Friday, August 30, 2013

ಕಾರಣವಿಲ್ಲದ ಒಂದು ಕಥೆ..

ನಿಜಕ್ಕೂ ಇದೊಂದು ವಿಶಿಷ್ಟ ಕಥೆ.
ನಮ್ಮ ಹವ್ಯಕ ಹುಡುಗ-ಹುಡುಗಿಯ ನಡುವೆ ನಡೆದ ಕಥೆ. ನಿಮ್ಮನ್ನು ಇದು ಚಿಂತನೆಗೆ ಹಚ್ಚಬಹುದೆಂಬ ನಂಬಿಕೆ ನನ್ನದು.
ಕಥೆ ಓದಿ. ನಿಮಗೆ ಏನು ಅನಿಸಿತು ಅಂತ ಬರೆಯಿರಿ.
--------------------

 ಅದು ನಮ್ಮದೆ ಹವ್ಯಕರ ಪಟ್ಟಣ. ತೀರಾ ಚಿಕ್ಕದಲ್ಲ. ದೋಡ್ಡದೂ ಅಲ್ಲ. ಅದಕ್ಕೊಂದು ಕಾಲೇಜು. ಡಿಗ್ರಿಯದು. ಅದರಲ್ಲಿ ನಮ್ಮ ನೂರಾರು ಹವಿ ಹುಡುಗ ಹುಡುಗಿಯರು. ಏನೋ ಸಾಧಿಸಬೇಕು ಎಂಬ ಕನಸು ಹೊತ್ತವರು.
ಆತ ಆ ಕಾಲೇಜಿನ ಹುಡುಗನೇ. ಕೆಲವು ವಿಶಿಷ್ಟ ಅಂಶಗಳನ್ನು ಹೊಂದಿರುವ ಹುಡುಗ. ಉತ್ಸಾಹದ ಬುಗ್ಗೆ. ಆತನಲ್ಲೂ ನೂರಾರು ಕನಸು. ಇನ್ನೂ ಬಹು ವರ್ಷ ಉರಿಯ ಬೇಕಾದ ದೀಪ ಆತ.
ಆತನ ಮನಸ್ಸನ್ನು ಕದ್ದಿದ್ದು ಅದೇ ಕಾಲೇಜಿನ ಓರ್ವ ಬಿಳಿ ಹುಡುಗಿ. ಪಕ್ಕಾ ಹವ್ಯಕರವಳು. ನೋಡೋಕೆ ಚೆನ್ನಾಗೂ ಇದ್ದಳು. ಕಾಡಿ ಬೇಡಿ ಪ್ರೇಮಿಸಿದ. ಒಲಿಸಿಕೊಂಡ. ಅದಾದ ಬಹು ತಿಂಗಳು ಆ ಪಟ್ಟಣದ ತುಂಬೆಲ್ಲ ಅವರೆ ಅವರು. ಎಲ್ಲರ ಬಾಯಿಯಲ್ಲಿಯೂ ದೊಡ್ಡ ಸದ್ದಾಗದ ಸುದ್ದಿ.

ಹೀಗಿರಲು ಆತನಿಗೆ ದೂರದೂರಿನಲ್ಲಿ ಉದ್ಯೋಗ ಸಿಕ್ಕಿತು. ಆಕೆಯೂ ಅಷ್ಟೆ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರೆಂಬ ಮಾಯಾ ನಗರಿಗೆ ಬಂದಳು. ಇಲ್ಲೂ ಅವರ ಪ್ರೀತಿ ಮುಂದುವರಿಯಿತು. ಆದರೆ ಬೆಂಗಳೂರು ಎಂಥವರನ್ನೂ ಎಂಥ ಸನ್ನಿವೇಶವನ್ನೂ ಬದಲಿಸುವ ತಾಕತ್ತು ಉಳ್ಳ ನಗರಿ. ಆ ಹುಡುಗ ಈ ನಗರಿಗೆ ಬಂದ ಮೇಲೆ ತನ್ನ ಉದ್ಯೋಗದಲ್ಲಿ ಬ್ಯೂಸಿ ಆದ. ಆಕೆಯೂ ತನ್ನ ಓದಿನಲ್ಲಿ ತಡಗಿಕೊಂಡಳು.
ಆದರೆ ಈ ಬ್ಯೂಸಿ ಬದುಕು ಅವರ ಪ್ರೀತಿಗೇನೂ ತೊಂದರೆ ಮಾಡಲಿಲ್ಲ. ಪ್ರತಿ ದಿನದಲ್ಲಿ ಪುರಸೊತ್ತು ಇಲ್ಲದಿದ್ದರೂ ಮೊಬೈಲು ಅವರನ್ನು ಬೆಸೆದಿತ್ತು. ಪ್ರತಿ ಶನಿವಾರ- ಭಾನುವಾರದ ವೀಕೆಂಡ್ಗಳು ಈ ಪ್ರೇಮಿಗಳ ಪಾಲಿಗೆ ಜೊತೆಗೂಡುವ ದಿನಗಳಾಗಿತ್ತು. ಆ ದಿನಗಳಂದು ಅವರ ಪಾಲಿಗೆ ಪಾಕರ್ುಗಳು ಕರೆಯುತ್ತಿದ್ದವು, ಸಿನಿಮಾ ಥಿಯೇಟರ್ಗಳು ಕೈ ಬೀಸುತ್ತಿದ್ದವು.
ಈ ದಿನಗಳಲ್ಲಿ ಅವರು ಪಕ್ಕಾ ಪ್ರೇಮಿಗಳಾಗುತ್ತಿದ್ದರು. ಇಷ್ಟರ ಜೊತೆಗೆ ಅವರು ಹಬ್ಬ ಹರಿದಿನಗಳಂದು ಮನೆಗೆ ಹೋಗುವಾಗ ಜೊತೆಗೆ ಹೋಗುತ್ತಿದ್ದರು. ಜೊತೆಗೆ ಬರುತ್ತಿದ್ದರು. ಅಷ್ಟು ಅನ್ಯೋನ್ಯತೆ ಅವರದ್ದು. ಆ ಹುಡುಗನಿಗಂತೂ ಅವಳೇ ಜೀವ, ಜೀವಾಳ. ಅವಳಿಗೂ ಅಷ್ಟೆ, ಇವನೇ ಎಲ್ಲ.

ಇಂತಹ ಸುಂದರ ಪ್ರೀತಿಗೆ ಅದ್ಯಾರ ದೃಷ್ಟಿ ಬಿತ್ತೋ. ಇದ್ದಕ್ಕಿದ್ದಂತೆ ಇವರ ಪ್ರೇಮದಲ್ಲಿ ಒಂದು ದೊಡ್ಡ ಟ್ವಿಸ್ಟ್ ಬಂದಿತು. ಆಕೆಯ ಪಾಲಿಗೆ `ಯೂ ಟರ್ನ್' ಅದು. ಆಕೆ ಉನ್ನತ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನಲ್ಲೇ ಅವನಿದ್ದ ರಾಹುಲ್ ದ್ರಾವಿಡ್ನಂತಹ ಆಟಗಾರ ಸಚಿನ್. ಉತ್ತರ ಭಾರತೀಯ. ಎಲ್ಲ ಉತ್ತರ ಭಾರತೀಯರಂತೆ ಬಿಳಿ ಚ್ವಾರೆ. ಅಷ್ಟೇ ಬಡಕಲು. ಉದ್ದುದ್ದ ಕಡ್ಡಿ ಕಡ್ಡಿ ಕೂದಲು. ಮೈತುಂಬಾ ಸ್ಟೈಲೋ ಸ್ಟೈಲು. ಅವನಿಗೆ ನಮ್ಮ ಕಥಾ ನಾಯಕಿ ಅದ್ಯಾವ ಮೋಡಿ ಮಾಡಿದಳೋ. ಅವನಿಗೆ ಈಕೆ ಅದ್ಹೇಗೆ ಚೆಂದ ಕಂಡಳೋ... ಪ್ರಪೋಸ್ ಮಾಡಿಯೇ ಬಿಟ್ಟ.
ಈ ಪ್ರೇಮ ಮಯಿ ಅದನ್ನು ಒಪ್ಪುತ್ತಾಳಾ..? ಊಹು.. ಈಕೆಯ ಪಾಲಿಗೆ ನಮ್ಮ ಕಥಾ ನಾಯಕನೇ ಎಲ್ಲ. ಅದಕ್ಕೆ ಆ ಆಟಗಾರನ ಪ್ರಪೋಸಲ್ಲನ್ನು ತಿರಸ್ಕರಿಸಿದಳು. ಅವ ಬಿಡುವನೆ? ಇಂತಹ ಎಷ್ಟು ಹುಡುಗಿಯರನ್ನು, ಬೌಲರ್ಗಳನ್ನು ನೋಡಿದವನೋ ಅವ.. ಛಲದ ಅಂಕ ಮಲ್ಲ.
ನಮ್ಮ ನಾಯಕಿಯನ್ನು ಮತ್ತೆ ಮತ್ತೆ ಕಾಡಿದ. ಎಡಬಿಡದೇ ಕಾಡಿದ. ಈಕೆಯೂ ಅಹಲ್ಯೆಯಂತೇ ಕಲ್ಲು ಬಂಡೆ. ಆತನ ಪ್ರಪೋಸಲ್ಲಿಗೆ ಈಕೆಯದು ಒಂದೆ ಮಾತು `ನೋ ನೋ ನೋ'...
ಅವ ಬಿಡಲಿಲ್ಲ. ಈಕೆ ಒಪ್ಪಲಿಲ್ಲ.

ನಮ್ಮ ನಾಯಕಿಯೂ ಮನುಷ್ಯಳೇ ತಾನೆ. ಎಷ್ಟು ದಿನ ಅಂತ ತನ್ನ ಮನಸ್ಸನ್ನು ಒಂದೆಡೆಗೆ ಗಟ್ಟಿಯಾಗಿ ಹಿಡಿದಿಡಬಲ್ಲಳು? ಈ ನಡುವೆ ನಮ್ಮ ನಾಯಕನಿಗೆ ಪುರಸೊತ್ತಿಲ್ಲದ ಕೆಲಸ. ಪಾಪ ಹಲವು ದಿನಗಳಾದರೂ ಆತನ ಬಳಿ ಈಕೆಯನ್ನು ಭೇಟಿ ಮಾಡಲು ಸಾಧ್ಯವಾಗಲೇ ಇಲ್ಲ.
ಇತ್ತ ಬೆಣ್ಣೆ ನಿಧಾನವಾಗಿ ಕರಗುತ್ತಿತ್ತು. ನಮ್ಮ ಕಥಾ ನಾಯಕಿಗೆ ಬೇಡ ಬೇಡವೆಂದರೂ ಮನಸ್ಸು ಆ ಸಚಿನ್ನನೆಡೆಗೆ ಸೆಳೆಯುತ್ತಿತ್ತು. ಏಕೆ ಗೊತ್ತಿಲ್ಲ ಅವಳಿಗೆ ಆತ ಪದೆ ಪದೆ ಕಾಡುತ್ತಿದ್ದ. ಮತ್ತೆ ಮತ್ತೆ ನೆನಪಾಗುತ್ತಿದ್ದ. ಆತ ಅವಳಿಗೆ ನೆನಪಾದಾಗಲೆಲ್ಲ ನಮ್ಮ ಕಥಾ ನಾಯಕ ಮರೆತು ಹೋಗುತ್ತಿದ್ದ. ಇದು ಅವಳ ತಪ್ಪಲ್ಲ ಬಿಡಿ.. ಆತನೂ ಎಡಬಿಡದೇ ಕಾಡಿದರೆ ಆಕೆ ಇನ್ನೇನು ಮಾಡ್ತಾಳೆ ಹೇಳಿ?
ಕೊನೆಗೊಂದು ದಿನ ಆಕೆ ಸಚಿನ್ನನ ಪ್ರೀತಿಗೆ ಓಕೆ ಎಂದಳು. ಆತನ ಇಷ್ಟು ದಿನದ ಡಿಫೆನ್ಸ್ ಆಟಕ್ಕೂ ಸಾರ್ಥಕತೆ ಸಿಕ್ಕಿತ್ತು.
ಇದರ ನಂತರ ನಡೆದದ್ದು ಮತ್ತೂ ಕೆಟ್ಟ ಕಥೆ.
ನಮ್ಮ ನಾಯಕಿ ಮತ್ತೊಬ್ಬನ ಪ್ರೀತಿಗೆ `ಎಸ್' ಎಂದ ವಿಷ್ಯ ತಿಳಿದ ನಾಯಕ ಬಹಳ ಬೇಸರ ಮಾಡಿಕೊಂಡ. ನಂಬಲು ಆತನಿಗೆ ಕಷ್ಟವಾಯಿತು. ಯಾಕೆ ಹೀಗೆ, ಇದು ಹೌದಾ ಅಂತ ನಾಯಕಿಯನ್ನು ಕೇಳಿದ. ಆಕೆ ಇಲ್ಲ ಅನ್ನುತ್ತಾಳೇನೋ ಅಂದುಕೊಂಡಿದ್ದ. ಆದರೆ ಆಕೆ ಹೌದು ಎಂದಳು. ಇದು ಆತನಿಗೆ ಅತ್ಯಂತ ಆಘಾತ ಉಂಟುಮಾಡಿತು.

ಅವನಿಗೆ ಒಮ್ಮೆ ರವಿ ಬೆಳಗೆರೆಯ `ಹೇಳಿ ಹೋಗು ಕಾರಣ'ದ ಪ್ರಾರ್ಥನಾ ನೆನಪಾದಳು. ಈತನೂ ಕಾರಣ ಕೇಳಿದ. ಆದರೆ ಆಕೆ ಉತ್ತರ ನೀಡಲಿಲ್ಲ. ನೆಗ್ಲೆಕ್ಟ್ ಮಾಡಿದಳು. ಈತನಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ನಮ್ಮ ನಾಯಕನನ್ನು ಕೊನೆಗೊಮ್ಮೆ ಬಿಟ್ಟೇ ಬಿಟ್ಟಳು.
ಈಗ ಬೆಂಗಳೂರಿನಲ್ಲಿ ಆಕೆ ಆ ಆಟಗಾರನೊಂದಿಗೆ ಕಳೆಯುತ್ತಿದ್ದಾಳೆ. ಪಾಪ ನಮ್ಮ ನಾಯಕ ಬಹಳ ಬೇಸರದಲ್ಲಿದ್ದಾನೆ. ತೀರಾ ಇತ್ತೀಚೆಗೆ ನಮ್ಮ ನಾಯಕ ನನ್ನ ಬಳಿ ಬಂದು ಈ ಕಥೆಯನ್ನು ಹೇಳಿಕೊಂಡ. ಆ ನಂತರ ನನ್ನಲ್ಲ ಕೆಲವು ಪ್ರಶ್ನೆಗಳು ಮೂಡಿದವು.
ಆಕೆ ಯಾಕೆ ಹೀಗೆ ಮಾಡಿದಳು? ಆಕೆ ಮಾಡಿದ್ದು ಸರಿಯಾ?
ನೋಡಲು ಚೆನ್ನಾಗಿದ್ದ, ಸಖತ್ ಶ್ರೀಮಂತನೂ ಆಗಿದ್ದ ಆತನನ್ನು ಯಾಕೆ ಬಿಟ್ಟು ಬಿಟ್ಟಳು?
ನಮ್ಮ ಹುಡುಗೀರು ಯಾಕೆ ಹೀಗೆ ನಂಬಿದವರಿಗೆ ಕೈ ಕೊಡ್ತಾರೆ?
ಬೆಂಗಳೂರು ಎಂತವರನ್ನೂ ಹಾಳು ಮಾಡುತ್ತದಾ?
ಈ ಕಥೆಯ ಬಗ್ಗೆ ನಿಮಗೆ ಅನಿಸೋದು ಏನು?

Wednesday, August 28, 2013

ಇದು ನನ್ನದು



ಇದು ನನ್ನದು ಇದು ನನ್ನದು
ಈ ಲೋಕವೆ ನನ್ನದು
ಈ ಲೋಕವು ಹೊಂದಿರುವ
ಅಧಿಕಾರವು ನನ್ನದು..!


ಈ ಲೋಕದ ಸೊಬಗೆಲ್ಲವು
ನನ್ನದೇ ಕಲ್ಪನೆ,
ಈ ಕಲ್ಪನೆ ಕೂಡಿರಲು
ಆಗಿರುವುದು ರಚನೆ..!!


ದಿನ ಹುಟ್ಟುವ ಸೂರ್ಯನು
ನನ್ನದೇ ಕಣ್ಗಳು
ದಿನ ಮೂಡುವ ಚಂದ್ರನು
ನನ್ನನೇ ನೆನೆವನು..!!


ಜಗ ಗೆಲ್ಲಲಿ ಜಗ ಸೋಲಲಿ
ಜಯವೆಂದೂ ನನ್ನದೆ
ಇದರಿಂದ ದೊರಕುವ
ನಗುವೆಲ್ಲವೂ ನನ್ನದೆ..!!


ಯಾರಿರಲಿ ಇಲ್ಲದಿರಲಿ
ನಾ ಮೆರೆವೆ ಎಂದಿಗೂ
ಈ ಭಾವನೆ ಲೋಕದಿಂದ
ಹೊರಹೋಗದು ಎಂದಿಗೂ ..!!


ಬರೆದಿದ್ದು : 14-03-2004ರಂದು
ಇದು ನಾನು ಮೊಟ್ಟಮೊದಲು ಬರೆದ ಕವಿತೆ. 9 ವರ್ಷಗಳ ಹಿಂದೆ.. ಇದನ್ನು ನಂತರ ಓದುಗರ ವೇದಿಕೆ ಉಂಚಳ್ಳಿಯ ಯುವ ಕವಿಗೋಷ್ಟಿಯಲ್ಲಿ ಓದಿದ್ದೇನೆ. ನನ್ನ ಮೊದಲ ಕವಿತೆ ನಿಮ್ಮ ಮುಂದೆ ..

Saturday, August 24, 2013

ನೀನಾಗು


 ಮನದೊಳು ನಿನ್ನೆಯ ನೆನಪದು ಮೂಡಿದೆ
 ನೆನಪಾಗು ನೀ ನೆನಪಾಗು..!

 ನನ್ನೆಯ ಮೌನಕೆ ಮಾತಾಗು ನೀ
 ನನ್ನೆಯ ಕನಸಿಗೆ ನನಸಾಗು,
 ಪ್ರೀತಿಯ ಕವಿತೆಯ ಸಾಲಾಗು ನೀ
 ಗೆಲುವಿನ ಹಾದಿಗೆ ಮೊದಲಾಗು..!!

 ನೆನಪಲಿ ನೂರು ಸ್ಫೂರ್ತಿಯ ತುಂಬಿದೆ
 ನಲಿವಿಗೆ ಚೇತನ ನೀನಾಗು,
 ಮನದೊಳು ಹಸಿರಿನ ಚಿಗುರದು ಮೂಡಿದೆ
 ಜೀವ ಜಲಧಿಯೆ ನೀನಾಗು..!!

 ಕವಿದಿಹ ಮೋಡದ ಬಾನಿನ ಮಧ್ಯದಿ
 ಸೆಲೆಯುವ ಚಿನ್ನದ ಮಿಂಚಾಗು,
 ಏನೆ ಬರಲಿ ಹೊತ್ತು ಮುಳುಗಲಿ
 ಬಾಳಿಗೆ ನೀನು ಜೊತೆಯಾಗು..!!

Sunday, August 18, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 7

ಏಳನೇ ಭಾಗ..


ಗುಡಲೂರಿನಲ್ಲಿ ಮಲಗುವ ಮುನ್ನ ಮನಸ್ಸಿನಲ್ಲಿದ್ದುದು ವಯನಾಡಿನ ಟೀ ತೋಟಗಳು..
ಕುತೂಹಲ ಬೀರುವ ಗುಡ್ಡ ಬೆಟ್ಟಗಳು..
ಟಿ.ವಿ ಇರುವ ರೂಮು ಬೇಕೆಂಬ ಬೇಡಿಕೆಗೆ ಒಪ್ಪಿಗೆ ಸಿಕ್ಕಿತ್ತಲ್ಲ.. ಅದ್ಯಾವುದೋ ಚಾನಲ್ಲಿನಲ್ಲಿ ಸಿನೆಮಾ ನೋಡುವ ವ್ಯರ್ಥ ಪ್ರಯತ್ನ ಮಾಡಿದೆವು.. ತಮಿಳು, ಮಲೆಯಾಳಮ್, ಹಿಂದು ಚಾನಲ್ಲುಗಳ ಸಾಲು ಸಾಲಿತ್ತು..
ಉದಯ ಟಿವಿಯೋ ಮತ್ಯಾವುದೋ ಒದೆರಡು ಕನ್ನಡ ಚಾನಲ್ಲುಗಳಿದ್ದವು..
ತೆಲಗು ಸಿನೆಮಾ ಅರ್ಧ ನೋಡಿ ಮುಗಿಸುವುದರೊಳಗೆ ನಿದ್ರಾದೇವಿ ನಮ್ಮನ್ನು ಅಪ್ಪಿಕೊಂಡಿದ್ದಳು..

ಮುಂಜಾನೆ ಎದ್ದು `ದರ್ಶನ ಲಾಡ್ಜಿನ' ಟೆರೆಸ್ ಮೇಲಿನಿಂದ ನೋಡಿದರೆ ಇಬ್ಬನಿಯ ಮಾಲೆ ಗುಡಲೂರನ್ನು ಮುತ್ತಿತ್ತು..
ಯಾವುದೋ ಯೂರಪ್ ರಾಷ್ಟ್ರದಲ್ಲಿ ವಿಹಾರ ಮಾಡಿದ ಅನುಭವ,.
ರಸ್ತೆಯಲ್ಲಿ ವಾಹನಗಳು ಲೈಟ್ ಹಾಕಿ ನಿಧಾನವಾಗಿ ಚಲಿಸುತ್ತಿದ್ದುದನ್ನು ನೋಡುವುದೇ ಚೆಂದ ಮಾರಾಯ್ರೆ..
ರಸ್ತೆಯಲ್ಲ ಬೆಳ್ಳಗೆ.. ವಾಹನಗಳು ಮೆಲ್ಲಗೆ...
ಅದ್ಯಾಕೋ ಗುಡಲೂರು ಬಹಳ ಸೆಳೆಯಿತು..
ತುಂಬ ಇಷ್ಟವಾಯಿತು.. ಪದೆ ಪದೆ ನೆನಪಾಗುವಂತಾಯಿತು..
ಕೊನೆಗೊಮ್ಮೆ ಚೆಕ್ ಔಟ್ ಆಗಿ ಹೊರ ಬಂದು ಅಲ್ಲೇ ಹತ್ತಿರದಲ್ಲಿ `ಸಾಪಡ್' ಖ್ಯಾತಿಯ ಹೊಟೆಲಿಗೆ ಲಗ್ಗೆ ಇಟ್ಟು ಮಸ್ಸಾಲೆ ದೋಸೆಗೆ ಆರ್ಡರ್ ಮಾಡಿದೆವು..
ದೋಸೆ ಬಿಸಿ ಬಿಸ್ಸಿ ಬಂತು.. ತಿಂದು.. ಮಸ್ಸಾಲೆ ಟೀ ಕುಡಿದು ಬೈಕೇರಿದೆವು..

ಊಟಿ ಮೈಸೂರು ದಾರಿಯಲ್ಲಿ ಗುಡಲೂರು ಪಟ್ಟಣದಲ್ಲಿಯೇ ಕೊಂಚ ದೂರ ಸಾಗಿ ನಂತರ ಎಡಕ್ಕೆ ಹೊರಳಿದರೆ ವಯನಾಡಿನ ರಸ್ತೆ ಸಿಗುತ್ತದೆ.. ಇಲ್ಲಿ ಎರಡು ರಸ್ತೆಗಳಿವೆ.. ಒಂದು ರಸ್ತೆ ನೀರ ಕೋಜಿಕ್ಕೋಡ್ ಗೆ ತೆರಳಿದರೆ ಇನ್ನೊಂದು ರಸ್ತೆ ಸುಲ್ತಾನ್ ಬತ್ತೇರಿ ಮೂಲಕ ಸಾಗುತ್ತದೆ.. ಗುಡಲೂರಿನಿಂದ ಸುಲ್ತಾನ್ ಬತ್ತೇರಿಗೆ 50-60 ಕಿಮಿ ದೂರ. ನಾವು ಆರಿಸಿಕೊಂಡಿದ್ದು ಇದೇ ಮಾರ್ಗ. ಸಿನೆಮಾದಲ್ಲಿ ಕಾಡಿದ್ದ ಎಡಕಲ್ಲು ಗುಡ್ಡ ನೋಡುವುದು, ಟೀ ತೋಟಗಳಲ್ಲಿ ಓಡಿ.. ಆಡುವುದು ನಮ್ಮ ಪ್ರಮುಖ ಉದ್ದೇಶವಾಗಿತ್ತು.. ಇಲ್ಲಿ ನಾನು ರಾಘುವಿನ ಬೈಕೇರಿದೆ.. ಕಿಟ್ಟು ಮೋಹನನ ಬೈಕೇರಿದ..
ಮುಂದೆ ಮುಂದೆ ಸಾಗಿದಂತೆಲ್ಲ ನಮ್ಮ ಕಣ್ಣ ಮುಂದೆ ಟೀ ತೋಟಗಳದ್ದೇ ದೃಶ್ಯ ವೈಭವ.. ಏನೋ ಥ್ರಿಲ್ಲು...

ಈ ರಸ್ತೆ ಥೇಟು ನಮ್ಮ ಶಿರಸಿ-ಹುಲೇಕಲ್ ರಸ್ತೆಯ ಹಾಗೆಯೇ ಇದೆ.. ಇನ್ನೂ ಕಾಡು.. ತಿರುವು, ಮುರುವು.. ಅಪ್ ಎಂಡ್ ಡೌನ್.. ಅದೆಂತದೋ ತರಹೇವಾರಿ ಊರುಗಳು.. ಹೆಸರುಗಳು ನೆನಪಿನಲ್ಲಿ ಉಳಿಯುವಂತದ್ದಲ್ಲ.. ಅಲ್ಲೊಂದು ಕಡೆ ದಟ್ಟ ಕಾಡು.. ಬಹುಶಃ ಬಂಡಿಪುರ-ನಾಗರಹೊಳೆ-ಮಧುಮಲೈ ಅರಣ್ಯಗಳೆಲ್ಲ ಸೇರಿದ ಕಾಡಿನ ಭಾಗವಿರಬೇಕು.. ಅದು ಕಳೆಯುವಷ್ಟರಲ್ಲಿ ತಮಿಳುನಾಡು-ಕೇರಳ ಗಡಿ ಭಾಗದ ಚೆಕ್ ಪೋಸ್ಟ್ ಸಿಕ್ಕಿತು.. ದಾಟಿ ಮುನ್ನಡೆದೆವು.. ಆ ನಂತರದ ವಾತಾವರಣ ವಿಚಿತ್ರ ವೆನ್ನಿಸತೊಡಗಿತು..
ಆ ಕಾಡು ಕಳೆಯುತ್ತಿದ್ದಂತೆಯೇ ಒಂದು ಊರು.. ಊರ ತುಂಬ ಮಸೀದಿಗಳು.. ಗುಮ್ಮಟಗಳು.. ಅದೆಂತದ್ದೋ ವಿಚಿತ್ರ ವಾಸನೆ.. ದೌರ್ಭಾಗ್ಯ ನೋಡಿ ಮನೆಗಳ ಮುಂದೆ ಪಾಕಿಸ್ತಾನದ ಧ್ವಜಗಳು ಹಾರಾಡುತ್ತಿದ್ದವು.. ಯಾ ಅಲ್ಲಾಹ್... ಇದೆಲ್ಲಿಗೆ ಬಂದೆವು..? ನಮಗೆ ಗೊತ್ತಿಲ್ಲದಂತೆಯೇ ಅದ್ಯಾವುದೋ ಪಾಕಿಸ್ತಾನದ ನಾಡನ್ನು ಹೊಕ್ಕೆವಾ..? ಜೊತೆಯಲ್ಲಿದ್ದ ಮೋಹನ ಕುದ್ದು ಹೋದ.. ಇವ ಎಲ್ಲಿ ಬೈಯಲು ಶುರು ಹಚ್ಚಿಕೊಳ್ಳುತ್ತಾನೋ ಎನ್ನುವ ಭಯ ನಮ್ಮದು.. ಕೇರಳದಲ್ಲಿ ಮುಸ್ಲೀಮರು ಬಹುಸಂಖ್ಯಾತರು ಎಂದು ಕೇಳಿದ್ದ ನಮಗೆ ಪ್ರತ್ಯಕ್ಷವಾಗಿ ಅರಿವಿಗೆ ಬಂದಿತು..

ಆ ಊರು ಕಳೆಯುವಷ್ಟರಲ್ಲಿ ಒಂದಷ್ಟು ಟೀ ತೋಟಗಳು ನಮಗೆ ಕಂಡು ಮನಸ್ಸು ತಿಳಿಯಾಯಿತು..
ಅಲ್ಲಿ ಒಂದು ಕಡೆ ರಸ್ತೆಗೆ ಚಾಚಿಕೊಂಡಿದ್ದ ಟೀ ತೋಟ ಕಂಡೊಡನೆ ನಮ್ಮ ವಾಹನಕ್ಕೆ ಬ್ರೇಕ್ ಬಿದ್ದಿತು..
ಇಳಿದು ಸೀದಾ ತೋಟಕ್ಕೆ ನುಗ್ಗಿದ್ದೇ.. ಆ ಸಂದರ್ಭದಲ್ಲಿ ಅದ್ಯಾರಾದರೂ ತೋಟದ ಮಾಲಿಕ ನಮ್ಮನ್ನು ಕಂಡಿದ್ದರೆ ಯಾರೋ ಕಳ್ಳರು ನಿಗ್ಗಿದ್ದಾರೆ ಎಂದು ಗುಂಡು ಹಚ್ಚಿ ಬಿಡುತ್ತಿದ್ದನೇನೋ..
ಒಂದಷ್ಟು ಪೋಟೋ ಸೆಷನ್ನುಗಳು ಮುಗಿದವು..
ಅಲ್ಲೊಂದು ಅನಾಥ ಗೇಟಿನ ತರಹದ ಆಕೃತಿಯಿತ್ತು.. ಅದಕ್ಕೊಂದು ಕುಣಿಕೆ.. ಅದೆಂತದ್ದು ಎನ್ನುವುಚು ಅರ್ಥವಾಗಲಿಲ್ಲ..
ರಾಘವ ಹೋದವನೇ ನೇಣು ಹಾಕಿದವರ ರೀತಿ ಪೋಸು ಕೊಟ್ಟ.. ಪೋಟೋ ಕ್ಲಿಕ್ಕಿಸಿ ಮುಗಿಯಿತು..
ಕಿಟ್ಟುವಂತೂ ` ಹ್ವಾ.. ಇಲ್ಲೇ ಇಷ್ಟು ಸೊಲಿಡ್ಡಿದ್ದು.. ಇನ್ನು ವಯನಾಡಲ್ಲಿ ಎಷ್ಟು ಮೊಸ್ತಿದ್ದಿಕ್ಕಲೇ..' ಎಂದ..
ಮೋಹನ.. ಮಾರಾಯಾ ಯಾರಿಗೆ ಗೊತ್ತು.. ವಯನಾಡು ಖರಾಬಾಗಿ ಇದ್ದಿರಲಿಕ್ಕೂ ಸಾಕು ಎಂದು ಹೇಳಿದ..
ನಾವು ಮುನ್ನಡೆದೆವು..
ಮಂಜು ಸುರಿಯುವ ದಾರಿಯಲ್ಲಿ ಸೂರ್ಯ ನೆತ್ತಿಗೆ ಬರುವ ಮೊದಲು ನಾವು ಸುಲ್ತಾನ್ ಬತ್ತೇರಿಯನ್ನು ತಲುಪಿದೆವು..
ಇಲ್ಲಿಗೇನೋ ಬಂದೆವು.. ಮುಂದೆಲ್ಲಿ ಹೋಗುವುದು/..?
ಕಾಡಿತು ಗೊಂದಲ.. ವಯನಾಡಿನ ಐಡಿಯಾ ಕೊಟ್ಟ ಮೋಹನನಿಗೂ ವಯನಾಡಿನಲ್ಲಿ ನೋಡುವುದು ಏನನ್ನು ಎನ್ನುವುದು ಗೊತ್ತಿರಲಿಲ್ಲ.. ಕೇಳಬೇಕಲ್ಲ... ಯಾರನ್ನು ಕೇಳುವುದು..?
ಯಾರನ್ನು ನೋಡಿದರೂ ಲುಂಗಿ..ಗಳು.. ಗಡ್ಡಗಳು.. ಹಣೆಯ ಮೇಲೆ ಶ್ರೀಗಂಧದ ಅಡ್ಡ ಗೆರೆಗಳು..
ಸ್ವಾಮಿಯೇ ಅಯ್ಯಪ್ಪಗಳು.. ಅಲ್ಲಾ ಹೋ ಅಕ್ಬರ್ ಗಳು..

ಅದ್ಯಾರೋ ಪುಣ್ಯಾತ್ಮನಿಗೆ ನಮ್ಮ ಪಾಡು ಅರ್ಥವಾಯಿತಿರಬೇಕು..
ಮಲೆಯಾಳಮ್ಮಿನಲ್ಲಿ ಅದೇನೋ ಕೇಳಿದ..
ನಾವು ಕಣ್ಣು ಕಣ್ಣು ಬಿಟ್ಟೆವು.. ಹಿಂದಿಯಲ್ಲಿ ಮೋಹನ, ಕಿಟ್ಟು ಮಾತಾಡಿದೆವು..
ನಾನು ರಾಘು ಸುಮ್ಮನೆ ಪೋಸು ಕೊಟ್ಟೆವು..
ಕೊನೆಗೆ ಆತ ಕೋಜಿಕ್ಕೋಡ್ ರಸ್ತೆಯನ್ನು ತೋರಿಸಿ ಗೋ ಸ್ಟ್ರೇಟ್.. ಟೇಕ್ ಲೆಪ್ಟ್ ಎಂದ.. ವೋಕೆ ವೋಕೆ.. ಥ್ಯಾಂಕ್ಸುಗಳು ಎಂದು ಮುಂದೆ ಹೊರಟೆವು..
ಅಲ್ಲೆಲ್ಲೊ ಕೆಂದಾಳಿ ಮುಮಡಿಗೆ ತರದ ಎಳನೀರು ನಮ್ಮನ್ನು ಬಾ ಕುಡಿ.. ಬಾಕುಡಿ ಎಂದು ಕರೆದವು..
ಕುಡಿಯೋಣ ಎಂದು ಕತ್ತರಿಸಿ ಬಾಯಿಗೆ ಹಾಕಿದರೆ ಅದು ಸೀಯಾಳವಲ್ಲ ಮಾರಾಯ್ರೆ...
ಪುಲ್ ಬೆಳೆದು ಹೋಗಿ ಕಾಯಾಗಿಬಿಟ್ಟಿದೆ.. ಕೊನೆಗೆ 20 ರು. ಕೊಟ್ಟು ಕುಡಿದು ಬಂದೆವು..


ವಯನಾಡು ಕೇರಳದ ಕೊಟ್ಟ ಕೊನೆಯಲ್ಲಿರುವ ಜಿಲ್ಲೆ.. ಒಂದು ಕಡೆ ಕರ್ನಾಟಕ ಇನ್ನೊಂದು ಕಡೆಗೆ ತಮಿಳುನಾಡು.. ನಡುವೆ ಇರುವ ವಯನಾಡಿನಲ್ಲಿ ಸುಲ್ತಾನ್ ಬತ್ತೇರಿ ಪ್ರಮುಖ ಪಟ್ಟಣ.. ಕಲ್ಪೆಟ್ಟಾ ಜಿಲ್ಲಾ ಕೇಂದ್ರ..
ಪ್ರವಾಸೋದ್ಯಮವನ್ನೇ ಮೂಲವಾಗಿಟ್ಟುಕೊಂಡ ಜಿಲ್ಲೆ.. ಕೊಜಿಕ್ಕೋಡ್-ಕೊಳ್ಳೆಗಾಲ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ..
ಎಡಕಲ್ಲು ಗುಡ್ಡ, ಕಲ್ಪೆಟ್ಟಾ,  ಸುಲ್ತಾನ್ ಬತ್ತೇರಿ, ಬ್ರಹ್ಮಗಿರಿ ಬೆಟ್ಟ, ವೈತಿರಿ, ಮಾನಂತವಾಡಿ, ಮೀನಮುಟ್ಟಿ ಜಲಪಾತ ಹೀಗೆ ಹೇರಳವಾದ ಪ್ರವಾಸಿ ತಾಣಗಳು ಇಲ್ಲಿವೆ.. ಗೊತ್ತಿದ್ದವರಿಗೆ ಮಾತ್ರ ವಯನಾಡು ಸುಲಭವಾಗಿ ಅರ್ಥವಾಗುತ್ತದೆ.. ಇಲ್ಲವಾದರೆ ಮ್ಮೆ ಮ್ಮೆ ಮ್ಮೆ ಅಥವಾ.. ಬ್ಬೆ ಬ್ಬೆ ಬ್ಬೆ.. ಯೇ ಗತಿ..

ನಮ್ಮ ಪಾಡು ಅದೇ ರೀತಿಯಾಗಿತ್ತು.. ಸುಲ್ತಾನ್ ಬತ್ತೇರಿಯೆಂಬ ಊರನ್ನು ಕಟ್ಟಿದ ಮೈಸೂರಿಗ ಹೈದರಾಲಿ, ಟಿಪ್ಪು ಸುಲ್ತಾನ್  ಕಟ್ಟಿಸಿದ ಕೋಟೆಯನ್ನು ನೋಡಲಿಲ್ಲ.. ಮಾನಂತವಾಡಿ ಬಳಿ ಇದ್ದ ಕಬಿನಿ ಹಿನ್ನೀರನ್ನೂ ನೋಡಲಿಲ್ಲ.. ಯಾರೊ ಹೇಳಿದರು ಎಡಕಲ್ಲು ಗುಡ್ಡ.. ಚಂದ್ರಶೇಖರ್.. ಜಯಂತಿ ನೆನಪಾದರು.. ಸಂತೋಷಾ.. ಸಂಗೀತಾ.. ರಸಮಯ.. ಎಂದು ಕೊಂಡು ಅತ್ತ ತಿರುಗಿದೆವು...
ಎಡಕಲ್ಲು ಗುಡ್ಡಕ್ಕೆ ಖ್ಯಾತಿ ತಂದಿದ್ದು ಕನ್ನಡಿಗರಾದ ಕಣಗಾಲ್ ಪುಟ್ಟಣ್ಣನವರು.. ಅವರು ಅಲ್ಲಿ ಸಿನೆಮಾ ಶೂಟಿಂಗ್ ಮಾಡುವ ಮುನ್ನ ಆ ಕುರಿತು ಅಷ್ಟು ಪರಿಚಯ ಇರಲಿಲ್ಲವಂತೆ.. ಅವರು ಸಿನೆ ಮಾಡಿದರು.. ಕನ್ನಡಿಗರು ಅದೇನೇನನ್ನೋ ನೆನೆದು ಅಲ್ಲಿಗೆ ಹೋದರು.. ಪ್ರವಾಸೋದ್ಯಮ ಬೆಳೆಯಿತು... ಆದಾಯದ ಮೂಲವಾಯಿತು..
ನಾವು ಹೊರಟೆವು...
15-20 ಕಿ.ಮಿ ದೂರವಿರಬಹುದು.. ಕಿರಿದಾದ ಹಾದಿ.. ಎದುರು ಕಡೆಯಿಂದ ರೊಂಯ್ಯನೆ ಬರುವ ಪ್ರವಾಸಿಗರ ವಾಹನಗಳು..
ಸರ್ಕಸ್ಸಿನ ರೀತಿ ಹೋದೆವು... ಕಾಡು.. ಖುಷಿ ಕೊಟ್ಟಿತು.. ದೂರದಲ್ಲೆಲ್ಲೋ ಮುಗಿಲೆತ್ತರದಲ್ಲಿ ಎಡಕಲ್ಲು ಗುಡ್ಡವನ್ನು ಕಂಡಂತಾಯಿತು.. ಹೋ ಎಂದೆವು.. ಮದಲ್ಲಿ ರೋಮಾಂಚನಾ..
ಬಿಡಿ ನಾವು ದುರದೃಷ್ಟವಂತರು.. ಹುಡುಗರೇ ಬಂದಿದ್ದೇವೆ.. ಜೊತೆಯಲ್ಲಿ ಹುಡುಗಿಯರು ಬರಬೇಕಿತ್ತು ಎನ್ನುವ  ಭಾವನೆ ಮನದಲ್ಲಿ ಮೂಡಿ ತೊಡೆ ಬೆಚ್ಚಗಾಯಿತು.. ನಮ್ಮನ್ನು ನಾವು ಹಳಿದುಕೊಂಡು ಮುನ್ನಡೆದೆವು..
ಅಲ್ಲೊಂದು ಕಡೆ ಅಪ್ ಹತ್ತಿ ಚಿಕ್ಕೊಂದು ಟರ್ನ್ ತೆಗೆದುಕೊಂಡರೆ ಅಲ್ಲಿ ನಮ್ಮ ವಾಹನ ನಿಲ್ಲಿಸುವ ಸ್ಥಳ ಬಂದಿತು.. ನಾವು ಕೊಡೋದಿಲ್ಲ ಎಂದರೂ ಅವರು ಬಿಡೋದಿಲ್ಲ ಎಂಬಂತೆ 30 ರು. ಪಾರ್ಕಿಂಗ್ ಶುಲ್ಕವನ್ನು ನೀಡಿದೆವು.,..
ಅಲ್ಲೊಂದಷ್ಟು ಹೊಟೆಲುಗಳಿವೆ.. ಗಾಡಿ ನಿಲ್ಲಿಸಲು ಸ್ಥಳವಿದೆ.. ವಿಶಾಲವಾಗಿ.. 50-60 ಗಾಡಿಗಳು ಇದ್ದವು..
ಅಲ್ಲಿಂದ 1 ಕಿ.ಮಿ ಜೀಪು ಹೋಗುತ್ತದೆ.. ಗುಡ್ಡವನ್ನು ಹತ್ತಿ.. ಥೇಟು ಕೊಡಚಾದ್ರಿಯಲ್ಲಿ ಕರೆದೊಯ್ಯುತ್ತಾರಲ್ಲ ಹಾಗೇ.. ತಲೆಗೆ 150, 200 ರು.. ಸಿಕ್ಕವರಿಗೆ ಸೀರುಂಡೆ ಎನ್ನುವಂತೆ.. ಕೆತ್ತಲು ಕಾಯುತ್ತಿರುತ್ತಾರೆ...

ನಮ್ಮನ್ನು ಕಂಡು ಬನ್ನಿ ಬನ್ನಿ ಎಂದರು.. ನಾವೊಮ್ಮೆ ನಮ್ಮ ವಿಟಮಿನ್ ಪ್ರಮಾಣವನ್ನು ನೋಡಿಕೊಂಡೆವು..
ಬೇಡ.. ನಟರಾಜ ಸರ್ವೀಸಿಗೆ ಜೈ ಎನ್ನುತ್ತೇವೆ.. ಎಂದು ಹೆಜ್ಜೆ ಹಾಕಿದರೆ.. ನಮ್ಮಂತೆ ಇನ್ನೂ ಹವು ಜನ ಅಲ್ಲಿದ್ದಾರೆ..
ಗುಡ್ಡ ಹತ್ತೋಣ ಬನ್ನಿ.. ಎಂದು ಕರೆ ನೀಡಿದ ನಮಗೆ ಅನೇಕರು ಸಾಥ್ ನೀಡಿದರು.. ಗುಡ್ಡ ಬೆಟ್ಟ ತಿರುಗಿ ರೂಢಿಯಿದ್ದ ನಮ್ಮ ವೇಗಕ್ಕೆ ಉಳಿದವರು ಸಾಥ್ ನೀಡಲು ಸಾಧ್ಯವಾಗಲಿಲ್ಲ. ಾದರೆ ಹತ್ತುತ್ತಿದ್ದ ಹಲವರಲ್ಲಿ ಬಹಳಷ್ಟು ಜನ ಚೆಂದ ಚೆಂದದ ಹುಡುಗಿಯರಿದ್ದರು..
ನಮ್ಮ ವೇಗ ತನ್ನಿಂದ ತಾನೇ ಸ್ಲೋ ಆಯಿತು..
ಎಲ್ಲಿಲ್ಲದ ನಾಟಕೀಯತೆ ನಮ್ಮ ನಡಿಗೆಗೆ ಬಂದಿತು.. ಇದೇ ಮೊದಲ ಬಾರಿಗೆ ಗುಡ್ಡ ಹತ್ತುತ್ತಿದ್ದೇವೇನೋ ಎನ್ನುವ ರೀತಿ ನಟನೆ ಮಾಡತೊಡಗಿದೆವು..
ಎಡಕಲ್ಲು ಗುಡ್ಡ ಬಾ ಎನ್ನುತ್ತಲೇ ಇತ್ತು.. ದಾರಿ ಮಧ್ಯದಲ್ಲಿ ಇದ್ದ ದೊಡ್ಡ ದೊಡ್ಡ ಬಂಡೆಗಳ ಪೋಟೋ ತೆಗೆಯುವ ನೆಪದಲ್ಲಿ ಹುಡುಗಿಯರ ಪೋಟೋ ತೆಗೆಯುವ ಯತ್ನ ಮಾಡಿ ಸಫಲರಾದೆವು..
ಹೀಗಿರುವಾಗ ಎಡಕಲ್ಲು ಗುಡ್ಡದ ಬುಡ ಬಂದಿತು.. ರಸ್ತೆ ಇಲ್ಲಿಗೆ ಮುಕ್ತಾಯವಾಗುತ್ತದೆ.. ಇನ್ನು ಮುಂದೆ ಒರಟು ದಾರಿಯಲ್ಲಿ ಗುಡ್ಡ ಹತ್ತಬೇಕು.. ಹತ್ತಲು ಅಣಿಯಾದರೆ ಬಾಯಾರಿಕೆ..
ಅಲ್ಲೊಂದು ಕಡೆ ಬಾಯಿಗಷ್ಟು ದ್ರವಾಹಾರವನ್ನು ಹಾಕಿ ಮುಂದಕ್ಕೆ ಹೆಜ್ಜೆ ಹಾಕಿದೆವು.. ನೆತ್ತಿಯ ಮೇಲೆ ಬಂದಿದ್ ಸೂರ್ಯ ಸುಡಲು ಪ್ರಾರಂಭಿಸಿದ್ದ..
(ಮುಂದುವರಿಯುತ್ತದೆ..)

Tuesday, August 13, 2013

ಉಂಚಳ್ಳಿ ಜಲಪಾತದ ಕಥೆ ಹಾಗೂ ವ್ಯಥೆ..

ಉಂಚಳ್ಳಿ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ. ಮಲೆನಾಡಿನಲ್ಲಿ ಚನ್ನಾಗಿ ಮಳೆಯಾಗುತ್ತಿರುವ ಕಾರಣ  ಉಂಚಳ್ಳಿ ಜಲಪಾತ ಸೌಂದರ್ಯವೃದ್ಧಿಸಿಕೊಂಡು ಧುಮ್ಮಿಕ್ಕುತ್ತಿದೆ.
ಈ ಜಲಪಾತವನ್ನು ಬ್ರಿಟೀಷ್ ಅಧಿಕಾರಿ ಜಾರ್ಜ್ ಲೂಷಿಂಗ್ ಟನ್ ಎಂಬಾತ ಪತ್ತೆ ಹಚ್ಚಿದ ಕಾರಣಕ್ಕಾಗಿ ಲೂಷಿಂಗ್ ಟನ್ ಜಲಪಾತ ಎನ್ನುವ ಹೆಸರನ್ನೂ ಈ ಜಲಪಾತ ಪಡೆದುಕೊಂಡಿದೆ. ಪಶ್ಚಿಮ ಘಟ್ಟದ ತುದಿಯಿಂದ ಕರಾವಳಿಯತ್ತ ಓಡುವ ನದಿ ಭೊರ್ಗರೆಯುತ್ತ ಇಳಿಯುತ್ತದೆ. ಈ ಸಂದರ್ಭದಲ್ಲಿ ಉಂಟಾಗುವ ಸಪ್ಪಳಕ್ಕೆ ಕಿವಿ ಕಿವುಡಾಗುವಂತಾಗುತ್ತದೆ. ಈ ಕಾರಣದಿಂದಲೇ ಇದನ್ನು ಕೆಪ್ಪ ಜೋಗ ಎಂದೂ ಕರೆಯಲಾಗುತ್ತದೆ. ಈ ವರ್ಷದ ಉತ್ತಮ ಮಳೆಯಿಂದಾಗಿ ಜಲಪಾತ ಚೈತನ್ಯವನ್ನು ತುಂಬಿ ಉಕ್ಕುತ್ತಿದೆ.
ಉಕ್ಕೇರಿ ಹರಿಯುವ ಕೆಂಪು ನೀರು ಜಲಪಾತದ ರೂಪದಲ್ಲಿ ಕಣಿವೆಗೆ ಧುಮ್ಮಿಕ್ಕುವುದನ್ನು ನೋಡುವುದೇ ಚಂದ. ಬೋರ್ಘರೆಯುವ ನದಿ ಮಾಡುವ ಸಪ್ಪಳ ಮೂರ್ನಾಲ್ಕು ಕಿ.ಮಿ ದೂರದ ವರೆಗೂ ಕೇಳುತ್ತದೆ. ಗೋಕರ್ಣದ ಆತ್ಮಲಿಂಗದ ಆಕಾರದಲ್ಲಿ ಕಣಿವೆಯಾಳಕ್ಕಿಳಿಯುವ ಜಲಪಾತದ ಚಿತ್ರಣ ಮೈಮನಸ್ಸನ್ನು ಆವರಿಸುತ್ತದೆ. ಜಲಪಾತದ ಎರಡೂ ಕಡೆಗಳಲ್ಲಿರುವ ದೈತ್ಯ ಘಟ್ಟಗಳು, ಬಾನೆತ್ತರಕ್ಕೆ ಚಾಚಿ ನಿಂತ ಮರಗಳು ಜಲಪಾತಕ್ಕೆ ಶೋಭೆಯನ್ನು ನೀಡುತ್ತಿವೆ. ದಟ್ಟಕಾನನದ ನಡುವೆ ಸೌಂದರ್ಯದ ಖನಿಯಾಗಿ ಬೆಡಗು ಮೂಡಿಸುತ್ತಿರುವ ಜಲಪಾತಕ್ಕೆ ಪ್ರವಾಸಿಗರು ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಬೆಂಗಳೂರು, ಮಂಡ್ಯ, ಹಾಸನ, ಕೋಲಾರ, ಮೈಸೂರು, ಚಿಕ್ಕಮಗಳೂರು, ಬಿಜಾಪುರ, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಮಹಾರಾಷ್ಟ್ರದ ರತ್ನಗಿರಿ, ಕೊಲ್ಲಾಪುರ, ಪೂಣಾ ಹೀಗೆ ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು ಜಲಪಾತದ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.

ಜಲಪಾತವೂ ಚಂಚಲೆಯೇ. ಮಳೆಯ ಬಿಡುವಿನ ನಡುವೆ ಜಲಪಾತ ವೀಕ್ಷಣೆಗೆ ಬರುವವರಿಗೆ ಜಲಪಾತ ಸುಲಭಕ್ಕೆ ತನ್ನ ದರ್ಶನ ಕೊಡುವುದಿಲ್ಲ. ಕಣಿವೆಯಾಳಕ್ಕೆ ಧುಮ್ಮಿಕ್ಕುವ ಜಲಪಾತ ಸೃಷ್ಟಿಸುವ ಮಂಜು ಮುಸುಕಿದ ವಾತಾವರಣಕ್ಕೆ ಜಲಪಾತದ ದರ್ಶನವಾಗುವುದೇ ಇಲ್ಲ. ಆಗೊಮ್ಮೆ ಈಗೊಮ್ಮೆ ಗಾಳಿ ಉಂಟಾದಾಗ ಜಲಪಾತ ಕಾಣಿಸಿಕೊಂಡಾಗ ಸ್ವರ್ಗ ಕೈಗೆ ಸಿಕ್ಕಷ್ಟು ಧನ್ಯತೆ. ಆದರೆ ಈಗ ಜಲಪಾತದ ದರ್ಶನ ಮಂಜಿನ ನಡುವೆ ದಿನಕ್ಕೆ ನಾಲ್ಕೈದು ಬಾರಿ ಮಾತ್ರ ಕಾಣುವಂತಾಗಿದೆ. ಜಲಪಾತ ದರ್ಶನಕ್ಕಾಗಿ 2 ಕಾವಲು ಗೋಪುರಗಳನ್ನು ನಿರ್ಮಾಣ ಮಾಡಲಾಗಿದೆ. ಜಲಪಾತದ ಸನಿಹದ ವೀಕ್ಷಣೆಗಾಗಿ 200ಕ್ಕೂ ಹೆಚ್ಚಿನ ಮೆಟ್ಟಿಲುಗಳನ್ನು ಮಾಡಲಾಗಿದೆ. ಈ ಮೆಟ್ಟಿಲುಗಳ ಮೂಲಕ ಜಲಪಾತದ ಬುಡಕ್ಕೆ ಇಳಿದು ನೋಡಬಹುದಾಗಿದೆ. ಮಂಜಿನ ಧಾರೆ ಉಂಟುಮಾಡುವ ಹನಿಗಳು ಮೈ ಒದ್ದೆ ಮಾಡುತ್ತದೆಯಾದರೂ ಅದರಿಂದ ಸಿಗುವ ಸಂತಸ ಆಪ್ಯಾಯಮಾನವಾದುದು.
 ಇದೇ ಜಲಪಾತದ ಪಕ್ಕದಲ್ಲಿ ಇನ್ನೊಂದು ಮರಿ ಜಲಪಾತವಿದ್ದು ಇದೂ ಕೂಡ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿ ಮಾರ್ಪಾಡಾಗಿದೆ. ಉಂಚಳ್ಳಿ ಜಲಪಾತದಷ್ಟು ಎತ್ತರ, ರೌದ್ರ, ಬೀಖರತೆ ಇದಕ್ಕಿಲ್ಲ. ಸ್ಥಳೀಯ ಹಳ್ಳವೊಂದರಿಂದ ಸೃಷ್ಟಿಯಾಗಿರುವ ಈ ಮರಿ ಜಲಪಾತ ಪ್ರವಾಸಿಗರಿಗೆ ಸಕಲ ರೀತಿಯ ಖುಷಿಯನ್ನು ಕೊಡುತ್ತಿದೆ. ಉಂಚಳ್ಳಿ ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಇಲ್ಲಿನ ಎರಡನೇ ಗೋಪುರದ ಬಳಿ ನಿರ್ಮಾಣ ಮಾಡಲಾದ ಮೆಟ್ಟಿಲುಗಳ ಪಕ್ಕದಲ್ಲಿ ಗುಡ್ಡವನ್ನು ಏರಿದರೆ ಈ ಮರಿ ಜಲಪಾತದ ದರ್ಶನ ಲಭ್ಯವಾಗುತ್ತದೆ. ಕಲ್ಲು ಬಂಡೆಗಳ ಮೇಲೆ ಜುಳು ಜುಳು ಸದ್ದಿನೊಂದಿಗೆ ನರ್ತನ ಮಾಡುತ್ತ, ಆಗಮಿಸುವ ಪ್ರವಾಸಿಗರ ಕಾಲು ತೊಳೆಯುತ್ತ, ನೀರೊಳಗೆ ಇಳಿದರೆ ಸ್ನಾನದ ಸುಖವನ್ನು ನೀಡುವ ಈ ಜಲಪಾತ ಉಂಚಳ್ಳಿಗೆ ಮತ್ತಷ್ಟು ಮೆರಗು ನೀಡುತ್ತಿದೆ.
 ಉಂಚಳ್ಳಿ ಜಲಪಾತ ಇಷ್ಟೆಲ್ಲ ಸೌಂದರ್ಯವನ್ನು ಹೊಂದಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದರೂ ಇಲ್ಲಿ ಸಮರ್ಪಕ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ವೀಕ್ಷಣಾ ಗೋಪುರಗಳು ಹಾಗೂ ವೀಕ್ಷಣಾ ಸ್ಥಳಕ್ಕೆ ತೆರಳಲು ಮೆಟ್ಟಿಲುಗಳನ್ನು ಮಾಡಿರುವುದನ್ನು ಬಿಟ್ಟರೆ ಮತ್ಯಾವುದೇ ಸೌಲಭ್ಯ ಇಲ್ಲಿಲ್ಲ. ಕುಳಿತುಕೊಳ್ಳಲು ಎರಡು ಸಿಮೆಂಟಿನ ಆಸನಗಳಿವೆ. ಆದರೆ ಅವು ಈಗಾಗಲೇ ಕಿತ್ತುಹೋಗಿದೆ. ಜಲಪಾತದ ಬಳಿ ಅನೇಕ ಸ್ತಳಗಳಲ್ಲಿ ಪ್ರವಾಸಿಗರು ಪ್ಲಾಸ್ಟಿಕ್ ವಸ್ತುಗಳನ್ನು ಎಸೆದಿರುವುದು ಜಲಪಾತದ ಸೌಂದರ್ಯಕ್ಕಿಟ್ಟ ಕಪ್ಪುಚುಕ್ಕೆಯಾಗಿದೆ. ಜಲಪಾತದ ಪ್ರದೇಶದಲ್ಲಿ ಶೌಚಾಲಯವೊಂದನ್ನು ನಿರ್ಮಿಸಲಾಗಿದೆ. ಆದರೆ ಅದನ್ನು ನಿರ್ಮಾಣ ಮಾಡಿದಾಗಿನಿಂದ ಅದರ ಬಳಕೆಯನ್ನೇ ಮಾಡಿಲ್ಲವೇನೋ ಎನ್ನುವಂತಾಗಿದೆ. ಶೌಚಾಲಯದ ಬಾಗಿಲುಗಳು ಮುರಿದುಹೋಗಿದೆ. ಶೌಚಾಲಯದ ಒಳಗೆಲ್ಲ ಗಬ್ಬು ನಾರುತ್ತಿದೆ. ಸುತ್ತಮುತ್ತಲ ಮರಗಳ ಎಲೆಗಳು, ಪ್ರವಾಸಿಗರು ಎಸೆದ ತರಹೇವಾರಿ ವಸ್ತುಗಳು ಈ ಶೌಚಾಲಯದಲ್ಲಿವೆ. ಶೌಚಾಲಯದ ಗೋಡೆಗಳಂತೂ ಪ್ರವಾಸಿಗರ ಬರಹಗಳಿಗೆ ಬಲಿಯಾಗಿ ವಿಕಾರ ರೂಪವನ್ನು ಪಡೆದುಕೊಂಡಿವೆ.
ಸ್ಥಳೀಯ ಉಂಚಳ್ಳಿ ಗ್ರಾಮ ಅರಣ್ಯ ಸಮಿತಿ ಆಗಮಿಸುವ ಯಾತ್ರಾರ್ಥಿಗಳ ಬಳಿ ವಾಹನ ಶುಲ್ಕವನ್ನು ಪಡೆಯುತ್ತದೆ. ಉಂಚಳ್ಳಿ ಊರಿನ ಶಾಲಾ ಮಕ್ಕಳು ಇದೇ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಪಡೆದ ಶುಲ್ಕಕ್ಕೆ ತಕ್ಕ ನಿರ್ವಹಣಾ ಕಾರ್ಯ ನಡೆಯುತ್ತಿಲ್ಲ. ನಿರ್ವಹಣಾ ಶುಲ್ಕ ಪಡೆಯುವುದು ಹಣ ಮಾಡಲು ಎನ್ನುವಂತಾಗಿದೆ. ಜಲಪಾತದ ಪ್ರದೇಶವನ್ನು ಕಾಲ ಕಾಲಕ್ಕೆ ಚೊಕ್ಕಟ ಮಾಡುವ ಕಾರ್ಯ ನಡೆಯುತ್ತಿಲ್ಲ. ಇದರಿಂದಾಗಿ ಪ್ರವಾಸಿಗರು ಎಸೆದ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳು ರಾರಾಜಿಸಿ ಜಲಪಾತದ ದುಸ್ಥಿತಿಗೆ ಕನ್ನಡಿಯಂತೆ ಭಾಸವಾಗುತ್ತಿದೆ. ಪ್ರವಾಸಿಗರು ಈ ಸ್ಥಳದಲ್ಲಿ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯಗಳನ್ನು ಎಸೆಯುವುದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿಲ್ಲ. ಎಲ್ಲೆಂದರಲ್ಲೆ ಬೇಕಾಬಿಟ್ಟಿ ವಸ್ತುಗಳನ್ನು ಎಸೆಯುವುದನ್ನು ತಡೆಗಟ್ಟಿ ಅಂತವರ ವಿರುದ್ಧ ದಂಡ ಹಾಕುವ ಕೆಲಸ ನಡೆಯಬೇಕಾಗಿದೆ. ಜಲಪಾತದ ಕುರಿತು ಮಾಹಿತಿ ನೀಡುವವರ ಕೊರತೆಯೂ ಇಲ್ಲಿದೆ. ಬಂದ ಪ್ರವಾಸಿಗರಿಗೆ ಜಲಪಾತ ನೋಡಿದ ತಕ್ಷಣ ಮುಂದೇನು ಎನ್ನುವ ಗೊಂದಲ ಕಾಡುತ್ತದೆ. ಆಗ ಅವರಿಗೆ ತಿಳಿಹೇಳುವ ಮಾರ್ಗದರ್ಶಕರ ಅಗತ್ಯವಿದೆ.
 ಶಿರಸಿಯಿಂದ ಹೆಗ್ಗರಣಿ ಮಾರ್ಗವಾಗಿ 35 ಕಿ.ಮಿ ದೂರದಲ್ಲಿ ಉಂಚಳ್ಳಿ ಜಲಪಾತವಿದೆ. ಈ ಜಲಪಾತಕ್ಕೆ ಸಿದ್ದಾಪುರದಿಂದಲೂ ಇಷ್ಟೇ ದೂರ. ಜಲಪಾತದ ವರೆಗೆ ಡಾಂಬರ್ ರಸ್ತೆಯಿರುವುದನ್ನು ಬಿಟ್ಟರೆ ಇನ್ಯಾವುದೇ ಸೌಕರ್ಯವನ್ನು ಕೇಳುವಂತಿಲ್ಲ. ಶಿರಸಿಯಿಂದ ಉಂಚಳ್ಳಿಯ ವರೆಗೆ ದಿನಕ್ಕೆರಡು ಬಸ್ ಬರುತ್ತದೆ. ಆದರೆ ಈ ಬಸ್ ನಿಲ್ಲುವ ಸ್ಥಳದಿಂದ 3 ಕಿ.ಮಿ ದೂರ ನಡೆದು ಜಲಪಾತ ನೋಡಬೇಕು. ಜಲಪಾತಕ್ಕೆ ಕನಿಷ್ಟ 4 ಬಸ್ ಗಳನ್ನು ಓಡಿಸಬೇಕು. ಸಿದ್ದಾಪುರದಿಂದಲೂ ಬಸ್ ಸಂಚಾರ ವ್ಯವಸ್ಥೆ ಕೈಗೊಂಡರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಆಗಮಿಸುವ ಬಸ್ಸುಗಳನ್ನು ಉಂಚಳ್ಳಿಯಿಂದ ಮುಂದೆ ಬೆಳ್ಕೋಡ್ ವರೆಗೆ ಬಿಡಬೇಕಿದೆ. ಇದರಿಂದ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಜಲಪಾತದ ಬಳಿ ಮಾರಾಟ ಮಳಿಗೆ ಹಾಗೂ ಯಾತ್ರಿ ನಿವಾಸ ನಿರ್ಮಾಣ ಮಾಡಬೇಕೆಂಬುದು ಸ್ಥಳೀಯರ ಬಹುದಿನಗಳ ಬೇಡಿಕೆ. ಯಾತ್ರಿ ನಿವಾಸ ನಿರ್ಮಾಣದ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾಡುತ್ತಲೇ ಇದೆ. ಆದರೆ ಯಾತ್ರಿ ನಿವಾಸ ನಿರ್ಮಿಸುವ ಮುಹೂರ್ತ ಇನ್ನೂ ಕೂಡಿಬಂದಂತಿಲ್ಲ. ತ್ವರಿತವಾಗಿ ಯಾತ್ರಿ ನಿವಾಸ ನಿರ್ಮಾಣವಾಗಬೇಕು. ಸ್ಥಳೀಯ ವಸ್ತುಗಳನ್ನು ಮಾರಾಟ ಮಾಡಲು ಮಾರಾಟ ಮಳಿಗೆಯ ನಿರ್ಮಾಣವೂ ನಡೆಯಬೇಕಿದೆ ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.

ಈ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಿದಲ್ಲಿ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಇಮ್ಮಡಿ ಸ್ಥಳೀಯರಿಗೆ ಉದ್ಯೋಗದ ಮೂಲವೂ ಆಗಬಲ್ಲದು. ಈ ಕುರಿತು ಪ್ರವಾಸೋದ್ಯಮ ಸಚಿವರು ಹಾಗೂ ಪ್ರವಾಸೋದ್ಯಮ ಇಲಾಖೆ ಕೂಡಲೇ ಸ್ಪಂದಿಸುವ ಅಗತ್ಯವಿದೆ.
ಸಿದ್ದಾಪುರ ತಾಲೂಕಿನಲ್ಲಿರುವ ಉಂಚಳ್ಳಿ ಜಲಪಾತ ರುದ್ರರಮಣೀಯ ರೂಪ ತಾಳಿದ್ದು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಆದರೆ ಜಲಪಾತದ ಪ್ರದೇಶದಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆ ಪ್ರವಾಸಿಗರನ್ನು ಹೈರಾಣಾಗಿಸಿದೆ.

Wednesday, August 7, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 6

ದಾರಿಯಂತೂ ಅಂಕುಡೊಂಕು.. ಒಂದೆಡೆ ಕಡಿದಾದ ಗುಡ್ಡಗಳ ಸಾಲು ಸಾಲು.. ಇನ್ನೊಂದು ಕಡೆ ಆಳದ ಕಣಿವೆ..
ಪ್ರಪಾತ.. ನಡು ನಡುವೆ ಇಣುಕುವ ಚಹಾ ತೋಟಗಳು..
ನಮ್ಮ ಮೂಗಿನ ಒಳಗೆ ಹೊಕ್ಕುವ ತಂಪು ಗಾಳಿ ಶ್ವಾಸಕೋಶದಿಂದ ಸಂಪೂರ್ಣ ದೇಹವನ್ನೂ ಪತರಗುಡಿಸುತ್ತಿತ್ತು..
ತಂಪು ಗಾಳಿ ಸೇವನೆ ಮಾಡಿದಂತೆಲ್ಲ ಮೂಗಿನೊಳಗೆ ಅದೇನೋ ಅನಿರ್ವಚನೀಯ ಉರಿ..
ತಲೆಯ ಮೇಲೆ ಮಂಜಿನ ಹನಿಗಳು ಬಿದ್ದು ಕೂದಲುಗಳು ಬೆಳ್ಳಗಾಗಿದ್ದವು..
ಮುತ್ತಿನ ಹನಿಗಳು ಮುಖದ ಮೇಲೆಲ್ಲ ನೀರ ಧಾರೆಯಾಗಿತ್ತು...

ಅಲ್ಲೆಲ್ಲೋ ದಾರಿ ಮಧ್ಯದಲ್ಲಿ ಗಾಡಿ ನಿಲ್ಲಿಸಿದೆವು..
ಮಸಾಲಾ ಟೀ ಕೊಳ್ಳಬೇಕು..
ಅಂಗಡಿಗೆ ಹೋದರೆ 60 ರು.ಗೆ ಕಾಲು ಕೆಜಿ ಪ್ಯಾಕೇಟ್ ಎಂದ..
ಕೊಂಡೆವು..
ನಾಲ್ಕಾರಕ್ಕಿಂತ ಜಾಸ್ತಿ ಇರಬೇಕು ಕೊಂಡಿದ್ದು..
ಅಲ್ಲೇ ಪಕ್ಕದಲ್ಲಿ ಹಸಿರ ಚಾದರ ಹೊದ್ದಿದ್ದ ಚಹಾ ಪ್ಲಾಂಟೇಷನ್ನಿನಲ್ಲಿ ಅಡ್ಡಾಡಬೇಕೆಂಬುದು ನಮ್ಮ ಮನದ ಬಯಕೆ..
ಲಗ್ಗೆ ಇಟ್ಟೆವು..  ಅಂಗಡಿ ಉರುಫ್ ಪ್ಲಾಂಟೇಶನ್ನಿನ ಮಾಲಿಕ ಅರ್ಧಮರ್ಧ ತಮಿಳ್ಗನ್ನಢದಲ್ಲಿ ಒಪ್ಪಿಗೆ ಸೂಚಿಸಿದ್ದು ನಮಗೆ ಲೈಸೆನ್ಸ್ ಸಿಕ್ಕಂತೆ ಆಗಿತ್ತು..
ಪೋಟೋಗಳ ಸರಮಾಲೆ ಕ್ಲಿಕ್ಕಾಯಿತು..
ಮನಸ್ಸು ಹಸಿರಿನಿಂದ ಪಕ್ಕಾಯಿತು..

ಈ ನಡುವೆ ಅಲ್ಲೆಲ್ಲೋ ನಮ್ಮ ಶಿರಸಿಯ ಕೆಎ 31 ರಿಜಿಸ್ಟ್ರೇಶನ್ನಿನ ಟೆಂಪೋ ಒಂದನ್ನು ಕಂಡೆವು..
ನಮಗೋ ಶಿರಸಿಯವರ್ಯಾರೋ ಬಂದಿದ್ದಾರೆ.. ಟೆಂಪೋ ಬೇರೆ..
ಚೆಂದದ ಹುಡುಗಿಯರಿದ್ದರೆ ಕಣ್ಣು ತಂಪು ಮಾಡಿಕೊಳ್ಳಬಹುದು ಎನ್ನುವ ಕಾಮನೆ..
ಮೋಹನ, ಕಿಟ್ಟು ಉತ್ಸಾಹ ತೋರಿಸಲಿಲ್ಲ..
ನಾನು, ರಾಘು ಬೈಕೇರಿದೆವು..
ರಾಘವ ಅಂಕುಡೊಂಕಿನ ಹಾದಿಯಲ್ಲಿ ಟೆಂಪೂವನ್ನು ಹಿಂಬಾಲಿಸಿ, ನಿಲ್ಲಿಸಿ ಉಭಯಕುಶಲೋಪರಿ ಕೇಳುವ ತವಕದಿಂದ ಗಾಡಿ ಓಡಿಸಿದ..
ನಮಗೆ ಎದುರಾದ ಅದೆಷ್ಟೋ ಗಾಡಿಗಳು ತಾವಾಗಿಯೇ ಪಕ್ಕಕ್ಕೆ ಸರಿದು ಬದುಕಿದೆಯಾ ಬಡ ಜೀವವೆ ಎಂದು ಕೊಂಡವು..
ಆದರೂ ಅದೊಂದು ದೊಡ್ಡ ಯು ಟರ್ನಿನಲ್ಲಿ ವೇಗದಿಂದ ಕೂಡಿದ್ದ ನಮ್ಮ ಬೈಕು ಕಟ್ ಆಗಲೇ ಇಲ್ಲ.
ಲಾಂಗ್ ಟರ್ನ್ ತೆಗೆದುಕೊಳ್ಳುವ ಭರದಲ್ಲಿ ಎದುರಿನಿಂದ ಬಸ್ಸಿಗನೊಬ್ಬ ನಮ್ಮಷ್ಟೇ ವೇಗದಿಂದ ಬರುತ್ತಿದ್ದ..
ಮುಗೀತು ಕಥೆ..
ಅಪಘಾತ ಎರಡು ಸಾವು ಸುದ್ದಿಗೆ ನಾವೇ ಹೀರೋಗಳು.. ಆಗುತ್ತೇವೆ ಎಂದು ಕೊಂಡೆವು...
ಸೇಮ್ ಕನ್ನಡ ಸಿನೆಮಾಗಳ ಟ್ವಿಸ್ಟುಗಳಂತೆ..
ಅಲ್ಪಸ್ವಲ್ಪದರಲ್ಲಿ ತಪ್ಪಿತು..
ಅಲ್ಲದೇ ಅದರ ಪಾಡಿಗೆ ಅದು ಹೋಯಿತು.. ನಮ್ಮ ಪಾಡಿಗೆ ನಾವು ಬಂದೆವು...
`ಸಾಯ್ಲಲೆ... ಎಂತಾ ಮಳ್ಳಾಗಿತ್ತು ಮಾರಾಯಾ..' ರಾಘವ ಮುಖದಲ್ಲಿ ಬೆವರು ತುಂಬಿಕೊಂಡು ಹೇಳಿದ್ದ..
ನನಗೂ ಮುಖದಲ್ಲಿ ಬೆವರಿತ್ತು.. ಸಾವರಿಸಿಕೊಂಡ ಬಿಸಿಯುಸಿರು.. ಎದೆಯೊಳಗೆ...

 ಮತ್ತೆ ಶುರು ವೇಗ..
ಮತ್ತೊಂದು ಆರೇಳು ಕಿ.ಮಿ ಆದ ನಂತರ ಆ ಟೆಂಪೋ ಸಿಕ್ಕಿತು..
ಟೆಂಪೋದಲ್ಲಿದ್ದವರು ಶಾಲಾ ಮಕ್ಕಳು.. ತಮ್ಮ ವಾಂತಿ ಪ್ರೋಗ್ರಾಮನ್ನು ಶುರು ಹಚ್ಚಿಕೊಂಡಿದ್ದರು..
ಡ್ರೈವರ್ ಗಾಡಿಯನ್ನು ಪಕ್ಕಕ್ಕೆ ಹಾಕಿದ್ದ..
ನಾವು ಅವರ ಬಳಿ `ಹೇಯ್ ಇದು ಶಿರಸಿ ರಿಜಿಸ್ಟ್ರೇಷನ್ನಿನ ಗಾಡಿಯಲ್ಲವಾ..' ಎಂದರೆ `ಅಲ್ಲರಿ ಇದು ಮಂಡ್ಯದ್ದು ಎಂದ.. ಮತ್ತೆ ನಂಬರ್ ಪ್ಲೇಟ್ ಎಂದಾಗ ಈ ಟೆಂಪೋವನ್ನು ಶಿರಸಿಯ ಒಬ್ಬರ ಬಳಿಯಿಂದ ತಂದೆ ಎಂದ..
ನಾವು ನಮಸ್ಕಾರ ತಂದೆ ಎಂದೆವು...
ಮುಂದೆ ಮತ್ತೊಂದೆರಡು ಕಿ.ಮಿ ಅರಾಮಾಗಿ ಸಾಗಿ ಗುಡ್ಡದ ನೆತ್ತಿಯೊಂದರ ವ್ಯೂ ಪಾಯಿಂಟಿನಲ್ಲಿ ಕಿಟ್ಟು, ಮೋಹನರ ಸವಾರಿಗಾಗಿ ಕಾಯುತ್ತ ಕುಳಿತೆವು..
ಸುಮಾರು 5-6 ನಿಮಿಷದ ನಂತರ ಬಂದರು..
ಬಂದವರೇ ಎತ್ಲಾಗ್ ಹಾಳಾಗ್ ಹೋಗಿದ್ರಲೆ... ಎಂದು ಬೈಗುಳ, ಹಿಡಿಶಾಪದ ಮಂತ್ರಾಕ್ಷತೆಯನ್ನು ಪ್ರೋಕ್ಷಣ್ಯ ಮಾಡಿದರು..
ನಮ್ಮ ಚೇಸಿಂಗ್ ಸೀನಿನ ಸಾರಾಂಶವನ್ನು ಥೇಟು ನಮ್ಮ ಇಂಗ್ಲೀಷ್ ಎಕ್ಸಾಂ ಸಮ್ಮರಿ ಬರೆದಂತೆ ಹೇಳಿದೆವು..

ಒಟ್ಟಾಗು ಮುಂದಡಿ ಇಡುತ್ತಿರಲು ಮದ್ಯಾಹ್ನ ದಾಟಿ ಕತ್ತಲಿನ ಕುರುಹು ಸುಳಿ ಸುಳಿದು ಬರುತ್ತಿತ್ತು,,,
ಕಳಗೆಲ್ಲೋ ಗುಡಲೂರಿನ ದೀಪಗಳು ಮಿಣುಕುತ್ತಿದ್ದವು..
ಸುತ್ತಿ ಬಳಸಿ ಇಳಿಯುತ್ತಿರಲು ಅಲ್ಲೊಂದು ಬೋಳು ಗುಡ್ಡ ಕಣ್ಣಿಗೆ ಬಿತ್ತು..
ಇದನ್ನೆಲ್ಲೋ ನೋಡಿದ್ದೀವಲ್ಲಾ ಎನ್ನುವ ಕ್ವಶ್ಚನ್ ಮಾರ್ಕ್ ತಲೆಯೊಳಗೆ..
ನೋಡಿದರೆ ಅದು ಶೂಟಿಂಗ್ ಸ್ಪಾಟ್ ಅಂತೆ..
ಕನ್ನಡದ ಸೇರಿದಂತೆ ಹಲವಾರು ಭಾಷೆಯ ಸಿನೆಮಾಗಳು ಅಲ್ಲಿ ಶೂಟಿಂಗ್ ಆಗಿವೆ ಎನ್ನುವ ವರದಿಗಳು ಸ್ಥಳೀಯರಿಂದ ಸಿಕ್ಕವು..
ಓಹೋ.. `ಹಂ ಆಪ್ ಕೆ ಹೈ ಕೌನ್...' ನೆನಪಾಯಿತು.. ಅಲ್ಲಿ ನೋಡಿದ್ದು ಕೂಡ ಜ್ಞಾಪಕಕ್ಕೆ ಬಂದಿತು..
ಅಲ್ಲೊಂದು ಗೂಡಂಗಡಿ..
ಕಪ್ಪು ಸುಂದರಿಯೊಬ್ಬಳು ಚಹಾ ತಯಾರಿಸುವಲ್ಲಿ ನಿರತಳಾಗಿದ್ದಳು..
ನಾವು  ಹೇಳುವುದು ಆಕೆಗೆ ಅರ್ಥವಾಗಿಲ್ಲವೇನೋ..
ಚಹಾ ಕೊಡಲು ಹಿಂದು ಮುಂದು ನೋಡಿದಳು..
ಕೊನೆಗೂ ಕೊಟ್ಟಳು ಎನ್ನಿ...

ಅಮತೂ ಇಂತೂ ನಮ್ಮ ಪಯಣ ಗುಡಲೂರನ್ನು ತಲುಪಿತು..
ಇದೊಂತರಾ ವಿಚಿತ್ರ ಊರು..
ಊಟಿಯ ಗುಡ್ಡಗಳು ಆರಂಭಗೊಳ್ಳುವ ಮೊದಲ ಮೆಟ್ಟಿಲ ಮೇಲೇ ಇದೆ.. ಒಂದು ದಿಕ್ಕೆಗೆ ಅಗಾಧ ಗುಡ್ಡ.. ಇನ್ನುಳಿದ ಕಡೆಗಳಲ್ಲಿ ಬಯಲೋ ಬಯಲು..
ಮೂರು ಕಡೆಗಳಲ್ಲಿ ಕರ್ನಾಟಕ, ಕೇರಳ ಸುತ್ತುವರಿದಿದೆ..
ಇನ್ನೊಂದು ಕಡೆ ತಮಿಳುನಾಡಿಗೆ ಜೋತಾಡುತ್ತಿರುವ ಗುಡಲೂರು ತಮುಳುನಾಡಿನ ರಾಜ್ಯದ್ದು..
ಮೈಸೂರಿಗರು, ವಯನಾಡಿಗರ ಬಳಕೆ ಜಾಸ್ತಿ..
ಅಪರೂಪಕ್ಕೆ ಕನ್ನಡ ಮಾತಾಡುವವರೂ ಸಿಗುತ್ತಾರೆ...
ನಮ್ಮ ಸಿರಸಿಯಷ್ಟೇ ದೊಡ್ಡದಿರಬೇಕು..
ಸುಖೋಷ್ಣ ವಾತಾವರಣ..
ಊಟಿಯಂತೆ ಐಸ್ ಪೈಸ್ ಅಲ್ಲ...ಬೆಚ್ಚಗೆ..

ರೂಮು ಹುಡುಕಬೇಕಲ್ಲ...
ಒಂದೆರಡು ಕಡೆಗಳಲ್ಲಿ ಕೇಳಿದೆವು..
ಡಬ್ಬಾ ಆಗಿತ್ತು..
ರೂಮ್ ನೋಡಿದವರೇ ಓಡಿ ಬಂದೆವು..
ಕೊನೆಗೊಂದು ಉತ್ತಮ ಲಾಡ್ಜಿನಲ್ಲಿ ರೂಮು ಹಿಡಿದೆವು..
ನಾಲ್ವರಿಗೆ ಒಂದೇ ಕೋಣೆ..
ರೂಮು ದೊಡ್ಡದಿತ್ತು.. ಚನ್ನಾಗಿತ್ತು..
ಟಿವಿ ಇರಬೇಕೆಂಬ ನಮ್ಮ ಬೇಡಿಕೆಗೆ ಓಕೆ ಸಿಕ್ಕಿತ್ತು..
ಬಂದವರು ಫ್ರೆಷ್ ಆದೆವು..
ಹೊಟ್ಟೆ ತಾಳ ಹಾಕುತ್ತಿತ್ತು...
ಅದ್ಯಾವುದೋ ಹೊಟೆಲಿಗೆ ಹೋಗಿ ಮಸಾಲಾ ದೋಸಾ ಆರ್ಡರ್ ಮಾಡಿ ತಿಂದೆವು..
ನಂತರ ಗುಡಲೂರು ಸುತ್ತಲು ಹೊರಟೆವು..
ಕೊಳ್ಳುವ ಕ್ರಿಯಾ, ಕರ್ಮಗಳು ಮುಗಿದಿತ್ತು..
ಇಲ್ಲಿ ಕೊಳ್ಳಲು ಹೋಗಲಿಲ್ಲ..
ಊರು ಚನ್ನಾಗಿದೆ..ಹುಡುಗಿಯರು ಚಂದ  ಇಲ್ಲ.. ವಾತಾವರಣ ದೂಳು ಧೂಳು..
ಆದರೂ ಒಂಥರಾ ಓಕೆ.. ಎನ್ನುವುದು ಗುಡಲೂರಿನ ಕುರಿತು ನಮ್ಮ ವಿವರಣೆ..
ಇಲ್ಲಿ ವಯನಾಡಿಗೆಷ್ಟು ದೂರ, ಹೋಗುವುದು ಹೇಗೆ ಎನ್ನುವ ಕುರಿತು ಕೇಳಿ ತಿಳಿದುಕೊಂಡೆವು..
ಮುಂಜಾನೆದ್ದು ವಯನಾಡಿಗೆ ಹೋಗಬೇಕು .. ಮಂಝಿನ ಹನಿಯಲ್ಲಿ ಇಬ್ಬನಿಯ ಧಾರೆಯ ನಡುವೆ ಖುಷಿ ಪಡಬೇಕು ಎನ್ನುವ ಕನಸುಗಳ ಸರಮಾಲೆ ನಮ್ಮದು.
ರೂಮಿಗೆ ಮರಳಿದೆವು..
ಊಟಕ್ಕೆ ಹೋಗಬೇಕು..
ಹುಡುಕಿ ಹುಡುಕಿ ಯಾವುದೋ ಒಂದು ಹೊಟೆಲಿಗೆ ಹೋದೆವು..
ಆದರೆ ಆ ಹೋಟೆಲಿನಲ್ಲಿ 10-15 ನಿಮಿಷ ಕಳೆದರೂ ಯಾವೊಬ್ಬ ಸಪ್ಲಾಯರ್ ಆಸಾಮಿಯೂ ನಮ್ಮತ್ತ ಸುಳಿಯುತ್ತಿಲ್ಲ..
ಬೇಸರ, ಹಸಿವೆ.. ಸಿಟ್ಟು ಬರುತ್ತಿತ್ತು..
ದೂರದಿಂದ ಮ್ಯಾನೇಜರ್ ನಮ್ಮನ್ನು ನೋಡುತ್ತಿದ್ದನಾದರೂ ಏನ್ ಬೇಕು ಎಂದು ಕೇಳುತ್ತಿರಲಿಲ್ಲ..
ಹಾಳಾದ ತಮಿಳಿನಲ್ಲಿ ಊಟಕ್ಕೇನೆನ್ನುತ್ತಾರೆ ಎನ್ನುವುದು ಪ್ರಶ್ನೆಯಾಗಿತ್ತು..

ಊಟಿಯ ಬೋಟಾನಿಕಲ್ ಗಾರ್ಡನ್
ನಮ್ಮೂರಿಗೆ ಬಿದಿರಿನ ಚಾಪೆ ಮಾಡಿಕೊಡಲು ಬರುತ್ತಿದ್ದ ಸುಬ್ರಮಣಿ ತರಿಕೆರೆ ಎಂಬಾತ ನನಗೆ ಯಾವಾಗಲೂ ತಮಿಳಿನಲ್ಲಿ ಊಟಕ್ಕೆ ಸಾಪಡ ಎಂದು ಹೇಳಿದ್ದು ನೆನಪಾಗೆ ಮಿತ್ರರ ಬಳಿ ಹೇಳಿದೆ..
ಅವರು ಸಾಪಡ ಕೇಳಿ ನೋಡು.. ಎಂದರು..
ನಾನು ಮ್ಯಾನೇಜರ್ ಬಳಿ ಕುಳಿತಲ್ಲಿಂದಲೇ ಸಾಪಡ ಅಂದೆ..
ಆತ ತಲೆಯಲ್ಲಾಡಿಸಿ ಸಾಪಡ ಅಂದ..
ನಾನು ಮತ್ತೆ ಸಾಪಡ ಅಂದೆ.. ಆತನೂ ಸಾಪಡ ಸಾಪಡ ಅಂದ..
ಅರೇ ಇದೇನಿದು..? ಅಂದುಕೊಂಡೆ...
ಮತ್ತೆರಡು ಬಾರಿ ಸಾಪಡ ಅಂದಾಗಲೂ ಮ್ಯಾನೇಜರ್ ಅದನ್ನು ರಿಪೀಟ್ ಮಾಡಿದ..
ದೋಸ್ತರು ನಗಲು ಆರಂಭಿಸಿದರು..
ಎಲ್ಲಾದರೂ ಬೇರೆ ಶಬ್ದ ಹೇಳಿದೆನೆ..? ಸಾಪಡ್ ಎಂದರೆ ಊಟವೇ ಅಲ್ಲವೇ ಎನ್ನುವ ಅನುಮಾನದ ಕಿಡಿ ಮನದೊಳಗೆ..
ಕೊನೆಗೆ ಮತ್ತೈದು ನಿಮಿಷದ ನಂತರ ಸಪ್ಲಾಯರ್ ಬಂದ ..
ಆತನ ಬಳಿ ನಮ್ಮ ಹರುಕು ಮುರುಕು ಭಾಷೆಯಲ್ಲಿ  ಊಟದ ಕುರಿತು ಹೇಳಿದೆವು..
ಆತ ತಂದ.. ಸಿಕ್ಕಿದ ಖುಷಿಯಲ್ಲಿ ಉಂಡೆವೋ ಉಂಡೆವು..
ರೂಮಿಗೆ ಬಂದವರೇ ಗಡದ್ದು ನಿದ್ದೆ...
ಮರುದಿನದ ವಯನಾಡಿನ ಕನಸು ಬೆಚ್ಚಗೆ ಮೊಳೆಯುತ್ತಿತ್ತು...

(ಮುಂದುವರಿಯುತ್ತದೆ)