Tuesday, August 13, 2013

ಉಂಚಳ್ಳಿ ಜಲಪಾತದ ಕಥೆ ಹಾಗೂ ವ್ಯಥೆ..

ಉಂಚಳ್ಳಿ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ. ಮಲೆನಾಡಿನಲ್ಲಿ ಚನ್ನಾಗಿ ಮಳೆಯಾಗುತ್ತಿರುವ ಕಾರಣ  ಉಂಚಳ್ಳಿ ಜಲಪಾತ ಸೌಂದರ್ಯವೃದ್ಧಿಸಿಕೊಂಡು ಧುಮ್ಮಿಕ್ಕುತ್ತಿದೆ.
ಈ ಜಲಪಾತವನ್ನು ಬ್ರಿಟೀಷ್ ಅಧಿಕಾರಿ ಜಾರ್ಜ್ ಲೂಷಿಂಗ್ ಟನ್ ಎಂಬಾತ ಪತ್ತೆ ಹಚ್ಚಿದ ಕಾರಣಕ್ಕಾಗಿ ಲೂಷಿಂಗ್ ಟನ್ ಜಲಪಾತ ಎನ್ನುವ ಹೆಸರನ್ನೂ ಈ ಜಲಪಾತ ಪಡೆದುಕೊಂಡಿದೆ. ಪಶ್ಚಿಮ ಘಟ್ಟದ ತುದಿಯಿಂದ ಕರಾವಳಿಯತ್ತ ಓಡುವ ನದಿ ಭೊರ್ಗರೆಯುತ್ತ ಇಳಿಯುತ್ತದೆ. ಈ ಸಂದರ್ಭದಲ್ಲಿ ಉಂಟಾಗುವ ಸಪ್ಪಳಕ್ಕೆ ಕಿವಿ ಕಿವುಡಾಗುವಂತಾಗುತ್ತದೆ. ಈ ಕಾರಣದಿಂದಲೇ ಇದನ್ನು ಕೆಪ್ಪ ಜೋಗ ಎಂದೂ ಕರೆಯಲಾಗುತ್ತದೆ. ಈ ವರ್ಷದ ಉತ್ತಮ ಮಳೆಯಿಂದಾಗಿ ಜಲಪಾತ ಚೈತನ್ಯವನ್ನು ತುಂಬಿ ಉಕ್ಕುತ್ತಿದೆ.
ಉಕ್ಕೇರಿ ಹರಿಯುವ ಕೆಂಪು ನೀರು ಜಲಪಾತದ ರೂಪದಲ್ಲಿ ಕಣಿವೆಗೆ ಧುಮ್ಮಿಕ್ಕುವುದನ್ನು ನೋಡುವುದೇ ಚಂದ. ಬೋರ್ಘರೆಯುವ ನದಿ ಮಾಡುವ ಸಪ್ಪಳ ಮೂರ್ನಾಲ್ಕು ಕಿ.ಮಿ ದೂರದ ವರೆಗೂ ಕೇಳುತ್ತದೆ. ಗೋಕರ್ಣದ ಆತ್ಮಲಿಂಗದ ಆಕಾರದಲ್ಲಿ ಕಣಿವೆಯಾಳಕ್ಕಿಳಿಯುವ ಜಲಪಾತದ ಚಿತ್ರಣ ಮೈಮನಸ್ಸನ್ನು ಆವರಿಸುತ್ತದೆ. ಜಲಪಾತದ ಎರಡೂ ಕಡೆಗಳಲ್ಲಿರುವ ದೈತ್ಯ ಘಟ್ಟಗಳು, ಬಾನೆತ್ತರಕ್ಕೆ ಚಾಚಿ ನಿಂತ ಮರಗಳು ಜಲಪಾತಕ್ಕೆ ಶೋಭೆಯನ್ನು ನೀಡುತ್ತಿವೆ. ದಟ್ಟಕಾನನದ ನಡುವೆ ಸೌಂದರ್ಯದ ಖನಿಯಾಗಿ ಬೆಡಗು ಮೂಡಿಸುತ್ತಿರುವ ಜಲಪಾತಕ್ಕೆ ಪ್ರವಾಸಿಗರು ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಬೆಂಗಳೂರು, ಮಂಡ್ಯ, ಹಾಸನ, ಕೋಲಾರ, ಮೈಸೂರು, ಚಿಕ್ಕಮಗಳೂರು, ಬಿಜಾಪುರ, ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಮಹಾರಾಷ್ಟ್ರದ ರತ್ನಗಿರಿ, ಕೊಲ್ಲಾಪುರ, ಪೂಣಾ ಹೀಗೆ ರಾಜ್ಯ ಹಾಗೂ ಹೊರ ರಾಜ್ಯದ ಪ್ರವಾಸಿಗರು ಜಲಪಾತದ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.

ಜಲಪಾತವೂ ಚಂಚಲೆಯೇ. ಮಳೆಯ ಬಿಡುವಿನ ನಡುವೆ ಜಲಪಾತ ವೀಕ್ಷಣೆಗೆ ಬರುವವರಿಗೆ ಜಲಪಾತ ಸುಲಭಕ್ಕೆ ತನ್ನ ದರ್ಶನ ಕೊಡುವುದಿಲ್ಲ. ಕಣಿವೆಯಾಳಕ್ಕೆ ಧುಮ್ಮಿಕ್ಕುವ ಜಲಪಾತ ಸೃಷ್ಟಿಸುವ ಮಂಜು ಮುಸುಕಿದ ವಾತಾವರಣಕ್ಕೆ ಜಲಪಾತದ ದರ್ಶನವಾಗುವುದೇ ಇಲ್ಲ. ಆಗೊಮ್ಮೆ ಈಗೊಮ್ಮೆ ಗಾಳಿ ಉಂಟಾದಾಗ ಜಲಪಾತ ಕಾಣಿಸಿಕೊಂಡಾಗ ಸ್ವರ್ಗ ಕೈಗೆ ಸಿಕ್ಕಷ್ಟು ಧನ್ಯತೆ. ಆದರೆ ಈಗ ಜಲಪಾತದ ದರ್ಶನ ಮಂಜಿನ ನಡುವೆ ದಿನಕ್ಕೆ ನಾಲ್ಕೈದು ಬಾರಿ ಮಾತ್ರ ಕಾಣುವಂತಾಗಿದೆ. ಜಲಪಾತ ದರ್ಶನಕ್ಕಾಗಿ 2 ಕಾವಲು ಗೋಪುರಗಳನ್ನು ನಿರ್ಮಾಣ ಮಾಡಲಾಗಿದೆ. ಜಲಪಾತದ ಸನಿಹದ ವೀಕ್ಷಣೆಗಾಗಿ 200ಕ್ಕೂ ಹೆಚ್ಚಿನ ಮೆಟ್ಟಿಲುಗಳನ್ನು ಮಾಡಲಾಗಿದೆ. ಈ ಮೆಟ್ಟಿಲುಗಳ ಮೂಲಕ ಜಲಪಾತದ ಬುಡಕ್ಕೆ ಇಳಿದು ನೋಡಬಹುದಾಗಿದೆ. ಮಂಜಿನ ಧಾರೆ ಉಂಟುಮಾಡುವ ಹನಿಗಳು ಮೈ ಒದ್ದೆ ಮಾಡುತ್ತದೆಯಾದರೂ ಅದರಿಂದ ಸಿಗುವ ಸಂತಸ ಆಪ್ಯಾಯಮಾನವಾದುದು.
 ಇದೇ ಜಲಪಾತದ ಪಕ್ಕದಲ್ಲಿ ಇನ್ನೊಂದು ಮರಿ ಜಲಪಾತವಿದ್ದು ಇದೂ ಕೂಡ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿ ಮಾರ್ಪಾಡಾಗಿದೆ. ಉಂಚಳ್ಳಿ ಜಲಪಾತದಷ್ಟು ಎತ್ತರ, ರೌದ್ರ, ಬೀಖರತೆ ಇದಕ್ಕಿಲ್ಲ. ಸ್ಥಳೀಯ ಹಳ್ಳವೊಂದರಿಂದ ಸೃಷ್ಟಿಯಾಗಿರುವ ಈ ಮರಿ ಜಲಪಾತ ಪ್ರವಾಸಿಗರಿಗೆ ಸಕಲ ರೀತಿಯ ಖುಷಿಯನ್ನು ಕೊಡುತ್ತಿದೆ. ಉಂಚಳ್ಳಿ ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಇಲ್ಲಿನ ಎರಡನೇ ಗೋಪುರದ ಬಳಿ ನಿರ್ಮಾಣ ಮಾಡಲಾದ ಮೆಟ್ಟಿಲುಗಳ ಪಕ್ಕದಲ್ಲಿ ಗುಡ್ಡವನ್ನು ಏರಿದರೆ ಈ ಮರಿ ಜಲಪಾತದ ದರ್ಶನ ಲಭ್ಯವಾಗುತ್ತದೆ. ಕಲ್ಲು ಬಂಡೆಗಳ ಮೇಲೆ ಜುಳು ಜುಳು ಸದ್ದಿನೊಂದಿಗೆ ನರ್ತನ ಮಾಡುತ್ತ, ಆಗಮಿಸುವ ಪ್ರವಾಸಿಗರ ಕಾಲು ತೊಳೆಯುತ್ತ, ನೀರೊಳಗೆ ಇಳಿದರೆ ಸ್ನಾನದ ಸುಖವನ್ನು ನೀಡುವ ಈ ಜಲಪಾತ ಉಂಚಳ್ಳಿಗೆ ಮತ್ತಷ್ಟು ಮೆರಗು ನೀಡುತ್ತಿದೆ.
 ಉಂಚಳ್ಳಿ ಜಲಪಾತ ಇಷ್ಟೆಲ್ಲ ಸೌಂದರ್ಯವನ್ನು ಹೊಂದಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದರೂ ಇಲ್ಲಿ ಸಮರ್ಪಕ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ವೀಕ್ಷಣಾ ಗೋಪುರಗಳು ಹಾಗೂ ವೀಕ್ಷಣಾ ಸ್ಥಳಕ್ಕೆ ತೆರಳಲು ಮೆಟ್ಟಿಲುಗಳನ್ನು ಮಾಡಿರುವುದನ್ನು ಬಿಟ್ಟರೆ ಮತ್ಯಾವುದೇ ಸೌಲಭ್ಯ ಇಲ್ಲಿಲ್ಲ. ಕುಳಿತುಕೊಳ್ಳಲು ಎರಡು ಸಿಮೆಂಟಿನ ಆಸನಗಳಿವೆ. ಆದರೆ ಅವು ಈಗಾಗಲೇ ಕಿತ್ತುಹೋಗಿದೆ. ಜಲಪಾತದ ಬಳಿ ಅನೇಕ ಸ್ತಳಗಳಲ್ಲಿ ಪ್ರವಾಸಿಗರು ಪ್ಲಾಸ್ಟಿಕ್ ವಸ್ತುಗಳನ್ನು ಎಸೆದಿರುವುದು ಜಲಪಾತದ ಸೌಂದರ್ಯಕ್ಕಿಟ್ಟ ಕಪ್ಪುಚುಕ್ಕೆಯಾಗಿದೆ. ಜಲಪಾತದ ಪ್ರದೇಶದಲ್ಲಿ ಶೌಚಾಲಯವೊಂದನ್ನು ನಿರ್ಮಿಸಲಾಗಿದೆ. ಆದರೆ ಅದನ್ನು ನಿರ್ಮಾಣ ಮಾಡಿದಾಗಿನಿಂದ ಅದರ ಬಳಕೆಯನ್ನೇ ಮಾಡಿಲ್ಲವೇನೋ ಎನ್ನುವಂತಾಗಿದೆ. ಶೌಚಾಲಯದ ಬಾಗಿಲುಗಳು ಮುರಿದುಹೋಗಿದೆ. ಶೌಚಾಲಯದ ಒಳಗೆಲ್ಲ ಗಬ್ಬು ನಾರುತ್ತಿದೆ. ಸುತ್ತಮುತ್ತಲ ಮರಗಳ ಎಲೆಗಳು, ಪ್ರವಾಸಿಗರು ಎಸೆದ ತರಹೇವಾರಿ ವಸ್ತುಗಳು ಈ ಶೌಚಾಲಯದಲ್ಲಿವೆ. ಶೌಚಾಲಯದ ಗೋಡೆಗಳಂತೂ ಪ್ರವಾಸಿಗರ ಬರಹಗಳಿಗೆ ಬಲಿಯಾಗಿ ವಿಕಾರ ರೂಪವನ್ನು ಪಡೆದುಕೊಂಡಿವೆ.
ಸ್ಥಳೀಯ ಉಂಚಳ್ಳಿ ಗ್ರಾಮ ಅರಣ್ಯ ಸಮಿತಿ ಆಗಮಿಸುವ ಯಾತ್ರಾರ್ಥಿಗಳ ಬಳಿ ವಾಹನ ಶುಲ್ಕವನ್ನು ಪಡೆಯುತ್ತದೆ. ಉಂಚಳ್ಳಿ ಊರಿನ ಶಾಲಾ ಮಕ್ಕಳು ಇದೇ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಪಡೆದ ಶುಲ್ಕಕ್ಕೆ ತಕ್ಕ ನಿರ್ವಹಣಾ ಕಾರ್ಯ ನಡೆಯುತ್ತಿಲ್ಲ. ನಿರ್ವಹಣಾ ಶುಲ್ಕ ಪಡೆಯುವುದು ಹಣ ಮಾಡಲು ಎನ್ನುವಂತಾಗಿದೆ. ಜಲಪಾತದ ಪ್ರದೇಶವನ್ನು ಕಾಲ ಕಾಲಕ್ಕೆ ಚೊಕ್ಕಟ ಮಾಡುವ ಕಾರ್ಯ ನಡೆಯುತ್ತಿಲ್ಲ. ಇದರಿಂದಾಗಿ ಪ್ರವಾಸಿಗರು ಎಸೆದ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳು ರಾರಾಜಿಸಿ ಜಲಪಾತದ ದುಸ್ಥಿತಿಗೆ ಕನ್ನಡಿಯಂತೆ ಭಾಸವಾಗುತ್ತಿದೆ. ಪ್ರವಾಸಿಗರು ಈ ಸ್ಥಳದಲ್ಲಿ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯಗಳನ್ನು ಎಸೆಯುವುದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿಲ್ಲ. ಎಲ್ಲೆಂದರಲ್ಲೆ ಬೇಕಾಬಿಟ್ಟಿ ವಸ್ತುಗಳನ್ನು ಎಸೆಯುವುದನ್ನು ತಡೆಗಟ್ಟಿ ಅಂತವರ ವಿರುದ್ಧ ದಂಡ ಹಾಕುವ ಕೆಲಸ ನಡೆಯಬೇಕಾಗಿದೆ. ಜಲಪಾತದ ಕುರಿತು ಮಾಹಿತಿ ನೀಡುವವರ ಕೊರತೆಯೂ ಇಲ್ಲಿದೆ. ಬಂದ ಪ್ರವಾಸಿಗರಿಗೆ ಜಲಪಾತ ನೋಡಿದ ತಕ್ಷಣ ಮುಂದೇನು ಎನ್ನುವ ಗೊಂದಲ ಕಾಡುತ್ತದೆ. ಆಗ ಅವರಿಗೆ ತಿಳಿಹೇಳುವ ಮಾರ್ಗದರ್ಶಕರ ಅಗತ್ಯವಿದೆ.
 ಶಿರಸಿಯಿಂದ ಹೆಗ್ಗರಣಿ ಮಾರ್ಗವಾಗಿ 35 ಕಿ.ಮಿ ದೂರದಲ್ಲಿ ಉಂಚಳ್ಳಿ ಜಲಪಾತವಿದೆ. ಈ ಜಲಪಾತಕ್ಕೆ ಸಿದ್ದಾಪುರದಿಂದಲೂ ಇಷ್ಟೇ ದೂರ. ಜಲಪಾತದ ವರೆಗೆ ಡಾಂಬರ್ ರಸ್ತೆಯಿರುವುದನ್ನು ಬಿಟ್ಟರೆ ಇನ್ಯಾವುದೇ ಸೌಕರ್ಯವನ್ನು ಕೇಳುವಂತಿಲ್ಲ. ಶಿರಸಿಯಿಂದ ಉಂಚಳ್ಳಿಯ ವರೆಗೆ ದಿನಕ್ಕೆರಡು ಬಸ್ ಬರುತ್ತದೆ. ಆದರೆ ಈ ಬಸ್ ನಿಲ್ಲುವ ಸ್ಥಳದಿಂದ 3 ಕಿ.ಮಿ ದೂರ ನಡೆದು ಜಲಪಾತ ನೋಡಬೇಕು. ಜಲಪಾತಕ್ಕೆ ಕನಿಷ್ಟ 4 ಬಸ್ ಗಳನ್ನು ಓಡಿಸಬೇಕು. ಸಿದ್ದಾಪುರದಿಂದಲೂ ಬಸ್ ಸಂಚಾರ ವ್ಯವಸ್ಥೆ ಕೈಗೊಂಡರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಆಗಮಿಸುವ ಬಸ್ಸುಗಳನ್ನು ಉಂಚಳ್ಳಿಯಿಂದ ಮುಂದೆ ಬೆಳ್ಕೋಡ್ ವರೆಗೆ ಬಿಡಬೇಕಿದೆ. ಇದರಿಂದ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಜಲಪಾತದ ಬಳಿ ಮಾರಾಟ ಮಳಿಗೆ ಹಾಗೂ ಯಾತ್ರಿ ನಿವಾಸ ನಿರ್ಮಾಣ ಮಾಡಬೇಕೆಂಬುದು ಸ್ಥಳೀಯರ ಬಹುದಿನಗಳ ಬೇಡಿಕೆ. ಯಾತ್ರಿ ನಿವಾಸ ನಿರ್ಮಾಣದ ಪ್ರಸ್ತಾವನೆಯನ್ನು ಅರಣ್ಯ ಇಲಾಖೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾಡುತ್ತಲೇ ಇದೆ. ಆದರೆ ಯಾತ್ರಿ ನಿವಾಸ ನಿರ್ಮಿಸುವ ಮುಹೂರ್ತ ಇನ್ನೂ ಕೂಡಿಬಂದಂತಿಲ್ಲ. ತ್ವರಿತವಾಗಿ ಯಾತ್ರಿ ನಿವಾಸ ನಿರ್ಮಾಣವಾಗಬೇಕು. ಸ್ಥಳೀಯ ವಸ್ತುಗಳನ್ನು ಮಾರಾಟ ಮಾಡಲು ಮಾರಾಟ ಮಳಿಗೆಯ ನಿರ್ಮಾಣವೂ ನಡೆಯಬೇಕಿದೆ ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.

ಈ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಿದಲ್ಲಿ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಇಮ್ಮಡಿ ಸ್ಥಳೀಯರಿಗೆ ಉದ್ಯೋಗದ ಮೂಲವೂ ಆಗಬಲ್ಲದು. ಈ ಕುರಿತು ಪ್ರವಾಸೋದ್ಯಮ ಸಚಿವರು ಹಾಗೂ ಪ್ರವಾಸೋದ್ಯಮ ಇಲಾಖೆ ಕೂಡಲೇ ಸ್ಪಂದಿಸುವ ಅಗತ್ಯವಿದೆ.
ಸಿದ್ದಾಪುರ ತಾಲೂಕಿನಲ್ಲಿರುವ ಉಂಚಳ್ಳಿ ಜಲಪಾತ ರುದ್ರರಮಣೀಯ ರೂಪ ತಾಳಿದ್ದು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಆದರೆ ಜಲಪಾತದ ಪ್ರದೇಶದಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆ ಪ್ರವಾಸಿಗರನ್ನು ಹೈರಾಣಾಗಿಸಿದೆ.

2 comments:

  1. Let it be as it is. Let's not not build any concrete structure. More people may bring little money, but nobody will take the responsibility keep it clean, avoid further damage on nature. Do we need better example than Shivanasamudra for this?

    Most of the people us do not deserve this.

    ReplyDelete
  2. ಈ ಜಲಪಾತವನ್ನು ಬ್ರಿಟೀಷ್ ಅಧಿಕಾರಿ ಜಾರ್ಜ್ ಲೂಷಿಂಗ್ ಟನ್ ಎಂಬಾತ ಪತ್ತೆ ಹಚ್ಚಿದ ಕಾರಣಕ್ಕಾಗಿ ಲೂಷಿಂಗ್ ಟನ್ ಜಲಪಾತ ಎನ್ನುವ ಹೆಸರನ್ನೂ ಈ ಜಲಪಾತ ಪಡೆದುಕೊಂಡಿದೆ.

    Idannu hosadaagi tilidukonde, Nice article.

    Jalapatavannomme kantumbikollabeku

    ReplyDelete