Wednesday, July 24, 2013

ಮರೆಯಾದ ರಾಯ್ಕರ್ ಮಾಸ್ತರ್

ರಾಯ್ಕರ್ ಮಾಸ್ತರ್ ಎಂದು ಖ್ಯಾತಿಗಳಿಸಿದ್ದ ರಾಮಚಂದ್ರ ಗುರುರಾವ್ ರಾಯಕರ್ ಅವರು ಕಲಾವಿದರಾಗಿ, ಶಿಕ್ಷಕರಾಗಿ, ಬರಹಗಾರರಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ಸಂಗ್ರಹಗಾರರಾಗಿ ಗಳಿಸಿದ ಹೆಸರು ಅಪಾರವಾದುದು. ತಮ್ಮ ಜೀವಿತಾವಧಿಯಲ್ಲಿ ಸಾವಿರಾರು ಚಿತ್ರಗಳನ್ನು ಬಿಡಿಸಿದ್ದಾರೆ. ವಾಟರ್ ಕಲರ್, ಆಯಿಲ್ ಪೇಂಟಿಂಗ್, ರೇಖಾಚಿತ್ರ ಈ ಮುಂತಾದ ಚಿತ್ರಕಲಾ ಬಗೆಗಳಲ್ಲಿ ರಾಯ್ಕರ್ ಮಾಸ್ತರರದ್ದು ಎತ್ತಿದ ಕೈಯಾಗಿತ್ತು. ಈ ಪ್ರಕಾರಗಳಲ್ಲಿ ಅವರು ಬಿಡಿಸಿದ ಚಿತ್ರಗಳು ಖ್ಯಾತಿಯನ್ನು ಗಳಿಸಿಕೊಂಡಿವೆ.
    ರಾಯ್ಕರ್ ಮಾಸ್ತರರು ಜನಿಸಿದ್ದು 1924ರ ಅಗಸ್ಟ್ 30ರಂದು. ಮಾರಿಕಾಂಬಾ ದೇವಸ್ಥಾನದಲ್ಲಿ ದೇವಿಯ ಸುವರ್ಣ ಕಿರೀಟವನ್ನು ರಚಿಸಿದ ಖ್ಯಾತಿಯನ್ನು ಗಳಿಸಿರುವ ನಟ, ಸಾಹಿತಿ ದಿ. ಗುರುರಾವ್ ರಾಮಚಂದ್ರ ರಾಯಕರ್ ಹಾಗೂ ನಾಗಮ್ಮ ದಂಪತಿಗಳಿಗೆ ಜನಿಸಿದ ರಾಯ್ಕರ್ ಮಾಸ್ತರ್ ಅವರು ಮುಂಬಯಿಯ ಸರ್. ಜೆ. ಜೆ. ಕಲಾ ಶಾಲೆ, ಹುಬ್ಬಳ್ಳಿಯ ಡಾ. ಎಂ. ವಿ. ಮಿಣಜಗಿ ಕಲಾಶಾಲೆ, ಧಾರವಾಡದ ಡಿ. ವಿ. ಹಾಲಭಾವಿ ಕಲಾಶಾಲೆ, ಶಿರಸಿಯ ಮಾರಿಕಾಂಬಾ ಪ್ರೌಢಶಾಲೆ ಹಾಗೂ ಮುಂಬಯಿಯ ರಾಜ್ಯಾಧ್ಯಕ್ಷ ಕುಶಲ ಕೈಗಾರಿಕಾ ಶಾಲೆಗಳಲ್ಲಿ ಅಧ್ಯಯನ ಮಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿದ್ದರು.
    ನಗರದ ಮಾರಿಕಾಂಬಾ ಹೈಸ್ಕೂಲಿನಲ್ಲಿ 1947ರಿಂದ 1980ರ ವರೆಗೆ 33 ವರ್ಷ ಚಿತ್ರಕಲಾ ಶಿಕ್ಷಕರಾಗಿ ವಿದ್ಯಾದಾನ ಮಾಡಿದ ರಾಯ್ಕರ್ ಮಾಸ್ತರರ ಶಿಷ್ಯವೃಂದ ಬಹುದೊಡ್ಡದು. ಅವರ ಶಿಷ್ಯರಲ್ಲಿ ಬಹಳಷ್ಟು ಜನರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರನ್ನು ಮಾಡಿದ್ದಾರೆ. ನಾಡಿನ ಹೆಸರಾಂತ ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಕೂಡ ರಾಯ್ಕರ ಮಾಸ್ತರರ ಶಿಷ್ಯರಾಗಿದ್ದರು. ಕಾರ್ನಾಡರು ಶಿರಸಿಗೆ ಭೇಟಿ ನೀಡಿದಾಗಲೆಲ್ಲ ರಾಯ್ಕರ ಮಾಸ್ತರರನ್ನು ಭೇಟಿಯಾಗದೇ ಮರಳುವುದೇ ಇಲ್ಲ. ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ಗಿರೀಶ ಕಾರ್ನಾಡರು ರಾಯಕರ್ ಮಾಸ್ತರರ ಪ್ರಭಾವ ನನ್ನ ಮೇಲೆ ಉಂಟಾಗಿದೆ ಎಂದು ಆಗಾಗ ಹೇಳಿದ್ದೂ ಇದೆ.
    ಜಿಲ್ಲೆಯಲ್ಲಿ ರಾಯ್ಕರ್ ಮಾಸ್ತರ್ ಎಂದರೆ ಅವರಿಗೊಂದು ಘನತೆಯಿದೆ. ಸರಳ, ಸಜ್ಜನಿಕೆಯ ವ್ಯಕ್ತಿಯಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ರಾಯ್ಕರ್ ಮಾಸ್ತರ್ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರ ಅತ್ಯಂತ ಸಮೀಪವರ್ತಿಗಳಾಗಿದ್ದರು. ರಾಮಕೃಷ್ಣ ಹೆಗಡೆಯವರು ಆಗಾಗ ರಾಯ್ಕರ್ ಮಾಸ್ತರರ ಮನೆಗೆ ಆಗಮಿಸಿ ಅವರ ದೊಡ್ಡ ಮನೆಯ ಮಹಡಿಯ ಮೇಲೆ ಹರಟೆ ಹೊಡೆಯುತ್ತಿದ್ದರು ಎಂಬುದು ರಾಯ್ಕರ್ ಮಾಸ್ತರ್ ಹಾಗೂ ರಾಮಕೃಷ್ಣ ಹೆಗಡೆಯವರ ನಡುವಿನ ಆತ್ಮೀಯತೆಯನ್ನು ವಿವರಿಸುತ್ತದೆ. ಇವರಲ್ಲದೇ ಗೋಪಾಲಕೇಷ್ಣ ಹೆಗಡೆ ಕೆರೆಮನೆ ಮುಂತಾದ ಅನೇಕ ಹಿರಿಯ ಚೇತನಗಳು ರಾಯ್ಕರ್ ಮಾಸ್ತರರ ಒಡನಾಡಿಗಳಾಗಿದ್ದರು. ಮಿತ್ರರ ಬಳಗ ಜೊತೆ ಸೇರಿದಾಗಲೆಲ್ಲ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಚಿಂತನೆ ನಡೆಸುತ್ತಿದ್ದರು.
    ರಾಯ್ಕರ್ ಮಾಸ್ತರರು ಕಲಾವಿದರಾಗಿ ಮಾಡಿದ ಸಾಧನೆ ಅಪಾರ. ಅಂದಿನ ದಿನಮಾನದಲ್ಲಿ ರಾಜ್ಯದಲ್ಲಿ 15 ಕಡೆಗಳಲ್ಲಿ, ದಿಲ್ಲಿಯಲ್ಲಿ 2 ಸಾರಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. 1957ರಲ್ಲಿ ಶಿರಸಿಯಲ್ಲಿ ಜರುಗಿದ ಅಖಿಲಭಾರತ ಮಲೆನಾಡ ಸಮ್ಮೇಳನ, ಅಖಿಲ ಭಾರತ ಅಡಿಕೆ ಸಮ್ಮೇಳನದ ಬೃಹತ್ ಮಹಾದ್ವಾರಗಳನ್ನು ಶಿಲ್ಪದ ಮಾದರಿಯಲ್ಲಿ ತಯಾರಿಸಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅನೇಕ ಪುಸ್ತಕಗಳ, ಸ್ಮರಣ ಸಂಚಿಕೆಗಳ ಮುಖಚಿತ್ರ ರಚಿಸಿದ್ದಾರೆ. ನಾಡಿನ ಹೆಸರಾಂತ ವ್ಯಕ್ತಿಗಳ ಭಾವಚಿತ್ರವನ್ನು ಚಿತ್ರಿಸಿದ ಕೀರ್ತಿ ಇವರದ್ದಾಗಿದೆ. ಇವರು ಚಿತ್ರಿಸಿದ್ದ ಬಾದಾಮಿ, ಕಾರವಾರ, ಯಾಣ ಹಾಗೂ ಹಂಪೆಯ ಜಲವರ್ಣ ಚಿತ್ರಗಳು ಸುಪ್ರಸಿದ್ಧವಾಗಿದೆ. 1959ರಲ್ಲಿ ಕುಮಟಾದ ಗಿಬ್ ಹೈಸ್ಕೂಲಿನ ಚಿನ್ನದ ಹಬ್ಬದ ಸಂದರ್ಭದಲ್ಲಿ ನೀಡಿದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ನೋಡಿದ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದು ರಾಯ್ಕರರ ಗರಿಮೆಯಾಗಿದೆ.
    ರಾಯ್ಕರ್ ಮಾಸ್ತರರು 12 ವರ್ಷ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ, ರಾಜ್ಯ ಮತ್ತು ಕೈಗಾರಿಕಾ ಮಂಡಳಿಯ ಸದಸ್ಯರಾಗಿ, ರಾಜ್ಯ ಚಿತ್ರಕಲಾ ಪರೀಕ್ಷಾ ಮಂಡಳಿ ಸದಸ್ಯರಾಗಿ, ಮೈಸೂರು ದಸರಾ ಉತ್ಸವ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಲ್ಲದೇ 1991ರಲ್ಲಿ ರಾಜ್ಯದ ಅಕಾಡೆಮಿಗಳ ಸುಧಾರಣಾ ಸಮಿತಿ ಸದಸ್ಯರಾಗಿ, ರಾಜ್ಯ ನಿವೃತ್ತ ಶಿಕ್ಷಕರ ಒಕ್ಕೂಟದ ಸದಸ್ಯರಾಗಿ, ರಾಜ್ಯ ಕಲಾ ಶಿಕ್ಷಣ ಪರಿಶೀಲನಾ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಜಿಲ್ಲಾ ಉತ್ಸವಗಳಾದ ಕದಂಬೋತ್ಸವ ಹಾಗೂ ಕರಾವಳಿ ಉತ್ಸವ, ಉತ್ತರ ಕನ್ನಡ ಜಿಲ್ಲಾ ಸಂಗೀತ ಅಕಾಡೆಮಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ರಾಯ್ಕರ್ ಮಾಸ್ತರರು ಸಾಹಿತ್ಯ ಕ್ಷೇತ್ರದಲ್ಲಿಯೂ ಸೇವೆಯನ್ನು ಮಾಡಿದ್ದು 15 ಪುಸ್ತಕಗಳನ್ನು ಬರೆದಿದ್ದಾರೆ. ಕರ್ನಾಟಕದ ಜಲಪಾತಗಳು, ಕರ್ನಾಟಕದ ಗಿರಿಧಾಮಗಳು, ಕರ್ನಾಟಕದಲ್ಲಿ ಚಿನ್ನ, ಬೆಳ್ಳಿಯ ಕುಶಲ ಕೈಗಾರಿಕೆ ಈ ಮುಂತಾದವುಗಳು ಅವರ ಕೆಲವು ಪ್ರಸಿದ್ಧ ಪುಸ್ತಕಗಳಾಗಿದ್ದವು.
    ಹಲವಾರಿ ಪ್ರಶಸ್ತಿಗಳು, ಗೌರವಗಳು, ಸಂಮಾನಗಳು ದಿ. ಆರ್. ಜಿ. ರಾಯ್ಕರ್ ಅವರನ್ನು ಅರಸಿಕೊಂಡು ಬಂದಿವೆ. 1982ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ರಾಜ್ಯ ಪ್ರಶಸ್ತಿ, 1989ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, 1993ರಲ್ಲಿ ದೆಹಲಿಯ ಅಖಿಲ ಭಾರತ ಕಲೆ ಮತ್ತು ಕೈಗಾರಿಕಾ ಸೊಸೈಟಿಯ ಸುವರ್ಣ ಮಹೋತ್ಸವದಲ್ಲಿ ಸನ್ಮಾನ ಹಾಗೂ ಪ್ರಶಸ್ತಿ ಸೇರಿದಂತೆ ನೂರಕ್ಕೂ ಹೆಚ್ಚು ಪ್ರಶಸ್ತಿಗಳು ಅವರ ಮುಡಿಗೇರಿವೆ. 1980-85ರ ವರೆಗೆ ಶಿರಸಿಯ ಮಾರಿಕಾಂಬಾ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾಗಿ, 1986ರಿಂದ 1989ರ ವರೆಗೆ ಶಿರಸಿಯ ಸುವರ್ಣ ಕೋ-ಆಪ್-ಸೊಸೈಟಿ ಲಿ.ಯ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಪ್ರದಾನ ಕಾರ್ಯದರ್ಶಿಯಾಗಿ, ಉತ್ತರಕನ್ನಡ ಜಿಲ್ಲಾ ಪ್ರವಾಸೋದ್ಯಮ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
    ಪುಸ್ತಕ ಸಂಗ್ರಹಗಾರರಾಗಿ ಹೆಸರು ಮಾಡಿದವರು ರಾಯ್ಕರ್ ಮಾಸ್ತರರು. ಇವರ ಬಳಿ ಸ್ವಂತ ಗ್ರಂಥ ಬಂಢಾರವಿತ್ತು. ಕಲೆ, ಚಿತ್ರಕಲೆ, ಶಿಲ್ಪಕಲೆ, ವಾಸ್ತುಶಿಲ್ಪ, ಪ್ರವಾಸ ಸಾಹಿತ್ಯ, ಶಿಕ್ಷಣ, ಚಿಂತನೆ, ಯೋಗ, ಧಾರ್ಮಿಕ, ಜೀವನಚರಿತ್ರೆ, ಗೆಝೆಟಿಯರ್, ವೈದ್ಯಕೀಯ, ಜಾನಪದ, ಕ್ಷೇತ್ರದರ್ಶನ, ಸ್ಮರಣ ಸಂಚಿಕೆ ಸೇರಿದಂತೆ 10 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು ಅವರ ಸಂಗ್ರಹದಲ್ಲಿದ್ದವು. ತಮ್ಮ ಜೀವನದಲ್ಲಿ 60 ವರ್ಷಗಳ ಕಾಲ ಪುಸ್ತಕ ಸಂಗ್ರಹದ ಕಾರ್ಯವನ್ನು ನಡೆಸಿಕೊಂಡು ಬಂದಿದ್ದರು. ಉತ್ತರಕನ್ನಡದ ಮೊಟ್ಟ ಮೊದಲ ಪತ್ರಿಕೆ ಎನ್ನುವ ಖ್ಯಾತಿಗಳಿಸಿರುವ ಹವ್ಯಕ ಸುಬೋಧ ಪತ್ರಿಕೆ ಕೂಡ ಇವರ ಸಂಗ್ರಹದಲ್ಲಿದೆ. ಇಷ್ಟೇ ಅಲ್ಲದೇ ಪ್ರಾಚೀನ ನಾಣ್ಯಗಳು, ವಿವಿಧ ಭಂಗಿಯ ಗಣೇಶನ ಮೂರ್ತಿಗಳು, ಮೆಡಲುಗಳು, ಸ್ಟಾಂಪುಗಳು, ಪ್ರಪ್ರಥಮ ಪೋಸ್ಟ್ ಕವರುಗಳು, ಕೀ ಚೈನುಗಳು, ಅತ್ತರ್ ಬಾಟಲಿಗಳು, ಪ್ರಾಚೀನ ಮೂರ್ತಿಗಳು, ನಿಶಾನೆಗಳು, ಮಾನಪತ್ರಗಳು, ನೆನಪಿನ ಕಾಣಿಕೆಗಳು ಹೀಗೆ ಇನ್ನೂ ಹಲವಾರು ಅಪರೂಪದ ತಸ್ತುಗಳನ್ನು ಸಂಗ್ರಹಿಸುವ ಹವ್ಯಾಸವನ್ನು ರಾಯ್ಕರ್ ಮಾಸ್ತರರು ಬೆಳೆಸಿಕೊಂಡಿದ್ದರು.
    ತಮ್ಮ ಇಳಿ ವಯಸ್ಸಿನಲ್ಲಿ ಅಮೇರಿಕಾ ಹಾಗೂ ಸಿಂಗಾಪುರ ಯಾತ್ರೆಗಳನ್ನೂ ರಾಯ್ಕರ್ ಮಾಸ್ತರರು ಕೈಗೊಂಡಿದ್ದರು. ಬಿಡುವಾದಾಗ ಭಾರತ ಸುತ್ತುವ ಕೆಲಸದಲ್ಲಿ ತಲ್ಲೀನರಾಗುತ್ತಿದ್ದ ರಾಯಕರ್ ಮಾಸ್ತರರು ತಾವು ಪ್ರವಾಸ ಮಾಡಿದ ಕುರಿತು ಸುಂದರವಾಗಿ ಬರಹದ ರೂಪದಲ್ಲಿ ಮೂಡಿಸುತ್ತಿದ್ದರು. ವಯೋಸಹಜ ಕಾರಣದಿಂದಾಗಿ ತಮ್ಮ ಕೊನೆಗಾಲದಲ್ಲಿ ಚಿತ್ರಕಲೆಯನ್ನು ನಿಲ್ಲಿಸಿದರೂ ಬರವಣಿಗೆ, ಸಂಗ್ರಹಕಾರನ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದರು. ಇಷ್ಟೆಲ್ಲ ಸಾಧನೆಗಳನ್ನು ಕೈಗೊಂಡಿದ್ದರೂ ರಾಯ್ಕರ್ ಮಾಸ್ತರರು ಅದನ್ನು ಹೇಳಿಕೊಳ್ಳುತ್ತಿರಲಿಲ್ಲ. ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದರು. ಇಂತಹ ಮಹಾನ್ ಚೇತನ ಇನ್ನಿಲ್ಲವಾಗಿದೆ. ಇಂದಿನ ಪೀಳಿಗೆಗೆ, ಸಮಾಜಕ್ಕೆ ಆದರ್ಶಪ್ರಾಯವಾಗಿದ್ದ ಕಲಾವಿದ, ಸಾಧಕ, ಅಪರೂಪದ ವ್ಯಕ್ತಿ, ಹಿರಿಯ ಕೊಂಡಿಯೊಂದು ಕಳಚಿದೆ.
ರಾಜ್ಯದ ಹೆಸರಾಂತ ಕಲಾವಿದಕೊಂಡಿಯೊಂದು ಕಳಚಿದೆ. ಸರಳ, ಸಜ್ಜನಿಕೆಯ ಮೂರ್ತರೂಪದಂತಿದ್ದ ಆರ್. ಜಿ. ರಾಯ್ಕರ್ ಅವರ ನಿಧನದಿಂದಾಗಿ ಕಲಾಲೋಕ ಬಡವಾಗಿದೆ. ಬಹುರಂಗಗಳಲ್ಲಿ ಕೆಲಸ ಮಾಡಿದ್ದ ಅವರ ಸಾಧನೆ ಇಂದಿನವರಿಗೆ ಸ್ಪೂರ್ತಿದಾಯಕವಾದುದು.

Friday, July 19, 2013

ಪ್ರೇಮಪತ್ರ-5, ಕಂಡು ಕಾಡುವ ಗೆಳತಿಯಲ್ಲಿ ಪ್ರೇಮ ನಿವೇದನೆ

ಪ್ರೀತಿಯ ಗೆಳತಿ,
 ಮತ್ತೆ ಮತ್ತೆ ಮಧುರ ಅನುಭವ ನೀಡಲೆಂಬಂತೆ ವರ್ಷಕ್ಕೊಮ್ಮೆ ಅವತರಿಸಿ ಬರುವ ಪ್ರೇಮಿಗಳ ದಿನದ ಮೆಲುಕು ಹಾಕುತ್ತಾ, ನನ್ನೆದೆಯ ಅಂತರಾಳದೊಳಗೆ ಹಲ ದಿನಗಳಿಂದ ಗೂಡು ಕಟ್ಟಿ ಹೊರಬರಲು ತವಕಿಸುತ್ತಿರುವ ಪ್ರೀತಿಯೆಂಬ ರೆಕ್ಕೆ ಬಲಿತ ಹಕ್ಕಿಯ ಬಗ್ಗೆ ತಿಳಿಸುತ್ತೇನೆ.
    ಗೆಳತಿ.., ಸ್ಪಷ್ಟವಾಗಿ ಹೇಳುತ್ತಿದ್ದೇನೆ.. ನಾ ನಿನ್ನ ಮನಸಾರೆ ಇಷ್ಟಪಟ್ಟಿದ್ದೇನೆ. ನನ್ನ ಜೀವಕ್ಕಿಂತ ಹೆಚ್ಚು ನಿನ್ನನ್ನು ನನ್ನ ಮನದೊಳಗೆ ಆದರಿಸಿಕೊಂಡಿದ್ದೇನೆ. ಕಣ್ಣ ರೆಪ್ಪೆಯ ಪರದೆಯ ಮೇಲೆ ನಿನ್ನದೇ ಹೊನ್ನ ಬಿಂಬವನ್ನು ಚಿತ್ರಿಸಿಕೊಂಡಿದ್ದೇನೆ.
ನಿಂಗೊತ್ತಲ್ಲ ಗೆಳತಿ..,
    ಲವ್ ಎಟ್ ಫಸ್ಟ್ ಸೈಟ್ ಅಂತ ಹೇಳ್ತಾರೆ.. ಆವೊತ್ತು ಕಾಲೇಜಿನ ಅಡ್ಮಿಷನ್ನಿಗೆಂದು ನಾ ಬಂದ ದಿನವೇ ನೀನೂ ಬಂದಿದ್ದೆ. ಆಗ ಎದುರಿಗೆ ಸಿಕ್ಕ ನನ್ನ ಗುರುತು ಪರಿಚಯ ಇಲ್ಲದಿದ್ದರೂ ಕೂಡ ಚಿಕ್ಕದೊಂದು ಮುಗುಳು ನಗೆಯನ್ನು ಇರಲಿ ತಗೋ ಎಂದು ಎಸೆದು ಹೋಗಿದ್ದೆ. ಆ ದಿನವೇ ನಿನ್ನದೊಂದು ಬಿಂಬ ನನ್ನ ಮನದೊಳಗೆ ಚಿತ್ರಣಗೊಂಡೆಬಿಟ್ಟಿತ್ತು.
    ಆಮೇಲೆ ಕಾಲೇಜು ಪ್ರಾರಂಭವಾದ ನಂತರ ನಿಧಾನವಾಗಿಯಾದರೂ ನಿನ್ನ ಪರಿಚಯವಾಗಿಬಿಡ್ತು.ಪರಿಚಯವಾದ ನಂತರ ಗೊತ್ತೇ ಇದೆಯಲ್ಲಾ ಮಾತು-ಕಥೆ, ಹರಟೆ, ಇತ್ಯಾದಿ ಇತ್ಯಾ.. ಮೆರೆದು ಬಿಟ್ಟಿತು. ಬಂದ ಕೆಲವೇ ದಿನದಲ್ಲಿಯೇ ನೀನು ನಂಗೆ ಅದೆಷ್ಟು ಆತ್ಮೀಯವಾಗಿಬಿಟ್ಟೆ ಮಾರಾಯ್ತಿ.. ಅಂತಹ ಮಧುರ ಮನದ ಹಲ ಕೆಲ ಮಾತುಗಳ ನಡುವೆಯೇ ನನ್ನ ಎದೆಯೊಳಗೆ ನಿನ್ನ ಎಡೆಗೊಂದು ಪ್ರೀತಿಯ ಬೀಚ ಮೊಳಕೆಯೊಡೆದದ್ದು. ಆ ನಂತರದ ದಿನಗಳಲ್ಲಿ ಆ ಪ್ರೀತಿಯ ಬೀಜಕ್ಕೆ ನಾನು ಮಾತು-ಕತೆ, ಕನಸು-ಕವನಗಳ ಇವುಗಳ ಮೂಲಕವೇ ನೀರೆರೆದೆ. ಕೊನೆಗೆ ಆ ಗಿಡ ದೊಡ್ಡದಾಗಿ ಮನದ ತುಂಬಾ ಬಳುಕಿ ನಿಂತಿತು. ಈಗಲೋ ಸುಂದರವಾದ ಹೂ ಬಿಡಲು ಕಾತರಗೊಂಡಿದೆ.
    ನಿಂಗೊತ್ತಿಲ್ಲ ಗೆಳತಿ, ನೀನು ಅದೆಷ್ಟೋ ಸಾರಿ ನನ್ನ ಹತ್ತಿರ ಮಾತನಾಡಿದಾಗಲೆಲ್ಲಾ, ನಾನು ಹಾಗೆ ಮಾತನಾಡಲು ಹೆದರುತ್ತಿದ್ದೆ. ಮಾತುಗಳು ನನಗೆ ಗೊತ್ತಿಲ್ಲದಂತೆಯೇ ತೊದಲುತ್ತಿದ್ದವು. ಪ್ರೀತಿಯ ಮೊದಲ ಮಜಲೇ ಭಯವಂತೆ.. ಅದಕ್ಕೆ ನನಗೆ ಹಾಗೆ ಆಯ್ತೇನೋ.. ಅಲ್ವೇನೆ..?
    ಆ ನಂತರದ ದಿನಗಳಲ್ಲಿ ಅದೆಷ್ಟೋ ಸಾರಿ ನಾನು ನಿಂಗೆ ನನ್ನ ಮನದಾಳದ ಭಾವನೆಗಳನ್ನು, ನನ್ನೊಳಗೆ ಅಂಕುರಿಸಿದ್ದ ಈ ಪ್ರೀತಿಯ ಕದಿರನ್ನು ತಿಳಿಸಲು ಪ್ರಯತ್ನ ಪಟ್ಟಿದ್ದೆ ಗೊತ್ತಾ.. ಅದೇಕೋ ಆಗೆಲ್ಲಾ ಕಾಲ ಪಕ್ಷವಗೊಂಡಿರಲಿಲ್ಲವೋ ಅಥವಾ ಮುಹೂರ್ತ ಕೂಡಿಬಂದಿರಲಿಲ್ಲೋ ಏನೋ.. ನನ್ನಿಂದ ನನ್ನ ಪ್ರೇಮವನ್ನು ನಿನ್ನೆದುರು ನಿವೇದಿಸಲು ಆಗಿರಲೇ ಇಲ್ಲ.
    ಗೆಳತಿ.., ನಮ್ಮ ಕಾಲೇಜಿನ ಪುಂಡರ ಗುಂಪು ಅದೆಷ್ಟೋ ಸಾರಿ ನೀನು ನಡೆದು ಹೋಗುತ್ತಿದ್ದಾಗ ನಿನ್ನ ಹಿಂದೆ ನಿಂತುಕೊಂಡು ಏರುದನಿಯಲ್ಲಿ ನಿನ್ನ ಕುರಿತು ಕಾಮೆಂಟುಗಳನ್ನು ಮಾಡುತ್ತಿತ್ತಲ್ಲ ಆಗೆಲ್ಲಾ ನಾನು ಒಳಗೊಳಗೆ ಅದ್ಯಾವಪರಿ ಉರಿದುಬಿದ್ದಿದ್ದೇನೆ., ಸಿಟ್ಟು ಮಾಡಿಕೊಂಡಿದ್ದೇನೆ ಗೊತ್ತಾ.. ಆಗೆಲ್ಲಾ ನಾನು ಈ ಪ್ರೇಮದ ಮೋಡಿಯೇ ಹೀಗಾ ಅಂತ ಯೋಚಿಸಿದ್ದಿದೆ.
    ಸತ್ಯವಾಗ್ಲೂ ಹೇಳ್ತೀನಿ ಗೆಳತಿ, ನಿನ್ನ ಬಗ್ಗೆ ಯಾರಾದ್ರೂ ಏನನ್ನಾದ್ರೂ ಹೇಳಿದ್ರು ಅಂತಂದ್ರೆ ನಾನು ಅದೆಷ್ಟು ದುಃಖವನ್ನು-ಸಿಟ್ಟನ್ನು, ಯಾತನೆಯನ್ನು ಅನುಭವಿಸುತ್ತೀನಿ ಗೊತ್ತಾ..? ಪ್ರೇಮ ಅಂದರೆ ಹಸಿರು, ಮಳೆ, ಬದುಕು ಅಂತೆಲ್ಲ ಹೇಳ್ತಾರೆ. ನನ್ನ ಪಾಲಿಗೆ ಅದು ಸತ್ಯವಾಗಿಬಿಟ್ಟಿದೆ. ಆ ಅಡ್ಮಿಷನ್ನಿನ ದಿನದಂದು ನಿನ್ನನ್ನು ಕಾಣುವ ವರೆಗೂ ನಾನು ಒಂದು ರೀತಿ ಒರಟನಾಗಿದ್ದೆ. ಒರಟುತನಕ್ಕಿಂತ ಹೆಚ್ಚು ಸಿಡುಕುತ್ತಿದ್ದೆ. ತಟ್ಟನೆ ರೇಗುತ್ತಿದ್ದೆ. ಕಾರಣವೇ ಇಲ್ಲದೆ ಜಗಳಕ್ಕೆ ನಿಲ್ಲುತ್ತಿದ್ದೆ. ಸಿಟ್ಟಾಗುತ್ತಿದ್ದೆ. ಸಹನೆಯೇ ಇರುತ್ತಿರಲಿಲ್ಲ. ಆದರೆ ಯಾವಾಗ ನನ್ನೊಳಗೆ ನಿನ್ನ ರೂಪ ಆಹ್ವಾನಗೊಂಡು ಬೇರು ಬಿಟ್ಟು ಕುಳಿತುಕೊಂಡಿತೋ ಆ ಕ್ಷಣದಿಂದಲೇ ನಾನು ಮೃದುವಾಗುತ್ತಾ ಹೋದೆ.. ಕ್ರಮೇಣ ನನ್ನ ಸಿಟ್ಟು, ಒರಟುತನ, ರೇಗುವಿಕೆಗೆ ಬ್ರೇಕ್ ಬೀಳಲಾರಂಭವಾಯಿತು. ಜಗಳಗಂಟತನವಂತೂ ನಾಗರಹಾವು ಪೊರೆ ಬಿಟ್ಟುಹೋಗುವಂತೆ ನನ್ನನ್ನು ಬಿಟ್ಟು ಹೋಯಿತು. ಎಲ್ಲೋ ಅಡಗಿದ್ದ, ನನಗೆ ಗೊತ್ತೇ ಇಲ್ಲದಂತಿದ್ದ ಸಾಪ್ಟ್ ನೆಸ್ ನನ್ನಲ್ಲಿ ತುಂಬಿತು. ಅರ್ಧಮರ್ಧ ಮಾತಿಗೆ ಮುಗಿಯಿತು ಎನ್ನುವಂತಿದ್ದ ನಾನು ತಾಳ್ಮೆಯನ್ನು ಪಡೆದುಕೊಮಡೆ. ನೇರವಾಗುತ್ತ ಹೋದೆ. ಮೌನಿಯಾದೆ. ಈಗ ಯೋಚಿಸು ಗೆಳತಿ.., ನಾನು ಅದ್ಯಾವ ಪರಿ ನಿನ್ನನ್ನು ಪ್ರೀತಿಸುತ್ತಿರಬಹುದು ಅಂತ..!!
    ಇಷ್ಟರ ಜೊತೆಗೆ ಇನ್ನೊಂದು ಮಾತನ್ನೂ ನಾನು ನಿನ್ನೆದುರು ಅರುಹಿ ಬಿಡುತ್ತೇನೆ. .. ನನ್ನಲ್ಲಿ ಮೊಳೆತ ಈ ಪ್ರೀತಿ ನಿಸ್ಸಂದೇಹವಾಗಿಯೂ ನಿಷ್ಕಲ್ಮಷವಾದುದು. ಈ ಪ್ರೀತಿಯಲ್ಲಿ ಕಾಮವಿಲ್ಲ. ಲೋಭವಿಲ್ಲ. ಹುಚ್ಚು ಹುಂಭತನವಿಲ್ಲ. ಬರಿ ಆಕರ್ಷಣೆಯೂ ಅಲ್ಲ. ಇದರಲ್ಲಿ ಸಂದೇಹವೂ ಇಲ್ಲ. ಹಾಗೆಯೇ ಸಂಶಯವೂ ಇಲ್ಲ. ಇದು ಕೇವಲ ಶುದ್ಧ-ಸ್ವಚ್ಛ-ಶುಭ್ರ ಪ್ರೇಮವಷ್ಟೆ. ಇದರಲ್ಲಿ ಅನುಮಾನದ ಚಿಕ್ಕ ಹಸ್ತರೇಖೆಯನ್ನೂ ಕಾಣುವಂತಿಲ್ಲ. ನೀನು ಅದೆಷ್ಟು ಸಾರಿ ಪರೀಕ್ಷಿಸದರೂ ಕೂಡ ಇದರೊಳಗೆ ಭಿನ್ನವಿಲ್ಲ-ಬೇಧವಿಲ್ಲ.
    ಗೆಳತಿ..,
    ಇಷ್ಟು ಹೊತ್ತು ನನ್ನ ಮನದಲ್ಲಿ ನಿನ್ನೆಡೆಗಿನ ಪ್ರೇಮಕ್ಕೊಂದು ಅಕ್ಷರ ರೂಪ ಕೊಟ್ಟಿದ್ದೇನೆ. ಎಲ್ಲೋ.. ಎಂದೋ ಕಣ್ಣಿಗೆ ಕಾಣದಂತೆ ವ್ಯರ್ಥವಾಗಿ ಬಸಿದು ಹೋಗುತ್ತಿದ್ದ ಮನಸ್ಸಿನ ಭಾವನೆಗಳಿಗೆ ಅಷ್ಟೋ ಇಷ್ಟೋ ಎಂಬಂತೆ ಬರಹದ ರೂಪ ಕೊಟ್ಟು ಬಿಟ್ಟಿದ್ದೇನೆ...
    ಇಷ್ಟರ ಮೇಲೆ ಆಯ್ಕೆ ನಿನ್ನದು ಗೆಳತಿ., ನನ್ನ ಪ್ರೀತಿಸ್ತೀಯಾ..? ನಿನ್ನದೊಂದು ಅತ್ಯಂತ ಸ್ಪಷ್ಟವಾದ ನಿಲುವೊಂದನ್ನು ನಗೆ ತಿಳಿಸುತ್ತೀಯಾ, ನೀನು ನನ್ನನ್ನು ಇಷ್ಟಪಡ್ತೀಯಾ ಅಂದ್ಕೊಂಡು ಕನಸಿನ ಆಶಾಗೋಪುರದ ಮೇಲೆ ಹನುಮನಂತೆ ಕುಳಿತಿದ್ದೇನೆ. ಆ ಆಶಾಗೋಪುರವನ್ನು ಗಾಳಿಗೋಪುರ ಮಾಡುವುದಿಲ್ಲ ತಾನೆ..?
    ಕೊನೆಯದಾಗಿ ನೀನು ನನ್ನು ಪ್ರೀತಿಯನ್ನು ಒಪ್ಪಿಕೊಳ್ಳುತ್ತೀಯಾ ಎಂದು ನಂಬಿ ನಿನ್ನ ನಿರ್ಧಾರಕ್ಕಾ ಕಾದಿದ್ದೇನೆ.. ನಿನ್ನ ನಿರ್ಧಾರ ನನ್ನ ಪಾಲಿಗೆ ನಲಿವಾಗಿರಲಿ, ಹಸಿರಾಗಿರಲಿ, ಹಸಿಯಾಗಿರಲಿ ಎಂದು ಬಯಸುತ್ತಿದ್ದೇನೆ..

ಇಂತಿ ನಿನ್ನ ನಿರ್ಧಾರಕ್ಕಾಗಿ
ಕಾದು ಕುಳಿತಿರುವ
ಜೀವನ್

Sunday, July 14, 2013

ಬೆಂಗಳೂರು-ಊಟಿ-ವಯನಾಡು-ಬೆಂಗಳೂರು - ಭಾಗ 5


 
ಕೊಳ್ಳುವುದು ಏನನ್ನು ಎನ್ನುವ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಮೂಡಿತು..
ನನಗೆ ಕ್ರಾಂತಿ ನಾಯಕ `ಚೆ ಗುವೆರಾ' ನ ಚಿತ್ರವಿರುವ ಟಿ ಷರ್ಟ್ ಕೊಳ್ಳಬೇಕು ಎನ್ನಿಸಿತ್ತು..
ದೋಸ್ತರ ಬಳಿ ಹೇಳಿದೆ..
ಅವರಿಗೂ ಹೇಳಿದೆ..
ಮೋಹನನಿಗೆ ಚೆಗುವೆರಾ ನ ಬಗ್ಗೆ ಗೊತ್ತಿರಲಿಲ್ಲವೋ ಅಥವಾ ಬೇಕಂತಲೇ ಹೇಳಿದನೋ ಗೊತ್ತಿಲ್ಲ..
ಜಾಗ್ವಾರ್ ಷರ್ಟ್ ಜಾಗ್ವಾರ್ ಷರ್ಟ್ ಎನ್ನಲು ಶುರುಹಚ್ಚಿಕೊಂಡ..
ನಮಗೆ ತಮಾಷೆಯಾಗಿ ನಗು ಬಂತು..
ಹಿಂದಿನ ಸಾರಿ ನಾನು, ರಾಘು ಊಟಿಗೆ ಬಂದಾಗ ಒಂದು ಅಂಗಡಿಯಲ್ಲಿ ಜರ್ಕಿನ್ನುಗಳನ್ನು ಕೊಂಡಿದ್ದೆವು.. ಅದರತ್ತ ಮುಖ ಮಾಡಿದೆವು..
ನಮಗೆ ಬೇಕಾದಂತಹ ಯಾವುದೇ ಬಟ್ಟೆ ಅಲ್ಲಿ ಸಿಗಲಿಲ್ಲ..
ಇನ್ನೊಂದು ದೊಡ್ಡ ಮಳಿಗೆ..
ನಾವು ಅಪ್ಪಟ ಕನ್ನಡಿಗರು..
ತಮಿಳಿನ ಸಾಪಡ್ ಬಿಟ್ಟರೆ ಇನ್ನೆಂತದ್ದೂ ಗೊತ್ತಿಲ್ಲ..
ಕೊನೆಗೆ ಆ ಮಳಿಗೆಯಲ್ಲಿ ಕನ್ನಡ ಗೊತ್ತಿದ್ದ ತಮಿಳರಿದ್ದರು...
ಅವರು ತಮಿಳರೋ ಅಥವಾ ಕನ್ನಡಿಗರೇ ಹೊಟ್ಟೆಪಾಡಿಗೆ ಅಲ್ಲಿಗೆ ಹೋಗಿದ್ದಾರೋ ಗೊತ್ತಿಲ್ಲ..
 ಆದರೆ ಅವರ ಪ್ರನೌನ್ಸಿಯೇಷನ್ ಮಾತ್ರ ತಮಿಳಿನಂತೆಯೇ ಇತ್ತು.. ಸೋ ತಮಿಳ್ಗನ್ನಡಿಗರೇ ಇರಬೇಕು...
ಅಂದುಕೊಂಡೆವು..
 
ಅಂಗಡಿ ತುಂಬೆಲ್ಲ ನಮನಮೂನೆಯ ಜರ್ಕಿನ್ನುಗಳು ಸ್ವೆಟ್ಟರುಗಳು..
ಯಾವುದನ್ನೇ ಹಿಡಿದರೂ ಕೊಳ್ಳಬೇಕೆನ್ನಿಸುವ ಮೋಹ..
ನಾವು `ವಿಟಮಿನ್ ಎಂ' ಅನ್ನೂ ದೃಷ್ಟಿಯಲ್ಲಿಟ್ಟುಕೊಳ್ಳಬೇಕಲ್ಲ ಮಾರಾಯ್ರೆ..
ಆದ್ದರಿಂದ ನಾವು ನಾಲ್ವರೂ ತಲಾ ಒಂದೊಂದು ಜರ್ಕಿನ್ ಕಂ ಸ್ವೆಟರ್ ಕೊಳ್ಳುವುದು ಎಂಬ ತೀರ್ಮಾನ ಬಹುಮತ ಪಡೆಯಿತು..
ಅದೃಷ್ಟಕ್ಕೆ ಅಲ್ಲಿ ನನ್ನ ಪ್ರೀತಿಯ ಚೆ ಗುವೆರಾ ಷರ್ಟ್ ಇತ್ತು..
ಎಲ್ಲರಿಗೂ ಉಷ್ಟವಾದದ್ದೂ ನನ್ನ ಅದೃಷ್ಟವೇ ಸರಿ..
ನಾಲ್ಕರ ಜೊತೆಗೆ ಒಂದು ಎಕ್ಸ್ ಟ್ರಾ.. ಒಟ್ಟೂ ಐದು ಷರ್ಟ್ ಕೊಂಡೆವು..
ಟ್ರಿಪ್ ಕಳೆದು ಸರಿಸುಮಾರು 3-4 ವರ್ಷ ಕಳೆಯುತ್ತಿದೆ..
ಇಂದಿಗೂ ಚೆಗುವೆರಾ ನನ್ನ ಬಳಿ ಅರಾಮವಾಗಿದೆ.. ಮಳೆಗಾಲದ ತಂಪಿನಲ್ಲಿ, ಚಳಿಗಾಲದ ಕೊರೆಯುವಿಕೆಯಲ್ಲಿ ನನ್ನ ಎದೆಯ ಮೇಲೇರುತ್ತಾನೆ ಆತ.. ಬೆಚ್ಚಗೆ ಮಾಡಿದ್ದಕ್ಕೆ ಥ್ಯಾಂಕ್ಸ್ ಮಾರಾಯ..
ನಿನ್ನ ಕ್ರಾಂತಿಯ ಕಿಡಿಗಳು ಚಿರಾಯುವಾಗಿರಲಿ..
 
ಅಲ್ಲೊಂದು ಅಂಗಡಿ ನಮ್ಮ ಮನಸ್ಸನ್ನು ತಟ್ಟನೆ ಸೆಳೆಯಿತು..
ಅದೊಂದು ಟೆಡ್ಡಿ ಬೇರ್ ಅಂಗಡಿ..
ಸಾವಿರ ಸಾವಿರ ಸಂಖ್ಯೆಯಲ್ಲಿ ಟೆಡ್ಡಿ ಬೇರ್ ಗಳು ಅಲ್ಲಿದ್ದವು..
ಚಿಕ್ಕವು, ದೊಡ್ಡವು, ಪುಟ್ಟವು, ಕೆಂಪು, ನೀಲಿ, ಹಳದಿ, ಗುಲಾಬಿ.. ನಮ್ಮದು ಕೊರತೆಯ ಅರ್ಥಶಾಸ್ತ್ರ,,
ನೋಡಲು ಅರ್ಥಶಾಸ್ತ್ರದ ಲೆಕ್ಖಾಚಾರ ಬೇಕಿಲ್ಲವಲ್ಲ ನೋಡುತ್ತ ನಿಂತೆವು.,.
ಅರೇ/.. ಟೆಡ್ಡಿ ಬೇರ್ ತಲೆಯನ್ನು ಅತ್ತಿತ್ತ ಅಲ್ಲಾಡಿಸುತ್ತಿದೆ..
ಅರೇ.. ನಗುತ್ತಲೂ ಇದೆ.. ನೋಡ ನೋಡುತ್ತಿದ್ದಂತೆಯೇ ಮಾತನ್ನೂ ಆಡಲು ಪ್ರಾರಂಭಿಸಿತು..
ಇದೇನಿದೆ ಎನ್ನುವಷ್ಟರಲ್ಲಿ ಅದೊಂದು ಹುಡುಗಿ..!!
ಅಂಗಡಿಯ ಒಡತಿಯೋ ಯಾರೋ..
ನೇಪಾಳಿಯಂತೆ ಟಾರಿನ ಬಣ್ಣವಲ್ಲ..
ಕಣ್ಣು ಕಿರಿದು.. ಕಿಟ್ಟುವಂತೂ ``ಹ್ವಾ ಇದು ಜಿಂಪೋ ಛೇ... ಕಡೆಯಿರಬೇಕು'  ಅಂದ
ಅಂದರೆ ನೇಪಾಳಿಯೋ.. ಗೂರಖಾವೋ.. ಟಿಬೇಟಿಯನ್ನರೂ ಇರಬೇಕು ಎಂಬುದು ನಮ್ಮ ಅಂದಿನ ಕೋಡ್ ವರ್ಡ್ ಆಗಿತ್ತು..
ಹೌದು.. ಆಕೆ ನೇಪಾಳಿಯೇ..
ಸರಿ ಟೆಡ್ಡಿಯನ್ನು ಕೊಳ್ಳುವ ಮನಸ್ಸಿಲ್ಲ..
ಗೊಂಬೆಗಳನ್ನು ಕೊಳ್ಳುವ ನಾಟಕ ಶುರುಹಚ್ಚಿಕೊಂಡು ಚೌಕಾಸಿಗಿಳಿದೆವು..
ನಮ್ಮಂತವರನ್ನು ಎಷ್ಟುಮಂದಿಯನ್ನು ಆಕೆ ಕಂಡಿದ್ದಳೋ..
ಬಲೆ ಘಾಟಿ.. ಮಾತಿನಲ್ಲೇ ಮೋಡಿ ಮಾಡುವ ಛಾತಿ.. ವ್ಯಾಪರಾದ ಸಕಲ ಎಬಿಸಿಡಿ ಗೊತ್ತಿದ್ದ ಅವಳ ಮುಂದೆ ನಮ್ಮ ಆಟ ನಡೆಯಲಿಲ್ಲ.. ಹಾಗಂತ ನಾವು ಟೆಡ್ಡಿಬೇರ್ ಕೊಳ್ಳಲಿಲ್ಲ ಮಾರಾಯ್ರೆ..
ಹಾಲುಬಿಳುಪಿ ಟೆಡ್ಡಿಯಂತಹ ಹುಡುಗಿಯನ್ನು ನೋಡಿ ಮಾತನಾಡಿ.. ಪುಳಕಿತರಾಗಿ ಮರಳಿದೆವು..
`ಎದೆಯೊಳಗೆ ಗಿಟಾರು ನೂರು...ಮಿಡಿ ಮಿಡಿ ಮಿಡಿದು...'

 
ನಮ್ಮ ಶಾಪಿಂಗು ಮುಗಿಯಿತು...
ಇನ್ನೇನು ಮಾಡುವುದು..?
ಬೊಟಾನಿಕ್ಕಲ್ ಗಾರ್ಡನ್ ಸೆಳೆಯಲಿಲ್ಲ..
ಪ್ರಾಥಮಿಕ ಶಾಲೆಯ ಪಾಠದಲ್ಲಿ ಓದಿದ್ದ ಅದು ನಮ್ಮಲ್ಲಿ ಬೆರಗನ್ನು ಮೂಡಿಸಲಿಲ್ಲ..
ನೇಮಿ ಚಂದ್ರರ ಅವರು ಹೇಳಿವಂತೆ `ನಾ ಓಡಿ ಓಡಿ ಮುಟ್ಟಿದ ಬೆಟ್ಟದ ತುದಿಯಲ್ಲಿ ಏನಿದೆ ಬಟ್ಟಾ ಬಯಲು' ಎನ್ನುವಂತೆ ಭಾಸವಾಯಿತು.. ಅಲ್ಲಿನ ಮರಗಿಡಗಳನ್ನು ಕತ್ತರಿಸಿ, ಬಗ್ಗಿಸಿ ವಿವಿಧ ಆಕೃತಿಗಳನ್ನಾಗಿ ಮಾಡಿದ್ದು ನಮ್ಮನ್ನು ಕಾಡಲಿಲ್ಲ..
ಸರಿ ಊಟಿ ನೋಡಿದ್ದಾಯ್ತು.. ಚಳಿಯಲ್ಲಿ ಕೂಲ್ ಆಗಿದ್ದಾಯ್ತು.. ಮುಂದೇನು..? ಎನ್ನುವ ಕ್ವಶ್ಚನ್ ಮಾರ್ಕು ನಮ್ಮ ಮನದಲ್ಲಿ ಮೂಡಿ ಉತ್ತರಕ್ಕಾಗಿ ತಡಕಾಡುತ್ತಿತ್ತು..
ಅಷ್ಟರಲ್ಲಿ ನಮಗೆ ಟೀ ಫ್ಯಾಕ್ಟರಿ ನೋಡಬೇಕು ಎನ್ನುವ ಚಿಕ್ಕದೊಂದು ಆಸೆ..
ಆಸೆಯ ಹುಳು ಮನದಲ್ಲಿ ಹೊಕ್ಕ ನಂತರ ಅದಕ್ಕೆ ಅಂತ್ಯ ಹಾಕಲೇ ಬೇಕು..
ಸರಿ ಅಲ್ಲೊಂದು ಫ್ಯಾಕ್ಟರಿ ಕಣ್ಣಿಗೆ ಬಿತ್ತು.. ಹೊರಟರೆ ಅದಕ್ಕೆ ಪ್ರವೇಶಫೀಸಿದೆ.. ಅದೆಷ್ಟೋ ಕೊಟ್ಟು ಹೋಗಬೇಕೆಂದರೆ ಚಿಕ್ಕ ಕ್ಯೂ ಕೂಡ ಇದೆ.. ಸುಮ್ಮನೇ ಲಾಸು ಮಾಡಿಕೊಂಡು ಹೋಗುವುದು ಬೇಡ ಎನ್ನುವ ಎಕನಾಮಿಕ್ಸು ನಮ್ಮ ಮನದಲ್ಲಿ..
ಆದರೆ ಕ್ಯೂನಲ್ಲಿ ನೋಡಿದರೆ ಮೂರ್ನಾಲ್ಕು ಬೆಳ್ಳಗಿನ ಹುಡುಗಿಯರು..!
ಜೈ... 
ನಾವೂ ಕ್ಯೂನಲ್ಲಿ ನಿಂತೆವು..
 
ಹತ್ತುನಿಮಿಷದ ನಂತರ ಫ್ಯಾಕ್ಟರಿಯ ಒಳಭಾಗದಲ್ಲಿ ನಾವು..
ಅದರೊಳಗೆ ಇಂಗ್ಲೀಷ್ ಭಾಷೆಯಲ್ಲಿ ಕಾಮೆಂಟರಿ..
ಏನೋ ಹೇಳುತ್ತಿದ್ದರು..
ನಾವು ನಾಲ್ವರೂ ಘನ ಗಂಬೀರವಾಗಿ ಕೇಳುವ ನಟನೆ ಮಾಡಿದೆವು..
ನಮ್ಮ ನಟನೆ ನೋಡಿದರೆ ನಮಗೆ ಸಂಪೂರ್ಣ ಅರ್ಥವಾಗಿದೆ ಎನ್ನುವಂತಿತ್ತು..
ಹೊರ ಬಂದಾಗ ಕಿಟ್ಟು ಕೇಳಿದ್ದು `ಅಂವ ಎಂತಾ ಹೇಳಿದ್ನಲೆ..' ನನ್ನ ಉತ್ತರ `ಸಾಯ್ಲಾ ಟಸ್ ಪುಸ್ ಅಂದ ಅರ್ಥ ಆಜಿಲ್ಲೆ..' ಮೋಹನ, ರಾಘು ಕೂಡ ಇದಕ್ಕೆ ಹೊರತಾಗಿರಲಿಲ್ಲ ಎನ್ನುವುದು ಅವರ ಮುಖದಿಂದ ಗೊತ್ತಾಗುತ್ತಿತ್ತು..
ಆ ಫ್ಯಾಕ್ಟರಿಯಲ್ಲಿ ಚಾಕಲೇಟುಗಳು ತಯಾರಾಗುತ್ತಿದ್ದವು. ನೋಡಿದ ತಕ್ಷಣ ಬಾಯಲ್ಲಿ ಚವುಳು ನೀರು ಸುರಿಯಬೇಕು.. ಅಷ್ಟು ಚನ್ನಾಗಿದ್ದವು..
ಬೆಲೆ ಕೇಳಿದರೆ ಈಗಿನ ಪೆಟ್ರೂಲ್ ರೇಟಿಗಿಂತ ಜಾಸ್ತಿ... ಅದಕ್ಕೆ ಪ್ರತಿಯಾಗಿ ಅವರು ಕೊಡುವುದು ಕಡಿಮೆ ಗಾತ್ರದ ಚಾಕಲೇಟು..
ನೋಡಿದಷ್ಟರಲ್ಲೇ ಹೊಟ್ಟೆ ತುಂಬಿತು ಎಂದು ಹೇಳಿ ವಾಪಾಸು ಬಂದೆವು...
ಮುಂದೆ... `ಎಲ್ಲಿಗೆ ಪಯಣ..? ಯಾವುದು ದಾರಿ..' ಮರಳಿ ಬೆಂಗಳೂರಿಗಾ..? 
ಊಹೂಂ ಬಗೆ ಹರಿಯಲಿಲ್ಲ..

 
ಅಷ್ಟರಲ್ಲಿ ನಮ್ಮ ಭಭ್ರವಾಹನದ ಹೊಟ್ಟೆ ಖಾಲಿಯಾಗಿದ್ದು ನೆನಪಾಯಿತು..
ಬಂಕಿಗೆ ಹೋಗಿ ನೋಡಿದರೆ ಕರ್ನಾಟಕಕ್ಕಿಂತ 1.5 ರು.ಗಿಂತಲೂ ಕಡಿಮೆ ದರದಲ್ಲಿ ಪೆಟ್ರೂಲು..
ವೀರ ಕನ್ನಡಿಗರಾದ ನಾವು ಕರ್ನಾಟಕವನ್ನು ಹಿಗ್ಗಾ ಮುಗ್ಗಾ ಬೈದು ಟ್ಯಾಂಕ್ ಫುಲ್ ಮಾಡಿಕೊಂಡು ಗಾಡಿಯನ್ನು ಗುರ್ರೆನ್ನಿಸುವಾಗಲೇ ನಮ್ಮ ಹೊಟ್ಟೆ ಖಾಲಿಯಾದದ್ದು ನೆನಪಾಯಿತು...

ಮತ್ತದೆ ದಾರಿ ಮಧ್ಯದ ಹೊಟೆಲನ್ನು ನೆನಪು ಮಾಡಿಕೊಂಡು ಮುಂದಕ್ಕೆ ಹೆಜ್ಜೆಯನ್ನಿಟ್ಟೆವು..
ಹೋಗುವಾಗ ಏದುಸಿರು ಬಿಟ್ಟಿದ್ದ ನಮ್ಮ ಭಭ್ರುವಾಹನರಿಗೆ ಈಗ ವೇಗ ಇಮ್ಮಡಿಸಿತ್ತು..
ಫೇವರ್ಸ್ ಹಾಕಿದ್ದ ರಸ್ತೆ.. ಗಾಡಿಯನ್ನು ಆಫ್ ಮಾಡಿಕೊಂಡರೂ 10-20 ಕಿ.ಮಿ ಅರಾಮವಾಗಿ ಸಾಗಬಹುದು.. ಅಷ್ಟು ಇಳಿಜಾರು..
10-12 ಕಿ.ಮಿ ಬಂದ ನಂತರ ನಮ್ಮ ಅದೇ ಹೊಟೆಲ್ ಸಿಕ್ಕಿತು..
ಬಾಗಿಲು ಹಾಕಿತ್ತು..
ಮತ್ತಷ್ಟು ಬೈಗುಳ.. ಹೊಟ್ಟೆಪಾಡು ತಾಳಹಾಕುತ್ತಿತ್ತು..
ಅಲ್ಲೆಲ್ಲೋ ಇನ್ನೊಂದು ಹೊಟೆಲು ಸಿಕ್ಕಿತು.. ಊಟದ ಶಾಸ್ತ್ರ ಮುಗಿಸಿದೆವು..
ಆಮೇಲೆ ಮತ್ತೆ ನಮ್ಮೆದುರು ಮೂಡಿದ್ದು `ಎಲ್ಲಿಗೆ ಪಯಣ..? ಯಾವುದು ದಾರಿ..?'
ಗಾಡಿ ನಿಲ್ಲಿಸಿ ವಾಪಾಸು ಬೆಂಗಳೂರಿಗೆ ಹೋಗುವುದಾ..?  ಎಂದು ಸಮಾಲೋಚನೆ ಮಾಡಿದೆವು..
 
ಅಷ್ಟರಲ್ಲಿ ಅದ್ಯಾವ ಟ್ಯೂಬ್ ಲೈಟ್ ಹೊತ್ತಿಕೊಂಡಿತೋ.. ಮೋಹನ ಇಲ್ಲೆಲ್ಲೋ ವಯನಾಡಿದೆ ನೋಡಿ ಬರೋಣ ಎಂದ..
ನಮಗೆ ಅನುಮಾನ.. ಸುಮ್ನಿರು ಮಾರಾಯಾ ವಯನಾಡು ಇರುವುದು ಕೇರಳದಲ್ಲಿ ಎಂದೆವು..
ಇಲ್ಲಪ್ಪಾ.. ಎಲ್ಲೋ ನೋಡಿದ್ದೇನೆ.. 
ಊಟಿಯ ಹತ್ತಿರದಲ್ಲೇ ಇದೆ ವಯನಾಡು.. ಎಂದ..
ನಮಗೆ ನಂಬಿಕೆ ಬರಲಿಲ್ಲ..
ಕೊನೆಗೆ ತನ್ನ ಬ್ಯಾಗಿನಲ್ಲಿದ್ದ ಮ್ಯಾಪನ್ನು ತೆಗೆದು ತೋರಿಸಿದ ನಂಬಿಕೆ ಬಂತು..
ಅಲ್ಲೆ ಹತ್ತಿರದಲ್ಲಿದ್ದ ಅಂಗಡಿಯಾತನ ಬಳಿ ಮತ್ತೊಮ್ಮೆ ಕನ್ ಫರ್ಮ್ ಮಾಡಿಕೊಂಡೆವು..
ಆದರೆ ಹೋಗುವುದಾ ಬೇಡ್ವಾ.. ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಲಿಲ್ಲ..
ನನಗೆ ರಜಾ ಸಿಗುವುದು ಅನುಮಾನವಿತ್ತು..
ಏನ್ ಮಾಡೋದು..?

ಆ ನಾಲ್ವರಲ್ಲಿ ನಾನು ವಾರದ ರಜಾ ಪಡೆದು ಬಂದಿದ್ದೆ..
ರಾಘು ಇನ್ನೂ ಓದುತ್ತಿದ್ದ..
ಕಿಟ್ಟು, ಮೋಹನ ಸ್ವ ಉದ್ಯೋಗದಲ್ಲಿದ್ದರು..
ನನಗೆ ಆಫೀಸಿನಲ್ಲಿ ರಜಾ ಕೊಡ್ತಾರೋ ಇಲ್ಲವೋ ಎನ್ನುವ ಶಂಕೆ..
ಕೊನೆಗೆ ಅಳುಕಿನಿಂದ ಆಫೀಸಿಗೆ ಪೋನ್ ಮಾಡಿದೆ..
ನನ್ನ ಮೇಲಿನವರು `ಏನ್ ವಿನಯ್,ಎಂದರು..
ಸರ್ ನಾಳೆ ಆಫೀಸಿಗೆ ಬರೋದಿಕ್ಕಾಗೋದಿಲ್ಲ ಎಂದೆ..
ಯಾಕೆ ಏನಾಯ್ತು ಎಂದರು/..
ಹುಷಾರಿಲ್ಲ.. ತುಂಬಾ ಕೋಲ್ಡಾಗಿದೆ. ಚಿಕ್ಕದಾಗಿ ಫೀವರ್ರು ಬೇರೆ ಎಂದು ರೈಲು ಬಿಟ್ಟೆ..
ಅದಕ್ಕವರು ಏನ್ರಿ.. ನಿನ್ನೆ ಚನ್ನಾಗಿದ್ರಲ್ರಿ.. ಅಷ್ಟು ಬೇಗ ಏನಾಯ್ತು  ಎಂದರು//
ಗೊತ್ತಿಲ್ಲ ಸಾರ್.. ಏನೋ ಹೆಚ್ಚೂ ಕಡಿಮೆಯಾಗಿದೆ ಅನ್ಸುತ್ತೆ.. ಎಂದೆ..
ನಿಮ್ದೊಳ್ಳೆ ಗೋಳಾಯ್ತು ಕಣ್ರಿ.. ಓಕೆ.. ರೆಸ್ಟ್ ತಗೊಂಡು ಬನ್ನಿ.. ನಾಡಿದ್ದಿನಿಂದ ನೈಟ್ ಡ್ಯೂಟಿ ಎಂದರು..
ಮನದಲ್ಲಿ ಗಾಳಿಯ ಬಲೂನು ಒಡೆದ ಅನುಭವ..
ಆದರೆ ರಜಾ ಸಿಕ್ಕಿತೆಂಬ ಖುಷಿ..

ಅದನ್ನು ಮಿತ್ರವೃಂದದ ಬಳಿ ಹೇಳಿದಾಗ ಅವರಿಗೂ ಖುಷಿಯಾಗದೇ ಇರಲಿಲ್ಲ/..
ವಯನಾಡಿಗೆ ಹೋಗುವ ಮೊದಲು ಊಟಿ ಬೆಟ್ಟವನ್ನಿಳಿದು ಗುಡಲೂರಿಗೆ ಹೋಗಿ ಅಲ್ಲಿಂದ ಹೋಗಬೇಕಿತ್ತು..
ಅದಕ್ಕಾಗಿ ಮೊದಲು ಗುಡಲೂರಿಗೆ ಹೋಗುವಾ ಎಂದು ನಮ್ಮ ಪ್ಲಾನ್ ತಯಾರಾಯಿತು..
ಊಟಿಯಿಂದ 40ಓ, 45ಓ ಕಿ.ಮಿ ದೂರದಲ್ಲಿದ್ದ ಗುಡಲೂರಿನ ಮಾರ್ಗ ರಾಷ್ಟ್ರೀಯ ಹೆದ್ದಾರಿ..
ನಿಸರ್ಗದ ಖನಿ..
ಎಲ್ಲವನ್ನೂ ಕಣ್ತುಂಬಿಕೊಂಡು ಹೋಗಬೇಕೆಂದರೆ ಕನಿಷ್ಟ 4 ತಾಸುಗಳಾದರೂ ಬೇಕೇಬೇಕು..
ಮಾರ್ಗಮಧ್ಯ ತಮಿಳಿನ ಉದ್ದುದ್ದ ಹೆಸರಿನ ಊರುಗಳು..
ಪೈಕರ ಡ್ಯಾಂ, ಉದ್ದುದ್ದ ನೀಲಗಿರಿ ಕಾಡುಗಳು.. ಎಷ್ಟು ನೋಡಿದರೂ ಮನಸ್ಸು ತಣಿಯುವುದಿಲ್ಲ ಬಿಡಿ..

(ಮುಂದುವರಿಯುತ್ತದೆ.,...,)

Wednesday, July 3, 2013

ಮಹಾಮಳೆಯ ನೋಟಗಳು

ಮಹಾಮಳೆಯ ನೋಟಗಳು


ಕಳೆದೆರಡು ದಿನಗಳ ಹಿಂದೆ ವರುಣ ರಾಯ ರಜಾ ಹಾಕಿದ್ದ.. ಆಮೇಲಿನದೆಲ್ಲ ಓವರ್ ಡ್ಯೂಟಿ...
ಟೈಂ ಪಿಕಪ್ ಮಾಡಲು ನಮ್ಮ ಡ್ರೈವರ್ರುಗಳು ಬಸ್ಸನ್ನು ಯದ್ವಾತದ್ವಾ ಓಡಿಸುವಂತೆ..
ಶುರುವಾಯ್ತು ನೋಡಿ... ಮಹಾಮಳೆ...
ಉತ್ತರಖಂಡವನ್ನು ನೆನಪಿಸಿಬಿಟ್ಟಿತು..


ಸೋಮವಾರ ಸಂಜೆ ಜಿಟಿ ಜಿಟಿ ಎಂದ ಮಲೆ ಮಂಗಳವಾರ ಮದ್ಯಾಹ್ನವೂ ಜಿಟಿಜಿಟಿಯಿತ್ತು..
ಆರಿದ್ರಾ ಮಳೆಯ ಅಬ್ಬರ ಕಾಣ್ತಾ ಇಲ್ಲವೋ ಅಂದುಕೊಂಡಿದ್ದೆವು...
ಮಂಗಳವಾರ ಸಂಜೆ ಶುರುವಾಯ್ತು ನೋಡಿ ಮಳೆ...
ಸ್ಮಾಲ್ ಬ್ರೇಕ್.... ಇಲ್ಲವೇ ಇಲ್ಲ...
ಜೊರ.. ಜೊರ... ಜೊರ...
ಒಂದೇ ವೇಗ... ಮೈಲೇಜ್ ಮೆಂಟೇನ್ ಮಾಡುತ್ತಿತ್ತು...
ಒಂದೇ ಏಟಿಗೆ ಭೂಮಿ ತನ್ನ ಬಿಸಿಯನ್ನೆಲ್ಲ ಕಳೆದುಕೊಂಡು ಹಸಿಯಾಗಿತ್ತು...


ಬುಧವಾರ ಮದ್ಯಾಹ್ನದ ವರೆಗೂ ಮಳೆ ಬ್ರೇಕಿಲ್ಲದೆ ಸುರಿಯುತ್ತಿತ್ತು.
ಪರಿಣಾಮ ನೋಡಿ ಭೀಖರವಾಗಿತ್ತು..
ಹಳ್ಳ, ಕೊಳ್ಳಗಳು ತುಂಬಿದವು.. ಬೋರ್ಘರೆದವು...

ಜೊರಗುಡುವ ಮಳೆ.. ಮಂಗಳವಾರ ರಾತ್ರಿ ನಾನು ಮಲಗಿದ್ದೆ.. ಮಳೆಯ ಸದ್ದಿಗೆ ಮಧ್ಯರಾತ್ರಿ ಪದೆ ಪದೆ ಎಚ್ಚರಾಗುತ್ತಿತ್ತು...
ನಮ್ಮೂರಿನಿಂದ ಅರ್ಧ ಮೈಲಿ ದೂರದಲ್ಲಿ ಅಘನಾಶಿನಿ ಹರಿಯುತ್ತಾಳೆ.. ಅದರ ಸದ್ದು ಮೊದ ಮೊದಲು ಚಿಕ್ಕದಿತ್ತು.. ಕೊನೆ ಕೊನೆಗೆ ದೊಡ್ಡದಾಯಿತು..
ಬೆಳಿಗ್ಗೆಯಾದರೆ ಸಾಕಪ್ಪಾ ಅಂದುಕೊಂಡೆ..
ಅದ್ಯಾವುದೋ ಜಾವದಲ್ಲಿ ಎಚ್ಚರಾಯಿತು..
ಸುತ್ತೆಲ್ಲ ಬೆಳಕು..
ಮಳೆ ಸುರಿಯುತ್ತಲೇ ಇತ್ತು..
ಆದರೆ ಗಂಟೆ ಎಸ್ಟಿರಬಹುದು? ನೋಡಲು ಕರೆಂಟಿರಲಿಲ್ಲ..
ಸಿಕಾಡಗಳ ಟ್ರೊಂಯ್ ಟ್ರೊಂಯ್ ಸದ್ದಿನ ಮೇಲೆ ಸಮಯ ಅಳೆಯಲು ಯತ್ನಿಸಿದೆ. ಊಹುಂ ಕೇಳಲಿಲ್ಲ..
ಅರೇ.. ಇದೆಂತ ಭ್ರಮೆ ಅಂದುಕೊಂಡೆ..
ಆಮೇಲೆ ಮತ್ತೆ ನಿದ್ರೆ.. ಅದೆಷ್ಟೋ ಸಮಯದ ನಂತರ ಶಿರಸಿಯಿಂದ ನಮ್ಮ ಸರ್ ಪೋನ್ ಮಾಡಿದರು.. ಮನೆಯಲ್ಲಿ ಯಾರಿಗೂ ಎಚ್ಚರಿರಲಿಲ್ಲ..
ಟೈಂ ನೋಡಿದರೆ 8.30.. ಆಗಸ ನೋಡಿದೆ.. 6 ಗಂಟೆಗೆ ಆಗುವಂತಹ ಮಬ್ಬು ಬೆಳಗು..
ಇದೆನಾಯ್ತು ಅಂದರೆ ಅದೇ ಮಳೆ...


ತೋಟದ ಕೆಳಗೆ 40 ಅಡಿ ಕೆಳಗೆ ಅಘನಾಶಿನಿ ಹರಿಯುತ್ತಿದ್ದಳು.. ನೋಡಿ ಬರೋಣ ಎಂದು ಹೊರಟೆ..
ಆಕೆ ರೌದ್ರಾವತಾರ ತೋರಿರಲಿಲ್ಲ..
ಬರುವಾಗ ಅಘನಾಶಿನಿ ನೆರೆ ಬಂದರೆ ಪೋಟೋ ತಗೊಂಡು ಬನ್ನಿ.. ಹುಡಾಯಲೆ ಹೋಗಡಿ..ಎನ್ನುವ ನಮ್ಮ ಸರ್ ಮಾತಿಗೆ ಬೆಲೆ ಕೊಟ್ಟು ಪೋಟೋ ತೆಗೆಯೋಣ ಎಂದು ಯತ್ನಿಸಿದರೆ ವಂದೂ ಸರಿ ಬರಲಿಲ್ಲ..
ಹೊಳೆಯ ದಂಡೆಗೆ ಹೋದೆ.. ಕ್ಷಣಕ್ಷಣಕ್ಕೂ ನೀರು ಉಕ್ಕುತ್ತಿತ್ತು.. ಒಂದಷ್ಟು ಪೋಟೋ ಕ್ಲಿಕ್ಕಿಸುವ ವೇಳಗೆ ಒಂದು ಮಹಾಮಳೆ ಸುರಿಯಿತು ನೋಡಿ..
ಎದ್ದೋಡಿ ಬಂದೆ..
ಮನೆಗೆ ಮರಳುವಷ್ಟರಲ್ಲಿ ಮನೆಯೊಳಗೆಲ್ಲ ನೀರು..ನೀರು..

ಹೊಟ್ಟೆಗೆ ಕೊಂಚ ತಿಂಡಿ ತಿಂದು ಮುಗಿಸುವ ವೇಳೆಗೆ ಸುದ್ದಿ ಬಂದಿತ್ತು.. ಶಿರಸಿಯ ಚಿನ್ನಾಪುರ ಕೆರೆ ಒಡೆದಿದೆ.. ಅಂತ.. ಕೋಟೆಕೆರೆ ತುಂಬಿದೆಯಂತೆ.. ಯಾವ ಕ್ಷಣದಲ್ಲೂ ಒಡೆಯಬಹುದು.. ಅಂತಲೂ ಅಂದರು ನಮ್ಮ ವಿಶ್ವಣ್ಣ..
ಸುದ್ದಿ ಮಾಡಲು ಹೋಗಬೇಕು...
ಮಹಾಮಳೆ.. ಎಲ್ಲ ಕಡೆ ನೆರೆ ಬಂದಿದೆ.. ಎಲ್ಲಿ ಸುದ್ದಿ ಮಾಡೋಣ ಹೇಳಿ..?
ಅಷ್ಟರಲ್ಲಿ ಕಾನಸೂರಿನಿಂದ ಸುಭಾಷ ನಾಯ್ಕರು ಪೋನ್ ಮಾಡಿ ಅರ್ಜೆಂಟು ಬನ್ನಿ ನಮ್ಮೂರಿನ ನಾಲ್ಕು ಮನೆ ಮುಳುಗಿದೆ ಎಂದರು.
ದಡಬಡಿಸಿ ಹೋಗಬೇಕೆಂದರೂ ನಮ್ಮೂರಿನ ಗಬ್ಬು ರಸ್ತೆಯಲ್ಲಿ ಹುಗಿಯುತ್ತ ಏಳುತ್ತ, ಬೀಳುತ್ತ ಆರು ಕಿ.ಮಿ ಕಾನಸೂರು ಮುಟ್ಟುವ ವೇಳಗೆ ಅರ್ಧ ಗಂಟೆ...
ಮಳೆ ಅಬ್ಬರಕ್ಕೆ ಅಘನಾಶಿನಿಯ ಸೋದರ ಸಂಬಂಧಿ ಉಕ್ಕಿತ್ತು...
ಪರಿಣಾಮ ನದಿಯ ಪಕ್ಕದಲ್ಲಿದ್ದ ನಾಲ್ಕು ಮನೆಗೆ ನೀರು ನುಗ್ಗಿ ಐದನೇ ಮನೆಯ ಒಳಗೆ ಇಣುಕುತ್ತಿತ್ತು...

ಮನೆಯಲ್ಲಿದ್ದವರೆಲ್ಲ ಹೊರಗೆ ಬಂದಿದ್ದರು.. ಸಾಮಾನು ಸರಂಜಾಮು ಸಾಗಾಟದಲ್ಲಿ ನಿರತರಾಗಿದ್ದರು..
ತಾ.ಪಂ, ಗ್ರಾ.ಪಂ, ಸೇರಿದಂತೆ ಇಲಾಖೆಗಳ ಹಲವು ಮಂದಿ ಆಗಲೇ ಆಗಮಿಸಿದ್ದರು.. ಕೊನೆಗೆ ಎಷ್ಟು ನಷ್ಟ.. ಆಯ್ತು ಎನ್ನುವ ಆಲೋಚನೆ ಅವರದ್ದು.. ಓಯ್ ಇವ್ರೆ.. ನಮ್ಮ ಮನೆಯ ಇದೂ ಕೊಚ್ಚಿಕೊಂಡು ಹೋಗಿದೆ... ಎಂದು ಮರೆತಿದ್ದದ್ದನ್ನು ಲೀಸ್ಟಿನಲ್ಲಿ ಸೇರಿಸುತ್ತಿದ್ದರು...
ಕಳೆದ 3 ವರ್ಷದ ಹಿಂದೆ ಅಘನಾಶಿನಿ ನದಿಯ ಬಲದಂಡೆಗೆ ಪಿಚ್ಚಿಂಗ್ ಕಟ್ಟಿ ಅಂತ ಹೇಳಿದ್ವಿ.. ಇಲಾಖೆಯವರು `ಕಾಗೆ' ಹಾರಿಸಿದರು.. ಅಂತ ರಾಜಕಾರಣದಲ್ಲಿ ಮಾತನಾಡುತ್ತಿದ್ದ ಹಲವರು ಅಲ್ಲಿದ್ದರು..

ಪೋಟೋ.. ಅಹವಾಲು ಎಲ್ಲ ಪಡಕೊಂಡು ಹೊಸಗದ್ದೆ ಸೇತುವೆಗೆ ಹೋಗಬೇಕು ಎಂದು ಗಾಡಿ ತಿರುಗಿಸಿದೆ..
ಕಲ್ಮಟ್ಟಿ ಹಳ್ಳದ ನೀರು ಉಕ್ಕುಕ್ಕಿ ಹರಿಯುತ್ತಿತ್ತು...
ಬಾಳೆಸರ ರಸ್ತೆಯನ್ನು ಬಂದು ಮಾಡಿ ಬಿಡುತ್ತೇನೆ ಎಂದು ಮೈಮೇಲೆ ಬಂದವರಂತೆ ಆಡುತ್ತಿತ್ತು..
ಹಾಗೂ ಹೀಗೂ ಮುನ್ನಡೆದೆ..
ಕೋಡ್ಸರಕ್ಕೆ ಹೋಗುವಾಗ ಅಲ್ಲೊಂದು ಕಡೆ ಭೂಕುಸಿತದ ಜಾಗವಿದೆ..
ನಾನು ಹೋಗುವ ಮುನ್ನ ಒಂದಿಷ್ಟು ಭೂ ಕುಸಿತವಾಗಿತ್ತು..
ಪರಿಣಾಮ ಕರೆಂಟು ಕಂಬ ಹಾಗೂ ಕಂಬದ ಜಡೆಗಳಾದ ಲೈನುಗಳನ್ನೆಲ್ಲ ಮುಲಾಜಿಲ್ಲದೇ ಕಿತ್ತು ಹಾಕಿತ್ತು...
ಅದರ ಪೋಟೋ ತೆಗೆಯೋಣ ಅಂತ ಗಾಡಿ ನಿಲ್ಲಿಸಿದೆ..
ಅಲ್ಲಿ ಪರಿಸ್ಥಿತಿ ಅವಲೋಕನ ಮಾಡುತ್ತಿದ್ದ ನಾಲ್ಕು ಜನ ಯಂಗ್ ಸ್ಟಾರ್ ಗಳು.. ಹೋಯ್.. ಮೊದ್ಲು ಇತ್ಲಾಗೆ ಬನ್ನಿ.. ಎಂದು ಕೂಗಿದರು..
ಗಡಬಡಿಸಿ ಮುಮದೆ ಹೋದೆ..
ನೀವೆಂತ.. ಬೆಳಿಗ್ಗೆ ಅಲ್ಲಿ ಕುಸಿದಿತ್ತು.. ಈಗ ಅದೇ ಅಲ್ಲಿ ನೋಡಿ ಮಣ್ಣು ಅರ ಸರ ಇಳಿತಾ ಅದೆ.. ಈಗ ಕುಸಿತದೆ ನೋಡಿ ಅಂದರು..

ಲೈವ್ ಆಗಿ ಕಣ್ಣೆದುರು ಕುಸಿಯುತ್ತದೆ ಅಂತಾದರೆ ಪೋಟೋ ಕ್ಲಿಕ್ಕಿಸೋಣ ಅಂತ ಕಾದೆ..
ಊಹೂಂ.. ವಂದಿಂಚೂ ಕುಸಿಯಲಿಲ್ಲ.. ಮಣ್ಣು ಮಾತ್ರ ಆಗಾಗ ನಾ ಬಿದ್ದೆ ನಾ ಬಿದ್ದೆ ಅಂತ ಬೀಳುತ್ತಿತ್ತು..
ಕೊನೆಗೆ ಹೊಸಗದ್ದೆ ಸೇತುವೆ ಮೇಲೆ ನೀರು ಬಂದದೆ ಎಂಬ ಗಾಳಿ ಸುದ್ದಿ ಕೇಳಿ ಗುಡ್ಡ ಕುಸಿತದ ಲೈವ್ ಪ್ರೋಗ್ರಾಮನ್ನು ಅಲ್ಲಿಗೆ ಬಿಟ್ಟು ಹೋದೆ...
ನಾನು ಹೊಸಗದ್ದೆ ಕಡೆಗೆ ಹೋದಂತೆಲ್ಲ ದಾರಿಯಲ್ಲಿ ಸಿಕ್ಕ ಬೈಕುಗಳು, ಬಸ್ಸು, ವಾಹನಗಳು ಹೋಯ್ ದಾರಿ ಬಂದಾಗದೆ.. ಹೋಗ್ಲಿಕ್ಕಾಗೂದಿಲ್ಲ.. ಎನ್ನುತ್ತಿದ್ದರು..ಆದರೂ ಮುಂದುವರಿಯುತ್ತಿದ್ದ ನನ್ನನ್ನು ಪಿರ್ಕಿಯಂತೆ ಕಂಡು ಮುಂದಕ್ಕೆ ಸಾಗುತ್ತಿದ್ದರು..

ಹೊಸಗದ್ದೆ ಸೇತುವೆಯತ್ತ ಹೋದರೆ ಸೇತುವೆ ಮೇಲೆ ನೀರೇ ಇಲ್ಲ..!!!
ಬರೀ ಜನ...
ಅಘನಾಶಿನಿ ಸೇತುವೆಗೆ ಮುತ್ತಿಕ್ಕುತ್ತ ಸಾಗುತ್ತಿತ್ತು..
ಆಗೀಗ ಸೇತುವೆ ಮೇಲೆ ನೀರು ಉಕ್ಕುತ್ತಿತ್ತು..
ಹೊಸಗದ್ದೆ ಹಾಗೂ ಸುತ್ತಮುತ್ತಲ ಜನ ಜಮಾಯಿಸಿದ್ದರು..
ಉಕ್ಕೇರುವ ಹೊಳೆ ನೋಡಲು ಬಂದಿದ್ದಾರೆ ಎಂದುಕೊಂಡೆ..
ಹೊಳೆ ನೋಡುವವರು ಸೇತುವೆ ಮೇಲೆ ಯಾಕೆ ನಿಂತಿದ್ದಾರೆ ಎನ್ನಿಸಿತು..
ಯಾರಾದ್ರೂ ಹೊಳೆಗೆ ಹಾರಿದರೇ..? ಅದರ ಪರಾಮರ್ಶೆ ಮಾಡ್ತಾ ಇದ್ದಾರೆಯೇ ಎಂಬೆಲ್ಲ ಶಂಕೆ ಮೂಡಿ ಮನದಲ್ಲಿ ಭೀತಿ..

ಹೋಗ್ಲಿ ಎಂದು ಮುಂದಕ್ಕೆ ಹೋದರೆ ಅಲ್ಲಿ ಜಮಾಯಿಸಿದ್ದ ಜನರ ಕೆಲಸವೇ ಬೇರೆ ನಮೂನಿಯಾಗಿತ್ತು..
ಹೊಳೆಯಲ್ಲಿ ತೇಲಿ ಬರುತ್ತಿದ್ದ ತೆಂಗಿನ ಕಾಯಿಯನ್ನು ಕ್ಯಾಚ್ ಹಿಡಿಯುವುದಕ್ಕಾಗಿ ಜನರು ಸೇರಿದ್ದರು.. ಸೇತುವೆ ಮೇಲೆ ನಿಂತು ಅಲ್ಲ ಬರುವ ತೆಂಗಿನ ಕಾಯಿಯನ್ನು ಹಿಡಿಯಲು ಸ್ಪರ್ಧೆಯೇ ನಡೆಯುತ್ತಿತ್ತು..
ಮಹಿಳೆಯರೂ ಪುರುಷರಿಗೆ ಪೈಪೋಟಿ ನೀಡುತ್ತಿದ್ದರು..
ಆದರೆ ಮಹಿಳೆಯರು ತೆಂಗಿನ ಕಾಯಿಗೆ ಮುಗಿ ಬೀಳುತ್ತಿರಲಿಲ್ಲ.
ಬದಲಾಗಿ ಹೊಳೆಯಲ್ಲಿ ತೇಲಿ ಬರುತ್ತಿದ್ದ ಕಟ್ಟಿಗೆ, ಕುಂಟೆಗಳನ್ನು ಹಿಡಿಯುವ ಕಾಯಕದಲ್ಲಿ ನಿರತರಾಗಿದ್ರು..

ಆಗಾಗ ನದಿ ನೀರು ಸೇತುವೆ ಮೇಲೆ ಉಕ್ಕುತ್ತಿತ್ತುಉ.
ಆಗೆಲ್ಲ ಜನಮಾನಸದಲ್ಲಿ ಹೋ ಎನ್ನುವ ಕೂಗು...
ಆದರೂ ಇವರ ಕಾಯಕ ನಿಲ್ಲುತ್ತಿರಲಿಲ್ಲ..
ನಂಗೆ 12 ಕಾಯ್ ಸಿಕ್ತು .. ನಂಗೆ 14 ಎನ್ನುವ ಲೆಕ್ಕಾಚಾರವೂ ಇತ್ತು..
4 ವರ್ಷದವರಿಂದ ಹಿಡಿದು 85 ವರ್ಷದ ವರೆಗೆ ಎಲ್ಲ ವಯೋಮಾನದ ಗಂಡು ಹಾಗೂ ಹೆಣ್ಣುಗಳು ಎಲ್ಲಿದ್ದವು..

ದಾರಿಯಲ್ಲಿ ಸಾಗುವ ವಾಹನಗಳ ಕಡೆಗೆ ಖಬರಿರಲಿಲ್ಲ..
ಇವರದ್ದೇ ಆಟ..
ದೇವರೇ ಈ ಸೇತುವೆ ಅಘನಾಶಿನಿಯ ಆರ್ಭಟಕ್ಕೆ ಕೊಚ್ಚಿ ಹೋದರೆ ಕತೆಯೇನಪ್ಪಾ.. ಎನ್ನುವ ಭಯದ ಚಿಕ್ಕ ಶಾಕ್..
ಹಳೆ ಸೇತುವೆ.. ಸೇತುವೆಯ ಅಕ್ಕಪಕ್ಕದ ಸೈಡ್ ಬಾರ್ ಗಳು ಕಿತ್ತುಹೋಗಿವೆ..
ಯಾರಾದ್ರೂ ತೆಂಗಿನ ಕಾಯಿ ಅಥವಾ ಕುಂಟೆಗಳನ್ನು ಕ್ಯಾಚ್ ಮಾಡಲು ಹೋಗಿ ಲಗಾಪಾಟಿ ಹೊಡೆದರೆ ಏನಪ್ಪಾ.. ಎಂದು ಕೊಂಡು ಹಗೂರಕ್ಕೆ ಕ್ಯಾಮರಾ ತೆಗೆದೆ..

ಆಗ ಶುರುವಾಯ್ತು ನೋಡಿ..
ಹೈಕಳೆಲ್ಲ..
ಯಾವ ಟೀವಿ? ಎಂದರು..
ಟಿವಿ ಅಲ್ಲ ಕಾಣ್ತದಾ.. ಪೇಪರ್ರಿರಬೇಕು ಎನ್ನುವ ವೇದವಾಕ್ಯ ಇನ್ನೊಬ್ಬನದ್ದು..
ಸುಮ್ನಿರ್ರಾ.. ಪೇಸ್ ಬುಕ್ಕಿಗೆ ಹೊಡ್ಕಳಾಕೆ ಹಿಡಿದಿದ್ದು ಎಂದು ಗುಂಪಲ್ಲಿರುವ ಗೋವಿಂದನ ಮಾತು..
ಎಲ್ಲ ಕಿವಿಗೆ ಬಿತ್ತು..
ನನ್ನ ಪಾಡಿಗೆ ನಾನು ಕ್ಯಾಮರಾ ಕ್ಲಿಕ್ ಕ್ಲಿಕ್..
ಕೊನೆಗೆ ಇಡಿಯ ಸೇತುವೆ ಮೇಲೆ ನಿಧಾನವಾಗಿ ನೀರು ಉಕ್ಕಲಾರಂಭಿಸಿತು..
ಅದರ ಪರಿವೆಯೂ ಇಲ್ಲ..
ಇಡಿ ಸೇತುವೆ ಪೋಟೋ ಹೊಡೆದುಕೊಳ್ಳಬೇಕಿತ್ತು...
ಕೊನೆಗೆ ಆ ಗುಂಪಿನ ಮುಖ್ಯಸ್ಥರ ಬಳಿ ಸ್ವಲ್ಪ ಸೇತುವೆಯಿಂದ ಆಚೆ ಹೋಗಿ ಎಂದೆ..
ನಮ್ ಪೋಟೋ ಹೊಡೀರಿ ಹೋಗ್ತೇವೆ ಅಂದ..
ಸರಿ ಎಂದೆ..
ಆತನಂತೂ ಸ್ವರಗಕ್ಕೆ 12 ಗೇಣು...
ಎಲ್ಲಾರನ್ನೂ ದೂರಕ್ಕೆ ಸರಿಸುವ ಆತನ ಗತ್ತು ಗಾಂಭೀರ್ಯ ಎಲ್ಲಾ ನೋಡಿದಾಗ ಖಂಡಿತವಾಗಿಯೂ ಮುಂದಿನ ಸಾರಿ ಗ್ರಾಮ ಪಂಚಾಯತ ಚುನಾವಣೆಗೆ ಸ್ಪರ್ಧಿಸುತ್ತಾನೆ ಎನ್ನಿಸಿತು. ನೆರೆಯ ಎಫೆಕ್ಟ್ ಪೋಟೋ ಹೊಡೆಯೋಣ ಎಂದುಕೊಂಡರೆ ಈ ಹೈದರ ಪೋಟೋ ಸೆಷನ್ ಮಾಡಬೇಕಾಗಿ ಬಂತಲ್ಲ ದೇವರೆ.. ಅಂದುಕೊಂಡೆ.. ಅಲ್ಲಿದ್ದವನೊಬ್ಬ ವೀಡಿಯೋ ಮಾಡ್ಕೋ ಅಂದ..
ಅಷ್ಟರಲ್ಲಿ ಪೋನು ಕಿಣಿ ಕಿಣಿ..
ಕಾರವಾರದ ಮಂಜು ವೀಡಿಯೋ ಮಾಡ್ಕಳಿ ನನಗೆ ಕಳಿಸಿ ಅಂದ..
ಸಿಕ್ಕಿದ್ದೆ ಸಿವಾ.. ಅದೂ ಆಯ್ತು...

ಸುಮಾರು ಪೋಟೋ ತೆಗೆದ ನಂತರವೂ ಅಗನಾಶಿನಿ ಸೇತುವೆಯ ಮೇಲೆ ಬರಲಿಲ್ಲ..
ಕಾದುಕಾದುವ್ಯರ್ಥ..
ಅದ್ಯಾವನೋ ಪುರ ಜನ ಹೇಳಿದ..
ಬಾಳೂರಲ್ಲಿ ಮನೆಗೆ ನೀರು ನುಗ್ಗಿದೆ ಅಂದ..
ಹೋಗಲು ಸಾಧ್ಯವೇ ಎಂದರೆ ರಸ್ತೆಯಲ್ಲಿ ನೀರು ಬಂದಿದೆ ಎಂದ..
ಟುಸ್ಸಾಯ್ತು ಉತ್ಸಾಹ..
ಅಷ್ಟರಲ್ಲಿ ಶಿರಸಿಯಿಂದ, ಬೇಗ ಆಫೀಸಿಗೆ ಬನ್ನಿ.. ಕೋಟೆಕೆರೆ ಢಂ ಅನ್ನೋ ಛಾನ್ಸಿದೆ ಎನ್ನುವ ದೂರವಾಣಿ...
ಮರಳಿ ದಾರಿ ಹಿಡಿದೆ..
ಕೋಡ್ಸರದ ಭೂಕುಸಿತ ಜಾಗಕ್ಕೆ ಬಂದರೆ.. ಅಲ್ಲಿ ಅದೇ ಯಂಗ್ ಸ್ಟಾರ್ಸ್ ಅವರಿಂದ ಅದೇ ಡೈಲಾಗ್ ಪುನರಾವರ್ತನೆ..
ಭೂಮಿಯೂ ಅಷ್ಟೇ ಈಗ ಕುಸಿತೆನೆ ನೋಡು..
ಈಗ ಕುಸಿತೇನೆ ನೋಡು..ಅನ್ನುತ್ತಿತ್ತು.. ಬಿಟ್ಟು ಹೋದೆ..

ಕಾನಸೂರಿಗೆ ಬರುವ ವೇಳೆಗೆ ಸುಭಾಷ್ ನಿಂದ ಮತ್ತೆ ಪೋನ್..
ಮಾದ್ನಕಳ್ ಸೇತುವೆ ಮೇಲೆ ನೀರು ಹೋಗ್ತಾ ಇದೆ.. ನೋಡಿ.. ಅಂದ..
ಹೋಗಿ ನೋಡಿದರೆ.. ಸೇತುವೆಯೇ ಕಾಣದಂತೆ ಮಳೆ ನೀರು..
ಕೆಂಪು ಕೆನ್ನೀರು.. ರಾಡಿ ರಾಡಿ.. ಪಕ್ಕದ ತೆಂಗಿನ ತೋಟಗಳಲ್ಲೆಲ್ಲ ನೀರೇ ನೀರು..
ಪಾಪ ಅಲ್ಲಿ 4 ಗಂಟೆಗಳಿಂದ ಸೇತುವೆ ದಾಟಲು ನಿಂತುಕೊಂಡಿದ್ದರಂತೆ...
ಮಳೆ ನೀರು ಬಿಡಲೊಲ್ಲದು..

ನಾನೂ ಸೇತುವೆ ಮೇಲೆ ಓಡಾಡಿದೆ...
ಮಳ್ಳಂಡೆ ತನಕ ನೀರು...
ತಂಪು ತಂಪು ಕೂಲ್ ಕೂಲ್ ಆಯಿತು.. ಅವ್ಯಕ್ತ ಬೀತಿ ಬಗಲಿನಲ್ಲಿ ಬೆವರನ್ನೂ ತಂದಿತು...
ಪೋಟೋ ಸಾಕಷ್ಟು ತೆಗೆದುಕೊಂಡೆ..
ಅಷ್ಟರಲ್ಲಿ ಆಗಲೇ ಶಿರಸಿಯಿಂದ ಮತ್ತೆರಡು ಸಾರಿ ಪೋನ್ ಬಂದಿತ್ತು..

ಶಿರಸಿಗೆ ಹಾಗೂ ಹೀಗೂ ಹೋಗುವ ವೇಳೆಗೆ ಮಳೆ ಕಡಿಮೆ ಆಗಿತ್ತು..
ಕೋಟೆಕೆರೆಗೆ ಬಂದರೆ ನೀರಿನ ಪ್ರಮಾಣ ಇಳಿದಿತ್ತು..
ಥೋ ನೀವು ಆಗಲೇ ಬರಬೇಕಿತ್ತು...
ಪೋಟೋ ಮಿಸ್ ಮಾಡಿಕೊಂಡ್ರಿ ಎಂದು ಜೊತೆಗಾರ ಪತ್ರಕರ್ತರು ಛೇಡಿಸಿದರು...
ಅವರಿಗೆ ನಾನು ಬೇರೆ ಕಡೆಯ ನೆರೆ ಪೋಟೋ ತೆಗೆಯಲು ಹೋದ ಸುದ್ದಿಯನ್ನು ಹೇಳಲೇ ಇಲ್ಲ..
ಯಾವಾಗಲೂ ಸತ್ಯ ಹರಿಶ್ಚಂದ್ರನ ಪೋಸು ಕೊಡುತ್ತಿದ್ದ ನನು ಈಗ ಮಾತ್ರ ಸುಳ್ಳು ಹರಿಶ್ಚಂದ್ರನಾದೆ..!!

ಅಂತೂ ಇಂತೂ ಮಳೆಯ ಕುರಿತು ರಿಪೋರ್ಟ್ ಬರೆದು ಕಳಿಸಿದಾಗ.. ಅದೇನೋ ದಿಲ್ ಖುಷ್...
ಪತ್ರಕರ್ತನಾಗಿದ್ದಕ್ಕೆ ಇಂತದ್ದು ಕಾಮನ್ನು ಗುರು ಎಂದು ಅದ್ಯಾರೋ ಹೇಳಿದರು..
ಬೆಂಗಳೂರಲ್ಲಿದ್ದರೆ ಹಿಂಗಾಗ್ತಿತ್ತಾ ಎಂದವರೂ ಇದ್ದಾರೆ,,,
ಏನೋ ಒಂಥರಾ ಎನ್ನಿಸಿದರೂ
ಮನದಲ್ಲಿ ಮಹಾಮಳೆಯ ನೆನಪು..
ಉತ್ತರಕನ್ನಡವೂ ಉತ್ತರಕಾಂಡದಂತಾಯ್ತು.. ಎಂಬಂತೆ...