Wednesday, December 18, 2013

ಶಿಲ್ಪಾ (ಕಥೆ)

                       ಅಂದು ಯಾಕೋ ಮನಸ್ಸಿಗೆ ತುಂಬಾ ಬೇಜಾರಾಗಿತ್ತು. ಹೇಳಲಸಾಧ್ಯವಾದ ಬೇಸರ. ಮನೆಯಲ್ಲಿ ಕುಳಿತೆ, ತಿರುಗಾಡಿದೆ.. ಟಿ.ವಿ ನೋಡಿದೆ, ಪುಸ್ತಕ ಓದಿದೆ, ಮುಖೇಶನನ್ನೂ ಹಾಡಿಸಿದೆ.. ಊಹೂಂ.. ! ಏನು ಮಾಡಿದರೂ ಬೇಸರ ಹೋಗಲೊಲ್ಲದು. ಕೊನೆಗೊಮ್ಮೆ ಪುಸ್ತಕಗಳ ರಾಶಿಯ ನಡುವಿನಲ್ಲಿದ್ದ ಕಾಲೇಜು ದಿನಗಳ ಆಟೋಗ್ರಾಫ್ ನೆನಪಾಯ್ತು. ತೆರೆದು ಓದಲಾರಂಭಿಸಿದೆ.
       ಕೆಲವರ ಪ್ರಕಾರ ಆಟೋಗ್ರಾಫ್ ಬರೆಯುವುದು ಅಥವಾ ಬರೆಸುವುದು ನಿಷ್ಪ್ರಯೋಜಕ. ಆದರೆ ನನ್ನ ಪ್ರಕಾರ ಅದು ನಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು. ಇನ್ನೊಂದೇನಂದ್ರೆ ಬೇಸರ, ಏಕಾಂತ, ದುಃಖದ ಸಮಯದಲ್ಲಿ ಅದರಂತಹ ಖುಷಿಕೊಡುವ ವಸ್ತು ಇನ್ನೊಂದಿಲ್ಲ.
       ನಾನು ಹಾಗೆಯೇ ಅದನ್ನು ಓದುತ್ತಾ ಹೋದಂತೆ ನೆನಪಿನಾಳದಿಂದ ಮಾಸಿ ಹೋಗಿದ್ದ ಗೆಳೆಯರೆಲ್ಲ ಮತ್ತೆ ನೆನಪಿಗೆ ಬಂದರು. ಎಸ್ಸೆಎಸ್ಸೆಎಲ್ಸಿಯ ಗೆಳೆಯರು, ಪಿಯುಸಿಯ ದೋಸ್ತು, ಡಿಗ್ರಿಯ ಗೆಳೆಯ ಗೆಳತಿಯರೆಲ್ಲ ನೆನಪಿನಂಗಳಕ್ಕೆ ಧುತ್ತೆಂದು ಬಂದರು. ಆಗ ಕಳೆದ ಸಮಯ, ಮೋಜು-ಮಸ್ತಿ-ಮಜಾ-ಹರಟೆ-ಜಗಳ ಮುಂತಾದ ಸನ್ನಿವೇಶ ನೆನಪಿಗೆ ಬಂದಿತು.
       ಪ್ರೀತಿಯ ಮಿತ್ರ ವಿಜಯ, ಆದಿತ್ಯ ನೆನಪಾದರು. ಕಮಲಾಕರ ನೆನಪಿಗೆ ಬಂದ. ಅದಲ್ಲದೇ ಡಿಗ್ರಿಯ ಗೆಳೆಯರಾಗಿದ್ದ ರಾಘು, ಕಿಟ್ಟು ಅವರೂ ನೆನಪಿಗೆ ಬಂದರು. ಹೀಗೆ ತಿರುವುತ್ತ ಸಾಗಿದಂತೆ ಕೊಟ್ಟ ಕೊನೆಯಲ್ಲಿ ಇದ್ದ ೊಂದು ಆಟೋಗ್ರಾಫ್ ನನ್ನ ನದುಕಿಗೆ ಸಂತಸವನ್ನೀಯುತ್ತಿತ್ತು. ಆ ಆಟೋಗ್ರಾಫ್
ಸ್ನೇಹದ ಗುಂಗಲ್ಲಿ ಮೈಮರೆತು
ಪ್ರೇಮ ಪಯಣದಲ್ಲಿ ಕನಸುಗಳನ್ಹೊತ್ತು
ಸಾಗುವ ಜೀವನ ನೌಕೆಗೆ ಸಾಟಿಯಾಗಬಲ್ಲದೇ
ಕಡಲಿನ ಆ ಭಾರಿ ಮುತ್ತು
ಎನ್ನುವ ವಾಕ್ಯ-ಚುಟುಕದೊಂದಿಗೆ ಪ್ರಾರಂಭವಾಗಿತ್ತು. ಅದನ್ನು ಬರೆದಾಕೆಯೇ ಶಿಲ್ಪಾ.ನನಗೆ ಬಿ.ಎ ಓದುವಾಗ ಸಿಕ್ಕ ಓರ್ವ ಕವಯಿತ್ರಿ ಗೆಳತಿ ಈಕೆ.
        ನಿಜವಾಗ್ಲೂ ಹೇಳಬೇಕಂದ್ರೆ ಆಕೆ ನನಗೆ ಗೆಳತಿಯಾಗಿ ಸಿಕ್ಕ ಅವಧಿ ಕೇವಲ ಮೂರು ತಿಂಗಳ ಕಾಲ ಮಾತ್ರ. ಹಾಗೆ ಅವಳು ಬರೆದ ಆಟೋಗ್ರಾಫ್ ಓದಿದ ನಂತರ ಮನದಲ್ಲಿ ಅವಳ ನೆನಪೇ ತುಂಬಿತ್ತು. ಹಾಗೇ ಅವಳ ಬದುಕು, ಹಲವು ವಿಚಿತ್ರ ತಿರುವುಗಳಿಗೆ ಸಿಲುಕಿದ ಕ್ಷಣಗಳೆಲ್ಲ ನಿಧಾನವಾಗಿ ನೆನಪಿಗೆ ಬರಲಾರಂಭವಾದವು.

**

       ಶಿಲ್ಪಾ ಓರ್ವ ಸುಸಂಸ್ಕೃತ ಮನೆತನದಾಕೆ. ಆಕೆಯ ಊರು ಶಿರಸಿಯ ಸಮೀಪದ ಒಂದು ಚಿಕ್ಕ ಹಳ್ಳಿ. ಓದಿನಲ್ಲಿ ಬಹಳ ಚುರುಕು. ಉತ್ತಮ ಹಾಡುಗಾರ್ತಿಯೂ ಹೌದು. ಓರ್ವ ಯುವ ಕವಯಿತ್ರಿಯಾಗಿದ್ದ ಈಕೆಯನ್ನು ನನಗೆ ಪರಿಚಯಿಸಿದ್ದು ಇನ್ನೋರ್ವ ಗೆಳತಿ ಚೈತ್ರಾ. ಒಂದು ದಿನ ನಾನು ಆಗ ಬಿ.ಎ. ಗೆ ಸೇರಿ 15-20 ದಿನವಾಗಿತ್ತಷ್ಟೇ. ಆಗಸ್ಟೇ ಪ್ರಾರಂಭವಾಗಿದ್ದ ಸೆಮಿಸ್ಟರ್ ಪದ್ಧತಿ. ಅಂದು ಬಹುಶಃ ಇಂಗ್ಲೀಷ್ ಕ್ಲಾಸಿರಬೇಕು. ಮುಗಿದಿತ್ತಷ್ಟೇ. ಆಗ ಬಂದ ಈಕೆ ನನ್ಹತ್ರ `ಏನೋ.. ನೀನು ಕಥೆ.. ಕವನ ಬರೀತಿಯಂತೆ.. ನಂಗೊಮ್ಮೆ ತೋರಿಸು..' ಎಂದಳು.
       ನನಗೆ ಚಿಕ್ಕ ಷಾಕ್. ಯಾರಪ್ಪಾ ಹೀಗೆ ಸಡನ್ನಾಗಿ ಬಂದು ಕೇಳ್ತಿದ್ದಾಳೆ ಅಂದ್ಕೊಂಡು ವಿಸ್ಮಯದಿಂದ `ಯಾರು ನಿಂಗೆ ಹೇಳಿದ್ದು..?' ಎಂದೆ.
       ಆಕೆ ತೋರಿಸಿದ್ದು ಬಾಲ್ಯದ ಹಾಗೂ ಗೆಳತಿ ಚೈತ್ರಾಳನ್ನು. ಹೀಗೆ ಪರಿಚಯವಾದ ಶಿಲ್ಪಾ ಆಕೆ ಬರೆದ ಕವಿತೆಗಳನ್ನು ನನಗೆ ತೋರಿಸಿದ್ದಳು. ನನ್ನ ಬಳಿ ಸಲಹೆಯನ್ನೂ ಪಡೆದುಕೊಂಡಿದ್ದಳು. ನಾನೂ ಕವಿತೆಗಳನ್ನು, ಬರಹಗಳನ್ನು ನೀಡಿ ಸಲಹೆಯನ್ನು ಪಡೆದುಕೊಂಡಿದ್ದೆ. ಸಮಾಜಸೇವೆ ಮಾಡಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದ್ದ ಆಕೆ ಅದೇ ಕಾರಣಕ್ಕಾಗಿ ಕಾಲೇಜಿನ ಎನ್.ಎಸ್.ಎಸ್. ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಳು.
       ಅವಳ ಪರಿಚಯವಾಗಿ ಒಂದೆರಡು ತಿಂಗಳುಗಳು ಕಳೆದಿರಬಹುದಷ್ಟೇ. ಆಗಲೇ ನನಗೆ ಗೊತ್ತಾಗಿದ್ದು ಅವಳ ಮದುವೆ ಅಂತ. ನಿಜಕ್ಕೂ ಶಾಕ್ ಆಗಿದ್ದೆಂದರೆ ಅಷ್ಟು ಚಿಕ್ಕ ವಯಸ್ಸಿಗೆ ಮದುವೆ ಮಾಡ್ತಾರೆ ಅನ್ನೋ ಸುದ್ದಿಯನ್ನು ಕೇಳಿ.
       ಒಂದು ದಿನ ಆಕೆ ಕಾಲೇಜಿಗೆ ಬಂದವಳೆ ತನ್ನ ಎಂಗೇಜ್ ಮೆಂಟ್ ಇದೆಯೆಂದೂ ಅದಕ್ಕೆ ತಪ್ಪದೇ ಬರಬೇಕೆಂದೂ ತಿಳಿಸಿದಳು. ಆಗ ಎನ್.ಎಸ್.ಎಸ್. ಶಿಬಿರ ನಡೆಯುತ್ತಿತ್ತು. ಆಕೆಯ ಸಮಾಜಸೇವೆಯ ಗುರಿಯನ್ನು ಬಿಟ್ಟು, ಎನ್.ಎಸ್.ಎಸ್. ಶಿಬಿರವನ್ನೂ ಅರ್ಧದಲ್ಲಿಯೇ ಬಿಟ್ಟು ಬಂದಿದ್ದಳು. ಆಕೆಯ ಒತ್ತಾಯಕ್ಕೆ ಮಣಿದು ನಾನು ಹಾಗೂ ಚೈತ್ರಾ ನಿಶ್ಚಿತಾರ್ಥಕ್ಕೆ ಹೋಗಿ ಬಂದೆವು. ಆಗ ಆಕೆ ಅವಳ ಭಾವಿ ಪತಿಯನ್ನು ಪರಿಚಯಿಸಿದಳು.
       ಅವಳ ಭಾವಿ ಪತಿಯ ಹೆಸರು ಜಗದೀಶ. ಆತ ಸಾಗರ ಕಡೆಯ ಹಳ್ಳಿಯವನು. ಹುಬ್ಬಳ್ಳಿಯಲ್ಲಿ ಉತ್ತಮ ಉದ್ಯೋಗದಲ್ಲಿದ್ದ ಆತ. ಬಹಳ ತೆಳ್ಳಗಿದ್ದ ಶಿಲ್ಪನ ಎದುರು ಆಕೆಗಿಂತ ಎರಡುಪಟ್ಟು ದಪ್ಪವಾಗಿದ್ದ ಎನ್ನುವುದನ್ನು ಬಿಟ್ಟರೆ ಒಳ್ಳೆಯ ಮನಸ್ಸಿನ ವ್ಯಕ್ತಿ ಆತ. ಅಂದು ಮದುವೆಯ ದಿನಾಂಕವನ್ನೂ ನಿಶ್ಚಯಿಸಲಾಯಿತು. ಅದಕ್ಕೆ ಹೋಗಿ ಬಂದದ್ದೂ ಆಯಿತು. ಆಕೆಯ ಬಳಿ `ನಿನ್ನ ಬಾಳ್ದೋಣಿ ಸುಖವಾಗಿರಲಿ..' ಎಂದು ಆಶಿಸಿದ್ದೂ ಆಯಿತು. ಅದೆಷ್ಟು ಬೇಗ ನನಗೆ ಪರಿಚಯವಾಗಿದ್ದಳೋ ಅಷ್ಟೇ ಬೇಗ ಅವಳ ಮದುವೆಯೂ ಆಗಿತ್ತು.
        ಅವಳ ಮದುವೆಯ ದಿನ ಮಿತ್ರನೋರ್ವ ಅವಳಿಗೆ ಟ್ಯೂಬ್ ಲೈಟ್, ಪಟಾಕಿ ಎಂದೆಲ್ಲಾ ಹೆಸರಿಟ್ಟಿದ್ದನ್ನು ಆತ `ಟ್ಯೂಬಲೈಟ್ ಮದುವೆ ವೆರಿ ವೆರಿ ಫಾಸ್ಟ್..' ಎಂದು ಹೇಳಿ ನಗಿಸಿದ್ದ. ಈ ಮುಂತಾದ್ದೆಲ್ಲಾ ಆ ಆಟೋಗ್ರಾಫ್ ಓದಿ ಮುಗಿಸುವ ವೇಳೆಗೆ ನನ್ನ ತಲೆಯಲ್ಲಿ ತುಂಬಿತ್ತು. ಒಮ್ಮೆಲೆ ಸಣ್ಣಗೆ ನಕ್ಕೆ.


**

      ಆಕೆಯನ್ನೊಮ್ಮೆ ಈಗ ಭೇಟಿಯಾಗಬೇಕಲ್ಲ ಎಂದು ನಿರ್ಧರಿಸಿ ಮರುದಿನ ಆಕೆಯ ತವರೂರಿಗೆ ಹೋದೆ. ಅಲ್ಲಿ ಆಕೆಯ ತಂದೆ ತಾಯಿಯರ ಬಳಿ ಶಿಲ್ಪಾಳ ಗಂಡನ ಮನೆಯ ವಿವರ ತಿಳಿಯುವುದು ನನ್ನ ಉದ್ದೇಶವಾಗಿತ್ತು. ಅವರ ಬಳಿ ಕೇಳಿದೆ. ಅವರು ಹೇಳಿದರು. ಆಮೇಲೆ ನಾನು ನೇರವಾಗಿ ಆಕೆಯ ಗಂಡನ ಮನೆಯತ್ತ ತೆರಳಿದೆ. ಸಾಗರದ ವರದಳ್ಳಿಯ ಸನಿಹದ ಊರಲ್ಲಿ ಆಕೆಯ ಗಂಡನ ಮನೆ. ಅಲ್ಪ ಸ್ವಲ್ಪ ಹುಡುಕಾಟದ ನಂತರ ಆಕೆಯ ಮನೆ ಸಿಕ್ಕಿತು. ಇದ್ದಾಳೋ, ಇಲ್ಲವೋ,.. ಇದ್ದರೇ ಹೇಗೆ ಮಾತನಾಡುವುದು, ಇಲ್ಲದಿದ್ದರೆ ಏನು ಮಾಡುವುದು ಈ ಮುಂತಾದ ಗೊಂದಲದ ಗೂಡಿನಂತಹ ಮನಸ್ಸಿನೊಂದಿಗೆ ಆಕೆಯ ಮನೆಯ ಕಾಲಿಂಗ್ ಬೆಲ್ ಒತ್ತಿದೆ.
        ಯಾರೋ ಹಿರಿಯರು ಮನೆಯ ಬಾಗಿಲು ತೆರೆದರು. ವಿಚಾರಿಸಿದಾಗ ತಾನು ಶಿಲ್ಪಾಳ ಮಾವ ಎಂದರು. ಮನೆಯೊಳಗೆ ಕರೆದು ಕುಳ್ಳಿರಿಸಿ ತಮ್ಮ ಮನೆಯಾಕೆಗೆ ನನ್ನನ್ನು ಪರಿಚಯಿಸಿದರು. ಕೊನೆಗೆ ಶಿಲ್ಪಾ ಹಾಗೂ ಜಗದೀಶರ ಬಗ್ಗೆ ವಿಚಾರಿಸಿದೆ. ಅವರು ಹುಬ್ಬಳ್ಳಿಯಲ್ಲಿದ್ದಾರೆಂದೂ ಅಲ್ಲಿಗೆ ಹೋದರೆ ಸಿಗಬಹುದೆಂದೂ ತಿಳಿಯಿತು. ನಾನು ಹುಬ್ಬಳ್ಳಿಗೂ ಹೋದೆ. ಶಿಲ್ಪಾಳ ಅತ್ತೆ-ಮಾವ ಕೊಟ್ಟ ವಿಳಾಸದಿಂದ ಮನೆ ಹುಡುಕುವುದು ಕಷ್ಟವೇನೂ ಆಗಲಿಲ್ಲವೆನ್ನಿ.
         ಅವರ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತಿದೆ. ಒಳಗಿನಿಂದ ಓರ್ವ ವ್ಯಕ್ತಿ ಬಂದು ಬಾಗಿಲು ತೆರೆದರು. ನಾನು ನನ್ನ ಪರಿಚಯ ಹೇಳಿಕೊಂಡೆ. ಒಳಗೆ ಕರೆದು ಕುಳ್ಳಿರಿಸಿದ ವ್ಯಕ್ತಿಯೇ ಜಗದೀಶ್ ಎಂದು ಆ ನಂತರ ನನಗೆ ತಿಳಿಯಿತು. ಮವುವೆಯಾಗಿ 7 ವರ್ಷವಾದ ನಂತರ ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದ ಕಾರಣ ತಕ್ಷಣಕ್ಕೆ ಅವರ ಗುರುತು ನನಗೆ ಹಿಡಿದಿರಲಿಲ್ಲ. ಅವರ ಬಳಿ ಶಿಲ್ಪಾಳ ಬಗ್ಗೆ ವಿಚಾರಿಸಿದೆ. ಆಗ ಅವರು `ಅವಳು.. ಈಗಷ್ಟೇ ತವರಿಗೆ ಹೋದಳಲ್ಲ.. ' ಎಂದರು.
         ಆಕೆಯನ್ನು ನೋಡಿ ಮಾತಾಡಿಸಿ ಹೋಗೋಣ ಎಂದುಕೊಂಡಿದ್ದ ನನಗೆ ಒಮ್ಮೆ ಭ್ರಮನಿರಸನವಾದರೂ ಜಗದೀಶರ ಬಳಿ `ಆಕೆ ಚನ್ನಾಗಿದ್ದಾಳಾ..' ಎಂದು ಕೇಳಿದೆ.
         ಆಗ ಅವರು `ನೋಡಿ ಇವ್ರೆ... ನಿಮ್ಮ ಬಗ್ಗೆ ಅನೇಕ ಸಾರಿ ನನ್ನ ಹತ್ತಿರ ಹೇಳಿದ್ದಾಳೆ.. ನಾನೂ ಕುತೂಹಲದಿಂದ ನಿಮ್ಮ ಬಗ್ಗೆ ವಿಚಾರಿಸಿದ್ದೆ. ಮೊನ್ನೆ ನಿಮ್ಮದೊಂದು ಪುಸ್ತಕ ಬಿಡುಗಡೆಯಾಯಿತಲ್ಲ.. ಆಗ ಹುಬ್ಬಳ್ಳಿಯಲ್ಲಿ ನಿಮ್ಮ ಪುಸ್ತಕಗಳಿಗಾಗಿ ಎಲ್ಲ ಅಂಗಡಿಗಳನ್ನು ಜಾಲಾಡಿದ್ದಳು.. ಅಷ್ಟೇ ಅಲ್ಲ ನನಗೂ ಆದಿನ ಅದೇ ಕೆಲಸ ಮಾಡಿಸಿದಳು.. ಸಿಗಲಿಲ್ಲ ಬಿಡಿ..' ಎಂದರು.
        `ಏನ್ ಮಾಡ್ತಿದ್ದಾಳೆ ಆಕೆ..? ' ಎಂದೆ..
        `ಆಗ ಅವರು `ನೋಡಿ ಈ ಶಿಲ್ಪಾಳದ್ದು ಸುಮ್ಮನಿರ ಗುಣವಲ್ಲ. ಸದಾ ಏನಾದರೂ ಮಾಡ್ತಾ ಇರಬೇಕು ಅನ್ನೋ ಮನೋಭಾವ.. ಕುಂತಲ್ಲಿ ಕೂರೋದಿಲ್ಲ.. ಆಕೆಯ ವೇಗಕ್ಕೆ ಅನೇಕ ಸಾರಿ ನಾನೇ ಸೋತು ಸುಣ್ಣವಾಗಿದ್ದೇನೆ.. ಹುಬ್ಬಳ್ಳಿಗೆ ಬಂದ ಹೊಸತರಲ್ಲಿ ಬೆಕ್ಕಿನ ಮರಿಯಂತಿದ್ದಳು.. ಕ್ರಮೇಣ ಹುಬ್ಬಳ್ಳಿಯೆಲ್ಲ ಚಿರಪರಿಚಿತವಾಯ್ತು ನೋಡಿ.. ಅದೇನೇನು ಮಾಡಿದಳೋ.. ಹೇಗೆ ಮಾಡಿದಳೋ ಗೊತ್ತಿಲ್ಲ.. ಪ್ರಾರಂಭದಲ್ಲಿ ಕಾನ್ವೆಂಟೊಂದರಲ್ಲಿ ಟೀಚರ್ ಆಗಿ ಕೆಲಸ ಮಾಡಿದಳು.. ಆಕೆಯ ಶ್ರದ್ಧೆಯೋ.. ಒಳ್ಳೆಯ ಗುಣವೋ.. ನಸೀಬೋ ಗೊತ್ತಿಲ್ಲ...ಈಗ ಎರಡು ಶಾಲೆಗಳನ್ನು ನಡೆಸುತ್ತಿದ್ದಾಳೆ.. ಒಂದು ಶಾಲೆಯಂತೂ ಬುದ್ಧಿಮಾಂದ್ಯರಿಗಾಗಿ ಆರಂಭಿಸಿದ್ದಾಳೆ.. ' ಎಂದು ಹೇಳಿದಾಗ ನನ್ನ ಮನಸ್ಸು she is great ಎಂದು ಉದ್ಘರಿಸಿತು.
         ನಾನು ಜಗದೀಶರ ಬಳಿ ಅವಳಿಗೆ ಇಷ್ಟವೆಂದು ಮಾಡಿಸಿಕೊಂಡು ಬಂದಿದ್ದ ಚಕ್ಕುಲಿಯನ್ನು ನೀಡಿದೆ. ಅವರಿಗೆ ಏನೋ ನೆನಪಾದಂತಾಗಿ ಎದ್ದು ಹೋಗಿ ಟಿ. ಮಾಡಲು ಹೊರಟರು. ಭವ್ಯ ಮನೆ.. ಕೆಲಸಗಾರರಿಲ್ಲವಲ್ಲ ಎಂದು ವಿಸ್ಮಿತನಾಗುವಷ್ಟರಲ್ಲಿ ಶಿಲ್ಪಾ ಇದ್ದಲ್ಲಿ ಅಂತದ್ದಕ್ಕೆ ಛಾನ್ಸೇ ಇಲ್ಲ ಬಿಡಿ ಎಂದು ಕೊಂಡೆ..
         ಅವರು ಟಿ. ಮಾಡಲು ಹೋಗುವ ಮುನ್ನ ಮನೆಯಿಲ್ಲಿದ್ದ ಸಿ.ಡಿ. ಪ್ಲೇಯರ್ರಿಗೆ ಯಾವುದೋ ಒಂದು ಸಿ.ಡಿಯನ್ನು ಹಾಕಿ ಕೇಳ್ತಾ ಇರಿ.. ಈಗ ಬಂದೆ ಎಂದು ಹೋದರು. ಆ ಸಿ.ಡಿ ನನಗೆ ಅತ್ಯಂತ ಇಷ್ಟವಾದ  ಕೆ. ಎಸ್. ನಿಸಾರ್ ಅಹಮದರ
ಮತ್ತದೇ ಬೇಸರ
ಅದೆ ಸಂಜೆ.... ಅದೆ ಏಕಾಂತ...
ಎಂಬ ಹಾಡನ್ನು ಹಾಡುತ್ತಿತ್ತು. ಎಲ್ಲೋ ಕೇಳಿದ ಕಂಠ ಎಂದುಕೊಂಡೆ.. ರತ್ನಮಾಲಾ ಪ್ರಕಾಶ ನೆನಪಿಗೆ ಬಂದರು. ಆದರೆ ಧ್ವನಿ ಅವರದ್ದಲ್ಲ.. ಗಮನಿಸಿ ಕೇಳಿದಾಗ ಅದು ಶಿಲ್ಪಾಳದ್ದೆಂದು ಮನದಟ್ಟಾಯಿತು. ಅರೇ... ಈಕೆ ಹಾಡಿದ ಸಿ.ಡಿ.ಯೂ ಬಿಡುಗಡೆಯಾಗಿದೆಯಾ.. ಯಾಕೆ ನನಗೆ ಗೊತ್ತಾಗಲಿಲ್ಲ.. ಎಂದುಕೊಂಡೆ.
         ಆಕೆಯ ಎಂಗೇಜ್ ಮೆಂಟ್ ಆದ ನಂತರ ಆಕೆಯನ್ನು ನನ್ನ ಮನೆಗೊಮ್ಮೆ ಕರೆದೊಯ್ದಿದ್ದೆ. ಈಕೆ ಹಾಡುತ್ತಾಳೆ ಎಂದು ಗೊತ್ತಿದ್ದಿದ್ದರಿಂದ ನಮ್ಮ ಮನೆಯಲ್ಲಿ ಆಕೆಯ ಬಳಿ ಹಾಡೆಂದು ಪೀಡಿಸಿದಾಗ `ಹೆಂಗಾರಾ ಬಾರಾ ಹುಡುಗಿ ಕಂಗಾಲಾದೇನಾ..' ಹಾಗೂ `ಹುಚ್ಚು ಖೋಡಿ ಮನಸ್ಉ...' ಎಂಬೆರಡು ಹಾಡುಗಳನ್ನು ಹಾಡಿದ್ದಳು.. ನಮ್ಮ ಮನೆಯವರಷ್ಟೇ ಅಲ್ಲದೇ ಅಕ್ಕಪಕ್ಕದ ಮನೆಯ ಶ್ರೋತೃಗಳ ಚಪ್ಪಾಳೆಯನ್ನೂ ಗಿಟ್ಟಿಸಿಕೊಂಡಿದ್ದಳು. ಆ ಸಿ.,ಡಿಯಲ್ಲಿ ಆ ಎರಡು ಹಾಡುಗಳೂ ಇದ್ದವು. ಕೇಳಿದಂತೆಲ್ಲ ಭಾವನೆಗಳು ಬಯಸಿ ಬಯಸಿ ಬರುತ್ತಿದೆಯೇನೋ ಅನ್ನಿಸುತ್ತಿತ್ತು. ಅವುಗಳನ್ನು ಕೇಳುವಷ್ಟರಲ್ಲಿ ಜಗದೀಶ್ ಅವರು ಟಿ. ತಂದರು. `ನೀವು ಬಹಳ ಬದಲಾಗಿದ್ದೀರಿ..' ಎಂದೆ.. `ಹೌದು.. ಸುಮ್ಮನೆ ಕೂರೋಕೆ ಬಿಡೋದಿಲ್ಲ ನೋಡಿ.. ತೆಳ್ಳಗಾಗಿದ್ದೇನೆ..' ಎಂದು ನಕ್ಕರು.. ಅವರ ಸರಳತೆ ನನಗಿಷ್ಟವಾಯಿತು.
         ನಾನು ಹೊರಡಲನುವಾದೆ.. ಊಟ ಮಾಡಿ ಹೋಗಿ ಎನ್ನುವ ಬಲವಂತ.. ನಾನೆಷ್ಟೇ ಕೇಳಿದರೂ ಬಿಡಲಿಲ್ಲ.. ಪರಿಣಾಮ ಅವರ ಮನೆಯ ಊಟದ ಋಣವನ್ನು ಮುಗಿಸಿದಂತಾಯಿತು. ಶಿಲ್ಪಾಳ ಬಳಿ ಮಾತನಾಡಿ ಎಂದು ಮೊಬೈಲ್  ರಿಂಗಿಸಿದರು. ನೆಟ್ ವರ್ಕ್ ಸಿಗದ ಕಾರಣ ಅದು ವ್ಯರ್ಥವಾಯಿತು. ಕೊನೆಗೆ ನಾನು ಹೊರಡಲು ಅನುವಾದೆ.. ಸಂತಸದಿಂದ ಹಾರಯಿಸಿ ಆಕೆಯ ಹಾಡಿನ ಸಿ.ಡಿ.ಯೊಂದನ್ನು ಕೊಟ್ಟರು. ನಾನು ಏನು ಮಾಡಬೇಕೆಂದು ತೋಚದೆ ನನ್ನ ಪುಸ್ತಕವನ್ನು ಅವರಿಗೆ ಕೊಟ್ಟೆ.. ಜಗದೀಶರ ಮುಖ ಅರಳಿ ಊರಗಲವಾಯಿತು. `ನೋಡ್ರಿ... ನಾನು ಕಾಯ್ತಾ ಇದ್ದೆ.. ಬಹಳ ದಿನ ಆಗಿತ್ತು.. ಅವಳು ವಾಪಸ್ಸು ಬರಲಿ.. ಸರ್ ಪ್ರೈಸ್ ಕೊಡ್ತೀನಿ..' ಎಂದರು.. ಅವರ ಅನ್ಯೋನ್ಯತೆ ಕಂಡು ಮನಸ್ಸು ಹಿಗ್ಗಿತು.
           ಮನೆಯ ಕಡೆಗೆ ಹೊರಟಾಗ ಆಕೆಯ ಸಾಧನೆಯ ಬಗ್ಗೆ ನನಗೆ ಗೌರವ ಉಂಟಾಯಿತು. ಸಮಾಜಸೇವೆಯನ್ನು ಗುರಿಯಾಗಿಟ್ಟುಕೊಂಡು, ಮಧ್ಯದಲ್ಲಿ ಅಡೆ ತಡೆ ಬಂದರೂ ಬಂದ ಸಮಸ್ಯೆಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡು ಸಾಧನೆ ಮಾಡಿದ ಆಕೆಯ ಕಡೆಗೊಂದು ಸಂತಸದ ಭಾವ ಮೂಡಿತು. ತನ್ನ ಗುರಿಯನ್ನು ಪತಿಯ ಸಹಯೋಗದೊಂದಿಗೆ ಮಾಡಿ ಮುಟ್ಟಿದ್ದು ಮತ್ತಷ್ಟು ಹಿರಿಮೆಗೆ ಕಾರಣವಾಯಿತಲ್ಲದೇ ಮನಸ್ಸು ಹ್ಯಾಟ್ಸಾಫ್ ಎನ್ನುತ್ತಿತ್ತು.. ಮನಸ್ಸಿನಲ್ಲಿ ಮಾತ್ರ
`ಮತ್ತದೇ ಬೇಸರ..
ಅದೆ ಸಂಜೆ.. ಅದೆ ಏಕಾಂತ..' ಎಂಬ ನಿಸಾರರ ಹಾಡು ಬಿಟ್ಟು ಬಿಡದೇ ಗುನುಗಿ ಕಾಡುತ್ತಿತ್ತು.. ಇಂತಹಾ ಗೆಳತಿಯನ್ನು ಪರಿಚಯಿಸಿದ ಚೈತ್ರಾಳಿಗೆ ಮನಸ್ಸು ಥ್ಯಾಂಕ್ಸ್ ಎನ್ನುತ್ತಿತ್ತು..7

6 comments:

  1. ಚೆನ್ನಾಗಿದ್ದು ಕಥೆ :)

    ReplyDelete
  2. Nice Story. Even for the readers Shilpa will remain as memory. Thanks for a refreshing story.

    ReplyDelete
  3. ಥ್ಯಾಂಕ್ಸ್ ಹರೀಶಣ್ಣ...
    ಶಂಕರ್ ಅವರೆ ಪ್ರತಿಕ್ರಿಯೆಗೆ ಧನ್ಯವಾದಗಳು..
    ಹೀಗೇ ನೀಡುತ್ತಿರಿ...

    ReplyDelete
  4. chanag iddu kathe... :-)

    ReplyDelete
  5. ಕಥೆ ಓದಕ್ಕಾರೆ ಅದ್ಕೆ ಮದುವೆ ಆತು ಅಂತ ಒದಿದ್ಕುಡ್ಲೆ ವಾಣಿ ಗೆ ಸಿಕ್ಕಿದ್ ತರದ್ದೆ ಗಂಡ ಸಿಕ್ಕ್ಕಿರ್ತ್ನೆನ ಪಾಪ ಅನ್ಸ್ಚು... ಆಮೇಲೆ ಹಾಗಯ್ದಿಲ್ಲೆ ಅಂತ ಗೊತಗ್ತಲಿ ಮನ್ಸಿಗೆ ಒಂಥರಾ ಖುಷಿ...

    ReplyDelete