Sunday, December 29, 2013

ಚಿತ್ರ ಸಂಪುಟ

ಬದುಕು ಹಲವು ವರ್ಣಗಳ ಕೊಲಾಜ್. ಬದುಕಿನಲ್ಲಿ ನೂರಾರು ಬಣ್ಣಗಳನ್ನು ಕಾಣಬಹುದು. ಹಲವು ಸೆಳೆಯುವಂತದ್ದಾದರೆ ಹಲವು ಕಾಡುವಂತವುಗಳು.. ಹೀಗೆ. ಬದುಕಿನ ಹಲವು ಚಿತ್ರಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಇದಷ್ಟೇ.

**

ರೂಪದರ್ಶಿ : ಶೃತಿ ರಾವ್

ಬದಕಿನಲ್ಲಿ ಭಾವನೆಗಳಿಗೆ ಮಹತ್ವ ಹೆಚ್ಚು. ಭಾವನೆಗಳು ಮತ್ತೆ ಮತ್ತೆ ಸೆಳೆಯುತ್ತವೆ. ಕಾಡುತ್ತವೆ. ನಾಮ್ಮ ಪ್ರತಿ ನಡೆ ನುಡಿಯಲ್ಲಿಯೂ ಭಾವನೆಗಳು ಕಾಣುತ್ತವೆ. ಇಂತಹ ಒಂದು ಭಾವನಾತ್ಮಕ ಚಿತ್ರ-ಚಿತ್ರಣ.

 

****

 

ಉಂಚಳ್ಳಿ ಜಲಪಾತದ ಬಿಳಿಜಲಧಾರೆ

ಬಿಳಿಯ ಬಣ್ಣ ಶಾಂತಿಯ ಸಂಕೇತ. ಬಿಳಿಯಬಣ್ಣದ ಮೇಲೆ ಕಾಮನಬಿಲ್ಲಿನ ಬಣ್ಣ ಮೂಡಿದಾಗ ಬದುಕು ಸಹಜ-ಸುಂದರ.  ಸುಂದರ ಕಾಮನಬಿಲ್ಲಿಗೆ ಬಿಳಿ ಬಣ್ಣದ ಹಿನ್ನೆಲೆ ವಿಶೇಷ ಮೆರಗನ್ನು ನೀಡುತ್ತದೆ

 

***

ಸೃಜನ ಸುಂದರಿ

ಸಹಜವಾಗಿದ್ದರೆ ಚನ್ನಾಗಿ ಕಾಣುತ್ತದೆ. ಮೇಕಪ್  ಮಾಡಿದರೆ ಆ ಸೆಳೆತ ಕಡಿಮೆ.  ಬದುಕಿನ ಕುಲುಮೆಯ ಕೆಲಸದಲ್ಲಿ ಬೆಂದು-ಬಸವಳಿದಾಗ ಜೀವನ ಹಣ್ಣಾಗುತ್ತದೆ.

 

****

ನಗರಿಯಲ್ಲಿ ನಡೆದ ಹೋರಾಟ

 ಹೋರಾಟ ಬದುಕಿನ ಒಂದು ಮುಖ. ಹುಟ್ಟಿದ ತಕ್ಷಣ ಹೋರಾಟ ಶುರು. ಜಗತ್ತಿನ ಜೊತೆಗೆ ಸಂಘರ್ಷ ಮಾಡುತ್ತ ಬದುಕಬೇಕಾಗುತ್ತದೆ. ಒಂದು ಹೋರಾಟದ ಚಿತ್ರ. ಮಾನವ ಸರಪಳಿಯ ಮೂಲಕ ನಡೆಯುವ ಹೋರಾಟ ಜೀವಗಳನ್ನು ಬೆಸೆಯುತ್ತದೆ..!!

**

(ಹಾಗೆ ಸುಮ್ಮನೆ ವೃತ್ತಿಯ ಮದ್ಯ ತೆಗೆದ ಈ ನಾಲ್ಕು ಪೋಟೋಗಳನ್ನು ಒಂದೆ ಸೇರಿಸಿ ಚಿತ್ರ ಸಂಪುಟವಾಗಿ ಮಾಡಿದ್ದೇನೆ. ಹಾಗೆ ಸುಮ್ಮನೆ ನೋಡಿ.. ಕಮೆಂಟ್ ಮಾಡಿ)

Friday, December 27, 2013

ಸತ್ಯ....

ಏನೇ ಹೇಳಿ..
ಲವ್ ಫೇಲ್ಯೂರ್ ಆದಮೇಲೆ
ಹುಡುಗನಿಗೆ
ಸ್ವಾತಂತ್ರ್ಯ
ಸಂಭ್ರಮ...!!
 **
 ಮದುವೆ ಆದ ಮೇಲೆ
ಅನುದಿನವೂ 
ಹುಡುಗನಿಗೆಸ್ವಾತಂತ್ರ್ಯ
ಹೋರಾಟ..!!
**
ನನ್ನ ತಂಗಿ ಅವಳ
ಗೆಳತಿಯರ ಬಳಿ
ನನ್ನನ್ನು
ಇಂವ ನನ್ನ ಅಣ್ಣ..
ಎಂದು ಪರಿಚಯಿಸಿದಳು...
ಅವರು
ಅರಾಮನಾ ಅಣಾ..
ಎಂದು ಮಾತನಾಡಿಸಿದರು...!!!
***
ಶಾಕುಗಳೇ ಹಾಗೆ..
ಒಂದರ ಹಿಂದೆ ಒಂದು ಬರುತ್ತವೆ..
ಹೊಡೆದ ಜಾಗಕ್ಕೇ
ಹೊಡೆಯುತ್ತವೆ..!!
***
ವಿಪರ್ಯಾಸ ನೋಡಿ
ಮನೆ ಕಟ್ಟಲು ಕಂಬ
ಎತ್ತರಕ್ಕೆ ಏರಿದಂತೆಲ್ಲ
ಬ್ಯಾಂಕಿನ ಲೋನೂ
ಏರುತ್ತ..ದೆ!!
***
ಫೇಸ್ಬುಕ್ ಮೆಸೇಜ್ 
ರಿಕ್ವೆಸ್ಟ್ ಸರಮಾಲೆಗಳನ್ನು 
ತಾಳಲಾರದ 
ಒಬ್ಬ ಹುಡುಗಿ 
ಸ್ಟೇಟಸ್ ಅಪ್ ಡೇಟ್ 
ಮಾಡಿದ್ದು ಹೀಗೆ : 
ನನಗೆ ಮದುವೆಯಾಗಿದೆ.. 

**

ಹಳೆಯ ಗಾದೆ
ಹುಡುಗನ ಸಂಬಳ
ಕೇಳಬಾರದು...
ಹುಡುಗಿಯ ವಯಸ್ಸು
ಕೇಳಬಾರದು..
ಕಾಲ ಬದಲಾಗಿದೆ..
ಜನ ಚೇಂಜ್ ಕೇಳ್ತಾರೆ ನೋಡಿ..
ಅದ್ಕೆ ಹೊಸ ಗಾದೆ
ಹವ್ಯಕ ಹುಡುಗರ ವಯಸ್ಸನ್ನೂ
ಕೇಳಬಾರದು..!! 

**

ಪ್ರಗತಿಯ 
ಹಿಂದೆ ನಡೆದುಕೊಂಡು 
ಹೋಗುವುದನ್ನು 
ಪ್ರಗತಿ ಫಥದಲ್ಲಿ ಅನ್ನಬಹುದೆ..?

(ಇವುಗಳನ್ನು ಬರೆದಿದ್ದು ಡಿ26/27-2013ರಂದು ಶಿರಸಿಯಲ್ಲಿ..)
(ಇವು ಖಂಡಿತವಾಗಿಯೂ ಫೇಸ್ ಬುಕ್ ನಲ್ಲಿ ಅಪ್ ಡೇಟ್ ಮಾಡಿದವುಗಳು... 
ಹುಕಿ ಬಂದಾಗ ಹಾಗೇ ಬರೆಯುತ್ತ ಹೋದೆ.. ಒಂದರ ಹಿಂದೋಂದರಂತೆ ಹುಟ್ಟಿದವು... 
ಕೊನೆಗೆ ಎಲ್ಲವನ್ನೂ ಪೋಣಿಸಿ ಇಲ್ಲಿಟ್ಟಾಗ.. ಸತ್ಯವಾಯಿತು...)  

Tuesday, December 24, 2013

ಭಾವನೆಯ ಬೆನ್ನೇರಿ (ಪ್ರೇಮಪತ್ರ-9)

ಪ್ರೀತಿಯ ಗೆಳತಿ
ಪ್ರೀತಿ

ದಿನಾಲೂ ಪೋನಿನಲ್ಲಿ ತಲೆ ತಿಂತಿರ್ತೀಯಲ್ಲಾ.. ಪತ್ರ ಬರಿ ಪತ್ರ ಬರಿ.. ಬಹಳ ದಿನಗಳಾದವು ನಿನ್ನ ಬರಹಗಳನ್ನು ಓದದೆ ಅಂತ.. ಅದಕ್ಕೆ ಇವತ್ತು ಪುರಸೊತ್ತು ಮಾಡ್ಕೊಂಡು ಬರೀತಾ ಇದ್ದೇನೆ. ನಿಧಾನವಾಗಿ ಓದು. ನನ್ನಿಂದ ಏನನ್ನಾದರೂ ಬರೆಸಿಕೊಂಡೆ ಎಂಬ ನಿನ್ನ ಆಸೆ ಇದೀಗಲಾದರೂ ಈಡೇರಬಹುದು.
ನಾನು ಆಗಾಗ ಪತ್ರ ಬರೆಯಬೇಕೆನ್ನುವುದು ನಿನ್ನ ಬಯಕೆ. ನನಗೋ ಪತ್ರ ಬರೆಯಬೇಕೆಂಬ ಅದಮ್ಯ ತುಡಿತ. ಆದರೆ ಹಾಳಾದ ಬದುಕಿನ ಕ್ರಮಗಳು. ಪುರಸೊತ್ತು ಸಿಗಬೇಕಲ್ಲ.. ಸಿಕ್ಕಾಗಲೆಲ್ಲ ಹೀಗೆ ಬರೆಯುತ್ತೇನೆ. ಲೇಆಟದರೆ ಬೇಸರ ಪಡಬಾರದು ಅಷ್ಟೇ.. ಆಯ್ತಾ..
ನಿನಗೆ ಪತ್ರ ಬರೆಯುವ ಕುರಿತು ಅದಕ್ಕೊಂದು ವಿಷಯ ಬೇಕಲ್ಲ ಎಂದು ಹಲವು ಸಾರಿ ಚಿಂತಿಸಿದೆ. ಕಾಡು ಹರಟೇಯೇ ಪತ್ರವಾಗಬಾರದಲ್ಲ. ಅದಕ್ಕೆ ಏನಾದರೂ ಹೊಸತನ ಕೊಡಬೇಕಂತ ಚಿಂತಿಸುತ್ತಿದ್ದೇನೆ. ಮನಸ್ಸಂತೂ ಭಾವುಕತೆಯ ಕಡೆಗೆ ಭಾವನಾ ಲೋಕದೆಡೆಗೆ ತುಡಿಯುತ್ತಿದೆ. ಮೊನ್ನೆ ಏನಾಯ್ತು ಗೊತ್ತಾ.. ಯಾವುದೋ ಪೇಪರ್ ಕೆಲಸ ಮಾಡ್ತಾ ಇದ್ದೆ. ಆಗ ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರು ನಿಧನರಾದರು ಎನ್ನುವ ಸುದ್ಧಿ ತಿಳಿದು ಬಂದಿತು. ರಾಜಕುಮಾರ್ ಅವರ ಅಭಿನಯದ ಕಟ್ಟಾ ಅಭಿಮಾನಿಯಾದ ನನಗೆ ಒಮ್ಮೆಲೆ ದಿಗ್ಭ್ರಮೆ.
ಮನದಲ್ಲಿ ಏನೋ ಚಡಪಡಿಕೆ. ಏನು ಮಾಡಿದರೂ ಕೆಲಸದಲ್ಲಿ ಆಸಕ್ತಿಯೇ ಇಲ್ಲ. ಸರಿ.. ಕೆಲಸವನ್ನು ಅರ್ಧದಲ್ಲಿಯೇ ಬಿಟ್ಟು ಮನೆಗೆ ಬಂದೆ. ಮನೆಯಲ್ಲಿ ಆಗಲೋ ಎಲ್ಲರೂ ಟಿ.ವಿ.ಯ ಎದುರು ಆಸೀನರಾಗಿದ್ದರು. ನಾನು ಬರುವ ಸಮಯಕ್ಕೆ ವಿಪರ್ಯಾಸವೋ ಎಂಬಂತೆ ಟಿವಿಯಲ್ಲಿ
ಆಡಿಸಿದಾತ ಬೇಸರ ಮೂಡಿ
ಆಟ ಮುಗಿಸಿದ
ಸೂತ್ರವ ಹರಿದ ಬೊಂಬೆಯ ಮುರಿದ
ಮಣ್ಣಾಗಿಸಿದ..
ಎಂಬ ಹಾಡು ತೆರೆಯ ಮೇಲೆ ಬರುತ್ತಿತ್ತು. ಎಂತಾ ಅದ್ಭುತ ಹಾಡಲ್ವಾ ಅದು? ಆ ಹಾಡಿಗೆ ರಾಜಕುಮಾರ್ ಅವರದ್ದೂ ಅಷ್ಟೇ ಅದ್ಭುತ ಅಭಿನಯ. ನೋಡ್ತಾ ನೋಡ್ತಾ ಇದ್ದೆ. ಮನಸ್ಸಿನಲ್ಲಿ ಒಮ್ಮೆಲೆ ಅದೇನನ್ನೋ ಕಳೆದುಕೊಂಡಂತೆ ಆಯಿತು. ರಾಜಣ್ಣನ ಅಭಿನಯದ ಝಲಕಿನ ಪರಿಯಾ ಇದು? ಅಥವಾ ಹಾಡಿನ ಸೆಳಕಾ ಏನೊಂದೂ ಅರ್ಥವಾಗಲಿಲ್ಲ. ಅವರು ಸತ್ತಾಗ ಆ ಹಾಡನ್ನು ಹಾಕಿದ್ರು ಅದಕ್ಕಾಗಿ ಮನಸ್ಸಿನಲ್ಲಿ ಒಂದು ಥರಹ ಅಂದ್ಕೊಂಡೆ. ಇದು ಭಾವನೆಗಳ ಮೇಲಿನ ಪರಿಣಾಮವಾಗಿತ್ತು. ಜೊತೆಗೆ ಭಾವುಕತೆಯಾಗಿತ್ತು. ಇದನ್ನು ನಾನು ಆಗ ಅರಿತಿರಲಿಲ್ಲವಷ್ಟೆ.
ನಂತರ ಅದೇ ಬೇಜಾರು ಕಳಿಯೋಣವೆಂದುಕೊಂಡು ಮನೆಯಲ್ಲಿದ್ದ ಟೇಪ್ ರೆಕಾರ್ಡರ್ ನಲ್ಲಿ ಹಾಡು ಕೇಳಲೋಸುಗ ಸಿಕ್ಕಿದ ಕ್ಯಾಸೆಟ್ ಒಂದನ್ನು ಹಾಕಿದೆ. ಅದೋ ನಿಸಾರರ ಭಾವಗೀತೆಗಳು. ಹಚ್ಚಿದೊಡನೆಯೇ ಕೇಳಿದ್ದು..,
ಮತ್ತದೇ ಬೇಸರ, ಅದೆ ಸಂಜೆ
ಅದೆ ಏಕಾಂತ..
ನಿನ್ನ ಜೊತೆಯಿಲ್ಲದೇ, ಮಾತಿಲ್ಲದೇ
ಮನ ವಿಭ್ರಾಂತ...
ಎಂಬ ಹಾಡು. ಈ ಹಾಡಂತೂ ಮನಸ್ಸನ್ನು ಅದ್ಯಾವ ಪರಿ ಆಕ್ರಮಿಸಿಕೊಂಡುಬಿಟ್ಟಿತೆಂದರೆ ಬಹುಶಃ ನಂತರ ಇಡೀ ದಿನ ನನ್ನ ಮನಸ್ಸು ಯಾವುದೋ ರೀತಿಯಲ್ಲಿ ಇದ್ದುಬಿಟ್ಟಿತು. ಆಗ, ಕವಿ ಎಂತಹ ಭಾವನಾತ್ಮಕ ಸಾಲುಗಳನ್ನು ರಚಿಸುತ್ತಾನಲ್ಲ.. ಅನ್ನಿಸಿತು. ಅಂತಹ ಕವಿಹೃದಯ ಗ್ರೇಟ್ ಅನ್ನಿಸಿತು. ಅದಕ್ಕೂ ಮಿಗಿಲಾಗಿ ಕವಿಯ ಸಾಲಿನ ಭಾವನೆಗಳ ತೀವ್ರತೆಯನ್ನು ಗುರುತಿಸಿ ಅದರಲ್ಲಿ ಜೀವವನ್ನು ತುಂಬಿ ಅದನ್ನೊಂದು ಕರ್ಣಾಮೃತ ರಸಧಾರೆಯನ್ನಾಗಿ ಮಾಡ್ತಾನಲ್ಲಾ ಅಂತಹ ಗಾಯಕ/ಕಿ ಗ್ರೇಟ್ ಅನ್ನಿಸ್ತು.
ಬಹುಶಃ ಆ ನಂತರವೇ ನಾನು ಭಾವನೆಗಳ, ಭಾವುಕತೆಯ ಬಗ್ಗೆ ಹೆಚ್ಹೆಚ್ಚ್ಉ ಯೋಚಿಸಲು ಪ್ರಾರಂಭಿಸಿದೆನೋ ಅನ್ನಿಸುತ್ತೆ. ಮೊದ ಮೊದಲು ನಂಗೊಬ್ನಿಗೆ ಹಿಂಗಾಯ್ತಾ ಅಂತ ಯೋಚಿಸಿದೆ. ಕೊನೆಗೆ ಯಾವುದೇ ಕವಿ, ಒಳ್ಳೆಯ ಸಹೃದಯಿ, ಒಳ್ಳೆಯ ಓದುಗನಿಗೂ ಹೀಗೆಯೇ ಆಗಿರಲಿಕ್ಕೆ ಸಾಕು ಅನ್ನಿಸಿತು.
ನಂತರ ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿದ ನಂತರ ಭಾವುಕತೆಯ ಬಗ್ಗೆ ಗೊತ್ತಾಯಿತು. ಮೊದಲೊಂದ್ಸಲ ಕುವೆಂಪು ಅವರ ಕಾನೂರು ಹೆಗ್ಗಡತಿ ಪುಸ್ತಕ ಓದಿದ್ದೆ. ಅದರಲ್ಲಿ ಭಾವುಕತೆ, ಭಾವಸಮಾಧಿಯೆಡೆಗೆ ವಿವರಣೆ ಬಂದಿತ್ತು. ಆಗ ಅದು ಸರಿಯಾಗಿ ಅರ್ಥವಾಗಿರಲಿಲ್ಲ. ಈಗ ಸಂಪೂರ್ಣ ಅರ್ಥವಾಗಿದೆ. ನನಗರಿವಿಲ್ಲದೇ ಬೆಳೆದಿರುವ ಭಾವುಕತನದಿಂದ ನನಗೆ ಖುಷಿಯೂ ಆಯಿತು.
ಇಂತಹ ಖುಷಿಯಲ್ಲಿಯೇ ಭಾವಗೀತೆ ಎಂಬ ಕವನವನ್ನೂ ರಚಿಸಿದೆ. ಅದಕ್ಕೆ ಭಾವನೆಗಳ ಹರಿವು-ತಿಳಿವುಗಳನ್ನು ಜೊತೆಗೆ ಸೇರಿಸಿದೆ. ನಿನಗೆ ಕುತೂಹಲ ಇರಬಹುದು. ತಾಳು ನಿನಗಾಗಿ ಅದನ್ನೂ ಬರೆದು ಕಳಿಸುತ್ತಿದ್ದೇನಮೆ. ಓದು,
ಭಾವಗೀತೆ ನಾನು ಬರೆದೆ
ಭಾವ ಜೀವಿಯಾಗಿ
ಹೃದಯ ಹೃದಯಗಳ ಜೊತೆಗೆ ಬೆರೆತೆ
ಭಾವ ಭಾಷಿಯಾಗಿ
ಎಂಬುದು. ಈಗ ನಿನಗೆ ಈ ನಾಲ್ಕೇ ಸಾಲುಗಳನ್ನು ಬರೆದು ಕಳಿಸುತ್ತೇನೆ. ಯಾಕಂದ್ರೆ ಬೇಸರ ಬರಬಾರದಲ್ಲ. ಇನ್ನೊಮ್ಮೆ ಯಾವತ್ತಾದ್ರೂ ಈ ಕವನವನ್ನು ಪೂರ್ತಿಯಾಗಿ ನಿನ್ನ ಬಳಿ ಪಿಸುಗುಟ್ಟುತ್ತೇನೆ. ಆಗಬಹುದಲ್ಲ.
ಇನ್ನೊಂದೇನು ಗೊತ್ತಾ, ಕವಿಗಳೆಲ್ಲ ಇಂತಹ ಭಾವುಕತೆಯ ಸನ್ನಿವೇಶದಲ್ಲೇ ಕವಿತೆಗಳನ್ನು, ಭಾವಗೀತೆಗಳನ್ನು ರಚಿಸುತ್ತಾರೆ. ಆದರೆ ಭಾವುಕತೆಯ ಬಗ್ಗೆ ಏನೇನೂ ಅರಿಯದಿರೋ ವ್ಯಕ್ತಿಗಳು ಭಾವುಕ ವ್ಯಕ್ತಿಗಳನ್ನು ಕಂಡರೆ ಆತ ಭೋಳೆ ವ್ಯಕ್ತಿ, ಆತನಿಗೆ ಮಂಕು ಹಿಡಿದೆ ಎನ್ನುತ್ತಾರೆ. ವಿಪರ್ಯಾಸ ನೋಡು `ಹುಚ್ಚು' ಎಂಬುದು ಇಂತಹ ಭಾವುಕತೆಯ ಅತ್ಯಂತ ಕಡೆಯ ಹಂತ  ಎಂಬುದನ್ನು ನಾನೆಲ್ಲೋ ಓದಿದ್ದೇನೆ. ಆದರೆ ಈಗಿನ, ನಾನು ಹೇಳುತ್ತಿರುವ ಭಾವುಕತೆಯಿಂದ -ಹುಚ್ಚಿನೆಡೆಗೆ ಬಹಳ ಬದಲಾವಣೆಗಳು ಆಘಬೇಕು. ಸಾಮಾನ್ಯರು ಇವೆರಡನ್ನೂ ಒಂದೇ ಎಂದು ತಿಳಿದಿದ್ದಾರೆ. ಆದರೆ ಅದು ನೋಡುಗರ ಕಣ್ಣಿಗೆ ಈ ಪೂರಕವಾಗಿಯೇ ಕಾಣುತ್ತದೆ.
ಬಹುಶಃ ಭಾವುಕತೆಯ ಬಗ್ಗೆ ನಿನಗೆ ಬಹುತೇಕ ಏನೇನೂ ತಿಳಿದಿರಲಿಕ್ಕಿಲ್ಲ. ಸಾಧ್ಯವಾದರೊಮ್ಮೆ ನೀನು ಕುವೆಂಪು ಅವರ ಕಾನೂರು ಹೆಗ್ಗಡತಿ ಕಾದಂಬರಿಯನ್ನು ಓದು. ಇಲ್ಲಾವದರೆ ನಿಸಾರರದ್ದೋ, ದೊಡ್ಡರಂಗೇಗೌಡರದ್ದೋ, ಲಕ್ಷ್ಮೀನಾರಾಯಣ ಭಟ್ಟರದ್ದೋ, ಶಿವರುದ್ರಪ್ಪಅವರದ್ದೋ, ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ ಅವರ ಭಾವಗೀತೆಗಳ ಕ್ಯಾಸೆಟ್ ಕೇಳು. ಸಿ. ಅಶ್ವಥ್ ಅವರ ಭಾವಗೀತೆಗಳ ಹಾಡುಗಳನ್ನು ಕೇಳು. ಒಬ್ಬನೇ ಇದ್ದಾಗ ಆ ಬಗ್ಗೆ think ಮಾಡು. ಆಗ ನಿನಗೆ ಭಾವುಕತೆ, ಭಾವಾವೇಶ ಎಂದರೇಣು ಎಂಬುದು ತಂತಾನೆ ಅರಿವಾಗಬಹುದು. ಈಗ ಬರೀತಾ ಇದ್ದಾಗ ನನ್ನ ಮನಸ್ಸೇನೋ ಭಾವುಕತೆಗೆ ಒಳಗಾಗಿದೆ. ಆದರೆ ಭಾವುಕತೆಗೆ ಒಳಗಾದಷ್ಟು ಸಲೀಸಾಗಿ ಅದರ ಬಗ್ಗೆ ಬರೆಯುವುದು ಕಷ್ಟ. ಇದು ನೆನಪಿರ್ಲಿ.
ಏನೇ ಇರಲಿ, ನಿನ್ನ ಪತ್ರ ಬರೆಯುವ ಸಂಸ್ಕೃತಿಗೆ ನನ್ನ ಪ್ರಶಂಸೆ ಇದೆ. ಇಂದಿನ ಮೊಬೈಲ್ ಪೋನ್ ಯುಗದಲ್ಲಿ, ಅವುಗಳ ಹಾವಳಿಯ ನಡುವೆಯೂ ಪತ್ರ ಸಂಸ್ಕ್ಋತಿ ಮರೆಯದೇ ನೆನಪಿನಲ್ಲಿಟ್ಟು ಪತ್ರ ಬರೆಯಲು ಪ್ರೇರೇಪಿಸಿದ್ದಕ್ಕೆ ಧನ್ಯವಾದ. ಬಹುಶಃ ಇವತ್ತಿಗಿಷ್ಟು ಸಾಕು ಅನ್ನಿಸುತ್ತಿದೆ. ಹೆಚ್ಚು ಬರೆದು ಅಜೀರ್ಣವಾಗಬಾರದಲ್ಲ. ಮುಂದೆ ಮತ್ತೆ ಬರೆಯುತ್ತೇನೆ.

ಇಂತಿ ನಿನ್ನೊಲವಿನ
ಜೀವನ್

(ಇದನ್ನು ಬರೆದಿದ್ದು ಮೇ 2006ರಲ್ಲಿ, ಶಿರಸಿಯ ಕದಂಬ ವಾಣಿಯಲ್ಲಿ ಇದು ಪ್ರಕಟಗೊಂಡಿದೆ.)

Monday, December 23, 2013

ನಿನ್ನ ನೆನಪು


ಗೆಳತಿ, ನಿನ್ನ ಬಿಂಬ ನನ್ನ
ಮನಸಿನಲ್ಲಿ ಮೂಡಿದೆ
ನಿನ್ನ ನೆನಪು ಬಳುಕು ಒನಪು
ನನ್ನ ಮನದಿ ಮೆರೆದಿದೆ ||

ನಿನ್ನ ನೆನಪು ನನ್ನ ಮನವ
ಎಳೆದು ಸೆಳೆದು ನಿಲಿಸಿದೆ,
ಮನವು ನಿನ್ನ ಪ್ರೀತಿಯೊಂದು
ಸ್ಪರ್ಷವನ್ನು ಬಯಸಿದೆ ||

ನಿನ್ನ ನೆನಪು ನನಗೆ ಹರುಷ
ಮುಗ್ಧ ಮನ ನಲಿದಿದೆ
ಕನಸಿನಲ್ಲಿ ನಿನ್ನ ನೆನೆದು
ಮನದಿ ಹರುಷ ಪಟ್ಟಿದೆ ||

ಗೆಳತಿ, ನಿನ್ನ ನೆನಪಿನಲ್ಲಿ
ನನ್ನೇ ನಾನು ಮರೆತಿಹೆ
ಜೀವ ನೀನು, ಪ್ರೀತಿ ನೀನು
ಎಂದು ನಾನು ತಿಳಿದಿಹೆ ||

ನಿನ್ನ ನೆನಪೇ ನನ್ನ ಜೀವ
ನೀನೆ ಬದುಕು ಆಗಿಹೆ
ನಿನ್ನ ನೆನಪೆ ನನ್ನ ಕವನ
ಅದುವೆ ಸ್ಪೂರ್ತಿಯಾಗಿದೆ ||

(ಈ ಕವಿತೆಯನ್ನು ಬರೆದಿದ್ದು 04-10-2006ರಂದು, ದಂಟಕಲ್ಲಿನಲ್ಲಿ)

Saturday, December 21, 2013

ಮದ್ವೆ ಮಾದ್ಕ್ಯಳೆ ಭಾಗ 2

(ಸಾಂದರ್ಭಿಕ ಚಿತ್ರ : ಒಂದು ಹವ್ಯಕ ಕುಟುಂಬ)

ಹಳ್ಳಿ ಮಾಣಿ ಒಳ್ಳೆಂವ್ ಇದ್ದಿ
ಮದ್ವೆ ಮಾಡ್ಕ್ಯಳೆ ಕೂಸೆ..
ಯಾವತ್ತಿದ್ರೂ ತ್ರಾಸ್ ಕೊಡ್ತ್ನಿಲ್ಲೆ
ಮದ್ವೆ ಮಾಡ್ಕ್ಯಳೆ ||

ಇಂಗ್ಲೀಷಲ್ಲಿ ಮಾತಾಡ್ ಬಿಡ್ತಿ
ಮದ್ವೆ ಮಾಡ್ಕ್ಯಳೆ ಕೂಸೆ,
ಎಸ್ಸೆಸ್ಸೆಎಲ್ಸಿ ಪಾಸಾಗೋಜಿ
ಮದ್ವೆ ಮಾಡ್ಕ್ಯಳೆ ||

ಕರಡಕೊಚ್ಚ ಮಿಶನ್ನಿದ್ದು
ಮದ್ವೆ ಮಾಡ್ಕ್ಯಳೆ ಕೂಸೆ
ಗದ್ದೆ ಹೂಡ ಟಿಲ್ಲರಿದ್ದು
ಮದ್ವೆ ಮಾಡ್ಕ್ಯಳೆ ||

ಸೊರಟಿ ಎಮ್ಮೆ ಆನೇ ಕರಿತಿ
ಮದ್ವೆ ಮಾಡ್ಕ್ಯಳೆ ಕೂಸೆ
ಜರ್ಸಿ ದನ ಭರ್ತಿ ಇದ್ದು
ಮದ್ವೆ ಮಾಡ್ಕ್ಯಳೆ ||

ಕೇಬಲ್ ಕನೆಕ್ಷನ್ ಮನೆಲಿದ್ದು
ಮದ್ವೆ ಮಾಡ್ಕ್ಯಳೇ ಕೂಸೆ
ಮನೆಗೇ ಲ್ಯಾಪ್ಟಾಪ್ ತಂದ್ಕೊಟ್ಬಿಡ್ತಿ
ಮದ್ವೆ ಮಾಡ್ಕ್ಯಳೆ ||

ಫೇಸ್ಬುಕ್ಕಲ್ಲಿ ಅಕೌಂಟಿದ್ದು
ಮದ್ವೆ ಮಾಡ್ಕ್ಯಳೆ ಕೂಸೆ
ಹವ್ಯಕದಲ್ಲಿ ಕಮೆಂಟ್ ಮಾಡ್ತಿ
ಮದ್ವೆ ಮಾಡ್ಕ್ಯಳೆ..||

ಶಿರಸಿ ಪ್ಯಾಟೆ ಹತ್ರಾನೇ ಇದ್ದು
ಮದ್ವೆ ಮಾಡ್ಕ್ಯಳೆ ಕೂಸೆ
ಟಿ.ಎಸ್.ಎಸ್.ಗೆ ಅಡಿಕೆ ಹಾಕ್ತಿ
ಮದ್ವೆ ಮಾಡ್ಕ್ಯಳೆ..||

ಸಾಮ್ರಾಟ್ ಹೋಟ್ಲಲ್ ದೋಸೆ ಕೊಡಸ್ತಿ
ಮದ್ವೆ ಮಾಡ್ಕ್ಯಳೇ ಕೂಸೆ
ಪಂಚವಟಿಲೀ ಊಟ ಮಾಡ್ವ
ಮದ್ವೆ ಮಾಡ್ಕ್ಯಳೆ ||

ಲಕ್ಷ್ಮಿ ಟಾಕೀಸಲ್ ಪಿಚ್ಚರ್ ತೋರಿಸ್ತಿ
ಮದ್ವೆ ಮಾಡ್ಕ್ಯಳೇ ಕೂಸೆ
ವಾರಕ್ಕೊಂದಿನ ಪ್ಯಾಟೆ ತಿರಗನ
ಮದ್ವೆ ಮಾಡ್ಕ್ಯಳೆ ||

ಮೊಬೈಲ್ ಸಿಗ್ನಲ್ ಯಮ್ಮಲ್ ಸಿಕ್ತು
ಮದ್ವೆ ಆಗ್ತ್ಯನೇ ಕೂಸೆ
ಇಂಟರ್ನೆಟ್ ಪ್ಯಾಕು ತಂದುಕೊಡ್ತಿ
ಮದ್ವೆ ಆಗ್ತ್ಯನೇ..||


ಯಮ್ಮೇಟಿ ಬೈಕು ಮಾರ್ತಾ ಇದ್ದಿ
ಮದ್ವೆ ಮಾಡ್ಕ್ಯಳೇ ಕೂಸೆ..
ಮಾರುತಿ ಕಾರು ತಗತ್ತಾ ಇದ್ದಿ
ಮದ್ವೆ ಮಾಡ್ಕ್ಯಳೇ||
 


ಅಪ್ಪ-ಆಯಿ ತ್ರಾಸು ಕೊಡ್ತ್ವಿಲ್ಲೆ
ಮದ್ವೆ ಮಾಡ್ಕ್ಯಳೇ ಕೂಸೆ
ಅಣ್ಣ-ತಮ್ಮಂದ್ರು ಯಾರೂ ಇಲ್ಲೆ
ಮದ್ವೆ ಮಾಡ್ಕ್ಯಳೆ ||

(ಪಕ್ಕಾ ಹಳ್ಳಿ ಹವ್ಯಕ ಹುಡುಗ, ಓದಿದ ಹವ್ಯಕ ಹುಡುಗಿಯ ಬಳಿ ಮದುವೆ ಮಾಡಿಕೋ ಎಂದು ಕೇಳುವ ಈ ಕವಿತೆಯನ್ನು ಶಿರಸಿಯಲ್ಲಿ 21-12-2013ರಂದು ಬರೆದಿದ್ದು. ಹಳ್ಳಿ ಹುಡುಗನ ಮುಗ್ಧತೆ ಇಲ್ಲಿ ಗಮನಿಸಬೇಕಾಗುತ್ತದೆ.. ತನಗೆ ತಿಳಿದಂತೆ ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಡುತ್ತೇನೆ ಮದುವೆಯಾಗು ಪ್ಲೀಸ್ ಎಂದು ಹೇಳುವ ಪರಿ ಇಲ್ಲಿದೆ.. ನಿಮಗನಿಸಿದ್ದನ್ನು ಕಮೆಂಟ್ ಮಾಡಿ)

Friday, December 20, 2013

ನೀನಂದ್ರೆ..

ನೀನಂದ್ರೆ..,
ಪಡುವಣ ಸುಳಿಗಾಳಿ
ಬಿರು ಬೇಸಿಗೆಯ ತಂಪು..
ರಂಗಿನ ಕಾಮನಬಿಲ್ಲು..
ದಿಟ್ಟಿಗೆ ಮೋಹಕ..!!

ನೀನಂದ್ರೆ..
ಹಾಲು ಬೆಳದಿಂಗಳು
ಮರೆಯದ ಮೌನಗೀತೆ..
ಅರ್ಥವಾಗದ ಹಾಯ್ಕು..
ಪ್ರೀತಿ ಮೆರೆವ ಗಝಲು..

ನೀನಂದ್ರೆ
ನಿಶೆ ಕಳೆವ ಹಣತೆ..
ಬಿರು ಬೇಗೆಗೆ ಒಕ್ಕುಡುತೆ ಹನಿ..
ತಂಪು ತಂಗಾಳಿ
ಇಂಚರದ ಉಲಿ..

ಊಹೂಂ
ನೀನಂದ್ರೆ..
ನಂಗೆ ಜೀವ..
ಅವ್ಯಕ್ತ ಪ್ರೀತಿ..
ಮರೆಯದ ಅನುಭೂತಿ..

(ಬರೆದಿದ್ದು ದಂಟಕಲ್ಲಿನಲ್ಲಿ, 12-05-2008ರಂದು)

Thursday, December 19, 2013

ದ್ವಂದ್ವ




----1----
ಕೆಲವು ಸಾರಿ ನಾವು ಬೇಗ ಹೇಳಿದರೆ 
ಅಯ್ಯೋ ಇನ್ನೊಂದು ಸ್ವಲ್ಪ ದಿನ
ಕಾಯಬೇಕಿತ್ತು ಇದು ಸರಿಯಾದ 
ಸಮಯವಲ್ಲ ಎನ್ನುತ್ತಾರೆ..
ಅದೇ ಸ್ವಲ್ಪ ಲೇಟಾಗಿ ಹೇಳಿದರೆ..
ಮೊದ್ಲೇ ಹೇಳಬೇಕತ್ತೋ ಬೇಡವೋ ಅನ್ನುತ್ತಾರೆ...

ಬದುಕಲ್ಲಿ ಎಷ್ಟೆಲ್ಲ ದ್ವಂದ್ವಗಳು ಮಾರಾಯ್ರೆ...



---2----
ಬಹುದಿನಗಳ ನಂತರ 
ಮನಸ್ಸು ಖಾಲಿಯಾಗಿದೆ


---3---
ಇಲ್ಲ.. ಇಲ್ಲ...
ನಾನು ಆ ಮಹಾನಗರಿಗೆ ಹೋಗಲಾರೆ...
ಅವನ ಕೈಯನ್ನು ಹಿಡಿದು 
ನಡೆಯುವ ಅವಳನ್ನು ನಾನು
ನೋಡಲಾರೆ..


---4---
ಹೋಗುವ ಮುನ್ನ 
ಒಮ್ಮೆ ತಿರುಗಿ ನೋಡಿ
ಹೋಗಿದ್ದರೆ ಸಾಕಿತ್ತು ಗೆಳತಿ..
ಕಾರಣ ಹೇಳಲೇ ಬೇಕು
ಎಂದಿರಲಿಲ್ಲ.


--5--

ಬಹು ವರ್ಷಗಳ ನಂತರ
ಮನಸ್ಸು ಮತ್ತೆ ಖಾಲಿಯಾಗಿದೆ.*



(*ಆಸಕ್ತರು ತೂರಿಕೊಳ್ಳಬಹುದು)


--6--
ನಾನು ನಿನ್ನನ್ನೇ ಮದುವೆ ಆಗ್ಬೇಕಿತ್ತು
ಕಣೋ ತಪ್ಪು ಮಾಡಿದೆ ಛೇ..
ಅಂತನ್ನಿಸಿದರೆ 
ಹಳೇ ಪ್ರೇಮಿಯ
ಬದುಕು ಸಾರ್ಥಕ.

--7--
ಹಾಳಾದ ಕಣ್ಣು
ಅದುರಿ ಅದುರಿ
ಸೂಚನೆ ನೀಡಿದರೂ
ಮನಸ್ಸಿಗೆ ಗೊತ್ತೇ
ಆಗುವುದಿಲ್ಲ ನೋಡಿ

--8--
ವಿಚಿತ್ರ ನೋಡಿ
ಮನಸ್ಸಿಗೆ ಸುಸ್ತಾದರೆ
ಮೈಯಲ್ಲೆಲ್ಲಾ ನೋವು!

--9--
ರಸ್ತೆ ಉಬ್ಬು ತಗ್ಗಿನಂತೆ
ಬದುಕೂ...
ಎಷ್ಟು ಟಾರು ಹಾಕಿದರೂ
ಮತ್ತೆ ಮತ್ತೆ ಗಾಯ!

--10--
ಹಿಂಗೆ ಆಗ್ತದೆ
ಅಂತ ಗೊತ್ತಿದ್ದರೂ
ಸುದ್ದಿ ತಿಳಿದಾಗ ಮಾತ್ರ
ಬಹುಕಾಲ
ದಿಘಿಲು


-12-
ವ್ಯಕ್ತಿಯ ಜೊತೆಗೆ ನಂಟು 
ಕಳೆದುಕೊಳ್ಳುವುದು 
ಸುಲಭ..
ಆದರೆ ಊರಿನ ಜೊತೆಗೆ 

ಕಷ್ಟ...

-13-
ವಾದ ಹಾಗೂ ಜಗಳ..
ಎರಡು ಶಬ್ದ 

ನೂರು ಮುಖಗಳು...

-14-
ಕಥೆ 
ಮಾತಾಡಿದರೆ ಸಾಕಿತ್ತು..
ಆದರೆ ಪಾತ್ರಗಳೂ 

ಜೀವಂತವಾಗಿ ಬಂದು 
ಮಾತಾಡುತ್ತವೆ..


(ಇದನ್ನು ಕವಿತೆಯೆನ್ನಿ, ಹಾಗೆ ಬರೆದ ಸಾಲು ಎನ್ನಿ..
ಬದುಕು ಬೇಸರದಲ್ಲಿದ್ದಾಗ ಹಾಗೆ ಸುಮ್ಮನೆ ಗೀಚಿದ್ದು...
ಇಷ್ಟವಾದರೆ ಈ ಕುರಿತು ನಾಲ್ಕು ಸಾಲು ಬರೆಯಿರಿ..)

(ಶಿರಸಿಯಲ್ಲಿ ಬರೆದಿದ್ದು 19-12-2013)

Wednesday, December 18, 2013

ಶಿಲ್ಪಾ (ಕಥೆ)

                       ಅಂದು ಯಾಕೋ ಮನಸ್ಸಿಗೆ ತುಂಬಾ ಬೇಜಾರಾಗಿತ್ತು. ಹೇಳಲಸಾಧ್ಯವಾದ ಬೇಸರ. ಮನೆಯಲ್ಲಿ ಕುಳಿತೆ, ತಿರುಗಾಡಿದೆ.. ಟಿ.ವಿ ನೋಡಿದೆ, ಪುಸ್ತಕ ಓದಿದೆ, ಮುಖೇಶನನ್ನೂ ಹಾಡಿಸಿದೆ.. ಊಹೂಂ.. ! ಏನು ಮಾಡಿದರೂ ಬೇಸರ ಹೋಗಲೊಲ್ಲದು. ಕೊನೆಗೊಮ್ಮೆ ಪುಸ್ತಕಗಳ ರಾಶಿಯ ನಡುವಿನಲ್ಲಿದ್ದ ಕಾಲೇಜು ದಿನಗಳ ಆಟೋಗ್ರಾಫ್ ನೆನಪಾಯ್ತು. ತೆರೆದು ಓದಲಾರಂಭಿಸಿದೆ.
       ಕೆಲವರ ಪ್ರಕಾರ ಆಟೋಗ್ರಾಫ್ ಬರೆಯುವುದು ಅಥವಾ ಬರೆಸುವುದು ನಿಷ್ಪ್ರಯೋಜಕ. ಆದರೆ ನನ್ನ ಪ್ರಕಾರ ಅದು ನಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು. ಇನ್ನೊಂದೇನಂದ್ರೆ ಬೇಸರ, ಏಕಾಂತ, ದುಃಖದ ಸಮಯದಲ್ಲಿ ಅದರಂತಹ ಖುಷಿಕೊಡುವ ವಸ್ತು ಇನ್ನೊಂದಿಲ್ಲ.
       ನಾನು ಹಾಗೆಯೇ ಅದನ್ನು ಓದುತ್ತಾ ಹೋದಂತೆ ನೆನಪಿನಾಳದಿಂದ ಮಾಸಿ ಹೋಗಿದ್ದ ಗೆಳೆಯರೆಲ್ಲ ಮತ್ತೆ ನೆನಪಿಗೆ ಬಂದರು. ಎಸ್ಸೆಎಸ್ಸೆಎಲ್ಸಿಯ ಗೆಳೆಯರು, ಪಿಯುಸಿಯ ದೋಸ್ತು, ಡಿಗ್ರಿಯ ಗೆಳೆಯ ಗೆಳತಿಯರೆಲ್ಲ ನೆನಪಿನಂಗಳಕ್ಕೆ ಧುತ್ತೆಂದು ಬಂದರು. ಆಗ ಕಳೆದ ಸಮಯ, ಮೋಜು-ಮಸ್ತಿ-ಮಜಾ-ಹರಟೆ-ಜಗಳ ಮುಂತಾದ ಸನ್ನಿವೇಶ ನೆನಪಿಗೆ ಬಂದಿತು.
       ಪ್ರೀತಿಯ ಮಿತ್ರ ವಿಜಯ, ಆದಿತ್ಯ ನೆನಪಾದರು. ಕಮಲಾಕರ ನೆನಪಿಗೆ ಬಂದ. ಅದಲ್ಲದೇ ಡಿಗ್ರಿಯ ಗೆಳೆಯರಾಗಿದ್ದ ರಾಘು, ಕಿಟ್ಟು ಅವರೂ ನೆನಪಿಗೆ ಬಂದರು. ಹೀಗೆ ತಿರುವುತ್ತ ಸಾಗಿದಂತೆ ಕೊಟ್ಟ ಕೊನೆಯಲ್ಲಿ ಇದ್ದ ೊಂದು ಆಟೋಗ್ರಾಫ್ ನನ್ನ ನದುಕಿಗೆ ಸಂತಸವನ್ನೀಯುತ್ತಿತ್ತು. ಆ ಆಟೋಗ್ರಾಫ್
ಸ್ನೇಹದ ಗುಂಗಲ್ಲಿ ಮೈಮರೆತು
ಪ್ರೇಮ ಪಯಣದಲ್ಲಿ ಕನಸುಗಳನ್ಹೊತ್ತು
ಸಾಗುವ ಜೀವನ ನೌಕೆಗೆ ಸಾಟಿಯಾಗಬಲ್ಲದೇ
ಕಡಲಿನ ಆ ಭಾರಿ ಮುತ್ತು
ಎನ್ನುವ ವಾಕ್ಯ-ಚುಟುಕದೊಂದಿಗೆ ಪ್ರಾರಂಭವಾಗಿತ್ತು. ಅದನ್ನು ಬರೆದಾಕೆಯೇ ಶಿಲ್ಪಾ.ನನಗೆ ಬಿ.ಎ ಓದುವಾಗ ಸಿಕ್ಕ ಓರ್ವ ಕವಯಿತ್ರಿ ಗೆಳತಿ ಈಕೆ.
        ನಿಜವಾಗ್ಲೂ ಹೇಳಬೇಕಂದ್ರೆ ಆಕೆ ನನಗೆ ಗೆಳತಿಯಾಗಿ ಸಿಕ್ಕ ಅವಧಿ ಕೇವಲ ಮೂರು ತಿಂಗಳ ಕಾಲ ಮಾತ್ರ. ಹಾಗೆ ಅವಳು ಬರೆದ ಆಟೋಗ್ರಾಫ್ ಓದಿದ ನಂತರ ಮನದಲ್ಲಿ ಅವಳ ನೆನಪೇ ತುಂಬಿತ್ತು. ಹಾಗೇ ಅವಳ ಬದುಕು, ಹಲವು ವಿಚಿತ್ರ ತಿರುವುಗಳಿಗೆ ಸಿಲುಕಿದ ಕ್ಷಣಗಳೆಲ್ಲ ನಿಧಾನವಾಗಿ ನೆನಪಿಗೆ ಬರಲಾರಂಭವಾದವು.

**

       ಶಿಲ್ಪಾ ಓರ್ವ ಸುಸಂಸ್ಕೃತ ಮನೆತನದಾಕೆ. ಆಕೆಯ ಊರು ಶಿರಸಿಯ ಸಮೀಪದ ಒಂದು ಚಿಕ್ಕ ಹಳ್ಳಿ. ಓದಿನಲ್ಲಿ ಬಹಳ ಚುರುಕು. ಉತ್ತಮ ಹಾಡುಗಾರ್ತಿಯೂ ಹೌದು. ಓರ್ವ ಯುವ ಕವಯಿತ್ರಿಯಾಗಿದ್ದ ಈಕೆಯನ್ನು ನನಗೆ ಪರಿಚಯಿಸಿದ್ದು ಇನ್ನೋರ್ವ ಗೆಳತಿ ಚೈತ್ರಾ. ಒಂದು ದಿನ ನಾನು ಆಗ ಬಿ.ಎ. ಗೆ ಸೇರಿ 15-20 ದಿನವಾಗಿತ್ತಷ್ಟೇ. ಆಗಸ್ಟೇ ಪ್ರಾರಂಭವಾಗಿದ್ದ ಸೆಮಿಸ್ಟರ್ ಪದ್ಧತಿ. ಅಂದು ಬಹುಶಃ ಇಂಗ್ಲೀಷ್ ಕ್ಲಾಸಿರಬೇಕು. ಮುಗಿದಿತ್ತಷ್ಟೇ. ಆಗ ಬಂದ ಈಕೆ ನನ್ಹತ್ರ `ಏನೋ.. ನೀನು ಕಥೆ.. ಕವನ ಬರೀತಿಯಂತೆ.. ನಂಗೊಮ್ಮೆ ತೋರಿಸು..' ಎಂದಳು.
       ನನಗೆ ಚಿಕ್ಕ ಷಾಕ್. ಯಾರಪ್ಪಾ ಹೀಗೆ ಸಡನ್ನಾಗಿ ಬಂದು ಕೇಳ್ತಿದ್ದಾಳೆ ಅಂದ್ಕೊಂಡು ವಿಸ್ಮಯದಿಂದ `ಯಾರು ನಿಂಗೆ ಹೇಳಿದ್ದು..?' ಎಂದೆ.
       ಆಕೆ ತೋರಿಸಿದ್ದು ಬಾಲ್ಯದ ಹಾಗೂ ಗೆಳತಿ ಚೈತ್ರಾಳನ್ನು. ಹೀಗೆ ಪರಿಚಯವಾದ ಶಿಲ್ಪಾ ಆಕೆ ಬರೆದ ಕವಿತೆಗಳನ್ನು ನನಗೆ ತೋರಿಸಿದ್ದಳು. ನನ್ನ ಬಳಿ ಸಲಹೆಯನ್ನೂ ಪಡೆದುಕೊಂಡಿದ್ದಳು. ನಾನೂ ಕವಿತೆಗಳನ್ನು, ಬರಹಗಳನ್ನು ನೀಡಿ ಸಲಹೆಯನ್ನು ಪಡೆದುಕೊಂಡಿದ್ದೆ. ಸಮಾಜಸೇವೆ ಮಾಡಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದ್ದ ಆಕೆ ಅದೇ ಕಾರಣಕ್ಕಾಗಿ ಕಾಲೇಜಿನ ಎನ್.ಎಸ್.ಎಸ್. ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಳು.
       ಅವಳ ಪರಿಚಯವಾಗಿ ಒಂದೆರಡು ತಿಂಗಳುಗಳು ಕಳೆದಿರಬಹುದಷ್ಟೇ. ಆಗಲೇ ನನಗೆ ಗೊತ್ತಾಗಿದ್ದು ಅವಳ ಮದುವೆ ಅಂತ. ನಿಜಕ್ಕೂ ಶಾಕ್ ಆಗಿದ್ದೆಂದರೆ ಅಷ್ಟು ಚಿಕ್ಕ ವಯಸ್ಸಿಗೆ ಮದುವೆ ಮಾಡ್ತಾರೆ ಅನ್ನೋ ಸುದ್ದಿಯನ್ನು ಕೇಳಿ.
       ಒಂದು ದಿನ ಆಕೆ ಕಾಲೇಜಿಗೆ ಬಂದವಳೆ ತನ್ನ ಎಂಗೇಜ್ ಮೆಂಟ್ ಇದೆಯೆಂದೂ ಅದಕ್ಕೆ ತಪ್ಪದೇ ಬರಬೇಕೆಂದೂ ತಿಳಿಸಿದಳು. ಆಗ ಎನ್.ಎಸ್.ಎಸ್. ಶಿಬಿರ ನಡೆಯುತ್ತಿತ್ತು. ಆಕೆಯ ಸಮಾಜಸೇವೆಯ ಗುರಿಯನ್ನು ಬಿಟ್ಟು, ಎನ್.ಎಸ್.ಎಸ್. ಶಿಬಿರವನ್ನೂ ಅರ್ಧದಲ್ಲಿಯೇ ಬಿಟ್ಟು ಬಂದಿದ್ದಳು. ಆಕೆಯ ಒತ್ತಾಯಕ್ಕೆ ಮಣಿದು ನಾನು ಹಾಗೂ ಚೈತ್ರಾ ನಿಶ್ಚಿತಾರ್ಥಕ್ಕೆ ಹೋಗಿ ಬಂದೆವು. ಆಗ ಆಕೆ ಅವಳ ಭಾವಿ ಪತಿಯನ್ನು ಪರಿಚಯಿಸಿದಳು.
       ಅವಳ ಭಾವಿ ಪತಿಯ ಹೆಸರು ಜಗದೀಶ. ಆತ ಸಾಗರ ಕಡೆಯ ಹಳ್ಳಿಯವನು. ಹುಬ್ಬಳ್ಳಿಯಲ್ಲಿ ಉತ್ತಮ ಉದ್ಯೋಗದಲ್ಲಿದ್ದ ಆತ. ಬಹಳ ತೆಳ್ಳಗಿದ್ದ ಶಿಲ್ಪನ ಎದುರು ಆಕೆಗಿಂತ ಎರಡುಪಟ್ಟು ದಪ್ಪವಾಗಿದ್ದ ಎನ್ನುವುದನ್ನು ಬಿಟ್ಟರೆ ಒಳ್ಳೆಯ ಮನಸ್ಸಿನ ವ್ಯಕ್ತಿ ಆತ. ಅಂದು ಮದುವೆಯ ದಿನಾಂಕವನ್ನೂ ನಿಶ್ಚಯಿಸಲಾಯಿತು. ಅದಕ್ಕೆ ಹೋಗಿ ಬಂದದ್ದೂ ಆಯಿತು. ಆಕೆಯ ಬಳಿ `ನಿನ್ನ ಬಾಳ್ದೋಣಿ ಸುಖವಾಗಿರಲಿ..' ಎಂದು ಆಶಿಸಿದ್ದೂ ಆಯಿತು. ಅದೆಷ್ಟು ಬೇಗ ನನಗೆ ಪರಿಚಯವಾಗಿದ್ದಳೋ ಅಷ್ಟೇ ಬೇಗ ಅವಳ ಮದುವೆಯೂ ಆಗಿತ್ತು.
        ಅವಳ ಮದುವೆಯ ದಿನ ಮಿತ್ರನೋರ್ವ ಅವಳಿಗೆ ಟ್ಯೂಬ್ ಲೈಟ್, ಪಟಾಕಿ ಎಂದೆಲ್ಲಾ ಹೆಸರಿಟ್ಟಿದ್ದನ್ನು ಆತ `ಟ್ಯೂಬಲೈಟ್ ಮದುವೆ ವೆರಿ ವೆರಿ ಫಾಸ್ಟ್..' ಎಂದು ಹೇಳಿ ನಗಿಸಿದ್ದ. ಈ ಮುಂತಾದ್ದೆಲ್ಲಾ ಆ ಆಟೋಗ್ರಾಫ್ ಓದಿ ಮುಗಿಸುವ ವೇಳೆಗೆ ನನ್ನ ತಲೆಯಲ್ಲಿ ತುಂಬಿತ್ತು. ಒಮ್ಮೆಲೆ ಸಣ್ಣಗೆ ನಕ್ಕೆ.


**

      ಆಕೆಯನ್ನೊಮ್ಮೆ ಈಗ ಭೇಟಿಯಾಗಬೇಕಲ್ಲ ಎಂದು ನಿರ್ಧರಿಸಿ ಮರುದಿನ ಆಕೆಯ ತವರೂರಿಗೆ ಹೋದೆ. ಅಲ್ಲಿ ಆಕೆಯ ತಂದೆ ತಾಯಿಯರ ಬಳಿ ಶಿಲ್ಪಾಳ ಗಂಡನ ಮನೆಯ ವಿವರ ತಿಳಿಯುವುದು ನನ್ನ ಉದ್ದೇಶವಾಗಿತ್ತು. ಅವರ ಬಳಿ ಕೇಳಿದೆ. ಅವರು ಹೇಳಿದರು. ಆಮೇಲೆ ನಾನು ನೇರವಾಗಿ ಆಕೆಯ ಗಂಡನ ಮನೆಯತ್ತ ತೆರಳಿದೆ. ಸಾಗರದ ವರದಳ್ಳಿಯ ಸನಿಹದ ಊರಲ್ಲಿ ಆಕೆಯ ಗಂಡನ ಮನೆ. ಅಲ್ಪ ಸ್ವಲ್ಪ ಹುಡುಕಾಟದ ನಂತರ ಆಕೆಯ ಮನೆ ಸಿಕ್ಕಿತು. ಇದ್ದಾಳೋ, ಇಲ್ಲವೋ,.. ಇದ್ದರೇ ಹೇಗೆ ಮಾತನಾಡುವುದು, ಇಲ್ಲದಿದ್ದರೆ ಏನು ಮಾಡುವುದು ಈ ಮುಂತಾದ ಗೊಂದಲದ ಗೂಡಿನಂತಹ ಮನಸ್ಸಿನೊಂದಿಗೆ ಆಕೆಯ ಮನೆಯ ಕಾಲಿಂಗ್ ಬೆಲ್ ಒತ್ತಿದೆ.
        ಯಾರೋ ಹಿರಿಯರು ಮನೆಯ ಬಾಗಿಲು ತೆರೆದರು. ವಿಚಾರಿಸಿದಾಗ ತಾನು ಶಿಲ್ಪಾಳ ಮಾವ ಎಂದರು. ಮನೆಯೊಳಗೆ ಕರೆದು ಕುಳ್ಳಿರಿಸಿ ತಮ್ಮ ಮನೆಯಾಕೆಗೆ ನನ್ನನ್ನು ಪರಿಚಯಿಸಿದರು. ಕೊನೆಗೆ ಶಿಲ್ಪಾ ಹಾಗೂ ಜಗದೀಶರ ಬಗ್ಗೆ ವಿಚಾರಿಸಿದೆ. ಅವರು ಹುಬ್ಬಳ್ಳಿಯಲ್ಲಿದ್ದಾರೆಂದೂ ಅಲ್ಲಿಗೆ ಹೋದರೆ ಸಿಗಬಹುದೆಂದೂ ತಿಳಿಯಿತು. ನಾನು ಹುಬ್ಬಳ್ಳಿಗೂ ಹೋದೆ. ಶಿಲ್ಪಾಳ ಅತ್ತೆ-ಮಾವ ಕೊಟ್ಟ ವಿಳಾಸದಿಂದ ಮನೆ ಹುಡುಕುವುದು ಕಷ್ಟವೇನೂ ಆಗಲಿಲ್ಲವೆನ್ನಿ.
         ಅವರ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತಿದೆ. ಒಳಗಿನಿಂದ ಓರ್ವ ವ್ಯಕ್ತಿ ಬಂದು ಬಾಗಿಲು ತೆರೆದರು. ನಾನು ನನ್ನ ಪರಿಚಯ ಹೇಳಿಕೊಂಡೆ. ಒಳಗೆ ಕರೆದು ಕುಳ್ಳಿರಿಸಿದ ವ್ಯಕ್ತಿಯೇ ಜಗದೀಶ್ ಎಂದು ಆ ನಂತರ ನನಗೆ ತಿಳಿಯಿತು. ಮವುವೆಯಾಗಿ 7 ವರ್ಷವಾದ ನಂತರ ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದ ಕಾರಣ ತಕ್ಷಣಕ್ಕೆ ಅವರ ಗುರುತು ನನಗೆ ಹಿಡಿದಿರಲಿಲ್ಲ. ಅವರ ಬಳಿ ಶಿಲ್ಪಾಳ ಬಗ್ಗೆ ವಿಚಾರಿಸಿದೆ. ಆಗ ಅವರು `ಅವಳು.. ಈಗಷ್ಟೇ ತವರಿಗೆ ಹೋದಳಲ್ಲ.. ' ಎಂದರು.
         ಆಕೆಯನ್ನು ನೋಡಿ ಮಾತಾಡಿಸಿ ಹೋಗೋಣ ಎಂದುಕೊಂಡಿದ್ದ ನನಗೆ ಒಮ್ಮೆ ಭ್ರಮನಿರಸನವಾದರೂ ಜಗದೀಶರ ಬಳಿ `ಆಕೆ ಚನ್ನಾಗಿದ್ದಾಳಾ..' ಎಂದು ಕೇಳಿದೆ.
         ಆಗ ಅವರು `ನೋಡಿ ಇವ್ರೆ... ನಿಮ್ಮ ಬಗ್ಗೆ ಅನೇಕ ಸಾರಿ ನನ್ನ ಹತ್ತಿರ ಹೇಳಿದ್ದಾಳೆ.. ನಾನೂ ಕುತೂಹಲದಿಂದ ನಿಮ್ಮ ಬಗ್ಗೆ ವಿಚಾರಿಸಿದ್ದೆ. ಮೊನ್ನೆ ನಿಮ್ಮದೊಂದು ಪುಸ್ತಕ ಬಿಡುಗಡೆಯಾಯಿತಲ್ಲ.. ಆಗ ಹುಬ್ಬಳ್ಳಿಯಲ್ಲಿ ನಿಮ್ಮ ಪುಸ್ತಕಗಳಿಗಾಗಿ ಎಲ್ಲ ಅಂಗಡಿಗಳನ್ನು ಜಾಲಾಡಿದ್ದಳು.. ಅಷ್ಟೇ ಅಲ್ಲ ನನಗೂ ಆದಿನ ಅದೇ ಕೆಲಸ ಮಾಡಿಸಿದಳು.. ಸಿಗಲಿಲ್ಲ ಬಿಡಿ..' ಎಂದರು.
        `ಏನ್ ಮಾಡ್ತಿದ್ದಾಳೆ ಆಕೆ..? ' ಎಂದೆ..
        `ಆಗ ಅವರು `ನೋಡಿ ಈ ಶಿಲ್ಪಾಳದ್ದು ಸುಮ್ಮನಿರ ಗುಣವಲ್ಲ. ಸದಾ ಏನಾದರೂ ಮಾಡ್ತಾ ಇರಬೇಕು ಅನ್ನೋ ಮನೋಭಾವ.. ಕುಂತಲ್ಲಿ ಕೂರೋದಿಲ್ಲ.. ಆಕೆಯ ವೇಗಕ್ಕೆ ಅನೇಕ ಸಾರಿ ನಾನೇ ಸೋತು ಸುಣ್ಣವಾಗಿದ್ದೇನೆ.. ಹುಬ್ಬಳ್ಳಿಗೆ ಬಂದ ಹೊಸತರಲ್ಲಿ ಬೆಕ್ಕಿನ ಮರಿಯಂತಿದ್ದಳು.. ಕ್ರಮೇಣ ಹುಬ್ಬಳ್ಳಿಯೆಲ್ಲ ಚಿರಪರಿಚಿತವಾಯ್ತು ನೋಡಿ.. ಅದೇನೇನು ಮಾಡಿದಳೋ.. ಹೇಗೆ ಮಾಡಿದಳೋ ಗೊತ್ತಿಲ್ಲ.. ಪ್ರಾರಂಭದಲ್ಲಿ ಕಾನ್ವೆಂಟೊಂದರಲ್ಲಿ ಟೀಚರ್ ಆಗಿ ಕೆಲಸ ಮಾಡಿದಳು.. ಆಕೆಯ ಶ್ರದ್ಧೆಯೋ.. ಒಳ್ಳೆಯ ಗುಣವೋ.. ನಸೀಬೋ ಗೊತ್ತಿಲ್ಲ...ಈಗ ಎರಡು ಶಾಲೆಗಳನ್ನು ನಡೆಸುತ್ತಿದ್ದಾಳೆ.. ಒಂದು ಶಾಲೆಯಂತೂ ಬುದ್ಧಿಮಾಂದ್ಯರಿಗಾಗಿ ಆರಂಭಿಸಿದ್ದಾಳೆ.. ' ಎಂದು ಹೇಳಿದಾಗ ನನ್ನ ಮನಸ್ಸು she is great ಎಂದು ಉದ್ಘರಿಸಿತು.
         ನಾನು ಜಗದೀಶರ ಬಳಿ ಅವಳಿಗೆ ಇಷ್ಟವೆಂದು ಮಾಡಿಸಿಕೊಂಡು ಬಂದಿದ್ದ ಚಕ್ಕುಲಿಯನ್ನು ನೀಡಿದೆ. ಅವರಿಗೆ ಏನೋ ನೆನಪಾದಂತಾಗಿ ಎದ್ದು ಹೋಗಿ ಟಿ. ಮಾಡಲು ಹೊರಟರು. ಭವ್ಯ ಮನೆ.. ಕೆಲಸಗಾರರಿಲ್ಲವಲ್ಲ ಎಂದು ವಿಸ್ಮಿತನಾಗುವಷ್ಟರಲ್ಲಿ ಶಿಲ್ಪಾ ಇದ್ದಲ್ಲಿ ಅಂತದ್ದಕ್ಕೆ ಛಾನ್ಸೇ ಇಲ್ಲ ಬಿಡಿ ಎಂದು ಕೊಂಡೆ..
         ಅವರು ಟಿ. ಮಾಡಲು ಹೋಗುವ ಮುನ್ನ ಮನೆಯಿಲ್ಲಿದ್ದ ಸಿ.ಡಿ. ಪ್ಲೇಯರ್ರಿಗೆ ಯಾವುದೋ ಒಂದು ಸಿ.ಡಿಯನ್ನು ಹಾಕಿ ಕೇಳ್ತಾ ಇರಿ.. ಈಗ ಬಂದೆ ಎಂದು ಹೋದರು. ಆ ಸಿ.ಡಿ ನನಗೆ ಅತ್ಯಂತ ಇಷ್ಟವಾದ  ಕೆ. ಎಸ್. ನಿಸಾರ್ ಅಹಮದರ
ಮತ್ತದೇ ಬೇಸರ
ಅದೆ ಸಂಜೆ.... ಅದೆ ಏಕಾಂತ...
ಎಂಬ ಹಾಡನ್ನು ಹಾಡುತ್ತಿತ್ತು. ಎಲ್ಲೋ ಕೇಳಿದ ಕಂಠ ಎಂದುಕೊಂಡೆ.. ರತ್ನಮಾಲಾ ಪ್ರಕಾಶ ನೆನಪಿಗೆ ಬಂದರು. ಆದರೆ ಧ್ವನಿ ಅವರದ್ದಲ್ಲ.. ಗಮನಿಸಿ ಕೇಳಿದಾಗ ಅದು ಶಿಲ್ಪಾಳದ್ದೆಂದು ಮನದಟ್ಟಾಯಿತು. ಅರೇ... ಈಕೆ ಹಾಡಿದ ಸಿ.ಡಿ.ಯೂ ಬಿಡುಗಡೆಯಾಗಿದೆಯಾ.. ಯಾಕೆ ನನಗೆ ಗೊತ್ತಾಗಲಿಲ್ಲ.. ಎಂದುಕೊಂಡೆ.
         ಆಕೆಯ ಎಂಗೇಜ್ ಮೆಂಟ್ ಆದ ನಂತರ ಆಕೆಯನ್ನು ನನ್ನ ಮನೆಗೊಮ್ಮೆ ಕರೆದೊಯ್ದಿದ್ದೆ. ಈಕೆ ಹಾಡುತ್ತಾಳೆ ಎಂದು ಗೊತ್ತಿದ್ದಿದ್ದರಿಂದ ನಮ್ಮ ಮನೆಯಲ್ಲಿ ಆಕೆಯ ಬಳಿ ಹಾಡೆಂದು ಪೀಡಿಸಿದಾಗ `ಹೆಂಗಾರಾ ಬಾರಾ ಹುಡುಗಿ ಕಂಗಾಲಾದೇನಾ..' ಹಾಗೂ `ಹುಚ್ಚು ಖೋಡಿ ಮನಸ್ಉ...' ಎಂಬೆರಡು ಹಾಡುಗಳನ್ನು ಹಾಡಿದ್ದಳು.. ನಮ್ಮ ಮನೆಯವರಷ್ಟೇ ಅಲ್ಲದೇ ಅಕ್ಕಪಕ್ಕದ ಮನೆಯ ಶ್ರೋತೃಗಳ ಚಪ್ಪಾಳೆಯನ್ನೂ ಗಿಟ್ಟಿಸಿಕೊಂಡಿದ್ದಳು. ಆ ಸಿ.,ಡಿಯಲ್ಲಿ ಆ ಎರಡು ಹಾಡುಗಳೂ ಇದ್ದವು. ಕೇಳಿದಂತೆಲ್ಲ ಭಾವನೆಗಳು ಬಯಸಿ ಬಯಸಿ ಬರುತ್ತಿದೆಯೇನೋ ಅನ್ನಿಸುತ್ತಿತ್ತು. ಅವುಗಳನ್ನು ಕೇಳುವಷ್ಟರಲ್ಲಿ ಜಗದೀಶ್ ಅವರು ಟಿ. ತಂದರು. `ನೀವು ಬಹಳ ಬದಲಾಗಿದ್ದೀರಿ..' ಎಂದೆ.. `ಹೌದು.. ಸುಮ್ಮನೆ ಕೂರೋಕೆ ಬಿಡೋದಿಲ್ಲ ನೋಡಿ.. ತೆಳ್ಳಗಾಗಿದ್ದೇನೆ..' ಎಂದು ನಕ್ಕರು.. ಅವರ ಸರಳತೆ ನನಗಿಷ್ಟವಾಯಿತು.
         ನಾನು ಹೊರಡಲನುವಾದೆ.. ಊಟ ಮಾಡಿ ಹೋಗಿ ಎನ್ನುವ ಬಲವಂತ.. ನಾನೆಷ್ಟೇ ಕೇಳಿದರೂ ಬಿಡಲಿಲ್ಲ.. ಪರಿಣಾಮ ಅವರ ಮನೆಯ ಊಟದ ಋಣವನ್ನು ಮುಗಿಸಿದಂತಾಯಿತು. ಶಿಲ್ಪಾಳ ಬಳಿ ಮಾತನಾಡಿ ಎಂದು ಮೊಬೈಲ್  ರಿಂಗಿಸಿದರು. ನೆಟ್ ವರ್ಕ್ ಸಿಗದ ಕಾರಣ ಅದು ವ್ಯರ್ಥವಾಯಿತು. ಕೊನೆಗೆ ನಾನು ಹೊರಡಲು ಅನುವಾದೆ.. ಸಂತಸದಿಂದ ಹಾರಯಿಸಿ ಆಕೆಯ ಹಾಡಿನ ಸಿ.ಡಿ.ಯೊಂದನ್ನು ಕೊಟ್ಟರು. ನಾನು ಏನು ಮಾಡಬೇಕೆಂದು ತೋಚದೆ ನನ್ನ ಪುಸ್ತಕವನ್ನು ಅವರಿಗೆ ಕೊಟ್ಟೆ.. ಜಗದೀಶರ ಮುಖ ಅರಳಿ ಊರಗಲವಾಯಿತು. `ನೋಡ್ರಿ... ನಾನು ಕಾಯ್ತಾ ಇದ್ದೆ.. ಬಹಳ ದಿನ ಆಗಿತ್ತು.. ಅವಳು ವಾಪಸ್ಸು ಬರಲಿ.. ಸರ್ ಪ್ರೈಸ್ ಕೊಡ್ತೀನಿ..' ಎಂದರು.. ಅವರ ಅನ್ಯೋನ್ಯತೆ ಕಂಡು ಮನಸ್ಸು ಹಿಗ್ಗಿತು.
           ಮನೆಯ ಕಡೆಗೆ ಹೊರಟಾಗ ಆಕೆಯ ಸಾಧನೆಯ ಬಗ್ಗೆ ನನಗೆ ಗೌರವ ಉಂಟಾಯಿತು. ಸಮಾಜಸೇವೆಯನ್ನು ಗುರಿಯಾಗಿಟ್ಟುಕೊಂಡು, ಮಧ್ಯದಲ್ಲಿ ಅಡೆ ತಡೆ ಬಂದರೂ ಬಂದ ಸಮಸ್ಯೆಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡು ಸಾಧನೆ ಮಾಡಿದ ಆಕೆಯ ಕಡೆಗೊಂದು ಸಂತಸದ ಭಾವ ಮೂಡಿತು. ತನ್ನ ಗುರಿಯನ್ನು ಪತಿಯ ಸಹಯೋಗದೊಂದಿಗೆ ಮಾಡಿ ಮುಟ್ಟಿದ್ದು ಮತ್ತಷ್ಟು ಹಿರಿಮೆಗೆ ಕಾರಣವಾಯಿತಲ್ಲದೇ ಮನಸ್ಸು ಹ್ಯಾಟ್ಸಾಫ್ ಎನ್ನುತ್ತಿತ್ತು.. ಮನಸ್ಸಿನಲ್ಲಿ ಮಾತ್ರ
`ಮತ್ತದೇ ಬೇಸರ..
ಅದೆ ಸಂಜೆ.. ಅದೆ ಏಕಾಂತ..' ಎಂಬ ನಿಸಾರರ ಹಾಡು ಬಿಟ್ಟು ಬಿಡದೇ ಗುನುಗಿ ಕಾಡುತ್ತಿತ್ತು.. ಇಂತಹಾ ಗೆಳತಿಯನ್ನು ಪರಿಚಯಿಸಿದ ಚೈತ್ರಾಳಿಗೆ ಮನಸ್ಸು ಥ್ಯಾಂಕ್ಸ್ ಎನ್ನುತ್ತಿತ್ತು..7

Tuesday, December 17, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 10

ಕಪ್ಪಿನೊಂದಿಗೆ ನಮ್ಮ ತಂಡ
ನಾನು ತೃಪ್ತಿ ಹಾಗೂ ಕಿಟ್ಟು ಅವರ ಮಾತನ್ನು ಕೇಳುತ್ತ ಹಾಗೇ ಸಂಗಮವನ್ನು ನೋಡಿದೆ. ಕೆಂಪು ನೀರು.. ರಕ್ತದಂತೆ ರಭಸದಿಂದ ಉಕ್ಕಿ ಹರಿದಿತ್ತು. `ಹರಿ.. ಹರಿ.. ಎಸ್ಟ್ ದಿನಾ ಅಂತ ಹರೀತಿಯಾ... ? ಹುಡುಗಿಯರ ಆರ್ಭಟ.. ಅಬ್ಬರ ಏನಿದ್ರೂ ಮದುವೆ ಆಗೋವರಿಗಂತೆ.. ಆ ಮೇಲೆ ಏನಿಲ್ಲ.. ನೀನು ಇನ್ನೆಷ್ಟು ದಿನಾ ಅಂತ ಹೀಗೆ ಹುಚ್ಚೆದ್ದು ಹರೀತಿಯಾ..?' ಅನ್ನುತ್ತಾ ನಗುತ್ತಾ ಕೃಷ್ಣೆ ಮಲಪ್ರಭೆಗೆ ಹೇಳುತ್ತಾ ಸೌಮ್ಯವಾಗಿ ಹರಿಯುತ್ತಿದ್ದಾಳೇನೋ ಅನ್ನಿಸುತ್ತಿತ್ತು.
`ಕಿಟ್ಟು... ಕೃಷ್ಣೆಯ ನಿಲುವು ಅದೆಷ್ಟು ಭವ್ಯ ಅಲ್ಲ.. ಎಲ್ಲೋ ಹುಟ್ಟಿ, ಹರಿದು, ದೂರ ದೂ...ರ ಸಾಗಿ, ಸನಿಹ ಬಂದ ನದಿಗಳನ್ನೆಲ್ಲ ಬರಸೆಳೆದು ತೆಕ್ಕೆಗೆ ಹಾಕಿ ದೈತ್ಯವಾಗಿ ಎಲ್ಲೋ ಸಮುದ್ರ ರಾಜನ ಸನ್ನಿಧಿ ಸೇರ್ತದಲ್ಲಾ.. ಎಂಥಾ ನದಿಯಲ್ವಾ..' ಎಂದೆ..
`ನಿಜ.. ಈ ಕೃಷ್ಣ ಹೇಳದು ಇದ್ದಲಾ ಅದೇ ಹಂಗೆ..ಕೃಷ್ಣ ಯಾವತ್ತಿದ್ದರೂ ಯಾರಿದ್ರೂ ಎಲ್ಲಿದ್ರೂ ಭವ್ಯವೇ..' ಅಂದ..
ನಾನು ನಕ್ಕು ಸುಮ್ಮನಾದೆ..ಅಲ್ಲೂ ನಮ್ಮ ಪೋಟೋ ಸೆಷನ್ ಮುಗಿಯಿತು.. ಆ ನಂತರ ಕೂಡಲ ಸಂಗಮಕ್ಕೆ ನಾವು ಭೆಟಿ ನೀಡಿದ ನೆನಪಿಗಾಗಿ ಹಲವು ವಸ್ತುಗಳನ್ನು ಕೊಂಡದ್ದಾಯ್ತು.. ಎಲ್ಲರೂ ಏನೇನು ಕೊಂಡರೋ.. ನಾನೊಂದು ಸ್ಫಟಿಕ ಶುಭ್ರ ಶಿವಲಿಂಗ ಕೊಂಡೆ.. ಅದೆಷ್ಟು ಚನ್ನಾಗಿತ್ತು. ಆಹ್.. ಖೂಬ್ ಸೂರತ್.. ಹಾಗೇ ಅದನ್ನು ಜೋಪಾನವಾಗಿಟ್ಟುಕೊಂಡು ಕೂಡಲಕ್ಕೆ ಬಾಯ್ ಎಂದೆವು..
ವಾಪಾಸು ಕೂಡಲ ಕತ್ರಿಗೆ ಬರುವ ವೇಳೆಗೆ ಮಲಪ್ರಭೆಗೆ ಬಂದಿದ್ದ ನೆರೆ ಕೊಂಚ ಇಳಿದಿತ್ತು.. ಹಾಗಾಗಿ ಸೇತುವೆ ಬಂದಾಗಲೆಲ್ಲ ಇಳಿದು ದಾಟುವ ಕಾರ್ಯ ಬರಲಿಲ್ಲ.. ಆದರೆ ರಾಡಿ ಸಾಕಷ್ಟಿತ್ತು.. ಕಪ್ಪು ಕಪ್ಪು ರಗಡ್..

ಇಳಕಲ್ಲಿಗೆ ಆಟೋದಲ್ಲಿ..
ಕೂಡಲ ಕ್ರಾಸಿಗೆ ಇಳಕಲ್ಲಿನಿಂದ 41 ಚಿಲ್ಲರೆ ಕಿಲೋಮೀಟರ್ ದೂರ. ಇಳಕಲ್ಲಿಗೆ ಹೋದರೆ ಮಾತ್ರ ನಮಗೆ ಹುಬ್ಬಳ್ಳಿಗೆ ಹೋಗಲು ಬಸ್ಸು. ಇಲ್ಲವಾದರೆ ಕೊಂಚ ತಾಪತ್ರಯವೇ. ಆ ಕೂಡಲ ಕ್ರಾಸಿನಲ್ಲಿ ಎಷ್ಟು ಹೊತ್ತು ಕಾದರೂ ಬಸ್ಸುಗಳನ್ನು ನಿಲ್ಲಿಸಲಿಲ್ಲ. ಕೊನೆಗೆ ಪ್ಯಾಸೆಂಜರ್ ಆಟೋ ರಿಕ್ಷಾವೊಂದು ಇಳಕಲ್ಲಿಗೆ ಹೋಗೋದಿತ್ತು. ಆಟೋದವನು ನಮ್ಮ ಬಳಿ `ಬರ್ತೀರೇನ್ರಿ..' ಅಂದ.. ನಾವು ಹಿಂದು ಮುಂದು ನೋಡುತ್ತಿದ್ದಾಗಲೇ ಗೌಡರು `ಹೌದು..ಎಷ್ಟು ತಗೋತೀರಿ..' ಎಂದುಬಿಟ್ಟರು.
ಕಿಟ್ಟು, ಪಾವಸ್ಕರ ಗಾಬರಿಯಿಂದ `ಸರ್.. ಇದರಲ್ಲಿ ಹೋಗೋದಾ..?' ಎಂದರು.
`ಹೌದಪ್ಪಾ.. ಸೋವಿಯಾಗ್ತದಂತೆ.. ನಡ್ರಿ..' ಎಂದರು ಗೌಡರು.
ಏನ್ ಮಾಡೋದು..? ಒಲ್ಲದ ಮನಸ್ಸಿನಿಂದ ಗಾಡಿಯೇರಿದೆವು. ನಾವಲ್ಲದೇ ಮತ್ಯಾರೋ ಎರಡು ಜನ ಇಳಕಲ್ಲಿಗೆ ಹೋಗುವವರು ಅದರಲ್ಲಿ ಕುಳಿತರು. ನಿಧಾನವಾಗಿ ಹೊರಟಿತು ಆಟೋ.
ದಾರಿಯಿನ್ನೂ ಕಾಲು ಭಾಗ ಸವೆದಿಲ್ಲ ನಮಗೆ ಬೇಜಾರು ಬಂದು ಬಿಟ್ಟಿತು. ಕಿಟ್ಟು-ತೃಪ್ತಿಯರ ಪಂಚಿಂಗ್ ಡೈಲಾಗುಗಳ ಸರಮಾಲೆ ಓತಪ್ರೋತವಾಗಿ ಸಾಗಿತ್ತಾದರೂ ಅದನ್ನೇ ಎಷ್ಟೊತ್ತು ಅಂತ ಕೇಳೋದು..? ಕೊನೆಗೆ ನಾವು ಅಂತ್ಯಾಕ್ಷರಿಯನ್ನು ಶುರು ಹಚ್ಚಿಕೊಂಡೆವು. ಮಧ್ಯದಲ್ಲೆಲ್ಲೋ ಮುಡು ಬಂದ ಕಾರಣ ಗೌಡರೂ ತಮ್ಮ `ಸುಂದರ' ಕಂಠದಿಂದ ಗಾಯನ ಶುರು ಹಚ್ಚಿಕೊಂಡೇ ಬಿಟ್ಟರು. ಕ್ರಮೇಣ ಅದೂ ಬೋರಾಯಿತು.
ನಾನು ಭಟ್ಕಳ ಪೂರ್ಣಿಮಾನ ಜೊತೆ ಮಾತಿಗಿಳಿದೆ. ಇದ್ದವರಲ್ಲಿ ಆಕೆ ಸ್ವಲ್ಪ ಭಾವುಕಿ. . ಸೂರ್ಯಕಾಂತಿ ಸಾಲು ಸಾಲು, ದೂರದ ದಿಗಂತದಲ್ಲಿ ಇಣುಕುತ್ತಿದ್ದ ಸೂರ್ಯ, ಚಿನ್ನದ ಕಲರಿನ ಬಾನು, ಮುಂಗಾರು ಮಳೆ, ಕಳೆದ ಆರೇಳು ದಿನಗಳು, ಚದುರಂಗದ ಆಟ, ಹೀಗೆ ಏನೆಲ್ಲಾ ಇಣುಕಿದವು ನಮ್ಮ ಮಾತು-ಕಥೆಯಲ್ಲಿ. ಅಂತೂ ಇಂತೂ ಎರಡು ತಾಸಿನ ಅಮೋಘ ಪ್ರಯಾಣದ ನಂತರ ನಮಗೆ ಇಳಕಲ್ಲಿನ ದರ್ಶನವಾಯಿತು.
ನನಗೆ ಮನಸ್ಸಿನಲ್ಲಿಯೇ..,
ಇಳಕಲ್ ಸೀರೆ ಉಟ್ಕೊಂಡು
ಮೊಳಕಾಲ್ ತನಕ ಎತ್ಕೊಂಡು
ಏರಿ ಮ್ಯಾಲೆ ಏರಿ ಬಂದ್ಲು
ನಾರಿ... ಅನ್ನೋ ಹಾಡು ಗುನುಗುತ್ತಿತ್ತು.. ಅಷ್ಟೆಲ್ಲಾ ಹೆಸರಾದ `ಇಳಕಲ್'ನ್ನೇ ನಾನು ನೋಡ್ತಿದ್ದೇನಾ ಅನ್ನಿಸಿತು. ಸಮಯ ಏಳನ್ನು ದಾಟುತ್ತಿತ್ತು.

ಇಳಕಲ್ : ಸೀರೆಯ ನಾಡಿನಲ್ಲೊಂದು ಹಾಸ್ಯ ಸಂಜೆ
ಇಳಕಲ್ ಸೀರೆಗೆ ಫೇಮಸ್ಸು. ಸೀರೆಯನ್ನು ತಯಾರು ಮಾಡೋದನ್ನು ನೋಡೋಣ ಎಂದು ಹೊರಟೆವು. ನಂಗಂತೂ ತಂಗಿಗೊಂಡು ಚೆಂದದ ಚೂಡಿದಾರ, ಮಟೀರಿಯಲ್ಲು ಕೊಳ್ಳಬೇಕು ಎನ್ನಿಸಿತು. ಒಂದೆರಡು ಅಂಗಡಿಯ ಒಳಹೊಕ್ಕು ಸೀರೆಯನ್ನು ಆರಿಸಿದ ಶಾಸ್ತ್ರ ಮಾಡಿದೆವು. ರೇಟು ಕೇಳಿದರೆ ಗಗನವನ್ನು ಮುಟ್ಟಿದ ಅನುಭವ.. ತಂಗಿಗೆ ಚುಡಿದಾರ, ಮಟೀರಿಯಲ್ಲು ಕೊಳ್ಳುವ ಆಸೆ ಕೈಬಿಟ್ಟೆ..
ವಾಪಾಸಾಗತೊಡಗಿದೆವು.. ಹೀಗೆ ಬರತೊಡಗಿದಾಗ ಅಲ್ಲೊಂದು ಅಂಗಡಿ ಕಣ್ಣಿಗೆ ಬಿತ್ತು.. ಸಾಮಾನ್ಯವಾಗಿ ಎಲ್ಲ ಕಡೆ ನಂಗೆ ಅಂಗಡಿಗಳ ಬೋರ್ಡು ಓದುವ ಚಟ. ಈ ಅಂಗಡಿ ಬೋರ್ಡು ನೋಡಿ ನಗು ಉಕ್ಕಲಾರಂಭಿಸಿತು. ನನ್ನ ಜೊತೆಯಲ್ಲೇ ನಡೆದು ಬರುತ್ತಿದ್ದ ಕಿಟ್ಟು-ತೃಪ್ತಿ-ಪವಿತ್ರಾರಿಗೆ ತೋರಿಸಿದೆ. ಅವರೂ ನಕ್ಕರು.
`ಗೊಮ್ಮಟೇಶ್ವರ ಕ್ಲಾತ್ ಸೆಂಟರ್..'
ಇಲ್ಲೊಂದು ವಿಚಿತ್ರವೂ ನಡೆಯಿತು. ನಮ್ಮೆಲ್ಲರಿಗಿಂತ ಲೇಟಾಗಿ ನಡೆದು ಬರುತ್ತಿದ್ದ ಗೌಡರಿಗೆ ಈ ಬೋರ್ಡನ್ನು ನಾನು ತೋರಿಸಿದೆ. ಅವರು `ಅದರಾಗೇನೈತೋ..' ಅಂದರು..
`ಸರ ಓದಿ ನೋಡ್ರಿ..' ಅಂದೆ
`ಗೊಮ್ಮಟೇಶ್ವರ ಕ್ಲಾತ್ ಸೆಂಟರ್.. ಅಂತದ್ದೇನೈತಪಾ ಅದರಾಗೆ..' ಅಂದರು.
`ಅದರ ಅರ್ಥ ಹೇಳ್ರಿ..' ಅಂದೆ.. ಆಲೋಚಿಸಿದ ಮೇಲೆ ಟ್ಯೂಬ್ ಲೈಟ್ ಹತ್ತಿಕೊಂಡಿತು.. ಬಿದ್ದು ಬಿದ್ದು ನಗಲಾರಂಭಿಸಿದರು. ಗೌಡರ ಟ್ಯೂಬ್ ಲೈಟ್ ನೋಡಿ ನಾವು ಮತ್ತಷ್ಟು ನಕ್ಕೆವು. (ವಿ.ಸೂ : ಇಲ್ಲಿ ಕೊಂಚ ಬದಲಾವಣೆ ಇದೆ ಆಗಬೇಕು.. ಅದು ಗೊಮ್ಮಟೇಶ್ವರ ಅಲ್ಲ.. ಬಾಹುಬಲಿ ಕ್ಲಾತ್ ಸೆಂಟರ್ ಆಗಬೇಕು.ಕೊಂಚ ನೆನಪಿನ ದೋಷ ಇದೆ.. ಸರಿಪಡಿಸಿಕೊಳ್ಳಿ)
ನಂತರ ಇಳಕಲ್ಲಿನ ಪಾರ್ಕೊಂದಕ್ಕೆ ಸಾಗಿದೆವು. ಬಹುಹೊತ್ತು ಕುಳಿತು ಹರಟಿದೆವು. ಗೌಡರು ಮತ್ತೆ `ನೀನು ಲೇಡೀಸ್ ಟೀಮ್ ಆಡಿಸಿದ್ದಕ್ಕೆ ಬ್ಲೂ ಆಗಲಿಲ್ಲ' ಎಂದರು. ಅಸಹ್ಯ ಎನ್ನಿಸಿತು ನನಗೆ ಅವರ ಮಾತು.
ರಾತ್ರಿ ಊಟ ಮುಗಿಸಿ ಹುಬ್ಬಳ್ಳಿಯ ಬಸ್ ಹತ್ತಿದೆವು. ಬಸ್ಸಿನಲ್ಲಿ ಹುಬ್ಬಳ್ಳಿಯ ವರೆಗೂ ಎಚ್ಚರಾಗಿದ್ದವರೆಂದರೆ ಕಿಟ್ಟು-ತೃಪ್ತಿ ಇಬ್ಬರೇ. ನಾನು-ಕಿಟ್ಟಿ-ತೃಪ್ತಿ-ಪವಿತ್ರಾ ಆ ಸಂಜೆ-ರಾತ್ರಿ ಅದೆಷ್ಟು ಸುದ್ದಿಗಳನ್ನು ಹಲುಬಿದೆವೊ.ಬದುಕು, ಲೈಫು, ನಮಗೆ ಬೇಕಾದ ಲವ್ವರ್ರುಗಳು, ಲಕ್ಷಣ, ಮದುವೆ, ಸಂಸಾರ ಹೀಗೆ ಏನೆಲ್ಲಾ ಮಾತನಾಡಿಕೊಂಡೆವು.. ಗದಗ, ಗುಳೇದಗುಡ್ಡ ಇಲ್ಲೆಲ್ಲ ಬಂದ ಬಸ್ಸು ಹುಬ್ಬಳ್ಳಿ ಬಸ್ ನಿಲ್ದಾಣ ತಲುಪುವ ವೇಳೆಗೆ ನನಗೆ ಹಾಗೂ ಪವಿತ್ರ ಇಬ್ಬರಿಗೂ ನಿದ್ದೆ.. ಸುದ್ದಿ ಹೇಳುತ್ತಿದ್ದ ನಮಗೆ ಅದ್ಯಾವಾಗ ನಿದ್ದೆ ಬಂದಿತ್ತೋ. ದೇವರೇ ಬಲ್ಲ..! ಕೊನೆಗೆ ಕಿಟ್ಟು ಇಬ್ಬರನ್ನೂ ಬಡಿದು ಎಚ್ಚರಿಸಬೇಕಾಯಿತು.!
ಹುಬ್ಬಳ್ಳಿಗೆ ಬಂದಾಗ ಮಧ್ಯರಾತ್ರಿ 1.30. ನಾವು ಹುಬ್ಬಳ್ಳಿಯನ್ನು ಬಿಟ್ಟದ್ದು 2.30ಕ್ಕೆ. ಶಿರಸಿಗೆ ಬಸ್ಸನ್ನೇರಿ ಬಂದೆವು. ಶಿರಸಿಯವರೆಗೆ ನಮಗೆ ಪುನಃ ನಿದ್ದೆಯೇ. ಶಿರಸಿ ತಲುಪಿದಾಗ 5 ಗಂಟೆಯ ಚುಮು ಚುಮು. ಶಿರಸಿಗರಿಗೆ ಮತ್ತದೇ ಚಳಿಯ ಚುಮು ಚುಮು ಮುಂಜಾವು. ನಾನು, ಕಿಟ್ಟಿ, ವಾನಳ್ಳಿ ಪೂರ್ಣಿಮಾ ಏಳು ಗಂಟೆಯವರೆಗೂ ಬಸ್ ಸ್ಟಾಂಡಿನಲ್ಲಿಯೇ ಹರಟಿದೆವು.
ಮುಂಜಾನೆಯೇ ವೈಪರಿತ್ಯವೆಂದರೆ ನಮ್ಮದೇ ಕಾಲೇಜಿನ ಪ್ರಿನ್ಸಿಪಾಲರು ಅದೇಕೋ ಬಸ್ ಸ್ಟಾಂಡಿಗೆ ಬಂದಿದ್ದವರು ಸಿಕ್ಕರು. ಅವರಿಗೆ ಸುದ್ದಿಯನ್ನು ತಿಳಿಸಿದೆವು. ಅವರು ಎಂದುನ ತಮ್ಮ ಶೈಲಿಯಲ್ಲಿಯೇ `ಕಂಗ್ರಾಜ್ಯುಲೆಷನ್ಸ್.. ಭಾರಿ ಚೊಲೋ ಮಾಡಿದ್ರಿ..' ಎಂದರು.
ನಮಗೊಮ್ಮೆ ಖುಷಿಯಾಯಿತು. ಏಳಕ್ಕೆ ವಾನಳ್ಳಿ ಪೂರ್ಣಿಮಾಳ ಬಸ್ಸು ಬಂದು ಅವಳು ಹೊರಟಳು. 7.30ಕ್ಕೆ ಕಿಟ್ಟುವಿನ ಬಸ್ಸು ಬಂತು. ಆತನೂ ಹೊರಟ. ನನಗಿನ್ನೂ ಬಸ್ಸು ಬಂದಿರಲಿಲ್ಲ. ಕಾಯುತ್ತಿದ್ದೆ. ರಾಘುವಿಗೆ ಪೋನ್ ಮಾಡಿದರೆ ಆತನಿನ್ನೂ ಬೆಳಗಿನ ಸುಖ ನಿದ್ದೆಯಲ್ಲಿದ್ದ `ಸೂರ್ಯವಂಶಿ..' ಆತನಿಗೆ ನಾವು ವಾಪಾಸು ಬಂದಿರುವ ಸುದ್ದಿಯನ್ನು ತಿಳಿಸಿದೆ.
ಕೊನೆಗೆ ನನಗೆ 8.30ರ ವೇಳೆಗೆ ನನ್ನ ಬಸ್ಸು ಬಂದಿತು. ಬಸ್ ಹತ್ತಿ ಮನೆಯ ಕಡೆಗೆ ಹೊರಟೆ.
ಹೀಗೆ ನಮ್ಮ ಚೆಸ್ ಯಾನ ಸಾಗಿತು. ಒಂದು ರಿಸರ್ವ್ ಬ್ಲೂ, ಒಂದು ಮ್ಯಾನ್ ಆಫ್ ದಿ ಸೀರೀಸ್, ಲೇಡೀಸ್ ಟೀಂ ಪ್ರಥಮ ಹಾಗೂ ಬಾಯ್ಸ್ ಟೀಂ ದ್ವಿತೀಯ ಎಂಬ ಹೆಗ್ಗಳಿಕೆ, ಸಾಧನೆಯೊಂದಿಗೆ ನಾವು ಬಹು ಯಶಸ್ಸಿನ ಜೊತೆ  ಜೊತೆಗೆ ನಮ್ಮ ಚಸ್ಸಿನ ಈ ಬಾಗೇವಾಡಿಯ ಯಾತ್ರೆ ವಿಜಯ ಮೆಟ್ಟಿಲಂತೆ ಅನ್ನಿಸಿತು.
ಬಸ್ಸಿನಲ್ಲಿ ಮತ್ತೆ ನನಗೆ ಯಥಾ ಪ್ರಕಾರ ಭಾರಿ ನಿದ್ದೆ. ಮತ್ತೆ ಮತ್ತೆ ಬಾಗೇವಾಡಿಯದೇ ನೆನಪು.
ಸೂರ್ಯ ನಗುತ್ತಾ ನಗುತ್ತಾ ಬಾನಿನ ದಾರಿಯಲ್ಲಿ ಮೇಲ ಮೇಲಕ್ಕೆ ಬರುತ್ತಿದ್ದ.. ಚಸ್ ನ ಚೌಕಳಿ ಚೌಕಳಿ ಮನೆಗಳು ಕಣ್ಣಿನಿಂದ, ಬದುಕಿನಿಂದ ಮರೆಯಾಗುತ್ತಿದ್ದವು..!!

((ಮುಗಿಯಿತು))
(ಬರೆಯಲು ಆರಂಭಿಸಿದ್ದು 10-12-2007ರಂದು ಬರೆದು ಮುಗಿಸಿದ್ದು 25-03-2008ರಂದು)

Monday, December 16, 2013

ತೌರೆಂದರೆ

-1-
ತೌರೆಂದರೆ
ಸುಳಿದು ಬರುವ ನೆನಪು
ಕಳೆದು ಹೋದ ಕಾಲ
ನಲಿದಾಡಿದ್ದ ಬಾಲ್ಯ
ಜೀವನಾರಂಭ.

-2-
ತೌರೆಂದರೆ
ಸಿಟ್ಟು ಉಕ್ಕುವ ಅಪ್ಪ
ಬೆತ್ತದ ಕೋಲಿನ ಪೆಟ್ಟು
ಭಯ, ದುಃಖದೊಳಗೂ ಖುಷಿ.

-3-
ತೌರೆಂದರೆ
ಪ್ರೀತಿಯ ಅಮ್ಮ
ಅಚ್ಚುಕಟ್ಟುತನದ ಹರ್ಷ
ಸಾಕಿ-ಸಲಹಿದ ನೆನಪು.

-4-
ತೌರೆಂದರೆ
ಬಾಲ್ಯ ಅಣ್ಣ, ತಮ್ಮ
ಕಾಡುವ ಕತ್ತಲೆ ಗುಮ್ಮ
ಕಲಿತ ಓದು
ಬಾಲ್ಯದ ನಲಿವು

-5-
ತೌರೆಂದರೆ
ಬೆಸೆದ ಬಂಧ
ಬಿಡದ ನಂಟು
ಸ್ನೇಹಕುಂಜ
ಮೊದಲ ಕಣ್ಣೀರು.

-6-
ತೌರೆಂದರೆ
ಕಿತ್ತುಹೋದ ಮನೆ
ತೇಪೆ ಹಚ್ಚಿದ ಕೌದಿ
ಸಾಲದ ಚಿಂತೆ
ಅಂತೂ ಜೀವನ ನಿರ್ವಹಣೆ

-7-
ತೌರೆಂದರೆ
ಮೊದಲ ತೊದಲು
ಚಿಗುರಿದ ಪ್ರೇಮ
ಮನಸು ಮುರಿತ

-8-
ತೌರೆಂದರೆ
ವಧು ಪರೀಕ್ಷೆ
ಮದುವೆ ಬಾಳ್ಗೆ
ಕಣ್ಣೀರ ಕೋಡಿ
ಸಂಸಾರದೆಡೆಗೆ.

-9-
ತೌರೆಂದರೆ
ಮರೆತ ಅಣ್ಣ
ಸಿಡುಕು ಅತ್ತಿಗೆ
ಕರೆವಿಲ್ಲ, ನಲಿವಿಲ್ಲ

-10-
ತೌರೆಂದರೆ
ಹಳೆಯ ನೆನಪು
ಹೊಸೆದ ಕನಸು
ಅದೇ ಸಾಲ-ಮನೆ

-11-
ತೌರೆಂದರೆ
ಹೊಸ ಪೀಳಿಗೆ
ಹೊಸ ಜನ
ಹೆಣ್ಣ ನೆನಪು ಯಾರಿಗಿಲ್ಲ.

-12-
ತೌರೆಂದರೆ
ಬರೀ ನೆನಪು
ಬರೀ ವ್ಯಥೆ
ಕಳೆದ ಕ್ಷಣ, ಉರುಳಿದ ತಲೆ
ಮರಳಲಿಲ್ಲ, ಬದುಕಲಿಲ್ಲ.

(ಇದನ್ನು ಬರೆದಿದ್ದು 20-08-2006ರಲ್ಲಿ ದಂಟಕಲ್ಲಿನಲ್ಲಿ)
(ಅಮ್ಮಾ ನಿನ್ನ ತವರಿನ ಬಗ್ಗೆ ಹಾಗೂ ಆ ನಿನ್ನ ಬಾಲ್ಯದ ಬಗ್ಗೆ ಹೇಳು ಎಂದೊಮ್ಮೆ ಗಂಟು ಬಿದ್ದಿದ್ದೆ.. ಬಹಳ ದಿನ ಹೇಳಲು ನೆಪವೊಡ್ಡಿ ತಪ್ಪಿಸಕೊಂಡಿದ್ದಳು.. ಕೊನೆಗೊಮ್ಮೆ ಕೇಳಿದಾಗ ಸಾಲು ಸಾಲಾಗಿ ಹೇಳಿದಳು..ಆಕೆ ಹೇಳಿ ಮುಗಿಸಿದಾಗ ಇದ್ದದ್ದು ನಿಟ್ಟುಸಿರು ಹಾಗೂ ಕಣ್ಣೀರು.. ಹಾಗೆ ಸುಮ್ಮನೆ ಅವಳ ಮಾತುಗಳಿಗೊಂದು ಅಕ್ಷರ ರೂಪ ಕೊಟ್ಟಾಗ ಹೀಗಾಗಿತ್ತು..)

Saturday, December 14, 2013

ಅಡಿಕೆ


ಅಡಿಕೆಯಿದು ಮಲೆನಾಡ
ಕೃಷಿಕನ ಹೊನ್ನಿನ ಕುಡಿಕೆ |
ತೋಟಿಗರ ತಂಪಿನ ಮಡಿಕೆ,
ಸರ್ವರ ಹಿತಕ್ಕೊಂದು ಹಿಡಿಕೆ ||

ಅಡಿಕೆಯಿದು ದೇಶಿಗರ
ಬಯಸಿದ್ದನ್ನು ಕೊಡುವ ಸೂರ್ಯಪಾತ್ರೆ|
ಕವಳವೇ ಮನಕೆ ತಂಪೆರೆವ ಮಾತ್ರೆ,
ಕೃಷಿಕ ಈಶನ ತಲೆಗೆ ಇದೇ ಬಿಲ್ವಪತ್ರೆ ||

ಅಡಿಕೆಯಿದು ಸಕಲ ಜನರ
ಪ್ರಚ್ಛನ್ನ ಶಕ್ತಿ, ಮನದ ತುಡಿತ|
ಪ್ರತಿ ಎದೆಯಾಂತರಾಳದ ಮಿಡಿತ
ಸರ್ವಕಾಲವೂ ದುಡಿತವೇ ದುಡಿತ ||

ಅಡಿಕೆಯಿದು ತೋಟಿಗರ
ಮನದ ಬೇಟ, ದೇವರಾಟ|
ಜೊತೆಗೆ ಅಷ್ಟು-ಇಷ್ಟು ಕೊಳೆಯ ಕಾಟ
ವರ್ಷದ ಫಸಲಿಗೆ ಕತ್ತರಿಯ ಆಟ ||

ಅಡಿಕೆಯಿದು ಮಲೆನಾಡಿಗರ
ಜೀವ ನೀಡ್ವ ಅಮೃತ|
ಸಕಲ ಕಾಲವೂ ಕವಳವೇ ಹಿತ
ಕವಳವೇ ಬಾಳಿಗೆ ನವನೀತ ||

**

(ಇದನ್ನು 07-04-2006ರಲ್ಲಿ ದಂಟಕಲ್ಲಿನಲ್ಲಿ)
(ಅಡಿಕೆಗೂ ಒಂದು ಕವಿತೆಯೇ ಎಂದು ಹುಬ್ಬೇರಿಸಬಹುದು.. ಅಡಿಕೆ ನಿಷೇಧ, ಪರಿಹಾರ, ಅಡಿಕೆ ಬೆಳೆಗಾರರ ಮನೆಯ ಜಪ್ತಿ, ಸಾಲಮನ್ನಾ, ರಾಜಕಾರಣಿಗಳ ಜೂಟಾಟ, ಇತ್ಯಾದಿ ಇತ್ಯಾದಿಗಳ ಜೊತೆ ಜೊತೆಯಲ್ಲಿ  ಅಡಿಕೆ ಹೇಗೆ ಮಲೆನಾಡಿಗರಿಗೆ ಪ್ರೀತಿಪಾತ್ರ, ಆರ್ಥಿಕ ಶಕ್ತಿ, ಆದಾಯದ ಮೂಲವಾಗುತ್ತದೆ ಎನ್ನುವುದರ ಕುರಿತು ಬರೆದ ಒಂದು ಕವಿತೆ. ಏಳು ವರ್ಷಗಳ ಹಿಂದಿನ ಕವಿತೆ ಇಂದಿನ ದಿನಕ್ಕೆ ಪ್ರಸ್ತುತ ಎನ್ನಿಸಬಹುದೇನೋ..)

Friday, December 13, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 9

ಬಾಗೇವಾಡಿಯಿಂದ ಕೂಡಲಕ್ಕೆ
ಬಸವನ ಬಾಗೇವಾಡಿಯಲ್ಲಿ ನಮ್ಮ ತಂಡ : ನಮ್ಮ ತಂಡವನ್ನು ಗುರುತಿಸಿ

ಈ ಮದ್ಯಾಹ್ನವೇ ನಾವು ವಾಪಾಸು ಹೊರಡಬೇಕೆಂದು ಎನ್. ಎಚ್. ಗೌಡರು ಫರ್ಮಾನು ಹೊರಡಿಸಿಬಿಟ್ಟರು. ಇಲ್ಲಿಯವರೆಗೆ ಬಂದದ್ದಾಗಿದೆ ಒಂದೋ ಗುಂಬಜ್ ನಗರ ಬಿಜಾಪುರವನ್ನು ನೋಡಿ ಸಾಗೋಣ ಇಲ್ಲವೇ ಬಸವಣ್ಣ ಲಿಂಗೈಕ್ಯನಾದ ಕೂಡಲಕ್ಕೆ ಸಾಗುವಾ ಎನ್ನುವ ಚರ್ಚೆ ನಮ್ಮಲ್ಲಿ ನಡೆದು ಮೊದಲು ಕೂಡಲಕ್ಕೆ ಹೋಗೋಣ ಎಂಬ ನಿರ್ಣಯಕ್ಕೆ ಬಂದು ಗೌಡರಲ್ಲಿ ಹೇಳಿದಾಗ ಅಪರೂಪಕ್ಕೆಂಬಂತೆ ಅವರು `ಯೆಸ್' ಎಂದರು.
ಈ ಸಹಸ್ರಮಾನದ ಮಹಾನ್ ದಾಸೋಹಿ, ಲಿಂಗತತ್ವದ ಪ್ರತಿಪಾದಕ ಬಸವಣ್ಣನ ಜನುಮ ಸ್ಥಳವಾದ ಬಾಗೇವಾಡಿ ಮೊದಲು ನೋಡಬೇಕಲ್ಲ.. ಅತ್ತ ಸಾಗಿದೆವು.
ದಾರಿಯಲ್ಲಿ ನಮಗೆ ಕಂಡಿದ್ದೇ ನಮ್ಮ ಮೆಚ್ಚಿನ ದುರ್ಗಾ ಕ್ಯಾಂಟೀನು. ಕಿಟ್ಟು ಹಾಗೂ ನನಗೆ ಅವರಲ್ಲಿಗೆ ಹೋಗಿ `ಹೋಗಿ ಬರ್ತೀವಿ..' ಎಂದು ಹೇಳುವ ಮನಸ್ಸಾಯಿತು. ಲೇಡೀಸ್ ಟೀಮು ಹಾಗೂ ಗೌಡರು ಎಲ್ಲರನ್ನೂ ನಾವು ಅಲ್ಲಿಗೆ ಕರೆದೊಯ್ದೆವು. ಹೀಗ್ಹೀಗೆ ಅಂತ್ಹೇಳಿ, ಗೌಡರನ್ನು ಅವರಿಗೆ ಪರಿಚಯಿಸಿ ನಾವು ಊರಿಗೆ ಹೋಗ್ತಿದ್ದೀವಿ ಅಂದೆವು.
ಹೋದ ಒಂದೇ ವಾರದಲ್ಲಿ ನಮ್ಮ ಹಾಗೂ ಆ ಹೊಟೇಲಿನ ನಡುವೆ ಅದೆಷ್ಟು ಬಂಧ ಬೆಳೆದಿತ್ತು..!! ಆ ಹೊಟೇಲಿನ ಸಪ್ಲೈಯರ್ ನಿಂದ ಹಿಡಿದು, ಅಡುಗೆ ಭಟ್ಟರಾದಿಯಾಗಿ, ಓನರ್ ತನಕ ಎಲ್ಲರೂ ಬೇಸರ ಪಟ್ಟುಕೊಂಡರು. ಘಟ್ಟದ ಜನ ಎಷ್ಟು ಮುಗ್ಧರೋ ಅಷ್ಟೇ ಬಂಧವನ್ನು ಬೆಳೆಸಿಕೊಳ್ಳುವಂತವರು ಎಂಬ ಮಾತು ನಿಜವಾಯಿತು.
ಆ ದಿನ ನಮಗೆ ಆ ಹೊಟೇಲಿನಲ್ಲಿ ತಿಂಡಿ, ಕಾಫಿಯನ್ನು ಫ್ರೀಯಾಗಿ ಕೊಟ್ಟು ಕಳಿಸಿದರು. ನಮ್ಮ ಕಿಟ್ಟು ದುಡ್ಡು ಕೊಡಲು ಮುಂದಾದ. ಅದನ್ನು ನೋಡಿದ ಅಡುಗೆ ಭಟ್ಟರು ಹಾಗೂ ಓನರ್ರು ನಮ್ಮ ಕೈಹಿಡಿದು `ಬ್ಯಾಡ್ರೀ.. ನಮಗೆ ಕೊಡೋನು ಕೊಡ್ತಾನೆ ಆ ದ್ಯಾವ್ರು. ಇಷ್ಟು ಪ್ರೀತಿಯಿಂದ, ನಂಬಿಕೆಯಿಂದ ಕೆಲವೇ ದಿನ ತಿಂಡಿ ತಿಂದಿದ್ದಕ್ಕೆ, ನಾವು ಹೋಗಿ ಬರ್ತೀವಿ ಅಂತ ಹೇಳಲಿಕ್ಕೆ ಬಂದಿದ್ದೀರಲ್ಲ.. ಇಂತಹ ಪ್ರೀತಿ ಸಾಕು.. ಊಹೂಂ ನೀವು ದುಡ್ಡು ಕೊಡೋದೇ ಬೇಡ.. ನೀವು ಕೊಟ್ಟಿದ್ದನ್ನು ನಾವು ತೆಗೆದುಕೊಳ್ಳೋದಿಲ್ಲ..' ಎಂದು ಪಟ್ಟಾಗಿ ಕುಳಿತುಬಿಟ್ಟರು. ನಾವು ಎಷ್ಟು ಒತ್ತಾಯಿಸಿದರೂ ದುಡ್ಡು ತೆಗೆದುಕೊಳ್ಳಲೇ ಇಲ್ಲ. ಹೋಗುವ ಮುನ್ನ ತಬ್ಬಿ ಹಾರೈಸಿದರು. ಯಾಕೋ.. ಕಿಟ್ಟುವಿಗೆ ಹಾಗೂ ನನಗೆ ಕಣ್ಣು ಹನಿಗೂಡಿದಂತಾಯಿತು. ಅವರ ಆದರ, ಪ್ರೀತಿ, ನಂಬಿಕೆ ಇವೆಲ್ಲ ಕಂಡು ಹೃದಯ ತುಂಬಿ ಬಂದಿತು..
ಅಲ್ಲಿಂದ ನಾವು ಬಾಗೇವಾಡಿಯ ಸರ್ಕಲ್ ದಾಟಿ ಬಸವೇಶ್ವರನ ಜನ್ಮ ಸ್ಥಳದತ್ತ ಸಾಗಿದೆವು. ಅಲ್ಲೊಂದು ಶಿವ ದೇವಾಲಯ. ಆ ದೇಗುಲ, ನಂದಿ ಇವೆಲ್ಲವುಗಳನ್ನೂ ಮನದಣಿಯೆ ನೋಡಿ ಮನಸಾರೆ ಮಣಿದೆವು. ಆ ಭವ್ಯ ದೇಗುಲ, ಅಲ್ಲಿನ ಸುಂದರ ಕಲೆಯ ಬಲೆ, ಇವೆಲ್ಲ ನಮ್ಮನ್ನು ಬಹಳ ಸೆಳೆಯಿತು. ಅಲ್ಲಿ ಆ ದಿನ ಬಹಳ ಜನರೂ ಇದ್ದರು. ಅಲ್ಲಿಯೇ ನಮ್ಮ ಫೋಟೋ ಪ್ರೋಗ್ರಾಂ ಕೂಡ ಮುಗಿಸಿ ಬಂದೆವು. ಕೊಳ್ಳುವವರೆಲ್ಲ ನೆನಪಿಗೆಂದು ಹಲವು ಹತ್ತು ವಸ್ತುಗಳನ್ನು ಕೊಂಡರು. ನಾನು ಏನನ್ನೂ ಕೊಳ್ಳಲಿಲ್ಲ. ಹೀಗೆ ಹತ್ತು ಹಲವು ಸಂಗತಿಗಳು ಮುಗಿದ ನಂತರ ನಾವು ಕೂಡಲಕ್ಕೆ ಹೋಗಬೇಕು ಎಂದು ಬಸ್ ಹಿಡಿಯಲು ಬಸ್ ನಿಲ್ದಾಣದ ಕಡೆಗೆ ಹೊರಟೆವು.
ಆಗ ಅದೇನಾಯ್ತೋ.. ಅದೆಲ್ಲಿದ್ದರೋ.. ನಮ್ಮ ಕೈಯಲ್ಲಿದ್ದ ದೊಡ್ಡ ದೊಡ್ಡ ಲಗೇಜುಗಳನ್ನು ಕಂಡು ಬಹಳಷ್ಟು ಹುಡುಗರು ನಮ್ಮ ಕೈಯಲ್ಲಿದ್ದ ದೊಡ್ಡ ದೊಡ್ಡ ಬ್ಯಾಗುಗಳನ್ನು ಕಂಡು ನಾವ್ಯಾರೋ tourist ಗಳೆಂದು ನಮ್ಮನ್ನು ಎಳೆದೆಳೆದು ಭಿಕ್ಷೆ ಬೇಡಲಾರಂಭಿಸಿದರು. 4-6-8-10 ವರ್ಷದ ಬಾಲಕ ಬಾಲಕಿಯರು. ಪಾಪ ಎಂದು ಒಂದೆರಡು ರು. ಚಿಲ್ಲರೆಗಳನ್ನು ಹಾಕಿದರೆ ಅವರೆಲ್ಲಿ ಕೇಳ್ತಾರೆ..? ನಮಗೆ ನಿಲ್ಲಲು ಬಿಡಲಿಲ್ಲ.. ಉಸಿರೆಳೆದುಕೊಳ್ಳಲೂ ಬಿಡಲಿಲ್ಲ.. ಕಾಡಿದರು.. ಕಾಡಿದರು.. ಕಾಡಿಯೇ ಕಾಡಿದರು. ದುಡ್ಡಿಗಾಗಿ ಪೀಡಿಸಿ ಪೀಡಿಸಿ ನಮ್ಮಲ್ಲಿ ಸಿಟ್ಟು ಬರಲೂ ಕಾರಣರಾದರು. ನಾನು ಹಾಗೂ ಪೂರ್ಣಿಮಾ ಹೆಗಡೆ ಸಿಟ್ಟಿನಿಂದ ಇನ್ನೇನು ಅವರ ಮೇಲೆ ಕೈ ಮಾಡಬೇಕು ಎನ್ನುವಷ್ಟರಲ್ಲಿ ಬಸ್ ನಿಲ್ದಾಣ ಹತ್ತಿರಕ್ಕೆ ಬಂದಿತು. ಬಸ್ ನಿಲ್ದಾಣ ಸಮೀಪ ಬಂದಂತೆಲ್ಲ ಆ ಭಿಕ್ಷುಕ ಬಾಲಕರು ಮಾಯವಾದರು.
ನಾವು ಬಸ್ ನಿಲ್ದಾಣಕ್ಕೆ ಹೋಗಿ ಕೂಡಲದ ಬಸ್ ಹುಡುಕಿದೆವು. ಕೂಡಲಕ್ಕೆ ಡೈರೆಕ್ಟ್ ಬಸ್ ಯಾವುದೂ ಇರದಿದ್ದ ಕಾರಣ ಕಟ್ ರೂಟ್ ಮಾಡಿ ಎಂದು ಯಾರೋ ಸಲಹೆ ಕೊಟ್ಟರು. ಸರಿಯೆಂದು ಹೊರಟೆವು. `ನಿಡಗುಂದಿ' ಬಸ್ ರೆಡಿ ಇತ್ತು. ಹತ್ತಿದೆವು. 10-12 ಕಿ.ಮಿ ದೂರದಲ್ಲಿ ನಿಡಗುಂದಿ ಸಿಕ್ಕಿತು. ಅಲ್ಲಿ  ಬಸ್ಸು ಬದಲಾಯಿಸಿದೆವು. ಬಸ್ಸು ಬಹು ಜೋರಾಗಿಯೇ ಸಾಗುತ್ತಿತ್ತು. ಕೆಲಹೊತ್ತಿನಲ್ಲಿ ಆಲಮಟ್ಟಿಯೆಂಬ ಊರೂ ಆ ಊರಿನಲ್ಲಿ ನಿರ್ಮಾಣ ಮಾಡಲಾಗಿದ್ದ ಬಹುದೊಡ್ಡ ಅಣೆಕಟ್ಟು ಕಂಡಿತು. ಅಣೆಕಟ್ಟಿನ ಅಗಾಧತೆ ವಿಸ್ಮಯ ಮೂಡಿಸಿದರೂ ಅದೆಷ್ಟು ಮನೆಗಳನ್ನು ಮುಳುಗಿಸಿರಬೇಕು ಎಂಬ ಮನದಾಳದ ನೋವಿನ ದನಿ ಬೇಸರವನ್ನು ಉಂಟು ಮಾಡಿತು. ಅಲ್ಲೊಂದು ಹತ್ತು ನಿಮಿಷ ನಿಂತ ಬಸ್ಸು ಕೂಡಲ ಕ್ರಾಸಿನ ಬಳಿ ನಮ್ಮನ್ನು ಇಳಿಸಿ ಮುಂದಕ್ಕೆ ಸಾಗಿತು.

ನೆರೆಯ ದಾರಿಯಲ್ಲಿ ಕಣ್ಣೀರ ಧಾರೆ
ಕರಿ ಮೋಡದ ಹಿನ್ನೆಲೆಯಲ್ಲಿ ಕೂಡಲ ಸಂಗಮ

ಅಷ್ಟರಲ್ಲಿ ಸೂರ್ಯನೂ ಪಶ್ಚಿಮದತ್ತ ಮುಖ ಮಾಡಿದ್ದ. ಉರಿಕಾರುವ ಆತನ ಮುಖ ಬಾಡಿತ್ತಾದರೂ ಬಿಸಿಲು ಕಡಿಮೆಯಾಗಿರಲಿಲ್ಲ. ಕೂಡಲ ಕ್ರಾಸಿನಲ್ಲಿ ನಮ್ಮನ್ನು ಬಿಟ್ಟರೆ ನಾಲ್ಕೋ-ಐದೋ ಜನ ಮಾತ್ರ ಇದ್ದರು. ಹೆಚ್ಚು ಜನರಿರಲಿಲ್ಲ. ಬಸ್ಸೂ ಇಲ್ಲ ಎನ್ನುವ ಮಾಹಿತಿ ಲಭ್ಯವಾಯಿತು. ಕೊನೆಗೆ ಯಾವುದೋ ಒಂದು ಪ್ಯಾಸೆಂಜರ್ ಆಟೋ ಹಿಡಿದೆವು.
ಅಲ್ಲಿಯ ಆಟೋಗಳು ಶಿರಸಿಯವುಗಳೆದುರು ಭಾರಿ ದೊಣೆಯನಂತವುಗಳು. ಶಿರಸಿಯವು ನನ್ನಂತೆ ಸಣ್ಣವು, ಬಡಕಲು. ಅಲ್ಲಿಯವು ಪಾವಸ್ಕರನಂತೆ ದೊಡ್ಡವು.. ದೈತ್ಯವು. ಶಿರಸಿಯ ಆಟೋಗಳಲ್ಲಿ  ಮ್ಯಾಕ್ಸಿಮಮ್ 6 ಜನರನ್ನು ಹಿಡಿಸಬಹುದಾಗಿದ್ದರೆ ಆ ಭಾಗದಲ್ಲಿದ್ದ ಆಟೋಗಳಲ್ಲಿ ಅನಾಮತ್ತು ಹನ್ನೆರಡು ಜನರನ್ನು ಹಿಡಿಸಬಹುದಿತ್ತು.
`ಇದೇನು.. ಈ ರೀತಿ ನೀರು ತುಂಬ್ಕೋಂಡಿದೆ.. ರಾಡಿ ರಾಡಿ.. ಕೆಂಪು .. ಕೆಂಪು.. ರಸ್ತೆನೇ ಕಾಣೋದಿಲ್ವಲ್ರಿ.. ಯಾಕೆ ಏನಾಗಿದೆ..?' ಎಂದ ಕಿಟ್ಟು. ಕೂಡಲ ಕ್ರಾಸಿನಿಂದ ಕೂಡಲಕ್ಕೆ ಹೋಗುವ ದಾರಿಯ ತುಂಬೆಲ್ಲಾ ಕೆಂಪು ಕೆಂಪು ನೀರು.. ಕಣ್ಣೆವೆಯಿಕ್ಕುವ ವರೆಗೂ ಬರೀ ನೀರೇ ತುಂಬಿತ್ತು. ಅಲ್ಲಲ್ಲಿ ರಸ್ತೆಯೂ ಕಟ್ಟಾಗಿತ್ತು.
`ಅಯ್ಯೋ.. ಏನ್ ಹೇಳ್ರೂದ್ರಿ.. ನಿನ್ನೆ ರಾತ್ರಿಯಿಡೀ ಮಳೆ ಸುರಿದಿದೆ. ಮೊನ್ನೆನೂ ಬಂದಿತ್ತು. ಅದಕ್ಕೆ ಮಲಪ್ರಭೆಗೆ ಪ್ರವಾಹ ಬಂದಿದೆ..' ಎಂದ ಆಟೋ ಡ್ರೈವರ್..
ಆಟೋದಲ್ಲಿ ಹಿಂದಿನ ಎರಡು ಸೀಟುಗಳಲ್ಲಿ ಉಳಿದವರು ಡ್ರೈವರ್ ನ ಎರಡೂ ಪಕ್ಕದಲ್ಲಿ ನಾನು ಹಾಗೂ ಕಿಟ್ಟು ಕುಳಿತಿದ್ದೆವು. ಹರಿಯುತ್ತಿರುವ ನೀರು ಓಡುತ್ತಿರುವ ಆಟೋದ ಗಾಲಿಗೆ ಭರ್ರನೆ ಹಾರಿ ಕಾಲನ್ನು ತೋಯಿಸುತ್ತಿತ್ತು. ಎಲ್ಲಿ ನೋಡಿದರಲ್ಲಿ ಕೆಂಬಣ್ಣದ ನೀರು ತುಂಬಿತ್ತು. ಗೋಧಿ, ಜೋಳ, ರಾಗಿ, ಭತ್ತ, ಸೂರ್ಯಕಾಂತಿ, ನೆಲಗಡಲೆ ಸೇರಿದಂತೆ ನೆಡಲಾಗಿದ್ದ ಎಲ್ಲ ಬೆಳೆಗಳೂ ಮಳೆಯ ನೀರಿನಲ್ಲಿ ನಡುಗುತ್ತ ಕುತ್ತಿಗೆ ಮಟ್ಟ ಮುಳುಗಿ ನಿಂತಿದ್ದವು.
ಒಂದೆರಡು ಕಡೆಗಳಲ್ಲಂತೂ ಸೇತುವೆಯ ತುಂಬೆಲ್ಲ ನೀರು..ಇದರಿಂದಾಗಿ ನಾವು ನಡೆದು ಸೇತುವೆ ದಾಟಬೇಕಾಯಿತು. ನೆಲಕ್ಕೆ ಕಾಲಿಟ್ಟರೆ ಮೊಣಕಾಲ ಮಟ್ಟ ನೀರು.. ರಾಡಿ.. ಓ ದೇವರೆ ಅಂದುಕೊಂಡೆವು.
`ಅಲ್ರಿ.. ಈ ರೀತಿ ನೀರು ತುಂಬಿಕೊಂಡಿದೆ.. ನದಿ ತೀರದಲ್ಲಿ ಹಳ್ಳಿಗಳಿಲ್ಲವೇ..? ಭಾರಿ ಲುಕ್ಸಾನು ಆಗಿರಬೇಕಲ್ಲ.. ' ಅಂದ ಕಿಟ್ಟು ಆಟೋ ಡ್ರೈವರ್ ಬಳಿ.
ಆಗ ಡ್ರೈವರ್ ಹೇಳಿದ ` ಏನಂತಾ ಹೇಳೂದ್ರಿ.. ಸುಮಾರ್ 85 ಹಳ್ಳಿಗಳು ನೀನ್ಯಾಗ ಮುಳಿಗ್ಯಾವ್ರಿ.. ನನ್ ಜಮೀನೂ ನೀರಿನ್ಯಾಗ ಆಗಿ ಎರಡ್ ದಿನಾ ಆತ್ರಿ. ಇವತ್ತೂ ಮಳಿ ಬರಂಗ ಆಗ್ತಾ ಐತಿ.. ಮಳಿ ಬಂದ್ರ ಆಲಮಟ್ಟಿಯಾಗಿಂದ್ ನೀರ್ ಬಿಡ್ತಾರು.. ಆಗ ನಮ್ ಪಾಡು ಇನ್ನ ಖರಾಬ್ ಆಕೈತ್ರಿ.. '
`ಏನು..? ಅಲ್ಲಾ.. ನೀವು ಈಗ ಏನ್ ಮಾಡ್ತಾ ಇದ್ದೀರಿ..? ಹೊಟ್ಟೆಗೆ..? ಬದುಕಿಗೆ..?' ಎಂದು ಕೇಳಿದೆವು ನಾವು.
`ನೋಡ್ರಿ ಹಿಂಗ್ ಮಾಡಾಕ ಹತ್ತೇನಿ.. ಹೆಂಗುಸ್ರು, ಮಕ್ಕಳು ಶಾಲೆತಾವ ಅದಾರ್ರಿ.. ಸಾಲಿಮಟ ಎಲ್ಲರಿಗೂ ಕೂರಾಕ ಹೇಳ್ಯಾರ.. ಅಲ್ಲಿ ಕೂಡ್ರಿಸಿ ಬಂದೀನಿ.. ನಮ್ ಬದುಕು ಹೆಂಗ ಕೇಳ್ತೀರಿ ಬುಡ್ರಿ..' ಎಂದ..
ನಮಗೆ ಪಾಪ ಅನ್ನಿಸಿತು. ಹೀಗೆ ನಮ್ಮ ಮಾತುಕತೆ ಮುಂದುವರಿಯಿತು.. ತನ್ನ ಬದುಕು, ಮಲಪ್ರಭೆ, ಆಕೆ ಉಕ್ಕೇರಿದ್ದು, ಎಲ್ಲಾ ಬಿಟ್ಟು ಓಡಿಬಂದಿದ್ದು ಇವೆಲ್ಲವನ್ನೂ ಹೇಳಿದ. ಮತ್ತೆ ನಮ್ಮ ಕಣ್ಣಂಚು ತೇವ ತೇವ.. ಕೆದರಿದ ಕೂಡಲು, ಮುಖ ದಷ್ಟಪಷ್ಟವಾಗಿದ್ದರೂ ಒಳ ಸೇರಿದ ಕಣ್ಣುಗಳು, ಕಪ್ಪು ಕೂದಲಿನ ನಡುವೆ ಅಲ್ಲಲ್ಲಿ ಇಣುಕುತ್ತಿದ್ದ ಬಿಳಿಯ ರೋಮಗಳು, ಶೇವಿಂಗ್ ಮಾಡದ ಕಪ್ಪು ಹಾಗೂ ಬಿಳಿ ಮಿಶ್ರಿತ ಗಡ್ಡ, ಆಕಸ್ಮಿಕ ಅಘಾತದಿಂದ ಕಪ್ಪಗಿದ್ದ ಮುಖಚಹರೆ ಮತ್ತಷ್ಟು ಕಪ್ಪಗಾಗಿತ್ತು. (ಇದೇ ನೆರೆಯ ಪರಿಣಾಮವನ್ನು ಅಲ್ಲಿಯ ಜನ ಇಂದಿಗೂ ಅನುಭವಿಸುತ್ತಿದ್ದಾರೆ. ಆಗ ಉರುಳಿದ ಮನೆಗಳು, ಕಳೆದು ಹೋದ ಬೆಳೆ ಇಂದಿಗೂ ಅಲ್ಲಿನ ಜನರನ್ನು ಬಾಧಿಸುತ್ತಲೇ ಇದೆ. ಆಳುವ ಸರ್ಕಾರ ಬಸ್ಸು ಹೋಗುವ ಜಾಗದಲ್ಲಿ ರೈಲು ಬಿಡುತ್ತ ಮಾತಿನಲ್ಲೇ ಮನೆ ಕಟ್ಟುತ್ತಿವೆ.. ಬಹುಶಃ ಯಾರಾದರೂ ಈಗಲೂ ಅಲ್ಲಿಗೆ ಹೋದರೆ ನಮಗೆ ಕಥೆ ಹೇಳಿದ ವ್ಯಕ್ತಿ ಆಟೋ ಬಾಡಿಗೆ ಮಾಡುತ್ತ ಸಿಕ್ಕರೂ ಸಿಕ್ಕಾನು. ಈ ಘಟನೆ ನಡೆದು 5 ವರ್ಷಗಳಾಗುತ್ತ ಬಂದಿವೆ. ಆದರೂ ಆತ ಅಚ್ಚಳಿಯದೇ ನೆನಪಿನಲ್ಲಿದ್ದಾನೆ. )
ಹೀಗೆ ಮಾತಾಡುತ್ತ ಬರುತ್ತಿದ್ದಂತೆ ಬಸವಣ್ಣ ಶಿವ ಸಾಯುಜ್ಯ ಹೊಂದಿದ ಸ್ಥಳ ಕೂಡಲ ಬಂದಿತ್ತು.
ಎಂಥ ನಿರ್ಮಲ, ಶಾಂತ ಸ್ಥಳವದು. ಒಂದೆಡೆ ದೈತ್ಯ ಕೃಷ್ಣೆ. ಮತ್ತೊಂದೆಡೆ ಮಲಪ್ರಭೆ ನಿಶ್ಚಲೆ. ಮಂದಗಮನೆ.. ಇವೆರಡರ ಐಕ್ಯ ಸ್ಥಳವೇ ಕೂಡಲ ಸಂಗಮ. ಇಲ್ಲಿನ ಅಧಿದೇವತೆ ಕೂಡಲ ಸಂಗಮೇಶ್ವರ. ಬಸವಣ್ಣನ ಅಂಕಿತವಾದ ಕೂಡಲಸಂಗಮದೇವ. ಇಲ್ಲಿಯೇ ಬಸವಣ್ಣ ಲಿಂಗೈಕ್ಯನಾದುದು. ಭವ್ಯ ದೇಗುಲ. ಅಲ್ಲೊಬ್ಬ, ಇಲ್ಲೊಬ್ಬ ಭಕ್ತ ಯಾತ್ರಿಕರು. ವಾತಾವರಣ ನಿಶ್ಚಲ, ನಿರ್ಮಲ. ಆಕಾಶದ ಒಂದು ಭಾಗ ಮೋಡಕಟ್ಟಿದ ಕಾರಣ ಕರ್ರಗಾಗಿದ್ದು ಅಲ್ಲಿನ ವಾತಾವರಣಕ್ಕೆ ಭೀಖರತೆಯನ್ನು ತಂದಿದ್ದು ಸುಳ್ಳಲ್ಲ. ಯಾಕೋ ಅಲ್ಲಿ ಎಷ್ಟು ಹೊತ್ತು ನಿಂತಿದ್ದರೂ ಬೇಸರವೇ ಬರೋದಿಲ್ಲ ಅನ್ನಿಸಿತು.
ಅದೆಂತಹ ಸುಂದರ ತಾಣ. ಗೌಜಿಯಿಲ್ಲ. ಗಲಾಟೆಯಿಲ್ಲ. ನಗರದ ಕೆಲಸದ ಧಾವಂತವಿಲ್ಲ. ಅಕ್ಕಪಕ್ಕದಲ್ಲಿ ದೈತ್ಯ ನದಿಗಳಿದ್ದರೂ ಸದ್ದು ಮಾಡುವುದಿಲ್ಲ. ನಿಶ್ಚಲ.. ನಿರ್ಮಲ.. ನಾವು ಮೊದಲು ಸಂಗಮೇಶ್ವರನನ್ನು ನೋಡಿದೆವು. ನಮ್ಮ ಅದೃಷ್ಟವೋ ಗೊತ್ತಿಲ್ಲ.. ಪೂಜೆ ನಡೆಯುತ್ತಿತ್ತು. ದೇವರಿಗೆ ನಮಿಸಿ ಆರತಿಯನ್ನು ಸ್ವೀಕರಿಸಿದೆವು. ಆ ನಂತರ ಈ ಸಹಸ್ರಮಾನದ ಸಿದ್ಧಪುರುಷ ಬಸವಣ್ಣ ಲಿಂಗೈಕ್ಯನಾದ ಸ್ಥಳದ ಕಡೆಗೆ ಹೊರಟೆವು.
ಮೊದಲು ಆ ಸ್ಥಳ ನದಿಯ ದಡದ ಮೇಲೆ ಇತ್ತಂತೆ. ಕ್ರಮೇಣ ಮಾನವನ ಪಾಪ ಹೆಚ್ಚಾದಂತೆಲ್ಲ ಅಲ್ಲಿ ನೀರು ಆವರಿಸಿತು. ಕೊನೆಗೆ ವಿಜ್ಞಾನ ಮುಂದುವರಿದಂತೆಲ್ಲ ಆ ನದಿಯೊಳಗೆ ಬಾವಿ ಮಾಡಿ ಕಾಂಕ್ರೀಟಿನ ದೈತ್ಯ ಗೋಡೆಯನ್ನೆಬ್ಬಿಸಿ ಬಸವನ ನಿಶ್ಚಲ ದೇಹ ಸಮಾಧಿಯನ್ನು ನೋಡಲು ಅನುವು ಮಾಡಿಕೊಡಲಾಗಿದೆ. ಸರಿಸುಮಾರು 250 ಮೆಟ್ಟಿಲುಗಳು ಆ ಬಾವಿಗೆ.
ನಿಲ್ಲಿ.. ಒಂದು ಚೂರು ಹಳಿ ತಪ್ಪಿತು ಇಲ್ಲಿ. ಆ ಬಾವಿ ಕೂಡಲ ಸಂಗಮನಾಥನ ನೇರ ಎದುರಿಗೆ ಅಜಮಾಸು 100 ಮೀಟರ್ ದೂರದಲ್ಲಿದೆ. ಅಲ್ಲಿಗೆ ಹೋಗಲು 250 ಅಡಿಯ ಸೇತುವೆಯೂ ಇದೆ.
ಸಂಗಮನಾಥ ದೇವಾಲಯದ ಎದುರು ಸುಮಾರು 50 ಮೆಟ್ಟಿಲುಗಳನ್ನೇರಿ, ಸೇತುವೆಯಲ್ಲಿ ಸಾಗಿ ಆ ನಂತರ ಕೆಳಕ್ಕಿಳಿಯಬೇಕು. ಕೆಳಕ್ಕಿಳಿದಂತೆ ಅದ್ಯಾವುದೋ ಅವ್ಯಕ್ತ ಭಯ ಹಾಗೂ ಭಾವನೆ ನಮ್ಮ ಮನದಲ್ಲಿ ಮೂಡುತ್ತವೆ. ಅಷ್ಟೇ ಭಕ್ತಿಯೂ..
ಕೆಳಕ್ಕೆ ಇಳಿದದ್ದೇ ಬಸವಣ್ಣನವರ ಲಿಂಗೈಕ್ಯ ಗದ್ದುಗೆ ಕಾಣಿಸುತ್ತದೆ. ಎಂತಾ ಸ್ಥಳವದು. ತಂಪು ತಂಪು. ಕೆಳಗೆ ಬಾವಿಯಲ್ಲಿ ಗೋಡೆಯಲ್ಲಿ ನೀರು ಜಿನುಗಿದ ಅನುಭವ.. ಅಲ್ಲಿರುವ ಒಬ್ಬಾತ ಹೇಳಿದ ಪ್ರಕಾರ ನಾವು ನೆಲಮಟ್ಟಕ್ಕಿಂತ ಹೆಚ್ಚೂ ಕಡಿಮೆ 35 ಅಡಿ ಕೆಳಗೊದ್ದೇವೆ. ನೀರಿನ ನಡುವೆ ನಿಂತಿದ್ದೇವೆ. ಎಂದು ಸಲ ಮೈ ಜುಮ್ಮೆಂದಿತು.
ಬಳಿಯಲ್ಲಿದ್ದ ಕಿಟ್ಟು ` ವಿನು.. ಒಂದ್ಸಾರಿ ಎಲ್ಲಾದ್ರೂ ಈ ಬಾವಿಗೆ ಸಣ್ಣ hole ಆತು ಅಂದ್ರೆ ಎಂತಾ ಆಗ್ತಿಕ್ಕು.. image ಮಾಡ್ಕ್ಯ..' ಎಂದ.. ಅದು ನನ್ನ ಕಲ್ಪನೆಗೆ ನಿಲುಕಲಿಲ್ಲ.
ಅಲ್ಲಿಯೂ ನಮ್ಮ photo programme  ನಡೆಯಿತು. ನಾವು ಹುಡುಗರೆಲ್ಲಾ ಸೇರಿ ಪೋಟೋ ಹೊಡೆಸಿಕೊಳ್ಳುತ್ತಿದ್ದರೆ ನಾಗಭೂಷಣ ಗೌಡರು ಕ್ಯಾಮರಾ ಮನ್ ಆಗಿದ್ದರು. ನನ್ನ ಬಳಿಯಿದ್ದ SLR ಕ್ಯಾಮರಾ ಕ್ಲಿಕ್ಕಾಗುತ್ತಿತ್ತು.. ಪವಿತ್ರಾಳದ್ದೂ.. ಆದರೆ ಕೆಲವೇ ಪೋಟೋ ತೆಗೆಯುವ ವೇಳೆಗೆ ನನ್ನ ಬಳಿಯಿದ್ದ SLR ಕೈಕೊಟ್ಟಿತು. ಯಾವುದಕ್ಕೂ ಇರಲಿ ಎಂದು KB10 ಒಯ್ದಿದ್ದೆ.. ಉಪಯೋಗಕ್ಕೆ ಬಂದಿತು. ಬಿಡಿ ಆಗ ಈಗಿನಷ್ಟು ಡಿಜಿಕ್ಯಾಮ್ ಗಳು ಬಂದಿರಲಿಲ್ಲ ನೋಡಿ.. ಬಂದರೂ ನಾವು ಕೊಳ್ಳಬೇಕಲ್ಲ... ಅಷ್ಟು ಶಕ್ತಿಯಿರಲಿಲ್ಲ ಅದನ್ನೂ ಬಿಡಿ..
ಬೇಗನೆ ಮೇಲೇರಿ ಬಂದೆವು. ಮೇಲೇರಿದಾಗ ಕಂಡ ದೃಶ್ಯ ಇನ್ನೂ ಅಮೋಘ. ಸುತ್ತೆಲ್ಲ ನೀರು.. ಒಂದೆಡೆ ಕೃಷ್ಣೆ.. ಮತ್ತೊಂದೆಡೆ ಮಲಪ್ರಭೆ. ಮಲಪ್ರಭೆ ಆದಿನ ಋತುಮತಿಯಾಗಿದ್ದಳೇನೋ ಎಂಬಂತೆ.. ಹುಚ್ಚೆದ್ದು ಕುಣಿದಿದ್ದಳು.. ಉಕ್ಕೇರಿದ್ದಳು.. ಅದಕ್ಕೆ ತಕ್ಕಂತೆ ಆರ್ಭಟ, ಸೊಕ್ಕು... ಕೆನ್ನೀರು.. ತಿಂಗಳ ಸಂಭ್ರಮದಂತೆ ಆವೇಶ.. ಆಕೆಯ ಅಬ್ಬರ ಎಷ್ಟಿತ್ತೆಂದರೆ ಕೃಷ್ಣೆಗೆ ಸಡ್ಡು ಹೊಡೆಯುವಷ್ಟು..
ಆ ತುದಿಯಲ್ಲಿ ನಿಂತಾಗ ತೃಪ್ತಿ ಕಿಟ್ಟುವಿನ ಬಳಿ `ನೋಡಾ ಕಿಟ್ಟಿ.. ಈ ಕೃಷ್ಣಾ ಅದ್ಯಾವ ರೀತಿ ಕಪ್ಪು ಹೇಳಿ.. ಹೊಲಸು ಹೊಸಲು.. ಈ ಕೃಷ್ಣ ಹೇಳೋ ಹೆಸರಿನವರೇ ಹಾಂಗೆ ಕಾಣ್ತು..' ಎಂದು ಛೇಡಿಸಿದಳು..
ಅದಕ್ಕೆ ಕಿಟ್ಟು `ಕೃಷ್ಣ ಹೇಳದು ಕಪ್ಪಿರಲಿ.. ಒಪ್ಪಿರಲಿ..ದಡದವ್ಕೆ, ರೈತರಿಗೆ ಅದು ಯಾವಾಗ್ಲೂ ತನ್ನಿಂತ ತೃಪ್ತಿಯನ್ನೇ ನೀಡ್ತು.. ಸಮಾಜ ಸೇವೆ.. ಉಳಿದವರ ಹಾಂಗೆ ಸ್ವಾರ್ಥಿಯಲ್ಲ.. ನೋಡಲು ಕಪ್ಪಿದ್ರೆಂತು.. ಗುಣ ಚೊಲೋ ಇದ್ರಾತು.. ಪಾ..ಪ ಕೃಷ್ಣ.. ಒಳ್ಳೆಯದು.. ನೋಡಿ ಕಲ್ತಕಳವು..' ಎಂದು ಮಾತಿನ ತಿರುಗುಬಾಣ ಬಿಟ್ಟ...
ಆಕೆ ಮಾತು ಬದಲಿಸಿದಳು..

(ಮುಂದುವರಿಯುತ್ತದೆ..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಇಳಕಲ್ಲಿಗೆ ಆಟೋದಲ್ಲಿ... ಇಳಕಲ್ಲಿನಲ್ಲೊಂದು ಹಾಸ್ಯಸಂಜೆ ಹಾಗೂ ಮರಳಿ ಮಣ್ಣಿಗೆ)

Wednesday, December 11, 2013

ಕೇಳದೆ..ಕರೆ


ಕರೆದರೆ ಯಾಕೋ ತಿರುಗುವುದಿಲ್ಲ..
ನನ್ನೆಡೆ ನಿನ್ನಲಿ ಸಿಟ್ಟಿದೆಯಾ..?

ಮಾತೂ ಇಲ್ಲ, ಕಥೆಯೂ ಇಲ್ಲ
ಮೌನವೆ ಬಾಳಲಿ ತಿಂಬಿದೆಯಲ್ಲ
ಮಾತಲಿ ಮೌನದ ಗೂಡಿದೆಯಲ್ಲ
ಸಿಟ್ಟಿನ ಕಾವಲು ಜೊತೆಗಿದೆಯಲ್ಲ ||

ಭಾವದ ಒಡಲು ತುಂಬಿಹುದೇನು?
ದುಃಖದ ಕಟ್ಟೆಯು ಕೂಡಿಹುದೇನು?
ನಿನ್ನೊಳಗಾಗಿಹ ಕುಂದುಗಳೇನು?
ನನ್ನೆಡೆ ಸಿಟ್ಟಿಗೆ ಈ ಪರಿಯೇನು?

ನನ್ನನು ನೀನು ಮರೆತಿಹೆಯಾ
ತನುವಲಿ ಕಾಡುವ ಗುರುತಿದೆಯಾ
ನನ್ನೆಡೆ ನೀನು ಹೊರಳದೆ ಇರಲು
ಕಾರಣವೇನು ಹೇಳುವೆಯಾ..?||

(ಈ ಕವಿತೆಯನ್ನು ಬರೆದಿದ್ದು 08.04.2006ರಂದು)
(ತಂಗಿ ಸುಪರ್ಣಾ ಹೆಗಡೆ ಹಾಗೂ ಪೂರ್ಣಿಮಾ ಹೆಗಡೆ ಇವರುಗಳು 
ಈ ಹಾಡಿಗೆ ರಾಗವನ್ನು ಸಂಯೋಜಿಸಿ ಹಾಡಿದ್ದಾರೆ. ಅವರಿಗೆ ಧನ್ಯವಾದಗಳು)

Tuesday, December 10, 2013

ಹೊಟ್ಟೆ ತುಂಬಾ ಕಾಫಿ ಹಣ್ಣು ತಿಂದಾಗ..

ಪ್ರತಿಯೊಬ್ಬರಿಗೂ ಬಾಲ್ಯವೆಂದರೆ ಜೀವಂತಿಕೆ. ಮರೆಯಲಾಗದ ಮಹಾನ್ ಮಜಲುಗಳ, ಸುಂದರ ಸವಿ ನೆನಪುಗಳ ಆಗರ-ಸಾಗರ. ಹಾಗೆಯೇ ಕಿಲಾಡಿ-ತುಂಟತನಗಳ ಬುತ್ತಿ. ನನ್ನ ಬದುಕಿನಲ್ಲಿ ಬಾಲ್ಯದಲ್ಲಿ ನೂರಾರು ವಿಶಿಷ್ಟ ವಿಚಿತ್ರ ಹಾಗೂ ಖುಷಿ ನಿಡುವ ಘಟನೆಗಳು ಜರುಗಿವೆ. ಅಂತಹ ಘಟನೆಗಳ ಸರಮಾಲೆಯಲ್ಲೊಂದು ಈ ಪ್ರಸಂಗ.
ಮೊದಲೇ ಹೇಳಿ ಬಿಡುತ್ತೇನೆ. ಈ ಕಾಫಿ ಹಣ್ಣು ಇದೆಯಲ್ಲ ಇದರ ರುಚಿಯೇ ರುಚಿ. ಸಿಪ್ಪೆ ಸುಲಿದು ಬಾಯಿಗಿಟ್ಟರೆ ಸಿಹಿಯೋ ಸಿಹಿ. ಶಿರಸಿ, ಸಿದ್ದಾಪುರ ಕಡೆಗಳಲ್ಲಿ ಕಾಫಿ ಹಣ್ಣನ್ನು ತೋಟದ ನಡುವೆ ಅಲ್ಲೊಂದು ಇಲ್ಲೊಂದು ಎಂಬಂತೆ ಹಾಗೆ ಸುಮ್ಮನೆ ನೆಡುತ್ತಾರೆ. ಯಾವುದಾದರೂ ಅಧಿಕಾರಿಗಳು ಬಂದರೆ ನೋಡ್ರಿ ನಮ್ಮಲ್ಲಿ ಕಾಫಿಯೂ ಬೆಳೀತಿವೆ ಎಂದು ಸಾಕ್ಷಿ ಹೇಳುವಂತೆ. ಕೆಂಪ ಕೆಂಪನೆಯ ಹಣ್ಣು ಬಿಡುವ ಕಾಫಿ ಚಾಕಲೇಟು ಕೊಳ್ಳಲು ದುಡ್ಡಿಲ್ಲದ ಸಮಯದಲ್ಲು ಚಾಕಲೇಟಿನಂತೆ .. ಬಾಲ್ಯದಲ್ಲಿ ಇಂತಹ ಕಾಫಿ ಗಿಡಗಳಿಗೆ ದಾಳಿ ಇಟ್ಟರೆ ಕೆಂಬಣ್ಣದ ಹಣ್ಣುಗಳು ಮಾಯವಾಗಬೇಕು.. ಹಾಗೆ ತಿನ್ನುತ್ತಿದ್ದೆವು.
ಅದು ಹಾಗಿರ್ಲಿ ಬಿಡಿ.. ಈಗ ವಿಷಯಕ್ಕೆ ಬರುತ್ತೇನೆ. ಚಿಕ್ಕಂದಿನಲ್ಲಿ ನಮ್ಮೂರಿನ ಓರಗೆಯ ಹುಡುಗರಿಗೆ ನಾನೇ ನಾಯಕ. ಎಲ್ಲರಿಗಿಂತ ವಯಸ್ಸಿನಲ್ಲಿ ದೊಡ್ಡವನಾಗಿದ್ದರೂ ಆಕಾರ ಮಾತ್ರ ಕುಳ್ಳ ನೋಡಿ.. ಮಾತು, ಕಿಲಾಡಿ ಜೋರಾಗಿಯೇ ಇತ್ತು. ಇತರರೂ ಕಿಲಾಡಿಯ ವಿಷಯದಲ್ಲಿ ಜೋರಿದ್ದರೂ ನನ್ನಷ್ಟಿರದ ಕಾರಣ ನಾಯಕತ್ವವನ್ನು ನನಗೆ ದಯಪಾಲಿಸಿ ನಾನ್ ಸರಿಯಿಲ್ಲ ಎಂದು ಸುಮ್ಮನಾಗಿ ಸೈಡಿಗೆ ಹೋಗಿದ್ದರು. ನನ್ನ ಸೈನ್ಯ ಸುಮಾರು ದೊಡ್ಡದಿತ್ತು. ಹೆಚ್ಚೂ ಕಡಿಮೆ ಅರ್ಧ ಕ್ರಿಕೆಟ್ ಟೀಮಿನಷ್ಟು. ಉಳಿದವರೆಲ್ಲ ಚಿಕ್ಕವರು. ಚಿಕ್ಕ ಹುಡುಗರಲ್ವಾ.. ಅವರಿಗೆ ನಾನು ಹೇಳಿದ್ದೇ ವೇದವಾಕ್ಯ. ನಾನು ಸತ್ಯ ಹೇಳಿದರೂ, ಸುಳ್ಳು ಹೇಳಿದರೂ ನಂಬುತ್ತಿದ್ದರು. ಇದನ್ನು ನಾನು ಅಡ್ವಾಂಟೇಜ್ ಆಗಿ ತೆಗೆದುಕೊಂಡು ಹಲವು ಸುಳ್ಳುಗಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳಿ ಅವರನ್ನೆಲ್ಲ ನಂಬಿಸಿಬಿಡುತ್ತಿದ್ದೆ. ಬಿಡಿ.. ನಾನು ಆ ದಿನಗಳಲ್ಲಿ ಒಂಥರಾ.. ನಮ್ಮೂರಿಗೆ ಡಾನ್ ಇದ್ದಹಾಗೆ...
ಒಂದು ಭಾನುವಾರದ ಶುಭ ಮುಂಜಾವು. ಭಾನುವಾರದ ರಜಾದ ಮಜಾ ನಮ್ಮೆದುರಿಗಿತ್ತು. ಕಂಡಕಂಡಲ್ಲಿ ದಾಳಿ ಇಡುವ ಪರಿಪಾಠ ನಮ್ಮದು. ಇವತ್ತೇನು ಕಡಿದು ದಬ್ಬಾಕಬೇಕು ಎನ್ನುವ ಆಲೋಚನೆಯಲ್ಲಿ ಮುಂಜಾನೆಯೇ ಎದ್ದು ತಿಂಡಿಯನ್ನು ತಿಂದು ಕಣ್ಣಾ ಮುಚ್ಚಾಲೆಯೋ, ಮತ್ತಿನೇನೋ ಆಡುವ ನೆಪದಿಂದ  ನಮ್ಮೂರಿನ ಖ್ಯಾತಿಯೂ ಕುಖ್ಯಾತಿಯೂ ಆಗಿರುವ `ಜೀಡೇಹೋಂಡ' ಎಂಬ ಸ್ಥಳದ ಕಡೆಗೆ ಹೊರಟೆವು. ಆಟ ರಂಗೇರುತ್ತಿತ್ತು. ಸ್ವಲ್ಪ ಹೊತ್ತು ಆಡಿರಬೇಕು. ಅಷ್ಟರಲ್ಲಿ ನಮ್ಮೂರಿನ ಇನ್ನೊಂದು ಭಾಗದಿಂದ ಒಂದು ಬಹುದೊಡ್ಡ ದನ-ಎಮ್ಮೆ-ಕ್ವಾಣಗಳ ಗ್ವಾಲೆ ಕಂಡು ಬಂತು. ನಮ್ಮತ್ತಲೇ ಬರುತ್ತಿದ್ದ ಕಾರಣ ಯಾರೋ ಅದನ್ನು ಬೆನ್ನಟ್ಟುತ್ತಿದ್ದಾರೆ ಎನ್ನುವುದು ಕನ್ ಫರ್ಮ್ ಆಯಿತು. ನೋಡಿದರೆ ನಮ್ಮೂರಿನವರೇ ಆದ ಮೇಲಿನಮನೆಯ ನರಸಿಂಹಣ್ಣ.
ನಮ್ಮೂರಿನ ಬ್ಯಾಣಕ್ಕೆ ಕದ್ದು ಮೇಯಲು ಬರುತ್ತಿದ್ದ ಇನ್ನೊಂದು ಊರಿನ ಗ್ವಾಲೆ ಅದಾಗಿತ್ತು. ನಮ್ಮನ್ನು ಕಂಡವರೇ ನರಸಿಂಹಣ್ಣ ಈ ದನಗಳ ಗ್ವಾಲೆಯನ್ನು ದೂರಕ್ಕೆ ಅಟ್ಟಿ ಬನ್ನಿ. ಕಳ್ಳ ಮೇವು ಮಾಡುತ್ತಿವೆ, ನಮ್ಮ ಜಮೀನು ಹಾಳು ಮಾಡುತ್ತಿವೆ.. ಎಂದರು.
ನಮಗಂತೂ ಸಿಕ್ಕಿದ್ದೇ ಛಾನ್ಸು.. ಎಂತಾ ಕೆಲಸ.. ಆಹಾ... ಓಹೋ... ನನ್ನ ತಂಗಿ ಸುಪರ್ಣ, ಪಕ್ಕದ ಮನೆಯ ನಂದನ, ಗುರುಪ್ರಸಾದ ಮುಂತಾದ ಮಂತ್ರಿ-ಸೇನಾಧಿಪತಿಗಳೊಂದಿಗೆ ನಾನು ಯುದ್ಧಕ್ಕೆ ಜೊರಟಂತೆ ಬೆನ್ನಟ್ಟಿಕೊಂಡು ಹೊರಟೆ.
ದನದ ಗ್ವಾಲೆಯನ್ನು ಹತ್ತಿರದಲ್ಲೇ ಬಿಟ್ಟರೆ ನಮ್ಮ ಮನೆಯ ಗದ್ದೆಗೆ ನುಗ್ಗಿದರೆ ಏನ್ ಮಾಡೋದು ಎನ್ನುವ ಸಾಮಾಜಿಕ ಪ್ರಜ್ಞೆ.
ಆ ಗ್ವಾಲೆಯನ್ನು ಅಟ್ಟಿದೆವು.. ಅಟ್ಟಿದೆವು... ಓಡಿಸಿ ಓಡಿಸಿ ಸುಸ್ತಾಗಿಸಿದೆವು.. ಹಿಂದೆ ಓಡಿ ನಾವೂ ಸುಸ್ತಾದೆವು. ಕೊನೆಗೊಮ್ಮೆ ನಮ್ಮೂರಿನಿಂದ ಒಂದೋ ಎರಡೋ ಕಿಲೋಮೀಟರ್ ದೂರದಲ್ಲಿದ್ದ ಕಾಕಾಲಗದ್ದೆ ಎಂಬಲ್ಲಿ ಅಘನಾಶಿನಿ ನದಿಯನ್ನು ದಾಟಿಸಿ ಬಂದೆವು. ಮನೆಗೆ ಬರುವ ವೇಳೆಗೆ ಶುರುವಾಯ್ತು ನೋಡಿ ಮನೆಯ ಹಿರಿಯರಿಂದ ಮಂತ್ರಾಕ್ಷತೆ.. ಸಂಜೆಯಾದರೂ ಕುಂಭದ್ರೋಣ ಮಳೆಯಂತೆ ಸುರಿಯುತ್ತಲೇ ಇತ್ತು.
**
ಮರುದಿನ ಇನ್ನೂ ಭೀಕರ ಪರಿಸ್ಥಿತಿ. ಆ ದನದ ಗ್ವಾಲೆಯ ಯಜಮಾನ ಬಂದ. ನಮ್ಮ ದುರಾದೃಷ್ಟಕ್ಕೆ ಆ ಗ್ವಾಲೆಯಲ್ಲಿದ್ದ ಮರಿ ಕೋಣವೊಂದು ರಾತ್ರಿ ಹಿತ್ಲಕೈ ಎಂಬ ಊರಿನ ತೋಟಕ್ಕೆ ನುಗ್ಗಲೆತ್ನಿಸಿ, ಆ ಊರಿನವರು ತೋಟವನ್ನು ಹಂದಿ ಕಾಟದಿಂದ ರಕ್ಷಣೆ ಮಾಡಿಕೊಳ್ಳಬೇಕೆಂದು ಹಾಕಿಕೊಂಡಿದ್ದ ಕರೇಂಟ್ ಬೇಲಿಯ ಶಾಕ್ ಗೆ ಸಿಕ್ಕಿ ಸತ್ತು ಹೋಗಿತ್ತಂತೆ.
ಸಿಟ್ಟಿನಿಂದ ಹಾಗೂ ತೀರ್ಥ ಸೇವನೆಯಿಂದ ಕಂಣು ಕೆಂಪಗೆ ಮಾಡಿಕೊಂಡು ದಾರಿಯಡಿ ಬಯ್ಯುತ್ತ ಬರುತ್ತಿದ್ದ ಆತ. ನಮ್ಮೂರಿನ ಕಡೆಗೆ ಮುಖ ಮಾಡಿ ಬರುತ್ತಿದ್ದ ಆತ. ನಾನು ಹಾಗೂ ತಂಗಿ ಅದೇ ದಾರಿಯಲ್ಲಿ ನಮ್ಮ ದುರಾದೃಷ್ಟಕ್ಕೆ ಹೋಗುತ್ತಿದ್ದೆವು. ಹುಲಿ ಬಾಯಿಗೆ ಮಿಕವೇ ತಾನಾಗಿ ಬಂದು ಬಿದ್ದಂತೆ ನಾವು ಎದುರಿಗೆ ಸಿಕ್ಕೆವು. ತಿನ್ನಲು ಬಹಳ ಸಿಹಿ ಎನ್ನಿಸಿದ್ದ ಕಾಫಿ ಹಣ್ಣುಗಳು ನಮ್ಮ ಬೊಗಸೆ ಹಾಗೂ ಕಿಸೆಯ ತುಂಬ ತುಂಬಿಕೊಂಡಿದ್ದನ್ನು ಗಮನಿಸಿದ ಯಾರಾದರೂ ಕೂಡ ನಾವು ತೋಟದ ಕಾಫಿ ಗಿಡಕ್ಕೆ ಲಗ್ಗೆ ಇಟ್ಟು ಬಂದಿದ್ದೆವು ಎನ್ನುವುದನ್ನು ದೂಸರಾ ಮಾತಿಲ್ಲದೇ ಹೇಳಬಹುದಿತ್ತು.
ನಮ್ಮೂರಿನಲ್ಲಿ ಚೌಡಿ ಮಟ್ಟಿ ಎಂಬ ಇನ್ನೊಂದು ಫೇಮಸ್ ಜಾಗವಿದೆ. ಚೌಡಿಯ ಕಟ್ಟೆ ಇರುವ ಬೃಹತ್ ಮಾವಿನ ಮರ ಇರುವ ಸ್ಥಳವೇ ಚೌಡಿ ಮಟ್ಟಿ. ಮಧ್ಯಾಹ್ನದ ವೇಳಗೆ ಅಲ್ಲಿಗೆ ಹೋಗ ಬೇಡಿ ರಣ ತಿರುಗ್ತಿರ್ತದೆ ಎಂದು ಒಂದಾನೊಂದು ಕಾಲದಲ್ಲಿ ನಮ್ಮನ್ನು ಹೆದರಿಸಿದ್ದ ಪರಿಣಾಮ ನಮ್ಮೊಳಗೆ ಭೀತಿಯನ್ನು ಹುಟ್ಟುಹಾಕಿದ್ದ ಜಾಗ ಅದು. ಆತ ಸಮಾ ಅಲ್ಲೇ ನಮಗೆ ಸಿಕ್ಕ. ನಾವು ಸಿಗುವ ವರೆಗೂ ಆತನ ಬಾಯಿಂದ ಕನ್ನಡದ ಬೈಗುಳ ನಿಗಂಟು ಓತಪ್ರೋತವಾಗಿ ಬರುತ್ತಿದ್ದವು.. ಸೆನ್ಸಾರ್ ಪ್ರಾಬ್ಲಮ್ ಸಾರ್.. ಆತನ ಬೈಗುಳಗಳ ಪೈಕಿ `ಸೂ...ಮ..., ಬೋ...ಮ..' ಇತ್ಯಾದಿಗಳೆಲ್ಲ ಇದ್ದವು.. ನಮಗಂತೂ ಧಿಗಿಲ್ ದಬ್ಬಾಕ್ಕಂಡಂಗಾಗಿತ್ತು.
ಆತನ ಕಂಚಿನ ಕಂಠದ ಏರು ಧ್ವನಿಗೆ ನಾವೀ ಹೆದರಿ ಬಾಲವನ್ನು ಕಾಲ ಎಜ್ಜೆಯಲ್ಲಿ ಹಾಕಿ ಮುದುರುವ ಕುನ್ನಿಯಂತೆ.. ಕಮ್-ಕಿಮ್ ಅನ್ನದೇ ನಿಂತಿದ್ದೆವು.
ನಮ್ಮ ಬಳಿಗೆ ಬಂದ. ಅದ್ಯಾರೋ ಪುಣ್ಯಾತ್ಮ  ನಾವು ದನವನ್ನು ಬೆರೆಸಿದವರು ಎಂದು ಹೇಳಿದ್ದರಿಂದ ನಮಗೆ ಸಮಾ ಮಂತ್ರಾಕ್ಷತೆ ನಡೆಯಿತು. ಸುಮಾರು ಹೊತ್ತು ಬೈದ. ನಾವು ಸುಮ್ಮನೆ ನಿಂತಿದ್ದೆವು. ಕೊನೆಗೆ ಬಹಳ ಹೊತ್ತಿನ ನಂತರ ಆತ ಸಿಟ್ಟಿನಿಂದಲೇ `ಅಲ್ಲಾ.. ನೀವು ಹೊಟ್ಟಿಗೆ ಎಂತಾ ತಿಂತೀರಿ..?' ಎಂದು ಕೇಳಿದ.
ಆಗ ನನ್ನ ಜೊತೆಯಲ್ಲೇ ಇದ್ದ ಮಾತಿನ ಮಲ್ಲಿ ತಂಗಿ ಕೈಯಲ್ಲಿದ್ದ ಕೆಂಪು ಬಣ್ಣದ ಕಾಫಿ ಹಣ್ಣನ್ನು ತೋರಿಸುತ್ತಾ `ಅಷ್ಟೂ ಕಾಣೋದಿಲ್ವೇನೋ... ಕಾಫಿ ಹಣ್ಣು..' ಎಂದು ಬಿಡಬೇಕೆ..
ಆತ ಒಮ್ಮೆಲೇ ಬಯ್ಯುವುದನ್ನು ಬಿಟ್ಟು ದೊಡ್ಡದಾಗಿ ನಗಲು ಪ್ರಾರಂಭಿಸಿದಾಗಲೇ ನನಗೆ ಹಾಗೂ ತಂಗಿಗೆ ನಾವು ಏನು ಹೇಳಿದ್ದೆವೆಂದು ಅರ್ಥವಾಗಿದ್ದು.
ಬಹುಶಃ ಹೀಗೆ ಹೇಳಿದ್ದರಿಂದಲೇ ನಮಗೆ ಹೊಡೆತ ಬೀಳುವುದೂ ತಪ್ಪಿ ಹೋಯಿತೇನೋ.. ಆತನ ಸಿಟ್ಟು ಅರ್ಧಕ್ಕರ್ಧ ಇಳಿದಿತ್ತು. ಕೊನೆಗೆ ನಮ್ಮ ಬಳಿ `ನಿಮಗ್ಯರು ಹೇಳಿದ್ದು ದನಾ ಹೊಡಿಯಾಕೆ..?' ಎಂದ. ನಾವು ಬೋಳೆ ಸಂಕರನಂತೆ ಮೇಲಿನಮನೆಯ ನರಸಿಂಹಣ್ಣನ ಹೆರಸನ್ನು ಹೇಳಿಬಿಟ್ಟೆವು.
ಪಾಪ.. ಮನೆಯಲ್ಲಿ ನರಸಿಂಹಣ್ಣ ಇರಲಿಲ್ಲವಂತೆ.. ಅವರ ಮನೆಯಾಕಿ ಇದ್ದಳು.. ಈ ಯಜಮಾನ ಅಲ್ಲಿಗೆ ಹೋಗಿ ತನ್ನ ಸೆನ್ಸಾರ್ ಲೆಸ್ ಬೈಗುಳ ಬೈದು ಆಕೆ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.
ಏನ್ ಮಾಡೋದು..? ಬಾಲ್ಯದಲ್ಲಿ ಹೀಗೆ ಇಲ್ಲದಿದ್ದರೆ ಆಗುತ್ತದೆಯೇ..? ನೆನಪು ಮಾಡಿಕೊಂಡಾಗಲೆಲ್ಲ.. ನಗು ಬರುತ್ತದೆ.. ಹಾಂ.. ನಾವು ಹಾಗೆ ಬೆನ್ನಟ್ಟಿ ದ್ದಕ್ಕೆ ತೀರಾ ಇತ್ತೀಚಿನ ಕೆಲ ವರ್ಷಗಳ ವರೆಗೂ ಆತನ ದನಗಳು ನಮ್ಮೂರಿನ ಬ್ಯಾಣಗಳಲ್ಲಿ ಕದ್ದು ಮೇಯುತ್ತಿರಲಿಲ್ಲ.. ನಮ್ಮೂರಿಗರು ಆ ಸಂದರ್ಭದಲ್ಲಿ ನಮಗೆ ಬೈದರೂ ಕಳ್ಳ ದನಗಳ ಕಾಟ ತಪ್ಪಿಸಿಕೊಂಡಿದ್ದಕ್ಕೆ ಮನಸ್ಸಿನಲ್ಲಿಯೇ ನಮಗೆ ಥ್ಯಾಂಕ್ಸ್ ಹೇಳಿರಲಿಕ್ಕೆ ಸಾಕು ಬಿಡಿ..
ನಮ್ಮೂರಿನ ಹುಡುಗರಿಗೆ ಕಾಡು ಸುತ್ತಿ ಗೊತ್ತಿಲ್ಲ.. ಕಿಲಾಡಿ ಮಾಡಿ ಗೊತ್ತಿಲ್ಲ.. ದಿನಾ ಶಾಲೆ-ಊಟ-ಮನೆ... ಹೋಂ ವರ್ಕುಗಳಲ್ಲಿ ಮುಳುಗಿ ಏಳುತ್ತಿವೆ. ರಜಾ ಸಿಕ್ಕರೆ ಸೈಕಲ್ ಹೊಡೆಯುತ್ತಾರಾದರೂ ಉಳಿದ ಕಿಲಾಡಿಗಳನ್ನು ಕೇಳಲೇ ಬೇಡಿ. ಈಗ ಮತ್ತೆ ಆತನ ದನಗಳು ಕಳ್ಳ ಮೇಯಲು ಬರುತ್ತಿವೆ.ನಮ್ಮೂರಿನ ಹುಡುಗರು ಜೋರಿಲ್ಲ ಬಿಡಿ..
ಆತನ ದನಗಳಿಗೂ ಇದು ಗೊತ್ತಾಗಿರಬೇಕು... ನಾವು ದೊಡ್ಡವರಾಗಿದ್ದೇವೆ... ಆ ಯಜಮಾನನಿಗೆ ವಯಸ್ಸಾಗಿದೆ.. ಸಿಕ್ಕಾಗ ಪ್ಯಾಲೆ ನಗುವನ್ನು ನಗುತ್ತಾನೆ.. ಅವನ ಪಾಲಿಗೆ ನಾವು `ಹೆಗುಡ್ರೇ...' ಆಗಿ ಬಿಟ್ಟಿದ್ದೇವೆ.. ನನ್ನ ತಂಗಿ `ಅಮ್ಮಾವ್ರಾ'ಗಿದ್ದಾಳೆ..

ಮೊನ್ನೆ ಒಮ್ಮೆ ಸಿಕ್ಕಾಗ ಆದನ್ನು ನೆನಪು ಮಾಡಿದ್ದೆ...ಆತನಿಗೆ ನೆನಪಿತ್ತೋ.. ಮರೆತಿತ್ತೋ ಗೊತ್ತಿಲ್ಲ.. ನಮ್ಮೂರಿನತ್ತ ದನವನ್ನು ಅವನೇ ಅಟ್ಟಿಕೊಂಡು ಬರುತ್ತಿದ್ದಾಗ ಈ ಪ್ರಸಂಗವನ್ನು ನೆನಪು ಮಾಡಿಕೊಟ್ಟು ಹುಷಾರು ಎಂದು ಲೈಟಾಗಿ ವಾರ್ನಿಂಗ್ ಮಾಡಿದ್ದೆ... ಅದಕ್ಕಾತ ಹೆಗುಡ್ರೆ.. ಈಗಿನ ಹುಡ್ರ ಹತ್ರ ಹಂಗಿದ್ದೆಲ್ಲಾ ಕೇಳ್ ಬ್ಯಾಡಿ ಎಂದು ದೇಶಾವರಿ ನಗೆ ನಕ್ಕಿದ್ದ..

ಹೌದಲ್ಲ ಅನ್ನಿಸುತ್ತಿದೆ.

Sunday, December 8, 2013

ಚಟ ಬಿಡಿ

ಚಟ ಬಿಡಿ, ಚಟ ಬಿಡಿ, ಚಟ ಬಿಡಿ
ಬದುಕ ಬೇಕೆಂದರೆ ಚಟ ಬಿಡಿ ||

ಸೇಂದಿ ಸಾರಾಯಿ ಬಿಟ್ಟು ಬಿಡಿ,
ಗುಟ್ಕಾ, ಮಟ್ಕಾದ ದೋಸ್ತಿ ಬಿಡಿ ||

ಬೀಡಿ ಸಿಗರೇಟು ದೂರವಿಡಿ
ಬ್ರಾಂದಿ ಚುಟ್ಟಾಗಳ ಮರೆತುಬಿಡಿ ||


ಚಟ ಬಿಡಿ ಚಟ ಬಿಡಿ, ಚಟ ಬಿಡಿ
ನಯಾ ಜಮಾನಾವ ಉಳಿಸಿಕೊಡಿ ||

ಮಚ್ಚು ಲಾಂಗುಗಳ ಸಂಘ ಬಿಡಿ
ದುಷ್ಟ ಚಟಗಳ ದೂರವಿಡಿ ||

ಚಟ ಬಿಡಿ ಚಟ ಬಿಡಿ ಚಟ ಬಿಡಿ
ಸಿಗ್ನಲ್ ನೋಡಿ ಲೈನು ಹೊಡಿ ||

ಹರೆಯದ ಹುಡುಗರೆ ಚಟ ಬಿಡಿ
ಬೆಳೆದ ಹುಡುಗಿಯರ ದೂರವಿಡಿ ||

ಡೀಸೆಂಟ್ ಹುಡುಗರೆ ತಿಳಿದುಬಿಡಿ
ಅರಿತು ನೋಡಿ ಮನಸು ಕೊಡಿ ||


(ಕಾಲೇಜು ದಿನಗಳಲ್ಲಿ ಶಿರಸಿ ತಾಲೂಕಿನ ಬೆಳಲೆಯಲ್ಲಿ ಎಂಇಎಸ್ ಕಲಾ & ವಿಜ್ಞಾನ ಕಾಲೇಜು ಎನ್ನೆಸ್ಸೆಸ್ ಕ್ಯಾಂಪ್ ನಡೆದಿತ್ತು. ಆ ಸಂದರ್ಭದಲ್ಲಿ ಎನ್ನೆಸ್ಸೆಸ್ ಯೋಜನಾಧಿಕಾರಿ ಜಿ. ಟಿ. ಭಟ್ಟರು ಹಾಗೂ ಆರ್. ವೈ ಖಾನರು ಚಟಗಳನ್ನು ದೂರವಿಡುವ ಕುರಿತು ಒಂದು ಕವಿತೆ ಬರೆದು ಕೊಡಲು ಹೇಳಿದ್ದರು. ಬಹಳ ಹೊತ್ತು ಕಷ್ಟ ಪಟ್ಟ ನಂತರ ಹಾಗೆ ಸುಮ್ಮನೆ ಬರೆದ ಕವಿತೆ ಇದು.. ಟಪ್ಪಾಂಗುಚ್ಚಿಯಾಗಿ ಅನ್ನಿಸಿದರೆ ಥ್ಯಾಂಕ್ಯೂ.. ಅಂದಹಾಗೆ ಈ ಹಾಡನ್ನು ಬರೆದಿದ್ದು 15-02-2008ರಂದು)

Wednesday, December 4, 2013

ಚದುರಂಗದ ಕುದುರೆಯ ಬೆನ್ನೇರಿ -ಭಾಗ 8

ಭಯದ ನೆರಳಿನಲ್ಲಿ ತೀರ್ಥಂಕರನೊಂದಿಗೆ
ಇಗೀ ಇಲ್ಲಿದೆ ನೋಡಿ ಬಸವನ ಬಾಗೇವಾಡಿ

ಸಂಜೆಯವರೆಗೆ ನಾನು ಖುಷಿಯಾಗಿದ್ದೆ. ಸಂಜೆಯ ಅನಂತರ ಮುಂದಿನ ದಿನ ಅದ್ಯಾರು ನನ್ನ ವಿರುದ್ಧ ಮ್ಯಾಚಿಗೆ ಬೀಳ್ತಾರೋ ಎಂಬ ಕುತೂಹಲಭರಿತ ಭಯ ಆವರಿಸಿತು. ಅಲ್ಲದೇ ನಂಗೆ ಆಟಕ್ಕೆ ಬೀಳುವವರು ಅನಿಕೇತನ್ ಪಾವಸೆ, ಸಾಗರ್ ಚಿಂಚೋಳಿಮಠ, ಸಮೀರ್ ಘೋಟ್ನೆ ಈ ಮೂವರಲ್ಲಿ ಒಬ್ಬರು ಎಂಬುದು ಖಾತ್ರಿಯಾಗಿತ್ತು. ಈ ಮೂವರು ಮಾತ್ರ ನನಗಿಂತ ಹೆಚ್ಚಿನ ಪಾಯಿಂಟುಗಳನ್ನು ಗೆದ್ದಿದ್ದರು. ಆದ್ದರಿಂದ ಇವರಲ್ಲಿಯೇ ಮ್ಯಾಚು ಬೀಳುತ್ತದೆ ಎಂದುಕೊಂಡೆ. ಈ ಮೂವರ ಪೈಕಿ ಇಬ್ಬರನ್ನು ಸೋಲಿಸುವುದು ಕಷ್ಟವಿತ್ತಾದರೂ ಮೂರನೆಯವನನ್ನು ಸೋಲಿಸಬಲ್ಲೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿತ್ತು. ಆದರೆ ನನಗ್ಯಾಕೋ, ನನ್ನ ವಿರುದ್ಧ ಸಾಗರ್ ಚಿಂಚೋಳಿಮಠನೇ ನನ್ನ ವಿರುದ್ಧ ಬೀಳುತ್ತಾನೆ ಎನ್ನಿಸಿತು. ಏನುಮಾಡಬೇಕೋ ತಿಳಿಯಲಿಲ್ಲ. ಕತ್ತಲೆಯಲ್ಲಿ ಭಯ ಹೆಚ್ಚಂತೆ..ರಾತ್ರಿಯಾದಂತೆ ನನ್ನೊಳಗಿನ ಭೀತಿ, ತಳಮಳ ಹೆಚ್ಚಾಯಿತು.
ಆದರೆ, ನಮ್ಮ ಹುಡುಗರು ಆ ದಿನ ಕೊಂಚ ಹೆಚ್ಚಾಗಿಯೇ ತಿಂಡಿ ತಿಂದಿದ್ದರಿಂದ ರಾತ್ರಿಯ ಊಟಕ್ಕೆ ಸ್ವಲ್ಪ ದುಡ್ಡು ಕಡಿಮೆ ಬಿದ್ದುಬಿಟ್ಟಿತು. ಹಾಗಾಗಿ ಅದನ್ನು ಇಸ್ಕೊಂಡು ಬರೋಣವೆಂದು ನಾನು ಹಾಗೂ ಪಾವಸ್ಕರ ನಮ್ಮ ಮ್ಯಾನೇಜರ್ N H Goudaರು ಉಳಿದುಕೊಂಡಿದ್ದ `ವಿಮೋಚನ' ಬಾರ್ & ಲಾಡ್ಜಿಗೆ ಹೋದೆವು. ಹೇಗೋ, ಏನೋ ಅಂದ್ಕೊಂಡು ಒಳಗೆ ಕಾಲಿಟ್ಟೆವು. ಗೌಡರು 3ನೇ ಮಹಡಿಯಲ್ಲಿದ್ದಾರೆಂದು ತಿಳಿಯಿತು. ಹೋಗುವ ವೇಳೆಗೆ 2ನೇ ಮಹಡಿಯಲ್ಲಿ ಶಿರಸಿಯ ಹುಡುಗ ನಾಗರಾಜ ಹೆಗಡೆ ಸಿಕ್ಕ. ಬ್ಲೂ ಸೆಲೆಕ್ಷನ್ನಿಗೆ ಬಂದಿದ್ದ ಆತನೂ ಅಲ್ಲಿ ಉಳಿದುಕೊಂಡಿದ್ದ. ಅವನೊಂದಿಗೆ ಹರಟೆಗೆ ಕುಳಿತೆವು. ಕೊನೆಗೆ ಮಾತು ಗೌಡರ ಕುರಿತು ಹೊರಳಿದಾಗ ಆತ `ನೀವು ಈಗ ಗೌಡರನ್ನು ಕಾಣದೇ ಇರೋದೇ ಒಳ್ಳೆಯದು' ಅಂದ.
`ಯಾಕೆ..?' ಅಂದ್ವಿ.
`ಇದು ಬಾರ್ & ಲಾಡ್ಜ್..' ಅಂದ..
`ಅಂದ್ರೆ ಕುಡ್ದಿದ್ದಾರೆ ಅಂತ ಅರ್ಥನಾ..?' ಎಂದೆ.
`ನಿ..ನಿಂಗೆ ಅಷ್ಟೂ ಅರ್ಥ ಆಗಲಿಲ್ವಾ..' ಎಂದು ಕೆಣಕಿ ತಿವಿದ ಪಾವಸ್ಕರ.
`ಬಿಡು..ಅರ್ಥ ಆಯ್ತು..'ಅಂದೆ.
ಹಾಗೆಯೇ ಸ್ವಲ್ಪಹೊತ್ತು ಕಳೆದಿದ್ದರಿಂದ ಅನುಮಾನಗೊಂಡು ನಮ್ಮನ್ನು ಹುಡುಕಲು ಕಿಟ್ಟು ಹಾಗೂ ಆನಂದ ಅಲ್ಲಿಗೆ ಬಂದರು. ಕೊನೆಗೆ ಅವರನ್ನು ನಾಗರಾಜ ಹೆಗಡೆ ಬಳಿ ಮಾತನಾಡಲು ಬಿಟ್ಟು ನಾನು ಹಾಗೂ ಪಾವಸ್ಕರ ಗೌಡರಿದ್ದ ರೂಮಿನ ಕಡೆಗೆ ಸಾಗಿದೆವು. ಅವರ ರೂಮು ಹತ್ತಿರಾದಂತೆಲ್ಲ ನಂಗೆ ಒಂಥರಾ ಅನ್ನಿಸಿತು. ಪಾವಸ್ಕರನ ಬಳಿ `ನೀನ್ಹೋಗಿ ಕೇಳೋ..'ಅಂದೆ. ಆತನಿಗೆ ಏನನ್ನಿಸಿತೋ ಏನೋ., ನೀನೂ ಬಾ ಅಂದ. ಅಂತೂ ಇಂತೂ ನಾನು ಅಂವ ಇಬ್ಬರೂ ನಿಧಾನವಾಗಿ ಹೋಗಿ ಬಾಗಿಲಲ್ಲಿ ಇಣುಕಿದೆವು.
ಆಗ ಕಾಣ್ತು.. ಅಲ್ಲಲ್ಲ.. ಕಂಡವು.. ಕಂಡರು.. ಆರೇಳು ಜನ.. ಎಲ್ಲರ ಕೈಯಲ್ಲೂ ಗ್ಲಾಸುಗಳು. ಗೌಡರ ಕೈಯಲ್ಲೂ ಅರ್ಧ ಪೆಗ್ಗು. ಗೋಗಟೆ ಕಾಲೇಜಿನ ಲೆಕ್ಚರ್ ಕೈಯಲ್ಲಿ ಪೂರ್ತಿ ಪೆಗ್ಗು. ಜೊತೆಗೆ ಆಟದ ಲೀಸ್ಟು. ವಿಚಿತ್ರವೆಂದರೆ ಅಲ್ಲಿದ್ದರು ಗೋಗಟೇ ಕಾಲೇಜಿನ ಆ ಆರು ಜನ ಆಟಗಾರರು.
ಅವರ idea ಪ್ರಕಾರವೇ list ತಯಾರಾಗುತ್ತಿತ್ತು..! ಒಮ್ಮೆ ಇಣುಕಿದ ಪಾವಸ್ಕರ `ಸರ್..' ಅಂದ. ಎಲ್ಲರೂ ಒಮ್ಮೆ ಬೆಚ್ಚಿ ಬಿದ್ದರು. ನಂಗೆ ತಕ್ಷಣ ಅಲ್ಲಿ ನಿಲ್ಲಲಾಗಲಿಲ್ಲ. ಪಾವಸ್ಕರನನ್ನು ಹಿಡಿದು ಎಳೆದುಕೊಂಡು ಬಂದೆ. ಅಷ್ಟರಲ್ಲಿ ಆ ರೂಮಿನಿಂದ ಹೊರ ಬಂದಾತ `ಏನು..?' ಅಂದ. ನಾವು ಕಾರಣ ತಿಳಿಸಿದೆವು. `ನಿಲ್ಲಿ ಬರ್ತಾರೆ..' ಅಂದ ಆತ.  ನಮ್ಮ ಕಸಿವಿಸಿ, ಗಲಿಬಿಲಿಯನ್ನು ಗಮನಿಸಿದ ಆತ ಹೋಗುವ ಮುನ್ನ `ಸ್ವಲ್ಪ ಹುಷಾರು.. ಅವರು ದೇವರಾಗಿ ಬಿಟ್ಟಿದ್ದಾರೆ..' ಎಂದ.
ನಾನು ನವೀನನ ಬಳಿ `ಬಗಲ್ ಮೆ ಶತ್ರು.. ಇಲ್ಲೆ ಇದ್ದಾನೋ..' ಅಂದೆ.
ಅದಕ್ಕೆ ಉತ್ತರವಾಗಿ ಪಾವಸ್ಕರ `ನೀನು ಬ್ಲೂ ಆಗೋ ಆಸೆ ಬಿಟ್ಬಿಡು..' ಅಂದ.
ಅಷ್ಟರಲ್ಲಿ ಅಲ್ಲಿಗೆ ಬಂದ ಗೌಡರು ಏನೆಂದು ಕೇಳಿದರು. ಹೇಳಿದೆವು. ದುಡ್ಡು ಕೊಟ್ಟರು. ನಾವು ಹೊರಡಲು ಅನುವಾದ ತಕ್ಷಣ `ನಿಲ್ಲಿ' ಅಂದರು. ನನ್ನ ಕರೆದು `ನಾಳೆ ನಿನ್ನ ವಿರುದ್ಧ ಚಿಂಚೋಳಿಮಠನ ವಿರುದ್ಧ ಬಿದ್ದೈತಿ..' ಎಂದರು.
`ಗೊತ್ತು ಸಾರ್.. ಹಿಂಗೆ ಆಗ್ತದೆ ಎಂದು ಗೊತ್ತಿತ್ತು.. ' ಅಂದೆ ಸಿಟ್ಟು ಹಾಗೂ ಅಸಹನೆಯಿಂದ.
ಆಗ ಪಾವಸ್ಕರ `ಸರ.. ಇದನ್ನ ಹ್ಯಾಂಗೂ ಚೇಂಜ್ ಮಾಡ್ಲಿಕ್ಕೆ ಆಗೋದಿಲ್ಲೇನ್ರಿ.. ಸರ ಸಮೀರನನ್ನು ಹ್ಯಾಂಗಾದ್ರೂ ಮಾಡಿ ವಿನಯನ ವಿರುದ್ಧ ಹಾಕಿಸಿ.. ಬಹಳ ದಿನಗಳ ಸೇಡು ಬಾಕಿ ಉಂಟು.. ಅವನ್ನ ಹೊಡೀತಿವಿ.. ಹಾಕಿಸ್ರಿ..' ಅಂದ.
`ಏ.. ಹಂಗೆಲ್ಲಾ ಬರಾಂಗಿಲ್ಲಪ್ಪ.. ರೂಲ್ಸೋ.. ರೂಲ್ಸು.. ಅಂವ.. ಆ ಕುಂಟ ಲೆಕ್ಚರ್ರು ಕೇಳಾಂಗಿಲ್ಲೋ..' ಎಂದರು.
ನಾನು `ಗೊತ್ತಾಯ್ತು ಬಿಡಿ ಸಾರ್.. ನಾಳೆ ತಲೆಯೆತ್ತಿ ಸೋಲ್ತೀನಿ.. ಆದ್ರೂ ನೀವು ಹೀಗ್ಮಾಡ್ಬಾರ್ದಿತ್ತು..ಬಾರಲೇ ಪಾವಸ್ಕರ..ಹೋಗಾಣ..' ಎನ್ನುತ್ತಾ ಹೊರಟು ಬಂದೆ.. ಪಾವಸ್ಕರ ಹಿಂಬಾಲಿಸಿದ.. ಹಿಂಭಾಗದಲ್ಲಿ `ಯೇ.. ವಿನಯ.. ನನ್ ಮಾತ್ ಕೇಳಲೆ..' ಎಂದು ಪದೇ ಪದೆ ಹೇಳುತ್ತಿದ್ದುದು ಕಿವಿಯ ಮೇಲೆ ಬೀಳುತ್ತಿತ್ತು.
ಕೆಳಗೆ ನಾಗರಾಜನ ರೂಮಿಗೆ ಬಂದೆ. ನಾಗರಾಜ ಎಲ್ಲಾ ಗೊತ್ತಿದ್ದವನಂತೆ ನಗುತ್ತಿದ್ದ. ಆನಂದ `ಏನು..?' ಎಂಬಂತೆ ನೋಡಿದ. ನವೀನ ಸಿಟ್ಟಿನಿಂದ `ಲೋಫರ್ಸ್.. ಮ್ಯಾಚ್ ಫಿಕ್ಸಿಂಗ್ ಕಣಲೇ..' ಎಂದ. `ನಂಗೊತ್ತಿತ್ತು.. ಗೌಡರ ಹಕೀಕತ್ತು.. ಮೊದಲನೇ ದಿನವೇ ನನಗೆ ಇದರ ಬಗ್ಗೆ ಪರಿಚಯ ಇತ್ತು..' ಎಂದ ನಾಗರಾಜ.
`ಈಗೇನ್ ಮಾಡೋದು..?' ಎಂದ ಆನಂದ.
`ಒಂದ್ ಸಾರಿ ನಮ್ M K Hegdeರಿಗೆ ಪೋನ್ ಮಾಡಿ ಕೇಳೋಣ.. ಅವರೇನಂತಾರೆ ಅಂತ ತಿಳ್ಕೊಳ್ಳೋಣ. ಅವರು ಹೇಳ್ದಾಂಗೆ ಮಾಡೋಣ..' ಎಂಬ ಸಲಹೆ ಕೊಟ್ಟ ಪಾವಸ್ಕರ.
ಕೊನೆಗೆ ಅಲ್ಲಿಯೇ ಇದ್ದ ಕಾಯಿನ್ ಬೂತಿಗೆ ಹೋಗಿ ಪೋನಾಯಿಸಿ ಹಿಂಗಿಂಗಾಯ್ತು ಅಂದೆವು. ಅದೆಷ್ಟು ಸಿಟ್ಟು ಬಂದಿತ್ತೋ ಎಂ. ಕೆ. ಹೆಗಡೆಯವರಿಗೆ `ಆ ಗೌಡರು ಅಲ್ಲಿ ಅದೇನ್ ಮಾಡ್ತಾ ಇದ್ದಾರೆ..? ಅವರಿಗೆ ಏನೇನ್ ಮಾಡ್ಬೇಕು ಎಲ್ಲಾ ಗೊತ್ತಿದೆ.. ಅದನ್ನು ಬಿಟ್ಟು ಹಿಂಗೆಂತಕ್ಕೆ ಮಾಡ್ತಾ ಇದ್ದಾರೆ..'ಎಂದವರು ಸಡನ್ನಾಗಿ `ಬಹಳ ತಗೊಂಡಿದ್ದಾರಾ..? ದುಡ್ಡು ಸುಮಾರು ಓಡಾಡಿರಬೇಕು..' ಅಂದರು. ಕೊನೆಗೆ ನಾವು ಎಲ್ಲ ಉತ್ತರ ಹೇಳಿದ ಮೇಲೆ ಅವರು ನಮ್ಮ ಬಗ್ಗೆ ಕನಿಕರಿಸಿ `ನಿಮಗೆಲ್ಲಾ ಲಾಡ್ಜಲ್ಲಿ ವ್ಯವಸ್ಥೆ ಮಾಡಿದ್ದಾರಾ..? ವ್ಯವಸ್ಥೆನಾದ್ರೂ ಚನ್ನಾಗಿ ಮಾಡಿರಬಹುದು ಅಲ್ವಾ.. ಲೇಡೀಸ್ ಹೇಗಿದ್ದಾರೆ..?' ಎಂದರು.
ಅದಕ್ಕೆ ಉತ್ತರವಾಗಿ ನಾವು ನಮಗೆ ಕೊಟ್ಟಿದ್ದ ನುಶಿಕೋಟೆಯ ಕೋಣೆಯ ಬಗ್ಗೆ, ನಮ್ಮ ತಿಂಡಿಯ ಪಡಿಪಾಟಲು, ಲೇಡೀಸ್ ಪಡುತ್ತಿರುವ ತೊಂದರೆ ಇವೆಲ್ಲದರ ಬಗ್ಗೆ ಹೇಳಿದಾಗ ಮತ್ತೆ ಸಿಟ್ಟುಮಾಡಿಕೊಂಡ ಹೆಗಡೆಯವರು `ಅಲ್ರೋ.. ಮ್ಯಾನೇಜುಮೆಂಟು ಭಾರಿ ದುಡ್ಡು ಕೊಡ್ತದೆ ಕಣ್ರೋ.. ಅವ್ರು ಕೊಡೋ ದುಡ್ಡು ನೋಡಿದ್ರೆ ನಿಮ್ಮನ್ನು ತಿಂಗಳುಗಳ ಕಾಲ ಬೇಕಾದ್ರೂ ಲಾಡ್ಜಲ್ಲಿ ಇಡಬಹುದಾಗಿತ್ತು. ಹುಂ.. ಅದೆಲ್ಲಾ ಈಗ ಹಾಗೆ ಹಾಳಾಗ್ತಾ ಇದೆ..' ಅಂದರು. ಕೊನೆಯದಾಗಿ ಪಾವಸ್ಕರ `ಸರ್ ನಿಮ್ಮನ್ನು ನಾವು ತುಂಬಾ miss ಮಾಡ್ಕೋತಾ ಇದ್ದೀವಿ.. ನೀವಿರಬೇಕಿತ್ತು ಸಾರ್.. ಗೋಗಟೆಯ ಸೊಕ್ಕು ಮುರಿಯಬಹುದಿತ್ತು..' ಅಂದು ಪೋನ್ ಇಟ್ವಿ. ಸರಿಸುಮಾರು 30 ಕಾಯಿನ್ನುಗಳು ಖಾಲಿಯಾಗಿದ್ದವು.
ಅಷ್ಟರಲ್ಲಿ ಅದೇ ದಾರಿಯಲ್ಲಿ ಗೋಗಟೆ ಹುಡುಗರು ಮರಾಟಿಯಲ್ಲಿ ಅದೇನೇನೋ ದೊಡ್ಡದಾಗಿ ಹೇಳುತ್ತಾ ನಗುತ್ತಾ ಇಳಿದು ಹೋಗುತ್ತಿದ್ದರು. ನನಗೆ ಪಾವಸ್ಕರ ಎಲ್ಲಿ ಅವರ ಜೊತೆಗೆ ಹೊಡೆದಾಟಕ್ಕೆ ಹೊರಡುತ್ತಾನೋ ಎನ್ನುವ ದಿಗಿಲಿತ್ತು.
ನಮ್ಮ ತಂಡ ಗೌಡರಿಗೆ ಬಯ್ಯುತ್ತಾ ಊಟ ಮಾಡಿ ನಾಳೆ ಗೋಗಟೆ ಕಾಲೇಜಿನ ಹುಡುಗರನ್ನು ಸೋಲಿಸಿದಂತೆ ಕನಸು ಕಾಣುತ್ತಾ ನುಶಿಕೋಟೆಗೆ ವಾಪಸ್ಸಾದೆವು.
ದೂರದಲ್ಲಿ ಗುಡುಗುವ ಸದ್ದು ಕೇಳುತ್ತಿತ್ತು.. ಸಿಕ್ಕಾಪಟ್ಟೆ ಮೋಡವಾಗಿದ್ದ ಲಕ್ಷಣಗಳೂ ಇದ್ದವು. ಸೆಖೆ ಹೆಚ್ಚಿದ್ದು ಮೈಮೇಲಿನ ಬಟ್ಟೆ ಕಿತ್ತೊಗೆಯುವಷ್ಟಾಗಿದ್ದವು..  ಮಲಗಿ ನಿದ್ರಿಸಿದೆವು. ನನಗೆ ನಿದ್ದೆ ಹತ್ತಲಿಲ್ಲ. ಮೊದ ಮೊದಲು ಗೌಡರ ಮ್ಯಾಚ್ ಫಿಕ್ಸಿಂಗ್ ನೆನಪಾಯಿತು. ನಂತರ ಆನಂದ, ಕಿಟ್ಟು, ನವೀನ , ನಮ್ಮ ಲೇಡೀಸ್ ಟೀಮಿನ ಸದಸ್ಯೆಯರು ನನ್ನ ಮೇಲಿಟ್ಟ ಭರವಸೆ, ನಾನು ಬ್ಲೂ ಆಗಬೇಕೆಂದು ಅವರೆಲ್ಲ ಪ್ರಯತ್ನ ಪಡುತ್ತಿರುವುದನ್ನು ಅನ್ನಿಸಿ ಕಣ್ಣೀರಾಯಿತು. ಕೊಂಚ ಸಮಯ ಕಳೆದ ನಂತರ ನವೀನ `ವಿನೂ.. ನಿದ್ದೆ ಬರ್ಲಿಲ್ವಾ..' ಎಂದ. `ಹೂಂ..' ಅಂದೆ.. `ಮ್ಯಾಚ್ ಆಡೋಣ್ವಾ..' ಎಂದ.. `ಸತ್ರಿ ನನ್ ಮಕ್ಳಾ.. ಈಗ್ಲೆ 12 ಗಂಟೆಗೂ ಹೆಚ್ಚಾಗಿದೆ.. ಮುಚ್ಕೊಂಡು ಮಲಕ್ಕೋಳ್ರೋ.. ನಿದ್ದೆ ಬರ್ತದಾ ನೋಡ್ತೀನಿ..' ಎಂದು ಕಿಟ್ಟು ಬೈದ..
ಅರೇ... ಯಾರಿಗೂ ನಿದ್ದೆ ಬಂದಿರಲಿಲ್ಲವೇ..


21-09-2007, ಶುಕ್ರವಾರ
`ಏ ಏಳ್ರಲೆ.. ಲೋಫರ್ಸ್.. ಏಳೂವರೆಯಾಯ್ತು.. ಮಕ್ಳಾ.. ಹಂದಿ ಹಂಗೆ ಬಿದ್ಕೊಂಡಿದ್ರೇನ್ರೋ..' ಅನ್ನೋ ಧ್ವನಿಕೇಳಿ ಎಲ್ಲ ದಡಬಡಿಸಿ ಎದ್ದೆವು. ಬಾಗಿಲು ತೆರೆದವರಿಗೆ ಎದುರಿಗೆ ಕಂಡಿದ್ದು ಲೋಫರ್ರುಗಳಿಗಿಂತ ಲೋಫರ್ರಾದ ನಾಗರಾಜ..!!
ಆತ ಬೆಳಿಗ್ಗೆ ಎದ್ದವನೇ ಚೆಸ್ ಪ್ರಾಕ್ಟೀಸಿಗೆ ನಮ್ಮ ನುಶಿಕೋಟೆಗೆ ಬಂದುಬಿಟ್ಟಿದ್ದ. ನಾವಿನ್ನೂ ಎದ್ದೇ ಇರಲಿಲ್ಲ. ಕಾರಣ ಗೊತ್ತಿದ್ದುದ್ದೇ ಆಗಿತ್ತು.
ರೂಮಿಂದ ಹೊರಗೆ ಕಾಲಿಟ್ಟರೆ ನೆಲವೆಲ್ಲ ಒದ್ದೆಮುದ್ದೆ.. ರಾತ್ರಿ ಯಾವಾಗಲೋ ಮಳೆ ಬಂದ ಕುರುಹು.. ಮಣ್ಣಿನ ವಾಸನೆ ಗಮ್ಮೆನ್ನುತ್ತಿತ್ತು.. ಕೊನೆಗೆ ಒಂದಿಷ್ಟು ಚೆಸ್ ಆಡಿ ನಾವು ಸಂಪೂರ್ಣ ತಯಾರಾಗುವ ವೇಳೆಗೆ ಸಮಯ ಒಂಭತ್ತಕ್ಕೆ ಢಣ್ಣೆಂದಿತು. ಮ್ಯಾಚು ಚಿಂಚೋಳಿಮಠನ ಮೇಲೆ ಬಿದ್ದಿದ್ದು ಫಿಸ್ಕಾಗಿಯೇ ಇತ್ತು. ಛೇಂಜಾಗಿರಲಿಲ್ಲ. ಎಲ್ಲರೂ ನನ್ನ ಬಳಿ ಬಂದು ಸಂತಾಪ ಸೂಚಕ ಮಾತುಗಳನ್ನು ಆಡುವವರೇ.. `ಬಸವನ ಬಾಗೇವಾಡಿ ಬಸವಣ್ಣ.. ಕಾಪಾಡೋ ತಂದೆ..' ಎನ್ನುತ್ತಾ ಮ್ಯಾಚಿಗೆ ಕುಳಿತೆ.
ಯಾಕೋ ಕಣ್ಣಿಗೆ ಬೋರ್ಡು ಕಾಣಲೇ ಇಲ್ಲ. ಗೌಡರ ಮೋಸವೇ ಎದ್ದೆದ್ದು ಕಾಣುತ್ತಿತ್ತು. ಸಾಯ್ಲಿ ಬಿಡು ಎಂದು neglect ಮಾಡಿದೆ. ಆ ಚಿಂಚೋಳಿಮಠನೂ ಭಯಂಕರವಾಗಿ ಆಡಿಬಿಟ್ಟ. ಪಾವಸ್ಕರ ಪದೇ ಪದೆ ನನ್ನ ಬಳಿ ಇಣುಕಿ `ಡ್ರಾ ಕೇಳೋ.. ಕೊಟ್ಟರೆ ಕೊಡಲಿ..' ಎಂದ. ನಾನು ಕೇಳಿದೆ.. `ನೋ.. ಅಂದ..' ಟೈಂಪಾಸ್ ಮಾಡಿದೆ.. ವರ್ಕೌಟ್ ಆಗಲಿಲ್ಲ.. ಕೊನೆಗೆ ಮ್ಯಾಚನ್ನು ಹೀನಾಯವಾಗಿ ಸೋತೆ.
ಅಲ್ಲಿಗೆ ನನ್ನ ಬ್ಲೂ ಆಸೆಗೆ ತಿಲಾಂಜಲಿ ನೀಡಿದೆ. ಮುಂದಿನ ಮ್ಯಾಚು ಏನಾದರೇನು ಎಂದುಕೊಂಡೆ. ಅದಕ್ಕೆ ಸರಿಯಾಗಿ ಒಬ್ಬ ಬಕರಾ ಬಿದ್ದ. ಹೀನಾಯವಾಗಿ ಸೋಲಿಸಿದೆ. ಯಾರ ಮೇಲಿನ ಸೇಡನ್ನೋ, ಸಿಟ್ಟನ್ನೋ ಇನ್ಯಾರ ಮೇಲೋ ತೀರಿಸಿಕೊಂಡೆ. ಕೊನೆಗೆ ನನ್ನ ಪಾಯಿಂಟು 4.5 ಆಯಿತು. ಬ್ಲೂ ಆಗಲಿಲ್ಲ. ರಿಸರ್ವ ಬ್ಲೂ ಆದೆ.
ಶತಮಾನದ ದುರಂತವೆಂಬಂತೆ ನಾಗರಾಜ ಹೆಗಡೆ ಬ್ಲೂ ಆಗಿಬಿಟ್ಟ.! ಆತ ಮೊದಲನೇ ಮ್ಯಾಚಿನಲ್ಲೇ ಸೋತು ಪ್ರಭಲ ಎದುರಾಳಿಗಳು ಸಿಗದಂತೆ ಮಾಡಿಕೊಂಡು ಗೆದ್ದಿದ್ದ. ನಮ್ಮ ಕಾಲೇಜಿನ ಲೇಡೀಸ್ ಟೀಮಿನ 2-3 ಆಟಗಾರರು ಆತನಿಗೆ ಸಿಕ್ಕು ಸೋತಿದ್ದರು. ನಾವು ಸೋತು ಆತ ಬ್ಲೂ ಆದಮೇಲೆ ಶುರುವಾಯಿತು ನೋಡಿ ಆತನ ಅಸಲಿ ವರಸೆ..ನಮಗೆ ಆಟವೇ ಬರುವುದಿಲ್ಲ ಎಂಬಂತೆ ಮಾತಾಡತೊಡಗಿದ. ನಾನು ಹಾಗೆ ಮಾಡಿದೆ.. ಹೀಗೆ ಮಾಡಿದೆ.. ಎಂದು ಬಡಾಯಿ ಕೊಚ್ಚಿಕೊಂಡ.
ಅನಿಕೇತನ್ ಪಾವಸೆ, ಸಾಗರ ಚಿಂಚೋಳಿಮಠ, ನಾಗರಾಜ ಹೆಗಡೆ, ಸಮೀರ ಗೋಟ್ನೆ ಹಾಗೂ ಗೋಗಟೆ ಕಾಲೇಜಿನ ಇನ್ನೊಬ್ಬ ಆಟಗಾರ ಬ್ಲೂ ಆದರು. ನಾನು, ರಾಜೇಂದ್ರ ಬಾಬು ಹಾಗೂ ಕುಮಟಾದ ಹುಡುಗನೊಬ್ಬ ಸೇರಿ ಮೂವರು ರಿಸರ್ವ ಬ್ಲೂ ಆದೆವು.
ನನಗೆ ಬಹು ಬೇಜಾರಾಗಿತ್ತು. ಸೋತಿದ್ದಕ್ಕೂ, ಗೌಡರ ಮೇಲೂ.ಕೊನೆಗೊಮ್ಮೆ ನನ್ನೊಳಗಿನ ತಳಮಳವನ್ನು ತಾಳಲಾರದೇ `ಸರ್.. ನೀವು ಹೀಗ್ಮಾಡ್ಬಾರ್ದಿತ್ತು..' ಅಂದಿದ್ದೆ.. ಅದಕ್ಕವರು `ಅಲ್ಲೋ.. ನಾನೇನೂ ಮಾಡಾಕ ಬರ್ತಿಲ್ಲಿಲ್ಲೋ..' ಅಂದರು. ಹಾಗೇ ಮುಂದುವರಿದು `ಖರೆ ಹೇಳ್ಬೇಕು ಅಂದ್ರೆ ನಿನ್ನ ಸೋಲಿಗೆ ನೀನೇ ಕಾರಣ.. ನಂಗೊತ್ತೈತಿ.. ನೀನು ಚನ್ನಾಗಾಡ್ತಿ ಅಂತ.. ಆದರೆ ನಮ್ಮ ಕಾಲೇಜಿನ ಲೇಡೀಸ್ ಟೀಮನ್ನು ಬ್ಲೂ ಸೆಲೆಕ್ಷನ್ನಿಗೆ ಆಡ್ಸಿದ್ದಿ ನೋಡು ಅದೇ ನಿನ್ನ ಸೋಲಿಗೆ ಕಾರಣವಾಯಿತು. ಅದೇ ನಿನ್ನ ದೊಡ್ಡ ತಪ್ಪು. ನಮ್ಮ ಕಾಲೇಜಿನ ಲೇಡೀಸ್ ಟೀಂ ಆಟಗಾರರನ್ನು ಸೋಲಿಸಿಯೇ ಆ ನಾಗರಾಜ ಬ್ಲೂ ಆಗಿದ್ದು..ಹಿಂಗ್ ಮಾಡಬಾರದಿತ್ತು.. ನಿನ್ನ ಸೋಲಿಗೆ ನೀನೆ ಕಾರಣ..' ಎಂದರು.
ನಾನು ವಾದ ಮಾಡಿದೆ. ಆದರೆ ಗೌಡರು ಕೇಳುವ ಹುಮ್ಮಸ್ಸಿನಲ್ಲೇ ಇರಲಿಲ್ಲ.. ಕೊನೆಗೊಮ್ಮೆ ಪಾವಸ್ಕರನ ಜೊತೆಗೆ ಈ ವಿಷಯ ಚರ್ಚೆ ಮಾಡಿದೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಲೇಡೀಸ್ ಟೀಂ ಕ್ಯಾಪ್ಟನ್ ಪೂರ್ಣಿಮಾ ಟಿ. ಹೆಗಡೆ ನನ್ನ ಜೊತೆ ಮಾತಿಗೆ ನಿಂತರು. `ನಮ್ಮ ಟೀಮನ್ನು ಆಡಿಸದಿದ್ದರೆ ತಲೆಗೆ 100 ರುಪಾಯಿಯಂತೆ 400 ರು. ಉಳಿತಿತ್ತು. ಅದು ಉಳಿಯಲು ನೀ ಕೊಡಲಿಲ್ಲ.. ಅದಕ್ಕೆ ನಮ್ಮನ್ನು ಆಡಿಸಿದ ನೆಪ ಹೇಳಿದರು..' ಎಂದಳು ಆಕೆ. ಹೌದೇನೋ ಅನ್ನಿಸಿತು. ದುಡ್ಡು ಏನನ್ನು ಬೇಕಾದರೂ ಮಾಡಿಸುತ್ತದಾ..? ಅಂದುಕೊಂಡೆವು..

(ಮುಂದುವರಿಯುತ್ತದೆ..)
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಬಾಗೇವಾಡಿಯಿಂದ ಕೂಡಲಕ್ಕೆ..ನೆರೆಯ ದಾರಿಯಲ್ಲಿ ಕಣ್ಣೀರದಾರೆ..)

Tuesday, December 3, 2013

Funny ಹನಿಗಳು


71.ಹುದ್ದೆ-ನಿದ್ದೆ

ಒಂದು ಸಾಹಿತ್ಯ ಸಮ್ಮೇಳನದಲ್ಲಿ ಕುಳಿತಿದ್ದೆ
ಕೊಟ್ಟಿದ್ದರು ಅಧ್ಯಕ್ಷರ ಹುದ್ದೆ |
ಎಲ್ಲರ ಮಾತು ಕಥೆ, ಪೀಠಿಕೆ ಮಿಗಿವಾ
ಬಂದಿತ್ತಾಗಲೇ ನನಗೊಂದು ಸುಖನಿದ್ದೆ ||

72.ಕೋಗಿಲೆ-ಕಾಗೆ
 
ಕನ್ನಡದ ಕೋಗಿಲೆಯೊಂದು ಹಾಡುತ್ತಿತ್ತು|
ಕೇಳಿ ಸ್ಪೂರ್ತಿಯುಕ್ಕಿದ ರಂಗ
ಹಾಡಲು ಹೋದ|
ಕೇಳಿದ ಜನ ಅವನನ್ನು
ವಾಪಾಸ್ಸು ಕಳಿಸುತ್ತಾ ಎಂದರು,
ಸುಮ್ಮನಿರು ಕಾಗೆ ||

73.ಜನರೇಷನ್ ಗ್ಯಾಪ್

ಆ ಮನೆಯಲ್ಲಿರುವುದು
ಅಜ್ಜಿ-ಮಗು ಪಾಪು|
ಜೊತೆಯಲ್ಲೇ ಉಂಟು
ಜನರೇಷನ್ ಗ್ಯಾಪು||

74.RUMಭೆ

ರಂಭೆಯಿಂದ ಮತ್ತು
ಹೇಗೆ ಸಾಧ್ಯ?
ಮತ್ತೇನಿದ್ದರೂ 
RUMಭೆಯಿಂದಲ್ಲವೇ?

75.ಕಾರಣ

ವಿಶ್ವಕ್ಕೆಲ್ಲ ಜಾಗತೀಕರಣ,
ಔದ್ಯೋಗೀಕರಣ, ಖಾಸಗೀಕರಣ,
ಸಾಮಾಜೀಕರಣ, ಆಧುನೀಕರಣ
ಹೀಗೆಲ್ಲ ಇದ್ದರೆ , ಭಾರತಕ್ಕೆ
ಒಂದೇ ಕಾರಣ-ರಾಜಕಾರಣ ||

76.ಗಾಯತ್ರಿ

ಭಟ್ಟರು ಪ್ರತಿದಿನ ನನ್ನಲ್ಲಿ
ಗಾಯತ್ರಿ ಜಪ ಮಾಡಬೇಕೆಂದು|
ನಾನು `ಗಾಯತ್ರಿ ಗಾಯತ್ರಿ' ಎಂದು
ಜಪ ಮಾಡಹತ್ತಿದೆ ಇದು ತಪ್ಪೇ..?

77.ಬೀchee ಹಾಸ್ಯ

ನಮ್ಮ ಗುರು ತಿಂಮ
ಹಾಸ್ಯ ಮಾಡಿದಾಗ
ಜನರು ವಾ ಬೀchee
ಅದ್ಭುತ ಹಾಸ್ಯವೆಂದರು|
ನಾನು ಹಾಸ್ಯ ಮಾಡಿದಾಗ
ಥೂ..ಛೀ.. ಇದು ಹಾಸ್ಯವೇ ಎಂದರು||

78.ಸರ್ಕಾರಿ ನೌಕರ

ಜನರ ಸೇವೆಯನ್ನು
ದನದ ಸೇವೆ
ಎಂದು ತಿಳಿದವ
ಸರ್ಕಾರಿ ನೌಕರ

79.ಚಂದ್ರನಲ್ಲಿ ಬಾವುಟ

ನಮ್ಮ ಜನ
ಚಂದ್ರನಿಗೂ ಕೊಟ್ಟರು ಕಾಟ|
ನೆಟ್ಟರು ಗೂಟ, ಜೊತೆಗೆ
ಅಮೆರಿಕೆಯ ಬಾವುಟ ||

80.(ವಾ)ನರ

ನರ, ನಾಗರೀಕತೆಯಲ್ಲಿ
ಸಿಲುಕಿ, ಆಧುನಿಕತೆಯಲ್ಲಿ
ಮುಂದುವರಿದು ಆಗುತ್ತಿದ್ದಾನೆ
ವಾನರ||