಾವ ಕ್ಷಣದಲ್ಲಿ ಯಾರು ಬಂದು ಏನು ಮಾಡಿಬಿಡುತ್ತಾರೋ ಎಂಬ ಭಯವೂ ಕಾಡುತ್ತಿತ್ತು. ಇದ್ದಕ್ಕಿದ್ದಂತೆ ಅದೆಲ್ಲಿಂದಲೋ ಒಂದು ಕಲ್ಲು ಬಂದು ದಬಾರನೆ ಸೈಕಲ್ ರಿಕ್ಷಾದ ಹಿಂಬದಿಯ ಟಾಪಿಗೆ ಬಡಿಯಿತು. ಸೈಕಲ್ಲಿನಲ್ಲಿ ಪಯಣಿಸುತ್ತಿದ್ದವರು ಒಮ್ಮೆ ಬೆಚ್ಚಿ ಬಿದ್ದರು. ಸಲೀಂ ಚಾಚಾ ಬೆಚ್ಚಿದ ಹೊಡೆತಕ್ಕೆ ಸೈಕಲ್ ಪಲ್ಟಿಯಾಗದಿದ್ದುದು ಅದೃಷ್ಟವೆಂದೇ ಹೇಳಬಹುದು.
              ಢಾಕಾದ ಯಾವು ಯಾವುದೋ ದಾರಿಯಲ್ಲಿ ಸಾಗಿ ಮಧುಮಿತಾಳ ಅಪಾರ್ಟ್ ಮೆಂಟ್ ಬಳಿ ಬರಲು ಯತ್ನಿಸಿದರೆ ಅಲ್ಲಿ ಪೊಲೀಸರು ಸೇರಿದ್ದರು. ದೊಡ್ಡದಾಗಿ ಸೈರನ್ ಕೂಗುತ್ತ ಬರುತ್ತಿದ್ದ ಪೊಲೀಸ್ ವಾಹನಗಳು, ಅಂಬೂಲೆನ್ಸ್ ಗಳು. ಏನೋ ಧಾವಂತ. ಮತ್ತಿನ್ನೇನೋ ಗಡಿಬಿಡಿ. ಆತಂಕದಲ್ಲಿ ಅಡ್ಡಾಡುತ್ತಿದ್ದವರೇ ಹೆಚ್ಚು. ವಿನಯಚಂದ್ರ ಗಮನವಿಟ್ಟು ನೋಡಿದ. ನಾಲ್ಕೈದು ಅಗ್ನಿಶಾಮಕ ವಾಹನಗಳೂ ಇದ್ದವು. ಅಪಾರ್ಟ್ ಮೆಂಟ್ ಗೆ ಬೆಂಕಿ ಬಿದ್ದಿದೆಯೇ? ಒಮ್ಮೆ ಭಯವಾಯಿತು. ಸೈಕಲ್ ನಿಂದ ಜಿಗಿದು ಓಡಿದ. ಪೊಲೀಸ್ ಕಾವಲಿದ್ದು ಯಾರನ್ನೂ ಮುಂದಕ್ಕೆ ಬಿಡುತ್ತಿರಲಿಲ್ಲ. ದಟ್ಟ ಹೊಗೆ ಆವರಿಸಿಕೊಂಡಿತ್ತು. ಇದನ್ನು ಕಂಡಿದ್ದೇ ಮಧುಮಿತಾ ಕುಸಿದು ಕುಳಿತಳು. ಸಲೀಂ ಚಾಚಾ ಅಷ್ಟರಲ್ಲಿ ಅಲ್ಲಿಯೇ ಇದ್ದ ಪೊಲೀಸಿನವನ ಬಳಿ `ಏನಾಗಿದೆ..' ಎಂದು ವಿಚಾರಿಸಿದ. ಅದಕ್ಕೆ ಪ್ರತಿಯಾಗಿ ಆ ಪೊಲೀಸ್ ಅಧಿಕಾರಿ `ದುಷ್ಕರ್ಮಿಗಳು ಈ ಅಪಾರ್ಟ್ ಮೆಂಟ್ ಬಳಿ ಬಾಂಬ್ ಇರಿಸಿದ್ದರು. ಅದು ಸ್ಪೋಟಗೊಂಡು ಬೆಂಕಿ ಹತ್ತಿಕೊಂಡಿದೆ. ಮೂರ್ನಾಲ್ಕು ಗಂಟೆಗಳಾದವು. ಬೆಂಕಿಯನ್ನು ಆರಿಸುವ ಪ್ರಯತ್ನ ನಡೆಯುತ್ತಿದೆ..' ಎಂದವನೇ ಅಸಹನೆಯಿಂದ ಎಲ್ಲ ದೂರ ಹೋಗಿ ಎಂದು ಗದರಿದ.
             ಮಧುಮಿತಾ ಮೈಮೇಲೆ ಭೂತ ಬಂದವಳಂತೆ ತಮ್ಮ ಮನೆಯ ಸದಸ್ಯರಿಗೆ ಏನಾಯಿತು ಎಂದು ಪೊಲೀಸನನ್ನು ಹಿಡಿದೆಳೆದು ಕೇಳಿದಳು. ಅದಕ್ಕಾತ ತನಗೇನೂ ಗೊತ್ತಿಲ್ಲ. ಸಾವು ನೋವು ಸಾಕಷ್ಟು ಸಂಭವಿಸಿದೆ. ಹಲವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಯಾರು ಸತ್ತವರು, ಗಾಯಗೊಂಡವರು ಯಾರು ಎನ್ನುವುದರ ಬಗ್ಗೆ ಮಾಹಿತಿಯಿಲ್ಲ ಎಂದು ಹೇಳಿ ಗಾಯಾಳುಗಳನ್ನು ಸೇರಿಸಿದ ಆಸ್ಪತ್ರೆಯ ಹೆಸರು ಹೇಳಿದ. ಮಧುಮಿತಾ ಆಗಲೇ ದೊಡ್ಡದಾಗಿ ಅಳಲು ಆರಂಭಿಸಿದ್ದರು. ಸಲೀಂ ಚಾಚಾ ಭಯದಿಂದ ಕಂಪಿಸತೊಡಗಿದ್ದ. ವಿನಯಚಂದ್ರ ಏನು ಮಾಡಬೇಕೆಂಬುದು ಗೊತ್ತಾಗದೇ ನಿಂತಿದ್ದ. ಮನಸ್ಸು ಏನೋ ಅಪಾಯವನ್ನು ಊಹಿಸುತ್ತಿತ್ತು. ಏನೂ ಆಗದಿದ್ದರೆ ಸಾಕಪ್ಪಾ ಭಗವಂತಾ ಎಂದುಕೊಂಡ ವಿನಯಚಂದ್ರ.
              `ಆಸ್ಪತ್ರೆಗಾದರೂ ಹೋಗಿ ನೋಡೋಣ. ಏನಾಗಿದೆಯೋ ಗೊತ್ತಾಗುತ್ತದೆ..' ಎಂದು ಸಲೀಂ ಚಾಚಾ ಹೇಳಿದಾಗ ವಿನಯಚಂದ್ರ ಹಾಗೂ ಮಧುಮಿತಾ ಮಾತಿಲ್ಲದೇ ಹಿಂಬಾಲಿಸಿದರು. ಆಸ್ಪತ್ರೆ ಸನಿಹದಲ್ಲೇ ಇತ್ತು. ಆ ಆಸ್ಪತ್ರೆಯೋ ನರಕವೇ ಹೌದು ಎನ್ನುವಂತಿತ್ತು. ಬಾಂಗ್ಲಾದೇಶದಲ್ಲಿ ತೋರುಗಾಣಿಕೆಗೆ ಅಭಿವೃದ್ಧಿಯನ್ನು ಕೈಗೊಂಡಿದ್ದಾರೆ. ಆದರೆ ಆಸ್ಪತ್ರೆಗಳ ಅಭಿವೃದ್ಧಿಗೆ ಏನೂ ಮಾಡಿಲ್ಲವೇನೋ ಎನ್ನಿಸುವಂತಿತ್ತು. ಅಪಾರ್ಟ್ ಮೆಂಟ್ ದುರಂತದ ಗಾಯಾಳುಗಳನ್ನೆಲ್ಲ ತಂದು ಸೇರಿಸಲಾಗಿತ್ತು. ಆಸ್ಪತ್ರೆಯಲ್ಲಿ ಕಾಲಿಡಲು ಜಾಗವಿರಲಿಲ್ಲ. ಮೈಕೈ ಸುಟ್ಟುಕೊಂಡ ರೋಗಿಗಳ ಆಕ್ರಂದನ, ಕೈಕಾಲು ನುಜ್ಜುಗುಜ್ಜಾದವರ ನೋವು, ನರಳಾಟ, ಕೂಗಾಟ, ಚೀರಾಟ, ಡಾಕ್ಟರ್, ನರ್ಸುಗಳ ಗಡಿಬಿಡಿಯ ಓಡಾಟ ಮೇರೆ ಮೀರಿತ್ತು. ಎಲ್ಲೆಂದರಲ್ಲಿ ರೋಗಿಗಳನ್ನು ದಾಖಲಿಸಲಾಗಿತ್ತು. ಓಡಾಡುವ ಜಾಗದ ಇಕ್ಕೆಲಗಳಲ್ಲೂ ಗಾಯಾಳುಗಳು ಮಲಗಿದ್ದರು. ಯಾರನ್ನು ನೋಡುವುದು ಯಾರನ್ನು ಬಿಡುವುದು. ಮಧುಮಿತಾ ಗಾಯಗೊಂಡ ಎಲ್ಲರನ್ನೂ ಗಮನಿಸುತ್ತ ತನ್ನ ಕುಟುಂಬದವರು ಕಾಣುತ್ತಾರೆಯೇ ಎಂದು ಗಮನಿಸತೊಡಗಿದ್ದಳು. ಆದರೆ ಆಕೆಯ ಮನೆಯ ಸದಸ್ಯರು ಯಾರೂ ಕಮಡು ಬರಲಿಲ್ಲ. ಇದರಿಂದಾಗಿ ಮಧುಮಿತಾಳ ಮನದೊಳಗಿನ ಆತಂಕ ಇನ್ನಷ್ಟು ಹೆಚ್ಚಿತು.
              `ಭಯ ಪಟ್ಕೋಬೇಡ ಬೇಟಿ. ಅಲ್ಲಾ ಕೆಟ್ಟದನ್ನು ಮಾಡೋದಿಲ್ಲ. ಒಳ್ಳೇದೇ ಆಗುತ್ತೆ...' ಎಂದು ಸಲೀಂ ಚಾಚಾ ಆಕೆಯನ್ನು ಸಮಾಧಾನ ಮಾಡುತ್ತಿದ್ದನಾದರೂ ಮಧುಮಿತಾಳ ಮನಸ್ಸಿಗೆ ಅದು ನಾಟುತ್ತಲೇ ಇರಲಿಲ್ಲ. ಅತ್ತು ಅತ್ತು ಆಕೆಯ ಕಣ್ಣುಗಳು ಕೆಂಪಗಾಗಿದ್ದರೆ ಬಾಯಲ್ಲಿನ ಮಾತು ತೊದಲುತ್ತಿತ್ತು. ಬಿಕ್ಕಳಿಕೆ ಬರಲು ಆರಂಭಿಸಿತ್ತು. ವಿನಯಚಂದ್ರನೂ ಎಲ್ಲಕಡೆ ಹುಡುಕಾಟದಲ್ಲಿ ತೊಡಗಿಕೊಂಡಿದ್ದ. ಕೊನೆಗೆ ಅಲ್ಲಿದ್ದ ವೈದ್ಯರ ಬಳಿ ಹೋಗಿ ವಿಚಾರಿಸಿದಾಗ ತಮಗೆ `ಇನ್ನೂ ರೋಗಿಗಳ ಹೆಸರು ಗೊತ್ತಾಗಿಲ್ಲ. ಇಲ್ಲಿ ಎಲ್ಲ ಕಡೆ ರೋಗಿಗಳಿದ್ದಾರೆ. ಈಗಿನ್ನೂ ಎಲ್ಲರನ್ನೂ ದಾಖಲು ಮಾಡಿಕೊಳ್ಳುತ್ತಿದ್ದವೆ. ಹಲವರು ಸತ್ತಿದ್ದಾರೆ. ಸತ್ತವರನ್ನು ಶವಗಾರದಲ್ಲಿ ಇಡಲಾಗಿದೆ. ಅಲ್ಲೊಮ್ಮೆ ನೋಡಿ..' ಎಂದು ಹೇಳಿದಾಗ ವಿನಯಚಂದ್ರನಿಗೂ ಒಮ್ಮೆ ತಾನು ನಿಂತ ನೆಲ ಕಂಪಿಸಿದಂತೆ ಅನ್ನಿಸಿತು.
           ಡಾಕ್ಟರ್ ಮಾತು ಕೇಳಿ ಶವಾಗಾರದತ್ತ ಓಡಿದರು. ಶವಾಗಾರದಲ್ಲಿಯೂ ಜಾಗ ಸಾಲದ ಕಾರಣ ಹೆಣಗಳನ್ನು ಎಲ್ಲೆಂದರಲ್ಲಿ ಹಾಕಿಡಲಾಗಿತ್ತು. ಎಲ್ಲ ಹೆಣಗಳನ್ನೂ ಬಟ್ಟೆಯಿಂದ ಮುಚ್ಚಿದ್ದರು ಎನ್ನುವುದೊಂದು ಸಮಾಧಾನ. ಮಧುಮಿತಾಳೂ ಜೊತೆಗೆ ಬಂದವಳು ಒಂದೊಂದೆ ಹೆಣದ ಬಟ್ಟೆಯನ್ನು ನಿಧಾನವಾಗಿ ಎತ್ತಿ ತನ್ನ ಕುಟುಂಬದವರಾ ಎಂದು ನೋಡುತ್ತಿದ್ದ ದೃಶ್ಯವಂತೂ ಎಂತಹ ಕಲ್ಲೆದೆಯ ಮನುಷ್ಯನನ್ನೂ ಒಮ್ಮೆಲೆ ಕದಡಿ ಹಾಕಿ ಬಿಡುತ್ತಿತ್ತು. ಸಲೀಂ ಚಾಚಾ ಕೂಡ ನೋಡುತ್ತಿದ್ದ.
            ವಿನಯಚಂದ್ರ ಶವಗಳನ್ನು ಗಮನಿಸುತ್ತ ಬರುತ್ತಿದ್ದವನು ಅಲ್ಲೊಂದು ಕಡೆ ನಿಂತುಬಿಟ್ಟ. ಮಧುಮಿತಾಳನ್ನು ಕ್ಷೀಣ ದನಿಯಲ್ಲಿ ಕರೆದ. ಅಲ್ಲಿ ಮಲಗಿಸಲಾಗಿದ್ದ ನಾಲ್ಕು ಶವಗಳೂ ಮಧುಮಿತಾಳ ಕುಟುಂಬದವರಿಗೆ ಹೋಲಿಕೆಯಾಗುತ್ತಿದ್ದವು. ಮೈತುಂಬ ಅಲ್ಲಲ್ಲಿ ಗಾಯಗೊಂಡಿದ್ದವು. ಸಲೀಂ ಚಾಚಾ ಕೂಡ ಕೂಲಂಕಷವಾಗಿ ನೋಡಿ ಮಧುಮಿತಾಳ ಮನೆಯವರೇ ಇರಬಹುದು ಎಂದು ಹೇಳಿಬಿಟ್ಟ. ಮಧುಮಿತಾ ಒಮ್ಮೆ ಬೆಚ್ಚಿ ಬಿದ್ದು ಅಳಲು ಆರಂಭಿಸಿದಳು. ಬಾಂಗ್ಲಾ ಹಿಂಸಾಚಾರಿಗಳಿಗೆ ಮಧುಮಿತಾಳನ್ನು ಹೊರತುಪಡಿಸಿ ಅವಳ ಕುಟುಂಬ ಬಲಿಯಾಗಿತ್ತು. ಮಧುಮಿತಾ ಅಳಲು ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಎಚ್ಚರತಪ್ಪಿ ಬಿದ್ದಳು. ವಿನಯಚಂದ್ರ, ಸಲೀಂಚಾಚಾ ಗಾಬರಿಯಾದರು. ಆಸ್ಪತ್ರೆಯಲ್ಲಿಯೇ ಇದ್ದ ನೀರನ್ನು ತಂದು ಆಕೆಯ ಮುಖಕ್ಕೆ ಸಿಂಪಡಿಸಿ ತಟ್ಟಿ ಎಬ್ಬಿಸಿದರು. ಎದ್ದ ನಂತರವೂ ಆಕೆಯನ್ನು ಸಮಾಧಾನ ಮಾಡುವ ಧೈರ್ಯ ಅಲ್ಲಿದ್ದ ಯಾರಿಗೂ ಬರಲಿಲ್ಲ. ಅರ್ಧಗಂಟೆಯ ನಂತರ ಆಕೆ ತಾನಾಗಿಯೇ ಸಮಾಧಾನ ಪಟ್ಟುಕೊಳ್ಳುವ ಪ್ರಯತ್ನ ಮಾಡಿದಳು. ಆಕೆಯ ಕುಟುಂಬದ ಶವ ಸಂಸ್ಕಾರಕ್ಕೆ ಸಲೀಂ ಚಾಚಾ ಹಾಗೂ ವಿನಯಚಂದ್ರ ಕ್ರಮ ಕೈಗೊಳ್ಳು ಪ್ರಯತ್ನಿಸಿದರು. ಆಸ್ಪತ್ರೆಯ ಡಾಕ್ಟರುಗಳು ನೂರೆಂಟು ಬಗೆಯ ಪರೀಕ್ಷೆಗಳನ್ನು ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಂದು ಅವರ ಕೆಲಸ ಕಾರ್ಯಗಳನ್ನು ಮುಗಿಸಿ ಶವ ಸಂಸ್ಕಾರಕ್ಕೆ ಒಪ್ಪಿಗೆ ನೀಡುವ ವೇಳೆಗೆ ಒಂದೆರಡು ತಾಸುಗಳು ಮುಗಿದಿದ್ದವು. ಅಲ್ಲದೇ ಮಧುಮಿತಾಳನ್ನೂ ತನಿಖೆಯ ನೆಪದಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿದ್ದೂ ಆಯಿತು. ಆಸ್ಪತ್ರೆಯ ವಿದ್ಯುತ್ ಚಿತಾಗಾರದಲ್ಲಿ ಮಧುಮಿತಾಳ ಕುಟುಂಬದ ಶವಸಂಸ್ಕಾರ ಮಾಡಲಾಯಿತು. ವಿದ್ಯುತ್ ಚಿತೆಯಲ್ಲಿ ಮಧುಮಿತಾಳ ತಂದೆ, ತಾಯಿ, ತಮ್ಮ, ತಂಗಿ ಸುಟ್ಟು ಭಸ್ಮವಾಗುತ್ತಿದ್ದರೆ ಮಾತಿಲ್ಲದೇ ಬಿಕ್ಕುತ್ತ ಮಧುಮಿತಾ ವಿನಯಚಂದ್ರನ ಹೆಗಲಿಗೆ ಒರಗಿ, ಕಾಲಮೇಲೆ ಮಲಗಿ ಕಳೆದಳು.
          `ಮುಸ್ಲಿಂ ರಾಷ್ಟ್ರದಲ್ಲಿ ಹಿಂದುವಾಗಿ ಹುಟ್ಟುವುದೇ ತಪ್ಪಾ? ಹಿಂದುವೆನ್ನುವ ಕಾರಣಕ್ಕಾಗಿ ಅಪಾರ್ಟ್ ಮೆಂಟಿಗೆ ಬಾಂಬಿಡುತ್ತಾರೆ ಎಂದರೆ ಅವರಲ್ಲಿನ ಕ್ರೌರ್ಯ ಅದೆಷ್ಟಿರಬೇಕು. ಎಲ್ಲ ದೌರ್ಜನ್ಯಗಳನ್ನೂ ಸಹಿಸಿಕೊಂಡು ಬದುಕಿದರೂ ಅವಕಾಶ ಸಿಕ್ಕಾಗಲೆಲ್ಲ ಏಟು ತಿನ್ನತ್ತ ಬದುಕಿದರೂ ಸಾವು ತಪ್ಪಲಿಲ್ಲ. ಅಪ್ಪ ಎಷ್ಟು ಒಳ್ಳೆಯವರಾಗಿದ್ದರು. ಕನಸಿನಲ್ಲಿಯೂ ಕೂಡ ಇನ್ನೊಬ್ಬರಿಗೆ ಕೇಡು ಮಾಡಿರಲಿಲ್ಲ. ಅಂತವರೂ ಇಂತಹ ಕ್ರೌರ್ಯಕ್ಕೆ ಬಲಿಯಾದರಲ್ಲ.. ಅಮ್ಮನ ಪ್ರೀತಿ, ತಂಗಿಯ ಕೀಟಲೆ, ತಮ್ಮನ ಹುಸಿಮುನಿಸು ಇವೆಲ್ಲ ಒಂದೇ ಒಂದು ರಾತ್ರಿಯಲ್ಲಿ ಒಂದೇ ವಿದ್ಯುತ್ ಚಿತೆಯಲ್ಲಿ ಕ್ಷಣಾರ್ಧದಲ್ಲಿ ಮುಗಿದುಹೋಯಿತಲ್ಲ. ಇನ್ನೇನೂ ಉಳಿದಿಲ್ಲವಲ್ಲ.. ಏನೆಲ್ಲ ಕನಸು ಕಟ್ಟಿಕೊಂಡಿದ್ದೆವು. ಹೀಗೆ ಅವು ಕೊನೆಯಾಗುತ್ತವೆ ಎಂದುಕೊಂಡಿರಲಿಲ್ಲ...ಹಾಳಾದ ಮತಾಂಧರು. ಅವರಿಗೆ ನಮ್ಮ ಕುಟುಂಬವೇ ಬೇಕಾಗಿತ್ತಾ? ಇವರನ್ನು ಕೊಂದು ಏನು ಸಾಧನೆ ಮಾಡಿದರು?' ಮಧುಮಿತಾ ಹಳಹಳಿಸುತ್ತಲೇ ಇದ್ದಳು. ವಿನಯಚಂದ್ರ ಯೋಚನಾಲಹರಿಯಲ್ಲಿ ಮುಳುಗಿ ಹೋಗಿದ್ದ.
         ಭಾರತಕ್ಕೆ ಇವರನ್ನು ಕರೆದೊಯ್ಯಬೇಕು. ತಮ್ಮ ಮನೆಯ ಬಳಿಯಲ್ಲಿಯೇ ಎಲ್ಲಾದರೂ ಜಮೀನು ಕೊಡಿಸಿ ಉಳಿಸಬೇಕು. ನಮ್ಮಲ್ಲಿ ಒಬ್ಬರೆಂದು ಪ್ರೀತಿಯಿಂದ ಕಾಣಬೇಕು. ನಗು ನಗುತ್ತ ಬಾಳಬೇಕು. ಹೀಗೆ ಎಷ್ಟೊಂದು ಕನಸನ್ನು ಕಟ್ಟಿಕೊಂಡಿದ್ದೆವು. ಭಾರತಕ್ಕೆ ಕರೆತರಲು ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು. ಸೂರ್ಯನ್ ಕೂಡ ಯಾರ ಯಾರ ಬಳಿಯೋ ಮಾತನಾಡಿ ಮಧುಮಿತಾಳ ಕುಟುಂಬವನ್ನು ಭಾರತಕ್ಕೆ ಕರೆಸಿಕೊಳ್ಳುವ ಕೆಲಸದಲ್ಲಿ ತೊಡಗಿಕೊಂಡಿದ್ದ. ಆದರೆ ಇದ್ದಕ್ಕಿದ್ದಂತೆ ಇಂತದ್ದೊಂದು ತಿರುವು ಬರುತ್ತದೆ, ಕ್ಷಣಾರ್ಧದಲ್ಲಿ ಮಧುಮಿತಾಳನ್ನು ಹೊರತುಪಡಿಸಿ ಆಕೆಯ ಕುಟುಂಬ ಇನ್ನಿಲ್ಲವಾಗುತ್ತದೆ ಎನ್ನುವುದನ್ನು ನಂಬಲು ಅಸಾಧ್ಯವಾಗಿತ್ತು. ಯಾಕೋ ಈ ರಾತ್ರಿ ಅದೆಷ್ಟು ದೀರ್ಘವಾಗಿದೆಯಲ್ಲ. ಒಂದು ರಾತ್ರಿ ಅದೆಷ್ಟು ಅನುಭವಗಳನ್ನು ಕಟ್ಟಿಕೊಟ್ಟಿತಲ್ಲ ಭಗವಂತಾ.. ಎಂದುಕೊಂಡ ವಿನಯಚಂದ್ರ.
           ತನ್ನ ಜೀವನದಲ್ಲಿ ಇಂತಹ ಅದೆಷ್ಟು ಘಟನೆಗಳನ್ನು ಕಂಡಿದ್ದನೋ ಸಲೀಂ ಚಾಚಾ. ಆದರೆ ಈಗ ಅವನಲ್ಲಿಯೂ ಮಾತುಗಳಿರಲಿಲ್ಲ. ಮೌನವಾಗಿದ್ದ. ಕನ್ಣುಗಳು ಹನಿಗೂಡಿದ್ದು ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಮಧುಮಿತಾಳನ್ನು ಸಮಾಧಾನ ಮಾಡಲು ಯತ್ನಿಸುತ್ತಿದ್ದ. ಸಲೀಂ ಚಾಚಾ ಸಮಾಧಾನ ಮಾಡಿದಂತೆಲ್ಲ ಆಕೆಯ ನೋವು ಹೆಚ್ಚುತ್ತಿತ್ತು. ಅಷ್ಟರಲ್ಲಾಗಲೇ ಚಿತ್ತಗಾಂಗ್ ಬೆಟ್ಟಗಳ ಮೇಲೆ ಸೂರ್ಯ ಒಡಮೂಡಲು ಆರಂಭಿಸಿದ್ದ. ಢಾಕಾದ ಬಾನಿನಲ್ಲಿ ನಿಧಾನವಾಗಿ ಬೆಳಗಾಗುತ್ತಿತ್ತು. ಅರೇ ರಾತ್ರಿಯನ್ನು ನಿದ್ದೆಯಿಲ್ಲದೇ ಕಳೆದೆವಲ್ಲ. ಒಂದೇ ರಾತ್ರಿಯಲ್ಲಿ ಇಷ್ಟೆಲ್ಲ ಅಡ್ಡಿಗಳು ಆತಂಕಗಳು ಯಾರಿಗೂ ಬರಬಾರದು ಎಂದುಕೊಂಡ ಚಾಚಾ.
           ಅಷ್ಟರಲ್ಲಿ ವಿನಯಚಂದ್ರನ ಮೊಬೈಲ್ ರಿಂಗಣಿಸಿತು. ಅತ್ತಲಿಂದ ಸೂರ್ಯನ್ ಪೋನ್ ಮಾಡಿದ್ದ. ವಿನಯಚಂದ್ರ ನಡೆದ ಘಟನೆಯನ್ನೆಲ್ಲ ತಿಳಿಸಿದ. ಸೂರ್ಯನ್ ಕೂಡ ಆಘಾತದಿಂದ ಕೆಲ ಘಳಿಗೆ ಮಾತನಾಡಲೇ ಇಲ್ಲ. ಕೊನೆಗೆ ವಿನಯಚಂದ್ರನೇ ತಾನು ಕಬ್ಬಡ್ಡಿ ತಂಡದ ಜೊತೆಗೆ ಭಾರತಕ್ಕೆ ಮರಳುವುದಿಲ್ಲ ಎಂದೂ ಕೆಲ ದಿನ ಇಲ್ಲೇ ಇದ್ದು ಬರುತ್ತೇನೆ ಎಂದೂ ತಿಳಿಸಿದನಲ್ಲದೇ ಜಾಧವ್ ಅವರಿಗೆ ಮಾಹಿತಿ ನೀಡುವಂತೆ ತಿಳಿಸಿದ.
          ಪ್ರತಿಯಾಗಿ ಮಾತನಾಡಿದ ಸೂರ್ಯನ್ `ನಿನ್ನೆ ರಾತ್ರಿ ನೀನು ಯಾರಿಗೂ ಮಾಹಿತಿ ನೀಡದೇ ಬಂದ ಕಾರಣ ಎಲ್ಲರೂ ಆತಂಕದಲ್ಲಿದ್ದಾರೆ. ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಆರಂಭವಾಗಿರುವ ವಿಷಯ ಅವರಿಗೆ ತಿಳಿದಿದೆ. ಇಂತಹ ಸಮಯದಲ್ಲಿ ತಂಡವನ್ನು ಬಿಟ್ಟು ಹೋದ ಕಾರಣ ಸಿಟ್ಟಿನಲ್ಲಿದ್ದಾರೆ. ಎಲ್ಲಿದ್ದರೂ, ಹೇಗಿದ್ದರೂ ಹೊಟೆಲಿಗೆ ಮರಳುವಂತೆ ತಿಳಿಸುತ್ತಿದ್ದಾರೆ. ನಮಗೆ ವಿಷಯ ಗೊತ್ತಾದ ಕ್ಷಣದಿಂದ ನಿನಗೆ ಪೋನ್ ಮಾಡಲು ಪ್ರಯತ್ನಿಸಿದೆವು. ಆದರೆ ಪೋನನ್ನು ನೀನು ರಿಸೀವ್ ಮಾಡಲಿಲ್ಲ..' ಎಂದ. ವಿನಯಚಂದ್ರ ಮಾತಾಡಲಿಲ್ಲ.
           ಸೂರ್ಯನ್ ಬಳಿ ಅಷ್ಟರಲ್ಲಿ ಜಾಧವ್ ಅವರು ಬಂದರಿರಬೇಕು. ಪೋನನ್ನು ಕೈಗೆತ್ತಿಕೊಂಡವರೇ ಬೈಯಲು ಆರಂಭಿಸಿದರು. `ಭಾರತ ತಂಡದ ಆಟಗಾರನಾಗಿ ಬಂದ ನಿನಗೆ ಸ್ವಲ್ಪವೂ ಜವಾಬ್ದಾರಿ ಬೇಡವಾ..?  ಹೇಳದೇ ಕೇಳದೆ ಬಿಟ್ಟು ಹೋಗುವುದು ಎಂದರೆ ತಮಾಷೆ ಎಂದುಕೊಂಡಿದ್ದೀಯಾ ಹೇಗೆ? ನಿನಗೇನಾದರೂ ಹೆಚ್ಚೂ ಕಡಿಮೆ ಆದರೆ ಏನು ಮಾಡಬೇಕು? ನನ್ನ ಮೇಲೆ ಜವಾಬ್ದಾರಿಯಿಂದ ಕಳಿಸಿದ್ದಾರೆ. ಭಾರತಕ್ಕೆ ಏನು ಉತ್ತರ ಕೊಡಬೇಕು? ನಿನ್ನ ಬೇಜವಾಬ್ದಾರಿಯಿಂದ ನಾವು ಸಮಸ್ಯೆಗೆ ಕಾರಣವಾಗಬೇಕಾಗುತ್ತದೆ. ವಿದೇಶಗಳಲ್ಲಿ ಹೇಳದೆ ಕೇಳದೆ ಹೋಗುವುದು ತಮಾಷೆ ಎಂದುಕೊಂಡಿದ್ದೀಯಾ? ಇನ್ನೆರಡು ತಾಸುಗಳಲ್ಲಿ ನಾವು ವಿಮಾನದ ಮೂಲಕ ಭಾರತಕ್ಕೆ ಮರಳಬೇಕು. ನೀನು ಅಷ್ಟರೊಳಗೆ ಹೊಟೆಲಿಗೆ ಅಥವಾ ವಿಮಾನ ನಿಲ್ದಾಣಕ್ಕೆ ಬರುವುದಾದರೂ ಹೇಗೆ..?' ಎಂದು ಸಿಟ್ಟಿನಿಂದ ಹೇಳುತ್ತಲೇ ಇದ್ದರು.
                 ಅವರು ಬಯ್ಯುತ್ತಿದ್ದುದನ್ನು ಸಂಪೂರ್ಣವಾಗಿ ಸುಮ್ಮನೆ ಕುಳಿತು ಕೇಳಿದ ವಿನಯಚಂದ್ರ ನಂತರ ನಡೆದ ಘಟನೆಯನ್ನೆಲ್ಲ ಹೇಳಿದ. ವಿನಯಚಂದ್ರ ಹೇಳಿದ ಮಾತನ್ನು ಕೇಳಿದ ನಂತರ ಜಾಧವ್ ಅವರು ಕೊಂಚ ಮೆತ್ತಗಾದಂತೆ ಕಂಡರು. ಮಾತಿನಲ್ಲಿದ್ದ ಸಿಟ್ಟು ಇಳಿದಿತ್ತು. ಕೊನೆಗೆ ವಿನಯಚಂದ್ರ ತಾನು ತಂಡದ ಜೊತೆಗೆ ಭಾರತಕ್ಕೆ ಮರಳಲು ಆಗುತ್ತಿಲ್ಲ. ಕೆಲ ದಿನ ಬಾಂಗ್ಲದಲ್ಲಿಯೇ ಇದ್ದು ವಾಪಾಸಾಗುತ್ತೇನೆ ಎಂಬುದನ್ನು ತಿಳಿಸಿದ. ಜಾಧವ್ ಅವರು ಒಪ್ಪಲಿಲ್ಲ. ವಿನಯಚಂದ್ರ ಅವರಿಗೆ ಸಾಕಷ್ಟು ತಿಳಿ ಹೇಳಲು ಯತ್ನಿಸಿ ವಿಫಲನಾದ. ಕೊನೆಗೊಮ್ಮೆ ಪೋನ್ ಕಟ್ ಮಾಡಿದ.

**

           ಪೋನಿಟ್ಟ ತಕ್ಷಣ ವಿನಯಚಂದ್ರನಿಗೆ ಮತ್ತೊಂದು ಆತಂಕ ಎದುರಾಯಿತು. ಮೊದಲಾದರೆ ಮಧುಮಿತಾಳ ಅಪಾರ್ಟ್ ಮೆಂಟಿತ್ತು ಉಳಿದಕೊಳ್ಳಲು. ಆದರೆ ಈಗ ಏನಿದೆ? ಉಳಿದುಕೊಳ್ಳುವುದೆಲ್ಲಿ? ಸಲೀಂ ಚಾಚಾನ ಬಳಿ ಚರ್ಚೆ ಮಾಡಬೇಕೆಂದುಕೊಂಡ. ಸಲೀಂ ಚಾಚಾನ ಬಳಿ ವಿಷಯವನ್ನು ತಿಳಿಸಿ `ಯಾವುದಾದರೂ ಉತ್ತಮ ಹೊಟೆಲ್ ಇದ್ರೆ ತಿಳಿಸು..ನಾವು ಉಳಿದಕೊಳ್ಳಬೇಕು. ನಾನು ಮಧುಮಿತಾಳನ್ನು ಭಾರತಕ್ಕೆ ಕರೆದುಕೊಂಡು ಹೋಗಲೇಬೇಕು ಎಂದುಕೊಂಡಿದ್ದೇನೆ. ಅವಳನ್ನು ಭಾರತಕ್ಕೆ ಕರೆದುಕೊಂಡು ಹೋಗಲು ವ್ಯವಸ್ಥೆಯಾಗುವ ವರೆಗೆ ನಾವು ಎಲ್ಲಾದರೂ ಉಳಿದುಕೊಳ್ಳಲೇಬೇಕು' ಎಂದ.
                  ಅದಕ್ಕೆ ಪ್ರತಿಯಾಗಿ ಸಲೀಂ ಚಾಚಾ `ಹೊಟೆಲ್ಲಾ? ಅದ್ಯಾಕೆ..? ನಮ್ಮ ಮನೆಯೇ ಇದೆ.. ಬನ್ನಿ ಬನ್ನಿ..ನನ್ನ ಆತ್ಮೀಯರು ನೀವು. ಮಧುಮಿತಾ ನನ್ನ ಮಗಳ ಸಮಾನ. ಅಂತವಳು ಇದೀಗ ದುಃಖದಲ್ಲಿದ್ದಾಳೆ. ನಾನು ಎಲ್ಲೋ ಉಳಿಯಲು ಹೇಳಬೇಕೆ. ನನ್ನ ಮನೆಗೆ ಬನ್ನಿ' ಎಂದ. ಯಾಕೋ ಮುಜುಗರವಾದಂತಾಯಿತು ವಿನಯಚಂದ್ರನಿಗೆ. ಮಧುಮಿತಾಳಿಗೆ ಸಲೀಂ ಚಾಚಾನ ಕುಟುಂಬ ಪರಿಚಯವಿತ್ತಾದ್ದರಿಂದ ಆಕೆ ಸಲೀಂ ಚಾಚಾನ ಮನೆಗೆ ಹೋಗುವುದೇ ಒಳ್ಳೆಯದು ಹಾಗೂ ಅರಾಜಕತೆ ಮೆರೆಯತೊಡಗಿರುವ ಬಾಂಗ್ಲಾದೇಶದಲ್ಲಿ ಸಲೀಂ ಚಾಚಾನ ಮನೆಯಲ್ಲಿ ಉಳಿದುಕೊಳ್ಳುವುದೇ ಸುರಕ್ಷಿತ ಎಂದೂ ತಿಳಿಸಿದಾಗ ವಿನಯಚಂದ್ರ ಬೇರೆ ಸಾಧ್ಯತೆಗಳಿಲ್ಲದಂತಾಗಿ ಒಪ್ಪಿಕೊಂಡುಬಿಟ್ಟ.
           ನಿಧಾನವಾಗಿ ಚಿತಾಗಾರದಿಂದ ಹೊರಬೀಳುವ ವೇಳೆಗೆ ಸೂರ್ಯ ತನ್ನ ತೀಕ್ಷ್ಣ ಪ್ರಭೆಯನ್ನು ಬೀರಿ ಬಾನಿನಲ್ಲಿ ಏರಿ ಬರುತ್ತಿದ್ದ. ಅದ್ಯಾವುದೋ ಹೊಟೆಲಿನಲ್ಲಿ ತಿಂಡಿಯನ್ನು ತಿನ್ನುವ ಶಾಸ್ತ್ರ ಮಾಡಿದರಾದರೂ ಯಾರಿಗೂ ತಿಂಡಿ ಹೊಟ್ಟೆಗೆ ಇಳಿಯಲಿಲ್ಲ. ಒಂದೇ ಒಂದು ರಾತ್ರಿ ಕಟ್ಟಿಕೊಟ್ಟ ಅನುಭವಗಳು ಜನ್ಮಕ್ಕಾಗುವಷ್ಟಿದ್ದವು. ಸಲೀಂ ಚಾಚಾನ ಬಳಿ ವಿನಯಚಂದ್ರ ಇದೇ ಮಾತನ್ನು ಹೇಳಿದಾಗ `ಕಷ್ಟ ಬಂತು ಅಂತ ಬೇಸರ ಮಾಡ್ಕೋಬಾರ್ದು ಬೇಟಾ. ಕಷ್ಟಗಳನ್ನು ಗುದ್ದುವ ಶಕ್ತಿಯನ್ನು ಇಟ್ಟುಕೊಂಡಿರಬೇಕು. ಕಷ್ಟಗಳು ಕಟ್ಟಿಕೊಡುವ ಅನುಭವ ಇದೆಯಲ್ಲ.. ಅವು ಬದುಕನ್ನು ನಡೆಸುವ ದಾರಿಯನ್ನು ತಿಳಿಸುತ್ತವೆ. ಕಷ್ಟ ಬಂದಾಗ ಎದೆಗುಂದಬಾರದು. ಕಷ್ಟ ಬಂದ ನಂತರ ಸುಖ ಬಂದೇ ಬರುತ್ತದೆ ಬೇಟಾ. ಅದಕ್ಕೆ ಕಾಯುವ ತಾಳ್ಮೆ, ಸಹನೆ ಬೇಕು. ಯಾರಿಗ್ಗೊತ್ತು ನಿಮ್ಮ ಬದುಕಿನಲ್ಲಿ ಮುಂದೆ ಕಷ್ಟದ ಸುಳಿವೇ ಇಲ್ಲದಿರಬಹುದು. ಬದುಕು ಹೇಗೆ ಬರುತ್ತದೆಯೋ ಹಾಗೆ ನಡೆದುಕೊಂಡು ಹೋಗಬೇಕು ಬೇಟಾ.. ನಡಿ .. ನಮ್ಮ ಮನೆಗೆ ಹೋಗೋಣ.. ಅಲ್ಲಿ ಉಳಿದ ನಂತರ ನೀವು ಭಾರತಕ್ಕೆ ಹೊರಡುವ ಬಗ್ಗೆ ಚಿಂತಿಸಿದರಾಯ್ತು.. ಚಲ್..' ಎಂದು ಹೊರಟರು. ಸಲೀಂ ಚಾಚಾನ ಮಾತುಗಳು ಬಹಳ ಆಪ್ತವೆನ್ನಿಸುತ್ತವೆ. ಆತನ ಜೊತೆಗೆ ಮಾತನಾಡುತ್ತಲೇ ಇರಬೇಕು ಎನ್ನುಸುತ್ತವೆ ಎಂದುಕೊಂಡ ವಿನಯಚಂದ್ರ.
             ರಾತ್ರಿಗಿಂತ ಹಗಲು ಆಪ್ತವಾಗಿದ್ದರೂ ಢಾಕಾದ ಬೀದಿಗಳು ಹಿಂಸಾಚಾರದಿಂದ ಉರಿಯುತ್ತಿರುವುದು ಸ್ಪಷ್ಟವಾಗಿತ್ತು. ರಾತ್ರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಿಂಸಾಚಾರ ನಡೆದಂತೆ ಭಾಸವಾಗುತ್ತಿತ್ತು. ರಾತ್ರಿಯ ಕತ್ತಲಿನಲ್ಲಿ ಹಿಂಸಾಚಾರದ ಭೀಕರತೆ ಕಾಣಿಸುತ್ತಿರಲಿಲ್ಲ. ಆದರೆ ಹಗಲಿನ ಬೆಳಕಿನಲ್ಲಿ ಹಿಂಸಾಚಾರದ ಚಿತ್ರಣ ಸ್ಪಷ್ಟವಾಗಿ ರಾಚುತ್ತಿತ್ತು. ಎಲ್ಲೋ ಒಡೆದ ಗಾಜುಗಳು, ಎಲ್ಲೆಂದರಲ್ಲಿ ಬಿದ್ದುಕೊಂಡಿದ್ದ ಇಟ್ಟಂಗಿಗಳ ತುಂಡು, ಕಲ್ಲುಗಳು, ಹಿಂಸಾಚಾರದಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದವರು ಬಿಟ್ಟು ಹೋಗಿದ್ದ ಚಪ್ಪಲಿಗಳು ಅಡ್ಡಾದಿಡ್ಡಿಯಾಗಿ ಬಿದ್ದುಕೊಂಡಿದ್ದವು. ಅದ್ಯಾವುದೋ ಸರ್ಕಲ್ಲಿನಲ್ಲಿ ಟೈರಿಗೆ ಹಚ್ಚಿದ್ದ ಬೆಂಕಿ, ಕೆಟ್ಟ ವಾಸನೆಯೊಂದಿಗೆ ಹೊಗೆ ಕಾರುತ್ತಿತ್ತು.
                   ಹಗಲು ಪೊಲೀಸ್ ಪಹರೆ ಬಿಗಿಯಾಗಿತ್ತು. ಮಾರು ಮಾರು ದೂರಕ್ಕೆ ಪೊಲೀಸರಿದ್ದರು. ಪ್ರತಿಯೊಬ್ಬರೂ ಸೈಕಲ್ ರಿಕ್ಷಾ ತಪಾಸಣೆ ಮಾಡಿ ಮುಂದಕ್ಕೆ ಬಿಡುತ್ತಿದ್ದರು. ಸಲೀಂ ಚಾಚಾ ಅದ್ಹೇಗೋ ಸಾಗಿ ಒಳ ರಸ್ತೆಗಳ ಮೂಲಕ ತನ್ನ ಮನೆಯ ಎದುರು ಬಂದು ನಿಲ್ಲುವ ವೇಳೆಗೆ ಗಂಟೆ 11ನ್ನೂ ಮೀರಿತ್ತು. ಮನೆಯೋಳಗಿದ್ದ ಸಲೀಂ ಚಾಚಾನ ಮಡದಿ, ಒಂದಿಬ್ಬರು ಮೊಮ್ಮಕ್ಕಳು ಬಾಗಿಲಿಂದ ಇಣುಕಿದರು.  ಮಧುಮಿತಾಳ ಪರಿಚಿತ ಮುಖ ನೋಡಿ ಸಂತಸ ಪಟ್ಟರೆ ವಿನಯಚಂದ್ರನ ಅಪರಿಚಿತ ಮುಖ ನೋಡಿ ಕುತೂಹಲಗೊಂಡರು. ಸೈಕಲ್ ಇಳಿಯುತ್ತಿದ್ದ ಸಲೀಂ ಚಾಚಾನನ್ನು ಮಕ್ಕಳು ಸುತ್ತುವರಿದಿದ್ದರೆ ಗುಟುಕನ್ನು ತಂದ ತಾಯಿ ಹಕ್ಕಿಯನ್ನು ಮರಿಗಳು ಸುತ್ತುವರಿದ ದೃಶ್ಯದಂತೆ ಭಾಸವಾಗುತ್ತಿತ್ತು.
         `ಚಲ್ ಬೇಟಾ.. ಒಳಕ್ಕೆ ನಡೀರಿ..' ಎಂದು ಸಲೀಂಚಾಚಾ ಹೇಳಿದರು. ಬಸವಳಿದಿದ್ದ ಮಧುಮಿತಾ, ವಿನಯಚಂದ್ರ ನಿಧಾನವಾಗಿ ಸಲೀಂಚಾಚಾನ ಮನೆಯೊಳಕ್ಕೆ ನಡೆದರು. ಇವರ ಬಾಳಿನಲ್ಲಿ ಇನ್ನೊಂದು ಬದಲಾವಣೆ, ಮತ್ತೊಂದು ಅಧ್ಯಾಯ ನಿಧಾನವಾಗಿ ತೆರೆದುಕೊಳ್ಳುತ್ತಿತ್ತು. ಹೊಸದೊಂದು ಕನಸಿಗೆ ಮುನ್ನುಡಿಯಾಗುತ್ತಿತ್ತು.

(ಮುಂದುವರಿಯುತ್ತದೆ.)

No comments:

Post a Comment