Friday, November 29, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 7

ಬಾಗೇವಾಡಿಯ ಬಸವೇಶ್ವರ ಕಾಲೇಜು ಮೈದಾನದಿಂದ ಕಂಡಂತೆ
ಮದ್ಯಾಹ್ನದ ವೇಳೆಗೆ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭ ಶುರುವಾಯಿತು. ಗೋಗಟೆಯ ಕಾಲೇಜು ಪ್ರಥಮ, ನಮ್ಮ ಕಾಲೇಜು ದ್ವಿತೀಯ ಹಾಗೂ ಆರ್.ಪಿ.ಡಿ ಕಾಲೇಜು ತೃತೀಯ ಸ್ಥಾನವನ್ನು ಗಳಿಸಿಕೊಂಡಿತು. ನಮ್ಮ ಕಾಲೇಜಿನ ಹುಡುಗಿಯರ ತಂಡ ಮೊದಲನೇ ಸ್ಥಾನವನ್ನು ತಮ್ಮದಾಗಿಸಿಕೊಂಡು ಬೀಗಿತು.
ನಮ್ಮ ತಂಡದಿಂದ ಒಂದೇ ಒಂದು ಮ್ಯಾಚನ್ನೂ ಸೋಲದ ಕಿಟ್ಟು ಪ್ಲೇಯರ್ ಆಫ್ ದಿ ಟೂರ್ನಿಮೆಂಟ್ ಪ್ರಶಸ್ತಿ ಪಡೆದ. ಕೊನೆಗೆ ನಮ್ಮ ಎನ್. ಎಚ್. ಗೌಡರಿಗೆ ಸ್ವಲ್ಪ ಗಾಳಿ ಹೊಡೆದು ಕುಮಟಾದ ಬಾಳಿಗಾ ಕಾಲೇಜಿನ ನಮ್ಮ ಮಿತ್ರ ಕಿಟ್ಟುವಿಗೂ ಪ್ಲೇಯರ್ ಆಫ್ ದಿ ಟೂರ್ನಿಮೆಂಟ್ ಪ್ರಶಸ್ತಿ ಸಿಗುವಂತೆ ಮಾಡಿದೆವು. ಅಫ್ ಕೋರ್ಸ್ ಆತ ಕೂಡ ಒಂದೇ ಒಂದು ಮ್ಯಾಚನ್ನೂ ಸೋತಿರಲಿಲ್ಲ.. ಆದರೆ ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆರ್.ಪಿ.ಡಿ. ಕಾಲೇಜಿನ ಹುಡುಗರು ಬರಲೇ ಇಲ್ಲ..!! ಬಹುಶಃ ಅವಮಾನ ಆಗಿರಬೇಕು ..!!
ಸಂಜೆ ಎಲ್ಲರೂ ಖುಷಿಯಲ್ಲಿದ್ದರು. ನವೀನ ಪಾವಸ್ಕರ ಫುಟಬಾಲ್ ಮ್ಯಾಚ್ ಆಡಲು ಹೋಗಿದ್ದ.. ಸ್ಥಳೀಯ ಕಾಲೇಜಿನ ಹಾಗೂ ನಮ್ಮಂತೆ ಬಾಗೇವಾಡಿಗೆ ಚಸ್ಸಾಡಲು ಬಂದಿದ್ದ ಇತರ ಕಾಲೇಜಿನ ಹುಡುಗರು ಆತನಿಗೆ ಜೊತೆಗಾರರಾಗಿ ಸಿಕ್ಕಿದ್ದರು. ಕಿಟ್ಟುವಂತೂ ಎಂದಿನಂತೆ ಹುಡುಗಿಯರ ಜೊತೆಗೆ ಮಾತಿಗಿಳಿದಿದ್ದ. ನನಗೆ ಹಾಗೂ ಆನಂದನಿಗೆ ಮಾಡಲು ಬೇರೇನೂ ಕೆಲಸ ಕಾಣಲಿಲ್ಲ.. ಕಾಲೇಜಿನ ಕಾರಿಡಾರಿನಲ್ಲಿ ಅಡ್ಡಾಡಿದೆವು.. ನನಗೆ ಮಾತಿನ ಹುಕಿಯಿದ್ದರೂ ಆನಂದ ಮೌನಿ.. ಆನಂದನಂತಹ ಮೂಕ ಹಕ್ಕಿಯ ಜೊತೆಗೆ ಕಾಲೇಜಿನ ಕಾರೀಡಾರಿನಲ್ಲಿ ಅಡ್ಡಾಡಿದರೆ ಮುಗಿದೇ ಹೋಯ್ತು.. ಮಾತಿಲ್ಲ.. ಕಥೆಯಿಲ್ಲ ಬರೀ ರೋಮಾಂಚನ..
ಹೀಗಿರಲು ಕಾರಿಡಾರಿನಲ್ಲಿ ನಮ್ಮ ನಾಗಭೂಷಣ ಗೌಡರು ಸಿಕ್ಕರು. ಅವರ ಜೊತೆಗೆ ಗೋಗಟೆ ಕಾಲೇಜಿನ ಮ್ಯಾನೇಜರ್ ಕಂ ಲೆಕ್ಚರ್ ಕಂ ಕೋಚ್ ಕಂ ಅಂಪಾಯರ್ರಾಗಿದ್ದವರೂ ಇದ್ದರು.. ಅವರವರಲ್ಲೇ ಉಭಯಕುಶಲೋಪರಿ ಸಾಂಪ್ರತವೂ ನಡೆದಿತ್ತು.. ಆ ಲೆಕ್ಚರ್ರೋ ನೋಡಲು ಕುಳ್ಳರು. ಪರವಾಗಿರಲಿಲ್ಲ.. ಒಂದು ಕಾಲು ಬಹಳ ಕುಂಟುತ್ತಿದ್ದರು. ಪರಿಣಾಮವಾಗಿ ಕೈಯಲ್ಲೊಂದು ವಾಕಿಂಗ್ ಸ್ಟಿಕ್ಕಿತ್ತು.. ನಾನು ಹಾಗೂ ಆನಂದ ಅವರ ಬಳಿ ಹೋದೆವು.. ಹಾಗೂ ಹೀಗೂ ಮಾತಿಗೆ ನಿಂತೆವು.. `ನೀವು ಬರೋಬರ್ ಆಡಿದ್ರೀ.. ಭೇಷ್ ಆಟಾನ್ರೀ..' ಎಂದು ನನ್ನನ್ನು ಹೊಗಳಿ ಅಟ್ಟಕ್ಕೇರಿಸಲು ಯತ್ನಿಸಿದರು ಅವರು.. ನಾನೂ ಸ್ವಲ್ಪ ಖುಷಿಗೊಂಡೆ ಅನ್ನಿ.. ಅದೇ ಸಮಯದಲ್ಲಿ ನನಗೇನನ್ನಿಸಿತೋ ಏನೋ ಇದ್ದಕ್ಕಿದ್ದಂತೆ ಅವರ ಬಳಿ `ಸರ್.. ಚಾಲೇಂಜಿಗೆ ಬರ್ತೀರಾ..? ನಿಮ್ಮ ಟೀಮಿನ 3ನೇ ಬೋರ್ಡ್ ಪ್ಲೇಯರನ್ನು ಸೋಲಿಸ್ತೀನಿ.. ಎರಡನೇ ಬೋರ್ಡ್ ಪ್ಲೇಯರ್ ವಿರುದ್ಧ ಮೋಸ ಮಾಡಿದ್ರಿ.. ಆಗ್ಲಿ.. ಮೂರನೇ ಬೋರ್ಡ್ ಪ್ಲೇಯರ್ ನಾ ಸೋಲಿಸ್ತೀನಿ.. ಆತ ರೇಟೆಡ್ ಪ್ಲೇಯರ್ರಂತೆ.. ಓ.ಕೆ.ನಾ..?' ಎಂದು ಬಿಟ್ಟೆ.. ಅವರು ಮಾತನಾಡಲಿಲ್ಲ.. ನಗುತ್ತಾ ನಿಂತರು..
ಬಹುಶಃ ನಾನು ಮಾಡಿದ ಬಹುದೊಡ್ಡ ತಪ್ಪು ಇದಾಗಿತ್ತು. ಹೀಗೆ ಚಾಲೆಂಜ್ ಮಾಡಬಾರದಿತ್ತು ಅಂತ ಈಗ ಅನ್ನಿಸ್ತಿದೆ.. ಹೀಗೆ ಚಾಲೆಂಜ್ ಮಾಡಿದ್ದಕ್ಕೋ ಏನೋ ಕೊನೆಯವರೆಗೂ ಮೂರನೇ ಬೋರ್ಡ್ ಆಟಗಾರ ಸಮೀರ್ ಘೋಟ್ನೆಯನ್ನು ನನ್ನ ವಿರುದ್ಧ ಆಡಲಿಕ್ಕೆ ಬರದಂತೆ ನೋಡಿಕೊಂಡುಬಿಟ್ಟರು ಅವರು! ಕೊನೆಗೆ ಮಾತು ಹೊರಳಿತು.. ನಮ್ಮ ಕಿಟ್ಟುವಿನ ಆಟವನ್ನು ಹೊಗಳುತ್ತ ನಿಂತೆವು..
ಇಳಿ ಸಂಜೆಯ ವೇಳೆಯಲ್ಲಿ ಮಾಡಲಿಕ್ಕೆ ಏನೂ ಕೆಲಸ ಕಾಣಲಿಲ್ಲ.. ನಾನು, ಕಿಟ್ಟು ಕಾಲೇಜಿನ ಆವರಣದಲ್ಲಿ ಅಡ್ಡಾಡಲು ಆರಂಭಿಸಿದ್ದೆವು. ನಮ್ಮ ಜೊತೆಗೆ ತೃಪ್ತಿಯೂ ಸೇರಿಕೊಂಡಳು.. ಮಾತಿನಮಲ್ಲಿ ತೃಪ್ತಿ ಹಾಗೂ ಮಾತಿನಮಲ್ಲ ಕಿಟ್ಟು.. ನಡುವೆ ನಾನು ಸಿಕ್ಕಿ ಮೌನಿಯಾಗಿಬಿಟ್ಟೆ.. ಇಬ್ಬರೂ ಸಿಕ್ಕಾಪಟ್ಟೆ ಮಾತುಗಾರರು.. ಡೈಲಾಗ್ ರಾಜ-ರಾಣಿಯರು. ಮಾತಾಡಿ ನಾನು ಮಳ್ಳಾಗುವುದಕ್ಕಿಂತ ಸುಮ್ಮನಿರುವುದೇ ಲೇಸೆಂದು ತಂಡಾದೆ.. ನಾವು ಅಡ್ಡಾಡುತ್ತ ಅಡ್ಡಾಡುತ್ತ ಕಾಲೇಜು ಹೊರಗೆ ಹಾದುಹೋಗಿದ್ದ ರಸ್ತೆಯಲ್ಲಿ ನಡೆಯತೊಡಗಿದೆವು.. ರಸ್ತೆಯ ಇಕ್ಕೆಲಗಳಲ್ಲಿ ದೈತ್ಯ ಹುಣಸೇ ಮರಗಳು.. ರಸ್ತೆಯನ್ನು ತಂಪು ಮಾಡಿದ್ದವು.. ಮರದ ತುಂಬ ಹುಣಸೆ ಹಣ್ಣುಗಳು, ನಮ್ಮ ಪ್ರೀತಿಯ ಹುಣಸೆ ಬೊಟ್ಟುಗಳು.. ನಾವು ಮೂವರಿಗೂ ಆಸೆಯ ಚೌಳುನೀರು.. ಮರಕ್ಕೆ ಅದೆಷ್ಟು ಅಡ್ಡಬಡ್ತಿಗೆ ಹೊಡೆದೆವೂ.. ನಮ್ಮ ಬಡ್ತಿಗೆ ಹುಸಿಹೋಗಲಿಲ್ಲ.. ಹಲವು ಹುಣಸೆಬೊಟ್ಟುಗಳು ಸಿಕ್ಕವು.. ಬಿದ್ದ ಹುಣಸೆಬೊಟ್ಟನ್ನು ಬಾಯಿಗಿಟ್ಟರೆ ಹುಳಿ ಹುಳಿಯಾಗಿ ಒಂದು ಕಣ್ಣು ನಮ್ಮರಿವಿಗಿಲ್ಲದಂತೆ ಮುಚ್ಚಿ ಹೋಗಿ.. ಆಹಾ.. ಕೆಲವು ಹಣ್ಣುಗಳೂ ಸಿಕ್ಕವು ಅನ್ನಿ..
ರಾತ್ರಿ ನಮ್ಮ ಪಾಳಯದಲ್ಲಿ ಯುದ್ಧ ಗೆದ್ದ ಸಂಭ್ರಮ.. ಖುಷಿಯೋ ಖುಷಿ.. ನಮ್ಮ ಕಾಲೇಜಿಗೆ ಕುಮಟಾದ ಬಾಳಿಗಾ ಕಾಲೇಜಿನ ಹುಡುಗರು ಬಂದಿದ್ದರು. ಮಾತು-ಕಥೆ.. ಹರಟೆ ನಡೆಯಿತು.. ಪಾವಸ್ಕರ ಮತ್ತೆ ಯಥಾ ಪ್ರಕಾರ ಅವರಿಗೆ ದುಡ್ಡುಕೊಡಲು ನೋಡಿದ. ಅದಕ್ಕವರು `ನಾವು ಪ್ರೆಂಡ್ ಷಿಪ್ ಗಾಗಿ ಬಿಟ್ಟುಕೊಟ್ವಿ.. ದುಡ್ಡಿಗಾಗಿ ಅಲ್ಲ.. ಎಲ್ಲಕ್ಕಿಂತ ಹೆಚ್ಚಾಗಿ ನಾವಂತೂ ಯಾವುದೇ ಬಹುಮಾನ ಪಡೆಯಲು ಸಾಧ್ಯವಿರಲಿಲ್ಲ.. ನೀವು ನಮ್ಮ ಉತ್ತರ ಕನ್ನಡದವರು.. ನೀವು 2nd ಬಂದರೆ ನಮಗೆ ಅದೇ ಖುಷಿ.. ಅದಕ್ಕಾಗಿ ಇಷ್ಟೂ ಮಾಡದಿದ್ದರೆ ಹೆಂಗೆ..?' ಎಂದರು. ನಾನು ನವೀನನನ್ನು ಗದರಿಸಿ ಸುಮ್ಮನಿರಿಸಿದೆ.
ಊಟ ಮುಗಿಸಿದ ನಂತರ ಮತ್ತೆ ನಮ್ಮ ಪ್ರಾಕ್ಟೀಸ್ ಮ್ಯಾಚುಗಳು ಆರಂಭವಾದವು.. ಬಹುಶಃ ಇಲ್ಲಿಗೆ ನಮ್ಮ ಬ್ಯಾಟರಿಗಳು ಫುಲ್ಲಾಗಿದ್ದವು.ಅದಕ್ಕಾಗಿಯೇ ಇವತ್ತು ನಾನು ಹಾಗೂ ಕಿಟ್ಟು ನವೀನ ಹಾಗೂ ಆನಂದರ ವಿರುದ್ಧ ಮ್ಯಾಚುಗಳ ಮೇಲೆ ಮ್ಯಾಚುಗಳು ಎಂಬಂತೆ ಗೆಲ್ಲಲಾರಂಭಿಸಿದೆವು.. ಇಷ್ಟುದಿನ ಸೋತಿದ್ದೇ ಸುಳ್ಳು ಎನ್ನುವಂತೆ ಗೆದ್ದೆವು... ಗೆದ್ದ ಅಬ್ಬರ ಹೇಗಿತ್ತೆಂದರೆ ಇಷ್ಟು ದಿನ ಚಾಲೆಂಜಿನಲ್ಲಿ ಕಳೆದುಕೊಂಡಿದ್ದ ಹಣವೆಲ್ಲ ಮರಳಿ ಬಂದಿತ್ತು.. ಯಾವತ್ತೂ ಕಾಮೆಂಟ್ ಮಾಡದ ಆನಂದ `ಅರೇರೇ..ನವೀನ ಇದೆಂತ ಮಾರಾಯ ಇವ್ರು ಹಿಂಗೆ ಗೆಲ್ತಿದ್ದಾರೆ.. ಇವತ್ತಿನ ಮ್ಯಾಚಿನ ಎಫೆಕ್ಟಾ..? ಸಿಕ್ಕಾಪಟ್ಟೆ ಆಯ್ತು ಮಾರಾಯಾ..' ಎಂದ... ನನಗೂ ಹೌದೆನೋ ಅನ್ನಿಸಿತು.. ಈ ದಿನ ಖುಷಿಯಲ್ಲೇ ಎಲ್ಲರೂ ಮಲಗಿದೆವು..

20-09-2007, ಗುರುವಾರ
ನಾವು ಚೆಸ್ ಪಂದ್ಯಾವಳಿಗಳನ್ನು ಆಡಿದ ಸ್ಥಳ
ಇವತ್ತಿನಿಂದ  ಯೂನಿವರ್ಸಿಟಿ ಬ್ಲೂ ಸೆಲೆಕ್ಷನ್ ಮ್ಯಾಚುಗಳು ಆರಂಭ. ಅಂದರೆ ಇಲ್ಲಿಯವರೆಗೆ ಟೀಂ ಮ್ಯಾಚುಗಳಿದ್ದವು.. ಇನ್ನುಮುಂದೆ ನಮಗೆ ನಾವೇ.. ಗೋಡೆಗೆ ಮಣ್ಣೇ.. ಎನ್ನುವಂತಾಗಿದ್ದವು.. ತಲಾ 8 ಮ್ಯಾಚುಗಳ ಸೀರೀಸ್.. ಅತ್ಯಂತ ಹೆಚ್ಚು ಗೆದ್ದ 6 ಜನ ಯೂನಿವರ್ಸಿಟಿ ಬ್ಲೂಗಳಾಗುತ್ತಿದ್ದರು. ಅಂದರೆ ಈ 6 ಜನ ನಮ್ಮ ಕರ್ನಾಟಕ ಯುನಿವರ್ಸಿಟಿಯನ್ನು ಪ್ರತಿನಿಧಿಸಿ ಆಡುತ್ತಿದ್ದರು. ಉಳಿದಂತೆ 3 ಜನರನ್ನು ಕಾಯ್ದಿರಿಸಿದ ಆಟಗಾರನಾಗಿ ಆಯ್ಕೆಮಾಡುತ್ತಿದ್ದರು.. ಉಳಿದ ಯುನಿವರ್ಸಿಟಿಗಳಲ್ಲಿ ಕಾಯ್ದಿರಿಸಿದ ಆಟಗಾರರನ್ನು ಯೂನಿವರ್ಸಿಟಿ ಮ್ಯಾಚಿಗೆ ಕಳಿಸಿದ್ದರೂ ನಮ್ಮ ಯುನಿವರ್ಸಿಟಿಯಲ್ಲಿ ದುಡ್ಡು ಉಳಿಸುವ ಘನ ಕಾರ್ಯ ಇರುವುದರಿಂದ 6 ಜನಕ್ಕಿಂತ ಹೆಚ್ಚಿಗೆ ಜನರನ್ನು ಕಳಿಸುವುದಿಲ್ಲ ಬಿಡಿ.. ಈ ಸಾರಿಯ ನಮ್ಮ ಯೂನಿವರ್ಸಿಟಿ ಪಂಡ್ಯಾವಳಿಗಳು ಕಾನ್ಪುರದಲ್ಲಿ ನಡೆಯಲಿದ್ದವು.. ಅಲ್ಲಿಗೆ ಹೋಗಲು ತಯಾರಾಗಬೇಕು.. ಅದಕ್ಕೆ ತಕ್ಕಂತೆ ಆಡಬೇಕು ಎಂದು ನಾನು ಚಿಂತಿಸಿ ಆಡಲು ಯತ್ನಿಸಿದೆ..
ಏನಾಗುತ್ತೋ ಎಂಬ ಟೆನ್ಶನ್ ನಿಂದಲೇ ಆಟಕ್ಕೆ ಬಂದೆವು. ನನಗೆ ಪ್ರಾರಂಭದಲ್ಲಿಯೇ ದಿಲೀಪ್ ಹೆಗಡೆ ಎಂಬ ಕುಮಟಾ ಕಾಲೇಜಿನ ಹುಡುಗನೊಬ್ಬ ಎದುರಾಳಿಯಾಗಿ ಬಂದ. 10 ನಿಮಿಷದೊಳಗೆ ಅಂದರೆ 15 step (13)ನೊಳಗೆ ಆತನನ್ನು ಸೋಲಿಸಿ ಅತ್ಯಮೂಲ್ಯ ಎನ್ನಿಸಿದ 1 ಪಾಯಿಂಟು ಗಳಿಸಿದೆ. ಇಲ್ಲಿ ನಮ್ಮ ಕಾಲೇಜಿನ ಇತರ ಆಟಗಾರರು ಯಾರ್ಯಾರು ಗೆದ್ದರೋ, ಯಾರ್ಯಾರು ಸೋತರೋ ಒಂದೂ ಗೊತ್ತಾಗಲಿಲ್ಲ. ಹುಡುಗಿಯರೂ ಬ್ಲೂ ಸೆಲೆಕ್ಷನ್ನಿಗೆ ಆಡುತ್ತಿದ್ದರು. ಅವರಲ್ಲಿಯೂ ಒಂದಿಬ್ಬರು ಗೆದ್ದರು.
ನಂತರ ನನ್ನ ವಿರುದ್ಧ ಆಟಕ್ಕೆ ಅದ್ಯಾರೋ ಒಬ್ಬ ಪುಣ್ಯಾತ್ಮ ಬಿದ್ದಿದ್ದ. ಹೆಸರು ಸರಿಯಾಗಿ ನೆನಪಾಗುತ್ತಿಲ್ಲ. ಆಟಕ್ಕೂಮೊದಲು ನನಗೆ ಅದೇನೋ ನಿರಾಸಕ್ತಿ.. ಆಲಸ್ಯ.. ಜಾಢ್ಯ.. ಒಲ್ಲದ ಮನಸ್ಸಿನಿಂದ ಆಡಿದೆ. ಆ ಪುಣ್ಯಾತ್ಮ ಆಡಿದ... ಆಡಿದ.. ಆಡಿದ.. ಆಡಿಯೇ ಆಡಿದ.. ಅಬಾಬಾಬಾಬಾ.. 2 ತಾಸು ಕೂರಿಸಿಬಿಟ್ಟ. ನನ್ನ ಜಾಢ್ಯವೆಲ್ಲ ಕಳಚಿಬೀಳುವಂತೆ ಆಡಿದ.. ಆಡಿದ ಸ್ಟೆಪ್ಪುಗಳನ್ನೇ ಹಿಂದೆ ಮುಂದೆ.. ತಲೆಸಿಡಿದು ಹೋಗುವಂತೆ ಆಡಿದ.. ನನ್ನ ಬಲ ಜಾಸ್ತಿ ಉಳಿಯುವ ಹಂತ ಬಂದರೂ ಆಡುತ್ತಲೇ ಇದ್ದ.. ಕೊನೆಗೆ `ಕ್ಲಾಕ್' ಇಟ್ಟರು. ಕ್ಲಾಕ್ ನಲ್ಲಿ ನಾನು ಗೆದ್ದೆ.. ಮತ್ತೊಂದು ಪಾಯಿಂಟು ನನಗೆ ಸಿಕ್ಕು ನನ್ನ ಗಳಿಕೆ 2ಕ್ಕೆ ಏರಿತು.

ರಾಜೇಂದ್ರ ಬಾಬೂ
ಇದು ನನ್ನ 3ನೇ ಮ್ಯಾಚು. ಈ ರಾಜೇಂದ್ರ ಬಾಬು ಕಳೆದ ವರ್ಷ ಯುನಿವರ್ಸಿಟಿ ಬ್ಲೂ ಆದ ವ್ಯಕ್ತಿ. ಕಳೆದ ವರ್ಷ ರೇಟೆಡ್ ಪ್ಲೇಯರ್ ಎಂಬ ಬಿರುದನ್ನೂ ಪಡೆದುಕೊಂಡು ಬಂದಿದ್ದ. ಹಾಗಾಗಿ ಈ ವರ್ಷವೂ ಅದೇ ಭಯದೊಂದಿಗೆ ಆಡಲು ಕುಳಿತೆ. ಮ್ಯಾಚು ನಿಧಾನವಾಗಿ ರಂಗೇರಿತು. ಇಬ್ಬರೂ ಸಮಾನವಾಗಿ ಆಡಿದೆವು. ಕೊನೆಗೆ ಸುಮಾರು 2 ಗಂಟೆಗಳು ಕಳೆದವು.. ನಾನು ಡ್ರಾ ಮಾಡಿಕೊಳ್ಳೋಣ ಎಂದೆ.. ಆತ ಅದಕ್ಕೆ ಒಪ್ಪಲಿಲ್ಲ. ಕೊನೆಗೆ ಮತ್ತರ್ಧ ತಾಸಿನ ನಂತರ ಆತನೇ ಡ್ರಾ ಕೇಳಿದ. ನಾನು ಒಪ್ಪಿಕೊಂಡೆ. ನನ್ನ ಪಾಯಿಂಟು ಇಲ್ಲಿಗೆ 2.5 ಆಯಿತು. ಮುಂದೆ ಯಾರು ಬೀಳ್ತಾರಪ್ಪಾ ಎನ್ನುವ ಕುತೂಹಲಭರಿತ ಭಯದೊಂದಿಗೆ ಮುಂದಿನ match ಗೆ ಅನುವಾದೆ.

ಸಚಿನ್ ಸುಲ್ತಾನ್ ಪುರೆ
ಗೋಗಟೇ ಕಾಲೇಜಿನ ಯಾವುದಾದರೂ ಒಬ್ಬಾತ ನನ್ನ ವಿರುದ್ಧ ಬಿದ್ದೇ ಬೀಳುತ್ತಾರೆ ಎನ್ನುವ ನನ್ನ ಊಹೆ ನಿಜವಾಯಿತು. ನನ್ನ ವಿರುದ್ಧ ಬಿದ್ದವರು ಪಾವಸೆ ಅಲ್ಲ. ಚಿಂಚೋಳಿಮಠನೂ ಅಲ್ಲ.. ನಾನು ಚಾಲೇಂಜ್ ಮಾಡಿದ್ದ ಸಮೀರ ಘೋಟ್ನೆಯೂ ಅಲ್ಲ.. ಬದಲಾಗಿ ಬಿದ್ದವನು ಸಚಿನ್ ಸುಲ್ತಾನ್ ಪುರೆ.. ಕಿಟ್ಟುವಿನ ವಿರುದ್ಧ ಸೋತಿದ್ದ 4th board player.. ಕಿಟ್ಟು ಇವನನ್ನು ಸೋಲಿಸಿದ್ದ ಕಾರಣ ನಾನು ಇವನನ್ನು ಸೋಲಿಸಬಹುದೇನೋ ಅಂದುಕೊಂಡೆ. ಚನ್ನಾಗಿಯೇ ಆಡಿದ. ಅವನೊಂದಿಗೆ ನಾನೂ ಅಷ್ಟೇ ಸರಿಸಮನಾಗಿ ಆಡಿದೆ. ಆಟ ಯಥಾಪ್ರಕಾರ ಡ್ರಾ ಕಡೆಗೆ ಸಾಗುತ್ತಿತ್ತು.
ಆದರೆ ಆಟದಲ್ಲಿ ಇದ್ದಕ್ಕಿದ್ದಂತೆ ಒಂದು ತಿರುವು ಬಂದುಬಿಟ್ಟಿತು. ಅಂತಿಂತ ತಿರುವಲ್ಲ ಅದು ಅಬ್ಬರದ ತಿರುವು.. touch and move ಅನ್ನುವ ನಿಯಮವಿರುವ ನಮ್ಮ ಆಟದಲ್ಲಿ ಆತ ಕುದುರೆಯೊಂದನ್ನು move ಮಾಡಿದ. ಥಟ್ಟನೆ ಇಟ್ಟ. ಇಟ್ಟ ತಕ್ಷಣ ಅದನ್ನು ವಾಪಾಸು ಇಟ್ಟ. ನಾನು ಹಳೆಯ ಸಿಟ್ಟನ್ನೆಲ್ಲ ನೆನಪು ಮಾಡಿಕೊಂಡು ಗಲಾಟೆ ತೆಗೆದೆ. ಆಗ ಆಗ ಆಗ ಆತ ` ಇದು ಕೈತಪ್ಪಿ ಬಿದ್ದು ಹೋಯಿತು.. ಹಾಗೆ.. ಹೀಗೆ ' ಎಂದ.. ನಾನು ಪಟ್ಟು ಬಿಡಲಿಲ್ಲ. ಹೀಗೆ ಪಟ್ಟು ಹಿಡಿಯಲು ಕಾರಣವೂ ಇತ್ತೆನ್ನಿ.. ಬೇರೆ ಯಾವುದೇ ಕಾಲೇಜಿನ ಹುಡುಗರು ಹೀಗೆ ತಪ್ಪು move ಮಾಡಿದರೆ ಅವರನ್ನು ಸೋತರು ಎಂದು ಪರಿಗಣಿಸಲಾಗುತ್ತಿತ್ತು. ಗೋಗಟೆ ಕಾಲೇಜಿನವರು ಇದೇ ತಂತ್ರ ಅನುಸರಿಸಿ ಅನೇಕರನ್ನು ಸೋಲಿಸಿಯೂ ಇದ್ದರು. ಅಲ್ಲದೇ ಅವರ ಕಾಲೇಜಿನ ಲೆಕ್ಚರ್ರೇ ನಿರ್ಣಾಯಕರು ನೋಡಿ. ಅದೇ ಕಾರಣಕ್ಕೆ ನಾನು ಪಟ್ಟು ಹಿಡಿದೆ.. ಅವರು ಏನು ತೀರ್ಪು ನೀಡುತ್ತಾರೋ ಅದನ್ನು ನೋಡಬೇಕಿತ್ತು. ಎಲ್ಲದರ ಜೊತೆಗೆ ನನಗೆ ಆ ಗೋಗಟೆ ಕಾಲೇಜಿನ ಹುಡುಗರ ವಿರುದ್ಧ ಸೇಡನ್ನು ತೀರಿಕೊಳ್ಳಬೇಕಿತ್ತು. ಅವಮಾನ ಮಾಡಬೇಕಿತ್ತು. ತಪ್ಪನ್ನು ನೀವೂ ಮಾಡ್ತೀರಿ ಕಣ್ರೋ.. ಎಂದು ಹೇಳಬೇಕಿತ್ತು. ಇದರ ಜೊತೆಗೆ ಉಳಿದ ಎಲ್ಲಾ ಕಾಲೇಜಿನ ಹುಡುಗರ ಒಲವು ನನ್ನ ಕಡೆಗಿತ್ತು. ನಾನೂ ತಿರುಗಿ ಬೀಳುತ್ತೇನೆ. ಅದು ಗೋಗಟೆ ಕಾಲೇಜಾದರೂ ಸೈ ಎಂದು ತೋರಿಸಿಕೊಡಬೇಕಿತ್ತು.
ಪಟ್ಟು ಗಟ್ಟಿ ಮಾಡಿದೆ. ಗೋಗಟೆ ಕಾಲೇಜಿನ ಉಳಿದ ಹುಡುಗರು ಆ ಪಾಪದ ಹುಡುಗನ ಸಪೋರ್ಟಿಗೆ ಬರಲೇ ಇಲ್ಲ..!! ಆದರೆ ನನಗೆ ಉಳಿದ ಎಲ್ಲಾ ಕಾಲೇಜುಗಳ ಹುಡುಗರೂ ಸಪೋರ್ಟಿಗೆ ನಿಂತುಬಿಟ್ಟಿದ್ದರು. ಕೊನೆಗೆ ನಿರ್ಣಾಯಕರಿಗೂ ಇದು ಪೇಚಿಗೆ ತಂದಿತಿರಬೇಕು. ನನಗೇ ಗೆಲುವನ್ನು ಘೋಷಿಸಿದರು. ನಾನು ಗೆದ್ದೆ.. ಆದರೆ ಈ ಗೆಲುವುದು ಖಂಡಿತ ನನಗೆ ಖುಷಿಯನ್ನು ನೀಡಲಿಲ್ಲ. ಇದಕ್ಕೆ ಕಾರಣಗಳು ಹಲವಿದ್ದವು. ಆಟ ಆಡುತ್ತ ಆಡುತ್ತಲೇ ಆ ಸಚಿನ್ ನನಗೆ ದೋಸ್ತನಾಗಿದ್ದ.. ಆತನಿಗೆ  ಸಮೀರ್ ಘೋಟ್ನೆಯಂತೆ, ಸಾಗರ್ ಚಿಂಚೋಳಿಮಠನಂತೆ, ಅನಿಕೇತನ್ ಪಾವಸೆಯಂತೆ ನಾನೇ great ಅನ್ನುವ ಹೆಮ್ಮೆಯಿರಲಿಲ್ಲ. ಆತ ಎಲ್ಲರ ಜೊತೆಗೂ ಬೆರೆಯುತ್ತಿದ್ದ. ಖುಷಿಯಿಂದ ಮಾತನ್ನು ಆಡುತ್ತಿದ್ದ.. ಜೊತೆಯಲ್ಲಿ ಆತ ಪಾಪದ ಪರದೇಶಿಯಾಗಿದ್ದ. ಹೀಗಾಗಿ ನನಗೆ ಖುಷಿಯ ಬದಲು ಬೇಸರವೇ ಆಯ್ತೆನ್ನಿ..
ಈ ಭೀಖರ ಗೆಲುವಿನಿಂದ ನನ್ನ ಪಾಯಿಂಟು 4 ಮ್ಯಾಚಿನಿಂದ 3.5 ಆಯಿತು. ಇದರ ಜೊತೆಗೆ ನಾಳೆ ಹೇಗೋ ಏನೋ ಎನ್ನುವ ಶೂನ್ಯಾಲೋಚನೆಯೂ ನನ್ನನ್ನು ಕಾಡಿತು.

(ಮುಂದುವರಿಯುವುದು..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಭಯದ ನೆರಳಲ್ಲಿ ತೀರ್ಥಂಕರನ ಜೊತೆ, ಹಲ್ಕಟ್ ನಾಗರಾಜ..)

Tuesday, November 26, 2013

ನಾಡು ನುಡಿಯ ಜೊತೆಗೆ ಪ್ರೀತಿ (ಪ್ರೇಮಪತ್ರ-8)

ಇದು ನಮ್ಮ ಕರ್ನಾಟಕದ ನಾಡು ನುಡಿಯ ಕುರಿತು ಗೆಳೆಯನೊಬ್ಬ ತನ್ನ ಗೆಳತಿಗೆ ಬರೆಯುವ ಪತ್ರ. ಬಹುಕಾಲದಿಂದ ಪತ್ರ ಬರೆಯದಿದ್ದ ಆತ ಕೊನೆಗೊಮ್ಮೆ ಆಕೆಗೆ ಪತ್ರ ಬರೆದಾಗ ಅದರಲ್ಲಿ ಯಾವರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ? ಯಾವ ವಿಷಯಗಳನ್ನು ಬಳಕೆ ಮಾಡುತ್ತಾನೆ ಎಂಬುದು ಈ ಪತ್ರದಲ್ಲಿದೆ.

ಆತ್ಮೀಯ ಗೆಳತಿ,
ಪ್ರೀತಿ
ಬಹು ದಿನಗಳಾಗಿದ್ದವಲ್ಲ ಪತ್ರ ಬರೆಯದೇ. ಹಾಳಾದ ಕೆಲಸದ ಒತ್ತಡಗಳ ನಡುವೆ ಪತ್ರವನ್ನು ಬರೆಯುವ ಸಂಸ್ಕೃತಿಯೇ ಮರೆತು ಹೋಗಿದೆ. ಅದರ ಜೊತೆ ಮೊಬೈಲ್ ಮೇನಿಯಾ, ಇಂಟರ್ನೆಟ್ ಹಾವಳಿ ಇವುಗಳಿಂದಲೂ ಪತ್ರ ಬರೆಯುವ ಬಗೆ ಕಾಣದಾಗುತ್ತಿದೆ. ಎಂತಹ ದುರಂತ ಅಲ್ವಾ? ಹೋಗ್ಲಿ ಬಿಡು.. ಎಷ್ಟೇ ಕಾಲ ಮುಂದುವರಿದರೂ, ಯಾವುದೇ ರೀತಿಯ ತಂತ್ರಜ್ಞಾನಗಳು ಬಂದರೂ ನಾವು ಮಾತ್ರ ಪತ್ರಗಳಲ್ಲಿಯೇ ಮಾತಾಡೋಣ. ಆಗಬಹುದಲ್ವಾ?
ನಿನಗೆ ಈ ಸಾರಿ ನಮ್ಮ ಕನ್ನಡ ನಾಡು ಹಾಗೂ ನಿಡುಯ ಬಗ್ಗೆ ಹೇಳಬೇಕು ಅಂದುಕೊಮಡಿದ್ದೇನೆ. ಬಹುದಿನಗಳಿಂದ ನಮ್ಮ ನಾಡು ನುಡಿಗಳ ಕುರಿತು ಅದೆಷ್ಟೋ ಭಾವನೆಗಳು ನನ್ನ ಮನಸ್ಸಿನಲ್ಲಿ ಹಾದುಹೋಗುತ್ತಿದೆ. ಎಂತಹ ನಾಡು ನಮ್ಮದು? ಅದೆಷ್ಟು ವರ್ಷಗಳ ಬವ್ಯ ಇತಿಹಾಸ ನಮ್ಮದು? ಒಮ್ಮೆ ಮೆಲುಕು ಹಾಕಿದರೆ ಮೈಮನಸ್ಸು ರೋಮಾಂಚಿತಗೊಳ್ಳುತ್ತದೆ.
ಕರುನಾಡು. ಈ ಶಬ್ದವೇ ಅದೆಷ್ಟು ಆಪ್ತವಲ್ಲವಾ? ಕನ್ನಡ ನಾಡನ್ನು ಆಪ್ತವಾಗಿ ಕರುನಾಡು ಎನ್ನುತ್ತಾರೆ. ಕರು ನಾಡು ಎಂದರೆ ಕರುಣೆಯ ನಾಡು. ಎಲ್ಲರ ಪಾಲಿಗೆ ಪ್ರೀತಿಯ ಬೀಡು. ಇದಕ್ಕಾಗಿಯೇ ಅದೆಷ್ಟೋ ಮಂದಿ ಕನ್ನಡ ನಾಡಿಗೆ ವಲಸೆ ಬಂದು ಇಲ್ಲಿ ಸುಖ ಜೀವನವನ್ನು ಕಂಡುಕೊಳ್ಳುತ್ತಿದ್ದಾರೆ.
ನಮ್ಮ ಕನ್ನಡ ನಾಡಿಗೆ ಸಹಸ್ರಾರರು ವರ್ಷಗಳ ಇತಿಹಾಸವೇ ಇದೆ. ಎಷ್ಟು ಹಿಂದೆ ಅಂದರೆ ವೇದಗಳ ಕಾಲಕ್ಕೇ ನಾವು ಹೋಗಬೇಕು. ಆಗ ನಮ್ಮ ನಾಡನ್ನು ಕುಂತಲ ನಾಡು ಎಂದು ಕರೆಯುತ್ತಿದ್ದರು. ಕುಂತಲ ಎಂದರೆ ಮೇಲ್ಭಾಗದವನು ಎಂದರ್ಥ. ಅಂದರೆ ಇಡಿಯ ದಕ್ಷಿಣ ಭಾರತದಲ್ಲಿಯೇ ನಮ್ಮ ಕನರ್ಾಟಕ ಅತ್ಯಂತ ಎತ್ತರದ ಪ್ರದೇಶ. ಹಾಗಾಗಿಯೇ ದಕ್ಷಿಣ ಭಾರತದ ಎಲ್ಲ ಜೀವ ದಾಯಿ ನದಿಗಳು ನಮ್ಮಲ್ಲಿಯೇ ಹುಟ್ಟಿ ಇತರ ರಾಜ್ಯಗಳ ಕಡೆಗೆ ಹರಿದುಹೋಗುತ್ತವೆ. ಆಂಧ್ರದ ಜೀವನದಿಗಳಾದ ಕೃಷ್ಣ, ತುಂಗಭದ್ರ, ತಮಿಳುನಾಡಿನ ಜೀವನದಿಯಾದ ಕಾವೇರಿ, ಗೋವಾದ ಜೀವನದಿ ಮಾಂಡೋವಿ ಈ ನದಿಗಳ ತವರು ಭೂಮಿ ನಮ್ಮದು.
ರಾಮಾಯಣ ಕಾಲದಲ್ಲಿ ರಾಮ ವನವಾಸಕ್ಕೆ ಬಂದಾಗ ನಮ್ಮ ಹಂಪಿಯ ಬಳಿಯೇ ಆತ ಸೀತೆಯನ್ನು ಕಳೆದುಕೊಂಡಿದ್ದು. ಕಡೆಗೆ ಇಲ್ಲಿಯೇ ಆತ ಹನುಮನನ್ನು ಭೇಟಿಯಾದದ್ದು. ವಾಲಿಯನ್ನು ಕೊಂದದ್ದು. ಆಗ ಈ ಪ್ರದೇಶಕ್ಕೆ ಕಿಷ್ಕಿಂದೆ ಎನ್ನುತ್ತಿದ್ದರು. ಕಡೆಗೆ ಅದು ಹಂಪೆಯಾಯಿತು. ಭವ್ಯ ಇತಿಹಾಸಕ್ಕೆ ಸಾಕ್ಷಿಯಾಯಿತು.
ಪ್ರೀತಿಯ ಗೆಳತಿ.,
ಕನರ್ಾಟಕದ ಕುರಿತು ಇಷ್ಟನ್ನು ಹೇಳಿದರೆ ಸಾಧ್ಯವಾಗುವುದಿಲ್ಲ. ಈ ಕನ್ನಡ ನಾಡು ಇತಿಹಾಸದ ಪ್ರಕಾರ ಗೋದಾವರಿ ನದಿಯವರೆಗೆ ಹಬ್ಬಿತ್ತು ಎಂಬ ದಾಖಲೆಗಳೂ ಇವೆ. ಈಗ ಆ ಗಾತ್ರವನ್ನು ಕಾಲಕ್ಕೆ ತಕ್ಕಂತೆ ಕಳೆದುಕೊಂಡಿದೆ. ನಮ್ಮಲ್ಲಿ ಆಳಿದ ರಾಜರಾದರೂ ಎಂಥವರು? ಕದಂಬರ ಮಯೂರ, ಹೊಯ್ಸಳರ ವಿಷ್ನುವರ್ಧನ, ವಿಜನಗರದ ಕೃಷ್ಣದೇವರಾಯ, ಟಿಪ್ಪು, ಹೈದರಾಲಿ, ಮೈಸೂರು ಅರಸರು ಒಬ್ಬರೇ ಇಬ್ಬರೇ.. ಇಲ್ಲಿನ ಚಿಕ್ಕಪುಟ್ಟ ರಾಜರುಗಳೂ ಶೌರ್ಯದ ಖನಿಯೇ ಆಗಿದ್ದರು. ಇನ್ನೂ ವಿಶೇಷ ಎಂದರೆ ವಿಜಯನಗರದ ಅರಸರ ಕಾಲದಲ್ಲಿ ಹಂಪಿಯ ಬೀದಿ ಬೀದಿಗಳಲ್ಲಿ ಚಿನ್ನ, ರತ್ನ, ವಜ್ರ ವೈಢೂರ್ಯಗಳನ್ನು ತೆರೆದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಬಹುಷ್ಯ ಇಷ್ಟು ಶ್ರೀಮಂತ ರಾಜ್ಯ ಆ ಕಾಲದಲ್ಲಿ ವಿಶ್ವದ ಇತರ ಯಾವುದೇ ಭಾಗಗಳಲ್ಲಿಯೂ ಇರಲಿಲ್ಲ.
ಇದಕ್ಕಾಗಿಯೇ ಇರಬೇಕು ನಮ್ಮ ಕರುನಾಡನ್ನು ಕವಿ ವರ್ಯರು ಹಾಡಿ ಹೊಗಳಿದ್ದು. ನಮ್ಮ ರಾಷ್ಟ್ರಕವಿ ಕುವೆಂಪು ತಮ್ಮ ನಾಡಗೀತೆಯಲ್ಲಿ ಹೇಳಿತ್ತಾರೆ,.
ಜೈ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ..
ಅಂದರೆ ಭಾರತ ಮಾತೆಯ ಪ್ರೀತಿಯ ಮಗಳಾದ ಕನಾಟಕವೇ ನಿನಗಿದೋ ಕೋಟಿ ನಮಸ್ಕಾರ ಅಂತ.
ಅವರು ಮುಂದುವರಿದು ಹೇಳುತ್ತಾರೆ, ಕನರ್ಾಟಕದಲ್ಲಿ ಇಲ್ಲದ ಜಾತಿಗಳಿಲ್ಲ. ಆಳದ ಅರಸರಿಲ್ಲ. ಇದು ಸರ್ವಜನಾಂಗದ ಶಾಂತಿಯ ತೋಟ. ಬಯಸಿ, ಆಶ್ರಯದಾತರಾಗಿ ಬಂದವರಿಗೆ ಈ ರಾಜ್ಯ ಇಲ್ಲ ಎಂದಿಲ್ಲ.
ನಮ್ಮ ರಾಜ್ಯ ಈ ಹಿಂದೆ ತಮಿಳುನಾಡಿನಿಂದ ಬಂದ ರಾಮಾನುಜಾಚಾರ್ಯರಿಗೆ, ಮರಾಠಾ ಅರಸು ಶಿವಾಜಿಯ ಮಗ ಬಾಜೀರಾಯ ಹೀಗೆ ಹಲವರಿಗೆ ಆಶ್ರಯ ಕೊಟ್ಟಿತ್ತು. ಈಗಲೂ ಅಷ್ಟೇ ಟಿಬೆಟ್ನ ಸಾವಿರಾರು ನಿರಾಶ್ರಿತರಿಗೆ, ಅಸ್ಸಾಂನ, ಗೋಖರ್ಾಲ್ಯಂಡ್ಗಳ ಜನರಿಗೆ ಉದ್ಯೋಗ ಆಶ್ರಯ ಎರಡನ್ನೂ ನೀಡುತ್ತ ಬಂದಿದೆ.
ಕನ್ನಡ ನಾಡಿನ ಇತಿಹಾಸಗಳು ಇನ್ನೂ ಇವೆ ಗೆಳತಿ. ಇದರ ವಿಶೇಷತೆಗಳ ಬಗೆಗೆ ನಿನಗೆ ಕೊಂಚ ಹೇಳಲೇ ಬೇಕು. ಕನ್ನಡ ನಾಡಿನ ಕವಿಗಳಿಗೆ ಇದುವರೆಗೂ 8 ಜ್ಞಾನಪೀಠಗಳು ಬಂದಿವೆ. ಭಾರತದ ಉಳಿದ ಯಾವುದೇ ಭಾಷೆಗೆ ಇಷ್ಟು ಜ್ಞಾನಪಿಠ ಪ್ರಶಸ್ತಿಗಳು ಬಂದಿಲ್ಲ. ಎಂಥ ಹೆಮ್ಮೆಯ ಸಂಗತಿ ಅಲ್ವಾ?
ಸರ್. ಸಿವಿ ರಾಮನ್, ನಿಕೋಲಾಯ್ ರೋರಿಚ್, ದೇವಿಕಾ ರಾಣಿ, ಮನ್ನಾ ಡೇ ಮುಂತಾದ ಮಹಾನ್ ಸಾಧಕರ ಕರ್ಮ ಭೂಮಿ ಇದು. ಬೇರೆ ರಾಜ್ಯಗಳವರು ಇವರು. ಆದರೂ ಕನ್ನಡ ನಾಡಿನಲ್ಲಿ ತಮ್ಮ ಸಾಧನೆಗಳನ್ನು ಮಾಡಿ ಮೆರೆದಿದ್ದಾರೆ.
ಕನ್ನಡ ನಾಡು ಅಂದಕೂಡಲೇ ಮೊಟ್ಟಮೊದಲು ನೆನಪಿಗೆ ಬರುವಂತದ್ದೆಂದರೆ ಜೋಗಜಲಪಾತ. ಕನರ್ಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿರುವ ಜೋಗ ಜಲಪಾತದ ಸೌಂದರ್ಯವನ್ನು ಆಸ್ವಾದಿಸುವುದೇ ಒಂದು ಹೆಮ್ಮೆ. ನಾಲ್ಕು ಕವಲಾಗಿ 960 ಅಡಿಗೊ ಹೆಚ್ಚು ಆಳಕ್ಕೆ ಧುಮುಕುವ ಈ ಜಲಪಾತ ಮಳೆಗಾಲದಲ್ಲಿ ತನ್ನ ಸಂದರ್ಯವನ್ನು ನೂರ್ಮಡಿಗೊಳಿಸಿಕೊಳ್ಳುತ್ತದೆ. ಆಗ ಎಲ್ಲೆಲ್ಲಿಂದ ಜನರು ಬರ್ತಾರೆ ಗೊತ್ತಾ? ವಿದೇಶಗಳ ಜನರೂ ಬಂದು ಹೋಗ್ತಾರೆ. ಇದನ್ನು ಭಾರತದ ನಯಾಗರಾ ಎಂದು ಕರೆಯುತ್ತಾರೆ.
ಇಷ್ಟೇ ಅಲ್ಲ ನಮ್ಮ ರಾಜ್ಯದಲ್ಲಿ 280ಕ್ಕೂ ಹೆಚ್ಚಿನ ಜಲಪಾತಗಳಿವೆ. ಇದೊಂದು ದಾಖಲೆಯೇ ಹೌದು. ರಾಜ್ಯದ ಪಶ್ಚಿಮ ಭಾಗದಲ್ಲಿ ಹಾದುಹೋಗಿರುವ ಸಹ್ಯಾದ್ರಿ ಪರ್ವತ ಶ್ರೇಣಿ ವಿಶ್ವ ಪರಂಪರೆಯ ತಾಣವಾಗಿ ಸೇರ್ಪಡೆಗೊಂಡಿದೆ. ಇಲ್ಲಿ ಕನಿಷ್ಟ 80ಕ್ಕೂ ಹೆಚ್ಚಿನ ಅಭಯಾರಣ್ಯಗಳು ಮತ್ತು ರಕ್ಷಿತಾರಣ್ಯಗಳಿವೆ. ಇದರೊಳಗಿನ ಜೀವಿ ಸಂಕುಲಗಳು ಅದೆಷ್ಟೋ ಲಕ್ಷ, ಅವುಗಳನ್ನು ಲೆಕ್ಕ ಹಾಕುವುದು ಕಷ್ಟ.
ಇದಕ್ಕಾಗಿಯೇ ಕವಿ ನಿಸಾರ ಅಹಮದರು ಹೇಳುತ್ತಾರೆ,
ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾಧ್ರಿಯ ಲೋಹದದಿರ
ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ
ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ...!!
ಎಂತಹ ಅರ್ಥಪೂರ್ಣ ಸಾಲುಗಳಲ್ಲವಾ? ಕೆಲವೇ ಶಬ್ದಗಳಲ್ಲಿ ಕನ್ನಡನಾಡನ್ನು ಕಟ್ಟಿಕೊಡುವ ಕವಿವಾಣಿಗೆ ಅದೆಷ್ಟು ನಮನಗಳನ್ನು ಹೆಳಿದರೂ ಸಾಲದು.
ಕರುನಾಡು ಎಂದ ತಕ್ಷಣ ನಾನು ನಿನಗೆ ಕನ್ನಡ ನಾಡಿನ ಪ್ರಮುಖ ಭಾಗವಾದ ಕೊಡಗಿನ ಬಗ್ಗೆ ಹೇಳಲೇಬೇಕು. ವಿಶಿಷ್ಟ ಸಂಸ್ಕೃತಿ, ವಿಭಿನ್ನ ಮನಸ್ಥಿತಿಯ ಕೊಡವರು ಅಪಾರ ದೇಶಪ್ರೇಮಿಗಳು. ಇಲ್ಲಿನ ಪ್ರತಿ ಮನೆಯ, ಪ್ರತಿ ಕುಟುಂಬದ ಒಬ್ಬ ವ್ಯಕ್ತಿ ಭಾರತದ ಸೈನ್ಯದಲ್ಲಿ ಕಾರ್ಯ ನಿರ್ವಹಿಸುತ್ತಾನೆ. ಅದು ಅವರಿಗೆ ಹೆಮ್ಮೆ. ಅಷ್ಟೇ ಅಲ್ಲ ಇವರು ಹಾಕಿ ಆಟದ ಪ್ರಿಯರು. ಈ ಪ್ರದೇಶಕ್ಕೆ ಕನರ್ಾಟಕದ ಕಾಶ್ಮೀರ ಎನ್ನುತ್ತಾರೆ. ಕನ್ನಡನಾಡಿನ ಅತ್ಯಂತ ಹಸಿರು ಹಸಿರಾದ ಜಿಲ್ಲೆ ಇದು ಎಂದು ಖ್ಯಾತಿ ಪಡೆದಿದೆ.
ಇನ್ನು ಇಲ್ಲಿಯ ಉತ್ತರಕನ್ನಡ ಜಿಲ್ಲೆಯ ಬಗ್ಗೆ ಹೇಳಲೇ ಬೆಕು. ಇದೂ ಸಹ ಅತ್ಯಂತ ಹೆಚ್ಚು ಕಾಡನ್ನು ಹೊಂದಿರುವ ದೇಶದ ಕೆಲವೇ ಕೆಲವು ಜಿಲ್ಲೆಗಳಲ್ಲಿ ಒಂದು ಎಂಬ ಖ್ಯಾತಿಯನ್ನು ಹೊಂದಿದೆ. ಭತ್ತ, ಕಬ್ಬು, ಅಡಿಕೆ ಕಾಳುಮೆಣಸು, ಏಲಕ್ಕಿ, ಲವಂಗ, ವೆನಿಲ್ಲಾ, ಹತ್ತಿ ಈ ಮುಂತಾದವುಗಳು ಇಲ್ಲಿನ ಪ್ರಮುಖ ಬೆಳೆಗಳು. ಇದರಿಮದಾಗಿಯೇ ಈ ಪ್ರದೆಶವನ್ನು ಸಂಬಾರ ಪದಾರ್ಥಗಳ ರಾಣಿ ಎಂದು ಕರೆಯುತ್ತಾರೆ.
ಕನರ್ಾಟಕದಲ್ಲಿ ನೋಡುವಂತಹ ಸ್ಥಳಗಳ:ಉ ಸಾಕಷ್ಟಿವೆ. ಪೌರಾಣಿಕವಾಗಿ, ಐತಿಹಾಸಿಕವಾಗಿ, ಪ್ರಾವೋಸೋದ್ಯಮದ ದೃಷ್ಟಿಯಿಂದ, ತಂತ್ರಜ್ಞಾನದ ಕಾರಣದಿಮದ ನೂರಾರು ಪ್ರದೇಶಗಳನ್ನು ಹೆಸರಿಸಬಹುದು. ಪುರಾಣ ಪ್ರಸಿದ್ಧ ಗೋಕರ್ಣ, ನಿತ್ಯ ದಾಸೋಹದ ಧರ್ಮಸ್ಥಳ, ಕುಕ್ಕೆ, ಬಸವನ ಬಾಗೇವಾಡಿ, ಚಾಮುಂಡಿ ಬೆಟ್ಟ, ಕೊಲ್ಲೂರು, ಶಂಕರಾಚಾರ್ಯರ ಜ್ಞಾನವ್ಯಾಪಿ ಸ್ಥಳ ಶೃಂಗೇರಿ ಹೀಗೆ ನೂರಾರು ಸ್ಥಳಗಳಿದ್ದರೆ, ಮೋಹಿನಿ ಭಸ್ಮಾಸುರನ ಸಾವಿ ಕಾರಣವಾಗಿದೆ ಎಂಬ ಪ್ರತೀತಿಯನ್ನು ಸಾರುವ ಯಾಣ, ರೇಣುಕಾ ದೇವಿಯ ಚಂದ್ರಗುತ್ತಿ, ಭೀಮ ನಿದ್ರಿಸಿದ್ದ ಎನ್ನುವ ಭೀಮನವಾರೆ ಗುಡ್ಡ, ಹನುಮ, ವಾಲಿ ಸುಗ್ರೀವರ ನಾಡು ಹಂಪಿ, ಮಹಿಷಾಸುರನ ಸಂಹಾರಸ್ಥಳ ಮೈಸೂರು. ಹೀಗೆ ಲೆಕ್ಕ ಹಾಕಿದರೆ ಒಂದೆರಡಕ್ಕೆ ನಿಲ್ಲುವುದಿಲ್ಲ.
ಜೋಗ ಜಲಪಾತ, ಸಾತೊಡ್ಡಿ ಜಲಪಾತ, ಉಂಚಳ್ಳಿ ಜಲಪಾತ, ಅಬ್ಬಿ ಜಲಪಾತ, ಗಗನ ಚುಕ್ಕಿ, ಭರಚುಕ್ಕಿ, ಕಲ್ಲತ್ತಗಿರಿ ಜಲಪಾತ, ಮಾಗೋಡು ಜಲಪಾತ ಹೀಗೆ ಅದೆಷ್ಟೋ ಬಗೆಯ ಜಲಪಾತಗಳು ಇಲ್ಲಿವೆ. ವಿಶ್ವದಲ್ಲೇ ಹೆಸರಾದ ಸಾಫ್ಟ್ವೇರ್ ತಂತ್ರಜ್ಞಾನದಿಮದ ಜಗತ್ತನ್ನೇ ಕೈಬೀಸಿ ಕರೆಯುವ ಬೆಂಗಳೂರು ಮಹಾನಗರಿ ನಮ್ಮ ರಾಜ್ಯದ ರಾಜಧಾನಿ. ಈ ನಗರಿಯಲ್ಲಿ ಇಲ್ಲ ಎನ್ನುವುದೇ ಇಲ್ಲ. ರಾಷ್ಟ್ರದ, ವಿದೇಶಗಳ ಬಹು ವಿದಧ ಜನರು ಇಲ್ಲಿ ಸಿಗುತ್ತಾರೆ. ಈ ನಗರಿಯ ಅರ್ಧಕ್ಕಿಂತ ಹೆಚ್ಚಿನ ಭಾಗದ ಜನರು ಇತರ ಪ್ರದೇಶಗಳಿಂದ ವಲಸೆ ಬಂದು ಉಳಿದವರೇ ಆಗಿದ್ದಾರೆ ಎನ್ನುವುದು ಅಚ್ಚರಿಯ ಸಂಗತಿಗಳಲ್ಲಿ ಒಂದು.
ಅದಕ್ಕೆ ಕವಿ ಹಂಸಲೇಖ ತಮ್ಮ ಗೀತೆಯೊಮದರಲ್ಲಿ ಹೇಳುತ್ತಾರೆ,
ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು.
ಮೆಟ್ಟಿದರೆ ಕನ್ನಡ ನಾಡಿನಲ್ಲಿ ಮೆಟ್ಟ ಬೇಕು ಎಂದು.
ಡಾ. ರಾಜ್ ಕುಮಾರ್ ಇಲ್ಲಿನ ಚಿತ್ರರಂಗದ ಮೇರು ಶಿಖರ. ಮಹಾನ್ ನಟ. ಜೊತೆಗೆ ಶಂಕರ್ ನಾಗ್ ವಿದೇಶಗಳಲ್ಲಿಯೂ ಹೆಸರು ಮಾಡಿದ ಪ್ರತಿಭಾ ಶಾಲಿ ನಟ. ಇದೀಗ ಅಂತಹ ಪ್ರತಿಭಾವಂತ ನಟರುಗಳ ದಂಡೇ ಕನ್ನಡ ಜಿತ್ರರಂಗದಲ್ಲಿದೆ ಎನ್ನುವುದು ಹೆಮ್ಮೆಯ ಸಂಗತಿ.

ಗೆಳಿತಿ,
ನಮ್ಮ ನಾಡಿನ ಅತಿಥಿಸತ್ಕಾರದ ಬಗ್ಗೆ ನಿನಗೆ ಹೆಳಲೇ ಬೇಕು. ಹಸಿದು ಬಂದವರಿಗೆ ಇಲ್ಲ ಎಂದು ಗೊತ್ತಿಲ್ಲದ ಮುಗ್ಧ ಜನರ ನಾಡು ನಮ್ಮದು. ಎಂತಹ ಬಿಸಿಲಿನಲ್ಲಿ ಬಸವಳಿದು ಬಂದ ಜನರಿರಲಿ, ಆತ ಅದೆಷ್ಟೇ ಅಪರಿಚಿತನಿರಲಿ ಅಥವಾ ಶತ್ರುವೇ ಆಗಿರಲಿ ಆತನಿಗೆ ನಮ್ಮ ನಾಡಿನ ಜನರು ತಂಪಾದ ಮಜ್ಜಿಗೆ ತಂಬುಳಿ, ಬೆಲ್ಲ-ನೀರು, ಯಳ್ಳು ತಂಪುಗಳನ್ನು ಕೊಟ್ಟು ಸತ್ಕರಿಸುತ್ತಾರೆ. ಅಲ್ಲದೆ ಆತನಿಗೆ ಊಟ ಹಾಕಿ ಸಂತೃಪ್ತಿಯಿಂದ ಕಳಿಸುತ್ತಾರೆ. ಹಾಗೆ ಸತ್ಕಾರ ಮಾಡದಿದ್ದರೆ ಅವರ ಮನಸ್ಸಿಗೆ ಏನೋ ಕಸಿವಿಸಿ. ನಿನಗೂ ಸಹ ಹಲವು ಬಾರಿ ಹೀಗೆಯೇ ಆಗಿರಬೇಕು ಅಲ್ಲವಾ?
ಆದರೆ ದುರಂತ ನೋಡು ಗೆಳತಿ, ಕಾಲ ಎಂಬುದು ಎಂತವರನ್ನು ಎಂತಹ ಪ್ರದೇಶ ಬದಿಲಿಸಿ ಬಿಡುತ್ತದಲ್ಲ..
ನಮ್ಮ ನಾಡಿನಲ್ಲಿ ಸಮಸ್ಯೆಗಳೂ ಹಾಗೇಯೇ ತುಂಬಿ ತುಳುಕಲಾರಂಭಿಸಿವೆ.
ಗಣಿಗಾರಿಕೆ, ಪ್ರಾಣಿ ಭೇಟೆ, ಭೃಷ್ಟ ರಾಜಕಾರಣಿಗಳು, ವಲಸಿಗರ ಹಾವಳಿ, ನಕ್ಸಲ್ ಸಮಸ್ಯೆ ಇವುಗಳೆಲ್ಲ ರಾಜ್ಯದಲ್ಲಿ ಅಪಾರ ಸಮಸ್ಯೆಗಳನ್ನು ಹುಟ್ಟುಹಾಕುತ್ತಿವೆ. ಇಲ್ಲಿನ ಹಳ್ಳಿಗಳ ಯುವಕರು ನಗರದತ್ತ ಮುಖ ಮಾಡುತ್ತಿದ್ದಾರೆ. ಹಳ್ಳಿಗೆಳೆಲ್ಲ ವೃದ್ಧಾಶ್ರಮಗಳಾಗುತ್ತಿವೆ. ಹಳ್ಳಿಗಳಲ್ಲಿನ ವಯಸ್ಸಾದ ತಂದೆ ತಾಯಿಗಳು ಮನೆಯ ಮುಂದೆ ನಿಂತು ಮಕ್ಕಳು ಈಗ ಮನೆಗೆ ಬಂದಾರು ಆಗ ಮನೆಗೆ ಬಂದಾರು ಎಂಬ ನಿರೀಕ್ಷೆಯಲ್ಲಿ ನಿಂತಿರುತ್ತಾರೆ.
ಎಂತಹ ದುರಂತ ಅಲ್ವಾ? ರಾಜ್ಯ ಒಮದಾನೊಂದು ಕಾಲದಲ್ಲಿ ಶ್ರೀಮಂತ ವಾಗಿತ್ತು. ಆದರೆ ಈಗ ಬರ ಬಂದ ಕಾರಣ ರೈತರು ನೆಣು ಹಾಕಿಕೊಳ್ಳುತ್ತಿದ್ದಾರೆ, ಗುಳೆ ಹೋಗುತ್ತಿದ್ದಾರೆ. ಪ್ರತಿದಿನ ಅವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ಗೆಳತಿ,.
ಇದು ನಮ್ಮ ರಾಜ್ಯದ ಜ್ವಲಂತ ಸಮಸ್ಯೆಗಳು ಇವುಗಳ ಕುರಿತು ಹೆಳಿದೆ ಅಂತ ಬೇಸರ ಮಾಡಿಕೊಳ್ಳಬೇಡ. ಒಳ್ಲೆಯದು ಇರುವಲ್ಲಿ ಕೆಟ್ಟದ್ದು ಹೇಗೋ ಹಾಗೆಯೇ ಸೌಲಭ್ಯಗಳಿದ್ದಲ್ಲಿ ಸಮಸ್ಯೆಗಳೂ ಇರುತ್ತವೆ. ಆದರೆ ಈ ಸಮಸ್ಯೆಗಳ ನಡುವೆಯೂ ನಮ್ಮ ನಾಡಿನ ರೈತ ಸ್ವರ್ಗ ಸುಖವನ್ನು ಕಾಣುತ್ತಿದ್ದಾನೆ.
ಮುಂದಿನ ದಿನಗಳಲ್ಲಿ ಕೃಷಿ ಪ್ರದಾನ ವ್ಯವಸ್ಥೆ ರಾಜ್ಯದಲ್ಲಿ ಬಂದು ರೈತನಿಗೆ ಬೆಲೆ ಬರುತ್ತದೆ ಎಂಬ ಕನಸಿನೊಮದಿಗೆ ಆತ ಬಾಳುತ್ತಿದ್ದಾನೆ.
ಅಬ್ಬ ತುಂಬ ಬರೆದುಬಿಟ್ಟೆ ಅನಿಸ್ತಾ ಇದೆಯಲ್ಲ.. ಊಹುಂ. ನಮ್ಮ ನಾಡಿನ ವಿಷಯದ ಕುರಿತು ಹೇಳುವುದಾದರೆ ಇದು ಏನ#ಏನೂ ಅಲ್ಲ. ಮುಂದೊಮ್ಮೆ ನಮ್ಮ ನಾಡಿನ ಕುರಿತು ಇನ್ನೂ ವಿವರವಾಗಿ ಹೇಳುತ್ತೇನೆ ಆಗಬಹುದಲ್ಲ. ಕೊನೆಯದಾಗಿ ಯಾಕೋ ಕವಿ ಪ. ಗ. ಭಟ್ಟರ ಕವಿತೆ ನೆನಪಾಗುತ್ತದೆ.
ಭಾರತಮಾತೆಯ ಒಲವಿನ ಬದುಕಿಗೆ
ಕನ್ನಡ ನಾಡೇ ಮುಕುಟ ಮಣಿ.
ಆಕೆಯ ಸೊಂಟದ ಒಡ್ಯಾಣದ ಕವಚಕೆ
ಕರ್ನಾಟಕವೇ ಚಿನ್ನದ ಖನಿ!!
ಉಳಿದ ವಿಷಯ ಮುಂದಿನ ಪತ್ರದಲ್ಲಿ.. ನೆನಪುಗಳ ಸರಮಾಲೆಯೊಂದಿಗೆ

ಇಂತಿ ನಿನ್ನ ಗೆಳೆಯ


ಜೀವನ್ 

(ವಿ.ಸೂ : ಆತ್ಮೀಯರೇ.. ಈ ಪತ್ರವನ್ನು ನನ್ನ ದೋಸ್ತನೊಬ್ಬನಿಗೆ ಪ್ರೆಸೆಂಟೇಶನ್ನಿಗಾಗಿ ಬರೆದುಕೊಟ್ಟಿದ್ದೆ.. ಏನು ಕಾರಣವೋ ಗೊತ್ತಿಲ್ಲ.. ಆ ಪ್ರೆಸೆಂಟೇಷನ್ ಕಾರ್ಯಕ್ರಮ ರದ್ದಾದ್ದರಿಂದ ಈ ಪತ್ರ ಹಾಗೇ ಉಳಿದಿತ್ತು.. ಕರ್ನಾಟಕದ ಕುರಿತು ವಿವರ ಹೇಳುವ ಪತ್ರ.. ಇದೋ ನಿಮ್ಮೆದುರು)

ಸ್ಟೈಲು ಬ್ಯಾಡಾ


ಸ್ಟೈಲು ಬ್ಯಾಡೇ ಹುಡುಗಿ
ಸ್ಟೈಲು ಬ್ಯಾಡಾ ನೋಡು,
ಸ್ಟೈಲು ಬ್ಯಾಡೆ ಹುಡುಗಿ
ಸ್ಟೈಲು ಬ್ಯಾಡಾ ||

ಇಷ್ಟು ಒಳ್ಳೆಯ ಮೊಗಕೆ
ಪೌಡರ್ ಬ್ಯಾಡಾ, ನೋಡು
ಇಷ್ಟು ಒಳ್ಳೆಯ ತುಟಿಗೆ
ಲಿಪಸ್ಟಿಕ್ ಬ್ಯಾಡಾ ||

ಸಿಂಧೂರದಾ ಬದ್ಲು
ಟಿಕ್ಲಿ ಬ್ಯಾಡಾ, ನೋಡು
ಓಲೆ, ಝುಮುಕಿಯ ಬದ್ಲು
ರಿಂಗು ಬ್ಯಾಡಾ ||

ಇಷ್ಟು ಚಂದದ ಕಾಲಿಗೆ
ಹೈಹೀಲ್ಡ್ ಬ್ಯಾಡಾ, ನೋಡು
ಚೆಂದ ಚೆಂದಾದ ಉಗುರಿಗೆ
ಕಿಟೇಕ್ಸ್ ಬ್ಯಾಡಾ ||

ಲಂಗಾ ದಾವಣಿ ಬದ್ಲು
ಟೂ ಪೀಸ್ ಬ್ಯಾಡಾ, ನೋಡು
ಮಾನಾ ಮುಚ್ಚುವ ಸೀರೆ ಧರಿಸಿ ನೋಡಾ ||

**

(ಇದನ್ನು ಬರೆದಿದ್ದು ಶಿರಸಿಯಲ್ಲಿ, ದಿನಾಂಕ 29-01-2008ರಂದು)
(ಶಿರಸಿ ತಾಲೂಕಿನ ಕಾನಳ್ಳಿಯಲ್ಲಿ ನಡೆದ ಎಬಿವಿಪಿಯ ಬೆಳದಿಂಗಳ ಊಟದಲ್ಲಿ ವಾಚನ ಮಾಡಿದ್ದೆ.)
 

Monday, November 25, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 6

ಬಸವೇಶ್ವರ ಕಾಲೇಜು ಬಾಗೇವಾಡಿ
ನಮ್ಮ ಪಂದ್ಯಗಳು ಹೀಗೆ ಸಾಗಿದ್ದಾಗ ಪಾವಸ್ಕರ ದೊಡ್ಡ ಹೊಟ್ಟೆ ಕುಣಿಸುತ್ತಾ ಎದ್ದು ಓಡೋಡಿ ಬಂದ. ಬಂದವನೇ `ವಿನೂ...ಕಿಟ್ಟು ಗೆದ್ದ..' ಎಂದ..
ನಂಗೆ ಸಖತ್ ಖುಷಿಯಾಯಿತು. ನನ್ನ ಮ್ಯಾಚನ್ನು ಮಧ್ಯದಲ್ಲಿಯೇ ಬಿಟ್ಟು ಖುಷಿಯಿಂದ ಎದ್ದೋಡಿ ಕಿಟ್ಟುವನ್ನು ತಬ್ಬಿ ಹಾರೈಸಿ ಬಂದೆ. ಕಿಟ್ಟು ಗೋಗಟೆಯ 4th board ಆಟಗಾರ ಸಚಿನ್ ಸುಲ್ತಾನ್ ಪುರೆಯನ್ನು ಹೀನಾಯವಾಗಿ ಸೋಲಿಸಿ ಗೆದ್ದಿದ್ದ. ಮ್ಯಾಚ್  ಬಹಳ ಟಫ್ ಇತ್ತೆಂದೂ ಕೊನೆಯ ಕ್ಷಣದಲ್ಲಿ ಒಳ್ಳೆಯ ಟರ್ನಿಂಗ್ ಪಾಯಿಂಟ್ ನೀಡಿ ಗೆದ್ದ ಬಗೆಯನ್ನು ಕಿಟ್ಟು ಆ ದಿನ ಸಂಜೆ ತಿಳಿಸಿದ. ಇಲ್ಲಿಗೆ ನಮ್ಮ ಟೀಂ ಪಾಯಿಂಟ್ 7+1=8 ಆಯಿತು. ಆದರೂ ಗೋಗಟೆ ಕಾಲೇಜಿನ ವಿರುದ್ಧ 2-1ರಿಂದ ಹಿಂದಿತ್ತು. ಎಲ್ಲವೂ ನನ್ನ ಮೇಲೆಯೇ ನಿರ್ಧಾರವಾಗಿತ್ತು. ಕಿಟ್ಟುವಿನ ಮ್ಯಾಚ್ ಮುಗಿದಿದ್ದರಿಂದ ಎಲ್ಲರೂ ನನ್ನ ಪಂದ್ಯದ ಸುತ್ತ ನೆರೆಯಲಾರಂಭಿಸಿದ್ದರು.
ಮ್ಯಾಚ್ ಮತ್ತಷ್ಟು ಮುಂದುವರಿಯಿತು. ಆಟ ಹಾಗೆಯೇ ಸಾಗುತ್ತಿತ್ತು. ನನಗೆ ಸೆಕೆಯ ಜೊತೆಗೆ ಟೆನ್ಶನ್ ನಿಂದ ಬೆವರು ಕಿತ್ತುಕೊಂಡು ಬರುತ್ತಿತ್ತು. ಮ್ಯಾಚ್ ಗೆದ್ದು ರಿಲ್ಯಾಕ್ಸ್ ಆಗಿದ್ದ ಕಿಟ್ಟು ಈಗ ಫ್ರೀಯಾಗಿದ್ದ. ಆತನಂತೂ ಆಗಾಗ ನನ್ನ ಬೆನ್ನು ತಟ್ಟಿ `ಟೆನ್ಶನ್' ಮಾಡ್ಕೋಬೇಡ ಎನ್ನುತ್ತಿದ್ದ. ನನ್ನ ಎದುರಾಳಿ ಆಟಗಾರ ಚಿಂಚೋಳಿಮಠ cool ಆಗಿ ಆಡಿದಂತೆ ಕಾಣುತ್ತಿತ್ತು. ನನ್ನಂ ತಹಾಟಗಾರನನ್ನು ಅದೆಷ್ಟು ಜನರನ್ನು ನೋಡಿದ್ದನೋ.. ಬಿಡಿ.. ಆದರೆ ನನಗೆ ಬಹಳ ಟೆನ್ಶನ್ ಆಗುತ್ತಿತ್ತು. ಹೀಗೆಯೇ ಸುಮಾರು ಹೊತ್ತು ಕುಳಿತೆವು. ನಾನು ಬಹು ಬೇಗನೆ move ನಡೆಸುತ್ತಿದ್ದರೂ ಸಾಗರ್ ಚಿಂಚೋಳಿಮಠ ಒಂದು move ಮಾಡಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತಿದ್ದ. ಅಷ್ಟರಲ್ಲಾಗಲೇ ನಮ್ಮ ಕಾಲೇಜಿನ ಲೇಡೀಸ್ ಟೀಂ ತಮ್ಮ ಎದುರಾಳಿ ಟೀಮುಗಳನ್ನು ಸೋಲಿಸಿ ಪ್ರಥಮ ಸ್ಥಾನವನ್ನು ಗಳಿಸಿಯಾಗಿತ್ತು. ಅವರೂ ಬಂದು ನನ್ನ ಆಟ ನೋಡಲಾರಂಭಿಸಿದ್ದರು.
ಕೊನೆಗೆ ಗಂಟೆ 12ನ್ನು ದಾಟಿತು. 8 ಗಂಟೆಗೆ ಆರಂಭವಾದ ಆಟ 12 ಗಂಟೆಯನ್ನು ಕಳೆದರೂ ಮುಗಿಯುವ ಲಕ್ಷಣ ತೋರಲಿಲ್ಲ. ಕೊನೆಗೊಮ್ಮೆ ಆಟ ಮುಕ್ತಾಯದ ಹಂತ ಕಾಣದೇ ಇರುವಾಗ ಕ್ಲಾಕ್ ಇಡುವ ತೀರ್ಮಾನಕ್ಕೆ ಅಂಪಾಯರ್ರುಗಳು ಬಂದರು. ಮೊದಲೊಂದು ಸಾರಿ ಟೆನ್ಶನ್ ಜೊತೆಗೆ ಭಯವಾದರೂ ನಾವು ಬಾಗೇವಾಡಿಗೆ ಹೊರಡುವ 4 ದಿನಗಳ ಮೊದಲು ನಮ್ಮ ಕಾಲೇಜಿನ ಚೆಸ್ ಕೋಚ್ ಎಂ. ಕೆ. ಹೆಗಡೆಯವರ ಜೊತೆಗೆ ಕ್ಲಾಕ್ ಇಟ್ಟು ಚೆಸ್ ಆಡಿದ್ದು ಸಹಾಯಕ್ಕೆ ಬಂದಿತು. ಥ್ಯಾಂಕ್ ಗಾಡ್ ಅಂದುಕೊಂಡೆ. ಕೊನೆಗೊಮ್ಮೆ ಗೋಗಟೆ ಕಾಲೇಜಿನದ್ದೇ ಆದ ಹಳೆಯ ಕ್ಲಾಕನ್ನು ಮ್ಯಾಚ್ ನಿರ್ಧಾರಕ್ಕೆ ಇಟ್ಟರು. ಇಬ್ಬರಿಗೂ ತಲಾ 10 ನಿಮಿಷಗಳನ್ನು ನಿಗದಿಪಡಿಸಲಾಯಿತು.
ಆಟ ಈಗ ಚಕ ಚಕನೆ ಸಾಗಿತು. ವಿಚಿತ್ರವೆಂದರೆ ನಾನು ಚಿಂಚೋಳಿಮಠನಿಗಿಂತ ಸಾಕಷ್ಟು ವೇಗವಾಗಿ ಚಸ್ ಆಡಿದೆ. ಏಕೆಂದರೆ ರಾಪಿಡ್ ಚಸ್ ನನ್ನ ಅತ್ಯಂತ ಪ್ರೀತಿಯ ಆಟವಾಗಿತ್ತು. ನವೀನ್ ಪಾವಸ್ಕರನ ಜೊತೆಗೆ ಚಾಲೆಂಜ್ ರೂಪದಲ್ಲಿ ಆಡುತ್ತಿದ್ದ ನಾನು ಎಡಗಣ್ಣಿನಲ್ಲಿ ಪಾವಸ್ಕರನನ್ನು ನೋಡಿ ನಕ್ಕೆ.. ಆತ ಕೈಸನ್ನೆಯ ಮೂಲಕ ಕೂಲ್ ಎನ್ನುತ್ತಿದ್ದ.. ನನ್ನ ವೇಗದ move ಬಹುಶಃ ಸಾಗರ್ ಚಿಂಚೋಳಿಮಠನನ್ನು ದಂಗುಪಡಿಸಿರಬೇಕು. ನನ್ನ ರಾಪಿಡ್ ಚೆಸ್ ಪರಿಣಾಮ ನನ್ನ ಬಳಿ 8 ನಿಮಿಷ ಬಾಕಿ ಉಳಿಯಿತು. ಚಿಂಚೋಳಿ ಮಠನದ್ದು 7 ನಿಮಿಷ ಕಳೆದು 3 ನಿಮಿಷ ಮಾತ್ರ ಉಳಿಯಿತು. ಅಂದರೆ ಸಾಗರ್ ಚಿಂಚೋಳಿಮಠನಿಗಿಂತ 5 ನಿಮಿಷ ನನಗೆ ಬೋನಸ್ ಸಿಕ್ಕಿತ್ತು. ಅಷ್ಟು ವೇಗವಾಗಿ ಆಟವನ್ನಾಡಿದ್ದೆ. ಇಷ್ಟಾಗಿದ್ದರೂ ಆಟದಲ್ಲಿ ಯಾರಿಗೂ ನಿಶ್ಚಿತ ಗೆಲುವಿನ ಅವಕಾಶವೇ ಇರಲಿಲ್ಲ. ಹೀಗಿದ್ದಾಗ ಯಾರ ಸಮಯ ಬೇಗನೆ ಮುಗಿಯುತ್ತದೆಯೋ ಅವರು ಆಟದಲ್ಲಿ ಸೋತಂತೆ ಎಂದು ನಿರ್ಣಯ ಮಾಡಲಾಗುತ್ತದೆ. ನಾನಂತೂ ಬೆಕ್ಕಿನ ಆಟವನ್ನು ಆರಂಭ ಮಾಡಿದ್ದೆ. ಸಾಗರ್ ಚಿಂಚೋಳಿ ಮಠನ ಬಳಿ ಗುದ್ಯಾಡಿ ಗೆಲ್ಲುವುದು ಸುಲಭವೇ ಆಗಿರದ ಕಾರಣ ನಾನು ಬೆಕ್ಕಿನಂತೆ ಚಲ್ಲಾಟವಾಡಿ ಸಮಯ ತಿಂದು ಆ ಮೂಲಕವಾದರೂ ಆತನನ್ನು ಸೋಲಿಸಬಹುದೆಂಬ ಐಡಿಯಾ ಹಾಕಿ ಆಡುತ್ತಿದ್ದೆ. ಮತ್ತೊಂದು ನಿಮಿಷ ಕಳೆಯಿತು. ಈಗ ಮೊದಲ ಬಾರಿಗೆ ಚಿಂಚೋಳಿಮಠನ ಮುಖದಲ್ಲಿ ಗಾಬರಿಯನ್ನು ಕಂಡಿದ್ದೆ. ಅಷ್ಟಲ್ಲದೇ ಅವನ ತಂಡದ ಅನಿಕೇತನ್ ಪಾವಸೆ ಹಾಗೂ ಸಮೀರ್ ಘೋಟ್ನೆ ಜೊತೆಗೆ ಅವರ ಕೋಚ್ ಕೂಡ ಕಂಗಾಲಾಗುವ ಹಂತ ಬಂದಿದ್ದರು. ನಾನೇ ಗೆದ್ದೇನೇನೋ ಎನ್ನುವ ಹಂತದಲ್ಲಿ ಖುರ್ಚಿಯ ತುದಿಗೆ ಕುಳಿತು ಆಡತೊಡಗಿದ್ದೆ. ಹೀಗಿರುವಾಗ ಆತನಿಗೆ ಏನನ್ನಿಸಿತೋ ಏನೋ ಕ್ಲಾಕ್ ಗೆ ನಿಧಾನವಾಗಿ ಮೊಡಕುವ ಬದಲು ಜೋರಾಗಿ ಗುದ್ದಿದ. ಹಳೆಯ ಕ್ಲಾಕು ಇದ್ದಕ್ಕಿದ್ದಂತೆ ತಟಸ್ಥವಾಯಿತು. ಮುಂದೆ ಏನು ಮಾಡಿದರೂ ಅದು ಸರಿಯಾಗಲೇ ಇಲ್ಲ.
ಇದನ್ನು ನೋಡಿದ ಪಾವಸ್ಕರ ಭರ್ಜರಿ ಸಿಟ್ಟಾದ. ಗಲಾಟೆಗೆ ಇಳಿದುಬಿಟ್ಟ. ಗೋಗಟೆ ಟೀಮಿನ ಮ್ಯಾನೇಜರ್ರಾಗಿದ್ದವರೇ ಅಂಪಾಯರ್ರಾಗಿದ್ದರು. ಅವರು ತಮ್ಮ ಟೀಮಿನ ಬೆಂಬಲಕ್ಕೆ ನಿಂತುಬಿಟ್ಟಿದ್ದರು. ಜೊತೆಗೆ ಆ ಟೀಮಿತ ಹುಡುಗರೂ ಜೋರಾದರು. ಒಂದು ಹಂತದಲ್ಲಿ ಕೈ ಮಿಲಾಯಿಸುತ್ತದೆಯೇನೋ ಎನ್ನುವ ಹಂತಕ್ಕೆ ತಲುಪಿತು. ನವೀನ ಪಾವಸ್ಕರ ಅಷ್ಟು ಸಿಟ್ಟಾಗಿದ್ದ. ನಾನು ಸುಮ್ಮನೆ ನೋಡುತ್ತಿದ್ದೆ. ಕಿಟ್ಟು, ಆನಂದರು ನವೀನನನ್ನು ಸಮಾಧಾನ ಮಾಡುವ ಯತ್ನ ಮಾಡುತ್ತಿದ್ದರು. ನಮ್ಮ ಟೀಮಿನ ಮ್ಯಾನೇಜರ್ ಆಗಿದ್ದ ಎನ್. ಎಚ್. ಗೌಡರು ಅಂಪಾಯರ್ರಾಗಿದ್ದರು. ಆದರೆ ಅವರು ನಮ್ಮ ಸಹಾಯಕ್ಕೆ ಬರಲೇ ಇಲ್ಲ. ಅವರು ತಂಡು ಕುಳಿತುಬಿಟ್ಟರು. ಪಾವಸ್ಕರ ಇದರಿಂದಾಗಿ ಇನ್ನಷ್ಟು ಸಿಟ್ಟಾದ. ಗೋಗಟೆ ಕಾಲೇಜಿನ ವಿರುದ್ಧ ಏರಿ ಹೋದ. ಇದೇ ಸಮಯದಲ್ಲಿ ನಾನು ಎರಡು ತಪ್ಪು ಮಾಡಿಬಿಟ್ಟೆ. ಅದರಿಂದ ನಮಗೆ ಸಾಕಷ್ಟು ನಷ್ಟವೇ ಆಯಿತು. ಮೊದಲನೇದಾಗಿ ನಾನು ಪಾವಸ್ಕರನನ್ನು ಸುಮ್ಮನಿರಿಸಿ ತಪ್ಪು ಮಾಡಿದೆ. ಎರಡನೇದಾಗಿ ಕ್ಲಾಕು ಹಾಳಾದ ನಂತರವೂ ಮತ್ತೆ ಚೆಸ್ ಆಡಲು ಕುಳಿತುಬಿಟ್ಟೆ. ನಾಗಭೂಷಣ ಗೌಡರು ಹೀಗೆ ಮಾಡಲು ಹೇಳಿದ್ದರು. ನವೀನ ಪಾವಸ್ಕರ ನನ್ನ ಮಾತನ್ನು ಮಾತ್ರ ಕೇಳುತ್ತಾನೆ ಎಂಬುದು ಅವರಿಗೆ ಗೊತ್ತಿತ್ತು.. ನಾನು ಆತನನ್ನು ಸುಮ್ಮನಿರಿಸುವ ಜೊತೆಗೆ ಆಟಕ್ಕೂ ಕುಳಿತುಬಿಟ್ಟೆ. ನಾನು ಈ ತಪ್ಪುಗಳನ್ನು ಮಾಡಲೇಬಾರದಿತ್ತು. ಇದರ ಪರಿಣಾಮ ನಾನು ಪಂದ್ಯದಲ್ಲಿ ಹೀನಾಯವಾಗಿ ಸೋತೆ. ಸಾಕಷ್ಟು ಸಮಯ ಸಿಕ್ಕ ಚಿಂಚೋಳಿಮಠ ನನ್ನನ್ನು ಸೋಲಿಸಿದ. ತಂಡದ ಸ್ಕೋರು 3-1 ಆಯಿತು. ಇದುವರೆಗಿನ ಒಟ್ಟೂ ಪಾಯಿಂಟು 8 ಆಯಿತು. ಕೊನೆಗೆ ನಾನು ಅಲ್ಲಿ ಆಡಲೇಬಾರದಿತ್ತು ಅಂಬುದರ ಅರಿವಾಯಿತು.
ನಾನು ಸೋತರೂ ಅದು ಸೋಲಲ್ಲ ಎಂದುಕೊಂಡೆ. ಒಬ್ಬ ನ್ಯಾಶನಲ್ ಪ್ಲೇಯರ್ ಹೀಗೆ ಆಡಿ ಗೆದ್ದನಲ್ಲಾ ಛೀ.. ಅಂದುಕೊಂಡೆ.. ಮೋಸ ಮಾಡದಿದ್ದರೆ ಕ್ಲಾಕ್ ನಿಯಮದಂತೆ ಗೆಲ್ಲಬಲ್ಲೆ ಎನ್ನುವ ಸಮಾಧಾನವಿತ್ತು. ಆದರೂ ಆತನ ಮಟ್ಟಕ್ಕೆ ಹೋರಾಡಿದ ಖುಷಿಯಿತ್ತು. ಒಂದು ಹಂತದಲ್ಲಿ ಆತನಿಗೂ ಬೆವರಿಳಿಸಿದ ಸಾರ್ಥಕತೆಯಿತ್ತು. ಇಷ್ಟು ಸಾಕೆಂದುಕೊಂಡೆ.. ಆದರೂ ಮನಸ್ಸು ತಲ್ಲಣಗೊಂಡಿತ್ತು.

ದುರ್ಗಾ ಹೋಟೆಲ್ ಇರುವ ಕಾಂಪ್ಲೆಕ್ಸ್..
ಅದೇ ದಿನ ಮದ್ಯಾಹ್ನ ನಮ್ಮ ಮುಂದಿನ ಪಂದ್ಯ ನಡೆಯಿತು. ಬೆಳಗಾವಿಯದ್ದೇ ಇನ್ನೊಂದು ಕಾಲೇಜು ಆರ್. ಪಿ.ಡಿ. ಅದರ ಜೊತೆಗೆ ನಮ್ಮ ಪಂದ್ಯ. ಅಲ್ಲಿನ ಕ್ಯಾಪ್ಟನ್ ನಮ್ಮ ಮಿತ್ರ ಗಣೇಶ. ಮ್ಯಾಚಿಗೂ ಮುನ್ನ ಬಂದು ಕಾಂಪ್ರೋಮೈಸ್ ಮಾಡಿಕೊಳ್ಳೋಣ 2 ನಮಗೆ 2 ನಿಮಗೆ ಎಂದ. ಟೀಂ ಕರೆದು ಕೇಳಿದೆ. ಅವರೂ ಸರಿಯಾದ ನಿರ್ಧಾರಕ್ಕೆ ಬರಲಿಲ್ಲ. ಏನು ಮಾಡಬೇಕೋ ತಿಳಿಯಲಿಲ್ಲ. ಕೊನೆಗೆ ಸೀದಾ ನಮ್ಮ ಎಂ. ಕೆ. ಹೆಗಡೆಯವರಿಗೆ ಪೋನಾಯಿಸಿದೆ.
ಅವರು `ಕಾಂಪ್ರೋಮೈಸ್ ಬೇಡ.. ಸರಿಯಾಗಿ ಆಡಿ.. ಎಷ್ಟು ಪಾಯಿಂಡ್ ಬರ್ತದೋ ಬರಲಿ..' ಎಂದರು.
ಸರಿಯೆಂದು ಆಡಲು ಕುಳಿತೆವು. ಮ್ಯಾಚಿನಲ್ಲಿ ಆನಂದ ಹಾಗೂ ಕಿಟ್ಟು ಬಹುಬೇಗನೆ ಗೆದ್ದು ನಮ್ಮ ಪಾಯಿಂಟನ್ನು 10ಕ್ಕೇರಿಸಿದರು. ಟೀಮಿಗೆ ಜೋಶ್ ಬಂದಿತ್ತು.
ಹಿಂದಿನ ಮ್ಯಾಚನ್ನು ಆ ರೀತಿ ಆಘಾತಕರವಾಗಿ ಸೋತ ಡಿಪ್ರೆಶನ್ ನಲ್ಲಿದ್ದ ನಾನು ಅನ್ಯಮನಸ್ಕತೆಯಿಂದಲೇ ಮ್ಯಾಚ್ ಆಡುತ್ತಿದ್ದೆ. ಪರಿಣಾಮವಾಗಿ ಅಷ್ಟೇನೂ ಒಳ್ಳೆಯ ಆಟಗಾರನಲ್ಲದ ನನ್ನ ಎದುರಾಳಿಯ ವಿರುದ್ಧ ನಾನು ಸೋತುಬಿಟ್ಟೆ.  ನಮ್ಮ ಟೀಮಿನಲ್ಲಿ ಕೋಲಾಹಲ. ಟೀಮಿನ ಕ್ಯಾಪ್ಟನ್ ಸತತ ಎರಡು ಸೋಲನ್ನು ತಿಂದಿದ್ದೆ. ಕಿಟ್ಟು ಹಾಗೂ ಆನಂದ ಚಿಂತಾಕ್ರಾಂತರಾಗಿದ್ದರು. ನಾನು ಸೋತಿದ್ದು ನವೀನನಿಗೂ ಗೊತ್ತಾಗಿ ಕಣ್ಣು ಸನ್ನೆಯಲ್ಲೇ ಕಿಡಿಕಾರತೊಡಗಿದ್ದ. ನಾನು ಆತನ ಕಣ್ಣು ತಪ್ಪಿಸತೊಡಗಿದ್ದೆ. ಇಲ್ಲಿ ಮೂರನೇ ಬೋರ್ಡ್ ಪ್ಲೇಯರ್ ನವೀನ ಪಾವಸ್ಕರ ನಿರ್ಣಾಯಕನಾಗಿದ್ದ. ಆತನ ಆಟ ಸಾಗಿತ್ತು. ಆತನ ಎದುರಾಳಿ ಗಣೇಶ. ಸರಿಯಾಗಿ ಆಡುತ್ತಿದ್ದ ನವೀನ ಪಾವಸ್ಕರನಿಗೆ ಇದ್ದಕ್ಕಿದ್ದಂತೆ ಅದ್ಯಾವ ದೆವ್ವ ಮೆಟ್ಟಿಕೊಂಡಿತೋ, ತನ್ನೆಲ್ಲ ಪಾನುಗಳನ್ನೂ ಕಾಯಿಗಳನ್ನೂ ಕಳೆದುಕೊಳ್ಳತೊಡಗಿದ. ನೋಡ ನೋಡುತ್ತಿದ್ದಂತೆ ನವೀನ ಪಾವಸ್ಕರನ ಬಲಗಳೆಲ್ಲ ಬರಿದಾಯಿತು. ಕೊನೆಗೊಮ್ಮೆ ಆತನ ಪಾಲಿಗೆ ರಾಜನೊಬ್ಬನೇ ಉಳಿದುಕೊಂಡ. ಅದಕ್ಕೆ ಪ್ರತಿಯಾಗಿ ಗಣೇಶ ಸಾಕಷ್ಟು ಬಲದೊಂದಿಗೆ ಅಟ್ಯಾಕ್ ಶುರು ಮಾಡಿಕೊಂಡಿದ್ದ. ಗ್ಯಾರಂಟಿ ಸೋಲುತ್ತಾನೆ ಬಿಡಿ ಎಂದುಕೊಂಡೆ. ಅಷ್ಟರಲ್ಲಿ 5 ತಾಸಿಗೂ ಹೆಚ್ಚಿನ ಕಾಲ ಕಟ್ಟಿಕೊಂಡಿದ್ದ ಜಲಬಾಧೆ ಬಹಳ ಕಾಡಿತು. `ಕಿಟ್ಟು ಬಾರೋ ಹೋಗಿ ಬರೋಣ, ನವೀನ ಪಾವಸ್ಕರ ಹೊಗೆ ಹಾಕಿಸ್ಕೊಂಡ ..'ಎಂದೆ. `ನವೀನಾ.. ಟೈಂ ವೇಸ್ಟ್ ಮಾಡ್ತಿದ್ದೀಯಾ..? ಸುನ್ಮೆ ರಿಸೈನ್ ಮಾಡು..' ಎಂದು ಆನಂದ ಆಗಲೇ ಎರಡು ಮೂರು ಸಾರಿ ಹೇಳಿಯಾಗಿತ್ತು. ಆದರೆ ನವೀನನ ಕಿವಿಗೆ ಅದು ಹೋಗಲಿಲ್ಲ. ಆಡುತ್ತಲೇ ಇದ್ದ. ಹಾಳಾಗ್ಲಿ ಎಂದು ನಾವು ಎದ್ದು ಬಂದೆವು.
ಮರಳಿ ಬರುವಾಗ ಒಂದರ್ಧ ಗಂಟೆಯೇ ಹಿಡಿಯಿತು. ನನ್ನ ಆಟದ ಪೋಸ್ಟ್ ಮಾರ್ಟಮ್ ಅಂದರೆ ಸೋತ ಬಗೆಯ ಬಗ್ಗೆ ಕಿಟ್ಟುವಿನ ಜೊತೆಗೆ ಚರ್ಚಿಸುತ್ತ ಬರುತ್ತಿದ್ದೆ. ನವೀನ ಪಾವಸ್ಕರ ಖುಷಿಯಿಂದ ಓಡಿ ಬರುತ್ತಿರುವುದು ಕಾಣಿಸಿತು. ಏನೋ ಆಗಿದೆ ಎಂದುಕೊಂಡೆ.. ಬಂದವನೇ ಆಟ ಡ್ರಾ ಆಯ್ತು ಕಣೋ ಎಂದ. ಅರೇ.. ಇದ್ಹೇಗೆ ಸಾಧ್ಯವಾಯ್ತು ಅನ್ನೋ ಕುತೂಹಲ..
ರಾಜನೊಬ್ಬನೇ ಇದ್ದ. ಹೇಗಿದ್ರೂ ನೀನು ಚೆಕ್ ಮೀಟ್ ಗ್ಯಾರಂಟಿ ಅಂದ್ಕೊಂಡಿದ್ವಿ... ಎಂದೆ
ಇಲ್ಲ ಮಾರಾಯಾ.. ಅಂವನಿಗೆ ನನ್ನ ರಾಜನನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ.. ಪರಿಣಾಮವಾಗಿ ಸ್ಟೈಲ್ ಮೀಟ್ ಆದೆ.. ಸ್ಟೈಲ್ ಮೀಟ್ ಆದರೆ ಡ್ರಾ ಅಂತೆ.. ಸೋ.. ಅರ್ಧ ಪಾಯಿಂಟು ಬೋನಸ್ಸು ಸಿಕ್ಕಿತು.. ಅಂದ.. ಖುಷಿಯಾಯಿತು.
ಈ ಡ್ರಾದಿಂದಾಗಿ ನಮ್ಮ ತಂಡದ ಮೊತ್ತ 10.5 ಆಯಿತು. ಅಂದರೆ ಕಾಂಪ್ರೋಮೈಸ್ ಗಿಂತ ಅರ್ಧ ಪಾಯಿಂಟು ಹೆಚ್ಚು ಸಿಕ್ಕಿತು. ಕೊನೆಯ ಮ್ಯಾಚಿನಲ್ಲಿ 4 ಬೋರ್ಡಿನಲ್ಲಿ 1 ಮ್ಯಾಚನ್ನೂ ಸೋಲದಿದ್ದರೆ ಪ್ರೈಜ್ ಗ್ಯಾರಂಟಿ ಎಂಬ ಹಂತಕ್ಕೆ ಬಂದಿತು.

ದಿ ಹೆಲ್ಪ್ ಪುಲ್ ಮ್ಯಾಚ್.. ಹಾಗೂ ಹೆಲ್ಪರ್ಸ್..
ಈ ಪಂದ್ಯದಲ್ಲಿ ನಾಲ್ಕಕ್ಕೆ ನಾಲ್ಕನ್ನೂ ಗೆದ್ದರೆ ಫಸ್ಟಂತೂ ಸಿಗಲಾರದು. ಏಕೆಂದರೆ ಗೋಗಟೆ ಕಾಲೇಜು 14 ಪಾಯಿಂಟು ಗಳಿಸಿ ಆಗಲೇ ಮೊದಲನೇ ಸ್ಥಾನವನ್ನು ಖಾಯಂ ಮಾಡಿಕೊಂಡಿತ್ತು. ಆದರೆ ನಾಲ್ಕರ ಪೈಕಿ 3.5 ಪಾಯಿಂಟ್ ಗೆದ್ರೂ ಸಾಕಿತ್ತು ದ್ವಿತೀಯ ಸ್ಥಾನ ಪಡೆದುಕೊಳ್ಳುತ್ತಿದ್ದೆವು. ನಮ್ಮ ವಿರುದ್ಧ ಕಳೆದ ಸಾರಿಯ ಪಂದ್ಯವನ್ನಾಡಿದ್ದ ಆರ್. ಪಿ. ಡಿ. ಕಾಲೇಜಿನ ಪಾಯಿಂಟು 9.5 ಆಗಿತ್ತು.ನಾವು ನಾಲ್ಕಕ್ಕೆ ನಾಲ್ಕನ್ನು ಗೆದ್ದರೂ 14.5 ಆಗುತ್ತಿತ್ತು. ಒಂದು ಮ್ಯಾಚು ಡ್ರಾ ಆದರೂ 14 ಪಾಯಿಂಟಾಗುತ್ತಿತ್ತು. ಅದೇ ನಾವೇನಾದರೂ ಒಂದು ಮ್ಯಾಚನ್ನು ಸೋತು ಆರ್. ಪಿ. ಡಿ. ಕಾಲೇಜು 4ರ ಪೈಕಿ 4ನ್ನೂ ಗೆದ್ದರೆ 2ನೇ ಸ್ಥಾನವನ್ನು share ಮಾಡಿಕೊಳ್ಳಬೇಕಾಗುತ್ತಿತ್ತು. ಹೀಗಾಗುವುದನ್ನು ತಪ್ಪಿಸಲು ಅಷ್ಟಕ್ಕೆ ಅಷ್ಟೂ ಮ್ಯಾಚನ್ನು ಗೆಲ್ಲಲೇಬೇಕು ಎಂದುಕೊಂಡೆವು.  ನಮ್ಮ ನಿರೀಕ್ಷೆಯಂತೆ ಆರ್. ಪಿ. ಡಿ. ಕಾಲೇಜಿನವರು ಅವರ ಎದುರಾಳಿ ತಂಡದ ಜೊತೆಗೆ ಹೊಂದಾಣಿಕೆಯನ್ನು ಮಾಡಿಕೊಂಡು ನಾಲ್ಕಕ್ಕೆ ನಾಲ್ಕನ್ನೂ ಗೆದ್ದುಕೊಂಡರು. ಇದರಿಂದ ನನಗೆ ಕೊಂಚ ಟೆನ್ಶನ್ ಆಯಿತು. ನಮ್ಮ ಟೀಮಲ್ಲಿ ಯಾರಾದರೂ ಸೋತುಬಿಟ್ಟರೆ ಎನ್ನುವ ಭೀತಿ ಕಾಡಿತು.
ಆದರೆ...
ನಮ್ಮ ಪುಣ್ಯಕ್ಕೆ ನಮ್ಮ ವಿರುದ್ಧ ಬಿದ್ದವರು ಕುಮಟಾದ ಬಾಳಿಗಾ ಕಾಮರ್ಸ್ ಕಾಲೇಜಿನ ದೋಸ್ತರು. ಮ್ಯಾಚೇನೋ ಶುರುವಾಯಿತು. ಕಳೆದೆರಡು ಮ್ಯಾಚು ಸೋತಿದ್ದೆನಲ್ಲಾ.. ಸಿಟ್ಟೆಲ್ಲಿತ್ತೋ., ಮ್ಯಾಚು ಪ್ರಾರಂಭವಾದ 5 ನಿಮಿಷಗಳಲ್ಲಿಯೇ ಕನಿಷ್ಟ 20 step ಗಳಲ್ಲಿಯೇ ನನ್ನ ಎದುರಾಳಿಯನ್ನು ಸೋಲಿಸಿಬಿಟ್ಟೆ. ಮತ್ತೊಂದು 15-20 ನಿಮಿಷಗಳಲ್ಲಿ ಆನಂದನೂ ಗೆದ್ದುಬಿಟ್ಟ. ಆದರೆ ಮೂರನೇ ಬೋರ್ಡ್ ಪ್ಲೇಯರ್ ನವೀನ ಪಾವಸ್ಕರ ಸೋಲತೊಡಗಿದ. ಕಿಟ್ಟುವಿನ ಮ್ಯಾಚು ಕುತೂಹಲಕ್ಕೆ ಕಾರಣವಾಗಿತ್ತು. ನಮ್ಮ ಪಂದ್ಯಗಳನ್ನು ನೋಡಲು ಆರ್. ಪಿ. ಡಿ. ಕಾಲೇಜಿನ ಹುಡುಗರೂ ನೆರೆಯಲು ಆರಂಭಿಸಿಬಿಟ್ಟರು.
ಆಗ ಇದ್ದಕ್ಕಿದ್ದಂತೆ ನವೀನ ಪಾವಸ್ಕರನಿಗೆ ಏನನ್ನಿಸಿತೋ ಏನೋ ನನ್ನ ಕಿವಿಯಲ್ಲಿ `ಮ್ಯಾಚನ್ನು ಹೊಂದಾಣಿಕೆ ಮಾಡಿಕೊಳ್ಳೋಣ .. ' ಎಂದ. ಕಿಟ್ಟುವಿಗೂ ಹೇಳಿದ. ನಾನು ಬೇಡವೆಂದೆ. ಕಿಟ್ಟುವೂ ಹಾಗೆಯೇ ಹೇಳಿದ. ಆದರೆ ನವೀನ ಪಾವಸ್ಕರ ಬಿಡಬೇಕಲ್ಲ. ನಮ್ಮನ್ನು ಒಪ್ಪಿಸಿದ. ನಮ್ಮ ಎದುರಾಳಿ ತಂಡದ ಬಳಿ ಕೊನೆಗೆ ನವೀನನೇ `ಹೊಂದಾಣಿಕೆ ಮಾಡಿಕೊಳ್ಳೋಣ..' ಎಂದ.. ಅವರು ನನ್ನ ಹಾಗೂ ಕಿಟ್ಟುವಿನ ಮುಖವನ್ನು ನೋಡಲಾರಂಭಿಸಿದರು.
ನವೀನ ಪಾವಸ್ಕರ `ನೋಡಿ.. ಮ್ಯಾಚ್ ಹೊಂದಾಣಿಕೆ ಮಾಡಿಕೊಳ್ಳೋಣ.. ನಿಮಗೆ ದುಡ್ಡು ಕೊಡ್ತೀನಿ...' ಅಂದ.. ಕುಮಟಾ ಕಾಲೇಜಿನ 4ನೇ ಬೋರ್ಡ್ ಪ್ಲೇಯರ್ ಹೆಸರೂ ಕೃಷ್ಣ ಮೂರ್ತಿ ದೀಕ್ಷಿತ ಎಂಬುದೇ ಆಗಿತ್ತು. ಹಳೆಯ ಪರಿಚಯ. ಆತ ನವೀನನ ಬಳಿ `ನಾವು ಆಟವನ್ನು ದುಡ್ಡಿನಿಂದ ಅಳೆಯೋದಿಲ್ಲ.. ದುಡ್ಡಿಗಾದರೆ ನಾವು ಮ್ಯಾಚು ಬಿಟ್ಟುಕೊಡುವುದೇ ಇಲ್ಲ.. ' ಎಂದರು. ನನಗೆ ಏನು ಮಾಡಬೇಕೋ ಎಂಬುದು ತೋಚಲಿಲ್ಲ. ಕೊನೆಗೆ ಕಿಟ್ಟು ನಮ್ಮ ದೋಸ್ತ ರಾಘವನಿಗೆ ಪೋನ್ ಮಾಡಿದ. ಯಾಕಂದರೆ ನಮ್ಮ ವಿರುದ್ಧ ಆಡುತ್ತಿದ್ದ ಹುಡುಗರು ರಾಘವನ ಪರಮಾಪ್ತ ಮಿತ್ರರಾಗಿದ್ದರು ಅಷ್ಟೇ ಅಲ್ಲದೇ ರಾಘವನ ಅಜ್ಜನಮನೆಯಾದ ಗೋಕರ್ಣದಲ್ಲಿ ಆಡಿ ಬೆಳೆದಿದ್ದವರಾಗಿದ್ದರು.
ಕೊನೆಗೆ ರಾಘುವಿನ ಮಾತಿಗೆ ಹಾಗೂ ಒಂದು ಷರತ್ತಿಗೆ ಒಪ್ಪಿ ಅವರು ಆಟವನ್ನು ನಮಗೆ ಬಿಟ್ಟುಕೊಟ್ಟರು. ಅದೇನೆಂದರೆ ನಾಲ್ಕನೇ ಬೋರ್ಡಿನ ಆಟಗಾರರಾದ ಕೃಷ್ಣಮೂರ್ತಿ ದೀಕ್ಷಿತ್ ಹಾಗೂ ಕೃಷ್ಣಮೂರ್ತಿ ದೀಕ್ಷಿತ್ ಅವರ ನಡುವಿನ ಆಟವನ್ನು ಡ್ರಾ ಎಂದು ಪರಿಗಣಿಸಬೇಕು. ಬದಲಾಗಿ ಆ ಟೀಮಿನವರು ಸೋಲುತ್ತಿದ್ದ ನವೀನ ಪಾವಸ್ಕರನಿಗೆ ಗೆಲುವನ್ನು ಬಿಟ್ಟುಕೊಡುತ್ತಿದ್ದರು. ಹಾಗೆ ಮಾಡಿದರು ಕೂಡ. ಪರಿಣಾಮವಾಗಿ ಅರ್ಧ ಪಾಯಿಂಟಿನಿಂದ 2ನೇ ಸ್ಥಾನವನ್ನು ಗಳಿಸಿಕೊಂಡೆವು. ನಮ್ಮ ಟೀಮಿನ ಕೃಷ್ಣಮೂರ್ತಿ ದೀಕ್ಷಿತ್ ಇಡೀ ಟೂರ್ನಿಯಲ್ಲಿ ಒಂದೇ ಒಂದು ಮ್ಯಾಚನ್ನೂ ಸೋಲದೆ ಪ್ಲೇಯರ್ ಆಫ್ ದಿ ಟೂರ್ನಿಮೆಂಟ್ ಗೆ ಪಾತ್ರನಾಗಿದ್ದ. ಕಾಕತಾಳೀಯದಂತೆ ನಮ್ಮ ಎದುರಾಳಿ ತಂಡ ಕುಮಟಾದ ಕೃಷ್ಣಮೂರ್ತಿ ದೀಕ್ಷಿತನೂ ಟೂರ್ನಿಯಲ್ಲಿ ಒಂದೇ ಒಂದು ಮ್ಯಾಚನ್ನೂ ಸೋಲದೆ ಅಜೇಯನಾಗಿ ಉಳಿದಿದ್ದ.
ನನಗೆ ಬೇಜಾರಾಗಿತ್ತು. ಪಂದ್ಯ ಹೊಂದಾಣಿಕೆ ಮಾಡಿಕೊಂಡಿದ್ದು ನನಗೆ ಅಷ್ಟು ಖುಷಿಯನ್ನು ಕೊಟ್ಟಿರಲಿಲ್ಲ. ಆದರೆ ನಮ್ಮ ಟೀಮಿನ ಒಬ್ಬ ಆಟಗಾರನನ್ನು ಸೋಲಿಸಿದರೆ ತಲಾ 500 ರು. ಕೊಡುತ್ತೇನೆ ಎಂದು ಆರ್. ಪಿ. ಡಿ. ಕಾಲೇಜಿನ ಗಣೇಶ್ ಹಾಗೂ ಮಿತ್ರರು ಆಮಿಷ ಒಡ್ಡಿದ್ದರಂತೆ. ಹಣಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.. ನೀವು ನಮ್ಮವರು, ಉತ್ತರ ಕನ್ನಡದವರು ಗೆಲ್ಲಬೇಕು. ಅದಕ್ಕೂ ಹೆಚ್ಚಾಗಿ ನಮ್ಮ ರಾಘುವಿನ ದೋಸ್ತರು.. ನೀವು ಸೋಲಬಾರದು.. ಅದಕ್ಕಾಗಿ ಪಂದ್ಯ ಬಿಟ್ಟುಕೊಟ್ಟೆವು ಎಂದು ಹೇಳಿದರು. ಇದನ್ನು ಕೇಳಿದ ಮೇಲೆ ಅಷ್ಟಾಗಿ ನನಗೆ ಬೇಸರವಾಗಲಿಲ್ಲ.

(ಮುಂದುವರಿಯುತ್ತದೆ)
(ಮುಂದಿನ ಭಾಗದಲ್ಲಿ ಸಮಾರೋಪ ಸಮಾರಂಭ...ಬ್ಲೂ ಟೀಂ ಸೆಲೆಕ್ಷನ್) 


Saturday, November 23, 2013

ದಿಙ್ಮೂಢ ಕವಿತೆಗಳು


ಟಾರು ರೋಡಿನಲ್ಲಿ
ವೇಗವಾಗಿ ಬೈಕಿನಲ್ಲಿ
ಸಾಗುತ್ತಿದ್ದೆ..
ಕಪ್ಪು ಬೆಕ್ಕು
ಬೈಕಿಗಡ್ಡವಾಗಿ
ಓಡಿ ಬಂದಿತು..
ಅಪಶಕುನ ಮುಂಡೇದು
ಬೈಕಿನ ಚಕ್ರಕ್ಕೆ ಸಿಲುಕಿ 
ಸತ್ತು ಹೋಯಿತು ||

***

ಬೆಳಿಗ್ಗೆ ಮುಂಚೆ
ಹಾಗೆ ಸುಮ್ಮನೆ
ಎಡಗಣ್ಣು 
ಅದುರಿತು
ಕಣ್ಣು ತಿಕ್ಕಿದೆ,
ರೆಪ್ಪೆಗೂದಲು 
ಕಿತ್ತು ಬಂದಿತು ||

**

ಶುಭಕಾರ್ಯಕ್ಕೆ
ಹೊರಟ ವೇಳೆ
ಬೋಳು ಹಣೆಯ ಮುದುಕಿ
ಸಮಾ ಎದುರಿಗೆ ಸಿಕ್ಕಳು
ಮುದಿಕಿಯೀಗ
ಹೊಸ ಮೇಕಪ್ 
ಬಾಕ್ಸು ಕೊಂಡಿದ್ದಾಳಂತೆ ||

***

 ರಸ್ತೆಯಲ್ಲಿ ಪದೇ ಪದೆ
ಎಡಗಾಲು  ಕಲ್ಲಿಗೆ ತಾಗಿ
ಎಡವಿತು.
ಕಲ್ಲು ಕಿತ್ತು ಬಂದಿತು ||

 **


ಕುತೂಹಲದಿಂದ
ಜ್ಯೋತಿಷಿಗಳ ಬಳಿ
ಭವಿಷ್ಯ ಕೇಳಿಸಲು
ಜಾತಕ ಕೊಟ್ಟೆ
ಭವಿಷ್ಯ ಹೇಳುವ ಮುನ್ನ
ಜ್ಯೋತಿಷಿಗಳು
ಇನ್ನಿಲ್ಲವಾದರು ||

***

ದಾರಿಯಲ್ಲಿ ಸಾಗುವಾಗ
ಅಡ್ಡಬಂದಿತು ನರಿ,
ಮುಖ ಸರಿಯಾಗಿ ಕಾಣಲಿಲ್ಲ,
ನೋಡಣವೆಂದು ಬೆನ್ನಟ್ಟಿದೆ
ಅಡ್ಡಗಟ್ಟಿ ಮುಖ ನೋಡಿದೆ
ಶನಿ ಮುಂಡೆಗಂಡನ
ಮುಖ ನೋಡಿದೆ..
ಇನ್ನು ನನ್ನ ಕೆಲಸ ಆದಂತೆ
ಎಂದು ಗೊಣಗಿದ ನರಿ
ವಾಪಾಸು ಮರಳಿತು ||

***
ನಾನು ಎರುದು ಬಂದಾಗ 
ಆತ ಒಂಟಿ ಸೀನು ಸೀನಿದ,
ನನಗೆ ಶೀತವಾಯಿತು ||

**

ಮತ್ತೊಮ್ಮೆ ಖಾಲಿಕೊಡ
ಎದುರು ಬಂದಿತು
ಶಿವ ಶಿವಾ ಎಂದುಕೊಂಡೆ
ಮನಸ್ಸು ಖಾಲಿಯಾಯಿತು ||

***

(ಬರೆದಿದ್ದು : ಶಿರಸಿಯಲ್ಲಿ, ನವೆಂಬರ್ 23, 2013ರಂದು)

Thursday, November 21, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 5

ದಿ ಬಾಕ್ಸಿಂಗ್ ಡೇ

ಸಾಲು ಸಾಲು ಟೇಬಲ್ಲುಗಳು..ನಾಲ್ಕು ಜನ ಎದುರು ಬದುರು ಕುಳಿತುಕೊಳ್ಳುವಂತೆ ಟೇಬಲ್ ಹಾಕಿತ್ತು. ಮೊದಲ ಬೋರ್ಡಿಗೆ ಆನಂದ, ೆರಡನೆಯದಕ್ಕೆ ನಾನು, ಮೂರನೇದಕ್ಕೆ ನವೀನ ಪಾವಸ್ಕರ, ನಾಲ್ಕನೆಯದಕ್ಕೆ  ಕಿಟ್ಟು ಕುಳಿತಿದ್ದ..
ಇವತ್ತು ಆಡಿದ್ದು ಎರಡು ಮ್ಯಾಚುಗಳು. ಮೊದಲು ನಮ್ಮ ಎದುರು ಬಿದ್ದವರು ಬಹುಶಹ ಹಾನಗಲ್ಲೋ, ಧಾರವಾಡದವರೋ ಇರಬೇಕು. ಮ್ಯಾಚ್ ಶುರುವಾದ ಹತ್ತೇ ನಿಮಿಷಗಳಲ್ಲಿ ಕೃಷ್ಣಮೂರ್ತಿ ಗೆದ್ದುಬಿಟ್ಟ. ನನ್ನ ಮ್ಯಾಚು ಗೆಲ್ಲುವ ಹಂತದಲ್ಲಿತ್ತು. . ಪಕ್ಕದಲ್ಲಿ ಕುಳಿತಿದ್ದ ನಾನು ನವೀನ ಪಾವಸ್ಕರನ ಪಕ್ಕೆಗೆ ತಿವಿದು `ಹೆಂಗೆ..? ' ಎಂಬಂತೆ ಸನ್ನೆ ಮಾಡಿದೆ. ಕಿಚಾಯಿಸಿದೆ.
ಅದಕ್ಕವನು ತನ್ನ ದೊಡ್ಡ ಹೊಟ್ಟೆ ಕುಲುಕಿಸಿ ನಗುತ್ತಾ.. `ನಮ್ಮ ಕಿಟ್ಟು ಅಲ್ವೇ..' ಎಂದ. !
ಕೊನೆಗೆ ನಾನು ಎರಡನೆಯವನಾಗಿ ಗೆದ್ದೆ. . ನವೀನ ಪಾವಸ್ಕರನೂ ಕೆಲವು ಕ್ಷಣಗಳಲ್ಲಿಯೇ ಗೆದ್ದು ನಮ್ಮ ಪಾಯಿಂಟನ್ನು ಮೂರಕ್ಕೇರುವಂತೆ ಮಾಡಿದ. ಆದರೆ ಮೊದಲ ಬೋರ್ಡಿನ ಪ್ಲೇಯರ್ ಆನಂದ ನಾಯ್ಕ ಸೋತುಬಿಟ್ಟ. ನಮಗೆ ಇಮ್ಮೆಲೆ ಆಘಾತವಾಯಿತಾದರೂ ತೋರಿಸಿಕೊಳ್ಳಲಿಲ್ಲ. ಆನಂದ ನಾಯ್ಕ ಮಾತ್ರ ಬಹಳ ಬೇಜಾರು ಮಾಡಿಕೊಂಡ. ಅವನನ್ನು ಸಮಾಧಾನ ಮಾಡುವಷ್ಟರಲ್ಲಿ ಸಾಕುಬೇಕಾಗಿ ಹೋಯಿತು. ನವೀನ ಪಾವಸ್ಕರನ ಮೇಲೇ ಸಿಟ್ಟು ಉಕ್ಕಿತು. ಪಕ್ಕಕ್ಕೆ ಕರೆದೊಯ್ದು `ಏನೋ.. ನಿನ್ನ ಪ್ಲೇಯರ್ರು ಹಿಂಗೆ..? ಏನೇನೋ ಹೇಳ್ತಿದ್ದೆಯಲ್ಲ..' ಎಂದು ಹಳೆಯ ಸೇಡನ್ನು ತೀರಿಸಿಕೊಳ್ಳುವಂತೆ ಕಿಚಾಯಿಸಿದೆ.. ಆತ ಏನೇನೋ ಸಮಜಾಯಿಶಿ ನೀಡಿದ. ನಾನು ನಕ್ಕು ಸುಮ್ಮನಾದೆ. ಕಿಟ್ಟು ಆನಂದನನ್ನು ಸಮಾಧಾನ ಮಾಡಿದ.
ಹಾಗೆಯೇ ಎರಡನೇ ಪಂದ್ಯಕ್ಕೆ ಅನುವಾದೆವು. ಈ ಸಾರಿ ಅದ್ಯಾವುದೋ ದುರ್ಬಲ ಟೀಂ ನಮ್ಮ ವಿರುದ್ಧ ಬಿದ್ದಿತ್ತು. ನಾವು ನಾಲ್ಕೂ ಜನ ಹೀನಾಯವಾಗಿ ಆ ಟೀಮನ್ನು ಸೋಲಿಸಿ ನಮ್ಮ ಪಾಯಿಂಟನ್ನು 7ಕ್ಕೆ ಏರಿಸಿಕೊಂಡೆವು. ಈಗ ಕಿಟ್ಟುವಿನ ಮ್ಯಾಚ್ ಸ್ವಲ್ಪ tuf ಇತ್ತು. ಆದರೆ cool ಆಗಿರುವ ಆತ ಅದನ್ನು ನಿಭಾಯಿಸಿ ಗೆದ್ದ.ಆನಂದ ಗೆಲುವನ್ನು ಪಡೆದು ಸ್ವಲ್ಪ ರಿಲ್ಯಾಕ್ಸ್ ಆಗಿದ್ದ. ಅಮತೂ ಇಂತೂ ಎರಡನೇ ದಿನ ಅರಾಮವಾಗಿಯೇ ಯಾವುದೇ ಹಾನಿಯಾಗದೇ ಎಲ್ಲ ಗೆಲುವಿನ ಸಡಗರದ ಜೊತೆಗೆ ನಡೆಯಿತೆನ್ನಿ.
ಹೇಗೆಂದರೂ ಮರುದಿನ ಬೆಳಗಾವಿಯ ಪ್ರಭಲ ಟೀಂ ಗೋಗಟೆ ಕಾಲೇಜಿನ ವಿರುದ್ಧ ನಮ್ಮ match ಬೀಳುತ್ತದೆ ಎಂದು ಲೆಕ್ಖ ಹಾಕಿದೆ. ಅದು ನಿಜ ಕೂಡ ಆಗಿ ಬಿಟ್ಟಿತು. ಹೀಗಾಗಿ ರಾತ್ರಿಯ ನಮ್ಮ ತಾಲೀಮು ಕೂಡ ಕೊಂಚ ಜೋರಾಯಿತು. ಮತ್ತೆ ಯಥಾಪ್ರಕಾರ ನಾನು-ಕಿಟ್ಟು, ನವೀನ ಪಾವಸ್ಕರ ಹಾಗೂ ಆನಂದರ ವಿರುದ್ಧ ಯದ್ವಾ ತದ್ವಾ ಸೋತು ಬಿಟ್ಟೆವು. ಹೇಗೆಂದರೂ ನನ್ನ ವಿರುದ್ಧ ರೇಟೆಡ್ ಪ್ಲೇಯರ್, ನ್ಯಾಚನಲ್ ಪ್ಲೇಯರ್ ಸಾಗರ್ ಚಿಂಚೋಳಿಮಠ ಬಿದ್ದೇಬೀಳುತ್ತಾನೆ ಎಂದುಕೊಂಡೆ. ಕೊಂಚ.. ಕೊಂಚವೇನು ಜಾಸ್ತಿ ಅಳುಕಿನಿಂದಲೇ ರಾತ್ರಿ 12 ಗಂಟೆಯವರೆಗೂ ಸೊಳ್ಳೆ ಸಾಮ್ರಾಜ್ಯದ ಸೈನಿಕರ ನಡುವೆ ಚದುರಂಗವನ್ನಾಡಿ ಮಲಗಿದೆವು.

19-09-2001, ಬುಧವಾರ
ಎಲ್ಲವೂ ಅಂದುಕೊಂಡಂತೆ ನಡೆದಿದ್ದವು. ನಮ್ಮ ವಿರುದ್ಧ ಗೋಗಟೆ ಕಾಲೇಜಿನ ಹುಡುಗರು ಬಿದ್ದಿದ್ದರು. ಆ ದಿನಗಳಲ್ಲಿ ಇವರದ್ದೇ ಅತ್ಯಂತ strong team. ನಾಲ್ವರಲ್ಲಿ ಇಬ್ಬರು national player. ಆದರೆ ಮೂವರು ರೇಟೆಡ್ ಪ್ಲೇಯರ್ಸ್. ಮುಂಜಾನೆ ಎದ್ದರೂ ಯಾಕೋ ಒಂಥರಾ ಅನ್ನಿಸುತ್ತಿತ್ತು. ನಮ್ಮ ಪ್ರೀತಿಯ ದುರ್ಗಾ ಹೊಟೆಲಿನಲ್ಲಿ ಹೋಗಿ ತಿಂಡಿ ತಿಂದರೆ ಏನೂ ಸರಿಯಾಗಿ ಸೇರುತ್ತಿಲ್ಲ. ನನಗೊಬ್ಬನಿಗೆ ಹೀಗೆ ಅನ್ನಿಸುತ್ತಿದೆಯೇನೋ ಅಂದುಕೊಂಡೆ. ಆನಂದ, ನವೀನ ಇಬ್ಬರಿಗೂ ಹಾಗೆ ಆಗಿತ್ತೆಂದು ಕೊನೆಗೊಮ್ಮೆ ಹೇಳಿದರು. ಕಿಟ್ಟು ಎಂದಿನ ಶಾಂತ ಸ್ವಭಾವದಲ್ಲಿ ಜಾಲಿಯಾಗಿದ್ದ. ಸ್ನಾನ, ಶೌಚ ಇತ್ಯಾದಿ, ಇತ್ಯಾದಿಗಳು ಎಂದಿನಂತೆ ಜರುಗಿದವು. ಅಂದುಕೊಂಡ ಮ್ಯಾಚ್ ಎದುರು ಬಂದೇ ಬಿಟ್ಟಿತು.
ತಕ್ಷಣವೇ ನಾನು ಎಲ್ಲರನ್ನೂ ಕರೆದು best of luck ಎಂದೆ. ಕೊನೆಗೆ ಪಾವಸ್ಕರನನ್ನು ಕರೆದು ' ನೋಡು, ನಿನ್ನ ವಿರುದ್ಧ ಸಮೀರ ಘೋಟ್ನೆ ಬಿದ್ದಿದ್ದಾನೆ. ಅಂವ ಹೋದ ವರ್ಷವೂ ನಿನ್ನನ್ನು ಸೋಲಿಸಿದ್ದ. ಆ ಉರಿ, ಸೇಡಿದ್ರೆ, ನಿನ್ನಲ್ಲಿ ತಾಕತ್ತಿದ್ರೆ ಅವನನ್ನು ಸೋಲಿಸು .. ನೋಡೋಣ.. ನೂರು ರೂಪಾಯ್ ಚಾಲೆಂಜು.. ' ಎಂದು ಗಾಳಿ ಹೊಡೆದೆ. ಅದಕ್ಕವನು `ನಾನು ಸೋಲಿಸುತ್ತೇನೆ.. ಈಗಾಗ್ಲೇ ಅರ್ಧಕ್ಕರ್ಧ ಅವನನ್ನು ಸೋಲಿಸಿಯಾಗಿದೆ..' ಎಂಬಂತೆ ಮಾತಾಡಿದ. ಆನಂದನ ಬಳಿಯೂ ಇದೇ ಚಾಲೆಂಜನ್ನು ಮಾಡಿ ಎದುರಾಳಿ ಅನಿಕೇತನ್ ಪಾವಸೆಯನ್ನು ಸೋಲಿಸು ಎಂದಿದ್ದೆ. ಆತ ಮಾತನಾಡದೇ ಸುಮ್ಮನುಳಿದಿದ್ದ. ಕಿಟ್ಟುವಿನ ಬಳಿ ನಾನು ಗಾಳಿ ಹೊಡೆಯುವುದು ವೇಸ್ಟ್ ಎನ್ನಿಸಿದ್ದರಿಂದ ಅಂತಹ ಕೆಲಸ ಮಾಡಲಿಲ್ಲ. ಆತ ತನ್ನ ಮಾತಿನ ಲಹರಿಯಲ್ಲಿ ಸುಮ್ಮನಿದ್ದ.
ನನಗೋ ಎದೆಯೊಳಗೆ ಪುಕಪುಕಿ. ತಂಡದ ಕ್ಯಾಪ್ಟನ್ ನಾನಾದ್ದರಿಂದ ತೋರಿಸಿಕೊಳ್ಳುವಂತಿಲ್ಲವಲ್ಲ. ನನ್ನ ಮುಂದಿನ ಆಟಗಾರ ಸಾಗರ ಚಿಮಚೋಳಿಮಠ ಎಂಬುದೂ ತಿಳಿದಿತ್ತು. ಭರ್ಜರಿ ಟೆನ್ಶನ್ ಮನದಲ್ಲಿತ್ತು. ಸುಮ್ಮನೇ.. ಆ ಕಾಲೇಜಿನ ಗ್ರವಂಡಿನಾಚೆ, ಹುಣಸೇ ಮರದ ಬಯಲಿನಲ್ಲಿ ಶಾಂತ ಪರಿಸರದಲ್ಲಿ ಮರಗಳ ಕೆಳಗೆ ಹತ್ತುನಿಮಿಷ ಕುಳಿತೆ. ಮಹಿಳಾ ತಂಡದ ಆಟಗಾರರು ಬಂದು ಹಲವು ಸಲಹೆಗಳನ್ನು ಕೊಟ್ಟರು. ಹುಂ.. ಎಂದೆ.. ಅವರುಗಳಿಗೆ ನನ್ನ ಮೇಲೆ ವಿಶ್ವಾಸ ಇತ್ತೇನೋ.. ಹೇಳಿದ್ದನ್ನು ಕೇಳಿದೆ. ಸರಿ ಎಂದೆ.  ಉತ್ಸಾಹ ಬಂದಿತ್ತು.

ದ ಬಾಕ್ಸಿಂಗ್ ಮ್ಯಾಚ್..
 ನಾನಂದುಕೊಂಡಂತಾಗಿದ್ದ ಮ್ಯಾಚು ಮುಂಜಾನೆ 8 ಗಂಟೆಗೆ ಶುರುವಾಯಿತು. ನಾನು ಬೇಕಂತಲೇ 10 ನಿಮಿಷ ತಡವಾಗಿ ಮ್ಯಾಚಿಗೆ ಹೋದೆ. ಆಗಲೇ ಅಲ್ಲಿ ಎಲ್ಲರೂ ಬಂದಿದ್ದರು. ಹಲವರು ಮ್ಯಾಚು ಆರಂಭಿಸಿದ್ದರು. ಮತ್ತೆ ಹಲವರ ಮ್ಯಾಚು ಅದಾಗಲೇ ಮುಗಿದೂ ಹೋಗಿತ್ತು ಕೂಡ..!! ಪಾವಸ್ಕರ, ಆನಂದ, ಕಿಟ್ಟು ಮ್ಯಾಚು ಆರಂಭಿಸಿದ್ದರು. ನನ್ನೆದುರು ಆಟಗಾರ ಚಿಂಚೋಳಿಮಠ ನನಗಾಗಿ ಕಾಯುತ್ತ ಕುಳಿತಿದ್ದ. ಪಾವಸ್ಕರ ಯಥಾಪ್ರಕಾರ ಸಿಕ್ಕಾಪಟ್ಟೆ ನಗುತ್ತಾ ಆಡುತ್ತಿದ್ದ.. ಾನಂದ ಕಿಟ್ಟು ಯಾವುದೇ ಟೆನ್ಶನ್ ಇಲ್ಲದೇ ಆಡುತ್ತಿದ್ದರು. ನಾನು ಬಂದವನೇ ಅವರೆಲ್ಲರಿಗೂ ಮತ್ತೊಮ್ಮೆ best of luck ಹೇಳಿ ಆಡಲು ಕುಳಿತೆ. ಆಟ ಟೆಸ್ಟ್ ಮ್ಯಾಚಿನಂತೆ ನಿಧಾನವಾಗಿ ಸಾಗಿತು. ನಾನು ಡಿಫೆನ್ಸ್ ಆಡತೊಡಗಿದ್ದೆ. ಆದರೆ ಹೋರಾಟಕ್ಕೆ ಪ್ರತಿಹೋರಾಟ ಸಾಗಿಯೇ ಇತ್ತು. ನಾನು-ಅವನು, ಅವನು-ನಾನು ಎಂಬಂತೆ ಸಮಬಲದಲ್ಲಿ ಪಾನುಗಳನ್ನು, ಪೀಸುಗಳನ್ನು ಹೊಡೆದುಕೊಳ್ಳುತ್ತ ಸಾಗಿದೆವು. ಆಟ ನಿಧಾನವಾಗಿ ರಂಗೇರತೊಡಗಿತ್ತು. ಮ್ಯಾಚು ಮುಗಿದವರೆಲ್ಲ ನಮ್ಮನ್ನು ಸುತ್ತುಗಟ್ಟಿ ನೋಡತೊಡಗಿದ್ದರು. ಏಕೆಂದರೆ ಧಾರವಾಡದ ಕರ್ನಾಟಕ ಯುನಿವರ್ಸಿಟಿಯ ಟಾಪ್ 2 ಟೀಮುಗಳ ನಡುವಿನ ಕದನ ಅದು ಎಂದು ಸುದ್ದಿ ಹಬ್ಬಿತ್ತು. ಎರಡು strong team ಗಳು ಪರಸ್ಪರ ಜಿದ್ದಿಗೆ ಬಿದ್ದಿದ್ದರು. ಆನಂದ, ನಾನು, ನವೀನ, ಕಿಟ್ಟುವಿನ ಸುತ್ತೆಲ್ಲ ಗುಂಪೇ ಗುಂಪು.. match ಹ್ಯಾಗಿರಬಹುದು, ಹೇಗೆ ಆಡಬಹುದು ಎಂಬ ಕುತೂಹಲ ಅವರಿಗೆ.. ಅಂಪಾಯರ್ರುಗಳೂ ನೋಡಲು ಬಂದಿದ್ದರು. ಆ ಕಾರಣದಿಂದ ನಮ್ಮ ಸುತ್ತಲೂ ನೆರೆದವರನ್ನು ಚದುರಿಸಲು ಅವರು ಹೋಗಲಿಲ್ಲ.
ಮ್ಯಾಚು ಆರಂಭವಾಗಿ ಅರ್ಧ-ಮುಕ್ಕಾಲು ಗಂಟೆ ಕಳೆದಿರಬಹುದು.. ಟೇಬಲ್ ಮೇಲೆ ಕೈಯೂರಿ, ಗದ್ದಕ್ಕೆ ಕೈಕೊಟ್ಟು ಗಂಭೀರದ ರೀತಿಯಲ್ಲಿ ಪೋಸು ಕೊಡುತ್ತಾ ಆಟವನ್ನಾಡುತ್ತಿದ್ದ ನವೀನ ಪಾವಸ್ಕರ ತಲೆ ಮೇಲೆ ಕೈಹೊತ್ತು ಎದ್ದು ಬಂದ.. `ಏನಾಯ್ತು..? ' ಎಂದು ಕೇಳಿದೆ.. `ಪುಸ್ಸಾಯ್ತು..' ಎಂದ.. ನಗು ಬಂತು..
ಬಂದವನೇ ನನ್ನ ಬಳಿ `ವಿನೂ.. 4-0 ದಿಂದ ಮ್ಯಾಚ್ ಸೋಲ್ತೀವಿ ಅನ್ಸುತ್ತೆ..' ಎಂದ..  `ಮುಚ್ಕೊಂಡು ನೋಡು..' ಎಂದೆ..ಸುಮ್ಮನಾದ.. ಒಮ್ಮೆ ನನ್ನ ಬಳಿ ಬರುವುದು, ಮ್ಯಾಚ್ ನೋಡಿ ಕಣ್ಣಿನಲ್ಲಿ ಕ್ವಶ್ಚನ್ ಮಾರ್ಕ್ ಮೂಡಿಸಿ ಪಕ್ಕದಲ್ಲಿದ್ದ ಆನಂದನ ಬಳಿ ಹೋಗುವುದು, ಕೊನೆಗೊಮ್ಮೆ ಕಿಟ್ಟುವಿನ ಬಳಿ ಹೋಗಿ ಆತನ ಬೆನ್ನು ತಟ್ಟಿ ಧೈರ್ಯ ತುಂಬುವ ಕೆಲಸಕ್ಕೆ ನವೀನ ನಿರತನಾದ.. ನವೀನ ಆಡಿದ ಟೇಬಲ್ಲನ್ನು ಗಮನಿಸಿದೆ. ನವೀನನ ರಾಜನೊಬ್ಬನೇ ಉಳಿದಿದ್ದರೆ ಉಳಿದೆಲ್ಲ ಢಮಾರ್ ಆಗಿದ್ದವು. ಎದುರಾಳಿ ಸಮೀರ್ ಘೋಟ್ನೆ ಮಿನಿಸ್ಟರ್, ಕುದುರೆ ಸೇರಿದಂತೆ ಸಾಕಷ್ಟು ಬಲಗಳನ್ನು ಹೊಂದಿದ್ದು ಮ್ಯಾಚನ್ನು ಗೆದ್ದಿದ್ದ.. `ತಥ್.. ನನ್ನ ಮಗನೇ.. ಇಷ್ಟ್ ಖರಾಬಾಗಿ ಸೋಲೋದಾ..?' ಎಂದು ಸನ್ನೆ ಮಾಡಿದೆ.. ನವೀನ ಕಣ್ಣು ತಪ್ಪಿಸುವ ಯತ್ನ ಮಾಡಿದ. ಮತ್ತೆ ಕೆಲವು ನಿಮಿಷಗಳು ಸಂದಿರುವಷ್ಟರಲ್ಲಿ ಫಸ್ಟ್ ಬೋರ್ಡ್ ಪ್ಲೇಯರ್ ಆನಂದ ಗೋಗಟೆಯ ಮತ್ತೊಬ್ಬ ನ್ಯಾಷನಲ್ ಪ್ಲೇಯರ್ ಅನಿಕೇತ್ ಪಾವಸೆ ವಿರುದ್ಧ ಸೋತು ಎದ್ದು ಬಂದ..ಪಾ...ಪ.. ಸೋತವನು ಅದೆಷ್ಟು ಸಾರಿ ಮುಖ ೊರೆಸಿಕೊಂಡನೋ.. ಕಣ್ಣೀರಿಗಾ..? ಬೆವರಿಗಾ..? ಸ್ಪಷ್ಟವಾಗಲಿಲ್ಲ.. ಮೂರೋ.. ನಾಲ್ಕನೆಯದೋ ಬೋರ್ಡನ್ನು ಆಡುವಂತಹವನನ್ನು ಮೊದಲ ಬೋರ್ಡಿಗೆ ಆಡಿಸಿ ತಪ್ಪು ಮಾಡಿದೆನಾ ಎಂದೆಲ್ಲಾ ಅನ್ನಿಸಿತು.. ಜೊತೆಯಲ್ಲಿ `ಅಯ್ಯೋ.. ಇವರ್ಯಾಕೆ ಇಷ್ಟು ಹೀನಾಯವಾಗಿ ಸೋತರು..' ಎಂದೂ ಅನ್ನಿಸದಿರಲಿಲ್ಲ.. ಆನಂದನೂ ಹೆಚ್ಚು ಕಡಿಮೆ ನವೀನನಷ್ಟೇ ಖರಾಬಾಗಿ ಸೋತಿದ್ದ.. ಻ಲ್ಲಿಗೆ ನಮ್ಮ ಟೀಮು ಆಗಲೇ 2-0ದಿಂದ ಹಿಂದುಳಿದಂತಾಗಿತ್ತು.
ತಂಡದ ಇಬ್ಬರು ಆಟಗಾರರು ಇಷ್ಟು ಹೀನಾಯವಾಗಿ ಸೋತರಲ್ಲಾ ಎನಿಸಿತಾದರೂ ಕಿಟ್ಟುವಿನ ಮೇಲೆ ಕೊಂಚ ಭರವಸೆಯುಳಿದಿತ್ತು. ಇವರಷ್ಟು ಹೀನಾಯವಾಗಿ ಸೋಲಲಾರ ಎನ್ನುವ ಭರವಸೆ ಮನಸ್ಸಿನಲ್ಲಿತ್ತು. ನನ್ನ ಮೇಲೆ, ನನ್ನ ಾಟದ ಮೇಲೆ ನನಗೆ ಇರುವ ಭರವಸೆಗಿಂತ ಹೆಚ್ಚು ಆತನ ಆಟದ ಮೇಲಿತ್ತು ಅಂದರೂ ತಪ್ಪಾಗಲಿಕ್ಕಿಲ್ಲ.  ಆತನ ಆಟದಲ್ಲಿನ ಟರ್ನಿಂಗ್ ಪಾಯಿಂಟುಗಳೇ ಹಾಗಿದ್ದವು. ಇದ್ದಕ್ಕಿದ್ದಂತೆ ಟ್ವಿಸ್ಟನ್ನು ಕೊಟ್ಟು ಎದುರಾಳಿಯನ್ನು ಗಲಿಬಿಲಿಗೊಳಿಸಿ ಸೋಲಿಸುತ್ತಿದ್ದ. ಟ್ವಿಸ್ಟು ನೀಡಿ ಸುಮ್ಮನಿರುವ ಕಿಟ್ಟು ಎದುರಾಳಿ ಗಲಿಬಿಲಿಯಲ್ಲಿದ್ದರೆ ಆತನ ಬಳಿ ಉಭಯಕುಶಲೋಪರಿ ಸಾಂಪ್ರತದ ಜೊತೆ ತಮಾಶೆಯನ್ನು ಮಾಡಿ ಎದುರಾಳಿಯ ಮನಸ್ಸನ್ನೂ ಫ್ರೀಯಾಗಿಸುವ ಗುಣವನ್ನೂ ಹೊಂದಿದ್ದ.. ಆತ ಇದ್ದಾನಲ್ಲ ನೋಡೋಣ.. ಎಂದು ಸುಮ್ಮನಾದೆ..
ನಮ್ಮ ಆಟದಲ್ಲಿ ಎದುರಾಳಿ ಸಾಗರ್ ಚಿಂಚೋಳಿಮಠ ಪ್ರತಿಯೊಂದು ನಡೆಗೂ 15-20 ನಿಮಿಷ time ತೆಗೆದುಕೊಳ್ಳುತ್ತಿದ್ದ.. ಇದು ನನಗೆ ಬಹಳ ಉಪಯೋಗಕಾರಿಯಾಯಿತು,. ಕಾಲೇಜುಗಳಲ್ಲಿ, ಪ್ರಾಕ್ಟೀಸಿನ ಸಂದರ್ಭಗಳಲ್ಲಿ ರ್ಯಾಪಿಡ್ ಚೆಸ್ ಆಡಿ ರೂಢಿಯಾಗಿದ್ದ ನಾನು ಆತ ಯೋಚನೆ ಮಾಡಿ ನಡೆಸುವ ಸಂದರ್ಭಗಳಲ್ಲಿಯೇ ನಾನೂ ಆಲೋಚನೆ ಮಾಡಿ ತಕ್ಷಣದಲ್ಲಿ ಆಡಿ free ಆಗುತ್ತಿದ್ದೆ. 
ಆಟದ ಮಧ್ಯದಲ್ಲೇ ಒಮ್ಮೆ ಎದ್ದು ಹೋಗಿ ಕಿಟ್ಟುವಿನ ಮ್ಯಾಚು ನೋಡಿದೆ. (ಪಂದ್ಯದ ನಡುವೆ ಏಳಬೇಡಿ, ಮಾತನಾಡಬೇಡಿ ಎಂಬ ರೂಲ್ಸುಗಳನ್ನು ಕಟ್ಟುನಿಟ್ಟಾಗಿ ಮಾಡಿದ್ದರೆ ಖಂಡಿತವಾಗಿಯೂ ನಾವು ಆಟಕ್ಕೆ ಸಲಾಂ ಹೊಡೆದು ಬರುತ್ತಿದ್ದೆವು ಬಿಡಿ) ಅರೇ....ವಿನ್ನಾಗುವ ತರದಲ್ಲಿತ್ತು..!!
ನನ್ನ ಮ್ಯಾಚು ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬಂತೆ ಎತ್ತೆತ್ತಲೋ ಸಾಗುತ್ತಿತ್ತು.. ಆಡಿದ್ದು ಬಹುಶಃ 15-20ಸ್ಟೆಪ್ ಅಸ್ಟೇ ಇರಬೇಕು. ಸಮಯ ಎರಡೂವರೆ ಗಂಟೆಗೂ ಅಧಿಕ ಕಾಲವನ್ನು ವ್ಯಯಿಸಿತ್ತು. ನನ್ನ ಹಾಗೂ ಕಿಟ್ಟುವಿನ ಸುತ್ತ ಜನವೋ ಜನ.. ಆ ಜನರಲ್ಲಿ ಹೆಚ್ಚಿನವರು ನನಗೆ ಹಾಗೂ ಕಿಟ್ಟುವಿಗೆ ಸಪೋರ್ಟ್ ಮಾಡಿದ್ದರು. ಏಕೆಂದರೆ ಅದರಲ್ಲಿ ಹಲವರು ಗೋಗಟೆ ಕಾಲೇಜಿನ ವಿರುದ್ಧ ಹೀನಾಯವಾಗಿ ಸೋತಿದ್ದ ಹಲವರು, ಮೋಸದಿಂದಲೂ ಸೋತಿದ್ದ ಮತ್ತೆ ಕೆಲವರು ನಾವಾದರೂ ಗೆಲ್ಲಲಿ ಎಂದು ಹಾರೈಸುತ್ತಲಿದ್ದರು ಎಂಬುದು ಸ್ಪಷ್ಟವಾಗಿತ್ತು. ಮತ್ತೊಂದು ಅರ್ಧಗಂಟೆ ಕಳೆಯಿತು. ಬಹುಶಃ 11 ಗಂಟೆಯಾಗಿರಬೇಕು. ಆಗ ನನಗೆ ಕಿಟ್ಟುವಿನ ಕಡೆಗೆ ಟೆನ್ಶನ್ ಶುರುವಾಯಿತು.
ಏಕೆಂದರೆ ಕಾಲೇಜಿನಲ್ಲೆಲ್ಲ ಅನಾಮತ್ತು ಎರಡೂವರೆ-ಮೂರುಗಂಟೆಗಳ ಕಾಲ ಒಂದು ಕಡೆ ಕುಳಿತವನೇ ಅಲ್ಲ ಕಿಟ್ಟು.. ಎಂತದ್ದೇ ಮ್ಯಾಚಿರಲಿ, ಸೋಲಲಿ, ಗೆಲ್ಲಲಿ.. ಕುಳಿತು ಬೇಜಾರು ಬಂದ ತಕ್ಷಣ `ಸಾಯ್ಲಾ ದಂಟೂ.. ಬ್ಯಾಜಾರ್ ಬಂದ್ ಹೋತಲೆ..ಮ್ಯಾಚು ಬಿಟ್ ಕೊಡ್ತಿ.. ಎದ್ ಹೋಪನಾ..' ಎಂದು ಹೇಳಿ ಎದ್ದುಬಂದು ಬಿಡುತ್ತಿದ್ದ..ಆತನ ಪರಿಸ್ಥಿತಿ ಏನಾಯಿತೆಂದು ನೋಡೋಣ ಎಂದು ಪಕ್ಕದಲ್ಲಿ ನೋಡಿದರೆ .. ಅವನೆಲ್ಲಿ ಕಾಣುತ್ತಾನೆ..? ಸುತ್ತಲೂ ಜನ ತುಂಬಿ ಆತನಿಗೂ ನನಗೂ ಲಿಂಕೇ ಇಲ್ಲದಂತಾಗಿಬಿಟ್ಟಿತ್ತು. ಪಂದ್ಯ ಬೇರೆ ರೋಚಕವಾಗಿತ್ತು. ಟೀಮು 2-0ದಿಂದ ಹಿಂದಿತ್ತು..

(ಮುಂದುವರಿಯುತ್ತದೆ..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ, ಮ್ಯಾಚಿನ ಕ್ಲೈಮ್ಯಾಕ್ಸ್.. ಹೆಲ್ಪ್ ಪುಲ್ ಮ್ಯಾಚುಗಳು)

Sunday, November 17, 2013

ಬೊಂಬಾಯ್ ಕಮಲಿ ಹಾಗೂ ಚಂದ್ರಕಾಂತನ ಬೆಳಕು

 ಕಮಲಿಯ ಬಾಯಿಗೆ ಬಿದ್ದರೆ ಮುಗಿಯಿತು..
ಹಾಗೊಂದು ಅಘೋಷಿತ ಮಾತು ನಮ್ಮ ಕಡೆ ಚಾಲ್ತಿಯಲ್ಲಿದೆ...
ಚಂದ್ರಕಾಂತ ಮಾಸ್ತರ್ರು ಅದ್ಹೇಗೆ ಕಮಲಿಯ ಬಾಯಿಗೆ ಬಿದ್ದರೋ ಎಂಬುದು ತರ್ಕಕ್ಕೆ ನಿಲುದಂತಹ ಪ್ರಶ್ನೆ..
ಚಂದ್ರಕಾಂತ ಮಾಸ್ತರ್ರು ಹಾಗೂ ಕಮಲಿ ಇಬ್ಬರೂ ನನಗೆ ಪರಿಚಯದವರೇ.. ಇವರ ಪೈಕಿ ಚಂದ್ರಕಾಂತ ಮಾಸ್ತರ್ರು ನನಗೆ ಪ್ರಾಥಮಿಕ ಶಿಕ್ಷಣವನ್ನು ಒಂದೆರಡು ವರ್ಷ ಕಲಿಸಿದರೆ ಕಮಲಿ ಪರಿಚಯದಾಕೆ.. ನನಗಿಂತ ಕನಿಷ್ಟವೆಂದರೂ 50 ವರ್ಷಕ್ಕೆ ದೊಡ್ಡವಳು.. ಆದಕಾರಣ ಕಮಲಿಯನ್ನು ಕಮಲಜ್ಜಿ ಎನ್ನಬಹುದು.. ಆದರೆ ಕಮಲಿಯನ್ನು ಕಮಲಜ್ಜಿ ಎಂದು ಕರೆದರೆ ಅದರ ಸ್ವಾರಸ್ಯ ಹೊರಟುಹೋಗುತ್ತದೆ.. ಆದ್ದರಿಂದ ಕಮಲಿಯನ್ನು ಕಮಲಿ ಎಂದೇ ಕರೆಯುತ್ತೇನೆ..
ಇಂತಹ ಕಮಲಿಯ ಬಾಯಿಗೆ ಚಂದ್ರಕಾಂತ ಮಾಸ್ತರ್ರು ಬಿದ್ದಿದ್ದು ಅದ್ಹೇಗೋ ಗೊತ್ತಿಲ್ಲ.. ಆದರೆ ಅದರಿಂದ ಮಾಸ್ತರ್ರು ಅನುಭವಿಸಿದ ಬವಣೆಯಂತೂ ಹೇಳತೀರದು ಬಿಡಿ.
**
`ಥೋ... ನಿಂಗೆ 21 ಮಾರ್ಕ್ಸು ಕೊಟ್ನನಾ... ತಡಿಯಾ..  21 ಮಾರ್ಕ್ಸು ತಗಳುವಷ್ಟು ಬುದ್ಧಿವಂತ ನೀ ಅಲ್ಲ.. ಅದು 15 ಆಗಬೇಕು..' ಎಂದು ಚಂದ್ರಕಾಂತ ಮಾಸ್ತರ್ರು ಉತ್ತರ ಪತ್ರಿಕೆ ವಾಪಾಸು ಪಡೆದು ಎರಡೆರಡರಂತೆ ಮೂರು ಪ್ರಶ್ನೆಗಳಿಗೆ ಕಡಿಮೆ ಮಾರ್ಕ್ಸ್ ಕೊಡುತ್ತಿದ್ದರೆ ಖುಷಿಯಲ್ಲಿ ತೇಲಾಡುತ್ತಿದ್ದ ನಾನು ಒಮ್ಮೆಲ್ಲೇ ದಿಗ್ಭ್ರಾಂತಿಯಿಂದ ಧರೆಗಿಳಿದು ಹೋಗಿದ್ದೆ...
ಇಂತಹ ಕ್ಯಾಲ್ಕ್ಯುಲೇಶನ್ನಿನ ಚಂದ್ರಕಾಂತ ಮಾಸ್ತರ್ರು ಅಡ್ಕಳ್ಳಿ ಶಾಲೆಗೆ ಹೊಸದಾಗಿ ಬಂದಾಗ ನಾನು ನಾಲ್ಕನೇ ಕ್ಲಾಸಿನಲ್ಲಿದ್ದೆ. ಹೊಸ ಅಪಾಯಿಂಟ್ ಮೆಂಟ್ ಆದ ಕಾರಣ ನೋಡಲು ಯಂಗಾಗಿದ್ದ ಚಂದ್ರಕಾಂತ ಮಾಸ್ತರ್ರು ಹೊಸಬೆಳಕಿನಂತೆ ಕಾಣುತ್ತಿದ್ದದ್ದಂತೂ ಸುಳ್ಳಲ್ಲ.
ಚಂದ್ರಕಾಂತ ಮಾಸ್ತರ್ರು ನಾನು ಓದುತ್ತಿದ್ದ ಶಾಲೆಗೆ ಬರುವ ಮುನ್ನ ಅನೇಕ ಮಾಸ್ತರ್ರು ಕಲಿಸಿ ಹೋಗಿದ್ದರು. ಬಿನ್ನೇತಿ ಹಾಗೂ ವನ್ನೇತಿಯಲ್ಲಿ ಕಲಿಸಿದ್ದ ಸತೀಶ ಮಾಸ್ತರ್ರು, ಅವರು ತಮ್ಮ ನೆನಪಿಗಾಗಿ ಎಲ್ಲಾ ಮಕ್ಕಳಿಗೆ ಕೊಟ್ಟ ಚೂಪ ಮುಕಳಿ ಲೋಟ ಎಲ್ಲವೂ ಇನ್ನೂ ನೆನಪಿದೆ. ಅದಾದ ನಂತರ ಜಿ. ಎಸ್. ಭಟ್ಟರು ಬಂದವರೇ ನಮ್ಮಲ್ಲಿ ಭೀತಿಯನ್ನು ಹುಟ್ಟು ಹಾಕಿದ್ದರು. ದಿನಕ್ಕೆ ಕನಿಷ್ಟವೆಂದರೂ 10-12 ಗಾಳಿ ಶೆಳಕೆಯನ್ನು ಚಪ್ಪುಗರೆಯುತ್ತಿದ್ದ ಜಿ. ಎಸ್. ಭಟ್ಟರು ನನ್ನಂತಹ ಹುಡುಗರಿಗಂತೂ ಹುಲಿಯೇ ಹೌದು. ಆದರೆ ನಾನು ಜಿ. ಎಸ್. ಭಟ್ಟರಿಂದ ಹೊಡೆತ ತಿಂದಿದ್ದು ಕಮ್ಮಿಯೇ ಬಿಡಿ.. ನನ್ನ ಸೀನಿಯರ್ ಹುಡುಗನೊಬ್ಬನಿದ್ದ ಗಪ್ಪತಿ. ಜಿ.ಎಸ್. ಭಟ್ಟರಿಂದ ಆತನಿಗೆ ದಿನಾ ಬೋನಸ್ ಹೊಡೆತಗಳು ಕಾಯ್ದಿರಿಸಲ್ಪಟ್ಟಿದ್ದವು. ದಿನಾ ಶಾಲೆ ಮುಗಿಸಿ ಬಂದ ನಂತರ ಕಾಲು, ಕೈ, ಬೆನ್ನಮೇಲೆಲ್ಲಾ ಕೆಂಪಡರಿ ರಕ್ತಗಟ್ಟಿದ್ದ ಬಾಸುಂಡೆಗಳನ್ನು ತೋರಿಸಿದಾಗ ಅದನ್ನು ನೆನೆಸಿಕೊಂಡೇ ನನ್ನ ಕಾಲು, ತೊಡೆಗಳು ಪಥರಗುಡುತ್ತಿದ್ದವು. ಇಂತಹ ಜಿ. ಎಸ್. ಭಟ್ಟರು ಇದ್ದಕ್ಕಿದ್ದಂತೆ ರಸ್ತೆ ಅಪಘಾತದಲ್ಲಿ ಮೃತಪಟ್ಟಾಗ ಅವರ ಕುರಿತು ಅನೇಕ ಗಾಳಿ ಸುದ್ದಿಗಳು ನಮ್ಮ ಶಾಲೆಯ ಸುತ್ತಮುತ್ತ ಹಾರಿಬಂದು ಕಿವಿಯ ಮೇಲೆ ಬಿದ್ದು ಹೋಗಿದ್ದವು. ಅದಕ್ಕಿಂತ ಹೆಚ್ಚಾಗಿ ನಮ್ಮ ನಿಟ್ಟುಸಿರಿನ ಗಾಳಿಯ ಬಲವೇ ಜಾಸ್ತಿಯಾಗಿ ಗಾಳಿಮಾತಿನ ಬಲವನ್ನು ದೂರಕ್ಕೆ ಅಟ್ಟಿತ್ತು.
ಇಂತಹ ಜಿ. ಎಸ್. ಭಟ್ಟರು ದುರಂತ ಅಂತ್ಯವಾದ ಒಂದು ವರ್ಷದ ತರುವಾಯ ಬಂದವರೇ ಚಂದ್ರಕಾಂತ ಮಾಸ್ತರ್ರು. ಅವರು ಶಾಲೆಗೆ ಬರುವಾಗ ಆಗಲೇ ತಾರಕ್ಕೋರು, ಗಂಗಕ್ಕೋರು, ಗಡಕರ್ ಮಾಸ್ತರ್ರು ಕಲಿಸುತ್ತಿದ್ದರು. ಇವರ ಪೈಕಿ ಗಡಕರ್ ಮಾಸ್ತರ್ರು ಹೆಡ್ಮಾಸ್ತರ್ರಾಗಿದ್ದರೆ ಉಳಿದವರು ಸಹಶಿಕ್ಷಕರಾಗಿದ್ದರು. ಇವರ ನಡುವೆಯೇ ಕುಳ್ಳೀಶ್ವರ ನಾಯ್ಕ ಮಾಸ್ತರ್ರು, ರಮೇಶ ನಾಯ್ಕರು, ಹರೀಶ ಮಾಸ್ತರ್ರೂ ಕಲಿಸಿದ್ದು ನೆನಪಿದೆ.
ಯುವಕ ಚಂದ್ರಕಾಂತ ಮಾಸ್ತರ್ರು ಬಂದ ಹೊಸತರಲ್ಲಿ ಬಹಳ ಮೃದುವಂತೆ ಕಂಡರು. ಎಲ್ಲ ಮಕ್ಕಳನ್ನೂ ಮಾತನಾಡಿಸಿದಾಗ ನಮಗೆ ಹೊಸ ಹುರುಪು.. ಅಷ್ಟೇ ಅಲ್ಲದೇ ನಾವು ಕ್ರಿಕೆಟ್ಟಾಡಲು ಹೋದಾಗ ತಾವೂ ಬಂದು ಕ್ರಿಕೆಟ್ ಆಟಕ್ಕೆ ನಿಂತಾಗ ನಮಗೆ ಅಪಾರ ಖುಷಿಯಾಗುತ್ತಿತ್ತು. ಆದರೆ ಎಷ್ಟೇ ಸಾರಿ ನಾವು ಅವರನ್ನು ಔಟ್ ಮಾಡಿದಾಗಲೂ ನಾಟೌಟ್ ಎಂದು ಹೇಳಿ ಮತ್ತಷ್ಟು ಬಾಲ್ ಮಾಡುವಂತೆ ಹೇಳಿದಾಗ ಮಾತ್ರ ಮನಸ್ಸಲ್ಲಿ ಹಿಡಿಶಾಪ.
ಹೊಸ ಮಾಸ್ತರ್ರು ಎಂಬ ಕಾರಣಕ್ಕೆ ಸುತ್ತ ಮುತ್ತಲ ಊರುಗಳಲ್ಲಿ  ಅವರ ಕಡೆಗೆ ಸಾಪ್ಟ್ ಕಾರ್ನರ್ ಕೂಡ ಜಾಸ್ತಿಯಿತ್ತು. ಹೊಸ ಮಾಸ್ತರ್ರು, ಬ್ಯಾಚುಲರ್ರಂತೆ ಎಂಬುದೂ ಆಗಿನ ಕಾಲಕ್ಕೆ ದೊಡ್ಡ ಸುದ್ದಿ.
ಅವರು ಬಂದವರೇ ನಮಗೆಲ್ಲ ಮೊಟ್ಟಮೊದಲು ಮಾಡಿದ ಪಾಠವೇ ಬೆಳಕಿನ ಕುರಿತಾದದ್ದು.. ಆದ್ದರಿಂದಲೇ ಅವರಿಗೆ ಚಂದ್ರಕಾಂತನ ಬೆಳಕು ಎಂಬ ಅಡ್ಡ ಹೆ ಸರು ಅದೆಲ್ಲಿಂದಲೋ ಹುಟ್ಟಿಕೊಂಡಿತ್ತು.
`ಸುಬ್ರಾಹ ಹೆಗಡೇರೆ.. ಇವರು ನಮ್ಮ ಶಾಲೆಯ ಹೊಸ ಮಾಸ್ತರ್ರು.. ಇವರಿಗೆ ಮದ್ಯಾಹ್ನದ ಊಟಕ್ಕೆ ವ್ಯವಸ್ಥೆಯಾಗಬೇಕಿತ್ತಲ್ಲ..' ಎಂದು ಗಡಕರ್ ಮಾಸ್ತರ್ರು ಹೇಳಿದ ತಕ್ಷಣ ಅಪ್ಪಯ್ಯ `ಥೋ.. ಮಾಸ್ತರ್ರೇ.. ಅದಕ್ಕೆಂತಾ ಕೇಳ್ತಿ.. ನಮ್ಮನೆಗೆ ಬರ್ಲಿ.. ಮದ್ಯಾಹ್ನದ ಒಂದು ಹೊತ್ತಿನ ಊಟ ಸೈಯಲ್ರಾ.. ಖಂಡಿತ ಯಮ್ಮನೆಲಿ ವ್ಯವಸ್ಥೆ ಮಾಡ್ತ್ಯ.. ಆದ್ರೆ ಶಾಲೆಯಿಂದ ಯಮ್ಮನೆ 2.5 ಕಿಲೋಮೀಟರ್ ಆಗ್ತಲ್ರಾ.. ಅದು ತೊಂದ್ರಿಲ್ಲೆ ಹೇಳಾದ್ರೆ ಹೇಳಿ..' ಎಂದಾಗ ಚಂದ್ರಕಾಂತ ಮಾಸ್ತರ್ರು ದೂರಾದರೆ ಏನು ಮದ್ಯಾಹ್ನದ ಊಟವಾದರೆ ಸಾಕು ಎಂದು ಒಪ್ಪಿಕೊಂಡಿದ್ದರು. ಅಲ್ಲಿಂದ ಸರಿಸುಮಾರು 2 ವರ್ಷಗಳ ಪರ್ಯಂತ ನಮ್ಮ ಮನೆಯಲ್ಲಿ ಮಧ್ಯಾಹ್ನದ ಸಂದರ್ಭದಲ್ಲಿ ನಮ್ಮ ಕುಟುಂಬದ ಸದಸ್ಯರಾಗಿದ್ದರು..
ಹೀಗಿದ್ದ ಚಂದ್ರಕಾಂತ ಮಾಸ್ತರ್ರಿಗೆ ನನ್ನ ಮೇಲೆ ಸಾಪ್ಟ್ ಕಾರ್ನರ್ ಇರಲೇಬೇಕಿತ್ತು.. ಆದರೆ ಅದ್ಯಾಕೆ ನನ್ನ ಮೇಲೆ ವಿಪರೀತ ಸಿಟ್ಟಿತ್ತೋ ಆಗ ಗೊತ್ತೆ ಆಗಿರಲಿಲ್ಲ.. ಕಾರಣವಿಲ್ಲದೇ ಹೊಡೆಯುವುದು, ಶಿಕ್ಷೆ ಕೊಡುವುದು, ಮಾರ್ಕುಗಳನ್ನು ಕಟ್ ಮಾಡುವುದು ಅವರಿಂದ ನಡೆದಿತ್ತು.. ಇಂತಹ ನಡೆಗಳಿಂದಾಗಿ ನಾನು ಅವರನ್ನು ಅನೇಕ ಸಾರಿ ಶಪಿಸಿದ್ದೆ.. ನನ್ನ ಶಾಪ ಅವರಿಗೆ ಯಾವತ್ತೂ ತಾಗಿರಲೇ ಇಲ್ಲ.. ನಾನು ಶಾಪ ಕೊಟ್ಟರೆ ಯಾಕೆ ತಾಗೋದಿಲ್ಲ ಎಂದು ಅನೇಕ ಸಾರಿ ಆಲೋಚಿಸಿದ್ದೆ.. ಉತ್ತರ ಸಿಗದೇ ಹತಾಶೆಯನ್ನೂ ಹೊಂದಿದ್ದೆ..
ಹೀಗಿರುವ ಚಂದ್ರಕಾಂತ ಮಾಸ್ತರ್ರು ತಾವು ಮಾತನಾಡುವಾಗ ಒಂದು ರೀತಿಯ ಕೊಸ ಕೊಸ ಅನ್ನುವ ಶಬ್ದವನ್ನು ಹೊರಡಿಸುತ್ತಿದ್ದರು..  ಅವರ ಮೂಗಿನಲ್ಲಿ ಅದೇನು ಸಮಸ್ಯೆಯಿತ್ತೋ.. ಒಟ್ಟಿನಲ್ಲಿ ಪ್ರಯತ್ನ ಪೂರ್ವಕವಾಗಿಯೋ ಅಥವಾ ಅಪ್ರಯತ್ನದಿಂದಲೋ ಅವರ ಮೂಗಿನಿಂದ ಕೊಸ ಕೊಸ ಎಂಬ ಶಬ್ದ ಬರುತ್ತಿತ್ತು... ಅದಕ್ಕಾಗಿಯೆ ಅವರು ಭಾರಿ ಬೆಲೆ ತೆತ್ತಿದ್ದು ಇತಿಹಾಸ.. ಕೊಸ ಕೊಸ ಚಂದ್ರಕಾಂತ ಎಂದೇ ನಮ್ಮ ಸುತ್ತಮುತ್ತಲ ಬಳಗದಲ್ಲಿ ಹೆಸರು ಗಳಿಸಿಕೊಳ್ಳುವಷ್ಟು ಪರಿಣಾಮವನ್ನು ಉಂಟು ಮಾಡಿತ್ತು..
**
ಕಮಲಿಯ ಬಾಯಿಗೆ ಬಲಿಯಾಗದವರು ಇಲ್ಲವೇ ಇಲ್ಲ ಎಂದು ಮೊದಲೇ ಹೇಳಿದ್ದೆನಲ್ಲ.. ಹೌದು.. ಆಕೆಯ ಬಾಯಿ ಬೊಂಬಾಯಿಯೂ ಹೌದು.. ಜೊತೆಗೆ ಆಕೆ ಸುದ್ದಿಯನ್ನು ಹಬ್ಬಿಸುವವಳೂ ಹೌದು.. ಆದ್ದರಿಂದಲೇ ನಮ್ಮ ಸುತ್ತಮುತ್ತ ಯಾರಾದರೂ ದೊಡ್ಡದಾಗಿ ಕೂಗಿದರೆ `ಎಂತಾ.. ಕಮಲಿಯ ಬಾಯಿ ಮಾಡ್ಕಂಡು ಕೂಗ್ತೆ..' ಎಂದು ಕೇಳುವ ಮಾತು ರೂಢಿಯಾಗಿದೆ.. ಇನ್ನೂ ಹಲವರು ಬೊಂಬಾಯ್ ಕಮಲಿ ಎಂದೂ ಕರೆಯುತ್ತಾರೆ..
ನಾನೂ ಬಾಲ್ಯದಲ್ಲಿ ಕಮಲಿಯ ಬಾಯಿಗೆ ಬಿದ್ದಿದ್ದೆ... ನಮ್ಮ ಬಾಲ್ಯದ ಕಿಲಾಡಿತನಗಳು ಸಾಕಷ್ಟು ಸುಣ್ಣ ಬಣ್ಣ ಕಂಡಿದ್ದರೆ ಅದಕ್ಕೆ ಕಮಲಿಯ ಕೊಡುಗೆ ಸಾಕಷ್ಟಿದೆ.. ಬಹುಶಃ ನನ್ನ ಹರೆಯ ಅಥವಾ post-ಹರೆಯದಲ್ಲಿ ಆಕೆಯ ಬಾಯಿಗೆ ಬೀಳದಿದ್ದುದು ನನ್ನ ಪುಣ್ಯವೇ ಇರಬೇಕು.. ಇದಕ್ಕೆ ಕಾರಣ ಹುಡುಕಿದ್ದೆ.. ಆ-ಈ ಸಂದರ್ಭಗಳಲ್ಲಿ ಆಕೆಯ ಬಾಯಿಗೆ ಬೀಳಲು ಹಲವಾರು ಸಂಗತಿಗಳಿದ್ದವು.. ಆದ್ದರಿಂದ ನಾನು ಬಚಾವಾಗಿದ್ದೆ.. ಇಲ್ಲವಾದರೆ ನನ್ನ ಕುರಿತು ಇನ್ನೂ ಅನೇಕ ಗಾಸಿಪ್ಪುಗಳು ಹಬ್ಬಬಹುದಾಗಿದ್ದವು.. ಅದಿರ್ಲಿ ಬಿಡಿ..
ಚಂದ್ರಕಾಂತ ತನ್ನ ಬೆಳಕನ್ನು ಬೀರುತ್ತಾ ಶಾಲೆಯಿಂದ ನಡೆದು ನಮ್ಮ ಮನೆಯ ಕಡೆ ಬರುತ್ತಿರುವಾಗ ಒಮ್ಮೆ ದಾರಿಮಧ್ಯ ಕಮಲಿ ಸಿಕ್ಕಿದಳು.. ಏರು ಜವ್ವನ ನೋಡಿ.. ತೆಗೆದ ಮಾತಿಗೆ `ಏನಜ್ಜಿ.. ಅರಾಮಾ.. ಈ ಬಿಸಿಲಲ್ಲಿ ಎತ್ತ ಕಡೆ..?' ಎಂದು ಕೇಳಿದ ಸಂದರ್ಭದಲ್ಲಿ ನಾಲ್ಕೈದು ಸಾರಿ ಮೂಗಿನಿಂದ ಕೊಸ ಕೊಸ ಸದ್ದು ಬಂದಿತ್ತು..
ಅದನ್ನು ಕೇಳಿದ ಬೊಂಬಾಯ್ ಕಮಲಿ `ತಮಾ.. ಆ ಇನ್ನೂ ಅಜ್ಜಿ ಆಜ್ನಿಲ್ಯಾ.. ಯಂಗೆ ವಯಸ್ಸೇ ಆಜಿಲ್ಲೆ.. ಯನ್ನ ಈಗ್ಲೆ ಅಜ್ಜಿ ಮಾಡ್ತಾ ಇದ್ದೆ.. ಸೋಜಿದ್ಯನಾ... ಅದೆಂತಕ್ಕೆ ನೀ ಮಾತಾಡಕಿರೆ ಹಂಗೆ ಕೊಸ ಕೊಸ ಗುಡ್ತೆ.. ಎಂತಾ ರೋಗ್ವಾ.? ಬೆಳ್ಳೇಕೇರಿ ಡಾಕ್ಟರ್ ಹತ್ರಾನಾದ್ರೂ ತೋರಿಶ್ಗ್ಯಂಡ್ ಬರಕಾಗಿತ್ತಾ..' ಎಂದು ಕೂಗಾಡಲು ಹಿಡಿದಳು..
ಯಾಕಾದ್ರೂ ಮಾತನಾಡಿದೆನೋ ಅನ್ನುವ ಪರಿಸ್ಥಿತಿ ಚಂದ್ರಕಾಂತ ಮಾಸ್ತರ್ರಿಗೆ.. ಅವರ ಜೊತೆಯಲ್ಲಿ ನಡೆದು ಬರುತ್ತಿದ್ದ ನಾನೂ ಇದಕ್ಕೆ ಪ್ರತಿಯಾಗಿ `ಕಿಸಕ್ಕನೆ..' ನಕ್ಕಿದ್ದೆ.. ಬಹುಶಃ ಇದೇ ಕಾರಣವೇ ನನ್ನ ವಿರುದ್ಧ ಸಿಟ್ಟಿಗೆ ಕಾರಣ ಇರಬಹುದೇನೋ..
ಅದಾಗಿ ಒಂದೊಪ್ಪತ್ತು ಸರಿಯಾಘಿ ಕಳೆದಿರಲಿಲ್ಲ.. ನಮ್ಮೂರು ಹಾಗೂ ಸುತ್ತಮುತ್ತಲೆಲ್ಲ ಚಂದ್ರಕಾಂತಂಗೆ ಕೊಸ ಕೊಸ ರೋಗನಡಾ.. ಎನ್ನುವ ಸುದ್ದಿ ಸದ್ದಿಲ್ಲದೇ ಹಬ್ಬಿತ್ತು.. ಸುದ್ದಿಮೂಲ ಬೊಂಬಾಯ್ ಕಮಲಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ..
ಪಾ..ಪ ಬ್ರಹ್ಮಚಾರಿ ಮಾಸ್ತರ್ರಿಗೆ ಹಿಂಗಾಗಕಾಗಿತ್ತಿಲ್ಲೆ.. ಎನ್ನುವ ಸಂತಾಪಸೂಚಕ ಮಾತುಗಳೂ ಕೆಲವರ ಬಾಯಿಂದ ಉದುರಿದ್ದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಕ್ಕೆ ತಂದಿತು..ಹೋದಲ್ಲಿ ಬಂದಲ್ಲಿ ಇದೇ ಸುದ್ದಿ.. ಯಾರೂ ಬಾಯಿಬಿಟ್ಟು ಚಂದ್ರಕಾಂತ ಮಾಸ್ತರ್ರ ಬಳಿ ಇದನ್ನು ಹೇಳದಿದ್ದರೂ ಬಾಡಿ ಲ್ಯಾಂಗ್ವೇಜಿನ ಮೂಲಕ ಅರ್ಥವಾಗುತ್ತಿತ್ತು.. ಕೊನೆಗೊಮ್ಮೆ ನನ್ನ ತಂಗಿ ಮಾತಿನ ಭರದಲ್ಲಿ ಚಂದ್ರಕಾಂತ ಮಾಸ್ತರ್ರ ಬಳಿ ಈ ವಿಷಯ ಕೇಳಿದಾಗ ಅವರ ಮುಖ ಹುಳ್ಳಗಾಗಿತ್ತು..
***

ಕಮಲಿಯ ಬಾಯಿಂದ ಹರಿಬಿದ್ದ ಕಥೆಯನ್ನು ಚಂದ್ರಕಾಂತ ಮಾಸ್ತರ್ರು ಹಲಕೆಲವು ದಿನ ಅದ್ಹೇಗೋ ತಡೆದುಕೊಂಡರು.  ಗಾಸಿಪ್ಪಿನ ಸುದ್ದಿ ಕೇಳುವುದು ಹೆಚ್ಚಾದಂತೆಲ್ಲ ನಮಗೆ ಬೀಳುವ ಹೊಡೆತದ ಪ್ರಮಾನವೂ ಜಾಸ್ತಿಯಾಗುತ್ತಿತ್ತು. ನನ್ನ ಜೊತೆಗೆ ಕಲಿಯುತ್ತಿದ್ದ ಅನೇಕ ಸಹಪಾಠಿಗಳು ಚಂದ್ರಕಾಂತ ಮಾಸ್ತರ್ರು ಸೊಕಾ ಸುಮ್ಮನೆ ಹೊಡೆಯುತ್ತಾರೆ ಎನ್ನುವುದನ್ನು ಕಂಪ್ಲೇಂಟ್ ರೂಪದಲ್ಲಿ ಮನೆಯಲ್ಲಿ ಹೇಳುವವರೆಗೂ ಇದು ಮುಂದುವರಿಯಿತು.
ಈ ನಡುವೆ ನಮ್ಮ ಮನೆಯಲ್ಲಿ ಹಿಸೆ ಪಂಚಾಯತಿಗೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು.. ನನ್ನ ಅಪ್ಪ ಒಂದು ಪಕ್ಷದವನಾಗಿದ್ದರೆ ಅಪ್ಪನ ತಮ್ಮಂದಿರೆಲ್ಲ ಇನ್ನೊಂದು ಕಡೆಗೆ. ಊಟಕ್ಕೆ ಬರುತ್ತಿದ್ದ ಚಂದ್ರಕಾಂತ ಮಾಸ್ತರರ ಬಳಿ ನನ್ನ ಚಿಕ್ಕಪ್ಪಂದಿರು ನನ್ನ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿ ಹಚ್ಚಿಕೊಟ್ಟಾಗ ನನಗೆ ಬೀಳುತ್ತಿದ್ದ ಹೊಡೆತದ ಸಂಖ್ಯೆ ಹೆಚ್ಚಾಗುತ್ತಲಿತ್ತು.. ನಾನು ಹೈರಾಣಾಗುತ್ತಿದ್ದೆ..
***

ಚಂದ್ರಕಾಂತ ಮಾಸ್ತರರ ಪಾಲಿಗೆ ಕಬ್ಬಿಣದ ಕಡಲೆಯಂತಾಗಿದ್ದ ಬೊಂಬಾಯ್ ಕಮಲಿಯ ಬಾಯಿ ನನಗಂತೂ ಬಹಳ ಸಂತಸವನ್ನು ತಂದಿತ್ತು.. ಬೊಂಬಾಯ್ ಕಮಲಿಯ ಬೊಂಬಾಯಿಯ ಎಫೆಕ್ಟು ನನ್ನ ತೊಂದರೆಯನ್ನು ತಪ್ಪಿಸುತ್ತಿತ್ತು.. ನಾಲ್ಕಾರು ತಿಂಗಳು ಕಳೆಯುವಷ್ಟರಲ್ಲಿ ಚಂದ್ರಕಾಂತ ಮಾಸ್ತರರ ಬೆಳಕು ಕಳೆದು ಬಸವಳಿದು ಹೋಗಿದ್ದರು.
ಬೊಂಬಾಯ್ ಕಾಟವನ್ನು ಹೇಗಾದರೂ ತಪ್ಪಿಸಿಕೊಂಡಿದ್ದರೆ ಸಾಕು ಎನ್ನುವಷ್ಟಾಗಿತ್ತು.. ಮಾಸ್ತರು ಎಲ್ಲೇ ಹೋದರೂ ಉಭಯಕುಶಲೋಪರಿ ಸಾಂಪ್ರತಕ್ಕಿಂತ ಹೆಚ್ಚಾಗಿ ಅವರ ಕೊಸ ಕೊಸ ಮಾತಿನ ಬಗ್ಗೆಯೇ ಚರ್ಚೆಯಾಗತೊಡಗಿದಾಗ ಮಾಸ್ತರರ ಮನದೊಳಗಿದ್ದ ಅಸಮಧಾನದ ಮೂಟೆ ಭುಗಿಲೆದ್ದು ರೇಗಾಡುತ್ತಿದ್ದರು. ಆದರೂ ಜನರು ಬಿಡಬೇಕಲ್ಲ..

***

ಶಾಲೆಗೆ ಹೆಡ್ಮಾಸ್ತರ್ ಆಗಬೇಕು ಎಂಬುದು ಅವರ ಕನಸಾಗಿತ್ತು. ಆದರೆ ಅವರ ಕನಸಿಗೆ ಅಡ್ಡಗಾಲಾಗಿದ್ದು ಬೊಂಬಾಯ್ ಕಮಲಿ ಹಾಗೂ ಆಕೆಯ ಬೊಂಬಾಯ್ ಮಾತುಗಳು.. ಗಡಕರ್ ಮಾಸ್ತರ್ರು ಬೇರೆ ಶಾಲೆಗೆ ವರ್ಗವಾಗಿ ಹೋದ ನಂತರ ಆ ಸ್ಥಾನಗೆ ತನಗೇ ಸಿಗುತ್ತದೆ ಎಂದು ನಂಬಿಕೊಂಡಿದ್ದರು ಚಂದ್ರಕಾಂತ ಮಾಸ್ತರ್ರು. ಆದರೆ ಅದು ಈಡೇರಲೇ ಇಲ್ಲ. ಆಗ ಶಾಲೆಯಲ್ಲಿ ಸೀನಿಯರ್ ಟೀಚರ್ ಹಾಗೂ ವೃತ್ತಿಯಲ್ಲೂ ಸೀನಿಯರ್ ಆಗಿದ್ದ ತಾರಕ್ಕೋರು ಹೆಡ್ಮಿಸ್ ಆಗುವುದರೊಂದಿಗೆ ಚಂದ್ರಕಾಂತ ಮಾಸ್ತರ್ರ ಬೆಳಕು ಮತ್ತಷ್ಟು ಮಬ್ಬಾಗಿತ್ತು.. ಆದರೂ ತಾರಕ್ಕೋರು ರಜಾದ ಮೇಲಿದ್ದಾಗ ಪ್ರಭಾರಿ ಹೆಡ್ಮಾಸ್ತರ್ರಾಗಿ ಖುಷಿ ಪಟ್ಟು ಸಮಾಧಾನ ಮಾಡಿಕೊಳ್ಳುತ್ತಿದ್ದರು..
ಇಷ್ಟಾದರೂ ಬೊಂಬಾಯ್ ಕಮಲಿಯ ಬಾಯಿ ಅವರ ಪಾಲಿಗೆ ಕಪ್ಪು ಚುಕ್ಕೆಯಾಗಿಯೇ ಉಳಿದುಬಿಟ್ಟಿತು.

**
ಇಷ್ಟೆಲ್ಲ ಹೇಳಿ ಕ್ಲೈಮ್ಯಾಕ್ಸ್ ಹೇಳದಿದ್ದರೆ ಸಿನೇಮಾ ಖುಷಿ ಕೊಡೋದಿಲ್ಲ ನೋಡಿ.. ಬೊಂಬಾಯ್ ಕಮಲಿಯ ಮಾತು ಮತ್ತೂ ಜೋರಾದಾಗ ಹೆದರಿದ ಚಂದ್ರಕಾಂತ ಮಾಸ್ತರ್ರು ಕೊನೆಗೊಮ್ಮೆ ಟ್ರಾನ್ಸ್ ಫರ್ ಮಾಡಿಸಿಕೊಂಡು ಬೇರೆ ಶಾಲೆಗೆ ಹೋಗುವುದರೊಂದಿಗೆ ಶುಭಂ ಹೇಳಿಬಿಡುತ್ತೇನೆ..
ಅಲ್ಲಿಗೆ ನಮ್ಮ ಪರಿತಾಪವೂ ಕಳೆದಿತ್ತು.. ನನ್ನ ಪ್ರೈಮರಿ ಶಾಲಾ ಜೀವನವೂ ಮುಗಿದಿತ್ತು.. ಚಂದ್ರಕಾಂತ ಮಾಸ್ತರ್ರು ಹೊಸ ಶಾಲೆಯಲ್ಲಿ ಹೆಡ್ಮಾಸ್ತರ್ರಾದರಾ ಎಂಬುದು ಇಂದೂ ಗೊತ್ತಾಗಿಲ್ಲ ನೋಡಿ..

Thursday, November 14, 2013

ನವಿಲುಗರಿ ಬೆಳೆಯಲಿಲ್ಲ

`ನವಿಲುಗರಿ ಬೆಳೆಯುತ್ತಂತೆ!'
ಹಾಗಂತ ಬಾಲ್ಯದೊಳೆಲ್ಲೋ
ಮಿತ್ರ ಉಸುರಿದ್ದ |
ತಂದು, ಯಾವುದೋ ಒಂದು
ಪಟ್ಟಿ ಹಾಳೆಯ ಮಧ್ಯ ಇಟ್ಟು
ಮರೆತದ್ದಾಯ್ತು ||

ಸವಿ ಸವಿದು ಖುಷಿ ತಂದ
ಬಾಲ್ಯವೆಲ್ಲೋ ಓಡಿಹೋಯ್ತು |
ಹೊಸ ಹುರುಪೆಂಬಂತೆ
ಹರೆಯ ಬಂತು, ಬಂದ ವೇಗದಲ್ಲೇ
ಕಾಣದಂತೆ ಓಡಿಹೋಯ್ತು ಕೂಡ..|

ಮುಂದಿನ ಹೆಜ್ಜೆಯೋ, ಸಂಗಾತಿ
ಅರಸೆನ್ನುವ ಯವ್ವನ|
ಅದೆಲ್ಲಿ ಹೋಯ್ತೋ ಗೊತ್ತಿಲ್ಲ |

ಮುಗಿಯಿತು ಮದುವೆ-
ಮಡದಿ-ಮಕ್ಕಳು-ಸಂಸಾರ
ಎಂಬ ಚಕ್ರಬಂಧ |
ಕೊನೆಯವರೆಗೂ ಕಾಡಿ ನಿಂತಿತು
ತುತ್ತಿನ ಚೀಲ ಎಂಬ ದುಡಿತಗಾರ |

ಬಾಲ್ಯದ ಬದುಕ ಬಾಗಿಲಲಿ
ಮುಪ್ಪಡರಿ ನಿಂತಿತು |
ಸನಿಹದ ಸಾವೇ ಕೊನೆಯ
ಬಯಸುವ, ಬಯಸದ ನಿರೀಕ್ಷೆಯಾಯ್ತು |
ನಡುವೆ ಮುಖದ ಮೇಲಣ
ಸುಕ್ಕು ಮೆರೆಯಿತು | ಬೊಚ್ಚು ಬಾಯಿ
ನಕ್ಕಿತು | ಮೊಮ್ಮಕ್ಕಳು
ಮೆರೆದು, ಆಡಿ ಕುಣಿದರು |
ದೃಷ್ಟಿ ಮಂಜಾಯಿತು, ಬದುಕು
ಶಕುತಿ ತಗ್ಗಿ ನಿಂತಿತು |

ಜೀವ ಅಡಗುವ ಮುನ್ನವೆಂದೋ
ಮತ್ತೊಮ್ಮೆ, ಮರೆತ ಪಟ್ಟಿ
ನೆನಪಿಗೆ ಬಂದು, ಅಟ್ಟದ ಸಂದಿಯ
ಮೂಲೆಯಲ್ಲೆಲ್ಲೋ ಸಿಕ್ಕಿತು |

ಮತ್ತದೇ ಪುಟ ತೆರೆದು ನೋಡಿದರೆ
`ನವಿಲುಗರಿ'ಬೆಳೆಯಲೇ ಇಲ್ಲ|
ಇದ್ದ ಹಾಗೇ ಇದೆ |
ಬೆಳೆದಿದ್ದು ಕಳೆದಿದ್ದು ಮಾತ್ರ
ಮಾನವನ ಬದುಕು |

ಮತ್ತೆ ಮೊಮ್ಮಗ ಕೂಡ
ಪಟ್ಟಿ ಮಧ್ಯದಲ್ಲಿ ನವಿಲುಗರಿ
ಇಟ್ಟಾಯಿತು |

(ಇದನ್ನು ಬರೆದಿದ್ದು 5-12-2006ರಂದು ದಂಟಕಲ್ಲಿನಲ್ಲಿ, ಈ ಕವಿತೆಯನ್ನು ಶಿರಸಿಯ ವಿಜಯನಳಿನಿ ರಮೇಶ್ ಅವರ ಮನೆಯಲ್ಲಿ 28-07-2007ರಂದು ನಡೆದ ಕವಿ ಕಾವ್ಯ ಬಳಗದ ಕವಿಗೋಷ್ಟಿಯಲ್ಲಿ ವಾಚನ ಮಾಡಿದ್ದೇನೆ.)
(ನಿನ್ನ ವಯಸ್ಸಿಗೆ ಪ್ರೇಮಕ ಕವಿತೆ ಬರೆಯಬೇಕು. ಆದರೆ ಈ ಥರಹದ ಕವಿತೆ ಬರೆದಿದ್ದೀಯಾ ಎಂದರೆ ಆಲೋಚನೆ ಮಾಡಬೇಕಿದೆ.. ಪ್ರೇಮಕವಿತೆ ಬರೆಯಲು ಮುಂದಾಗು.. ಉಳಿದ ಕವಿತೆಗಳು ಜೊತೆಗೆ ಬರುತ್ತವೆ ಎಂದು ಈ ಕವಿತೆಯ ಕುರಿತು ಖ್ಯಾತ ವಿಮರ್ಷಕ, ಗುರುಗಳಾದ ಶ್ರೀ ಆರ್. ಡಿ. ಹೆಗಡೆ ಆಲ್ಮನೆ ಅವರು ಹೇಳಿದ್ದರು.)

Wednesday, November 13, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 4

ನಾವು ಕೊನೆಗೂ ಗುಮ್ಮಟ ನಗರಿ ಬಿಜಾಪುರವನ್ನು ತಲುಪುವ ವೇಳೆಗೆ 5ರ ಮೇಲೆ 30 ನಿಮಿಷ ಹೆಚ್ಚಾಗಿತ್ತು. ಎತ್ತ ನೋಡಿದರತ್ತ ಗುಮ್ಮಟಗಳು.. ಬಿಳಿ ಬಿಳಿ ಗುಂಬಜಗಳು.. ಸುಂದರ ಊರಾಗಿದ್ದರೂ ಬಿಜಾಪುರ ಏನೋ ಒಂದು ರೀತಿಯ ಕಳವಳವನ್ನು ಮನಸ್ಸಿನಲ್ಲಿ ಹುಟ್ಟು ಹಾಕುತ್ತದೆ. ಬಸ್ಸಿನಲ್ಲಿ ಕುಳಿತಿದ್ದಂತೆ ಅಕ್ಕಪಕ್ಕ, ಮುಂದೆ ಹಿಂದೆ ನೋಡಿದೆ.. ಗುಂಬಜಗಳು.. ಆದರೂ ಗೋಲಗುಮ್ಮಟ ಕಾಣಲಿಲ್ಲ ಬಿಡಿ..
ಅಲ್ಲಿಂದ ಬಸವನ ಬಾಗೇವಾಡಿಯೆಡೆಗೆ ಸಾಗುವ ಬಸ್ಸನ್ನು ಏರಿದೆವು. ಬಸ್ಸಯ ಸುಮಾರು 6.30ರ ವೇಳೆಗೆ ಬಸವಣ್ಣನ ಜನನದ ನೆಲೆವೀಡಾದ ಬಾಗೇವಾಡಿಯಲ್ಲಿ ನಮ್ಮನ್ನು ಇಳಿಸಿ ಸಾಗಿತು. ಬಾಗೇವಾಡಿಯ ಶ್ರೀ ಬಸವೇಶ್ವರ ಕಾಲೇಜು ಅಲ್ಲೇ ಇತ್ತು. ಸರಿ, ಅಲ್ಲಿಗೆ ಹೋದೆವು. ಅದು ಶಿರಸಿಯ ಎಂ. ಎಂ. ಕಲಾ ಮತ್ತು ವಿಜ್ಞಾನ ಕಾಲೇಜೆಂಬ ದೊಡ್ಡ ಕಾಲೇಜಿಗೆ ಹೋಲಿಸಿದರೆ ಬಹು ಚಿಕ್ಕದು. ಹಾಗೆಯೇ ಜನರೂ ಕೂಡ.
ಹೋದ ತಕ್ಷಣ ನಮಗೆ ಉಳಿದುಕೊಳ್ಳಲು ಯಾವುದೋ ಖಾಲಿ ರೂಮನ್ನು ತೋರಿಸಿದರು. ಆದರೆ ಅಲ್ಲಿ ನಮ್ಮ ಲಗೇಜನ್ನು ಇಟ್ಟು ನಮ್ಮ ಬಿಡಾರವನ್ನು ಊರಲು ಹವಣಿಸಿದ ಹತ್ತೇ ನಿಮಿಷದಲ್ಲಿ ಅಲ್ಲಿನ ಸೊಳ್ಳೆಗಳು ಪ್ರತಾಪವನ್ನು ತೋರಲಾರಂಭಿಸಿದವು. ಕೊನೆಗೊಮ್ಮೆ ಸೊಳ್ಳೆಗಳು ಅಸಹನೀಯ ಎನ್ನಿಸಿದಾಗ ಎನ್. ಎಚ್. ಗೌಡರ ಬಳಿ `ಬೇರೆ ರೂಂ.. ಕೊಡಿಸಿ ಸಾ...' ಎಂದು ದುಂಬಾಲುಬಿದ್ದೆವು.. ಕೊನೆಗೆ ನಮ್ಮ boys teamಗೇ ವಿಶೇಷವಾಗಿ ಆ ಕಾಲೇಜಿನ sports roomನ್ನು ಬಿಟ್ಟುಕೊಟ್ಟರು. ಆ ರೂಮಿನ ಪುರಾಣವೇ ಬಹುದೊಡ್ಡದಾಗುತ್ತದೆ .. ನಮ್ಮ ಕಾಲೇಜಿನಲ್ಲಿ ದೊಡ್ಡ ಕ್ರೀಡಾ ವಿಭಾಗದ ಕೋಣೆಯಿದ್ದರೆ ಅಲ್ಲಿ ಬಹಳ ಚಿಕ್ಕದು. ನಾವು ನಾಲ್ವರು ಮಲಗಿಕೊಂಡರೆ ಐದನೆಯವನಿಗೆ ಜಾಗವೇ ಇಲ್ಲದಂತಹ ಸ್ಥಳ.. ಗಬ್ಬಾಗಿದ್ದರೂ ಆ ರೂಮಿನಲ್ಲಿ ಫ್ಯಾನಿತ್ತು ಎಂಬುದೇ ವಿಶೇಷ.. ಫ್ಯಾನುಗಾಳಿಗೆ ಸೊಳ್ಳೆಗಳ ಯುದ್ಧವನ್ನು ಸ್ವಲ್ಪ ಪ್ರಮಾಣದಲ್ಲಿ ತಪ್ಪಿಸಬಹುದು ಎಂಬುದು ನಮಗಿದ್ದ ಸಮಾಧಾನದ ಸಂಗತಿ.

ಸಂಜೆ, ಸನಿಹದ `ವಿಮೋಚನ' ಎಂಬ ವಿಚಿತ್ರ ಹೆಸರಿನ ಹೊಟೆಲ್ ಕಂ ಬಾರ್ ಕಂ ರೆಸ್ಟಾರೆಂಟ್ ನಲ್ಲಿ ಊಟ ಮುಗಿಸಿ ಬಂದೆವು. ಪಾವಸ್ಕರ ಭರ್ಜರಿ ಮಾತನಾಡುವ ಹುಮ್ಮಸ್ಸಿನಲ್ಲಿದ್ದ.. ಭಾರಿ ಭಾರಿ ಮಾತಿನೊಂದಿಗೆ ಶುರುಹಚ್ಚಿಕೊಂಡ. `ವಿನು, ನಾಳೆಯಿಂದ ಮ್ಯಾಚು. ನಾವು ಫಸ್ಟು ಬರ್ಲೇಬೇಕು.  ಬಂದೇ ಬರ್ತೀವಿ. ನಂಗೆ ಆ ಗೋಗಟೆ ಕಾಲೇಜಿನ ವಿರುದ್ಧ ಕಳೆದ ವರ್ಷ ಸೋತ ಉರಿ ಇದೆ. ನನ್ನೆದುರಿಗಿದ್ದವನನ್ನು ಸೋಲಿಸಿಯೇ ಸೋಲಿಸ್ತೀನಿ ..' ಎಂದ.. ಪಾ..ಪ .. ಮಾತಿನ ಮಧ್ಯದಲ್ಲಿ ಸ್ವಲ್ಪ ತೊದಲುತ್ತಿದ್ದ ಈತನ ಖುಷಿಯನ್ನು ನಾನು ತಡೆಯಲು ಹೋಗಲಿಲ್ಲ.. ಹಾಗೆಯೇ ನಮ್ಮ ಮಾತಿನಲ್ಲಿ ಆ ಆಟಗಾರನ್ನು ಸೋಲಿಸಿದರೆ ಇಷ್ಟು, ಈತನನ್ನು ಸೋಲಿಸಿದರೆ ಇಷ್ಟು ಎನ್ನುವ ಚಾಲೆಂಜುಗಳು, ಬೆಟ್ಟಿಂಗುಗಳು ನಡೆದವು.. 50 ರುಪಾಯ್ ವರೆಗೂ ನಮ್ಮ ಬೆಟ್ಟಿಂಗ್ ರು. ಏರಿಕೆಯಾಗಿತ್ತು.

ನವೀನ್ ಪಾವಸ್ಕರ, ನಾನು, ಆನಂದ ನಾಯ್ಕ, ನಾಗಭೂಷಣ ಗೌಡರ ಜೊತೆಗೆ  (ಕಿಟ್ಟು ಮಿಸ್ಸಿಂಗ್)
ಕೊನೆಗೆ ನಮ್ಮ ಟೀಮಿನಲ್ಲಿ ಯಾರು ಹೇಗೆ ಆಡಬೇಕು, ಯಾರು ಯಾವ ಪೊಸಿಷನ್ನಿನಲ್ಲಿ ಆಡಬೇಕು ಎಂಬ ಚರ್ಚೆ ನಡೆಯಿತು. ನಾನು 2nd ಬೋರ್ಡ್ ಆಡುತ್ತೇನೆ ಎಂದೆ. ಪಾವಸ್ಕರನ ಬಳಿ ಮೂರನೇ ಬೋರ್ಡನ್ನು ಆಡು ಎಂದೆ.. ಆದರೆ ಉಳಿದಿಬ್ಬರ ಪೈಕಿ ಯಾರು 1st ಬೋರ್ಡ್ ಹಾಗೂ ಯಾರು 4th ಬೋರ್ಡ್ ಆಡಬೇಕು ಎನ್ನುವುದು ಸಮಸ್ಯೆಯಾಯಿತು. ಪಾವಸ್ಕರ ಕಿಟ್ಟು 1st ಬೋರ್ಡ್ ಆಡಲಿ ಎಂದು ರಗಳೆ ಪ್ರಾರಂಭಿಸಿದ. ನಂಗದು ಇಷ್ಟವಿರಲಿಲ್ಲ. ಕೊನೆಗೆ ಆನಂದ 1st ಬೋರ್ಡ್ ಆಡಲಿ ಎಂದು ನಾನು ನಿರ್ಧಾರ ಮಾಡಿದೆ. ಪಾವಸ್ಕರ ಕ್ಯಾತೆ ತೆಗೆದನಾದರೂ ಕೊನೆಗೆ ಒಪ್ಪಿಕೊಂಡ. ಆನಂದನೂ ನಾಲ್ಕೈದು ಸಾರಿ `ತೊಂದ್ರೆ ಇಲ್ಲಲಾ.. ಪ್ರಾಬ್ಲಮ್ ಆಗೂದಿಲ್ಲಾ ಅಲ್ಲಾ..' ಎಂದು ಹೇಳಿ  ಅಳುಕಿನಿಂದಲೇ ಒಪ್ಪಿಕೊಂಡ. ಅದಕ್ಕಾಗಿ ಸಾಕಷ್ಟು ಬೆಣ್ಣೆಯನ್ನು ಹಚ್ಚಿದೆ ಕೂಡ.!
ನಾವು ಹಾಗೆ ಸುಮ್ಮನೇ ಪ್ರಾಕ್ಟೀಸ್ ಮ್ಯಾಚನ್ನು ಆಡಿದೆವು. ನನ್ನ ವಿರುದ್ಧ ಎಲ್ಲಾ ಆಟಗಾರರೂ ತಲಾ ಒಂದೊಂದು ಮ್ಯಾಚಿನಂತೆ ಆಡುವುದು ಎಂಬ ನಿರ್ಧಾರ ಮಾಡಿಕೊಂಡೆವು.. ಪ್ರಾಕ್ಟಿಸ್ ಮ್ಯಾಚ್ ಆಗಿದ್ದರೂ ನಾನು ಹಾಗೂ ಪಾವಸ್ಕರನ ನಡುವೆ ಯಾವಾಗಲೂ ಆಟ ಜಿದ್ದಾ ಜಿದ್ದಿನಿಂದ ಇರುತ್ತಿದ್ದ ಕಾರಣ ತಲಾ 50ರು. ನಂತೆ ಚಾಲೆಂಜ್ ಕಟ್ಟಿಕೊಂಡೆವು.. ನನ್ನ ವಿರುದ್ಧ ಪಾವಸ್ಕರ, ಕಿಟ್ಟುವಿನ ವಿರುದ್ಧ ಆನಂದ ಯದ್ವಾ ತದ್ವಾ ಮ್ಯಾಚುಗಳನ್ನು ಗೆಲ್ಲತೊದಗಿಸದರು. ನಾನು ಹಾಗೂ ಕಿಟ್ಟಿ ಇಬ್ಬರೂ ಎಷ್ಟೇ ಒದ್ದಾಡಿದರೂ ಒಂದೇ ಒಂದು match ನ್ನೂ ಗೆಲ್ಲಲಾಗಲಿಲ್ಲ. ! ನಾನು ಮ್ಯಾಚು ಸೋತಂತೆಲ್ಲ ಇನ್ನೈವತ್ತು ಅಂತ ಹೇಳಿ ನನ್ನನ್ನು ಚಾಲೆಂಜಿಗೆ ಕರೆದು ಮ್ಯಾಚಿನಲ್ಲಿ ಸೋಲಿಸಿ ನಗುತ್ತಿದ್ದ ನವೀನ ಪಾವಸ್ಕರ.. ಸೋತ ಮೊತ್ತ 500 ರು. ದಾಟುತ್ತಿದ್ದಂತೆ ನಾನು `ಸಾಕೋ ಮಾರಾಯಾ.. ನನ್ನ ಬಳಿ ಬ್ಯಾಲೆನ್ಸ್ ಇಲ್ಲ..' ಎಂದು ವರಾತ ಶುರು ಹಚ್ಚಿದೆ.. ಅದಕ್ಕವನು ಕೇಳಬೇಕಲ್ಲ.. ಕೊನೆ ಕೊನೆಗೆ ದುಡ್ಡಿನ ಮ್ಯಾಚು ಸಾಕೆನ್ನಿಸಿತು. ಖಾಲಿ ಪುಕ್ಕಟೆ ಮ್ಯಾಚ್ ಆದಲು ಯತ್ನಿಸಿದರೆ ಅದರಲ್ಲೂ ಸೋಲಿನ ಸರಮಾಲೆಯನ್ನು ಕಾಣಬೇಕೆ.. ಸಿವ ಸಿವಾ..? ನಮ್ಮನ್ನು ಸೋಲಿಸಿದಂತೆಲ್ಲ ತನ್ನ ಗುಡಾಣದಂತಹ ಹೊಟ್ಟೆಯನ್ನು ಕುಲುಕಾಡಿಸಿ ಕುಲುಕಾಡಿಸಿ ನಕ್ಕು ಕೆಣಕುತ್ತಿದ್ದ. ನಾವು ಸೋತವರಾದ್ದರಿಂದ ಸುಮ್ಮನಿದ್ದೆವು.
ಕೊನೆಗೆ 10.30ಕ್ಕೆ ಎಲ್ಲರೂ ನಿದ್ರಾದೇವಿಯ ತೆಕ್ಕೆಗೆ ತೆರಳಲು ಅನುವಾದರು. ಮಲಗಲೆಂದು light ಆರಿಸಿದ್ದೇ ತಡ ಶುರುವಾಯಿತು ನೋಡಿ ಸೊಳ್ಳೆ ಸಮುದಾಯದ ದಾಳಿ.. ಅಬ್ಬಬ್ಬಾ... ಆ ರೀತಿಯ ಆನೆಗಾತ್ರದ ಸೊಳ್ಳೆಗಳನ್ನು ನಾವು ಮಲೆನಾಡಿಗರು ಎಂದೂ ನೋಡಿರಲೇ ಇಲ್ಲ. ಸೊಳ್ಳೆಗಳೇನೋ ದೊಡ್ಡ ಡೊಣೆಯ ಗಾತ್ರದವುಗಳು.. ಪಾವಸ್ಕರನ ದೇಹಕ್ಕೆ ಹೊಂದಿಕೆಯಾಗುವಂತವುಗಳು. ಸೊಳ್ಳೆಗಳ ದಾಳಿ ತಾಳಲಾರದೇ ಫ್ಯಾನ್ ಹಾಕಿಕೊಳ್ಳಲು ಹೊರಟೆ. ಆದರೆ ಆ ಫ್ಯಾನ್ಉ ಹಳೆಯ ಕಾಲದ್ದಾಗಿದ್ದರಿಂದ ಕಿರ್ರೆನ್ನುತ್ತಿತ್ತು. ಅದರ ಶಬ್ದಕ್ಕೆ ನಿದ್ರೆಯೂ ಬಾರದು. ಜೊತೆಗೆ ಪಾವಸ್ಕರನಿಗೆ ಫ್ಯಾನ್ ಬೇಕು, ಕಿಟ್ಟುವಿಗೆ ಬೇಡ ಎಂಬ ಗಲಾಟೆಯೂ ತಾರಕಕ್ಕೇರಿತ್ತು.
ಒಬ್ಬ ಎದ್ದು ಫ್ಯಾನ್ ಹಾಕಿ ಮಲಗಿದರೆ ರಾತ್ರಿಯಲ್ಲಿ ಮತ್ತೊಬ್ಬನೆದ್ದು ಅದನ್ನು ಬಂದ್ ಮಾಡುತ್ತಾನೆ. ಕೆಲ ನಿಮಿಷದಲ್ಲೇ ಇನ್ನೊಬ್ಬನೆದ್ದು ಅದನ್ನು ಮತ್ತೆ ಆರಂಭಿಸಿದರೆ ಕೆಲವೇ ವೇಳೆಯಲ್ಲಿ ಇನ್ನೊಬ್ಬನೆದ್ದು ಅದನ್ನು ಆರಿಸುತ್ತಾನೆ. ಇಡೀ ರಾತ್ರಿ ಹೀಗೇ ಸಾಗಿತು. ಬಹುಶಃ ಆ ರಾತ್ರಿ ಅಲ್ಪಸ್ವಲ್ಪ ನಿದ್ದೆ ಮಾಡಿದ್ದೆಂದರೆ ನಾನೊಬ್ಬನೇ ಇರಬೇಕೇನೋ.. ಉಳಿದವರಿಗೆ ಫ್ಯಾನ್ ಕಾಟವಿತ್ತು.
ಈ ಫ್ಯಾನ್ ಪ್ರಸಂಗದಿಂದ ನಮಗೆಲ್ಲರಿಗೂ ನಾಗಭೂಷಣ ಗೌಡರ ಮೇಲೆ ಭಾರಿ ಸಿಟ್ಟು ಬಂತು.. ನಮ್ಮನ್ನು ಇಂತಹ ರೂಮಿನಲ್ಲಿ ಸೊಳ್ಳೆಗಳಿಗೆ ಆಹಾರವಾಗಿ ಬಿಟ್ಟು ತಾವು ಮಾತ್ರ `ವಿಮೋಚನ' ಬಾರ್ 7 ರೆಸ್ಟಾರೆಂಟಿನ  ಎಸಿ ರೂಮಿನಲ್ಲಿ ಗಡದ್ದು ತೀರ್ಥ- ಪ್ರಸಾದ ಕೊಂಡು ತಿಂದು ಹಾಯಾಗಿ ಮಲಗಿದ್ದ ಅವರನ್ನು ಒಂದು ರಾತ್ರಿಯಾದರೂ ಈ ರೂಮಿನಲ್ಲಿ ಬಿಡಬೇಕು ಎಂದುಕೊಂಡೆವು. ಸೊಳ್ಳೆಗಳಿಗೆ ನಾನು ಹಾಗೂ ಪಾವಸ್ಕರ ಬೇಗನೆ ಹೊಂದಿಕೊಂಡರೂ ಪಾಪದ ಕಿಟ್ಟು ಹಾಗೂ ಆನಂದ ಬಹಳ ತೊಂದರೆಯನ್ನು ಅನುಭವಿಸಬೇಕಾಯಿತು. ಬೆಳಿಗ್ಗೆ ಎದ್ದಾಗ ಹಿಂದಿನ ದಿನದ ಪಯಣದ ಆಯಾಸಕ್ಕಿಂತ ಎಲ್ಲರ ಮೈಮೇಲೆ ತುರಸಣಿಗೆ ಬಳ್ಳಿ ತಾಗಿದಾಗ ಏಳುವಂತಹ ದಡಪೆಗಳು ಎದ್ದಿದ್ದು ನೋಡಲು ಖುಷಿ ನೀಡಿದರೂ ಸಖತ್ ಕಿರಿ ಕಿರಿಯನ್ನು ಉಂಟು ಮಾಡಿತು. ಕಣ್ಣುಗಳು ಜೇನು ಹೊಡೆದಂತೆ ಊದಿಕೊಂಡಿದ್ದವು. ಕಿಟ್ಟು ಹಾಗೂ ಪಾವಸ್ಕರನ ಕಣ್ಣುಗಳು ಕೆಂಪಾಗಿ ಕ್ರೇಜಿ ಸ್ಟಾರ್ ನನ್ನು ನೆನಪು ಮಾಡುತ್ತಿದ್ದವು.

18-09-2007, ಮಂಗಳವಾರ
ಬಾಗೇವಾಡಿಯ ಬಸವೇಶ್ವರ ಕಾಲೇಜಿನಲ್ಲಿ ನಮ್ಮ ಟೀಮ್
ಬೆಳಿಗ್ಗೆ ಅಂತೂ ಇಂತೂ ಏಳಕ್ಕೆ ಎದ್ದು ಕಾಲೇಜಿನ ಮೂಲೆಯಲ್ಲಿದ್ದ toiletಗೆ ಹೋದರೆ, ಬರ್ರೋ ಕುರಿ ನನ್ನ ಮಕ್ಕಳಾ ಎಂದು ಹೇಳುತ್ತಾ ಕೋಟ್ಯಂತರ ಸೊಳ್ಳೆಗಳು ನಮಗಾಗಿ ಕಾಯುತ್ತಿದ್ದವು. ತತ್ತೆರಿಕಿ.. ಯಾವುದೇ ಕೆಲಸ ಸರಿಯಾಗದಿದ್ದರೂ ತೊಂದರೆಯಿಲ್ಲ.. ಈ ಕೆಲಸ ಮಾತ್ರ ನೆಮ್ಮದಿಯಿಂದ ಆಗಲೇಬೇಕು.. ಇಲ್ಲವಾದರೆ ದಿನವಿಡೀ ಹಾಳಾಗುವ ಸಾಧ್ಯತೆಗಳಿರುತ್ತವೆ.. ತತ್ಥೆರಿಕಿ.., toilet ನಲ್ಲಿ ಸಿಗುವ ಏಕೈಕ ನೆಮ್ಮದಿ, ಏಕಾಂತದ ತಾಣಕ್ಕೂ ಹಾಳು ಸೊಳ್ಳೆಗಳಿಂದ full stop ಬಿದ್ದಿತ್ತು. toilet ನಲ್ಲೂ ಸೊಳ್ಳೆಗಳ ಜೊತೆಗೆ ಹೋರಾಡಬೇಕಾದ ಸನ್ನಿವೇಶ.  ದೇವ್ರೆ.. ಆ ಸೊಳ್ಳೆಗಳಂತೂ ಹುಡುಕಿ ಹುಡುಕಿ ಜಾಗ ನೋಡಿ ಕಚ್ಚುತ್ತವೆ.. ಕೊನೆಗೆ... ಒಂದು ವಾರ ಇದನ್ನು ಅನುಭವಿಸಿದ ಪಾಡು, ಸಾಕ್ಷಾತ್ ಯಮನಿಗೂ ಬೇಡ ಅನ್ನಿಸಿಬಿಟ್ಟಿತ್ತು.
ಕೊನೆಗೆ ತಿಂಡಿಗೆ ಹೊರಟೆವು. ಯಾಕೋ ಈ ಸಾರಿ `ವಿಮೋಚನ'ದ ತಿಂಡಿ ನಮಗೆಲ್ಲ ಇಷ್ಟವಾಗಲಿಲ್ಲ. ಬೇರೆ ಯಾವುದಾದರೂ ಹೊಟೆಲ್ ಗೆ ಹೋಗಬೇಕು ಎಂದು ಹುಡುಕಾಡಿದಾಗ ಸನಿಹದಲ್ಲೇ ಇದ್ದ `ದುರ್ಗಾ'ಎಂಬ ಕ್ಯಾಂಟೀನು ಸಿಕ್ಕಿತು. ಯಾಕೋ ಅಲ್ಲಿಯ ತಿಂಡಿಯೂ ನಮಗೆ ಇಷ್ಟವಾಯಿತು. ಕೊನೆಗೆ ಕಿಟ್ಟುವಿನ ಮಾತು ಹಾಗೂ ಎಲ್ಲರನ್ನೂ ಪರಿಚಯ ಮಾಡಿಕೊಳ್ಳುವ ಗುಣದಿಂದಾಗಿ ಆ ಹೊಟೆಲಿನ ಸಪ್ಲಾಯರ್ ಹಾಗೂ ಓನರ್ ನಮಗೆಲ್ಲ ಪರಿಚಯವಾದರು.
ಕಿಟ್ಟುವಿನ ಪರಿಚಯ ಮಾಡಿಕೊಳ್ಳುವ ಗುಣ ನಂಗಿಷ್ಟವಾಯಿತು. ಪಾವಸ್ಕರನ ಗೊಣಗಾಟದ ನಡುವೆಯೇ ನಾನೂ ಅವರನ್ನು ಪರಿಚಯ ಮಾಡಿಕೊಂಡೆ. ಪರಿಣಾಮ ಆ ಹೊಟೆಲಿನ ಓನರ್ರು ನಮ್ಮ ಬ್ರಹ್ಮಾವರದವರೆಂದು ತಿಳಿದುಬಂದು.. ಇಡೀ ಬಾಗೇವಾಡಿಯಲ್ಲಿ  ನಮಗೆ ಸಿಕ್ಕ ಏಕೈಕ ಮಲೆನಾಡಿನ ಸಂಬಂಧಿ ಊಟ ಇಲ್ಲಿ ಸಿಗುತ್ತಿತ್ತಾದ್ದರಿಂದ ನಮಗೆ ಈ ಹೊಟೆಲ್ ಅಚ್ಚುಮೆಚ್ಚಾಗಿತ್ತು.

(ಮುಂದುವರಿಯುತ್ತದೆ)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ, ದಿ ಬಾಕ್ಸಿಂಗ್ ಡೇ, ದಿ ಬಾಕ್ಸಿಂಗ್ ಮ್ಯಾಚ್..)..

Monday, November 11, 2013

ಪ್ರೀತಿಗೊಂದು ಪ್ರೀತಿಯ ಪತ್ರ (ಪ್ರೇಮಪತ್ರ-7)

 ಪ್ರೀತಿಯ ಗೆಳತಿ
ಪ್ರೀತಿ

ನೀನಿಲ್ಲದೇ ನನಗೇನಿದೆ,
ಮನಸೆಲ್ಲ ನಿನ್ನಲ್ಲಿ ನೆಲೆಯಾಗಿದೆ..

ಹೌದು ಕಣೆ ಗೆಳತಿ, ನನ್ನ ಮನಸ್ಸೆಲ್ಲ ನಿನ್ನಲ್ಲಿ ನೆಲೆ ನಿಂತ್ಕೊಂಡು ಬಿಟ್ಟಿದೆ. ಅದು ನನ್ನೊಳಗಿಲ್ಲವೇ ಇಲ್ಲ. ನನ್ನ ಹೃದಯವೆಂಬ ಅಪಾರ್ಟ್ ಮೆಂಟು ನಿನ್ನ ನೋಡಿದ ತಕ್ಷಣ ಸೇಲಾಗಿ ಬಿಟ್ಟಿದೆ ಗೆಳತಿ..

ನಿನ್ನದೇ ನೆನಪು ದಿನವೂ ಮನದಲ್ಲಿ
ನೋಡುವಾ.. ಆಸೆಯು, ತುಂಬಿದೆ ನನ್ನಲಿ..

ನಾನು ಏನೇ ಮಾಡ್ಲಿ.. ಮಾಡ್ತಿರ್ಲಿ.., ಮಾಡದೇ ಕುಂತಿರಲಿ.. ನಂಗೆ ನಿನ್ನದೇ ನೆನಪು. ಹಗಲೂ, ಇರುಳೂ ನಿನ್ನದೇ ಧ್ಯಾನ.. ಎಂದೆಂದೆಗೂ ನಿನ್ನದೇ ಪ್ರಾಣ..
ನಾನು ನೀನು ಮಾತಾಡಿ ಅದೆಷ್ಟು ಸೆಕೆಂಡುಗಳಾದವು ಗೊತ್ತಾ..? ಬಹುಶ: 7000 ಸೆಕೆಂಡೋ, 10 ಸಾವಿರವೋ ಇರಬೇಕು.. ಗಂಟೆಗಳಲ್ಲಿ ಲೆಕ್ಖ ಹಾಕಬೇಕೆಂದರೆ 2 ತಾಸು ಕಳೆದಿದೆ ಎನ್ನಬಹುದಾ..? ಏಕಿಷ್ಟು ದೀರ್ಘ ಯಾತನೆ..? ಯಾಕೋ ಗೊತ್ತಿಲ್ಲ ಜಸ್ಟ್ ನಿನ್ನ ಬಳಿ ಮಾತಾಡಿದ್ದೇನೆ... ಮತ್ತೀಗ ನಿನ್ನ ನೆನಪು ಕಾಡಿ ಮನಸ್ಸೆಲ್ಲ ಒದ್ದೆ ಮುದ್ದೆ..

ಅರಿತೋ ಅರಿಯದೆ
ನೆನಪು ಮೂಡಲು
ವಿರಹವು ಕಾಡಿದೆ

ಹೌದೇ ಹುಡುಗಿ, ನೀನು ಸನಿಹವಿದ್ದರೆ ಮನದ ತುಂಬ ರೋಮಾಂಚನ.. ಅದೇ ನೀನು ನನ್ನಿಂದ ದೂರವಾದೆಯೆಂದರೆ ನಂಗೆ ಬಲು ಬೇಸರ.. ಮನಸ್ಸಿನ ತುಂಬ ಮಮ್ಮರ.. ಗೊತ್ತೇನೆ..
ನಾ ನಿಂಗಾಗಿ ಕಾಡಿದ್ದು, ಕಾಡಿಸಿದ್ದು, ಸುಳ್ಳೆ ಪಿಳ್ಳೆ ನಿನ್ನ ಬಳಿ ಕಿತ್ತಾಡಿದ್ದು, ಹುಸಿ ಜಗಳದ ಜೊತೆಗೆ ಮಾತನಾಡಿದ್ದು, ಕದ್ದು ಕದ್ದು ಕಣ್ಣಿನಲ್ಲೇ ಯುದ್ಧ ಮಾಡಿದ್ದು, ಸೊಕಾ ಸುಮ್ಮನೆ ಜಗಳ ಕಾದಿದ್ದು... ನೀನಿಲ್ಲದೇ ಇದ್ದಾಗ  ಪರಿತಪಿಸಿದ್ದು.. ನಾನು ನೀನು ಇಬ್ಬರೂ ಬಾಲ್ಕನಿ ಟಿಕೆಟ್ ಸಿಗದೇ ಗಾಂಧೀ ಕ್ಲಾಸಿನಲ್ಲಿ ಕುಳಿತು ಅದ್ಯಾವುದೋ ಅರ್ಥವೇ ಆಗದ ಪಿಚ್ಚರನ್ನು ತನ್ಮಯತೆಯಿಂದ ನೋಡಿದ್ದು, ನಾನು, ನೀನು ಬಸ್ಸಿನಲ್ಲಿ ಕುಂತಿದ್ದಾಗ ನಿಮ್ಮೂರಿನ ಫಿಟ್ಟಿಂಗ್ ಮಹಾನುಭಾವನೋರ್ವ ಕೆಕ್ಕರಿಸಿ ನೋಡಿ ನಿಮ್ಮನೆಯಲ್ಲಿ ಫಿಟ್ಟಿಂಗ್ ಇಟ್ಟದ್ದು, ಮರುದಿನವೇ ನಾನು ನಿಮ್ಮ ಮನೆಗೆ ಹಾಜರಾಗಿ ತಪ್ಪುಗಾಣಿಕೆಯೆಂಬಂತೆ ಮಾತಿನ ಮೋಡಿ ಹರಿಸಿದ್ದು.. ಕೊನೆಗೂ ಕಾಡುತ್ತಲೇ ಇದ್ದ ನಿನ್ನಪ್ಪನ ಕಾಟಕ್ಕೆ ಸೋತೆಕೊಂಯ್..ಎಂದಿದ್ದು... ಇವೆಲ್ಲ ಇನ್ನೂ ಹಸಿ-ಹಸಿಯಾಗಿ-ಹಸಿರಾಗಿ ಕಣ್ಣಮುಂದೆಯೇ ಇದೆ ಅಲ್ವಾ..?
ಈ ಪ್ರಕರಣದ ನಂತರವೇ ನಾನು ನಿಮ್ಮ ಮನೆಯ ಖಾಯಂ ಸದಸ್ಯ ಎನ್ನುವಂತಾದದ್ದು.. ಪೋನ್ ಮಾಡಿದಾಗೆಲ್ಲ ನಿನಗಿಂತ ನಿನ್ನಪ್ಪ, ನಿನ್ನಮ್ಮರೇ ಆತ್ಮೀಯವಾಗಿ ಮಾತನಾಡುತ್ತಿದ್ದರಲ್ಲ... ಅದೆಷ್ಟು ಆಪ್ತತೆ ಮಾರಾಯ್ತಿ ನಿಮ್ಮ ಮನೆಯಲ್ಲಿ.. ಇದೇ ಅನುಭವ ಬಹುಶಃ ನಿನಗೂ ನನ್ನ ಮನೆಯಲ್ಲಿ ಆಗಿರಬಹುದು ಅಲ್ವಾ..? ಈ ಮನೆಯವರೇ ಹೀಗೆ .. ಒಮ್ಮೆ ಇಷ್ಟವಾದರು ಅಂದರೆ ತಮ್ಮವರನ್ನಾಗಿ ಮಾಡಿಕೊಂಡು ಬಿಡುತ್ತಾರೆ.. ಬಿಟ್ಟಿರಲಾಗದಷ್ಟು ಒಟ್ಟಾಗುತ್ತಾರೆ...
ಆಗಾಗ ಒಗಟಾಗುತ್ತಾರೆ..
ನಾ ನಿಂಗೆ ಬರೀತಾ ಇರೋದು ಇದು ಎಷ್ಟನೇ ಪತ್ರ..? ಲೆಕ್ಖವೇ ಇಲ್ಲ. ಆದರೆ ನೀನು ಇದಕ್ಕುತ್ತರವಾಗಿ ಒಂದಾದರೂ ಪತ್ರ ಬರೆದ್ಯಾ? ಊಹೂ.. ಇಲ್ಲವೇ ಇಲ್ಲ.. ಯಾಕೆ..?

ಬಾ ಬಾರೇ ಓ ಗೆಳತಿ,
ಜೀವನ ಸಂಗಾತಿ...

ಹೌದೇ ಹುಡುಗಿ,... ನಿನ್ನನ್ನು ಜೀವನ ಸಂಗಾತಿ ಅಂದ್ಕೊಂಡು ಹಲವು ಕಾಲವಾಯ್ತು.. ನೀನೆ ಕಣೆ ನನ್ನ ಮರಳುಗಾಡಿನಂತಹ ಬದುಕಿಗೆ ದಾಹವಿಂಗಿಸಿ ಗುಟುಕು ನೀರು ಕೊಟ್ಟು ಕೊಂಚ ಕ್ಷಣವಾದರೂ ಬದುಕುವಂತೆ ಮಾಡುವ ಓಯಸ್ಸಿಸ್ಸು..
ಅಲ್ವೇ... ಪ್ರತಿದಿನ ಕಣ್ಣ ಮುಚ್ಚಿದ ತಕ್ಷಣ ರೆಪ್ಪೆಯೆಂಬ ಪರದೆಯ ಮೇಲೆ ಅದ್ಯಾರು ಪ್ರೊಜೆಕ್ಟರ್ ಹಾಯಿಸುತ್ತಾರೋ ಗೊತ್ತಿಲ್ಲ.. ನೀನೇ ಕಾಣುತ್ತೀಯಾ... ನನ್ನ ಕನಸಿನ ಸಿನೆಮಾಗಳಿಗೆಲ್ಲ ನೀನೇ ಹೀರೋ.. ಹೀರೋಯಿನ್ನು ಎಲ್ಲಾ ಆಗಿಬಿಡುತ್ತೀಯಾ.. ಒಮ್ಮೆ ಆಕ್ಷನ್ನು, ಮತ್ತೊಮ್ಮೆ ಕಾಮಿಡಿ ಮಗದೊಮ್ಮೆ ರೋಮ್ಯಾನ್ಸು... ಅಪ್ಪಿತಪ್ಪಿಯೂ ನೀನು ನನ್ನ ಕನಸಿನಲ್ಲಿ ಐಟಂ ಡ್ಯಾನ್ಸರ್ ಆಗಿ ಬರಲಿಲ್ಲ..ಎಂದರೆ ನೀನು ನಂಬಲೇ ಬೇಕು.. ನನ್ನ ಮನಸಿನ್ನೂ ಅಷ್ಟು ಹಾಳಾಗಿಲ್ಲ ಬಿಡು... ನಾನು ಕಾಣುವ ಹಗಲಿರುಳಿನ ಕನಸಿನ ತುಂಬೆಲ್ಲ ನಿನ್ನದೇ ಚಿತ್ರಪಟ.. ನನ್ನ ಮನಸ್ಸು ಗಾಳಿಪಟ..
ನಿಂಗೊಂದಿನ ಪಾರ್ಕಿನಲ್ಲಿ ಕುಂತಾಗ ನಾನು ನಿನ್ನ ಕಿವಿಯಲ್ಲಿ

ಕಲ್ಲಿರಲಿ ಮುಳ್ಳೆ ಇರಲಿ
ಜೊತೆಗೂಡಿ ನಾ ಬರುವೆ
ನೀನಡಿಯ ಇಡುವೆಡೆಯಲ್ಲಿ
ಒಲವಿನ ಹೂ ಹಾಸುವೆ...

ಅಂತ ಪಿಸುಗುಟ್ಟಿದ್ದೆ.. ನೀನು ದೊಡ್ಡದಾಗಿ ಹೋ ಹೋ ಹೋ.. ಎಂದು ಅಕ್ಕಪಕ್ಕದಲ್ಲಿದ್ದವರೆಲ್ಲ ನಮ್ಮನ್ನೇ ನೋಡುವಂತೆ ನಕ್ಕಿದ್ದೆ... ಅಷ್ಟಲ್ಲದೇ ಸರಿ ನಾನೀಗ ನಡ್ಕೊಂಡು ಹೋಗ್ತೀನಿ.. ಹೂ ಹಾಸು ಎಂದು ಹೇಳಿದ್ದೆ... ನೆನಪಿದೆಯಾ..?
ಬದುಕೊಂತರ ಪ್ರೀತಿಯ ಸ, ರಿ, ಗ, ಮ, ಪ, ದ, ನಿ, ಸ ಕಣೆ. ಸಂಗೀತದ ಥರಾ.. ಕಷ್ಟಪಟ್ಟಾದರೂ ಕಲೀಬೇಕು.. ತಾಳತಪ್ಪದಂತೆ ನಡೀಬೇಕು. ಸಂಪೂರ್ಣ ಕಲಿತ ನಂತರ ಅದರ ಮಜವೇ ಬೇರೆ.. ಎಷ್ಟೇ ಕಲಿತರೂ ಇನ್ನೂ ಒಂದು ಸ್ವಲ್ಪ ಏನನ್ನಾದರೂ ಬಾಕಿ ಇಟ್ಟುಕೊಳ್ಳಬೇಕು...
ನೀ ನಂಜೊತೆ ನಗೆ ಹೂವಾಗಿ ಬಾ. ನಾನಾಗ ಬದುಕನ್ನು ಚನ್ನಾಗಿ ಬದುಕಬಲ್ಲೆ.. ಹಾಂ.. ನಂಗೀಗ ನಿದ್ದೆ ಬರ್ತಾ ಇದೆ.. ಮತ್ತೆ ನನ್ನ ಕಣ್ಣಿನ ಪರದೆ ಮೇಲೆ ತಪ್ಪದೆ ಬಾ ಮಾರಾಯ್ತಿ.. ನಾಳೆ ಜೂ ಸರ್ಕಲ್ಲಿನ ರಾಜಸ್ತಾನಿ ಹುಡುಗನ ಬಳಿ ಪಾನಿಪುರಿ ಕೊಡಿಸ್ತೇನೆ.. ಮತ್ತೆ ಬರ್ತೀಯಲ್ಲಾ..?

ಇಂತಿ ನಿನ್ನವ


ಜೀವನ್

(ಬರೆದಿದ್ದು 29-03-2008ರಲ್ಲಿ ದಂಟಕಲ್ಲಿನಲ್ಲಿ)..


Sunday, November 10, 2013

ನಿನ್ನ ಪ್ರೇಮಿ (ಗಝಲ್)

ನೀನು ಇರುಳು ನೋಡಿ ನಗುವ ಚಂದ್ರಮುಖಿ|
ನಾನು ನಿನ್ನ ಸುತ್ತುವ ಪ್ರೇಮಿ ||2||

ನೀನು ಉರಿಯೋ ಒಂದು ಹಣತೆ|
ನಾನು ಹಣತೆಯೊಳಗಣ ತೈಲ ||4||

ನೀನು ಸವಿ ಸವಿಯ ಸಕ್ಕರೆ
ನಾನು ನಿನ್ನ ಮುತ್ತುವ ಇರುವೆ ||6||

ನೀನು ಉಲಿದಾಡುವ ಕೋಗಿಲೆ|
ನಾನು ನಿನಗಾಸರೆ ನಿಲ್ಲೋ ಮಾಮರ  ||8||

ನೀನು ಬೆಳೆಯ ಬಯಸೋ ಬಳ್ಳಿ
ನಾನು ನಿಂತು ಕರೆವ ಹೆಮ್ಮರ ||10||

ನೀನು ಬೀಸಿ ಬರುವ ತಂಗಾಳಿಯಲೆ|
ನಾನು ನಿಂತು ನಲಿವ ದಡದ ಬಂಡೆ ||12||

ಕೊನೆಯಲ್ಲಿ, ನೀನು ನಗುವ ತಾವರೆ|
ನಾನು ನಿನ್ನ ಬಯಸೋ ಪ್ರೇಮಿ ||14||

(ಬರೆದಿದ್ದು ದಂಟಕಲ್ಲಿನಲ್ಲಿ 16-11-2006ರಂದು)

Saturday, November 9, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 3

                  ಇನ್ನುಳಿದಂತೆ ನಮ್ಮ ಮಹಿಳಾ ಮಣಿಯರ ಕಡೆಗೆ ದೃಷ್ಟಿ ಹರಿಸೋಣ.. ಬಿ ಅಲರ್ಟ್..
ಅವರ ತಂಡದ ನಾಯಕಿ ನನ್ನದೇ ಕ್ಲಾಸಿನ ಪೂರ್ಣಿಮಾ ಟಿ. ಹೆಗಡೆ.. ಸೌಮ್ಯ ಸ್ವಭಾವದಾಕೆ.ಸಿಟ್ಟು ಬಂದು ತಿರುಗಿಬಿದ್ದಳು ಎಂದರೆ ಮುಗಿಯಿತು.. ತಕ್ಕ ಮಟ್ಟಿಗೆ  ಹಾಸ್ಯ ಕೂಡ ಕೂಡ ಮಾಡಬಲ್ಲಂತವಳು.
                 ಇನ್ನೊಬ್ಬಳು ಪೂರ್ಣಿಮಾ ಜಿ. ಹೆಗಡೆ. ಈಕೆಯಂತೂ (ಆಗಿನ ದಿನಗಳಲ್ಲಿ) ಒಮ್ಮೆ ಕಿವಿಗೆ ಮೋಬೈಲ್ ಇಟ್ಟರೆ ಮುಗಿಯಿತು. ಒಂದೋ ಕರೆನ್ಸಿ ಖಾಲಿಯಾಗಬೇಕು.. ಅಥವಾ ಎದುರಿಗಿದ್ದವರು ಹುಚ್ಚು ಹಿಡಿದುಬಿಡಬೇಕು.. ತಕ್ಕಮಟ್ಟಿಗೆ ಮುದ್ದು-ಮೊದ್ದು ಎಲ್ಲವೂ ಹೌದು. ಬಿಂದಾಸ್ ಸ್ವಭಾವ..
               ಮತ್ತೊಬ್ಬಾಕೆ ಪವಿತ್ರಾ ಹೆಗಡೆ. 2nd B.Aಯ ಹುಡುಗಿ. ಮುಗ್ದೆ ಅನ್ನುವುದಕ್ಕಿಂತ ಮಿಗಿಲಾಗಿ ಏನೂ ಅರಿಯದವಳು ಅಂದರೆ ಚೆನ್ನ.. ಆಕೆಗೋ ಮಿಸ್ ಸಂಜನಾ ಗಾಂಧಿ ಉರುಫ್ ಪೂಜಾ ಗಾಂಧಿ ಎಂದೇ ನಾನು ಕರೆಯುತ್ತಿದ್ದುದು. ತಕ್ಕಮಟ್ಟಿಗೆ ಹಾಗೆಯೂ ಕಾಣುತ್ತಾಳೆನ್ನಿ..
ಕೊನೆಯದಾಗಿ ಲೇಡೀಸ್ ತಂಡದ ಮತ್ತೊಬ್ಬ ಸದಸ್ಯೆ ತೃಪ್ತಿ ಹೆಗಡೆ. ನೋಡಲಿಕ್ಕೆ ಮಾತ್ರ ಕುಳ್ಳು ಹಾಗೂ ಸೈಲೆಂಟು... ಬಾಯಿ ಬಿಟ್ಟರೆ ಮಾತ್ರ ಆಟಂಬಾಂಬು..ಲಕ್ಷ್ಮಿ ಧಡಲ್ ಅಲ್ಲಲ್ಲಲ್ಲಲ್ಲ `ತೃಪ್ತಿ ದಢಲ್'.. ಬಹುಶಃ ಈ tourಗೆ, ಖುಷಿಗೆ ಈಕೆಯ ಕಾಣಿಕೆಯೂ ಬಹಳ ಹೆಚ್ಚಿದೆ ಅಂದರೆ ತಪ್ಪಿಲ್ಲ.. ಆದರೆ ಇಬ್ಬರು ಒಂದೇ ರೀತಿಯ ಗುಣದವರಲ್ಲಿ ಹೊಂದಾಣಿ ಇರುವುದಿಲ್ಲ ಎಂಬಂತೆ ಪಯಣದ ಆರಂಭದಿಂದ ಕೊನೆಯವರೆಗೂ ಮೆರೆದಿದ್ದು ತೃಪ್ತಿ-ಕೃಷ್ಣಮೂರ್ತಿ ಅವರ ಜಗಳ-ವಾದ-ಗಲಾಟೆ-ಮಾತುಕತೆ-ಕಾಲೆಳೆಯುವಿಕೆ.. ಇತ್ಯಾದಿ ಇತ್ಯಾದಿ. ಟೂರಿನುದ್ದಕ್ಕೂ ಇವರನ್ನು ನಿಯಂತ್ರಿಸಲು ಸಾಧ್ಯವೇ ಆಗಲಿಲ್ಲ..! ಯಾರಿಗೂ..

                               ಮತ್ತೆ ಮರಳಿ ಬಸ್ಸಿನ ಬಗ್ಗೆ ಹೇಳುತ್ತೇನೆ.. ಇನ್ನೂ ಮುಗಿದಿಲ್ಲ  ನೋಡಿ.. ಹುಬ್ಬಳ್ಳಿಯಲ್ಲಿ ರಾಣಿಚನ್ನಮ್ಮ ಟೂರ್ಸ್ & ಟ್ರಾವೆಲ್ಸಿನ ಖಾಲಿ ಬಸ್ಸಿನಲ್ಲಿ ಕುಳಿತ ನಮಗೆ ಹೊತ್ತು ಕಳೆಯಲು ಏನು ಮಾಡಬೇಕು ಎನ್ನುವುದೇ ತೋಚಲಿಲ್ಲ.  ಬಸ್ಸಿನೊಳಗೆ ಇದ್ದ ವೀಡಿಯೋ ಪ್ಲೇಯರ್ರಿನಲ್ಲಿ ಯಾವುದೋ ತಲೆನೋವು ತರುವಂತಕ ಭೀಖರ ಕನ್ನಡ ಸಿನೆಮಾ ಹಾಕಿದ್ದರು.. ಬಹುಶಃ ಯಾವುದೋ ಹಾರರ್ ಸಿನೆಮಾ ಇರಬೇಕು.. ಅದರಲ್ಲಿನ ಹಾರರ್ ಸನ್ನಿವೇಶಗಳನ್ನು ನೋಡಿದರೆ ಭಯದ ಬದಲಾಗಿ ನಗು ಉಕ್ಕುಕ್ಕಿ ಬರುವಂತಿದ್ದರೂ ಚಿತ್ರ ನೋಡಲು ಆಗಲಿಲ್ಲ. ಹೀಗಾಗಿ ನಾವು ಬಸ್ಸಿನ ಕೊನೆಯ ಸೀಟಿನ ಸರದಾರ/ಸರದಾರಿಣಿಯರು ಸೇರಿ `ಇಸಪೀಟ್' ಆಟ ಶುರುಹಚ್ಚಿಕೊಂಡೆವು. ಅದೂ ಸ್ವಲ್ಪ ಸಮಯದಲ್ಲಿಯೇ ಬೇಸರವನ್ನು ತಂದಿತು. ಅಂತ್ಯಾಕ್ಷರಿಯನ್ನು ಹೇಳಿದೆವು. ಅದೂ ಬೋರಾಯ್ತು.. ಕೊನೆಗೆ ಸುದ್ದಿಯನ್ನೂ ಹೇಳಿದೆವು.. ನಮ್ಮ ಸುದ್ದಿಯ ಭರಕ್ಕೆ ಅನೇಕರು ಬಲಿಯಾದರು. ಆದರೆ ಕಿಟ್ಟು-ತೃಪ್ತಿಯರ ವಾದದ ಕಾರಣದಿಂದಾಗಿ ಅದೂ ಕೆಲ ಸಮಯಗಳಲ್ಲಿ ಬೇಸರವನ್ನು ತಂದಿತು.
                     ಈ ಮದ್ಯದಲ್ಲಿಯೇ nature lover ಆದ ನಾನು ದಾರಿಯಲ್ಲಿ ಸಿಗುವ ಊರುಗಳ ಬೋರ್ಡುಗಳನ್ನೆಲ್ಲ ಕುತೂಹಲದಿಂದ ನೋಡಲು ಆರಂಭಿಸಿದ್ದೆ. ನವಲಗುಂದ-ನರಗುಂದ-ಕಿಲಾರ-ಕಲ್ಲೂರು.. ಅದೆಷ್ಟೋ ಉದ್ದುದ್ದದ ಮಜ ಮಜವಾದ ಹೆಸರುಗಳು.. ಅಗಲಗಲ ಊರುಗಳು.. ಊರಿನ ಹೊಟ್ಟೆಯನ್ನು ಸೀಳಿದಂತೆ ಹಾದು ಹೋದ ಹುಬ್ಬಳ್ಳಿ-ಬಿಜಾಪುರ ರಾಷ್ಟ್ರೀಯ ಹೆದ್ದಾರಿ. ಹಳ್ಳಿಗಳಲ್ಲೆಲ್ಲೋ ಬಸ್ಸು ನಿಲ್ಲುತ್ತಿದ್ದಷ್ಟು ಹೊತ್ತು ಕಲರವ. ಉಳಿದ ಸಮಯದಲ್ಲಿ ಬಸ್ಸಿನ ವಂಯ್ಯೋ ಸದ್ದು. ಟೈಂ ಕೀಪ್ ಮಾಡುವ ಕಾರಣದಿಂದ ಬಸ್ಸನ್ನು ಅದರ ಚಾಲಕ ವೇಗದೂತವಾಗಿ ಚಾಲನೆ ಮಾಡುತ್ತಿದ್ದ. ಬಸ್ಸಿನ ಅಕ್ಕಪಕ್ಕ ವೀಕ್ಷಣೆ ಮಾಡಿದರಂತೂ ಕಣ್ಣ ಬಿಂಬದ ದೃಷ್ಟಿ ಹರಿಯುವವರೆಗೂ ಬಯಲು-ಹೊಲಗಳೇ ಕಾಣುತ್ತಿದ್ದವು. ಸೂರ್ಯಕಾಂತಿಯ ಸೊಬಗು, ಹತ್ತಿ ಧಾನ್ಯಗಳ ಬೆಡಗು, ಬೆರಗು. ಕಬ್ಬಿನ ಗದ್ದೆಯ ಮೆರಗು, ನಡುನಡುವೆಯೆಲ್ಲೋ ಭತ್ತದ ಬಣವೆಗಳು, ಮನೆಗಳು, ಕೆರೆಗಳು, ಚಿಕ್ಕ ಚಿಕ್ಕ ಗುಡ್ಡಗಳು, ಬೋನ್ಸಾಯ್ ನಂತಹ ಕುಬ್ಜ ಮರಗಳು, ನಡು ನಡುವೆ ಸಿಗುತ್ತಿದ್ದ ನದಿಗಳು, ಕೆಲವು ಬತ್ತಿದ್ದವು. ಜೊತೆ ಜೊತೆಗೆ ವಿಶೇಷ ಎನ್ನಿಸಿದ್ದು ಬಿಸಿಲ ಬೇಗೆಯ ದಾರಿಯಲ್ಲಿ ಸಾಗುತ್ತಿದ್ದಂತೆ ಹೆದ್ದಾರಿ ಅಕ್ಕಪಕ್ಕದಲ್ಲಿ ನೆಟ್ಟಿದ್ದ ಸಾಲು ಸಾಲು ಮರಗಳು. ಇವುಗಳನ್ನೇ ಎಷ್ಟಂತ ನೋಡೋದು ಸ್ವಾಮಿ.. ನೋಡಿದ್ದನ್ನೇ ನೋಡಿದರೆ ಕೆಲವೊಮ್ಮೆ ಇಷ್ಟವಾಗುತ್ತದೆ ನಿಜ. ಆದರೆ ಹಲವು ಸಾರಿ ಬೇಸರ ಬಂದು ಬಿಡುತ್ತವೆ.ನನಗೂ ಹಾಗೆ ಆಯ್ತು.. ನೋಡಿ ನೋಡಿ ಬೇಸರ ಬಂದೇ ಬಿಟ್ಟಿತು. ಅದಕ್ಕೆ ಇನ್ನಷ್ಟು ಇಂಬೆನ್ನುವಂತೆ ಬಿಸಿಲಿನ ಕಾವು ಹೆಚ್ಚಾಯಿತು. ಇದುವರೆಗೂ ಗ್ಯಾಪ್ ಅಥವಾ ಬ್ರೇಕ್ ಇಲ್ಲದಂತೆ ವಟಗುಟ್ಟುತ್ತಿದ್ದ ಮಹಿಳಾಮಣಿಗಳು ಸುಸ್ತಾಗಿ, ಉತ್ಸಾಹ ರಹಿತರಾಗಿ ಕುಳಿತಿದ್ದರು. ವಿಚಿತ್ರವೋ, ವಿಶಿಷ್ಟವೋ, ಅಥವಾ ಇನ್ಯಾವುದೋ.. ಪೂರ್ಣಿಮಾ ಬೆಂಗ್ರೆಯ ಬೊಬೈಲಿಗೂ ಸುಸ್ತಾಗಿತ್ತೋ ಏನೋ ಗೊತ್ತಿಲ್ಲ.. ಬಹು ಹೊತ್ತಿನ ನಂತರ ಅದೂ ಸುಮ್ಮನಿತ್ತು.

ಬಸ್ಸು ಓಡುತ್ತಲೇ ಇತ್ತು.. ಅದೆಲ್ಲೋ ನಡುವೆ ಬಸ್ಸಿನ ಡ್ರೈವರ್ ಕೂಡ ಬದಲಾದ. ಪರಿಣಾಮವೋ ಎಂಬಂತೆ ಬಸ್ಸಿನ ವೇಗ ಇಮ್ಮಡಿಸಿತು. ಬಸ್ಸಿನಲ್ಲಿ ಕುಳಿತಿದ್ದ ನಮ್ಮ ತೂಕಡಿಕೆ ಮುಮ್ಮಡಿಸಿತು.  ಬಸ್ಸಿನ ತುಂಬ ಇದ್ದವರೆಲ್ಲ ಬಹುತೇಕ ಕುಂಭಕರ್ಣ ಸಿನಿಮಾದ ಹೀರೋಗಳೇ ಆಗಿದ್ದರು. ಇದ್ದವರ ಪೈಕಿ ನನಗೆ ಹಾಗೂ ಕಿಟ್ಟುವಿಗೆ ಮಾಡಲು ಏನೂ ಕೆಲಸವಿರಲಿಲ್ಲ.  ಹಾಗಾಗಿ ಎದ್ದು ಹೋಗಿ ಬಸ್ಸಿನ ಕಂಡಕ್ಟರ್ (ಏಜೆಂಟ್) ಬಳಿ ಅದೂ ಇದೂ ಮಾತಿಗೆ ಪ್ರಾರಂಭಿಸಿದೆವು.. ಕೊನೆಗೆ ಡ್ರೈವರ್ರನ್ನೂ ಮಾತಿಗೆ ಎಳೆದೆವು..
ನನಗೇಕೋ ಬಸ್ಸಿನ ಬಾಗಿಲಲ್ಲಿ ನಿಲ್ಲುವ ಅವ್ಯಕ್ತ ಆಸೆಯುಂಟಾಗಿ ಹೋಗಿ ನಿಂತೆ.. ಆಹ್... ಬೀಸುವ ಗಾಳಿಯ ರಭಸಕ್ಕೆ ಮೈಯೊಡ್ಡಿ ನಿಂತರೆ ಏನು ಆನಂದ.. ಅಂತೂ ಬಹಳ ಖುಷಿಯೇ ಲಭಿಸಿತು ಇದರಿಂದ.. ಈ ನಡುವೆ ಮತ್ತೆ ಉತ್ಸಹವನ್ನು ಗಳಿಸಿಕೊಂಡ ಕಿಟ್ಟು ಮತ್ತೆ ಮಹಿಳಾ ಮಣಿಯರ ಜೊತೆಗೆ ಕಾಡು ಹರಟೆ ಹೊಡೆಯಲು ಹೊರಟುಹೋದ.. ನನಗೋ ಬಸ್ಸಿನ ಕಂಡಕ್ಟರ್ ಬಳಿ ಜೊತೆಗೆ ಮಾತನಾಡುತ್ತಾ, ಬಸ್ಸಿನ ಬಾಗಿಲಲ್ಲಿ ನಿಂತು ಪಯಣಿಸುವುದು ಖುಷಿ ಕೊಟ್ಟಿತ್ತು.. ಪ್ರತಿ ಊರು-ನದಿ ಇವೆಲ್ಲವುಗಳಿಗೂ ಆತನಿಂದ live ಕಾಮೆಂಟರಿ ಕೇಳುತ್ತಿದ್ದೆ.. ವಿಚಿತ್ರವೋ, ವಿಶಿಷ್ಟವೋ.. ಪ್ರತಿಯೊಂದು ಊರಿನ ಇತಿಹಾಸದ ಸಮೇತ ಆತ ಹೇಳುತ್ತಿದ್ದ ಪರಿಗೆ ನಾನು ಬೆರಗಾಗಿದ್ದೆ.. ಇಂವ ಬಸ್ಸಿನ ಕ್ಲೀನರ್ರಾ..? ಏಜೆಂಟನಾ..? ಅಥವಾ ಯಾವುದೋ ಇತಿಹಾಸತಜ್ಞನಾ..? ಆತ ನೀಡುತ್ತಿದ್ದ ಮಾಹಿತಿಗಳು ನನ್ನನ್ನು ಗೊಂದಲಕ್ಕೆ ತಳ್ಳಿದ್ದಂತೂ ಸತ್ಯ. ಮಧ್ಯದಲ್ಲೆಲ್ಲೋ ಮಲಪ್ರಭೆಯೂ ಮರೆಯಾಗಿದ್ದಳು.. ಮಾತಿನ ಭರದಲ್ಲಿ ನನಗದು ಅರಿವೇ ಆಗಿರಲಿಲ್ಲ..

                                   ಹಾಗೆ ನೋಡುತ್ತಿದ್ದೆ.. ಥಟ್ಟನೆ ಒಂದು ಬಹುದೊಡ್ಡ ಸಾಗರ ನಮ್ಮೆದುರು ಕಾಣಿಸಿತು. ಅರೇ ಇದೇನಿದು ಬಯಲ ನಾಡಿನಲ್ಲಿ ಮಹಾಸಾಗರವೇ..? ಯಾಕೋ ನನ್ನ ಕವಿ ಮನಸ್ಸು ಜೀವತಳೆಯುತ್ತಿತ್ತು.. ಇಂತ ಬೆಂಗಾಡಿನಲ್ಲಿ ಸಮುದ್ರ ಎಲ್ಲಿಂದ ಬಂತು..? ಎಂದುಕೊಂಡೆ.. ಉದ್ದಾನುದ್ದ ಕಣ್ಣು ಹರಿಯುವವರೆಗೆ ನೋಡಿದರೂ ಬರೀ ನೀರು.. ನೀರು.. ನೀರು.. ನಡುವೆ ಉದ್ದಾನುದ್ದದ ಸೇತುವೆ..  ಸೇತುವೆ ಮೇಲೆ ನಮ್ಮ ವಾಹನದ ಒಂಟೀ ಪಯಣ.. 
ಇದೇನಿದು ಎಂದು ನಾನು ನನ್ನ ಪಕ್ಕದಲ್ಲಿದ್ದ ಬಸ್ಸಿನ ಏಜೆಂಟ್ ಬಳಿ ಕೇಳಿದೆ. ಅದಕ್ಕವನು ಅದು ಕೃಷ್ಣೆಯ ಅಣೆಕಟ್ಟಿನ ಹಿನ್ನೀರಿನ ಪ್ರದೇಶ ಎಂದು ಹೇಳಿದ. ಕೃಷ್ಣೆ ಮುಳುಗಿಸಿದ ಪ್ರದೇಶದಲ್ಲಿ ನಡುವೆ ನೇರಾನೇರವಾಗಿ ಸೇತುವೆ ನಿರ್ಮಾಣ ಮಾಡಲಾಗಿತ್ತು.. ಆಲಮಟ್ಟಿಯ ಅಗಾಧತೆ ವಿಸ್ಮಯವನ್ನು ಮೂಡಿಸಿತು.. ಅಷ್ಟರ ಜೊತೆಗೆ ಇದ್ದಕ್ಕಿದ್ದಂತೆ  ಈ ಸೇತುವೆ ಮುರಿದುಬಿದ್ದರೆ ಏನು ಮಾಡೋದು.. ದೇವಾ... ಮನಸ್ಸಿನಲ್ಲಿ ಯೋಚಿಸಿದಂತೆ ಭಯ ಉಂಟಾಯಿತು.. ಸೇತುವೆಯ ಉದ್ದ ಸರಿಸುಮಾರು 3 ಕಿಲೋಮೀಟರ್ ಅಂತೆ.. ಅಬ್ಬಾ ಅದೆಷ್ಟು ಉದ್ದ..? 3*1000 ಮೀಟರ್ =3000 ಮೀಟರ್ ಎಂದು ಹಲವಾರು ನಮೂನಿಯ ಲೆಕ್ಖವನ್ನೆಲ್ಲ ಮಾಡಿದೆ.
ಬಸ್ಸಿನಲ್ಲಿದ್ದ ಹಲವರು 1 ರುಪಾಯ್, 2 ರುಪಾಯ್, 5 ರು. ಕೆಲವರು 10 ರು. ಎಂಬಂತೆ ತೆಗೆದು ತೆಗೆದು ಆ ನೀರಿಗೆ ತೂರುತ್ತಿದ್ದರು. ಹಾಗೆ ಮಾಡಿದರೆ ಒಳ್ಳೆಯದಾಗುತ್ತದಂತೆ.. ಕೃಷ್ಣೆ ತೃಪ್ತಳಾಗುತ್ತಾಳಂತೆ.. ನಾವು ಮಾಡುವ ಪಯಣ ಸುರಳೀತವಾಗಿ ನಡೆಯುತ್ತದಂತೆ.. ಯಾವುದೇ ಅಡ್ಡಿ ಆತಂಕ ಬರದಂತೆ ಕೃಷ್ಣೆ ಕಾಪಾಡುತ್ತಾಳಂತೆ.. ಹಾಗಂತ ಅವರ ನಂಬಿಕೆಯೆಂದು ಏಜೆಂಟ್ ಹೇಳಿದ.. ನಾನೂ ಹಾಗೆ ಮಾಡಿದೆ...

(ಮುಂದುವರಿಯುತ್ತದೆ)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ : ಗುಮ್ಮಟ ನಗರಿ, ಬಾಗೇವಾಡಿ ಹಾಗೂ ಸೊಳ್ಳೆಯ ರೂಮು)

Friday, November 8, 2013

ಹನಿ-ಮಿನಿ ಚುಟುಕಗಳು

66.ವ(ವೇ)ದನೆ

ಹೇ ಚಂದಿರ ವದನೆ
ನೀ ಎದುರಿದ್ದಾಗ ನನ್ನದು
ನಗುವೆ ನಯನೆ |
ದೂರವಾದರೆ ಮಾತ್ರ
ಹೇಳಿಕೊಳ್ಳಲಾಗದ ವೇದನೆ ||


67.ಚಿನ್ಹೆ

ಮಳೆ ಪ್ರೀತಿಯ
ಚಿನ್ಹೆಯಾದರೆ
ಸಂಸಾರದ್ದು
ಗುಡುಗು-ಸಿಡಿಲು
ಒಮ್ಮೊಮ್ಮೆ ಮಿಂಚು|
ಯಾವಾಗಲೂ ಪ್ರವಾಹ ||

68.ತಮ್ಮ

ಎಂತ ವಿಚಿತ್ರ ಅಲ್ವಾ |
ಬಿದಿರಿನ ತಮ್ಮ
ದೂರ್ವೆಯಂತೆ ||

69.ಕಾರಣ

ನೋಡೆ ಸಖಿ
ಚಂದಿರ ಅಳುತ್ತಿದ್ದಾನೆ..|
ಯಾಕಂದರೆ ಅಲ್ಲಿಗೂ
ಮಾನವ ಕಾಲಿಟ್ಟಿದ್ದಾನೆ ||

70.ನಗು way

ನಗುವಿಗೆ ಅದೆಷ್ಟು ತಾಕತ್ತು..
ನಗಿಸಿ-ನಗಿಸಿ ಸುಸ್ತು ಮಾಡಿ
ಕೊನೆಗೊಮ್ಮೆ ಕಣ್ಣಲ್ಲಿ
ನೀರನ್ನೂ ತರಿಸಿಬಿಡುತ್ತೆ

Tuesday, November 5, 2013

ಆನೂ ಪ್ಯಾಟಿಗೆ ಬರ್ತಿದ್ದಿ

ಆನೂ ಪ್ಯಾಟಿಗೆ ಬರ್ತಿದ್ದಿ
ಅಪ್ಪಯ್ಯಾ, ಆನೂ ಜಾತ್ರಿಗೆ ಬರ್ತಿದ್ದಿ ||

ಜಾತ್ರೆಯ ನೋಡವ್ವು,
ತೊಟ್ಟಿಲು ಹತ್ತವ್ವು,
ಭಾರೀ ಚೊಲೋ ಇರುವ
          ಸರ್ಕಸ್ಸು ನೋಡವ್ವು ||

ಬಳೆ ಪ್ಯಾಟೆಲಿ ತಿರುಗವ್ವು,
ಬೆಂಡು-ಬತ್ತಾಸ್ ಕೊಳ್ಳವ್ವು,
ಲಕ್ಷ್ಮೀ ಟಾಕೀಸ್ನಲ್ಲಿ ಹೊಸ
         ಪಿಚ್ಚರ್ ನೋಡವ್ವು ||

ಹೊಸ ಅಂಗಿ ಕೊಳ್ಳವ್ವು,
ಪ್ಯಾಟೇಲಿ ತಿರುಗವ್ವು,
ಬೇಗ ಬೇಗನೆ ನಾವು
          ಜಾತ್ರಿಗೆ ಹೋಪನ  ||

ಮಾರಿ ಗದ್ದುಗೆ ನೋಡವ್ವು
ಹಣ್ಣು ಕಾಯಿ ಮಾಡ್ಸವ್ವು,
ರಗಳೆ ಮಾಡೋ ಮಾಣಿಗೆ
          ತುತ್ತೂರಿ ತಗಳವ್ವು ||

ಕೊಟೆಕೆರೆಲಿ ತಿರುಗವ್ವು,
ನಟರಾಜ ರೋಡಲ್ ಹೋಗವ್ವು
ಪ್ಯಾಷನ್ ಪ್ಯಾಲೇಸಲ್ಲಿ 
           ಹೊಸ ಅಂಗಿ ಕೊಳ್ಳವ್ವು  ||

(ಆತ್ಮೀಯರೇ... 
ಪ್ರದ್ತುತ ಇದೂ ಒಂದು ಹವ್ಯಕ ಗೀತೆ.. ಹವ್ಯಕ ಹಾಡುಗಳನ್ನು ಕೇಳುವ ಹುಚ್ಚಿರುವ ನನಗೆ ಅದೇ ಧಾಟಿಯಲ್ಲಿ ಹಾಡೊಂದನ್ನು ರಚನೆ ಮಾಡುವ ಹುಚ್ಚು ಹತ್ತಿ ಬರೆದಿದ್ದು. ತನ್ನ ತಂದೆಯ ಬಳಿ ಶಿರಸಿಯ ಜಾತ್ರೆಗೆ ಹೋಗೋಣ ಎಂದು ಹಟ ಮಾಡುವ ಚಿಕ್ಕ ಹುಡುಗಿಯ ಭಾವನೆ ಈ ಹಾಡಿನ ಮೂಲಕ ವ್ಯಕ್ತವಾಗಿದೆ. ಹಾಸ್ಯದ ಈ ಹಾಡನ್ನು ನಮ್ಮೂರಿನ ಹಳ್ಳಿ ಹಾಡುಗಳ ಸರದಾರಿಣಿ ಕಮಲಾಕ್ಷ್ಮೀ ಹೆಗಡೆ ಅವರಿಗೆ ನೀಡಿದ್ದೆ. ಸಿಟ್ಟು ಬಂದ ಆಕೆ ಎಂತೆಂತಾ ಗಬ್ ಗಬ್ ಹಾಡು ಬರಿತ್ಯೋ ಎಂದು ಹೇಳಿದ್ದರೂ ನಂತರ ಅದನ್ನು ಹಾಡುವ ಪ್ರಯತ್ನವನ್ನೂ ಮಾಡಿದ್ದಳು..ಚಿಕ್ಕ ಮಕ್ಕಳ ಮನಸ್ಸಿನ ಭಾವನೆಯನ್ನು ತಿಳಿಸುವ ಹಳ್ಳಿ ಹಾಡು ಇದು.) (ಇದನ್ನು ಶಿರಸಿಯಲ್ಲಿ 23-01-2008ರಂದು ಬರೆದಿದ್ದೇನೆ.)

Friday, November 1, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 2

ವಿಶಿಷ್ಟ ಸಾಮ್ರಾಟ್ ಬಸ್ಸು...


ನನ್ನ ಈ ಪ್ರವಾಸ ಕಥನದಲ್ಲಿ ವಿಶೇಷ ಪಾತ್ರವಾಗಿದ್ದು ಈ ಸಾಮ್ರಾಟ್ ಬಸ್ಸಿ ಅಂದರೂ ತಪ್ಪಿಲ್ಲ. ಈ ಬಸ್ಸಿನಲ್ಲಿ ನಾವು ಅಜಮಾಸು 8 ಗಂಟೆಗಳ ಕಾಲ ಪ್ರಯಾಣ ಮಾಡಿದ ಕಾರಣ ಅದರ ನೆನಪಿನ್ನೂ ಹಸಿಹಸಿಯಾಗಿದೆ. ಶಿರಸಿಯಿಂದ ಹುಬ್ಬಳ್ಳಿ ಹಾಗೂ ಹುಬ್ಬಳ್ಳಿಯಿಂದ ದೂರದ ಗುಮ್ಮಟ ನಗರಿ ಬಿಜಾಪುರದ ವರೆಗೆ ಈ ಬಸ್ಸು ನಮ್ಮ ಸಾಥಿಯಾಗಿತ್ತಲ್ಲ ಅದರ ಪಯಣವೇ ಮಜವಾಗಿದೆ.
ಶಿರಸಿಯಲ್ಲಿ ಬಸ್ಸು ಏರಿದಾಗ ಅದರ ಸೀಟೆಲ್ಲ ಖಾಲಿ ಖಾಲಿಯಾಗಿದ್ದವು. ಬಸ್ಸಿನಲ್ಲಿದ್ದ ಟಿವಿಯಲ್ಲಿ ಕ್ರೇಜಿ ಸ್ಟಾರ್ ನ ಬಣ್ಣದ ಗೆಜ್ಜೆ ಚಿತ್ರ ಮೂಡಿಬರುತ್ತಿತ್ತು. ಯಾಕೋ ಗೊತ್ತಿಲ್ಲ ಆ ಹೀರೋ ಅಂದರೆ ನಮ್ಮ ಬಳಗದಲ್ಲಿದ್ದ ತೃಪ್ತಿಗೆ ಆಗದು. ಅದನ್ನು ತಿಳಿದುಕೊಂಡ ಕೃಷ್ಣಮೂರ್ತಿ ಆಕೆಯ ಜೊತೆಗೆ ಕೀಟಲೆಗಿಳಿದ. ಮಾತಿನ ಮೂಲಕ ಛೇಡಿಸಹತ್ತಿದ. ತೃಪ್ತಿ ಆ ಹೀರೋನನ್ನು ಬೈಯ್ಯಲು ಆರಂಭಿಸಿದರೆ ಕಿಟ್ಟು ಅವನನ್ನು ಹೊಗಳುವುದು, ಆಕೆ ಆತನ ಸಿನಿಮಾ ಡಬ್ಬಾ ಇದೆ ಎಂದರೆ ಆತ ಇಲ್ಲ ಅದು ಚನ್ನಾಗಿದೆ ಎನ್ನುವುದು..ಆತನ ಹಾಡುಗಳೆಲ್ಲ ನನಗೆ ಪಂಚಪ್ರಾಣ. ಹಾಡನ್ನು ನೋಡುತ್ತಿದುವುದೇ ಹೊಸದೊಂದು ಕ್ರೇಜ್ ಹುಟ್ಟುಹಾಕುತ್ತದೆ ಎನ್ನುವುದು.. ಈ ಮುಂತಾಗಿ ಆಕೆಯನ್ನು ಛೇಡಿಸುತ್ತಿದ್ದ.
ಚಿತ್ರ ಮುಂದುವರಿದಂತೆಲ್ಲ ಬಸ್ಸು ರಶ್ಶೋ ರಶ್ಶಾಗತೊಡಗಿತು. ಕೊನೆಗೆ ಇದೇ ಜನಜಂಗುಳಿಯ ಪ್ರತಾಪದಿಂದಲೇ ಬಣ್ಣದ ಗೆಜ್ಜೆಯ ಕೊನೆ ಕೊನೆಯ ಝಲಕುಗಳನ್ನು ಕಣ್ಣಲ್ಲಿ ತುಂಬಿಕೊಳ್ಳಲು ಆಗಲೇ ಇಲ್ಲ.
ಮಧ್ಯದಲ್ಲೆಲ್ಲೋ, ಮುಂಡಗೋಡಿರಬೇಕು. ಪ್ರಯಾಣಿಕನೊಬ್ಬ ಬಸ್ ಕಂಡಕ್ಟರ್ ಬಳಿ ಜಗಳ ಪ್ರಾರಂಭಿಸಿದ. ಚಿಲ್ಲರೆ ಜಗಳ ತಾರಕಕ್ಕೇರುವ ಹೊತ್ತಿಗೆ ಪ್ರಯಾಣಿಕರು ತಮ್ಮ ಜೊತೆಗಾರನ ಮೇಲೆ ತಿರುಗಿಬಿದ್ದರು. ಪರಿಣಾಮವಾಗಿ ಆತ ಗಪ್ ಚುಪ್ ಆದ. ಹಾಳಾದ ರಸ್ತೆ, ಚಾಲಕನ ನಿಯಂತ್ರಣ ಮೀರಿದ ವೇಗ.. ಇವುಗಳ ಪರಿಣಾಮ ಶಿರಸಿಯಲ್ಲಿ ತಿಂದಿದ್ದ ಪುರಿ ಭಾಜಿ ಹೊಟ್ಟೆಯಲ್ಲಿ ಕಲಸು ಮೇಲೋಗರವಾಗಿದ್ದರೂ ಹುಬ್ಬಳ್ಳಿಯನ್ನು ತಲುಪುವ ವೇಳೆಗೆ ಸಂಪೂರ್ಣ ಜೀರ್ಣೋದ್ಧಾರಗೊಂಡಿತ್ತು.

ಹುಬ್ಬಳ್ಳಿಯಿಂದ ಬಿಜಾಪುರದವರೆಗೆ...
ಇದು ಅನಾಮತ್ತು ಐದೂವರೆ ಗಂಟೆಗಳ ಮ್ಯಾರಥಾನ್ ಪಯಣ. ಬಯಲುಸೀಮೆಯಲ್ಲಿ ವಾಹನದಲ್ಲಿ ಕುಳಿತು ಸಾಗುವುದಕ್ಕೂ ಸಹನೆ ಬೇಕು. ಸುಮಾರು 350 ಕಿ.ಮಿ ದೂರದ ಈ ಪಯಣಕ್ಕೆ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕ ಶಕ್ತಿಯೂ ಅಗತ್ಯ. ಹುಬ್ಬಳ್ಳಿಯಲ್ಲಿ ಟಿಪಿಕಲ್ ಬೈಲು ಸೀಮೆಯ ಖಾರದ ಊಟ ಮಾಡಿ 11.30ಕ್ಕೆ ರಾಣಿ ಚನ್ನಮ್ಮಾ ಬಸ್ಸನ್ನೇರಿದೆವು. ಅದರ ಜೊತೆಯಲ್ಲಿಯೇ ನಮ್ಮ ಅಷ್ಟದಳ  ಹಾಗೂ ಒಂದು ದಳದಳ ದ  ಗೌಜು ಬಸ್ಸಿನ ಟಾಪನ್ನೂ ಮೀರಿ ಆಚೆಗೆ ಹಾಯ್ದಿತ್ತು. ಬಸ್ಸಿನಲ್ಲಿ ಅಷ್ಟು ಜನರಿರಲಿಲ್ಲ. ಹಾಗಾಗಿ ಕೊನೆಯ 8 ಸೀಟುಗಳು ನಮಗಾಗಿಯೇ ಎಂಬಂತೆ ಖಾಲಿಖಾಲಿಯಾಗಿದ್ದವು. ನಮ್ಮ ಗೌಡರನ್ನು ಮುಂದೆಲ್ಲೋ ಒಂದು ಸೀಟಲ್ಲಿ ಒಬ್ಬಂಟಿಯಾಗಿ ಕುಳ್ಳಿರಿಸಿ ನಾವು ಎಮಟೂ ಜನರು ಕೊನೆಯ ಸೀಟಿನಲ್ಲಿ ಆಸೀನರಾಗುವ ವೇಳೆಗೆ ಬಸ್ಸಿನಲ್ಲಿ ಪೋಂ.. ಪೋಂ..

ಇಷ್ಟರ ಜೊತೆಗೆ  ನಮ್ಮ ಎಂಟೂ ಜನರ ಗುಣಾವಗುಣಗಳನ್ನು ಪರಿಚಯ ಮಾಡಿಕೊಡದಿದ್ದರೆ ತಪ್ಪಾಗುತ್ತದೆ. ಮೊದಲು ನನ್ನಿಂದಲೇ ಶುರುವಾಗಲಿ..ನಾನೊಂಥರಾ ಇದ್ದವರಲ್ಲಿಯೇ ಭಾವಾರ್ಥಿ. ಜೊತೆಗೆ nature lover. ಜೊತೆಗೆ ಈಗ ಬಾಯ್ಸ್ ಟೀಮಿನ ಕ್ಯಾಪ್ಟನ್. ಹರಟೆಗೆ ಹರಟೆ. ಕೊರೆತಕ್ಕೆ ಸಮಯ ಸಿಕ್ಕಾಗಲೆಲ್ಲ ಕೊರೆತ. ಹಾಡಿಗೆ ಹಾಡು ಹಾಗೆಯೇ ಸಿಟ್ಟಿಗೆ ಸಿಟ್ಟು ನನ್ನ ಆಸ್ತಿ. . ಜೊತೆಗೆ ಇನ್ನೂ ಹತ್ತು ಹಲವು ಗುಣಗಳಿವೆ.. ಆದರೆ ಇಲ್ಲಿ ಅದು ಅನ್ ಇಂಟರೆಸ್ಟಿಂಗ್ ಬಿಡಿ..
ಇನ್ನು ನಮ್ಮ ಟೀಂ ಎಂಇಎಸ್ ಬಗ್ಗೆ ಹೇಳಬೇಕೆಂದರೆ ಎರಡನೇಯವನಾಗಿ ಆನಂದ ನಾಯ್ಕ. ನಮ್ಮಲ್ಲಿದ್ದವರ ಪೈಕಿ ಥಂಡು ಥಂಡು ಕೂಲ್ ಕೂಲ್.. ಬಸ್ಸಿನಲ್ಲಿ ಮಾತನಾಡದೇ ತನ್ನದೇ ಲೋಕದಲ್ಲಿ ತಾನು ಕುಳಿತು ಕಣ್ಣಿನಲ್ಲಿಯೇ ಕನಸು ಕಾಣುತ್ತಿರುವಂತಹ ವ್ಯಕ್ತಿ. ಜೊತೆಗೆ ಎಲ್ಲರಿದ್ದರೂ ಏಕಾಂಗಿ.. ಥಟ್ಟನೆ ನೋಡಿದರೆ ಇವನಿಗೆ ಲವ್ ಫೇಲ್ಯೂರಾ ಎಂದು ಭಾವಿಸುವಷ್ಟು ಒಬ್ಬಂಟಿ. ಒಂಥರಾ ಗುಜರಿಗೆ ಹಾಕಿದ ಬಸ್ಸಿನ ಹಾಗೇ.. ನಮ್ಮ ಜೊತೆಗೆ ಪಯಣ ಮಾಡಿದ ಬಡಪಾಯಿ. ಅಫ್ಕೋರ್ಸ್..LOVE ಅಂದರೆ ಪರಮ ಕುತೂಹಲ. ನಾವು ಲವ್ವಿನ ಕುರಿತು ಹೇಳುತ್ತಿದ್ದ ಸತ್ಯ ಹಾಗೂ ಸುಳ್ಳಿನ ಸುದ್ದಿಗಳನ್ನೆಲ್ಲ ನಂಬಿಬಿಟುವಷ್ಟು ಒಳ್ಳೆಯವನು. ಇನ್ನೊಂದು ಈತನ ದೊಡ್ಡಗುಣವೆಂದರೆ ಅನುಕರಣೆ. ಎಂತವರನ್ನಾದರೂ ಬೆಹತರೀನ್ ಆಗಿ ಅನುಕರಣೆ ಮಾಡುವ ಈತನನ್ನು ನಮ್ಮ ಪಯಣದಲ್ಲಿ ಅನೇಕ ಸಾರಿ ಅನುಕರಣೆಯ ಹಾದಿಗಿಳಿಸಿ ನಮ್ಮೊಳಗೊಂದಾಗುವಂತೆ ಮಾಡಿದ್ದು ನಮ್ಮ ದೊಡ್ಡ ಸಾಧನೆಗಳಲ್ಲಿ ಒಂದು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ನಾಗಭೂಷಣ ಗೌಡರ ತೀರ್ಥ ಪ್ರಸಾದ ಸೇವನೆ ಯ ನಟನೆಯನ್ನು ಅತ್ಯತ್ತಮವಾಗಿ ಅನುಕರಣೆ ಮಾಡಿ ತೋರಿಸಿ ನಮ್ಮಿಂದ ಅಭಿನವ ಕಲಾವಿದ ಎನ್ನುವ ಬಿರುದನ್ನು ಪಡೆದುಕೊಂಡಿದ್ದ..
ಉಳಿದ ಇನ್ನಿಬ್ಬರು ಹುಡುಗರ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಒಬ್ಬ ಧಡಿಯ ನವೀನ ಪಾವಸ್ಕರ ಇನ್ನೊಬ್ಬ ಲಂಬೂ ಕಿಟ್ಟಿ. ನಮ್ಮ ಈ ಪ್ರವಾಸ ಕಥನ -ಯಾನಕ್ಕೆ ವಿಶೇಷ ಅರ್ಥ, ಮೆರಗು ಬಂದಿದ್ದೇ ಈ ಇಬ್ಬರಿಂದ. ಮೊದಲು ನವೀನನ ಪ್ರವರ ಹೇಳಿಕೊಂಡು ಮುಂದಕ್ಕೆ ಸಾಗುತ್ತೇನೆ. ಇಂವ ನವೀನ ಪಾವಸ್ಕರ. ವಯಸ್ಸಿಗೆ ಮೀರಿದ ದೇಹ ಈತನ  ಭೌಗೋಳಿಕ ಲಕ್ಷಣ. ಹೋಲಿಸಿ ಹೇಳಬೇಕೆಂದರೆ ದೊಡ್ಡ ವೋಲ್ವೋ ಲಾರಿಯಂತವನು. ಅಂತಹ ದೈತ್ಯ ದೇಹಕ್ಕೆ ತಕ್ಕ ಹೊಟ್ಟೆ ಇರದಿದ್ದರೆ ಹೇಗೆ ಹೇಳಿ..? ಜೊತೆಗೆ ಗಟ್ಟುಮುಟ್ಟಾದ ಆಳುವೂ ಹೌದು. ಪ್ರೀತಿಗೆ ಜೈ. ಜಗಳ-ಗಲಾಟೆ ಹೊಡೆದಾಟಕ್ಕೂ ಸೈ. ಈತ ಸಾಮಾನ್ಯವಾಗಿ ನಡೆದುಕೊಂಡರೂ ಎದುರಿನವರಿಗೆ ಹುಚ್ಚಾಪಟ್ಟೆ ನಗು ಹುಟ್ಟುತ್ತದೆ. ಈತನ ಹಾವ-ಭಾವ-ನಡೆ-ನುಡಿಗಳೇ ನಮಗೆ ಆಕರ್ಷಣೀಯ ಎನ್ನಿಸುತ್ತದೆ. ಇವುಗಳೇ ನಮ್ಮ ಪಯಣಕ್ಕೆ ವಿಶೇಷವಾದ ಮೆರಗಿನ ಜೊತೆಗೆ ಖುಷಿಯನ್ನು ನೀಡಿದ್ದು ಎಂದರೆ ತಪ್ಪಿಲ್ಲ. ಚನ್ನಾಗಿ ಚೆಸ್ ಆಡುತ್ತಾನೆ. ಆನಂದ ನಾಯ್ಕ ಹಾಗೂ ನವೀನ ಪಾವಸ್ಕರ ಸೇರಿದರೆ 3-4 ಗಂಟೆಗಳ ಕಾಲ ಚೆಸ್ ಆಡಿಬಿಡಬಲ್ಲರು. ನೋಡುಗರು ಹಣ್ಣಾಗುವುದಂತೂ ಗ್ಯಾರಂಟಿ.
ಇನ್ನುಳಿದವನೆಂದರೆ ಕಿಟ್ಟು. ಅಲಿಯಾಸ್ ಕರಷ್ಣಮೂರ್ತಿ ದೀಕ್ಷಿತ್ ಉರುಫ್ ದೀಕ್ಷಿತ ಅಥವಾ ಕೆಡಿ. ಈತನ ಬಗ್ಗೆ ಹೇಳಬೇಕೆಂದರೆ ಕಷ್ಟದ ಕೆಲಸವೂ ಹೌದು. Onle line ನಲ್ಲಿ ಹೇಳಬೇಕೆಂದರೆ ಈತನೊಬ್ಬ ಡಿಫರೆಂಟ್ ಫೆಲ್ಲೋ.. ಬಹುಶಃ ಈತ ನಮ್ಮ ಪಯಣದಲ್ಲಿಲ್ಲ ಎಂದಾಗಿದ್ದರೆ ನಾನು ಈ ಪ್ರವಾಸ ಕಥನವನ್ನು ಬರೆಯುತ್ತಿಲೇ ಇರಲಿಲ್ಲವೇನೋ..
ಕಿಟ್ಟು/ಕಿಟ್ಟಿಯ ಬಗೆಗ ಹೇಳಬೇಕಾದರೆ ಸ್ವಲ್ಪ ಫ್ಲಾಷ್ ಬ್ಯಾಕ್ ಗೆ ಹೋಗಿ ಬರುತ್ತೇನೆ. ಮನಸ್ಸಿನಲ್ಲಿ ನಿಮ್ಮಿಷ್ಟದ ಫ್ಲಾಷ್ ಬ್ಯಾಕಿನ ಸಿನೆಮಾ ನೆನಪು ಮಾಡಿಕೊಳ್ಳಬಹುದು. ನಿಜವಾಗಿಯೂ ಹೇಳಬೇಕೆಂದರೆ ಕಿಟ್ಟುವನ್ನು ಕಾಲೇಜಿನ CHESS ತಂಡದ ಆಟಗಾರನಾಗಿ ಕರೆದೊಯ್ಯಲು ಆಟದ ಗಂಧಗಾಳಿಯೇ ಗೊತ್ತಿರದಿದ್ದ ಎನ್. ಎಚ್. ಗೌಡರಿಗೆ ಸುತಾರಾಮ್ ಇಷ್ಟವಿರಲಿಲ್ಲ. ನಾವು ಹೊರಡಲು ಎರಡು ಮೂರು ದಿನಗಳಿರುವ ವರೆಗೂ ಆತ ಬರುವುದೋ ಇಲ್ಲವೋ ಎನ್ನುವ ಹೊಯ್ದಾಟ ನಡೆದೇ ಇತ್ತು. ಕೋಚ್ ಎಂ. ಕೆ. ಹೆಗಡೆಯವರೂ ಈ ಕುರಿತು ಸ್ಪಷ್ಟ ನಿರ್ಧಾರ ಮಾಡಲು ಅನುಮಾನಿಸುತ್ತಿದ್ದರು. ಆದರೆ ನನಗೆ ಮಾತ್ರ ಕಿಟ್ಟುವನ್ನು ಕರೆದೊಯ್ಯಲೇ ಬೇಕು ಎಂಬ ಭಾವನೆ ಬಂದಿತ್ತು. ಇದಕ್ಕೆ ಕಾರಣಗಳು ಹಲವಿದ್ದವು. ಕಿಟ್ಟುವಿನ ಆಟ ಚನ್ನಾಗಿತ್ತು. ಕೆಲವು ಸಾರಿ ಸುಲಭದಲ್ಲಿ ಮ್ಯಾಚ್ ಸೋತಿದ್ದರೂ ಆತನ ಮೇಲೆ ಒತ್ತಡ ಬಿದ್ದಂತೆಲ್ಲ ಗೆಲ್ಲುತ್ತಾ ಹೋಗುವ ಗುಣವಿತ್ತು. ಟೆನ್ಶನ್ ಮಾಡಿಕೊಳ್ಳದೇ ಆಡುವುದು ಆತನ ವಿಶೇಷ ಗುಣ. ಎಂತದ್ದೇ ಸೋಲಿನ ಸಂದರ್ಭವಿರಲಿ ನಗುತ್ತಾ, ಎದುರಾಳಿಯನ್ನು ನಗಿಸುತ್ತಾ ಆಟವಾಡುವುದು ಆತನಿಗೆ ಒಲಿದು ಬಂದ ಗುಣ ಎಂದರೂ ತಪ್ಪಿಲ್ಲ ಬಿಡಿ. ಜೊತೆಯಲ್ಲಿ ಆಟಕ್ಕೆ ಸಡನ್ ತಿರುವು ನೀಡಬಲ್ಲವನಾಗಿದ್ದ.  ಇದ್ದಕ್ಕಿದ್ದಂತೆ ಪಿನ್ ಇಟ್ಟು ಢಂ ಅನ್ನಿಸುವ ಆತನ ಆಟಕ್ಕೆ ಹಲವಾರು ಸಾರಿ ನಾನೇ ಬಲಿಯಾಗಿದ್ದೆ.!
ಅಲ್ಲದೇ ಈತ ನನ್ನ ಪರಮಾಪ್ತ ಮಿತ್ರ. ನಾನು-ರಾಘು-ಕಿಟ್ಟು ಕಾಲೇಜಿನಲ್ಲಿ ಪರಮಾಪ್ತ ದೋಸ್ತರು ಎಂಬುದು ಕಾಲೇಜಿನ ಕಾರಿಡಾರಿನಲ್ಲಿ ಕೊಬ್ಬಿನಿಂದ ಬೆಳೆದಿದ್ದ ಆಕೇಸಿಯಾ ಮರಗಳಿಗೂ ಗೊತ್ತಿದ್ದವು. ಆತ ಇಂತಹ ಪಯಣದಲ್ಲಿ ಜೊತೆಗೂಡಿದರೆ ಪ್ರಯಾಣ ಖುಷಿಯಾಗಿರುತ್ತದೆ. ಪ್ರಯಾಣ ಹಸಿ ಹಸಿರಾಗಿ ನೆನಪಿನಾಳದಲ್ಲಿ ನಿಲ್ಲಬೇಕೆಂದರೆ ಕಿಟ್ಟುವಿನಂತಹವರು ಒಬ್ಬರಾದರೂ ಇರಬೇಕು ಎಂದು ನನಗೆ ಅನ್ನಿಸಿತ್ತು. ಪರಮಾಪ್ತ ದೋಸ್ತ ಬರ್ತಾನೆ ಅಂದ್ರೆ ಯಾರು ಬಿಡ್ತಾರೆ ಹೇಳಿ..?
ಇಂತಹ ಕಾರಣಗಳೇ ನನಗೆ ಕಿಟ್ಟುವಿನ ಅಗತ್ಯತೆಯನ್ನು ಎದ್ದು ತೋರಿಸುವಂತೆ ಮಾಡಿದವು. ಅಲ್ಲದೇ team ನ captain ಆದ ನನಗೆ ಆತನೊಬ್ಬ ಸಮರ್ಥ ಹಾಗೂ ಅತ್ಯಗತ್ಯ ಆಟಗಾರನಂತೆ ಕಾಣಿಸಿದ. ಹಾಗಾಗಿಯೇ ನಮಗೆ ಚೆಸ್ ಕಲಿಸಿದ ಎಂ. ಕೆ. ಹೆಗಡೆಯವರ ಬಳಿ ಚಿಕ್ಕ ಚಾಲೆಂಜೊಂದನ್ನು ಮಾಡಿ ಅವನನ್ನು ಕಳಿಸಲು ಕೇಳಿದೆ. ಬಗಲ್ ಮೆ ದುಷ್ಮನ್ ಎನ್ನುವಂತೆ ಕಿಟ್ಟು ಬರುವುದು ನವೀನ ಪಾವಸ್ಕರನಿಗೆ ಇಷ್ಟವೇ ಇರಲಿಲ್ಲ. ನೀರಾರು ಸಾರಿ ಅಂವ ಬ್ಯಾಡ.. ಅಂವ ಬಂದರೆ ಹೊಗೆ ಗ್ಯಾರಂಟಿ ಎಂದು ನನ್ನಲ್ಲಿಯೂ, ಕ್ರೀಡಾ ವಿಭಾಗದ ಮುಖ್ಯಸ್ಥರಾಗಿದ್ದ ನಾಗಭೂಷಣ ಗೌಡರ ಬಳಿಯೂ ಹೇಳಿದ್ದ. ಆದರೆ ನಾನು ಪಟ್ಟು ಸಡಿಲಿಸಿರಲಿಲ್ಲ. ಅವನಿಂದಾಗಿ ತಂಡ ಸೋತರೆ ಅದಕ್ಕೆ ನಾನೇ ಹೊಣೆಯಾಗುತ್ತೇನೆ ಎಂದೂ ಮಾತಿನ ಭರದಲ್ಲಿ ಹೇಳಿಬಿಟ್ಟಿದ್ದೆ. ಕೊನೆಗೆ ಒಲ್ಲದ ಮನಸ್ಸಿನಿಂದ ಕಿಟ್ಟುವನ್ನು ಟೀಂ ಮೆಂಬರ್ ಆಗಿ ಕಳಿಸಿದ್ದರು.
ಆದರೆ ನನ್ನ ನಿರೀಕ್ಷೆ ಹುಸಿಯಾಗಲಿಲ್ಲ ಎಂಬುದು ಮುಂದಕ್ಕೆ ನಿಮಗೆ ಗೊತ್ತಾಗುತ್ತದೆ.. ಓದಿ.. ಆತ ನಮ್ಮ ಪಯಣದಲ್ಲಿ ಆಟವೊಂದೇ ಅಲ್ಲದೇ ಎಲ್ಲ ಕಡೆಗಳಲ್ಲಿಯೂ ಟ್ವಿಂಕಲ್ ಟಸ್ಟಾರ್ ಆಗಿ ಮೆರೆದುಬಿಟ್ಟ. ಕೊನೆಗೊಮ್ಮೆ ನನ್ನ ಚಾಲೆಂಜನ್ನು ಉಳಿಸಿದ ಕೀರ್ತಿಯೂ ಈತನಿಗೆ ಸಲ್ಲಲೇ ಬೇಕು. ಈತನ ಒಡನಾಟದಿಂದ ಪಯಣದ ನಡುವೆ ಅನೇಕ ಗಂಭೀರ ಸಮಸ್ಯೆಗಳು ನಮ್ಮನ್ನು ಹಿಡಿಬಿಡದೇ ಕಾಡಿದರೂ ತನ್ನಿಂದ ತಾನೇ ಸಾಲ್ವ್ ಆಗಿ ಹೋದವು. ಟೆನ್ಶನ್ ಸಮಯದಲ್ಲಿ ಆತ ಉಕ್ಕಿಸುತ್ತಿದ್ದ ಟೈಮಿಂಗ್ಸ್ ಭರಿತ ಡೈಲಾಗ್ ಹಾಗೂ ಹಾಸ್ಯದ ಮಾತುಗಳು ನಮ್ಮನ್ನು ಪಯಣದುದ್ದಕ್ಕೂ ಜೀವಂತಿಕೆಯಿಂದ ಕಾಪಾಡಿದವು ಎಂದರೆ ಅತಿಶಯೋಕ್ತಿಯಲ್ಲ.

(ಮುಂದುವರಿಯುತ್ತದೆ)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ ಮಹಿಳಾ ಮಣಿಗಳ ಪರಿಚಯ, ಕಾಡಿದ ಗೌಡರು ಹಾಗೂ ಬಿಜಾಪುರದ ಕಡೆಗಿನ ಪಯಣ)